ಬೆಳಗಾವಿ ವಿಷಯದಲ್ಲಿ ಮತ್ತೆ ಕ್ಯಾಕರಿಸಿ ಉಗಿಸಿಕೊಂಡ ಮಹಾರಾಷ್ಟ್ರ

ಕಾಲು ಕೆರ್ಕೊಂಡು ಜಗಳಕ್ಕೆ ಬರೋ ಜಾಯಮಾನದ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಬೆಳಾಗಾವಿಯ 865 ಹಳ್ಳಿಗಳ್ನ ಕೇಂದ್ರಾಡಳಿತಕ್ಕೆ ಒಳಪಡಿಸ್ಬೇಕು ಅಂತ ಭಾರತದ ದೊಡ್ಡ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾ ಆಗಿರೋದ್ನ ಅಕ್ಟೋಬರ್ 26ನೇ ತಾರೀಕಿನ ದಿ ಹಿಂದು ವರದಿ ಮಾಡಿದೆ.

ನಗೆಪಾಟಲಾಗ್ತಿರೋ ಮಹಾರಾಷ್ಟ್ರ ಸರ್ಕಾರ

ಬೆಳಗಾವಿ ಮರಾಠಿಗರ ಪಾಲಿಗೆ ಈಗಾಗಲೇ ಮುಗಿದು ಹೋದ ಅಧ್ಯಾಯ ಅಂತ ತಿಳ್ಕೊಂಡಿರೋ ಮರಾಠಿಗ್ರು ಹೇಗಾದ್ರೂ ಮಾಡಿ ಬೆಳಗಾವಿನ ಕರ್ನಾಟಕದಿಂದ ಬೇರ್ಪಡ್ಸಿ ನಂತ್ರ ಹೊಂಚು ಹಾಕಿ ತಾನು ಕಬಳಿಸಿಬಿಡಬೇಕು ಅನ್ನೋ ದುರ್ಬುದ್ಧಿಯ ಜತೆಗೆ, ದುರ್ಬಲವಾದ ತಮ್ಮ ಆಡಳಿತವನ್ನು ಜನರ ಮನಸ್ಸಿನಿಂದ ಮರೆಮಾಚಕ್ಕೆ ಆಗಿಂದಾಗ್ಗೆ ಬೆಳಗಾವಿ ಸಮಸ್ಯೆಯ ತಗಾದೆ ತೆಗೆದು ಅನುಕಂಪದ ಅಲೆಯನ್ನು ಹುಟ್ಟುಹಾಕೋದು, ಕಾಲಾನುಕಾಲಕ್ಕೆ ಆಳ್ವಿಕೆ ಮಾಡ್ಕೊಂಡು ಬಂದಿರೋ ಮಹಾರಾಷ್ಟ್ರ ಸರ್ಕಾರಗಳ ಕುತಂತ್ರದ ರಾಜಕೀಯ ದಾಳಗಳಲ್ಲೊಂದು ಸಹ ಆಗಿದೆ.

ಇದೇ ರೀತಿ ಕಳೆದ ವರ್ಷ ಸಹ, ಈವರ್ಗೆ ತಾವೇ ಕನ್ನಡಿಗರಿಗೆ ಎಸ್ಗಿರೋ ಮೋಸಗಳ್ನೆಲ್ಲಾ ಪಟ್ಟಿ ಮಾಡಿ, ಸಹೃದಯ ಕನ್ನಡಿಗರ ಮೇಲೆ ಭಾರತದ ಪ್ರಧಾನಿಗೆ ಸತ್ಯಕ್ಕೆ ಅಪಚಾರವೆಸಗುವಂತೆ ದೋಷಾರೋಪ ಮಾಡಿ ಎಲ್ರಿಂದ್ಲೂ ಉಗಿಸ್ಕೊಂಡಿದ್ರು. ಈಗ ಭಾರತದ ದೊಡ್ಡ ನ್ಯಾಯಲಯ ಅವರ ಅರ್ಜೀನ ಕಸದಬುಟ್ಟೀಗೆ ಎಸ್ದಿರೋದ್ರಿಂದ ಮತ್ತೆ ಎಲ್ಲರ ಮುಂದೆ ನಗೆಪಾಟಿಲಿಗಿಡಾಗಿದ್ದಾರೆ ಗುರು.

ಬೆಳಾಗಾವೀಲಿ ಮರಾಠಿಗರ ಕಿರೀಕು ಇವತ್ತಿಂದಲ್ಲ

ಮರಾಠಿಗರ ಈ ಕ್ಯಾತೆ ನೆನ್ನೆ ಮೊನ್ನೆದಲ್ಲ ಗುರು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳು ವಿಂಗಡನೆಗೊಂಡು ರಾಜ್ಯಗಳು ಎಕೀಕರಣ ಆದಾಗಿಂದ ಬೆಳಗಾವೀಲಿ ನೆಲೆಗೊಂಡ ಮರಾಠಿ ನಾಯಕರು ರಾಜಕೀಯ ದುರುದ್ದೇಷದಿಂದ ಪಕ್ಕದ ಮಹಾರಾಷ್ಟ್ರ ಸರ್ಕಾರದ ಏಜೆಂಟ್ರತೆ ವರ್ತಿಸ್ತಾ ಸಾಂಸ್ಕೃತಿಕವಾಗಿ ಕನ್ನಡಿಗರ ಜೊತೆ ಬೆರೀದೆ ಆಗಿಂದಾಗ್ಗೆ ಕನ್ನಡಿಗರ್ನ ಕೆಣಕ್ತಾ ಕನ್ನಡಿಗರ ಭಾವನೆಗಳ್ನ ಕೆರ್ಳುಸ್ತಾ ಬೆಳಗಾವೀನ ಮಹಾರಾಷ್ಟ್ರಕ್ಕೆ ಸೇರಿಸ್ಬಿಡೋ ಅಲ್ಲಿನ ಸರ್ಕಾರಗಳ ಪ್ರಯತ್ನಕ್ಕೆ ಇಂಬು ನೀಡ್ತಾ ಬಂದಿದ್ದಾರೆ.

ಮೈಸೂರು-ಮಹಾರಾಷ್ಟ್ರ-ಕೇರಳ ರಾಜ್ಯಗಳಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಪ್ರಕ್ರಿಯೆ ಸರಿಯಾಗಿ ನಡೀದೆ ಗಡಿ ವಿವಾದ ಭುಗಿಲೆದ್ದಾಗ 1966ರ ಕೊನೇಲಿ ಕೇಂದ್ರ ಸರ್ಕಾರದಿಂದ ಮೆಹರ್ಚಂದ್ ಮಹಾಜನ್ ಆಯೋಗ ನೇಮಿಸಲ್ಪಡ್ತು. ಆ ಆಯೋಗ ಮಾಡ್ಬೇಕು ಅಂತ ಒತ್ತಾಯ ಮಾಡಿದ್ದೂ ಮರಾಠಿಗರೇನೆ! ಅದು ನೀಡೋ ತೀರ್ಪಿಗೆ ನಾವು ತಲೆಬಾಗ್ತೀವಿ ಅಂತ ಹೇಳ್ಕೆ ನೀಡಿದ್ದ ಮಹಾರಾಷ್ಟ್ರದ ನಾಯಕರು ವರದಿ ಪ್ರಕಟ ಆದ್ಮೇಲೆ ಬೆಳಗಾವಿ ಕೈ ತಪ್ತಿದೆ ಅಂತ ಕೊಟ್ಟ ಮಾತಿಗೇ ತಿಲಾಂಜಲಿಯಿಟ್ಟು ಇವತ್ತಿನ ವರೆಗೂ ಗಡಿ ಸಮಸ್ಯೆ ಬಗೆಹರಿಯಕ್ಕೆ ಬಿಡದೆ ತನ್ನ ಹುಂಬತನ ಮುಂದುವರೆಸಿಕೊಂಡೇ ಬಂದಿದಾರೆ.

ಕನ್ನಡಿಗರ ಸೌಜನ್ಯಕ್ಕೆ ಮರಾಠಿಗರು ಕೊಟ್ಟಿರೋ ಬಹುಮಾನ

ಮಹಾಜನ್ ವರದಿ ಸರೀಗೆ ಜಾರಿಗೆ ಬಂದ್ರೆ ಬೆಳಗಾವಿ ನಮ್ಮಲ್ಲೆ ಉಳ್ಯತ್ತೆ, ಜತೆಗೆ ಮಹಾರಾಷ್ಟ್ರಕ್ಕೆ ಸೇರಿರೋ ಕೆಲವು ಅಚ್ಚ ಕನ್ನಡದ ಭಾಗಗಳು ನಮ್ಮದಾಗತ್ವೆ ಅನ್ನೋದೇನೋ ನಿಜ. ಆದರೆ ಫಲವತ್ತಾದ ನಿಪ್ಪಾಣಿ ಮತ್ತು ಖಾನಾಪುರದ ಕಾಡುಗಳ ಜತೆಗೆ ಈಗ ಕರ್ನಾಟಕದ ಭಾಗಾವಾಗಿರೋ ಕೆಲವು ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಬಿಟ್ಟುಕೊಡ್ಬೇಕಾಗತ್ತೆ. ವರದಿ ಜಾರಿಗೆ ಒತ್ತಾಯಿಸ್ತಿರೋ ನಾವು ಮತ್ತು ನಮ್ಮ ನಾಯಕ್ರು ಇದ್ನ ಮರೆತಿಲ್ಲ, ಆ ಭಾಗಗಳು ಕೈ ಬಿಟ್ಟೂ ಹೋಗೋ ನೋವು ಎಲ್ಲರಲ್ಲೂ ಇದೆ. ಆದ್ರೆ ಅದೇ ಆಗಿರೋ ಒಪ್ಪಂದ ಅಂತ ಅದನ್ನ ಗೌರವಿಸಿ ನಾವು ಮುಚ್ಕೊಂಡಿಲ್ವಾ?

ಏಕೀಕರಣದ ಸಮಯದಲ್ಲಿ ಕೈ ಬಿಟ್ಟು ಹೋದ ಅಚ್ಚ ಕನ್ನಡದ ಪ್ರದೇಶಗಳಾದ ಸತಾರ, ಸೊಲ್ಲಾಪುರ, ಜತ್ತ, ಸಾಂಗ್ಲಿ, ನಾಂದೇಡ್, ಕೊಲ್ಲಾಪುರ, ಅಕ್ಕಲಕೋಟದಲ್ಲಿ ನೆಲಸಿರೋ ಕನ್ನಡಿಗರ ಸ್ಥಿತಿ ಈ ಮರಾಠಿ ನಾಯಕರ ಉಪಟಳದಿಂದ ಶೋಚನೀಯವಾಗಿದ್ದರೂ ಸಭ್ಯ ಕನ್ನಡಿಗರು ಯಾವುದೇ ದುಸ್ಸಾಹಸಗಳಿಗೆ ಎಡೆ ಕೊಡದೆ ಮರಾಠಿ ಬಾಂಧವರೊಡನೆ ಸಂಯಮದಿಂದ ಬಾಳ್ವೆ ನಡೆಸಿರುವುದು ನಮ್ಮ ಕನ್ನಡಿಗರ ಸುಸಂಸ್ಕೃತಿಗೆ ಹಿಡಿದ ಕೈಗನ್ನಡಿ ಗುರು!

ಮೇಲಿನದಕ್ಕೆ ವ್ಯತಿರಿಕ್ತವಾಗಿ ಬೆಳಗಾವಿಲಿ ನೆಲ್ಸಿರೋ ಮರಾಠಿ ಪುಂಡ್ರು ಸಂಪೂರ್ಣ ಕನ್ನಡ ವಿರೋದಿ ನೀತಿ ಅನುಸರಿಸ್ತಾ, ಎಲ್ಲಾ ಕನ್ನಡಪರ ಚಿಂತನೆಗಳನ್ನ, ಮಟ್ಟ ಹಾಕ್ತ, ಬೆಳಗಾವಿ, ನಿಪ್ಪಾಣಿ ಮತ್ತು ಖಾನಪುರ ಇನ್ನಿತರೆಡೆಗಳಲ್ಲಿ ಕನ್ನಡ ಶಾಲೆಗಳೂ ಸಹ ನಡೀದಂತೆ, ಕನ್ನಡದ ಮಕ್ಕಳನ್ನ ಬಲವಂತವಾಗಿ ಮರಾಠಿ ಶಾಲೆ ಸೇರ್ಸೋಕೆ ಪ್ರೇರೇಪಿಸ್ತ, ಬೆಳಗಾವಿಲಿ ಕನ್ನಡ ರಾಜ್ಯೋತ್ಸವಾನ ಕಪ್ಪು ದಿನ್ವಾಗಿ ಆಚರ್ಸಿ, ಕನ್ನಡದ ದ್ವಜವನ್ನು ಸುಟ್ಟು, ಕನ್ನಡದ ನಾಮ ಫ಼ಲಕಗಳಿಗೆ ಮಸಿ ಬಳ್ದು ಕನ್ನಡಿಗರ ಸ್ವಾಭಿಮಾನಕ್ಕೆ ಆಗಿಂದಾಗ್ಗೆ ಲಗ್ಗೆಯಿಡ್ತಿದಾರೆ. ಹೇಗಿದೆ ಸೌಜನ್ಯಕ್ಕೆ ಸಿಕ್ಕ ಬಹುಮಾನ?

ಈ ಬೇಡದ ತೊಂದರೆಗಳಿಗೆ ಹೇಗೆ ಕೊನೆ ಹಾಡೋದು?
ಮುಂದಿನ ನ್ಯಾಯಾಲಯದ ವಿಚಾರಣೆಗಳಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸ್ತಿರೋ ವಕೀಲ್ರು ಮಹಾರಾಷ್ಟ್ರ ಅನುಸರಿಸ್ತಿರೋ ಒತ್ತಡ ತಂತ್ರಕ್ಕೆ ಮಣೀದೆ ಕರ್ನಾಟಕದ ಸಮರ್ಥನೆಯನ್ನು ಪರಿಣಾಮಕಾರಿಯಾಗಿ ಮಂಡಿಸಿ ಸತ್ಯಕ್ಕೆ ದೂರ್ವಾದ ಮರಾಠಿಗರ ಆರೋಪಕ್ಕೆ ತಕ್ಕ ಉತ್ತರ ನೀಡ್ಬೇಕಿದೆ.

ವಾಸ್ತವವನ್ನು ತಿರುಚ್ತ, ತಮ್ಮ ಕುಚೋದ್ಯ, ಕಿಡಿಗೇಡಿತನಾನ ಸಮರ್ಥಿಸ್ಕೊಳ್ತಾ ಬೆಳಗಾವಿ ಕಬಳ್ಸೋಕೆ ಹುನ್ನಾರ ನಡೆಸ್ತಿರೋ ಮರಾಠಿಗರ ದೊಂಬಿ ಸಂಘಟನೆಗಳ್ನ ಅನುರ್ಜಿತಗೊಳ್ಸಿ ಅವಿವೇಕಿ ಕಪಟಿಗಳನ್ನ ಬೆಳಗಾವಿಯಿಂದ ಗಡೀಪಾರು ಮಾಡ್ಸೋಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಸಕ್ಕೆ ನಮ್ಮ ಸರ್ಕಾರ ಮುಂದಾಗ್ಬೇಕು.

ಮಹಾಜನ್ ವರದಿ ಅನುಷ್ಠಾನದ ಸಾಧ್ಕ ಬಾಧ್ಕಗಳ್ನ ಚರ್ಚಿಸಿ, ಕನ್ನಡಿಗರ ಮತ್ತು ನಮ್ಮನ್ನು ನಂಬಿರೋ ಮರಾಠಿಗರ ಒಳಿತಿಗೂ ಗಮ್ನ ಹರ್ಸೋಕೆ ನಮ್ಮ ಕರ್ನಾಟಕದ ಆಡಳಿತ, ಸೂಕ್ತ ಯೋಜ್ನೆಗಳನ್ನ ಸಿದ್ಧಪಡಿಸಿ ಶಾಶ್ವತವಾಗಿ ಈ ಸಮಸ್ಯೆನ ಮಟ್ಟಹಾಕಕ್ಕೆ ನೇರ ಮತ್ತು ದಿಟ್ಟ ಹೆಜ್ಜೆ ಇರಿಸ್ಬೇಕು ಗುರು. ಏನಂತ್ಯಮ್ಮಾ?

4 ಅನಿಸಿಕೆಗಳು:

Anonymous ಅಂತಾರೆ...

ಮರಾಠಿ ಪುಂಡರಿಗೆ ಸರ್ವೋಚ್ಛನ್ಯಾಯಲಯ ಚೆನ್ನಾಗೆ ಉಗಿದಿದೆ. ಇನ್ನಾದ್ರು ಅವರು ವಾಸ್ತವನ ಅರ್ಥ ಮಾಡ್ಕೊಂಡ್ರೆ ಒಳ್ಳೆದು.

ಜಯಪ್ರಕಾಶ. ನೇ. ಶಿವಕವಿ

Lohith ಅಂತಾರೆ...

E Maratigarege tele sariela....Sum kalkerkond jagalake barod evr guri...Solapuridal max kannadigaru hag anta nam avr al heg yela adtara...nav kannadigaru shanthi preyaru bere bashe nu garavesuteve hag anta nam jaga na ketkoloke bandre nav sumn erola....Evrg sariyada pata kalsteve

Ubiquitos ಅಂತಾರೆ...

Supreme court super aggi mukad mele ugdidee maharastra gee,
inna ddru buddhi kalile avrgallu,

Belgaum nalli nannu idde, alli irro marathi gallu kudda niyath indanne irtharee adre e marathi gall kellu fanatics read MES, ivrigge benkki hach kod thare, avranna matta hakidrre belgaum nalli bere marathi gallu avraa kelsa nodkondu tepag irtharee,

adre ideen guru mahajan varadhi prkar nipani, khanapur ella hoguthe anthiraa alla???
matte mahrastra inda nammige enn yav jaggga gallu baruthvee ??
svalpa vivarsii sir.

Anonymous ಅಂತಾರೆ...

Ubiquitos ಅವರೆ,

ನೋಡಿ ಮಹಾಜನ್‌ ವರದಿಯಲ್ಲೇನಿದೆ ?

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ತಮ್ಮ ಪಾಲಿಗೆ ಬರಬೇಕಾದ ಪರರಾಜ್ಯಗಳ ವಶದಲ್ಲಿರುವ ಹಲವು ಭಾಗಗಳ ಬಗ್ಗೆ ಹಕ್ಕು ಮಂಡನೆ ಮಾಡಿದ್ದವು. ಇದನ್ನು ಕೂಲಂಕಶವಾಗಿ ಅಭ್ಯಸಿಸಿದ ಆಯೋಗ ತನ್ನ ಶಿಫಾರಸ್ಸುಗಳ ವರದಿಯನ್ನು ಸಲ್ಲಿಸಿತು. ಆ ವರದಿಯ ಮುಖ್ಯಾಂಶಗಳು ಇವು.

ಮಹಾರಾಷ್ಟ್ರದ ತಿರಸ್ಕೃತವಾದ ಬೇಡಿಕೆಗಳು : ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲ ಪ್ರದೇಶಗಳು ತನಗೆ ಬರಬೇಕೆಂದು ಮಹಾರಾಷ್ಟ್ರ ಮಂಡಿಸಿದ್ದ ಹಕ್ಕನ್ನು ತಿರಸ್ಕರಿಸಿತು. ಹುಕ್ಕೇರಿ ತಾಲೂಕಿನ 18 ಗ್ರಾಮ, ಅಥಣಿ ತಾಲೂಕಿನ 10 ಗ್ರಾಮಗಳ ಮೇಲಿನ ಹಕ್ಕನ್ನು ತಿರಸ್ಕರಿಸಿತು.

ಬೀದರ್‌ ಜಿಲ್ಲೆಯ 146 ಗ್ರಾಮಗಳ ಬಗ್ಗೆ ಮಂಡಿಸಿದ್ದ ಮಹಾರಾಷ್ಟ್ರದ ಹಕ್ಕನ್ನು ತಿರಸ್ಕರಿಸಿತು. ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ 8 ಗ್ರಾಮಗಳ ಬಗೆಗಿನ ಹಕ್ಕನ್ನೂ ತಿರಸ್ಕರಿಸಿತು.

ಮಹಾರಾಷ್ಟ್ರದ ಸ್ವೀಕೃತವಾದ ಬೇಡಿಗೆಗಳು : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ 206 ಗ್ರಾಮಗಳಲ್ಲಿ ಪಶ್ಚಿಮದ 152 ಗ್ರಾಮಗಳು,

ಬೆಳಗಾವಿ ತಾಲೂಕಿನ 84 ಗ್ರಾಮಗಳಲ್ಲಿ ಬೆಳಗಾವಿ ನಗರವನ್ನು ಹೊರತು ಪಡಿಸಿ ಪಶ್ಚಿಮದ ಅರ್ಧದಷ್ಟು ಹಳ್ಳಿಗಳು, ಚಿಕ್ಕೋಡಿ ತಾಲೂಕಿನ 41 ಗ್ರಾಮಗಳಲ್ಲಿ ನಿಪ್ಪಾಣಿ ಸಹಿತ 32 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಮಹಾಜನ್‌ ವರದಿ ಒಪ್ಪಿಗೆ ನೀಡಿತು.

ಕರ್ನಾಟಕದ ವಶದಲ್ಲಿರುವ 814 ಗ್ರಾಮಗಳು ತನಗೆ ಸೇರಬೇಕೆಂದು ಮಹಾರಾಷ್ಟ್ರ ಬೇಡಿಕೆ ಮಂಡಿಸಿತ್ತು. ಆದರೆ ಆಯೋಗ 264 ಗ್ರಾಮಗಳು(ವಿಸ್ತೀರ್ಣ-656.3 ಚದರ ಮೈಲಿ, ಜನಸಂಖ್ಯೆ -2.31 ಲಕ್ಷ) ಮಹಾರಾಷ್ಟ್ರಕ್ಕೆ ಸೇರಬೇಕೆಂದು ಶಿಫಾರಸ್ಸು ಮಾಡಿತು.

ಕರ್ನಾಟಕದ ತಿರಸ್ಕೃತವಾದ ಬೇಡಿಕೆಗಳು : ಸೊಲ್ಲಾಪುರ ಜಿಲ್ಲೆಯ ಮಂಗಳವೇಡಿ ಮತ್ತು ಶಿರೋಳ ತಾಲೂಕಿನ 13 ಗ್ರಾಮಗಳ ವರ್ಗಾವಣೆಗೆ ಆಯೋಗದಿಂದ ನಿರಾಕರಣೆ.

ಕರ್ನಾಟಕದ ಅಂಗೀಕೃತವಾದ ಬೇಡಿಗೆಗಳು : ಇಡೀ ಅಕ್ಕಲಕೋಟೆ ತಾಲೂಕು, ದಕ್ಷಿಣ ಸೊಲ್ಲಾಪುರ ತಾಲೂಕಿನ 65 ಗ್ರಾಮಗಳು, ಸಾಂಗ್ಲಿಯ ಜತ್‌ ತಾಲೂಕಿನ 44 ಗ್ರಾಮಗಳು, ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್‌ ತಾಲೂಕಿನ 15 ಗ್ರಾಮಗಳು, ಕೇರಳದಲ್ಲಿರುವ ಕಾಸರಗೋಡು ತಾಲೂಕಿನ 712 ಗ್ರಾಮಗಳನ್ನು ಕರ್ನಾಟಕಕ್ಕೆ ವರ್ಗಾಯಿಸಬೇಕೆಂಬ ಶಿಫಾರಸ್ಸು ವರದಿಯಲ್ಲಿದೆ.

ಮಹಾರಾಷ್ಟ್ರದ 516 ಗ್ರಾಮಗಳು ತನಗೆ ಸೇರಬೇಕೆಂದು ಕರ್ನಾಟಕ ಹಕ್ಕು ಮಂಡಿಸಿತ್ತು. ಆದರೆ ಆಯೋಗ 247ಗ್ರಾಮಗಳು(ವಿಸ್ತೀರ್ಣ -1368 ಚದರ ಮೈಲಿ, ಜನಸಂಖ್ಯೆ -3.50ಲಕ್ಷ) ಕರ್ನಾಟಕಕ್ಕೆ ಸೇರಬೇಕೆಂದು ಶಿಫಾರಸ್ಸು ಮಾಡಿತು. ಅಲ್ಲದೇ ಕಾಸರಗೋಡಿನ 712 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಸ್ಪಷ್ಟಪಡಿಸಿತು. ಆದರೆ ಆಯೋಗದ ವರದಿ ಅನುಷ್ಠಾನಕ್ಕೆ ಬರಲೇ ಇಲ್ಲ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಡಾ. ಹೆಚ್. ಎಸ್. ಗೋಪಾಲ ರಾವ್ ಅವರು ಬರೆದಿರುವ ಕರ್ನಾಟಕ ಏಕೀಕರಣ ಇತಿಹಾಸ ಎಂಬ ಗ್ರಂಥವನ್ನು ಓದಿ.

ಪುಸ್ತಕ ನವಕರ್ನಾಟಕ ಪ್ರಕಾಶನ ಅಥವ ಅಂಕಿತ ಪುಸ್ತಕ, ಗಾಂಧೀ ಬಜಾರ್, ಬೆಂಗಳೂರು, ಇಲ್ಲಿ ಸಿಗುತ್ತದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails