ಕನ್ನಡದವರ ಬಗ್ಗೇನೂ ಇದೇ ಕಾಳಜಿ ಇದೆಯಾ?


ಘನ ಕರ್ನಾಟಕ ರಾಜ್ಯಸರ್ಕಾರದ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀಯುತ ಅಶೋಕ್‌ರವರು ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಹೈಕಮಾಂಡಿನ ಅಪೇಕ್ಷೆಯಂತೆ ಮತ್ತು ನಿರೀಕ್ಷೆಯಂತೆ ಅಸ್ಸಾಮಿಗೆ ತೆರಳಿ, ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತಾಡಿ ಇಬ್ಬರೂ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಈ ವರದಿಯಲ್ಲಿನ ಒಂದು ತಮಾಶೆಯ ವಿಷಯ ಅಂದ್ರೆ ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ತರುಣ್ ಗೊಗಾಯಿಯವರ  "ಎರಡೂ ರಾಜ್ಯಗಳಲ್ಲೂ ಉಭಯ ರಾಜ್ಯಗಳ ಜನ ಬಹುಸಂಖ್ಯೆಯಲ್ಲಿ ಉತ್ತಮ ಬಾಂಧವ್ಯ ಮತ್ತು ಸೌಹಾರ್ದದಿಂದ ವಾಸವಾಗಿದ್ದಾರೆ" ಎಂದಿದ್ದಾರೆ. ಕರ್ನಾಟಕದಲ್ಲಿ ಸುಮಾರು ೩,೫೦,೦೦೦ ಅಸ್ಸಾಮಿಗಳಿದ್ದರೆ ಅಸ್ಸಾಮಿನಲ್ಲಿ ಸುಮಾರು ೨,೦೫೯ ಜನ ಕನ್ನಡಿಗರಿದ್ದಾರೆ(೨೦೦೧ರ ಜನಗಣತಿ). ಕನ್ನಡನಾಡಿನ ಜನಲಕ್ಷಣ (ಡೆಮಾಗ್ರಫಿ) ಬದಲಾಗುತ್ತಿರುವುದರ ಪರಿಣಾಮಗಳ ಬಗ್ಗೆ, ವಲಸೆ ಉಂಟು ಮಾಡುವ ಎಲ್ಲಾ ತೊಂದರೆಗಳ ಬಗ್ಗೆ, ನಮ್ಮ ಜನರ ಕೆಲಸ, ಭಾಷೆ, ಸಂಸ್ಕೃತಿಗಳಿಗೆ ಎದುರಾಗುವ ತೊಂದರೆಗಳ ಬಗ್ಗೆ ಯೋಚಿಸಿದರೆ ೩,೫೦,೦೦೦ಕ್ಕೂ ೨,೦೬೦ಕ್ಕೂ ನಡುವಿನ ಅಂತರದ ಮಹತ್ವ ಅರಿವಾಗುತ್ತದೆ. ಈ ವಿಷಯ ಬಿಟ್ಟು ನೋಡಿದರೂ ಕರ್ನಾಟಕ ಸರ್ಕಾರವು ಪ್ರತಿಕ್ರಿಯಿಸುತ್ತಿರುವ ರೀತಿ ಮಾತ್ರಾ ಅತಿಕಾಳಜಿ ಅನ್ನಿಸುತ್ತದೆ. ನಿಜಕ್ಕೂ, ಅಸ್ಸಾಮಿಗಳ ಬಗ್ಗೆ ಕರ್ನಾಟಕ ರಾಜ್ಯಸರ್ಕಾರವು ತೋರಿಸುತ್ತಿರುವ ಕಾಳಜಿ "ತೊಂದರೆಯಲ್ಲಿರುವವರಿಗೆ ತೋರಿಸುತ್ತಿರುವ ಉದಾರತೆ ಎನ್ನಿಸಿದರೂ... ನಮ್ಮ ಸರ್ಕಾರಗಳು ಸಂಕಷ್ಟದಲ್ಲಿದ್ದ ಕನ್ನಡಿಗರ ಪರವಾಗಿಯೂ ಹೀಗೇ ದೊಡ್ಡತನ ತೋರಿಸಿವೆಯೇ?" ಎನ್ನುವ ಪ್ರಶ್ನೆಗೆ ದಾರಿ ಮಾಡಿಕೊಡುತ್ತದೆ!!

ಅಸ್ಸಾಮಿಯರಿಗೆ ಕೆಲಸದ ಭದ್ರತೆ! ಕನ್ನಡಿಗರಿಗೆ ಬೇಡವೇ?

ಹೀಗೆ ರಾಜ್ಯವೊಂದರ ಉಪಮುಖ್ಯಮಂತ್ರಿಯೊಬ್ಬರು, ರಾಜ್ಯರಾಜ್ಯಗಳಿಗೆ ಅಲೆದು "ನಮ್ಮೂರಿಂದ ವಾಪಸ್ಸು ಹೋಗಿರೋರು ದಯವಿಟ್ಟು ಬನ್ನಿ" ಎಂದಿರೋದು ಬಹುಶಃ ಭಾರತದಲ್ಲೇ ಇದೇ ಮೊದಲಸಲಾ ಅನ್ನಿಸುತ್ತೆ! ಒಳ್ಳೇದು. ಕನ್ನಡಿಗರ ಸಹೃದಯತೆಗೆ ಇದು ಒಂದು ಉದಾಹರಣೆ. ಆದರೆ ಈ ಸಹೃದಯತೆ ಇಂದು ಆಡಳಿತ ಮಾಡುತ್ತಿರುವ ಬಿಜೆಪಿಗಾಗಲೀ, ಹಿಂದೆ ಆಳಿದ  ಜೆಡಿಎಸ್, ಕಾಂಗ್ರೆಸ್ಸುಗಳಿಗಾಗಲೀ ಇದ್ದಂತಿರುವುದು ಬರೀ ಹೊರನಾಡಿಗರ ಬಗ್ಗೆ ಮಾತ್ರಾ ಆಗಿಬಿಟ್ಟರೆ ಅದಕ್ಕೇನೆನ್ನಬೇಕು? ವಲಸಿಗರ ಉದ್ಯೋಗ, ಬದುಕಿನ ಬಗ್ಗೆ ಕಾಳಜಿ ತೋರುವ ಸರ್ಕಾರಗಳು ಇದೇ ನೆಲದ ಕನ್ನಡಿಗರಿಗೆ ಕೆಲಸ ದೊರಕಿಸಿ ಕೊಡುವ "ಸರೋಜಿನಿ ಮಹಿಷಿ ವರದಿ"ಯ ಬಗ್ಗೆ ಯಾಕೆ ಕ್ರಮ ತೆಗೆದುಕೊಳ್ಳದು? ನೆರೆಯ ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ ಮೊದಲಾದ ರಾಜ್ಯಗಳು "ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ"ಯನ್ನು ೮೫%ಕ್ಕೆ ಕಡಿಮೆಯಿರದಷ್ಟು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತಂದಿರುವುದನ್ನು ನೋಡಿಯೂ ರಾಜ್ಯದಲ್ಲಿ ಕನ್ನಡಿಗರಿಗೆ ಕೆಲಸದ ಅವಕಾಶ ಒದಗಿಸುವ "ಸರೋಜಿನಿ ಮಹಿಷಿ" ವರದಿಯನ್ನು ಯಾಕೆ ಜಾರಿಗೊಳಿಸಲು ಇವರಲ್ಲಿ ಒಬ್ರೂ ಕಾಳಜಿ ತೋರುತ್ತಿಲ್ಲ? ಹೊರನಾಡುಗಳಲ್ಲಿರುವ ಕನ್ನಡಿಗರಿಗೆ, ಅವರ ಸಂಕಷ್ಟದ ಸಮಯದಲ್ಲಿ ಯಾವ ತೆರನಾದ ನೆರವನ್ನು ಇವರು ನೀಡಲು ಮುಂದಾಗಿದ್ದಾರೆ? ಗಡಿನಾಡಿನಲ್ಲಿ ಕನ್ನಡಶಾಲೆಗಳಲ್ಲಿ ಪಠ್ಯವಿಲ್ಲ, ಶಾಲೆ ಮುಚ್ಚಲಾಗುತ್ತಿದೆ ಅನ್ನೋ ಸಂದರ್ಭಗಳೆಲ್ಲಾ ಬಂದಾಗ ಏನು ಮಾಡಿದ್ದವು? ಹೋಗಲಿ... ಇದೇ ನಾಡಿನಲ್ಲಿ ಬರದಿಂದ, ನೆರೆಯಿಂದ ಕಂಗೆಟ್ಟು ವಲಸೆ ಹೋದವರಿಗೆ ಈ ತೆರನಾದ ಭರವಸೆಯನ್ನು ಎಂದಾದರೋ ಸರ್ಕಾರ ಕೊಟ್ಟಿತ್ತೇ?   ಒಟ್ಟಾರೆ ಮನೆಗೆ ಮಾರಿಯಾಗದೇ ಪರರಿಗೆ ಉಪಕಾರಿಯಾಗಿರಬೇಕು ಅನ್ನೋದು ನಮ್ಮ ರಾಜ್ಯದ ರಾಜಕೀಯ ಪಕ್ಷಗಳಿಗೆ ಅರ್ಥವಾಗಲ್ವಾ ಗುರೂ!!

1 ಅನಿಸಿಕೆ:

A Mimbari ಅಂತಾರೆ...

೨೦೧೧ರ ಜನಗಣತಿಯ ಪಲಿತಾಂಶ ಬರಲಿ. ರಾಜ್ಯದ ಭಾಷಾ-ಅಂಕಿಅಂಶ ನೋಡಿ, ನಮಗೆಲ್ಲ ದೊಡ್ಡ ಆಘಾತ ಕಾದಿದೆ.
Wait for the complete result of census 2011. We will shocked to know the linguistic statistics of the state.!

೨೦೦೧ರಲ್ಲಿ ನಾವು ಕನ್ನಡಿಗರು ೬೪%ರಷ್ಟು ಕರ್ನಾಟಕದ ಜನಸಂಖ್ಯೆಯಾಗಿದ್ದೆವು. ಗತ ಶತಕದಲ್ಲಿ ೧೬%, ೮೩ ಲಕ್ಷದಷ್ಟು ಹೆಚ್ಚಿರುವ ಜನಸಂಖ್ಯೆಯಲ್ಲಿ ಅಕನ್ನಡಿಗರ ಒಳವಲಸೆಯ ಪ್ರಮಾಣವೆಷ್ಟೋ! ಬೆಂಗಳೂರಿನ ಜನಸಂಖ್ಯೆ ೪೭%ರಷ್ಟು ಹೆಚ್ಚಿದೆ.
We Kannadigas were 64% in 2001. There is 16%, 83 lakh decadal growth. I wonder how much is immigration. Bangalore Urban's population growth is 47%.

ಇದಲ್ಲದೆ, ಕನ್ನಡಿಗರ ಹೊರವಲಸೆ ಹೆಚ್ಚು ಹೆಚ್ಚು ಆಗಿ ಆಗುತ್ತಿದೆ.
In addition there is large number of emigration of Kannadigas.

ಮುಂದಿನ ಅಲ್ಪಸಮಯದಲ್ಲಿ ನಾವು ಕನ್ನಡಿಗರು ಕರ್ನಾಟಕದಲ್ಲಿ ೫೦%ಕ್ಕಿಂತ ಕಡಿಮೆ ಆಗುವೆವು. ಈಗಲಿಂದಲೇ ಭಾಷಿಕ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಬೇಡಿಕೆ ಪ್ರಾರಂಭಿಸೋಣ.!
Soon, we will be less than 50% of the population. We might start demanding for minority status!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails