ಯಶಸ್ವಿಯಾಗಿ ನಡೆದ ಭಾಷಾನೀತಿ ಕಾರ್ಯಕ್ರಮ...



ಬಹುಭಾಷಾ ಪ್ರಾಂತ್ಯಗಳ ಒಕ್ಕೂಟವಾದ ಭಾರತದಲ್ಲಿ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿಸಿಕೊಂಡು ಅದರ ಬಳಕೆಯನ್ನು ಕಡ್ಡಾಯವಾಗಿ ಹೆಚ್ಚಿಸುವ ಗುರಿಯಿಟ್ಟುಕೊಂಡು ಕೇಂದ್ರಸರ್ಕಾರ ರೂಪಿಸಿಕೊಂಡಿರುವ ಇವತ್ತಿನ ಭಾರತದ ಭಾಷಾ ನೀತಿ ಎಂತದ್ದು? ಅದರಲ್ಲಿನ ತೊಂದರೆಗಳೇನು? ಅದನ್ನು ಒಪ್ಪುವುದರಿಂದ ನಮಗಾಗುವ ಹಾನಿಯೇನು? ಎಲ್ಲ ಭಾರತೀಯರಿಗೂ, ಎಲ್ಲ ಭಾರತೀಯರ ಭಾಷೆಗೂ ಸಮಾನ ಸ್ಥಾನಮಾನ ನೀಡುವ, ಎಲ್ಲರನ್ನು ಸಮಾನವೆಂದು ಕಾಣುವ ಭಾಷಾ ನೀತಿ ಎಂತದ್ದು? ಒಟ್ಟಾರೆ ಭಾರತಕ್ಕೊಪ್ಪೋ ಭಾಷಾ ನೀತಿ ಹೇಗಿರಬೇಕು ಅನ್ನುವ ಬಗ್ಗೆ ಬನವಾಸಿ ಬಳಗ ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೊದಲಿಗೆ, "ಭಾರತದ ಭಾಷಾ ನೀತಿ ಮತ್ತು ಒಕ್ಕೂಟ ಧರ್ಮ" ಅನ್ನುವ ವಿಷಯದ ಬಗ್ಗೆ ಮಾತನಾಡಿದ ಹಿರಿಯ ಕನ್ನಡಪರ ಚಿಂತಕರಾದ ಶ್ರೀ. ಡಾ.  ಪಿ.ವಿ.ನಾರಾಯಣ ಅವರು ಭಾರತವೆನ್ನುವುದು ಒಂದು ರಾಜ್ಯಗಳ ಒಕ್ಕೂಟ, ಅಲ್ಲಿ ಯೂರೋಪಿಯನ್ ಒಕ್ಕೂಟದಲ್ಲಿರುವಂತೆ ಎಲ್ಲ ಭಾಷೆಗಳಿಗೂ ಅವಕಾಶವನ್ನು ಕೊಡುವ ಭಾಷಾ ನೀತಿ ಬೇಕು. ಸಂಸತ್ತಿನಲ್ಲಿ ಎಲ್ಲ ಭಾಷೆಗಳನ್ನು ಬಳಸುವಂತಹ ಅನುಕೂಲಗಳನ್ನು ಕಲ್ಪಿಸಬೇಕು. ಎಲ್ಲ ನುಡಿಗಳಿಗೂ ಸಮಾನ ಗೌರವ, ಸಮಾನ ಸ್ಥಾನಮಾನ ನೀಡುವ ಭಾಷಾ ನೀತಿಯನ್ನು ರೂಪಿಸುವುದೇ ನಿಜವಾದ ಒಕ್ಕೂಟ ಧರ್ಮವೆಂದು ನುಡಿದರು.

ಎರಡನೆಯವರಾಗಿ ಮಾತನಾಡಿದ ಹಿರಿಯ ಚಿತ್ರ ನಿರ್ದೇಶಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ.ಟಿ.ಎಸ್.ನಾಗಾಭರಣ ಅವರು "ಭಾರತೀಯ ಚಿತ್ರರಂಗವೆಂದರೆ ಹಿಂದಿ ಚಿತ್ರರಂಗವೇ?" ಎಂಬ ವಿಷಯದ ಬಗ್ಗೆ ಮಾತನಾಡುತ್ತ, "IIFA ಹೆಸರಿನಲ್ಲಿ ಹಿಂದಿ ಚಿತ್ರಗಳನ್ನಷ್ಟೇ ಪ್ರೋತ್ಸಾಹಿಸುವುದು, ಆಸ್ಕರ್ ಪ್ರಶಸ್ತಿಗೆ ಅತಿ ಹೆಚ್ಚು ಬಾರಿ ಹಿಂದಿ ಚಿತ್ರವನ್ನೇ ನಾಮಾಂಕಿತಗೊಳಿಸುವುದು, ಪ್ರಸಾರ ಭಾರತಿಯ ಅಂಗವಾದ ದೂರದರ್ಶನ, ವಿವಿಧ ಭಾರತಿಗಳ ಮೂಲಕ ಹಿಂದೀ ಪ್ರಸಾರಕ್ಕೆ ಹೆಚ್ಚಿನ ಉತ್ತೇಜನ ನೀಡುವುದು, ಇಂತಹ ಹಲವು ತಪ್ಪುಗಳ ಮೂಲಕ ಹಿಂದಿಯೇತರ ನುಡಿಗಳನ್ನು ಅವುಗಳ ನೆಲದಲ್ಲೇ ಮೂಲೆಗುಂಪಾಗಿಸುತ್ತಿರುವುದರ ಬಗ್ಗೆ ನೋವು ವ್ಯಕ್ತಪಡಿಸಿದರು. ಗುಜರಾತಿ, ಪಂಜಾಬಿ, ಮರಾಠಿ, ಬೆಂಗಾಲಿ, ಒರಿಯಾದಂತಹ ನುಡಿಗಳನ್ನು ಆಡುವವರ ಸಂಖ್ಯೆ ಗಣನೀಯವಾಗಿದ್ದರೂ ಆ ಭಾಷೆಗಳ ಚಿತ್ರೋದ್ಯಮ ಸೋತು ಸೊರಗಿರುವುದರ ಹಿಂದೆ ಹಿಂದೀ ಚಿತ್ರರಂಗದ ಕರಿ ನೆರಳಿದೆ, ಇದು ಬದಲಾಗಬೇಕು ಎಂದು ನುಡಿದರು.
 ಮೂರನೆಯವರಾಗಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ. ಟಿ.ಎ.ನಾರಾಯಣ ಗೌಡವರು "ಹಿಂದಿ ಹೇರಿಕೆ ವಿರೋಧಿ ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿ" ಎಂಬ ವಿಷಯದ ಬಗ್ಗೆ ಮಾತನಾಡಿದರು. ತಮಿಳುನಾಡಿನಲ್ಲಿ ನಡೆದ ಹಿಂದಿ ಹೇರಿಕೆ ವಿರೋಧಿ ಹೋರಾಟ ಮತ್ತು ಅದರಿಂದ  ದೊರೆತ ಗೆಲುವನ್ನು ಬಣ್ಣಿಸಿದ ಅವರು ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳ ಕೈಗೊಂಬೆಗಳಾಗಿರುವ ಇಲ್ಲಿನ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕರ್ನಾಟಕ ಹೇಗೆ ಹಿಂದೀ ಹೇರಿಕೆಗೆ ತುತ್ತಾಗಬೇಕಾಗಿ ಬಂದಿದೆ ಎಂಬುದನ್ನು ಅಂಕಿಅಂಶಗಳ ಸಮೇತ ವಿವರಿಸಿದರು. ೨೦೦೬ರಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸಿ ಕರವೇ ನಡೆಸಿಕೊಂಡು ಬಂದಿರುವ ಹೋರಾಟಗಳ ವಿವರವನ್ನು ತೆರೆದಿಟ್ಟರು. ದೇಶಕ್ಕೊಪ್ಪೊ ಭಾಷಾ ನೀತಿ ರೂಪಿಸಲು ಪಕ್ಷಭೇದ ಮರೆತು ಕರ್ನಾಟಕದ ರಾಜಕಾರಣಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬನವಾಸಿ ಬಳಗ ಹೊರ ತಂದಿರುವ, ಭಾರತದ ಭಾಷಾ ನೀತಿಯ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲುವ "ಹಿಂದೀ ಹೇರಿಕೆ- ಮೂರು ಮಂತ್ರ, ನೂರು ತಂತ್ರ" ಅನ್ನುವ ಪುಸ್ತಕ ಅತಿಥಿಗಳಿಂದ ಬಿಡುಗಡೆಗೊಂಡಿತು.
ಕೊನೆಯಲ್ಲಿ ಮಾತನಾಡಿದ ಉದಯವಾಣಿ ಸಮೂಹ ಸಂಪಾದಕರಾದ ಶ್ರೀ. ರವಿ ಹೆಗ್ಡೆಯವರು ಭಾರತಕ್ಕೊಪ್ಪೊ ಭಾಷಾ ನೀತಿ ಎಲ್ಲ ಭಾಷೆಗಳಿಗೂ ಸಮಾನ ಗೌರವ, ಸ್ಥಾನಮಾನ ನೀಡುವಂತದ್ದಾಗಿರಬೇಕು ಹಾಗೂ ಆಯಾ ಪ್ರದೇಶದಲ್ಲಿ ಅಲ್ಲಿನ ಭಾಷೆಯ ಸಾರ್ವಭೌಮತ್ವ ಎತ್ತಿ ಹಿಡಿಯುವಂತದ್ದು, ಅಲ್ಲಿನ ಅನನ್ಯತೆಯನ್ನು ಕಾಪಾಡುವಂತದ್ದು ಆಗಿರಬೇಕು ಎಂದರು ಹಾಗೂ ಬಹಳಷ್ಟು ಅಂಕಿಅಂಶಗಳ ಸಮೇತ ಬನವಾಸಿ ಬಳಗ ತಂದಿರುವ ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಕನ್ನಡಪರ ಚಿಂತಕ ಶ್ರೀ.ಕೆ.ರಾಜಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ ಹೊತ್ತಗೆಯನ್ನು ಕೊಳ್ಳಬಯಸುವವರು sanjeeva@banavasibalaga.orgನ್ನು ಸಂಪರ್ಕಿಸಬಹುದಾಗಿದೆ.

3 ಅನಿಸಿಕೆಗಳು:

ಪ್ರಶಾಂತ ಸೊರಟೂರ ಅಂತಾರೆ...

ಅಚ್ಚುಕಟ್ಟಾದ ಸಮಾರಂಭದಲ್ಲಿ ಪಾಲ್ಗೊಂಡ ಮತ್ತು ಒಂದೊಳ್ಳೆ ಪುಸ್ತಕ ಓದಿದ ಅನುಭವ ನನಗಾಯಿತು :-)

Raghavendra Joshi ಅಂತಾರೆ...

ಮೊದಲು ಹಿಂದಿ ನಮ್ಮ ರಾಷ್ಟ್ರ ಬಾಷೆ ಅಂತ ಸಾರಿ ಹೇಳಿವ ಶಾಲಾ ಪುಸ್ತಕಗಳು ಬಂದ್ ಆಗಬೇಕು.

Girish Kargadde ಅಂತಾರೆ...

ಒಳ್ಳೆಯ ಕಾರ್ಯಕ್ರಮ..ಇಂತಹ ಹಲವು ಕಾರ್ಯಕ್ರಮ ನಡೀಬೇಕು. ಛೆ..ನಾನು ಊರಲ್ಲಿ ಇರ್ಲಿಲ್ಲ..ಮಿಸ್ ಮಾಡ್ಕೊಂಡೆ.. :(

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails