ಭಾರತದ ಸಂಸತ್ತಿಗೂ.. ಇವರಿಗೂ ಏನು ವ್ಯತ್ಯಾಸ?

(ಚಿತ್ರಕೃಪೆ: ೧೯೮೪ರ ಸಿಖ್ ವಿರೋಧಿ ದಂಗೆಯ ಪತ್ರಿಕಾ ವರದಿಯೊಂದರಿಂದ)
ಭಾರತದ ಸಂಸತ್ತಿನಲ್ಲಿ ಮಂಗಳವಾರದಿಂದೀಚಿಗೆ ದಕ್ಷಿಣ ಭಾರತೀಯರನ್ನು ಒಳಗೆ ಬಿಡುವುದಿಲ್ಲಾ ಎನ್ನುವ ನಿಲುವನ್ನು ತೆಗೆದುಕೊಂಡಿರುವ ಸುದ್ದಿ ನೋಡಿ ಅಚ್ಚರಿಯಾಗಿದೆ. ದಕ್ಷಿಣ ಭಾರತೀಯರು ಈ ದೇಶದ ಪ್ರಜೆಗಳೋ ಅಲ್ಲವೋ ಎನ್ನುವ ಭೀತಿಗೆ ಕಾರಣವಾಗಿದೆ. 

ಹಿಂದೆ ಮಹಾತ್ಮಾಗಾಂಧಿಯವರ ಹತ್ಯೆಯಾದಾಗ ಕೈಗೆ ಸಿಕ್ಕಿದ ಚಿತ್ಪಾವನರೆಂದು ಕರೆಯಲಾಗುವ ಮರಾಟಿ ಬ್ರಾಹ್ಮಣರ ಮೇಲೆ ಅವರು ಚಿತ್ಪಾವನರೆಂಬ ಕಾರಣಕ್ಕೇ ಹಲ್ಲೆ ಮಾಡಲಾಗಿತ್ತು. ಇದೇ ರೀತಿ ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದುಹಾಕಿದ್ದಾಗ, ಹಂತಕರು ಸಿಖ್ ಸಮುದಾಯಕ್ಕೆ ಸೇರಿದ್ದರಿಂದಾಗಿ ಕಂಡಕಂಡಲ್ಲಿ ಕೈಗೆ ಸಿಕ್ಕ ಸಿಖ್ಖರನ್ನು ಕೊಂದು ಹಾಕಿದ ಘಟನೆ ನಡೆದಿತ್ತು. ಗೋಧ್ರಾದಲ್ಲಿ ನಡೆದ ಹತ್ಯೆಯ ಪ್ರತಿಧ್ವನಿಯಾಗಿ ಗುಜರಾತಿನಲ್ಲಿ ಸಾವಿರಾರು ಜನರನ್ನು ಕೊಲ್ಲಲಾಯಿತು. ಅಮಾಯಕರನ್ನು ಕೊಲ್ಲಲಾಗಿದ್ದ ಈ ಘಟನೆಗಳನ್ನೂ ಎಂದಿಗೂ ಒಪ್ಪಲಾಗದ ಅಮಾನುಷ ಕೃತ್ಯವೆಂದೂ, ಜನಾಂಗೀಯ ದ್ವೇಶದಿಂದ ಮಾಡಿದ ಕಗ್ಗೊಲೆಯೆಂದೂ ಬಣ್ಣಿಸಲಾಗುತ್ತದೆ.  

ಇಲ್ಲೆಲ್ಲಾ ಹಾಗೆ ದ್ವೇಶದಿಂದ ನರಮೇಧಕ್ಕಿಳಿದವರನ್ನು "ಸಂವಿಧಾನ ವಿರೋಧಿಗಳು" "ಸಹಿಷ್ಣುತೆಯ ವಿರೋಧಿಗಳು" " ಭಾರತ ರಾಷ್ಟ್ರೀಯತೆಯ - ಒಗ್ಗಟ್ಟಿನ ವಿರೋಧಿಗಳು" "ದೇಶ ವಿರೋಧಿಗಳು" ಎಂದು ಇಡೀ ದೇಶ ಬಣ್ಣಿಸಿ ಖಂಡಿಸಿತು. ಇವೆಲ್ಲಾ ಕೃತ್ಯಗಳು ನಡೆದದ್ದು ಖಾಸಗಿ ವ್ಯಕ್ತಿಗಳಿಂದ... ಇದಕ್ಕೆ ಕುಮ್ಮಕ್ಕು ಕೊಟ್ಟವರು ಅಧಿಕಾರದಲ್ಲಿದ್ದವರು ಎಂಬ ದೂರಿದ್ದರೂ ಇದುವರೆವಿಗೆ ಯಾವುದೇ ಸರ್ಕಾರವೂ ಜನಾಂಗೀಯ ತಾರತಮ್ಯವನ್ನು ಸಮರ್ಥಿಸಿದ ಉದಾಹರಣೆಯಿಲ್ಲ! ಆದರೆ ದಕ್ಷಿಣ ಭಾರತದ ಹೆಸರನ್ನು ಹೊಂದಿರುವ ಸಾರ್ವಜನಿಕರನ್ನು ಸಂಸತ್ತಿನ ಕಲಾಪದಿಂದ ಹೊರಗಿಡುತ್ತಿರುವುದು ಮಾತ್ರಾ ಭಾರತ ಸರ್ಕಾರವೇ ಇಂಥಾ ತಾರತಮ್ಯಕ್ಕೆ ಮುಂದಾಗಿದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ.

ಹಿಂದೆ ಅಮೇರಿಕಾದಲ್ಲಿ ಉಗ್ರಗಾಮಿಗಳು ವಿಮಾನ ಕದ್ದು ಎತ್ತರದ ಕಟ್ಟಡಗಳೂ ಸೇರಿದಂತೆ ನಾಲ್ಕೈದು ಪ್ರಮುಖ ಜಾಗಗಳಿಗೆ ನುಗ್ಗಿಸಿ ಸಾವಿರಾರು ಜನರ ಸಾವಿಗೆ ಕಾರಣರಾದ ದಿನದಿಂದ ಆ ದೇಶಕ್ಕೆ ಹೋಗುವ ಮುಸ್ಲಿಮ್ ಹೆಸರಿನವರನ್ನೆಲ್ಲಾ ಸಿಕ್ಕಾಪಟ್ಟೆ ತಪಾಸಣೆ ಮಾಡೇ ಒಳಗೆ ಬಿಟ್ಟುಕೊಳ್ಳುವ ಏರ್ಪಾಟು ಶುರುವಾಯಿತು. ಅದೂ ಕೂಡಾ ಹೊರದೇಶಗಳಿಂದ ಬರುವವರಿಗೆ ಅನ್ವಯವಾಗುತ್ತಿತ್ತು. ಹಾಗೆ ತಪಾಸಣೆ ಮಾಡಿದರೇ ಹೊರತು ಒಳಗೆ ಬಿಟ್ಟುಕೊಳ್ಳಲ್ಲಾ ಎನ್ನಲಿಲ್ಲಾ! ಆದರೆ ಭವ್ಯ ಭಾರತದಲ್ಲಿ ಮಾತ್ರಾ, ಸಂಸತ್ತಿಗೆ ಪಾಸು ಪಡೆದು ಹೋಗುವ ಜನಸಾಮಾನ್ಯರ ಹಕ್ಕನ್ನು ದಕ್ಷಿಣ ಭಾರತೀಯರು ಎನ್ನುವ ಕಾರಣದಿಂದಲೇ ನಿರಾಕರಿಸಿರುವುದು ಸರಿಯಲ್ಲಾ! ಇಂತಹ ಕ್ರಮಗಳಿಂದ ಭಾರತದ ಸಂಸತ್ತು, ದಕ್ಷಿಣದವರಿಗೆ ನೀವು ಭಾರತೀಯರಲ್ಲಾ ಎನ್ನುತ್ತಿದೆಯೇನೋ ಎನ್ನುವ ಭಾವನೆಗೆ ಕಾರಣವಾಗುತ್ತಿದೆ. ಇಂಥಾ ನಡೆ ಅದ್ಯಾವುದೇ ಕಾರಣಕ್ಕಾಗಲಿ ಸಂಸತ್ ತೆಗೆದುಕೊಳ್ಳುವುದನ್ನು ಒಪ್ಪಲಾಗದು. ನಮ್ಮ ಜನರನ್ನು ಹೊರಗಿಡುವ ಸಂಸತ್ತಿಗೆ ನಾವೂ ಬರುವುದಿಲ್ಲಾ ಎನ್ನುವ ಗಟ್ಟಿ ನಿಲುವನ್ನು ತೆಗೆದುಕೊಂಡಾದರೂ ನಮ್ಮ ಸಂಸದರು ಈ ತಾರತಮ್ಯವನ್ನು ಇಲ್ಲವಾಗಿಸಬೇಕು.

ಸಮಸ್ಯೆಯ ಮೂಲವಿರುವುದು ಸಂವಿಧಾನದ ಮೂರನೇ ಕಾಲಂನಲ್ಲಿ ಬರೆಯಲಾಗಿರುವ "ರಾಜ್ಯಗಳ ಗಡಿ ನಿರ್ಣಯಿಸುವ ಹಕ್ಕು ಸಂಸತ್ತಿನದು" ಎನ್ನುವ ಮಾತಿನಲ್ಲಿ. ಈ ಅಂಶವನ್ನು ತಾಂತ್ರಿಕವಾಗಿ ಬಳಸಿಕೊಂಡು, ಆಂಧ್ರಪ್ರದೇಶದ ಶಾಸನಸಭೆಯ ನಿಲುವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಆಂಧ್ರಪ್ರದೇಶವನ್ನು ಒಡೆಯಲು ಭಾರತದ ಸಂಸತ್ತು ಮುಂದಾಗಿರುವುದು ನಿಜಕ್ಕೂ ಪ್ರಜಾಪ್ರಭುತ್ವದ/ ಒಕ್ಕೂಟದ ಸ್ಪೂರ್ತಿಗೆ ವಿಡಂಬನೆ. ಸಂಸತ್ತಿನಲ್ಲಿ ಉಳಿದೆಲ್ಲಾ ಸಂಸದರು ಒಂದಾಗಿ ಸೇರಿದರೆ ಯಾವೊಂದು ರಾಜ್ಯದ ಸಂಸದರ ಒಟ್ಟು ಸಂಖ್ಯೆಯೂ ಅದನ್ನು ಸಂಖ್ಯಾಬಲದಲ್ಲಿ ಮೀರಿಸಲಾಗದ್ದು ಗೊತ್ತಿರುವ ವಿಷಯವೇ! ಹೀಗಿದ್ದಾಗ ರಾಜ್ಯವೊಂದರ ಸಂಸದರ ಅಭಿಪ್ರಾಯಕ್ಕಾಗಲೀ, ಸದರಿ ರಾಜ್ಯದ ಶಾಸನಸಭೆಯ ನಿರ್ಣಯಕ್ಕಾಗಲೀ ಬೆಲೆಕೊಡದೆ ರಾಜ್ಯವೊಂದನ್ನು ಒಡೆದು ಹಾಕಿಬಿಡಬಹುದಾದಂಥಾ ಸ್ವಾತಂತ್ರ್ಯ ನಮ್ಮ ಸಂಸತ್ತಿಗೆ ಇರುವುದೇ ಸರಿಯಲ್ಲಾ!! ಅಲ್ವಾ ಗುರೂ? 

2 ಅನಿಸಿಕೆಗಳು:

Unknown ಅಂತಾರೆ...

Nagaraja Badiger Lingasagur
Kannadigarada namage kannnada Bhaseya Bagge Moola Abhimana Atee Mukhya

Unknown ಅಂತಾರೆ...

Kannada Abhimana nammannu Hetta Thayigintlu Srestavadaddu

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails