ಈ ಪಿಟಿಶನ್ನಿಗೆ ಯಾಕೆ ಸಹಿ ಹಾಕಬೇಕೆಂದರೆ...


ಭಾರತದ ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಬಣ್ಣಿಸಲಾಗಿರುವ ಭಾರತದ ಭಾಶಾನೀತಿಯನ್ನು ಓದಿದಾಗ ನಮ್ಮ ಬಹುತೇಕ ಸಮಸ್ಯೆಯ ಮೂಲ ಅಲ್ಲೇ ಇರುವುದು ಎದ್ದು ಕಾಣುತ್ತದೆ. ನಮ್ಮೂರಿನ ಬ್ಯಾಂಕುಗಳ ಚೆಕ್ಕುಗಳಲ್ಲಿ ಕನ್ನಡವಿಲ್ಲದಿರುವುದು, ನಮ್ಮೂರಿನ ಕೇಂದ್ರಸರ್ಕಾರಿ ಕಚೇರಿಗಳಲ್ಲಿ ಕನ್ನಡವಿಲ್ಲದಿರುವುದು, ನಮ್ಮೂರ ವಿಮಾನ ನಿಲ್ದಾಣದಲ್ಲಿ, ರೈಲುಗಳಲ್ಲಿ ಹಿಂದೀ ತುಂಬಿ ತುಳುಕುತ್ತಿರುವುದು, ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಹಿಂದೀ ನುಂಗುತ್ತಿದೆ ಎಂಬ ಅಳಲು ಎದ್ದಿರುವುದು, ಶಾಲಾಕಲಿಕೆಯಲ್ಲಿ ಹಿಂದೀ ನುಸುಳಿಕೊಂಡಿರುವುದು... ಒಟ್ಟಾರೆ ನಮ್ಮ ಕನ್ನಡಿಗರ ಬದುಕಿನ ಒಂದೊಂದು ಹೆಜ್ಜೆಯಲ್ಲೂ ಹಿಂದೀ ತನ್ನ ಕರಿನೆರಳನ್ನು ಚಾಚಿರುವುದು ಮತ್ತು ಕನ್ನಡ ಇಲ್ಲದಿದ್ದರೂ ನಡೆಯುತ್ತದೆ ಎಂಬಂತಾಗಿರಲು ಕಾರಣವೇ ಭಾರತದ ಹುಳುಕಿನ ಭಾಶಾನೀತಿಯಾಗಿದೆ.

ಕೊಡಲಿ ರೆಂಬೆಗಲ್ಲಾ.. ಬೇರಿಗೆ!

ಅಲ್ಲಿ ಕನ್ನಡವಿಲ್ಲ, ಇಲ್ಲಿ ಕನ್ನಡವಿಲ್ಲ, ಅಲ್ಲಿ ಹೋರಾಡಿ ಕನ್ನಡ ಬರಿಸಿದೆವು, ಇಲ್ಲಿ ಪ್ರತಿಭಟಿಸಿ ಕನ್ನಡ ಬರಿಸಿದೆವು, ರೈಲ್ವೇ ಹುದ್ದೆಗಳಲ್ಲಿ ಕನ್ನಡಿಗರಿಗೆ ಅವಕಾಶವಿಲ್ಲಾ ಎಂದು ಪ್ರತಿಭಟಿಸಿದೆವು, ಬ್ಯಾಂಕು ನೇಮಕಾತಿಯಲ್ಲಿ ಕನ್ನಡವಿಲ್ಲಾ ಎಂದು ಹೋರಾಡಿದೆವು, ಮೆಟ್ರೋ ರೈಲಿನಲ್ಲಿ ಬೇಡದಿದ್ದರೂ ಹಿಂದೀ ಎಂದು ದನಿಯೆತ್ತಿದೆವು, ಸೇನಾ ನೇಮಕಾತಿಯಲ್ಲಿ ಕನ್ನಡದಲ್ಲಿ ಜಾತಿ ಪ್ರಮಾಣಪತ್ರವಿಲ್ಲವೆಂದು ನಮ್ಮನ್ನು ವಾಪಸ್ಸು ಕಳಿಸಿದರು ಎಂದು ಪ್ರತಿಭಟಿಸಿದೆವು.. ಹೀಗೆ ಕನ್ನಡಿಗರ ಹೋರಾಟಗಳೆಲ್ಲವೂ ಹಿಂದೀ ಹೇರಿಕೆಯ ಮರದ ರೆಂಬೆ ಕೊಂಬೆಗಳನ್ನು ತರಿದಂತೆ ಮಾತ್ರವೇ ಆಗಿದ್ದು ನಿಜವಾದ ಬೇರು ಭಾರತದ ಸಂವಿಧಾನದಲ್ಲಿ ಬರೆಯಲಾದ ಹುಳುಕಿನ ಭಾಶಾನೀತಿಯೇ ಆಗಿದೆ. ಈ ನೀತಿ ಬದಲಾಗದೆ ನಮಗೆ ಉಳಿಗಾಲವಿಲ್ಲ. ಈ ನೀತಿ ಹೀಗೇ ಮುಂದುವರೆದರೆ ಕನ್ನಡವೂ ಸೇರಿದಂತೆ ಹಿಂದೀಯೇತರ ನುಡಿಗಳ ಜನರೆಲ್ಲಾ ತಮ್ಮದೇ ನೆಲದಲ್ಲಿ ತಾವೇ ಎರಡನೇ ದರ್ಜೆಯ ಪ್ರಜೆಗಳಾಗಬೇಕಾಗುತ್ತದೆ. ಹಾಗಾಗಬಾರದೆಂದರೆ ಭಾರತದ ಸಂಸತ್ತಿನಲ್ಲಿ ಇಂದಿನ ಭಾಶಾನೀತಿಯನ್ನು ಕೈಬಿಟ್ಟು ಹೊಸದಾದ ಸಮಾನ ಗೌರವದ, ಸಮಾನ ಅವಕಾಶದ ಭಾಷಾನೀತಿಯೊಂದು ರೂಪುಗೊಳ್ಳಬೇಕಾಗಿದೆ.

ಹೀಗೊಂದು ಹಕ್ಕೊತ್ತಾಯ

ಈ ದಿಕ್ಕಿನಲ್ಲಿ ನಾವು ಜನಸಾಮಾನ್ಯರೂ, ರಾಜಕೀಯ ಪಕ್ಷಗಳೂ, ರಾಜಕಾರಣಿಗಳೂ, ಜನಪ್ರತಿನಿಧಿಗಳೂ ಮೊದಲಾದ ಎಲ್ಲರಲ್ಲೂ ಈ ಬಗ್ಗೆ ಎಚ್ಚರ ಮೂಡಿಸಬೇಕಾಗಿದೆ. ಈ ಎಚ್ಚರದ ದನಿಯಾಗಿ ಈ ಬಾರಿ ನಾವೊಂದು ಮಿಂಬಲೆ ಹಕ್ಕೊತ್ತಾಯವೊಂದನ್ನು ಆರಂಭಿಸಿದ್ದೇವೆ. ನೀವುಗಳು ಇದಕ್ಕೆ ಸಹಿ ಮಾಡಿದ ನಂತರ ಇದನ್ನು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ತಲುಪಿಸಲಿದ್ದೇವೆ.

ಕಳೆದ ಬಾರಿಯೂ ಇಂಥದ್ದೇ ಒಂದು ಪಿಟಿಶನ್ನಿಗೆ ನೀವು ಸಹಿ ಹಾಕಿದ್ದಿರಿ. ಅದೇನಾಯಿತು? ಈಗ ಮತ್ಯಾಕೆ ಇದು? ಎಂಬ ಅನಿಸಿಕೆ ನಿಮ್ಮಲ್ಲಿ ಕೆಲವರಿಗಿರಬಹುದು. ಕಳೆದಬಾರಿ ಮಾಡಿದ ಪಿಟಿಶನ್ನು ಸುಂಕದವನ ಮುಂದೆ ಸುಖದುಃಖ ಹೇಳಿಕೊಳ್ಳಲು ಹೋದ ಹಾಗಾಯ್ತು! ನಮ್ಮ ರಾಜ್ಯದ ಘನ ರಾಜ್ಯಪಾಲರು ತಮ್ಮ ಅಮೂಲ್ಯ ಸಮಯವನ್ನು "ಭಾಶಾನೀತಿ ಬದಲಾವಣೆಯ ಹಕ್ಕೊತ್ತಾಯ" ಸ್ವೀಕರಿಸುವಂತಹ ಚಿಲ್ಲರೆ ವಿಷಯಗಳಿಗೆ ಮೀಸಲಿಡಲು ಸಾಧ್ಯವಾಗಲಿಲ್ಲ! ತಿಂಗಳುಗಟ್ಟಲೆ ರಾಜಭವನಕ್ಕೆ ಅಲೆದಾಡಿದ ನಮ್ಮ ಭೇಟಿಗೆ ಸಮಯವೇ ಕೊಡದಿದ್ದುದರಿಂದ ಕೊನೆಗೆ ಮನವಿಯನ್ನು ಅವರ ಕಚೇರಿಗೆ ಸಲ್ಲಿಸಿದೆವು. ಈ ಬಾರಿ ಮುಖ್ಯಮಂತ್ರಿಗೆ ಸಲ್ಲಿಸೋಣ. ಅವರು "ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರು, ನಮ್ಮದೇ ನಾಡಿನವರು, ನಮ್ಮಂತೆಯೇ ಕನ್ನಡಿಗರು, ನಮ್ಮಿಂದಲೇ ಆರಿಸಿ ಅಧಿಕಾರದ ಚುಕ್ಕಾಣಿ ಹಿಡಿದವರು" ಎಂಬೆಲ್ಲಾ ವಿಶೇಶಣಗಳ ಕಾರಣದಿಂದಾಗಿ ಈ ಬಾರಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಈ ಹಕ್ಕೊತ್ತಾಯವನ್ನು ಸಲ್ಲಿಸುತ್ತಿದ್ದೇವೆ. 

ಮುಂದಿನದಿನಗಳಲ್ಲಿ ನಮ್ಮ ಈ ದನಿ ಬೇರೆ ಬೇರೆ ರಾಜ್ಯಗಳಿಂದಲೂ ಗಟ್ಟಿಯಾಗಿ ಕೇಳಿ ಬರಬೇಕಿದೆ. ಇದು ನಾಳಿನ ಚುನಾವಣೆಗಳಲ್ಲಿ ಪ್ರಮುಖ ವಿಷಯವಾಗಬೇಕಿದೆ. ಭಾರತದ ಸಂಸತ್ತಿನಲ್ಲಿ ಈ ವಿಷಯ ಚರ್ಚೆಗೆ ಬರಬೇಕಿದೆ. ಕೋಟೆ ಎಷ್ಟೇ ಗಟ್ಟಿಯಾಗಿದ್ದರೇನು? ಒಂದೊಂದೇ ಇಟ್ಟಿಗೆ ಕೆಡುವುತ್ತಿದ್ದರೆ ಕೋಟೆ ಉರುಳಲೇ ಬೇಕು! ಸರಿ ಸರಿ... ಈಗ ಮೊದಲು ಈ ಪಿಟಿಶನ್ನಿಗೆ ಸಹಿ ಹಾಕೋಣ. ನಮ್ಮವರಿಂದಲೂ ಸಹಿ ಹಾಕಿಸೋಣ: http://chn.ge/17S72rs

2 ಅನಿಸಿಕೆಗಳು:

MAHANT ಅಂತಾರೆ...

ಸಿದ್ದಣ್ಣ
ನಮ್ಮ ಭಾಷೆಗೂ ಸಮಾನತೆ ಕೊಡಿಸಣ್ಣ

Anantha Rao ಅಂತಾರೆ...

When all people are equal under law so should be their languages. No language can be superior by population size.

Like in TN, Karnataka should remove third language from schools & one can see its impact starting in five years. It will make available lots of children's time for core subjects like science, maths, arts, music or their hobbies/skills development. Kids will excel in studies as well since they have more time. Learning a new third language is waste of time. Since it is under control of state govt, so people of state must request govt to take action immediately. This will have enormous impact on economy & jobs too.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails