ಸಾಹಿತ್ಯ ಸಮ್ಮೇಳನದ ನಿರ್ಣಯಗಳೂ... ಭಾರತದ ಭಾಶಾನೀತಿಯೂ...

(ಫೋಟೋ ಕೃಪೆ : ಕನ್ನಡಪ್ರಭ)
ಕಳೆದ ಮೂರು ದಿನದಿಂದ ಗಂಗಾವತಿಯಲ್ಲಿ ನಡೆಯುತ್ತಿದ್ದ ಕನ್ನಡದ ನುಡಿಹಬ್ಬಕ್ಕೆ ನಿನ್ನೆ ತೆರೆ ಬಿದ್ದಿದೆ. ಲಕ್ಷಾಂತರ ಜನರು ಸೇರಿದ್ದ ಈ ಸಮ್ಮೇಳನದ ಉದ್ಘಾಟನೆಯ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಶ್ರೀ ಸಿ.ಪಿ.ಕೆ ಯವರು ಮಾಡಿದ ಭಾಷಣ ಕೇಳಿ ಅಂತೂ ಭಾರತದ ಹುಳುಕಿನ ಭಾಶಾನೀತಿಯ ಬಗ್ಗೆ ಸಾಹಿತ್ಯ ಸಮ್ಮೇಳನವು ದನಿ ಎತ್ತಿರುವುದು ಅರ್ಥಪೂರ್ಣವಾಗಿದೆ ಎನ್ನಿಸಿತ್ತು.

ಮೊದಲ ದಿನದ ಭಾಷಣದಲ್ಲಿ...

(ಫೋಟೋ ಕೃಪೆ : ಉದಯವಾಣಿ)
ಮೊದಲ ದಿನದ ಭಾಷಣದಲ್ಲಿ ಸಿಪಿಕೆಯವರು ಕನ್ನಡಕ್ಕೆ ಐದು ಕಂಟಕಗಳಿವೆ ಎಂದು ಹೆಸರಿಸಿದ್ದರು. ಈ ಐದು ಪಂಚ ಮಹಾ ಕಂಟಕಗಳಲ್ಲಿ ಮೂರನೆಯದಾಗಿ ಕಾಣಿಸಿಕೊಂಡಿದ್ದು ಭಾರತದ ಹುಳುಕಿನ ಭಾಶಾನೀತಿಗೆ ಸಂಬಂಧಿಸಿದ್ದ ಈ ಮಾತುಗಳು:-

ಇಂಗ್ಲೀಶ್ ಮರದ ದೊಣ್ಣೆ ಹಿಂದೀ ಕಬ್ಬಿಣದ ದೊಣ್ಣೆ. ನಮಗೆ ಇಂಗ್ಲೀಶಿಗಿಂತ ಹಿಂದೀಯೇ ಅಪಾಯಕಾರಿ. ಕೇಂದ್ರಸರ್ಕಾರ ಹಿಂದಿಯನ್ನು ಹೇರುತ್ತಿದೆ. ಕರ್ನಾಟಕದ ಎಲ್ಲಾ ಕೇಂದ್ರಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ಕಡ್ಡಾಯವಾಗಿ ಸಿಗಬೇಕು.

ನಿಜವಾಗಿ ನೋಡಿದರೆ ನುಡಿಹಬ್ಬವು ಕನ್ನಡ ನುಡಿಗೆ, ನುಡಿಯ ಸಾಹಿತ್ಯಕ್ಕೆ ಸಂಬಂಧ ಪಟ್ಟಿದ್ದಾಗಿದೆ. ಇದರಲ್ಲಿ ಭಾಶೆಗೆ ತಗುಲಿರುವ ಅಪಾಯದ ಬಗ್ಗೆ ಎಚ್ಚರಿಸುವಂತಹ, ಭಾಶೆಯ ಏಳಿಗೆಗೆ ಬೇಕಿರುವ ವಿಷಯಗಳ ಬಗ್ಗೆಯಂತೂ ಪ್ರಮುಖವಾಗಿ ಚರ್ಚೆಯಾಗಬೇಕಾಗಿದೆ. ಹಾಗಾಗಿ ನಾಳಿನ ಕನ್ನಡ ನುಡಿಯ, ಜನರ ಅಸ್ತಿತ್ವಕ್ಕೆ ಮಾರಕವಾಗಿರುವ ಭಾರತದ ಭಾಶಾನೀತಿಯ ಬಗ್ಗೆ ಸಮ್ಮೇಳನದಲ್ಲಿ ದನಿ ಎತ್ತಿದ್ದು ಅರ್ಥಪೂರ್ಣವೇ ಆಗಿತ್ತು.

ಸಿ ಪಿ ಕೆಯವರು ಈ  ವಿಷಯದ ಬಗ್ಗೆ ಮಾತಾಡಿದ್ದು ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಒಂದು ಮಹತ್ವದ ಬೆಳವಣಿಗೆಯಾಗಿದೆ. ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ದನಿ ಎತ್ತಿದ್ದು, ಶಾಸ್ತ್ರೀಯ ಭಾಶೆಯ ಸ್ಥಾನಮಾನದ ಬಗ್ಗೆ, ಅದಕ್ಕಾಗಿ ರೂಪಿಸುವ ಯೋಜನೆಗಳ ಬಗ್ಗೆ ಮಾತಾಡಿದ್ದು ಪ್ರಸ್ತುತವೇ ಆಗಿದೆ.

ನಿರ್ಣಯಗಳಲ್ಲಿ ಕಾಣದಾದ ಮೊದಲ ದಿನದ ನಿಲುವು!

ಮೂರನೇ ದಿನ ಕೈಗೊಳ್ಳಲಾದ ನಿರ್ಣಯಗಳನ್ನು ಗಮನಿಸಿ ನೋಡಿದರೆ, ಸಮ್ಮೇಳನವು ಇನ್ನಷ್ಟು ಮೂಲಭೂತವಾದ ಗಂಭೀರವಾದ ನಿರ್ಣಯಗಳನ್ನು ಕೈಗೊಳ್ಳಬೇಕಿತ್ತು ಅನ್ನಿಸದಿರದು. ಶಾಲೆಗಳ ಮುಚ್ಚುವಿಕೆಯ ವಿರುದ್ಧವಾದ ನಿಲುವು ಅಷ್ಟಕ್ಕೇ ಸೀಮಿತವಾಗದೆ ಮತ್ತಷ್ಟು ಮೇಲುಸ್ತರದಲ್ಲಿದ್ದು ಕರ್ನಾಟಕದಲ್ಲಿ ತಾಯ್ನುಡಿ ಕಲಿಕೆಯನ್ನು ಬಲಗೊಳಿಸುವುದರತ್ತ ಸಲಹೆ ನೀಡುವಂತೆ ಇರಬೇಕಿತ್ತು. ಹಾಗೆ ಕನ್ನಡ ಮತ್ತಿತರ ಹಿಂದೀಯೇತರ ಭಾಷೆಗಳ ಅಳಿವಿಗೆ ಕಾರಣವಾಗಿರುವ "ಭಾರತದ ಹುಳುಕಿನ ಭಾಷಾನೀತಿ" ಬದಲಾಗಬೇಕು ಎನ್ನುವ ನಿರ್ಣಯವೂ ಇರಬೇಕಿತ್ತು ಅನ್ನಿಸದಿರದು. ಇಂದು ಕರ್ನಾಟಕ, ನಾಳೆ ಒಂದೊಂದೇ ಭಾಷಿಕ ಜನಾಂಗಗಳು ಈ ಹುಳುಕಿನ ಭಾಶಾನೀತಿಯ ಬಗ್ಗೆ, ಹಿಂದೀ ಹೇರಿಕೆಯ ಬಗ್ಗೆ ದನಿ ಎತ್ತಿ ಇದನ್ನು ತಮ್ಮ ತಮ್ಮ ರಾಜ್ಯಗಳ ರಾಜಕಾರಣದ ಕೇಂದ್ರ ವಿಷಯವನ್ನಾಗಿಸಿದಾಗ, ಭಾರತವು ತನ್ನ ಕೆಟ್ಟ ಭಾಶಾನೀತಿಯನ್ನು ಕೈಬಿಟ್ಟು, ಸಮಾನತೆಯ, ಸಮಾನ ಅವಕಾಶದ, ಸಮಗೌರವದ ಭಾಷಾ ನೀತಿಯನ್ನು ರೂಪಿಸಲು ಮುಂದಾದೀತು. ಹೌದಲ್ವಾ ಗುರೂ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails