ಜನರೆಂದರೆ ಯಾರ್ ಯಾರು ಕಾಗೇರಿಯವರೇ?

ಇವತ್ತಿನ (೦೩.೦೭.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯ ಒಂಬತ್ತನೇ ಪುಟದಲ್ಲಿ ಮಾನ್ಯ ಶಿಕ್ಷಣಮಂತ್ರಿಗಳಾದ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರ "ಬುಲೆಟ್ ಸಂದರ್ಶನ"ವೊಂದು ಪ್ರಕಟವಾಗಿದೆ. ಸರ್ಕಾರ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇದು ಕುತೂಹಲಕರವಾಗಿದ್ದು, ಒಂದು ಥರ ಸರ್ಕಾರದ ಮುಂದಿನ ನಡೆಯ ದಿಕ್ಸೂಚಿಯೂ ಆಗಿದೆ. ಇಡೀ ಸಂದರ್ಶನದ ಪ್ರಮುಖ ಮಾತುಗಳು ಇಂತಿವೆ.

ಸಾಹಿತಿಗಳಷ್ಟೇ... ಜನತೆಯಲ್ಲ!

ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ತಾವು ಸಿದ್ಧ ಎಂಬುದನ್ನು ಮಂತ್ರಿಗಳು ಸಾಬೀತು ಮಾಡುತ್ತಿರುವಂತೆ ಇವರ ಮಾತುಗಳಿವೆ. ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಸಾಹಿತಿಗಳು ಮಾತ್ರಾ ವಿರೋಧ ತೋರಿಸಿದ್ದಾರೆ, ಇವರಷ್ಟೇ ನಾಡಿನ ಜನತೆಯಲ್ಲ... ಹಳ್ಳಿಗಾಡಿನ ಜನರೂ ಕೂಡಾ ಅವರ ಅಭಿಪ್ರಾಯ ಹೇಳಲಿ... ಇತ್ಯಾದಿಯಾಗಿ ಮಂತ್ರಿಗಳು ಮಾತಾಡಿದ್ದಾರೆ. ಇದಲ್ಲದೆ ಮಾಧ್ಯಮಗಳಿಗೆ ಜನರ ಅಭಿಪ್ರಾಯ ನಿರೂಪಿಸುವ ಹೊಣೆಗಾರಿಕೆಯನ್ನೂ ವಹಿಸಿದ್ದಾರೆ. ಈ ಪ್ರಯತ್ನವು ಸಾಹಿತಿಗಳ ಬಾಯಿ ಮುಚ್ಚಿಸುವ "ನಿಮ್ಮ ಮಕ್ಕಳು ಇಂಗ್ಲೀಶ್ ಮಾಧ್ಯಮದಲ್ಲಿ ಓದಬಹುದು, ಬಡವರ ಮಕ್ಕಳು ಓದಬಾರದಾ?" ಎಂಬಂತಹ ಮತ್ತೊಂದು ಅಸ್ತ್ರವಾಗಿದೆ. ಇರಲಿ... ಕಾಗೇರಿಯವರು ಆಡಿರುವ ಮಾತುಗಳತ್ತ ನೋಡೋಣ.

ಜನರ ಶಿಕ್ಷಣದ ಬಗ್ಗೆ ಮಾತಾಡಬೇಕಾದವರು ಯಾರು?

ಕಾಗೇರಿಯವರು ಹೇಳಿದ ಹಾಗೆ ಸಾಹಿತಿಗಳು ಮಾತ್ರವೇ ಕನ್ನಡ ಜನರೆಲ್ಲಾ ಅಲ್ಲಾ ಸರಿ, ಹಾಗಾದ್ರೆ ನಾಡಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತಾಡೋ, ದಿಕ್ಕುತೋರಿಸೋ ಹೊಣೆಗಾರಿಕೆ ಯಾರದ್ದು? ನಮ್ಮಂಥಾ ಸಾಮಾನ್ಯರು ಮಾತಾಡುದ್ರೂ ಕಾಗೇರಿಯವರು ಮೊದಲನೇ ಪ್ರಶ್ನೆಯಾಗಿ "ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೀರಾ?" ಅಂದಾರು... ಮತ್ತೂ ಮುಂದುವರೆದು "ನೀವು ಹೇಳೋದು ಇಡೀ ಕನ್ನಡ ಜನರ ಮಾತಾ?" ಅಂದಾರು. ತಾಯ್ನುಡಿಯಲ್ಲಿ ಕಲಿಕೆ ಒಳ್ಳೇದು ಅಂತಾಗಲೀ, ಸರ್ಕಾರವೇ ಇಂಗ್ಲೀಶ್ ಶಾಲೆ ತೆಗೀಬಾರದು ಅನ್ನೋಕಾಗಲೀ ಸರ್ಕಾರ ನಿರ್ಧಾರ ತೆಗೆದುಕೊಳ್ಳೋಕೆ ಶಿಕ್ಷಣತಜ್ಞರು, ಸಮಾಜತಜ್ಞರೂ ಮುಂತಾದವರ ಸಲಹೆ ತೆಗೆದುಕೊಳ್ಳಬೇಕಲ್ಲವೇ? ಏನಂತಾರೆ ಕಲಿಕೆಯ ಬಗ್ಗೆ ಪ್ರಪಂಚದ ತಜ್ಞರು? ಏನನ್ನುತ್ತೆ ಯುನೆಸ್ಕೋ? ಪ್ರಪಂಚದಲ್ಲಿರೋ ನಾನಾ ದೇಶಗಳಲ್ಲಿ ಎಂಥಾ ವ್ಯವಸ್ಥೆಯಿದೆ? ಇವೆಲ್ಲವನ್ನೂ ಅಧ್ಯಯನ ಮಾಡಿ ಸರ್ಕಾರ ನಿರ್ಧಾರ ತೊಗೊಳ್ಳೋಕೆ ಮುಂದಾಗುತ್ತೇನು? ಒಂದು ನಿರ್ಧಾರ ತೊಗೊಂಡು... ಅದನ್ನು ವಿರೋಧ ಮಾಡಿದೋರುನ್ನೆಲ್ಲಾ ಒಂದಲ್ಲಾ ಒಂದು ಮಾತೆತ್ತಿ ಕೆಳಗೆ ಮಾಡಿ ತಾವಂದುಕೊಂಡಿದ್ದನ್ನು ಜಾರಿ ಮಾಡೋದ್ರಲ್ಲಿ ಈ ಸರ್ಕಾರಕ್ಕೆ ಈಗಾಗಲೇ ಅನುಭವ ಇದೆಯಲ್ಲಾ? ಆಗ ತಿರುವಳ್ಳುವರ್ ಪ್ರತಿಮೆ ನಿಲ್ಲಿಸಬೇಡಿ ಅಂದಾಗ ಜನರ ಹೋರಾಟದ ಕತ್ತು ಹಿಸುಕಿ, ಸಾಹಿತಿಗಳಿಂದ ಪತ್ರಿಕೆಗಳಲ್ಲಿ ದಿನಕ್ಕೊಂದು ಪತ್ರ ಬರೆಸಿ, ಅದನ್ನೇ ಜನಾಭಿಪ್ರಾಯ ಅಂದಿದ್ದನ್ನು ಜನರು ಮರೀತಾರಾ ಗುರೂ? ಪಾಪಾ! ಆಗ ಈ ಸಾಹಿತಿಗಳೇ ಅವರಿಗೆ ಇಡೀ ಕನ್ನಡ ಜನತೆ ಆಗಿದ್ರಾ?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails