ಬೊಮ್ಮಾಯಂಥೋರು ಇಲ್ಲದಿದ್ದರೆ ಇವತ್ತು ಕರ್ನಾಟಕ ಇರ್ತಿರಲಿಲ್ಲ

ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ. ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ನಿನ್ನೆ ರಾತ್ರಿ ತೀರಿಕೊಂಡಿದ್ದಾರೆ. ಈ ನಮ್ಮ ಕನ್ನಡ ನಾಡು ಹರಿದು ಹಂಚಿ ಹೋಗಿದ್ದಾಗ ನಾಡಿನಾದ್ಯಂತ ನಡೆದ ಅತಿಹಿರಿದಾದ ಒಂದು ಧ್ಯೇಯದ, ದೀರ್ಘವಾದ ಹೋರಾಟದ, ಕರ್ನಾಟಕ ಏಕೀಕರಣ ವೆನ್ನುವ ಯಜ್ಞದಲ್ಲಿ ತಮ್ಮ ಪಾಲಿನ ಹವಿಸ್ಸನ್ನು ಸಮರ್ಪಿಸಿದ್ದ ಈ ಹಿರಿಯರಿಗೆ ನಮ್ಮ ಶ್ರದ್ಧಾಂಜಲಿ. ಹಾಗೇ ಯಾವ ಶಿಕ್ಷಣ ಮತ್ತು ರಾಜಕೀಯ ವ್ಯವಸ್ಥೆಗಳು ಕರ್ನಾಟಕ ಏಕೀಕರಣದ ಇತಿಹಾಸವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಿ ನಮ್ಮನ್ನು ಕತ್ತಲೆಯಲ್ಲಿ ಇಟ್ಟಿವೆಯೋ ಅವುಗಳಿಗೆ ಧಿಕ್ಕಾರ, ಧಿಕ್ಕಾರ, ಧಿಕ್ಕಾರ!

ಕರ್ನಾಟಕ ಏಕೀಕರಣ ಮತ್ತು ಬೊಮ್ಮಾಯಿ

ಕರ್ನಾಟಕ ನಮಗೇನು ಬಿಟ್ಟಿ ಸಿಕ್ಕಿಲ್ಲ, ನಮ್ಮ ಹಿಂದಿನವರು ಜೀವಗಳನ್ನು ತೆತ್ತಿ ಎಡೆಬಿಡದೆ ಹೋರಾಡಿದ್ದರ ಫಲವೇ ಇಂದಿನ ಕರ್ನಾಟಕ. ಕನ್ನಡಿಗರಿಗೇಂತ್ಲೇ ಮೀಸಲಾದ ಒಂದು ರಾಜ್ಯ ಸಾಧ್ಯವಾಗಿರೋದು ಸಾವಿರಾರು ಹಿರಿಯರ ತ್ಯಾಗದಿಂದ ಅನ್ನೋದನ್ನು ಸದಾ ನೆನಪಿಟ್ಕೋಬೇಕು ಗುರು. ಆಲೂರ ವೆಂಕಟರಾಯರು, ಬೆನಗಲ್ ರಾಮರಾಯರು, ಕಡಪಾ ರಾಘವೇಂದ್ರ ರಾಯರು, ಮುದವೀಡು ಕೃಷ್ಣರಾಯರು, ಶಂಕರಗೌಡ ಪಾಟೀಲರು, ಹುತಾತ್ಮ ರಂಜಾನ್ ಸಾಬ್, ಕಯ್ಯಾರ ಕಿಞ್ಞಣ್ಣ ರೈ, ಅಂದಾನಪ್ಪ ದೊಡ್ಡಮೇಟಿಯವರಂತಹ ಅನೇಕ ವ್ಯಕ್ತಿಗಳು, ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಏಕೀಕರಣ ಪರಿಷತ್ತುಗಳಂತಹ ನಾನಾ ಸಂಘ ಸಂಸ್ಥೆಗಳು ಕನ್ನಡ ನಾಡಿನ ಒಗ್ಗೂಡುವಿಕೆಗೆ ದುಡಿದದ್ದನ್ನು ನಾವು ಕೃತಜ್ಞತೆಯಿಂದ ನೆನೆಯಬೇಕಾಗಿದೆ ಗುರು.

ನಾಡಿನ ಏಕೀಕರಣವನ್ನು ಒತ್ತಾಯಿಸಿ ನಡೆಯುತ್ತಿದ್ದ ಶಂಕರಗೌಡ ಪಾಟೀಲರ ಅಮರಣಾಂತ ಉಪವಾಸ ಸತ್ಯಾಗ್ರಹ 23 ದಿನಗಳನ್ನು ದಾಟಿ ಮುನ್ನಡೆದಿದ್ದ ಸಮಯದಲ್ಲಿಯೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯ ಸಭೆ ನಡೆದಿತ್ತು. ಆಗ ಅಲ್ಲಿಗೆ ದಾಳಿಯಿಟ್ಟ ಸಾವಿರಾರು ಏಕೀಕರಣ ಪರ ಹೋರಾಟಗಾರರು ಅಧ್ಯಕ್ಷರಾದ ಎಸ್. ನಿಜಲಿಂಗಪ್ಪನವರೂ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರಿಗೆ ಬಳೆ ತೊಡಿಸಿ ಚಪ್ಪಲಿ ಸೇವೆ ಮಾಡಿದಾಗ ನಡೆದ ಗೋಲಿಬಾರು ಏಕೀಕರಣದ ಹೋರಾಟದ ಪ್ರಮುಖವಾದ ಘಟನೆ. ಈ ಸಂದರ್ಭದಲ್ಲಿ ಬಂಧಿಸಲ್ಪಟ್ಟ ಹೋರಾಟಗಾರರ ಪರವಾಗಿ ಕಾನೂನು ಹೋರಾಟ ನಡೆಸಿ ಅವರ ಬೆಂಬಲವಾಗಿ ನಿಂತವರು ಶ್ರೀ. ಬೊಮ್ಮಾಯಿಯವರು. ಇವರಿಗೆ ನಮ್ಮ ಹೃದಯತುಂಬಿದ ಶ್ರದ್ಧಾಂಜಲಿಗಳು.

ಏಕೀಕರಣದ ಕತೆಯನ್ನ ಮುಚ್ಚಿಹಾಕಿರೋ ವ್ಯವಸ್ಥೆಗೆ ಧಿಕ್ಕಾರ!

ನಮ್ಮ ಕರ್ನಾಟಕ ರಾಜ್ಯವನ್ನ ಬಹಳ ಕಷ್ಟ ಪಟ್ಟು ನಾವು ಪಡೆದಿರೋದು ಗುರು. ಇದು ಯಾರೋ ನಮಗೆ ಬಿಸಾಕಿದ ಭಿಕ್ಷೆಯಲ್ಲ. ಈ ಹೋರಾಟಕ್ಕೆ, ಹೋರಾಟದ ಇತಿಹಾಸಕ್ಕೆ, ಅಂತಹ ಇತಿಹಾಸ ಕಟ್ಟಿದ ನಮ್ಮ ಹಿರಿಯರಿಗೆ ಸಿಗಬೇಕಾದ ಗೌರವ, ಮಾನ್ಯತೆ ನೀಡದಿದ್ದರೆ ನಾವು ನಾಡದ್ರೋಹಿಗಳಾಗ್ತೀವಿ ಗುರು! ಕರ್ನಾಟಕ ಏಕೀಕರಣದ ಬಗ್ಗೆ ನಾವೂ ತಿಳಿದುಕೊಂಡು, ನಮ್ಮ ಮಕ್ಕಳಿಗೂ ಕೂಗಿ ಕೂಗಿ ಹೇಳಬೇಕಿದೆ: "ಕರ್ನಾಟಕ ನಮಗೇನು ಬಿಟ್ಟಿ ಸಿಕ್ಕಿಲ್ಲ. ಸಾವಿರಾರು ಹಿರಿಯರು ತಮ್ಮ ಜೀವನವನ್ನು ತೆತ್ತು ನಮಗಾಗಿ ಕೊಡಿಸಿದ ನಮ್ಮದೇ ನಾಡು!" ಅಂತ!

ಏನು? ಕರ್ನಾಟಕ ಏಕೀಕರಣದ ಬಗ್ಗೆ ನೀವು ಏನೂ ಓದಿಲ್ಲ ಅಂದ್ರಾ? ಅದು ಆಶ್ಚರ್ಯವೇನಲ್ಲ. ಬಹಳ ವ್ಯವಸ್ಥಿತವಾಗೇ ಇತಿಹಾಸದ ಪುಟಗಳಿಂದ ನಮ್ಮ ನಾಡಿನ ಏಕೀಕರಣದ ಕತೆಯನ್ನ ಕಿತ್ತೆಸೆಯಲಾಗಿದೆ ಗುರು! ಆ ಶಿಕ್ಷಣ ವ್ಯವಸ್ಥೆಗೆ ಇವತ್ತು ಧಿಕ್ಕಾರ! ಆ ರಾಜಕೀಯ ವ್ಯವಸ್ಥೆಗೆ ಧಿಕ್ಕಾರ! ನಮ್ಮನ್ನು ನಮ್ಮ ನಾಡಿನ ಇತಿಹಾಸದಿಂದಲೇ ಮರೆಮಾಡಿದವರಿಗೆಲ್ಲಾ ಧಿಕ್ಕಾರ! ನಮ್ಮನ್ನು ಇಷ್ಟು ದಿನ ಕತ್ತಲಲ್ಲಿಟ್ಟ ಕೇಡುಗರಿಗೆಲ್ಲಾ ಧಿಕ್ಕಾರ! ನಮ್ಮ ನಾಡು ಐತಿಹಾಸಿಕ ಬಂಜರುಭೂಮಿ ಎಂದು ನಮಗನಿಸುವಂತೆ ಮಾಡಿರುವವರಿಗೆಲ್ಲಾ ಇವತ್ತು ಬರಬಾರದ್ದು ಬರ!

ಕರ್ನಾಟಕ ಏಕೀಕರಣದ ಕತೆ ಓದಿ ತಿಳ್ಕೊಳಕ್ಕೆ ನವಕರ್ನಾಟಕ ಪ್ರಕಾಶನದೋರು ಪ್ರಕಟಿಸಿರುವ ಡಾ. ಎಚ್. ಎಸ್. ಗೋಪಾಲರಾಯರ "ಕರ್ನಾಟಕ ಏಕೀಕರಣ ಇತಿಹಾಸ" ಅನ್ನೋ ಹೊತ್ತಗೆ ಕೊಂಡು ಓದಿ. ಬೆಂಗ್ಳೂರಲ್ಲಿ "ಅಂಕಿತ ಪುಸ್ತಕ"ದಲ್ಲಿ ಸಿಗತ್ತೆ.

4 ಅನಿಸಿಕೆಗಳು:

Anonymous ಅಂತಾರೆ...

ಎನ್ ಗುರು,

ನಾನು ಓದಿದ ಏಕೀಕರಣ ಕುರಿತ ಲೇಖನಗಳಲ್ಲಿ ಮೊದಲ ಬಾರಿಗೆ ನಮ್ಮ ಹುತಾತ್ಮ ರಂಜಾನ್ ಸಾಬರ ಹೆಸರನ್ನು ನೋಡಿ ತುಂಬಾ ಖುಷಿಯಾಯ್ತು ಇವರು ನನ್ನ ಹಳ್ಳಿಯಾದ ಕಪ್ಪಗಲ್(ಬಳ್ಳಾರಿ ತಾಲೂಕು) ನವರೆ ಎಂದು ತಿಳಿಸಲು ಹೆಮ್ಮೆ ಪಡುತ್ತೇನೆ. ಇವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ತಿಳಿಸಬೇಕಾಗಿ ವಿನಂತಿ.

Anonymous ಅಂತಾರೆ...

ekeekaraNada pustakagaLannu neeve illi yeke upload maaDabaaradu?? ellarigoo odalu adu anukoola.

Anonymous ಅಂತಾರೆ...

ಗುರುಗಳೇ,,
ನಾನು ಹುಬ್ಬಳ್ಳಿಯವನೇ,, ಬೊಮ್ಮಾಯಿ ಅಂದ್ರೆ ಮೂರು ಮತ್ತೊಬ್ಬ ರಾಜಕಾರಣಿ ಅಂತಾನೆ ತಿಳಿದಿದ್ದೆ.. ಆದ್ರೆ ಅವರು ನಾಡಿನ ಏಕೀಕರಣದ ಸಂದರ್ಭದಲ್ಲಿ ಹೋರಾಡಿದ ಬಗ್ಗೆ ನಿಮ್ಮಿಂದಲೇ ತಿಳಿದೆ. ಬೊಮ್ಮಾಯಿ ಬಗ್ಗೆ ಗೌರವ ಮೂಡಿತು. ನನಗೆ ಇದರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ ಗುರುಗಳೇ. ಹಾಗೆ ಏಕೀಕರಣದ ಬಗ್ಗೆ ನನ್ನ ವಯಸ್ಸಿನ ಯುವಕರಿಗೆ ಅರಿವು ಇಲ್ಲದಿರೋದಕ್ಕೆ ನಮ್ಮ ಇತಿಹಾಸವನ್ನು ಮುಚ್ಚಿಟ್ಟಿರುವ ಸರಕಾರ ಕಾರಣ ಅನ್ನೊದು ಧ್ರಢ ಪಟ್ಟಿತು. ಕೂಡಲೇ ನೀವು ತಿಳಿಸಿದ ಪುಸ್ತಕವನ್ನು ಕೊಡು ಓದ್ತಿನಿ.

Vens ಅಂತಾರೆ...

namaskara gurugale,
nanu Gurgaon nalli iddini last one month inda.. SR Bommai avara nidana nanna friend avara college ge raja kottidrinda gottaytu, gottada melu nanage enu anisalu illa yakandre nanage enu gottu iralilla avara bagge. Though I read and concerned abut kannda and karnataka issues. Fine nimma blog tumba chennagide thanx nanu summane surf maduvaga nimma link open madide let me see it properly. I will send this page to all my friends.
thanx once again. neevu helida pustaka gurthittokkolluttene. munde odalu.
thanks guru

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails