ವಿಶ್ವೇಶ್ವರಯ್ಯನವರಿಗೆ ನಮನ!



ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಂಥಾ ಪುಟ್ಟ ಹಳ್ಳೀಲಿ ಹುಟ್ಟಿದ ಕನ್ನಡಿಗರ ಹೆಮ್ಮೆಯ ದಾರ್ಶನಿಕ ಸರ್.ಎಂ.ವಿಶ್ವೇಶ್ವರಯ್ಯನವರ ಒಂದು ನೂರಾ ನಲವತ್ತೆಂಟನೇ ಹುಟ್ಟುಹಬ್ಬ ನಿನ್ನೆ ತಾನೆ ಆಗಿದೆ. ಈ ಸಂದರ್ಭದಲ್ಲಿ ಅವರನ್ನು ನೆನೆದು ನಮ್ಮ ಗೌರವಗಳನ್ನು ಸಲ್ಲಿಸುತ್ತೇವೆ. ಆದ್ರೆ ಇವರನ್ನು ಏನೆಂದು ನೆನೆಯೋಣ? ಏನೇನೆಂದು ನೆನೆಯೋಣ ಗುರು!?

ಸರ್ ಎಂ.ವಿ. ಎಂಬ ....

ಇವರು ತಮ್ಮ ತಾಂತ್ರಿಕ ನೈಪುಣ್ಯದಿಂದ ಅಣೆಕಟ್ಟೆಯ ಗೇಟ್ ವಿನ್ಯಾಸ ಮಾಡಿ ಪೇಟೆಂಟ್ ಪಡೆದಿದ್ದ ತಾಂತ್ರಿಕ ನಿಪುಣರೆಂದೇ? ಲೋಕೋಪಯೋಗಿ ಇಂಜಿನಿಯರ್ ಆಗಿ ಅನೇಕ ಅಣೆಕಟ್ಟುಗಳನ್ನು ಕಟ್ಟಿ ಯೋಜನೆಗಳನ್ನು ಜಾರಿಗೊಳಿಸಿದ ಒಳ್ಳೆಯ ಆಡಳಿತಗಾರರೆಂದೇ? ನಾಡಿನ ಏಳಿಗೆಗೆ ಅಗತ್ಯವಾಗಿರೋ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಶಿಕ್ಷಣ ತಜ್ಞರೆಂದೇ? ಕನ್ನಡ ನಾಡಿನ ಏಕೀಕರಣಕ್ಕೆ ಒಂದು ವೇದಿಕೆಯಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಸಾಹಿತ್ಯ ಲೋಕದ ದಿಗ್ಗಜರೆಂದೇ? ನಾಡೊಂದಾಗಲೆಂಬ ಮುಂದಾಲೋಚನೆಯ ರಾಜಕಾರಣಿಯೆಂದೇ?

ತನ್ನ ಬದುಕಿನಲ್ಲಿ ಶಿಸ್ತಿಗೆ ಮಹತ್ವ ಕೊಟ್ಟ ತನ್ನ ಮತ್ತು ಉಳಿದವರ ಸಮಯದ ಬೆಲೆ ಅರಿತು ಸದಾ ಸಮಯಪಾಲನೆ ಮಾಡುತ್ತಿದ್ದ ಶಿಸ್ತುಗಾರರೆಂದೇ? ತನ್ನವರನ್ನೆಲ್ಲಾ ಕರೆದು ದಿವಾನರಾಗುವ ಮೊದಲು ವಶೀಲಿ ಮಾಡುವಂತೆ ಒತ್ತಾಯಿಸಬೇಡಿ ಎಂದು ನಿಷ್ಠುರವಾಗಿ ನಡೆದ ನ್ಯಾಯ ಪಕ್ಷಪಾತಿಯೆಂದೇ? ತನ್ನ ಸ್ವಂತ ಹಣವನ್ನೂ ನಾಡಿನ ಕೆಲಸಕ್ಕಾಗಿ ಖರ್ಚು ಮಾಡಲು ಹಿಂದುಮುಂದು ನೋಡದ ನಿಷ್ಠಾವಂತರೆಂದೇ? ತನ್ನ ವೈಯುಕ್ತಿಕ ಕೆಲಸಕ್ಕಾಗಿ ಸ್ವಂತದ ಪೆನ್ನು, ಕಛೇರಿ ಕೆಲಸಕ್ಕೆ ಕಛೇರಿ ಪೆನ್ನು ಬಳಸುತ್ತಿದ್ದ ಪ್ರಾಮಾಣಿಕತೆಯ ಶಿಖರವೆಂದೇ?

ನಾಡಿನಲ್ಲಿ ಇಂದು ಇರುವ ಸಂಪನ್ಮೂಲಗಳೇನು, ಅವನ್ನು ಸರಿಯಾಗಿ ಬಳಸಿಕೊಳ್ಳಲು ಗಣಿಗಾರಿಕೆ, ಉಕ್ಕು ಕಾರ್ಖಾನೆ ಸ್ಥಾಪಿಸಿದವರೇ ಇವರು. ನಾಡಿನ ಜನತೆ ಇಂದು ವ್ಯವಸಾಯವನ್ನು ಮುಖ್ಯವಾಗಿ ನಂಬಿದ್ದಾರೆ, ಹಾಗಾಗಿ ನೀರಾವರಿಗೆ ಆದ್ಯತೆ ಕೊಡಬೇಕೆಂದು ಅಣೆಕಟ್ಟೆ ನಿರ್ಮಾಣವನ್ನು, ಆಧುನಿಕ ವ್ಯವಸಾಯ ಪದ್ದತಿಗಳನ್ನು ಪ್ರೋತ್ಸಾಹಿಸಿದ ಮುಂದಾಲೋಚನೆ ಹೊಂದಿದ ಮುಂದಾಳೆಂದೇ? ನಮ್ಮ ಜನ ರೇಶ್ಮೆ ಬೆಳೆಯಲ್ಲಿ ನಿಸ್ಸೀಮರು, ಇದಕ್ಕೆ ಸೂಕ್ತ ಉತ್ಪಾದನೆ ಮತ್ತು ಮಾರಾಟದ ಸಾಧನವಾಗೋ ಸಂಸ್ಥೆ ಬೇಕು ಎಂದು ರೇಶ್ಮೆ ಉದ್ದಿಮೆಯನ್ನು, ಸಂಬಂಧಪಟ್ಟ ಕೈಗಾರಿಕೆಗಳನ್ನೂ ಕಟ್ಟಿದ ಆಧುನಿಕ ನಾಯಕರೆಂದೇ? ಇರುವ ಸಂಪನ್ಮೂಲದ ಜೊತೆ ತಂತ್ರಜ್ಞಾನದಲ್ಲೂ ಮುಂದಾಗಬೇಕು ನಮ್ಮ ನಾಡು ಎಂದು ೧೯೩೦ರ ದಶಕದಲ್ಲೇ ಕಾರು ಕಾರ್ಖಾನೆ ಸ್ಥಾಪಿಸಲು ಮುಂದಾದವರೆಂದೇ? ಹಿಂದುಸ್ಥಾನ್ ವಿಮಾನ ಕಾರ್ಖಾನೆಯನ್ನು ವಿಮಾನ ವಿಜ್ಞಾನ ಇನ್ನೂ ಅಂಬೆಗಾಲಿಡುತ್ತಿದ್ದಾಗಲೇ ಸ್ಥಾಪಿಸಲು ಕಾರಣರಾದ ವಿಜ್ಞಾನಿಯೆಂದೇ? ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಪೂರೈಸಲು ಇಡೀ ಏಷ್ಯಾ-ಖಂಡದ ಮೊದಲ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಕಾರಣರಾದ ನಾಡಿನ ಬೆಳಕೆಂದೇ? ಬಹಳ ಕಡಿಮೆ ಜನ ಸಾಬೂನು ಬಳಸುತ್ತಿದ್ದ ಆ ದಿನಗಳಲ್ಲೇ ಮುಂದೆ ಒದಗಬಹುದಾದ ಮಾರುಕಟ್ಟೆಯನ್ನು ಗುರುತಿಸಿ, ನಮ್ಮ ನಾಡಲ್ಲೇ ಹೆಚ್ಚು ಸಿಗುತ್ತಿದ್ದ ಗಂಧದೆಣ್ಣೆಯ ವಿಶೇಷತೆಯನ್ನು ಮಾರುಕಟ್ಟೆ ಗೆಲ್ಲುವ ಸಾಧನವಾಗಿ ಬಳಸಿದ ಮಹಾನ್ ಉದ್ದಿಮೆದಾರರೆಂದೇ? ನಮ್ಮ ಜನರ ಏಳಿಗೆಗೆ ಇಂದಿನ ಹಣಕಾಸು ಬೆಂಬಲ ಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬ ಬ್ಯಾಂಕ್ ಹುಟ್ಟುಹಾಕಿದ ಆರ್ಥಿಕ ತಜ್ಞರೆಂದೇ? ಏನೆಂದು ನೆನೆಯೋಣ ಗುರು?

ನಾಡುಕಟ್ಟೋರಿಗೆ ಏನೆಲ್ಲಾ ಮುನ್ನೋಟಗಳು, ಏನೆಲ್ಲಾ ಸಾಮರ್ಥ್ಯಗಳು ಇರಬೇಕೆಂದು ತೋರಿಸಿಕೊಟ್ಟ ಕನ್ನಡ ನಾಡಿನ ಹೆಮ್ಮೆಯ ದೇವ ಮಾನವರೆಂದೇ? ಇವೆಲ್ಲವೂ ಆಗಿರುವ ನಮ್ಮಲ್ಲಿ ಸದಾ ಸ್ಪೂರ್ತಿ ತುಂಬುವ ಚೈತನ್ಯವೆಂದೇ?

17 ಅನಿಸಿಕೆಗಳು:

Anonymous ಅಂತಾರೆ...

we should not remember him, if we do so then its last tribute to him, we should remeber only our elders or anyone whom we like/love after their death or if they are far from us, but not sri.vishweshwaraya, he is everywhere, he is kannada, he is karnataka, if he is not there then karnataka is not there, so every day , every minute is vishwashwaraya for us, the life , the water, the breez, the power, the knowledge, the wealth, the culture, the tradition,........ is vishweshwaraya

Prashanth ಅಂತಾರೆ...

ವಿಶ್ವೇಶ್ವರಯ್ಯ ನವರು ಒಂದು ವ್ಯಕ್ತಿ ಯಲ್ಲಿ ಮಿಗಿಲಾಗಿ ಒಂದು ಮಹಾನ್ ಶಕ್ತಿ . ಇವರು ನಮ್ಮ ನೆಚ್ಚಿನ ಕನ್ನಡ ಮಣ್ಣಲ್ಲಿ ಹುಟ್ಟಿರೋದು ನಮಗೆಲ್ಲ ಹೆಮ್ಮೆಯ ವಿಷಯ. ಆವರು ಮಾಡಿರೋ ಸಾಧನೆಗಳಲ್ಲಿ ಕೆಲ್ಲವನ್ನು ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದಲ್ಲಿ ಕೆಲವ್ವನು ಕಾಣಬಹುದು. ಜೀವನದಲ್ಲಿ ಒಂದು ಬಾರಿ ಇಲ್ಲಿಗೆ ಬೇಟಿ ಕೊಟ್ಟರೆ ಅವರ ಮಾಂತ್ರಿಕ ಶಕ್ತಿಯ ಅನುಭವ ನಿಮಗೆ ಆಗುತ್ತದೆ

Unknown ಅಂತಾರೆ...

Vishwa Vikyatharu, Thama yella karyagalalu Karnatakada Hirimeyannu Saridhavaru Sir M. Vishveshwariah navaru.
Ivaru VISHWAKE ESHWARA nanthe idhavaru....
Jai Karnataka

Anonymous ಅಂತಾರೆ...

ಭಾರತದ ಸುಪ್ರಸಿದ್ದ ಪ್ರಶಸ್ತಿ "ಭಾರತ ರತ್ನ" ಇದನ್ನು ಮುಡಿಗೆರಿಸಿದ ಏಕಮಾತ್ರ ಕನ್ನಡಿಗ..... ಮತ್ತು ವಿಶ್ವ ವಿಖ್ಯಾತ ಪ್ರಶಸ್ತಿ "ಸರ್" ಇದು ಸಾಮಾನ್ಯವಾಗಿ ವಿಜ್ಞಾನಿಗಳಿಗೆ, ಕಾರ್ಯ ಕಾರಿಣಿಗಳಿಗೆ, ಕೊಡುವ ಪ್ರಶಸ್ತಿ...... ಇದನ್ನು ಸಾಧಿಸಿದ ಮೊಟ್ಟಮೊದಲ ಇಂಜಿನಿಯರ್ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ "ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ".

"ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ" ಮತ್ತು "ಸರ್. ಮಿರ್ಜಾ ಇಸ್ಮಾಯಿಲ್" ಇವರ ಜಂಟಿ ಕಾರ್ಯದಲ್ಲಿ ನಿರ್ಮಾಣವಾದ ಸುಂದರವಾದ ತಾಣ ಈ ಬೃಂದಾವನ..... ಇದು ಕೂಡ ಇವರ ಕಾರ್ಯ ಕೌಶಲ್ಯತೆಯನ್ನು ಎತ್ತಿ ತೋರಿಸುತ್ತದೆ...

ವಿಶ್ವೇಶ್ವರಯ್ಯನವರ ಸಾದನೆಯ ಹೆಚ್ಚಿನ ವಿವರಗಳಿಗೆ, ಕೆಳಗಿನ ತಾಣಕ್ಕೆ ಬೇಟಿ ನೀಡಿ.
http://www.chikballapur.nic.in/visvesvaraya.html

ಪುಟ್ಟ PUTTA ಅಂತಾರೆ...

ಸರ್.ಎಂ.ವಿಶ್ವೇಶ್ವರಯ್ಯನವರು ಕನ್ನಡ ನಾಡಿನ ಹೆಮ್ಮೆಯ ಪ್ರತೀಕ. ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿದರೂ ಅವರು ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಈಗಿನ ನಾರಾಯಣಮೂರ್ತಿ ಯವರೂ ಕೂಡ ಇವರಂತೆ
ಕನ್ನಡಿಗರ ಬಗ್ಗೆ ಕಾಳಜಿ ಹೊಂದಿದ್ರೆ ಇಂದು ಎಲ್ಲ ಕನ್ನಡಿಗರು (Software Engineers)Infosys ನಲ್ಲೇ ಕೆಲಸ ಮಾಡಬಹುದಿತ್ತು.

Anonymous ಅಂತಾರೆ...

ಈ ಮಹಾನ್ ವ್ಯಕ್ತಿಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಲು ನಮಗೆ ಒಂದು ಅವಕಾಶವಿದೆ. ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ " ವಿಶ್ವೇಶ್ವರಯ್ಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ " ಎಂಬ ಹೆಸರಿಡುವ ಮೂಲಕ!

Unknown ಅಂತಾರೆ...

Sir MV, just GREAT ! Even his SAMAADHI looks so royal. WIsh he had done done something drastic in north Karnataka also, like KRS !!! That would have made KArnataka super power in complete sense.

Anonymous ಅಂತಾರೆ...

visheshvarayyanavara hesaru vishveshvaraya anta.
vishva+eeshvara+raaya = sari
vishva+eeshvara+ayya = tappu
ide maahitigaagi wiki pedia discussion nODi.
http://kn.wikipedia.org/wiki/%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:%E0%B2%AE%E0%B3%8B%E0%B2%95%E0%B3%8D%E0%B2%B7%E0%B2%97%E0%B3%81%E0%B2%82%E0%B2%A1%E0%B2%82_%E0%B2%B5%E0%B2%BF%E0%B2%B6%E0%B3%8D%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0%E0%B2%AF%E0%B3%8D%E0%B2%AF

Anonymous ಅಂತಾರೆ...

ಸ್ವಾಮಿ,
ವಿಶ್ವ+ಈಶ್ವರ+ಅಯ್ಯ = ವಿಶ್ವೇಶ್ವರಯ್ಯ ಅನ್ನೋದೇ ಸರಿ,
ವಿಶ್ವ+ಈಶ್ವರ+ರಾಯ = ವಿಶ್ವೇಶ್ವರ ರಾಯ ಅಂತ ಆಗುತ್ತೆ. ವಿಶ್ವೇಶರಾಯ ಆಗಲ್ಲ.
ಅವ್ರು ಇಂಗ್ಲಿಷಲ್ಲಿ ಬರೀಬೇಕಾದಾಗ vishveshvaraya ಅಂತ ಬರ್ದಿರೋದ್ರಿಂದ ಈ ಗೊಂದಲ ಆಗಿದೆ ಅಷ್ಟೆ ಅನ್ಸುತ್ತೆ.
ನೀವಂದಂತೆ ವಿಶ್ವ + ಈಶ್ವರ+ರಾಯ = ವಿಶ್ವೇಶ್ವರಾಯ ಅಂದ್ರೆ ಈಶ್ವರನ ಕಡೆಯ ರ ಎಲ್ಲಿ ಹೋಯಿತು? ಇದಾವ ಸಂಧಿ?

ಸುಬ್ಬಣ್ಣ

ಕುಮಾರವ್ಯಾಸ ಅಂತಾರೆ...

ವಿಶ್ವ+ಈಶ್ವರ+ರಾಯ = ವಿಶ್ವೇಶ್ವರ ರಾಯ ಅಂತ ಆಗುತ್ತೆ. ವಿಶ್ವೇಶರಾಯ ಆಗಲ್ಲ.
ನೀವಂದಂತೆ ವಿಶ್ವ + ಈಶ್ವರ+ರಾಯ = ವಿಶ್ವೇಶ್ವರಾಯ ಅಂದ್ರೆ ಈಶ್ವರನ ಕಡೆಯ ರ ಎಲ್ಲಿ ಹೋಯಿತು? ಇದಾವ ಸಂಧಿ?


ವಿಶ್ವ + ಈಶ್ವರ + ರಾಯ = ವಿಶ್ವೇಶ್ವರಾಯ. ಇದು ಲೋಪ ಸಂಧಿ. ಇಲ್ಲಿ ಈಶ್ವರನ ಕಡೆಯ ರ ಲೋಪವಾಯಿತು.

ಕನ್ನಡ ಸಂಧಿಗಳಾದ "ಲೋಪ, ಆಗಮ ಮತ್ತು ಆದೇಶ" ಇವುಗಳಲ್ಲಿನ ಮೊದಲನೆ ಸಂಧಿಯ ಪರಿಚಯವೇ ನಿಮಗಿಲ್ಲ ಅಂದ್ರೆ ಸೋಜಿಗವೇ ಸರಿ.

ಇದೋ ನಿಮಗಾಗಿ .....

ಲೋಪ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.
ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಉ' ಕಾರ ಲೋಪವಾಗಿದೆ.

ದಿನೇಶ್ ಕುಮಾರ್ ಎಸ್.ಸಿ. ಅಂತಾರೆ...

ವಿಶ್ವೇಶ್ವರಯ್ಯರಂಥವರು ಬದುಕಿದ ನಾಡಿನಲ್ಲಿ ಈಗ ಎಂಥೆಂಥವರು ಹುಟ್ಟಿಕೊಂಡಿದ್ದಾರೆ ನೋಡಿ. ರಾಜ್ಯದ ಗಣಿ ಸಂಪತ್ತನ್ನು ಕೊಳ್ಳೆ ಹೊಡೆದು, ಲೂಟಿ ಮಾಡುತ್ತಿರುವವರ ಕೈಗೆ ರಾಜ್ಯದ ಆಡಳಿತ ಸೂತ್ರ ಸಿಕ್ಕಿದೆ. ರಾಜಕಾರಣವನ್ನೂ ಉದ್ಯಮವನ್ನಾಗಿ ಮಾಡಿಕೊಂಡಿರುವ ಈ ಜನ ರಾಜ್ಯದ ಎಲ್ಲ ಸಂಪನ್ಮೂಲಗಳನ್ನು ನುಂಗಿ, ರಾಜ್ಯವನ್ನು ಬರಡು ಮಾಡುತ್ತಿದ್ದಾರೆ.
ವಿಶ್ವೇಶ್ವರಯ್ಯನವರು ರಾಜ್ಯಕ್ಕೆ ಮಾಡಿದ ಸೇವೆಯ ಒಂದಂಶವನ್ನಾದರೂ ಇಂದಿನ ರಾಜಕಾರಣಿಗಳು ಮಾಡಲು ಸಾಧ್ಯವೆ?
ಸಂಪತ್ತನ್ನು ಉಳಿಸಿ, ಬೆಳೆಸಿದ ಮಹಾನುಭಾವರೆಲ್ಲಿ, ಸಂಪತ್ತನ್ನು ದೋಚುತ್ತಿರುವ ಇಂದಿನ ದರೋಡೆಕೋರ ರಾಜಕಾರಣಿಗಳೆಲ್ಲಿ?

Anonymous ಅಂತಾರೆ...

when discussion is around the great person and his achievements, why are anonymous bothered abt the name pronounciations.. please grow up!
Sir MV is a real insipration to all indians, and we are really proud that he was a great kannadiga

Anonymous ಅಂತಾರೆ...

ನಮಸ್ಕಾರ ಕುಮಾರವ್ಯಾಸರಿಗೆ,
ಕನ್ನಡದಲ್ಲಿ ಅ,ಆ,ಇ,ಈ....ಔ ತನಕ ಸ್ವರಗಳು.
ಅಂ, ಅಃ - ಅನುಸ್ವಾರ ಮತ್ತು ವಿಸರ್ಗಗಳು
ಕ, ಖ......ಮ ತನಕ ಇರೋವು ವರ್ಗೀಯ ವ್ಯಂಜನಗಳು
ಯ,ರ....ಳ ತನಕ ಇರೋವು ಅವರ್ಗೀಯ ವ್ಯಂಜನಗಳು

ಲೋಪಸಂಧಿ, ಆಗಮ ಸಂಧಿ, ಆದೇಶ ಸಂಧಿ ... ಇವ್ಯಾವೂ ಕನ್ನಡ ಸಂಧಿಗಳಲ್ಲ. ಸಂಸ್ಕೃತ ಸಂಧಿಗಳು.
ಮತ್ತು + ಒಬ್ಬ = ಮತ್ತೊಬ್ಬ -- ಇಲ್ಲಿ ಲೋಪವಾಗಿರುವುದು ಮೊದಲ ಪದದ ಕೊನೆಯ ಸ್ವರ ಅಂದರೆ ಮತ್ತು ಪದದ ’ಉ’ ಅನ್ನೋ ಸ್ವರ.’ತ್ತು’ ಅನ್ನೋ ಅಕ್ಷರ ಅಲ್ಲ.
ವಿಶ್ವ+ಈಶ್ವರ+ರಾಯ = ವಿಶ್ವೇಶ್ವರ ರಾಯ ಆಗಕ್ಕೆ ಮಾತ್ರಾ ಸಾಧ್ಯ. ವಿಶ್ವೇಶ್ವರಾಯ ಆಗಕ್ಕೆ ಕನ್ನಡ ಭಾಷಾ ವ್ಯಾಕರಣದಂತೆ ಸಾಧ್ಯವಿಲ್ಲ.
ವಿಷಯ ಸರ್ಯಾಗಿ ತಿಳ್ಕೊಂಡು ಬರೀರಿ.ಇಲ್ದಿದ್ರೆ ನಗೆಪಾಟಲಿಗೀಡಾಗುತ್ತೀರಾ ಅಷ್ಟೆ.
ಇಷ್ಟಕ್ಕೂ ಆ ಮಹಾನುಭಾವ ವಿಶ್ವೇಶ್ವರಯ್ಯ ಆಗಿದ್ರೋ ವಿಶ್ವೇಶ್ವರಾಯ ಆಗಿದ್ರೋ ಅನ್ನೋದು ಕ್ಷುಲ್ಲಕ ವಿಷಯ.

ಸುಬ್ಬಣ್ಣ

ಕುಮಾರವ್ಯಾಸ ಅಂತಾರೆ...

ಸುಬ್ಬಣ್ಣೋರೆ ನಿಮಗೊಂದು ದೊಡ್ಡ ನಮಸ್ಕಾರ,

ಲೋಪಸಂಧಿ, ಆಗಮ ಸಂಧಿ, ಆದೇಶ ಸಂಧಿ ... ಇವ್ಯಾವೂ ಕನ್ನಡ ಸಂಧಿಗಳಲ್ಲ. ಸಂಸ್ಕೃತ ಸಂಧಿಗಳು.

ನಿಮ್ಮ ಈ ಮಾತನ್ನು ಕೇಳಿದ ಮೇಲೂ ನಾನು ಮಾತಾಡಿದರೆ, ನನಗಿಂತ ಮೂರ್ಖ ಇನ್ನೊಬ್ಬ ಇರಕ್ಕೆ ಸಾಧ್ಯ ಇಲ್ಲ.

ಎಲ್ಲರಿಗೂ ಒಳ್ಳೆಯದಾಗಲಿ
ಕುಮಾರ ವ್ಯಾಸ

ಆನಂದ್ ಅಂತಾರೆ...

ಪ್ರೀತಿಯ ಸುಬ್ಬಣ್ಣನವರೇ,
ನೀವಂದಿದ್ದು ಪೂರ್ತಿ ಸರಿಯಲ್ಲ. ಲೋಪ, ಆಗಮ, ಆದೇಶ ಸಂಧಿಗಳು ಕನ್ನಡ ಪದಗಳಲ್ಲ ಅನ್ನೋದು ಸರಿ. ಆದರೆ ಕನ್ನಡದ ಪದಗಳು ಸೇರುವಾಗ ಆಗುವ ಸಂಧಿಗಳು ಅಲ್ಲ ಅನ್ನೋದು ಸರಿಯಲ್ಲ. ಬಹುಷಃ ನೀವು ಮೊದಲನೆ ಅರ್ಥದಲ್ಲಿ ಬರ್ದಿದ್ದೀರಾ ಅನ್ಸುತ್ತೆ. ಕುಮಾರವ್ಯಾಸ ಅವರ ತಪ್ಪನ್ನು ಎತ್ತಿ ತೋರಿಸೋ ಭರದಲ್ಲಿ ನೀವು ಬರೆದ ವಾಕ್ಯದ ಅರ್ಥವೇ ಅನರ್ಥವಾಗುವಂತಿದೆ. ಹಾಗೆ ನೋಡಿದರೆ ವ್ಯಾಕರಣ ಅನ್ನೋದೆ ಸಂಸ್ಕೃತ ಪದ. ಕನ್ನಡದಲ್ಲಿ ವ್ಯಾಕರಣಕ್ಕೆ ಸೊಲ್ಲರಿಮೆ ಅನ್ನೋಣ ಅಂತ ಶಂಕರ ಬಟ್ತರು ಬರೆದಿದ್ದಾರೆ.ಇನ್ನು ಕನ್ನಡ ಸಂಧಿಗಳ ಬಗ್ಗೆ ತಿಳಿದವರಿದ್ದರೆ ಬೆಳಕು ಚೆಲ್ಲಿರಿ.
ಕುಮಾರಸ್ವಾಮಿಗಳೇ, ಇದ್ಯಾಕೆ ನೀವು ಸುಬ್ಬಣ್ಣನವರ ಪತ್ರಕ್ಕೆ ಹಾಗೇ ’ಗುಡ್ ಬೈ’ ಅನ್ನೋ ಥರ ಬರ್ದಿದ್ದೀರೋ ತಿಳೀಲಿಲ್ಲ. ಏನೇ ಆದ್ರೂ ನೀವು ವಿಶ್ವೇಶ್ವರಯ್ಯ ಅನ್ನೋದೆ ಸರಿ, ವಿಶ್ವೇಶ್ವರಾಯ ತಪ್ಪು ಅನ್ನೋದನ್ನು ಒಪ್ಪಿಕೋಬೇಕಿತ್ತು ಅಥವಾ ವ್ಯಾಕರಣಬದ್ಧವಾಗಿ ತೋರಿಸಿಕೊಡಬೇಕಿತ್ತು. ಲೋಪಸಂಧಿ ಬಗ್ಗೆ ತಮ್ಮ ಅನಿಸಿಕೆ/ ಅರ್ಥೈಕೆ ಸರಿಯಲ್ಲ. ಸುಬ್ಬಣ್ಣನವರು ಅಂದಿರೋದೆ ಸರಿಯಿದೆ. ’ತಪ್ಪು ಮಾಡೊದು ಸಹಜಾ ಕಣೋ, ತಿದ್ದಿ ನಡೆಯೋನು ಮನುಜಾ ಕಣೋ...’ ಅನ್ನೋ ಹಾಡನ್ನು ನೆನಪಿಸಿಕೊಳ್ಳಿ.

ನನ್ನಿ

ತಿಮ್ಮಯ್ಯ

ಕುಮಾರವ್ಯಾಸ ಅಂತಾರೆ...

ಸರಿ, ನನಗೂ ಇದರ ಬಗ್ಗೆ ಪೂರ್ಣವಾಗಿ ಗೊತ್ತಿಲ್ಲ, ಅವರ ಸರಿಯಾದ ಹೆಸರು ಏನು ಅಂತ ಸಂಶೋಧನೆ ಮಾಡಿ ತಿಳಿದುಕೊಳ್ಳೋ ಪ್ರಯತ್ನ ಮಾಡಣ.

;-)

rajashekar kc ಅಂತಾರೆ...

Sir M Vishweshwaraiah ravarige namma namanagalau!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails