ಮಕ್ಕಳ ಕಲಿಕೆಯಲ್ಲಿ ತ್ರಿಭಾಷಾ ಸೂತ್ರವೆಂಬ ಶೂಲವಿದೆಯೇ?


"ಭಾರತದ ಭಾಷಾನೀತಿಯಲ್ಲಿ ಹಿಂದೀ ಭಾಷೆಗೆ ಉಳಿದವುಗಳಿಗಿಂತ ಹೆಚ್ಚಿನ ಸ್ಥಾನಮಾನ ಕೊಟ್ಟಿರುವುದು ಸರಿಯಲ್ಲಾ, ಈ ಸ್ಥಾನಮಾನ ಉಳಿದೆಲ್ಲಾ ಭಾಷೆಗಳಿಗೂ ಸಿಗಬೇಕು" ಎನ್ನುವ ಹಕ್ಕೊತ್ತಾಯ ಕನ್ನಡನಾಡಲ್ಲಿ ಕೇಳಿಬರುತ್ತಿದೆ. ಈ ಬೇಡಿಕೆ ಭಾರತದ ಇತರೆ ಕಡೆಗಳಿಂದಲೂ ಕೇಳಿಬರುತ್ತಿರುವುದು ಗೊತ್ತೇ ಇದೆ. ಭಾರತದ ಸಂಸತ್ತಿನಲ್ಲಿ ಸಂಸದರೊಬ್ಬರು ಈಗಾಗಲೇ ಸಮಾನ ಭಾಷಾನೆತ್ತಿಗಾಗಿ ಆಗ್ರಹಿಸಿ ಖಾಸಗಿ ಮಸೂದೆಯೊಂದನ್ನು ಕೂಡಾ ಮಂಡಿಸಿದ್ದಾರೆ.

ಭಾರತದ ಹುಳುಕಿನ ಭಾಷಾನೀತಿಯನ್ನು ೧೯೫೦ರ ಸಂವಿಧಾನದಲ್ಲಿ ಸೇರಿಸಿದ ನಂತರ ಅದಕ್ಕೊಂದು ಇಲಾಖೆಯನ್ನು ಕಟ್ಟಲಾಯಿತು. ಈ ಭಾಷಾನೀತಿಯ ಗುರಿಯೇ ಇಡೀ ದೇಶದ ಎಲ್ಲ ಭಾಷೆಯ ಜನರು ಹಿಂದೀಯನ್ನು ಬಳಸುವಂತೆ ಮಾಡುವುದು. ಆ ಮೂಲಕ ಇಡೀ ದೇಶದ ಯಾವುದೇ ಮೂಲೆಗೆ ಹೋದರೂ ಹಿಂದೀ ಕಲಿತವರಿಗೆ/ ಬಲ್ಲವರಿಗೆ ಯಾವುದೇ ತೊಡಕಿಲ್ಲದಂತೆ ವ್ಯವಹರಿಸಲು ಸಾಧ್ಯವಾಗುವಂತೆ ಮಾಡುವುದು. ಇಂಥಾ ವ್ಯವಸ್ಥೆಯು ಇಡೀ ದೇಶದ ವೈವಿಧ್ಯತೆಯ ಬುನಾದಿಗೆ ಕೊಡಲಿ ಏಟು ನೀಡುವುದಕ್ಕೂ, ಹಿಂದೀಯೇತರ ಜನರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುವುದಕ್ಕೂ ಕಾರಣವಾಗಿದೆ. ಇದೆಲ್ಲಾ ಸೂಕ್ಷ್ಮಗಳಿಗೆ ಕುರುಡು, ಕಿವುಡು ಆಗಿರುವ ಭಾರತ ಸರ್ಕಾರ ಮಾತ್ರಾ ತನ್ನ ಹಿಂದೀ ಪ್ರಚಾರವನ್ನು ಮುಂದುವರೆಸುತ್ತಾ, ಹಿಂದೀ ಹರಡುವಿಕೆ ದಿನೇ ದಿನೇ ಹೆಚ್ಚುವುದನ್ನು ಖಾತ್ರಿಪಡಿಸಿಕೊಳ್ಳುತ್ತಾ, ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ಸಾಗುತ್ತಿದೆ. ಬದುಕಿನ ಯಾವ ಅಂಗವನ್ನೂ ಬಿಡದೆ, ಸಾಧ್ಯವಿರುವ ಯಾವ ವಿಧಾನವನ್ನೂ ಬಿಡದೆ ಹಿಂದೀ ಹರಡುವಿಕೆಯನ್ನು ಮುಂದುವರೆಸುತ್ತಿದೆ. ಇಂಥಾ ಒಂದು ವಿಧಾನ, ಮಕ್ಕಳಿಗೆ ಶಾಲೆಯ ಹಂತದಿಂದಲೇ ಹಿಂದೀಯನ್ನು ಕಡ್ಡಾಯಗೊಳಿಸುವಿಕೆ. 

ಶಾಲಾಹಂತದಲ್ಲೇ ಹಿಂದೀ ಕಲಿಸುವಿಕೆ

ಹಿಂದೀ ಹೇರಿಕೆ ಮತ್ತದರ ವಿರೋಧದ ಸಂಘರ್ಷದ ನಾನಾ ಕಾಲಘಟ್ಟದಲ್ಲಿ ತ್ರಿಭಾಷಾ ಸೂತ್ರವೆಂಬುದು ಬಹುಮಹತ್ವದ್ದು. ಮೇಲ್ನೋಟಕ್ಕೆ ತ್ರಿಭಾಷಾಸೂತ್ರವೆಂದರೆ "ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದೀ, ಇಂಗ್ಲೀಶ್ ಜೊತೆಯಲ್ಲಿ ರಾಜ್ಯದ ಭಾಷೆಯನ್ನು ಬಳಸುವುದು" ಎಂಬುವಂತೆ ಕಾಣುವ ಇದರ ಒಳಹೂರಣ ಬೇರೆಯೇ ಆಗಿದೆ. ಇದು ಮೂಲತಃ ಮಕ್ಕಳ ಕಲಿಕೆಯಲ್ಲಿ ಯಾವ ಭಾಷೆಗಳನ್ನು ಕಲಿಸಬೇಕು ಎಂಬುದರ ಕುರಿತಾಗಿದೆ. ಹಿಂದೀ ನಾಡುಗಳಲ್ಲಿ ದಕ್ಷಿಣದ ಒಂದು ಭಾಷೆಯನ್ನೂ, ಹಿಂದೀಯೇತರ ನಾಡುಗಳಲ್ಲಿ ಹಿಂದೀಯನ್ನು ಕಲಿಸಬೇಕೆಂಬ ನೀತಿಯಿದೆ. ಅಂದರೆ ಇದರ ಅರ್ಥ, ಭಾರತದ ಎಲ್ಲೆಡೆ ಹಿಂದೀ ಕಲಿಸುವುದು ಕಡ್ಡಾಯ ಎಂಬುದೇ ಆಗಿದೆ. ವಾಸ್ತವವಾಗಿ ಹೀಗೆ ಹಿಂದೀಯೊಂದಕ್ಕೆ ಮೇಲಿನ ಸ್ಥಾನ ನೀಡಿರುವ ನೀತಿಯೇ ಹುಳುಕಿನದ್ದಾಗಿದೆ. ಯಾಕೆಂದರೆ... ನಮ್ಮ ಮಕ್ಕಳು ಶಾಲೆಯಲ್ಲಿ ಭಾಷೆಗಳನ್ನು ಕಲಿಯಬೇಕೆಂದರೆ ಭೂಮಿಯ ಮೇಲೆ ಹಿಂದೀಯಲ್ಲದೇ ನೂರಾರು ಭಾಷೆಗಳಿವೆ! ಕನ್ನಡನಾಡಲ್ಲೇ ತುಳು,ಕೊಡವದಂಥಾ ನುಡಿಗಳಿವೆ. ನಮ್ಮ ರಾಜ್ಯಕ್ಕೆ ಹೆಚ್ಚು ಹತ್ತಿರದಲ್ಲಿರುವ ತಮಿಳು, ತೆಲುಗು, ಮಲಯಾಳಂ, ಮರಾಠಿ ಮೊದಲಾದ ನುಡಿಗಳಿವೆ. ಇವುಗಳನ್ನು ಆರಿಸಿಕೊಳ್ಳಬೇಕೆಂದು ಯಾರಾದರೂ ಅಂದುಕೊಂಡರೆ ಅದಕ್ಕೆ ಅವಕಾಶವೆಲ್ಲಿದೆ? ಆಯ್ಕೆಯ ಅವಕಾಶವನ್ನೇ ಬರಿದಾಗಿಸಿ ಹಿಂದೀಯೊಂದನ್ನೇ ಕಲಿಯಬೇಕೆಂಬ ನೀತಿಯನ್ನು ಅನುಸರಿಸುವುದು ಅಮಾನವೀಯ. ಇಷ್ಟಕ್ಕೂ ಶಾಲೆಗಳ ಕಲಿಕೆಯ ಈ ತ್ರಿಭಾಷಾ ಸೂತ್ರ ನಮ್ಮಲ್ಲಿದೆಯೇ ಹೊರತು ಬೇರೆಡೆ ಇಷ್ಟೊಂದು ಪರಿಣಾಮಕಾರಿಯಾಗಿರುವುದು ಕಾಣುತ್ತಿಲ್ಲ. ಅಂದರೆ ಕರ್ನಾಟಕದ ಮಕ್ಕಳು ಹಿಂದೀ ಕಲಿಯುತ್ತಿರುವುದನ್ನು ಕಾಣುತ್ತಿದ್ದೇವೆಯೇ ಹೊರತು ಭಾರತದ ಇನ್ಯಾವುದೇ ರಾಜ್ಯದಲ್ಲಿ (ವಿಶೇಷವಾಗಿ ಹಿಂದೀ ಭಾಷೆಯ ರಾಜ್ಯಗಳಲ್ಲಿ) ಕನ್ನಡವನ್ನು ಮೂರನೆಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸುವುದನ್ನು ಕಾಣಲಾರೆವು! ಕನ್ನಡಿಗರಲ್ಲಿ ಹಿಂದೀ ಬಗ್ಗೆ, ಹಿಂದೀಭಾಷಿಕರ ವಲಸೆಯ ಬಗ್ಗೆ, ಹಿಂದೀ ಸಿನಿಮಾಗಳ ಬಗ್ಗೆ ಶರಣಾಗತಿ ಸಹಿತವಾದ ಒಪ್ಪಿಗೆಯ ಮನೋಭಾವನೆ ಮೂಡುವಲ್ಲಿ ಶಾಲಾಹಂತದಲ್ಲಿಯೇ ಆರಂಭವಾಗಿರುವ ಹಿಂದೀ ಹೇರಿಕೆಯೇ ಮೂಲಕಾರಣವಾಗಿದೆ. ಕನ್ನಡಿಗರ ಮನಸ್ಸಲ್ಲಿ "ಇದು ಹೇರಿಕೆಯೇ ಅಲ್ಲಾ! ಹಿಂದೀಯನ್ನು ಯಾಕೆ ತಾನೇ ವಿರೋಧಿಸಬೇಕು?" ಎಂಬ ಕುರುಡನ್ನು ತುಂಬುತ್ತಿರುವುದು ಕೂಡಾ ಇದೇ ಆಗಿದೆ!

ಇಂಥಾ ನೀತಿಯ ಬೆನ್ನತ್ತಿ!

ರಾಜ್ಯದ ಮಾಧ್ಯಮಿಕ ಶಾಲೆಗಳಲ್ಲಿ ಕನ್ನಡ, ಇಂಗ್ಲೀಶ್ ಜೊತೆಯಲ್ಲಿ ಹಿಂದೀಯನ್ನು ಕಡ್ಡಾಯವಾಗಿ ಕಲಿಸಬೇಕೆಂಬ ನೀತಿ ಇದೆಯೇನೋ ಎನ್ನುವಂತೆ ಕಾಣುತ್ತಿದ್ದು, ನಿಜಕ್ಕೂ ಕರ್ನಾಟಕ ಪ್ರಾಥಮಿಕ ಶಿಕ್ಷಣ ಇಲಾಖೆಯು ಇಂಥದ್ದೊಂದು ನೀತಿಯನ್ನು ಅಳವಡಿಸಿಕೊಂಡಿದೆಯೋ ಇಲ್ಲವೋ ಎನ್ನುವುದು ತಿಳಿದುಕೊಳ್ಳಬೇಕಾದ ವಿಷಯವಾಗಿದೆ. ೧೯೮೨ಕ್ಕೆ ಮುನ್ನ ಕರ್ನಾಟಕದ ಶಾಲೆಗಳಲ್ಲಿ ಹಿಂದೀ ಕಲಿಕೆ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕಾದ ವಿಷಯವೇ ಆಗಿರಲಿಲ್ಲಾ. ಮುಂದೆ ಇದು ಐವತ್ತರ ಅಂಕೆಯ ಪರೀಕ್ಷೆಯ ವಿಷಯವಾದರೂ ಪಾಸಾಗಲು ೧೩ ಅಂಕ ಬಂದರೆ ಸಾಕು ಎಂದಾಗಿದ್ದು ಮುಂದೆ ನೂರಂಕೆಯ ಕಡ್ಡಾಯವಾಗಿ ಪಾಸಾಗಲೇ ಬೇಕಾದ ವಿಷಯವಾಗಿ ಬದಲಾಗಿದೆಯೆಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಾಗಿದೆ. ಹಾಗಾಗಿದ್ದಲ್ಲಿ ಈ ಬದಲಾವಣೆಗೆ ಕಾರಣವೇನು? ಕರ್ನಾಟಕದ ಶಾಲಾಕಲಿಕೆಯಲ್ಲಿ ಅಸಲಿಗೆ ಇರುವ ನೀತಿಯೆಂಥದ್ದು? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಗೆಳೆಯರೊಬ್ಬರು ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಮಾಹಿತಿಯನ್ನು ಕೋರಿ "ಮಾಹಿತಿ ಹಕ್ಕು ಕಾಯ್ದೆ:೨೦೦೫"ರ ಅನ್ವಯ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯ ಪೂರ್ಣಪಾಟ ಇಲ್ಲಿದೆ:

1. ಕರ್ನಾಟಕದ ಶಿಕ್ಷಣ ಇಲಾಖೆಯ ನೀತಿಯಂತೆ, ಪ್ರಾಥಮಿಕ ಶಾಲೆಗಳಲ್ಲಿ ಐದರಿಂದ-ಏಳನೇ ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೂರು ಭಾಷೆ ಕಲಿಯುವುದು ಕಡ್ಡಾಯವೇ?

2.  ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಪ್ರಾಥಮಿಕ ಶಾಲೆಗಳಲ್ಲಿ ಐದರಿಂದ ಏಳನೇ ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಮೂರು ಭಾಷೆ ಕಲಿಯುವುದು ಕಡ್ಡಾಯವೆಂದಾದರೆ, ಮೂರು ಭಾಷೆಗಳನ್ನು ಕಲಿಸಬೇಕು ಮತ್ತು ಅವಕ್ಕೆ ಪರೀಕ್ಷೆ ನಡೆಸಬೇಕು ಎಂಬ ನೀತಿ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯನ್ನು ಕರ್ನಾಟಕ ರಾಜ್ಯ ಸರ್ಕಾರ ನಿರ್ದೇಶಿಸಿತ್ತೇ?
3. ಪ್ರಶ್ನೆ 2ಕ್ಕೆ ಉತ್ತರ, "ರಾಜ್ಯ ಸರ್ಕಾರ ನಿರ್ದೇಶಿಸಿದ್ದು ಹೌದು" ಎಂದಾದಲ್ಲಿ, ನಿರ್ದೇಶನವಿರುವ ಧ್ರುಡೀಕ್ರುತ ಪತ್ರದ ಪ್ರತಿಯೊಂದನ್ನು ನೀಡಿ.
4. ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಪ್ರಾಥಮಿಕ ಶಾಲೆಗಳಲ್ಲಿ ಐದರಿಂದ ಏಳನೇ ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಮೂರು ಭಾಷೆಗಳ ಕಲಿಕೆ ಕಡ್ಡಾಯವೆಂದಾದರೆ, ಆ ಮೂರರಲ್ಲಿ ಹಿಂದಿ ಭಾಷೆಯು ಕಡ್ಡಾಯವೇ?
5. ಪ್ರಶ್ನೆ 4ಕ್ಕೆ ಉತ್ತರ "ಹಿಂದಿ ಕಡ್ಡಾಯವಲ್ಲ" ಎಂದಾದಲ್ಲಿ, ಬೇರೆ ಯಾವ ಯಾವ ಭಾಷೆಗಳನ್ನು ಕಲಿಕೆಗೆ ಆರಿಸಿಕೊಳ್ಳುವ ಆಯ್ಕೆಯಿರುತ್ತದೆ? ತಿಳಿಸಿ.


6. ಪ್ರಶ್ನೆ 4ಕ್ಕೆ ಉತ್ತರ "ಹಿಂದಿ ಕಡ್ಡಾಯ" ಎಂದಾದಲ್ಲಿ, ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದ ಮೇಲೆ ಹಾಗೆ ಮಾಡಲಾಗಿದೆಯೇ? ಹಾಗೊಂದು ನಿರ್ದೇಶನ ಕರ್ನಾಟಕ ಸರ್ಕಾರದಿಂದ ಬಂದಿದ್ದರೆ, ಆ ನಿರ್ದೇಶನವಿರುವ ಧ್ರುಡೀಕ್ರುತ ಪತ್ರದ ಪ್ರತಿಯೊಂದನ್ನು ನೀಡಿ.
7. ಹಲ ವರುಶಗಳ ಹಿಂದೆ, ಕರ್ನಾಟಕ ಶಿಕ್ಷಣ ಇಲಾಖೆಯು ನಡೆಸುವ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತ್ರುತೀಯ ಭಾಷೆಯನ್ನು ಐವತ್ತು ಮಾರ್ಕಿನ ಪರೀಕ್ಷೆ ಎಂದು ಮಾಡಲಾಗಿತ್ತು. ಯಾವಾಗಲಿಂದ ತ್ರುತೀಯ ಭಾಷೆಯನ್ನು ನೂರು ಮಾರ್ಕಿನ ಪರೀಕ್ಷೆ ಎಂದು ಮಾಡಲಾಗಿದೆ? ಮತ್ತು, ಹಾಗೆ ಬದಲಾಯಿಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತೇ? ಹಾಗೊಂದು ನಿರ್ದೇಶನ ಕರ್ನಾಟಕ ಸರ್ಕಾರದಿಂದ ಬಂದಿದ್ದರೆ, ಆ ನಿರ್ದೇಶನವಿರುವ ಧ್ರುಡೀಕ್ರುತ ಪತ್ರದ ಪ್ರತಿಯೊಂದನ್ನು ನೀಡಿ.
ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕುವುದು ನಮಗೆ ಬೇಕಿಲ್ಲಾ ಎಂಬ ಅನಿಸಿಕೆಯನ್ನು ಹೊಂದಿರುವವರೆಲ್ಲಾ ಈ ಹೆಜ್ಜೆಯನ್ನು ಬೆಂಬಲಿಸುವ ಭರವಸೆ ನಮ್ಮದು. 

ನೀವೂ ದನಿಗೂಡಿಸಿ..

ಭಾರತದ ಭಾಷಾನೀತಿಯು ಬದಲಾಗುವುದು ಈ ಹುಳುಕಿಗೆ ಮದ್ದು! ಈ ನಿಟ್ಟಿನಲ್ಲಿ ಭಾರತ ಸರ್ಕಾರವನ್ನು ಕರ್ನಾಟಕ ರಾಜ್ಯಸರ್ಕಾರವು "ಸಮಾನತೆಯ ಭಾಷಾನೀತಿ"ಗಾಗಿ ಒತ್ತಯಿಸಬೇಕೆಂದು ಬಯಸುವ ಹೆಜ್ಜೆಯೊಂದನ್ನು ಬನವಾಸಿ ಬಳಗ ಇಟ್ಟಿದೆ. ಮಿಂಬಲೆ ತಾಣದಲ್ಲಿ ಆರಂಭಿಸಲಾಗಿರುವ "ಭಾರತದ ಹುಳುಕಿನ ಭಾಷಾನೀತಿಯನ್ನು ಬದಲಿಸಬೇಕೆಂಬ ಆಶಯ"ದ ಕೂಗಿಗೆ ನೀವೂ ದನಿ ಸೇರಿಸಿ. ಈ ಪಿಟಿಷನ್‌ಗೆ ಸಹಿ ಮಾಡಿರಿ!

1 ಅನಿಸಿಕೆ:

michael ಅಂತಾರೆ...

ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೋಳಿಸದೆ ರಾಜ್ಯದೊಳಗಿನ ಎಲ್ಲಾ ರಾಜ್ಯ ಹಾಗೂ ಕೇಂದ್ರ ಸರಕಾರಿ ಅಚ್ಹೇರಿಗಳಲ್ಲಿ ಆಡಳಿತ ಭಾಷೆ ಸಂಪೂರ್ಣವಾಗಿ ಕನ್ನಡವೇ ಆಗಬೇಕು

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails