9.5.10

"ಅಂಗಡಿಯಲ್ಲಿ ಕನ್ನಡ ನುಡಿ" ಹೊತ್ತಗೆ ಬಿಡುಗಡೆ


ಮುನ್ನುಡಿಯಲ್ಲಿ...


ಈ ಹೊತ್ತಗೆಯು ಮಾರುಕಟ್ಟೆಯಲ್ಲಿ ನಮ್ಮ ಹಕ್ಕಿನ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನ. ಈ ದಿನ ನಾಡಿನ ಮಾರುಕಟ್ಟೆಯಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗುತ್ತಿಲ್ಲ ಎನ್ನುವುದು ಒಂದೆಡೆ ಎದ್ದು ತೋರುತ್ತಿದ್ದರೆ, ಹಲವೆಡೆ ನಮ್ಮ ಜನರಿಗೇ ‘ಇಂತಿಂತಹ ಕಡೆಗಳಲ್ಲಿ ಕನ್ನಡ ಬಳಸಬಾರದು, ಬಳಸಲಾಗಲ್ಲ’ ಎನ್ನುವ ಮನಸ್ಥಿತಿ ಇದೆಯೇನೋ ಎನ್ನುವಂತೆ ತೋರುತ್ತದೆ. ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಬರೆಯಬಾರದು, ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಕನ್ನಡ ಬಳಸಬಾರದು, ಮಾಲ್‌ಗಳಿಗೆ ಹೋದಾಗ, ವಿಮಾನನಿಲ್ದಾಣಕ್ಕೆ ಹೋದಾಗೆಲ್ಲಾ ನಾವುಗಳು ಇಂಗ್ಲೀಷಲ್ಲೇ ಮಾತಾಡಬೇಕು... ಇತ್ಯಾದಿ ಭ್ರಮೆಗಳು ನಮ್ಮಲ್ಲಿರುವಂತೆ ತೋರುತ್ತದೆ. ಒಟ್ಟಾರೆ ನಮ್ಮ ಜನರು ಗ್ರಾಹಕಸೇವೆಯಲ್ಲಿ ನಮ್ಮ ನುಡಿಗೆ ಇರುವ ಮಹತ್ತರವಾದ ಪಾತ್ರವನ್ನೇ ಮರೆತಿರುವಂತೆ ತೋರುತ್ತದೆ. ಈ ಮರೆವನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ನಾವು ಈ ಹೊತ್ತಗೆಯನ್ನು ಹೊರತರುತ್ತಿದ್ದೇವೆ.

ಬೆನ್ನುಡಿಯಲ್ಲಿ...

ಗ್ರಾಹಕ ಹಕ್ಕುಗಳ ಬಗ್ಗೆ ನಾನಾ ರೀತಿಯ ಜಾಗೃತಿ ಅಭಿಯಾನಗಳು ಎಲ್ಲೆಡೆ ನಡೆಯುತ್ತಾ ಇರುತ್ತವೆ. ತೂಕ, ಅಳತೆ, ಪ್ರಮಾಣ, ಬೆಲೆ, ಗುಣಮಟ್ಟ, ಸೇವೆ, ಇವೆಲ್ಲವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾರ್ಚ್ 15ನ್ನು ವಿಶ್ವ ಗ್ರಾಹಕ ದಿನಾಚರಣೆಯಾಗೂ ಆಚರಿಸಲಾಗುತ್ತಿದೆ. ಈ ಗ್ರಾಹಕ ಹಕ್ಕುಗಳನ್ನು ಆಳವಾಗಿ ಪರಿಶೀಲಿಸಿದಾಗ ಇಲ್ಲಿ ಭಾಷೆಯ ಪಾತ್ರವನ್ನೇ ಮರೆತಿರುವುದು ಕಾಣುತ್ತದೆ. ಅಂತಹ ಭಾಷಾ-ಆಯಾಮ ಇಲ್ಲದ ಕಾರಣದಿಂದಲೇ ಗ್ರಾಹಕರಿಗೆ ನಾನಾ ರೀತಿಯಲ್ಲಿ ತೊಡಕುಗಳಾಗುತ್ತಿವೆ. ಈ ಬಗ್ಗೆ ಅರಿವು ಮೂಡಿಸುವ, ಈ ದಿಕ್ಕಿನಲ್ಲಿ ನಿಮ್ಮನ್ನು ಯೋಚಿಸಲು ಪ್ರೇರೇಪಿಸುವ ಉದ್ದೇಶದಿಂದ ಈ ಕೊಳ್ಳುಗರ ಕೈಪಿಡಿಯನ್ನು ರೂಪಿಸಿ ನಿಮ್ಮ
ಕೈಗಿಟ್ಟಿದ್ದೇವೆ.

ಬನವಾಸಿ ಬಳಗದ ಗುರಿ, ಕನ್ನಡನಾಡಿನ ಮಾರುಕಟ್ಟೆಯಲ್ಲಿ ಬರಿಯ ಕನ್ನಡವನ್ನಷ್ಟೇ ಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ತನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ಸಲೀಸಾಗಿ ಪೂರೈಸಿಕೊಳ್ಳುವಂತಾಗಬೇಕು ಎಂಬುದು. ತನ್ನದೇ ನಾಡಿನ ಯಾವುದೇ ಅಂಗಡಿ, ಮುಂಗಟ್ಟು, ಕಛೇರಿ, ಬ್ಯಾಂಕು, ಮನರಂಜನೆ, ವ್ಯಾಪಾರ, ಉದ್ದಿಮೆ, ಮಾರುಕಟ್ಟೆಗಳಲ್ಲಿ ಭಾಷೆಯ ಕಾರಣದಿಂದ ಯಾವ ತೊಡಕನ್ನೂ ಎದುರಿಸದಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಈ ಗುರಿ ಈಡೇರಬೇಕಾದರೆ ಈಗಿರುವ ಪರಿಸ್ಥಿತಿ ಬದಲಾಗಬೇಕು. ಆ ಬದಲಾವಣೆ ಜಾಗೃತರಾದ ಗ್ರಾಹಕರಿಂದ ಮಾತ್ರ ಸಾಧ್ಯ. ಅಂತಹ ಬದಲಾವಣೆಯೆಡೆಗೆ ಹೆಜ್ಜೆಗಳನ್ನಿಡಲು ದೀವಿಗೆಯಾಗಲಿ ಈ ಹೊತ್ತಗೆ ಎಂಬ ಆಶಯ ನಮ್ಮದು. ಓದಿರಿ, ಜಾರಿಗೆ ತನ್ನಿ, ಬದಲಾವಣೆಗೆ ಕಾರಣರಾಗಿರಿ.

ಹೊತ್ತಗೆಗಾಗಿ ಸಂಪರ್ಕಿಸಿ...

ಈ ಪುಸ್ತಕದ ತುಂಬಾ ಅಂದವಾದ ವ್ಯಂಗ್ಯಚಿತ್ರಗಳು, ಕಿರುಸಂದೇಶಗಳು ಇದ್ದು 5 X 7 ಇಂಚು ಅಳತೆಯಲ್ಲಿ 56 ಪುಟಗಳಿವೆ. ಬಿಡುಗಡೆಗೆ ಬಂದಿದ್ದ ಗೆಳೆಯರೆಲ್ಲ ‘ಈ ಹೊತ್ತಗೆ ಆಕರ್ಷಕವಾಗಿ ಮೂಡಿ ಬಂದಿದೆ’ ಎಂದು ಬೆನ್ನು ತಟ್ಟಿದರು. ನೀವೂ ಈ ಪುಸ್ತಕವನ್ನು ಪಡೆದುಕೊಳ್ಳಬೇಕೆಂದಿದ್ದಲ್ಲಿ kacheri@banavasibalaga.org ಗೆ ಬರೆಯಿರಿ. ನಿಮಗೆ ಬೇಕಿರುವಷ್ಟು ಪ್ರತಿಗಳನ್ನು ಪಡೆದುಕೊಳ್ಳಿರಿ.

16 comments:

  1. ಮೆಚ್ಚುಗೆ..

    ReplyDelete
  2. ಕಾರ್ಯಕ್ರಮ ಚೆನ್ನಾಗಿ ಆಯಿತು. ಪುಸ್ತಕವೂ ಚೆನ್ನಾಗಿದೆ. ಅದರ ವಿಚಾರಗಳನ್ನು ಹೆಚ್ಚು ಜನರಿಗೆ ತಲುಪಿಸುವ ಕೆಲಸ ನಮ್ಮದಿದೆ.

    ReplyDelete
  3. ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತ ಸಂಸ್ಥೆಗಳಲ್ಲಿ ಬನವಾಸಿ ಬಳಗ ಇರಬೇಕು. ನಿಮ್ಮ ಶ್ರಮಕ್ಕೆ ಕನ್ನಡಿಗ ಚಿರರುಣಿಯಾಗಿರಬೇಕು.

    ಭಾಸ್ಕರ್

    ReplyDelete
  4. ಶುಭಾಶಯಗಳು, ಶಾಮ್, ದಟ್ಸ್ ಕನ್ನಡ.ಕಾಂ

    ReplyDelete
  5. ಹೊತ್ತಿಗೆ ಅಲ್ಲ ಬುದ್ದಿ.. ಹೊತ್ತಗೆ....

    ಹೊತ್ತಿಗೆ ಅಂದರೆ ಅಂದರೆ ಬೇರೆ ಅರ‍್ತ ಬರ‍್ತದೆ.

    ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು

    book ನಾಮಪದ
    ಪುಸ್ತಕ, ಗ್ರಂಥ, ಹೊತ್ತಗೆ

    ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

    book ನಾಮಪದ
    ಕಡತ, (ಹಳೇ ಕಡತ), ಹೊತ್ತಗೆ

    ReplyDelete
  6. ಧನ್ಯವಾದ - ಬದಲಾಯಿಸಲಾಗಿದೆ - ಸಂಪಾದಕರು

    ReplyDelete
  7. bhale..mechige..sorry machuge..alla..mechuge..

    ReplyDelete
  8. ಪ್ರೀತಿಯ ಮಾಯ್ಸ ಅವರೇ,
    ನೀವು ತಿಳಿಸಿದಂತೆ ಶಂಕರಬಟ್ ಮತ್ತು ಜಿ.ವೆಂ. ಅವರ ನಿಘಂಟಿನಲ್ಲೂ ಹೊತ್ತಗೆ ಎಂದೇ ಇದೆ. ಆದರೆ ಜನರು, ಬಳಕೆಯಲ್ಲಿ ಹೊತ್ತಿಗೆ ಅನ್ನುವುದೂ ಉಂಟು.ಕನ್ನಡ ಸಾಹಿತ್ಯ ಪರಿಷತ್ತಿನವರು ೨೦೦೧ರಲ್ಲಿ ಹೊರತಂದಿರುವ ಸಂಕ್ಷಿಪ್ತ ಕನ್ನಡ ನಿಘಂಟು (ಪರಿಷ್ಕೃತ) ಪುಸ್ತಕದ ೧೪೨೧ನೇ ಪುಟದಲ್ಲಿ ಹೊತ್ತ(ತ್ತಿ)ಗೆ (ನಾ): ಗ್ರಂಥ, ಪುಸ್ತಕ ಎಂದು ಕೊಟ್ಟಿದ್ದಾರೆ. ಇದು ನಿಮ್ಮ ಮಾಹಿತಿಗಾಗಿ - ಸಂಪಾದಕರು

    ReplyDelete
  9. ಮಹಾಸ್ವಾಮಿ

    ಹೊತ್ತಿಗೆ ಎಂದರೆ ಸರಿಯಾದ ಸಮಯಕ್ಕೆ ಎಂಬ ಅರ್ಥವೂ ಇದೆಯಲ್ಲ. "ಹೊತ್ತಿಗೆ ಬರದ ಗಂಡ", "ಹೊತ್ತಿಗೆ ಬಂದ ಮಳೆ" ಹೀಗೆಲ್ಲ ಕನ್ನಡದಲ್ಲಿ ಬಳಕೆಗಳುಂಟು.

    ಹಾಗೆ ಕನ್ನಡದಲ್ಲಿ "ಹೊತ್ತಗೆಯ ಬಿಡುಗಡೆ" ಎಂದಿರಬೇಕು.. ಹೊತ್ತಗೆಬಿಡುಗಡೆ ನಡೆಯುವುದು. ಇನ್ನು "ಹೊತ್ತಗೆ ಬಿಡುಗಡೆ" ಅಪ್ಪಟ ಆಂಗ್ಲ ವ್ಯಾಕರಣ.

    ನಿಮ್ಮ ಶಂಕರ’ಬ’ಟ್ಟರು ಮಹಾಪ್ರಾಣ ಬಿಡು ಎನ್ನುವುದರ ಜತೆ, ವಿಭಕ್ತಿಗಳನ್ನು ಬಿಡಲು ಹೇಳಿರಿವರೇನೋ!

    ಏನೇ ಆದರು ನಿಮ್ಮ ಲೇಖನಗಳು ಭಾಷೆಯಲ್ಲೂ, ವಿಷಯದಲ್ಲೂ ಅತ್ಯುತ್ತಮ.

    ನಿಮ್ಮ ಕನ್ನಡ ಸೇವೆಗೆ ಅನಂತಾನಂತ ಧನ್ಯವಾದ!

    ReplyDelete
  10. Guru, itteechege bidugadeyaada 'kannada uccharaNeya lopadoshagaLu ', by Dr mooshika bhat annu khanDita kondu odi.

    ReplyDelete
  11. Mr. Maaysaa,

    vyangya biTTu viShaya maataaDi. neevu shankara bhat avara hesarannu bEDadeyE nimma vyangyOktiyalli baLasiddeeri.. nimma commment na kaDeya vaakya nODi.
    "nimma kannaDa sEvege anantaanantha dhaynyavaada" antaa bareyOdoo adE reeti alvaa? adu nimma kannaDada sEvege antaa bareebEkittalvaa? ananthaananthavaada dhanyavaada alvaa? neevu barediruvudaraMteyE hottige biDugaDe alvaa? neevoo shankara bhat avara baLi paaThakke hOgiddirEnu? "kannaDa Eve" antaa bareyalu? pustaka biDugaDe, maLe bartide, haaDu kELu antaa baLasuvaaga da, yu, annu biTtu hOgOdu tappallaa... sari. adu kannadada sogaDu alvaa?
    Enguru nimma salahe sveekarisuva doDdaguNa tOrida mEloo vyavgyada koMkina saNNaguNa nimage shObhe allaa.

    namaskaara

    sundar

    ReplyDelete
  12. ಕನ್ನಡದ ಸೇವೆ ಸರಿ.. ಕನ್ನಡ ಸೇವೆ ತಪ್ಪು... ಇಲ್ಲ ಕನ್ನಡಸೇವೆ ಎಂದು ಸೇರಿಸಿಬರೆಯಬೇಕು. ನಾನೂ ತಪ್ಪುಬರೆದುಬಿಟ್ಟೆನು.

    ಅನಂತಾನಂತವಾದ ಧನ್ಯವಾದ ಹಾಗು ಅನಂತಾನಂತ ಧನ್ಯವಾದ ಎರಡೂ ಸರಿ.. ಏಕೆಂದರೆ ಅನಂತಾನಂತ ಸಂಸ್ಕೃತದಲ್ಲಿ ವಿಶೇಷಣವೂ ಹೌದು, ನಾಮಪದವೂ ಹೌದು.

    "ರಾಮನ ಮದುವೆ" ಸರಿ, "ರಾಮ ಮದುವೆ" ತಪ್ಪು
    "ಖೈದಿಯ ಬಿಡುಗಡೆ" ಸರಿ "ಖೈದಿ ಬಿಡುಗಡೆ" ತಪ್ಪು.

    ನಾನು ಹೇಳಬಯಸಿದ್ದು.. ನೀವು ಬರೆಯುವ ಲೇಖನಗಳು ತುಂಬಾ ಸಣ್ಣಪುಟ್ಟ ಪದದೋಷಗಳಿಂದ ಹಿಡಿದು, ವಾಕ್ಯರಚನೆ, ವಿಭಕ್ತಿ ಮುಂತಾದ ದೊಡ್ಡದೊಡ್ಡ ತಪ್ಪುಗಳೂ ಕಾಣುವುವು.

    ಅಭಿಪ್ರಾಯವನ್ನು ಬರೆಯುವಾಗ ಲೇಖನವನ್ನು ಬರೆಯುವಷ್ಟು ವ್ಯವಧಾನವಾಗಲಿ, ಜಾಗೃತಿಯಾಗಿಗಲಿ ಅಭಿಪ್ರಾಯಿಗಳಿಗೆ ಇರುವುದಿಲ್ಲ.

    ನಿಮ್ಮ ಕನ್ನಡದ ಬರಹಗಳೆಲ್ಲ, ಇಂಗ್ಲೀಷಿನ ವ್ಯಾಕರಣವನ್ನು ಪಾಲಿಸುವುದು, ನಮ್ಮ ಕನ್ನಡದ ಪತ್ರಿಕೆಗಳಂತೆ. ಹೆಚ್ಚುಕಡಮೆ ಎಲ್ಲ ಇಂಗ್ಲೀಷಿನ ಅನುವಾದಗಳೆನಿಸುವುವು.

    ಆಡುಗನ್ನಡದ ಸೊಗಡೆಂದು, ಬರಹಗನ್ನಡದ ಅಂದವಾದ ವ್ಯಾಕರಣದ ಚೌಕಟ್ಟನ್ನು ಬೇಕಾಬಿಟ್ಟಿ ಉಡಾಯಿಸದರೆ, ಅದು ಭಾಷೆಗೆ ಹಾನಿ. ದಯವಿಟ್ಟು ಅತ್ತ ತುಸು ಜಾಗೃತಿಯಿರಲಿ.

    ಮಿಕ್ಕಿದ್ದು ನಿಮ್ಮ ಇಷ್ಟ.

    ಸುಂದರ‍್.. ನಿಮ್ಮ ಬರಹದಲ್ಲಿ ತಪ್ಪುಗಳೇ ಇಲ್ಲ, ಆಣಿಕನ್ನಡ.. :D

    ReplyDelete
  13. ಒಂದು ಅದ್ವಿತೀಯ ಅನುಭವಕ್ಕೆ ಈ ಬ್ಲಾಗ್ ಪುಟಗಳು ಎಡೆ ಮಾಡಿಕೊಟ್ಟಿದೆಯೆಂದರೆ ಅತಿಶಯೋಕ್ತಿಯಾಗಲಾರದು ಎನ್ನಿಸುತ್ತೆ! Maaysaರ observations ಹಾಗೂ ಅವರ ಅಭಿಪ್ರಾಯಗಳು ಸ್ವಾಗತಾರ್ಹ, ಹಾಗೆಯೇ ಅದರ ಬಗೆಗಿನ ಬೇರೆಯವರ ವಾದಗಳೂ ಸಹ ಸುಂದರವಾಗಿದೆ. ಅಂತೂ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಮೆಚ್ಚಿ ಹೊಗಳಿದ "ಕಂ-ನುಡಿ" ಅರ್ಥಾತ್ ಕನ್ನಡದ ಕಸ್ತೂರಿ ಸುವಾಸನೆ ಈ ರೀತಿಯ ಆರೋಗ್ಯಕರ ಚರ್ಚೆ ಹಾಗೂ ವಾದದ ಘರ್ಷಣೆಗಳಿಂದಾದರೂ ನಮ್ಮ ಮನವನ್ನು ತಣಿಸುತ್ತಾ ರಂಜಿಸುತ್ತಾ ಕನ್ನಡದ ಕಂಪು ಅಂತರ್ಜಾಲದಲ್ಲಿ ಪಸರಿಸುವಂತಾಗಲಿ.

    ಬನವಾಸಿ ಬಳಗದ ಈ ಪ್ರಯತ್ನಕ್ಕೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಮನಃಪೂರ್ವಕ ಮೆಚ್ಚುಗೆ ಸದಾ ಹರಿಯುತ್ತಿರುತ್ತದೆ.

    ಸಿರಿಗನ್ನಡಂ ಗೆಲ್ಗೆ ~ ಸಿರಿಗನ್ನಡಂ ಬಾಳ್ಗೆ || ಜೈ ಕರ್ಣಾಟಕ ಮಾತೆ || ಜೈ ಭುವನೇಶ್ವರಿ ||
    ಶಂ ಸರ್ವೇಭ್ಯಃ||
    ಪ್ರೀತ್ಯಾದರಗಳೊಂದಿಗೆ
    ಸುದರ್ಶನ್ ಬೆಂ. ನ.

    ReplyDelete
  14. kannadalli anisike baredilla kshame irali, nanu akasmikavagi i pustaka bidugade samarabhakke hogidde. karykrama atyntha arthapoornavagi kannadalle nadesikotta banavasi balagada geleyarige dhanyavadagalu. nimma yogenegala bagge vivarane keli bahala bahala santhosa aitu. kannada nashisi hoguttade yendu yaru heluttare banavai balagada taraha sanghatanegalu yuvakr mundalatvadalli matu kadime kelasa hechhu madidaga.
    muniduvarasi i nimma abhiyana niranthravagi nadeyali nimma kannada nadu nudi seve jai karnataka kannada kannda yenni
    yennada yennda bidi

    ReplyDelete
  15. ಕನ್ನಡ ಭಾಷೆಯ ಏಳಿಗೆಗೆ ಕಿಂಚಿತೂ ಸ್ವಾರ್ಥವಿಲ್ಲದೆ ಕಾರ್ಯಪ್ರವೃತ್ತಿಯಲಿ ತೊಡಗಿರುವ ಬನವಾಸಿ ಬಳಗದ ಎಲ್ಲ ಸದಸ್ಯರುಗಳಿಗೆ
    ನನ್ನ ಅಭಿಮಾನ ಪೂರ್ವಕ ವಂದನೆಗಳು. ನಿಮ್ಮಗಳ ನಿಸ್ವಾರ್ಥಭರಿತವಾದ ಇವೊಂದು ಕಾಯಕ ಎಂದೆಂದೂ ಹಚ್ಚ ಹಸಿರಾಗಿರಲಿ.

    ReplyDelete

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!