
ಲೋಕಸಭಾ ಚುನಾವಣೆಗಳು ಹತ್ತಿರವಾಗ್ತಿದ್ದಂಗೇ ಕರ್ನಾಟಕದ ರಾಜಕಾರಣದಲ್ಲಿ ಹಿಂದೆಂದೂ ಕಾಣದ ಮಟ್ಟದಲ್ಲಿ ಸಮಾಜ ಒಡ್ಯೋ ರಾಜಕಾರಣ ಶುರುವಾಗಿದೆ ಗುರು! ಅಧಿಕಾರ ಹಿಡ್ಯೋದೇ ಗುರಿಯಾಗಿರೋವಾಗ ಪಕ್ಷಗಳನ್ನು ಒಡ್ಯೋದೇನೋ ಇವತ್ತಿನ ಸಹಜ ರಾಜಕೀಯ ಆಗಿದೆ. ಆದ್ರೆ ಚುನಾವಣೇಲಿ ಮತ ಗಳ್ಸಕ್ಕೆ ಒಂದು ಸಮಾಜಾನೇ ಒಡ್ಯೋ ರಾಜಕಾರಣಕ್ಕೆ ಏನನ್ನಬೇಕು ಗುರು!
ಪಕ್ಷಭೇದವಿಲ್ಲದ ನಡವಳಿಕೆ!ಈ ವಿಸ್ಯದಲ್ ಮಾತ್ರಾ ಎಲ್ಲಾರೂನೂ ಒಂದೇನೆ. "ರಾಜಕೀಯ ಪಕ್ಷಗಳೋರು ಎಲ್ಲಿ, ಯಾವ ಭಾಷೇಲಿ ಬೇಕಾದ್ರೂ ಪ್ರಚಾರ ಮಾಡೋದು ಸಂವಿಧಾನ ಬಾಹಿರ ಏನಲ್ಲಾ" ಅಂತಾ ನಮ್ ಕರ್ನಾಟಕದಾಗಿನ ಎಲ್ಲಾ ರಾಷ್ಟ್ರೀಯ ಪಕ್ಷಗಳು ಎಲ್ಲಾ ಜನರನ್ನು ಅವರವರ ಭಾಷೇಲಿ ಮತ ಕೇಳಕ್ಕೆ ಮುಂದಾಗಿದಾರೆ. ಪಾಪಾ, ಭಾರತೀಯ ಜನತಾ ಪಕ್ಷದೋರುನ್ನ ಕನ್ನಡದೋರು ಆ ಪಾಟಿ ಗೋಳು ಹೊಯ್ಕೊಂಡು, "ಬೆಳಗಾವಿ ಮರಾಠಿಗರಲ್ಲಿ ಮರಾಠಾತನವನ್ನು ಜಾಗೃತಿ" ಮಾಡಕ್ಕೆ ಮುಂದಾಗಿದ್ದ ಅಲ್ಲಿನ ಸಂಸದರ ಕೈ ತಡುದ್ ಬುಟ್ರಪ್ಪಾ, ಅದ್ಕೇ ಬಿಜೇಪಿಯೋರು ಬೇಜಾರಾಗಿ ಮುಖ್ಯಮಂತ್ರಿಗಳನ್ನು ಕರ್ದು ಅವರ ಅದುರಲ್ಲೇ ಅಲ್ಲಿನ ಶಾಸಕರ ಕಡೆಯಿಂದಲೇ ಮರಾಠೀಲಿ ಭಾಷಣ
ಮಾಡುಸ್ಬುಟ್ಟು ಧನ್ಯರಾಗ್ಬುಟ್ರು.
ಇವ್ರುದ್ದು ಒಂದು ತೂಕಾ ಆದ್ರೆ ಜೆಡಿಎಸ್ಸೋರು ಜಯಮ್ಮನ ಪಾಲ್ಟೀಗೆ ಗಾಳ ಹಾಕ್ಕೊಂಡು ಕುಂತವ್ರಂತೆ, ನಮ್ಮ ಕಾಂಗ್ರೆಸ್ಸಿನೋರು ಇನ್ನೂ ಒಂದು ಹೆಜ್ಜೆ ಮುಂದೋಗಿ ತಮಿಳ್ರನ್ನು ಒಲುಸ್ಕೋಬೇಕು ಅಂತಾ ಕರುಣಾನಿಧಿಯೋರ್ಗೆ ಪತ್ರಾನೇ ಬರ್ದಿದಾರಂತೆ. "ಕರ್ನಾಟಕದಲ್ಲಿ ತಮಿಳು ಮತದಾರರನ್ನು ನಮಗೆ ಓಟ್ ಹಾಕಕ್ ಒಸಿ ಯೋಳಿ" ಅಂತ ಇವ್ರು ಅಂದಿದ್ಕೆ "ಬೆಂಗಳೂರು ಪಾಲಿಕೆ ಎಲೆಕ್ಷನ್ನಾಗೆ ಒಂದಷ್ಟು ಸೀಟು ಬುಟ್ಕೊಡಿ" ಅಂದ್ರಂತೆ ಅವ್ರು! ಒಟ್ನಲ್ ಎಲ್ಲಾ ರಾಜಕೀಯ ಪಾರ್ಟಿಗಳೋರು ಇಲ್ಲಿ ವಾಸ ಮಾಡೋ ಜನ್ರುನ್ನ ನೀವು ತಮಿಳ್ರು, ನಾವು ನಿಮ್ನ ಕಾಪಾಡ್ತೀವಿ, ನೀವು ಮರಾಠಿಗ್ರು, ನಾವು ನಿಮ್ನ ಕಾಪಾಡ್ತೀವಿ, ನೀವು ತೆಲುಗ್ರು ನಾವು ನಿಮ್ನ ಕಾಪಾಡ್ತೀವಿ ಅಂತಾ ಕನ್ನಡಿಗರಾಗಿರೋಕೆ ಹೊರ್ಟವ್ರ ತಲೇಲೂ ನೀವು ಕನ್ನಡದವ್ರಲ್ಲಾ ಅನ್ನೋ ಒಡಕು ಹುಟ್ ಹಾಕ್ತಿರೋದು ಭೋ ಅನ್ಯಾಯ! ನಮ್ ರಾಜಕೀಯ ಪಕ್ಷಗಳು ತಮಿಳ್ರು ಓಟಿಗೆ ಬೆಂಗಳೂರು ಪಾಲಿಕೇನಾ ತಮಿಳುನಾಡಿಗೆ, ಮರಾಠಿ ಓಟಿಗೆ ಬೆಳಗಾವಿ ಪಾಲಿಕೇನಾ ಮಾರಾಷ್ಟ್ರಕ್ಕೆ, ತೆಲುಗ್ರ ಓಟಿಗೆ ಬಳ್ಳಾರಿ ಪಾಲಿಕೇನಾ ಆಂಧ್ರಕ್ಕೆ, ಮಲಯಾಳಿ ಓಟಿಗೆ ಮಂಗಳೂರು ಪಾಲಿಕೇನಾ ಕೇರಳಕ್ಕೆ, ಕೊಂಕಣಿ ಓಟಿಗೆ ಕಾರವಾರಾನಾ ಗೋವಾಕ್ಕೆ ಬಿಟ್ಕೊಡಲ್ಲಾ ಅನ್ನಕ್ಕೇನೂ ಖಾತ್ರಿ ಇಲ್ಲಾ ಗುರು!