"ಸತ್ಯಮೇವ ಜಯತೇ" ನಿಲ್ಲಿಸಿದ್ದು ಯಾಕೆ? ಸತ್ಯವನ್ನು ಹೇಳಿ ಸ್ಟಾರ್ ಸುವರ್ಣಾ...


ಸನ್ಮಾನ್ಯರೇ,

ಕೆಲದಿನಗಳ ಹಿಂದೆ ತಾವೊಂದು ಪ್ರಕಟಣೆಯ ಮೂಲಕ ಅಮೀರ್‌ಖಾನ್‌ರವರ "ಸತ್ಯಮೇವ ಜಯತೇ" ದೂರದರ್ಶನ ಕಾರ್ಯಕ್ರಮವನ್ನು ತಮ್ಮ ಪ್ರತಿಷ್ಠಿತ ವಾಹಿನಿಯಾದ ಸುವರ್ಣ ಕನ್ನಡ ವಾಹಿನಿಯಲ್ಲಿ ಕನ್ನಡದಲ್ಲಿಯೇ ಪ್ರಸಾರ ಮಾಡುವುದಾಗಿ ಹೇಳಿಕೆ ನೀಡಿದ್ದಿರಿ. ಕೆಲವು ಕನ್ನಡ ಚಲನಚಿತ್ರ ಹಾಗೂ ಟಿವಿ ಕಲಾವಿದರ ಸಂಘದ ಪದಾಧಿಕಾರಿಗಳನ್ನು ಭೇಟಿಯಾದ ನಂತರ ನಿಮ್ಮ ನಿಲುವನ್ನು ಬದಲಿಸಿರುವುದಾಗಿ ಮತ್ತೊಂದು ಹೇಳಿಕೆಯನ್ನು ಕೂಡಾ ನೀಡಿದಿರಿ. 

ನಿಮ್ಮ ಮೊದಲ ಹೇಳಿಕೆಯಿಂದ "ಕನ್ನಡಿಗರಿಗೆ ಹತ್ತಿದ್ದ ನಲವತ್ತು ವರ್ಷಗಳ ಶಾಪ" ಕಳೆಯಿತು ಎಂಬ ಸಂತಸದಲ್ಲಿದ್ದ ಕನ್ನಡ ಪ್ರೇಕ್ಷಕನಿಗೆ ನಿಮ್ಮ ಎರಡನೆಯ ಹೇಳಿಕೆ ನಿರಾಸೆಯುಂಟು ಮಾಡಿದ್ದು ಸತ್ಯ! ಈ ಪ್ರಕ್ರಿಯೆಗಳಲ್ಲಿ ಕನ್ನಡ ನೋಡುಗನ ಅನಿಸಿಕೆಗೂ ಮಹತ್ವವಿದ್ದೀತೆಂದು ಭಾವಿಸಿ "ಮಿಂಬಲೆ ಮನವಿ" (ಆನ್‌ಲೈನ್ ಪಿಟಿಷನ್) ಒಂದನ್ನು ಆರಂಭಿಸಿ ಕೇವಲ ಎರಡೇ ದಿನಗಳಲ್ಲಿ ಒಂಬೈನೂರಾ ಐವತ್ತಕ್ಕೂ ಹೆಚ್ಚಿನ ಸಹಿಗಳನ್ನು ಸಂಗ್ರಹಿ,ಸಿ ತಮ್ಮ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಮಾಡಿ ಮನವಿ ಸಲ್ಲಿಸಲಾಯಿತು. ಆ ಸಂದರ್ಭದಲ್ಲಿ ತಮ್ಮ ಮುಖ್ಯಸ್ಥರು ಸದರಿ ಕನ್ನಡದ ಸತ್ಯಮೇವ ಜಯತೇ ಸರಣಿಯನ್ನು ವೆಬ್‌ಕ್ಯಾಸ್ಟ್ ಮೂಲಕ ಪ್ರಕಟಿಸುವುದಾಗಿ ಭರವಸೆಯನ್ನು ನೀಡಿದ್ದರು.

ತಮ್ಮ ಮಾತಿನಂತೆಯೇ ಕನ್ನಡದಲ್ಲಿ "ಸತ್ಯಮೇವ ಜಯತೇ" ಸರಣಿಯ ಮೊದಲನೇ ಕಂತನ್ನು ವೆಬ್‌ಕ್ಯಾಸ್ಟ್ ಮೂಲಕ ಪ್ರಕಟಿಸಿಯೂ ಬಿಟ್ಟಿರಿ. ಆ ಮೂಲಕ ಕನ್ನಡದಲ್ಲಿ ನಮ್ಮ ಮನರಂಜನೆಯನ್ನು ಪಡೆದುಕೊಳ್ಳುವ ನಮ್ಮ ಹಕ್ಕನ್ನು ಎತ್ತಿಹಿಡಿದಿರೆಂದು ಜನತೆ ಹಿಗ್ಗಲು ಕಾರಣರಾದಿರಿ. ಜನರಿಗೆ ಡಬ್ಬಿಂಗ್ ಆದ ಕಾರ್ಯಕ್ರಮ ಬೇಕು ಎನ್ನುವುದಕ್ಕೆ ಪುರಾವೆಯೆಂಬಂತೆ ಕೇವಲ ಮೂರೇ ದಿನದಲ್ಲಿ ೩೦,೦೦೦ಕ್ಕೂ ಹೆಚ್ಚು ಜನರು ಕನ್ನಡದಲ್ಲಿ ಡಬ್ ಆದ ಆ ಕಾರ್ಯಕ್ರಮವನ್ನು ನೋಡಿದ್ದು ತಮ್ಮ ಗಮನಕ್ಕೂ ಬಂದಿದೆಯೆಂದು ಭಾವಿಸುತ್ತೇವೆ.

ಇದಾದ ನಂತರ ತಮ್ಮದೇ ಸುದ್ದಿವಾಹಿನಿಯ ಮೂಲಕ ಮಿಂಬಲೆಯಲ್ಲಿ ಜನಾಭಿಪ್ರಾಯವನ್ನು ಪಡೆದುಕೊಂಡಿರಿ. ಇದರಲ್ಲಿ ನೂರಕ್ಕೆ ೯೧ರಷ್ಟು ಮಂದಿ ಡಬ್ಬಿಂಗ್ ಕಾರ್ಯಕ್ರಮವನ್ನು ಬೆಂಬಲಿಸಿ ಮತದಾನ ಮಾಡಿದ್ದನ್ನು ತಾವೇ ಪ್ರಕಟಿಸಿದಿರಿ. ಡಬ್ಬಿಂಗ್ ಪರವಾದ ಜಾಗೃತಿಯು ಕೇವಲ ಅಂತರ್ಜಾಲದಲ್ಲಷ್ಟೇ ಆಗಿಲ್ಲ ಎನ್ನುವುದನ್ನು ಸಾಬೀತು ಪಡಿಸುವಂತೆ, ಎಸ್ಸೆಮ್ಮೆಸ್ ಮೂಲಕ ನಡೆದ ಮತದಾನದಲ್ಲಿ ನೂರಕ್ಕೆ ೮೭ರಷ್ಟು ಜನರು ಡಬ್ಬಿಂಗ್ ಪರವಾಗಿದ್ದುದನ್ನು ಕೂಡಾ ತಾವೇ ಪ್ರಕಟಿಸಿದಿರಿ. ದುರಾದೃಷ್ಟವಶಾತ್ ಈ ಫಲಿತಾಂಶಗಳನ್ನು ಇತ್ತ ತಮ್ಮ ಸುದ್ದಿ ವಾಹಿನಿಯು ಪ್ರಕಟಿಸುತ್ತಿರುವಾಗಲೇ ಅತ್ತ ಕನ್ನಡದಲ್ಲಿ ಡಬ್ ಆಗಿ ಅಂತರ್ಜಾಲದಲ್ಲಿ ಮಾತ್ರಾ ಸಿಗುತ್ತಿದ್ದ, ಎರಡೇ ದಿನಗಳಲ್ಲಿ ೩೦,೦೦೦ಕ್ಕೂ ಹೆಚ್ಚು ಜನರಿಂದ ನೋಡಲಾದ ಕನ್ನಡ ಅವತರಣಿಕೆಯ "ಸತ್ಯಮೇವ ಜಯತೇ" ಕಾರ್ಯಕ್ರಮದ ಮೊದಲ ಕಂತಿನ ವೀಡಿಯೋವನ್ನು ಯೂಟ್ಯೂಬಿನಿಂದ ತೆಗೆದು ಹಾಕಿಬಿಟ್ಟಿರಿ!

ಈ ಮೂಲಕ ತಮ್ಮನ್ನು "ಕನ್ನಡಿಗ ಪ್ರೇಕ್ಷಕರು ಯಾವ ತಪ್ಪೆಸೆಗಿದ್ದಕ್ಕಾಗಿ ಹೀಗೆ ತಾವು ಮಾಡಿದಿರಿ? ಅದಾವ ಕಾಣದ ಕೈಗಳ ಒತ್ತಡಕ್ಕೆ ತಾವು ಮಣಿಯಬೇಕಾಯಿತು? ಇದ್ದ ಸೀಮಿತ ಸಮಯದಲ್ಲೇ ಅತ್ಯಂತ ಹೆಚ್ಚು ಜನರಿಂದ ನೋಡಲ್ಪಟ್ಟ ಒಂದು ಕಾರ್ಯಕ್ರಮವನ್ನು ತಾವು ಹೀಗೆ ಏಕೆ ಏಕಾಏಕಿ ತೆಗೆದುಹಾಕಿಬಿಟ್ಟಿರಿ?" ಎಂದು ಕೇಳ ಬಯಸುತ್ತೇವೆ. ಇಷ್ಟಕ್ಕೂ ತಮ್ಮ ವಾಹಿನಿ, ತಮ್ಮ ಕಾರ್ಯಕ್ರಮ... ಹಾಗಾಗಿ  ತಮಗೆ ಬೇಕಾದುದನ್ನು ಹಾಕುವ, ತೆಗೆಯುವ, ಹಾಕುತ್ತೇವೆಂದು ಹೇಳಿ ಹಾಕದಿರುವ, ಹಾಕಿಯೂ ತೆಗೆದು ಹಾಕುವ, ತೆಗೆದು ಹಾಕಿದ್ದಕ್ಕೆ ಕಾರಣವನ್ನು ನೀಡದಿರುವ ಎಲ್ಲಾ ಸ್ವಾತಂತ್ರ್ಯವೂ ತಮಗಿದೆ ಎನ್ನುವುದನ್ನು ಗೌರವಿಸುತ್ತಲೇ "ಸತ್ಯಮೇವ ಜಯತೇ" ಕಾರ್ಯಕ್ರಮದ ಕನ್ನಡ ಅವತರಣಿಕೆಯನ್ನು ಯಾವ ಕಾರಣಕ್ಕಾಗಿ ತೆಗೆದುಹಾಕಿಬಿಟ್ಟಿರಿ ? ಎನ್ನುವುದಕ್ಕೆ ಜನರಿಗೆ ಉತ್ತರ ನೀಡಬೇಕಾದ ನೈತಿಕ ಹೊಣೆ ತಮ್ಮದೆಂದು ಮಾತ್ರಾ ನೆನಪು ಮಾಡಲು ಬಯಸುತ್ತೇವೆ. ಹೇಳಿ... ಸತ್ಯಮೇವ ಜಯತೇ ಎಂದು ಇಡೀ ಭಾರತಕ್ಕೇ ಸಾರಲು ಹೊರಟಿರುವ ನೀವು "ಸತ್ಯಮೇವ ಜಯತೇ" ಕನ್ನಡ ಅವತರಣಿಕೆಯನ್ನು ತೆಗೆದುಹಾಕಿದ್ದು ಯಾಕೆ? ಸತ್ಯಾ ಹೇಳಿ ಸ್ಟಾರ್ ಸುವರ್ಣಾ...!

4 ಅನಿಸಿಕೆಗಳು:

Ganesh K ಅಂತಾರೆ...

ಇದು ಸಂಪೂರ್ಣ ಸರ್ವಾಧಿಕಾರಿ ಧೋರಣೆಯ ಮನಸ್ಥಿತಿ. ವೆಬ್ ಕಾಸ್ಟ್ ನ್ನೂ ಪ್ರತಿಬಂಧಿಸುವಷ್ಟು ಕಾಣದ ಕೈಗಳು ಬಲಿಷ್ಟವಾಗಿವೆ. ಇದು ಬೇಸರದ ಸಂಗತಿ.

Style On Streets ಅಂತಾರೆ...

Satyameva Jayate is really a good program everyone should really watch this

Anonymous ಅಂತಾರೆ...

Kannadigas missed the opportunity to watch such a good program Satya mewa jayathe...because of so called buddi jivis

ಸತ್ಯ ಅಂತಾರೆ...

ಬಹುಷಃ ಇದಕ್ಕೆ ಕಾರಣ ಇನ್ನು ಸ್ವಲ್ಪ ದಿನ/ವರ್ಷಗಳಲ್ಲಿ ಸತ್ಯಮೇವ ಜಯತೆ ಯ ರಿಮೇಕ್ ಮಾಡುವುದಾಗಿರಬಹುದು ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails