ನಾಡಹಬ್ಬದ ನಲ್ಮೆಯ ಹಾರೈಕೆಗಳು



ಎಲ್ಲ ಕನ್ನಡ ಬಾಂಧವರಿಗೂ ಕರ್ನಾಟಕ ರಾಜ್ಯೋತ್ಸವದ ನಲ್ಮೆಯ ಹಾರೈಕೆಗಳು. ಈ ಸುದಿನ ನಮ್ಮ ನಿನ್ನೆಗಳನ್ನು ನೆನಪು ಮಾಡುತ್ತಾ ಇಂದು ಪ್ರೇರಣೆ ನೀಡಿ ನಾಳೆಗಳನ್ನು ಕಟ್ಟಲು ನೆರವಾಗಲಿದೆಯೆಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಬನವಾಸಿ ಬಳಗವು ನಿಮ್ಮ ಮುಂದೆ ಒಂದು ಧ್ವನಿಮುದ್ರಿಕೆಯನ್ನು ಪ್ರಸ್ತುತಪಡಿಸುತ್ತಿದೆ. ಇದನ್ನು ಕೇಳಿ, ನೋಡಿ. ಇದರಲ್ಲಿ ನಮ್ಮ ನಾಡಿನ ಹೆಮ್ಮೆಯ ಇತಿಹಾಸದ ಪ್ರಮುಖ ಘಟ್ಟಗಳಲ್ಲಿ ಕೆಲವುಗಳ ಬಗ್ಗೆ ಮಾತಾಡಲಾಗಿದೆ. ನೀವೂ ಕೇಳಿ. ನಿಮ್ಮ ಪರಿಚಿತರಿಗೂ ಕೇಳಿಸಿ.

ಇತಿಹಾಸದ ಪ್ರಾಮುಖ್ಯತೆ

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ, ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿ, ಕರ್ನಾಟಕ ಪ್ರಾಂತ್ಯದಲ್ಲಿ ದುಡಿಯಲು ಮುಂದಾಗಿದ್ದ ಶ್ರೀ ಆಲೂರು ವೆಂಕಟರಾಯರನ್ನು ಒಂದು ಪ್ರಶ್ನೆ ಕಾಡುತ್ತಿತ್ತಂತೆ. ನೆರೆಯ ಆಂಧ್ರ, ಮಹಾರಾಷ್ಟ್ರ ಮೊದಲಾದ ಪ್ರದೇಶಗಳ ಹೋರಾಟಗಾರರಿಗೆ ಇರುವ ಪ್ರೇರಣೆ ಕನ್ನಡಿಗರಿಗೆ ಇಲ್ಲವಲ್ಲಾ, ಕನ್ನಡಿಗರಲ್ಲಿ ಕೆಚ್ಚೇ ಇಲ್ಲವಲ್ಲಾ ಅನ್ನಿಸುತ್ತಿತ್ತಂತೆ. ಇದರ ಬೇರು ಹುಡುಕಿದಾಗ ಅವರು ಕಂಡುಕೊಂಡ ಸತ್ಯ... ತೆಲುಗರಿಗೆ ಪ್ರತಾಪರುದ್ರದೇವ, ನನ್ನಯ್ಯಭಟ್ಟರ ಇತಿಹಾಸವೂ, ಮಹಾರಾಷ್ಟ್ರೀಯರಿಗೆ ರಾಮದಾಸ, ಶಿವಾಜಿಯ ಇತಿಹಾಸವೂ ಕೊಡುವ ಸ್ಪೂರ್ತಿ, ಉಕ್ಕೇರಿಸುವ ರಾಷ್ಟ್ರೀಯತೆಯ ಭಾವನೆಗಳು ಕನ್ನಡಗರಲ್ಲೇ ಅದೇ ಪರಿಣಾಮ ಮಾಡಲಾರದು. ಕನ್ನಡದ ಜನರಲ್ಲಿ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಲು ಪರಿಣಾಮಕಾರಿಯಾದ ಸಾಧನ... ನಮ್ಮ ಹಿರಿಯರ ಕಥನ ಮತ್ತವರ ಸಾಧನೆಗಳು ಮಾತ್ರಾ. ಅಂತಹ ಹಿರಿಮೆ ಮತ್ತು ಹಿನ್ನೆಲೆಗಳು ಕನ್ನಡಿಗರಿಗೆ ಇಲ್ಲವೇ? ಎಂಬ ಪ್ರಶ್ನೆ ಕಾಡತೊಡಗಿತಂತೆ. ಒಂದೊಮ್ಮೆ ಆನೆಗೊಂದಿಯಿಂದ ಕಂಡ ಪಾಳುಹಂಪೆಯತ್ತ ಆಸಕ್ತರಾಗಿ, ಅಲ್ಲಿಗೆ ಭೇಟಿ ನೀಡಿದಾಗ ನಮ್ಮ ಕನ್ನಡಿಗರ ನಿನ್ನೆಗಳು ಇಂತಹ ಸೊಬಗಿನದ್ದೇ ಎನ್ನಿಸಿತಂತೆ. ನಂತರ ಇತಿಹಾಸ, ಶಾಸನಗಳ ಆಳವಾದ ಅಧ್ಯಯನ ಕೈಗೊಂಡು ಆಲೂರರು ಕರ್ನಾಟಕ ಗತವೈಭವ ಎಂಬ ಹೊತ್ತಗೆಯನ್ನು ಬರೆದರಂತೆ. ಮುಂದೆ ಈ ಹೊತ್ತಗೆ ಕನ್ನಡನಾಡಿನ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಕೈದೀವಿಗೆಯಾದದ್ದು ನಿಜ.
ಒಟ್ಟಿನಲ್ಲಿ ನಿನ್ನೆಯ ನಮ್ಮವರ ಸಾಧನೆಗಳು, ನಮ್ಮ ನಾಡಿನ ಇತಿಹಾಸ ನಮ್ಮಲ್ಲಿ ಸ್ಪೂರ್ತಿ ತುಂಬಿ ಇಂದು ನಾವೂ ಏನಾದರೂ ಸಾಧಿಸಬೇಕೆಂಬ ಉತ್ಸಾಹ ಮತ್ತು ಛಲಕ್ಕೆ ಕಾರಣವಾಗಲಿ. ಸಾಧನೆಯ ಶಿಖರವೇರಲು ನಮಗೂ ಯೋಗ್ಯತೆಯಿದೆ ಎನ್ನುವ ಮನವರಿಕೆಯು ಆತ್ಮವಿಶ್ವಾಸಕ್ಕೆ ಕಾರಣವಾಗಲಿ ಎಂಬುದೇ ಹೀಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕುವುದರ ಉದ್ದೇಶವಾಗಿದೆ.

ಮಾಹಿತಿಗಳ ಮೂಲ

ಈ ಬಾರಿ ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಯತ್ನ ಮಾಡಿ ನಿಮ್ಮ ಮುಂದಿಡಲಾಗಿದೆ. ಈ ಮಾತುಗಳಿಗೆ ಅನೇಕ ಗ್ರಂಥಗಳ ಅಧ್ಯಯನವೇ ಆಧಾರವಾಗಿದೆ. ಮುಖ್ಯವಾಗಿ ಆಲೂರು ವೆಂಕಟರಾಯರು ಬರೆದಿರುವ ಕರ್ನಾಟಕ ಗತವೈಭವ, ಅಂದಿನ ಮೈಸೂರು ರಾಜ್ಯಸರ್ಕಾರ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ವತಿಯಿಂದ ಹೊರತಂದಿದ್ದ ಕರ್ನಾಟಕದ ಪರಂಪರೆ - I & II, ಹಂಪಿ ವಿಶ್ವವಿದ್ಯಾಲಯದ ಪ್ರವಾಸಿ ಕಂಡ ವಿಜಯನಗರ, ಡಾ. ಚಿದಾನಂದ ಮೂರ್ತಿಗಳ ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ ಎನ್ನುವ ಹೊತ್ತಗೆಗಳು ಪ್ರಮುಖವಾದವು.

ಕೊನೆಹನಿ: ಈ ಬಾರಿ ಕೇವಲ ಇತಿಹಾಸದ ವೀರಪರಂಪರೆಯ ಒಂದು ಮಗ್ಗುಲಿನ ಬಗ್ಗೆ ಮಾತ್ರಾ ಮಾತನ್ನಾಡಲಾಗಿದೆ. ಕಲೆ, ಸಾಹಿತ್ಯ, ಸಂಗೀತ, ದಾರ್ಶನಿಕತೆ, ಆಧುನಿಕ ಕರ್ನಾಟಕದ ಹಿರಿಮೆ, ಧಾರ್ಮಿಕತೆ, ಸಾಧಕರು, ತಂತ್ರಜ್ಞಾನ, ನಮ್ಮ ನಾಡಿನ ಸಂಪನ್ಮೂಲಗಳು... ಹೀಗೆ ಅನೇಕ ಮಗ್ಗಲುಗಳಲ್ಲಿಯೂ ಕರ್ನಾಟಕ ಅತ್ಯಂತ ಶ್ರೀಮಂತ. ಈ ಪುಣ್ಯಭೂಮಿ ನಮ್ಮದೆಂಬ ಹಿರಿಮೆ ನಮ್ಮೆಲ್ಲರಲ್ಲಿರಲಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಎಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು.

ಕನ್ನಡ ಶಾಲೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ.

ಕಲಿಕೆಯ ಬಗ್ಗೆ ಹೊಸದಾಗಿ ಬಳಗದ ವತಿಯಿಂದ ಒಂದು ಬ್ಲಾಗನ್ನು "ಕಲಿಕೆಯು" ಹೆಸರಿನಲ್ಲಿ ಶುರುಮಾಡಿರೋ ವಿಷಯ ಕಳೆದ ಸಲ ಬರೆದಿದ್ದೆವು. ಈ ಬ್ಲಾಗಿನಲ್ಲಿ ಕನ್ನಡಿಗರ ಕಲಿಕೆ ಏರ್ಪಾಡಿನ ಬಗ್ಗೆ ಮಾಹಿತಿ, ಚರ್ಚೆ, ಸರಿ ನಿಲುವುಗಳನ್ನು ಹಂಚಿಕೊಳ್ಳೋದ್ರು ಜೊತೆಯಲ್ಲಿಯೇ ಖಾಸಗಿ (ಅನುದಾನಿತ/ ಅನುದಾನರಹಿತ) ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಆದಷ್ಟೂ ಮಾಹಿತಿ ಕಲೆ ಹಾಕಿ ಹಂಚಿಕೊಳ್ಳೋ ಯೋಜನೆಯೊಂದನ್ನು ಹಮ್ಮಿಕೊಂಡಿದ್ದೀವಿ.

ಒಳ್ಳೆಯ ಕನ್ನಡ ಶಾಲೆಯ ಮಾಹಿತಿ


ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕೆಂದು ಅಂದುಕೊಳ್ಳೋ ಎಷ್ಟೊಂದು ತಾಯಿತಂದೆಯರಿಗೆ ಯಾವ ಶಾಲೆ ಚೆನ್ನಾಗಿದೆ? ಎಲ್ಲಿಗೆ ಸೇರಿಸಬೇಕು? ಅನ್ನೋ ಗೊಂದಲ ಇರೋ ಸಾಧ್ಯತೆ ಇದೆ. ಅಂತಹವರಿಗೆ ಅನುಕೂಲ ಆಗಲಿ ಅನ್ನೋ ಕಾರಣದಿಂದಲೂ ಈ ಮಾಹಿತಿ ಕೂಡಿಹಾಕೋ ಕೆಲಸ ಪ್ರಮುಖವಾಗುತ್ತದೆ. ನೀವೂ ನಮ್ಮೊಡನೆ ಕೈಜೋಡಿಸಿ ಎಂದು ಕೇಳಿಕೊಳ್ಳುತ್ತೇವೆ. ಮೊದಲಿಗೆ ಬೆಂಗಳೂರಿನ ಶಾಲೆಗಳ ಬಗ್ಗೆ ಮಾಹಿತಿ ಕೂಡಿಹಾಕೋ ಯೋಚನೆಯಿದೆ. ನೀವು ಬೆಂಗಳೂರಿನಲ್ಲಿ ಕನ್ನದ ಮಾಧ್ಯಮದಲ್ಲಿ ಓದಿದವರಾಗಿದ್ದರೆ... ನೀವು ಓದಿದ ಶಾಲೆಯಿರಬಹುದು, ನಿಮ್ಮ ಮನೆಯ, ಬಡಾವಣೆಯ ಹತ್ತಿರದ ಶಾಲೆಯಿರಬಹುದು... ಅವುಗಳ ಬಗ್ಗೆ ’ಹೆಸರು ಮತ್ತು ವಿಳಾಸ’ಗಳ ಸಣ್ಣ ಮಾಹಿತಿ ಒದಗಿಸಿದರೆ ಸಾಕು. ಆ ಶಾಲೆಗೆ ನಮ್ಮ ಬಳಗದ ತಂಡದ ಸದಸ್ಯರು ಭೇಟಿಕೊಟ್ಟು, ಮಾಹಿತಿ ಕಲೆಹಾಕಿ ಕಲಿಕೆಯು ಬ್ಲಾಗಿನಲ್ಲಿ ಪ್ರಕಟಮಾಡುತ್ತೇವೆ.

ಈ ವಿಷಯವಾಗಿ ನೀವು ಸಂಪರ್ಕಿಸಬಹುದಾದ ಮಿಂಚೆ ವಿಳಾಸ: sanjeeva@banavasibalaga.org

ಕಲಿಕೆಯು: ಕಲಿಕೆಯ ಏರ್ಪಾಡಿನ ಚರ್ಚೆಗೊಂದು ಬ್ಲಾಗ್


ಒಂದು ನಾಡಿನ ಏಳಿಗೆ ಎನ್ನುವುದನ್ನು ನಾವಿಲ್ಲಿ ಆರ್ಥಿಕವಾದ ಏಳಿಗೆ ಎಂದು ಪರಿಗಣಿಸಿ ನೋಡಿದಾಗ, ನಾಡಿನ ಏಳಿಗೆಗೆ ಅದು ಅಳವಡಿಸಿಕೊಂಡಿರುವ ಕಲಿಕೆಯ ಪದ್ದತಿಯು ಚೆನ್ನಾಗಿ ಇರಬೇಕಾದ ಅಗತ್ಯವೂ ಕಾಣುತ್ತದೆ. ನಮ್ಮ ನಾಡಿನ ಮಕ್ಕಳ ಕಲಿಕೆಯು ಅತ್ಯುತ್ತಮವಾದಲ್ಲಿ ಅವರ ಪರಿಣಿತಿ, ಅರಿವಿನ ಆಳ-ಅಗಲಗಳು ಹೆಚ್ಚುವ ಮೂಲಕ ದುಡಿಮೆಯ ಹೆಬ್ಬಾಗಿಲು ನಾಡಿಗರ ಪಾಲಿಗೆ ತೆರೆದುಕೊಳ್ಳುತ್ತದೆ. ಆ ಮೂಲಕವೇ ನಾವು ಏಳಿಗೆ ಸಾಧಿಸಲು ಆಗುತ್ತದೆ. ಹಾಗಾಗಿ ಕಲಿಕೆ ಎನ್ನುವುದು ನಾವು ಗಮನ ನೀಡಬೇಕಾದ ಒಂದು ಮಹತ್ವದ ಕ್ಷೇತ್ರಗಳಲ್ಲಿ ಒಂದಾಗಿದೆ.

ಕಲಿಕೆಯು ಎಂಬ ಹೊಸ ಬ್ಲಾಗ್


ಬನವಾಸಿ ಬಳಗವು ಆಗ್ಗಿಂದಾಗ್ಗೇ ಕಲಿಕೆಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಪ್ರಕಟಿಸಿದ್ದರೂ, ಕಲಿಕೆಯ ವಿಷಯಗಳಿಗೆಂದೇ ಮೀಸಲಾದ ಅಂತರ್ಜಾಲ ತಾಣವೊಂದರ ಅಗತ್ಯವಿದೆ ಎಂದು ನಮಗನ್ನಿಸುತ್ತಲೇ ಇತ್ತು. ಈ ತಾಣದಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯಿರುವ ನಾಡಿಗರೆಲ್ಲಾ ಬಂದು ಚರ್ಚಿಸಬೇಕು ಅನ್ನುವ ಆಶಯ ನಮ್ಮದು. ಇಂತಹ ಆಶಯದ ಪೂರೈಕೆಗಾಗಿ "ಕಲಿಕೆಯು" ಎನ್ನುವ ಬ್ಲಾಗ್ ಒಂದನ್ನು ಆರಂಭಿಸಿದ್ದೇವೆ. ಸದರಿ ಬ್ಲಾಗ್‍ನಲ್ಲಿ ಈಗಾಗಲೇ ಅನೇಕ ಬರಹಗಳನ್ನು ಪ್ರಕಟಿಸಿದ್ದೇವೆ ಕೂಡಾ. ಈ ತಾಣದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಮತ್ತು ಕಲಿಕೆಯ ಏರ್ಪಾಡಿನ ಬಗ್ಗೆ ಅಸಕ್ತಿ ಹೊಂದಿರುವ ನಿಮ್ಮ ಪರಿಚಿತರನ್ನೂ ಇಲ್ಲಿಗೆ ಕರೆತನ್ನಿ ಎಂಬ ಕರೆಯನ್ನು ಈ ಮೂಲಕ ನೀಡುತ್ತಿದ್ದೇವೆ.

ಮಹದಾಯಿ - ಕಳಸಾ - ಭಂಡೂರ : ಏನಿದು ವಿವಾದ?

ಕರ್ನಾಟಕ ರಾಜ್ಯದ ಹುಬ್ಬಳ್ಳಿ ಭಾಗದ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಭಂಡೂರಾ ಯೋಜನೆ ಬಗ್ಗೆ ನೆರೆಯ ಗೋವಾ ರಾಜ್ಯ ಎತ್ತಿದ್ದ ತಕರಾರು, ಕೊನೆಗೆ ಕೇಂದ್ರಸರ್ಕಾರ ನ್ಯಾಯಾಧಿಕರಣವೊಂದನ್ನು ರಚಿಸಲು ಕಾರಣವಾಗಿದೆ. ಒಂದು ಸರಿಯಾದ ರಾಷ್ಟ್ರೀಯ ಜಲನೀತಿಯಿಲ್ಲದೆ ಇಂಥಾ ಟ್ರಿಬ್ಯೂನಲ್‍ಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಪ್ರಶ್ನಾರ್ಹವಾಗಿದೆ. ಕನ್ನಡಿಗರ ಪಾಲಿಗಂತೂ ಟ್ರಿಬ್ಯೂನಲ್‍ಗಳೆಂದರೇನೇ ದುಸ್ವಪ್ನದ ಹಾಗೆ, ನಮ್ಮಿಂದ ನಮ್ಮ ಪಾಲನ್ನು ಕಿತ್ತುಕೊಳ್ಳಲೆಂದೇ ಇರುವ ಹಾಗೆ, ನಮ್ಮ ಯೋಜನೆಗಳನ್ನು ತಡೆದು ವಿಳಂಬ ಮಾಡಿಸುವ ಒಂದು ತಂತ್ರದ ಹಾಗೆ ಕಾಣ್ತಾಯಿದೆ ಅನ್ನುವ ಅನುಮಾನಕ್ಕೆ ಕಾರಣವಾಗಿದೆ. ಏನಿದು ಮಹದಾಯಿ ಯೋಜನೆ? ಏನು ಈ ವಿವಾದ? ಎಂಬುದನ್ನು ಸ್ವಲ್ಪ ನೋಡೋಣ ಬಾ ಗುರು!

ಮಹದಾಯಿ ಹುಟ್ಟು ಮತ್ತು ಹರಿವು
ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿಂದ ಕರೆಯಲಾಗುವ ಈ ನದಿಯು ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ ಆಗಿದ್ದು ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿಯಾಗಿದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಕನ್ನಡ ನಾಡಿನ, ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡ ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ನಗರೀಕರಣದಿಂದ ಈ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಒಂದು ಮಹತ್ವದ ಯೋಜನೆಯನ್ನು ಆರಂಭಿಸಿತು.

ಕಳಸಾ-ಭಂಡೂರಾ ನಾಲೆ ಯೋಜನೆ ಮತ್ತು ವಿವಾದ

1980ರ ಸುಮಾರಿನಲ್ಲಿ ನರಗುಂದ ರೈತ ಬಂಡಾಯದ ತರುವಾಯ ಅಂದಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್‍ರವರು ನೇಮಿಸಿದ್ದ ಬೊಮ್ಮಾಯಿ ಆಯೋಗ ಯೋಜನೆಯೊಂದನ್ನು ಜಾರಿಮಾಡಲು ಸಲಹೆ ನೀಡಿತು. ಮಹದಾಯಿ ನದಿಗೆ ಮತ್ತು ಅದರ ತೊರೆಗಳಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿ ನಾಲೆಗಳ ಮೂಲಕ ಮಲಪ್ರಭೆಗೆ 7.56 ಟಿ.ಎಂ.ಸಿಯಷ್ಟು ನೀರನ್ನು ಸರಬರಾಜು ಮಾಡುವುದೇ ಆ ಯೋಜನೆ. ಪಶ್ಚಿಮಕ್ಕೆ ಹರಿಯುತ್ತಿರುವ ಮಹದಾಯಿಯಿಂದ ಸ್ವಲ್ಪ ಮಟ್ಟಿನ ನೀರನ್ನು ಪೂರ್ವಕ್ಕೆ ಹರಿಸಿ ಮಲಪ್ರಭೆಗೆ ಪೂರೈಸುವುದೇ ಇದರ ಮೂಲ ಉದ್ದೇಶ. ಇದಕ್ಕಾಗೆ ಕಳಸ ಮತ್ತು ಭಂಡೂರ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಸುರ್ಲಾ ನಾಲೆ, ಸಿಂಗಾರ್ ನಾಲೆ, ನೆರ್ಸೆ ನಾಲೆ, ಕಳಸ ನಾಲೆ, ಭಂಡೂರ ನಾಲೆ, ಹಲ್ತಾರ್ ನಾಲೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2002ರಲ್ಲಿ ಕೇಂದ್ರದ ಮಂಜೂರಾತಿಯನ್ನು ಪಡೆದು ಕೆಲಸ ಕೈಗೆತ್ತಿಕೊಂಡಿತು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿಯವರ ಕಾಲದಲ್ಲಿ (1989) ಗೋವಾದ ಮುಖ್ಯಮಂತ್ರಿಗಳಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆ ನಡೆದಿದ್ದು ರಾಣೆಯವರು 45 ಟಿ.ಎಂ.ಸಿ ನೀರು ಬಳಸಲು ನಮ್ಮ ಅಡ್ಡಿಯೇನಿಲ್ಲ ಎಂದು ನುಡಿದಿದ್ದರು. ಆದರೆ ನಂತರ ಅಲ್ಲಿ ಅಧಿಕಾರಕ್ಕೆ ಬಂದ ಮನೋಹರ್ ಪರಿಕ್ಕರ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಈ ಯೋಜನೆಗೆ ಕೊಂಕು ಎತ್ತಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಗೋವಾದ ಒತ್ತಡಕ್ಕೆ ಮಣಿದು ಆಗಲೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆಯಿತು. ಆಗ ರಾಜ್ಯ ಸರ್ಕಾರ ತನ್ನದೆ ಹಣವನ್ನು ಹೂಡಿ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿತು ಮತ್ತು ರಾಷ್ಟ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್) ಗಳಿಂದ ಅನುಮತಿ ಪಡೆದಿರುವುದರಿಂದ ನೀರು ಹರಿಸಿಕೊಳ್ಳುತ್ತೇವೆ ಎನ್ನುವ ನಿಲುವು ತಾಳಿತು.

ಯೋಜನೆಗೆ ವಿರೋಧ ಮಾಡುತ್ತಿರುವ ಗೋವಾ
ಈ ಸಂಬಂಧ ದಿನಾಂಕ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು.

ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎನ್ನುವ ವಾದ ಮುಂದಿಟ್ಟಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ ದೊರೆಯುವ 21೦ ಟಿ.ಎಂ.ಸಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಗೋವಾಕ್ಕೆ ಪರಿಸರದ ಬಗ್ಗೆ ಕಾಳಜಿಯಿದ್ದಲ್ಲಿ ಅದೇ ಮಾಂಡೋವಿಯ ದಂಡೆಯಲ್ಲಿ ಎರಡೆರಡು ವಿದ್ಯುತ್ ಉತ್ಪದನಾ ಘಟಕಗಳನ್ನು ಯಾಕೆ ತೆರೆಯುವ ಯೋಜನೆ ಹೊಂದಿದೆ?
ಸದ್ಯಕ್ಕೆ ಸುಪ್ರಿಂಕೋರ್ಟಿನಲ್ಲಿ ಮಹದಾಯಿ ಯೋಜನೆ ಕುರಿತು ಪ್ರಕರಣದ ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರಬರುವ ಮುನ್ನವೇ ಈಗ ಮತ್ತೆ ಗೋವಾ ಲಾಬಿಗೆ ಮಣಿದಿರುವ ಕೇಂದ್ರ ಸರಕಾರ ನ್ಯಾಯಾಧೀಕರಣ ರಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮಹದಾಯಿ ನದಿಯ ನಮ್ಮ ಪಾಲಿನ 45 ಟಿಎಂಸಿ ನೀರಿನಲ್ಲಿ 7.56 ಟಿಎಂಸಿ ತೆಗೆದುಕೊಳ್ಳಲು ಇನ್ನೂ ಹತ್ತು ಹದಿನೈದು ವರುಷಗಳು ಕಾಯಬೇಕೆ? ಒಟ್ಟಿನಲ್ಲಿ ಇದು ಹುಬ್ಬಳ್ಳಿ ಗದಗುಗಳ ಕುಡಿಯುವ ನೀರಿನ ಬವಣೆಯನ್ನು ಇನ್ನೂ ಹೆಚ್ಚು ಮಾಡುತ್ತದೆ ಅಲ್ವಾ ಗುರೂ?

ಇಗೋ ನೋಡಿ... ಕರ್ನಾಟಕ ರತ್ನ ಸಿಂಹಾಸನ!


ಕನ್ನಡಿಗರ ಹೆಮ್ಮೆಯ ಸಾಮ್ರಾಜ್ಯ ಕರ್ನಾಟಕ ಸಾಮ್ರಾಜ್ಯ. ಇದರ ರಾಜಧಾನಿ ವಿಜಯನಗರ. ಅಂದಿನ ವಿಜಯನಗರವೇ ಇಂದಿನ ಹಂಪಿ. ಈ ಸಾಮ್ರಾಜ್ಯದ ಸ್ಥಾಪಕರು ರಾಜಋಷಿ ಶ್ರೀ ವಿದ್ಯಾರಣ್ಯರು. ಈ ಸಾಮ್ರಾಜ್ಯಾಧೀಶರುಗಳು ಕುಳಿತು ಆಳಿದ ಸಿಂಹಾಸನವೇ ಕರ್ನಾಟಕ ರತ್ನ ಸಿಂಹಾಸನ. ಪುರಾಣದಲ್ಲಿ ಪಾಂಡವರು ಅಲಂಕರಿಸಿದ್ದರೆಂದು ನಂಬಿದ್ದ ಈ ಸಿಂಹಾಸನವನ್ನು ನೆಲದಡಿಯಲ್ಲಿ ಹೂತಿಟ್ಟಿದ್ದರಂತೆ. ನೆಲದಿಂದ ಹೊರ ತೆಗೆಸಿ ವಿದ್ಯಾರಣ್ಯರು ಕರ್ನಾಟಕ ಸಾಮ್ರಾಜ್ಯಾಧೀಶರಾದ ವಿಜಯನಗರದ ದೊರೆಗಳಿಗೆ ಇದನ್ನು ಒಪ್ಪಿಸಿದ್ದರೆಂಬ ಪ್ರತೀತಿಯಿದೆ. ಇಂತಹ ಐತಿಹಾಸಿಕ ಮಹತ್ವವಿರೋ ಸಿಂಹಾಸನ ಏನಾಯಿತು? ಈಗೆಲ್ಲಿದೆ? ಎಂಬ ಕುತೂಹಲವೇ? ಇಗೋ, ಇಲ್ಲಿದೆ ಕರ್ನಾಟಕ ರತ್ನ ಸಿಂಹಾಸನ. ವಿಜಯನಗರದ ವಿನಾಶದ ನಂತರ ಸುಮಾರು 1609ರಲ್ಲಿ ಮೈಸೂರಿನ ಯದುವಂಶದ ವಡೆಯರ್ ರಾಜವಂಶದ ಪಾಲಾದ ಈ ಸಿಂಹಾಸನ ಇಂದು ಮೈಸೂರು ಅರಮನೆಯಲ್ಲಿದೆ. ಇದೇ ಸಿಂಹಾಸನವನ್ನೇ ನಾವು ದಸರಾ ಸಂದರ್ಭದಲ್ಲಿ ಕಾಣುತ್ತಿದ್ದೇವೆ.

ಅಂತಿಂಥದ್ದಲ್ಲ ಈ ಸಿಂಹಾಸನ!

ಹಕ್ಕಬುಕ್ಕರಾದಿಯಾಗಿ ಮಹಾ ಮಹಾ ರಾಜಾಧಿರಾಜರು ಇದರಲ್ಲಿ ಕುಳಿತೇ ರಾಜ್ಯ ನಡೆಸಿದ್ದರು. ಕರ್ನಾಟಕ ರತ್ನ ಸಿಂಹಾಸನಾಧೀಶನೆಂದೇ ಖ್ಯಾತಿ ಪಡೆದ ಶ್ರೀ ಕೃಷ್ಣದೇವರಾಯರು ಇದರ ಮೇಲೆ ಕುಳಿತೇ ಆಳ್ವಿಕೆ ನಡೆಸಿದ್ದು. ಈ ಸಿಂಹಾಸನವನ್ನು ಬರಿಯ ರಾಜರುಗಳು ಮಾತ್ರಾ ಅಲಂಕರಿಸಿಲ್ಲ. ಮಾಧ್ವಸಂಸ್ಥಾನಾಧೀಶರೂ, ಯತಿರಾಜರೂ ಆಗಿದ್ದ ಶ್ರೀ ವ್ಯಾಸರಾಯರು ಕೂಡಾ ಅಲಂಕರಿಸಿದ್ದರಂತೆ. ಹೌದೂ! ಶ್ರೀಕೃಷ್ಣದೇವರಾಯನಿಗೆ ಒದಗಿದ್ದ ಕುಹ ಯೋಗವನ್ನು ಪರಿಹರಿಸಲು ಇಡೀ ವಿಜಯನಗರ ಸಾಮ್ರಾಜ್ಯವನ್ನು ದಾನವಾಗಿ ಪಡೆದು, ಇದೇ ಸಿಂಹಾಸನದ ಮೇಲೆ ವಿರಾಜಮಾನರಾಗಿ ಇವರು ಕುಳಿತಿದ್ದರಂತೆ. ಹಾಗಾಗೇ ಇವರಿಗೆ ವ್ಯಾಸರಾಜರೆಂಬ ಹೆಸರು ಬಂತೆಂದು ಇತಿಹಾಸ ಹೇಳುತ್ತದೆ.

ಪ್ರೇರಣೆ ನೀಡಲಿ ಇತಿಹಾಸ

ಇತಿಹಾಸದ ಸಕಾರಾತ್ಮಕ ಅಂಶಗಳು ಶೌರ್ಯ, ಸಾಹಸ, ತ್ಯಾಗ, ಬಲಿದಾನ, ಉದಾತ್ತತೆ, ಸಾಧನೆಗಳ ಯಶೋಗಾಥೆಯ ಖಜಾನೆಯಾಗಿವೆ. ಇತಿಹಾಸ ಕಟ್ಟಿದ ನಮ್ಮ ಹಿರಿಯರ ಸಾಧನೆಗಳು ನಮ್ಮ ಇವತ್ತುಗಳನ್ನು ಕ್ರಿಯಾಶೀಲವಾಗಿಸಿ ಒಳ್ಳೆಯ ನಾಳೆಗಳನ್ನು ಕಟ್ಟಲು ಪ್ರೇರಣೆ ನೀಡಲಿ. ನಮ್ಮೊಳಗಿನ ಸ್ಪೂರ್ತಿ ಚಿಲುಮೆ ಸದಾ ಉಕ್ಕುತ್ತಿರಲು ಇತಿಹಾಸದ ಇಂತಹ ಸ್ಮರಣೆಯುಳಿಕೆಗಳು ಕಾರಣವಾಗಲಿ.

ನವೋದಯ ವಿದ್ಯಾಲಯ ಮತ್ತು ಕೇಂದ್ರದ ಆಶಯ

ಘನ ಭಾರತ ಸರ್ಕಾರದ ಭಾಷಾನೀತಿಯನ್ನು ಜಾರಿ ಮಾಡಲು ನಾನಾಸಂಸ್ಥೆಗಳ ಮೂಲಕ ಪ್ರಯತ್ನಗಳು ನಡೆಯುತ್ತಿದ್ದರೂ, ಅದರಲ್ಲಿ ಪ್ರಮುಖವಾದದ್ದು ಮಾನವ ಸಂಪನ್ಮೂಲ ಇಲಾಖೆಯ ಯೋಜನೆಗಳು. ಈ ಇಲಾಖೆಯ ಅಡಿಯಲ್ಲೇ ಬರುವ ನವೋದಯ ವಿದ್ಯಾಲಯದ (ಇದು ಸಚಿವರೇ ಅಧ್ಯಕ್ಷರಾಗಿರುವ ಸ್ವಾಯತ್ತ ಸಂಸ್ಥೆ!) ಬಗ್ಗೆ ಮೊನ್ನೆ ಒಂದು ಬರವಣಿಗೆ ಬರೆಯಲಾಗಿತ್ತು.

ಕೇಂದ್ರಸರ್ಕಾರದ ಭಾಷಾನೀತಿಯ ಜಾರಿಯ ವಿಧಾನ

ಅದರಲ್ಲಿ ಆಮಿಷ, ಒತ್ತಾಯ ಮತ್ತು ಉತ್ತೇಜನಗಳ ಮೂಲಕ ಹಿಂದಿಯನ್ನು ದೇಶದೆಲ್ಲೆಡೆ ಹರಡಬೇಕೆಂಬ ಭಾರತ ಸರ್ಕಾರದ ಆಶಯದಂತೆ ಕೇಂದ್ರಸರ್ಕಾರ ಹೇಗೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದೀ ಹೇರಲು ಆಮಿಷವೆನ್ನುವ ಅಸ್ತ್ರವನ್ನು ಬಳಸುತ್ತಿದೆ ಎಂಬುದನ್ನು ತೆರೆದಿಡಲಾಗಿತ್ತು. ಯಥೇಚ್ಛವಾಗಿ ಹಣ ಖರ್ಚುಮಾಡಿ ಅತ್ಯದ್ಭುತ ಸವಲತ್ತುಗಳನ್ನು ಏರ್ಪಡಿಸಿ, ಉಚಿತವಾಗಿ ಕಲಿಸುವ ವಿದ್ಯಾಲಯ ವ್ಯವಸ್ಥೆಯನ್ನು ರೂಪಿಸಿ ಅದರ ಮೂಲಕ ಹೇಗೆ ಹಿಂದೀಪ್ರಚಾರಕ್ಕೆ ಕೇಂದ್ರಸರ್ಕಾರ ಉದ್ದೇಶಿಸಿದೆ/ ತೊಡಗಿದೆ, ನಾಳಿನ ವಿದ್ಯಾರ್ಥಿಗಳಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಾಡಿನ ವಿದ್ಯಾರ್ಥಿಗಳಲ್ಲಿ ಈ ಹಿಂದಿದೇವತೆಯನ್ನು ಒಪ್ಪುವ, ಆರಾಧಿಸುವ ಮನಸ್ಥಿತಿಯನ್ನು ಹುಟ್ಟುಹಾಕಲಾಗುತ್ತಿದೆ ಎಂಬುದನ್ನು ಬರೆಯಲಾಗಿತ್ತು.

ನವೋದಯರ ಪ್ರತಿಕ್ರಿಯೆ!

ಈ ಬರಹಕ್ಕೆ ನವೋದಯ ವಿದ್ಯಾಸಂಸ್ಥೆಯ ಹಲವಾರು ಮಾಜಿ ಮತ್ತು ಹಾಲಿ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನವೋದಯದಲ್ಲಿ ಹಿಂದಿಹೇರಿಕೆ ಇಲ್ಲವೆಂದೂ, ಹಿಂದೀ ಕಡ್ಡಾಯ ಇಲ್ಲವೆಂದೂ, ಇಂಗ್ಲೀಷಿನಲ್ಲಿರುವುದನ್ನೂ ಕನ್ನಡದಲ್ಲೇ ಹೇಳಿಕೊಡುತ್ತಿದ್ದರೆಂದೂ ಕೆಲವರು ತಿಳಿಸಿದರೆ ಮತ್ತೆ ಕೆಲವರು ತಮಗೆ ಆ ಸಂಸ್ಥೆಯಿಂದಾಗಿರುವ/ ಆಗುತ್ತಿರುವ ಉಪಕಾರ ಸ್ಮರಣೆಯನ್ನು ಮಾಡಿ, ಹಿಂದಿ ಹೇರಿಕೆ ಇತ್ಯಾದಿಗಳೆಲ್ಲಾ ಗೌಣವೆಂದೂ, ಅಂತಹ ಶಾಲೆಗಲಲ್ಲಿ ಸಿಗುತ್ತಿರುವ ಗುಣಮಟ್ಟದ ಕಲಿಕೆ ಮುಖ್ಯವೆಂದೂ ಪ್ರತಿಪಾದಿಸಿದ್ದಾರೆ. ಕೆಲವರಂತೂ ಹಿಂದಿ ಭಾರತದ ರಾಷ್ಟ್ರಭಾಷೆಯೆಂದೂ, ಭಾರತೀಯತೆ ಮೊದಲು, ಪ್ರಾದೇಶಿಕತೆ ನಂತರ ಎಂದೂ, ಕೇಂದ್ರದ ಉದ್ದೇಶ ಏನೇ ಇರಲಿ ಒಳ್ಳೆಯ ಶಾಲೆ ಕೊಟ್ಟು ಹಳ್ಳಿಗಾಡಿನ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗಿದೆ, ಅಷ್ಟು ಸಾಕು ಎಂದಿದ್ದಾರೆ. ಸದರಿ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಇರುವ ಮಾಹಿತಿಯನ್ನೂ ಕೆಲವರು ನಂಬಲು, ಒಪ್ಪಲು ತಯಾರಿಲ್ಲ. ಕೆಲವರು ಬರಹ ಬರೆಯುವ ಮುನ್ನ ನವೋದಯ ಶಾಲೆಗೆ ಭೇಟಿ ನೀಡಬೇಕಿತ್ತೆಂದೂ ಬರೆದಿದ್ದಾರೆ. ವಿಷಯ ಮಂಡನೆ ಮಾಡಿರುವ ಕಾಮೆಂಟುಗಳನ್ನು ಪ್ರಕಟಣೆಗೆ ಬಿಡಲಾಗಿದೆ, ಬೈಗುಳ, ಆಧಾರ ರಹಿತವಾದ ತೆಗಳಿಕೆಯ ಭಾಷೆಯವುಗಳನ್ನು ಅಳಿಸಲಾಗಿದೆ. ಈ ಎಲ್ಲಾ ಪ್ರತಿಕ್ರಿಯೆಗಳ ಒಟ್ಟು ಸಾರವೇನೆಂದರೆ ಸರ್ಕಾರ (ಕೇಂದ್ರವೋ ರಾಜ್ಯವೋ ಯಾವುದೋ ಒಂದು) ಒಟ್ಟಿನಲ್ಲಿ ಒಂದು ಶಿಸ್ತುಬದ್ಧವಾದ ಉತ್ತಮವಾದ ಶಾಲಾವ್ಯವಸ್ಥೆಯನ್ನು ಒದಗಿಸಿಕೊಟ್ಟು, ಆ ಮೂಲಕ ಸಾವಿರಾರು ಬಡ ಹಳ್ಳಿಗರಿಗೆ ಅನುಕೂಲ ಮಾಡಿಕೊಡುತ್ತಿರುವಾಗ ಅದಕ್ಕೆ ಪ್ರಾಮುಖ್ಯತೆ ಕೊಡದೆ ಮೊಸರಲ್ಲಿ ಕಲ್ಲು ಹುಡುಕುವುದು ಸರಿಯಲ್ಲ ಎಂಬುದು. ಇರಲಿ, ನವೋದಯರ ಅನಿಸಿಕೆಗಳಿಗೆ ಸಮಾಧಾನ ಹೇಳುವ ಹೊಣೆಗಾರಿಕೆ ಹೊತ್ತು ಈ ಪ್ರತಿಕ್ರಿಯೆಯನ್ನು ಬರೆಯಲಾಗುತ್ತಿದೆ.

ಸಫಲವಾಗುತ್ತಿರುವ ಕೇಂದ್ರದ ಉದ್ದೇಶ

ನವೋದಯ ವಿದ್ಯಾಲಯಗಳ ಘೋಷಿತ ಉದ್ದೇಶವೇ ಭಾರತದ ಹಳ್ಳಿಗಾಡಿನ ಪ್ರತಿಭಾವಂತ ಮಕ್ಕಳಿಗೆ ಮೂರು ಭಾಷೆಯಲ್ಲಿ ಪ್ರಾವೀಣ್ಯತೆ ಒದಗಿಸಿ ಕೊಡುವುದು. ಅಂದರೆ ತಾಯ್ನುಡಿ, ಹಿಂದೀ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿಕೊಡುವುದು. ಇದರರ್ಥ, ಈಗಾಗಲೇ ತಾಯ್ನುಡಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹಿಂದೀ ಮತ್ತು ಇಂಗ್ಲೀಷುಗಳಲ್ಲಿ ಪ್ರಾವೀಣ್ಯತೆ ತುಂಬುತ್ತೇವೆ ಎನ್ನುವುದೇ ಅಲ್ಲವೇ? ನಾವೇನೂ ಕನ್ನಡಿಗರು ಬೇರೇ ಭಾಷೆ ಕಲಿಯಬಾರದು ಎನ್ನುತ್ತಿಲ್ಲ. ಭಾರತ ಸರ್ಕಾರ ಯಾಕೆ ಹೀಗೆ ಹಿಂದೀಕಲಿಕೆಗೆ ಒತ್ತು ನೀಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಹಿಂದೀ ಭಾಷೆಯನ್ನು ಕಲಿಯುವ, ರಾಷ್ಟ್ರೀಯ ಏಕತೆಗಾಗಿ ಹಿಂದೀ ಬೇಕೆಂದು ನಂಬಿಸಲ್ಪಡುವ ನಮ್ಮ ಪ್ರತಿಭಾವಂತ ಮಕ್ಕಳು ಮುಂದೆ ಪ್ರತಿಷ್ಠಿತ ಸ್ಥಾನಗಳಲ್ಲಿ ದುಡಿಯುವಾಗ ಇದರಿಂದ ಅನುಕೂಲ ಆಗುವುದು ಹಿಂದೀ ತಾಯ್ನುಡಿಯ ಜನರ ವಲಸೆಗೆ ಎಂಬುದನ್ನು ಗಮನಿಸಬೇಕಾಗಿದೆ. ಭಾರತದ ಯಾವ ಮೂಲೆಗೇ ಹೋದರೂ ಹಿಂದಿಯೊಂದನ್ನೇ ಬಲ್ಲವನಿಗೆ ಯಾವ ತೊಡಕೂ ಆಗಬಾರದೆಂದು ಕೇಂದ್ರಸರ್ಕಾರ ಯೋಚಿಸಿ ಯೋಜಿಸುತ್ತಿರುವುದು ಎದ್ದು ಕಾಣುತ್ತದೆ. ಅವರಿಗೆ ತೊಂದರೆ ಕೊಡಬೇಕು ಅನ್ನುವುದು ಇಲ್ಲಿನ ವಾದವಲ್ಲ, ನಮ್ಮೂರಿಗೆ ವಲಸೆ ಬರುವವರು ನಮ್ಮ ನುಡಿಯಲ್ಲಿ ವ್ಯವಹರಿಸದಿದ್ದರೆ ನಾಳೆ ನಮ್ಮ ಇಡೀ ಕನ್ನಡ ಜನಾಂಗವೇ, ಕರ್ನಾಟಕದಲ್ಲೇ ಹಿಂದೀ ಕಲಿಯದೆ ಬದುಕಲಾಗದ ಸ್ಥಿತಿಗೆ ಈಡಾಗಬೇಕಾಗುತ್ತದೆ. ಯಾಕೆಂದರೆ...

ಕೇಂದ್ರಸರ್ಕಾರದ ಉದ್ದೇಶ ಮತ್ತು ಗುರಿಗಳು

ಇಡೀ ಭಾರತದ ಎಲ್ಲಾ ರಾಜ್ಯಗಳಲ್ಲಿ ಮೊದಲ ಕಲಿಕಾ ಮಾಧ್ಯಮ ಹಿಂದಿಯಾಗಬೇಕು. ಇದೀಗ ಹಿಂದಿ ಮತ್ತು ಇಂಗ್ಲೀಷಿನಲ್ಲಿರುವ ಆಡಳಿತ ವ್ಯವಸ್ಥೆಗಳು ಹಿಂದಿ ಮಾತ್ರಾ ಆಗಬೇಕು. ಭಾರತದ ಎಲ್ಲಾ ಕಛೇರಿಗಳೂ ಹಿಂದಿಯಲ್ಲಿ ಕಾರ್ಯನಿರ್ವಹಿಸಬೇಕು, ಆ ಕಾರಣದಿಂದ ಹೆಚ್ಚು ಹೆಚ್ಚು ಮಕ್ಕಳು ಹಿಂದೀ ಕಲಿಯಬೇಕು. (ಹೀಗಾದರೆ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಉತ್ತರ ಭಾರತೀಯರಿಗೆ ದಕ್ಷಿಣಕ್ಕೆ ವಲಸೆ ಹೋಗಲು ಅನುಕೂಲವಾಗುತ್ತದೆ.) ಇಂಗ್ಲೇಂಡಿನಲ್ಲಿ ಇಂಗ್ಲೀಷ್ ಹೇಗೋ, ಜಪಾನಿನಲ್ಲಿ ಜಪಾನೀಸ್ ಹೇಗೋ ಹಾಗೆ ಭಾರತದಲ್ಲಿ ಹಿಂದಿ ಆಗಬೇಕು. ಎಲ್ಲಾ ಭಾರತೀಯರ ಕಲಿಕೆ, ದುಡಿಮೆ, ಸಂಶೋಧನೆ, ಬದುಕು, ಆಡಳಿತ... ಪ್ರತಿಯೊಂದೂ ಹಿಂದಿಯಲ್ಲಾಗಬೇಕು. ಇಂತಹ ಗುರಿಯ ಬಗ್ಗೆ ಕೇಂದ್ರಸರ್ಕಾರಿ ಒಡೆತನದ www.rajbhasha.nic.in ಅಂತರ್ಜಾಲ ತಾಣದಲ್ಲಿ ವಿವರವಾಗಿ ನೋಡಬಹುದು.

ಇಂತಹ ಗುರಿ ಈಡೇರಿಕೆಗಾಗೇ ನವೋದಯ ಸಂಸ್ಥೆಯಂತಹುದನ್ನು ಕಟ್ಟಿರುವುದು. ಇದನ್ನು ಸಾಧಿಸಲು ರಾಷ್ಟ್ರೀಯ ಏಕತೆ, ದೇಶಭಕ್ತಿ ಎಂಬವುಗಳನ್ನು ಉದ್ದೀಪಿಸುವುದು. ಆದರೆ ನಿಜ ಉದ್ದೇಶ ಹಿಂದೀ ವಸಾಹತು ಸ್ಥಾಪನೆ. ಇದುವರೆವಿಗೂ ಪ್ರತಿಜಿಲ್ಲೆಯಿಂದ ಸುಮಾರು ಎಂಬತ್ತು ಮಕ್ಕಳು, ಪ್ರತಿವರ್ಷ ಈ ಹಿಂದಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ತಲೆಯಲ್ಲಿ ತುಂಬಿಕೊಂಡು ಹೊರಬರುತ್ತಿದ್ದಾರೆ. ಅಂದರೆ ಪ್ರತಿವರ್ಷ ಎರಡು ಸಾವಿರಕ್ಕೂ ಹೆಚ್ಚು ಅಚ್ಚ ಕನ್ನಡಿಗರು, ಬುದ್ಧಿವಂತರು, ಒಳ್ಳೆಯ ಉದ್ಯೋಗಗಳಲ್ಲಿ ಕೆಲಸ ಮಾಡುವ ಅವಕಾಶವಿರುವವರು, ಸಮಾಜದಲ್ಲಿ ಪ್ರಭಾವ ಹೊಂದಲಿರುವ ಪ್ರತಿಭಾಶಾಲಿಗಳನ್ನು ಈ ಸಂಸ್ಥೆ ಹೊರತರುತ್ತಿದೆ. ಇವರಲ್ಲಿ ಯಾರಿಗೂ ಕನ್ನಡದ ಬಗ್ಗೆ ಈ ಸಂಸ್ಥೆ ಕೆಟ್ಟದ್ದೇನನ್ನೂ ಹೇಳಿಕೊಟ್ಟಿಲ್ಲ ಅನ್ನುವುದು ನಿಜವಿರಬಹುದು, ಆದರೆ ಆಳದಲ್ಲಿ ಹಿಂದೀ ಭಾಷೆಯ ಬಗ್ಗೆ ಸ್ವೀಕಾರಾರ್ಹತೆಯನ್ನು ತುಂಬಲಾಗಿದೆ. ಇಷ್ಟು ಸಾಕಲ್ಲವೇ? ಭಾರತದ ವೈವಿಧ್ಯತೆಯ ಬಗ್ಗೆ ಪಾಠ ಮಾಡುವ ಇವರು ಎಲ್ಲಾ ಭಾಷೆಗಳೂ ಸಮಾನವೆಂದು ಬಾಯಲ್ಲಿ ಹೇಳಿಕೊಡಬಹುದೇನೋ, ಆದರೆ ಜತೆಯಲ್ಲಿ ಭಾರತದಲ್ಲಿ ಹಿಂದಿಗೆ ರಾಜ್‌ಭಾಷಾ ಸ್ಥಾನ ಇರುವುದೇ ಸರಿಯೆಂದು ನಂಬಿಸಿರುತ್ತಾರೆ.

ಕೇಂದ್ರದ ನಿಜ ಉದ್ದೇಶ

ಕರ್ನಾಟಕದ ನವೋದಯ ಶಾಲೆಗಳಲ್ಲಿ ಕನ್ನಡದಲ್ಲೇ ಹೇಳಿಕೊಡುತ್ತಾರೆ, ಹಿಂದಿ ಹೇರಿಕೆಯಿಲ್ಲಾ ಅನ್ನುವ ಗೆಳೆಯರು ತಿಳಿಯಬೇಕಾದ್ದು ಏನೆಂದರೆ ಈ ಬದಲಾವಣೆಗಳನ್ನು ಒಂದೇ ಬಾರಿಗೆ ಮಾಡಿ ವಿಫಲರಾಗುವ ದಡ್ಡತನ ಕೇಂದ್ರ ಮಾಡುವುದಿಲ್ಲ. ಅವರದ್ದೇನಿದ್ದರೂ ನಿಧಾನವಾಗಿ ಹೆಜ್ಜೆಹೆಜ್ಜೆಯಾಗಿ ನಮ್ಮ ತಾಯ್ನುಡಿಯನ್ನು ನಮ್ಮ ಕೈಗಳಿಂದಲೇ ಅಲ್ಲಿಂದ ಬಡಿದೋಡಿಸುವ ತಂತ್ರಗಾರಿಕೆ. ಇಲ್ಲದಿದ್ದರೆ ನವೋದಯ ಶಾಲೆಗಳ ಆಡಳಿತದಲ್ಲಿ ಎಷ್ಟರಮಟ್ಟಿಗೆ ಹಿಂದಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ಅಧ್ಯಯನ ಮಾಡಲು ಸಂಸತ್ತಿನ ಸಮಿತಿಯನ್ನು ನೇಮಿಸುವ ಅಗತ್ಯವಿರಲಿಲ್ಲ ಅಲ್ಲವೇ? ಈ ಸಮಿತಿಯು ಹಿಂದೀ ಭಾರತದ ಎಲ್ಲಾ ರಾಜ್ಯಗಳ ಎಲ್ಲಾ ಹಂತಗಳ ಕಲಿಕಾ ಮಾಧ್ಯಮವಾಗಲಿ ಎಂದು ಶಿಫಾರಸ್ಸು ಮಾಡುತ್ತಿರಲಿಲ್ಲ ಅಲ್ಲವೇ? ಕೇಂದ್ರಕ್ಕೆ ಹಿಂದೀ ಹೇರಿಕೆಯ ಗುರಿ ಇಲ್ಲದಿದ್ದರೆ ನವೋದಯ ಶಾಲೆಗಳಲ್ಲಿ ವಿಜ್ಞಾನ ಗಣಿತಗಳನ್ನು ಬಿಟ್ಟು ಉಳಿದದ್ದನ್ನೆಲ್ಲಾ ಹಿಂದಿಯಲ್ಲಿ ಕಲಿಸುತ್ತೇವೆ ಎಂದು ಘೋಷಿಸಿಕೊಳ್ಳುವ ಬದಲು ಆಯಾ ರಾಜ್ಯದ ಭಾಷೆಯಲ್ಲಿ ಕಲಿಸುತ್ತೇವೆ ಎಂದು ಬರೆದುಕೊಳ್ಳುತ್ತಿದ್ದರಲ್ಲವೇ?

ಒಟ್ಟಾರೆ ನವೋದಯದಂತಹ ಉತ್ತಮ ಗುಣಮಟ್ಟದ ಶಾಲೆಗಳನ್ನು ಕಟ್ಟಿ, ಅದರ ಮೂಲಕ ಹಳ್ಳಿಗಾಡಿನ ಮಕ್ಕಳಿಗೆ ಕಲಿಕೆ, ಬದುಕುಗಳ ಆಮಿಷ ಒಡ್ಡಿ, ಇಡೀ ಕನ್ನಡನಾಡನ್ನು ನಾಳಿನ ಹಿಂದೀ ವಸಾಹತಾಗಿಸುವ ಹುನ್ನಾರ ಕೇಂದ್ರಕ್ಕಿರುವುದನ್ನು ಅರಿಯುವುದು ಮುಖ್ಯವಾಗಿದೆ. ಕೇಂದ್ರಸರ್ಕಾರ ಈ ಶಾಲೆಗಳಿಗೆ ಖರ್ಚು ಮಾಡುತ್ತಿರುವ ಹಣ ನಮ್ಮ ರಾಜ್ಯ ಕೇಂದ್ರಕ್ಕೆ ಕಟ್ಟುವ ತೆರಿಗೆಯಲ್ಲಿನ ಒಂದು ಸಣ್ಣಭಾಗವೇ ಹೊರತು ಕೇಂದ್ರ ನಮಗಾಗಿ ನೀಡುತ್ತಿರುವ ದಯಾಭಿಕ್ಷೆ ಏನಲ್ಲ.

ಕಲಿಕೆಯೆನ್ನುವುದನ್ನು ರಾಜ್ಯಪಟ್ಟಿಯಿಂದ ಸಂಯುಕ್ತ ಪಟ್ಟಿಗೆ ಹಾಕಿಕೊಂಡು, ಕೇಂದ್ರಸರ್ಕಾರವು ತಾನೇ ಶಾಲೆಗಳನ್ನು ಕಟ್ಟುವ ನಡೆಸುವ ಚಾಳಿಯನ್ನು ಕೈಬಿಡಬೇಕಾಗಿದೆ. ತನ್ನ ನಾಡಿನ ಮಕ್ಕಳ ಕಲಿಕೆಯು ರಾಜ್ಯಗಳ ಹೊಣೆಯಾಗಿರುತ್ತದೆ ಮತ್ತು ಕಲಿಕೆ ಅತ್ಯುತ್ತಮವಾಗಲು ವಿಕೇಂದ್ರೀಕರಣವೇ ಸರಿಯಾದುದಾಗಿದೆ. ಈಗ ನಮ್ಮ ರಾಜ್ಯಸರ್ಕಾರ ಸರಿಯಾದ ವ್ಯವಸ್ಥೆ ಕಟ್ಟಿಕೊಡಲಿ ಎನ್ನುವುದು ನಮ್ಮ ದನಿಯಾಗಬೇಕೇ ಹೊರತು, ಇವರು ಸರಿಯಿಲ್ಲ... ಅದಕ್ಕೆ ಕೇಂದ್ರಸರ್ಕಾರವೇ ಶಾಲೆ ನಡೆಸಲಿ ಅನ್ನುವುದಲ್ಲ. ಕರ್ನಾಟಕ ರಾಜ್ಯಸರ್ಕಾರವು ತ್ರಿಭಾಷಾ ಸೂತ್ರಕ್ಕೆ ಕೊನೆ ಹೇಳಿ, ಸದರಿ ಶಾಲೆಗಳನ್ನು ತಾನೇ ವಹಿಸಿಕೊಂಡು ನಡೆಸುವ ಮೂಲಕವೂ, ಇಂತಹುದೇ ಸೌಕರ್ಯ ಮತ್ತು ಗುಣಮಟ್ಟಗಳಿರುವ ಕಲಿಕೆಯನ್ನು ತಾನೇ ನೀಡುವ ಮೂಲಕವೂ ಭಾರತ ಸರ್ಕಾರದ ಹುನ್ನಾರವನ್ನು ವಿಫಲಗೊಳಿಸಬೇಕಾಗಿದೆ.

ಕೊನೆಹನಿ: ನವೋದಯದ ಕೆಲ ಗೆಳೆಯರು, ಇಡೀ ಬರಹವನ್ನು ತಮಗೆ ಸಂಸ್ಥೆಯಿಂದಾಗಿರುವ ಲಾಭದ ಹಿನ್ನೆಲೆಯಲ್ಲಿ, ತಮಗಾಗಿರುವ ಅನುಭವದ ನೆಲೆಯಲ್ಲಿ, ಪ್ರತಿಕ್ರಿಯೆ ನೀಡಿರುವಂತಿದೆ. ಇಡೀ ಬರಹವನ್ನು ಭಾರತ ದೇಶದ ಭಾಷಾನೀತಿ, ಆಡಳಿತ ನೀತಿ, ಕೇಂದ್ರಸರ್ಕಾರಕ್ಕಿರುವ ‘ಇಡೀ ಭಾರತಕ್ಕೆ ಹಿಂದಿ ಕಲಿಸುವ ಉತ್ಸಾಹ’, ಅದಕ್ಕಾಗಿ ಮಾಡಿಕೊಂಡಿರುವ ಹತ್ತಾರು ರಾಜಮಾರ್ಗಗಳು, ಒಳಸುಳಿಗಳು, ಇವುಗಳ ಹಿನ್ನೆಲೆಯಲ್ಲಿ ನೋಡಿ, ಓದಿ ಅರ್ಥ ಮಾಡಿಕೊಳ್ಳುವರೆಂಬ ಆಶಯ ನಮ್ಮದು.

ನವೋದಯ ಶಾಲೆ: ಸಿಹಿ ಮೆತ್ತಿದ ಹಿಂದೀ ವಿಷ!


ಭಾರತ ಸರ್ಕಾರವು 1985ರಲ್ಲಿ ಶುರುಮಾಡಿದ ಒಂದು ಹೊಸಬಗೆಯ ವಿಶಿಷ್ಟವಾದ ಕಲಿಕಾ ಪದ್ದತಿಯ ಹೆಸರೇ “ನವೋದಯ ವಿದ್ಯಾಲಯ ವ್ಯವಸ್ಥೆ”. ಇದರ ಅತ್ಯಾಕರ್ಷಕ ಅಂಶವೆಂದರೆ ಇದರ ಘೋಷಿತ ಉದ್ದೇಶ. “ಭಾರತದಲ್ಲಿರುವ ಪ್ರತಿಭಾವಂತರೂ, ಬಡವರೂ, ಹಳ್ಳಿಯವರೂ ಆಗಿರುವ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಡುವುದು.” ಈ ನವೋದಯ ವಿದ್ಯಾಲಯ ಪದ್ದತಿಗಾಗೇ ಕೇಂದ್ರಸರ್ಕಾರ ಕೋಟಿಗಟ್ಟಲೆ ಹಣ ಮೀಸಲಿಟ್ಟಿದೆ. ಈ ಕಲಿಕಾ ಏರ್ಪಾಟಿನಲ್ಲಿ ನಮ್ಮ ತೆರಿಗೆ ಹಣ ಖರ್ಚಾಗುವುದು ಹಿಂದೀಹೇರಿಕೆಗಾಗಿ ಎಂಬುದೇ ದಿಟವಾಗಿದೆ.

ಮೇಲೆ ಮೆತ್ತಿರುವ ಸಿಹಿ!

ಇಡೀ ಭಾರತದಲ್ಲಿ ಇದನ್ನು ಸ್ಥಾಪಿಸುವಾಗ ಹೇಳಿದ ಉದ್ದೇಶಗಳು ಬಡಮಕ್ಕಳಿಗೆ ಅದರಲ್ಲೂ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಡುವುದು. ನಿಜಕ್ಕೂ ಎಂತಹ ಅದ್ಭುತವಾದ ಕಾರ್ಯಕ್ರಮ ಇದು. ನಮ್ಮ ಹಳ್ಳಿಗಾಡುಗಳಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ಪಟ್ಟಣಿಗರಿಗೆ ಸಿಗುತ್ತಿರುವ ಕಲಿಕೆ ಸಿಗದಿರುವಂತಾಗಿರುವುದನ್ನು ಸರಿಪಡಿಸಲು ಈ ಕ್ರಮ ತೆಗೆದುಕೊಳ್ಲಲಾಗಿದೆ ಎನ್ನಿಸುವುದು ಸಹಜ. ಇಲ್ಲಿ ಉಚಿತವಾದ ವಸತಿ ನಿಲಯ, ಊಟ, ಬಟ್ಟೆಯ ವ್ಯವಸ್ಥೆಗಳಿವೆ. ಶುಲ್ಕ ತಿಂಗಳಿಗೆ 200 ರೂಪಾಯಿ ಮಾತ್ರಾ. ಪರಿಶಿಷ್ಟ ಜಾತಿ, ವರ್ಗ, ಬಡವರು, ಹೆಣ್ಣುಮಕ್ಕಳಿಗಂತೂ ಸಂಪೂರ್ಣ ಉಚಿತ. ಇಲ್ಲಿನ ಶಾಲೆಗಳಲ್ಲಿ ಅದ್ಭುತವಾದ ಮೂಲಸೌಕರ್ಯಗಳಿವೆ. ಪ್ರತಿ ಶಾಲೆಯೂ ಹಳ್ಳಿಯ ಪರಿಸರದಲ್ಲಿದ್ದು ಸುಮಾರು ಐದು ಎಕರೆ ಪ್ರದೇಶವನ್ನು ಹೊಂದಿರುತ್ತದೆ. ಇಲ್ಲಿನ ಶಿಕ್ಷಕರೂ ಕೂಡಾ ಪ್ರತಿಭಾನ್ವಿತರಿಂದಲೇ ಕೂಡಿರುತ್ತಾರೆ. ಈ ಸಂಸ್ಥೆಯಲ್ಲಿ ಮಕ್ಕಳಿಗೆ ಎನ್.ಸಿ.ಸಿ, ಎನ್.ಎಸ್.ಎಸ್. ಸ್ಕೌಟ್ಸ್ ಮತ್ತು ಗೈಡ್ಸ್, ಕಲೆ, ಸಾಹಿತ್ಯ, ಆಟೋಟಗಳಲ್ಲಿ ವಿಫುಲವಾದ ಅವಕಾಶಗಳಿವೆ. ಹೇಳಿ ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟರೆ ಯಾರಿಗೆ ತಾನೆ ಈ ವ್ಯವಸ್ಥೆ ಇಷ್ಟವಾಗೋಲ್ಲ. ಇವೆಲ್ಲಾ ಮೇಲೆ ಮೆತ್ತಲಾಗಿರುವ ಸಿಹಿ ಮಾತ್ರಾ.

ಒಳಗಿನ ಕಹಿ ವಿಷ!

ಪ್ರತಿಜಿಲ್ಲೆಯ ಒಂದೊಂದು ಹಳ್ಳಿಯಲ್ಲಿ ತೆಲೆಯೆತ್ತಿರುವ ಈ ವಿದ್ಯಾಲಯಗಳಲ್ಲಿ ವಿಜ್ಞಾನ, ಗಣಿತಗಳನ್ನು ಮಾತ್ರಾ ಇಂಗ್ಲೀಷಿನಲ್ಲಿ ಕಲಿಸಲಾಗುತ್ತದೆ. ಉಳಿದದ್ದನ್ನೆಲ್ಲಾ ತಾಯ್ನುಡಿಯಲ್ಲಿ ಎಂದುಕೊಂಡರೆ.... ಊಹೂಂ... ಹಿಂದೀಭಾಷೆಯಲ್ಲಿ ಕಲಿಸಲಾಗುತ್ತದೆ. ಇದರ ಉದ್ದೇಶದಲ್ಲಿನ ಈ ಸಾಲುಗಳು ಅದಕ್ಕೆ ತ್ರಿಭಾಷಾ ಸೂತ್ರದ ಅನ್ವಯವೆನ್ನುವ ನಿಯಮದತ್ತ ಕೈತೋರುತ್ತಾ ಹೀಗೆನ್ನುತ್ತಿವೆ...

Adherence to Three Language Formula
The Regional Language is generally the medium of instruction from Class-VI to VIII and from Class- IX onwards, it is English for Science and Mathematics and Hindi for Humanities subjects.
ಕರ್ನಾಟಕದ ನವೋದಯ ಶಾಲೆಗಳಲ್ಲಿ ಆರು, ಏಳು ಮತ್ತು ಎಂಟನೇ ತರಗತಿಗಳಲ್ಲಿ ಕಲಿಕಾ ಮಾಧ್ಯಮವು ಕನ್ನಡವಾಗಿರುತ್ತದೆ. ಒಂಬತ್ತನೇ ತರಗತಿಯಿಂದ ಗಣಿತ ಮತ್ತು ವಿಜ್ಞಾನಗಳನ್ನು ಇಂಗ್ಲೀಷಿನಲ್ಲೂ ಸಮಾಜಶಾಸ್ತ್ರದಂತಹ ಉಳಿದವುಗಳನ್ನು ಹಿಂದೀಯಲ್ಲಿ ಕಲಿಸಲಾಗುತ್ತದೆ.

ಒಂಬತ್ತನೇ ತರಗತಿಯ ಮಕ್ಕಳಲ್ಲಿ ಶೇಕಡಾ 30ರಷ್ಟು ಮಂದಿಯನ್ನು ಆರಿಸಿ ಹಿಂದೀ ಪ್ರದೇಶದಲ್ಲಿರುವ ಶಾಲೆಗೆ ವರ್ಗ ಮಾಡಲಾಗುತ್ತದೆ. ಭವ್ಯ ಭಾರತದ ರಾಷ್ಟ್ರೀಯ ಏಕತೆಯನ್ನು ಆ ಮೂಲಕ ಗಟ್ಟಿಗೊಳಿಸಲಾಗುತ್ತದೆಯಂತೆ. ಹಿಂದೀ ಭಾಷಿಕ ಪ್ರದೇಶದ ಮಕ್ಕಳನ್ನು ಹಿಂದಿಯೇತರ ಪ್ರದೇಶದ ಶಾಲೆಗೆ ವರ್ಗಾಯಿಸುತ್ತಾರಂತೆ.


Promotion of National Integration
Navodaya Vidyalayas aim at inculcating values of national integration through migration scheme though which the inter regional exchange of students between Hindi and Non-Hindi speaking States and vice-versa takes place for one academic year. Efforts are made to promote better understanding of the unity in diversity and cultural heritage through various activities.

ಮೇಲುನೋಟಕ್ಕೆ ಎಂತಹಾ ರಾಷ್ಟ್ರೀಯ ಭಾವೈಕ್ಯತೆಯ ಉದ್ದೇಶ ಇದರಲ್ಲಿ ಕಂಡರೂ ಒಳಗಿನ ಮರ್ಮವೇ ಬೇರೆ. ಮೊದಲಿಗೆ ಇಲ್ಲಿ ಹಿಂದೀ ಮತ್ತು ಹಿಂದಿಯೇತರ ಎಂಬ ವಿಭಾಗಗಳೇ ಏಕೆ? ಇದು ಹಿಂದಿಯನ್ನೊಂದು ಕಡೆ, ಉಳಿದೆಲ್ಲಾ ಭಾಷೆಗಳನ್ನು ಇನ್ನೊಂದುಕಡೆ ಮಾಡಿದಂತಲ್ಲವೇ? ಭಾವೈಕ್ಯತೆ ಬೆಸೆಯಲು ಅಂತರರಾಜ್ಯ ವರ್ಗಾವಣೆ ಅಂದಿದ್ದರೆ ಸಾಕಿರಲಿಲ್ಲವೇ?
ಇದರಂತೆ ಹಿಂದೀಭಾಷಿಕ ವಿದ್ಯಾರ್ಥಿ ಕನ್ನಡನಾಡಿಗೆ ವರ್ಗವಾಗಿ ಬಂದರೂ ಇಡೀ ಶಾಲೆಯಲ್ಲಿನ ಕಲಿಕಾ ಮಾಧ್ಯಮವೇ ಹಿಂದಿಯಾಗಿರುವಾಗ, ಶಾಲಾ ಆಡಳಿತವೆಲ್ಲಾ ಹಿಂದಿಯಲ್ಲಿ ನಡೆಯುವಾಗ ಹಿಂದಿಯೇತರ ನಾಡಿನ ಸೊಗಡನ್ನು ಅರಿಯಲು ಹೇಗೆ ಮತ್ತು ಎಷ್ಟರಮಟ್ಟಿಗೆ ಸಾಧ್ಯ? ಇನ್ನು ಇಂತಹ ವಿದ್ಯಾರ್ಥಿಗಳ ಜೊತೆ ಸಹಪಾಟಿಗಳೆಲ್ಲಾ ಹಿಂದಿಯಲ್ಲಿ ವ್ಯವಹರಿಸದೆ ಇರಲು ಸಾಧ್ಯವೇ? ಇಂತಹುದೇ ಪರಿಸ್ಥಿತಿ ಕನ್ನಡದ ವಿದ್ಯಾರ್ಥಿ ಹಿಂದೀ ಪ್ರದೇಶಕ್ಕೆ ಹೋದರೆ ಇರುತ್ತದೆಯೇ? ಊಹೂಂ... ಆತ/ ಆಕೆ ಅರೆಹಿಂದಿ ವಾತಾವರಣದಿಂದ ಸಂಪೂರ್ಣ ಹಿಂದೀ ವಾತಾವರಣಕ್ಕೆ ತೆರೆದುಕೊಳ್ಳಬೇಕಾಗುತ್ತದೆ. ನವೋದಯ ಶಾಲೆಯ ಆಡಳಿತವೆಲ್ಲಾ ಹಿಂದಿಯಲ್ಲಿರುತ್ತದೆ ಎನ್ನಲು ಹಿಂದಿ ಜಾರಿಗೊಳಿಸುವಲ್ಲಿ ನವೋದಯ ಶಾಲೆಗಳದ್ದು ಮೊದಲ ಸಾಲಿನ ಸ್ಥಾನವಾಗಿದೆ ಅನ್ನುವುದೇ ಸಾಕು. ಒಟ್ಟಾರೆ ಈ ವರ್ಗಾವಣೆಗಳು ರಾಷ್ಟ್ರೀಯ ಏಕತೆಯನ್ನು ಪೊರೆಯುವುದಕ್ಕಿಂತಾ ಕನ್ನಡದ ಮಕ್ಕಳಿಗೆ ಹಿಂದೀನಾಡಿನ ಪ್ರಾಕ್ಟಿಕಲ್ ಅನುಭವ ನೀಡುವ ತರಗತಿಗಳಾಗುತ್ತವೆ ಅನ್ನುವುದೇ ಹೆಚ್ಚು ಸತ್ಯ.

ನಿಜವಾದ ಉದ್ದೇಶ!

ವಾಸ್ತವವಾಗಿ ಈ ಶಾಲೆಗಳ ನಿಜವಾದ ಉದ್ದೇಶವೇ ಹಿಂದೀ ಹೇರಿಕೆಯಾಗಿದೆ. ಎಳವೆಯಲ್ಲೇ ತಲೆಯಲ್ಲಿ ಹಿಂದೀ ಭಾಷೆ ಭಾರತದ ಒಗ್ಗಟ್ಟಿಗೆ ರಾಷ್ಟ್ರೀಯತೆಗೆ ಅಗತ್ಯ ಎನ್ನುವ ಪೊಳ್ಳನ್ನು ತುಂಬಲ್ಪಟ್ಟ ಮಕ್ಕಳಲ್ಲಿ ಇನ್ಯಾವ ಭಾವನೆ ತಾನೇ ಹುಟ್ಟೀತು? ಇಷ್ಟಕ್ಕೂ ಈ ಇಡೀ ಯೋಜನೆಯ ಉದ್ದೇಶ ಹಿಂದಿಹೇರಿಕೆಯಲ್ಲದಿದ್ದರೆ, ಇದು ಭಾರತೀಯ ಆಡಳಿತ ಭಾಷಾ ಕಾಯ್ದೆಯ/ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸದೆ ಇದ್ದಿದ್ದರೆ ಈ ಪದ್ದತಿ ತಮಿಳುನಾಡಿಗೆ ಮಾತ್ರಾ ಅನ್ವಯಿಸುವುದಿಲ್ಲ ಏಕೆ? ಒಟ್ಟಾರೆ ಕರ್ನಾಟಕದ 27 ಶಾಲೆಗಳಲ್ಲಿ ಪ್ರತಿವರ್ಷ ಸೇರಿಸಿಕೊಳ್ಳುವ 2000 ಮಕ್ಕಳು ಈ ಪದ್ದತಿಯಲ್ಲಿ ಕಲಿತು ಹೊರಬರುವಾಗ ಹಿಂದೀ ದೇವತೆಯ ಪದತಲದಲ್ಲಿ ತಾಯ್ನುಡಿಯ ಬಲಿಕೊಟ್ಟೇ ಹೊರಬರುತ್ತಾರೆ ಎಂಬುದು ಆತಂಕಕಾರಿಯಾಗಿದೆ. ಈ ವಿಷಯ ಮನದಟ್ಟಾಗಲು ಇಲ್ಲೊಂದು ಸಣ್ಣ ಸ್ಯಾಂಪಲ್ ಮಾಹಿತಿ ಇದೆ ನೋಡಿ. ನವೋದಯ ಶಾಲೆಯ ಮಾಜಿ ವಿದ್ಯಾರ್ಥಿಗಳ ಸ್ನೇಹ ಕೂಟವೊಂದರಲ್ಲಿ ಭಾರತಕ್ಕೆ ಸೂಕ್ತವಾದ ರಾಷ್ಟ್ರಭಾಷೆ ಯಾವುದು ಎನ್ನುವ ಸಮೀಕ್ಷೆ ಮಾಡಿದ್ದಾರೆ. ನೂರಕ್ಕೆ ಎಂಬತ್ತೇಳು ಜನರು ಹಿಂದೀ ಎಂದು ಬರೆದಿದ್ದರೆ ಹನ್ನೆರಡರಷ್ಟು ಜನ ಇಂಗ್ಲೀಷ್ ಎಂದಿದ್ದಾರೆ. ಅಂದರೆ ಎಂಟರಲ್ಲಿ ಏಳುಜನ ಹಿಂದಿ ಪರವಾಗಿ ಮತ ಚಲಾಯಿಸಿದ್ದಾರೆ. ಧನ್ಯ... ಭಾರತ... ಧನ್ಯ. ನಮ್ಮೆಲ್ಲರ ಕೋಟಿಗಟ್ಟಲೆ ತೆರಿಗೆ ಹಣ ಹಿಂದೀ ಪ್ರಚಾರಕ್ಕೆ ವ್ಯಯಿಸಿದ್ದಕ್ಕೂ ಸಾರ್ಥಕವಾಯಿತು ಅಲ್ಲವೇ?

ಸದ್ಯಕ್ ಇವ್ರು ಕರ್ನಾಟಕದ ಮುಖ್ಯಮಂತ್ರಿಗಳಾಗಿರಲಿ ಸಾಕು.


ದಿನಾಂಕ 03.10.2010ರ ಪ್ರಜಾವಾಣಿಯ 5ನೇ ಪುಟದಲ್ಲಿ ಬಂದಿರೋ ಸುದ್ದಿಯಂತೆ ಕರ್ನಾಟಕ ರಾಜ್ಯಸರ್ಕಾರವು ಭಾರತದ ಕೇಂದ್ರಸರ್ಕಾರಕ್ಕೆ ಭಾರತ ದೇಶದ ಹೆಸರನ್ನು ಇಂಡಿಯಾ ಎಂಬುದರ ಬದಲಾಗಿ ಭಾರತ ಎಂದೇ ನಾಮಕರಣ ಮಾಡಲು ಪ್ರಸ್ತಾಪ ಸಲ್ಲಿಸುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಯಡ್ಯೂರಪ್ಪನವರು ಹೇಳಿಕೆ ನೀಡಿದ್ದಾರೆ. ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ ಎಂಬ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ. ಅರೆರೆ... ಮಾಸ್ತಿ ಪುಸ್ತಕಕ್ಕೂ ಇಂಡಿಯಾ ಹೆಸರಿಗೂ ಏನಪ್ಪಾ ಸಂಬಂಧಾ? ಅನ್ನೋ ಅಚ್ಚರಿಗೆ ಉತ್ತರ ಸಿಕ್ಕಿಲ್ಲದಿದ್ದರೂ ಸದರಿ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾಗಿದ್ದ ಹಿರಿಯರೂ ಕನ್ನಡದ ಕೆಚ್ಚಿನ ಹೋರಾಟಗಾರರೂ, ಖ್ಯಾತ ಚಿಂತಕರೂ ಆಗಿರುವ ಶ್ರೀ. ಚಿದಾನಂದಮೂರ್ತಿಯವರು ಆಡಿದ ಮಾತಿಗೆ, ನೀಡಿದ ಸಲಹೆಗೆ ಸ್ಪಂದಿಸಿ ನಮ್ಮ ಮುಖ್ಯಮಂತ್ರಿಗಳು ಹೀಗಂದಿದಾರಂತೆ!

ನಮ್ಮೂರ ಹೆಸರು ಬದಲಾವಣೆ ಏನಾಯ್ತು ಯಜಮಾನ್ರೇ?

2005ರ ಡಿಸೆಂಬರ್ 11ನೇ ತಾರೀಕಿನಂದು ಕರ್ನಾಟಕ ರಾಜ್ಯಸರ್ಕಾರವು, ಬ್ಯಾಂಗಲೂರ್ ಎಂಬ ಹೆಸರನ್ನು ಬೆಂಗಳೂರು ಎಂಬುದಾಗಿ ಬದಲಾಯಿಸಲು ಹಿರಿಯ ಸಾಹಿತಿಗಳಾದ ಶ್ರೀ. ಯು.ಆರ್.ಅನಂತಮೂರ್ತಿಯವರು ನೀಡಿರುವ ಸಲಹೆಯನ್ನು ಜಾರಿಗೆ ತರುತ್ತೇವೆಂದು ಘೋಷಿಸಿತು. ಅದಕ್ಕೆ ಪೂರಕವಾಗಿ 2006ರ ಸೆಪ್ಟೆಂಬರ್ 27ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂತಹ ಒಂದು ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಸದರಿ ಗೊತ್ತುವಳಿಯನ್ನು ಒಪ್ಪಿಕೊಂಡ ಘನ ಕರ್ನಾಟಕ ರಾಜ್ಯಸರ್ಕಾರ ನವೆಂಬರ್ ಒಂದರಂದು ಬ್ಯಾಂಗಲೂರ್ ಹೆಸರನ್ನು ಬೆಂಗಳೂರು ಎಂಬುದಾಗಿ ಘೋಷಿಸಿತು. ಜೊತೆಗೆ ಮಂಗಳೂರು, ಬೆಳಗಾವಿ, ಮೈಸೂರು, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ, ಚಿಕ್ಕಮಗಳೂರು, ಕಲ್ಬುರ್ಗಿ, ವಿಜಾಪುರ, ಬಳ್ಳಾರಿ, ತುಮಕೂರು ಮತ್ತು ಕಾಪುಗಳ ಹೆಸರನ್ನೂ ಬದಲಿಸುವ ಘೋಷಣೆ ಹೊರಬಿತ್ತು. ಆಮೇಲೆ ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಒಪ್ಪಿಗೆಗಾಗಿ ಕಳಿಸಲಾಯಿತು. ಇದೆಲ್ಲಾ ಶುರುವಾಗಿದ್ದು ಧರಂಸಿಂಗ್ ಅವರ ಕಾಲದಲ್ಲಾದರೂ ಎಚ್.ಡಿ.ಕುಮಾರಸ್ವಾಮಿಯವರ ಕಾಲದಲ್ಲಿ ಗೃಹಸಚಿವಾಲಯಕ್ಕೆ ಕಳಿಸಲಾಯಿತು. 2007ರ ಜುಲೈ 14ರ ದಿನಪತ್ರಿಕೆಗಳಲ್ಲಿ ಬೆಳಗಾವಿ ಒಂದು ಬಿಟ್ಟು ಉಳಿದ ಹೆಸರುಗಳ ಬದಲಾವಣೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿರೋ ಸುದ್ದಿ ಬಂತು. ಆಮೇಲೇನಾಯಿತು ಅಂತಾ ಇವತ್ತಿನ ತನಕಾ ಗೊತ್ತಿಲ್ಲಾ. ಕರ್ನಾಟಕ ರಾಜ್ಯಸರ್ಕಾರದ ಮುಖ್ಯಮಂತ್ರಿಗಳಾದ ಯಡ್ಯೂರಪ್ಪನವರು ಈ ಬಗ್ಗೆ ಚಕಾರ ಎತ್ತಿರೋ ಸುದ್ದಿ ಇಲ್ಲೀ ತನಕ ಬಂದಂಗಿಲ್ಲ. ತಾವೇ ಮನೆ ಯಜಮಾನ ಆಗಿರೋ ಕರ್ನಾಟಕದಲ್ಲಿರೋ ಊರುಗಳ ಹೆಸರುಗಳನ್ನು ಬದಲಾವಣೆ ಮಾಡಿಸೋಕೆ ಯಾವುದೇ ಆಸಕ್ತಿ ತೋರಿಸದೆ ಈಗ ಭಾರತದ ನಾಮಕರಣಕ್ಕೆ ಮುಂದಾಗಿರೋದು ನೋಡುದ್ರೆ, ಇವರು ತಮ್ಮನ್ನೇನು ಕರ್ನಾಟಕದ ಮುಖ್ಯಮಂತ್ರಿಗಳು ಅಂದ್ಕೋಡಿದಾರಾ ಅಥ್ವಾ ಭಾರತದ ಮುಖ್ಯಮಂತ್ರಿಗಳು ಅಂದ್ಕೊಂಡಿದಾರಾ ಅನ್ಸುತ್ತಲ್ವಾ ಗುರೂ!
Related Posts with Thumbnails