ಉಚ್ಚ ನ್ಯಾಯಾಲಯದಲ್ಲಿ ಕನ್ನಡ: ರಾಜ್ಯಸರ್ಕಾರದ ಒಳ್ಳೆ ಹೆಜ್ಜೆ!


ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಕನ್ನಡದಲ್ಲಿ ತೀರ್ಪು ನೀಡಿದ ಹಲವು ನ್ಯಾಯಾಧೀಶರಿಗೆ ಸನ್ಮಾನ ಮಾಡುವ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ಕಾನೂನು ಮಂತ್ರಿಗಳು, ನಾಡಿನ ಹೈಕೋರ್ಟಿನಲ್ಲಿ ಕನ್ನಡದಲ್ಲೇ ಕಲಾಪ ನಡೆಯುವಂತೆ, ತೀರ್ಪು ನೀಡುವಂತಹ ವ್ಯವಸ್ಥೆ ಜಾರಿಗೊಳಿಸಲು ಬೇಕಿರುವ ಅಗತ್ಯ ಕಾನೂನು ತಿದ್ದುಪಡಿಯನ್ನು ಮಾಡಲು ರಾಜ್ಯಸರ್ಕಾರವು ಮುಂದಾಗುವುದಾಗಿ ತಿಳಿಸಿದರು. ಕೋರ್ಟುಗಳಲ್ಲಿ ಬಳಸುವ ಭಾಷೆಗಳ ಬಗ್ಗೆ ಭಾರತದ ಸಂವಿಧಾನ ಹೀಗೆನ್ನುತ್ತದೆ ನೋಡಿ:

ಸಂವಿಧಾನದ ಪುಟಗಳಲ್ಲಿ...

ಭಾರತೀಯ ಸಂವಿಧಾನದ XVIIನೇ ಭಾಗದ ಮೂರನೇ ಅಧ್ಯಾಯದ ೩೪೮ನೇ ವಿಧಿಯು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ಭಾಷೆ ಮತ್ತು ಮುಂತಾದವುಗಳ ಬಗ್ಗೆ ಹೀಗೆ ಹೇಳುತ್ತದೆ.
ಭಾರತ ಸಂವಿಧಾನ : : ಅಧ್ಯಾಯ ೩: ವಿಧಿ ೩೪೮
೧. ಕೆಳಗೆ ಹೇಳಿರುವ ಎಲ್ಲಾ ಅಂಶಗಳು ಇಂಗ್ಲೀಷಿನಲ್ಲಿ ಇರತಕ್ಕದ್ದು.
(a) ಸರ್ವೋಚ್ಚ ನ್ಯಾಯಾಲಯದ ಮತ್ತು ರಾಜ್ಯಗಳ ಉಚ್ಚ ನ್ಯಾಯಲಯಗಳ ನಡಾವಳಿಗಳು
(b) ಈ ಕೆಳಕಂಡ ವಿಷಯಗಳ ಅಧಿಕೃತ ಹೊತ್ತಗೆಗಳು
I. ಸಂಸತ್ತಿನ ಎರಡೂ ಸದನಗಳಲ್ಲಿ ಹಾಗೂ ರಾಜ್ಯದ ಶಾಸಕಾಂಗದಲ್ಲಿ ಮಂಡಿಸಲಾಗುವ ಅಥವಾ ಬದಲಾವಣೆಗೊಳಗಾಗುವ ಮಸೂದೆ.
II. ಸಂಸತ್ತಿನಲ್ಲಿ ಪಾಸಾಗುವ ಎಲ್ಲಾ ಕಾಯ್ದೆಗಳು ಅಥವಾ ರಾಜ್ಯದ ಶಾಸಕಾಂಗ ಪಾಸು ಮಾಡುವ ಕಾಯ್ದೆಗಳು ಮತ್ತು ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಹೊರಡಿಸುವ ತೀರ್ಮಾನಗಳು.
III. ಈ ಸಂವಿಧಾನದಲ್ಲಿರುವ ಆದೇಶಗಳು, ನಿಯಮಗಳು, ರೆಗ್ಯೂಲೇಟರ್‌ಗಳು ಮತ್ತು ಬೈ-ಲಾಗಳು ಮತ್ತು ಪಾರ್ಲಿಮೆಂಟ್ ಅಥವಾ ರಾಜ್ಯಸರ್ಕಾರಗಳು ಮಾಡುವ ಕಾನೂನುಗಳು
೨. ಈ ನಿಯಮದ ಅನ್ವಯ ಉಚ್ಚ ನ್ಯಾಯಾಲಯ ತೀರ್ಪು, ಡಿಕ್ರೀ ಅಥವಾ ಆದೇಶ ನೀಡಿಲ್ಲದೇ ಇದ್ದ ಪಕ್ಷದಲ್ಲಿ ಅಧಿನಿಯಮ(೧)ರ  ಉಪ ಅಧಿನಿಯಮ (ಎ)ನಲ್ಲಿ ಹೇಳಿರುವದನ್ನು ಹೊರತುಪಡಿಸಿ, ರಾಜ್ಯಪಾಲರು, ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ಹಿಂದಿ ಭಾಷೆ ಅಥವಾ ಬೇರೆ ಯಾವುದೇ ಭಾಷೆಯನ್ನು ರಾಜ್ಯದ ಆಡಳಿತದ ಉದ್ದೇಶಕ್ಕಾಗಿ, ಆ ರಾಜ್ಯದ ಒಳಗೇ ಇರುವ ಉಚ್ಚ ನ್ಯಾಯಾಲಯದ ನಡಾವಳಿಗಳಿಗಾಗಿ ಉಪಯೋಗಿಸಲು ಅಧಿಕಾರವನ್ನು ನೀಡಬಹುದು: 
(೩) ಅಧಿನಿಯಮ (೧)ರ ಉಪ ಅಧಿನಿಯಮ (ಬಿ)ನಲ್ಲಿ ಹೇಳಿರುವುದನ್ನು ಹೊರತುಪಡಿಸಿ ಒಂದು ರಾಜ್ಯವು ಇಂಗ್ಲೀಷ್ ಅಲ್ಲದೇ ಬೇರೆ ಭಾಷೆಯನ್ನು ಕೋರ್ಟಿನ ತೀರ್ಪು, ಆದೇಶ, ನಿಯಮಗಳಿಗಾಗಿ ಬಳಸಿದ್ದರೆ ಅಂತಹವುಗಳ ಇಂಗ್ಲೀಶ್ ಭಾಷೆಯ ಅಧಿಕೃತ ತರ್ಜುಮೆಯು ರಾಜ್ಯಪಾಲರ ಅಂಕಿತ ಪಡೆದುಕೊಂಡು ರಾಜ್ಯಪತ್ರದಲ್ಲಿ ಪ್ರಕಟವಾದ ತರ್ಜುಮೆಯದ್ದಾಗಿರುತ್ತದೆ.
ಅಂದರೆ  ಉಚ್ಚ ನ್ಯಾಯಾಲಯದ ಕಲಾಪವು ಇಂಗ್ಲೀಶಿನಲ್ಲಿರತಕ್ಕದ್ದು ಎನ್ನುವುದು ಮೂಲವಾಗಿದ್ದು, ರಾಜ್ಯ ಭಾಷೆಯಲ್ಲಿ ಬೇಕಾದರೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ರಾಜ್ಯಪಾಲರು ಅಧಿಕಾರ ನೀಡಬಹುದು ಎನ್ನಲಾಗಿದೆ. ಇದನ್ನು ಕಂಡಾಗ, ಒಂದು ನಾಡಿನ ವ್ಯವಸ್ಥೆಯನ್ನು ಜನಗಳ ಭಾಷೆಯಲ್ಲಿ ನಡೆಸುವುದು ಸರಿಯಾದ ವಿಧಾನ ಎಂದು ಭಾರತ ಸರ್ಕಾರ ಏಕೆ ಅರಿಯದೇ ಹೋಯಿತು? ಜನರ ಭಾಷೆಯಲ್ಲಿ ಕೋರ್ಟ್ ಕಲಾಪ ನಡೆಸಲು ಅವರಿಂದ ಇವರಿಂದ ಒಪ್ಪಿಗೆ ಪಡೆಯಬೇಕೆನ್ನುವ ತಿರುಗಣೆಯ ಸರ್ಕಸ್ ಯಾಕೆ? ಎಂದನ್ನಿಸದೇ ಇರದು.

ಏನಾದರೂ, ಕರ್ನಾಟಕ ರಾಜ್ಯಸರ್ಕಾರ ಮತ್ತು ಕಾನೂನು ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರು ಈಗ ಹೈಕೋರ್ಟಿನಲ್ಲೂ ಕನ್ನಡ ತರಲು ಮುಂದಾಗಿರುವುದು ಮೆಚ್ಚುಗೆಯ ವಿಷಯವಾಗಿದೆ. ಜನರ ಭಾಷೆಯಲ್ಲಿ ಆಡಳಿತ ನಡೆಸುವುದು ಜನಕ್ಕೂ, ಆಡಳಿತ ಯಂತ್ರಕ್ಕೂ, ಸರ್ಕಾರಕ್ಕೂ ಸಲೀಸು ಮತ್ತು ಅನುಕೂಲಕರವಾಗಿದೆ ಎನ್ನುವುದೇ ಸತ್ಯವಾಗಿದೆ. ಅಲ್ವಾ ಗುರೂ?

1 ಅನಿಸಿಕೆ:

Unknown ಅಂತಾರೆ...

ನಿಮ್ಮ ಬ್ಲಾಗ್ ಸೈಟ್ ತುಂಬಾ ಚೆನ್ನಾಗಿದೆ ಸರ್, ತುಂಬಾನೆ ನನಿಗೆ ತಿಳಿಯದ ಅನೇಕ ವಿಷಯಗಳನ್ನ ತಿಳಿದುಕೊಂಡೆ.ನನ್ನ್ಹಾಗೆಯೇ ತುಂಬಾ ಓದುಗರಿಗೂ ಸಹಕಾರಿಯಾಗಿದ್ದಿರಬಹುದೆಂದು ಭಾವಿಸ್ತೇನೆ...ನಿಮ್ಮ ಈ ಸಮಾಜ ಕಾರ್ಯಕ್ಕೆ..ಆಸಕ್ತಿಗೆ...ನಿಮ್ಮ ಈ ಶ್ರಮಕ್ಕೆ ಅನಂತಾನಂತ ದನ್ಯವಾದಗಳು ಸರ್...ಮುಂದೆಯೂ ನಿಮ್ಮ ಈ ಆಸಕ್ತಿ ಸದಾ ಇರಲಿ ಸರ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails