ಮೆಟ್ರೋಲಿ ಹಿಂದೀ: ಜನರ ದೂರು ಮತ್ತು ಅಧಿಕಾರಿಗಳ ಜೋರು!!

( ಫೋಟೋ ಕೃಪೆ: http://www.skyscrapercity.com/showthread.php?p=83403565)

ನಮ್ಮ ಮೆಟ್ರೋದಲ್ಲಿ ಹಿಂದೀಗೆ ಸ್ಥಾನ ಕೊಟ್ಟಿರೋದ್ರು ಬಗ್ಗೆ ಕಳವಳ ವ್ಯಕ್ತಪಡಿಸಿ ಸಂಬಂಧಿಸಿದ "ನಮ್ಮ ಮೆಟ್ರೋ" ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದ ಕೆಲ ಓದುಗರು ಮೆಟ್ರೋದಿಂದ ಬಂದಿರೋ ಉತ್ತರಗಳನ್ನು ನೋಡಿ ದಂಗಾಗಿದ್ದಾರೆ ಗುರೂ! ಬಳಗದ ಜೊತೆ ನಮ್ಮ ಮೆಟ್ರೋ ಮೇಲಧಿಕಾರಿಗಳ ಮಿಂಚೆಯನ್ನು ಹಂಚಿಕೊಂಡಿರುವ ಈ ಗೆಳೆಯರ ಅನುಭವ ನಿಜಕ್ಕೂ ಸಾರ್ವಜನಿಕ ಸೇವೆಯಲ್ಲಿರುವವರ ಮನಸ್ಥಿತಿ ಹೀಗೂ ಇರಬಹುದಾ? ಎನ್ನುವ ಅನುಮಾನ ಹುಟ್ಟಿಸುವಂತಿದೆ.

ಉದ್ಧಟತನದ ಉತ್ತರಗಳು!

"ಕನ್ನಡದಲ್ಲಿ ನಿಮಗೆ ಸೇವೆ ಸಿಗುತ್ತಿರುವ ತನಕ ನಿಮಗೆ ಅತೃಪ್ತಿ ಇರಬಾರದು!
ಇನ್ಮುಂದೆ ನನಗೆ ನೀವು ಪತ್ರ ಬರೆಯೋ ಅಗತ್ಯವಿಲ್ಲ!
ಬೇಕಾದ್ರೆ ನ್ಯಾಯಾಲಯಕ್ಕೆ ಹೋಗಿ!
ಸಂವಿಧಾನದಲ್ಲಿ ಬರೆದಿರೋದ್ರು ಬಗ್ಗೆ ನಿಮ್ಮ ಕಾನೂನು ಸಲಹೆಗಾರರಿಂದ ಸಲಹೆ ಪಡ್ಕೊಂಡು ಸರಿಯಾಗಿ ತಿಳ್ಕೊಳ್ಳಿ !
ನಿಮ್ಮ ಹಿಂದೀ ದ್ವೇಷವನ್ನು ಬಿಡಿ!
ಹಿಂದೀ ದ್ವೇಷದ ಚಳವಳಿಯನ್ನು ಬಿಡಿ! 
ಸ್ವಲ್ಪ ಸಹನಶೀಲತೆಯನ್ನು ಮೈಗೂಡಿಸಿಕೊಳ್ಳಿ!
ನಾವು ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ಸಾಧನಗಳಲ್ಲಿ ಒಂದಾದ ತ್ರಿಭಾಷಾಸೂತ್ರದ ನೀತಿಯನ್ನು ಅಳವಡಿಸಿಕೊಂಡಿದ್ದೇವೆ.
ಇಲ್ಲಿನ ಸೆಕ್ಯೂರಿಟಿ ಗಾರ್ಡ್ ಕನ್ನಡದಲ್ಲಿ ತರಬೇತಿ ಪಡೆದಿಲ್ಲ. ಅವನನ್ನು ಮಾತಾಡಿಸಿ ಅವನ ಕರ್ತವ್ಯಕ್ಕೆ ತೊಂದರೆ ಮಾಡಿದ್ದೀರಿ, ನಿಮ್ಮ ದೂರೇನಿದ್ದರೂ ಸಂಬಂಧಿಸಿದ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಹತ್ತಿರ ಮಾತಾಡಿಕೊಳ್ಳಿ"
ದೇಶದ ಏಕತೆಗಾಗಿ ಹಿಂದೀನಾ ಹಾಕಿದೀವಿ... ತೆಪ್ಪಗಿರಿ ಎನ್ನುವ ಧ್ವನಿಯಲ್ಲಿ ಹೀಗೆಲ್ಲಾ ಉತ್ತರ ಬರೆದಿರೋದು ಮೆಟ್ರೋ ಸಂಸ್ಥೆಯ ಯಾವುದೋ ಸಣ್ಣ ಸ್ತರದ ಅಧಿಕಾರಿಯಲ್ಲ... ಅದು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀ ಸಿವಸೈಲಂ ಅವರದ್ದು! ಅಬ್ಬಾ ಎಂತಹ ಸೌಜನ್ಯಾ ಅಲ್ವಾ? ಸಾಹೇಬರ ಉತ್ತರದ ಧಾಟಿಯನ್ನು ಬದಿಗಿಟ್ಟು ಅವರು ನೀಡಿರುವ ಕಾರಣಗಳತ್ತ ಕಣ್ಣು ಹಾಯಿಸಿದರೆ ಮುಖ್ಯವಾಗಿ ಹಿಂದೀ ಬಳಸಲು ಅವರು ನೀಡಿರುವ ಸಮರ್ಥನೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಬಗ್ಗೆ, ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರ ಹಣ ಹೂಡಿರುವ ಕಾರಣದಿಂದಾಗಿಯೂ, ದೇಶದ ಒಗ್ಗಟ್ಟಿಗಾಗಿಯೂ ಹಿಂದೀಯನ್ನು ಬಳಸಿದ್ದೇವೆ ಎಂದಿದ್ದಾರೆ. ನಮ್ಮ ನಾಡಿನಲ್ಲಿ ನಮ್ಮದಲ್ಲದ ಭಾಷೆ ಯಾಕೆ ಬಳಸಿದ್ದೀರಿ ಎಂದರೆ ಅದಕ್ಕೆ ಹಿಂದೀ ದ್ವೇಷ ಚಳವಳಿ ಎನ್ನುವ ಹೆಸರಿಡುವ ಅಧಿಕಾರವನ್ನು ಇವರಿಗ್ಯಾರು ಕೊಟ್ಟರೋ ಕಾಣೆವು! ಸುರಕ್ಷತಾ ಸಿಬ್ಬಂದಿಗೆ ಕನ್ನಡ ಬಾರದಿರುವುದನ್ನು ಸಮರ್ಥಿಸುತ್ತಾ ಅವರನ್ನು ಮಾತಾಡಿಸಿ ಕರ್ತವ್ಯಕ್ಕೆ ತೊಂದರೆ ಕೊಟ್ಟಿದ್ದೀರಿ ಎಂದು ಪ್ರತಿ ದೂರುವುದರ ಹಿಂದೆ ಹೇಗಾದರೂ ಸರಿ, ಬಾಯಿ ಮುಚ್ಚಿಸುವ ಮನಸ್ಥಿತಿಯಲ್ಲದೆ ಬೇರೇನೂ ಇದ್ದಂತಿಲ್ಲ... ನಾಳೆ ಯಾವುದಾದರೂ ಅಪಾಯಕಾರಿ ಸನ್ನಿವೇಶವುಂಟಾದರೆ ನಾವು ಸೆಕ್ಯುರಿಟಿಗೆ ತಿಳಿಸಬೇಕೋ ಬೇಡವೋ? ಕನ್ನಡ ಬಾರದವರಿಗೆ ಹೇಗೆ ತಿಳಿಸಬೇಕು? ಎನ್ನುವ ಬಗ್ಗೆ ಕಾಳಜಿಯಾಗಲೀ ಆಲೋಚನೆಯಾಗಲೀ ಇವರುಗಳಿಗೆ ಇದ್ದಂತಿಲ್ಲ!

ತ್ರಿಭಾಷಾ ಸೂತ್ರ ರಾಷ್ಟ್ರೀಯ ನೀತಿಯೇ? ಮೆಟ್ರೋಗೆ ಅನ್ವಯಿಸುವುದೇ?

ಭಾರತದ ಸಂವಿಧಾನದ ಭಾಗ XVIIರಲ್ಲಿ ಭಾಷಾನೀತಿಯ ಬಗ್ಗೆ ಹೇಳಲಾಗಿದೆ. ಇದರಂತೆ ಹಿಂದೀ ಮತ್ತು ಇಂಗ್ಲೀಷುಗಳನ್ನು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳನ್ನಾಗಿ ಘೋಷಿಸಲಾಗಿದೆ. (ಇಂಗ್ಲೀಷು ಸೇರಿಕೊಂಡ/ ಇಂದಿಗೂ ಉಳಿದುಕೊಂಡ ಕಥನ ಬೇರೆಯದೇ ಇದೆ). ಇದರ ಅಂಗವಾಗೇ ೧೯೬೭ರಲ್ಲಿ ರೂಪುಗೊಂಡು ೧೯೬೮ರಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರವಾದದ್ದೇ "ಆಡಳಿತ ಭಾಷಾ ನಿರ್ಣಯ, ೧೯೬೮". ಇದರ ಅಂಗವಾಗಿಯೇ "ತ್ರಿಭಾಷಾ ಸೂತ್ರ" ರೂಪುಗೊಂಡಿತು. ಮೂಲತಃ ಕೇಂದ್ರಸರ್ಕಾರಿ ನೌಕರಿಯ ಪ್ರವೇಶ ಪರೀಕ್ಷೆಗಳನ್ನು ಹಿಂದೀ/ ಇಂಗ್ಲೀಷುಗಳಲ್ಲಿ ಮಾತ್ರಾ ನಡೆಸುವುದಕ್ಕೆ ಅನೇಕ ಹಿಂದೀಯೇತರ ರಾಜ್ಯಗಳು ವಿರೋಧ ಸೂಚಿಸಿ, ಹೋರಾಟ ನಡೆಸಿದ್ದರಿಂದ ಹುಟ್ಟಿಕೊಂಡ ರಾಜೀಸೂತ್ರ "ತ್ರಿಭಾಷಾ ಸೂತ್ರ" ಎಂದರೆ ತಪ್ಪಾಗಲಾರದು. ಕೇಂದ್ರಸರ್ಕಾರಿ ನೌಕರಿಗಳ ಪರೀಕ್ಷೆಗಳನ್ನು ಎಂಟನೇ ಪರಿಚ್ಛೇಧದಲ್ಲಿ ಪಟ್ಟಿ ಮಾಡಿರುವ ಭಾಷೆಗಳಲ್ಲೂ ನಡೆಸಲು ಅವಕಾಶ ನೀಡುವ ಈ ನಿರ್ಣಯವು "ರಾಜ್ಯಸರ್ಕಾರಗಳ ಜೊತೆ ಸಮಾಲೋಚಿಸಿ" ರಾಷ್ಟ್ರೀಯ ಏಕತೆಯನ್ನು ಮೂಡಿಸಲು ತ್ರಿಭಾಷಾ ಸೂತ್ರವನ್ನು ಜಾರಿಮಾಡಬೇಕು ಎಂದು ಹೇಳಿದೆ. ತ್ರಿಭಾಷಾ ಸೂತ್ರದ ಅನ್ವಯವಾಗಿ ಹಿಂದೀ ಭಾಷಿಕ ಪ್ರದೇಶಗಳ ಮಕ್ಕಳು ಹಿಂದೀ - ಇಂಗ್ಲೀಷ್ ಜೊತೆಯಲ್ಲಿ ಇನ್ನೊಂದು ಭಾರತೀಯ ಭಾಷೆಯನ್ನು (ವಿಶೇಷವಾಗಿ ದಕ್ಷಿಣ ಭಾರತೀಯ ಭಾಷೆಯನ್ನು) ಕಲಿಯತಕ್ಕದ್ದು ಮತ್ತು ಅಂತೆಯೇ ಹಿಂದೀಯೇತರ ರಾಜ್ಯಗಳ ಮಕ್ಕಳು ರಾಜ್ಯಭಾಷೆ - ಇಂಗ್ಲೀಷ್ - ಹಿಂದೀಯನ್ನು ಕಲಿಯತಕ್ಕದ್ದು ಎನ್ನಲಾಗಿದೆ. ಈ ನಿರ್ಣಯದಲ್ಲಿ ಕೇಂದ್ರಸರ್ಕಾರ ಹಣ ಹೂಡುವ ಸಾರ್ವಜನಿಕ ಯೋಜನೆಗಳಲ್ಲಿ ತ್ರಿಭಾಷಾ ಸೂತ್ರ ಇರಬೇಕು ಎಂದು ಎಲ್ಲಿದೆಯೋ ಹುಡುಕಿದರೂ ಸಿಗುತ್ತಿಲ್ಲಾ ಗುರೂ!

ಕೇಂದ್ರದ ಒಂದು ೨,೦೦೦ ಕೋಟಿಗೆ ಹಿಂದೀ, ರಾಜ್ಯದ ವಾರ್ಷಿಕ ೮೦,೦೦೦ ಕೋಟಿಗೆ?

ಕೇಂದ್ರಸರ್ಕಾರ ಇಂಥದ್ದೊಂದು ಸೂಚನೆಯನ್ನು ಮೆಟ್ರೋಗೆ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೆಟ್ರೋದ ಶ್ರೀ ಸಿವಸೈಲಂ ಅವರು ಮಾತ್ರಾ, ತಾವು ಭಾರತದ ಏಕತೆಯ ಹರಿಕಾರರೆನ್ನುವಂತೆ ಮಾತಾಡುತ್ತಾ ಕನ್ನಡಿಗರಿಗೆ ಸಹಿಷ್ಣುತೆಯನ್ನು ಬೋಧಿಸುತ್ತಿರುವುದನ್ನು ಕಂಡಾಗ ವಿಪರ್ಯಾಸವೆನ್ನಿಸುತ್ತದೆ. ಆದರೂ ಮೆಟ್ರೋ ಯೋಜನೆಯಲ್ಲಿ ಸುಮಾರು ೩೦% ಹೂಡಿಕೆ ಹೊಂದಿರುವ ಕಾರಣದಿಂದಲೇ ಇಲ್ಲಿ ಹಿಂದೀ ಇರಬೇಕು ಎನ್ನುವುದಾದರೆ ಪ್ರತಿವರ್ಷ ಸುಮಾರು ೮೦,೦೦೦ ಕೋಟಿ ತೆರಿಗೆಯನ್ನು ಕರ್ನಾಟಕದಿಂದ ಸಂಗ್ರಹಿಸುವ ಕೇಂದ್ರಕ್ಕೆ ಕೇಂದ್ರದ ಆಡಳಿತದಲ್ಲಿ ಕನ್ನಡ ಇರಬೇಕೆಂಬುದು ಅರಿವಾಗದೇ? ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ (ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/ ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/ ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ "ವಿಶ್ವಸಂಸ್ಥೆಯ ಭಾಷಾನೀತಿ"ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ? ಇಷ್ಟಕ್ಕೂ ಕೇಂದ್ರಸರ್ಕಾರಿ ಕಛೇರಿಗಳಾದ ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತ್ರಿಭಾಷಾ ಸೂತ್ರ ಎಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದೆ? ಪಾಸ್‍ಪೋರ್ಟ್ ಅರ್ಜಿ, ಜೀವವಿಮೆ, ಬ್ಯಾಂಕ್ ಚೆಕ್ಕುಗಳಲ್ಲಿ ತ್ರಿಭಾಷೆ ಯಾಕಿಲ್ಲಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವವರಾದರೂ ಯಾರು ಗುರೂ?!

ಕೊನೆಹನಿ: ಇರುವ ಗ್ರಾಹಕ ಒಬ್ಬನಾದರೂ ಕೂಡಾ, ಆ ದೂರಿನ ದನಿ ಒಂಟಿಯಾಗಿದ್ದರೂ ಕೂಡಾ ಸೌಜನ್ಯದಿಂದ ಉತ್ತರಿಸುವುದನ್ನು, ದೂರು ಕೊಟ್ಟವರನ್ನೇ ದೂರುವುದನ್ನು ಬಿಡುವುದನ್ನೂ ಮೆಟ್ರೋ ಅಧಿಕಾರಿಗಳಿಗೆ ಸರ್ಕಾರ ಕಲಿಸಿಕೊಟ್ಟೀತೆ? ಕರ್ನಾಟಕ ರಾಜ್ಯಸರ್ಕಾರದ ಕಚ್ಚದ, ಭುಸುಗುಟ್ಟದ "ಕನ್ನಡ ಅಭಿವೃದ್ಧಿ ಪ್ರಾಧಿಕಾರ"ವೆಂಬ ಕನ್ನಡ ಕಾವಲು ಸರ್ಪ ಈಗಾದರೂ ಭುಸುಗುಟ್ಟೀತೇ?

"ಮೆಟ್ರೋಲಿ ಕನ್ನಡ ಇಲ್ವಾ? ಹಿಂದೀ ಯಾಕೆ ಬೇಡಾ?" ಅಂದ್ರೇ...


(ಮೆಟ್ರೋ ರೈಲು ನಿಲ್ದಾಣ - ಮಹಾತ್ಮಾಗಾಂಧಿ ರಸ್ತೆ)


(ರೈಲು ಹಳಿಯ ಮೇಲಿನ ಹಿಂದೀ ಸುರಕ್ಷತಾ ಸೂಚನೆ)

ಬೆಂಗಳೂರಿನ ಮಾಯಾಲೋಕಕ್ಕೆ ಮೊನ್ನೆ ಹೊಸದಾಗಿ ಸೇರ್ಪಡೆಯಾದ ಮೆಟ್ರೋ ರೈಲು "ನಮ್ಮ ಮೆಟ್ರೋ", ಕನ್ನಡಿಗರೆಲ್ಲಾ ಹೆಮ್ಮೆ ಪಟ್ಟುಕೊಳ್ಳಲು ಕಾರಣವಾಗಿದೆ. ಮೊನ್ನೆ ಈ ರೈಲಿನಲ್ಲಿ ಪಯಣಿಸಿದವರ ಅನುಭವ ಕಂಡು ಕೇಳಿದಾಗ, ಮೆಟ್ರೋ ಆರಂಭ ಒಂದೆಡೆ ಸಂತಸಕ್ಕೆ ಕಾರಣವಾದರೂ ಮತ್ತೊಂದೆಡೆ ಅತಿ ಆತಂಕಕ್ಕೆ ಕಾರಣವಾಗಿದೆ ಎನ್ನಿಸಿತು. ಏನೀ ಆತಂಕ? ಯಾಕೀ ಆತಂಕ? ಬನ್ನಿ... ನೋಡ್ಮಾ...


ನಮ್ಮ ಆತಂಕಕ್ಕೆ  ಕಾರಣವಾಗಿರೋದು ಬೆಂಗಳೂರಿನ ಮೆಟ್ರೋದಲ್ಲಿ ಪ್ರತಿಯೊಂದೂ ಮೂರು ಭಾಷೆಯಲ್ಲಿದೆ ಅನ್ನೋದು. ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲಿವೆ. ಕನ್ನಡದಲ್ಲಿಲ್ಲಾ ಅಂದ್ರೆ ಆತಂಕ ಆಗೋದು ಸರಿ, ಈಗ್ಯಾಕೆ ಆತಂಕ ಅಂತೀರಾ? ಆತಂಕ ಇದು ಹಿಂದೀಯಲ್ಲೂ ಇದೆ ಅನ್ನೋದಕ್ಕೆ ಗುರೂ!


ಕನ್ನಡ ಇಲ್ವಾ? ಇದ್ರೂ ಯಾಕೆ ಆಕ್ಷೇಪ?

ಹೌದಲ್ವಾ? ಇಂಥಾ ಪ್ರಶ್ನೆ ಸಾಮಾನ್ಯವಾಗಿ ಈ ಆತಂಕಕ್ಕೆ ಒಳಗಾದವರನ್ನು ಎದುರಾಗ್ತಾನೆ ಇರುತ್ತೆ. ಇಲ್ಲಿ ಆತಂಕ ಇರೋದು  ಕನ್ನಡದವರಿಗೆ ಅನುಕೂಲ ಆಗ್ತಾ ಇದೆಯೋ ಇಲ್ಲವೋ ಅನ್ನೋಕಿಂತ, ಕನ್ನಡನಾಡಿನ ಒಂದೂರಿನ ಬಡಾವಣೆಗಳನ್ನು ಬೆಸೆಯಲು ಇರುವ ಸ್ಥಳೀಯ ಸಾರಿಗೆಯಲ್ಲಿ ಕನ್ನಡವಲ್ಲದ ಇನ್ನೊಂದು ಭಾಷೆ ಇದೆ ಅನ್ನೋದು. ಅರೆರೆ, ಇಲ್ಲಿ ಕನ್ನಡಿಗರು ಮಾತ್ರಾ ಬರ್ತಾರಾ? ನಾವು ಸಂಕುಚಿತ ಮನಸ್ಸಿನವರಾಗಬಾರದು. ಹೊರಗಿಂದ ಬಂದವರಿಗೆ ಕೂಡಾ ಅನುಕೂಲವಾಗಬೇಕು ಅನ್ನೋ ಮಾತು ಕೇಳಿ ಬರುತ್ತೆ. ಸಹಜವೇ ಬಿಡಿ. ಹಾಗಾದಾಗ ನಾವು ಇಡೀ ಪ್ರಪಂಚದಲ್ಲಿ ಹೆಚ್ಚಿನ ಜನರು ಇವತ್ತು ಓದಲು ಕಲಿತಿರುವ ರೋಮನ್ ಲಿಪಿಯನ್ನು ಬಳಸಿದರಾಯ್ತು. ಇಂಗ್ಲಿಷ್ ಭಾಷೆ ಕನ್ನಡದ ಜೊತೆಯಲ್ಲಿ ಇರೋದನ್ನು ಹೇಗೋ ಒಪ್ಪಬಹುದು. ಆದರೆ ಹಿಂದೀಯನ್ನು? ಊಹೂಂ... ಒಪ್ಪಕ್ಕಾಗಲ್ಲಾ ಗುರೂ! ಒಪ್ಪಿದರೆ ನಾಳೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದೆಂಗೆ?

ಹಿಂದೀ ಭಾಷೆ ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!

ಮೆಟ್ರೋಲಿ ಹಿಂದೀಲಿ ಹಾಕಬೇಕು ಅಂತನ್ನೋದು ಮೆಟ್ರೋ ಆಡಳಿತದವರ ನಿರ್ಧಾರವೇ ಆಗಿರಬಹುದು.. ಆದರೆ ಇದರ ಪರಿಣಾಮವೇನಾಗುತ್ತದೆ ಎಂಬುದು ಅವರ ಅರಿವಿನಲ್ಲಿ ಇಲ್ಲದಿದ್ದರೂ ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ.... ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ "ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ" ಅಂತಾ ತನ್ನ ಬಂಧು, ಬಳಗ, ನೆಂಟರು ಪಂಟರು, ಬೆಕ್ಕು, ನಾಯಿ, ಅಂಗಿ, ಚಡ್ಡಿ  ಎಲ್ಲಾನು ಹೊತ್ಕೊಂಡು ದೆಹಲಿಗೆ ವಲಸೆ ಹೋಗಲ್ವಾ? ಇದೇ ಗುರೂ,  ಇಲ್ಲಿ ಹಿಂದೀಲಿ ವ್ಯವಸ್ಥೆಗಳು ಬಂದರೂ ಆಗೋದು... ಅಲ್ವಾ ಗುರೂ! ಮೊದಲೇ ಜನಸಂಖ್ಯಾ ಸ್ಫೋಟದಿಂದ ನರುಳ್ತಾ ಇರೋ ಹಿಂದೀ ಭಾಷಿಕ ಪ್ರದೇಶಗಳ ಜನರು ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ ಚಿನ್ನದ ನಾಡಿಗೆ ಸುನಾಮಿ ಹಾಗೆ ನುಗ್ಗೋದು ಖಂಡಿತಾ! ಇದರಿಂದಾಗಿ ನಮ್ಮೂರಲ್ಲೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ಈ ಕಾರಣಕ್ಕಾಗಿ ಬೆಂಗಳೂರಿನ ಮೆಟ್ರೋಲಿ ಹಿಂದೀ ಬೇಡ. 

ಇದು ಬರೀ ವಲಸೆ ಪ್ರಶ್ನೆಯಲ್ಲ!

ಅಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆಯೂ ಅಲ್ಲ. ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲದಿದ್ದಲ್ಲಿ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿ ಕಲಿಯಲಿ... ಅಲ್ವಾ ಗುರೂ!

ಕೊನೆಹನಿ: ಗುಲಾಮಗಿರಿಯ ಸಂಕೇತವಾದ ಇಂಗ್ಲೀಶ್ ಒಪ್ಪುವ ನೀವು ನಮ್ಮದೇ ನಾಡಿನ ಹಿಂದೀ ಒಪ್ಪಲಾರಿರಾ? ಎನ್ನುವ ಪ್ರಶ್ನೆ ಕೇಳುವವರಿದ್ದಾರೆ. ಅವರು ತಿಳಿಯಬೇಕಾದ್ದು ಒಂದಿದೆ, ಇವತ್ತು ಇಂಗ್ಲೀಶ್ ಒಪ್ಪಿದರೆ, ಇಂಗ್ಲೀಷರು ಇಲ್ಲಿ ಬಂದು ಸಾಮ್ರಾಜ್ಯ ಕಟ್ಟಿ ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲಾರರು. ಆದರೆ ಹಿಂದೀ ಒಪ್ಪಿದರೆ ಆಗುವುದು ಅದೇ... ಅನಿಯಂತ್ರಿತ ವಲಸೆಗೆ ವೇಗವಾಹಿಯಾಗಿ ಕೆಲಸಮಾಡುವ ಇದು ಕೆಲವೇ ವರ್ಷಗಳಲ್ಲಿ ಕನ್ನಡಿಗರನ್ನು ಭಾರತದಿಂದೇಕೆ, ಇಡೀ  ಭೂಪಟದಿಂದಲೇ ಹೊಸಕಿ ಹಾಕುತ್ತದೆ.

ಹಣಕಾಸು ಒಳಗೊಳ್ಳುವಿಕೆ: ಇನ್ಮುಂದೆ ಕಂಪನಿ ಮಾಹಿತಿ ಕನ್ನಡದಲ್ಲೂ!

ಭಾರತ ಸರ್ಕಾರದ ಭಾಷಾನೀತಿಯ ಹುಳುಕು ಏನೇ ಇರಲಿ. ಕೇಂದ್ರಸರ್ಕಾರದ ಸಚಿವಾಲಯಗಳು ಮಾತ್ರಾ ತಮ್ಮ ಇಲಾಖೆಗಳು ರೂಪಿಸಿರುವ ಯೋಜನೆಗಳು ಜನರನ್ನು ತಲುಪಬೇಕಿದ್ದರೆ ಸರಿಯಾಗಿರೋ ನೀತಿಯನ್ನು ಅನುಸರಿಸಲೇ ಬೇಕು ಅನ್ನೋದನ್ನು ಮನವರಿಕೆ ಮಾಡಿಕೊಂಡಿರುವ ಹಾಗಿದೆ ಗುರೂ! ಭಾರತ ಸರ್ಕಾರದ ಕಂಪನಿ ವ್ಯವಹಾರಗಳ ಸಚಿವಾಲಯವನ್ನು ಕುರಿತು ಇತ್ತೀಚಿಗೆ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸುದ್ದಿಯನ್ನು ನೋಡಿ.

ಹಣಕಾಸು ಒಳಗೊಳ್ಳುವಿಕೆಯ ಪರಿಣಾಮಕಾರಿ ದಾರಿ!

"ಹಣಕಾಸು ಒಳಗೊಳ್ಳುವಿಕೆ" ಎನ್ನುವ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಲು ಪಣ ತೊಟ್ಟಿರುವ ಕಂಪನಿ ವ್ಯವಹಾರಗಳ ಸಚಿವಾಲಯವು ಇನ್ನು ಮುಂದೆ ಕಂಪನಿಗಳ ಆಯವ್ಯಯ ಮಾಹಿತಿಯನ್ನು ಸಚಿವಾಲಯದ ಅಧಿಕೃತ ಅಂತರ್ಜಾಲ ತಾಣದಲ್ಲಿ ನಮ್ಮ ನಮ್ಮ ಭಾಷೆಗಳಲ್ಲೇ ಸಿಗುವಂತೆ ಕ್ರಮತೆಗೆದುಕೊಳ್ಳುತ್ತದೆಯಂತೆ. ಇದಕ್ಕೆ ಸಚಿವಾಲಯದ ಒಪ್ಪಿಗೆಯೂ ಇದೆಯಂತೆ. ಆಹಾ! ಎಂಥಾ ಸೊಗಸಾದ ಸುದ್ದಿ ಇದು. ಕನ್ನಡ ಭಾಷೆಯ ಹೂಡಿಕೆದಾರರು ಕನ್ನಡದಲ್ಲೇ ತಮಗೆ ಬೇಕಾದ ಕಂಪನಿಯ ಲೆಕ್ಕಪತ್ರಗಳನ್ನು ನೋಡಿಕೊಳ್ಳುವಂತಾಗುತ್ತದೆ ಎನ್ನುವ ಸುದ್ದಿಯೇ ಸೂಪರ್ರು ಗುರೂ! ಇಂಥಾ ಕ್ರಮಗಳಿಂದ ಮಾತ್ರವೇ "ಹಣಕಾಸು ಒಳಗೊಳ್ಳುವಿಕೆ"ಯಂತಹ ಜನರಿಗೆ ಉಪಯೋಗವಾಗೋ ಯೋಜನೆಗಳು ಎಲ್ಲರನ್ನೂ ಮುಟ್ಟಲು ಸಾಧ್ಯ! ಅಂದ ಹಾಗೆ ಈ ಸಚಿವಾಲಯದ ಮಂತ್ರಿಗಳು ನಮ್ಮ ಕರ್ನಾಟಕದ ಶ್ರೀ ವೀರಪ್ಪ ಮೊಯ್ಲಿಯವರು ಅನ್ನೋದು ಕೂಡಾ ಸಂತಸದ ವಿಷಯವೇ ಆಗಿದೆ. ಇರಲಿ, ಇದು ಯಾವುದೋ ಒಂದು ಯೋಜನೆಗೆ, ಒಂದು ಇಲಾಖೆಗೆ ಸೀಮಿತವಾಗಿಬಿಡಬಾರದು. ಕೇಂದ್ರಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಭಾರತದ ಸಂವಿಧಾನದ ಎಂಟನೇ ಪರಿಚ್ಛೇಧದಲ್ಲಿರುವ ಎಲ್ಲಾ ೨೨ ಭಾಷೆಗಳಲ್ಲಿ ಸೇವೆ ಕೊಡುವಂತಾಗಲಿ...! ಹೌದಲ್ವಾ ಗುರೂ?

ಕನ್ನಡಿಗ: ಸಾಧುಂಗೆ ಸಾಧು....


ಇದು ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಬರಹ. ಇದರ ಪ್ರಮುಖ ಸಾಲುಗಳು ಮೂಲತಃ ಕಪ್ಪೆ ಅರಭಟ್ಟನ್ನ ವರ್ಣಿಸುದ್ರೂ ಇದನ್ನು ಸಾಮಾನ್ಯವಾಗಿ ನಾವೆಲ್ಲಾ ಬಳಸೋದು ಕನ್ನಡಿಗನನ್ನು ವರ್ಣಿಸೋಕೇ ಎಂದೇ... ಏಳನೇ ಶತಮಾನದ ಈ ಶಾಸನದಲ್ಲಿ ಹೀಗಿದೆ:
ಸಾಧುಂಗೆ ಸಾಧು
ಮಾಧುರ್ಯಂಗೆ ಮಾಧುರ್ಯನ್
ಬಾಧಿಪ್ಪ ಕಲಿಕೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ... 
ಅಂದರೆ ಈತನು ಸಾಧುಗಳಿಗೆ ಸಾಧುವೂ, ಮಧುರವಾಗಿ ವ್ಯವಹರಿಸುವವರೊಡನೆ ಮಧುರವಾಗಿ ವ್ಯವಹರಿಸುವವನೂ, ತೊಂದರೆಕೊಡುವವರಿಗೆ ಕಲಿಯುಗ ಯಮನೂ ಆಗಿರುವನು ಮತ್ತು ಈತ ಮಾಧವನಲ್ಲದೆ ಬೇರಾರೂ ಅಲ್ಲಾ... ಎಂದು. ಇಂತಹ ಹೊಗಳಿಕೆಗೆ ಅಂದಿನ ಕನ್ನಡಿಗ ಪಾತ್ರನಾಗಿದ್ದ ಎನ್ನುವುದನ್ನು ನೆನೆದಾಗ ಮನ ಹಿಗ್ಗುತ್ತದೆ. 

ಈಗ್ಯಾಕಪ್ಪಾ ಈ ಮಾತು ಅಂದರೆ...

ಹೌದು, ಈಗ್ಯಾಕಪ್ಪಾ ಈ ಮಾತೂ ಅಂದ್ರೆ, ಇತ್ತೀಚಿಗೆ ಟೈಮ್ಸ್ ಆಫ಼್ ಇಂಡಿಯಾ ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿತ್ತು. ಅದು ವಿಕೀಲೀಕ್ಸ್ ಲೀಕ್ ಮಾಡಿದ ಸುದ್ದಿ. ಅದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ಼್ ಅಮೇರಿಕಾಗೆ ಹೋಗಲು ಬಯಸುವವರು ವೀಸಾಗಾಗಿ ಅರ್ಜಿ ಸಲ್ಲಿಸಿದಾಗ ಯಾವ ಭಾಷಿಕರಿಗೆ ಸರಳವಾಗಿ ವೀಸಾ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ಇದೆ. "ಇಂಗ್ಲೀಷೇತರ ಅರ್ಜಿದಾರ ದಕ್ಷಿಣ ಭಾರತೀಯರಲ್ಲಿ, ಕನ್ನಡಿಗರಿಗೆ ವೀಸಾ ಸಿಗೋದು ಸುಲಭ.. ಯಾಕೆಂದರೆ ಇವರಲ್ಲಿ ಮಾಹಿತಿ ನೀಡುವಲ್ಲಿ ಪ್ರಮಾದವೆಸಗುವರ ಪ್ರಮಾಣ ಉಳಿದವರಿಗಿಂತಾ ಕಡಿಮೆ, ಇವರು ಆರ್ಥಿಕವಾಗಿ ಸಬಲರು" ಎಂದು ಈ ವರದಿಯಲ್ಲಿ ಪ್ರಕಟವಾಗಿದೆ. 


ಕನ್ನಡಿಗರು ಪ್ರಾಮಾಣಿಕರು ಅನ್ನೋದು ಕನ್ನಡಿಗರು ಸಹೃದಯರು, ಶಾಂತಿಪ್ರಿಯರು, ಸಹನಶೀಲರು ಎಂಬೆಲ್ಲಾ ಬಿರುದುಗಳಂತೆಯೇ ಒಂದು ವಿಶೇಷಣವಾಗಿದ್ದು ನಾವೆಲ್ಲಾ ಹೆಮ್ಮೆ ಪಡಲು ಕಾರಣವಾಗಿದೆ. ಜೊತೆಯಲ್ಲೇ ನಮ್ಮ ಮೇಲಾಗುವ ದಬ್ಬಾಳಿಕೆಯ ವಿರುದ್ಧ ದನಿ ಎತ್ತಿದಾಗೆಲ್ಲಾ ಕನ್ನಡಿಗರನ್ನು ಸುಮ್ಮನಾಗಿಸಲೆಂದೇ ಇಂತಹ ವಿಶೇಷಣಗಳು ಬಳಕೆಯಾಗುತ್ತಿರುವುದನ್ನು ಕಂಡಾಗ ಈ ಮತ್ತೊಂದು ಬಿರುದಿನ ಬಗ್ಗೆ ಆತಂಕವೂ ಆಗುತ್ತಿದೆ ಗುರೂ!

ಇಂದಿನ ಮೈಸೂರು ದಸರಾ ನಿಜಕ್ಕೂ ನಮ್ಮ ನಾಡಹಬ್ಬಾನಾ?




ನಾಲ್ಕುನೂರನೇ ಮೈಸೂರು ದಸರಾ ಶುರುವಾಗಿದೆ. ಈ ಸಂದರ್ಭದಲ್ಲಿ ನೆನಪಾದದ್ದು ಈ ಹಾಡು. ಕರುಳಿನ ಕರೆ ಚಿತ್ರದ ಡಾ. ರಾಜ್ ಅಭಿನಯದ ಈ ಹಾಡನ್ನು ಕೇಳ್ತಾ ಇದ್ದಾಗ ಇದರ ಕೆಲಸಾಲುಗಳು ಗಮನ ಸೆಳೆದವು. ಮೈಸೂರಿನಲ್ಲಿ ನಡೆಯೋ ದಸರಾ ಉತ್ಸವವು ಯಾವ ಕಾರಣಕ್ಕೆ ನಡೀತಾಯಿದೆ ಅನ್ನೋದನ್ನು ಇಡೀ ಕನ್ನಡ ಕುಲಕ್ಕೆ ಈ ಸಾಲುಗಳು ಸಾರಿ ಹೇಳ್ತಿವೆ.
ಮೈಸೂರು ದಸರಾ, ಎಷ್ಟೊಂದು ಸುಂದರಾ!
ಚೆಲ್ಲಿದೆ ನಗೆಯಾ ಪನ್ನೀರಾ, ಎಲ್ಲೆಲ್ಲೂ ನಗೆಯಾ ಪನ್ನೀರಾ!!
ಚಾಮುಂಡಿ ಮಹಿಷನ ಕೊಂದ ಮಹಾರಾತ್ರಿ
ಧರ್ಮ ಅಧರ್ಮವ ಸೋಲಿಸಿದ ರಾತ್ರಿ
ಕನ್ನಡ ಜನತೆಗೆ ಮಂಗಳ ರಾತ್ರಿ
ಮನೆ ಮನೆ ನಲಿಸುವ ಶುಭ ನವರಾತ್ರಿ!!
ಮಾರ್ ನವಮಿ ಆಯುಧ ಪೂಜೆಯ ಮಾಡಿ
ಮಾತಾಯ ಚರಣದೆ ವರವನು ಬೇಡಿ
ಮಕ್ಕಳು ನಾವೆಲ್ಲಾ ಒಂದಾಗಿ ಕೂಡಿ
ಕೊಂಡಾಡುವಾ ಬನ್ನಿ, ಶುಭ ನವರಾತ್ರಿ!!
ಶತ್ರುವ ಅಳಿಸಲು ಶಸ್ತ್ರವ ಹೂಡಿ
ಬಡತನ ಅಳಿಸಲು ಪಂಥವಾ ಮಾಡಿ
ಹೆಗಲಿಗೆ ಹೆಗಲನು ನಾವ್ ಜೊತೆ ನೀಡಿ
ದುಡಿಯೋಣ ತಾಯಿಯ ಹೆಸರನು ಹಾಡಿ!!
ಈ ಹಾಡು ಕೇಳಿದಾಗ ಮೈಸೂರು ದಸರಾ ನಮ್ಮದು ಅನ್ನಿಸೋದು ಸಹಜವಾಗಿದೆ.

ಅಂದಿನ ನಮ್ಮ ದಸರಾ!

ಇಂಥಾ ಕನ್ನಡಿಗರ ನಾಡಹಬ್ಬ ನಾನ್ನೂರು ವರ್ಷಗಳ ಹಿಂದೆ ಮೈಸೂರು ಆಳರಸರಾದ ಯದುವಂಶದ ಒಡೆಯರ್ ರಾಜಮನೆತನದವರು ಆರಂಭಿಸಿದ್ದಂತೆ. ಕರ್ನಾಟಕ ರತ್ನ ಸಿಂಹಾಸನಾಧೀಶರಾದ ವಿಜಯನಗರದವರ ವಾರಸುದಾರಿಕೆಯ ಪ್ರತೀಕದಂತೆ ಆರಂಭವಾದ ಈ ವೈಭವದ ಹಬ್ಬ ಮೂಲತಃ ಒಂದು ಧಾರ್ಮಿಕ ಆಚರಣೆಯೇ ಆಗಿತ್ತು. ಸ್ವಾತಂತ್ರಕ್ಕೂ ಮೊದಲು ಇದ್ದ ಉತ್ಸವದ ಆಚರಣೆಯು ಭಾರತದೊಂದಿಗೆ ಮೈಸೂರು ವಿಲೀನವಾಗಿ, ಜನಾಡಳಿತ ಆರಂಭವಾಗಿ ರಾಜ ಮನೆತನ ಆಡಳಿತದಿಂದ ಹಿಂದೆ ಸರಿಯುವುದರೊಂದಿಗೆ ಜನರ ಹಬ್ಬವಾಯಿತು. ಯಾವ ಅಂಬಾರಿಯಲ್ಲಿ ರಾಜಕುಟುಂಬದವರು ಕುಳಿತು ಬನ್ನಿ ಪೂಜೆಗೆಂದು ಬನ್ನಿಮಂಟಪಕ್ಕೆ ಮೆರವಣಿಗೆಯಲ್ಲಿ ತೆರಳುತ್ತಿದ್ದರೋ ಆ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಮೆರವಣಿಗೆ ಮಾಡುವುದು ಆರಂಭವಾಯಿತು. ಇಡೀ ಮೈಸೂರು ನಗರವು, ದಸರಾ ಬಂದೊಡನೆಯೇ ಸಿಂಗರಿಸಿಕೊಂಡು ಕಂಗೊಳಿಸುತ್ತಾ ದಿನಗಳೆದಂತೆ ಸ್ಪರ್ಧೆ, ಮನರಂಜನೆ ಮತ್ತು ಸಂಭ್ರಮಗಳಿಗೆ ಸಾಕ್ಷಿಯಾಯಿತು. ಗಮನಿಸಿ, ಎಂದಿಗೂ ದಸರಾ ಕನ್ನಡಿಗರ ನಾಡಹಬ್ಬವಾಗೇ ಆಚರಣೆಯಾಗುತ್ತಿತ್ತು. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಿರಿಯ ಕಲಾವಿದರುಗಳಾದ ಗೌರವಾನ್ವಿತರುಗಳಾದ ಭೀಮಸೇನ್ ಜೋಶಿ, ಏಸುದಾಸ್, ಬಾಲಮುರಳಿಕೃಷ್ನ, ಹರಿಪ್ರಸಾದ್ ಚುರಾಸಿಯಾ ಮೊದಲಾದವರ ಕಾರ್ಯಕ್ರಮಗಳು ಆಗಲೂ ನಡೆಯುತ್ತಿದ್ದವು.

ಇಂದಿನ ದಸರಾ...

ಮೈಸೂರಿನ ಕುಸ್ತಿ ಕಾಳಗ, ವಸ್ತು ಪ್ರದರ್ಶನ, ತಿಂಗಳುಗಟ್ಟಲೆ ಅಲ್ಲಿ ನಡೆಯುತ್ತಿದ್ದ ನಾಟಕ ಸಂಗೀತ ಕಾರ್ಯಕ್ರಮಗಳು, ನಗರದ ಬೀದಿಗಳ ದೀಪಾಲಂಕಾರ, ಜಗನ್ಮೋಹನ ಅರಮನೆಯ ಸಂಗೀತ ಕಾರ್ಯಕ್ರಮಗಳು ಇಂದು ಮತ್ತಷ್ಟು ಹರವನ್ನು ಪಡೆದುಕೊಂಡು ಯುವದಸರಾ, ಸಾಹಸ ಕ್ರೀಡಾ ದಸರಾ, ಆಹಾರ ದಸರಾ ಮೊದಲಾಗಿ ಬೆಳೆದುಕೊಂಡಿದ್ದರೂ... ಕನ್ನಡತನ ದಿನೇದಿನೇ ದೂರಾಗುತ್ತಿರುವುದು ಕಾಣುತ್ತಿದೆ. ದಸರಾ ಕಾರ್ಯಕ್ರಮಗಳಲ್ಲಿ ಕನ್ನಡದ ಕಾರ್ಯಕ್ರಮಗಳಿಗಿಂತಾ ಪರಭಾಷಿಕರ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತಿದೆ. ದಸರಾ ಅಂತರ್ಜಾಲ ತಾಣವೂ ತೆರೆದುಕೊಳ್ಳುವುದೇ ಇಂಗ್ಲೀಷಿನಲ್ಲಿ ಎನ್ನುವ ಸ್ಥಿತಿ ಮುಟ್ಟಿದೆ. ಇವತ್ತು ಖಾಸಗಿ ದೂರದರ್ಶನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಯುವದಸರಾ ಕಾರ್ಯಕ್ರಮದ ನೇರಪ್ರಸಾರವನ್ನು ನೋಡಿದಾಗ ಅಚ್ಚರಿಯಾಯಿತು. ಕನ್ನಡನಾಡಿನ ಕಾಲೇಜುಗಳ ನಮ್ಮ ಯುವಕರುಗಳು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮಗಳಲ್ಲಿ ಕನ್ನಡದ ಗಾಳಿಗಂಧವೂ ಇರಲಿಲ್ಲ ಎನ್ನುವುದನ್ನು ಕಂಡ ಯಾರಿಗಾದರೂ, ಮೈಸೂರು ದಸರಾ ಆಯೋಜಕರು "ದಸರಾ ಹಬ್ಬವನ್ನು ರಾಷ್ಟೀಯ ಅಂತರರಾಷ್ಟ್ರೀಯಗೊಳಿಸುವುದು ಎಂದರೆ ಕನ್ನಡವನ್ನು ಮರೆಮಾಡುವುದೇ" ಎಂದು ಭ್ರಮಿಸಿರುವಂತೆ ಅನ್ನಿಸೀತು.

ವೈಭವ ಕಳೆದುಕೊಳ್ಳೋ ದಸರಾ!

ಹೌದೂ ಗುರೂ! ದಸರಾನಾ ರಾಷ್ಟ್ರಮಟ್ಟಕ್ಕೇರಿಸೋದು ಅಂದರೆ ಆಫ್ರಿಕಾದಿಂದಾ ಆನೆ ತರಿಸೋದಾಗಲೀ, ಬಾಲಿವುಡ್ ಹಾಲಿವುಡ್ ಕಲಾವಿದರನ್ನು ಕರೆಸೋದಾಗಲೀ ಅಲ್ಲಾ. ನಮ್ಮ ದಸರಾಗೆ ದೇಶವಿದೇಶದಿಂದ ಜನಾ ಬರೋದು ಇವೆಲ್ಲಾ ನೋಡಕ್ಕೂ ಅಲ್ಲಾ.. ನಮ್ಮ ನಾಡಿನ ಸಂಸ್ಕೃತಿಯನ್ನು, ನಮ್ಮತನವನ್ನು, ನಮ್ಮ ಸೊಗಡನ್ನು ನೋಡಕ್ಕೆ. ಇಲ್ಲಿ ನಮ್ಮದು ಅಂದರೆ ಕನ್ನಡನಾಡಿನದ್ದು ಮಾತ್ರವೇ ಆಗಿದೆ. ಅದು ಬಿಟ್ಟು "ಪ್ರವಾಸಿಗರು ಭಾಂಗ್ಡಾ ಕುಣಿತ ನೋಡಕ್ಕೆ ಪಂಜಾಬಿಗೆ ಹೋಗದೆ ಮೈಸೂರಿಗೆ ಬರ್ತಾರೆ, ಒಡಿಸ್ಸಿ ಕುಣಿತ ನೋಡಲು ಭುವನೇಶ್ವರಕ್ಕೆ ಹೋಗದೆ ಮೈಸೂರಿಗೆ ಬರ್ತಾರೆ, ರುವಾಂಡ-ನೇಪಾಳಿ- ಶ್ರೀಲಂಕಾ ಕಲಾವಿದರನ್ನು ನೋಡಲಿಕ್ಕೆ ಮೈಸೂರಿಗೆ ಬರ್ತಾರೆ" ಅನ್ನೋ ಭ್ರಮೆ ಬಿಡದಿದ್ದರೆ ಮುಂದಿನ ದಿನಗಳಲ್ಲಿ ತನ್ನ ವೈಭವವನ್ನು ಮೈಸೂರು ದಸರಾ ಕಳೆದುಕೊಳ್ಳೋದು ಖಂಡಿತಾ! ಇರುವ ನಮ್ಮ ಹಿರಿಮೆಯನ್ನು ಕಡೆಗಣಿಸುವಂತೆ ಪರಭಾಷಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ಕನ್ನಡತನವನ್ನು ತೊರೆದ ದಸರೆ ನಮ್ಮದು ಹೇಗಾದೀತು ಗುರೂ? ಈಗ ಮತ್ತೊಮ್ಮೆ ಕರುಳಿನಕರೆಯ ಹಾಡು ಕೇಳಿ... ಮೈಸೂರು ದಸರಾ ಕನ್ನಡಿಗರ ನಾಡಹಬ್ಬವಾಗಿ ಉಳಿದಿದೆಯೇ? ಅಥವಾ... ಕನ್ನಡವೆಂಬ ಶಿವನಿಲ್ಲದ ಸೌಂದರ್ಯವಾಗಿದೆಯೇ?
Related Posts with Thumbnails