ಚುನಾವಣಾ ಫಲಿತಾಂಶ: ಕಲಿತರೆ ಪಾಠ! ಮೈಮರೆತರೆ ಗೋತಾ!!


ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಹೊರಬಂದಿವೆ. ನಿರೀಕ್ಷೆಯಂತೆ ಕಾಂಗ್ರೆಸ್ ಗೆದ್ದಿದೆ, ನಿರೀಕ್ಷೆಗೂ ಮೀರಿ ಗೆದ್ದಿದೆ! ಈ ಚುನಾವಣೆಯ ಫಲಿತಾಂಶವು ಮೇಲ್ನೋಟಕ್ಕೆ ಕಾಂಗ್ರೆಸ್ಸಿನ ಸಾದಾಸೀದ ಗೆಲುವಾಗಿ ಕಾಣುತ್ತಿದ್ದರೂ ಇದರ ಒಳನೋಟ ಕುತೂಹಲಕಾರಿಯಾಗಿದೆ. ನಾಡಿನಲ್ಲಿರುವ ನಾಲ್ಕಾರು ದೂರದರ್ಶನ ವಾಹಿನಿಗಳು ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡ್ತಾಯಿದ್ದಾರೆ. ಸರಿ.. ನಾವೂ ಕೂಡಾ ಸ್ವಲ್ಪ ನಮ್ಮ ಮೂಗಿನ ನೇರಕ್ಕೆ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಿ ನೋಡೋಣ.

ಚುನಾವಣೆ ವಿಶ್ಲೇಷಣೆಯಲ್ಲಿ ಮುಖ್ಯವಾಗಿ ಕಂಡದ್ದು!

ಈ ಬಾರಿ ಎಲ್ಲೆಡೆ ಕಾಂಗ್ರೆಸ್ ಗೆದ್ದಿದೆ.  ಜನರು ಕಾಂಗ್ರೆಸ್ ಪಕ್ಷವನ್ನು ಭರ್ಜರಿಯಾಗಿ ಕೈಹಿಡಿದಿದ್ದಾರೆ. ಒಟ್ಟು ಬಹುಮತಕ್ಕೆ ಬೇಕಾದ ೧೧೩ ಶಾಸಕರ ಸಂಖ್ಯೆಗಿಂತಲೂ ಹೆಚ್ಚೇ ಸಂಖ್ಯೆಯ ಶಾಸಕರನ್ನು ಕಾಂಗ್ರೆಸ್ ಗೆಲ್ಲಿಸಿಕೊಂಡಿದೆ. ಈ ಕಾರಣದಿಂದ ಕರ್ನಾಟಕವನ್ನು ಐದುವರ್ಷಗಳ ಕಾಲ ಆಳುವ ಅವಕಾಶವನ್ನೂ ಪಡೆದುಕೊಂಡಿದೆ. ಹಾಗೇ ಭ್ರಷ್ಟಾಚಾರ ಮತ್ತು ಒಳಜಗಳವೂ ಸೇರಿದಂತೆ ನಾನಾ ಗೋಜಲುಗಳಿಂದಾಗಿ ಒಡೆದು ಹೋಳಾದ ಬಿಜೆಪಿ ಕಳೆದ ಬಾರಿಗಿಂತ ತೀರಾ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಜಾತ್ಯಾತೀತ ಜನತಾದಳವು ೪೦ ಸ್ಥಾನ ಗಳಿಸಿ ಉತ್ತಮವಾದ ಸಾಧನೆ ಮಾಡಿದ್ದರೂ ಸಾಕಷ್ಟು ಸಾಧಿಸಿಲ್ಲಾ! ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಶಾಸಕರ ಎಣಿಕೆಯ ಓಟದಲ್ಲಿ ಹಿಂದುಳಿದಿವೆ! ಈ ಮೇಲ್ನೋಟದ ದಿಟಗಳನ್ನು ಹಿಡಿದುಕೊಂಡು ಕೆಲಮಾಧ್ಯಮಗಳು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಎಡೆಯಿಲ್ಲಾ, ಜೆಡಿಎಸ್‌ಗೆ ಉತ್ತರ ಕರ್ನಾಟಕದಲ್ಲಿ ನೆಲೆಯಿಲ್ಲಾ, ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲಾ... ಜನರು ಸ್ಪಷ್ಟ ಬಹುಮತ ಕೊಡಬೇಕು ಎಂದೇ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ... ಇತ್ಯಾದಿ ವಿಶ್ಲೇಷಣೆಗಳನ್ನು ಮಾಡುತ್ತಿವೆ.

ಎಚ್ಚೆತ್ತರೆ ಇದು ಒಳ್ಳೇ ಪಾಟ! ಮೈಮರೆತರೆ ಮುಳುಗು!!

ಕನ್ನಡ ಕನ್ನಡಿಗ ಕರ್ನಾಟಕದ ಹಿತದೃಷ್ಟಿಯನ್ನು ಗಮನವಿಟ್ಟುಕೊಂಡು ನೋಡಿದರೆ ನಿಜವಾದ ಏಳಿಗೆಗೆ ನಮ್ಮ ರಾಜಕೀಯ ಆಯ್ಕೆಗಳು ಸಾಗಬೇಕಾದ ದಿಕ್ಕು ಹೀಗೆ ಕಾಣುತ್ತಿತ್ತು!
ಭಾರತದಲ್ಲಿರುವ ಆಳ್ವಿಕೆ ವ್ಯವಸ್ಥೆಯಲ್ಲಿ ನಮ್ಮ ಜನಪ್ರತಿನಿಧಿಗಳು ನಿಭಾಯಿಸಬೇಕಾದ ಹೊಣೆಗಾರಿಕೆಯಾದರೂ ಎಂಥದ್ದು? ಕೇಂದ್ರಸರ್ಕಾರದಲ್ಲಿ ಕೂತು ಒಪ್ಪುಕೂಟ ರೂಪಿಸಲು ಬೇಕಿರುವ ವ್ಯವಸ್ಥೆಗಳನ್ನು ರೂಪಿಸುವುದು, ಆಗಬೇಕಾದ ಬದಲಾವಣೆಗಳನ್ನು ಮಾಡುವುದು, ಕೇಂದ್ರವು ಕೊಡಮಾಡುವ ಯೋಜನೆಗಳನ್ನು ರಾಜ್ಯಕ್ಕೆ ತರುವುದು, ಇಂದಿನ ದಿನಕ್ಕೆ ಅನಿವಾರ್ಯವಾಗಿರುವ “ಕೇಂದ್ರದ ಜುಟ್ಟುಹಿಡಿದು ರಾಜ್ಯದ ಹಿತ ಕಾಪಾಡುವುದು”... ಮೊದಲಾದವುಗಳು. ಇವುಗಳನ್ನು ಪರಿಣಾಮಕಾರಿಯಾಗಿ ಮಾಡಲು ಯಾವ ಮಾದರಿಯ ರಾಜಕಾರಣವನ್ನು ಅನುಸರಿಸಬೇಕು ಎನ್ನುವುದನ್ನು ನಾಡಿನ ಜನರು ಯೋಚಿಸಬೇಕಾಗಿದೆ.
ಈ ನಿಟ್ಟಿನಲ್ಲಿ ನೋಡಿದಾಗ ನಾಡಜನರು ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಕೈಹಿಡಿಯಬೇಕಿತ್ತು! ಹಾಗಾಗಿದೆಯೇ ಎಂಬುದನ್ನು ನೋಡಿದಾಗ ಕಾಣುವ ಕೆಲವು ವಿಷಯಗಳು ಹೀಗಿವೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಜೆಡಿಎಸ್, ಕೆಜೆಪಿ ಮತ್ತು  ಬಿಎಸ್‌ಆರ್ ಒಟ್ಟಾಗಿ ಸೇರಿ ಗಳಿಸಿರುವುದು ಸುಮಾರು ೩೩% ಮತಗಳನ್ನು. ಕೆಜಿಪಿ ಪಕ್ಷವು ಸೀಟು ಗಳಿಕೆಯಲ್ಲಿ ಎರಡಂಕಿ ದಾಟದಿದ್ದರೂ ಕೂಡಾ ಒಟ್ಟು ೪೧ ಕ್ಷೇತ್ರಗಳಲ್ಲಿ ಮೊದಲೆರಡು ಸ್ಥಾನದಲ್ಲಿದೆ. ಹೀಗೆ ರಾಷ್ಟ್ರೀಯವಲ್ಲದ ಪಕ್ಷಗಳ ಒಟ್ಟು ಮತಗಳಿಕೆ  ಆಶಾದಾಯಕವಾಗಿದ್ದರೂ ಇದರಿಂದಾಗಿ ಕನ್ನಡಿಗರು ಕನ್ನಡಿಗರಾಗಿ ಮತ ಚಲಾಯಿಸಿದ್ದಾರೆ ಎನ್ನಲಾಗದು. ಬೆಳಗಾವಿಯಲ್ಲಿ ವರ್ಷಗಳ ಕಾಲ ಕನ್ನಡಿಗರನ್ನು ಒಗ್ಗೂಡಿಸಲು ನಡೆದ ಪ್ರಯತ್ನಗಳನ್ನು ಮತಗಳಾಗಿ ಚಲಾಯಿಸುವಲ್ಲಿ ಅಲ್ಲಿನ ಕನ್ನಡಿಗರು ಎಡವಿದ್ದಾರೆ. ಇದು ಎಂಇ‌ಎಸ್‌ನ ಇಬ್ಬರು ಶಾಸಕರ ಗೆಲುವಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಕನ್ನಡಪರವಾಗಿ ರಾಜಕಾರಣ ಮಾಡಲು ವಿಫುಲವಾದ ಅವಕಾಶಗಳು ಕಾಣುತ್ತಿದೆಯಾದರೂ ಕನ್ನಡಿಗರು ಒಂದು ಮತಬ್ಯಾಂಕ್ ಆಗುವಲ್ಲಿ ಸಾಗಬೇಕಾದ ದಾರಿ ಕಡಿದಾಗಿಯೂ, ತೊಡಕಿನದ್ದಾಗಿಯೂ ಕಾಣುತ್ತಿದೆ. ಹಾಗಿದ್ದರೂ ದಾರಿಯಂತೂ ಇದೆಯೆನ್ನುವುದು ಆಶಾಭಾವನೆಗೆ ಕಾರಣವಾಗಿದೆ. ಕನ್ನಡಿಗರು ಇನ್ನಾದರೂ ತಮ್ಮದೇ ಪಕ್ಷ ಕಟ್ಟಿಕೊಳ್ಳದಿದ್ದರೆ..."ಕಾಂಗ್ರೆಸ್ ಗೆಲುವಿಗಾಗಿ ನೂರಾರು ಕಿಮೀ ಪಾದಯಾತ್ರೆ ಮಾಡಿ, ವರುಶಗಟ್ಟಲೆ ಹೋರಾಟ ಮಾಡಿ, ಗೆಲುವು ದಕ್ಕಿಸಿಕೊಟ್ಟು... ಇದೀಗ ಮುಖ್ಯಮಂತ್ರಿ ಹುದ್ದೆಯ ಆಯ್ಕೆಯನ್ನು ದೆಹಲಿ ದೊರೆಗಳಿಗೆ ಒಪ್ಪಿಸಿ ಕುಳಿತಿರುವ" ಶ್ರೀ ಸಿದ್ಧರಾಮಯ್ಯನವರೂ, "ಬಕ್ರೀದಿನಲ್ಲಿ ಬದುಕುಳಿದರೆ ಮೊಹರಂನಲ್ಲಿ ಕುಣೀತೀವಿ" ಎಂದು ಹೈಕಮಾಂಡಿನ ಎದುರಿಗೆ ತಮ್ಮನ್ನು ಕುರಿಗೆ ಹೋಲಿಸಿಕೊಂಡ ಖರ್ಗೆಯವರೇ ಮೊದಲಾದ ನಾಯಕರುಗಳಂತೆಯೇ ಇಡೀ ಕನ್ನಡನಾಡೂ ದೆಹಲಿ ಗುಲಾಮರಾಗಬೇಕಾಗುತ್ತದೆ! ಅಷ್ಟೇ!!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails