ಕನ್ನಡ ನುಡಿಯರಿಮೆಯ ಇಣುಕುನೋಟ: ಶಂಕರಬಟ್ಟರ ಹೊಸಹೊತ್ತಗೆ ಮಾರುಕಟ್ಟೆಗೆ!


ಇತ್ತೀಚಿಗೆ ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿ ಪಡೆದಿರುವ ನಾಡಿನ ಹೆಮ್ಮೆಯ ಭಾಷಾವಿಜ್ಞಾನಿ ನಾಡೋಜ ಡಾ. ಡಿ ಎನ್ ಶಂಕರ ಬಟ್ಟರ ಹೊಸಹೊತ್ತಗೆಯೊಂದು ಬಿಡುಗಡೆಯಾಗಿದೆ. ಯುವಚಿಂತಕ ಶ್ರೀ ಕಿರಣ್ ಬಾಟ್ನಿಯವರು ಸಂಪಾದಿಸಿರುವ ಕನ್ನಡ ನುಡಿಯರಿಮೆಯ ಇಣುಕುನೋಟ ಹೆಸರಿನ ಈ ಹೊತ್ತಗೆ ಕನ್ನಡ ಸಮಾಜಕ್ಕೆ ದಾರಿತೋರುಕವಾದುದಾಗಿದೆ. ತಮ್ಮ ಎಡೆಬಿಡದ ಹತ್ತಾರು ವರ್ಷಗಳ ಅಧ್ಯಯನದ ಸಾರವನ್ನು ಎಳೆಯರಿಗೂ ಅರ್ಥವಾಗುವಂತೆ ತಿಳಿಯಾಗಿ ತಿಳಿಸಬಲ್ಲ ಸಾಮರ್ಥ್ಯವಿರುವ ಬಟ್ಟರ ಬರಹದ ಶೈಲಿ ಈ ಹೊತ್ತಗೆಯಲ್ಲೂ ಇದ್ದು ಓದುಗರಿಗೆ ಸರಳವಾಗಿ ಅರಿಮೆಯನ್ನು ತಲುಪಿಸುತ್ತದೆ. ಈ ಹೊತ್ತಗೆಯು ಮಡಿಕೇರಿಯಲ್ಲಿನ "೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ"ದಲ್ಲಿ ಮೊದಲಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಬನವಾಸಿ ಬಳಗ ಪ್ರಕಾಶನದ ಮಳಿಗೆಯಲ್ಲಿ ಮಾರಾಟಕ್ಕೆ ಸಿಗುತ್ತಿರುವ ಈ ಹೊತ್ತಗೆಯ ಮೊದಲಲ್ಲಿ ಸಂಪಾದಕರಾದ ಕಿರಣ ಬಾಟ್ನಿಯವರು ಹೀಗೆ ಬರೆದಿದ್ದಾರೆ.

ಇಣುಕುನೋಟದ ಮುನ್ನುಡಿಯಲ್ಲಿ...

ಬರಹದ ಕನ್ನಡವು ಕಾಲಕಾಲಕ್ಕೆ ಮಾರ್ಪಡುತ್ತಲೇ ಬಂದಿದೆ. ಬರಿಗೆಮಣೆ (ಅಕ್ಶರಮಾಲೆ), ಪದಬಳಕೆಹಾಗೂ ಒಡ್ಡವದಲ್ಲಾದ ಮಾರ್ಪಾಡುಗಳು ಒಂದು ಬಗೆಯವಾದರೆ, ಬರವಣಿಗೆಯ ಇಟ್ಟಳದಲ್ಲಾದ ಮಾರ್ಪಾಡುಗಳು ಇನ್ನೊಂದು ಬಗೆಯವು ಎನ್ನಬಹುದು. ಆದರೆ ಇವೆರಡು ಬಗೆಯ ಮಾರ್ಪಾಡುಗಳು ಒಂದನ್ನೊಂದು ಬೆಂಬಲಿಸಿಯೇ ನಡೆದಿವೆ ಎನ್ನಬಹುದು. ಎತ್ತುಗೆಗೆ, -ಕಾರ ಮತ್ತು ಱ-ಕಾರಗಳು ಚಲಾವಣೆಯಲ್ಲಿದ್ದಾಗ ಬರವಣಿಗೆಯನ್ನು ಹೆಚ್ಚು-ಕಡಿಮೆ ದಾರ್ಮಿಕ ವಿಶಯಗಳನ್ನು ಪದ್ಯರೂಪದಲ್ಲಿ ಹೇಳುವುದಕ್ಕಾಗಿ ಮಾತ್ರವೇ ಬಳಸಲಾಗುತ್ತಿತ್ತು; ಆದರೆ, ಕಾಲ ಕಳೆದಂತೆ ಈ ಬರಿಗೆಗಳು ಕಾಣೆಯಾದವಶ್ಟೇ ಅಲ್ಲ, ದರ್ಮಕ್ಕೆ ನಂಟಿರದ ವಿಶಯಗಳನ್ನು ಪದ್ಯವಲ್ಲದ ಒಡ್ಡವಗಳಲ್ಲಿ ಹೇಳುವಂತಹ ಬರವಣಿಗೆಗಳೂ ಕಾಣಿಸಿಕೊಂಡವು.


ಇವತ್ತಿನ ದಿನವಂತೂ ಹೊಚ್ಚಹೊಸದಾದ ಅರಿಮೆಗಳನ್ನು ಆಯಾ ಅರಿಮೆಯ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಬರವಣಿಗೆಗೆ ಇಳಿಸಬೇಕಾದ ಪರಿಸ್ತಿತಿಯಿದೆ. ಒಂದಲ್ಲ ಒಂದು ಬಗೆಯ ನಲ್ಬರಹ(ಸಾಹಿತ್ಯ)ಕ್ಕಾಗಿ ಮಾತ್ರ ಬಳಸಲಾಗುತ್ತಿದ್ದ ಕನ್ನಡವಿಂದು ಹಿಂದೆಂದೂ ಇಡದ ಹೆಜ್ಜೆಯನ್ನು ಇಡಬೇಕಿದೆ. ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ಬರೆಯುವವರು ಮಾತ್ರ ಬಳಸುತ್ತಿದ್ದ ಕನ್ನಡವನ್ನು ಇಂದು ಇವಾವುದರ ಗಂದವೂ ಇಲ್ಲದ ಅರಿಗರು, ಇಂಜಿನಿಯರುಗಳು, ಡಾಕ್ಟರುಗಳು, ಮುಂತಾದವರು ತಂತಮ್ಮ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಂಡು ಕನ್ನಡವನ್ನು ಜಪಾನೀಸ್, ಕೊರಿಯನ್, ಜರ್ಮನ್, ಹೀಬ್ರೂ, ಮುಂತಾದ ನುಡಿಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ.


ಇದನ್ನೆಲ್ಲ ಅರಿತು, ಈ ಬೆಳವಣಿಗೆಗಳು ಆಗದಿದ್ದರೆ ಕನ್ನಡಿಗರು ಪಡಲಿರುವ ಕಶ್ಟವನ್ನೆಲ್ಲ ಮನಗಂಡು, ನಲ್ಬರಹವನ್ನು ಬಿಟ್ಟು ಬೇರೆಲ್ಲೂ ಕನ್ನಡದ ಬಳಕೆ ಆಗುತ್ತಿಲ್ಲವೆಂದು ಕಣ್ಣೀರು ಸುರಿಸುವುದೊಂದೇ ನಮ್ಮ ಪಾಡೆಂದು ನಂಬಲು ತಯಾರಿಲ್ಲದ ಕನ್ನಡದ ಯುವಕರ ಪಡೆಯೊಂದು ಮೆಲ್ಲನೆ ಎದ್ದುನಿಲ್ಲುತ್ತಿದೆ, ಮತ್ತು ಅದರಿಂದ ಕನ್ನಡದಲ್ಲಿ ಹಿಂದೆಂದೂ ಕಂಡಿರದ ರೀತಿಯ ಬರವಣಿಗೆಗಳು ಇಂದು ಮೂಡುತ್ತಿವೆ.ಆದರೆ ಹಿಂದೆಯೂ ಆಗಿರುವಂತೆ, ಬರವಣಿಗೆಯ ಇಟ್ಟಳದಲ್ಲಾಗುತ್ತಿರುವ ಈ ಬೆಳವಣಿಗೆಯು ಬರಿಗೆಮಣೆ, ಪದಬಳಕೆ ಮತ್ತು ಬರವಣಿಗೆಯ ಒಡ್ಡವದಲ್ಲಿಯೂ ಮಾರ್ಪಾಡುಗಳನ್ನು ಚಿಗುರಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಮಾರ್ಪಾಡುಗಳಿಂದ ಈಗಎಲ್ಲರ ಕನ್ನಡವೊಂದು ರೂಪುಗೊಳ್ಳುತ್ತಿದೆ. ಇದರಲ್ಲಿ ಕನ್ನಡಿಗರ ಉಲಿಕೆಯಲ್ಲಿಲ್ಲದ ಮಹಾಪ್ರಾಣಗಳಿಲ್ಲ, ಋಕಾರವಿಲ್ಲ, ವಿಸರ್ಗವಿಲ್ಲ; -ಕಾರ, -ಕಾರಗಳಿಲ್ಲ. ಹಾಗೆಯೇ, ‘ಎಲ್ಲರ ಕನ್ನಡವೆಂದರೆ ನಿಜಕ್ಕೂ ಎಲ್ಲರದಾಗಿದ್ದು, ಅತಿ ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸುವ ಬದಲು ಆದಶ್ಟು ಕನ್ನಡದ ಪದಗಳನ್ನೇ ಬಳಸಲಾಗುತ್ತದೆ, ಹೊಸ ಪದಗಳನ್ನು ಕನ್ನಡದಲ್ಲೇ ಕಟ್ಟಲಾಗುತ್ತದೆ.

ಕನ್ನಡವನ್ನು ಮುಂಬೊತ್ತಿಗೆ ಸಜ್ಜಾಗಿಸುವ ಹೊಣೆ ಕೆಲವು ಜಾತಿಗಳ ಬೆರಳೆಣಿಕೆಯ ಮಂದಿಯದಲ್ಲ, ಎಲ್ಲರದೂ ಆಗಿದೆಯೆಂದು ಕಂಡುಕೊಂಡರೆ ಈ ಮಾರ್ಪಾಡುಗಳು ಏತಕ್ಕೆ ಬೇಕೆಂದು ತಾನಾಗಿಯೇ ತಿಳಿದು ಬರುತ್ತದೆ.

ಕನ್ನಡ ಸಮಾಜದ ಬಗ್ಗೆ ಕಾಳಜಿಯಿರುವ, ಕನ್ನಡಿಗರ ಏಳಿಗೆಗೆ ದಾರಿ ಹುಡುಕುತ್ತಿರುವ ಮಂದಿಗೆ ಈ ಹೊತ್ತಗೆ ದಾರಿದೀಪವಾದರೆ ನುಡಿಯರಿಮೆಯನ್ನು ಸಾಮಾನ್ಯರೂ ಅರಿಯಲು ಅತ್ಯಂತ ಸಹಕಾರಿಯಾಗಿದೆ. ಇದು ನಿಮ್ಮಲ್ಲಿರಲೇಬೇಕಾದ ಹೊತ್ತಗೆ.

1 ಅನಿಸಿಕೆ:

PramJs ಅಂತಾರೆ...

Nimma see prayathna nirantharavagirali. We shall take what is required from Sanskrit and encourage easier old Kannada words. We should also look at making our language easier to pronounce by modifying difficult words. I said this because there is a chance that more recent easier languages like Hindi and Telugu may influence our language over the next few centuries.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails