ಸರಿಯಾದ ವ್ಯವಸ್ಥೆಯಲ್ಲಿ ಉಗ್ರರಿಗೆ ಮಂಪರು ಪರೀಕ್ಷೆ ಅಲ್ಲ, ಮಾತಿನ ಪರೀಕ್ಷೆ ಸಾಕು!

ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶ ಮೂಲದ ಕಾನೂನು ಬಾಹಿರ ವಲಸಿಗ್ರು ಚುನಾವಣಾ ಗುರುತಿನ ಚೀಟೀನೂ ಗಿಟ್ಟಿಸಿಕೊಂಡು ನೆಲ್ಸಿದಾರೆ, ಜುಮ್ಮಂತ ಓಡಾಡ್ಕೊಂಡಿದಾರೆ ಅಂತ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಸುದ್ದಿ ಬಂದಿತ್ತು. ಇವ್ರು ಬಾಂಗ್ಲಾದೇಶದೋರು ಅಂತ ಯಾಕ್ ಗೊತ್ತಾಗ್ಲಿಲ್ಲ ನಿಮಗೆ ಅಂದ್ರೆ ಪೋಲೀಸರು ಕೊಡೋ ಉತ್ತರ - "ಇವರಿಗೆ ಬೆಂಗಾಳಿ ಭಾಷೆ ಬರೋದ್ರಿಂದ ಇವರನ್ನು ಭಾರತೀಯರಲ್ಲ ಅಂತ ನಿರ್ಧರಿಸೋದೂ ಕಷ್ಟ". ಅಲ್ಲ ಗುರು - ಕರ್ನಾಟಕದಲ್ಲಿ ಇವರು ಕನ್ನಡದೋರೋ ಅಲ್ಲವೋ ಅಂತ ಗುರುತಿಸಿದ್ದರೆ ಸಾಕಾಗ್ತಾ ಇರಲಿಲ್ಲವಾ?

ಮೈಸೂರಲ್ಲಿ ಮಾತಿನ ಪರೀಕ್ಷೆ ಸಾಕು!

ಇನ್ನೊಂದು ಘಟನೆ ನೋಡಿ: ಹೋದ ವರ್ಷ ಇಬ್ಬರು ಬಾಂಗ್ಲಾದೇಶದ ಉಗ್ರರು ಮೈಸೂರಲ್ಲಿ ಸಿಕ್ಕಾಕೊಂಡಿದ್ರು. ಇವರು ಹೇಗೆ ಸಿಕ್ಕಾಕೊಂಡಿದ್ದರಪ್ಪಾ ಅಂದ್ರೆ ನೆಲೆಸಿರೋರು ಕನ್ನಡ ಕಲಿತಿರಲೇಬೇಕು ಅನ್ನೋ ಪರಿಸ್ಥಿತಿ ಇದೆ ಅಂತ ಮೈಸೂರಿನ ಪೋಲಿಸ್ ಅಧಿಕಾರಿಗಳಿಗೆ ಗೊತ್ತಿತ್ತು. ಆ ಉಗ್ರರಿಗೆ ಎರಡಕ್ಷರವೂ ಕನ್ನಡ ಬರದೇ ಇದ್ದಿದ್ದರಿಂದ ಸುಲಭವಾಗಿ ಸೆರೆಸಿಕ್ಕರು! (ಹೆಚ್ಚು ಮಾಹಿತಿಗೆ 30/10/2006ರ ಪ್ರಜಾವಾಣಿ ನೋಡಿ).

ಮೈಸೂರಿನ ಪೋಲೀಸರೂ ಭಾಷೆಯನ್ನ ಲೆಕ್ಕಕ್ಕೇ ತೊಗೊಳ್ದೆ ಹೋಗಿದ್ರೆ ಅ ಉಗ್ರರನ್ನ ಅಷ್ಟು ಸುಲಭವಾಗಿ ಹಿಡಿಯಕ್ಕಾಗ್ತಿರ್ಲಿಲ್ಲ ಗುರು! ಕರ್ನಾಟಕದಲ್ಲಿ ಕಾನೂನುಬಾಹಿರವಾಗಿ ಓಡಾಡ್ತಿರೋರು ಇತ್ತೀಚೆಗೆ ಬಂದಿರ್ತಾರೆ, ಔರ್ನ ಹಿಡಿಯೋದಕ್ಕೆ ಔರ ಬಾಯಿ ಬಿಡಿಸಿದರೆ ಸಾಕು ಅನ್ನೋದು ಯಾವ ಬ್ರಹ್ಮವಿದ್ಯೇನೂ ಅಲ್ಲ ಗುರು! ಭಾಷೆ ಅನ್ನೋದು ವಲಸಿಗರಿಗೆ - ಅದರಲ್ಲೂ ಅನಿಯಂತ್ರಿತವಾಗಿ ವಲಸೆ ಬರೋರಿಗೆ ಒಂದು ಗೋಡೆ. ಆ ಗೋಡೇನ ಸಾಮಾನ್ಯವಾಗಿ ಅಲ್ಲಿ-ಇಲ್ಲಿ ಕಿತಾಪತಿ ಮಾಡಕ್ಕೆ, ಬಾಂಬಿಡಕ್ಕೆ ಬರೋ ಉಗ್ರರಿಗೆ ಏರಕ್ಕಾಗಲ್ಲ ಅನ್ನೋದು ಪ್ರಪಂಚದಲ್ಲಿ ಎಲ್ಲರೂ ಅರ್ಥ ಮಾಡಿಕೊಂಡಿರೋ ವಿಷಯ.

ಸರಿಯಾದ ವ್ಯವಸ್ಥೆಯಲ್ಲಿ ಹೊರಗಿಂದ ಬಂದ ಉಗ್ರ ಬಾಯಿ ಬಿಟ್ಟರೆ ಸಿಕ್ಕ!

ವಲಸೇನ ಹದ್ದುಬಸ್ತಲ್ಲಿ ಇಟ್ಟುಕೊಳ್ಳೋ ವ್ಯವಸ್ಥೆ ಕರ್ನಾಟಕದಲ್ಲಿ ಇದ್ದಿದ್ದರೆ ಕರ್ನಾಟಕದ ಹೊರಗಿಂದ ಬಂದ ಉಗ್ರರನ್ನ ಹಿಡಿಯೋದಕ್ಕೆ ಮಂಪರು ಪರೀಕ್ಷೆ ಯಾಕೆ, ಪ್ರಾಯಶಃ ಮಾತಿನ ಪರೀಕ್ಷೆ ಸಾಕಾಗ್ತಿತ್ತು ಗುರು! ಸರಿಯಾದ ವ್ಯವಸ್ಥೆಯಲ್ಲಿ ಉಗ್ರ ಯಾವನಾದ್ರೂ ಇಲ್ಲೀಗೆ ಕಿತಾಪತಿ ಮಾಡಕ್ಕೆ ಬಂದ್ರೆ ಔನು ಕನ್ನಡ ಬರದೇ ಸಿಕ್ಕಿಹಾಕಿಕೊಳ್ಳಲೇ ಬೇಕು! ನಿಜಕ್ಕೂ ಇಲ್ಲಿ ನೆಲಸಲಿಕ್ಕೆ, ಇಲ್ಲೀ ಜನರೊಡನೆ ಬೆರತು ಜೀವನ ಮಾಡಕ್ಕೆ ಬರೋನು ಕನ್ನಡ ಕಲಿಯೋ ಪರಿಸ್ಥಿತಿ ಎಲ್ಲಾ ಕಡೆಯೂ ಇದ್ದಿದ್ದರೆ ಇದು ಸಾಧ್ಯವಾಗ್ತಾ ಇತ್ತು ಗುರು! ಆದ್ರೆ ಇವತ್ತು ಬೆಂಗಳೂರಲ್ಲಂತೂ ಯಾರು ಬೇಕಾದರೂ ಯಾವ್ ಭಾಷೆ ಬೇಕಾದರೂ ಮಾತಾಡ್ಕೊಂಡು ಏನು ಬೇಕಾದರೂ ಮಾಡ್ಕೊಂಡು ತಿರುಗಾಡಬಹುದು ಅನ್ನೋ ಪರಿಸ್ಥಿತಿಗೆ ನಾವು ಕನ್ನಡಕ್ಕೆ ಕೊಡಬೇಕಾದ ಗೌರವ, ಸ್ಥಾನಗಳ್ನ ಕೊಡದೇ ಇರೋದೇ ಕಾರಣ.

ಈ ರಾಜ್ಯಕ್ಕೆ ವಲಸೆ ಬಂದ ಜನ ಮೊದಲಿಗೆ ಕನ್ನಡ ಕಲೀಬೇಕು, ಕನ್ನಡ ಸಂಸ್ಕೃತಿಯ ಅರಿವು ಪಡ್ಕೋಬೇಕು, ಕನ್ನಡಿಗರಾಗಬೇಕು. ಆದರೆ ಇವ್ಯಾವೂ ಇಲ್ಲದೆ ಇವರು ಯಾರು ಅಂತಾನೂ ಯೋಚ್ನೆ ಮಾಡದೆ ಔರಿಗೆ ಚುನಾವಣಾ ಗುರುತಿನ ಚೀಟೀನೂ ನಮ್ಮ ವ್ಯವಸ್ಥೆ ಕೊಟ್ಟಿದೆ ಅಂದ್ರೆ ವಲಸೆ ಎಷ್ಟು ಕೈಮೀರಿಹೋಗಿದೆ ಅಂತ ಅರ್ಥವಾಗತ್ತೆ!

ಕೊನೆ ಗುಟುಕು

ಅಂದಹಾಗೆ ಹೋದ ವರ್ಷ ಮೈಸೂರಲ್ಲಿ ಮಾತಿನ ಪರೀಕ್ಷೆ ಕೆಲಸ ಮಾಡಿದೆ ಅಂದ್ರೆ ವಲಸೆ ನಿಯಂತ್ರಣದಲ್ಲಿದೆ ಅಂತಲ್ಲ, ವಲಸೆ ಆಗ ಇನ್ನೂ ಕೈಮೀರಿ ಹೋಗಿರಲಿಲ್ಲ ಅಂತಷ್ಟೇ ಅರ್ಥ. ಕರ್ನಾಟಕದಲ್ಲಿ ವಲಸೆ ಕೈಮೀರಿ ಹೋಗದೇ ಇರೋಹಾಗೆ ನೋಡ್ಕೊಳೋ ಜವಾಬ್ದಾರಿ ಜನಸಾಮಾನ್ಯರದೂ ಹೌದು, ಸರ್ಕಾರದ್ದೂ ಹೌದು. ಇದನ್ನ ಒಂದು ನಿಜವಾದ ಸಮಸ್ಯೆ ಅಂತ ಅರ್ಥ ಮಾಡ್ಕೋಬೇಕು, ಅಷ್ಟೆ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails