೨. ಕೊಡಗಿನ ಕಾವೇರಿ.. ನೀ ಕನ್ನಡನಾಡಿನ ಭಾಗ್ಯನಿಧಿ!


ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿಯದ್ದು ಸುಮಾರು ೮೦೦ ಕಿಲೋಮೀಟರ್ ದೂರದ ಪಯಣ. ಆರಂಭದಿಂದಲೇ ಜೊತೆಯಾಗುವ ಪ್ರಮುಖ ಸಂಗಾತಿಗಳು ಹಾರಂಗಿ, ಹೇಮಾವತಿ, ಸುವರ್ಣಾವತಿ, ಅರ್ಕಾವತಿ ಮತ್ತು ಶಿಂಷಾ ಉಪನದಿಗಳು. ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಕಾವೇರಿಯನ್ನು ಸೇರುವ ನದಿ ಕಬಿನಿ. ತಮಿಳುನಾಡಿನಲ್ಲಿ ಭವಾನಿ, ನೊಯ್ಯಿಲ್ ಮತ್ತು ಅಮರಾವತಿ ನದಿಗಳು ಕಾವೇರಿಯನ್ನು ಸೇರಿಕೊಳ್ಳುತ್ತವೆ. ಕಾವೇರಿ ಕರ್ನಾಟಕದ ಒಳಗೆ ೩೨೦ ಕಿ ಮೀ ದೂರದಷ್ಟು ಹರಿದರೆ ಸುಮಾರು ೬೪ ಕಿಮೀ ದೂರ ಎರಡೂ ರಾಜ್ಯಗಳ ಗಡಿಯಾಗಿ ಹರಿಯುತ್ತದೆ. ಮುಂದೆ ತಮಿಳುನಾಡಿನಲ್ಲಿ ಸುಮಾರು ೪೧೬ ಕಿಮೀ ಹರಿಯುತ್ತದೆ. ಕಾವೇರಿ ಹರಿವಿನ ಬಗ್ಗೆ ಮಾಹಿತಿ ಈ ಪಟ್ಟಿಯಲ್ಲಿ ನೋಡಿ:


ದೇಶಪ್ರೇಮಕ್ಕೆ ಸಿಕ್ಕ ಉಡುಗೊರೆ!

೧೭ನೇ ಶತಮಾನದಿಂದಲೇ ಮದ್ರಾಸ್ ಸಂಸ್ಥಾನ ಬ್ರಿಟೀಷರದ್ದಾಗಿತ್ತು! ಮೈಸೂರಿನಲ್ಲಿ ಹೈದರಾಲಿ, ಟಿಪ್ಪೂ ಸುಲ್ತಾನರು, ವಿದೇಶಿ ಆಳ್ವಿಕೆಯನ್ನು ವಿರೋಧಿಸಿ ಹೋರಾಡಿ ಹುತಾತ್ಮರಾದ ನಂತರ ಮೈಸೂರು ದೇಶವೂ ಬ್ರಿಟೀಷರ ಕೈವಶವಾಯಿತು. ಕೆಲ ಹತ್ತುವರ್ಷಗಳ ನಂತರ ಮೈಸೂರನ್ನು ಒಡೆಯರ್ ಮನೆತನಕ್ಕೆ ಒಪ್ಪಿಸಿ ತನ್ನ ಸಾಮಂತ ರಾಜ್ಯವಾಗಿಸಿಕೊಂಡಿತು, ಆಂಗ್ಲರ ಆಳ್ವಿಕೆ. ಮೈಸೂರು ಪ್ರಾಂತ್ಯದಲ್ಲಿ ಕಾವೇರಿ ಹರಿಯುತ್ತಿದ್ದರೂ ಮಳೆ ಆಧಾರಿತ ಕೃಷಿಯೇ  ಪ್ರಧಾನವಾಗಿತ್ತು. ನಂತರದ ದಿನಗಳಲ್ಲಿ ನೀರಾವರಿಗೆ ಒತ್ತುಕೊಟ್ಟು ಕಾಮಗಾರಿಗೆ ಮುಂದಾದಾಗಲೆಲ್ಲಾ ಆಂಗ್ಲರಿಂದ ಬೇಕಾದ ಅನುಮತಿ ಸಿಗುತ್ತಿರಲಿಲ್ಲ. ಸಾಕಷ್ಟು ಪತ್ರ ವ್ಯವಹಾರದ ನಂತರ ಕರ್ನಾಟಕದ ಮೇಲೆ ಹೇರಲಾಗಿದ್ದು ೧೮೯೨ರ ಒಪ್ಪಂದ.

೧೮೯೨ರ ಒಪ್ಪಂದದ ತಿರುಳು

ಕರ್ನಾಟಕದಿಂದ ಮದ್ರಾಸ್ ಪ್ರಾಂತ್ಯಕ್ಕೆ ಕೃಷ್ಣಾ, ಕಾವೇರಿ, ತುಂಗಭದ್ರಾ ನದಿಗಳು ಹರಿಯುತ್ತಿದ್ದು ಈ ನೀರುಗಳ ಬಳಕೆಯನ್ನು ಮದ್ರಾಸ್ ಪ್ರಾಂತ್ಯವು ತಲತಲಾಂತರದಿಂದ ನಡೆಸಿಕೊಂಡು ಬರುತ್ತಿದೆ. ಹಾಗಾಗಿ ಕೆಳರಾಜ್ಯವಾದ ಮದ್ರಾಸ್ ಪ್ರಾಂತ್ಯದ ನೀರಿನ ಬಳಕೆಗೆ ಧಕ್ಕೆ ತರಬಾರದು ಎನ್ನುತ್ತಾ ಅವರು ಬಳಸುವ ನೀರಿನ ಪ್ರಮಾಣಕ್ಕೆ ಅಡ್ಡಿ ಮಾಡಬಾರದೆನ್ನುವ ಉದ್ದೇಶದಿಂದ ಕೆಲವು ನಿಬಂಧನೆಗಳನ್ನು ಹೇರಿತು. ಮೈಸೂರು ಯಾವುದೇ ನೀರಾವರಿ ಯೋಜನೆ ಕೈಗೊಳ್ಳಬೇಕಾದರೆ ಮದ್ರಾಸಿನಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಯಾವುದೇ ಯೋಜನೆಯ ಪೂರ್ಣ ಮಾಹಿತಿಯನ್ನು ಮದ್ರಾಸಿಗೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಮೈಸೂರು ಪ್ರಾಂತ್ಯವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಹಾವೇರಿಯ ರಸ್ತೆಗಿಂತ ಕೆಳಭಾಗದಲ್ಲಿ, ಕಾವೇರಿ  ನದಿಗೆ ಅಡ್ಡಲಾಗಿ ರಾಮಸ್ವಾಮಿ ಅಣೆಕಟ್ಟಿಗಿಂತ ಕೆಳಭಾಗದಲ್ಲಿ ಮತ್ತು ಕಬಿನಿ ನದಿಗೆ ಅಡ್ಡಲಾಗಿ ರಾಂಪುರ ಅಣೆಕಟ್ಟೆಗಿಂತ ಕೆಳಭಾಗದಲ್ಲಿ ಯಾವುದೇ ಜಲಾಶಯಗಳನ್ನು ನಿರ್ಮಿಸುವಂತಿಲ್ಲ! ಯಾವುದೇ ಹೊಸ ಜಲಾಶಯಗಳನ್ನು ಕಟ್ಟುವಂತಿಲ್ಲ.. ಹೊಸ ಜಲಾಶಯಗಳು ಅಂದರೆ ಈ ಮೊದಲೇ ಇದ್ದು ಕಳೆದ ೩೦ ವರ್ಷಗಳಲ್ಲಿ ಬಳಕೆಯಲ್ಲಿರದ, ಹಿಂದೆಂದೂ ಅಸ್ತಿತ್ವದಲ್ಲಿರದ, ಯಾವುದೇ ತೊರೆಗೆ ಅಡ್ಡಲಾಗಿ ಕಟ್ಟುವ ನೀರಾವರಿ ಜಲಾಶಯಗಳು. ಯಾವುದೇ ಜಲಾಶಯಗಳ ದುರಸ್ತಿ ಮಾಡುವಾಗಲಾಗಲೀ,  ಹಳೆಯದಕ್ಕೆ ಬದಲಾಗಿ ಹೊಸದಾಗಿ ಕಟ್ಟುವಾಗಲಾಗಲೀ..  ಈ ಹಿಂದೆ ಶೇಖರಿಸುತ್ತಿದ್ದುದಕ್ಕಿಂತ ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವಂತೆ ಮಾಡುವಂತಿಲ್ಲ! ಇಂತಹ ಒಪ್ಪಂದವು ಜಾರಿ ಮಾಡಿ ಆಂಗ್ಲ ಸರ್ಕಾರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಮುರುಟಿಹಾಕಿತು. ಅದೇ ಸಮಯದಲ್ಲಿ ತಮಿಳುನಾಡಿಗೆ ಇಂತಹ ಯಾವ ನಿರ್ಬಂಧವೂ ಇರದೆ ತಾವು ಬೇಕಾದಷ್ಟು ನೀರಾವರಿ ಮಾಡಿಕೊಳ್ಳಲು ಬಿಟ್ಟು ಮುಂದೆ ತಮಿಳುನಾಡು ಪಾರಂಪರಿಕ, ಶತಶತಮಾನಗಳ ಅವಲಂಬನೆ ಎಂದು ವಾದಿಸಲು ಅನುವು ಮಾಡಿಕೊಟ್ಟಿತು.

೧೯೨೪ರ ಒಪ್ಪಂದ

ವಾಸ್ತವವಾಗಿ ೧೮೯೨ರ ಒಪ್ಪಂದವು ಮೈಸೂರು ರಾಜ್ಯದ ಎಲ್ಲಾ ನದಿಗಳ ನೀರಿಗೆ ಅನ್ವಯವಾಗುತ್ತಿತ್ತು. ಮೈಸೂರು ರಾಜ್ಯ   ಕನ್ನಂಬಾಡಿಯಲ್ಲಿ ಅಣೆಕಟ್ಟೆಯೊಂದನ್ನು ಕಟ್ಟಲು ಮನಸ್ಸು ಮಾಡಿ ೧೮೯೨ರ ಒಪ್ಪಂದದಂತೆ ಮದ್ರಾಸಿಗೆ ಅನುಮತಿ ಕೋರಿ ಮನವಿ ಸಲ್ಲಿಸಿತು. ಅದಕ್ಕೆ ಮದ್ರಾಸ್ ತೀವ್ರ ವಿರೋಧ ತೋರಿ ಕೆಆರ್‌ಎಸ್ ಅಣೆಕಟ್ಟೆ ಕಟ್ಟಲು ಅಡ್ಡಗಾಲು ಹಾಕಿತು. ಮೈಸೂರು ಅರಸರು ನಿರಂತರವಾಗಿ ಒತ್ತಡ ಹಾಕಿ, ಬೇಡಿಕೆ ಬೇಡಿ, ಪತ್ರವ್ಯವಹಾರ ಮಾಡಿದ್ದರಿಂದಾಗಿ ಅಂತೂ ಇಂತೂ ಒಂದು ಒಪ್ಪಂದವನ್ನು ಮುಂದಿಡಲಾಯಿತು. ಅದೇ ಮುಂದಿನ ಐವತ್ತು ವರ್ಷಗಳಿಗೆ ಅನ್ವಯವಾಗುವಂತಹ ೧೯೨೪ರ ಮೈಸೂರು - ಮದ್ರಾಸ್ ಒಪ್ಪಂದ. ವಾಸ್ತವವಾಗಿ ಇಷ್ಟಾದರೂ ಅವಕಾಶವಾಯಿತಲ್ಲಾ ಎಂಬ ಕಾರಣಕ್ಕೆ ಮೈಸೂರು ಇದಕ್ಕೂ ಸಹಿ ಹಾಕಿತು. ಈ ಒಪ್ಪಂದದಂತೆ ಮೈಸೂರು ತನ್ನ ನೀರಾವರಿ ಪ್ರದೇಶವನ್ನು ೧,೧೦,೦೦೦ ಎಕರೆಗೆ ಸೀಮಿತಗೊಳಿಸಿಕೊಳ್ಳುವಂತೆ ಮಾಡಲಾಯಿತು ಮತ್ತು ಉದಾರತೆಯನ್ನು ತೋರಿ ಮದ್ರಾಸ್ ತನ್ನ ನೀರಾವರಿ ಭೂಮಿಯನ್ನು ೩,೦೦,೦೦೦ ಎಕರೆಗಳಷ್ಟು ಹೆಚ್ಚಿಸಿಕೊಳ್ಳುವ ಸ್ವಯಂ ನಿರ್ಬಂಧಕ್ಕೆ ಒಪ್ಪಿತು (!). ಮುಂದೆ ಮದ್ರಾಸ್ ಯಾವುದೇ ಅಣೆಕಟ್ಟು ನಿರ್ಮಿಸಲು ಸ್ವತಂತ್ರ್ಯ. ಹಾಗೆ ಆದಾಗ ಮೈಸೂರು ಮದ್ರಾಸು ನಿರ್ಮಿಸಿದ ಅಣೆಕಟ್ಟೆಯ ಸಾಮರ್ಥ್ಯದ ೬೦% ಸಾಮರ್ಥ್ಯದ ನೀರು ಹಿಡಿದುಕೊಳ್ಳಬಲ್ಲ ಹೊಸ ಅಣೆಕಟ್ಟೆ ಕಟ್ಟಬಹುದು ಎನ್ನಲಾಯಿತು!

ಇಂತಹ ಒಪ್ಪಂದಕ್ಕೆ ಸಿಲುಕಿ ನಲುಗಿದ ಮೈಸೂರು "ಈ ಅನ್ಯಾಯ ಮಾಡಿದ್ದು ಬ್ರಿಟೀಷರು, ಹಾಗಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇವೆಲ್ಲಾ ಸರಿಹೋಗಬಹುದು" ಎಂದು ಭಾವಿಸಿತು. ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗ ಬ್ರಿಟೀಷರು ಭಾರತ ಬಿಟ್ಟು ಹೋದರು. ಅವರು ವಿಧಿಸಿದ್ದ ಶಿಕ್ಷೆಗಳು ರದ್ದಾಗಿ ಸ್ವಾತಂತ್ರ್ಯ ಸೇನಾನಿಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿತು. ಆದರೆ ಆಂಗ್ಲರ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡಿ ಮಡಿದ ಹೈದರಾಲಿ, ಟಿಪ್ಪೂಸುಲ್ತಾನರ "ಆಂಗ್ಲ ವಿರೋಧಿ" ನಿಲುವಿನಿಂದಾಗಿಯೇ ತುಳಿತಕ್ಕೊಳಗಾದ ಮೈಸೂರಿಗೆ ಮಾತ್ರಾ ೧೯೨೪ರ ಒಪ್ಪಂದದಿಂದ ಮುಕ್ತಿ ಸಿಗಲೇ ಇಲ್ಲಾ! ೧೯೭೪ಕ್ಕೆ ಈ ಒಪ್ಪಂದ ಕೊನೆಗೊಳ್ಳಲಿದ್ದು ನಂತರ ಮತ್ತೊಂದು ಹೊಂದಾಣಿಕೆ ಸೂತ್ರ ಮೂಡುವ ಹೊತ್ತಿಗೆ ಏನಾನಾಗಿರುತ್ತದೋ ಬಲ್ಲವರಾರೆಂದು ಮೈಸೂರು ರಾಜ್ಯ ಸ್ವತಂತ್ರ್ಯವಾಗಿ ನಾಲ್ಕಾರು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿತು.

ಸ್ವತಂತ್ರ್ಯ ಭಾರತದಲ್ಲೂ ನೀರಾವರಿ ಯೋಜನೆಗೆ ಅಡ್ಡಗಾಲು!

ಹೌದು! ಕರ್ನಾಟಕ ಹೊಸ ನೀರಾವರಿ ಯೋಜನೆಗೆ ಭಾರತ ಸರ್ಕಾರದ ಅನುಮತಿ ಕೇಳಿದಾಗ ಭಾರತ "ಮೊದಲು ನೀವು ತಮಿಳುನಾಡಿನ ಒಪ್ಪಿಗೆ ಪಡೆದುಬನ್ನಿ, ಅವರೊಂದಿಗಿನ ತಿಕ್ಕಾಟ ಮುಗಿಸಿಕೊಂಡು ಬನ್ನಿ" ಎಂದುಬಿಟ್ಟಿತು. ೧೯೨೪ರಲ್ಲಿ ಕನ್ನಂಬಾಡಿ ಕಟ್ಟುವಾಗಲೇ ಶತಾಯಗತಾಯ ವಿರೋಧಿಸಿದ್ದ ತಮಿಳುನಾಡು, ಈಗ ಒಪ್ಪಿಗೆ ನೀಡುವುದೆಂದು ನಂಬುವುದಾದರೂ ಹೇಗೆ? ತಮಿಳುನಾಡನ್ನು ನಾವು ಏಕೆ ಅನುಮತಿ ಕೇಳಬೇಕು? ಕರ್ನಾಟಕವೇನು ತಮಿಳುನಾಡಿನ ಸಾಮಂತ ರಾಜ್ಯವೇ? ಒಟ್ಟಲ್ಲಿ ಕರ್ನಾಟಕ ಕೇಂದ್ರದ ಅನುಮತಿಯನ್ನಾಗಲೀ, ತಮಿಳುನಾಡಿನ ಒಪ್ಪಿಗೆಯಾಗಲೀ ಪಡೆಯದೆ ನಾಲ್ಕು ಅಣೆಕಟ್ಟುಗಳನ್ನು ನಿರ್ಮಿಸಿಬಿಟ್ಟಿತು. ಅವೇ ಗೊರೂರು ಬಳಿಯ ಹೇಮಾವತಿ ಅಣೇಕಟ್ಟೆ, ಕಬಿನಿ ಜಲಾಶಯ, ಹಾರಂಗಿ ಜಲಾಶಯ ಮತ್ತು ಸುವರ್ಣಾವತಿ ಜಲಾಶಯಗಳು. ಹೀಗೆ ನಿರ್ಮಾಣ ಮಾಡಿದ್ದೇ ಇಡೀ ಕಾವೇರಿ ಹೋರಾಟಕ್ಕೆ ಪ್ರಮುಖ ಕಾರಣ. ತಮಿಳುನಾಡು ಹಲವಾರು ವರ್ಷ ಕರ್ನಾಟಕದ ಜೊತೆ ಈ ವಿಷಯವಾಗಿ ತಕರಾರು ಚರ್ಚೆ ಮಾಡಿ, ಕರ್ನಾಟಕ ಯಾವುದಕ್ಕೂ ಮಣಿಯದೇ ಇದ್ದಾಗ ನೇರವಾಗಿ ಪ್ರಧಾನಮಂತ್ರಿಗಳಿಗೆ ದೂರು ನೀಡಿತು. ನಂತರ ನ್ಯಾಯಾಲಯಕ್ಕೆ ತಮಿಳುನಾಡಿನ "ತಮಿಳುನಾಡು ಕಾವೇರಿ ನೀರಪ್ಪಾಸನ ವಿಲೈಪೊರುಳುಗಳ್ ವಿವಸಾಯಿಗಳ್ ನಾಲಾ ಉರಿಮೈ ಪೊದುಗಪ್ಪು ಸಂಗಂ" ಎನ್ನುವ ಸಂಘವು ದೂರು ಸಲ್ಲಿಸಿತು, ಸರ್ಕಾರವೂ ದಾವೆ ಹೂಡಿತು. ದ್ವಿಪಕ್ಷೀಯ ಮಾತುಕತೆಗಳು ವಿಫಲವಾದ ಕಾರಣದಿಂದಾಗಿ ನ್ಯಾಯಾಧಿಕರಣವನ್ನು ರಚಿಸಬೇಕೆಂದು ಬೇಡಿಕೆ ಇಟ್ಟಿತು. ಇದನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ೨೬೨ನೇ ವಿಧಿಯಂತೆ  "ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣ"ವನ್ನು ರಚಿಸಲು ಕೇಂದ್ರಸರ್ಕಾರಕ್ಕೆ ಸೂಚಿಸಿತು. ಹೀಗೆ ೧೯೯೦ರಲ್ಲಿ ಕಾವೇರಿ ನ್ಯಾಯಾಧಿಕರಣವು ಜಾರಿಗೆ ಬಂದಿತು.

(...ಮುಂದುವರೆಯುವುದು)

1 ಅನಿಸಿಕೆ:

Ramayya ಅಂತಾರೆ...

dhaaravaahiyante sanchike yinda sanchikege kutoohala mooDiside. Mundina sanchikegaagi edurunoDuttiddene. Jotege aayaaya kaalada paatradhaarigalannoo, avara koDugegaLannoo tilisi..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails