ಭಾರತಕ್ಕೊಪ್ಪೋ ಭಾಷಾನೀತಿ ರೂಪುಗೊಳ್ಳಲಿ!

ನಾಳೆ ಅಂದರೆ ಸೆಪ್ಟೆಂಬರ್ 14, ಹಿಂದಿ ದಿವಸ್ ಎಂದು ಇಡೀ ಭಾರತದ ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಆಚರಣೆ ಇರುತ್ತೆ. ಇದರ ವೈಭವಾನ ನೋಡಕ್ಕೆ ಬೆಂಗಳೂರಿನ ವಿಧಾನಸೌಧದ ಎದುರಿಗಿರೋ ಅಂಚೆಕಛೇರಿ ಹಿಂಬದಿಯ ಬಿ.ಎಸ್.ಎನ್.ಎಲ್ ಹತ್ರ ಹೋದ್ರೆ ಸಾಕು, ಕೋರಮಂಗಲದ ಕೇಂದ್ರೀಯ ಸದನಕ್ ಹೋದ್ರೂ ಸಾಕು. ಬೇರೆ ಊರಲ್ಲಿರೋರು ಬ್ಯಾಸರಾ ಮಾಡ್ಕೊಂಬೇಡಿ. ಸುಮ್ಕೆ ನಿಮ್ಮೂರ ಟೆಲಿಫೋನ್ ಆಫೀಸ್‍ಗೆ ಹೋಗಿನೋಡಿ ಸಾಕು. ಹಿಂದೀಲಿ ಬರೆಸಿರೋ ದೊಡ್ಡ ದೊಡ್ಡ ಬ್ಯಾನರ್‍ಗಳು ನಿಮ್ಮ ಕಣ್ಣಿಗೆ ರಾಚುತ್ತವೆ. ಒಳಿಕ್ ಹೋದ್ರೆ ನಮ್ ಕನ್ನಡದ ಪ್ರಜೆಗಳೇ ಚೆನ್ನಾಗಿ ಹಿಂದೀಲಿ ಹಾಡಿದ್ಕೆ, ಕುಣಿದಿದ್ಕೆ, ತಮ್ಮ ತಮ್ಮ ಮಕ್ಳುಗೆ ವೇಷ ಹಾಕಿದ್ಕೆ, ಮಕ್ಳುಗೂ ಹಿಂದೀ ಹಾಡು ಕಲ್ಸಿದ್ಕೆ, ಹಿಂದೀ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡ್ಸಿದ್ಕೆ, ನಾಟಕ ಹೇಳ್ಕೊಟ್ಟಿದ್ಕೆ ಅಂತ ಬಹುಮಾನ ತೊಗೋತಾ ಇರೋದ್ನ ಕಾಣಬೋದು. ಈ ದೇಶದಲ್ಲಿ ಪ್ರತಿವರ್ಷ ಹಿಂದೀನಾ ಚೆನ್ನಾಗಿ ಜಾರಿಮಾಡಿದ ಬ್ಯಾಂಕಿಗೊಂದು ಪ್ರಶಸ್ತೀನೂ ಉಂಟು. ಹಿಂದೀ ಪರೀಕ್ಷೆ ಪಾಸ್ ಆಗಿದ್ಕೆ ಭಡ್ತೀನೂ ಕೊಟ್ಟಾರು ಗುರು! ಹಿಂದೀ ಹೇರಿಕೆಯ ಈ ಘನಕಾರ್ಯಕ್ಕೆ ಅಂತಲೇ ಭಾರತ ಸರ್ಕಾರ ಜನ ಕಟ್ಟೋ ತೆರಿಗೆ ಹಣದಲ್ಲಿ ನೂರಾರು ಕೋಟಿಗಳನ್ನು ಮೀಸಲಿಡುತ್ತೆ.

ಹಿಂದಿ ಹೇರಿಕೆಯೆಂಬ ಅಸಮಾನತೆಯ ಮೂಲವ್ಯಾಧಿ !

ಸುಮ್ನೆ ಬಾಯಲ್ಲಿ ‘ಭಾರತದ ಜೀವಾಳವೇ ಸಮಾನತೆ’ ಅಂತಾ ಹೇಳ್ತಾ, ಒಂದು ಭಾಷೇನಾ ಏಕತೆಯ, ರಾಷ್ಟ್ರಪ್ರೇಮದ, ರಾಷ್ಟ್ರೀಯತೆಯ, ಒಗ್ಗಟ್ಟಿನ ಸಾಧನ ಅನ್ನುತ್ತಾ ಉಳಿದ ಭಾಷಾ ಜನಾಂಗಗಳ ತಲೆ ಸವರೋ ವ್ಯವಸ್ಥೆಯಿಂದ ನಾಡಿನಲ್ಲಿ ಒಗ್ಗಟ್ಟು ಮೂಡಿ, ಏಳಿಗೆ ಆಗುತ್ತೆ ಅಂದ್ಕೊಳ್ಳೋದು ಮೂರ್ಖತನದ ಪರಮಾವಧಿ ಆಗುತ್ತೆ ಗುರೂ, ಯಾಕಂದ್ರೆ ಇಂಥಾ ಕ್ರಮ ಉಳಿದ ಭಾಷೆಗಳ ಬಳಕೆಯ ಸಾಧ್ಯತೇನಾ, ವ್ಯಾಪ್ತೀನಾ ಕುಗ್ಗಿಸುತ್ತಾ ಬರುತ್ತೆ. ಇದರಿಂದ ಅಂಥಾ ಭಾಷಿಕರಲ್ಲಿ ತಮ್ಮ ನುಡಿಯ ಬಗ್ಗೆ ಕೀಳರಿಮೆ ಹುಟ್ಕೊಳುತ್ತೆ. ಇಂಥಾ ಜನಾಂಗಗಳಲ್ಲಿ ಒಂದು ಹಂತದ ನಂತರ ತಮ್ಮತನಾ ಉಳುಸ್ಕೊಳ್ಳೋಕೆ ಏನನ್ನಾದ್ರೂ ವಿರೋಧಿಸೋ ಮನಸ್ಸು ಹುಟ್ಟುತ್ತೆ. ಈ ಅಭದ್ರತೆಯ ಭಾವನೆಯಿಂದಾಗಿ ಭಾರತದ ಒಗ್ಗಟ್ಟು, ಹೆಚ್ಚಾಗುವ ಬದಲು ಮುರಿದು ಹೋಗುತ್ತೆ. ಯಾರಿಗಾಗಿ ಈ ನಮ್ಮ ನಾಡು? ಯಾರಿಗಾಗಿ ಈ ನಮ್ಮೂರಿನ ವ್ಯವಸ್ಥೆ? ಈ ವ್ಯವಸ್ಥೆಯಲ್ಲಿ ನನ್ನ ಹಿತಕ್ಕೆ ಅವಕಾಶವೇ ಇಲ್ಲದ ಮೇಲೆ ಯಾಕೆ ಇದು ಬೇಕು? ಅನ್ನೋ ಒಡಕಿನ ದನಿಗೆ ಇದು ಕಾರಣವಾಗುತ್ತೆ. ‘ನಾಡು ಒಂದು ಮಾಡಲು ಹಿಂದೀ (ಅಥವಾ ಒಂದು ಭಾಷೆ) ಬೇಕು, ಹಿಂದೀ ಪೂರಕ’ ಅನ್ನೋ ಭ್ರಮೆ ಭಾರತ ಸರ್ಕಾರಕ್ಕೆ ಕಳಚೋ ಮೊದಲು ಒಕ್ಕೂಟವೇ ಕಳಚಿ ಬೀಳೋದ್ನ ಕಾಣೋ ದೌರ್ಭಾಗ್ಯ ಭಾರತೀಯರಿಗೆ ಒದಗಿಬರುತ್ತೆ! ಇದ್ನ ತಡೆಯೋಕೆ ಇರೋ ಒಂದೇ ಮಂತ್ರ : ಸಮಾನ ಗೌರವದ ಒಕ್ಕೂಟ ವ್ಯವಸ್ಥೆ.

ಸಮಾನತೆಯೇ ಏಕತೆಗೆ ಸಾಧನ

ಹೌದೂ ಗುರು! ಸಮಾನತೆಯೆಂಬ ಸರಳ ತಂತ್ರವೇ ಭಾರತದ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ. ಮಹಾಮಂತ್ರ. ಪ್ರತಿಯೊಂದು ಪ್ರದೇಶದ ಜನರ ನುಡಿಯಲ್ಲೇ ಆಯಾ ಪ್ರದೇಶದ ಆಡಳಿತ ಇರಬೇಕು. ರಾಜ್ಯರಾಜ್ಯಗಳ ಸಂಬಂಧಗಳು ಆಯಾ ನುಡಿಗಳಲ್ಲಿ ಆಗಬೇಕು. ಹಾಗಾಗುತ್ತಾ? ಅಂತಾ ಅನುಮಾನಾ ಇರೋರು ಪ್ರಪಂಚದ ಭಿನ್ನ ಭಾಷಿಕ ದೇಶಗಳು ಹೇಗೆ ವ್ಯವಹರಿಸುತ್ತವೆ ಎಂಬುದನ್ನು ನೋಡಿ ತಿಳಿಯಬಹುದು. ರಾಜ್ಯರಾಜ್ಯಗಳ ನಡುವಿನ ಸಮಾನ ವಿಷಯಗಳು, ಸಮಾನ ಆಸಕ್ತಿಗಳು, ಸಮಾನ ಹಿತಗಳು (common interests) ಮಾತ್ರವೇ ಭಾರತವನ್ನು ಒಂದಾಗಿಡಬಲ್ಲುದಲ್ಲದೆ ಇರುವ ವೈವಿಧ್ಯತೆಯನ್ನು ಅಳಿಸೋದಲ್ಲಾ ಅಲ್ವಾ ಗುರು? ಭಾರತ ತನ್ನ ಭಾಷಾನೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ರಾಷ್ಟ್ರಭಾಷೆಯೆಂಬ ನೇರದಾರಿಯಿಂದಲೋ, ಭಾರತ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ/ ಆಡಳಿತ ಭಾಷೆ ಎಂಬ ಅಡ್ಡದಾರಿಯಿಂದಲೋ ಹಿಂದಿಯನ್ನು ಸ್ಥಾಪಿಸುವ ಆತ್ಮಹತ್ಯೆಯಂಥಾ ಕ್ರಮವನ್ನು ಭಾರತ ಸರ್ಕಾರ ಕೈಬಿಡಲಿ! ಗುರು!!

2 ಅನಿಸಿಕೆಗಳು:

Anonymous ಅಂತಾರೆ...

ಸೂಪರ್ ಗುರು!
ಎರಡು ವರ್ಷದಿಂದ ಹಿಂದಿ ಹೇರಿಕೆ ಬಗ್ಗೆ ನೀವು ಬರೆಯೋದ್ನ ಓದುತ್ತಾ ಬಂದಿರುವೆ. ಈ ವರ್ಷ ಏನು ಬರೀತೀರಾ ಕುತೂಹಲ ಇತ್ತು. ಈ ಬಾರಿಯೂ ತುಂಬಾ ಸಮಗ್ರವಾದ ಆಳ ಚಿಂತನೆಯ ಬರಹಗಳು ಬಂದವು. ನಿಮ್ಮಿಂದ ಜಾಗೃತನಾಗಿರೋ ಒಬ್ಬ ಕನ್ನಡಿಗ ನಾನು. ಈ ಜಾಗೃತಿ ನಾಡಿನ ಎಲ್ಲರನ್ನೂ ಮುಟ್ಟಲಿ. ಪ್ರಾಂತೀಯ ಚಿಂತನೆ ರಾಷ್ಟ್ರೀಯತೆಗೆ ಮಾರಕ ಅನ್ನೋರಿಗೆ ತಕ್ಕ ಉತ್ತರ ನಮ್ಮ "ಏನ್ ಗುರು! ಕಾಫಿ ಆಯ್ತಾ?" ಬ್ಲಾಗ್. ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ.

ಸತೀಶ್ ಕಡೂರು, ಼ಚೆನ್ನೈ

Anonymous ಅಂತಾರೆ...

I really felt bad to learn about Hindi language. I don't know whether to cry or bang my head. This comes to killing India, secred Bharata mata into pieces. This is not the way unite India. Those idits hve no brains to do like this. They have learn to respect all regional languages and only Hindi.

What about our state leaders. They want power nothing else. They don't care about their own mother language and culture. Nowpoeple have to protest, noty become scapeagoates for the prizes.
H.S.Jayaswamy, Chicago, USA

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails