ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

ಇಂದಿನ ವಿ.ಕ. ಈ ಕೆಳಗಿನ ಭಯಾನಕ ಸುದ್ದಿ ಮಾಡಿದೆ (ದಪ್ಪಕ್ಷರ ನಮ್ಮದು). ಉಗ್ರರು ಬೆಂಗಳೂರನ್ನು ಮುಂದಿನ ಗುರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ, ಮತ್ತು ಉಗ್ರರ ’ಯೋಜನೆ’ಯ ಬಗ್ಗೆ ಇಷ್ಟೆಲ್ಲ ಮಾಹಿತಿ ಸಿಕ್ಕಿರುವಾಗ ಆಗಬಹುದಾದ ಅನಾಹುತವನ್ನು ತಡೆಗಟ್ಟಲು ಏನೇನು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಅಂತ ಒಂದ್ ಸೊಲ್ಪ ಪೋಲೀಸರಿಗೆ, ನಿಮ್ಮ ನಿಮ್ಮ ಎಮ್ಮೆಲ್ಲೆ, ಎಂಪಿ, ಕಾರ್ಪೊರೇಟರುಗಳಿಗೆ ಫೋನು ಮಾಡಿ ಕೇಳ್ತೀರಾ? ಹಾಗೇ ಈ ಸುದ್ದಿಯನ್ನ ನಿಮಗೆ ಗೊತ್ತಿರುವವರಿಗೆಲ್ಲಾ ಕಳಿಸಿ ಜನರು ಕೂಡಲೆ ಎಚ್ಚೆತ್ತುಕೊಳ್ಳುವಂತೆ ಮಾಡಿ.

ಬೆಂಗಳೂರು ಮುಂದಿನ ಗುರಿ, ಹುಷಾರಾಗಿರಿ

ಬೆಂಗಳೂರು: ಮುಂಬೈಯ ಮಾರಣ ಹೋಮ ಘಟನೆ ಹೊಣೆ ಹೊತ್ತಿರುವ ಡೆಕ್ಕನ್ ಮುಜಾಹಿದೀನ್ ಸಂಘಟನೆಯು ಬೆಂಗಳೂರನ್ನು ತನ್ನ ಮುಂದಿನ ಟಾರ್ಗೆಟ್ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.

ಮುಂಬಯಿಯಲ್ಲಿ ದಾಳಿ ನಡೆದ 37 ದಿನದೊಳಗೆ ಬೆಂಗಳೂರು ನಗರದ ಪಂಚತಾರಾ ಹೋಟೆಲ್‍ಗಳು ಹಾಗೂ ಐಟಿ ಕಂಪನಿಗಳ ಮೇಲೆ ದಾಳಿ ನಡೆಸಿ, ಅದೇ ಮಾದರಿಯಲ್ಲಿ ಹತ್ಯಾಕಾಂಡ ನಡೆಸಲು ಉಗ್ರರು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ರಾಜ್ಯ ಪೋಲೀಸರಿಗೆ ಲಭ್ಯವಾಗಿದೆ.

ಮೂವರು ಉಗ್ರರ ಬಂಧನ

ಇದರ ಬೆನ್ನಲ್ಲೇ ಡೆಕ್ಕನ್ ಮುಜಾಹಿದೀನ್ ಸಂಘಟನೆಗೆ ಸೇರಿದವರೆನ್ನಲಾದ ಹಾಜಿ, ಖಾದರ್ ಹಾಗೂ ಮತ್ತೊಬ್ಬನನ್ನು ರಾಜ್ಯ ಪೋಲೀಸರು ವಿರಾಜಪೇಟೆ ಸಮೀಪದ ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ.

ಕಾಸರಗೋಡಿನ ಬೇಕಲ್ ಕೋಟೆ ಬಳಿ ಉಗ್ರರು ಬಳಸಿರುವ ಮೋಟಾರ್ ದೋಣಿಯನ್ನು ಕರಾವಳಿ ಪಡೆ ವಶಕ್ಕೆ ತೆಗೆದುಕೊಂಡಿದೆ. ಬಂಧಿತರು ಈ ದೋಣಿ ಮೂಲಕ ರಾಜ್ಯ ಪ್ರವೇಶಿಸಿರಬಹುದು. ಇವರಿಗೂ ಮುಂಬಯಿ ದಾಳಿಗೂ ಸಂಬಂಧವಿರುವ ಸಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಡೆಕ್ಕನ್ ಮುಜಾಹಿದೀನ್ ಕರ್ನಾಟಕದಲ್ಲೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಕೊಂಡಿರುವ ಅನುಮಾನವಿದೆ. ಈ ಸಂಬಂಧ ರಾಜ್ಯ ಪೋಲೀಸರು ಎರಡು ದಿನಗಳಿಂದ ಶೋಧ ನಡೆಸುತ್ತಿದ್ದು, ಬೆಳಗಾವಿ, ಹುಬ್ಬಳ್ಳಿ, ಉಡುಪಿಯಲ್ಲಿ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಉಗ್ರ ಸಂಘಟನೆಗೂ ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿಯೊಂದರ ಉದ್ಯೋಗಿಗಳಿಗೂ ಸಂಪರ್ಕವಿದ್ದು, ಈ ಎಂಜಿನಿಯರ್‍ಗಳ ನೆರವಿನಿಂದಲೇ ಬೆಂಗಳೂರು ನಗರದಲ್ಲಿ ದಾಳಿ ನಡೆಸಲು ಉಗ್ರರು ಯೋಜನೆ ಹಾಕಿದ್ದಾರೆ.

ಬ್ರಿಜ್ ಹೋಟೆಲ್ ಮುಖ್ಯ ಗುರಿ

ಪತ್ರಿಕೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿಂಡ್ಸರ್ ಮ್ಯಾನರ್ ಹೋಟೆಲ್ ಅನ್ನು ಉಗ್ರರು ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಇದನ್ನು ತಮ್ಮ ’ಕೋಡ್ ವರ್ಡ್’ನಲ್ಲಿ ’ಬ್ರಿಜ್ ಹೋಟೆಲ್’ ಎಂದು ಗುರುತಿಸಿಕೊಂಡಿದ್ದಾರೆ. ವಿಂಡ್ಸರ್ ಮ್ಯಾನರ್ ಹೋಟೆಲ್ ಪ್ರವೇಶಿಸಲು ಸೇತುವೆ ಮೇಲೆ ಹಾದು ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಉಗ್ರರು ಬ್ರಿಜ್ ಹೋಟೆಲ್ ಎಂದು ಗುರುತಿಸಿರುವ ಸಾಧ್ಯತೆ ಇದೆ.

ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ

ಬೆಂಗಳೂರೂ ಸೇರಿದಂತೆ ರಾಜ್ಯದಲ್ಲಿಯೂ ಡೆಕ್ಕನ್ ಮುಜಾಹಿದೀನ್ ಸಂಘಟನೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿದೆ.

ಕೇಂದ್ರದ ಸೂಚನೆ ಮೇರೆಗೆ ಸೂಕ್ಷ್ಮ ಪ್ರದೇಶಗಳಿಗೆ, ಪ್ರಮುಖ ಸ್ಥಳಗಳಿಗೆ ಹಾಗೂ ಪಂಚತಾರಾ ಹೋಟೆಲ್‍ಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ಹೇಳಿದ್ದಾರೆ.


KARNATIQUEನಲ್ಲಿ ಓದಿ: Windsor Manor, Bengaluru: the Next Target of Terrorists?

1 ಅನಿಸಿಕೆ:

Anonymous ಅಂತಾರೆ...

Excuse me. ಬೆಂಗಳೂರು ಉಗ್ರರ ಟಾರ್ಗೆಟ್ ಆಗಬಹುದಾದ ಸಾಧ್ಯತೆ ಖಂಡಿತಾ ಅಲ್ಲಗಳೆಯುವ ಹಾಗಿಲ್ಲ. ಆದರೆ,

ಮೂವರು ಉಗ್ರರ ಬಂಧನ

ಇದರ ಬೆನ್ನಲ್ಲೇ ಡೆಕ್ಕನ್ ಮುಜಾಹಿದೀನ್ ಸಂಘಟನೆಗೆ ಸೇರಿದವರೆನ್ನಲಾದ ಹಾಜಿ, ಖಾದರ್ ಹಾಗೂ ಮತ್ತೊಬ್ಬನನ್ನು ರಾಜ್ಯ ಪೋಲೀಸರು ವಿರಾಜಪೇಟೆ ಸಮೀಪದ ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ.

ಅಂತ ಕೊಟ್ಟಿರುವ ವಿಜಯಕರ್ನಾಟಕದ ಸುದ್ದಿಯಲ್ಲಿ ಅರ್ಧ ಸುಳ್ಳಿದೆ. ಅವರು ಬಂಧಿತರಾಗಿಲ್ಲ, ವಶಕ್ಕೆ ತೆಗೆದುಕೊಳ್ಳಲಾಗಿದೆ. ಮತ್ತು, ಅವರು ಉಗ್ರರಲ್ಲ, ಶಂಕಿತರು ಮಾತ್ರ. ಉಗ್ರರೆಂದು ಸಾಬೀತಾದ ಮೇಲೆ ಮಾತ್ರ ಉಗ್ರರೆಂದು ಬರೆಯುವುದು ಸರಿಯಾದ ರೀತಿ.
ಮತ್ತು ಕಾಸರಗೋಡಿನಲ್ಲಿ ಕೆಲದಿನಗಳ ಹಿಂದೆ ಇದ್ದಂತಹ
ಅನುಮಾನಾಸ್ಪದ ಬೋಟ್ ಉಗ್ರರದು ಅನ್ನುವುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಹಾಗೂ ಆ ಬೋಟ್ ಕಾಸರಗೋಡಿನ ತೀರ ಬಿಟ್ಟು ಉತ್ತರದಿಕ್ಕಿನ ಕಡೆ ಪ್ರಯಾಣಿಸಿ ಎಷ್ಟೋ ಸಮಯವಾಗಿದೆ. ಈಗ ವಶಕ್ಕೆ ಎಲ್ಲಿಂದ ತಗೊಳ್ಳುತ್ತಾರೋ?
ಈಗಂತೂ ಮಾಧ್ಯಮದಲ್ಲಿ ವದಂತಿಗಳದೇ ಕಾರುಬಾರು, ಪತ್ರಿಕೆಗಳು ಸುದ್ದಿ ಪ್ರಕಟಿಸುವ ಮುನ್ನ ಹುಷಾರಾಗಿಬೇಕು, ಖಚಿತಪಡಿಸಿಕೊಂಡು ಪ್ರಕಟಿಸಬೇಕು.
- MEDIAMAD

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails