ಯಂತ್ರ ಹಳೆಯದಾದರೇನು ಮಂಕು ನವನವೀನ!

ಇವತ್ತಿಗೆ ಕೌಶಿಕ ಅನಂತಸುಬ್ಬರಾಯರು ಹುಟ್ಟಿ ನೂರು ವರ್ಷ ಕಳೆದವು. ಯಾರು ಇವ್ರು ಅಂತೀರಾ? ಇನ್ನು ಯಾರೂ ಇಲ್ಲ, ಸುಮಾರು ಐವತ್ತು ವರ್ಷಗಳ ಹಿಂದೆ ಕನ್ನಡದ ಕೀಲಿಮಣೆ ಕಂಡುಹಿಡಿದು ಕನ್ನಡಿಗರ ಬುದ್ಧಿಗೆ "ಬಹುದಿನಗಳಿಂದ ಮೈಮರವೆಯಿಂದ ಕೂಡಿರುವ ಕೊಳೆ" ಹೋಗಲಾಡಿಸಿದ ಮಹಾನುಭಾವ.

ಅದೇನು ಮಂಕು ಬಡಿದಿತ್ತೋ ಏನೋ ಕನ್ನಡಿಗರಿಗೆ ಆಗ - "ಟೈಪ್ರೈಟರ್ ಅನ್ನೋದು ಆಕಾಶದಿಂದ ಉದ್ರಿರೋ ಯಂತ್ರ, ಅದಕ್ಕೆ ಇಂಗ್ಲೀಷ್ ಮಾತ್ರ ಬರೋದು", "ನಮ್ಮ ದುರ್ದೈವ, ಅದರಲ್ಲಿ ಕನ್ನಡ ಬರೋದಿಲ್ಲ", "ಟೈಪ್ರೈಟರ್ ಉಪಯೋಗಿಸುವುದಕ್ಕೆ ಇಂಗ್ಲೀಷ್ ಕಲೀಬೇಕು" ಅನ್ನೋ ಹದಿನಾರಾಣೆ ಮೂರ್ಖತನ ನಮ್ಮಲ್ಲಿತ್ತು ಗುರು!

ಇಂಥಾ ಮೂರ್ಖರ ನಡುವೆ ಯೇಗಾಡಿ ಕನ್ನಡದಲ್ಲಿ ಕೀಲಿಮಣೆ ಮಾಡಲು ಸಾಧ್ಯ ಅಂತ ತೋರಿಸಿಕೊಟ್ಟ ಅನಂತಸುಬ್ಬರಾಯರನ್ನ ಇವತ್ತಿನ ದಿನ ಕನ್ನಡಕ್ಕೆ "ಕೈ ಎತ್ತಿದ" ಒಬ್ಬ ವ್ಯಕ್ತಿ ಅಂತಲ್ಲ, ಸುತ್ತಮುತ್ತಲ ಜನರೆಲ್ಲ "ಆಗಲ್ಲ, ಆಗಲ್ಲ!" ಅಂತಿದ್ದಾಗ ಒಂದು ಅದ್ಭುತವಾದ ಯಂತ್ರವನ್ನ ಕಂಡುಹಿಡಿದ ತಂತ್ರಜ್ಞಾನಿ ಅಂತ್ಲೇ ನೆನೆಸಿಕೋಬೇಕು ಗುರು!

ಹೊಸ ಯಂತ್ರ, ಅದೇ ಮಂಕು

ಅದ್ಭುತ ಏನೂಂದ್ರೆ ಯಾವ ಮಂಕು ಕೀಲಿಮಣೆ ಕಾಲದಲ್ಲಿ ಕನ್ನಡಿಗರಿಗೆ ಬಡಿದಿತ್ತೋ ಅದೇ ಮಂಕು ಇವತ್ತಿನ ಗಣಕಯಂತ್ರದ ಕಾಲದಲ್ಲೂ ಇದೆ. ನೂರು ವರ್ಷವಾದರೂ ನಾವೇನು ಉದ್ಧಾರವಾಗಿಲ್ಲ! ಇವತ್ತಿಗೂ "ಕಂಪ್ಯೂಟರ್ ಅನ್ನೋದು ಆಕಾಶದಿಂದ ಉದ್ರಿರೋ ಯಂತ್ರ, ಅದಕ್ಕೆ ಇಂಗ್ಲೀಷ್ ಮಾತ್ರ ಬರೋದು", "ನಮ್ಮ ದುರ್ದೈವ, ಅದರಲ್ಲಿ ಕನ್ನಡ ಬರೋದಿಲ್ಲ", "ಕಂಪ್ಯೂಟರ್ ಉಪಯೋಗಿಸುವುದಕ್ಕೆ ಇಂಗ್ಲೀಷ್ ಕಲೀಬೇಕು" ಅಂತ್ಲೇ ನಮ್ಮ ಜನ ಹೆಚ್ಚಾಗಿ ತಿಳ್ಕೊಂಡಿರೋದು. ಇದಕ್ಕೆ ಅಪವಾದ ಅನ್ನೋಹಾಗೆ ನಮ್ಮ ಬರಹ ವಾಸು ಅಂಥಾ ಬೆರಳೆಣಿಕೆಯ ಕೆಲವರು ಇದಾರೆ ಅನ್ನೋದು ಮನಸ್ಸಿಗೆ ತುಸು ನೆಮ್ಮದಿ ಕೊಡೋದೇನೋ ನಿಜ. ಆದ್ರೆ ಇವತ್ತಿಗೂ ಕನ್ನಡದ ಯಾವುದೇ ತಂತ್ರಾಂಶ ಇಂಗ್ಲೀಷಿನ ಹಂಗಿಲ್ಲದೆ ಇಲ್ಲ ಅನ್ನೋದು ಕಟು ಸತ್ಯ.

ಅವತ್ತು ಕೀಲಿಮಣೆ ಬಳಸ್ತಾ ಇದ್ದ ಜನ ಎಷ್ಟಿದ್ದರೋ ಅದರ ನೂರರಷ್ಟು ಜನ ಇವತ್ತು ಗಣಕ ಉಪಯೋಗಿಸುತ್ತಾ ಇದ್ದಾರೆ. ಅವತ್ತು ಕನ್ನಡದ ಕೀಲಿಮಣೆ ಬರದೇ ಹೋಗಿದ್ದಿದ್ದರೆ ಯಾವ ಅನಾಹುತ ಆಗ್ತಿತ್ತೋ ಅದರ ನೂರರಷ್ಟು ಅನಾಹುತ ಕನ್ನಡದ ಗಣಕಯಂತ್ರ ಬರದೇ ಹೋದರೆ ನಾಳೆ ನಮಗೆ ಕಾದಿದೆ. ಸುಬ್ಬರಾಯರ ಕಾಲದಲ್ಲಿ ಗಣಕ ತಂತ್ರಜ್ಞಾನ ಓದಿದ ಇಂಜಿನಿಯರ್ ಗಳು ಇರಲಿಲ್ಲ. ಆದ್ರೆ ಇವತ್ತು ಬೀದಿಬೀದೀಲಿ ಇದಾರಲ್ಲ, ಅವರೆಲ್ಲ ಏನ್ ಕಿಸೀತಿದಾರೆ ಅನ್ನೋ ಪ್ರಶ್ನೆ ಹುಟ್ಟುತ್ತೆ ಗುರು! ಒಟ್ನಲ್ಲಿ ಟೈಪ್ರೈಟರ್ ಅನ್ನೋ ಯಂತ್ರ ಹಳೇದಾದ್ರೂ ನಮ್ಮ ಮಂಕು ಇನ್ನೂ ನವನವೀನ!

ಐವತ್ತು ವರ್ಷದ ಹಿಂದೆ ಅನಂತಸುಬ್ಬರಾಯರಿಗಿದ್ದ ಮೀಟ್ರು ಇವತ್ತು ಯಾರಿಗೂ ಇಲ್ಲವಾ?

5 ಅನಿಸಿಕೆಗಳು:

Anonymous ಅಂತಾರೆ...

koushik anant subbarayarige nanna koTi namana. yella badalavaneyu ondu chikka hejjeyindale shuru aagodu. avara ondu hejje yentha dodda badalavane tanditu. inthade badalavane innu computer kshetradallu aagutte.

NITHIN ಅಂತಾರೆ...

kannada kadambarigalanna download maad bekittu..yaradru sight adress kottidre tumba upkara aagirodu....nanna mail
nitin5672002@gmail.com

Anonymous ಅಂತಾರೆ...

ಅನಂತಸುಬ್ಬರಾಯರನ್ನ ನೆನೆಸಿಕೊಂಡು ಒಳ್ಳೇ ಕೆಲಸ ಮಾಡಿದ್ರಿ. ಇವರನ್ನು ನಾನು ನಮ್ಮೂರಿನಲ್ಲಿ ಹಲವಾರು ಬಾರಿ ನೋಡಿದ್ದೇನೆ ಅನ್ನೋದೇ ನನಗೆ ಸಂತೋಷದ ವಿಷಯ.

ಅವರ ಜೀವಿತ ಕಾಲದಲ್ಲಂತೂ ಅವರನ್ನು ಯಾರೂ ಸರಿಯಾಗಿ ಗುರ್ತಿಸಲಿಲ್ಲ. ಈಗಲಾದರೂ ನೆನೆಯುತ್ತಿದ್ದ್ದಾರಲ್ಲ ..

-ನೀಲಾಂಜನ

Anonymous ಅಂತಾರೆ...

ಶ್ರೀ ಅನಂತಸುಬ್ಬರಾಯರ ಬಗ್ಗೆ ಶ್ರೀ ಸುದಾರ್ಥಿ ಎಂಬ ಲೇಖಕರು “ಅನಂತ” ಎಂಬ ಪುಸ್ತಕ ಬರೆದಿದ್ದಾರೆ. ಪಬ್ಲಿಷರ್ಸ್: ವಿಜಯ ಪುಸ್ತಕ ಭಂಢಾರ. ಅದರಲ್ಲಿ ಕನ್ನಡ ಕೀಲಿಮಣೆಯನ್ನು ಮಾಡಲು ಅವರು ಪಟ್ಟಪಾಡನ್ನು ವಿವರವಾಗಿ ಬರೆದಿದ್ದಾರೆ. ನಮ್ಮ ಇಂಜಿನಿಯರುಗಳಿಗೆ ಬೇಕಾಗಿರೋದು ಎರಡು ಅಂಶಗಳು: ತಂತ್ರಜ್ಞಾನ ಮತ್ತು ಕನ್ನಡಪ್ರೀತಿ. ಇವೆರಡರಲ್ಲಿ ಒಂದಿಲ್ಲದಿದ್ದರೆ ಕಷ್ಟ.

Unknown ಅಂತಾರೆ...

ಸೂಪರ್ ಗುರು ............

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails