ಅಂದು ಹೀಗಿದ್ದ ಮಂದಿ ನಾವಾ ಗುರು?

ಕನ್ನಡ ನಾಡನ್ನು ಗಂಡುಮೆಟ್ಟಿನ ನಾಡು ಅಂತಾರಲ್ಲಾ ಮಂದಿ, ಎದಕ್ಕಂತ ಮಾಡೀರಿ? ನಮ್ ಬೆನ್ನು ನಾವೇ ತಟ್ಕೊಳಾಕ್ ಹತ್ತೀವಿ ಅಂದ್ಕೋಬ್ಯಾಡ್ರಿಪಾ. ನಮ್ ಇಮ್ಮಡಿ ಪುಲಿಕೇಶಿ ಕಾಲಕ್ಕಾ ಅಂದರಾ ಏಳನೇ ಶತಮಾನದಾಗ ಚೀನಾದಿಂದ ಒಬ್ಬ ಪ್ರವಾಸಿ ಬಂದಿದ್ದ, ಹ್ಯುಯೆನ್ ತ್ಸಾಂಗ್ ಅಂತ. ಅಂವ ಆಗಿನ್ ಕನ್ನಡ ಮಂದೀನ್ ಕುರಿತು ಏನ್ ಬರದಾನ ಗೊತ್ತೇನ್ರೀ?

ಹ್ಯುಯೆನ್ ತ್ಸಾಂಗ್ ಕಂಡ ಕನ್ನಡಿಗರು


ಇಲ್ಲಿನ ಜನರು ಪ್ರಾಮಾಣಿಕರು ಮತ್ತು ಸರಳ ಸ್ವಭಾವದವರು. ಅವರದು ಎತ್ತರದ ನಿಲುವು. ಅವರು ಪ್ರತಿಭಟಿಸುವ ಕಠಿಣ ಸ್ವಭಾವದವರು. ತಮಗೆ ಉಪಕಾರ ಮಾಡಿದವರಿಗೆ ಇವರು ತುಂಬ ಕೃತಜ್ಞರು. ಆದರೆ ವೈರಿಗಳಿಗೆ ನಿಷ್ಕರುಣರು. ಅಪಮಾನವಾದರೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇಡು ತೀರಿಸಿಕೊಳ್ಳುವ ಕೆಚ್ಚು ಅವರದು. ಒಬ್ಬರಿಗೆ ಸಹಾಯ ಮಾಡಬೇಕೆಂದು ಅವರಿಗೆ ಹೇಳಿದ್ದಾದರೆ, ಆ ಸಹಾಯ ನೀಡುವ ಭರದಲ್ಲಿ ತಮ್ಮನ್ನೇ ತಾವು ಮರೆತು ಬಿಡುತ್ತಾರೆ.

ಅವರು ಸೇಡು ತೀರಿಸಿಕೊಳ್ಳ ಬಗೆದರೆ, ಮೊದಲು ತಮ್ಮ ವೈರಿಗೆ ಅವರು ಮುನ್ನೆಚ್ಚರಿಕೆ ನೀಡುವರು. ಆಮೇಲೆ ಇಬ್ಬರೂ ಶಸ್ತ್ರಸಜ್ಜಿತರಾಗಿ ಒಬ್ಬರನ್ನೊಬ್ಬರು ಭಲ್ಲೆಯಿಂದ ತಾಗುತ್ತಾರೆ. ಅವರಲ್ಲಿ ಒಬ್ಬನು ಓಡತೊದಗಿದರೆ ಇನ್ನೊಬ್ಬನು ಬೆನ್ನಟ್ಟುವನು. ಆದರೆ ಸೋಲೊಪ್ಪಿ ಬಿದ್ದವನನ್ನು ಅವರು ಕೊಲ್ಲುವುದಿಲ್ಲ.

ಒಬ್ಬ ದಳಪತಿಯು ಕಾಳಗದಲ್ಲಿ ಸೋತರೆ ಅವನನ್ನು ಶಿಕ್ಷೆಗೆ ಒಳಪಡಿಸುವುದಿಲ್ಲ. ಅದರೆ, ಅವನಿಗೆ ಹೆಂಗಸರ ಬಟ್ಟೆಗಳ ಉಡುಗೊರೆ ಕೊಡಲಾಗುವುದು, ತನ್ಮೂಲಕ ಆ ದಳಪತಿಯು ತಾನೆ ಅಸು ನೀಗಲು ಮುಂದಾಗುವನು.

ಈ ನಾಡಿನಲ್ಲಿ ನೂರಾರು ಮಂದಿ ಜಟ್ಟಿಗಳನ್ನು ಸಾಕಲು ಏರ್ಪಾಡುಂಟು. ಮಸೆದಾಟಕ್ಕೆ ತೊಡಗುವಾಗಲೆಲ್ಲಾ ಆ ಜಟ್ಟಿಗಳು ಕಳ್ಳು ಕುಡಿದು ಮದ ಬರಿಸಿಕೊಂಡು, ಕಯ್ಯಲ್ಲಿ ಭಲ್ಲೆ ಹಿಡಿದು ಹತ್ತು ಸಾವಿರ ಜನರ ನಡುವೆ ಬಂದು ತಾನು ಒಬ್ಬನೇ ಇದ್ದರೂ ಅವರಿಗೆ ಕಾದಾತಕ್ಕೆ ಕರೆ ಕೊಡುವನು. ಈ ಜಟ್ಟಿಗಳಲ್ಲಿ ಒಬ್ಬ ಯಾರನ್ನಾದರೂ ಎದುರಿಸಿ ಕೊಂದಿದ್ದೇ ಆದರೆ, ದೇಶದ ಶಾಸನಗಳು ಅವನಿಗೆ ಶಿಕ್ಷೆ ವಿಧಿಸುವುದಿಲ್ಲ.

ಅವರು ಹೊರಗೆ ಹೊರಟಾಗಲೆಲ್ಲಾ ಅವರ ಮುಂದೆ ಡೋಲು ಬಡಿಯುವರು. ಇಷ್ಟೇ ಅಲ್ಲಾ, ಅವರು ನೂರಾರು ಆನೆಗಳಿಗೆ ಮದ ಬರಿಸಿ ಕಾಳಗಕ್ಕೆ ಅವನ್ನು ಕರೆದೊಯ್ದು, ಮೊದಲು ತಾವೂ ಮದ್ಯ ಕುಡಿದು, ಗುಂಪುಗೂಡಿ ಮುನ್ನುಗ್ಗುತ್ತ, ಎಲ್ಲವನ್ನೂ ತೊತ್ತಳದುಳಿದುಬಿಡುತ್ತಾರೆ. ಇದರಿಂದಾಗಿ ಯಾವ ಹಗೆಯೂ ಅವರೆದುರು ನಿಲ್ಲಲಾರದವನಾಗುವನು. ಈ ರಾಜನು ಈ ಬಗೆಯ ಜಟ್ಟಿಗಳನ್ನು ಹೊಂದಿದವನಾಗಿರುವುದರಿಂದ ಅಜೇಯನಾಗಿದ್ದಾನೆ ಮತ್ತು ಇವನ ಜನಪರ ಆಡಳಿತ ನಾಲ್ಕುದಿಕ್ಕಿಗೂ ಪ್ರಸಿದ್ಧಿ ಪಡೆದಿದೆ.

ಮೈ ನಿಮಿರಿಸೋ ಕನ್ನಡಿಗರ ಇತಿಹಾಸ


ಇಂಥಾ ಭಾಳ ವಿಚಾರಗಳ ಬಗ್ಗೆ ಆವತ್ತಿನ ಮೈಸೂರು ರಾಜ್ಯ ಸರಕಾರದೋರು, 1970ರಾಗ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆ ಮುಖಾಂತರ ಹೊರತಂದ "ಕರ್ನಾಟಕದ ಪರಂಪರೆ" ಅನ್ನೋ ಹೊತ್ತಿಗಿ ಒಳಗ ದಾಖಲಿ ಮಾಡ್ಯಾರ್ರೀ. ಒಂದೊಂದು ಹಾಳಿ ತಿರುವಿ ಹಾಕ್ದಾಗ್ಲೂ ನಮ್ ಹಿರೇಕರು ಎಂಥ ಧೀರರು ಶೂರರೂ ಇದ್ರಂತ ಎದಿ ಉಬ್ತೈತಿ. ಆ ಮಂದಿ ಮಯ್ಯಾಗಿನ ರಕ್ತಾನೆ ನಮ್ ಮಯ್ಯಾಗ್ ಹರೀತಿರೋದು ಅಂತ ರೋಮಾಂಚನ ಆಕ್ಕೈತಿ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails