ಸ್ವಾತಂತ್ರ ದಿನದ ಭಾಷಣ ಮತ್ತು ಭಾಷಣದ ಸ್ವಾತಂತ್ರ!



ಭಾರತದಲ್ಲಿ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ. ಆಂಗ್ಲರಿಂದ ಮುಕ್ತಿ ಸಿಕ್ಕಿದ ದಿನದ ನೆನಪಿನ ಮೆರವಣಿಗೆ ಭಾರತೀಯರ ಮನಃಪಟಲದಲ್ಲಿ. ಬೆಳಗ್ಗೆ ನವದೆಹಲಿಯಲ್ಲಿ ದೊಡ್ಡ ಕಾರ್ಯಕ್ರಮ! ದೇಶವಿದೇಶಗಳ ಗಣ್ಯರ ಸಮ್ಮುಖದಲ್ಲಿ ಭಾರತದ ಬಾವುಟ ಹಾರಿಸುವಿಕೆ, ಸೇನಾ ತುಕಡಿಗಳ ಮೆರವಣಿಗೆ, ಕೊನೆಯಲ್ಲಿ ಪ್ರಧಾನಿಮಂತ್ರಿಗಳಿಂದ ದೇಶದ ಜನತೆಯನ್ನು ಕುರಿತು ಭಾಷಣ.

ದೆಹಲಿ ಕೆಂಪುಕೋಟೆಯನ್ನೇರಿ...

ಭಾರತದ ಸ್ವತಂತ್ರ ದಿನದಂದು ಕೆಂಪುಕೋಟೆಯನ್ನೇರಿ ದೇಶವನ್ನುದ್ದೇಶಿಸಿ ಇದುವರೆಗೂ ಭಾಷಣ ಮಾಡಿದವರು ಇಂಗ್ಲೀಶ್/ ಹಿಂದೀಯಲ್ಲೇ ಮಾಡಿದ್ದಾರೆ. ಅವರೆಲ್ಲಾ ಯಾರ್ ಯಾರು? ಅವರ ತಾಯ್ನುಡಿಗಳು ಯಾವುವು? ಎಂದು ನೋಡಿದರೆ.... ಕಾಣುವುದು ಈ ಪಟ್ಟಿ:

೧) ಪಂಡಿತ್ ಜವಾಹರ್ ಲಾಲ್ ನೆಹರೂ - ಹಿಂದೀ (ಕಾಶ್ಮೀರಿ ಮೂಲ - ಉತ್ತರಪ್ರದೇಶ)
೨) ಗುಲ್ಜಾರಿ ಲಾಲ್ ನಂದಾ - ಗುಜರಾತಿ (ಗುಜರಾತ್) (ಎರಡು ಬಾರಿ ಪ್ರಧಾನಿಯಾದರೂ ಇವರಿಗೆ ಆ ಅವಕಾಶ ಸಿಗಲೇ ಇಲ್ಲ)
೩) ಲಾಲ್ ಬಹಾದ್ದೂರ್ ಶಾಸ್ತ್ರಿ - ಹಿಂದೀ (ಉತ್ತರಪ್ರದೇಶ)
೪) ಇಂದಿರಾಗಾಂಧಿ - ಹಿಂದೀ (ಕಾಶ್ಮೀರಿ ಮೂಲ - ಉತ್ತರಪ್ರದೇಶ)
೫) ಮುರಾರ್ಜಿ ದೇಸಾಯಿ - ಗುಜರಾತಿ (ಗುಜರಾತ್)
೬) ಚೌಧರಿ ಚರಣ್ ಸಿಂಗ್ - ಪಂಜಾಬಿ/ ಹರ್ಯಾಣ್ವಿ (ಹರ್ಯಾಣ)
೭) ರಾಜೀವ್ ಗಾಂಧಿ - ಹಿಂದೀ (ಉತ್ತರ ಪ್ರದೇಶ)
೮) ವಿ ಪಿ ಸಿಂಗ್ - ಹಿಂದೀ (ಉತ್ತರಪ್ರದೇಶ)
೯) ಚಂದ್ರಶೇಖರ್ - ಹಿಂದೀ (ಉತ್ತರಪ್ರದೇಶ)
೧೦) ಪಿ ವಿ ನರಸಿಂಗರಾವ್ - ತೆಲುಗು (ಆಂಧ್ರಪ್ರದೇಶ)
೧೧) ಅಟಲ್ ಬಿಹಾರಿ ವಾಜಪೇಯಿ - ಹಿಂದೀ (ಮಧ್ಯಪ್ರದೇಶ)
೧೨) ಎಚ್ ಡಿ ದೇವೇಗೌಡ - ಕನ್ನಡ (ಕರ್ನಾಟಕ)
೧೩) ಇಂದ್ರಕುಮಾರ್ ಗುಜ್ರಾಲ್ - ಪಂಜಾಬಿ (ಪಾಕೀಸ್ಥಾನದ ಪಂಜಾಬ್)
೧೩) ಮನಮೋಹನ್ ಸಿಂಗ್ - ಪಂಜಾಬಿ (ಪಂಜಾಬ್)

ಈ ನಮ್ಮ ಪ್ರಧಾನಿಮಂತ್ರಿಗಳಲ್ಲಿ ಹಿಂದೀಭಾಷಿಕರಲ್ಲದವರೂ ಕೆಂಪುಕೋಟೆಯ ಮೇಲಿಂದ ಭಾಷಣ ಮಾಡಿದ್ದು ತಮ್ಮ ತಾಯ್ನುಡಿಗಳಲ್ಲಲ್ಲಾ... ಇಂಗ್ಲೀಶ್/ ಹಿಂದೀಯಲ್ಲಿ. ಯಾಕೇ ಅಂತೀರಾ? ಭಾರತದ ಆಡಳಿತ ಭಾಷೆ ಅಂತಾ! ದೇಶದ ೪೯ನೇ ಸ್ವಾತಂತ್ರ್ಯ ದಿನಾಚರಣೇ ದಿವಸ ಕನ್ನಡಿಗ ದೇವೇಗೌಡರು ಕನ್ನಡದಲ್ಲೇ ಬರೆದುಕೊಂಡು ಹಿಂದೀ ಭಾಷಣ ಓದಿದಾಗ ಎಷ್ಟೋ ಮಾಧ್ಯಮಗಳು ಅವರ ಭಾಷಣದ ಕೆಲವು ತಪ್ಪುಗಳನ್ನೆತ್ತಿ ಆಡಿ, ಆದರೂ ಇದು ಭಾವೈಕ್ಯತೆಯ ಸಂಕೇತ... ಗೌಡರು ಹಿಂದೀ ಬರದಿದ್ರೂ ಹಿಂದೀ ಭಾಷಣ ಮಾಡಿದರು ಎಂದು ಕೊಂಡಾಡಿದ್ದರು!

ಸರಿ, ಹಿಂದೀ ಬರೋರು ಸ್ವಾತಂತ್ರ್ಯೋತ್ಸವದ ಸಂದೇಶವನ್ನು ಅರ್ಥ ಮಾಡ್ಕೊಂಡು ಬುಡ್ತಾರೆ. ಬರದೇ ಇರೋರು ಏನು ಮಾಡಬೇಕು? ಏನು ಮಾಡಬೇಕೆಂದರೆ ಅವರವರ ಭಾಷೆಗೆ ಅನುವಾದ ಮಾಡಿಕೊಳ್ಳಬೇಕು, ಮಾರನೇ ದಿನದ ಪೇಪರ್ ಓದಿಕೊಳ್ಳಬೇಕು ಎನ್ನುವ ಸಿದ್ಧ ಉತ್ತರ ಸಹಜ.

ಆ ಕೆಲಸಾನಾ ಅವರೇ ಯಾಕೆ ಮಾಡಬಾರದು?

ಹೌದೂ! ದೇವೇಗೌಡರು ಹಿಂದೀ ಬರದೇ ಇದ್ದರೂ ತಮಗೇ ಅರ್ಥವಾಗದೇ ಇದ್ದರೂ ಯಾರೋ ಹಿಂದೀಲಿ ಹೇಳಿ ಕನ್ನಡದಲ್ಲಿ ಬರೆದುಕೊಟ್ಟ ಭಾಷಣಾನ ಯಾಕೆ ಓದಬೇಕು? ಅವರ ಭಾಷಣ ಕೇಳಿ "ಈ ಮನುಷ್ಯನಿಗೆ ಹಿಂದೀನೇ ಬರಲ್ಲಾ, ನಾಲಾಯಕ್ಕು" ಅನ್ನುವಂತೆ ಹಂಗಿಸಿಕೊಳ್ಳೋದು ಯಾಕೆ? ಅದಕ್ಕೆ ಬದಲಾಗಿ ದೇವೇಗೌಡರು ಕನ್ನಡದಲ್ಲೇ ಭಾಷಣ ಮಾಡಿದ್ದರೆ ಏನಾಗುತ್ತಿತ್ತು? ಈಗ ಕನ್ನಡಿಗರು ಹಿಂದೀ ಭಾಷಣವನ್ನು ಅನುವಾದಿಸಿಕೊಂಡು ಅರ್ಥ ಮಾಡಿಕೊಳ್ಳುವಂತೆ ಹಿಂದೀಯವರು ಕನ್ನಡದ ಭಾಷಣವನ್ನು, ತೆಲುಗು ಭಾಷಣವನ್ನು ಅನುವಾದಿಸಿಕೊಳ್ಳಬಾರದೇ? ಊಹೂಂ, ನೀವೇ ಅಲ್ಲಿಗೆ ಹೋದರೂ ಅವರೇ ಇಲ್ಲಿಗೆ ಬಂದರೂ ಹಿಂದೀಯಲ್ಲೇ ಮಾತಾಡಬೇಕು... ಅನ್ನುವುದು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಅನ್ನುವ ಪದಗಳಿಗೆ ಅಪಮಾನಕರವಲ್ಲವೇ?

ಕೆಂಪುಕೋಟೆಯಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ತಾಯ್ನುಡಿಯಲ್ಲೇ ಭಾಷಣ ಮಾಡುವುದು ಸಾಧ್ಯವಿದ್ದಿದ್ದರೆ ಭಾರತದಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ, ಒಪ್ಪುಕೂಟ ವ್ಯವಸ್ಥೆಗಳು ಸರಿಯಾದ ರೂಪದಲ್ಲಿವೆ ಎನ್ನಬಹುದಿತ್ತು! ಇಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ "Might is right" ಅನ್ನೋದು ಎಷ್ಟು ಸರೀ? ಭಾರತದ ಕೆಂಪುಕೋಟೆಯ ಮೇಲಿಂದ ಪ್ರಧಾನಿಗಳು ತಮ್ಮ ತಾಯ್ನುಡಿಯಲ್ಲೇ ದೇಶವನ್ನು ಕುರಿತು ಭಾಷಣ ಮಾಡಿದ ದಿನ, ಅದನ್ನು ಉಳಿದವರು ಒಪ್ಪಿದ ದಿನ, ಭಾರತದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳು ಅರ್ಥ ಪಡೆದುಕೊಳ್ಳಲು ಶುರುವಾಗುತ್ತೆ ಅಲ್ವಾ ಗುರೂ!?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails