ಕನ್ನಡ ಡಿಂಡಿಮ: ಬಳಗದ ಹೊಸ ಹೊತ್ತಗೆ ಮಾರುಕಟ್ಟೆಗೆ!


ಬನವಾಸಿ ಬಳಗವು ಪ್ರಕಾಶನದ ಮೂಲಕ ಹೊತ್ತಗೆಗಳನ್ನು ಅಚ್ಚುಹಾಕಿಸಲು ಶುರುಮಾಡಿ ಐದುವರ್ಷಗಳಾದ ಹಿನ್ನೆಲೆಯಲ್ಲಿ ಇದೀಗ ಐದು ಹೊಸಹೊತ್ತಗೆಗಳನ್ನು ಹೊರತಂದಿದೆ. ಹೊತ್ತಗೆಗಳನ್ನು ಕೊಳ್ಳಿರಿ, ಓದಿರಿ, ತಿಳಿದವರಿಗೆ ಉಡುಗೊರೆಯಾಗಿ ನೀಡಿರಿ. ಹೊತ್ತಗೆಗಳು ದಿನಾಂಕ ೦೭ನೇ ಜನವರಿಯಿಂದ ೯ನೇ ಜನವರಿಯವರೆಗೆ, ಮಡಿಕೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಬನವಾಸಿ ಬಳಗದ ಮಳಿಗೆಯಲ್ಲಿ ಸಿಗುತ್ತದೆ. ಎಲ್ಲೆಡೆಯ ಹೊತ್ತಗೆ ಅಂಗಡಿಗಳಲ್ಲೂ ಸಿಗಲಿವೆ. "ಕನ್ನಡ ಡಿಂಡಿಮ - ಸತ್ತಂತಿಹರನು ಬಡಿದೆಚ್ಚರಿಸು" ಹೆಸರಿನ ಈ ಹೊತ್ತಗೆಗಳ ಮುನ್ನುಡಿಯ ಕೆಲಸಾಲುಗಳು ತಮ್ಮ ಓದಿಗಾಗಿ...

ಕನ್ನಡ ಡಿಂಡಿಮ

ಕನ್ನಡ ಕನ್ನಡಿಗ ಕರ್ನಾಟಕಗಳ ಏಳಿಗೆಯ ಹೆಗ್ಗುರಿಯು ನಮ್ಮ ಮುಂದಿರುವಾಗ,ಇದನ್ನೇ ಮನದಲ್ಲಿಟ್ಟುಕೊಂಡು ನೋಡತೊಡಗಿದರೆ ನಮ್ಮ ಸುತ್ತಲಿನ ಜಗತ್ತನ್ನು ನಾವು ನೋಡುವ ಬಗೆಯೇ ಬದಲಾಗುತ್ತದೆ. ಹಾಗೆ ನೋಡುತ್ತಾ ಹೋದರೆ ಕಾಣುವ ನೋಟಗಳು ಹೆಜ್ಜೆಹೆಜ್ಜೆಗೂ ಸ್ಪಷ್ಟವಾಗುತ್ತಾ ಹೋಗುತ್ತದೆ. ನಮ್ಮ ಸುತ್ತ ನಡೆಯುತ್ತಿರುವುದರಲ್ಲಿ ಯಾವುದು ನಮಗೆ ಮತ್ತು ನಮ್ಮ ನಾಡಿಗೆ ಮಾರಕ, ಯಾವುದು ನಮ್ಮ ಏಳಿಗೆಗೆ ಪೂರಕ ಎಂಬುದು ಅರಿವಾಗತೊಡಗುತ್ತದೆ. ಈ ಯೋಚನೆಗಳ ದೀಪಕ್ಕೆ ನಿಜಕ್ಕೂ ಎಣ್ಣೆಯಾಗುವುದು ಹೊರದೇಶಗಳಲ್ಲಿರುವ ವ್ಯವಸ್ಥೆಗಳನ್ನು ಕಂಡ ಅನುಭವಗಳು. ಈ ಅನುಭವ ನಮ್ಮ ಮೂಲಗುರುತನ್ನು ನುಡಿಗೆ ಅಂಟಿಸಿಬಿಡುತ್ತದೆ.

 ಹಾಗೆ ನೋಡಿದರೆ ನಮ್ಮೆಲ್ಲರ ಅತಿ ಪುರಾತನವಾದ ಗುರುತೆಂದರೆ ನಮ್ಮ ನುಡಿಯೇ! ನುಡಿಯೊಂದು ಬೆಳೆದು ಬರುವ ಪರಿ, ಅದನ್ನಾಡುವ ಜನರು ಒಂದು ಸಮಾಜವಾಗಿರುವುದರ ಹಳಮೆಯನ್ನು ಕಂಡಾಗ ನಮ್ಮ ಹಳಮೆಯು ನಮ್ಮ ಮೂಲಗುರುತನ್ನು ನಾವಾಡುವ ನುಡಿಯೊಂದಿಗೆ ಜೋಡಿಸುವುದು ಸಹಜ ಎನ್ನಿಸುತ್ತದೆ. ಕಾಲಾಂತರದಲ್ಲಿ ಸಮಾಜದಲ್ಲಿನ ಕಟ್ಟುಪಾಡುಗಳಿಂದಾಗಿ ಹೊಸ ಹೊಸ ಗುರುತುಗಳು ಆವರಿಸುತ್ತಾ ಮೂಲಗುರುತನ್ನು ಮರೆಸುವಂತೆ ಮೆತ್ತಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ‘ನಾನು’ ಕನ್ನಡಿಗನೆನ್ನುವ ಗುರುತು ಉಳಿದೆಲ್ಲಾ ಗುರುತಿಗಿಂತ ಸಹಜವಾದದ್ದೂ, ಏಳಿಗೆಯನ್ನು ಸಾಧಿಸಲು ಬಳಕೆಯಾಗಬೇಕಾದದ್ದು ಎಂಬುದು ಮನವರಿಕೆಯಾಗುತ್ತದೆ. ಕನ್ನಡ ಡಿಂಡಿಮ ಹೊತ್ತಗೆಯು, ಕನ್ನಡಿಗರಲ್ಲಿ ಕನ್ನಡತನದ ಅರಿವನ್ನು ಎಚ್ಚರಿಸುವ ಡಿಂಡಿಮವಾಗಲೆಂದು ನನ್ನಾಶಯ.





ಈ ಹೊತ್ತಗೆಯ ಹೆಸರನ್ನು ಕನ್ನಡ ಡಿಂಡಿಮ ಎಂದು ಇಡಲು ಪ್ರೇರಣೆಯೇ ರಾಷ್ಟ್ರಕವಿ ಕುವೆಂಪು ಅವರ ಹೆಸರಾಂತ ಕವನ. ಈ ಕವನ ಹೀಗಿದೆ:

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ
ಬಾರಿಸು ಕನ್ನಡ ಡಿಂಡಿಮವ ||

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು ||

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ
ಬಾರಿಸು ಕನ್ನಡ ಡಿಂಡಿಮವ ||

ಈ ಪದ್ಯವನ್ನು ನಾವೆಲ್ಲಾ ಶಾಲೆಯಲ್ಲಿ ಕಲಿತಿರುತ್ತೇವೆ. ಶಾಲೆಯಲ್ಲಿ ಓದುವಾಗ ಇದರ ಆಶಯವೇ ಅರ್ಥವಾಗಿರಲಿಲ್ಲ. ಯಾಕಾಗಿ ಇಷ್ಟೊಂದು ಕಟುವಾಗಿ ಕನ್ನಡಿಗರನ್ನು “ಸತ್ತಂತಿಹರು” ಎಂದಿದ್ದಾರೆ? ಯಾಕಾಗಿ “ಹೃದಯಶಿವ”ನಲ್ಲಿ “ಡಿಂಡಿಮ” “ಬಾರಿಸು”ವಂತೆ ಬೇಡಿದ್ದಾರೆ? ಕುವೆಂಪುರವರು ಡಿಂಡಿಮವನ್ನು “ನುಡಿಸು” ಎನ್ನದೆ “ಬಾರಿಸು” ಎಂದಿರುವುದರಲ್ಲೇ, ಕನ್ನಡಿಗರ ಈ ಸತ್ತಂತಿರುವಿಕೆಯ ತೀವ್ರತೆ ಎಷ್ಟೆಂದು ಅರಿವಾಗುತ್ತದೆ. ಏನಾಗಿದೆ ಕನ್ನಡಿಗರಿಗೆ? ಏನಿದು ಸತ್ತಂತಿರುವಿಕೆ? ಹೃದಯಶಿವ ನುಡಿಸಬೇಕಾದ ಡಿಂಡಿಮ ಯಾವುದು? ಈ ಎಲ್ಲಾ ಪ್ರಶ್ನೆಗಳ ಆಳಕ್ಕೆ ಇಳಿದಾಗ ನಮ್ಮನ್ನು ಮುಸುಕಿರುವ ತೆರೆ ಎಂಥದ್ದು... ನಮ್ಮ ಮೇಲೆ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯು ಎಂಥದ್ದು ಎಂಬುದು ಅರಿವಾಗುತ್ತದೆ.

ನಮ್ಮ ನಾಡಿನಲ್ಲಿ ಕನ್ನಡವೊಂದನ್ನೇ ಬಲ್ಲ ಒಬ್ಬ ಸಾಮಾನ್ಯ ನಾಗರೀಕನಿಗೆ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಯಾವುದೇ ಹಿಂಜರಿಕೆ, ಕೀಳರಿಮೆಯಿಲ್ಲದೇ ಮಾಡಿಕೊಳ್ಳುವುದು ಸಾಧ್ಯವಾಗುವ, ತನ್ನ ಬದುಕಿನಲ್ಲಿ ಏಳಿಗೆ ಸಾಧಿಸಲು ಬೇರೊಂದು ನುಡಿಯ ಕಲಿಕೆ ಅನಿವಾರ್ಯ ಎನ್ನುವುದು ಇಲ್ಲವಾಗುವ ದಿನ ಬಂದಂದು ನಿಜಕ್ಕೂ ನಾಡಿನ ಮತ್ತು ನಾಡಜನರ ಏಳಿಗೆಯ ಕನಸು ನನಸಾಗುವುದು. ಇಂಥದ್ದೊಂದು ದಿನ ತಾನಾಗೇ ಎಂದಿಗೂ ಬಾರದು. ಕನ್ನಡದ ಜನರು ತಾವಾಗೇ ದೇಶಕಾಲಗಳಲ್ಲಿ ಒಗ್ಗಟ್ಟನ್ನು ಸಾಧಿಸುವ ಮೂಲಕ ಈ ಗುರಿಯನ್ನು ಮುಟ್ಟಲು ಸಾಧ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕನ್ನಡಿಗನಿಗೆ ಏಳಿಗೆಯ ಪರಮಗುರಿಯೇ ಕಾಣುತ್ತಿದೆ ಎನ್ನಿಸದು. ಕಾಣುತ್ತಿದ್ದರೂ ಅದನ್ನು ಮುಟ್ಟುವ ದಾರಿ ಕಾಣುತ್ತಿದೆ ಎನ್ನಿಸದು. ಈ ಗುರಿ ಮತ್ತು ದಾರಿಯನ್ನು ಕಂಡುಕೊಳ್ಳುವ ಮತ್ತು ಕಂಡುಕೊಂಡಿದ್ದನ್ನು ಕನ್ನಡಿಗರಿಗೆ ಮುಟ್ಟಿಸುವ ಹಿರಿಯ ಗುರಿಯೊಡನೆ ಬನವಾಸಿ ಬಳಗವು ಕೆಲಸ ಮಾಡುತ್ತಿದೆ. ಈ ನಾಡಪರ ಚಿಂತನೆಗಳ ಸಾರವೇ ಇದೀಗ ಹೊತ್ತಗೆಯಾಗಿ ಮೂಡಿಬಂದಿದೆ.

2 ಅನಿಸಿಕೆಗಳು:

ಸುದರ್ಶನ ಅಂತಾರೆ...

Dear Sir
I am ever so happy to see the work u r doing.
I an based in uk and a doctor by profession.
I have written a couple of poems on kannada which I think are reasonable. I don't want them go un noticed but all papers and magazines are not interested. I wonder if u can gave a look at them and see if they add any value to the work u r doing.
My e mail is
shgrao@yahoo.co.in. if u send me yours I can send them for u to take a look.
Kanbadadalli bareyaddakke kshme irali
Nimna
Sudarshana Gururajarao

ಸುದರ್ಶನ ಅಂತಾರೆ...

Aatmiya kannada bandhugalige
Nimma kannada kattuva kelasada bagge odi hemmeyaaytu.
Nima pustakagalannu hege kolluvudu?
Kannada bagge nanna eradu kavanagalannu nimage kalisale? Odi nodi. Prastuta enisidare upayogisikolli. Kanbadakkagi nanna kiru koduge.
Nanna e mail
shgrao71@gmail.com

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails