ಬೆಂಗಳೂರಲ್ಲಿ ವಳ್ಳುವರ್ ಪ್ರತಿಮೆ... ಸುತ್ತಮುತ್ತ!

ಇವತ್ತಿನ (26.07.2009ರ) ಪ್ರಜಾವಾಣಿಯ 7ನೇ ಪುಟದಲ್ಲಿ ಒಂದು ಅಂಕಣ ತಿರುವಳ್ಳುವರ್ ವಿರೋಧಿಸಿ ಸಣ್ಣವರಾಗೋದ್ ಬ್ಯಾಡಾ ಅಂತ ಮುದ್ರಣವಾಗಿದೆ. ಹೌದು, ಶ್ರೀ ಪದ್ಮರಾಜ ದಂಡಾವತಿಯವರು ಹೇಳಿದ ಈ ಮಾತು ಕಣ್ಣಿಗೆ ತಂಪಾಗಿಯೂ, ಕಿವಿಗೆ ಇಂಪಾಗಿಯೂ ಇದೆ. ಆದ್ರೆ ಈ ವಳ್ಳುವರ್ ಪ್ರತಿಮೇನಾ ವಿರೋಧಿಸೋದು ಸಣ್ಣತನಾ ಅನ್ನೋ ಭರದಲ್ಲಿ ಪದ್ಮರಾಜ್ ಅವರು ಇಡೀ ಕನ್ನಡ ಕುಲಕೋಟಿಗೆ ಹಲವಾರು ಹಣೆಪಟ್ಟಿಗಳನ್ನು ಅಂಟಿಸಿದ್ದಾರೆ. ಮತ್ತು ಮತ್ತದೇ ಕಾಗಕ್ಕಂಗೆ ನರಿಯಣ್ಣ ಸಕ್ಕತ್ತಾಗಿ ಹಾಡ್ತಿ ಹಾಡು ಅಂದು ರೊಟ್ಟಿ ಎಗುರಿಸಿದಂಥಾ ಡೈಲಾಗನ್ನೂ ಹೊಡ್ದಿದಾರೆ.
ಕನ್ನಡಿಗರ ಹೆಸರು ಕೆಡುತ್ತೆ! ಅನ್ನೋ ಪುಂಗಿ

ಇದು ಮಾಮೂಲಿ ಕಣ್ರಿ. ಕರ್ನಾಟಕದಲ್ಲಿ ಕನ್ನಡಿಗರು ಭಾಳಾ ಸಹಿಷ್ಣುಗಳು. ನಗುಮೊಗದವರು. ಭಾಳಾ ಒಳ್ಳೇವ್ರು, ಎಲ್ಲಾ ಭಾಷೆಗಳೂ ಇಲ್ಲಿ ನಡ್ಯುತ್ತೆ, ಇವ್ರು ನೀರು ಕೇಳಿದ್ರೆ ಮಜ್ಜಿಗೆ ಕೊಡ್ತಾರೆ ಅಂತಾ ಹೊಗಳೀ ಹೊಗಳೀ ಹೊನ್ನಶೂಲಕ್ಕೇರಿಸೋದನ್ನು ಹಿಂದಿನಿಂದ್ಲೂ ನೋಡ್ತಾನೇ ಬಂದಿದೀವಿ. ಈ ಮಾತು ನಮ್ಮ ಹಕ್ಕೊತ್ತಾಯದ ಕೂಗನ್ನು ಅಡಗಿಸೋ ತಂತ್ರ ಮಾತ್ರಾ ಅಂತ ಜನ ಈಗಾಗ್ಲೆ ಅರ್ಥ ಮಾಡ್ಕೊಂಡಿದಾರೆ. ಇನ್ನೂ ಈ ತಂತ್ರ ನಡ್ಯುತ್ತೆ ಅಂದ್ಕೊಳ್ಳೋದು ಸರಿಯಲ್ಲ. ಇರಲಿ, ನಿಜಕ್ಕೂ ಈಗ ವಳ್ಳುವರ್ ಪ್ರತಿಮೆ ಬೆಂಗಳೂರಲ್ಲಿ ತಲೆಯೆತ್ತಬೇಕಾ? ಬೇಡವಾ? ಅನ್ನೋದನ್ನು ವಿಚಾರ ಮಾಡೋಣ.

ತಿರುವಳ್ಳುವರ್ ಬಗ್ಗೆ ಗೌರವ ಇಲ್ದಿದ್ರೆ ಮಾನವತೆಗೇ ಗೌರವ ಇಲ್ದಂಗೆ!

ಹೌದ್ರೀ, ತಮಿಳು ನಾಡಿನ ದಾರ್ಶನಿಕ ವಳ್ಳುವರ್ (ಇದು ಒಬ್ಬರಲ್ಲಾ, ಅನೇಕರು ಅಂತಾ ನಮ್ಮ ಬಿ.ಜಿ.ಎಲ್ ಸ್ವಾಮಿಗಳು ತಮ್ಮ ತಮಿಳು ತಲೆಗಳ ನಡುವೆ ಹೊತ್ತಿಗೆಯಲ್ಲಿ ಬರ್ದಿದಾರೆ) ಎರಡು ಸಾವಿರ ವರ್ಷಗಳ ಹಿಂದೆಯೇ ಬರೆದಿರೋ ಕುರುಳ್ ಹೆಸರಿನ ಪದ್ಯಗಳು, ನಮ್ಮ ಸರ್ವಜ್ಞನ ವಚನದಂತೆಯೇ ಸಮಾಜದ ಒಳಿತಿನ ಪಾಠ ಕಲಿಸೋ ಮಹಾನ್ ನುಡಿಮುತ್ತುಗಳು. ಇಂಥಾ ದಾರ್ಶನಿಕರು ಜಗತ್ತಿನ ನಾನಾ ಭಾಗಗಳಲ್ಲಿ ನಾನಾ ಕಾಲಘಟ್ಟಗಳಲ್ಲಿ ಆಗಿಹೋಗಿದ್ದಾರೆ ಮತ್ತು ಇವರುಗಳು ಎಲ್ಲಾ ಕಟ್ಟುಪಾಡುಗಳನ್ನು ಮೀರಿದ್ದಾರೆ. ವಳ್ಳುವರ್, ಕಬೀರ್, ತ್ಯಾಗರಾಜ, ತುಳಸಿದಾಸ, ಶರೀಫಜ್ಜ.... ಅಯ್ಯೋ ಒಬ್ರಾ ಇಬ್ರಾ ಆ ಪಟ್ಟಿ ದೊಡ್ಡದಿದೆ ಬಿಡಿ. ಇವರನ್ನು ಅಪಮಾನಿಸೋದಿರಲಿ, ಇಂಥವರಿಗೆ ಗೌರವ ಕೊಡ್ದೇ ಇರೋದೂ ಕೂಡಾ ಸಣ್ಣತನವೇ. ಹಾಗಾದರೆ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆಗೆ ವಿರೋಧಿಸೋದು ಸಣ್ಣತನಾನೇ ಅಲ್ವಾ?

ವಿಷಯ ಪ್ರತಿಮೆಯದ್ದಲ್ಲ! ಸಮಾನ ಗೌರವದ್ದು!!

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ, ವಳ್ಳುವರ್ ಅವರಿಗೆ ತೋರಿಸೋ ಗೌರವ ಅನ್ನೋದನ್ನು ಪಕ್ಕಕ್ಕಿಟ್ಟು ಇನ್ನೊಂದೆರಡು ವಿಷಯ ಇತ್ಯರ್ಥ ಮಾಡ್ಕೋಬೇಕಿದೆ. ಯಾಕಂದ್ರೆ ಈ ಪ್ರತಿಮೆಯ ಸ್ಥಾಪನೆ ಮಾಡ್ತಿರೋರಿಗೂ, ಬೇಡ ಅಂತಿರೋರಿಗೂ ಇದು ಬರೀ ಒಬ್ಬ ದಾರ್ಶನಿಕನ ಗೊಂಬೆ ಆಗಿಲ್ಲ. ಒಂದು ಸಂಸ್ಕೃತಿಯ, ತಿಕ್ಕಾಟದ ಇತಿಹಾಸದ, ನಾಡಿನ ಸ್ವಾಭಿಮಾನದ ಮತ್ತು ಸಾರ್ವಭೌಮತ್ವ ಸ್ಥಾಪನೆಯ ಪ್ರತೀಕಗಳಾಗಿವೆ ಅನ್ನೋದಾಗಿದೆ.
- ಶತಶತಮಾನಗಳಿಂದ ತಮಿಳು ಮತ್ತು ಕನ್ನಡಿಗರ ನಡುವೆ ಕಾವೇರಿ ಹಂಚಿಕೆ ವ್ಯಾಜ್ಯ ಇನ್ನೂ ಬಗೆಹರಿದಿಲ್ಲ. ಅದರ ತೀರ್ಪು ನ್ಯಾಯಯುತವಾಗಿದೆ ಅಂತಾ ಇನ್ನೂ ಕನ್ನಡಿಗರು, ಕರ್ನಾಟಕ ಸರ್ಕಾರ ಒಪ್ಪಿಲ್ಲ. ಈ ವ್ಯಾಜ್ಯ ಪರಿಹಾರದ ವಿಷಯದಲ್ಲಿ ಟ್ರಿಬ್ಯೂನಲ್ ಜನ ಬಂದಾಗ ತಮಿಳುನಾಡು, ಇವರಿಗೆ ಭರ್ಜರಿ ಕಾಣಿಕೆಗಳ್ನ ಕೊಟ್ಟು ವಶೀಲಿ ಮಾಡೋ ಯತ್ನ ಮಾಡುದ್ರು ಅಂತಾ ಕರ್ನಾಟಕವೇ ಆರೋಪ ಮಾಡಿತ್ತು.
- ಪ್ರತಿಮೆ ಸ್ಥಾಪಿಸಿ ಸೌಹಾದ್ರತೆ ಹೆಚ್ಚಿಸೋ ಮಾತಾಡೋರು ಹೊಗೇನಕಲ್ ನಡುಗಡ್ಡೆಯಲ್ಲಿ ಜಂಟಿ ಸರ್ವೇಗೆ ಒಪ್ಸಿ/ ಒಪ್ಪಿ ಸೌಹಾರ್ದತೆ ಹೆಚ್ಚಿಸೋ ಮಾತಾಡಬೇಕಿತ್ತಲ್ವಾ ಗುರು?
- ಕನ್ನಡಕ್ಕೆ ಶಾಸ್ತ್ರೀಯ ಭಾಷೆಗೆ ಅಡ್ಡಗಾಲು ಹಾಕ್ಕೊಂಡು ಸೌಹಾರ್ದತೆ ತೋರುಸ್ತಿರೋ ತಮಿಳುನಾಡಿನ ದೊಡ್ಡತನದ ಮುಂದೆ ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಬೇಡ ಅಂದ್ರೆ ಕನ್ನಡಿಗರು ಚಿಕ್ಕವರಾಗಲ್ವಾ?
- ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಅನ್ನೋ ಕೂಗನ್ನು ಎಬ್ಸಿದ್ದು, ಶ್ರೀರಾಮಪುರದಲ್ಲಿ ಕೇಂದ್ರಸರ್ಕಾರದ ಪೊಲೀಸ್ ಠಾಣೆ ಇಡೀ ಅಂದಿದ್ದು, ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಡಿ.ಎಂ.ಕೆಯ ಕಪ್ಪು ಕೆಂಪು ಬಾವುಟ ಹಾರಿಸೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
- ಬೆಂಗಳೂರನ್ನು ಕಟ್ಟಿದೋರು ನಾವು ನಮಗೆ ಇಲ್ಲಿನ ಅರ್ಧದಷ್ಟಾದರು ವಿಧಾನಸಭಾ ಸೀಟುಗಳ ಮೇಲೆ ಹಕ್ಕಿದೆ ಅನ್ನೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
ಇವೆಲ್ಲಾ ಒಂದು ತೂಕವಾದರೆ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ, ಕನ್ನಡದ ಕಣ್ಮಣಿ ಡಾ.ರಾಜ್ ಅಪಹರಣವಾದಾಗ (ಮಾಡಿಸಿದಾಗ ಅನ್ನೋ ಗುಮಾನಿ ಇದೆ) ವೀರಪ್ಪನ್ (ಕಡೆಯಿಂದ) ಮುಂದಿರಿಸಿದ್ದ ಬೇಡಿಕೆಗಳ ಪಟ್ಟಿ ನೋಡಿದರೆ ಸಾಕು ಈ ಅಪಹರಣ ಒಬ್ಬ ಜುಜುಬಿ ಕಾಡುಗಳ್ಳನದೋ ಅಥವಾ ಇದರ ಹಿಂದಿನ ಷಡ್ಯಂತ್ರ ಬೇರೆ ಇದೆಯೋ ಅನ್ನೋದು ತಿಳ್ಯಲ್ವಾ ಗುರು?
- ಕರ್ನಾಟಕದ ಪಾಲಿಗೆ ಬರಬೇಕಾದ ಆಟೋಮೊಬೈಲ್ ಸಂಶೋಧನಾ ಕೇಂದ್ರ, ಅನೇಕ ಉದ್ದಿಮೆಗಳು, ಹೊಸ ಉದ್ದಿಮೆ ಕಾರಿಡಾರು, ಅನೇಕ ರೈಲು ಯೋಜನೆಗಳು... ಒಂದಾ ಎರಡಾ ತಮಿಳುನಾಡು ದಕ್ಕಿಸಿಕೊಂಡಿದ್ದು? ಪ್ರತಿಯೊಂದು ವಿಷಯದಲ್ಲೂ ಕನ್ನಡನಾಡಿನ ದೊಡ್ಡಣ್ಣನಂತೆ ತಮಿಳುನಾಡು ವರ್ತಿಸೋ ರೀತಿ ಕಾಣ್ತಿದ್ದಾಗ ಈ ಪ್ರತಿಮೆ ಸ್ಥಾಪನೆ ಬರೀ ಸೌಹಾರ್ದತೆ ಹೆಚ್ಚಿಸೋ ಕ್ರಮವಾದೀತೇ ಅನ್ನೋ ಅನುಮಾನ ಹುಟ್ಟಲ್ವಾ ಗುರು? ಇರಲಿ, ತಿರುವಳ್ಳುವರ್ ಪ್ರತಿಮೆ ಖಂಡಿತಾ ನಮ್ಮೂರಲ್ಲಿ ಬರಲಿ. ಆದರೆ ಅದೇ ಸಮಯದಲ್ಲಿ ಅದೇ ದಿವಸ, ಅದೇ ಹೊತ್ತಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬೆಂಗಳೂರಿನ ವಳ್ಳುವರ್ ಪ್ರತಿಮೆ ಇಟ್ಟಿರೋ ಅಂಥದ್ದೇ ಪ್ರಮುಖವಾದ ಸ್ಥಳದಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣ ಮಾಡೋದು ಈ ವಿಷಯದಲ್ಲಿ ಸಮ ಗೌರವದ ಕ್ರಮವಾಗುತ್ತೆ ನಿಜಾ. ಆದ್ರೆ ಇಷ್ಟು ಸಾಕಾ? ನಮ್ಮ ಸರ್ಕಾರ ಇದೇ ಸ್ಪೂರ್ತಿಯಿಂದ ಉಳಿದ ವಿಷಯಗಳ ಬಗ್ಗೇನೂ ತಮಿಳುನಾಡಿನ ಜೊತೆ ಮಾತುಕತೆಯಾಡೀತಾ? ಈಗ ಈ ಪ್ರತಿಮೆ ನೆಪದಲ್ಲಿ ಅವೆಲ್ಲಾ ವಿಷಯಗಳ ಬಗ್ಗೆ ಮಾತುಕತೆ ನಡೆಸಬಹುದಿತ್ತಲ್ವಾ? ಅದುಬಿಟ್ಟು ಕನ್ನಡಿಗರು ಜಗಳಗಂಟರು, ಅಸಹಿಷ್ಣುಗಳು, ಕೆಟ್ಟೋರು ಅನ್ನುಸ್ಕೋಬಾರ್ದು ಅದಕ್ಕೇ ಇದುಕ್ ಒಪ್ಕೊಳ್ಳೋಣ ಅಂದ್ರೆ ಹೆಂಗೇ ಗುರು?

ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳಸುತ್ತೆ!



ಮೊನ್ನೆ ಮೊನ್ನೆ ಸುವರ್ಣ ಚಾನೆಲ್ಲಿನಲ್ಲಿ "ಶ್ವೇತನಾಗ" ಅನ್ನೋ ಸಿನಿಮಾ ಬಂತು, ಅದು ಮೊದಲು ತೆಲುಗಲ್ಲಿ ತೆಗೆದು ಆಮೇಲೆ ಕನ್ನಡಕ್ಕೆ ಡಬ್ ಮಾಡಲಾದ ಚಿತ್ರ ಅಂತಾ ಅದನ್ನು ಪ್ರಸಾರ ಮಾಡ್ದೋರೂ, ನಿರ್ಮಾಪಕರೂ ಎಲ್ಲಾರ ಮೇಲೂ ಕನ್ನಡ ಚಿತ್ರರಂಗದ ದಿಗ್ಗಜರುಗಳು, ಮೈಮೇಲೆ ಮುರ್ಕೊಂಡು ಬಿದ್ದ ಸುದ್ದಿ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ. ಇವರುಗಳು ಅರ್ಥಮಾಡ್ಕೊಬೇಕಿರೋದ್ ಏನಪ್ಪಾ ಅಂದ್ರೆ ಇವರ ಈ ನಿಲುವು ಕಾನೂನು ಬಾಹಿರವಾಗಿರೋದ್ ಮಾತ್ರಾ ಅಲ್ದೆ ಇಡೀ ನಾಡಿಗೆ ಮಾರಕವಾಗಿದೆ ಅನ್ನೋದಾಗಿದೆ.

ಡಬ್ಬಿಂಗ್ ಇತಿಹಾಸ

ಹಿಂದೆ ಕನ್ನಡ ಚಿತ್ರರಂಗ ತನ್ನೆಲ್ಲಾ ಕೆಲ್ಸಗಳಿಗಾಗಿ ಚನ್ನೈ ಮೇಲೆ ಅವಲಂಬಿತವಾಗಿದ್ದಾಗ, ಕನ್ನಡ ಸಿನಿಮಾ ತೆಗೆಯೋ ನಿರ್ಮಾಪಕರು ಶ್ರಮ ಪಡೋ ಬದಲು ಡಬ್ಬಿಂಗ್ ತಂತ್ರಜ್ಞಾನಾನ ಬಳಸಿ ತೆಲುಗು, ತಮಿಳು ಸಿನಿಮಾಗಳನ್ನು ಕನ್ನಡದಲ್ಲಿ ತರಕ್ ಮುಂದಾದ್ರು. ಇದು ಹೀಗೇ ನಡುದ್ರೆ ಮುಂದೆ ಕನ್ನಡ ಚಿತ್ರಗಳು ಅಂದ್ರೆ ಹಿಂದಿ, ತಮಿಳು, ತೆಲುಗು ಚಿತ್ರಗಳ ಡಬ್ಬಾ (ಡಬ್ಬ್ ಆಗಿರೋದು) ಅಂತಾ ಆಗಿಬಿಡುತ್ತೆ ಅನ್ನೋ ಬೆದರಿಕೆ ಹುಟ್ಕೊಳ್ತು. ಆಗ ಡಬ್ಬಿಂಗ್ ವಿರೋಧಿ ಚಳವಳಿ ನಡೀತು. ಅವತ್ತು ಶುರುವಾದ ಈ ನಿಷೇಧ ಇಲ್ಲೀತನಕ ಬಂದಿದೆ.

ಇವತ್ತೇನಾಗಿದೆ?

ಇವತ್ತು ಕನ್ನಡ ಚಿತ್ರರಂಗ ಸ್ಟುಡಿಯೋ, ತಂತ್ರಜ್ಞರು, ಕಲಾವಿದರು, ನಿರ್ದೇಶಕರು, ಧ್ವನಿಮುದ್ರಣ ಕೇಂದ್ರ, ತಂತ್ರಜ್ಞಾನ, ಹಂಚಿಕೆ, ಚಿತ್ರಮಂದಿರ... ಹೀಗೆ ಎಲ್ಲಾ ವಿಭಾಗದಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದೆ. ಇವತ್ತು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ್ರೆ ಕನ್ನಡ ಚಿತ್ರರಂಗ ಮುಳುಗ್ ಹೋಗುತ್ತೆ ಅನ್ನೋ ಪರಿಸ್ಥಿತಿ ನಿಜವಾಗ್ಲೂ ಇಲ್ಲ. ಸ್ಪರ್ಧೆ ಎದ್ರುಸಕ್ ಆಗ್ದಿರೋ, ತಾವು ರಿಮೇಕ್ ಮಾಡೊ ಅವಕಾಶ ಕಳ್ಕೊಳೋ ಭಯದಿಂದ ಕೆಲ ಪಟ್ಟಭದ್ರರು ಇಂಥಾ ವಿರೋಧಕ್ ಮುಂದಾಗಿದಾರೆ ಅನ್ಸುತ್ತೆ ಗುರು! ಅಲ್ಲಾ ಇವರು ಕನ್ನಡದೋರುನ್ನ ಏನಂದ್ಕೊಂಡಿದ್ದಾರೆ? ಡಬ್ ಆಗಿರೋ ಸಿನಿಮಾ ಬಂದ್ರೆ ಮೂಲ ಕನ್ನಡ ಚಿತ್ರಗಳನ್ನು ನೋಡೋರಿರೋದಿಲ್ಲಾ ಅಂತಾನಾ? ಪಕ್ಕದ ತಮಿಳುನಾಡು, ತೆಲುಗು ಚಿತ್ರರಂಗದಲ್ಲಿ ಡಬ್ಬಿಂಗ್ ಇಲ್ವಾ? ಅಲ್ಲಿ ಟಿವಿ ಧಾರಾವಾಹಿಗಳಿರಲಿ, ನ್ಯೂಸನ್ನೂ ಬಿಡದೆ ಡಬ್ ಮಾಡ್ತಾರೆ. ಭಾರತ ಬೇಡಾ ಅಂದ್ರೆ ಜಪಾನಿಗೆ ಹೋಗಿ ನೋಡಿ, ಅಲ್ಲಿ ಪಾಪ್ ಹಾಡುಗಳು, ಬಾಂಡ್ ಸಿನಿಮಾಗಳನ್ನೂ ಬಿಡದೇ ಡಬ್ ಮಾಡ್ತಾರೆ. ಆ ಚಿತ್ರರಂಗಗಳೆಲ್ಲಾ ಏನ್ ಸತ್ತು ಹೋಗಿವೆಯಾ?

ಈಗ ಡಬ್ಬಿಂಗ್ ಬೇಡಾ ಅನ್ನೋ ಈ ಕೂಗಿಗೆ ಹೊಸದಾಗಿ ಇನ್ಮೇಲೆ ಟಿವಿ, ರೇಡಿಯೋ ಜಾಹೀರಾತುಗಳನ್ನು ಡಬ್ ಮಾಡಬಾರದು ಅನ್ನೋ ಅತಿರೇಕವೂ ಸೇರ್ಕೊಂಡಿದೆ. ಹಿಂದೇನೋ ಈ ಡಬ್ಬಿಂಗ್ ನಿಂತಾಗ ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ಬಂದವು. ಆದ್ರೆ ನಿಧಾನವಾಗಿ ಕನ್ನಡದೋರು ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಕ್ ಶುರು ಹಚ್ಕೊಂಡ್ರು. ಇದರ ಪರಿಣಾಮ ಇವತ್ತಿನ ದಿವಸ ಕನ್ನಡ ಚಿತ್ರಗಳಿಗೆ ಬೆಂಗಳೂರಿನ ಅರ್ಧಕ್ಕರ್ಧ ಚಿತ್ರ ಮಂದಿರಗಳು ಟಾಟಾ ಹೇಳಿವೆ. ಇದರ ಪರಿಣಾಮವಾಗಿ, ವಲಸಿಗನಿಗೆ ಮಾತ್ರಾ ತನ್ನ ಭಾಷೆ ಚಿತ್ರಾನಾ ತನ್ನ ಭಾಷೇಲೇ ನೋಡೋ ಸೌಭಾಗ್ಯ ಸಿಕ್ಕಿದೆ. ಕನ್ನಡದವ್ರು ಮಾತ್ರಾ ಚಿತ್ರರಂಗದ ಈ ಹಟದಿಂದ ಅರ್ಧಂಬರ್ಧ ಅರ್ಥ ಮಾಡ್ಕೊಂಡಾದ್ರೂ ತಮಿಳು, ತೆಲುಗು, ಹಿಂದಿ ಸಿನಿಮಾಗಳ್ನ ನೋಡ್ತಾ ನೋಡ್ತಾ, ತಾವು ಆ ಭಾಷೆ ಕಲ್ತು, ಆಯಾ ಭಾಷಿಕ ಪ್ರದೇಶದಿಂದ ಇಲ್ಲಿಗೆ ಬಂದಿರೋ ವಲಸಿಗನಿಗೆ ಕನ್ನಡದ ಅಗತ್ಯ ಇಲ್ಲದಂಗೆ ಮಾಡ್ತಿದಾರೆ.

ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳ್ಸುತ್ತೆ!

ಡಬ್ ಮಾಡಕ್ ಅವಕಾಶ ಸಿಕ್ತಿದ್ ಹಾಗೇ ಇಲ್ಲಿಗೆ ಸುನಾಮಿ ಹಾಗೆ ಅನೇಕ ಕೆಟ್ಟ ಕೊಳಕು, ಥಳಕು ಬಳುಕು, ಒಳ್ಳೇ ಸಿನಿಮಾಗಳು ನುಗ್ಗಬಹುದು. ಅದ್ಯಾವ್ದು ನಮ್ಮ ನೆಲದ ಸೊಗಡಿನ, ನಮ್ಮ ಆಚರಣೆ, ನಂಬಿಕೆಗಳನ್ನು ತೋರುಸ್ದಿದ್ರೆ ಹೆಚ್ಚು ಕಾಲ ಉಳಿಯಲಾರವು. ಹಾಗೆ ನಮ್ಮತನಾನ ಬೇರೆ ಸಂಸ್ಕೃತಿಯ ಚಿತ್ರಗಳು ತೋರ್ಸೋದು ಅಸಾಧ್ಯಾನೆ ಅನ್ನಿ. ಇನ್ನೊಂದು ಹತ್ತಿಪ್ಪತ್ತು ವರ್ಷ ಕರ್ನಾಟಕದಲ್ಲಿ ಬರೀ ಕನ್ನಡದ ಚಿತ್ರಗಳೇ ಓಡೋದಾದ್ರೆ, ಆಮೇಲೆ ಅದ್ಯಾವ ಭಾಷೆಯ ಸಿನಿಮಾನೇ ಆಗಿದ್ರೂ ನಮಗೆ ಕನ್ನಡದಲ್ಲಿ ಇಲ್ದಿದ್ರೆ ನೋಡಕ್ ಆಗಲ್ಲಾ ಅನ್ನೋ ಸ್ಥಿತಿ ಹುಟ್ಟೋದು ಖಂಡಿತಾ. ಹಾಗಾದಲ್ಲಿ ಕನ್ನಡದ ಕಲಾವಿದರಿಗೆ, ಚಿತ್ರರಂಗಕ್ಕೆ ಬಲ ಬಂದ ಹಾಗಾಗುತ್ತೆ. ಇವತ್ತು ಡಬ್ಬಿಂಗಿಗೆ ಒಪ್ಪೋದ್ರಿಂದ ಕನ್ನಡ ಚಿತ್ರರಂಗ ಬೆಳ್ಯುತ್ತೆ ಅಂತಾ ಇದನ್ನು ವಿರೋಧ್ಸೋರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.

ಮಾತಿಗ್ ಮೊದಲು ಡಾ. ರಾಜ್ ಹೆಸರು ತೊಗೊಂಡು ಡಬ್ ಮಾಡೋರನ್ನು ಕೊಲೆ ಮಾಡಿದೋರ್ನ ನಡುಸ್ಕೊಳ್ಳೋ ಹಂಗೆ ನಡುಸ್ಕೊಳ್ಳೋ ಬದ್ಲು ಒಂದು ಸರಿಯಾದ ಚರ್ಚೆ ನಡ್ಸಿ ಇಡೀ ಚಿತ್ರರಂಗ ಡಬ್ಬಿಂಗ್ ಒಪ್ಕೊಳ್ಳೋದು ನಾಡಿಗೂ ಕ್ಷೇಮ ಮತ್ತು ಹೀಗೆ ವಿರೋಧುಸ್ತಾ ಇರೋರ ಮುಖವೂ ಉಳ್ಯುತ್ತೆ. ಇಲ್ಲಾ ಅಂದ್ರೆ ಯಾರಾದ್ರೂ ಕೋರ್ಟಿನ ಮೆಟ್ಟಿಲು ಹತ್ತಿದರೆ ಮಂಗಳಾರತಿ ಗ್ಯಾರಂಟಿ! ಏನಂತೀ ಗುರು?

ಹಿಂದೀ ಶೂಲಕ್ಕೆ ಬಲಿಯಾಗದಿರಲಿ ಬಿ.ಎಂ.ಟಿ.ಸಿ!!


ಬೆಂಗಳೂರಿನ ಬಸ್ಸುಗಳಲ್ಲಿ ನೀವೇನಾದ್ರು ಪ್ರಯಾಣ ಮಾಡೋದಾದ್ರೆ ಇನ್ಮುಂದೆ ನೀವು ಕಣ್ಮುಚ್ಕೊಂಡು ನಿದ್ದೆ ಮಾಡ್ಬೋದು. ಗಳಿಗೆಗೊಂದ್ಸಲ ಈಗ ಬಸ್ಸೆಲ್ಲಿದೆ ಅಂತಾ ಬೆಚ್ಚಿಬಿದ್ದು ಎದ್ದು ನೋಡೋ ಗೋಳು ತಪ್ಪುತ್ತೆ. ಈಗ ಈ ಮಾಹಿತೀನಾ ಬಸ್ಸಲ್ಲೇ ತಿಳಿಸಿಕೊಡೋ ಯೋಜನೇನಾ ಜಾರಿಗೆ ತರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಂ.ಮ.ಸಾ.ಸಂ) ಮುಂದಾಗಿದೇ ಅನ್ನೋ ಸುದ್ದೀನಾ ಕನ್ನಡಪ್ರಭದೋರು 17.07.2009ರ ಸಂಚಿಕೆಯ 5ನೇ ಪುಟದಲ್ಲಿ ಹಾಕಿದ್ದಾರೆ! ಆದ್ರೆ ಈ ಸುದ್ದಿಯ ಸಿಹಿಗಡುಬು ಗಂಟಲಲ್ಲೇ ಕಚ್ಕೊಂಡು ಸಿಹೀನ ಸವಿಯಕ್ ಆಗ್ದಂಗೆ ಮಾಡಿರೋದು ಇದು ಮೂರು ಭಾಷೇಲಿರುತ್ತೆ ಅನ್ನೋ ಸುದ್ದಿ!!
ಗಂಟಲಲ್ಲಿ ಸಿಕ್ಕೊಂಡ ಕಡುಬು!

ಜನಕ್ಕೆಲ್ಲಾ ಸಹಾಯ ಆಗಬೇಕೂಂತಾ ಈ ಯೋಜನೆ ಮಾಡಿರೋದು ಒಳ್ಳೇದೆ. ಆದರೆ ಇದರಂತೆ ಇನ್ಮೇಲೆ ಬಸ್ಸು ಎಲ್ಲಿಗೆ ಬಂದಿದೆ? ಮುಂದಿನ ನಿಲ್ದಾಣ ಯಾವ್ದು? ಇತ್ಯಾದಿ ಮಾಹಿತಿಗಳನ್ನು ಮೂರು ಮೂರು ಭಾಷೆಗಳಲ್ಲಿ ಹೇಳುಸ್ತಾರಂತೆ! "ಕನ್ನಡದೋರಿಗೆ ಕನ್ನಡ, ಕನ್ನಡ ಬರದೇ ಇರೋರಿಗೆ ಇಂಗ್ಲಿಷ್ ಸಾಲದಾ? ಇನ್ನು ಮೂರನೇ ಭಾಷೆ ಯಾಕೆ? ಹಾಗೆ ಮೂರನೇ ಭಾಷೆ ಇದ್ದರೂ ಅದ್ಯಾವ್ದಾಗಿರುತ್ತೆ?" ಅನ್ನೋ ಪ್ರಶ್ನೆಗಳು ನಮ್ಮ ಜನರ ತಲೇಲಿ ಹುಟ್ಕೊಳ್ಳೋಕೆ ಮೊದಲೇ "ಆ ದೇವಭಾಷೆ ಇನ್ಯಾವುದೂ ಅಲ್ಲಾ, ಹಿಂದಿ" ಅಂದಿದೆ ಬಿ.ಎಂ.ಟಿ.ಸಿ.
"ಇದೇನು ಗುರು? ಬೆಂಗಳೂರಲ್ಲಿ ಕನ್ನಡದೋರನ್ನು ಬಿಟ್ಟರೆ ಬರೀ ಹಿಂದಿಯೋರೇ ಹೆಚ್ಚಿರೋದಾ? ಬೆಂಗಳೂರಲ್ಲಿರೋ ತಮಿಳ್ರು, ತೆಲುಗ್ರು, ಮಾರವಾಡಿಗಳು, ಮರಾಠಿಗರು... ಎಲ್ಲಾ ಏನು ಪಾಪ ಮಾಡಿದ್ರು? ಯಾಕೆ ಆ ಭಾಷೆಗಳಲ್ಲೂ ಪ್ರಕಟಣೆ ಇರಬಾರದು? ಯಾಕೆ ಹಿಂದೀಲಿ ಮಾತ್ರಾ ಇರಬೇಕು" ಅಂತೆಲ್ಲಾ ನಮ್ಮ ಜನರು ಕೇಳದೆ "ಭಾರತದ ಒಗ್ಗಟ್ಟಿಗಾಗಿ ಹಿಂದಿಯಲ್ಲಿ ಇರಬೇಕಾದ್ದೇ ಸರಿ" ಅಂತ ಒಪ್ಕೊಳ್ಳೋ ಹಾಗೇ ಹುಸಿ ರಾಷ್ಟ್ರೀಯತೆಯ ಹುಳಾನಾ ಕನ್ನಡದೋರ ತಲೇಲಿ ಸ್ವಾತಂತ್ರ ಬಂದಾಗಿಂದ ಸಕತ್ತಾಗಿ ಬಿಡಲಾಗುತ್ತಿದೆ.
ಹಿಂದಿಯನ್ನು ಬಲ್ಲ ಕನ್ನಡೇತರರು ಅಲ್ಪ-ಸ್ವಲ್ಪ ಕನ್ನಡ ಕಲಿತು, ಮುಖ್ಯ ವಾಹಿನಿಗೆ ಬರಲು ನೆರವಾಗಬಹುದಾದ ಈ ಬಸ್ಸುಗಳನ್ನು ಹಿಂದಿಗೇ ಮಣೆ ಹಾಕಲು ಉಪಯೋಗಿಸಲು ಹೊರಟಿರುವ ಈ ಸಂಸ್ಥೆಗೆ ಗ್ರಾಹಕರಾಗಿ ನಾವು ಬುದ್ಧಿ ಹೇಳಬೇಕು ಗುರು. ನೀವೇ ಯೋಚಿಸಿ ನೋಡಿ, ಇವತ್ತು ಬೋರ್ಡು, ಅನೌನ್ಸುಮೆಂಟು ಬರೋದಾದ್ರೆ, ಇನ್ಮುಂದೆ ಬೆಂಗಳೂರಿನ ಬಿ.ಎಂ.ಟಿ.ಸಿಯಲ್ಲಿ ಚಾಲಕ/ ನಿರ್ವಾಹಕರ ಕೆಲಸ ಬೇಕು ಅಂದ್ರೆ ಹಿಂದಿಯನ್ನು ಕಲಿತರಬೇಕಾದ್ದು ಕಡ್ಡಾಯ ಅನ್ನೋ ವ್ಯವಸ್ಥೆ ಹುಟ್ಕೊಳುತ್ತೆ. ವಲಸಿಗ ನಾಡಿನ ಮುಖ್ಯವಾಹಿನಿಯಲ್ಲಿ ಸೇರೋಕೆ ತೊಡಕಾಗಿರೋ ಈ ಯೋಜನೇನಾ ಸರ್ಕಾರ ತಕ್ಷಣ ಕೈಬಿಡದಿದ್ರೆ ನಾಳೆ ನಮ್ಮೂರ ನಗರಪಾಲಿಕೆ ಆಡಳಿತದಲ್ಲೂ ಹಿಂದಿಯನ್ನು ತ್ರಿಭಾಷಾ ಸೂತ್ರದ ನೆಪದಲ್ಲಿ ತೂರಿಸೋದ್ರಲ್ಲಿ ಅನುಮಾನಾ ಇರಲ್ಲ.
ನಾಳೆ ಏನಾದೀತು?

ಮುಂದೆ ತ್ರಿಭಾಷಾ ಸೂತ್ರವನ್ನು ಒಪ್ಪಿರೋದ್ರಿಂದ ನಾವು ಹಿಂದೀಲೂ ಹಾಕ್ತೀವಿ. ಇದ್ರಿಂದ ನಿಮಗೇನು ತೊಂದರೆ? ಕನ್ನಡದಲ್ಲೂ ಹೇಳ್ತಿದೀವಲ್ಲಾ? ಅನ್ನೋ ವಾದ ಕೇಳೋ ದಿನ ಬಂದೀತು! ಇನ್ಮೇಲೆ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಆಸ್ತಿ ತೆರಿಗೆ ಅರ್ಜಿ, ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಗಳು, ವಿಧಾನ ಸೌಧ, ಗ್ರಾಮ ಪಂಚಾಯ್ತಿ ಎಲ್ಲಾ ಕಡೆ ತ್ರಿಭಾಷಾ ಸೂತ್ರಾನ ಜಾರಿ ಮಾಡ್ಬೇಕು ಅನ್ನೋ ದಿನವೂ ಬಂದೀತು! ಘನ ಕರ್ನಾಟಕ ರಾಜ್ಯ ಸರ್ಕಾರವು, ನಾಡಿಗೆ ಮುಳುವಾಗಿರೋ ತ್ರಿಭಾಷಾ ಸೂತ್ರಕ್ಕೆ ಈಗಲೂ ಎಳ್ಳೂನೀರು ಬಿಡದಿದ್ರೆ... ಬೆಂಗಳೂರಿಗರು ಕನ್ನಡಕ್ಕೆ ಎಳ್ಳುನೀರು ಬಿಡಬೇಕಾಗುತ್ತೆ!! ಆದ್ರಿಂದ ನಾವೂ ನೀವು ಎಲ್ಲಾ ಸರ್ಕಾರಕ್ಕೆ ನೀವು ಇಡಕ್ ಹೊರಟಿರೋ ಈ ತಪ್ಪು ಹೆಜ್ಜೇನಾ ಹಿಂತೊಗೊಳ್ಳಿ ಅನ್ನಬೇಕಾಗಿದೆ ಗುರು! ತ್ರಿಭಾಷಾ ಸೂತ್ರದ ಸೋಗಿನ ಹಿಂದಿ ಶೂಲಕ್ಕೆ ಬಲಿಯಾಗದಿರಲಿ ಬಿಎಂಟಿಸಿ ಅನ್ನಬೇಕಾಗಿದೆ.
ಕೊನೆಹನಿ : ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ವಿಶೇಷವಾಗಿ ರೈಲ್ವೇಯಲ್ಲಿ ಮೊದಲು ತ್ರಿಭಾಷಾ ಸೂತ್ರಾ ಇದೆಯಾ? ಊಹೂಂ... ಸೂತ್ರಾ-ಪಾತ್ರಾ ಇವೆಲ್ಲಾ ರಾಜ್ಯಸರ್ಕಾರಕ್ಕೆ ಮಾತ್ರಾನಾ, ಕೇಂದ್ರಕ್ಕೆ ಅನ್ವಯವಾಗ್ತಿಲ್ಲ. ಇಷ್ಟಕ್ಕೂ ಸರಿಯಾದ ಒಕ್ಕೂಟದಲ್ಲಿ ಯಾಕೆ ತ್ರಿಭಾಷಾ ಸೂತ್ರಾ ಬೇಕಾಗಿದೆ? ಕನ್ನಡನಾಡಲ್ಲಿ ಕನ್ನಡಿಗರಿಗೆ ಕನ್ನಡವೂ, ಕನ್ನಡ ಬರದೇ ಇದ್ದೋರಿಗೆ ಇಂಗ್ಲೀಷು ಸಾಲದಾ? ಹಿಂದೆ ಸಂಸದರೊಬ್ಬರು ಹಿಂದಿ ಹೇರಿಕೆ ಬಗ್ಗೆ ಮಾತಾಡ್ತಾ "ದೊಡ್ದ ಬೆಕ್ಕಿಗೆ ದೊಡ್ಡ ಕಿಂಡಿ, ಸಣ್ಣ ಬೆಕ್ಕಿಗೆ ಸಣ್ಣಕಿಂಡಿ ಯಾಕೆ? ನ್ಯಾಷನಲ್ ಲೆವೆಲ್ಲಿಗೆ ಹಿಂದಿ, ಇಂಟರ್ ನ್ಯಾಷನಲ್ ಲೆವೆಲ್ಲಿಗೆ ಇಂಗ್ಲೀಷ್ ಯಾಕೆ? ಇಂಗ್ಲಿಷ್ ಅನ್ನೋ ದೊಡ್ಡ ಕಿಂಡಿ ಸಾಕು" ಅಂದಿದ್ರಂತೆ ಗುರು!

ಗಾನ ಕೋಗಿಲೆ ಇನ್ನಿಲ್ಲ !

ಕರ್ನಾಟಕದ ಹೆಮ್ಮೆಯ ಗಾನ ಕೋಗಿಲೆ ತಾಯಿ ಗಂಗೂ ಬಾಯಿ ಹಾನಗಲ್ ಇನ್ನಿಲ್ಲ ಅನ್ನುವ ಸುದ್ದಿ ಬಂದಿದ್ದು, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಅವರ ನಿಧನ ಕರ್ನಾಟಕದ ಸಂಗೀತ ಪ್ರಪಂಚಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.

ಕನ್ನಡಿಗರಿಗೆ, ಕರ್ನಾಟಕಕ್ಕೆ ಹೆಮ್ಮೆ ತಂದ ಈ ಮಹಾನ್ ಕಲಾವಿದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬನವಾಸಿ ಬಳಗ ಪ್ರಾರ್ಥಿಸುತ್ತದೆ.

ಭಾರತದ ಸಂಸತ್ತಿನಲ್ಲಿ ಯಾವ ಭಾಷೆ ಬಳಸಬೇಕು?


ಭಾರತದ ಲೋಕಸಭೆಯಲ್ಲಿ ಹಿಂದಿಯಲ್ಲಿ ಮಾತನ್ನಾಡಬೇಕು ಅಂತಾ ಹಿಂದಿ ರಾಜ್ಯಭಾಷೆಯಾಗಿರೋ ಉತ್ತರಪ್ರದೇಶದ ಸಂಸದ ಶ್ರೀ ಮುಲಾಯಂ ಸಿಂಗ್ ಯಾದವ್ ಒತ್ತಾಯಿಸದರಂತೆ ಅನ್ನೋ ಸುದ್ದಿ 16.07.2009ರ ಪ್ರಜಾವಾಣಿಯ ಏಳನೇ ಪುಟದಲ್ಲಿ ವರದಿಯಾಗಿದೆ.
ಎಂಥಾ ಸೋಜಿಗವಪ್ಪಾ ಇದು?
ಇಂಥಾ ಪ್ರಶ್ನೆಗೆ ಮುಜುಗರಕ್ಕೆ ಒಳಗಾದ ಸಚಿವರು ಕನ್ನಡಿಗರಾದ ಜೈರಾಮ್ ರಮೇಶ್ ಅವ್ರು. "ಇದು ಭಾರತದ ಸಂಸತ್ತು, ಲಂಡನ್ನಿನದ್ದಲ್ಲ" ಅಂದ್ರಂತೆ ಯಾದವ್ ಅವ್ರು. ಹಾಗಂದಿದ್ದೇ ತಡ ನಿಜವಾಗ್ಲೂ ಸಚಿವರು ಬುದ್ಧಿವಂತರಾಗಿದ್ದಿದ್ರೆ ಕನ್ನಡದಲ್ಲಿ ಉತ್ತರ ಕೊಡಬೇಕಿತ್ತು. ಆಗ ಮುಲಾಯಂ ಮತ್ತವರಂತಹ ಸಂಸದರು "ಈಗ ಭಾರತ ಒಕ್ಕೂಟಕ್ಕೆ ಖಳೆ ಬಂತು. ಯಾಕಪ್ಪಾ ಅಂದ್ರೆ ಕನ್ನಡ ಕೂಡಾ ಭಾರತದ್ದೇ ಭಾಷೆ, ಕನ್ನಡ ಕೂಡಾ ಹಿಂದಿಯಷ್ಟೇ ಮಾನ್ಯತೆ ಹೊಂದಿದೆ" ಅಂತಾ ಸುಮ್ಮನೆ ಕೂಡ್ತಿದ್ರು ಅನ್ಸುತ್ತೆ!
ಆದ್ರೆ ಸಂಸದರ ಒತ್ತಾಯ, ನೀವು ಭಾರತೀಯ ಸಂಸತ್ತಿನಲ್ಲಿ ಮಾತಾಡ್ತಾ ಇದೀರಾ, ಆದ್ದರಿಂದ ಹಿಂದೀಲಿ ಮಾತಾಡಿ ಅನ್ನೋದಾಗಿತ್ತಲ್ಲಾ? ಭಾರತದ ಸಂಸತ್ತಿನಲ್ಲಿ ಹಿಂದಿಯಲ್ಲಿ ಮಾತ್ರಾ ಮಾತಾಡಿ ಅನ್ನೋ ಒತ್ತಾಯ ಒಕ್ಕೂಟ ವ್ಯವಸ್ಥೆಗೆ ಶೋಭೆ ತಂದೀತಾ ಗುರು!
ಭಾರತ ಎಂಬ ಸಮಾನತೆಯ ಶಿಖರ(?)ವಾದ ದೇಶದಲ್ಲಿ ಎಲ್ಲಾ ಭಾಷೆಗಳೂ ಸಮನಾಗಿರುವಾಗ ಸಂಸತ್ತಿನಲ್ಲಿ ಯಾಕೆ ಹಿಂದಿಯನ್ನು ಮಾತ್ರಾ ಬಳಸಬೇಕು? ಪಂಜಾಬಿ ತಾಯ್ನುಡಿಯ ಪ್ರಧಾನಮಂತ್ರಿಗಳು ಆಗಸ್ಟ್ ಹದಿನೈದರ ಕೆಂಪುಕೋಟೆಯ ಭಾಷಣಾನ ಪಂಜಾಬಿಯಲ್ಲಿ ಮಾಡಿದ ದಿನ, ಭಾರತ ಸರಿಯಾದ ಒಕ್ಕೂಟ ಧರ್ಮ ಪಾಲಿಸಲು ಶುರು ಮಾಡಿದೆ ಅಂತನ್ನಬಹುದು, ಅಲ್ವಾ ಗುರು!!

ನಿಜಕ್ಕೂ ಎತ್ತಂಗಡಿ ಆಗ್ಬೇಕಾಗಿರೋದು ಯಾವ್ ಸಿನಿಮಾ?

2009ರ ಜುಲೈ ಹದಿನಾಲ್ಕರ ವಿಜಯ ಕರ್ನಾಟಕ ಪತ್ರಿಕೆಯ ಬೆಂಗಳೂರು ವಿಜಯದ ಎರಡನೇ ಪುಟದಾಗೊಂದು ಸಿನಿಮಾ ಸುದ್ದಿ ಬಂದೈತೆ. ಈ ಸುದ್ದಿ ಪ್ರಕಾರ ಬೆಂಗಳೂರಲ್ಲಿರೋ ಟಾಕೀಸುಗಳಲ್ಲಿ ಎದ್ದೇಳು ಮಂಜುನಾಥಾ ಎಂಬ ಕನ್ನಡ ಚಿತ್ರಕ್ಕಾಗಿ ಜಾಗ ಮಾಡಿಕೊಡಲು ಕಬಡ್ದಿ ಎಂಬ ಕನ್ನಡ ಚಿತ್ರದ ಎತ್ತಂಗಡಿ ಆಗ್ತಿದೆಯಂತೆ! (ಫೋಟೋ ಕೃಪೆ: ಕನ್ನಡ ಆಡಿಯೋ.ಕಾಂ)

ಯಾವ ಚಿತ್ರ ಎತ್ತಂಗಡಿಯಾಗ್ಬೇಕು?

"ಅಲ್ಲಾ ಗುರು! ನಿನ್ನ ಎಡಗಣ್ಣು ಹೋದ್ರೆ ಒಳ್ಳೇದಾ? ಬಲಗಣ್ಣಾ? ಅಂದಂಗಾಯ್ತು ಅಲ್ವಾ ಈ ಕೇಸು... ಎಲ್ಡೂ ಕನ್ನಡ ಚಿತ್ರಗಳೇ ಅಲ್ವಾ? ಇವ್ಯಾಕೆ ಈ ಥರಾ ಥಿಯೇಟರ್ಗಾಗಿ ಕಚ್ಚಾಡಬೇಕು? ಅಷ್ಟಕ್ಕೂ ಬೆಂಗಳೂರಲ್ಲಿ ಬೇರೆ ಒಳ್ಳೇ ಟಾಕೀಸುಗಳಿಲ್ವಾ?" ಅನ್ನೋ ಪ್ರಶ್ನೆಗೆ ಯಾರು ಉತ್ರಾ ಕೊಡಬೇಕು? ನಿಜಾ ಅಂದ್ರೆ ಒಂದಾನೊಂದು ಕಾಲದಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಿಂದ ಕಂಗೊಳಿಸುತ್ತಿದ್ದ ಬೆಂಗಳೂರಿನಲ್ಲಿ ಇವತ್ತಿಗೂ ಚಿತ್ರಮಂದಿರಗಳಿಗೇನೂ ಕೊರತೆಯಿಲ್ಲ. ಒಳ್ಳೇ ಚಿತ್ರಮಂದಿರಗಳಿಗೂ ಕೊರತೆಯಿಲ್ಲ. ಆದ್ರೆ ದಿಟವೇನಪ್ಪಾ ಅಂದ್ರೆ ಇದರಲ್ಲಿ ಅರ್ಧಕ್ಕರ್ಧ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಾಳು ತೆರೆಕಾಣೋದೇ ಇಲ್ಲಾ. ಅಂದ್ರೆ ನಮ್ಮೂರಿನ ಬಹಳಷ್ಟು ಚಿತ್ರಮಂದಿರಗಳನ್ನು ಬೇರೆ ಭಾಷೇ ಚಿತ್ರಗಳಿಗೇ ಅಂತಲೇ ಮೀಸಲು ಮಾಡಿಟ್ಟಂಗ್ ಇದೆ. ಐನಾಕ್ಸ್, ಫೋರಂ ಥರದ ಮಲ್ಟಿಪ್ಲೆಕ್ಸುಗಳಲ್ಲಿ ಕನ್ನಡದ ಎಷ್ಟು ತೆರೆಗಳು ಇವೆ ಅನ್ನೋದೂ ಅಲ್ಲಿಗೆ ಹೋದವರಿಗೆ ಗೊತ್ತಾಗುತ್ತೆ. ಇನ್ನು ಅಭಿನಯ, ಶಂಕರನಾಗ್ ಮೊದಲಾದ ಕಡೆ ಕನ್ನಡಚಿತ್ರಗಳು ಓಡಬಹುದು ಅನ್ನೋ ನೆನಪೇ ನಮ್ಮವರಿಗಿಲ್ವಾ ಅನ್ಸುತ್ತೆ ಗುರು! ನಮ್ಮೂರಿನ ಚಿತ್ರಮಂದಿರಗಳಲ್ಲಿ ಮೊದಲ ಆದ್ಯತೆ ನಮ್ಮೂರಿನ ಚಿತ್ರಗಳಿಗೆ ಇರಬೇಕು, ನಮ್ಮವಕ್ಕೇ ಜಾಗಾ ಇಲ್ಲಾ ಅನ್ನೋ ಪರಿಸ್ಥಿತಿ ಬೀದೀಲಿ ಹೋಗೋ ಒಂಟೇನಾ ಗುಡುಸ್ಲಲ್ ಬಿಟ್ಕೊಂಡು ಮನೆ ಮಕ್ಳುನ್ನ ಬೀದಿಗ್ ತಳ್ದಂಗ್ ಅಲ್ವಾ? ಕನ್ನಡನಾಡಿನಲ್ಲಿ ಒಂದು ಕನ್ನಡ ಚಿತ್ರ ಚೆನ್ನಾಗ್ ಓಡ್ತಾ ಇದ್ದಾಗಲೂ ಇನ್ನೊಂದ್ ಕನ್ನಡ ಚಿತ್ರಕ್ಕಾಗಿ ಜಾಗ ಖಾಲಿ ಮಾಡ್ಬಿಡಬೇಕು ಅನ್ನೋದು ದುಸ್ಥಿತಿ ಅಲ್ವಾ ಗುರು? ಈಗ ಒಸಿ ನೀವೇ ಹೇಳಿ ನಿಜವಾಗ್ಲೂ ಎತ್ತಂಗಡಿ ಆಗ್ಬೇಕಾಗಿರೋ ಚಿತ್ರಗಳು ಯಾವುವು ಅಂತಾ!!!

ಇನ್ನು ಮೆನುಗಳು ಹೋಟೆಲಿನಲ್ಲಿ "ಏನೇನಿದೆ" ಅಂತ ಹೇಳುತ್ತವೆ!


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಸ ಆಯುಕ್ತರು ಕೈಗೊಂಡ ನಿರ್ಧಾರಗಳ ಬಗ್ಗೆ ಮೊನ್ನೆ ತಾನೇ ಮಾತಾಡಿದ್ವಿ. ಬಿ.ಬಿ.ಎಂ.ಪಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೆಂಗಳೂರಲ್ಲಿ ಜಾಹೀರಾತು ಫಲಕಗಳು, ಹೋಟೆಲ್ ಮೆನು-ಗಳಲ್ಲೂ ಕನ್ನಡ ತರ್ಸಕ್ಕೆ ಒತ್ತಡ ಹೇರುತ್ತಿದೆ ಅಂತ ೨೦೦೯ರ ಜುಲೈ ತಿಂಗಳ ಏಳನೇ ತಾರೀಕಿನ "ದಿ ಹಿಂದೂ" ಮತ್ತು ಜುಲೈ ಹನ್ನೊಂದರ "ಡೆಕ್ಕನ್" ಪತ್ರಿಕೆಗಳಲ್ಲಿ ವರದಿಯಾಗಿದೆ.

ಕಡೆಗೂ ಗ್ರಾಹಕನಿಗೆ ಸಿಗಲಿರೋ ನ್ಯಾಯ!
ಒಂದು ಹೋಟೆಲಿನಲ್ಲಿ ಸಿಗುವ ತಿನಿಸಿನ ಬಗ್ಗೆ ಇರಲಿ, ಬೀದಿಯಲ್ಲಿ ಕಾಣುವ ಜಾಹಿರಾತಿನ ಮಾಹಿತಿಯೇ ಇರಲಿ, ಇವೆಲ್ಲವೂ ಕನ್ನಡ ಭಾಷೆಯಲ್ಲಿ ಕರ್ನಾಟಕದಲ್ಲಿ ಅಲ್ಲದೆ ಇನ್ನೆಲ್ಲಿರ್ಬೇಕು ಹೇಳಿ? ಆದರೆ ಇಂದು ಪರಿಸ್ಥತಿ ಹಾಗಿಲ್ಲವೆಂಬುದು ನಮಗೆಲ್ಲಾ ಗೊತ್ತು, ಈಗ ಇದು ಬಿ.ಬಿ.ಎಂ.ಪಿ ಕಣ್ಣಿಗೂ ಬಿದ್ದಿರುವ ಹಾಗಿದೆ. ಇಷ್ಟು ದಿನ ಹಲವು ಹೋಟೆಲ್ ಮೆನುಗಳಲ್ಲಿ, ಜಾಹೀರಾತು ಫಲಕಗಳಲ್ಲಿ ಕೇವಲ ಇಂಗ್ಲಿಷ್ ಇದ್ದುದು ಗೊತ್ತಿರೋ ವಿಷಯ. ಹೋಟೆಲಿನಲ್ಲಿ ಅಲ್ಲಿ-ಇಲ್ಲಿ ತಿರುಗಿ "ಈ ತಿನಿಸೇನು? ಆ ತಿನಿಸೇನು?" ಅಂತ ಕೇಳಿ ಕೇಳಿ, ಅಥವಾ ನಾಚಿ, ಕೇಳದೆಯೇ, ತಿಂದ ಮೇಲೆ ಅರ್ಥ ಮಾಡಿಕೊಂಡ ಅನುಭವ ಹೆಚ್ಚಿನವರಿಗೆ ಸಾಮಾನ್ಯ ಆಗೋಗಿತ್ತು, ಅಲ್ವಾ ಗುರು? ನಮ್ಮ ನಾಡಲ್ಲೇ ನಮಗೆ ಈ ಅಧೋಗತಿಯಾದರೆ ಕನ್ನಡಿಗ ಗ್ರಾಹಕನೊಬ್ಬ ನಿಶ್ಚಿಂತೆಯಿಂದ ಖರೀದಿ ಮಾಡುವುದಾದರೂ ಎಲ್ಲಿ?! ಗ್ರಾಹಕನಿಗೆ ತೊಡಕಾಗೋದ್ರ್ ಜೊತೆಗೆ, ಇಲ್ಲೆಲ್ಲಾ ಮಾಹಿತಿ ಪಡೆಯುವ ಅವನ ಹಕ್ಕನ್ನೂ ನಿರಾಕರಿಸಲಾಗುತ್ತಿದೆ. ಹೀಗೆ ಗ್ರಾಹಕನ ಭಾಷೆಯನ್ನು ಕಡೆಗಣಿಸಿ, ಎಲ್ಲರೂ "ಗುಂಪಲ್ಲಿ ಗೋವಿಂದ" ಅಂತ ಇಂಗ್ಲಿಷ್ ಬಳಸೋ ಸ್ಥಿತಿ ಮಾರುಕಟ್ಟೆಯಲ್ಲಿ ತೊಂದರೆ ಅಲ್ಲದೆ ಗ್ರಾಹಕರ ಮಧ್ಯೆ ಒಂದು ರೀತಿಯ ಕಂದರವನ್ನ ಉಂಟು ಮಾಡುತ್ತಿದೆ. ಈ ಪರಿಸ್ಥಿತಿಯನ್ನು ಬಗೆಹರಿಸಲು ಪಾಲಿಕೆ ಇದೀಗ ಇಟ್ಟಿರುವ ಹೆಜ್ಜೆ ಕನ್ನಡಿಗ ಗ್ರಾಹಕನಿಗೆ ದೊರಕುತ್ತಿರೋ ನ್ಯಾಯ ಅಂತಲೇ ಹೇಳಬಹುದು ಗುರು! ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಕನ್ನಡಿಗ ತನ್ನೂರಲ್ಲಿನ ಮಾರುಕಟ್ಟೆಯಲ್ಲಿ ನೆಮ್ಮದಿಯ, ಸಂಕೋಚವಿಲ್ಲದಿರುವಂತಹ ಅನುಕೂಲಕರವಾದ ಪರಿಸ್ಥಿತಿ ಹುಟ್ಕೊತಿರೋದು ಒಳ್ಳೇ ಬೆಳವಣಿಗೆ ಗುರು!

ಸಂಸದರ ಪ್ರತಿಭಟನೆ ಹುಟ್ಟು ಹಾಕಿರೋ ಪ್ರಶ್ನೆಗಳು!

ಮೊನ್ನೆ ಮೊನ್ನೆ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿತು. ಇದಾದ ನಂತರ ಅಸ್ಸಾಮಿನ ಸಂಸದರು ತಮ್ಮ ರಾಜ್ಯವನ್ನು ಕಡೆಗಣಿಸಲಾಗಿದೆ ಅನ್ನುತ್ತಾ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸಿದ ಸ್ವಾರಸ್ಯಕರ ಘಟನೆ ನಡೀತು ಅಂತಾ 08.07.2009ರ ಕನ್ನಡಪ್ರಭದ ಏಳನೇ ಪುಟದಲ್ಲಿ ಬಂದಿರೋ ಈ ಫೋಟೋ ಹೇಳ್ತಿದೆ. ಇವರು ಯಾವ ಕಾರಣಕ್ಕಾಗೇ ಪ್ರತಿಭಟಿಸಿರಲಿ, ಇಂಥಾ ಸನ್ನಿವೇಶ ನೋಡ್ದಾಗ ಕೆಲವು ಪ್ರಶ್ನೆಗಳು ಹುಟ್ಕೊಂಡಿದ್ದು ಮಾತ್ರಾ ನಿಜಾ ಗುರು!

ಈ ಫೋಟೊ ಹುಟ್ಟುಹಾಕೋ ಪ್ರಶ್ನೆಗಳು!

೧. ಇವರು ಸಂಸತ್ತಿನ ಒಳಗಡೆ ದನಿ ಎತ್ತೋ ಅವಕಾಶ ಇದ್ರೂ, ಬೀದೀಗೆ ಬಂದು ಪ್ರತಿಭಟಿಸೋ ಅಂಥಾ ಪರಿಸ್ಥಿತಿ ಏನು?
೨. ಅಸ್ಸಾಮಿನಂತಹ ಪುಟ್ಟ ರಾಜ್ಯಗಳ ಒಟ್ಟೂ ಸಂಸದರ ದನಿಗೆ ಸಂಸತ್ತಿನ ಒಳಗಡೆ ಬೆಲೆ ಇದೆಯೋ ಇಲ್ಲವೋ?
೩. ಅಸ್ಸಾಮಿನ ಕಥೆ ಇರಲಿ, ಯಾವ ರಾಜ್ಯದ ಸಂಸದರ ಸಂಖ್ಯೆ ಹೆಚ್ಚೋ ಆಯಾ ರಾಜ್ಯಗಳ ದನಿ ಮಾತ್ರಾ ಭಾರತದ ಸಂಸತ್ತಿನ ಒಳಗೆ ಪರಿಣಾಮಕಾರಿಯೇ?
೪. ಯಾವುದೇ ವಿಷಯವಿರಲಿ, ಅದರ ಬಗ್ಗೆ ತನ್ನ ಹಕ್ಕು, ನಿಲುವು, ಅಭಿಪ್ರಾಯಕ್ಕೆ ಹೆಚ್ಚು ಸಂಸದರಿರೋ ರಾಜ್ಯಕ್ಕಿರುವಷ್ಟು ತೂಕವೇ/ ಬಲವೇ ಕಡಿಮೆ ಸಂಸದರ ಚಿಕ್ಕ ರಾಜ್ಯಕ್ಕೂ ಇದೆಯೇ?
೫. ಭಾರತೀಯ ಸಂಸತ್ತಿನಲ್ಲಿ ಒಂದು ರಾಜ್ಯದ ಒಟ್ಟೂ ಸಂಸದರ ಸಂಖ್ಯೆಯೇ ನಿರ್ಣಾಯಕವಾದರೆ ಪುಟ್ಟರಾಜ್ಯಗಳಿಗೆ ಅನ್ಯಾಯವಾಗದೇ?

ಗುರುಗಳೇ, ಉತ್ರ ನಮ್ಮುನ್ ಕೇಳಬೇಡಿ. ಪ್ರಶ್ನೆ ಮಾತ್ರಾ ಕೇಳ್ಕೊಳಿ... ಹಾಗೇ ಸುಮ್ಮನೆ!!

ಮತ್ತದೇ ಬಜೆಟ್ಟು: ಅದೇ ಹಳಿಯೂ ! ಅದೇ ರೈಲೂ!!


ಹೊಸ ರೈಲು ಮಂತ್ರಿಗಳು ಈ ಬಾರಿ ಬಜೆಟ್ಟಲ್ಲಿ ಮತ್ತದೇ ಹಳೇ ಹಳಿ ಮೇಲೆ ಮತ್ತವೇ ರೈಲು ಬುಟ್ಟವ್ರಲ್ಲಾ ಗುರು! ಇರಲಿ, ಮೊದಲಿಗೆ ಇವ್ರು ಮಾಡಿರೋ ಒಳ್ಳೇ ಕೆಲಸಾನ ಹೊಗಳ್ಬುಡಮಾ...ಆಮೇಲೆ ಮಾಡಬಹುದಾಗಿದ್ರ ಬಗ್ಗೆ ಮಾತಾಡಮಾ.

ಮುನಿಯಪ್ಪನವ್ರ ಒಳ್ಳೇ ಕೆಲ್ಸ!

ಈ ಸಲ ರೈಲ್ ಬಜೆಟ್ಟಲ್ಲಿ ಬೆಂಗಳೂರಿನ, ಮಂಗಳೂರಿನ ನಿಲ್ದಾಣಗಳ್ನ ವಿಶ್ವದರ್ಜೆಗೆ ಏರಿಸೋ ಯೋಜನೆ ಹಾಕಂಡಿರೋದು ಒಳ್ಳೇದು. ಬೀದರ, ಲೋಂಡಾ ನಿಲ್ದಾಣಗಳ್ನ ಮಾದರಿ ನಿಲ್ದಾಣ ಮಾಡ್ತೀವಿ ಅಂದಿರೋದು ಪಸಂದಾಗೈತೆ. ಬೆಂಗಳೂರು - ಹುಬ್ಬಳ್ಳಿ - ಸೊಲ್ಲಾಪುರದ ನಡುವೆ ಹೊಸ ಫಾಸ್ಟ್ ಪ್ಯಾಸೆಂಜರ್ ರೈಲು ಹಾಕ್ತಿರೋದು ಸ್ಸೂಪರ್! ಬೆಂಗಳೂರು-ಹುಬ್ಬಳ್ಳಿ ರೈಲನ್ನು ಧಾರವಾಡವರೆಗೆ ಓಡ್ಸೋದು, ಬೆಂಗಳೂರು-ಶಿವಮೂಗ್ಗ ಇಂಟರ್ ಸಿಟಿ ರೈಲು, ಇನ್ನು ಹೊಸಮಾರ್ಗದ ಸಮೀಕ್ಷೆ ವಿಷಯಕ್ ಬಂದ್ರೆ ಹರಿಹರ-ಶಿವಮೂಗ್ಗ ರೈಲು ಸಂಚಾರ, ಕೊಪ್ಪಳ-ಆಲಮಟ್ಟಿ, ಗದಗ್- ಹಾವೇರಿ, ಆಲಮಟ್ಟಿ -ಯಾದಗಿರಿ ಮಾರ್ಗ, ಆನೇಕಲ್- ಬಿಡದಿ ಮಾರ್ಗಗಳ ಸಮೀಕ್ಷೆ... ಇವೆಲ್ಲಾ ಮಾಡಕ್ ಹೊಂಟಿರೋದು ಒಳ್ಳೇದೆ. ಇವೆಲ್ಲಾ ಯೋಜನೆಗಳ್ನ ಕರ್ನಾಟಕಕ್ಕೆ ಕೊಡಮಾಡಿರೋ ಮುನಿಯಪ್ಪನವರಿಗೆ ಇಡೀ ಕನ್ನಡನಾಡಿನ ಪರವಾಗಿ ಅಭಿನಂದನೆ ಹೇಳ್ಬುಡಮಾ ಗುರು!

ಆದ್ರೆ ಇದ್ಯಾಕ್ ಇಂಗ್ ಮಾಡ್ಬುಟ್ರಿ?

ಅಲ್ಲಾ, ಪೇಪರ್ ತುಂಬಾ ಕರ್ನಾಟಕಕ್ ಎಂಟು ಹೊಸ ರೈಲು ಅಂತ ಹಾಕಿದಾರೆ ಅಂತಾನೂ, ಟೀವೀ ತುಂಬಾ "ಅಯ್ಯಯ್ಯೋ ಅನ್ಯಾಯ ಅನ್ನೋ ಹಂಗಿಲ್ಲಾ" ಅಂತಾನೂ, ಅಂತರ್ಜಾಲ ಪತ್ರಿಕೆಗಳು ಕಣ್ಣು ಬಿಟ್ಟ ಕೇಂದ್ರ ಅಂತಾನೂ ಅನ್ನೋ ಹಂಗೆ ಚಮಕ್ ಮಾಡ್ಬುಟ್ರಲ್ಲಾ... ಮಾನ್ಯ ಮುನಿಯಪ್ಪನವ್ರೇ, ಒಸಿ ನೀವೇ ಹೇಳ್ಬುಡಿ, ಈ ಕೆಳಗಿನ ಪ್ರಶ್ನೆಗಳ್ಗೆ ಉತ್ರವಾ!
೧. ಕಾರವಾರ - ಮುಂಬೈ ರೈಲು, ಮಂಗಳೂರು - ಚೆನ್ನೈ - ಪುದುಚೇರಿ ರೈಲು, ಬೆಂಗಳೂರು - ಮಂಗಳೂರು - ಕಣ್ಣೂರು ರೈಲು, ಹೌರಾ - ಬೆಂಗಳೂರು ರೈಲುಗಳು ಕರ್ನಾಟಕದಲ್ಲಿ ಎಷ್ಟು ಕಿಲೋಮೀಟರ್ ದೂರ
ಓಡುತ್ತವೆ?
೨. ಹಾಕಿರೋ ಹೊಸ ರೈಲುಗಳೆಲ್ಲಾ ಹೌರಾ, ಅಮೇಥಿ, ತಿರುವನಂತಪುರಂ, ಪುದುಚೆರಿ, ಚೆನ್ನೈ, ಮುಂಬೈ, ಕಣ್ಣೂರು... ಹೀಗೆ ಹೊರರಾಜ್ಯಗಳಿಗೇ ಯಾಕೆ ಹೋಗುತ್ವೆ?
೩. ಕರ್ನಾಟಕದಲ್ಲಿರೋ ಬಂದರು ನಗರಗಳಿಗೆ ಸಂಪರ್ಕ ಬಲಪಡಿಸೋದು ನಮ್ಮ ನಾಡಿಗೆ ಒಳ್ಳೇದೋ,
ಅಥ್ವಾ ಮುಂಬೈ ಮತ್ತು ಚೆನ್ನೈಗಳಿಗೆ ಮತ್ತಷ್ಟು ರೈಲು ಹಾಕೋದು ಒಳ್ಳೇದೋ?
೪. ಕರ್ನಾಟಕದಲ್ಲಿ ನಮ್ಮ ಊರುಗಳಿಗೆ ಸಂಪರ್ಕ ಕಲ್ಪಿಸೋ ರೈಲುಮಾರ್ಗಗಳು, ರೈಲುಗಳು, ಹೊಸ ಯೋಜನೆಗಳೂ ಎಷ್ಟಿವೆ, ತಮ್ಮ ಬಜೆಟ್ಟಿನಲ್ಲಿ?
೫. ಬೆಂಗಳೂರು - ಮೈಸೂರು ಜೋಡಿಮಾರ್ಗ ಎಲ್ಲಿ ತಂಕ ಬರಲಿದೆ, ನಿಮ್ಮ್ ಬಜೆಟ್ಟಲ್ಲಿ?
೬. ಮಮತಕ್ಕ ತಮ್ಮ ರಾಜ್ಯಕ್ಕೆ ಒಂದು ಕೋಚ್ ಫ್ಯಾಕ್ಟರಿ ಹಾಕುಸ್ಕೊಂಡ್ರಲ್ಲಾ, ತಾವು ಯಾವ ಫ್ಯಾಕ್ಟರಿ ತರಲಿದ್ದೀರಿ ಕರ್ನಾಟಕಕ್ಕೆ?
೭. ರೈಲ್ವೇಯ ಈ ಬಜೆಟ್ಟು ಎಷ್ಟು ಉದ್ಯೋಗಗಳನ್ನು ಹುಟ್ಟುಹಾಕಿದೆ ಕರ್ನಾಟಕದಲ್ಲಿ?
೮. ಕೊಡಗು, ಚಿಕ್ಕಮಗಳೂರಿನ ನೆಲದ ಮೇಲೆ ರೈಲು ಹಳಿ ಹಾಕಬಾರದು ಅನ್ನೋ ನಿಯಮವೇನಾದರೂ ನಿಮ್ಮ ಇಲಾಖೆಯಲ್ಲಿದೆಯೇ? ಇದ್ದರೂ ಅದನ್ನು ಬದಲಾಯಿಸೋ ಕೆಲಸ ನಿಮ್ಮ ಕಾಲದಲ್ಲೇ ಆದೀತಾ?
೯. ರೈಲು ಹಳಿ, ನಿಲ್ದಾಣಗಳಿದ್ದೂ ಬರೀ ಒಂದೆರಡು ಜಿಲ್ಲೆಗಳಿಗೆ ಮಾತ್ರಾ ಸಂಪರ್ಕ ಇರೋ ಚಾಮ್ರಾಜನಗರ, ಉಡುಪಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ದಕ್ಷಿಣಕನ್ನಡ ಬೀದರ್ ಮೊದಲಾದ ಜಿಲ್ಲೆಗಳ ಜಾಲ ಹೆಚ್ಸೋದಕ್ಕೆ ಏನು ಮಾಡಲಿದೆ ನಿಮ್ಮ ಬಜೆಟ್?
೧೦. ಶಿವಮೊಗ್ಗದಿಂದ ಕರ್ನಾಟಕದ ಉತ್ತರ ಭಾಗಗಳನ್ನು ಜೋಡಿಸೋ ರೈಲು ಮಾರ್ಗಗಳ ಅಗತ್ಯವಿಲ್ಲವೇ?
೧೧. ತಡೆರಹಿತ ರೈಲು, ಬೆಂಗಳೂರು - ಮಂಗಳೂರು ಹಗಲು ರೈಲು, ಮಂಗಳೂರು ರೈಲನ್ನು ಕಾರವಾರದತನಕ, ಬಾಗಲಕೋಟೆ - ಕುಡುಚಿ, ದಾವಣಗೆರೆ-ತುಮಕೂರು ಜೋಡಿಮಾರ್ಗ, ಅರಸಿಕೆರೆ-ಬೀರೂರು ಜೋಡಿಮಾರ್ಗ ಇವೆಲ್ಲಾ ಮಾಡಲಿಕ್ಕಾಗದ ಯಾವ ಕಾರಣ ಇತ್ತು ಮಂತ್ರಿಗಳೇ?
ಏನೋ ತಕ್ಷಣಕ್ ತೋಚಿದ್ ಒಂದ್ ನಾಕು ಪ್ರಶ್ನೆ ಕೇಳಿದೀವಿ, ಅಷ್ಟೆಯಾ! ಇದನ್ನೆಲ್ಲಾ ನೋಡಿದಮೇಲೂ ನಿಮಗೆ ನಿಮ್ ಬಜೆಟ್ ಕರ್ನಾಟಕಕ್ಕೆ ಬಂಪರ್ ತಂದುಕೊಟ್ಟಿದೆ ಅನ್ಸುತ್ತಾ? ಗುರುಗಳೇ!!

ಬಿಬಿಎಂಪಿಯ ಹೊಸ ಆಯುಕ್ತರು ಮೂಡಿಸಿರೋ ಭರವಸೆ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಬಂದಿರೋ ಶ್ರೀ ಭರತ್ ಲಾಲ್ ಮೀನಾ ಅವ್ರು ಹೊಸ ಆಫೀಸಿಗೆ ಬಂದ ಕೂಡ್ಲೇ ಬಂಗಾರದಂಥಾ ಕೆಲಸ ಮಾಡಿದಾರೆ ಅಂತಿದೆ 24.06.2009ರ ಎಕ್ಸ್’ಪ್ರೆಸ್ ಬಝ್ ಪತ್ರಿಕೇಲಿ ಬಂದೀರ‍ೋ ಈ ಸುದ್ದಿ! ಪಾಲಿಕೆಯ ಅಧಿಕಾರಿಗಳ ಸಭೇನ ಇದಕ್ಕಾಗೇ ವಿಶೇಷವಾಗಿ ಕರೆದು ಚರ್ಚೆ ಮಾಡಿದಾರೆ ಅಂದ್ರೆ ಅದ್ಯಾವ ವಿಷ್ಯಾನಪ್ಪಾ ಅಂತನ್ನಿಸೋದು ನಿಜವೇ! ನಾಮಫಲಕಗಳಲ್ಲಿ ಕನ್ನಡವನ್ನು ಸರಿಯಾಗಿ ಬಳಸೋ ಹಾಗೆ ಮಾಡಕ್ಕೆ ಏನ್ ಮಾಡಬೇಕು ಅಂತಾ ಚರ್ಚಿಸೋಕೆ ಆ ಸಭೆ ಕರ್ದಿದ್ರಂತೆ. ನಾಮಫಲಕಗಳಲ್ಲಿ ಕನ್ನಡದ ಬಳಕೆ ಬಗ್ಗೆ ಕರ್ನಾಟಕ ರಾಜ್ಯಸರ್ಕಾರದೋರು ಹೊರಡ್ಸಿದ್ದ ಪುರಾತನವಾದ ಈ ಒಂದು ಆದೇಶಾನ ಜಾರಿಗೊಳಿಸೋಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದೋರು ನೀಡಿರೋ ನಿರ್ದೇಶನಾನ ಜಾರಿಗೊಳಿಸೋದು ಹ್ಯಾಗೆ ಅಂತ ಅಧಿಕಾರಿಯೊಬ್ರು ಗಂಭೀರವಾಗಿ ಕ್ರಮ ತೊಗೊಳ್ಳಕ್ಕೆ ಮುಂದಾಗಿರೋದು ಒಳ್ಳೇ ಬೆಳವಣಿಗೆ ಗುರು!

ಇದರಲ್ಲಿನ ಮೆಚ್ಚೋ ಅಂಶ!

ನಾಮಫಲಕಗಳಲ್ಲಿ ಕನ್ನಡ ಕಡೆಗಣ್ಸುದ್ರೆ ದಂಡ ಹಾಕ್ತೀವಿ, ಲೈಸೆನ್ಸ್ ಕಿತ್ಕೋತೀವಿ ಅಂತಾ ಅಂಗಡಿ/ ಮುಂಗಟ್ಟುಗಳ ಮಾಲೀಕರಿಗೆ ಎಚ್ಚರಿಕೆ ಕೊಡೋದು ಒಂದುಕಡೆಯಾದ್ರೆ, ಈ ಹೊಸ ಸಾಹೇಬರ ಶೈಲೀನೇ ಬೇರೆಯಾಗಿದೆ. ಇವರು ಮಹಾನಗರಪಾಲಿಕೆಯ ಸುಲಭ್ ಶೌಚಾಲಯ, ಬಸ್ ನಿಲ್ದಾಣಗಳು, ಬಸ್ಸುಗಳು... ಮುಂತಾದ ಕಡೆಗಳಲ್ಲೆಲ್ಲಾ ಕನ್ನಡ ಬಳ್ಸಕ್ ಆದೇಶಾ ನೀಡಿರೋದ್ರು ಜೊತೆಗೆ ಜಾಹೀರಾತು ಸಂಸ್ಥೆಗಳೋರ್ನ ಕರೆಸಿ ಅವರನ್ನೂ ಈ ಸಭೆಯಲ್ಲಿ ತೊಡಗಿಸಿಕೊಂಡಿರೋದು ಮುಖ್ಯವಾದ್ದು. ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾದ್ದು. ಇಂಥಾ ಒಂದು ಆದೇಶಾನಾ ಜಾರಿಗೊಳಿಸೋದ್ರಲ್ಲಿ ಅಧಿಕಾರಿಗಳೂ ಸೇರಿದಂತೆ ಎಲ್ಲರೂ ಕೈಜೋಡಿಸ್ಬೇಕಾಗಿದೆ! ಹ್ಞಾಂ...ಎಲ್ರೂ ಅಂದ್ರೆ ನಾವೂ ನೀವೂನೂ ಸೇರ್ತೀವಿ ಗುರು!
Related Posts with Thumbnails