ಕರ್ನಾಟಕದಲ್ಲಿ ಹಿಂದೆಂದೂ ನಿಜವಾದ ಪ್ರಾದೇಶಿಕ ಪಕ್ಷಗಳೇ ಇರಲಿಲ್ಲ!

ಪದ್ಮರಾಜ ದಂಡಾವತೆ ಅನ್ನೋ ಒಬ್ಬ ಬರಹಗಾರರು, ನಾಲ್ಕನೇ ಆಯಾಮ ಅನ್ನೋ ಅಂಕಣದಲ್ಲಿ, ಇವತ್ತಿನ (26.04.2009) ಪ್ರಜಾವಾಣಿಯ ಏಳನೇ ಪುಟದಲ್ಲಿ ಪ್ರಾದೇಶಿಕ ಪಕ್ಷ ಬೇಕು, ಆದ್ರೆ ಕಟ್ಟೋರು ಯಾರು?" ಅನ್ನೋ ವಿಷಯವಾಗಿ ಬರೆದಿದ್ದಾರೆ. ಶ್ರೀಯುತರು ತಮ್ಮ ಬರಹದಲ್ಲಿ ಕರ್ನಾಟಕದಲ್ಲಿ ಈ ಹಿಂದೆ ಇದ್ದ(?) ಪ್ರಾದೇಶಿಕ ಪಕ್ಷಗಳ ಬಗ್ಗೆ ಮತ್ತು ಅವುಗಳ ವೈಫಲ್ಯಗಳ ಬಗ್ಗೆ ತಮ್ಮ ಅನಿಸಿಕೇನಾ ಬರ್ದಿದಾರೆ! ಇವ್ರು ಬರ್ದಿರೋ ಹಾಗೇ ಇವತ್ತಿನ ದಿವಸ ಕೇಂದ್ರದಲ್ಲಿ ಯಾವುದೇ ಒಂದು ಪಕ್ಷ ಅಧಿಕಾರ ಹಿಡ್ಯಕ್ ಆಗೋ ಪರಿಸ್ಥಿತಿ ಇಲ್ಲ. ಹಾಗಾಗಿ ಇವತ್ತು ಪ್ರಾದೇಶಿಕ ಪಕ್ಷಗಳಿಗೆ ಹಿಂದಿಗಿಂತಲೂ ಹೆಚ್ಚಿನ ಮಹತ್ವ ಸಿಕ್ಕಿದೆ.

ಪ್ರಾದೇಶಿಕ ಪಕ್ಷಗಳೆಂದರೇನು?

ಇವರು ಕೊಡಮಾಡಿದ ಪಟ್ಟೀಲಿ 1956ರ ಕರ್ನಾಟಕ ವಿಕಾಸ ವೇದಿಕೆಯಿಂದ ಹಿಡ್ದು ಇವತ್ತಿನ ರೈತಸಂಘದತನಕ ಕರ್ನಾಟಕದ ಭೌಗೋಳಿಕ ವ್ಯಾಪ್ತಿಗೆ ಸೀಮಿತವಾಗಿದ್ದ ಪಕ್ಷಗಳನ್ನೆಲ್ಲಾ ಪ್ರಾದೇಶಿಕ ಎಂದೇ ಕರೆಯಲಾಗಿದೆ. ಒಟ್ನಲ್ಲಿ ಇದನ್ನು ಓದಿದಾಗ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿತವ್ಯವೇ ಇಲ್ಲ ಅನ್ನುವಂತೆ ತೋರುತ್ತದೆ. ಇದನ್ನೇ ರಾಷ್ಟ್ರೀಯ ಪಕ್ಷಗಳು ಪದೇಪದೇ ಹೇಳಿಕೊಳ್ಳುತ್ತಾ ಬಂದಿವೆ. ಅಸಲಿಗೆ ಪ್ರಾದೇಶಿಕ ಪಕ್ಷವೊಂದರ ಸ್ವರೂಪವೇನು? ಕರ್ನಾಟಕಕ್ಕೆ ಸೀಮಿತವಾದ ಪಕ್ಷಗಳನ್ನೆಲ್ಲಾ ಪ್ರಾದೇಶಿಕ ಪಕ್ಷ ಅನ್ನೋದು ಸರೀನಾ? ಇವುಗಳಲ್ಲಿ ಯಾವ ಪಕ್ಷ ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗುಳ್ಳ ಸಿದ್ಧಾಂತಾನ ಹೊಂದಿತ್ತು? ಇವುಗಳಲ್ಲಿ ಯಾವ ಪಕ್ಷಕ್ಕೆ ನಾಡಿನ ಎಲ್ಲ ವರ್ಗಗಳ ಜನರನ್ನು ಪ್ರತಿನಿಧಿಸೋ, ಅವರ ಏಳಿಗೆಗೆ ಶ್ರಮಿಸೋ ಯೋಜನೆ ಇತ್ತು? ಯಾವ ಪಕ್ಷಕ್ಕೆ ತಳಮಟ್ಟದ ಸಂಘಟನೆಯಿತ್ತು? ಇವೆಲ್ಲಾ ಇಲ್ಲದೇ ಇದ್ದ ಪಕ್ಷದಲ್ಲಿ ಅದು ಪ್ರಾದೇಶಿಕ ಪಕ್ಷ ಹೇಗಾದೀತು? ಇಂಥಾ ಪಕ್ಷ ಇಷ್ಟು ದಿನ ಕನ್ನಡನಾಡಲ್ಲಿ ಇರಲಿಲ್ಲ ಅನ್ನೋದು ಎಷ್ಟು ಸತ್ಯವೋ ಬರಹದಲ್ಲಿ ಪಟ್ಟಿ ಮಾಡಲಾದ ಯಾವೊಂದು ಪಕ್ಷವೂ ಮಾದರಿ ಪ್ರಾದೇಶಿಕ ಪಕ್ಷ ಆಗಿರಲಿಲ್ಲ ಅನ್ನೋದೂ ಅಷ್ಟೇ ಸತ್ಯಾ ಗುರು! ನಿಜವಾದ ಪ್ರಾದೇಶಿಕ ಪಕ್ಷದ ಗುರಿಯೇ ತನ್ನ ನಾಡಿನ ಜನಗಳ ಏಳಿಗೆ, ತನ್ನ ನಾಡಿಗೆ ಕೇಂದ್ರಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ದಕ್ಕಿಸಿಕೊಂಡು ತನ್ನ ನಾಡಿಗೆ ಅನ್ಯಾಯವಾಗದಂತೆ ನೋಡಿಕೋಳ್ಳೋದೇ ಅಲ್ವಾ?

ಭಾರತದ ಬಗ್ಗೆ ಪ್ರಾದೇಶಿಕ ಪಕ್ಷಕ್ಕೆ ಚಿಂತನೆಯಿರುವುದಿಲ್ಲವೇ?

ಕರ್ನಾಟಕದಲ್ಲಿನ ಪ್ರಾದೇಶಿಕ ಪಕ್ಷ ಅದು ಬರೀ ಕನ್ನಡ ನಾಡಿನ ಬಗ್ಗೆ ಮಾತ್ರಾ ಕಾಳಜಿ ಹೊಂದಿರುತ್ತೆ, ಭಾರತದ ವಿಷಯವಾಗಿ ಅದಕ್ಕೆ ಚಿಂತನೆಯಿರುವುದಿಲ್ಲ, ದೇಶ ಮುನ್ನಡೆಸೋ ಯೋಗ್ಯತೆ ಇರಲ್ಲಾ... ಇತ್ಯಾದಿ ಮಾತುಗಳನ್ನು ಜನರ ತಲೇಲಿ ತುಂಬೋ ಪ್ರಯತ್ನಾನ ರಾಷ್ಟ್ರೀಯ ಪಕ್ಷಗಳು ಅನ್ನಿಸಿಕೊಂಡೋರು ಮಾಡ್ತಿದಾರೆ. ಇದಕ್ಕೆ ಸಮರ್ಥವಾದ ಉತ್ತರಾನ ಇಲ್ಲೀತಂಕ ಯಾರೂ ಕೊಟ್ಟಿಲ್ದೇ ಇರೋದ್ರಿಂದ ಜನರೂ ಇದನ್ನೇ ದಿಟವೆಂದು ನಂಬ್ಕೊಂಡಿದ್ದಂಗೆ ಕಾಣ್ತಿದೆ. ಆದ್ರೆ ಒಂದು ಪ್ರಾದೇಶಿಕ ಪಕ್ಷ ಹೇಗೆ ತನ್ನ ನಾಡಿನ ಹಕ್ಕುಗಳಿಗಾಗಿ ಹೋರಾಡಬಲ್ಲದೋ ಹಾಗೇ ನೆರೆಯ ಪ್ರದೇಶದ ಪ್ರಾದೇಶಿಕ ಪಕ್ಷವೂ ದನಿಯೆತ್ತಿ ಹೋರಾಡುತ್ತದೆ. ಆಗ ಸಮಾನ ಗೌರವದ ವ್ಯವಸ್ಥೆಯೊಂದು ಹುಟ್ಟಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸರಿಯಾಗುವ, ಯಾರಿಗೂ ಅನ್ಯಾಯವಾಗದ ಒಕ್ಕೂಟ ವ್ಯವಸ್ಥೆಯನ್ನು ಕಟ್ಟಲು ಸಾಧ್ಯವಾಗುತ್ತದೆ. ಎರಡು ರಾಜ್ಯಗಳ ನಡುವಿನ ಸಮಸ್ಯೆಗಳು ಇಂದಿರುವುದೇ ಇಂಥಾ ವ್ಯವಸ್ಥೆ ಭಾರತದಲ್ಲಿ ಪರಿಣಾಮಕಾರಿಯಾಗಿ ಇಲ್ಲದೇ ಇರೋದ್ರಿಂದ. ಇಂದು ಇಲ್ಲಿರೋ ರಾಷ್ಟ್ರೀಯ ಪಕ್ಷಗಳು, ಎರಡು ರಾಜ್ಯಗಳ ನಡುವೆ ತಗಾದೆ ಹುಟ್ಟಿಕೊಂಡರೆ, ಇವತ್ತು ಎರಡರಲ್ಲೊಂದು ಕಡೆ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾದೀತೆಂದು ಬೆದರಿ ಸಮಸ್ಯೆಯ ಬಗ್ಗೆ ಯಾವ ನಿಲುವನ್ನೂ ತೆಗೆದುಕೊಳ್ಳದೆ ಕೊಳೆಹಾಕುತ್ತವೆ. ಆದರೆ ಪ್ರಾದೇಶಿಕ ಪಕ್ಷಗಳಿಂದ ಕೂಡಿದ ಕೇಂದ್ರಸರ್ಕಾರ ಇಂತಹ ಸಮಸ್ಯೆಗಳ ಬಗ್ಗೆ ಸರಿಯಾದ ನೀತಿ ನಿಯಮ ರೂಪಿಸಲು, ಪರಿಹಾರ ಕಂಡುಕೊಳ್ಳಲು ಕಾರಣವಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತದ ಭವಿಷ್ಯ ಅಡಗಿರೋದೇ ಇಂಥಾ ಪಕ್ಷಗಳ ಕೈಯ್ಯಲ್ಲಿ ಗುರು!

1 ಅನಿಸಿಕೆ:

Anonymous ಅಂತಾರೆ...

JD(S) is a regional party within Karnataka. It is present in a few districts in South Karnataka. It is a non entity in Northern Karnataka. As JD(S) doesnt have presence in the entire state it cannot be called a regional party.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails