ಪ್ರಮಾಣವಚನದ ಭಾಷೆ ನಿಜಕ್ಕೂ ಸಮಸ್ಯೇನಾ?


ಕರ್ನಾಟಕದ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದವರು ಶಾಸಕರುಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊನ್ನೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಇಬ್ಬರು ಸಚಿವರು ಮರಾಟಿಯಲ್ಲೂ, ಖಮರುಲ್ ಇಸ್ಲಾಂ, ಅಶೋಕ್ ಖೇಣಿ,  ಸಂಜಯಪಾಟೀಲ್ ಮತ್ತು  ಉಮೇಶ್ ಜಾಧವ್‌ ಅವರುಗಳು ಇಂಗ್ಲೀಶ್ ಭಾಷೆಯಲ್ಲೂ, ಉಳಿದವರು ಕನ್ನಡದಲ್ಲೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೊಂದು ರೀತಿಯಲ್ಲಿ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದ್ದು ಇದಕ್ಕೆ ಕೆಲವು ಜನರ ಕಿತಾಪತಿಯೂ, ಮತ್ತೆ ಕೆಲವರ "ಸ್ಪಂದನೆಯನ್ನೇ ಮರೆತ ಜಡತ್ವವೂ" ಜೊತೆಗೆ ಭಾರತದ ಭಾಷಾನೀತಿಯೂ ಕಾರಣವಾಗಿದೆ!!

ಬೇರೆ ಭಾಷೆಯಲ್ಲಿ ಪ್ರಮಾಣವಚನ ತಪ್ಪಾ?!

ಇಷ್ಟಕ್ಕೂ ಕರ್ನಾಟಕದ ವಿಧಾನಸಭೆಗೆ ಆಯ್ಕೆಯಾಗುವ ಸ್ಪರ್ಧಾಳುಗಳು ನಾನಾ ತಾಯ್ನುಡಿಯವರಾಗಿರುತ್ತಾರೆ. ಅವರವರ ತಾಯ್ನುಡಿಯಲ್ಲಿ ಪ್ರಮಾಣ ವಚನ ತೆಗೆದುಕೊಂಡರೆ ತಪ್ಪೇನು ಎನ್ನಿಸಬಹುದು. ಸಮಸ್ಯೆ ಇರುವುದು ಯಾವುದೋ ಭಾಷೆಯಲ್ಲಿ ಪ್ರಮಾಣವಚನ ತೆಗೆದುಕೊಳ್ಳುವುದರಲ್ಲ.. ಬದಲಾಗಿ ಕರ್ನಾಟಕದ ಸಾರ್ವಭೌಮತ್ವವನ್ನು ಅಳಿಸಿಹಾಕಿ ಕನ್ನಡಿಗರಿಗೆ ಸವಾಲೆಸೆಯುವ ಉದ್ದೇಶವನ್ನು, ಈ ಜನರು ಹೊಂದಿರುವುದಾದಲ್ಲಿ ಅದು ಸಮಸ್ಯೆಯಾಗಿ ಕಾಡುತ್ತದೆ. ಇದನ್ನು ಸ್ವಲ್ಪ ವಿಸ್ತರಿಸಿ ನೋಡೋಣ.

ಮರಾಟಿಯಲ್ಲಿ ಪ್ರಮಾಣವಚನ ಸ್ವೀಕರಿಸಿದವರು, ಕರ್ನಾಟಕವನ್ನು ಒಡೆದು ಮಹಾರಾಷ್ಟ್ರಕ್ಕೆ ಬೆಳಗಾವಿಯನ್ನು ಸೇರಿಸಲು ತುದಿಗಾಲಲ್ಲಿ ನಿಂತಿರುವ... ಅವಕಾಶ ಸಿಕ್ಕಾಗಲೆಲ್ಲಾ ಭಾಷೆಯ ಹೆಸರಲ್ಲಿ ಕನ್ನಡನಾಡನ್ನು ಕನ್ನಡಿಗರನ್ನು ದೂಷಿಸುವ ಎಂಇಎಸ್ ಪಕ್ಷದ ಮಂದಿ. ಬಹುವರ್ಷಗಳಿಂದ ನಮ್ಮ ನಾಡಲ್ಲಿ ನೆಲೆಸಿ ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆತಿರುವ ಮರಾಟಿಗರ ಮನಸ್ಸಲ್ಲಿ ಪ್ರತ್ಯೇಕತೆಯ ವಿಷಬೀಜ ಬಿತ್ತುತ್ತಿರುವ ಮಂದಿ. ಕನ್ನಡ ಧ್ವಜವನ್ನು ಸುಟ್ಟು, ಕರ್ನಾಟಕ ರಾಜ್ಯೋತ್ಸವಗಳಂದು ಕಪ್ಪುಬಾವುಟ ಹಾರಿಸುವ ಮಂದಿ. ಚುನಾವಣೆಯ ಪ್ರಚಾರಕ್ಕೆ ಬಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳು ಯಾರನ್ನು ಕುರಿತು, ‘ಇವರನ್ನು ಗೆಲ್ಲಿಸಿ, ಕರ್ನಾಟಕವನ್ನು ಬೆರಳತುದಿಯಲ್ಲಿ ಕುಣಿಸುತ್ತೇವೆ’ ಎಂದು ಸಾರಿದ್ದರೋ ಆ ಮಂದಿ. ಹಾಗಾಗಿ ಇವರ ಮರಾಟಿ ಭಾಷೆಯಲ್ಲಿನ ಪ್ರಮಾಣವಚನ ಸ್ವೀಕಾರ ಬರಿಯ ಭಾಷೆಗೆ ಸಂಬಂಧಿಸಿದ್ದಲ್ಲಾ! ಅದು ಕನ್ನಡಿಗರ ಸ್ವಾಭಿಮಾನಕ್ಕೆಸೆದ ಸವಾಲು! ಬೆಳಗಾವಿಯ ಅಭಿಮಾನಶೂನ್ಯ ಕನ್ನಡಿಗರ ಮುಖಕ್ಕೆತ್ತಿದ ಮಂಗಳಾರತಿ!

ಇನ್ನು ಖಮರುಲ್ ಇಸ್ಲಾಂ ಅವರು ನಡೆದುಕೊಂಡ ಬಗೆಯೂ ಖಂಡನೆಗೆ ಅರ್ಹವಾದುದೇ. ಧಾರ್ಮಿಕ ಅಲ್ಪಸಂಖ್ಯಾತರು ಎಂದಾಕ್ಷಣ ಅವರಿಗೇನೂ ಕೋಡಿಲ್ಲಾ! ಹಾಗೆಂದು ಅವರೂ ಭಾವಿಸಿರಲಿಕ್ಕಿಲ್ಲಾ!! ಆದರೆ ತಮ್ಮದು ಬೇರೆಯೇ ಐಡೆಂಟಿಟಿ, ನಾವು ಅಲ್ಪಸಂಖ್ಯಾತರು ಎಂದು ಸಾರುವ ಹುನ್ನಾರದ ನಡೆಯಾಗಿ ಇದು ಜನತೆಯ ಕಣ್ಣಿಗೆ ಕಾಣುತ್ತಿರುವುದರಲ್ಲಿ ಸುಳ್ಳಿಲ್ಲಾ! ನಾಡಿನ ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಬೇರೆಯಾಗಿಸುವ, ಆ ಮೂಲಕ ತಮ್ಮದೇನೋ ಬೇಳೆ ಬೇಯಿಸಿಕೊಳ್ಳುವ ಕುತಂತ್ರವೊಂದಲ್ಲದೆ ಇನ್ಯಾವ ಕಾರಣವನ್ನೂ ಖಮರುಲ್ ಇಸ್ಲಾಂ ಅವರ ಈ ನಡವಳಿಕೆಯಲ್ಲಿ ಕಾಣಲಾಗುತ್ತಿಲ್ಲಾ!!

ಬೀದರಿನ ಶಾಸಕರಾದ ಅಶೋಕ್ ಖೇಣಿಯವರು ಯಾಕೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲಾ ಎನ್ನುವುದು ಮಾತ್ರಾ ವಿಚಿತ್ರವಾದ ಸಂಗತಿಯಾಗಿದೆ. ಕನ್ನಡ ಮಕ್ಕಳ ಪಕ್ಷವೆನ್ನುವ ಹೆಸರಿಗೇ ಇವರ ನಡೆ ಕಳಂಕವೆನ್ನಿಸಿದರೆ ಆಶ್ಚರ್ಯವಿಲ್ಲಾ.. ಬಹುಶಃ ಇವರು ಇಂಗ್ಲೀಶನ್ನೇ "ಉದ್ದಿಮೆಗಳ ಭಾಷೆ" ಎಂದೋ, ಕನ್ನಡನಾಡಿನ ಏಕೈಕ ಗೌರವಾನ್ವಿತ ಭಾಷೆಯೆಂದೋ ತಿಳಿದಿರಬೇಕು.

ವ್ಯವಸ್ಥೆಯ ತಿಕ್ಕಲುತನ!

ಇನ್ನು ತಮಾಶೆಯೆಂದರೆ ಕನ್ನಡನಾಡಿನ ವಿಧಾನಸಭೆಯಲ್ಲಿ ಇವರೆಲ್ಲಾ ತಮಗೆ ಬೇಕಾದ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಅಧಿಕಾರವನ್ನು ಭಾರತೀಯ ಸಂವಿಧಾನವೇ ನೀಡಿದೆ ಎನ್ನುವುದು! ಭಾರತದ ಸಂಸತ್ತಿನಲ್ಲಿ ಇರಾನಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವುದು ಹೇಗೆ ಅಸಂಬದ್ಧವೋ ಹಾಗೇ ನಮ್ಮ ನಾಡಿನಲ್ಲಿ ಮರಾಟಿ, ತೆಲುಗು, ತಮಿಳು, ಹಿಂದೀ, ಇಂಗ್ಲೀಶ್ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸುವುದೂ ಅಸಂಬದ್ಧ ಎನ್ನುವುದು ನಮ್ಮ ಸಂವಿಧಾನ ರಕ್ಷಕರ ಕಣ್ಣಿಗೆ ಕಾಣುವುದಿಲ್ಲಾ. ಇದು ಯಾವ ಮಟ್ಟಕ್ಕೆ ಕುರುಡೆಂದರೆ ಇದೇ ನೆಲದ ತುಳುವಿನಲ್ಲಿ ಪ್ರಮಾಣವಚನವನ್ನು ಸ್ವೀಕರಿಸುವುದನ್ನು     "ಇದು ಸಂವಿಧಾನಬಾಹಿರ.. ಹಾಗಾಗಿ ಅಕ್ರಮ" ಎನ್ನಲಾಗಿದೆ.  ನಿನ್ನೆ ವಸಂತ್ ಬಂಗೇರಾರವರು ತುಳುಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದನ್ನು ತಡೆಯಲಾಯಿತು. ನಂಬಿ... ಕರ್ನಾಟಕದ ವಿಧಾನಸಭೆಯಲ್ಲಿ ಅಸ್ಸಾಮಿ, ಮಣಿಪುರಿ ಭಾಷೆಗಳಲ್ಲಿ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು.. ಹುಟ್ಟಿದಾಗಿನಿಂದ ಹೆಸರೇ ಕೇಳಿರದ ಮೈಥಿಲಿ,  ಡೋಗ್ರಿ, ಬೋಡೋ ಮೊದಲಾದ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಬಹುದು. ಆದರೆ ತುಳು, ಕೊಡವ ತೆಕ್ಕುಗಳಲ್ಲಿ ಸ್ವೀಕರಿಸುವಂತಿಲ್ಲಾ! ಇದನ್ನು ನಿಜವಾಗಿ ವ್ಯವಸ್ಥೆಯ ತಿಕ್ಕಲುತನ ಎನ್ನದೇ ಬೇರೇನೂ ಅನ್ನಲು ಸಾಧ್ಯವಿಲ್ಲಾ!

ಸರಿಯಾದ ವ್ಯವಸ್ಥೆಯಲ್ಲಿ...

ಹಾಗಾದರೆ ಕರ್ನಾಟಕದ ವಿಧಾನಸಭೆಯಲ್ಲಿನ ಶಾಸಕರಾಗುವವರು ಯಾವ ನುಡಿಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಭಾರತದ ಸಂಸತ್ತಿನಲ್ಲಿ ಹೇಗೆ ಎಂಟನೇ ಶೆಡ್ಯೂಲಿನಲ್ಲಿರುವ ಯಾವುದೇ ಭಾಷೆಯಲ್ಲಿ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು ಎಂದಿರುವುದನ್ನು ಹಾಗೇ ಕರ್ನಾಟಕದ ವಿಧಾನಸಭೆಗೆ ನೇರವಾಗಿ ಅನ್ವಯಿಸಲಾಗದು. ಕನ್ನಡನೆಲದ ಯಾವುದೇ ಭಾಷೆಯಲ್ಲಿ ಪ್ರಮಾಣವಚನ ತೆಗೆದುಕೊಳ್ಳುವ ಅವಕಾಶ ಇಲ್ಲಿನ ಶಾಸಕರಾಗುವವರಿಗೆ ಇರಬೇಕು. ಈ ನೆಲದ ನುಡಿಯೆಂದರೆ ಇಲ್ಲಿಗೆ ವಲಸೆ ಬಂದು ನೆಲೆಸಿದವರ ನುಡಿಗಳಲ್ಲಾ! ಅದು ಈ ನೆಲದ ನುಡಿಗಳಾದ ಕನ್ನಡ, ತುಳು, ಕೊಡವ ಮುಂತಾದವು ಮಾತ್ರಾ! ಹಾಗಾದರೆ ವಿಧಾನಸಭೆಯ ಕಲಾಪ ನಡೆಯಬೇಕಾದ ಭಾಷೆ? ನಿಸ್ಸಂದೇಹವಾಗಿ ಕನ್ನಡವೇ!! ಉಳಿದ ಭಾಷಿಕರು ನಿಜಕ್ಕೂ ಕನ್ನಡದಲ್ಲಿ ವ್ಯವಹರಿಸಲು ಅಶಕ್ತರಾಗಿದ್ದಲ್ಲಿ ನುಡಿಮಾರುಗರನ್ನು ಬಳಸಿಕೊಳ್ಳುವ ಅವಕಾಶವಂತೂ ಇದ್ದೇ ಇದೆಯಲ್ಲಾ!!

ಕನ್ನಡಿಗರ ವಿರೋಧ ಭಾಷೆಯ ಕುರಿತಲ್ಲಾ!

ನಿಜಕ್ಕೂ ಬೇರೆ ಬೇರೆ ಭಾಷೆಯ ಜನರೊಂದಿಗೆ ಸೌಹಾರ್ದಯುತವಾಗಿ ಬದುಕುವ ಜೀವನಶೈಲಿಯ ಕನ್ನಡಿಗರಿಗೆ ಸಹೃದಯತೆಯ ಪಾಠವನ್ನು ಯಾರೂ ಹೇಳಿಕೊಡಬೇಕಾದ ಅಗತ್ಯವಿಲ್ಲಾ. ಇಷ್ಟಕ್ಕೂ ಮರಾಟಿ, ಇಂಗ್ಲೀಶ್ ಭಾಷೆಗಳನ್ನು ಬಳಸಿ ಯಾರಾದರೋ ಪ್ರಮಾಣವಚನ ಸ್ವೀಕರಿಸಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲಾ. ಇದನ್ನು ಒಪ್ಪಲಾರದಷ್ಟು ಸಣ್ಣತನವೂ ಕನ್ನಡಿಗರಲ್ಲಿಲ್ಲಾ. ಇಲ್ಲಿ ವಿರೋಧವಿರುವುದು ನಮ್ಮ ನಾಡನ್ನು ಒಡೆಯುವ ಸಲುವಾಗೇ ತೊಡೆತಟ್ಟಿ ಸೆಣೆಸಲು ಸಜ್ಜಾಗಿರುವವರ ಸವಾಲಿಗೆ. ಕನ್ನಡ ಬಂದರೂ ಬೇಕೆಂದೇ ಅದನ್ನು ತಿರಸ್ಕರಿಸುವ, ಧಿಕ್ಕರಿಸುವ ಮನಸ್ಥಿತಿಯ ಬಗ್ಗೆ! ನಾಡಿನ ಜನರ ಒಗ್ಗಟ್ಟನ್ನು ಮುರಿದು ಲಾಭ ಮಾಡಿಕೊಳ್ಳಬಲ್ಲೇ ಎಂಬ ಹವಣಿಕೆಯ ಬಗ್ಗೆ! ಕನ್ನಡ ಬಳಸುವುದು ಕೀಳು ಎಂಬ ಕೀಳರಿಮೆಯನ್ನು ಜಗತ್ತಿಗೆ ಸಾರಲು ನಿಂತವರ ಬಗ್ಗೆ! ಕನ್ನಡ ನೆಲದಲ್ಲೇ ದಶಕಗಳಿಂದ ಬದುಕುತ್ತಿದ್ದರೂ ಕನ್ನಡ ಕಲಿಯುವುದಿಲ್ಲಾ ಎನ್ನುವ ಉದ್ಧಟತನದ ಬಗ್ಗೆ!

ಕೊನೆಹನಿ: ನೆಲಕಚ್ಚಿದ್ದ ಎಂಇಎಸ್ ಪಕ್ಷಕ್ಕೆ ಮತ್ತೆ ಜೀವ ತಂದುಕೊಡುತ್ತಿರುವುದು ಎಷ್ಟು ಬಾರಿಸಿದರೂ ಸತ್ತಂತೆಯೇ ಮಲಗಿ ಮೈಮರೆತು ಕರ ಕಮಲ ಸಂಜಾತರಾಗೇ ತಲೆಮೇಲೆ ಹೊರೆ ಹೊತ್ತಂತಿದ್ದು ಅದರಲ್ಲೇ ಧನ್ಯರಾಗುತ್ತಿದ್ದೇವೆನ್ನುವ ಭ್ರಮೆಯಲ್ಲಿರುವ ಬೆಳಗಾವಿಯ ಕನ್ನಡಿಗರೇ!

6 ಅನಿಸಿಕೆಗಳು:

Padyana Ramachandra ಅಂತಾರೆ...

"ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ವಸಂತ್ ಬಂಗೇರ ಅವರು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಹಂಗಾಮಿ ಸ್ಪೀಕರ್ ಮಾಲೀಕಯ್ಯ ಗುತ್ತೇದಾರ್ ಅವರು ಒಪ್ಪಿಕೊಳ್ಳದ ಕಾರಣ ಅವರು ಎರಡನೇ ಬಾರಿ ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿದರು" ಎಂಬ ವರದಿಯನ್ನು ನೋಡಿ ಅನಿವಾಸಿ ಕನ್ನಡಿಗನ ಮನಸಿನಲ್ಲಿ ಮೂಡಿದ ಕೆಲವು ಪ್ರಶ್ನೆಗಳು

1. ಹಂಗಾಮಿ ಸ್ಪೀಕರ್ ಮಾನ್ಯತೆಗೆ Shelf Life ಇದೆಯಾ ? . 1983ರಲ್ಲಿ ತುಳು ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಲು ಅಂದಿನ ಹಂಗಾಮಿ ಸ್ಪೀಕರ್ ಅವರು ಕೊಟ್ಟ ಮಾನ್ಯತೆಯ Expiry Date ಯಾವುದು ?

2 ಪ್ರಸ್ತುತ ಹಂಗಾಮಿ ಸ್ಪೀಕರ್ ಮಾಲೀಕಯ್ಯ ಗುತ್ತೇದಾರ್ ಹಿಂದಿನ ವಿಚಾರಗಳನ್ನು ತಿಳಿಯದವರಾ ?

3. 1983ರಲ್ಲಿ ತುಳು ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಲು ಇದ್ದ ಮಾನ್ಯತೆ 2013 ರಲ್ಲಿ ಯಾಕೆ ಇಲ್ಲ ?

4. ಇಂದು ತುಳು ಭಾಷೆಗೆ ಮಾನ್ಯತೆ ಇಲ್ಲವಾದರೆ 1983ರಲ್ಲಿ ತುಳು ಭಾಷೆಗೆ ಮಾನ್ಯತೆ ಇತ್ತಾ ?

-ಪ. ರಾಮಚಂದ್ರ
ದುಬೈ ,ಸಂಯುಕ್ತ ಅರಬ್ ಸಂಸ್ಥಾನ

admin ಅಂತಾರೆ...

Gurgale

kannadadha raksne vidhanasewdha dinndhane agbeku...

Adhke kannada dhalli hella agbeku

Anonymous ಅಂತಾರೆ...

"ಹುಟ್ಟಿದಾಗಿನಿಂದ ಹೆಸರೇ ಕೇಳಿರದ ಮೈಥಿಲಿ, ಡೋಗ್ರಿ, ಬೋಡೋ ಮೊದಲಾದ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಬಹುದು. ಆದರೆ ತುಳು, ಕೊಡವ ತೆಕ್ಕುಗಳಲ್ಲಿ ಸ್ವೀಕರಿಸುವಂತಿಲ್ಲಾ! ಇದನ್ನು ನಿಜವಾಗಿ ವ್ಯವಸ್ಥೆಯ ತಿಕ್ಕಲುತನ ಎನ್ನದೇ ಬೇರೇನೂ ಅನ್ನಲು ಸಾಧ್ಯವಿಲ್ಲಾ!"

ನೋಡಿ . ಮೈಥಿಲಿ, ಡೋಗ್ರಿ, ಹಾಗು ಬೋಡೋ ಇತ್ತೀಚಿಗೆ ಸಂವಿಧಾನದ ೮ನೆ scheduleಗೆ ಸೇರಿದವು .

ಕೊಂಕಣಿ, ಮರಾಠಿ, ಹಾಗು ಉರ್ದು ಕೂಡ ೮ನೆ scheduleಅಲ್ಲಿ ಇವೆ.

ತುಳು, ಕೊಡವ, ಬ್ಯಾರಿ, ಮುಂತಾದದ ಭಾಷೆಗಳನ್ನು ೮ನೆ schedule ಸೇರಿಸುವ ಹೊಣೆ ಕರ್ನಾಟಕದ ಸರಕಾರದ್ದು . ಅದನ್ನು ಮಾಡಿದರೆ ತುಳು ವಗೇರೆ ಭಾಷೆಗಳಲ್ಲಿ ಪ್ರಮಾಣವಚನವನ್ನು ಸ್ವೀಕರಿಸುವುದು ಸಂವಿಧಾನಬದ್ಧ.

vasanth ಅಂತಾರೆ...

atyuttama baraha....

Ranganath marath ಅಂತಾರೆ...

Nijavada kannadigarige idonduuttama baraha ( including me)...

Arun ಅಂತಾರೆ...

PramaNa Vachana bereyavarige artha Agade..devarige maaatra artha aadre saaku antaanO ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails