ಅಕ್ಕನ ಚಾಳಿ ಮನೆಮಂದಿಗೆಲ್ಲ ಹರಡೋದು ಹೇಗೆ?

ಇದೇ ತಿಂಗಳ ೨೯ರಿಂದ ೩೧ರ ವರೆಗೆ ಅಮೇರಿಕದ ಶಿಕಾಗೋನಲ್ಲಿ ೫ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡಿಯಲಿದೆ. ಇದಕ್ಕೆ ಇಡೀ ಪ್ರಪಂಚದಿಂದ ಕನ್ನಡಿಗರು ಬಂದು ಸೇರ್ತಿದಾರೆ. ಕರ್ನಾಟಕದಿಂದಲೂ ಅನೇಕ ಪ್ರತಿನಿಧಿಗಳು ಹೋಗ್ತಿದಾರೆ. ಇಷ್ಟೆಲ್ಲ ತಿಳುವಳಿಕಸ್ತ ಕನ್ನಡಿಗರು ಸೇರುವುದು ಒಂದು ಬಹಳ ಒಳ್ಳೇ ವಿಷಯವೇ ಗುರು. ಕನ್ನಡಿಗರು ಒಟ್ಟಿಗೆ ಸೇರುವುದೇ ಕಡಿಮೆ ಅನ್ನೋ ಕೆಟ್ಟ ಹೆಸರು ಪಡ್ಕೊಂಡಿರುವಾಗ ಇಂಥಾ ಸಮ್ಮೇಳನಗಳಿಂದ ಆ ಕೆಟ್ಟ ಹೆಸರು ಹೋಗಬಹುದೇನೋ.ಈ ವರ್ಷದ ಅಕ್ಕ ಸಮ್ಮೇಳನದಲ್ಲಿ ಕನ್ನಡದ ಹೆಣ್ಣು-ಗಂಡುಗಳ ಕಣ್ಬೇಟೆಯಿಂದ ಹಿಡಿದು ಕನ್ನಡ ಸಾಹಿತ್ಯ ಮತ್ತು ಉದ್ಯಮಿಗಳ ಸಮ್ಮೇಳನಾನೂ ಇದೆ ಅಂತ ಕೇಳುದ್ರೆ ಸಕ್ಕತ್ ಖುಷಿಯಾಗುತ್ತೆ ಗುರು. ಒಂದು ರೀತಿಯಲ್ಲಿ ನವರಸಗಳೆಲ್ಲಾ ಈ ಸಮ್ಮೇಳನದಲ್ಲಿ ಹೇರಳವಾಗಿ ಸಿಗುತ್ತವೆ ಅನ್ನಿಸುತ್ತೆ! ನಾಡು-ನುಡಿ-ನಾಡಿಗರ ಏಳಿಗೆಯ ಹಾದಿಯಲ್ಲಿ ಇಂಥಾ ಸಮ್ಮೇಳನಗಳ ಪಾತ್ರವಾದರೂ ಏನು? ಇವುಗಳು ಇನ್ನೂ ಹೆಚ್ಚು ಹೆಚ್ಚು ಉಪಯುಕ್ತ ಅನಿಸಿಕೊಳ್ಳುವುದಕ್ಕೆ ಏನೇನಾಗಬೇಕು ಅಂತ ನೋಡೋಣ್ವಾ?


ಕರ್ನಾಟಕದ ಏಳಿಗೆ ಅಂದ್ರೆ ಏನು ಅನ್ನೋದರ ಬಗ್ಗೆ ಒಮ್ಮತ ಬೇಕು
ಕರ್ನಾಟಕದ ಏಳಿಗೆ ಎಂದರೆ ಏನು ಎನ್ನುವುದರ ಬಗ್ಗೆ ಸಮ್ಮೇಳನ-ಹೋಗುಗರಲ್ಲಿ ಒಮ್ಮತ ಬರಬೇಕು. ಕರ್ನಾಟಕದ ಏಳಿಗೆ ಅಂದರೆ ಏನು? ಅದಕ್ಕೂ ಅಮೇರಿಕ-ಯೂರೋಪುಗಳ ದೇಶಗಳ ಏಳಿಗೆಗೂ ವೆತ್ಯಾಸವೇನು? ಒಂದೇ ಸಮನಾಗಿರುವುದೇನು? ಎಂಬೀ ವಿಷಯಗಳ ಬಗ್ಗೆ ಒಮ್ಮೆ ಈ ಸಮ್ಮೇಳನದಲ್ಲಿ ಸೇರುವಂತಹ ಬುದ್ಧಿವಂತ ಕನ್ನಡಿಗರಲ್ಲಿ ಒಮ್ಮತ ಬಂದುಬಿಟ್ಟರೆ ಕನ್ನಡಿಗರಿಗೆ ಐದೂವರೆಕೋಟಿ ಆನೆಗಳ ಬಲ ಬಂದಂತೆ. ಕರ್ನಾಟಕ ಏಳಿಗೆ ಹೊಂದಿದೆ ಅಂತ ಹೇಳ್ಬೇಕಾದ್ರೆ ಕೆಲವು ಮೂಲಭೂತವಾದ ಬದಲಾವಣೆಗಳು ಈ ನಾಡಿನಲ್ಲಿ ಆಗಿರಲೇಬೇಕು. ಅವುಗಳು ಆಗಿಲ್ಲದೆ ಕರ್ನಾಟಕ ಏಳಿಗೆ ಹೊಂದಿದಂತಲ್ಲ. ಮೊದಲಿಗೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಕರ್ನಾಟಕಕ್ಕೆ ಭಾರತದ ಇತರ ರಾಜ್ಯಗಳಿಂದ ಮೋಸವಾಗುತ್ತಿರಬಾರದು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು. ಕನ್ನಡಿಗರಲ್ಲಿ ಕಲಿಕೆ / ಉದ್ದಿಮೆಗಳಿಗೆ ಕೊರತೆಯಿರಬಾರದು. ಕನ್ನಡಿಗರು ಜಾಗತಿಕ ಮಟ್ಟದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಒಟ್ಟಾಗಿ ಹೆಸರು ಮಾಡಬೇಕು (ಅಲ್ಲಿಲ್ಲಿ ಯಾರೋ ಒಬ್ಬಿಬ್ಬ ಕನ್ನಡಿಗರು ಹೆಸರು ಮಾಡಿದರೆ ಸಾಲದು!). ಮತ್ತೆ ಈ ಮೇಲಿನವೆಲ್ಲವೂ ಒಮ್ಮೆಗೇ ಆಗಿದ್ದರೆ ಮಾತ್ರ ಕರ್ನಾಟಕ ಏಳಿಗೆ ಹೊಂದಿದೆ ಎನ್ನಲು ಸಾಧ್ಯ. ಯಾವ ಒಂದು ಆಗಿಲ್ಲದಿದ್ದರೂ ನಾವು ಏಳಿಗೆ ಹೊಂದಿಲ್ಲವೆಂದೇ ಅರ್ಥ. ಯಾವ ಒಂದನ್ನು ಕೈಬಿಟ್ಟರೂ ಮಿಕ್ಕವುಗಳಲ್ಲಿ ಗೆಲುವಿಲ್ಲವೆನ್ನುವುದು ಹೊರದೇಶಗಳಲ್ಲಿ ಸಾಕಷ್ಟು ಓಡಾಡಿರುವವರಿಗೆ ಗೊತ್ತೇ ಇರುತ್ತದೆ. ಜರ್ಮನಿ ಜರ್ಮನ್ ಭಾಷೆಯನ್ನು ಬಿಟ್ಟಾಗಲಿ ತಮ್ಮದೇ ನಾಡಿನಲ್ಲಿ ಫ್ರೆಂಚಿಗರಿಗೆ ತಮಗಿಂತ ಹೆಚ್ಚಿನ ಸ್ಥಾನವನ್ನು ಕೊಟ್ಟಾಗಲಿ ಸರಿಯಾದ ಕಲಿಕೆ/ ಉದ್ದಿಮೆಗಳ ಏರ್ಪಾಡುಗಳಿಲ್ಲದೆಯಾಗಲಿ ಇವತ್ತಿನ ಸ್ಥಿತಿಗೆ ಬರಲಿಲ್ಲ. ಫ್ರಾನ್ಸೂ ಬರಲಿಲ್ಲ, ಇಸ್ರೇಲೂ ಬರಲಿಲ್ಲ, ಜಪಾನೂ ಬರಲಿಲ್ಲ, ಯಾವ್ ಬಡ್ಡೀಮಗನ್ ನಾಡೂ ಬರಲಿಲ್ಲ. ಕರ್ನಾಟಕವೂ ಬರಲ್ಲ. ಇದು ಅಕ್ಕ ಸಮ್ಮೇಳನಕ್ಕೆ ಹೋಗೋ ಕನ್ನಡಿಗರಿಗೆ ಅರ್ಥವಾಗಬೇಕಾದ ಮೊದಲನೇ ವಿಷಯ. ಈ ಸತ್ಯವನ್ನು ಅವರು ಎಂದಿಗೂ ಮರೀಬಾರ್ದು.

ಏಳಿಗೆಯ ಹಾದಿಯ ಮೈಲಿಗಲ್ಲುಗಳನ್ನು ಗುರುತಿಸಬೇಕು

ಏಳಿಗೆ ಅಂದರೆ ಏನು ಅನ್ನುವುದರ ಬಗ್ಗೆ ಒಮ್ಮತ ಬಂದಮೇಲೆ ಇನ್ನು ಆ ಏಳಿಗೆಯ ಹಾದಿಯಲ್ಲಿ ಯಾವ ಯಾವ ಮೈಲಿಗಲ್ಲುಗಳು ಯಾವಾಗ್ಯಾವಾಗ ದಾಟಬೇಕಾದವು ಅನ್ನುವುದರ ಬಗ್ಗೆ ಅಕ್ಕ ಸಮ್ಮೇಳನಗಳಲ್ಲಿ ಚರ್ಚೆ ಆಗಬೇಕು. ಕರ್ನಾಟಕಕ್ಕೆ ಭಾರತದ ಇತರ ರಾಜ್ಯಗಳಿಂದ ಏಕೆ ಮೋಸವಾಗುತ್ತಿದೆ? ಇದಕ್ಕೆಲ್ಲ ಮೂಲ ಕಾರಣವೇನು? ಕರ್ನಾಟಕಕ್ಕೂ ಭಾರತಕ್ಕೂ ನಿಜವಾದ ಸಂಬಂಧವೇನು? ನಮ್ಮ ಕಲಿಕೆಯೇರ್ಪಾಡಿನಲ್ಲಿ ಪ್ರಾಥಮಿಕ ಹಂತದಲ್ಲಿ ಇಡೀ ಪ್ರಪಂಚದಲ್ಲಿ ಯಾವುದಕ್ಕೂ ಕಡಿಮೆಯಿಲ್ಲವೆನ್ನುವಂತಹ ಕಲಿಕೆಯನ್ನ (ಅದು ಕನ್ನಡದಲ್ಲೇ ಅನ್ನೋದನ್ನ ಮತ್ತೆ ಹೇಳಲೇಬೇಕಾಗಿಲ್ಲ) ಯಾವಾಗ ನಾವು ಗಿಟ್ಟಿಸಿಕೊಂಡಿರಬೇಕು? ಹಾಗೇ ಪ್ರೌಢ, ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಯಾವಾಗ? ಇವುಗಳೆಲ್ಲ ಈಡೇರಬೇಕಾದರೆ ನಮ್ಮ ಈಗಿನ ಕಲಿಕೆಯೇರ್ಪಾಡುಗಳಲ್ಲಿ ಯಾವಯಾವ ಬದಲಾವಣೆಗಳಾಗಬೇಕು? ಇವತ್ತು ಆ ಏರ್ಪಾಡುಗಳಲ್ಲಿರುವ ಕೊರತೆಗಳೇನು? ಕರ್ನಾಟಕದಲ್ಲಿ ಕನ್ನಡದ/ ಕನ್ನಡಿಗನ ಸಾರ್ವಭೌಮತ್ವಕ್ಕೆ ಅಡ್ಡಗಾಲು ಹಾಕಿಕೊಂಡು ಏನೇನು ನಿಂತಿದೆ? ಯಾರುಯಾರು ನಿಂತಿದ್ದಾರೆ? ಇವುಗಳನ್ನೆಲ್ಲ ಮೀರಿ ಮುಂದೆ ಹೋಗುವುದು ಹೇಗೆ? ಮತ್ತು ಯಾವಾಗ? ಇವುಗಳನ್ನೆಲ್ಲ ಆಗುಮಾಡಿಸಲು ಯಾವಯಾವ ಹೊಸಹೊಸ ಸಂಸ್ಥೆಗಳು ಹುಟ್ಟಬೇಕು? ಅವುಗಳನ್ನು ನಡೆಸುವವರು ಯಾರು? ಅದಕ್ಕೆ ದುಡ್ಡೆಷ್ಟು ಬೇಕು? ಎಲ್ಲಿಂದ ಬಂದೀತು? ಯಾವಾಗ? --- ಇಂತಹ ಪ್ರಶ್ನೆಗಳ್ನ ಅಕ್ಕ ಕೇಳಬೇಕು, ಕೇಳಿ ನಮ್ಮ ಏಳಿಗೆಯ ಹಾದಿಯ ಮೈಲಿಗಲ್ಲುಗಳ್ನ ಗುರುತಿಸಬೇಕು.

ಕನ್ನಡದ ಮಣ್ಣಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವ ಸಂಘಟನೆಗಳೊಡನೆ ಕೈಜೋಡಿಸಬೇಕು

ಅಕ್ಕ ಅಮೇರಿಕದಲ್ಲಿ ಮಾತ್ರ ತನ್ನ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವುದರಿಂದ ನಾಡಿನ ಮಣ್ದಿಟಗಳಲ್ಲಿ (ಮಣ್ಣಿಗೆ ಹತ್ತಿರವಾದ ದಿಟಗಳಲ್ಲಿ) ಪ್ರತಿದಿನವೂ ಮುಳುಗಿ ನಾಡಿನ ಏಳಿಗೆಗಾಗಿ ದುಡಿಯುತ್ತಿರುವ ಸಂಘಟನೆಗಳೊಡನೆ ಕೈಜೋಡಿಸದೆ ಕರ್ನಾಟಕದಲ್ಲಿ ಏಳಿಗೆಯನ್ನು ತರಲು ಕಷ್ಟವಾದೀತು. ಇವತ್ತಿನ ದಿನ ಸರ್ಕಾರವೊಂದೇ ನಾಡು-ನುಡಿ-ನಾಡಿಗರ ಬೆಳವಣಿಗೆಯ ಹೊಣೆ ಹೊರಲಾರದು. ಹಿಂದಿಯ ಭೂತ ಹಿಡಿದು ಕನ್ನಡವನ್ನೇ ಕಡೆಗಣಿಸುವ ಸರ್ಕಾರಗಳನ್ನಂತೂ ನಂಬುವುದಕ್ಕೇ ಅಸಾಧ್ಯ! ಕನ್ನಡಿಗರಿಗೆ ಉದ್ಯೋಗ ಹುಟ್ಟದಿದ್ದರೂ ಪರವಾಗಿಲ್ಲ ಬಿಹಾರಿಗಳಿಗೆ ಕೆಲಸ ಕೊಟ್ಟರೆ ಭಾರತ ಉದ್ಧಾರವಾಗುತ್ತದೆ ಎನ್ನುವ ಸರ್ಕಾರಗಳನ್ನೂ ನಂಬಲು ಅಸಾಧ್ಯ! ಆದ್ದರಿಂದ ಯಾವ ಯಾವ ಸಂಘಟನೆಗಳು ನಿಜವಾಗಿಯೂ ನಾಡು-ನುಡಿ-ನಾಡಿಗನ ಏಳಿಗೆಯನ್ನೇ ತಮ್ಮ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿವೆಯೋ ಅವುಗಳೊಡನೆ ಒಗ್ಗೂಡಿ ಕೆಲಸ ಮಾಡಿದರೆ ಅಕ್ಕನಿಗೆ ತನ್ನ ನಿಜವಾದ "ಚಾಳಿ"ಯನ್ನು "ಮನೆಮಂದಿ"ಗೆಲ್ಲ ಹರಡಲು ಸುಲಭವಾದೀತು. ಇವತ್ತಿನ ದಿನ ಇಂತಹ ಎಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರೇ ಎಲ್ಲರಿಗೂ ಮೊದಲು ಮನಸ್ಸಿಗೆ ಬರುವುದು. ಕರವೇ ನಾಡು-ನುಡಿ-ನಾಡಿಗರ ಏಳಿಗೆಗಾಗಿ ಎಡೆಬಿಡದೆ ದುಡಿಯುತ್ತಿರುವ ಒಂದು ಹಿರಿದಾದ ಸಂಘಟನೆ. ಹೀಗಿರುವಾಗ ಅಕ್ಕ-ಕರವೇಗಳು ಅಕ್ಕರೆಯಿಂದ ಒಟ್ಟುಗೂಡಿ ಯಾಕೆ ಕೆಲಸ ಮಾಡಬಾರದು? ಇವರಿಬ್ಬರೂ ಸೇರಿ ಚಿಂತಿಸಬೇಕು, ತಂತಮ್ಮ ಶಕ್ತಿ-ಸಾಮರ್ಥ್ಯಗಳನ್ನು ಬಳಸಿ ನಾಡಿನ ಏಳಿಗೆಯ ತೇರನ್ನು ಮುಂದೆ ತಳ್ಳಬೇಕು. ಇದೆಲ್ಲಾ ಮುಂದಿನ ದಿನಗಳಲ್ಲಿ ಆಗಲಿ ಅಂತ ಹಾರೈಸ್ತಾ ಈ ಬಾರಿಯ ಸಮ್ಮೇಳನಕ್ಕೆ ಒಳಿತು ಹಾರೈಸೋಣ! ಏನ್ ಗುರು?

9 ಅನಿಸಿಕೆಗಳು:

Anonymous ಅಂತಾರೆ...

ಅಕ್ಕ ವಿಷ್ವ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ ಎ೦ದು ಹಾರೈಸುವೆ. ಅಲ್ಲಿನ ಕನ್ನಡಿಗರು ಎಷ್ಟು ಜಾಗ್ರುತರೆ೦ದು ನೋಡುವ ಹ೦ಬಲ ಮತ್ತು ಎಷ್ಟು ಪರಿಪೂರ್ಣವಾದ ಹಾಗೂ ಅರ್ಥಭರಿತವಾದ ಚರ್ಚೆಗಳನ್ನು ನಡೆಸುತ್ತಾರೆ೦ದು ನೋಡಬೇಕಾಗಿದೆ. ಕನ್ನಡಿಗನು ಎಲ್ಲೇ ಇರಲಿ, ಅವನ ನರ ನಾಡಿಗಳು ಕರುನಾಡಿನಿ೦ದಲೇ ಹರಿಯುತ್ತದೆ. ಆದ್ದರಿ೦ದ, ನಾಡನ್ನು ಶಕ್ತಿಯುತಗೊಳಿಸುವಲ್ಲಿ ತಮ್ಮ ಪಾತ್ರವೇನೆ೦ದು ಅಲ್ಲಿನ ಕನ್ನಡಿಗರು ಪರಾಮರ್ಶಿಸಿಕೊಳ್ಳಬೇಕಾಗಿದೆ.

ಅಕ್ಕ-ರಕ್ಷಣಾ ವೇದಿಕೆಗಳು ಏಕೆ ಜೊತೆಗೂಡಿ ಚಿ೦ತನೆ ನಡೆಸಬಾರದು? ಮು೦ದಿನದಿನಗಳಲ್ಲಿ ಇವೆಲ್ಲ ಸಾಧ್ಯವಾಗುವ೦ತಹದು ಎ೦ದು ನನ್ನ ಅನಿಸಿಕೆ..... ಏಕೆ ಈ ನಿಟ್ಟಿನಲ್ಲಿ ಸ್ವಲ್ಪ ಹೆಚ್ಚಾಗಿ ಗಮನಹರಿಸಬಾರದು?

kannadiga ಅಂತಾರೆ...

AKKA ವೆಬ್ಸೈಟ್ ನಲ್ಲಿ ಒಂದು ಮೆಮ್ಬೇರ್ಸ್ ಲಿಸ್ಟ್ ಇದೆ
ಅದರಲ್ಲಿ ಕೆಲವರ e mail id ಇದೆ
ಅವರಿಗೆ ಮೇಲ್ ಮಾಡಿದ್ರೆ ಅವರು ಕೂಡ ಇದರ ಬಗ್ಗೆ ಚಿಂತಿಸುತ್ತಾರೆ

Anonymous ಅಂತಾರೆ...

Kannadigas should think together and act together. Those who have attained fame in different countries should think about developing enterprenuerial skills in Kannadigas. They are the ones who should invest in Karnataka, start kannada centric medias and promote Karnataka outside India.

Unknown ಅಂತಾರೆ...

AKKA Samelana Yeshasvi agi nadeyalli yendu haraisuthene.....
Adhe reethi illinda hoda prathinidhigalu thavu Karnataka hagu Kannadavanu Prathinidhisuthidheve endu mareyadhe kannada thanavanu pradarshisali........

SHUBHAVAGALI

JAI KARNATAKA

Anonymous ಅಂತಾರೆ...

AKKA Samelana yashasviyagi nadeyali. Kannadigarella ondagali. Olleya yojanegalu barali. Kannadigarige elli hodaru kelasa sigalu tondareyaagadirali. Kannadigaru olleya businessman galanna tayaru madali. Hege ondu sanna desha poorti vishwada mele rajya bhara madi tanna bhashe samskrutiyannu pasarisito.. hage karnataka tannalliruva olleyatanavanna ide vishwakke hanchali.

Unknown ಅಂತಾರೆ...

ಅಕ್ಕ ಐದನೇ ವಿಶ್ವ ಸಮ್ಮೇಳನವು ಯಶಸ್ವಿಯಾಗಿ ಸಡಗರ ಸಂಭ್ರಮದಿಂದ ಜರುಗಲೆಂದು ಹಾರೈಸುತ್ತೆನೆ.

ಅಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಹಕ್ಕು ಸುವರ್ಣ ದೂರದರ್ಶನ ವಾಹಿನಿಯವರ ಪಾಲಗಿದೆ. ಆದ್ದರಿಂದ ವಿಶ್ವ ಸಮ್ಮೇಳನದ ಕಾರ್ಯಕ್ರಮಗಳನ್ನ ಎಲ್ಲ ಕನ್ನಡಿಗರು ನೋಡಬಹುದಾಗಿದೆ ಮತ್ತು ಈ ಸುವರ್ಣಾವಕಾಶ ನಮ್ಮದಾಗಿದೆ!

ಈ ಸಮ್ಮೇಳನ ನಡೆಯಲು ಸಹಕರಿಸುತ್ತಿರುವ ಎಲ್ಲಾ ನೆಚ್ಚಿನ ಕನ್ನಡಿಗರಿಗೆ ಜಯವಾಗಲಿ ಎಂದು ಹೇಳುತ್ತಾ


ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಜೈ ಕರ್ನಾಟಕ ಮಾತೇ

Anonymous ಅಂತಾರೆ...

ಅಕ್ಕದವರು ಈ ಸಮಾರಾಂಭಕ್ಕೆ ಶ್ರೀ ನಾರಾಯಣ ಗೌಡರನ್ನು ಕರೆಸಬೇಕಿತ್ತು. ಆ ಮೂಲಕ ಕರವೇ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲವನ್ನು ಸೂಚಿಸಬಹುದಿತ್ತು.

-guru

Anonymous ಅಂತಾರೆ...

AKKANA VISHWA ROOPA DARSHANAVAAGALIDE. NARAYANA GOWDARANNAU AAHWAANISABEKITTU.

AKKANIGE JAYAVAAGALI.

Anonymous ಅಂತಾರೆ...

nija. Narayana Gowdarannu karesabekittu. Ella media dallu ee vishaya ettaadi prasaranu maadbekittu.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails