ರಾಷ್ಟ್ರೀಯ ಅಧ್ಯಕ್ಷರೂ ಅಂದ್ರೆ ಹಿಂಗಿರ್ಬೇಕಾ?


ಬೆಳಗಾವಿಗೆ ಬಂದಿದ್ದ ಭಾರತೀಯ ಜನತಾ ಪಕ್ಷವೆಂಬ ರಾಷ್ಟ್ರೀಯ ಪಕ್ಷದ ಮಹಾದಂಡನಾಯಕರು ಅರ್ಥಾತ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮರಾಠಿಗ ಶ್ರೀ ಶ್ರೀ ಶ್ರೀ ನಿತಿನ್ ಗಡ್ಕರಿಯವರು ಬೆಳಗಾವಿ ಗಡಿ ವಿಷಯವಾಗಿ, ತಾವು ಭಾರೀ ನಿಷ್ಪಕ್ಷಪಾತಿ ಅನ್ನುವಂತೆ ಮಾತಾಡೋ ನಾಟಕ ಮಾಡಿ ಎಡವಟ್ಟು ಮಾತಾಡಿರೋ ಸುದ್ದಿ 21.08.2010ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ ಗುರೂ!

ಬೆಳಗಾವಿ ಮತ್ತು ಮಹಾರಾಷ್ಟ್ರದ ರಾಜಕಾರಣ!

ಶ್ರೀ ಶ್ರೀ ಶ್ರೀ ಗಡ್ಕರಿಯವರು ತಮ್ಮ ಮಾತಲ್ಲಿ, ಬೆಳಗಾವಿ ವಿಷಯದಲ್ಲಿ ಪ್ರಧಾನಿಗಳು ಮಧ್ಯ ಪ್ರವೇಶಿಸಬೇಕೆಂದು ಮಹಾರಾಷ್ಟ್ರದ ನಿಲುವನ್ನು ಒಳಗೊಳಗೇ ಬೆಂಬಲಿಸಿರೋ ರೀತಿ ಹೇಳಿಕೆ ನೀಡಿ, ಆ ಮೂಲಕ ತಾವು ಮೇಲ್ನೋಟಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಒಳಗೊಳಗೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರು ಅನ್ನೋದನ್ನು ಸಾರಿದ್ದಾರೆ. ಹೇಗೇ ಅಂತೀರಾ? ಬೆಳಗಾವಿ ವಿಷಯದಲ್ಲಿ 1960ರ ದಶಕದಲ್ಲೇ ಶ್ರೀ ಸೇನಾಪತಿ ಬಾಪಟ್ ಅವರ ಉಪವಾಸ ಮುಷ್ಕರಕ್ಕೆ ಮಣಿದು, ಕರ್ನಾಟಕದ ವಿರೋಧದ ನಡುವೆಯೇ, ಕೇಂದ್ರಸರ್ಕಾರವು ಮಹಾಜನ್ ಆಯೋಗ ರಚಿಸಿತ್ತು. ಆ ವರದಿಯನ್ನು ಸಲ್ಲಿಸೋ ಮೊದಲೇ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ವಿ.ಪಿ.ನಾಯಕ್ ಅವರು ‘ವರದಿ ಹೇಗಿದ್ದರೂ ಒಪ್ಕೋತೀವಿ’ ಅಂದಿದ್ರು. ವರದಿ ಬಂದಮೇಲೆ ಉಲ್ಟಾ ಹೊಡೆದ ಮಹಾರಾಷ್ಟ್ರದ ರಾಜಕಾರಣಿಗಳು ಇವತ್ತಿನ ತನಕ ಸರಿಹೋಗಿಲ್ಲ. ಗಡಿ ಕಿತಾಪತೀನಾ ಇತ್ತೀಚಿಗೆ ಅವರು ಸುಪ್ರಿಂಕೋರ್ಟಿಗೆ ಒಯ್ದು, ಸಂಸತ್ತಲ್ಲಿ ಅವಕಾಶ ಸಿಕ್ಕಾಗೆಲ್ಲಾ ‘ಪ್ರಧಾನಮಂತ್ರಿ ಮಧ್ಯಸ್ಥಿಕೆ ಮಾಡ್ಲಿ, ಕೇಂದ್ರಸರ್ಕಾರ ಮಧ್ಯಸ್ಥಿಕೆ ಮಾಡ್ಲಿ’ ಅಂತಾ ಹಟಾ ಮಾಡ್ತಾನೆ ಇದಾರೆ. ಈ ರಾಷ್ಟ್ರೀಯ ಪಕ್ಷದ ಮರಾಠಿ ಅಧ್ಯಕ್ಷರು ಕೂಡಾ ಹೇಳ್ತಿರೋದು ಇದನ್ನೇ ತಾನೇ?

ರಾಷ್ಟ್ರೀಯ ಅಧ್ಯಕ್ಷರ ನಿಲುವು!

ಹೀಗೆ ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರೋ ದೊಡ್ ಜನುಗೋಳು, ಇನ್ನೂ ವಿವಾದವನ್ನು ಜೀವಂತವಾಗಿ ಉಳಿಸಿಕೊಳ್ಳೋ ತೆರೆನಾಗಿ ಹೇಳಿಕೆ ಕೊಡೋ ಬದಲು ‘ರಾಜ್ಯಗಳ ಗಡಿ ನಿಶ್ಚಯಕ್ಕೆ, ಸ್ವಾತಂತ್ರ್ಯ ಬಂದಾಗಿನಿಂದ ಕಾಲಕಾಲಕ್ಕೆ ರಚಿಸಿರುವ ರಾಜ್ಯ ವಿಂಗಡನಾ ಸಮಿತಿಯ ತೀರ್ಮಾನಗಳಿಗೆ, ಸಂಸತ್ತು ನೇಮಿಸಿದ್ದ ಆಯೋಗದ ತೀರ್ಪಿಗೆ ಎಲ್ಲಾ ರಾಜ್ಯಗಳೂ ಒಪ್ಪಿ, ಅದರಂತೆ ನಡೆಯಬೇಕು. ಆದಕಾರಣ ಮಹಾಜನ್ ವರದಿಯೆನ್ನುವ ಸಂವಿಧಾನಬದ್ಧವಾದ ವರದಿಯೇ ಗಡಿ ತಕರಾರಿಗೆ ಅಂತಿಮ ಪರಿಹಾರ’ ಅಂತಾ ಹೇಳಬೇಕಿತ್ತಲ್ವಾ? ‘ಈಗ ಸುಪ್ರಿಂಕೋರ್ಟಿನಲ್ಲಿ ವಿಷಯ ಇದೆ, ಪ್ರಧಾನಿ ಮಧ್ಯ ಪ್ರವೇಶ ಆಗಬೇಕು...’ ಇತ್ಯಾದಿ ಮಹಾರಾಷ್ಟ್ರದ ನಿಲುವುಗಳನ್ನು ಹೇಳೋವಾಗ, ಕರ್ನಾಟಕ ಬಿಜೆಪಿಯ "ಮಹಾಜನ್ ವರದಿಯೇ ಅಂತಿಮ" ಎನ್ನುವ ನಿಲುವನ್ನು ಯಾಕೆ ಹೇಳಲಿಲ್ಲ ಅನ್ನಿಸಲ್ವಾ? ಇರಲಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಗಡ್ಕರಿಯವರು ನೀಡಿರೋ ಹೇಳಿಕೇಗೆ ಕರ್ನಾಟಕದ ಭಾರತೀಯ ಜನತಾ ಪಕ್ಷದ ಧುರೀಣರು ಹೇಗೆ ಪ್ರತಿಕ್ರಿಯಿಸ್ತಾರೆ ಅಂತಾ ನೋಡ್ಮಾ...!

ರಾಷ್ಟ್ರೀಯ ನಾಯಕರ ಪಕ್ಷಪಾತತನ!

ಕರ್ನಾಟಕದಿಂದ ರಾಜ್ಯಸಭೆ ಹೊಕ್ಕ ಮತ್ತೊಬ್ಬ ಬಿಜೆಪಿ ರಾಷ್ಟ್ರೀಯ ನಾಯಕರಾದ ಶ್ರೀ ವೆಂಕಯ್ಯನಾಯ್ಡು ಅವರು ಮೊನ್ನೆ ನಡಕೊಂಡಿದ್ದು ಕೂಡಾ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ನಮ್ಮ ಬಳ್ಳಾರಿಯಲ್ಲಿ ಬಿಜೆಪಿ ಮಾಡಿದ ಸಮಾವೇಶದಲ್ಲಿ, ಪಾಪಾ, ಅಷ್ಟು ದೂರದಿಂದ ಬಂದಿದ್ದ ಶ್ರೀಮತಿ ಸುಷ್ಮಾ ಸ್ವರಾಜ್ ಅವರೇ ಕನ್ನಡದಲ್ಲಿ ಮಾತಾಡೋ ಪ್ರಯತ್ನ ಮಾಡುದ್ರೆ, ಈ ಯಪ್ಪಾ ತೆಲುಗಲ್ಲಿ ಮಾತಾಡುದ್ರು. ಯಾಕ್ರಪ್ಪಾ? ಬಳ್ಳಾರಿ ಅನ್ನೋ ಅಚ್ಚಗನ್ನಡದ ಪ್ರದೇಶಾನಾ ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಅನಕೃ ಕಾಲದಿಂದಾ ನಡೆದ ಹೋರಾಟಾನಾ, ಬಳ್ಳಾರೀನಾ ಕರ್ನಾಟಕಕ್ಕೆ ಸೇರಿಸಲು ಜೀವ ಕೊಟ್ಟ ರಂಜಾನ್ ಸಾಬ್ ಅವರ ಬಲಿದಾನದ ಕಥೇನಾ ಇವರಿಗೆ ಯಾರೂ ಹೇಳಲಿಲ್ವಾ? ಅನ್ಯಾಯವಾಗಿ ಕರ್ನಾಟಕ ಕಳೆದುಕೊಂಡು ಮೂರು ತಾಲ್ಲೂಕುಗಳ ಕಥೇನಾ ಇವರಿಗೆ ಹೇಳಲಿಲ್ವಾ? ಬಳ್ಳಾರಿ ಅನ್ನೋದು ಹೇಗೂ ಭೂಪಟದಲ್ಲಿ ಕರ್ನಾಟಕದಲ್ಲಿ ಇದೆಯಲ್ಲಾ, ಅಷ್ಟು ಸಾಕು... ಅಂದ್ಕೊಂಡು ತೆಲುಗಲ್ಲಿ ಭಾಷಣ ಮಾಡ್ಬುಟ್ರಾ ಯಜಮಾನ್ರು? ಗಡಿಭಾಗದ ಊರುಗಳಲ್ಲಿ ಆಯ ರಾಜ್ಯದ ಭಾಷೇನೆ ಕಡೆಗಣಿಸಿ, ನೆರೆ ರಾಜ್ಯದ ಭಾಷೇಲಿ ಭಾಷಣ ಮಾಡೋದು ಸುಖಾಸುಮ್ಮನೇ ಭಾಷಾ ವೈಷಮ್ಯ ಹುಟ್ಟುಹಾಕುವಂಥಾ ಪ್ರಚೋದನಾತ್ಮಕ ಕ್ರಮಾ ಆಗಲ್ವಾ? ಯಾಕೆ ಈ ರಾಷ್ಟ್ರೀಯ ನಾಯಕರು ಹೀಗೆ ಮಾಡುದ್ರು ಅಂತಾ ಕರ್ನಾಟಕದ ಒಬ್ಬರಾದರೂ ಬಿಜೆಪಿ ಧುರೀಣರು ಕೇಳುತ್ತಾರಾ ಅಂತಾ ಕುತೂಹಲ ಆಗ್ತಿದೆ ಗುರೂ!

ಇದೇನು ರಾಷ್ಟ್ರೀಯ ವಿಷಯಾನಾ?

"ಅಯ್ಯೋ, ನಿಮಗೇನಾದ್ರೂ ತಲೆ ಕೆಟ್ಟಿದೆಯಾ? ರಾಷ್ಟ್ರೀಯ ಪಕ್ಷಾ ಅಂದ್ರೆ ಅದುಕ್ಕೆ ಪ್ರಾದೇಶಿಕ ಚಿಂತನೆ ಇರಬಾರದು ಅಂತಾ ಗೊತ್ತಿಲ್ವಾ? ವೆಂಕಯ್ಯನಾಯ್ಡು ಅವರೇ ನಾನು ರಾಷ್ಟ್ರೀಯ ವಿಷಯಗಳಲ್ಲಿ ಮಾತ್ರಾ ತಲೆ ಹಾಕ್ತೀನಿ ಅಂದಿಲ್ವಾ ಪಾಪಾ, ಅದುಕ್ಕೆ ರಾಷ್ಟ್ರೀಯ ಮಟ್ಟದ ಭಾಷಣಾನಾ ಕನ್ನಡನಾಡೊಳಗೆ ಬಂದು ತೆಲುಗಲ್ಲಿ ಮಾಡ್ತಾರೆ. ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ಗಡ್ಕರಿಯವರು ಮಹಾರಾಷ್ಟ್ರದ ನಿಲುವನ್ನು ಪರೋಕ್ಷವಾಗಿ ಬೆಂಬಲುಸ್ತಾರೆ. ಇದುನ್ನ ಪ್ರಶ್ನಿಸೋದುಂಟಾ? ಅದು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರೋದಿಲ್ವಾ" ಅಂತೀರಾ ಗುರೂ! ಅದೂ ದಿಟಾನೆ ಬುಡಿ!!

1 ಅನಿಸಿಕೆ:

ಶ್ರೀನಿವಾಸ ಅಂತಾರೆ...

"ಕ್ವಿಟ್ ಕರ್ನಾಟಕ" ಚಳುವಳಿ ಪ್ರಾರಂಭಿಸೋಣವೇ ಗುರು?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails