ಜನಲೋಕಪಾಲ್ ಮತ್ತು ಭ್ರಷ್ಟಾಚಾರ ನಿರ್ಮೂಲನೆ


ಭಾರತೀಯರಿಗೆ, ಸದ್ಯಕ್ಕೆ ಭ್ರಷ್ಟ ರಾಜಕಾರಣಿಗಳ ವಿರುದ್ಧವಾಗಿ ಬ್ರಹ್ಮಾಸ್ತ್ರವಾಗಿ ಕಾಣಿಸುತ್ತ ಇರೋದು, ಪರಮ ಪ್ರಾಮಾಣಿಕ ಎನ್ನಿಸಿರುವ, ಮಾಜಿ ಸೈನಿಕರಾಗಿರುವ, ಅನೇಕ ಸಾಮಾಜಿಕ ಹೋರಾಟಗಳ ಮಹಾಸೇನಾನಿ ಶ್ರೀ ಅಣ್ಣಾ ಹಜ಼ಾರೆಯವರು. ಕಳೆದ ಏಪ್ರಿಲ್‍ನಲ್ಲಿ ಇವರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೂತಿದ್ದು "ಜನಲೋಕ್ ಪಾಲ್ ಮಸೂದೆ"ಯನ್ನು ಜಾರಿ ಮಾಡಲು ಒತ್ತಾಯಿಸಿ. ಕೇಂದ್ರಸರ್ಕಾರ ಅಣ್ಣಾ ಬೇಡಿಕೆಗಳಿಗೆ ಮಣಿದು ಲೋಕ್‍ಪಾಲ್ ಮಸೂದೆಯ ಕರಡು ಸಮಿತಿಯನ್ನು ರಚಿಸಿ ಅದರಲ್ಲಿ ಸಂಸದರಲ್ಲದ ಐವರನ್ನು ಸೇರಿಸಿಕೊಂಡಿತು. ಈ ಸಮಿತಿಯು ಕರಡು ಪ್ರತಿ ಸಿದ್ಧಪಡಿಸುವಲ್ಲಿ ಒಮ್ಮತಕ್ಕೆ ಬರುವಲ್ಲಿ ಇನ್ನೂ ಸಫಲವಾಗಿರಲಿಲ್ಲ. ಅಷ್ಟರಲ್ಲಿ ಬಾಬಾ ರಾಮ್‍ದೇವ್ ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಅದನ್ನು ಸರ್ಕಾರ ಎದುರಿಸಿದ ರೀತಿಯನ್ನು ಕಂಡು, ಸಮಿತಿಯ ಐವರು ಸಂಸದೇತರ ಸದಸ್ಯರು ಸಮಿತಿಯ ಕರಡು ತಯಾರಿಕಾ ಸಭೆಯನ್ನು ಬಹಿಷ್ಕರಿಸಿದರು. ಕೊನೆಗೆ ಸರ್ಕಾರ ಸಂಸತ್ತಿನ ಮುಂದೆ ತನ್ನದೇ ಲೋಕ್‍ಪಾಲ್ ಮಸೂದೆಯ ಕರಡನ್ನು ಮಂಡಿಸಿತು. ಇದನ್ನು ಒಪ್ಪದ ಸಮಿತಿಯ ಅಣ್ಣಾ ಹಜ಼ಾರೆಯವರು ಇದೀಗ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಾ ಕುಳಿತಿದ್ದಾರೆ. ಏನ್‍ಗುರು, ಏಪ್ರಿಲ್ ತಿಂಗಳಲ್ಲಿ ಅಣ್ಣಾ ಉಪವಾಸವನ್ನು ಬೆಂಬಲಿಸಿ ಒಂದು ಬರಹವನ್ನು ಪ್ರಕಟಿಸಿತ್ತು.. "ಈ ಹೋರಾಟ ಗೆಲ್ಲಲೇ ಬೇಕು" ಎಂದು. ಹೌದು, ಭ್ರಷ್ಟಾಚಾರದ ವಿರುದ್ಧದ ಹೋರಾಟ ಗೆಲ್ಲಲೇಬೇಕು. ಆದರೆ ದಿನಗಳೆದಂತೆ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಮತ್ತೊಂದು ಮಗ್ಗುಲಿನಿಂದ ಹೋರಾಟವನ್ನು ನೋಡಿದಾಗ ಬೇರೆಯೇ ಆಯಾಮ ಕಾಣುತ್ತಿದೆ! ನಮ್ಮ ನಿಲುವಿನಲ್ಲಿ ಭ್ರಷ್ಟಾಚಾರ ಅಳಿಯಬೇನ್ನುವುದರ ಬಗ್ಗೆ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಅಣ್ಣಾ ಹಜ಼ಾರೆಯವರು ಅನುಸರಿಸುತ್ತಿರುವ ಕ್ರಮ, ಭ್ರಷ್ಟಾಚಾರ ತಡೆಗೆ ಯೋಚಿಸುತ್ತಿರುವ ಒಂಬಡ್ಸ್‍ಮನ್ ಹುದ್ದೆ ಸೃಷ್ಟಿಯ ಪರಿಣಾಮಕಾರಿತನದ ಬಗ್ಗೆ, ಭ್ರಷ್ಟಾಚಾರವನ್ನು ಅಳಿಸಲು ಸಾಗಬೇಕಾದ ದಾರಿಯ ಬಗ್ಗೆ... ಬೇರೆಯೇ ಅನಿಸಿಕೆ ಮೂಡುತ್ತಿದೆ.

ಭ್ರಷ್ಟಾಚಾರ ಅಳಿಯಬೇಕು!

ಅಣ್ಣಾ ಮತ್ತವರ ಬೆಂಬಲಿಗರ ಮೂಲೋದ್ದೇಶವಾದ ಭ್ರಷ್ಟಾಚಾರ ಅಳಿಯಬೇಕು, ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕೂಡಿಟ್ಟಿರುವ ಭಾರತದ ಹಣ ಹಿಂತಿರುಗಿ ತರಬೇಕೆನ್ನುವ ಬೇಡಿಕೆಯ ಬಗ್ಗೆ ಎರಡನೇ ಮಾತಿಲ್ಲ. ಭಾರತವು ಟ್ರಾನ್ಸ್‍ಪರೆನ್ಸಿ ಇಂಟರ್ ನ್ಯಾಶನಲ್ ಸಂಸ್ಥೆಯು ಬಿಡುಗಡೆ ಮಾಡಿರುವ ೨೦೧೦ರ ಪ್ರಪಂಚದಲ್ಲಿ ಭ್ರಷ್ಟಾಚಾರ ಕಡಿಮೆ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ೮೭ನೇ ಸ್ಥಾನದಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಡೆನ್ಮಾರ್ಕ್, ಸಿಂಗಾಪುರ್, ಆಸ್ಟೇಲಿಯಾ, ನ್ಯೂಜಿಲಾಂಡ್ ಮೊದಲಾದವು ಇವೆ. ಈ ಪಟ್ಟಿಯ ಮೇಲಿನ ಸ್ಥಾನದಲ್ಲಿ ಭಾರತ ಇರಬೇಕೆನ್ನುವುದು ನಮ್ಮಾಸೆಯೂ ಹೌದು. ದೇಶದ ಜನಸಾಮಾನ್ಯರು ಭ್ರಷ್ಟಾಚಾರದಿಂದ ಅನುಭವಿಸುತ್ತಿರುವ ಪಾಡು ಇಲ್ಲವಾಗಬೇಕೆನ್ನುವ ಬಗ್ಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ.

ಆದರೆ ಜನ್‍ಲೋಕಪಾಲ್ ವ್ಯವಸ್ಥೆಯು ಇಂಥಾ ಗುರಿ ಮುಟ್ಟಲು ಪರಿಣಾಮಕಾರಿಯಾಗಬಲ್ಲುದೇ? ಇಂತಹ ಮಸೂದೆ ರೂಪಿಸಲು ಹೋರಾಡುತ್ತಿರುವವರು ಅನುಸರಿಸುತ್ತಿರುವ ಮಾರ್ಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಾರದೇ? ಲೋಕಪಾಲರೆಂಬ ಪೋಲೀಸಿನ ಸೃಷ್ಟಿಗಿಂತಲೂ ಭ್ರಷ್ಟಾಚಾರ ಇಲ್ಲವಾಗಿಸಲು ಪರಿಣಾಮಕಾರಿಯಾದ ವಿಧಾನವಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕಂಡುಕೊಳ್ಳಬೇಕಾಗಿದೆ.

ಭ್ರಷ್ಟರನ್ನು ಶಿಕ್ಷಿಸುವ ಸಾಧನಕ್ಕಿಂತ ಭಷ್ಟತನ ಮಾಡಲಾಗದಂತಹ ವ್ಯವಸ್ಥೆ ಪರಿಣಾಮಕಾರಿ!

ಭ್ರಷ್ಟಾಚಾರ ಇಲ್ಲವಾಗಿಸಲು ಒಂದು ದಾರಿ ಭ್ರಷ್ಟರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದು. ಇದರಲ್ಲಿನ ತೊಡಕೆಂದರೆ ಹಾಗೆ ಶಿಕ್ಷಿಸುವವರು ಯಾರು? ಅವರೂ ಭ್ರಷ್ಟರಾಗುವುದಿಲ್ಲ ಎನ್ನಲು ಏನು ಭರವಸೆ? ಆಕಸ್ಮಾತ್ ಅವರೂ ಭ್ರಷ್ಟರಾದರೆ ಮುಂದೇನು? ಕಳ್ಳರನ್ನು ಹಿಡಿಯಲು ಪೊಲೀಸ್, ಪೊಲೀಸ್ರೇ ಕಳ್ಳರಾದರೆ ಅಂತಹಾ ಕಳ್ಳ ಪೊಲೀಸ್ರನ್ನು ಹಿಡಿಯಲು ಮತ್ತೊಂದು ಪೊಲೀಸ್.. ಅವರನ್ನು ಹಿಡಿಯ್ತಲು ಮತ್ತೊಂದು ಇಲಾಖೆ... ಹೀಗೆ ಕೊನೆಯಿರದ ಸುಳಿಯಿದು. ಆದರೆ ಇಂತಹಾ ವ್ಯವಸ್ಥೆಯೇ ಬೇಡವೇ? ಬೇಕು... ಇಂತಹ ವ್ಯವಸ್ಥೆಯೂ ಬೇಕು. ಅದು ಭ್ರಷ್ಟಾಚಾರ ನಿಯಂತ್ರಣದ ವ್ಯವಸ್ಥೆಯ ಒಂದು ಅಂಗವಾಗಿ ಅಷ್ಟೆ. ಆದರೆ ನಮಗೆ ಬೇಕಿರುವುದು ಇದಕ್ಕಿಂತಾ ಪರಿಣಾಮಕಾರಿಯಾದ ದಾರಿ. ಅದು ಭ್ರಷ್ಟತೆಗೆ ಅವಕಾಶವನ್ನೇ ಇಲ್ಲವಾಗಿಸುವ ವ್ಯವಸ್ಥೆ. ಇದರಲ್ಲಿ ತಂತ್ರಜ್ಞಾನದ ಉಪಯೋಗವನ್ನು ಬಳಸಿಕೊಳ್ಳುವುದು ಒಂದೊಳ್ಳೆ ಸಾಧನ. ಪ್ರತಿಯೊಂದನ್ನೂ ತಾನೇ ಮಾಡುತ್ತೇನೆನ್ನುವ ಸರ್ಕಾರ ಸರಿಯಾದ ಕಟ್ಟುಪಾಡು, ನೀತಿ ನಿಯಮ ರೂಪಿಸಲಷ್ಟೇ ತನ್ನ ಪಾತ್ರವನ್ನು ಸೀಮಿತಿಗೊಳಿಸಿಕೊಳ್ಳುವುದು ಮತ್ತೊಂದು ವಿಧಾನ.
ಉದಾಹರಣೆಗೆ ಹೇಳಬೇಕೆಂದರೆ ರಸ್ತೆಗಳಲ್ಲಿ ಅಲ್ಲಲ್ಲಿ ಜಂಕ್ಷನ್‍ಗಳಿದ್ದು ಪ್ರತಿಯೊಂದಕ್ಕೂ ಟ್ರಾಫಿಕ್ ಸಿಗ್ನಲ್ ಹಾಕಿ, ಅದನ್ನು ದಾಟುವವರಿಗೆ ದಂಡ ಹಾಕುವ ಪೋಲೀಸನನ್ನು, ಅವನು ಭ್ರಷ್ಟಾಚಾರ ಮಾಡದಂತೆ ತಡೆಯಲು ಇನ್ಸ್‍ಪೆಕ್ಟರ್‍‍ನನ್ನು ನೇಮಿಸುತ್ತಾ ಹೋಗುವುದಕ್ಕಿಂತಾ ದಾರಿಯಲ್ಲಿ ಸಿಗ್ನಲ್‍ಗಳೇ ಇರದ, ಫ್ಲೈ ಓವರ್‌ಗಳನ್ನು ನಿರ್ಮಿಸುವುದು ಹೇಗೆ ಹೆಚ್ಚು ಪರಿಣಾಮಕಾರಿಯೋ ಹಾಗೇ ಭ್ರಷ್ಟತೆಗೆ ಅವಕಾಶ ನೀಡದ... ಸರ್ಕಾರದ ಹಸ್ತಕ್ಷೇಪ ಕಡಿಮೆಯಿರುವ... ಲೈಸೆನ್ಸ್ ರಾಜ್‍ ಇಲ್ಲದ ವ್ಯವಸ್ಥೆಯನ್ನು ಕಟ್ಟುವುದು ಹೆಚ್ಚು ಪರಿಣಾಮಕಾರಿಯಾದ ರೀತಿ. ಇದಾಗದ ಹೊರತು ಲೋಕಪಾಲರಂತಹ ಎಷ್ಟೇ ಸಂಸ್ಥೆಗಳು ಬಂದರೂ, ದಿನಕ್ಕೆ ನೂರಾರು ಭ್ರಷ್ಟ್ರರನ್ನು ಜೈಲಿಗಟ್ಟಿದರೂ, ಭ್ರಷ್ಟರಿಗೆ ಮರಣದಂಡನೆಯೇ ಶಿಕ್ಷೆಯೆಂದರೂ ಹೆಚ್ಚು ಪರಿಣಾಮವಾಗದು. ಯಾಕೆಂದರೆ ‘ದುಡ್ಡು ತಿನ್ನುವ ಅವಕಾಶವಿದೆ, ತಿಂದರೆ ತಲೆ ತೆಗೆಯುತ್ತೇವೆ’ ಎನ್ನುವ ವ್ಯವಸ್ಥೆಯಿದ್ದರೆ ತಲೆ ಉಳಿಸಿಕೊಂಡು ತಿನ್ನುವ ಮತ್ತೊಂದು ಕಳ್ಳದಾರಿ ಹುಡುಕುತ್ತಾರೆಯೇ ಹೊರತು ಶಿಕ್ಷೆಯ ಭಯದಿಂದ ತಿನ್ನದೇ ಇರುವುದನ್ನಲ್ಲ!

ಅಣ್ಣಾ ಹೋರಾಟದ ಬಗ್ಗೆ!

ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?

ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡು ಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ!

3 ಅನಿಸಿಕೆಗಳು:

Anonymous ಅಂತಾರೆ...

ಅಧಿಕಾರ ವಿಕೇಂದ್ರೀಕರಣ, ರಾಜ್ಯಗಳಿಗೆ ಹೆಚ್ಚು ಹೆಚ್ಚು ಸ್ವಾಯುತ್ತತೆ, ಅನಿಯಂತ್ರಿತ ವಲಸೆ ತಡೆ, ಮೂಲ ಸಂವಿಧಾನದಂತೆ ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸುವುದು ಬಹಳ ಮುಖ್ಯವಾದುವು. ಇವುಗಳು ಸಾಕಷ್ಟು ಮಟ್ಟಿಗೆ ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ. ಹೊಸ ಹೊಸ ಕಾನೂನುಗಳಿಂದ ಭ್ರಷ್ಟಾಚಾರ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಈ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳದಿದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ಜತೆಗೆ ಇನ್ನೂ ಅನೇಕ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
-ಹರಿಹರ

Arpith ಅಂತಾರೆ...

Tolagali tolagali bhrashtaachaara tolagali.

Rashmi Rao ಅಂತಾರೆ...

vibhinnavagiruvanthaha mahithi.... ondu hosa rithiyalli yochisuvanthe maditu....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails