ಹಣಕಾಸು ಒಳಗೊಳ್ಳುವಿಕೆ - ಪರಿಣಾಮಕಾರಿಯಾಗಲಿ!

ವಿಶ್ವಸಂಸ್ಥೆಯು 2003ರಲ್ಲಿ ಈ ಬಗ್ಗೆ ಮಾತಾಡಿತ್ತು. ಅಂದಿನ ಮುಖಂಡರಾಗಿದ್ದ ಕೋಫಿ ಅನ್ನನ್ ಅವರು ಇಡೀ ವಿಶ್ವದಲ್ಲಿ ಹಣಕಾಸು ವ್ಯವಸ್ಥೆಗಳ ಬಳಕೆಯನ್ನು ಎಲ್ಲಾ ಜನರಿಗೂ ತಲುಪಿಸುವಂತಾಗಬೇಕೆಂಬ ಕರೆಯನ್ನು ಕೊಟ್ಟಿದ್ದರು. ಇದನ್ನು Financial Inclusion ಎಂಬ ಹೆಸರಿಂದಲೇ ಇಂದು ಕರೀತಾ ಇದೀವಿ. ಭಾರತ ಕೂಡಾ ಈ ಯೋಜನೆಯನ್ನು ರೂಪಿಸಿದೆ. ಇದರ ಮೂಲ ಉದ್ದೇಶವೇ ನಾಡಿನ ಆರುಲಕ್ಷ ಹಳ್ಳಿಗಳ ಜನರಿಗೆ ಹಣಕಾಸು ವ್ಯವಸ್ಥೆಯನ್ನು ಪರಿಚಯಿಸಿ ಅದನ್ನು ಬಳಸಲು ಶುರು ಮಾಡಿಸುವುದು. ಈ ಬಗ್ಗೆ ಒಂದು ಬರಹ ಇತ್ತೀಚಿಗೆ ಫೋರ್ಬ್ಸ್ ಅವರ ಬುಸಿನೆಸ್ಸ್ ಪತ್ರಿಕೇಲಿ ಪ್ರಕಟವಾಗಿದೆ. Financial Inclusion, ಅಂದರೆ ಹಣಕಾಸು ವ್ಯವಹಾರಗಳ ಸೇವೆಗಳನ್ನು ಸಾಮಾನ್ಯ ಜನರತ್ತ ಕೊಂಡೊಯ್ಯುವಲ್ಲಿ ಬ್ಯಾಂಕಿನ ಅಧಿಕಾರಿಗಳು, ಇಂಜಿನಿಯರುಗಳು, ಸರ್ಕಾರೀ ಅಧಿಕಾರಿಗಳು ಒಟ್ಟಾಗಿ ದುಡೀತಿದಾರೆ ಅಂತ ಫೋರ್ಬ್ಸ್ ಪತ್ರಿಕೆಯಲ್ಲಿ ಮೂಡಿ ಬಂದಿರೋ ಈ ಬರಹ ಹೇಳ್ತಿದೆ.

ಏನಿದು (Financial Inclusion) ಹಣಕಾಸು ವ್ಯವಸ್ಥೆಯಲ್ಲಿ ಒಳಗೊಳ್ಳುವಿಕೆ?

ಭಾರತದಂತಹ ದೇಶದಲ್ಲಿ ಇಂದಿಗೂ ಬ್ಯಾಂಕಿಂಗ್, ವಿಮೆ ಮೊದಲಾದ ಹಣಕಾಸು ಸಂಬಂಧಿತ ವ್ಯವಸ್ಥೆಯ ಪರಿಚಯವೇ ಇಲ್ಲದ ಜನರಿದ್ದಾರೆ ಅನ್ನುವುದು ವಾಸ್ತವ ಸಂಗತಿ. ಈ ಬಗ್ಗೆ ದೇಶಾದ್ಯಂತ ನಡೆದ ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಮುಖವಾದ ವಿಷಯಗಳೇನೆಂದರೆ...ದೇಶದ 40 ಪ್ರತಿಶತ ಜನರು ಮಾತ್ರಾ ಬ್ಯಾಂಕು ಖಾತೆ ಹೊಂದಿದಾರಂತೆ, ಹತ್ತರಲ್ಲಿ ಒಬ್ಬರಿಗೆ ಮಾತ್ರ ಇನ್ಶೂರನ್ಸ್ ಇದೆಯಂತೆ, 13 ಪ್ರತಿಶತ ಜನರ ಬಳಿ ಮಾತ್ರ ಡೆಬಿಟ್ ಕಾರ್ಡುಗಳಿವೆಯಂತೆ... ಬ್ಯಾಂಕಿನ ಖಾತೆ, ಇನ್ಶೂರನ್ಸು, ಡೆಬಿಟ್ ಕಾರ್ಡು ಇಂತಹ ಸೌಲಭ್ಯಗಳನ್ನು ನಾಡಿನಲ್ಲಿ ಹೆಚ್ಚು ಹೆಚ್ಚು ಜನರು ಬಳಸುವಂತಾದರೆ ಒಟ್ಟೂ ದೇಶದ ಅಭಿವೃದ್ಧಿಗೆ ಇದು ವೇಗವನ್ನು ತಂದುಕೊಡಲಿದೆಯಂತೆ. ಬಹಳ ಸಂತೋಷ. ನಿಜಕ್ಕೂ ನಾವು ಹೇಳಕ್ಕೆ ಹೊರಟಿರೋ ವಿಷಯ ಏನಪ್ಪಾ ಅಂದ್ರೆ ಇಂತಹ ಒಂದು ಒಳಗೊಳ್ಳುವಿಕೆಯ ಯಾವುದೇ ಯೋಜನೆ ಪರಿಣಾಮಕಾರಿಯಾಗುವಂತೆ ಮಾಡಲು ಬೇಕಾದ ಸರಳವಾದ ತತ್ವವನ್ನೇ ಭಾರತ ಸರ್ಕಾರ ಗಮನಿಸುತ್ತಿಲ್ಲವಲ್ಲಾ ಅಂತಾ... ಹೌದೂ, ಇದು ಯಾವುದೇ ಗ್ರಾಹಕ ಸೇವೆಯು ಕಡೆಗಣಿಸಲಾಗದ ಭಾಷಾ ಆಯಾಮ.

ಏನಾಗಿದೆ? ಏನಾಗಬೇಕು?

ಭಾರತ ದೇಶದಲ್ಲಿ ಬ್ಯಾಂಕುಗಳು, ವಿಮಾ ವಿಭಾಗಗಳು ಹೆಚ್ಚಾಗಿ ಕೇಂದ್ರಸರ್ಕಾರ ಹಾಕಿರೋ ನೀತಿ ನಿಯಮಗಳನ್ನು ಅನುಸರಿಸುತ್ತವೆ. ಬ್ಯಾಂಕುಗಳೂ ಕೂಡಾ ಭಾರತದ ಭಾಷಾನೀತಿಯ ಒಳಗೇ ಕೆಲಸ ಮಾಡುತ್ತವೆ. ಹೀಗಾಗಿ ಎಂದಿನಂತೆ ಭಾರತದ ಯಾವ ಮೂಲೆಯ ಬ್ಯಾಂಕಿಗೆ ಹೋದರೂ ಹಿಂದಿ/ ಇಂಗ್ಲೀಷಿಗೆ ಮಣೆ. ದಯವಿಟ್ಟು ನೀವು ನಮ್ಮೂರಲ್ಲಿರೋ ಈ ಬ್ಯಾಂಕಿನ ಈ ಶಾಖೇಲಿ ಕನ್ನಡಾನೆ ಇರೋದು ಅನ್ನಬೇಡಿ. ನಾವು ಮಾತಾಡ್ತಾ ಇರೋದು ಭಾರತ ಅನುಸರಿಸುತ್ತಿರೋ ನೀತಿ ಬಗ್ಗೆ.

ಬ್ಯಾಂಕುಗಳಲ್ಲಿ ಹಿಂದೀ ಬಳಕೆಯನ್ನು ಹೀಗೆ ಹೀಗೆ ಹೆಚ್ಚಿಸಬೇಕು ಅನ್ನೋ ನೀತಿಯನ್ನು ಭಾರತ ಹೊಂದಿದೆ ಅನ್ನೋದೇ ನಮ್ಮ ಕಾಳಜಿಗೆ ಕಾರಣ. ಯಾಕೆ ಕನ್ನಡ ನಾಡಲ್ಲಿ ಕನ್ನಡದಲ್ಲಿ ವ್ಯವಹರಿಸದೇ ಇರೋದು ಅಪರಾಧ ಅಂತಾ ನಿಯಮ ಮಾಡಿಲ್ಲಾ ಅನ್ನೋದೇ ನಮ್ಮ ಕಳಕಳಿ. ಕನ್ನಡ ಮಾತ್ರಾ ಬಲ್ಲವನಿಗೆ ಬ್ಯಾಂಕಿನ ಒಂದು ಚೆಕ್ ಬರೆಯಕ್ಕೆ ಆಗಲ್ಲ. ವಿಮೆ ಮಾಡಿಸೋ ಅರ್ಜಿ ತುಂಬ್ಸಕ್ಕೆ ಆಗಲ್ಲಾ ಅನ್ನೋ ಪರಿಸ್ಥಿತಿಯನ್ನು ಕೇಂದ್ರಸರ್ಕಾರವೇ ಹುಟ್ಟುಹಾಕಿರುವಾಗ ಹೇಗೆ ಈ ಯೋಜನೆ ಯಶಸ್ವಿಯಾದೀತು ಅನ್ನೋದು ಯಕ್ಷಪ್ರಶ್ನೆ. ನಿಜಕ್ಕೂ ನೋಡಿದರೆ ಹಣಕಾಸು ವ್ಯವಹಾರದಲ್ಲಿ ನಂಬಿಕೆಯೇ ಅತಿಮುಖ್ಯ. ಹಾಗಾಗಿ ವ್ಯವಹಾರದ ಪ್ರತಿಯೊಂದು ಹೆಜ್ಜೆಯಲ್ಲೂ ಜನರ ಭಾಷೆ ಅಳವಡಿಕೆಯಾಗಬೇಕು ಗುರು. ಆಗ ಮಾತ್ರ Financial Inclusion ಎಂಬ ಕನಸು ನನಸಾಗಲು ಸಾಧ್ಯ. ಇಲ್ಲವಾದರೆ, ಹಣಕಾಸು ಸೇವೆಗಳು ಈಗಿನಂತೆ ಕೆಲವೇ ಜನರಿಗೆ ಮಾತ್ರ ಎಟುಕೋ ಹಣ್ಣಾಗಿ ಉಳಿಯುತ್ತೆ ಅಷ್ಟೇ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails