ಬೇರೆ ಭಾಷೆಯಲ್ಲಿ ಕಲಿಕೆ: ಈಜು ಬಾರದ ಕೂಸ ನೀರೊಳಗೆ ಮುಳುಗಿಸಿ ಕೊಂದಂತೆ!

ನಮ್ಮ ಅಬ್ದುಲ್ ಕಲಾಂ ಸರ್ ಎಲ್ಲೀಗ್ ಹೋದ್ರೂ ಶಿಕ್ಷಣ ವ್ಯವಸ್ಥೆ ರಿಪೇರಿ ಆಗದೇ ಹೋದ್ರೆ ನಾವು ಉದ್ಧಾರ ಆಗೋದಿಲ್ಲ ಅಂತ ಹೇಳೋ ಅವಕಾಶ ತಪ್ಪಿಸಿಕೊಳಲ್ಲ ಗುರು. ಮೊನ್ನೆ ಅಮೇರಿಕದ ಸಿಲಿಕಾನ್ ವ್ಯಾಲಿಯಲ್ಲಿ ಉತ್ತರ ಅಮೇರಿಕದ IISc ಹಳೇ ವಿದ್ಯಾರ್ಥಿಗಳ ಕೂಟ, Pan-IIT ಹಳೇ ವಿದ್ಯಾರ್ಥಿಗಳ ಕೂಟ ಮತ್ತು TiE ನೋರು ನಮ್ಮ ಮಾಜೀ ರಾಷ್ಟ್ರಪತಿಗಳ್ನ ಕರ್ದು ಒಂದೆರ್ಡು ಮಾತಾಡಿ ಅಂದಾಗಲೂ ಔರು ಮತ್ತೆ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೇನೇ ಮಾತಾಡಿದ್ದು. ಆ ಶಿಕ್ಷಣ ವ್ಯವಸ್ಥೆ ಮಗುವಿನ ತಾಯ್ನುಡಿಯಲ್ಲಿ ಇದ್ದರೇ ಔರು ಆಡಿದ ದೊಡ್ಡ ದೊಡ್ಡ ಮಾತುಗಳು ನಿಜವಾಗಲೂ ಕಾರ್ಯರೂಪಕ್ಕೆ ಬರೋದು ಗುರು!

ಕಲಾಂ ಹೇಳಿದ್ದು ನೋಡಿ:
"The primary school education has to be changed. It must be changed to help kids be more creative"

"If a child becomes confident, the citizen becomes confident. If a citizen becomes confident, the nation becomes confident"

ಒಟ್ನಲ್ಲಿ ಮಕ್ಕಳ ಸೃಜನಶೀಲತೆ ಹೆಚ್ಚಬೇಕು, ಧೈರ್ಯ ಹೆಚ್ಚಬೇಕು. ಆದರೆ ಸೃಜನಶೀಲತೆ (creativity) ಹೆಚ್ಚಬೇಕಾದರೆ ಏನಾಗಬೇಕು? ಧೈರ್ಯ (confidence) ಬರ್ಬೇಕಾದ್ರೆ ಏನಾಗಬೇಕು? ಶಿಕ್ಷಣ ವ್ಯವಸ್ಥೇಲಿ ಯಾವ ಬದಲಾವಣೆ ಆಗಬೇಕು? ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿರೋದು, ಆ ಉತ್ತರವನ್ನ ಕಾರ್ಯರೂಪಕ್ಕೆ ತರಬೇಕಾಗಿರೋದು ಬಹಳ ಮುಖ್ಯ ಗುರು.

ಈಜು ಬಾರದ ಮಕ್ಕಳನ್ನ ನೀರೊಳಗೆ ಮುಳುಗಿಸೋ ಪೆದ್ದತನ ನಿಲ್ಲಬೇಕು

ಮೇಲಿನ ಪ್ರಶ್ನೆಗ ಉತ್ತರವಾಗಿ ಪ್ರಪಂಚದಾದ್ಯಂತ ಚಿಂತಕರು "ತಾಯ್ನುಡಿಯಲ್ಲಿ ಶಿಕ್ಷಣ ಕೊಡಿ", "ತಾಯ್ನುಡಿಯಲ್ಲಿ ಶಿಕ್ಷಣ ಕೊಡಿ" ಅಂತ ಬಡ್ಕೋತಾನೇ ಇದಾರೆ. ಕಲಿಕೆ ತಾಯ್ನುಡಿಯಲ್ಲಿ ಇದ್ದರೇ ಮಗುವಿಗೆ ಧೈರ್ಯ ಬರೋದು. ಶಾಲೆಗೆ ಹೋದ ತಕ್ಷಣ ಮನೇಲಿ ಮಾತಾಡ್ತಿದ್ದ ಭಾಷೆ ಬಿಟ್ಟು ಬೇರೆ ಯಾವುದೋ ಭಾಷೇಲಿ ಮಾತಾಡಬೇಕು, ಓದಬೇಕು, ಕಲೀಬೇಕು ಅನ್ನೋದು ಮಕ್ಕಳ ಮನಸ್ಸಿನ ಮೇಲೆ ಬಹಳ ಕೆಟ್ಟ ಪರಿಣಾಮ ಬೀರತ್ತೆ ಗುರು. ಇದನ್ನ ಮನಗಂಡೇ ವಿಶ್ವಸಂಸ್ಥೆಯೋರು ಕಲಿಕೆ ತಾಯ್ನುಡಿಯಲ್ಲಿ ಇಲ್ಲದಿದ್ದರೆ ಏನೇನು ತೊಂದರೆಗಳಾಗತ್ವೆ ಅಂತ ಹೇಳ್ತಾನೇ ಇದಾರೆ ಗುರು:
Instruction through a language that learners do not speak has been called “submersion” (Skutnabb-Kangas 2000) because it is analogous to holding learners under water without teaching them how to swim.

ಮಕ್ಕಳಿಗೆ ತಮ್ಮದಲ್ಲದ ಭಾಷೇಲಿ ಕಲಿಸಕ್ಕೆ ಹೊರಡೋದು ಈಜಕ್ಕೆ ಬರ್ದೇ ಇರೋ ಮಕ್ಕಳನ್ನ ನೀರೊಳಗೆ ಬಲವಂತವಾಗಿ "ಮುಳುಗಿ"ಸಿದಹಾಗೆ ಅಂತ್ಲೇ ವಿಶ್ವಸಂಸ್ಥೆ ಹೇಳ್ತಿರೋದು ಗುರು! ಸ್ವಲ್ಪ ಯೋಚ್ನೆ ಮಾಡಿ...ಎಷ್ಟು ನಿಜ ಈ ಮಾತು ಅಂತ! ಇಂಗ್ಲೀಷಲ್ಲೇ ಸರಿಯಾದ ಶಿಕ್ಷಣ ಸಾಧ್ಯ ಅಂತ ನಾವು ನಂಬ್ಕೊಂಡಿರೋದು ಅತ್ಯಂತ ಅವೈಜ್ಞಾನಿಕ ಅನ್ನೋದು ಪ್ರಪಂಚದಲ್ಲಿ ಎಲ್ರೂ ಹೇಳ್ತಿರೋದೇ. ಇದನ್ನ ಸರಿಯಾಗಿ ಅರ್ಥ ಮಾಡ್ಕೊಳ್ದೇ ಹೋದ್ರೆ ಕನ್ನಡದ ಮಕ್ಕಳೆಲ್ಲ ನೀರಲ್ಲಿ ಮುಳುಗಿ ಸತ್ತೇ ಹೋಗ್ತವೆ ಗುರು! ಈಜು ಬರದೇ ಇರೋ ಮಕ್ಕಳನ್ನ ನೀರೊಳಗೆ ಮುಳುಗಿಸಿದರೆ ಧೈರ್ಯ, ಸೃಜನಶೀಲತೆಗಳು ಬರೋದು ಇರಲಿ, ಇರೋ ಸೃಜನಶೀಲತೇನೂ ಇರೋ ಧೈರ್ಯಾನೂ ಇಂಗೋಗತ್ತೆ ಗುರು!

ನಿಧಾನವಾಗಿ ಕನ್ನಡದಲ್ಲಿ ಒಳ್ಳೇ ಶಿಕ್ಷಣ ವ್ಯವಸ್ಥೆ ಕಟ್ಟಬೇಕು

ಈ ಮೇಲಿನ ಸಮಸ್ಯೆಗೆ "ಈಜು ಕಲಿಸಿದರಾಯಿತು, ಇಂಗ್ಲೀಷು ಕಲಿಸಿದರಾಯಿತು" ಅಂತ ಕೆಲವರು ಹೇಳಬಹುದು. ಅದು ಹೇಳಕ್ಕೆ ಸುಲಭ, ಆದರೆ ಮಾಡೋದು ಕಷ್ಟ. ಅದು ನಮಗೆ ಅಪ್ರಿಯವೂ ಹೌದು. ಅನಾದಿ ಕಾಲದಿಂದ ಮಾತಾಡಿಕೊಂಡು ಬಂದಿರೋ ನಮ್ಮ ಭಾಷೇನ ಬಿಟ್ಟು ಮತ್ತೊಂದಕ್ಕೆ ಮೊರೆಹೋಗೋದು ಆಗದೆ ಇರೋ ವಿಷಯ ಗುರು! ಅಲ್ಲದೆ ಯಾಕೆ ಬಿಟ್ಟುಕೊಡಬೇಕು ನಮ್ಮ ಭಾಷೇನ? ನಾವೇನು ಸ್ವಾಭಿಮಾನವೇ ಇಲ್ಲದ ಹೇಡಿಗಳೇನು? ನಮ್ಮ ಭಾಷೇಲೇ ಕಲಿಯೋದು ಸರಿ ಅಂತ ಎದೆ ಬಡ್ಕೋತಾ ಇದ್ರೂ ಅದರ ಕಡೆ ಗಮನ ಕೊಡಕ್ಕೂ ಅಂಜ್ತಾ ಇರೋ ಷಂಡರಾ ನಾವು?

ಇವತ್ತು ಕರ್ನಾಟಕದಲ್ಲಿ ಬೆರಳೆಣಿಕೆ ಜನ ಇಂಗ್ಲೀಷಲ್ಲಿ ಕಲೀತಿರಬೋದು, ದುಡ್ಡು ಮಾಡ್ತಾ ಇರಬಹುದು. ಆದರೆ ಔರಿಗೂ ಕಲಿಕೆ ತಲೇಗ್ ಹತ್ತುತ್ತಾ ಇಲ್ಲ ಅನ್ನೋದಕ್ಕೆ ಕರ್ನಾಟಕದಲ್ಲಿ ಹತ್ತನೇ ತರಗತಿ ಫಲಿತಾಂಶಾನೇ ಸಾಕು: ಇವತ್ತಿಗೂ ಕನ್ನಡ ಮಾಧ್ಯಮದಲ್ಲಿ ಓದ್ತಿರೋ ಮಕ್ಕಳೇ ಇಂಗ್ಲೀಷ್ ಮಾಧ್ಯಮದಲ್ಲಿ ಓದ್ತಿರೋರಿಗಿಂತ (ಶೇಕಡಾವಾರು) ಜಾಸ್ತಿ ಪಾಸಾಗ್ತಿರೋದು! ಜೊತೆಗೆ ಈ ಬೆರಳೆಣಿಕೆ ಜನ ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳಲ್ಲಿ ಕಿಸ್ದಿರೋದ್ನೂ ನೋಡ್ತಾನೇ ಇದೀವಲ್ಲ - ಓ ಅಂದ್ರೆ ಟೋ ಅನ್ನಕ್ಕೆ ಬರದೇ ಹೋದರೂ ಸರಿ! ಎಷ್ಟು ಪೇಟೆಂಟುಗಳ್ನ ನಾವು ಕನ್ನಡಿಗರು ತೊಗೊಂಡಿದೀವಿ? ಎಷ್ಟು ನಿಜವಾದ ವೈಜ್ಞಾನಿಕ ಸಂಶೋಧನೆಗಳ್ನ ನಾವು ಕನ್ನಡಿಗರು ಮಾಡಿದೀವಿ? ಕನ್ನಡಿಗರು ಕಂಡುಹಿಡಿದ ಒಂದು ವೈಜ್ಞಾನಿಕ ತತ್ವದ ಹೆಸರು ಹೇಳಿ ನೋಡೋಣ? ಯಾವ ಮಣ್ಣೂ ಇಲ್ಲ ಗುರು! ಇದಕ್ಕೆ ನಮ್ಮ ಅಯೋಗ್ಯ ಶಿಕ್ಷಣ ವ್ವವಸ್ಥೇನೇ ಕಾರಣ ಹೊರತು ಇನ್ನೇನೂ ಇಲ್ಲ. ನಮಗೆ ತಲೆ ಇಲ್ಲ ಅಂತೇನಿಲ್ಲ.

ಜಪಾನ್, ಜರ್ಮನಿ ಮುಂತಾದ ದೇಶಗಳಲ್ಲಿ ಇದನ್ನ ಅರ್ಥ ಮಾಡ್ಕೊಂಡೇ ತಂತಮ್ಮ ಶಿಕ್ಷಣ ವ್ಯವಸ್ಥೆಗಳ್ನ ತಂತಮ್ಮ ಭಾಷೆಗಳಲ್ಲೇ ಇಟ್ಕೊಂಡಿರೋದು. ಅವರವರ ಭಾಷೆ ಬರದೇ ಇರೋ ದೇಶಗಳ ಜೊತೆ ಮಾತಾಡಕ್ಕೆ ಮಾತ್ರ ಇಂಗ್ಲೀಷ್ನ ಇಟ್ಕೊಂಡಿದಾರೆ, ಅಷ್ಟೆ.

ಇಷ್ಟೆಲ್ಲ ಕಣ್ಮುಂದೆ ಇದ್ರೂ ನಾವು (ಕನ್ನಡಿಗರಷ್ಟೆ ಅಲ್ಲ, ಭಾರತದೋರೆಲ್ಲ) ಇಂಗ್ಲೀಷಿಗೆ ಕಣ್ಮುಚ್ಚಿಕೊಂಡು ಮೊರೆ ಹೋಗೋದು ಪೆದ್ದತನಾನೂ ಹೌದು, ನಮ್ಮ ಮಕ್ಕಳಿಗೆ ಮಾಡ್ತಿರೋ ಮೋಸಾನೂ ಹೌದು. ನಿಧಾನವಾಗಿ ಇದನ್ನ ರಿಪೇರಿ ಮಾಡ್ಬೇಕು, ಕನ್ನಡದ ಮಾಧ್ಯಮಕ್ಕೆ ನಮ್ಮ ಮಕ್ಕಳನ್ನ ಸೇರಿಸೋದು ಹೆಚ್ಚಬೇಕು, ಕನ್ನಡದ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಚೆನ್ನಾಗಿ ಆಗಬೇಕು, ನಮ್ಮ ಮಕ್ಕಳನ್ನ ಜಾಗತೀಕರಣದಲ್ಲಿ ನಿಜವಾದ ಆಟಗಾರರಾಗಕ್ಕೆ ಅನುವು ಮಾಡ್ಕೊಡಬೇಕು, ಇವತ್ತಿನಂಗೆ ಬರೀ ತ್ಯಾಪೆ ಕೆಲಸಗಾರರಾಗಿರ್ಲಿ ಅಂತ ಬಿಡಬಾರದು ಗುರು!

ಈ ಬದಲಾವಣೆ ಮಾಡುವಾಗ ಕೆಲವು ದಿನ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆ ಇಟ್ಟುಕೊಳ್ಳದೆ ಬೇರೆ ದಾರಿಯಿಲ್ಲ. ಆದರೆ ಅದನ್ನೇ ಶಾಶ್ವತವಾಗಿ ನಂಬಿಕೊಳ್ಳದೆ ಜೊತೆಜೊತೆಗೇ ಕನ್ನಡದ ಶಿಕ್ಷಣ ವ್ಯವಸ್ಥೇನ ಭದ್ರ ಮಾಡ್ಕೋಬೇಕು ಗುರು. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ.

1 ಅನಿಸಿಕೆ:

Anonymous ಅಂತಾರೆ...

makkaLu school ge hogalu haTa maaDodralle gottagatte, avra manassige ishTa illada yaavudo bhaasheya shikshaNada prabhaava. maneyalli huttidaarabhya ondu bhaashe kaltirutte magu. aa eLe vayassalli (6 varsha??) maatrubhaashe yalli shikshaNa koDodu bittu 'A for Apple' anta heLkoDokke hogtaare. idarartha yenu?

munde neenu English gulaamanaagi kelasa maaDalu 6 varshada maguvinindale tayaaraagu entale??

magu eraDakshara english maataDidre tamma janmane saartha aaytu anta hiri hiri higgo tande taaygalu!! aaha..
idu enthaa lokavayya??

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails