ಇದು ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?

ಶ್ರೀಮತಿ ಹೇಮಾಮಾಲಿನಿಯವರನ್ನು ರಾಜ್ಯಸಭೆಗೆ ಬಿಜೆಪಿಯೋರು ಕಣಕ್ಕಿಳಿಸಿರೋದನ್ನು ಸಮರ್ಥಿಸಿ ನಿನ್ನೆಯ (02.03.2011ರ) ಹೊಸದಿಗಂತ ದಿನಪತ್ರಿಕೆಯ 6ನೇ ಪುಟದಲ್ಲಿ ಶ್ರೀ ಸಂತೋಶ್ ತಮ್ಮಯ್ಯ ಅನ್ನೋರು ಬರೆದಿರೋ ಅಂಕಣ ಪ್ರಕಟವಾಗಿದೆ. ಗಿರೀಶ್ ಕಾರ್ನಾಡ್ ಅವರು ಹೇಮಾಮಾಲಿನಿಯವರನ್ನು ದಡ್ಡಿ ಎಂದು ಕರೆದಿದ್ದಾರೆ ಅನ್ನೋದನ್ನು ಕೇಂದ್ರವಾಗಿಸಿಕೊಂಡು ಹೇಮಾ ಉಮೇದುವಾರಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಇರಾದೆ ಈ ಬರಹದಲ್ಲಿ ಕಾಣ್ತಿದೆ.

ಸಮರ್ಥನೆಗೆ ಸಲ್ಲದ ವಾದ!

ಬರಹದಲ್ಲಿ ನಿಜಕ್ಕೂ ಹೇಮಮಾಲಿನಿಯವರು ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವುದಕ್ಕೆ ಮೂರು ಥರದ ಸಮರ್ಥನೆ ಕೊಡಲಾಗಿದೆ. ಮೊದಲನೆಯದು, ಇವರು ಯಾಕೆ ಸ್ಪರ್ಧಿಸಬಾರದು? ಎನ್ನುವ ನೆಲೆಗಟ್ಟಿನದ್ದು. ಎರಡನೆಯದು ಭಾರತೀಯತೆ, ಕಲಾ ಹಿನ್ನೆಲೆ ಮೊದಲಾದ ಅರ್ಹತೆಗಳನ್ನು ಮುಂದುಮಾಡಿರುವುದು ಮತ್ತು ಮೂರನೆಯದು ಇದಕ್ಕೆ ಆಕ್ಷೇಪ ಎತ್ತಿರುವವರ ಕುಂದುಗಳನ್ನೆತ್ತಿ ತೋರಿರುವುದು. ಈ ಮೂರೂ ಸಮರ್ಥನೆಗಳು ಸಾಗಿರುವ ದಾರಿ ಬರಹಗಾರರ ಪೂರ್ವಾಗ್ರಹ/ ಪೂರ್ವ ಪಕ್ಷಪಾತತನಗಳನ್ನು ಎತ್ತಿ ತೋರಿಸುತ್ತಿವೆ ಎಂಬುದು ಹದಿನಾರಣೆ ಸತ್ಯವಾದ ಸಂಗತಿಯಾಗಿದೆ.

ಯಾಕೆ ಸ್ಪರ್ಧಿಸಬಾರದು?

ಸಂವಿಧಾನದಲ್ಲಿ ಹೇಳಿರುವಂತಹ ‘ರಾಜ್ಯಸಭೆಗೆ ಸ್ಪರ್ಧಿಸಲು ಬೇಕಾದ ಅರ್ಹತೆಯ’ ಬಗ್ಗೆ ಇದರಲ್ಲಿ ಮಾತಾಡಿದ್ದಾರೆ. 30ವರ್ಷ ವಯಸ್ಸು ಆಗಿರಬೇಕು, ಭಾರತೀಯರಾಗಿರಬೇಕು, ದೀವಾಳಿಯಾಗಿಲ್ಲ, ಕ್ರಿಮಿನಲ್ ಅಲ್ಲಾ, ತಲೆ ನೆಟ್ಟಗಿದೆ… ಇತ್ಯಾದಿ ನಿಯಮಗಳನ್ನು ಹೇಮಾಮಾಲಿನಿಯವರು ಪೂರೈಸುತ್ತಾರೆ ಎನ್ನುತ್ತಾ ಅವರನ್ನು ಕಣಕ್ಕಿಳಿಸಿರುವುದನ್ನು ಸಮರ್ಥಿಸಿದ್ದಾರೆ. ಅವರು ಕನ್ನಡಿಗರಾಗಿರಬೇಕಾದ ಅಗತ್ಯವೇನಿಲ್ಲಾ, ಏಕೆಂದರೆ ಅರವತ್ತು ವರ್ಷದಿಂದ ಕನ್ನಡಿಗರು ಅಲ್ಲಿ ಹೋಗಿ ಕಿಸಿದಿರುವುದೇನು ಎಂದು ಸಾರಾಸಗಟಾಗಿ ಹಿಂದಿನ ಎಲ್ಲಾ ರಾಜ್ಯಸಭಾ ಸದಸ್ಯರನ್ನು, ಅವರ ಸಾಧನೆಯನ್ನೂ ಪಕ್ಕಕ್ಕೆ ಸರಿಸಿಬಿಡುತ್ತಾರೆ. ವೆಂಕಯ್ಯನಾಯ್ಡು ಅವರಿಂದ ಕರ್ನಾಟಕಕ್ಕೆ ಸಕ್ಕತ್ ಒಳ್ಳೇದಾಗಿದೆ ಹಾಗಾಗಿ ಹೇಮಾ ಆಯ್ಕೆ ಸರಿಯೆಂದೂ ವಾದಿಸಿದ್ದಾರೆ. ವೆಂಕಯ್ಯನಾಯ್ಡು ಅವರು ಕೃಷ್ಣಾ ನದಿ ನೀರು ಹಂಚಿಕೆಗೆ ಕರ್ನಾಟಕಕ್ಕೆ ಸಹಾಯ ಮಾಡಿದ್ದಾರೆ ಎಂದೂ ಘೋಷಿಸಿಬಿಡುತ್ತಾರೆ. ಸರಿ, ಹಾಗಾದರೆ ಕೃಷ್ಣಾ ತೀರ್ಪಿನಲ್ಲಿ ನೂರು ಟಿಎಂಸಿಯಷ್ಟು ಕಡಿಮೆ ನೀರು ನಮಗೆ ಸಿಕ್ಕಿದ್ದು ಯಾಕೆ? ಹೋಗಲೀ, ನಾಳೆ ಹೇಮಾಮಾಲಿನಿಯವರು ಕಾವೇರಿ, ಹೊಗೇನಕಲ್ ಇತ್ಯಾದಿ ಸಮಸ್ಯೆಗಳ ಚರ್ಚೆ ಸಂಸತ್ತಿನಲ್ಲಿ ನಡೆಯುವಾಗ ಯಾವ ರಾಜ್ಯದ ಪರ ವಹಿಸುತ್ತಾರೆ? ಕರ್ನಾಟಕದ ಪರ ದನಿ ಎತ್ತಬಲ್ಲರೇ? ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನು ತಿಳಿದಿದೆ ಅವರಿಗೆ? ಕರ್ನಾಟಕದ ಪರ ನಿಲ್ಲಬೇಕಾದ ಅನಿವಾರ್ಯತೆಯಾದರೂ ಏನಿದೆ? ಅದಕ್ಕೇ ನಾವು ಹೇಳಿದ್ದು... ಬರೀ ಭಾರತೀಯರಾದ್ರೆ ಸಾಲದು, ಕರ್ನಾಟಕದ ಕಡೆಗೊಂದು ಪ್ರಶ್ನಾತೀತ ಬದ್ಧತೆ ಇರಬೇಕು ಅಂತಾ.

ಉತ್ತಮ ಅಭ್ಯರ್ಥಿಯ ಅರ್ಹತೆ!

ಹೇಮಾಮಾಲಿನಿಯವರು ಸಂವಿಧಾನವು ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಇರಬೇಕೆಂದು ನಿಗದಿಪಡಿಸಿದ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದಾರೆ ಎನ್ನುವುದರಲ್ಲಿ ಸಂದೇಹವೇನಿಲ್ಲ. ಆದರೆ ಇವರನ್ನು ರಾಜ್ಯಸಭೆಗೆ ಕಳಿಸಲು ಇದೆಲ್ಲಾ ಮಾನದಂಡಗಳಿಗೂ ಮಿಗಿಲಾದ ಅರ್ಹತೆ ಇರಬೇಕಾಗುತ್ತದೆ ಎಂಬುದನ್ನು ಮರೆಮಾಚುತ್ತಿದ್ದಾರೆ. ಜೊತೆಗೆ ಭಾರತದಲ್ಲಿ ರಾಜ್ಯಸಭೆಯೆನ್ನುವ ಸಂಸತ್ತಿನ ಮೇಲ್ಮನೆಯನ್ನು ಯಾಕೆ ಸ್ಥಾಪಿಸಲಾಗಿದೆ? ಇದು ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಬಲಪಡಿಸಬಲ್ಲದು? ಎಂಬುದನ್ನು ಲೆಕ್ಕಕ್ಕಿಲ್ಲದ ವಿಷಯವಾಗಿಸುತ್ತಿದ್ದಾರೆ. ಇವರೊಬ್ಬ ಶ್ರೇಷ್ಠ ಕಲಾವಿದೆಯಾಗಿದ್ದಾರೆ ಎನ್ನುವುದೇ ಮಾನದಂಡವಾಗಿದ್ದಲ್ಲಿ ಬಿ.ಜಯಶ್ರೀಯವರಂತೆ ನಾಮಕರಣಗೊಂಡ ಸದಸ್ಯೆಯಾಗಬಹುದಿತ್ತಲ್ಲವೇ? ಅದಕ್ಕೂ ಕೋಟಾ ಇದೆಯಲ್ಲಾ? ಕರ್ನಾಟಕದಿಂದ ರಾಜ್ಯಸಭೆಗೆ ಹೋದ ಕನ್ನಡಿಗರು ಅಯೋಗ್ಯರಾಗಿದ್ದಾರೆ ಅಂದ ಮಾತ್ರಕ್ಕೆ ಅಭ್ಯರ್ಥಿಯ ಅಯೋಗ್ಯತನವನ್ನೇ ಮಾನದಂಡವಾಗಿಸಬಾರದಲ್ಲವೇ? ಇಲ್ಲಿನವರು ಯೋಗ್ಯರಿಲ್ಲಾ ಅದಕ್ಕೆ ಅಲ್ಲಿನವರನ್ನು ಕಣಕ್ಕಿಳಿಸುತ್ತಿದ್ದೇವೆ ಎನ್ನುವ ಮಾತಿಗೆ “ಇಡೀ ಕರ್ನಾಟಕದಿಂದ ಒಬ್ಬರೂ ಯೋಗ್ಯರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ?” ಎಂದು ಕೇಳಿರುವುದು ಸರಿಯಾಗೇ ಇದೆಯಲ್ಲವೇ?

ಆಕ್ಷೇಪ ಎತ್ತಿದವರ ಕೊರತೆಗಳ ಜಾಡಿನಲ್ಲಿ…

ಮಹಾಭಾರತ, ಭಗವದ್ಗೀತೆಯ ಉಕ್ತಿಗಳನ್ನು ಎತ್ತಿ ಆಡುತ್ತಾ ಸಂತೋಶ್ ಅವರು ಮೊದಲಿಗೆ ಗಿರೀಶ್ ಕಾರ್ನಾಡ್ ಅವರನ್ನು, ಅವರ ಅರಿವನ್ನೂ ಅರ್ಜುನನ ಪ್ರಜ್ಞಾವಾದವೆನ್ನುತ್ತಾ ಅದು ಅಪಕ್ವ, ಅಪ್ರಬುದ್ಧವೆಂದೂ, ಹಿಂದೂ ವಿರೋಧಿಯೆಂದೂ ಸ್ಥಾಪಿಸುವ ಯತ್ನ ಮಾಡಿದ್ದಾರೆ. ಅಲ್ಲಿಂದ ಕಾರ್ನಾಡ್ ಅವರು ಹೇಮಾಮಾಲಿನಿಯವರನ್ನು ಖಂಡಿಸಿ, ಗೆಳೆಯ ಮರುಳುಸಿದ್ದಪ್ಪನವರನ್ನು ಬೆಂಬಲಿಸಲು ಕನ್ನಡವನ್ನು ಅಸ್ತ್ರವಾಗಿ ಬಳಸಿದ್ದಾರೆ ಎಂಬ ನಿಲುವಿಗೆ ಬರುತ್ತಾರೆ. ಕರ್ನಾಟಕದ ಜ್ಞಾನಪೀಠಪ್ರಶಸ್ತಿ ವಿಜೇತರ ಪೈಕಿ ಏಳನೆಯವರಾದ ಕಾರ್ನಾಡರ ನಿಲುವು ಸಿದ್ಧಾಂತಗಳನ್ನು ಒಪ್ಪೋದೂ ಬಿಡೋದೂ ಜನಕ್ಕೆ ಬಿಟ್ಟಿದ್ದು. ನಾನಾ ವಿಷಯಗಳಲ್ಲಿ ಕಾರ್ನಾಡರು ನಡೆದುಕೊಂಡಿರುವುದಕ್ಕೂ, ಅವರ ನಿಲುವುಗಳಿಗೂ ಅಸಮ್ಮತಿ ಹೊಂದುವ ಅಧಿಕಾರ ಇದ್ದೇ ಇದೆ. ಆದರೆ ರಾಜ್ಯಸಭೆಗೆ ಪರಭಾಷಿಕರನ್ನು ಕಳಿಸೋದಕ್ಕೆ ಸಮರ್ಥನೆಯಾಗಿ ಕಾರ್ನಾಡರ ತೂಕ ಅಳೆಯೋಕೆ ಮುಂದಾಗೋದಾಗಲೀ, ಅವರು ಆಸೆಪಟ್ಟು ಕೈತಪ್ಪಿದ್ದಕ್ಕಾಗಿ ರಾಜ್ಯಸಭೆಗೆ ಹೇಮಮಾಲಿನಿಯವರನ್ನು ವಿರೋಧಿಸುತ್ತಿದ್ದಾರೆ ಎನ್ನುವುದಾಗಲೀ ಸೊಂಟದ ಕೆಳಗಿನ ಆಕ್ರಮಣವೇ ಆಗಿಲ್ಲವೇ? ಸೈದ್ಧಾಂತಿಕ ವಿರೋಧ ಏನೇ ಇರಲಿ, ನಾಡಿನ ಹಿರಿಯ ಜ್ಞಾನಪೀಠ ಪ್ರಶಸ್ತಿ ಪಡೆದು, ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಹೀನಾಯವಾಗಿಸಿ ಬರಹ ಬರೆದಿರೋದು ಇಡೀ ಕನ್ನಡಿಗರನ್ನು ಅಪಮಾನಿಸಿದಂತೆ ಅಲ್ಲವೇ? ಒಟ್ಟಾರೆ ವೈಯುಕ್ತಿಕವಾಗಿ ಆಕ್ರಮಣ ಮಾಡೊ ಈ ಪ್ರಯತ್ನ ವಿಷಯಾಂತರದ ಪ್ರಯತ್ನಗಳಲ್ಲದೇ ಮತ್ತೇನಲ್ಲ.

ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?

“ದೇಶ ಮೊದಲು, ಭಾರತೀಯತೆ ಮೊದಲು. ಉಳಿದದ್ದೆಲ್ಲಾ ಪ್ರಾದೇಶಿಕ ರಾಷ್ಟ್ರವಾದದ ಮಹಲುಗಳು,ಅಮಲುಗಳು” ಇತ್ಯಾದಿ ಮಾತಾಡುವವರಿಗೆ ಹಿಡಿದಿರುವುದು ಹುಸಿ ರಾಷ್ಟ್ರೀಯತೆಯ ಅಮಲಲ್ಲದೇ ಮತ್ತೇನು? ಕನ್ನಡತನವೆನ್ನುವುದನ್ನು ಭಾರತೀಯತೆಯೇ ಎಂದು ಯೋಚಿಸಲಾಗದ, ಎರಡೂ ಒಂದಕ್ಕೊಂದು ಮುಖಾಮುಖಿಯಾಗುವ ಎದುರಾಳಿಗಳು ಎಂಬಂತೆ ಭ್ರಮಿಸುವ ಇಂಥಾ ಮನಸ್ಥಿತಿಗೇನೆಂದು ಹೇಳುವುದು? ಅಷ್ಟಕ್ಕೂ ಭಾರತೀಯತೆಯೊಂದೇ ನಮ್ಮ ಜನಪ್ರತಿನಿಧಿಗಿರಬೇಕಾದ ಮಾನದಂಡ ಎನ್ನುವುದು ಆಳದಲ್ಲಿ ವೈವಿಧ್ಯತೆಯನ್ನು ವಿರೋಧಿಸುವ ಮನಸ್ಥಿತಿಯೇ ಆಗಿದೆ. “ರಾಜ್ಯಸಭಾ ಅಭ್ಯರ್ಥಿಯಾಗೋರು ಹಳಗನ್ನಡ, ನಡುಗನ್ನಡ ಕಲಿತಿರಬೇಕೆಂದು ಸಂವಿಧಾನ ಹೇಳಿಲ್ಲ, ಇವರ ಸ್ಪರ್ಧೆಯನ್ನು ವಿರೋಧಿಸುವುದು ಸಂವಿಧಾನ ವಿರೋಧಿ” ಎಂದು.. ಈಗ ಭಾರತೀಯ ಸಂವಿಧಾನಕ್ಕೆ ಬಲು ನಿಷ್ಠೆ ತೋರಿಸುತ್ತಿರುವಂತೆ ಬೊಬ್ಬಿರಿಯುತ್ತಿರುವ ಇದೇ ಜನರು ಹಿಂದೆಲ್ಲಾ ಎಲ್ಲಾ ವಿಷಯಗಳಲ್ಲೂ ಸಂವಿಧಾನಕ್ಕೆ ಹಾಗೇ ನಿಷ್ಠೆ ತೋರಿದ್ದಾರೇನು? ತಾವು ಪ್ರತಿಪಾದಿಸೋ ಹಿಂದುತ್ವದ ಹೋರಾಟಗಳಿಗೆಲ್ಲಾ ಇದೇ ಸಂವಿಧಾನದ ಬದ್ಧತೆಯ ಮಾತಾಡ್ತಾರೇನು? ಊಹೂಂ... ಆಗೆಲ್ಲಾ ಭಾರತದ ಸಂವಿಧಾನ ಬದಲಾಯಿಸಬೇಕು ಅಂತಾರೆ. ಇಂಥಾ ಅನುಕೂಲಕ್ಕೆ ತಕ್ಕ ವಾದಾ ಮಾಡೋದನ್ನು ಜನರು ಗುರುತಿಸಲಾರರಾ ಗುರೂ?

ಇವರ ಸಿದ್ಧಾಂತವೇ ವೈವಿಧ್ಯತೆ ಒಪ್ಪಿಲ್ಲ!

ಭಾರತೀಯ ಸಂವಿಧಾನವು ರಾಜ್ಯಸಭಾ ಅಭ್ಯರ್ಥಿಗಳು ತಾವು ಪ್ರತಿನಿಧಿಸುವ ರಾಜ್ಯದವರೇ ರಾಜ್ಯದವನಾಗಿರಬೇಕು ಎಂದಿದುದನ್ನು ತಿದ್ದಿದೋರು ಯಾರು? ಇದೇ ಬಿಜೆಪಿಯವರೇ ತಾನೇ? ರಾಜ್ಯಸಭೆಗೆ ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಮತದಾರರು ಮಾತ್ರವೇ ಆಯಾ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಬಹುದು ಅನ್ನುವ ಕಟ್ಟಳೆಯಿತ್ತು. ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ರಾಜ್ಯಸಭೆಯ ಆಯ್ಕೆ ಮಾನದಂಡವನ್ನು ತಿಳಿಸುವ ಪೀಪಲ್ಸ್ ರೆಪ್ರಸೆಂಟೇಟಿವ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆಯಾ ರಾಜ್ಯದವರೇ ಆಗಿರಬೇಕು ಅನ್ನುವ ಕಾನೂನು ತೆಗೆದು ರಾಜ್ಯಸಭೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಅನ್ನುವ ಬದಲಾವಣೆ ತಂದಿತು. ಆ ತಿದ್ದುಪಡಿ ಇಲ್ಲಿದೆ (ಪುಟ 4 ಅನ್ನು ಗಮನಿಸಿ)
In order to be chosen a member of Rajya Sabha, a person (a) must be a citizen of India, (b) must not be less than 30 years of age. Under the Representation of the People Act, 1951, a person had to be an elector in a parliamentary constituency in the State from where he seeks election to Rajya Sabha. It may, however, be mentioned that the Representation of the People (Amendment) Act, 2003, which amended Section 3 of the Representation of the People Act, 1951, has done away with the requirement of being a resident of State or Union territory from which a person seeks to contest elections to RajyaSabha.
ಇವತ್ತು ಅದೇ ಪಕ್ಷದ ಸರ್ಕಾರ ಕರ್ನಾಟಕದಿಂದ ವೆಂಕಯ್ಯನಾಯ್ಡುವಿನ ನಂತರ ಹೇಮಾಮಾಲಿನಿಯೆಂಬ ಕನ್ನಡೇತರರನ್ನು ಕರ್ನಾಟಕದ ಪ್ರತಿನಿಧಿಗಳಾಗಿ ರಾಜ್ಯಸಭೆಗೆ ಕಳಿಸುತ್ತಿದೆ. ಇದಕ್ಕೆ ಕಾರಣ ಇರೋದೇ ಬಿಜೆಪಿಯ ಮೂಲ ಸಿದ್ಧಾಂತದಲ್ಲಿ ಅನ್ನಿಸಲ್ವಾ ಗುರೂ? ಇಲ್ದಿದ್ರೆ ಕಣ್ಣೆದುರು ಕಾಣೋ ಕನ್ನಡವನ್ನು, ಕರ್ನಾಟಕವನ್ನು ಕಡೆಗಣಿಸೋ ಥರಾ ಯಾಕೆ ನಡ್ಕೋತಿದ್ರು? ಪ್ರತಿ ಪ್ರದೇಶದ ಅನನ್ಯತೆಯನ್ನು ಉಳಿಸೋಕೊಳ್ಳೋ ಮನಸ್ಥಿತಿಯೇ ಇಲ್ಲದೆ ಎಲೇ ಮೇಲಿರೋ ಅನ್ನ, ಸಾರು, ಪಾಯಸ, ಕೋಸಂಬರಿ, ಉಪ್ಪಿನಕಾಯಿ, ಚಿತ್ರಾನ್ನ, ಹೋಳಿಗೆ ಎಲ್ಲಾನೂ ಊಟಾನೇ ಅಂತಾ ಕಲಸಿಬಿಡೋ ಮನಸ್ಥಿತಿ ತೋರುಸ್ತಿದ್ರಾ ಗುರೂ?

ಹೇಮಾಮಾಲಿನಿಯ ಸ್ಪರ್ಧೆಯನ್ನು ಬೆಂಬಲಿಸುತ್ತಿರುವವರು ಹಾಗೆ ಮಾಡಲು ನಿಜಕ್ಕೂ ಇರುವ ಕಾರಣವಾದರೂ ಏನೆಂದು ಹುಡುಕಿದರೆ ಕಾಣುವುದು ಇಲ್ಲಾ ಬಿಜೆಪಿಯೆಡೆಗಿನ ಪಕ್ಷನಿಷ್ಠೆ. ಅದಲ್ಲದಿದ್ದಲ್ಲಿ ರಾಜ್ಯಸಭೆ ಯಾಕಿದೆ? ಪ್ರಜಾಪ್ರಭುತ್ವ ಎಂದರೇನು? ಜನ ಪ್ರತಿನಿಧಿ ಎಂದರೇನು? ಎಂಬ ಅರಿವಿರದ ಹುಸಿ ರಾಷ್ಟ್ರೀಯತೆಯ ಮಾಯೆಯ ಪೊರೆ. ನೀವೇನಂತೀರಾ ಗುರೂ!

2 ಅನಿಸಿಕೆಗಳು:

Anonymous ಅಂತಾರೆ...

ಇದು ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?
Second one is Yes but first one is NO.
Its totally a different topic. as they have not done any thing against to RASTRA.

Please think before giving title..........

manju ಅಂತಾರೆ...

ರಾಜ್ಯಸಭೆಯೊ೦ದು ನಿರರ್ಥಕ ಐರಾವತ ಎ೦ದು ಗೊತ್ತಿರುವ, ರಾಜಕೀಯವೇ ಹೊಲಸು ರಾಡಿಯಾಗಿದೆ ಎ೦ದೂ ಗೊತ್ತಿರುವ ಸಾಹಿತಿಗಳು ಏಕಾದರೂ ರಾಜಕಾರಣಿಗಳ ಆಮಿಷಕ್ಕೆ ಬಲಿಯಾಗಿ ರಾಜಕೀಯಕ್ಕಿಳಿಯಬೇಕು? ನಮ್ಮದು "ಕನ್ನಡ ಪ್ರೇಮ" ಎ೦ದು ಸುಮ್ಮನೆ ಹುಯಿಲೆಬ್ಬಿಸುವ ಬದಲು ಕನ್ನಡದ ಉದ್ಧಾರಕ್ಕಾಗಿ ಸಾಹಿತಿಗಳು ಮಾಡಬೇಕಾದ ಕೆಲಸಗಳು ಇನ್ನೂ ಸಾಕಷ್ಟಿವೆ, ಅವುಗಳಲ್ಲಿ ಗ೦ಭೀರವಾಗಿ ಯಾಕೆ ತೊಡಗಿಕೊಳ್ಳಬಾರದು? ಅರ್ಥವಾಗದ ಮಿಲಿಯನ್ ಡಾಲರ್ ಪ್ರಶ್ನೆ.

ಹೊಳೆನರಸೀಪುರ ಮ೦ಜುನಾಥ. ಬೆ೦ಗಳೂರು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails