ತನ್ನತನ ಮರೆತವರಿಗೆ.. ಇದಲ್ಲದೆ ಇನ್ನೇನು ತಾನೇ ಆದೀತು?

(ಫೋಟೋ ಕೃಪೆ: ಉದಯವಾಣಿ ದಿನಪತ್ರಿಕೆ)
(ಫೋಟೋ ಕೃಪೆ: ಕನ್ನಡ ಪ್ರಭ)

ಸುದ್ದಿ ಬಗ್ಗೆ ಹೇಳೋದೇನೂ ಇಲ್ಲಾ! ಹೇಳಬೇಕಾದ್ದು... ನಿನ್ನೆ ಅಂಚೆಇಲಾಖೆಯ ಮುಖ್ಯಸ್ಥರು ಕನ್ನಡ ಅಭಿವೃದ್ಧಿ ಪ್ರಾಧಿಕಾರದವರದವರಿಗೆ ನೀಡಿದ ಉದ್ಧಟತನದ ಉತ್ತರಗಳ ಹಿಂದಿರುವ "ಹಿಂದೀ ಸಾಮ್ರಾಜ್ಯಶಾಹಿ" ಮನಸ್ಥಿತಿಯ ಬಗ್ಗೆ! ಹೇಳಬೇಕಾದ್ದು... ಇಂಥಾ ಮೇಲರಿಮೆಯನ್ನು ಅವರಲ್ಲೂ, ಕೀಳರಿಮೆಯನ್ನು ನಮ್ಮಲ್ಲೂ ಹುಟ್ಟು ಹಾಕಿದ ಭಾರತದ ಹುಳುಕಿನ ಭಾಷಾನೀತಿಯ ಬಗ್ಗೆ! ಹೇಳಬೇಕಾದ್ದು ಕನ್ನಡನಾಡಿನ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ನುಡಿಯ ಬಳಕೆ ಯಾವ ಪ್ರಮಾಣದಲ್ಲಿ ಆಗುತ್ತಿದೆ ಎಂದು ಪರಿಶೀಲಿಸಲೊಂದು ಪ್ರಾಧಿಕಾರವನ್ನು ಹೊಂದಿರಬೇಕಾದ ದುರಂತ ಪರಿಸ್ಥಿತಿಯ ಬಗ್ಗೆ! ಹೇಳಬೇಕಾದ್ದು... ಸತ್ತ ಹಾಗೆ ಇರೋ ಕನ್ನಡ ಜನರ ‘ಗುಲಾಮಗಿರಿಗೆ ಒಗ್ಗಿಕೊಂಡಂತಿರುವ’ ದುಸ್ಥಿತಿಯ ಬಗ್ಗೆ!

ಹೀಗಾಗಲು ಕಾರಣ ಭಾರತದ ಸಂವಿಧಾನ!

ಬಹುಭಾಷೆಗಳ ನಾಡಲ್ಲಿ ಒಂದೇ ಒಂದು ನುಡಿಯನ್ನು ಈ ದೇಶದ ಕೇಂದ್ರಸರ್ಕಾರದ ಆಡಳಿತ ಭಾಷೆಯನ್ನಾಗಿಸಿದ ಜನರು ಇಡೀ ದೇಶದ ತುಂಬಾ ಹರಡುತ್ತಿರುವ "ಬಹುಜನರ ಹಿತ" "ದೇಶದ ಒಗ್ಗಟ್ಟು" ಎಂಬ ತಲೆಸವರುವ ಮಾತುಗಳು ತೋರಿಕೆಯವು ಮಾತ್ರವೇ ಆಗಿದ್ದು ಇದರ ಹಿಂದೆ ವಾಸ್ತವದಲ್ಲಿ ಇರುವುದು ಉಳಿದೆಲ್ಲಾ ವೈವಿಧ್ಯತೆಗಳನ್ನು ಅಳಿಸಿಬಿಡುವ ಕ್ರೌರ್ಯವೇ ಆಗಿದೆ. ಇದರ ಪರಿಣಾಮವಾಗೇ ಅಚ್ಚಕನ್ನಡ ನಾಡೊಳಗಿರುವ ಅಂಚೆಕಛೇರಿಯಲ್ಲಿ ಕನ್ನಡವಿಲ್ಲದಿರುವುದು ತಪ್ಪಲ್ಲಾ! ಹಿಂದೀಯಲ್ಲಿ ಇಲ್ಲದಿದ್ದರೆ ತಪ್ಪು! ಹೀಗೆ ಭಾರತದ ಆಡಳಿತ ವ್ಯವಸ್ಥೆಯ ನೀತಿ ನಿಯಮಗಳು ಹೇಳುತ್ತವೆ. ಇಷ್ಟೇ ಅಲ್ಲದೆ ಕೋಟ್ಯಾಂತರ ರೂಪಾಯಿಗಳನ್ನು ಪ್ರತಿವರ್ಷ ಹಿಂದೀ ಬಳಕೆಯನ್ನು ಹೆಚ್ಚಿಸಲೆಂದೇ ಕೊಡುತ್ತಾ, ನಿನ್ನೆಗಿಂತಾ ಇಂದು ಎಷ್ಟು ಹೆಚ್ಚು ಹಿಂದೀ ಬಳಕೆಯಾಗಿದೆ ಎಂದು ಎಣಿಸುತ್ತಾ, ಹೆಚ್ಚು ಅನುಷ್ಠಾನ ಮಾಡಿದವರಿಗೆ ಬಡ್ತಿ ಬಹುಮಾನ ನೀಡುತ್ತಾ...  ದಿನೇದಿನೇ ಭಾರತದ ಹಿಂದೀಯೇತರ ಭಾಷೆಗಳನ್ನು ಕೊಲ್ಲಲು ಸ್ಕೆಚ್ಚು ಹಾಕಿಕೊಟ್ಟಿರುವುದೇ ಭಾರತದ ಸಂವಿಧಾನ! ಇದು ಬದಲಾಗಬೇಕೋ ಬೇಡವೋ ಎಂಬುದನ್ನು ಜನರು ತೀರ್ಮಾನಿಸಬೇಕಾಗಿದೆ. 

ದುರಂತ!

ಆದರೆ ಪರಿಸ್ಥಿತಿ, ‘ಸಂವಿಧಾನವೆನ್ನುವುದು ಬದಲಾಗದ ಪರಮ ಪವಿತ್ರಗ್ರಂಥ’ ಎಂದು ಭಾವಿಸಿಯೋ ಏನೋ ಕನ್ನಡದ ಜನ ಇದರ ಬಗ್ಗೆ ಯೋಚಿಸುತ್ತಿಲ್ಲಾ ಎನ್ನಿಸುವಂತಿದೆ. ಹಾಗೆ ಜನರನ್ನು ಎಚ್ಚರ ಮಾಡಿಸುವ ಕೆಲಸವನ್ನು ಈ ನೆಲದ ರಾಜಕೀಯ ಪಕ್ಷಗಳೂ ಮಾಡುತ್ತಿಲ್ಲಾ! ಇಷ್ಟಕ್ಕೂ ಕರ್ನಾಟಕ ಕೇಂದ್ರಿತ ರಾಜಕಾರಣವೇ ಇಲ್ಲದಿದ್ದಾಗ ಇದು ಸಹಜವೇ ಆಗಿದೆಯಲ್ಲವೇ!! ಕನ್ನಡಿಗರ ಮೇಲೆ ನಿತ್ಯ ಇಂಥಾ ಅತ್ಯಾಚಾರವಾಗುತ್ತಿದ್ದರೂ, ಅದು ಭಾರತ ಸರ್ಕಾರವು ಸಂವಿಧಾನದ ಹೆಸರಲ್ಲೇ ಮಾಡುತ್ತಿದ್ದರೂ ನಮಗಿನ್ನೂ ಮೈಮರೆವು... ಇದು ನಿಜಕ್ಕೂ ದುರಂತದ ಸಂಗತಿ!

ಕೊನೆಹನಿ: ಸಂವಿಧಾನ, ಆಡಳಿತ ಭಾಷಾ ಕಾಯ್ದೆಗಳು ಏನೇ ಹೇಳಲಿ, ಕೇಂದ್ರಸರ್ಕಾರಿ ಕಛೇರಿಗಳು ಹೇಗೇ ಕೆಲಸ ಮಾಡಲಿ... ಆ ರಾಜ್ಯದ ಭಾಷೆಯನ್ನು ಬಳಸುವ ವಿಷಯವಾಗಿ ಇಷ್ಟೊಂದು ಅಸಡ್ಡೆಯನ್ನು ತೋರಲು, ಯಾವುದೇ ಅಧಿಕಾರಿಗೆ ನಿರಭಿಮಾನಿ ಕನ್ನಡಿಗರ ಕನ್ನಡನಾಡಲ್ಲಿ ತೋರದೆ ಇನ್ನಾವುದೇ ರಾಜ್ಯದಲ್ಲೂ ತೋರಲು ಬಹುಶಃ ಧೈರ್ಯವಾಗುತ್ತಿರಲಿಲ್ಲ! ಹಾಗೆ ಮಾಡಿದ್ದ ಪಕ್ಷದಲ್ಲಿ ಇಷ್ಟು ಹೊತ್ತಿಗೆ ಆ ನಾಡಿನ ರಾಜಕೀಯ ಪಕ್ಷಗಳೂ, ಮಾಧ್ಯಮಗಳೂ ನಮ್ಮವರ ಹಾಗೆ ತಣ್ಣಗೂ ಇರುತ್ತಿರಲಿಲ್ಲ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails