ಇತಿಹಾಸದ ಪ್ರಾಮುಖ್ಯ

ಇತಿಹಾಸವನ್ನು ಕಡೆಗಣಿಸುವ ಪ್ರವೃತ್ತಿ ಇತ್ತೀಚೆಗೆ ನಮ್ಮಲ್ಲಿ ಹೆಚ್ಚುತ್ತಿರುವುದು ಸರಿಯಲ್ಲ. ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ "ಕರ್ನಾಟಕ ಗತವೈಭವ" ಎನ್ನುವ ಗ್ರಂಥದಲ್ಲಿ ಆ ಹೊತ್ತಿಗಾಗಲೇ ಕನ್ನಡಿಗರು ಮರೆತಿದ್ದ ವೈಭವದ ಕರ್ನಾಟಕದ ಪರಿಚಯವನ್ನು ಮಾಡಿಕೊಟ್ಟು ಇತಿಹಾಸದ ಪ್ರಾಮುಖ್ಯವನ್ನು ಒತ್ತಿ ಹೇಳುತ್ತ ಕನ್ನಡಿಗರಿಗೆ ಕೊಟ್ಟ ಕರೆಯನ್ನು ನೋಡಿ:

ಕನ್ನಡಿಗರೇ, ನಾವು ನಮ್ಮ ಆಲಸ್ಯವನ್ನು ತಳ್ಳೋಣ. ಭ್ರಾಮಕ ಕಲ್ಪನೆಗಳನ್ನು ಬಿಟ್ಟು ಬಿಡೋಣ. ಮತ್ತು ಮುಂದಿನ ಮಾರ್ಗಕ್ಕೆ ಹತ್ತೋಣ. ಪಾತಾಳಕ್ಕಿಳಿದ ನಮ್ಮ ಕರ್ನಾಟಕದ ಆರ್ಯಸಂಸ್ಕೃತಿಯನ್ನು ನಾವು ಉದ್ಧರಿಸದೆ ಇನ್ನಾರು ಉದ್ಧರಿಸುವವರು? ಕನ್ನಡಿಗರು ಹೇಡಿಗಳು, ಹಿಂದುಳಿದವರು, ಅಭಿಮಾನ ಶೂನ್ಯರು ಎಂದು ಮೊದಲಾದ ಕರ್ಣಕಟುವಾದ ನುಡಿಗಳಿಂದ ನಮ್ಮನ್ನು ಚುಚ್ಚುವವರಿಗೆ ನಾವು ನಮ್ಮ ಕ್ರಿಯಾಶಕ್ತಿಯಿಂದ ಉತ್ತರ ಕೊಡೋಣ. ಸಾಯಲಾದ ಕರ್ನಾಟಕಕ್ಕೆ ಇತಿಹಾಸದ ಸಂಜೀವಿನಿ ಮಾತ್ರೆಯನ್ನು ಹಾಕಿ ಚೇತನಗೊಳಿಸೋಣ. ನಮ್ಮ ಆಶಾವೃಕ್ಷವನ್ನು ಕೊಳೆಯಿಸಿ ಬಿಡುವಂಥ ಹುಳುಗಳನ್ನು ಕೊಲ್ಲಲು ಇತಿಹಾಸವೇ ಮದ್ದು.

ಕರ್ನಾಟಕವು ಇತಿಹಾಸದಲ್ಲಿ ಕೋಟಿಸೂರ್ಯಗಳ ಹೊಳಪಿನಿಂದ ಹೊಳೆಯುತ್ತಿತ್ತು. ಇಂದಿನ ತಮಿಳುನಾಡು, ಆಂಧ್ರಪದೇಶ, ಕೇರಳ, ಒರಿಸ್ಸಾ, ಶ್ರೀಲಂಕಾಗಳನ್ನೆಲ್ಲ ಆಳುತ್ತಿದ್ದ ವಿಜಯನಗರ ಸಾಮ್ರಾಜ್ಯದ ಕನ್ನಡಿಗ ಅರಸರನ್ನು ನೆನೆಸಿಕೊಂಡರೇ ಮೈ ಜುಂ ಎನ್ನುತ್ತದೆ ಇವತ್ತು. ಇಂಥಾ ಇತಿಹಾಸವನ್ನು ನಾವು ಮರೆತಿರುವುದರಿಂದಲೇ ಇವತ್ತಿನ ದಿನ ನಮ್ಮನ್ನು ಅನಾದಿಕಾಲದಿಂದ ತಮಿಳರು ಆಳುತ್ತಿದ್ದರು ಎಂದು ಅನೇಕ ಭಾರತೀಯರು ನಂಬಿರುವುದು. ಏನ್ ಗುರು?

ಮೋದಿ ಗೆಲುವಿನ ಚಿತ್ತಾರ

ಇತ್ತೀಚೆಗೆ ನಡೆದ ಗುಜರಾತಿನ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಮುಂದಾಳ್ತನದಲ್ಲಿ ಭಾಜಪ ಜಯಭೇರಿ ಬಾರಿಸಿದ್ದು ಯಾಕಪ್ಪಾ ಅಂತ ಸಕ್ಕತ್ ವಿಶ್ಲೇಷಣೆಗಳು ನಡೀತಿವೆ. ನಿಜಕ್ಕೂ ಮೋದಿ ಗೆಲುವಿನ ಒಳಗುಟ್ಟು ಏನು ಅಂತ ನೋಡ್ಮ.

ಗುಜರಾತ್, ಗುಜರಾತ್, ಗುಜರಾತ್

ಈ ಬಾರಿ ಚುನಾವಣೆಯಲ್ಲಿ ಮೋದಿ ಅವರು ಮುಖ್ಯ ಅಸ್ತ್ರವಾಗಿ ಬಳಸಿದ್ದು ಇಡೀ ಭಾರತಕ್ಕೆ ಅನ್ವಯಿಸುವ ಯಾವುದೇ ಸಿದ್ಧಾಂತವನ್ನಲ್ಲ, ಬದಲಾಗಿ ಪ್ರತ್ಯೇಕವಾಗಿ ಗುಜರಾತ್ ರಾಜ್ಯದ ಏಳಿಗೆಯನ್ನು ಮತ್ತು ಎಲ್ಲಾ ರೀತಿಯಲ್ಲೂ ಸ್ಥಳೀಯತೆಯ ಮಂತ್ರವನ್ನು. ಮೋದಿಯ ಚುನಾವಣೆ ಪ್ರಚಾರದಲ್ಲಿ ಕೇಳಿಬಂದಿದ್ದು ಬರೀ "ಗುಜರಾತ್, ಗುಜರಾತಿ".

"ಗುಜರಾತಿ ಅಸ್ಮಿತಾ" ಮತ್ತು "Vibrant Gujarat" ಎಂಬ ಘೋಷಣೆಗಳು ಗುಜರಾತಿನಲ್ಲಿ ಈ ಬಾರಿ ಭಾಜಪದ ಮೂಲಮಂತ್ರವಾಗಿದ್ದವೇ ಹೊರತು ಗುಜರಾತಿಗಳಿಗೆ ಅರ್ಥವಾಗದ ಮತ್ತು ಸಂಬಂಧ ಎಲ್ಲಿ ಅಂತ ಹುಡುಕಬೇಕಾದ "ಭಾರತೀಯ ಅಸ್ಮಿತಾ" ಅಥವಾ "Vibrant India" ಗಳಲ್ಲ. "ಭಾರತಾನ ಹಂಗ್ ಉದ್ಧಾರ ಮಾಡ್ತೀನಿ ಹಿಂಗ್ ಉದ್ಧಾರ ಮಾಡ್ತೀನಿ" ಅಂತ ಗುಜರಾತಿನಲ್ಲಿ ಎಷ್ಟು ಬಡ್ಕೊಂಡ್ರೂ ಉಪಯೋಗವಿಲ್ಲ ಅಂತ ಅರ್ಥ ಮಾಡ್ಕೊಂಡು ಗುಜರಾತಿಗೇ ತಮ್ಮ ಬದ್ಧತೆ ಇರೋದು ಅಂತ ತೋರಿಸಿಕೊಂಡಿದ್ದೇ ಮೋದಿ ಗೆಲುವಿನ ಗುಟ್ಟು. ಪಕ್ಷ ರಾಷ್ಟ್ರೀಯ ಆದ್ರೂ ನಿಜವಾದ ಕೆಲಸ ಸ್ಥಳೀಯವಾಗೇ ಇರಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕಂತೆ ನಡ್ಕೊಂಡಿದ್ದೇ ಮೋದಿ ಗೆಲುವಿನ ಗುಟ್ಟು.

ನಿಜವಾದ ಏಳಿಗೆಗೆ ಮಂತ್ರ ಸ್ಥಳೀಯತೆ

ಮೋದಿ ಅವರು "2010ರ ವೇಳೆಗೆ ಗುಜರಾತ್ ವಿಶ್ವದ ಅಭಿವೃದ್ಧಿ ಹೊಂದಿರುವ ದೇಶಗಳ ಜೊತೆ ಹೆಮ್ಮೆಯಿಂದ ಸ್ಪರ್ಧೆಗೆ ಇಳಿಯಬೇಕು" ಅಂತ ಘೋಷಿಸಿದ್ದಾರೆ. ಇಲ್ಲೆಲ್ಲೂ ಮೋದಿ ಭಾರತ ಅನ್ನುತ್ತಿಲ್ಲ. ಬೇರೆ ದೇಶಗಳ ಜೊತೆಗೇ ಪೈಪೋಟಿ ಮಾಡಬೇಕಾಗಿರೋದು ಗುಜರಾತೇ ಹೊರತು ಭಾರತ ಅಲ್ಲ ಅನ್ನೋ ವೈಜ್ಞಾನಿಕ ಸಂದೇಶವನ್ನ ಕೊಟ್ಟಿದ್ದಾರೆ. ನಿಜಕ್ಕೂ ಭಾರತವನ್ನ ಜರ್ಮನಿಗೋ ಫ್ರಾನ್ಸಿಗೋ ಹೋಲಿಸೋದು ಮೂರ್ಖತನವೇ ಸರಿ.

ಅರೆ, ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಕತೆಗೆ ಮಹತ್ವ ನೀಡತೊಡಗಿತು ಅಂತ ಗಾಬರಿಯಾಗಬೇಡಿ. ಗುಜರಾತಿನ ಏಳಿಗೆಯಿಂದ ಭಾರತದ ಏಳಿಗೆ ಅನ್ನೋದನ್ನು ಮೋದಿ ಮಾತಾಡ್ತಿರೋದನ್ನು ಗಮನಿಸಿ. ಗುಜರಾತಿನ ಅಸ್ಮಿತಾ ಅನ್ನುತ್ತಾ ಗುಜರಾತಿ ಸಂಸ್ಕೃತಿಯ ಅನನ್ಯತೆ ಮತ್ತು ಸ್ವಾಭಿಮಾನದ ಉದ್ದೀಪನೆಯೊಂದಿಗೆ ಏಳಿಗೆ ಆಗೋಣ ಎನ್ನುತ್ತಿರುವುದನ್ನು ಗಮನಿಸಿ. ಇದಕ್ಕಿಂತ ಮುಖ್ಯವಾಗಿ ಇಂಥಾ ನಿಲುವಿನಿಂದ ಜಯಗಳಿಸಿದ್ದನ್ನೂ ಗಮನಿಸಿ. ಕಾರಣ ಏನೇ ಇರಲಿ, ಈ ನಿಲುವು ಸರಿಯಾದದ್ದಾಗಿದೆ ಮತ್ತು ಆ ಕಾರಣದಿಂದಲೇ ಜನರ ಮನಸ್ಸನ್ನು ತಟ್ಟಿದೆ ಅನ್ನೋದು ಮಾತ್ರ ಸತ್ಯ.

ಕನ್ನಡತನದಿಂದಲೇ ಭಾರತೀಯತೆ

ಕನ್ನಡ, ಕರ್ನಾಟಕ, ಕನ್ನಡಿಗರ ಏಳಿಗೆ ಅಂತ ಮಾತೋಡದನ್ನು ಸಂಕುಚಿತತೆ, ಪ್ರಾದೇಶಿಕತೆ, ದೇಶದ ಏಳಿಗೆಗೆ ಮಾರಕ ಅಂತೆಲ್ಲಾ ಕೊಂಕು ಮಾತಾಡೋ ಜನ ಅರ್ಥ ಮಾಡ್ಕೋಬೇಕಿರೋದು ಕೂಡಾ ಇದನ್ನೇ. ಗುಜರಾತಿನೋರು ಗುಜರಾತನ್ನು, ಕರ್ನಾಟಕದೋರು ಕರ್ನಾಟಕವನ್ನು... ಉದ್ಧಾರ ಮಾಡಿದರೆ ಸಾಕು, ಭಾರತ ತಾನೇ ತಾನಾಗಿ ಉದ್ಧಾರವಾಗುತ್ತೆ ಅಂತ ಆಲೂರು ವೆಂಕಟರಾಯರಂತಹ ಮಹನೀಯರು ಹೇಳಿದ್ದೂ ಕೂಡಾ ಇದನ್ನೇ. ಗುಜರಾತಿನ ಜನ ಗುಜರಾತಿಗಳಾಗಿ ಒಗ್ಗೂಡಿ ಏಳಿಗೆ ಹೊಂದುವುದೇ ಭಾರತದ ಏಳಿಗೆಗೆ ದಾರಿ. ಅಂತೆಯೇ ತನ್ನತನದ ಹಿರಿಮೆಯನ್ನು ಅರಿತು ನಡೆಯುವ ಮೂಲಕ ಭಾರತೀಯನಾಗಿರುವುದೇ ನಿಜವಾದ ರಾಷ್ಟ್ರೀಯತೆ. ಏನ್ ಗುರು?

ಬೆಂಗಳೂರಿನ ಚರ್ಚಿನಲ್ಲಿ ಕನ್ನಡ ಅಲ್ಲದೆ ಇನ್ನೇನಿರಬೇಕು?

ಮೊನ್ನೆಮೊನ್ನೆ ಬೆಂಗಳೂರಿನ ಒಂದು ಚರ್ಚಿಗೆ ಸಂಬಂಧಿಸಿದ ಘಟನೆ ನಡೀತು. ಕನ್ನಡನಾಡಿನಲ್ಲಿ ತಮಿಳು ಮತ್ತು ಮಲಯಾಳಂ ನಾಮಫಲಕಗಳು ಹೋಗಿ ಕನ್ನಡದವೇ ಬರಬೇಕು ಅಂತ ಹೇಳಿದ್ದಕ್ಕೆ ಕೆಲ ಪರಭಾಷಾ ಕಿಡಿಗೇಡಿಗಳ ಕುಮ್ಮಕ್ಕಿನಿಂದಾಗಿ ಒಬ್ಬ ಕನ್ನಡಿಗ ತನ್ನ ಕೈಗೆ ಕೋಳ ತೊಡಿಸಿಕೊಳ್ಳಬೇಕಾಯ್ತು.

ಒಂದಲ್ಲ ಒಂದು ನೆಪ ಮಾಡ್ಕೊಂಡು ಕನ್ನಡ ಕಡೆಗಣಿಸಿ ತಮ್ಮದೇ ಭಾಷೆಯ ಬಾವುಟ ಊರೋದು ಬೆಂಗಳೂರಿಗೆ ಬರೋ ವಲಸಿಗರಿಗೆ ವಾಡಿಕೆ ಆಗೋಗಿದೆ. ಆ ನೆಪಗಳಲ್ಲಿ ಧರ್ಮಾನೂ ಒಂದು, ಅಷ್ಟೆ. ಇದಕ್ಕೆ ಉತ್ತಮ ನಿದರ್ಶನ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಇತ್ತೀಚಿನ 25 ವರ್ಷದಿಂದ ತಲೆ ಎತ್ತಿರುವ ಅಯ್ಯಪ್ಪ, ಮುರುಗನ್, ಓಂ ಶಕ್ತಿ, ಗುರುದ್ವಾರ, ಕಾಳಿ, ಬಾಲಾಜಿ ಮಂದಿರಗಳು. ಈಗ ಈ ಗುಡ್ಡದ ಹಳ್ಳಿಯ ಚರ್ಚು ಅದೇ ಸಾಲಿಗೆ ಸೇರಿದೆ, ಅಷ್ಟೆ.

ಕರ್ನಾಟಕದ ಹಲವು ಭಾಗಗಳಲ್ಲಿ ಚರ್ಚುಗಳ ಹೆಸರನ್ನು ಮಲಯಾಳಿ ತಮಿಳು ತೆಲುಗಿನಲ್ಲಿ ಬರೆಸಲಾಗಿದೆ. ಅಲ್ಲಿನ ಪ್ರಾರ್ಥನೇನೂ ಈ ಭಾಷೆಗಳಲ್ಲಿ ಮಾಡೋ ಪರಿಪಾಠವಿದೆ. ಆದರೆ ಕನ್ನಡ ಕ್ರೈಸ್ತರು ಹೊರರಾಜ್ಯಗಳಿಗೆ ಹೋದಾಗ ಅವರಿಗೆ ಈ ಸೌಲಭ್ಯವಿದೆಯಾ? ಅವರು ಹೋದ ಕಡೆಯೆಲ್ಲಾ ಅಲ್ಲಲ್ಲೀ ಭಾಷೆಗಳಿಗೆ ಯಾಕೆ ಹೊಂದಿಕೊಳ್ಳುತ್ತಾರೆ? ಬೇರೆ ಕಡೆಯಿಂದ ಇಲ್ಲಿಗೆ ನೆಲೆಸಕ್ಕೆ ಬರೋರಿಗೆ ಈ ವಿನಿಮಯ ವಿಧಾನ ಯಾಕೆ ತಿಳಿದಿಲ್ಲ ಅನ್ನೋದು ಕನ್ನಡಿಗ ಕ್ರೈಸ್ತಮತದೋರ ಮುಂದಿರೋ ದೊಡ್ಡ ಪ್ರಶ್ನೆ. ಕನ್ನಡಿಗರು ಎಲ್ಲಿಗೆ ಹೋದರೂ, ಯಾವ ಮತದವರೇ ಆಗಿದ್ದರೂ ಎಲ್ಲೆಲ್ಲೂ ಬೇರೆ ಭಾಷೆಗಳ ಜನರಿಗಿಂತ ಕೀಳು ಅಂತ ಸಾರ್ತಿರೋ ಈ ವ್ಯವಸ್ಥೆ ಎಷ್ಟು ಸರಿ?

ಕರ್ನಾಟಕದ ಯಾವುದೇ ಧಾರ್ಮಿಕ ಸಂಸ್ಥೆಗಳಿರಲಿ ಅಲ್ಲಿನ ವ್ಯವಹಾರದಲ್ಲಿ ಕನ್ನಡಕ್ಕೆ ಆಧ್ಯತೆ ಇರಬೇಕು ಎನ್ನುವ ನೀತೀನ ಸರ್ಕಾರ ಜಾರಿಗೆ ತರಬೇಕು. ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲೇ ಈ ಸಮಸ್ಯೆ ಉದ್ಭವಿಸಿರುವುದು ಕಾಕತಾಳೀಯ! ಸಮಸ್ತ ಕ್ರೈಸ್ತ ಬಾಂಧವರಿಗೆ ಶುಭ ಕೋರುತ್ತ, ಕ್ರೈಸ್ತ ಮತ ಬೋಧಿಸೋದನ್ನ ನಿಜಕ್ಕೂ ಆಳವಾಗಿ ಅರ್ಥ ಮಾಡ್ಕೋಬೇಕಾದ್ರೆ ಅದನ್ನ ಕನ್ನಡದ ಕ್ರೈಸ್ತಮತದೋರು ಕನ್ನಡದಲ್ಲಿ ಕಲೀಬೇಕೇ ಹೊರತು ತಮಿಳಲ್ಲಾಗಲಿ ಮಲಯಾಳಿಯಲ್ಲಾಗಲಿ ತೆಲುಗಿನಲ್ಲಾಗಲಿ, ಇಂಗ್ಲೀಷಲ್ಲಾಗಲಿ ಅಲ್ಲ ಅಂತಾನೂ ಹೇಳೋಣ. ಏನ್ ಗುರು?

ಗ್ರಾಹಕನ ಭಾಷೇನೇ ಕೈಬಿಟ್ಟ ಗ್ರಾಹಕ ದಿನಾಚರಣೆ

"ರಾಷ್ಟ್ರೀಯ ಗ್ರಾಹಕ ದಿನಾಚರಣೆ"ಯ ಸಂಬಂಧವಾಗಿ ಬೆಂಗಳೂರಿನಲ್ಲಿ ನಿನ್ನೆ (ಡಿಸೆಂಬರ್ 24) ಒಂದು ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮದ ತುಂಬ ಗ್ರಾಹಕರ ಹಕ್ಕುಗಳ ಜಾಗೃತಿಯ ಬಗ್ಗೆ ಅನೇಕ ಗಣ್ಯರು ಮಾತಾಡುದ್ರು ಅಂತ ವರದೀಲಿ ಬರ್ದಿದಾರೆ. ಆದರೆ ಗ್ರಾಹಕನ ಭಾಷೆಗೆ ಇರೋ ಮಹತ್ವದ ಬಗ್ಗೇನೇ ಚಕಾರ ಎತ್ತದೇ ಇನ್ನೆಂಥಾ ಗ್ರಾಹಕ ಜಾಗೃತಿ ನಡೆದೀತು?


ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಆಗಬೇಕು

ಗ್ರಾಹಕರ ಹಕ್ಕುಗಳ ಬಗ್ಗೆ ನಮ್ಮ ಜನರಲ್ಲಿ ಜಾಗೃತಿ ಮತ್ತಷ್ಟು ವ್ಯಾಪಕ ಮಟ್ಟದಲ್ಲಿ ಹುಟ್ ಹಾಕ್ಬೇಕು ಅನ್ನೋದು ಈ ಸಭೆಯ ಒಮ್ಮತದ ಅಭಿಪ್ರಾಯ ಆಗಿತ್ತು. ನಗರಗಳಲ್ಲಿ ಇಂಥಾ ಜಾಗೃತಿ ಇದ್ರೂ ಕೂಡಾ ಜನ ತಲೆ ಕೆಡುಸ್ಕೋತಾ ಇಲ್ಲ, ಹಳ್ಳಿಗಳ ಕಡೆ ಇಂಥಾ ಜಾಗೃತಿಯ ಕೊರತೆ ತೀವ್ರವಾಗಿ ಇದೆ ಅನ್ನೋದನ್ನೂ ಅಲ್ಲಿ ಪ್ರಸ್ತಾಪ ಮಾಡಿದಾರೆ. ಗ್ರಾಹಕ ಹಕ್ಕುಗಳ ಬಗ್ಗೆ ನಗರ, ಹಳ್ಳಿ ಎಲ್ಲ ಕಡೆ ಜಾಗೃತಿ ಮೂಡಿಸಬೇಕು ಅನ್ನೋ ಕಾಳಜಿಯೇನೋ ಸರಿಯಿದೆ. ಆದರೆ ಜಾಹಿರಾತುಗಳು, ಅರ್ಜಿಗಳು, ಸೂಚನೆಗಳು, ಬಿಲ್ಲುಗಳು, ರಸೀತಿಗಳೂ ಸೇರಿದಂತೆ ಗ್ರಾಹಕನ ಜೊತೆ ನಡೀತಿರೋ ವ್ಯವಹಾರವೆಲ್ಲಾ ಕನ್ನಡದಲ್ಲಿ ನಡೆಯೋ ವ್ಯವಸ್ಥೆ ಮಾಡದೆ, ಸರ್ಕಾರ ಜನ ಜಾಗೃತಿ ಆಗ್ತಿಲ್ಲಾ ಅಂತ ಎಷ್ಟು ಪೇಚಾಡುದ್ರೂ ಪರಿಣಾಮ ಅಷ್ಟಕ್ಕಷ್ಟೇ ಗುರು.

ಜಾಗೃತಿ ಪರಿಣಾಮಕಾರಿ ಮಾಡೋದು ಹ್ಯಾಗೆ?

ಗ್ರಾಹಕರ ಹಕ್ಕುಗಳ ಬಗ್ಗೆ ಜನರಿಗೆ ನಾವು ಎಷ್ಟೇ ಹೇಳಿ ಕೊಟ್ರೂ, ಗ್ರಾಹಕ ಸೇವೆ ಕನ್ನಡದಲ್ಲಿ ಇಲ್ಲದೇ ಇದ್ರೆ ಅದು ಪರಿಣಾಮಕಾರಿ ಆಗಲ್ಲ. ಉದಾಹರಣೆಗೆ ಯಾವುದೋ ಒಂದು ವಸ್ತು ಕೊಂಡುಕೊಳ್ಳೋ ಗ್ರಾಹಕನಿಗೆ, ಅದರ ಮೇಲೆ ಬರೆದಿರೋ ಸೂಚನೆಗಳು ಅವನದಲ್ಲದ ಭಾಷೇಲಿ ಇರೋ ಕಾರಣದಿಂದ ಸರಿಯಾಗಿ ಅವುಗಳ್ನ ಪಾಲಿಸಕ್ಕೆ ಆಗಲಿಲ್ಲ ಅಂದ್ರೆ ಅಥವಾ ಆ ಕಾರಣಕ್ಕೇ ನಿಬಂಧನೆಗಳು ಅರ್ಥ ಆಗ್ದೆ ಇದ್ರೆ ಅದಕ್ಕೆ ಯಾರು ಹೊಣೆ? ಯಾವ್ದೋ ಅಂಗಡಿಗೆ ಹೋಗಿ ಅಲ್ಲಿ ಬರೆದಿರೋ ನಾಮಫಲಕ ಕನ್ನಡದಲ್ಲಿ ಇಲ್ಲದ ಕಾರಣಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆದರೆ ಅಥ್ವಾ ಅವರ ಸೇವೆಯ ವ್ಯಾಪ್ತಿ ಅರ್ಥವಾಗದೆ ಎಡವಟ್ಟಾದ್ರೆ ಯಾರು ಹೊಣೆ?

ಭಾಷೆ ಮತ್ತು ಗ್ರಾಹಕನ ಹಕ್ಕು

ತೂಕ, ಪ್ರಮಾಣ, ಅಳತೆ ಇವೆಲ್ಲವೂ ಸರಿಯಾಗಿ ಇರಬೇಕು ಅನ್ನೋದ್ರ ಜೊತೆಜೊತೆಗೇ ಗ್ರಾಹಕನಿಗೆ ಏನೇನೆಲ್ಲಾ ಹಕ್ಕುಗಳಿವೆ, ಅವನ ಸಹಾಯಕ್ಕೆ ಏನೇನೆಲ್ಲಾ ಸಂಸ್ಥೆಗಳು, ವ್ಯವಸ್ಥೆಗಳು ಇವೆ ಅಂತೆಲ್ಲಾ ಜಾಗೃತಿ ಮೂಡಿಸಬೇಕು ಅನ್ನೋದೇನೋ ಸರಿ. ಎಲ್ಲಾ ವಸ್ತುಗಳ ಮೇಲಿನ ಸೂಚನೆಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು, ಅಲ್ಲಿನ ಸೇವೆಗಳು ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಇರಬೇಕಾದದ್ದು ಕಡ್ಡಾಯ ಆಗಬೇಕು ಗುರು. ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅನ್ನೋದನ್ನ ನಾವು ಮರೀಬಾರ್ದು ಗುರು.

ಭಾಷಾ ಆಯಾಮವಿಲ್ಲದೆ ಯಾವ ತೆರನಾದ ಜಾಗೃತಿ ಮೂಡುಸ್ತೀನಿ ಅಂತಂದ್ರೂ ಅದು ಪರಿಣಾಮಕಾರಿ ಆಗಲ್ಲ. ಇದನ್ನು ಸಂಬಂಧ ಪಟ್ಟವರು ಅರ್ಥ ಮಾಡ್ಕೋಬೇಕು. ಇಲ್ಲದಿದ್ದಲ್ಲಿ ಪ್ರತೀ ವರ್ಷ "ರಾಷ್ಟ್ರೀಯ ಗ್ರಾಹಕ ದಿನಾಚರಣೆ"ಗಳು ನಡೀತಲೇ ಇರ್ತವೆ. ಗಣ್ಯರು ಜಾಗೃತಿ ಕೊರತೆ ಇದೆ ಅಂತ ಭಾಷಣ ಮಾಡ್ತಾನೇ ಇರ್ತಾರೆ. ಏನಂತೀ ಗುರು?

ಇಂಗ್ಲೀಷ್ ಬರದೇ ಇರೋರು ಕೆನರಾ ಬ್ಯಾಂಕಿಂದ ದೂರ ಇರಿ!

೨೨ ಕೋಟಿ ರೂ ವೆಚ್ಚದಲ್ಲಿ ಕರ್ನಾಟಕದ ತನ್ನ ೫೯೦೦ ಶಾಖೆಗಳಲ್ಲಿ ಹೊಸ ನಾಮಫಲಕಗಳನ್ನು ಅಳವಡಿಸಲು ನಮ್ಮ ಕೆನರಾ ಬ್ಯಾಂಕು ಸಜ್ಜಾಗುತ್ತ ಅಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವ ಬಗ್ಗೆ ೨೦ ನೇ ಡಿಸಂಬರ್ ೨೦೦೭ ರ ವಿ.ಕ. ದಲ್ಲಿದೆ ಒಂದು ಸುದ್ಧಿ.

ಮಂಗಳೂರಿನ ಅಮ್ಮೆಂಬಳ ಸುಬ್ಬರಾಯ ಪೈ ಎಂಬ ಮಹನೀಯರೊಬ್ಬರು ಬಹಳ ದೂರದೃಷ್ಟಿಯಿಟ್ಟು ೧೯೦೬ ರಲ್ಲೆ ಆರಂಭಿಸಿದ ಈ ಕೆನರಾ ಬ್ಯಾಂಕ್ ಹಣಕಾಸು ಸಂಸ್ಥೆ. ನಂತರದಲ್ಲಿ ಕನ್ನಡಿಗರೆಲ್ಲರ ಬೆಂಬಲದೊಂದಿಗೆ ಬೆಳೆದು ಇಂದು ಇಡೀ ವಿಶ್ವಕ್ಕೆ ಚಿರಪರಿಚಿತ.

ನಮ್ಮ ಕನ್ನಡಿಗರದೇ ಬ್ಯಾಂಕು ಎಂದು ನಾವು ಹೆಮ್ಮೆಯಿಂದ ಹೇಳುತ್ತಿದ್ದ ಕರ್ನಾಟಕ, ಕಾರ್ಪೋರೇಷನ್, ವಿಜಯ, ಸಿಂಡಿಕೇಟ್, ವೈಶ್ಯ ಮತ್ತು ಕೆನರಾ ಬ್ಯಾಂಕುಗಳು ನಮ್ಮೂರುಗಳಲ್ಲಿ ಕನ್ನಡಿಗರಿಗೇ ಹೆಚ್ಚು ಕೆಲಸದ ಅವಕಾಶ ಒದಗಿಸಿದ್ದವು. ಶಾಖೆಗಳೆಲ್ಲೆಡೆ ಕನ್ನಡತನ ತುಂಬಿ ತುಳುಕಿರುತ್ತಿತ್ತು. ಸಂಪೂರ್ಣ ಕನ್ನಡಮಯವಾಗಿದ್ದ ಬ್ಯಾಂಕಿನೊಳಗೆ ಕಾಲಿಟ್ಟೊಡನೆ ನಮ್ಮದೇ ಮನೆಯೊಳಗೆ ದೊರಕುವ ಸ್ವಾಗತ ನಮಗಲ್ಲಿ ಸಿಗುತ್ತಿತ್ತು. ಕನ್ನಡಿಗರ ಆಶೀರ್ವಾದದಿಂದ ಬೆಳೆದ ಈ ಬ್ಯಾಂಕುಗಳು ದೇಶದೆಲ್ಲೆಡೆ ಟಿಸಿಲೊಡೆದು ಆರ್ಥಿಕವಾಗಿ ಸಾಕಷ್ಟು ಲಾಭ ಮಾಡಿಕೊಂಡವು. ಆದರೆ ತಾವು ಬೆಳೆದಂತೆ ತಮ್ಮನ್ನು ಬೆಳೆಸಿದ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಲು ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗಳು ವಿಫಲವಾಗುತ್ತಿರುವುದು ವಿಪರ್ಯಾಸವಾಗಿದೆ.

ಇದರ ಜತೆಗೆ ಇಂಗ್ಲೀಷ್ ಬಲ್ಲವರಿಗೆ ಮಾತ್ರ ನಮ್ಮ ಬ್ಯಾಂಕಿರುವುದು ಎಂಬ ಭಾವನೆ ಮೂಡಿಸುತ್ತ ಇಂದು ಅನೇಕ ವಿದೇಶಿ ಬ್ಯಾಂಕುಗಳು ನಮ್ಮಲ್ಲಿ ಲಗ್ಗೆ ಇಟ್ಟಿವೆ. ಈ ಬ್ಯಾಂಕಿನ ಕರ್ನಾಟಕದ ಶಾಖೆಗಳಲ್ಲಿ ಕನ್ನಡಿಗ ಇಂದು ಪರಕೀಯ. ತಾವು ಬೆಳೆಯುವುದರ ಜತೆಗೆ ಕನ್ನಡ-ಕನ್ನಡಿಗ-ಕರ್ನಾಟಕದ ಸಂಸ್ಕೃತಿಗೆ ಕಿಂಚಿತ್ತಾದರೂ ಪ್ರತ್ಯಕ್ಷವಾಗಿ ಸಹಕಾರಿಯಾಗಬೇಕಾದದ್ದು ಇಲ್ಲಿಗೆ ಬರುವ ಯಾವುದೇ ವ್ಯಾಪಾರಿಗಳ ಮನೋಧರ್ಮವಾಗಬೇಕು. ಅದರಲ್ಲೂ ಕೆನರಾ ಬ್ಯಾಂಕ್ ನಂತಹ ಸ್ಥಳೀಯ ಸಂಸ್ಥೆಗಳಿಗೆ ಅದು ಮೂಲಮಂತ್ರವಾಗಬೇಕು. ಅದೇ ಅವರ ಸ್ವಸ್ವರೂಪ ಮತ್ತು ಸ್ವವ್ಯಕ್ತಿತ್ವಕ್ಕೆ ಕೈಗನ್ನಡಿಯಾಗುವುದು. ಇವೇ ಅವರಲ್ಲಿಗೆ ಬರುವ ಗ್ರಾಹಕರು ಇದು ನಮ್ಮ ಬ್ಯಾಂಕು ಎಂದು ಗುರುತಿಸಿಕೊಳ್ಳಲು ಸಹಕಾರಿಯಾಗುವುದು. ನ್ಯಾಯಾಲಯ ನಾಮಫಲಕದ ಈ ವ್ಯವಹಾರದಲ್ಲಿ ತಾನು ಏನೂ ಹೇಳಲಿಚ್ಚಿಸುವುದಿಲ್ಲ ಎಂದು ಕೈ ತೊಳೆದುಕೊಂಡಿದೆ. ಇದು ಕೆನರಾ ಬ್ಯಾಂಕ್ ತನಗೆ ದೊರೆತ ಜಯ ಎಂದು ಭಾವಿಸಿರಬಹುದು. ಆದರೆ, ಕೆನರಾ ಬ್ಯಾಂಕ್ ನಮ್ಮ ನಾಡಿನ ತನ್ನ ಶಾಖೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡದಿರುವುದು ತನ್ನ ಅನನ್ಯತೆ ಮತ್ತು ಅಭಿನ್ನತೆಗೆ ಮಸಿಬಳಿದುಕೊಂಡತಲ್ವ ಗುರು.

ಕರ್ನಾಟಕದ ಎಲ್ಲಾ ಅಂಗಡಿ, ಮುಂಗಟ್ಟು, ವಾಣಿಜ್ಯೋದ್ದೇಶಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಬೇಕು ಅನ್ನೋ ಆದೇಶ ಇಂತಹವರ ಕಣ್ಣು ತೆರಸಬೇಕಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ಕನ್ನಡಕ್ಕೆ ಅಗ್ರಸ್ಥಾನ ನೀಡಲು ಗಮನಹರಿಸಬೇಕಿದೆ. ಕೆನರಾ ಬ್ಯಾಂಕಲ್ಲಿ ಖಾತೆ ಹೊಂದಿರುವ ಕನ್ನಡಿಗರೆಲ್ಲರೂ ಬ್ಯಾಂಕ್ ನ ಈ ನಿಲುವಿನ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಬೇಕಿದೆ.

ಊರುಗಳ ಹೆಸರುಗಳು: ನಾವು ನಿಯಮ ಪಾಲಿಸಿದ್ದಕ್ಕೆ ಶಿಕ್ಷೆ

ಕರ್ನಾಟಕದ 13 ಊರುಗಳ ಹೆಸರನ್ನು ಇಂಗ್ಲೀಷಿನಲ್ಲಿ ಬರೆಯುವಾಗ ಕನ್ನಡಕ್ಕೆ ಆದಷ್ಟೂ ಹತ್ತಿರವಾಗೋಹಂಗೆ ಮಾಡುವುದಕ್ಕೆ ಕೇಂದ್ರದ ಮುಂದಿಟ್ಟಿರೋ ಕರ್ನಾಟಕ ಸರ್ಕಾರದ ಮನವಿ ಒಂದು ವರ್ಷದಿಂದ ಫ್ರಿಜ್ಜಲ್ಲಿ ಕೊಳೀತಿರೋದು 18ನೇ ತಾರೀಖಿನ ಹಿಂದು ಪತ್ರಿಕೆಯಲ್ಲಿ ವರದಿಯಾಗಿದೆ. 13 ಹೆಸರುಗಳಲ್ಲಿ 12ಕ್ಕೆ ಸರಿ ಅಂದಿದ್ರೂ ಬೆಳಗಾವಿ ವಿಚಾರದಲ್ಲಿ ಮಾತ್ರ ಕೇಂದ್ರ ನಕಾರಾತ್ಮಕ ನಿಲುವು ತೋರಿದೆ. ಮನ್ನಣೆ ಪಡೆಯುವ ಕ್ರಮವನ್ನು ನಿಯತ್ತಾಗಿ ಪಾಲಿಸಿದ್ದರೂ ನಮಗೆ ಮೋಸ ಆಗಿದೆ. ಆದ್ರೆ ಇಂತಹ ನಿಯಮ ಪಾಲನೆ ನಡೀದಿದ್ರೂ ಈ ಹಿಂದೆ ತಮಿಳುನಾಡಿನ, ಮಹಾರಾಷ್ಟ್ರ ಮತ್ತು ಬಂಗಾಳದ ಹೆಸರುಗಳ ಬದಲಾವಣೆ ಮಿಂಚಿನ ವೇಗದಲ್ಲಿ ಸಾಗಿತ್ತು. ಈ ವಿಷಯದಲ್ಲಿ ನಿಯಮಗಳ್ನ ಪಾಲಿಸಿದ್ದಕ್ಕೆ ಕನ್ನಡಿಗರಿಗೆ ಒಳ್ಳೆ ಫಲ ಸಿಕ್ಕ ಹಾಗಾಯ್ತು ಗುರು!

ಹೆಸರಲ್ಲೇನಿದೆ ಅಂತೀರಾ?

ನಮ್ಮ ಊರುಗಳು, ನಮ್ಮ ಬೀದಿಗಳು, ನಮ್ಮ ಮನೆಗಳು, ನಮ್ಮ ಮಕ್ಕಳು, ನಮ್ಮ ಮುಂದಿನ ಪೀಳಿಗೆ ಮತ್ತವುಗಳ ಹೆಸರುಗಳ ಮಧ್ಯೆ ನಿಕಟ ಸಂಬಂಧವಿರತ್ತೆ. ಇವುಗಳ ಮೇಲೆ ಇರ್ಬೇಕಾದ್ದು ನಮ್ಮ ಪ್ರಭಾವವೋ ಹೊರಗಿನ ದೇಶದವರ ಪ್ರಭಾವವೋ ಅಂತ ಇಲ್ಲಿ ಕಾಣಬೇಕು. ಹೆಸರುಗಳಲ್ಲಿ ಅಡಗಿರೋ ನಮ್ಮ ಭಾಷೆಯ ಬಳಕೆ ಬಹಳ ಮುಖ್ಯ, ಅದನ್ನ ನಾವು ಬಿಟ್ಟುಕೊಡ್ಬಾರ್ದು.

ನಮ್ಮೂರುಗಳನ್ನು ನಾವು ಯಾವ ಹೆಸರುಗಳಿಂದ ಕರೀತೀವೋ ಅದು ನಮ್ಮ ಮುಂದಿನ ಪೀಳಿಗೆ ಯಾವ ಸಂಪ್ರದಾಯ ಆಚರಿಸ್ತಾರೋ ಅದನ್ನ ನಿರ್ಧರಿಸತ್ತೆ. ನಮ್ಮ ಸಂಪ್ರದಾಯ/ಸಂಸ್ಕೃತಿ ಉಳೀಬೇಕು ಅಂದ್ರೆ, ಕನ್ನಡಿಗ ಕನ್ನಡಿಗನಾಗೇ ಉಳೀಬೇಕು ಅಂದ್ರೆ ಈ ಹೆಸರುಗಳು ಬದಲಾಗ್ಲೇಬೇಕು.

ಒಂದು ಊರಿನ ಹೆಸರು ಅದ್ರಲ್ಲಿ ನೆಲೆಸಿರುವ ಜನರ ಪ್ರತಿನಿಧಿ ಹೊರತು ಹೊರಗಿನೋರದಾಗೋದು ಸರಿಯಲ್ಲ. ಮೈಸೂರು ಅನ್ನೋದರ ನಿಜವಾದ ಇತಿಹಾಸ ಮಹಿಶೂರು ಅನ್ನೋದ್ರಲ್ಲಿ ಇದೆ ಹೊರತು ಮೆಸೂರು ಅನ್ನೋದ್ರಲ್ಲಿಲ್ಲ. ಹೊರಗಿನಿಂದ ಬಂದ ಬ್ರಿಟಿಷರು ಅವರಿಗೆ ನಮ್ಮೂರುಗಳ ಹೆಸರು ಹೇಳಲು ಕಷ್ಟ ಆಯ್ತು ಅಂತ ಅವಾಗ ಹೆಸ್ರನ್ನೇ ಬದಲಾಯ್ಸಿದ್ರು. ಈಗ ಅವರು ಯಾರೂ ಇಲ್ಲಿ ಉಳಿದಿಲ್ಲ. ಇನ್ನು ಏಕೆ ಅದೇ ಹಳೆ ಹೆಸರು? ಶ್ರೀರಂಗಪಟ್ಟಣ ಅನ್ನೋ ಹೆಸರಿಂದ ಅಲ್ಲಿಯ ಜನರಿಗೆ ತಿಳಿಯುವುದಾದ್ರು ಏನು, ಅದೇ ಸೆರಿಂಗಪಾಟಿನಂ ಅನ್ನೋದ್ರಿಂದ ತಿಳಿದುಬರೋದು ಏನು? ಇಂತಹ ದೊಡ್ಡ ವ್ಯತ್ಯಾಸವೇ ನಮ್ಮ ಜನರು ನಮ್ಮತನವನ್ನು ಮರೆತು ಹೋಗುವ ಹಾಗೆ ಮಾಡ್ತಿರೋದು.

ನಿಯಮ ಪಾಲಿಸಿದ್ದಕ್ಕೆ ಪಂಗನಾಮ

ಹೆಸರಿನಲ್ಲಿ ಕಂಡಿರೋ ಇಂತಹ ವ್ಯತ್ಯಾಸಗಳಿಂದ ಕನ್ನಡಿಗನಿಗೆ ತನ್ನದೇ ಆದ ನಿಜವಾದ ಇತಿಹಾಸ ತಿಳಿಯದೇ ಹೋಗಿ ತನ್ನ ನಾಡಿನಲ್ಲಿ ಬಂದು ನೆಲೆಸಿದ್ದ ಹೊರಗಿನೋರ ಮಾಹಿತಿಯೇ ಇತಿಹಾಸ ಅಂತಾಗಿದೆ. ಇದರಿಂದ ದಿನ-ನಿತ್ಯವೂ ತನ್ನ ಭಾಷೆಯ ಒಂದೊಂದು ಅಂಶ ಬೇರೆ ಭಾಷೆಗಳಿಂದ ಹೇರಿಕೆಗೀಡಾಗುತ್ತಿರೋದು ಕಂಡು ಬರ್ತಿದೆ. ನಮ್ಮ ಅಡಿಗೆ ತೊಡುಗೆಗಳಲ್ಲೂ ಇಂದು ಹೊರಗಿನೋರ ಉಚ್ಚಾರ ದೋಶದಿಂದ ಬದಲಾವಣೆಯಾಗ್ತಿದೆ. ದೋಸೆ-ದೋಸಾ, ವಡೆ-ವಡ, ಬೇಳೆ-ದಾಲ್, ಕೋಸು-ಗೋಬಿ ಆಗಿದೆ. ಹಿಂಗೇ ಉಪ್ಯೋಗವಾಗ್ತಿದ್ದ ನಮ್ಮ ಹೆಸರುಗಳೆಲ್ಲಾ ಮಾಯವಾಗ್ತಿವೆ.

ಕನ್ನಡ ನಾಡಿನಲ್ಲಿ ಸೇರೋದೇ ಸರಿ ಅಂತ ಭಾಷಾವಾರು ಪ್ರಾಂತ್ಯ ರಚನೆ ಸಮಯದಲ್ಲಿ ನಿರ್ಧಾರವಾಗಿ ನಮ್ಮ ರಾಜ್ಯಕ್ಕೆ ಬೆಳಗಾವಿ ಸೇರಿಸಿತ್ತು. ಬೆಳ್ಗಾವಿ ಅನ್ನೋ ಒಂದು ಹಳ್ಳಿಯನ್ನು ಬ್ರಿಟಿಷರು ಅಂದು ಬೆಳ್ಗಾಮ್ ಅಂತ ಕರ್ದಿದ್ರು, ಆದ್ರೆ ಇಂದೂ ಕೂಡ ಅಲ್ಲಿಯ ಜನರು ಬೆಳ್ಗಾವಿ ಅಂತ ಉಪ್ಯೋಗ ಮಾಡೋದೇ ಹೆಚ್ಚು. ಹೀಗಿರುವಾಗ ಈ ವ್ಯತ್ಯಾಸವೇಕೆ? ಬೇರೆ ರಾಜ್ಯಗಳ ಇದೇ ರೀತಿಯ ಬೇಡಿಕೆಗಳಿಗೆ ಕೂಡಲೆ ಮನ್ನಣೆ ನೀಡಿದ್ದು ನಮ್ಮ ರಾಜ್ಯಕ್ಕೆ ಮಾಡ್ತಿರೋದು ಇದು ಮಾತ್ರ ಮಲ-ತಾಯಿ ಧೋರಣೆ ಅಲ್ದೆ ಇನ್ನೇನು ಗುರು? ವ್ಯವಸ್ಥೆಗೆ ಸರಿಯಾಗಿ ಮರ್ಯಾದೆ ಕೊಟ್ಟು ಅದರ ನಿಯಮ ಪಾಲಿಸಿದಕ್ಕೆ ಕೇಂದ್ರ ಸರ್ಕಾರ ನಮಗೆ ಇಟ್ಟಿರೋ ಈ ಪಂಗನಾಮ ಕನ್ನಡಿಗರಿಗೆ ಎಲ್ಲೀ ನ್ಯಾಯ ಗುರು?!

ಕನ್ನಡಿಗರಿಂದ ಚುನಾಯಿತರಾಗಿರೋ ಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಾಯ ಕೊಟ್ಟು ಈ ಕೆಲ್ಸ ಮಿಂಚಿನ ವೇಗದಲ್ಲಿ ಮಾಡಿಸಿಕೊಡ್ಬೇಕು ಗುರು! ನಿಧಾನವಾಗಿ ಬೆಳಗಾವಿ ಇಂದ ಬೆಳ್ಗಾವ್, ಮುಂದೆ ಈಗಾಗಲೇ ಕಂಡಂತೆ ಮಂಗಳಾಪುರಂ, ಹೀಗೇ ನಮ್ಮ ಗಡಿ ಭಾಗದಿಂದ ಅಕ್ಕಪಕ್ಕದ ರಾಜ್ಯದೋರು ಒಳಬಂದು ನಮ್ಮೂರುಗಳ ಹೆಸರನ್ನು ಬದಲಾಯಿಸೋದಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಿ, ಕ್ರಮೇಣ ಕನ್ನಡ ನಾಡಿನೆಲ್ಲೆಡೆ ಕನ್ನಡವೇ ಅನಿಸದ ಹೆಸರುಗಳು ತುಂಬಿಹೋಗತ್ತೆ ಗುರು! ಆ ದಿನ ನೋಡ್ಬೇಕಾ?

ಕರ್ನಾಟಕ ಪ್ರವಾಸೋದ್ಯಮ ಕನ್ನಡಿಗರಿಗೇ ಅನ್ನ ಕೊಡ್ಬೇಕು!

ಕರ್ನಾಟಕ ರಾಜ್ಯ ಸರ್ಕಾರ, ಪ್ರವಾಸೋದ್ಯಮದ ಬೆಳವಣಿಗೆಗಾಗಿ ಹೊಸ ಹೊಸ ಯೋಜನೆಗಳನ್ನುರೂಪುಸ್ತಾ ಪಕ್ಕಾ ಕಾರ್ಪೋರೇಟ್ ಆಗ್ತಿರೋ ಸುದ್ದಿ ಸಖತ್ ಖುಷಿ ತರ್ತಿದೆ . ನಿಜವಾಗ್ಲೂ ಪ್ರವಾಸೋದ್ಯಮವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿಬಿಟ್ರೆ ಕರ್ನಾಟಕ ಬೇಜಾನ್ ಉದ್ಧಾರ ಆಗಿಬಿಡುತ್ತೆ ಗುರು.

ಪ್ರವಾಸೋದ್ಯಮದ ಮಹತ್ವ


ನಮ್ಮ ಹಳಮೆ, ಹಿರಿಮೆಗಳನ್ನು ನೋಡಲು ಪ್ರಪಂಚದ ಮೂಲೆ ಮೂಲೇಲಿರೋ ಜನರನ್ನು ಆಕರ್ಷಿಸಿ ಇಲ್ಲಿಗೆ ಬರೋ ಹಾಗೆ ಮಾಡಬೇಕು. ಇದರಿಂದ ನಮ್ಮ ಜನಕ್ಕೆ ಕೆಲಸ ಸಿಗಬೇಕು. ನಮ್ಮ ಸರ್ಕಾರಕ್ಕೆ ಸಂಪತ್ತು ಹರಿದು ಬರಬೇಕು ಅನ್ನೋ ವಿಷಯಗಳನ್ನು ಸದಾ ನೆನಪಲ್ಲಿ ಇಟ್ಕೊಂಡು ಬೆಳವಣಿಗೆಯ ಹೆಜ್ಜೆಗಳನ್ನು ಇಡಬೇಕು. ಅದರ ಜೊತೆಜೊತೆಗೆ ಈ ಹೆಜ್ಜೆ ಸರಿಯಾಗಿ ಇಡ್ದೇ ಇದ್ರೆ ನಮ್ಮ ನಾಡು, ನುಡಿ, ಸಂಸ್ಕೃತಿ, ಇತಿಹಾಸ... ಎಲ್ಲದರಲ್ಲೂ ನಮ್ಮತನಾನ ಕಳ್ಕೋಬೇಕಾಗುತ್ತೆ ಅನ್ನೋದನ್ನೂ ನೆನಪಲ್ಲಿ ಇಟ್ಕೊಬೇಕು ಗುರು.

ಪ್ರವಾಸೋದ್ಯಮ ಇಲಾಖೆ ಇದನ್ನು ಗಮನಿಸಲಿ..


ಈ ಪ್ರವಾಸಿ ತಾಣಗಳ ಬೆಳವಣಿಗೆಯಲ್ಲಿ ಹೊರ ನಾಡಿನ ಸಂಸ್ಥೆಗಳಿಗೆ ಬಂಡವಾಳ ಹೂಡಿಕೆಗೆ ಅವಕಾಶ ನೀಡುವಾಗ ಮೊದಲೇ ಸರಿಯಾದ ನಿಬಂಧನೆಗಳನ್ನು ಹಾಕಬೇಕು.
  1. ಪರನಾಡಿನಿಂದ ಬಂಡವಾಳ ಮಾತ್ರ ಹರಿದು ಬರಬೇಕು. ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜನಗಳಲ್ಲ
  2. ಕನ್ನಡ ಮತ್ತು ಕನ್ನಡ ಸಂಸ್ಕೃತಿಗಳು ನಮ್ಮ ಪ್ರವಾಸಿ ತಾಣಗಳ ಮೂಲ ಸರಕಾಗಬೇಕು.
  3. ಪ್ರವಾಸಿ ತಾಣಗಳ ಎಲ್ಲೆಡೆ ಕನ್ನಡದ ಹೆಸರುಗಳು, ನಮ್ಮತನದ ಪ್ರತೀಕಗಳಾಗಿ ನಮ್ಮ ಉಡುಗೆ ತೊಡುಗೆಗಳು, ತಿಂಡಿ ತಿನಿಸುಗಳು, ನಮ್ಮೂರ ಶೈಲಿಯ ತಂಗುದಾಣಗಳು... ಇವುಗಳು ಇರ್ಬೇಕು.
  4. ಕನ್ನಡಿಗರಿಗೇ ಎಲ್ಲ ಕೆಲಸಗಳು ಸಿಗಬೇಕು.
  5. ಪ್ರವಾಸಿ ಮಾರ್ಗದರ್ಶಕರು, ಭಾಷಾಂತರಕಾರರ ವ್ಯವಸ್ಥೆ ಯೋಗ್ಯವಾಗಿ ನಡೆಯಬೇಕು.
  6. ದೇಶ ವಿದೇಶಗಳಲ್ಲಿ ಆಯಾ ಭಾಷೆಗಳಲ್ಲಿಯೇ ನಮ್ಮ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡಬೇಕು ಆದರೆ ನಮ್ಮ ಪ್ರವಾಸಿ ತಾಣಗಳಲ್ಲಿ ಮಾತ್ರಾ ನಮ್ಮತನ ಮೆರೆದಾಡಬೇಕು.
ಕೊನೆಹನಿ : ಕನ್ನಡನಾಡಲ್ಲಿ ಇರುವಷ್ಟು ಪ್ರವಾಸಿ ತಾಣಗಳನ್ನು ಸರಿಯಾಗಿ ಬಳಸಿಕೊಂಡರೆ ನಮ್ಮ ನಿರುದ್ಯೋಗ ಸಮಸ್ಯೆಗೂ, ಉದ್ಯಮಶೀಲತೆಯ ಕೊರತೆ ನಿವಾರಣೆಗೂ ತಕ್ಕ ಮಟ್ಟಿಗೆ ಕೊನೆಹಾಡಲು ಸಾಧ್ಯ ಗುರು!

ಏಕೀಕರಣ : ತಿರುವು ನೀಡಿದ ಹುಬ್ಬಳ್ಳಿ ಹೋರಾಟ

ಈ ನಮ್ಮ ತಾಯಿನಾಡು ನಮಗೆ ಪುಗಸಟ್ಟೆ ಸಿಕ್ಕಿಲ್ಲ. ಇದಕ್ಕಾಗಿ ಜೈಲು ಸೇರಿದವರೂ, ಮನೆಮಠ ಗಳನ್ನು ತೊರೆದವರೂ, ಅಷ್ಟೇಕೆ ತಮ್ಮ ಜೀವವನ್ನೇ ಬಲಿಕೊಟ್ಟೋರೂ ಇದಾರೆ. ಕರ್ನಾಟಕ ಏಕೀಕರಣದ ಹೋರಾಟದ ಈ ತ್ಯಾಗ ಬಲಿದಾನಗಳ ಕಥನಗಳ ಮಾಲೆಯಲ್ಲಿ ಮಾಣಿಕ್ಯವಾಗಿ ಫಳ ಫಳಿಸುತ್ತಿರುವುದು ಹುಬ್ಬಳ್ಳಿ ಹೋರಾಟದ ಘಟನೆ.
1953ರ ಕೊನೆಯ ವಾರದಲ್ಲಿ ಹುಬ್ಬಳ್ಳಿಯ ಸಮೀಪದ ಅದರಗುಂಚಿಯ ಶಂಕರ ಗೌಡ ಪಾಟೀಲರು ಆರಂಭಿಸಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಎಂಟು ದಿನಗಳನ್ನು ದಾಟಿ ಕಾವು ಪಡೆದುಕೊಂಡಿತ್ತು. ಜನರಲ್ಲಿ ಹೋರಾಟದ ಮನೋಭಾವ ತೀವ್ರವಾಗಿ ಜಾಗೃತವಾಗಿ, ಪ್ರಜಾ ಪ್ರತಿನಿಧಿಗಳೆಲ್ಲರೂ ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ಕೊಡಲೇ ಬೇಕೆಂದು ಜನ ಒತ್ತಾಯಿಸತೊಡಗಿದ್ದರು. ಇದೇ ಸಮಯದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಏಪ್ರಿಲ್ 19ರಂದು ಹುಬ್ಬಳ್ಳಿಯ ಪುರಭವನದಲ್ಲಿ ಸಭೆ ನಡೆಸಲು ಮುಂದಾಯಿತು. ಆಗ ನಡೆದ ಘಟನೆ ಬಗ್ಗೆ ಏಕೀಕರಣದ ಹೋರಾಟಗಾರರಾದ ಶ್ರೀ ಏ. ಜೆ. ಮುಧೋಳರು ಹೀಗಂತಾರೆ.

1953ನೇ ಹುಬ್ಬಳ್ಳಿಯ ಘಟನೆ: ಶ್ರೀ. ಏ ಜೆ ಮುಧೋಳರ ನುಡಿಗಳಲ್ಲಿ
ಏಪ್ರಿಲ್ 19ರ ಬೆಳಗಿನಿಂದಲೇ ಹುಬ್ಬಳ್ಳಿಯ ಗುಳಕವ್ವ ಮೈದಾನದಲ್ಲಿ (ಈಗಿನ ನೆಹ್ರೂ ಸ್ಟೇಡಿಯಂ) ಜನ ಸೇರಲಾರಂಭಿಸಿದರು. ನಾಲ್ಕು ಗಂಟೆಯ ಹೊತ್ತಿಗೆ ಸುಮಾರು 25,000 ಜನ ಸೇರಿದ್ದರು. ಅವರ ಕೂಗೆಲ್ಲಾ ಒಂದೇ 'ಅವರು ರಾಜಿನಾಮೆ ಕೊಟ್ಟರೇನು?' ನಾನು ಮತ್ತು ಸಿದ್ದಪ್ಪ ಕಮ್ಮಾರ ಮುಂದೆ ಇದ್ದೆವು. ಪೊಲೀಸ್ ಬಂದೋಬಸ್ತ್ ಜೋರಾಗಿತ್ತು. ಆಗ ರೆಬೆಲೋ ಎಸ್.ಪಿ, ಕಾಂಬ್ಳಿ ಡಿ.ಎಸ್.ಪಿ ಆಗಿದ್ದರು. ಗುಳಕವ್ವನ ಕೆರೆ ಮೈದಾನದಲ್ಲೇ ಆಗ ಪ್ರಕಾಶ್ ಸರ್ಕಸ್ ನಡೀತಿತ್ತು. ಜನ ಗುದ್ಲೆಪ್ಪ ಹಳ್ಳಿಕೇರಿಯ ಜೀಪಿಗೆ ಬೆಂಕಿ ಇಟ್ಟರು. ಜನ ಟೌನ್ ಹಾಲಿನೊಳಗೆ ನುಗ್ಗಿದರು. ನಿಜಲಿಂಗಪ್ಪನವರಿಗೆ ಬಳೆ ತೊಡಿಸಿದರು. ನೇಸ್ವಿಯವರಿಗೆ ಏಟು ಬಿತ್ತು. ಜನ ಕೇಳಿದ್ದು 'ರಾಜಿನಾಮೆ ಕೊಡಿ'. ಗಲಭೆ ಹೆಚ್ಚಾದಾಗ ಪೊಲೀಸರು ಲಾಠಿ ಛಾರ್ಜ್ ಮಾಡುವುದಾಗಿ ಬೆದರಿಸಿದರು. ಜನ 'ಮಾಡಿ' ಅಂತ ಎದೆಯೊಡ್ಡಿದರು.

ಸಿಡಿದವು ಗುಂಡುಗಳು: ಹಾರಿದವು ಹುಲಿಗಳು
ಜನ ಕದಲಲಿಲ್ಲ. ಲಾಠಿ ಛಾರ್ಜ್ ಗೆ ಆಜ್ಞೆ ಮಾಡಲಾಯಿತು. ಆಗ ಪ್ರಕಾಶ್ ಸರ್ಕಸ್ ನಲ್ಲಿ ಹುಲಿ ಪ್ರದರ್ಶನ ನಡೆಯುತ್ತಿತ್ತು. ಗಲಭೆಯಲ್ಲಿ ಎರಡು ಹುಲಿಗಳೂ ಹೊರಬಿದ್ದವು. ಇಲ್ಲಿ ಜನರ ಗಲಭೆ. ಜನರೂ ಪೊಲೀಸರ ವಿರುದ್ಧ ತಿರುಗಿ ಬಿದ್ದು ಕಲ್ಲು ತೂರಾಟ ಆರಂಭವಾಯಿತು. ಟೌನ್ ಹಾಲ್ ತುಂಬಾ ಕಲ್ಲು ಬಿದ್ದವು. ಲಾಠೀ ಛಾರ್ಜ್ ಆರಂಭವಾಗುತ್ತಿದ್ದಂತೆಯೇ ಹೆದರಿದ ಜನ ಗುಳಕವ್ವ ಕೆರೆಯ ಒಂದು ಅಂಚಿಗಿದ್ದ ದೊಡ್ಡ ಚರಂಡಿಯನ್ನು ದಾಟಿ ಮರಾಟ ಗಲ್ಲಿಯತ್ತ ಓಡಿದರು. ಗಲಭೆ ಇನ್ನೂ ಮುಂದುವರೆದೇ ಇತ್ತು.
ಆಗ ಪೊಲೀಸರು ಗೋಲಿಬಾರ್ ಗೆ ಆದೇಶ ನೀಡಿದರು. ಗುದ್ಲೆಪ್ಪನವರ ಜೀಪಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಲು ಬಂದಿದ್ದ ಫೈರ್ ಎಂಜಿನ್ ಮೇಲೂ ಜನ ದಾಳಿ ಮಾಡಿದರು.
ಹನ್ನೆರಡು ಗಂಟೆಯವರೆಗೂ ಗಲಭೆ ನಡೆಯಿತು. ಬೆಳಗಿನ ಜಾವ 4 ಗಂಟೆಗೆ ನಮ್ಮನ್ನೆಲ್ಲಾ ಹಿಡಿದರು. ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿಗೆ ಬಂತು. ಹುಬ್ಬಳ್ಳಿಯ ಗೋಲಿಬಾರ್ ಕಟ್ಟಲೆ ಎಂದೇ ಪ್ರಸಿದ್ಧವಾದ ಅದು ಮೂರುವರೆ ವರ್ಷ ಕೋರ್ಟಿನಲ್ಲಿ ನಡೆಯಿತು. ಅದರಲ್ಲಿ ಮುದ್ದೇಮಾಲು ಐದುಗಾಡಿ ಚಪ್ಪಲಿಗಳು ಮತ್ತು ಬೂಟುಗಳು. ಇವೆಲ್ಲಾ ಗಲಭೆ ಸಮಯದಲ್ಲಿ ಮೈದಾನದಲ್ಲಿ ಬಿದ್ದಿದ್ದು ನಂತರ ಸಂಗ್ರಹಿಸಲ್ಪಟ್ಟವುಗಳು.....

ಕೇಸು ವಜಾ ಆದದ್ದು ಹೀಗೆ...
ವಿಚಾರಣೆಯ ಸಮಯದಲ್ಲಿ ಉಚಿತವಾಗಿ ನಮ್ಮ ಪರವಾಗಿ ವಾದ ಮಾಡಿದ ಎಸ್. ಆರ್. ಬೊಮ್ಮಾಯಿಯವರ ಜಾಣತನದಿಂದಾಗಿ ಈ ಕೇಸು ಬಿದ್ದು ಹೋಯಿತು. ವಿಚಾರಣೆಗಾಗಿ ನಮ್ಮ ಒತ್ತಾಯದ ನಂತರ ಮುಂದಿನ ಬಾರಿ ನಿಜಲಿಂಗಪ್ಪನವರು ಬಂದರು. ವಿಚಾರಣೆಯ ಸಂದರ್ಭದಲ್ಲಿ ಮುದ್ದೇಮಾಲಾಗಿದ್ದ ಚಪ್ಪಲಿ ರಾಶಿಯನ್ನು ತೋರಿಸಿ 'ತಮಗೆ ಏಟು ಬಿದ್ದ ಚಪ್ಪಲಿಯನ್ನು ಗುರುತಿಸಲು' ನಿಜಲಿಂಗಪ್ಪನವರಿಗೆ ಕೇಳಲಾಯಿತು.ಅವರು ಗುರುತಿಸಲು ಸಾಧ್ಯವಿಲ್ಲ ಅಂದರು. ಜೀಪಿಗೆ ಬೆಂಕಿ ಇಟ್ಟವರನ್ನು ಗುದ್ಲೆಪ್ಪನವರಿಗೂ ಗುರುತಿಸಲಾಗಲಿಲ್ಲ. ಕೊನೆಗೆ ನಮ್ಮ ಮೇಲೆ ಯಾವ ಆರೋಪಗಳನ್ನೂ ಸಿದ್ಧಪಡಿಸಲಾಗದೆ , ಬಿಡುಗಡೆ ಮಾಡಿದರು.

ಕರ್ನಾಟಕ ಏಕೀಕರಣ ಇತಿಹಾಸ: ಡಾ. ಎಚ್. ಎಸ್. ಗೋಪಾಲ ರಾವ್
ನವಕರ್ನಾಟಕ ಪ್ರಕಾಶನದ ಈ ಪುಸ್ತಕದ ತುಂಬ ಇಂತಹ ಅನೇಕ ರೋಮಾಂಚಕಾರಿ ಸಂಗತಿಗಳು ಇವೆ. ನಮ್ಮ ನಾಡು ನಮಗೆ ಪುಗಸಟ್ಟೆ ಸಿಕ್ಕಿಲ್ಲ. ಕನ್ನಡಿಗರ ಇತಿಹಾಸದ ಪುಸ್ತಕ ಸ್ವಾಭಿಮಾನಿಗಳ, ಮಹಾ ಸಾಮ್ರಾಜ್ಯಗಳ, ಸಾಹಸದ ಪುಟಗಳಿಂದ ಕಂಗೊಳಿಸುತ್ತಿದ್ದರೆ ಆ ಇತಿಹಾಸ ಕಥನದ ರಕ್ಷಾಪುಟವಾಗಿಇಂತಹ ತ್ಯಾಗ ಬಲಿದಾನಗಳ ಕಥೆ ಇವೆ. ಈ ಹೊತ್ತಿಗೆಯನ್ನು ತಪ್ಪದೆ ಓದಿ... ಇಂದೇ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೀಳರಿಮೆ ರೋಗ!

ನಾಮಫಲಕಗಳಲ್ಲಿ ಕನ್ನಡ ದೊಡ್ದಾಗಿ ಇರಬೇಕು ಅಂತ ಅದೇಶ ಹೊರಡ್ಸಿರೋ ಕರ್ನಾಟಕ ಸರ್ಕಾರಕ್ಕೆ ಯಾಪಾಟಿ ಕನ್ನಡ ಪರ ಕಾಳಜಿ ಐತಲ್ಲಪ್ಪಾ ಅಂತ ಬೆಂಗಳೂರಿನ ಜನವೆಲ್ಲಾ ದಂಗಾಗ್ ನಿಂತ್ಕಂಬುಟವ್ರೆ ಗುರು.
'ಬೆಂಗಳೂರು ಮಹಾನಗರ ಪಾಲಿಕೆ ಅದ್ಯಾವಾಗ ಬೃಹತ್ ಬೆಂಗಳೂರು ಮಾನಗರ ಪಾಲಿಕೆ ಆಯ್ತೋ ಏನೋ ಸಿವಾ, ಗರ ಬಡ್ಕೊಂಬುಟೈತೆ ಅದ್ಕೆ. ಗಾಳಿ ಮೆಟ್ಕೊಂಡ್ ಬುಟೈತೆ ಅದ್ಕೆ . ರಸ್ತೆ ಬದೀನಾಗೆ ಗಿಡಾ ನೆಟ್ಟು ಅದಕ್ಕೊಂದು ಬೇಲಿ ಕಟ್ಸೋ ಪಾಲಿಕೆ ಆ ಬೇಲಿ ಮ್ಯಾಗೆಲ್ಲಾ ಟುಸ್ಸು ಪುಸ್ಸು ಅಂತ ಇಂಗ್ಲೀಸ್ ನಾಗ್ ಬರ್ದಿರೋದ್ನ ಒಸಿ ನೀನೂ ನೋಡು ಗುರು' ಅಂತ ಕಂಡ್ ಕಂಡವರ್ಗೆಲ್ಲಾ ಕರ್ದೂ ಕರ್ದೂ ತೋರುಸ್ತವ್ರೆ ಗುರು.

ಇಂಗ್ಲೀಸು ಇಂಟರ್ ನ್ಯಾಸನಲ್ ...

ನಮ್ ಬೆಂಗಳೂರು ಬರೀ ಬಾರತ ಅಲ್ಲಾ, ಇಡೀ ಪರ್ಪಂಚದಾಗೆಲ್ಲಾ ಹೆಸರಾಗಿರೋ 'ಇಂಟರ್ ನ್ಯಾಸನಲ್ ಸಿಟಿ'. ಇಲ್ಲಿ ಬೇರೆ ಬೇರೆ ಭಾಷೆಯೋರು, ಬೇರೆ ಬೇರೆ ದೇಶದೋರು ಬತ್ತಾನೆ ಇತ್ತಾರೆ. ಅವ್ರುಗೆಲ್ಲಾ ಕನ್ನಡ ತಿಳ್ಯಕಿಲ್ಲಾ, ಅದ್ಕೆಯಾ ಇಂಗ್ಲೀಸು ಅನ್ನೋ ಸಿಖಾಮಣಿಗಳಿಗೆ ಇಲ್ಲದೆ ನೋಡಿ ಉತ್ರ.

ನಮ್ಮೂರಿನ ಯವಸ್ತೆ ನಮಗೋಸ್ಕರ ಇರ್ಬೇಕು ಗುರು..

ಇಡೀ ಬಾರತದಾಗೆ ಪ್ರವಾಸಿಗಳು ಅತಿ ಎಚ್ಚು ಬರೋ ರಾಜ್ಯಗಳಲ್ಲಿ ದೊಡ್ ಹೆಸ್ರು ರಾಜಸ್ತಾನದ್ದು ಗುರು. ಅಲ್ಲಿ ದೊಡ್ ಪಟ್ಣ ಅಂದ್ರೆ ಜೈಪುರ. ಅಲ್ಲೂ ಒಂದು ನಗರ ಪಾಲಿಕೆ ಐತೆ. ಅವ್ರೂ ಗಿಡ ನೆಡ್ತಾರೆ, ಅವ್ರೂ ಅದಕ್ಕೆ ಬೇಲಿ ಕಟ್ತಾರೆ. ಆದ್ರೆ ಆ ಬೇಲಿ ಮ್ಯಾಗೆ ತಮ್ಮ ಬಾಸೇಲೆ ಬರ್ಕೊಳಕ್ಕೆ ಮಾತ್ರಾ ಒಂಚೂರು ನಾಚ್ಕೆ ಇಲ್ಲ ಗುರು ಅವ್ರಿಗೆ.
ಯಾರಾನಾ ಇದ್ಯಾಕ್ಲಾ ಇಂಗೇ ಅಂತ ಕೇಳುದ್ರೆ 'ಅಲ್ಲಾ ಪರದೇಸಿಗಳು ಇಲ್ಲಿಗ್ ಬರೋದು ರಾಜಸ್ತಾನ ನೋಡಕ್ಕೆ. ಇಲ್ಲೂ ಅವ್ರುಗಳ ಕಣ್ಣಿಗೆ ಇಂಗ್ಲೀಸೇ ರಾಚುದ್ರೆ ಅದ್ಯಾಕ್ ಇಲ್ಲಿಗ್ ಬತ್ತಾರೆ, ಇಂಗ್ಲೇಂಡ್ ಗೆ ಓಯ್ತಾರೆ ಅಷ್ಟೆಯಾ' ಅಂತ ತಮ್ ರಾಜ್ಯದ ಪ್ರವಾಸೋದ್ಯಮದ ಯಶಸ್ಸಿನ ಗುಟ್ಟನ್ನೇ ಬಿಚ್ಚಿಡ್ತಾರೆ. ಅಸ್ಟೇ ಅಲ್ಲಾ, 'ನಮ್ಮೂರಾಗ್ ನಮ್ ಬಾಸೆ ಬಳುಸೋದು ನಮ್ ಜನಕ್ ಅರ್ತ ಆಗ್ಲಿ ಅಂತ ಅಲ್ವಾ? ನಮ್ಮೂರಿನ ಯವಸ್ತೆಗಳೆಲ್ಲಾ ಇರೋದು ನಮ್ ಜನಕ್ಕೆ ಅನುಕೂಲ ಮಾಡ್ಕೊಡ್ಲಿ ಅಂತಲ್ವಾ, ಇದುನ್ ಬುಟ್ಟು ಅದ್ಯಾವ್ ಮಂಗ ನನ್ ಮಗ ಬೇರೆ ಬಾಸೆ ಆಕ್ತಾನೆ' ಅಂತ ಕೇಳ್ತಾರೆ ಗುರು.

ಈ ಕಡೆ ನಮ್ ಬೆಂಗ್ಳೂರಿನ ಜನ ಎಲ್ಲಾ 'ಅಲ್ಲಾ ಸಾಮಿ, ಕರ್ನಾಟಕದ ರಾಜಧಾನೀಲೆ ಕನ್ನಡ ಇಲ್ದಂಗಾದ್ರೆ ಇನ್ನೆಲ್ ತಾನೆ ಉಳ್ದೀತು 'ಅಂತ ಮಾತಾಡ್ಕೋತಾ ಔವ್ರೆ ಗುರು. ಇದೆಲ್ಲಾ ನಮ್ಮ ಮಾನಗರ ಪಾಲಿಕೆಗೆ ಅದ್ಯಾವಾಗ್ ತಿಳೀತದೋ, ಕನ್ನಡ ಬಳ್ಸೋದಕ್ಕೆ ಇರೋ ಕೀಳರಿಮೆ ರೋಗಾ ಅದ್ಯಾವಾಗ ಬಿಟ್ ಹೋಯ್ತದೋ ಅಂತ ತುದಿಗಾಲಲ್ಲಿ ಕಾಯ್ಕಂಡ್ ನಿಂತವ್ರೆ ಗುರು.

ಸುಖ ಪಯಣ : ಒಳಿತಾಗಲಿ - ಅನ್ನೋಕೇನು ಧಾಡಿ?

ಹಜ್ ಯಾತ್ರೆಗೆ ಕರ್ನಾಟಕದಿಂದ್ಲೂ ಜನ ಹೋಗ್ತಾರೆ. ಆದ್ರೆ ನಮ್ಮ ಸರ್ಕಾರ ಇವರೆಲ್ಲಾ ಕನ್ನಡದವರು ಅನ್ನೋದ್ನ ಅದ್ಯಾಕೊ ಮರೆತಂಗಿದೆ.
ಇವರ ಪ್ರಯಾಣ ಸುಖವಾಗಿರಲಿ ಅಂತ ಶುಭ ಕೋರಿ ಬೀಳ್ಕೊಡೊ ವಿಚಾರದಾಗೆ ನಮ್ ಘನ ರಾಜ್ಯ ಸರ್ಕಾರ ಹೆಂಗ್ ನಡ್ಕೋತಾ ಇದೆ ಒಸಿ ನೋಡು ಗುರು.
ಬೆಂಗಳೂರು ವಿಮಾನ ನಿಲ್ದಾಣದ ಬಾಗಿಲಲ್ಲಿ ಇರೋ ಹಜ್ ಯಾತ್ರೆಗೆ ಶುಭ ಕೋರುತ್ತಿರುವ, ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ಫಲಕದಲ್ಲಿ ನಮ್ಮ ರಾಜ್ಯ ಸರ್ಕಾರ ಆಡಳಿತದಲ್ಲಿ ಕನ್ನಡದ ಅನುಷ್ಠಾನವನ್ನು ಎಷ್ಟು ಶ್ರದ್ಧೆಯಿಂದ ಮಾಡ್ತಿದೆ ಅನ್ನೋದು ಮುಖಕ್ ಹೊಡೆದಂಗೆ ಕಾಣ್ತಿದೆ ಗುರು.
ರಾಜಕಾರಣಿಗಳ ದೊಂಬರಾಟ
ನಮ್ಮ ರಾಜಕಾರಣಿಗಳು ಹಾಕಿರೋ ಫಲಕದ ಒಂದು ಸ್ಯಾಂಪಲ್ಲನ್ನೂ ನೋಡು ಗುರು.. ಕನ್ನಡ ನಾಡಲ್ಲಿ ರಾಜಕಾರಣ ಮಾಡೊ ಈ ಜನ ಈ ನೆಲ, ಇಲ್ಲಿನ ಭಾಷೆಗಳಿಗೆ ಪೂರಕವಾಗಿ ಬದುಕೋ ಬದಲಾಗಿ, ನಮ್ಮ ನುಡಿಯನ್ನೇ ಕಡೆಗಣಿಸೋದು ಯಾವ ತರಹದ ನಾಡದ್ರೋಹಕ್ಕೂ ಕಡಿಮೆಯಿಲ್ಲ. ಇದು ಯಾವುದೋ ಒಂದು ಪಕ್ಷಕ್ಕೆ ಮಾತ್ರಾ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳಲ್ಲೂ ಈ ಚಾಳಿ ಇರೋದು ನಮ್ಮ ನಾಡಿಗೆ ತಗುಲಿರೋ ಶಾಪ. ಇಂಥ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಬಗ್ಗೆ ನಾಡಿಗರೆಲ್ಲಾ ಎಚ್ಚರಗೊಳ್ಳಬೇಕಿದೆ ಗುರು.

ಮುಸ್ಲಿಮರೂ ಕನ್ನಡಿಗರೇ...
ಕನ್ನಡ ನಾಡಲ್ಲೇ ಹುಟ್ಟಿ, ಬೆಳೆದೂ, ಬದುಕ್ತಿರೋ ಮುಸ್ಲಿಮರೆಲ್ಲಾ ಕನ್ನಡದವರೇ ಆಗಿದ್ದಾಗ ಮುಸ್ಲಿಮರೆಲ್ಲ ಕನ್ನಡಿಗರಲ್ಲ ಅನ್ನೋ ರೀತಿ ಸರ್ಕಾರವೇ ನಡ್ಕೊಳ್ಳೋದು ತಪ್ಪು ಗುರು. ಇಲ್ಲಿ ಕನ್ನಡ ಬರದೇ ಇರೋ ಮುಸ್ಲಿಮರು ಭಾಳಾ ಕಮ್ಮಿ. ಹಾಗೆ ಕನ್ನಡ ಕಲೀದಿದ್ರೆ ಅದಕ್ಕೆ ಕಾರಣವೇ ಸರ್ಕಾರದ ಇಂಥಾ ನಡವಳಿಕೆಗಳು ಗುರು. ಒಟ್ನಲ್ಲಿ ಕನ್ನಡನಾಡಿನ ಮುಸ್ಲಿಮರಿಗೆಲ್ಲಾ ನಮ್ಮ ಸರ್ಕಾರವೇ 'ನೀವು ಕರ್ನಾಟಕದಲ್ಲಿ ಬದುಕೋದಕ್ಕೆ ಕನ್ನಡ ಕಲಿತುಕೊಳ್ಳೋ ಅಗತ್ಯ ಇಲ್ಲ' ಅಂತ ಸಾರಲಿಕ್ಕೆ ಹೊರ್ಟಿರೋದು ತಪ್ಪು ಗುರು.
ಸರ್ಕಾರ ಪ್ರತ್ಯೇಕತೆಗೆ ಪ್ರೋತ್ಸಾಹ ಕೊಡ್ದೆ ಮುಖ್ಯವಾಹಿನಿಗೆ ತರ್ಬೇಕು
ಇಷ್ಟರ ಮೇಲೂ ಯಾರೋ ಕೆಲವು ಮುಸಲ್ಮಾನರು ಉರ್ದುವನ್ನೋ ಮತ್ತೊಂದನ್ನೋ ತಮ್ಮ ತಾಯಿನುಡಿ ಅಂತ ಕರ್ಕೊಂಡು ನಾನು ಕನ್ನಡದವನಲ್ಲಾ ಅಂತಂದ್ರೆ 'ಕರ್ನಾಟಕದ ಆಡಳಿತ ಭಾಷೆ ಕನ್ನಡ, ಇಲ್ಲಿ ಬದುಕಬೇಕು ಅಂದ್ರೆ ಕನ್ನಡ ಕಲೀಬೇಕಾದ್ದು ಅನಿವಾರ್ಯ. ಕಲ್ತುಕೊಳ್ಳಿ ' ಅಂತ ಸರ್ಕಾರ ಹೇಳಬೇಕಾದ್ದೇ ಸರಿ ಗುರು.
ಮುಸಲ್ಮಾನರನ್ನು ಹೀಗೆ ಉರ್ದುವಿನಲ್ಲಿ ಹರಸೋ ಮೂಲಕ ನೀವು ಕನ್ನಡಿಗರಲ್ಲಾ ಅಂತ ಸಾರೋದನ್ನು ಮೊದಲು ನಿಲ್ಲಿಸ್ಬೇಕು ಗುರು. ಇಲ್ಲಾ ಅಂದ್ರೆ ಇವತ್ತು ಹಜ್ ಯಾತ್ರಿಕರಿಗೆ ಉರ್ದುವಿನಲ್ಲಿ ಶುಭ ಕೋರೋರು ನಾಳೆ ಅಯ್ಯಪ್ಪನ ಯಾತ್ರೆಗೆ ಮಲಯಾಳದಲ್ಲಿ, ಅಮರನಾಥ ಯಾತ್ರೆಗೆ ಹಿಂದಿಯಲ್ಲಿ , ರೋಮ್ ಜಾತ್ರೆಗೆ ಇಟಲಿಯನ್ ಭಾಷೇಲೂ, ಜೆರೂಸೆಲಮ್ ಯಾತ್ರೆಗೆ ಹೀಬ್ರೂನಲ್ಲೂ ಫಲಕ ಬರೆಸಿ ಹಾಕಬೇಕಾದೀತು ಅಷ್ಟೆ. ಭಾಷೆಗೂ ಧರ್ಮಕ್ಕೂ ತಳುಕು ಹಾಕೋದು ನಮ್ಮ ನಾಡಿನ ಒಗ್ಗಟ್ಟಿಗೆ, ಏಳಿಗೆಗೆ ಮಾರಕ ಅನ್ನೋದ್ನ ನಮ್ಮ ಸರ್ಕಾರಗಳು ಅರ್ಥ ಮಾಡ್ಕೋಬೇಕು ಗುರು.
ಈಗ ನಮ್ಮ ಸರ್ಕಾರ ನಡ್ಕೋಬೇಕಾದ ರೀತಿ ಏನಾಗಿರ್ಬೇಕು ಅನ್ನೋದು ಸರಳವಾಗೇ ಇದೆ. ನಾಡಿನ ಆಡಳಿತ ಭಾಷೆ ಕನ್ನಡ ಅನ್ನೋದನ್ನು ಜಾತಿ ಧರ್ಮ ಆಚರಣೆಗಳ ನಿರ್ಬಂಧವಿಲ್ಲದೆ ಜಾರಿಗೆ ತರಬೇಕು. ಕನ್ನಡದಲ್ಲಿ ಕೆಲಸ ಮಾಡೋ ಆದೇಶಾನ ಆಡಳಿತದ ಎಲ್ಲಾ ವಿಭಾಗಗಳಿಗೂ ಪರಿಣಾಮಕಾರಿಯಾಗಿ ಜಾರಿಗೆ ತರೋ ಮನಸ್ಸು ಮಾಡಬೇಕು. ಏನಂತೀಯಾ ಗುರು?
Related Posts with Thumbnails