ರಾಜ್ಯದಿಂದ ಕೇಂದ್ರ ಅನ್ನೋ ಸಂದೇಶಾ ಕೊಡ್ತಿರೋ ಯಡ್ಯೂರಪ್ನೋರು!


ನೋಡ್ರಣ್ಣಾ! ನಾವೇನು ಯಡ್ಯೂರಪ್ಪನೋರಿಗೆ ಯಾವ್ ಥರಾನೂ ನೆಂಟ್ರು ಪಂಟ್ರು ಅಲ್ಲಾ! ಅವರೇನಾರಾ ತೆಪ್ ಮಾಡುದ್ರೆ ಅವುರುನ್ನ ಒಪ್ಪಿಟ್ಟುಕೊಳ್ಳೋದೂ ಇಲ್ಲಾ! ಆ ಯಪ್ಪಾ ಮಾಡಿರಬಹುದಾದ ಭ್ರಷ್ಟಾಚಾರಾನೂ ಒಪ್ಕೊಳಾಕಿಲ್ಲ! ಆದ್ರೂ ಮುಕ್ಯಮಂತ್ರಿ ಸಾಹೇಬ್ರು ತಮ್ ಜುಟ್ಟು ಹಿಡ್ಯಕ್ ಮುಂದಾದ ಹೈಕಮಾಂಡಿನೋರುನ್ನಾ ಹಿಗ್ಗಾಮುಗ್ಗಾ ಬೆಚ್ಚಿ ಬೀಳ್ಸೋ ಹಾಂಗೆ ಪಟ್ಟು ಹಾಕ್ತಾ ಇರೋದುನ್ನಾ ಮೆಚ್ಚಿಕೊಳ್ದೇ ಇರಕ್ ಆಗತಿಲ್ಲಾ ಗುರುಗೋಳೇ!

ಹೈಕಮಾಂಡಿನೋರು ಸಾಮ್ರಾಟರಾ?

ಹೂಂ.. ಕಣ್ರಣ್ಣಾ... ಹಳೇಕಾಲದಲ್ಲಿ ಒಬ್ಬ ಸಾಮ್ರಾಟ ಇರೋನು... ಅವನ ಕೆಳಗೆ ಸಾಮಂತರು, ಅವ್ರು ಕೆಳ್ಗೆ ಮಾಂಡಲೀಕರು, ಅವ್ರು ಕೆಳ್ಗಡೆ ದಂಡನಾಯಕ್ರು, ದೊಣೆನಾಯಕ್ರು.... ಹಿಂಗಿರೋದು ಗುಲಾಮಗಿರಿ ಚೈನು! ಬ್ರಿಟೀಶಿನೋರು ಬಿಟ್ಟು ಹೋಗಿ ಬರೀ ಅರವತ್ತು ವರ್ಸ ಆಗೈತೆ... ಸಾವರಾರು ವರ್ಶದ ಗುಲಾಮಗಿರಿ ಬುದ್ದಿ ಅಷ್ಟು ಸಲೀಸಾಗ್ ಹೋಗಿಬುಡ್ತದಾ? ರಾಷ್ಟ್ರೀಯ ಪಕ್ಷಗಳು ಅನ್ನೋ ಸಾಮ್ರಾಟರ ಎದ್ರು ಕೈಕೊಟ್ಟುಕೊಂಡು, ಅವರು ಹೇಳೋರು ಸಾಮಂತರಾಗೋ ರಾಜ್ಯಗಳ ಶಾಕೆಗಳು... ಏನಾರಾ ಯೆತ್ವಾಸಾ ಕಾಣ್ತುದಾ ದಣೀ? ಇಂಥಾ ಯವಸ್ತೇನಾಗೆ ಐಕಮಾಂಡು ಕುಂತ್ಕಾ ಅಂದ್ರೆ ಕುಂತ್ಕೊಂಡು, ನಿಂತ್ಕೋ ಅಂದಾಗ ನಿಂತ್ಕಂಡು, ಮನಿಕ್ಕೋ ಅಂದಾಗ ಮನಿಕ್ಕೊಂಡು, ಎದ್ದೇಳ್ಲಾ ಅಂದಾಗ ಎದ್ದೋಗ್ದಲೇ... "ಎಲಾ ಬಡ್ಡೆತವಾ... ಕೇಂದ್ರ ಅನ್ನೋದು ರಾಜ್ಯಗಳಿಂದ ಆಗಿರೋದು ಕಣ್ರುಲಾ" ಅನ್ನೋಂಗೆ ಕರ್ನಾಟಕದ ರಾಜಕಾರಣಾನಾ ನಾವೇ ನೋಡ್ಕೊಂತೀವಿ ಅಂತಾ ಯಡ್ಯೂರಪ್ಪನೋರು ಸಡ್ಡು ಹೊಡ್ದಿರೋದು ಮಸ್ತಾಗೈತೆ ಗುರೂ! ನೀ ಏನಂತೀಯಾ? ಯಡ್ಯೂರಪ್ಪನೋರು ಭಂಡ, ಪುಂಡ ಅನ್ನೋದೆಲ್ಲಾ ನಿಜಾನೋ ಸುಳ್ಳೋ ಪಕ್ಕಕ್ಕಿಟ್ಟು ಪ್ರಚಂಡಾ ಅನ್ನೋದ್ನಾ ಒಪ್ಕೊಬೇಕಾಯ್ತುದೆ ಅಲ್ವಾ?

ಕನ್ನಡದ ಸೊಲ್ಲರಿಮೆ - ಎರಡನೇ ಹೊತ್ತಗೆ ಮಾರುಕಟ್ಟೆಗೆ!



ಡಾ. ಡಿ ಎನ್ ಶಂಕರಬಟ್ ಅವರ "ಕನ್ನಡ ಬರಹದ ಸೊಲ್ಲರಿಮೆ - ೨" ಹೊತ್ತಗೆ ಮಾರುಕಟ್ಟೆಗೆ ಬಂದಿದೆ. ಮೊದಲ ಹೊತ್ತಗೆಯಲ್ಲಿ ಸೊಲ್ಲರಿಮೆಯ ಅಗತ್ಯ, ಸ್ವರೂಪಗಳ ಮುನ್ನೋಟ ಮತ್ತು ಹೆಸರು ಪದಗಳ ಬಗ್ಗೆ ವಿವರಿಸಲಾಗಿತ್ತು. ಈ ಹೊತ್ತಗೆಯಲ್ಲಿ ಎಸಕಪದಗಳ ಬಳಕೆ ಮತ್ತು ಹೆಸರುಕಂತೆಗಳ ಇಟ್ಟಳಗಳ ಬಗ್ಗೆ ವಿವರಿಸಿದ್ದಾರೆ.

ಕನ್ನಡದ ಸೊಲ್ಲರಿಮೆ...

ಕಳೆದ ವರ್ಶದ ಆಗಸ್ಟ್ ತಿಂಗಳಲ್ಲಿ ನಾವು "ಅಂತೂ ಬಂತು ಕನ್ನಡದ್ದೇ ವ್ಯಾಕರಣ..." ಎನ್ನುವ ಬರಹ ಬರೆದಿದ್ದೆವು. ಆ ಹೊತ್ತಗೆಯ ಮೊದಲಲ್ಲಿ ಡಾ. ಶಂಕರಬಟ್ ಅವರು ಬರೆದಿದ್ದ ಈ ಕೆಳಗಿನ ಮಾತುಗಳತ್ತ ಒಮ್ಮೆ ಮರುನೋಟ ಬೀರೋಣ.
ಅರಿಮೆಯ (ವಿಜ್ನಾನದ) ಬರಹಗಳಲ್ಲಿ ಹೊಸ ಪದಗಳನ್ನು ಹುಟ್ಟುಹಾಕಬೇಕೆಂದಿರುವವರು ಸಂಸ್ಕ್ರುತದ ಮೊರೆ ಹೋಗುವ ಬದಲು, ಕನ್ನಡದಲ್ಲೇನೇ ತಮಗೆ ಬೇಕಾಗಿರುವ ಪದಗಳನ್ನು ಉಂಟುಮಾಡಲು ಇದು ತಿಳಿವನ್ನೀಯಬಲ್ಲದು.

ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರೈಕೆ.

ಅರಿಮೆಯ ಬರಹಕ್ಕೆ ಬೇಕಾಗಿ ಬರುವ ಪದಗಳನ್ನೆಲ್ಲ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ ಮತ್ತು ಅಂತಹ ಪದಗಳನ್ನು ಬಳಸುವುದರಿಂದ ತೊಂದರೆಯೇನೂ ಆಗುವುದಿಲ್ಲ ಎಂಬುದನ್ನು ತೋರಿಸಿಕೊಡುವುದೂ ಈ ಹೊತ್ತಗೆಯ ಒಂದು ಗುರಿಯಾಗಿದೆ.

ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರೈಕೆ.
ಬಾಶಾ ಪ್ರಕಾಶನದವರು ಹೊರತಂದಿರುವ ಈ ಹೊತ್ತಗೆಯನ್ನು ಮಂಗಳೂರಿನ ಅತ್ರಿ ಬುಕ್ ಸೆಂಟರ್ ಅವರು ಹಂಚಿಕೆ/ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಹೆಸರಾಂತ ಹೊತ್ತಗೆಯಂಗಡಿಗಳಲ್ಲಿ ಸಿಗುತ್ತಿದೆ. ಕನ್ನಡದ ಸೊಲ್ಲರಿಮೆಯನ್ನು ಅರಿಯಬೇಕೆಂದವರಿಗೆ ಇದೊಂದು ಒಳ್ಳೆಯ ಹೊತ್ತಗೆ. ನೀವೂ ಕೊಂಡು ಓದಿ, ನಿಮ್ಮವರಿಗೂ ತಿಳಿಸಿ.

"ಹಿಂದೀ ಕಲೀರಿ: ರಾಷ್ಟ್ರಪ್ರೇಮ ಮೂಡುತ್ತೆ" ಅಂದ ಉದಯವಾಣಿ!


ತೊಂಬತ್ತು ವರ್ಷದ ಹಿಂದೆ ಮಹಾತ್ಮ ಗಾಂಧಿ ಯಾವ ಉದ್ದೇಶದಿಂದ "ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ" ಶುರು ಮಾಡಿದ್ರೋ, ಭಾರತದ ಸಂವಿಧಾನದ ಆಶಯ ಅನ್ನುತ್ತಾ ಭಾರತದ ಕೇಂದ್ರಸರ್ಕಾರವು ಅರವತ್ತು ವರ್ಷಗಳಿಂದ ಹಿಂದೀಯೇತರ ಭಾರತೀಯರಿಗೆ (ಹಿಂದಿ ಬರದೇ ಇರುವವರನ್ನೂ ಭಾರತೀಯರು ಅಂತೀರಾ? ಛೇ! ಅನ್ನುತ್ತೇನೋ) ಹಿಂದಿ ಕಲಿಸಿ ಸರಿಯಾದ ಭಾರತೀಯರನ್ನಾಗಿಸಲು ಪಣತೊಟ್ಟು ಏನೇನೆಲ್ಲಾ ಮಾಡ್ತಾ ಇದೆಯೋ, ಅದೆಲ್ಲಾ ಫಲ ಕೊಡ್ತಿದೆ ಅನ್ನೋಕೆ ಉದಯವಾಣಿಯಲ್ಲಿ ಜುಲೈ ಒಂಬತ್ತರಂದು ಪ್ರಕಟವಾಗಿರೋ "ಪ್ರೌಢಶಾಲಾ ಹಂತದಲ್ಲಿ ಹಿಂದಿ ಕಲಿಕೆಯ ಮಹತ್ವ" ಅನ್ನೋ ಲೇಖನ ಸಾಕ್ಷಿಯಾಗಿದೆ ಗುರೂ!

ಬರಹದಲ್ಲಿರೋ ಕೆಲ ಆಣಿಮುತ್ತುಗಳು!

ಹಿಂದೀ ಭಾರತದ ರಾಷ್ಟ್ರಭಾಷೆಯೆನ್ನುವ ಹಸಿಸುಳ್ಳನ್ನು ಚೂರೂ ನಾಚಿಕೆಯಿಲ್ಲದೆ ಬರೆದಿದ್ದಾರೆ ಈ ಬರಹದಲ್ಲಿ. ಬಹುತೇಕ ರಾಜ್ಯಗಳಲ್ಲಿ ಇದುನ್ನ ಕಲಿಸ್ತಾರೆ ಆದ್ದರಿಂದ ಇದು ಭಾರತೀಯ ಪೌರನ ಶಿಕ್ಷಣದಲ್ಲಿ ಮಹತ್ವದ್ದಂತೆ. ಗಾಂಧೀಜಿ ದೇಶ ಎಲ್ಲಾ ಸುತ್ತಿ ಹಿಂದೀನ ರಾಷ್ಟ್ರಭಾಷೆ ಮಾಡುದ್ರಂತೆ, ಅದುಕ್ಕೆ ಭಾರತೀಯರೆಲ್ಲಾ ಒಂದಾದ್ರಂತೆ. ಬ್ರಿಟೀಷರನ್ನು ಓಡಿಸುದ್ರಂತೆ! ತಮಾಶೆ ಅಂದ್ರೆ ಹಿಂದೀ ಸಾಹಿತ್ಯದ ಅಧ್ಯಯನಕ್ಕೆ ಹಿಂದೀ ಕಲೀಬೇಕು ಅದಕ್ಕೆ ಕಲೀರಿ ಅಂತಾರೆ ಲೇಖಕರು. (ಕನ್ನಡ ಸಾಹಿತ್ಯ ಓದಕ್ಕೆ ಹಿಂದೀ ಕಲೀರಿ ಅನ್ನಲಿಲ್ಲ! ನಮ್ಮ ಪುಣ್ಯ!!) ಈ ಬರಹ ಬರೆದಿರುವವರ ಪ್ರಕಾರ ಹಿಂದಿ ಕಲಿಯೋದ್ರಿಂದ ಜ್ಞಾನ ಹೆಚ್ಚುತ್ತಂತೆ. ನಮ್ಮೊಳಗೆ ದೇಶಪ್ರೇಮ ಹೆಚ್ಚಾಗುತ್ತದೆಯಂತೆ. ದೇಶದಲ್ಲಿ ಏಕತೆ ಮೂಡುತ್ತದೆಯಂತೆ. ಉತ್ತರ ಭಾರತಕ್ಕೆ ನಾವು ಹೋದಾಗ ಅಲ್ಲಿನ ಜನರ ಜೊತೆ ವ್ಯವಹರಿಸಲು ಅನುಕೂಲವಂತೆ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾವನ್ನು ಮಹಾತ್ಮಗಾಂಧಿಯವರು ಶುರು ಮಾಡುದ್ರಂತೆ, ಅದರಿಂದ ಇಲ್ಲಿ ನಾವು ಹಿಂದಿ ಕಲೀಬೇಕಂತೆ. ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಬೇಕಾದರೆ ಉತ್ತಮ ಶಿಕ್ಷಣದ ಅಗತ್ಯವಿದೆ ಎನ್ನುವ ಬರಹಗಾರರು ಅದಕ್ಕಾಗಿ ಹಿಂದೀ ಕಲೀರಿ ಅನ್ನುತ್ತಿದ್ದಾರೆ ಎನ್ನಿಸುವಂತೆ ಈ ಬರಹ ಬರೆದಿದ್ದಾರೆ.

ಇನ್ನು ಹಿಂದೀನಾ ಹೇಗೆ ಕಲೀಬೇಕು ಅನ್ನೋಕೆ ಶ್ರೀಯುತರು ಹಿಂದೀ ಸಿನಿಮಾ ನೋಡಿ, ಹಿಂದೀ ಟಿವಿ ನೋಡಿ, ಹಿಂದಿ ದಿನಪತ್ರಿಕೆ, ವಾರಪತ್ರಿಕೆ, ಕಥೆ ಪುಸ್ತಕ ತರಿಸಿ ಓದಿ, ಹಿಂದೀ ಕಾರ್ಟೂನ್ ನೋಡಿ, ಹಿಂದೀ ಶಿಕ್ಷಕರ ಜೊತೆ ಹಿಂದೀಲೇ ಮಾತಾಡಿ, ಪದಬಂಧ, ಶಬ್ದಬಂಡಿ ಆಡಿ ಕಲೀರಿ ಅಂತೆಲ್ಲಾ ಸಲಹೆ ಕೊಟ್ಟಿದ್ದಾರೆ. ಕೊನೆಯಲ್ಲಿ ಇವರು ಹೇಳೋ ಮಾತು ಕೇಳಿ... ನಮ್ಮ ಮಕ್ಕಳು ಹಿಂದೀ ಎಂಬ ಭಾರತದ ಅಖಂಡತೆಯ ಸಂಕೇತವಾದ ಸರಳ ಸುಂದರ ಭಾವನಾತ್ಮಕವಾದ ಭಾಷೆಯನ್ನು ಪ್ರೀತಿಯಿಂದ ಕಲಿಯಬೇಕಂತೆ. ಆ ಮೂಲಕ ಸಂವಿಧಾನಾತ್ಮಕ ಮನ್ನಣೆಯಿರುವ ಭಾಷೆಯನ್ನು ಕಲಿತು ದೇಶದ ಏಕತೆಯನ್ನು ಉಳಿಸಬೇಕಂತೆ!

ಇದು ಅರಿವುಗೇಡಿತನವೋ? ಅವಿವೇಕವೋ?

ಭಾರತದ ಏಕತೆಯನ್ನು ಹಿಂದಿಯಲ್ಲಿ ವ್ಯವಹರಿಸೋ ಮೂಲಕ ಉಳಿಸಬೇಕು ಎನ್ನೋ ಮನಸ್ಥಿತಿ, ಭಾರತೀಯರೆನ್ನಿಸಿಕೊಳ್ಳಲು ಹಿಂದೀ ಕಲಿತಿರಬೇಕು ಅನ್ನೋ ಮನಸ್ಥಿತಿ... ತುಂಬಿರೋ ಬರಹವನ್ನು ಬರೆದಿರೋ ಬರಹಗಾರರಿಗೇನೋ ಅರಿವಿನ ಕೊರತೆ ಎನ್ನೋಣ. ಆದರೆ ಇದನ್ನು ಪ್ರಕಟ ಮಾಡೋ ದಿನಪತ್ರಿಕೆಯವರಿಗೆ ಕೂಡಾ ಹಿಂದೀ ಮಾಯೆ ಮುಸುಕಿದೆ ಎನ್ನುವುದು ಆತಂಕಕಾರಿ. ಈ ಮಾಯೆಯ ವಿಷವು "ಹಿಂದೀ ಎಂಬ ಭಾರತದ ೨೯% ಜನರಾಡುವ ನುಡಿಯು ಭಾರತದ ಒಗ್ಗಟ್ಟಿಗೂ, ದೇಶಪ್ರೇಮಕ್ಕೂ ಅತ್ಯಗತ್ಯ" ಎನ್ನುವ ಸಿಹಿಯನ್ನು ತನ್ನಮೇಲೆ ಲೇಪಿಸಿಕೊಂಡು ಯಾರ್ ಯಾರುನ್ನೆಲ್ಲಾ ಯಾಮಾರಿಸುತ್ತಿದೆ ಅನ್ನೋದು ಕಂಡಾಗ ಆತಂಕವಾಗುತ್ತೆ ಗುರೂ. ಹಿಂದೀ ಭಾರತದ ರಾಷ್ಟ್ರಭಾಷೆಯಲ್ಲಾ ಅನ್ನೋ ಅರಿವು ಇಲ್ಲದೆ ಇಂಥಾ ತಪ್ಪೆಸಗಿದರೆ ಸಹಿಸಬಹುದು. ಆದರೆ ಗೊತ್ತಿದ್ದೂ ಹೀಗೆಲ್ಲಾ ಹಸಿಸುಳ್ಳು ಬರೆದರೆ ಏನೆನ್ನಬೇಕು? ಹಿಂದಿಯನ್ನು ನಾಡಿನ ಜನರೆಲ್ಲಾ ಒಪ್ಪಿ, ತಲೆ ಮೇಲಿಟ್ಟುಕೊಂಡು ಪೂಜಿಸಿದರೆ ನಾಳೆ ಇಡೀ ಕನ್ನಡ ಕುಲದ ಸರ್ವನಾಶವಾದೀತು ಎನ್ನುವ ಆಲೋಚನೆಯೂ ಇಲ್ಲದವರನ್ನು ಕಂಡಾಗ "ವಿಷದ ಮೊಲೆವಾಲನ್ನು ಅಮೃತವೆಂದು ಉಣ್ಣುತ್ತಿರುವ ಕನ್ನಡಿಗರನ್ನು ಪೊರೆವವರಾರು ನನ್ನಪ್ಪಾ?" ಎಂದನಿಸದೇ ಗುರೂ!

"e - ಆಡಳಿತ" ಅಂದ್ರೆ ಇಂಗ್ಲೀಶ್ ಆಡಳಿತಾನಾ?

- ವಿಕ್ರಮ್ ಹೆಗ್ಡೆ, ರಾಷ್ಟ್ರೀಯ ಕಾನೂನು ವಿದ್ಯಾಲಯದಿಂದ ಕಾನೂನು ಪದವೀಧರರು




E-governance ಅಥವಾ E- ಆಡಳಿತದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿಬರ್ತಿದೆ ಅಲ್ವ? ಏನು ಈ ಇ- ಗವರ್ನೆನ್ಸ್ ಅಂದರೆ? ಸಾಮಾನ್ಯವಾಗಿ ಎಲ್ಲರೂ ಇದನ್ನ electronic governance ಅಂತ ವಿಸ್ತರಿಸಿ, ಸರ್ಕಾರೀ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ದೊರಕಿಸುವುದು ಎಂದು ಅರ್ಥ ಮಾಡಿಕೊಂಡಿದ್ದೇವೆ. ಆದರೆ ನಮ್ಮ ರಾಜ್ಯದಲ್ಲಿ ಇದನ್ನು ಅಳವಡಿಸಿರುವ ಪರಿ ನೋಡಿದ್ರೆ ಬೇರೇನೇ ಅಭಿಪ್ರಾಯ ಬರಬಹುದು. ಇ-ಗವರ್ನೆನ್ಸ್ ನ ವಿಸ್ತಾರ ರೂಪ English governance ಇದ್ದಿರಬಹುದೇನೋ ಎಂದೆನಿಸುತ್ತೆ. ಕುಶಾಲಿಗಲ್ಲ! ಅಂಕಿ ಅಂಶಗಳ ಸಹಿತ ವಿವರಿಸುತ್ತೇನೆ ನೋಡಿ.

ಕರ್ನಾಟಕದ ತಾಣಗಳ ಹಣೆಬರಹ!

ಇಲ್ಲಿ ನೋಡಿ. ಇದರಲ್ಲಿ ಕರ್ನಾಟಕದ ಎಲ್ಲ ಇ-ಗವರ್ನೆನ್ಸ್ ಯೋಜನೆಗಳ ಪಟ್ಟಿ ಇದೆ. ಈ ವೆಬ್ಸೈಟ್ ಯಾವ ಭಾಷೆಯಲ್ಲಿದೆ ನೋಡಿ. ಎಲ್ಲಾದರೂ 'ಕನ್ನಡ ಆವೃತ್ತಿ' ಅಂತ ಕೊಂಡಿಯಾದ್ರೂ ಕಂಡು ಬರುತ್ತಿದೆಯಾ? ಹೋಗಲಿ, ಇವರ E - ಆಡಳಿತ ಹುಡುಕಿಕೊಂಡು ಯಾರಾದರೂ ಆ ತಾಣಗಳಿಗೆ ಹೋದ್ರೆ ಅವರಿಗೆ ಸಿಗೋದು ಏನು ಗೊತ್ತಾ? ಅಲ್ಲಿರುವ ೧೫ ಕೊಂಡಿಗಳಲ್ಲಿ ೪ ಮಾತ್ರ ಕನ್ನಡ ಆವೃತ್ತಿಗೆ ಅವಕಾಶ ಮಾಡಿಕೊಡುತ್ತವೆ. ನೆನಪಿರಲಿ ಇವು ಯಾವು ನೇರವಾಗಿ ಕನ್ನಡದಲ್ಲಿ ಮೂಡಿ ಬರಲ್ಲ. ಬಂದಮೇಲೆ ಕನ್ನಡ ಆವೃತ್ತಿ ಎಲ್ಲಿ ಸಿಗಬಹುದು ಅಂತ ನಾವೇ ಹುಡುಕಿಕೊಳ್ಳಬೇಕು.

ಅಲ್ಲೇ police constable ಸೇರ್ಪಡೆಗೆ ಪ್ರಕಟಣೆ ಇದೆ ನೋಡಿ. ಇದು ಕೂಡಾ ಕನ್ನಡದಲ್ಲಿಲ್ಲ. ಆ ವೆಬ್ಸೈಟ್ ಬರೀ ಇಂಗ್ಲಿಶಿನಲ್ಲಿದೆಯ? ಇಲ್ಲ, ಇನ್ನೊಂದು ಭಾಷೆ ಕೂಡ ಇದೆ. ಹಿಂದಿ. ಏನಿದರ ಅರ್ಥ?

ಇನ್ನೊಂದು ನೋಡಿ. ಇದು ಎಲ್ಲ ಜಿಲ್ಲಾಡಳಿತಗಳ ಅಂತರ್ಜಾಲ ತಾಣಗಳ ಪಟ್ಟಿ. ಕೆಲವು ಜಿಲ್ಲಾ ಪಂಚಾಯ್ತಿಗಳ ವೆಬ್ಸೈಟ್ ಕೂಡಿ ಒಟ್ಟು ೩೪ ಇವೆ. ಇದರಲ್ಲಿ ಎಷ್ಟು ಕನ್ನಡದಲ್ಲಿದೆ?

ಸೊನ್ನೆ.

ಇಲಾಖೆಗಳ ಅಂತರ್ಜಾಲ ತಾಣಗಳು? ಇದರಲ್ಲಿ ನಾನು ನೋಡಿದ ಪೈಕಿ ನಾಲ್ಕೈದು ಬಿಟ್ಟರೆ ಮತ್ತೆಲ್ಲ English governance ರೂಪದಲ್ಲೇ ಇವೆ.

ತಂತ್ರಜ್ಞಾನ ಜನರ ಬದುಕನ್ನು ಸರಳಗೊಳಿಸಬೇಕು!

ನಿಜವಾಗಿಯೂ ತಂತ್ರಜ್ಞಾನ ಎಲ್ಲೆಲ್ಲಿ ಸಾಧ್ಯನೋ ಅಲ್ಲೆಲ್ಲ ಉಪಯೋಗಿಸಿಕೊಳ್ಳಬೇಕು. ಇನ್ನು ಹೇಳ್ಬೇಕು ಅಂದ್ರೆ ಜನರು ಸರ್ಕಾರಿ ಕಚೇರಿ ತಿರುಗಾಡೋ ಪ್ರಸಂಗವೇ ಬರಬಾರದು. ಆದರೆ ಈ ಸೌಕರ್ಯನ ಬರೀ ಇಂಗ್ಲಿಷ್ ಭಾಷೇಲಿ ಕೊಟ್ರೆ ಏನು ಪ್ರಯೋಜನ ಹೇಳಿ?

ಇದನ್ನ ಈ ಮುಂಚೆ ಒಮ್ಮೆ ನಾನು ನಮ್ಮ ನ್ಯಾಯಾಲಯಗಳ ವಿಷಯದಲ್ಲಿ ಒಬ್ಬ ನ್ಯಾಯಮೂರ್ತಿಗಳ ಹತ್ತಿರ ಕೇಳಿದಾಗ "ಕನ್ನಡ ಆವೃತ್ತಿನೂ ಇರುತ್ತೆ, ನಿಮಗೆ ಸರಿಯಾಗಿ ಹುಡುಕಲಿಕ್ಕೆ ಬಂದಿರುವುದಿಲ್ಲ" ಅಂದರು. ಕಾನೂನು ಕಲಿಕೆಯ ಮೊದಲನೆಯ ಸಾಲಿನಲ್ಲಿದ್ದ ನಾನು ಹೀಗೇ ಇರಬಹುದೇನೋ ಎಂದುಕೊಂಡೆ. ಇರಲಿ, ನಾನು ಈ ವಿಷಯದಲ್ಲಿ ದಡ್ಡನೇ ಆಗಿರಬಹುದು. ಆದರು ದಡ್ಡನಿಗೂ ತಿಳಿವಂತೆ ಸೌಲಭ್ಯಗಳನ್ನು ದೊರಕಿಸುವುದು ಸರಕಾರದ ಕರ್ತವ್ಯವಲ್ಲವೇ?

ಇನ್ನು UID ಬರುತ್ತಿದೆ. ಯೋಜನೆಯ ಪ್ರಕಾರ ನಡೆದರೆ ಮುಂದೆ ಹೆಚ್ಚು ಹೆಚ್ಚು ಸರಕಾರೀ ಸೌಲಭ್ಯಗಳು ಇ-ಗವರ್ನೆನ್ಸ್ ಮೂಲಕವೇ ಲಭ್ಯವಾಗುತ್ತವೆ. ಆಗಲೂ ಇದೇ ಧೋರಣೆ ಮುಂದುವರೆದರೆ ಕನ್ನಡಿಗರಿಗೆ ಬಹಳ ಅನಾನುಕೂಲವೇ ಆದೀತು.

ಕಲಿಕೆಯ ಮಾಧ್ಯಮ ಮತ್ತು ರಾಜ್ಯಸರ್ಕಾರದ ಹೊಣೆಗಾರಿಕೆ!

ಕರ್ನಾಟಕ ರಾಜ್ಯಸರ್ಕಾರದ ಶಿಕ್ಷಣ ಮಂತ್ರಿಗಳಾದ ಮಾನ್ಯಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ರಾಜ್ಯದಲ್ಲಿ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಶುರು ಮಾಡುವ ಬಗ್ಗೆ ತುಮಕೂರಿನಲ್ಲಿ ನೀಡಿರುವ ಹೇಳಿಕೆ ದುರದೃಷ್ಟಕರವಾಗಿದೆ. ಶ್ರೀಯುತರು ತಮ್ಮ ಹೇಳಿಕೆಯಲ್ಲಿ “ಜನರಿಂದ ಬೇಡಿಕೆ ಬಂದಲ್ಲಿ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಆರನೇ ತರಗತಿಯಿಂದ ಆರಂಭಿಸುತ್ತೇವೆ. ಇದು ಸರ್ಕಾರದ ಭಾಷಾನೀತಿಗೆ ವಿರುದ್ಧವಾಗಿಲ್ಲ, ಏಕೆಂದರೆ ಸರ್ಕಾರದ ಭಾಷಾನೀತಿ ಒಂದರಿಂದ ಐದನೇ ತರಗತಿಯವರೆಗಿನ ಕಲಿಕೆಗೆ ಮಾತ್ರಾ ಅನ್ವಯವಾಗುತ್ತದೆ” ಎಂದಿದ್ದಾರೆ. ಮಂತ್ರಿಗಳ ಹೇಳಿಕೆಗಳನ್ನು ಗಮನಿಸಿದಾಗ ಸರ್ಕಾರವು ಶಿಕ್ಷಣದಲ್ಲಿನ ಭಾಷಾನೀತಿಯ ಬಗ್ಗೆ ಹೊಂದಿರುವ ನಿಲುವನ್ನು ಸಡಿಲಗೊಳಿಸುತ್ತಿರುವುದು ಕಾಣುತ್ತದೆ ಮತ್ತು ತಪ್ಪುದಾರಿಯೆಡೆಗೆ ನಾಡನ್ನು ಒಯ್ಯುತ್ತಿರುವಂತೆ ತೋರುತ್ತದೆ.

ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರ

ಕನ್ನಡ ಜನರ ಪ್ರತಿನಿಧಿಯಾಗಿ ನಮ್ಮ ರಾಜ್ಯಸರ್ಕಾರವಿದೆ. ಈ ನಾಡಿನ ಪ್ರಜೆಗಳನ್ನು ಪೊರೆಯುವ ಹೊಣೆಯೊಂದಿಗೆ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಸರ್ಕಾರದ್ದು. ಇಂಥಾ ಹೊಣೆಗಾರಿಕೆಯ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು ಎಂದೂ, ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಇಂಥಾ ಮೂಲಭೂತ ಹೊಣೆಗಾರಿಕೆ ಆಯಾ ನಾಡಿನ ಸರ್ಕಾರಗಳು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ರಾಜ್ಯಸರ್ಕಾರ ಹೊತ್ತಿರುವುದು ಸರಿಯಾಗಿದೆ. ಆದರೆ ನಿಭಾಯಿಸುತ್ತಿರುವ ರೀತಿ ನಿರಾಶಾದಾಯಕವಾಗಿದೆ.

ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ...

ಪ್ರಪಂಚದ ಮುಂದುವರೆದ ನಾಡುಗಳಲ್ಲೆಲ್ಲಾ ಕಲಿಕೆಯೆಂಬುದು ತಾಯ್ನುಡಿಯಲ್ಲೇ ಇರುವುದನ್ನು ನಾವು ಬಹುತೇಕ ಕಡೆ ನೋಡಬಹುದು. ಜಪಾನ್, ಚೀನಾ, ಇಂಗ್ಲೇಂಡು, ಫ್ರಾನ್ಸ್, ಜರ್ಮನಿ... ಮೊದಲಾದ ಅನೇಕ ದೇಶಗಳು ಇದಕ್ಕೆ ಉದಾಹರಣೆಯಾಗಿ ನಿಂತಿವೆ. ಯುನೆಸ್ಕೋ ಕೂಡಾ ತಾಯ್ನುಡಿಯಲ್ಲಿನ ಕಲಿಕೆಗೆ ಒತ್ತು ನೀಡಿ ನಿಲುವನ್ನು ಘೋಷಿಸಿದೆ. ಪ್ರಪಂಚದ ನಾನಾ ವಿಜ್ಞಾನಿಗಳು, ಮನಶ್ಶಾಸ್ತ್ರಜ್ಞರು, ಭಾಷಾ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಈ ಬಗ್ಗೆ ಗೊಂದಲವಿಲ್ಲದ ಒಂದೇ ತೆರನಾದ ಅನಿಸಿಕೆ ಹೊಂದಿದ್ದಾರೆ. ಕರ್ನಾಟಕ ರಾಜ್ಯಸರ್ಕಾರವೂ ಸುಪ್ರಿಂಕೋರ್ಟಿನ ಒಂದು ಆಶಯದಂತೆ ಮಾತೃಭಾಷಾ ಶಿಕ್ಷಣಕ್ಕೆ ಒತ್ತುಕೊಟ್ಟು ಭಾಷಾನೀತಿ ರೂಪಿಸಿಕೊಂಡಿದೆ. ಹಾಗಾಗಿ ತಾಯ್ನುಡಿಯಲ್ಲಿ ಕಲಿಕೆಯು ಪರಿಣಾಮಕಾರಿ ಎನ್ನುವುದರ ಬಗ್ಗೆ ಈ ಹಿನ್ನೆಲೆಯಲ್ಲಿ ಯಾವ ಅಪಸ್ವರವೂ ಇಲ್ಲ ಎನ್ನುವುದು ವಾಸ್ತವವಾಗಿದೆ. ಅಷ್ಟೇ ಏಕೆ ಯಾವುದೇ ವಿಷಯವನ್ನು ನಮ್ಮ ತಾಯ್ನುಡಿಯಲ್ಲಿ ಕಲಿಯುವುದು ಸಮರ್ಪಕವೂ ಸುಲಭವೂ ಆಗಿದೆಯೆನ್ನುವುದು ಎಲ್ಲರಿಗೂ ಅನುಭವ ವೇದ್ಯವಾಗಿದೆ.

ಕರ್ನಾಟಕದ ಪರಿಸ್ಥಿತಿ

ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೫ಕ್ಕೂ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ “ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ” ಎನ್ನುವ ಅನಿಸಿಕೆಯಿದೆ. ವಾಸ್ತವವಾಗಿ ಇವುಗಳಲ್ಲಿ ಕೆಲವಲ್ಲಿ ಹುರುಳೂ ಇಲ್ಲದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದಲ್ಲಿ ಮಾತ್ರವೇ ಉನ್ನತ ಶಿಕ್ಷಣವಿರುವಾಗ ಅದಕ್ಕೆ ಹೋಗುವಾಗ ತೊಡಕಾಗುತ್ತದೆ ಎನ್ನುವುದು ದಿಟ. ವಾಸ್ತವವಾಗಿ ಉನ್ನತ ಶಿಕ್ಷಣವೂ ಸೇರಿದ ಹಾಗೆ ಎಲ್ಲ ಶಿಕ್ಷಣವೂ ಕನ್ನಡದಲ್ಲೇ ಸಿಗಬೇಕೆಂಬುದೇ ಸರಿಯಾದದ್ದಾದರೂ ಇಂದು ಪರಿಸ್ಥಿತಿ ಹಾಗಿಲ್ಲ ಅನ್ನುವುದು ವಾಸ್ತವ. ಹಾಗಾದರೆ ಈ ಕಲಿಕಾಮಾಧ್ಯಮ ಬದಲಾವಣೆಯೆನ್ನುವುದನ್ನು ಸಲೀಸಾಗಿ ಆಗಿಸುವಂತಹ ಒಂದು ತಾತ್ಕಾಲಿಕ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕಾಗಿದೆ. ಒಂದು ಹಂತದವರೆಗೆ ಕನ್ನಡದಲ್ಲಿ ಕಲಿಕೆ ನಡೆಯಿಸಿ, ಇಂಗ್ಲೀಶ್ ಭಾಷೆಯನ್ನು ಸರಿಯಾಗಿ ಕಲಿಸುವುದರ ಮೂಲಕ ತೊಡಕನ್ನು ಕಡಿಮೆ ಮಾಡಿಸಬಹುದಾಗಿದೆ. ಕನ್ನಡದಲ್ಲೇ ಕಲಿತ ಪೋಶಕರನೇಕರು ತಾವು ಇಂಗ್ಲೀಶ್ ಬರದೆ ಅನುಭವಿಸಿದ್ದ ಪಾಡು ನೆನೆದು ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸಲು ಸಜ್ಜಾಗುತ್ತಾರೆ. ಹಾಗೆ ಮಾಡುವ ಭರದಲ್ಲಿ ಮಗುವಿನ ವಾತಾವರಣವನ್ನೇ ಬದಲಿಸಲೂ ಮುಂದಾಗುತ್ತಾರೆ. ಹೀಗೆ ಪರಿಸರದ ನುಡಿಯೇ ಬದಲಾಗುವುದಾದರೆ ಮಗುವಿನ ಇಂಗ್ಲೀಶಿನಲ್ಲಿನ ಕಲಿಕೆ ಸಲೀಸೇ.. ಆದರೆ ಇಡೀ ಕನ್ನಡನಾಡಿನ ಪರಿಸರವನ್ನು ಬದಲಿಸಲಾಗದಲ್ಲಾ? ಇಂದು ಪರಿಸರದಲ್ಲಿ ಇಂಗ್ಲೀಶಿನ ಗಂಧಗಾಳಿಯಿಲ್ಲದ ಮಗುವನ್ನು ಇಂಗ್ಲೀಶ್ ಮಾಧ್ಯಮದ ಕಲಿಕೆಗೆ ಒಡ್ಡುವುದು ’ಈಜು ಬಾರದ ಕೂಸನ್ನು ನೀರಲ್ಲಿ ಮುಳುಗಿಸಿ ಕೊಂದಂತೆ’! ಹಾಗಾಗಿ ಪೋಶಕರು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸುವ ಮುನ್ನ ತಮ್ಮ ಮಕ್ಕಳು ಕನ್ನಡವೂ ಬಾರದ, ಇಂಗ್ಲೀಶಿನಲ್ಲೂ ಪರಿಣಿತಿಯಿಲ್ಲದೇ ಎಡಬಿಡಂಗಿಗಳಾಗುವ ಅಪಾಯವನ್ನು ಮನಗಾಣಬೇಕಾಗಿದೆ. ಇದನ್ನು ತಿಳಿಸಿ ಹೇಳುವವರಾರು? ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲಿ, ಆದರೆ ಇಂಗ್ಲೀಶ್ ಮಾಧ್ಯಮಕ್ಕೆ ಮುಂದೆ ಬದಲಾಗುವಾಗ ತೊಡಕಾಗದಂತೆ ಜೊತೆಯಲ್ಲಿ ಇಂಗ್ಲೀಶನ್ನೂ ಕಲಿಸುತ್ತೇವೆ ಎನ್ನುವ ಭರವಸೆಯನ್ನು ಕೊಡಬೇಕಾದದ್ದು ಕರ್ನಾಟಕ ರಾಜ್ಯ ಸರ್ಕಾರ.

ಬುದ್ಧಿವಂತರಾಗುತ್ತಾರೆ ಅನ್ನೋ ಮಾರುಕಟ್ಟೆ ತಂತ್ರ!

ಮಕ್ಕಳು ಬುದ್ಧಿವಂತರಾಗುತ್ತಾರೆ ಎನ್ನುವುದು ಇಂಗ್ಲೀಶ್ ಮಾಧ್ಯಮ ಶಾಲೆಗಳು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಹಬ್ಬಿಸಿರುವ ಪೊಳ್ಳು ವದಂತಿ. ವಾಸ್ತವವಾಗಿ ತಾಯ್ನುಡಿಯಲ್ಲಿ ಕಲಿತ ಮಕ್ಕಳು “ಕಾನ್ಸೆಪ್ಚುಯಲ್ ಥಿಂಕಿಂಗ್”ನಲ್ಲಿ (ತಿರುಳು ಚಿಂತನೆ/ ಕಲಿಕೆಯಲ್ಲಿ) ಅತ್ಯುತ್ತಮರಾಗಿರುತ್ತಾರೆ ಎನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಟುಸ್ ಪುಸ್ ಇಂಗ್ಲೀಶ್ ಮಾತಾಡುವುದನ್ನೇ ಬುದ್ಧಿವಂತಿಕೆ ಎಂದು ನಂಬುವ ಅಮಾಯಕ ತಾಯ್ತಂದೆಯರು ಇಂಗ್ಲೀಶ್ ಮಾಧ್ಯಮದ ಮೊರೆ ಹೋಗುವುದು ಸಹಜ. ಈ ಪೊಳ್ಳನ್ನು ದೂರಮಾಡುವ ಹೊಣೆಗಾರಿಕೆ ಯಾರದ್ದು? ಕರ್ನಾಟಕ ರಾಜ್ಯ ಸರ್ಕಾರದ್ದು.. ಅಲ್ಲವೇ?

ಒಳ್ಳೇ ದುಡಿಮೆಯ ಅವಕಾಶ

ಇನ್ನು ಮೂರನೆಯ ಅನಿಸಿಕೆ ಎಂದರೆ ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವುದು. ಹೌದೂ, ಓದಿನಲ್ಲಿ ಹೆಚ್ಚಿನ ಅಂಕ ಪಡೆದು, ಸಂದರ್ಶನದಲ್ಲಿ ಚೆನ್ನಾಗಿ ಪಾಲ್ಗೊಳ್ಳುವವರಿಗೆ ಒಳ್ಳೆ ಕೆಲಸ ಸಿಗುವುದು ಸಹಜ. ಆದರೆ ಹೀಗೆ ಒಳ್ಳೆಯ ಅಂಕ ಗಳಿಸಲಾಗಲೀ, ಸಂದರ್ಶನದಲ್ಲಿ ಚೆನ್ನಾಗಿ ಮಾಡಲಾಗಲೀ ಬೇಕಿರುವುದು ಆತ್ಮವಿಶ್ವಾಸ ಮತ್ತು ಅರಿವು ಎನ್ನುವುದು ಇಂತಹ ಸಂದರ್ಶನಗಳನ್ನು ಎದುರಿಸಿದ ಮತ್ತು ನಡೆಸುತ್ತಿರುವವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜನರು, ಒಳ್ಳೆಯ ಕೆಲಸ ದಕ್ಕಿಸಿಕೊಳ್ಳಲು ಇಂಗ್ಲೀಶ್ ಭಾಷೆಯ ಕಲಿಕೆ ಸಾಕೋ, ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಕೆ ಬೇಕೋ ಎಂಬುದನ್ನು ಯೋಚಿಸಿ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇಂತಹ ಪರಿಣಿತಿಯನ್ನು, ನಿಮ್ಮ ಮಕ್ಕಳಿಗೆ ಅವರು ’ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಮಾಡುತ್ತಿರುವಾಗಲೂ’ ಒದಗಿಸಿಕೊಡುವ ಹೊಣೆಗಾರಿಕೆ ನಮ್ಮದು ಎನ್ನಬೇಕಾಗಿದೆ. ಯಾರು ಹೀಗೆನ್ನಬೇಕೆಂದರೆ ಅದು ಕರ್ನಾಟಕ ರಾಜ್ಯಸರ್ಕಾರ.

ಯಾವ ಕಟ್ಟುಪಾಡನ್ನೂ ಒಪ್ಪಬೇಕಿಲ್ಲ!

ಇವೆಲ್ಲಾ ಮಾಡುತ್ತಲೇ ಕನ್ನಡದಲ್ಲಿ ಕಲಿಕೆಯನ್ನು ಇಂದು ಪ್ರಾಥಮಿಕ ಹಂತದವರೆಗೆ ಕಡ್ಡಾಯ ಎನ್ನುವ ನಿಲುವನ್ನು ಹೊಂದಿದ್ದರೂ ಕಡ್ಡಾಯದ ಕಟ್ಟುಪಾಡು ಬಿಟ್ಟು ಕನ್ನಡದ ಕಲಿಕೆಯನ್ನು ಉನ್ನತ ಶಿಕ್ಷಣದವರೆಗೂ ವಿಸ್ತರಿಸಬೇಕಾದ ಹೊಣೆ ಸರ್ಕಾರದ್ದೇ ಆಗಿದೆ. ಹಾಗಿರುವಾಗ ’ನಮ್ಮ ಭಾಷಾನಿಯಮ ಬರೀ ಐದನೇ ತರಗತಿವರೆಗೆ ಮಾತ್ರಾ ಅನ್ವಯವಾಗುತ್ತೆ, ಹಾಗಾಗಿ ಆರರಿಂದ ಇಂಗ್ಲೀಶ್ ಮಾಧ್ಯಮ ಮಾಡ್ತೀವಿ’ ಅನ್ನೋದು ಆತ್ಮವಂಚನೆ ಮಾತ್ರವಲ್ಲಾ, ಆತ್ಮವಿಶ್ವಾಸದ ಕೊರತೆಯೂ ಹೌದು. ಸರ್ಕಾರಕ್ಕೆ ಕನ್ನಡ ಮಾಧ್ಯಮದ ಕಲಿಕೆಯಿಂದ ಕನ್ನಡಿಗರ ಬದುಕನ್ನು ಹಸನುಗೊಳಿಸಲು ಅಸಾಧ್ಯ ಅನ್ನಿಸಿದ್ದರೆ ಒಂದನೇ ತರಗತಿಯಿಂದಲೇ ಇಂಗ್ಲೀಶ್ ಮಾಧ್ಯಮ ಆರಂಭಿಸಲಿ. ಹಾಗೆ ಆರಂಭಿಸುವ ಮುನ್ನ ಪರಿಸರದ ನುಡಿಯಲ್ಲಿನ ಕಲಿಕೆಗಿಂತಾ ಪರಭಾಷಾ ಮಾಧ್ಯಮವೊಂದರ ಮೂಲಕ ಯಾವುದೇ ಜನಾಂಗದ ಕಲಿಕೆ ಅತ್ಯುತ್ತಮವಾಗುತ್ತದೆ ಎನ್ನುವುದಕ್ಕೆ ಒಂದು ವೈಜ್ಞಾನಿಕ ಅಧ್ಯಯನದ ಆಧಾರ ಕೊಡಲಿ. ಈ ಹೊಣೆಗಾರಿಕೆ ಕರ್ನಾಟಕ ಸರ್ಕಾರದ್ದು!

ಬಲು ಮುಖ್ಯವಾಗಿ ಮೇಲಿನ ಮೂರು ಕಾರಣಗಳಿಂದಾಗಿ ಕನ್ನಡಿಗ ಪೋಶಕರು ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲೀಶ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಶ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಇಲ್ಲದಿದ್ದರೆ ಸಮಾನತೆಯ ಆಕರ್ಶಕವಾದ “ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಶ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ” ಎಂಬ ಬಣ್ಣದ ಮಾತಿನ ಸೆಳೆತಕ್ಕೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ,

ರಾಜ್ಯದ ನಿಯಮ ಯಾರನ್ನೋ ನೋಡಿ ನಿಕ್ಕಿಯಾಗದು

ಅಂತೆಯೇ ಜನರು ಇಂದು “ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ” ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಇಂದು ಯಾರೇ ತಾಯ್ನುಡಿಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿಲ್ಲವಾದಲ್ಲಿ ಅದು ಅವರು ತಮ್ಮ ಮಕ್ಕಳಿಗೆ ಬಗೆಯುತ್ತಿರುವ ದ್ರೋಹ ಎಂದರೆ ತಪ್ಪಾಗಲಾರದು. ಯಾರೋ ಕೆಲವರು (ಇದು ಹಲವರಾದರೂ...) ತಮ್ಮ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದ ಶಿಕ್ಷಣ ಕೊಡಿಸಿಬಿಟ್ಟರು ಎನ್ನುವುದು ರಾಜ್ಯಸರ್ಕಾರದ ಶಿಕ್ಷಣ ನೀತಿಯನ್ನೇ ತೀರ್ಮಾನಿಸುವುದು ಸರಿಯಲ್ಲ. ಹಾಗಾಗಿ ರಾಜ್ಯಸರ್ಕಾರ ಕನ್ನಡದಲ್ಲೇ ಎಲ್ಲಾ ಹಂತದ ಶಿಕ್ಷಣವನ್ನು ನೀಡಲು ಯೋಜನೆ ರೂಪಿಸಿ ಜಾರಿಮಾಡಲಿ. ಕನ್ನಡ ಮಾಧ್ಯಮದ ಮಕ್ಕಳಿಗೆ ಅವರ ಆಯ್ಕೆಯ ವಿದೇಶಿ ಭಾಷೆಯನ್ನು ಪ್ರಾಥಮಿಕ ಹಂತದ ನಂತರ ಒಂದು ಭಾಷೆಯಾಗಿ ಕಲಿಸಲು ಏರ್ಪಾಟು ಮಾಡಲಿ. ಈಗ ಇನ್ನೂ ಉನ್ನತ ಶಿಕ್ಷಣವು ಇಂಗ್ಲೀಶಿನಲ್ಲಿ ಮಾತ್ರಾ ಲಭ್ಯವಿರುವುದರಿಂದ, ಕನ್ನಡ ಮಾಧ್ಯಮದ ಮಕ್ಕಳಿಗೆ-ಇಂಗ್ಲೀಶ್ ಮಾಧ್ಯಮ ಕಲಿಕೆಗೆ ಬದಲಾಗುವಾಗ-ಆದಷ್ಟು ತೊಡಕನ್ನು ಕಡಿಮೆ ಮಾಡುವಂತಹ ಯೋಜನೆಗಳನ್ನು ತಾತ್ಕಾಲಿಕವಾಗಿ ರೂಪಿಸಿ ಜಾರಿಗೊಳಿಸಲಿ. ಇದೆಲ್ಲಾ ಬಿಟ್ಟು, ತಾನೇ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಶುರುಮಾಡೋ ಮೂಲಕ, ಕನ್ನಡದ ಮಕ್ಕಳ ಕಲಿಕೆಯನ್ನು ಅವರ ಪರಿಸರದಲ್ಲಿಲ್ಲದ ಭಾಷೆಯೊಂದರಲ್ಲಿ ಮಾಡಿಸುವ ಮೂಲಕ, ಒಳ್ಳೇ ಕೆಲಸ – ಒಳ್ಳೇ ಓದು – ಬುದ್ಧಿವಂತಿಕೆ ಎನ್ನುವ ಬಣ್ಣದ ಸಕ್ಕರೆಕಡ್ದಿಯ ಮಾತುಗಳ ಮೂಲಕ... ಜನರನ್ನು ಏಳಿಗೆಯ ದಾರಿಯಿಂದ ಮತ್ತಷ್ಟು ದೂರ ಒಯ್ಯುವುದು ನಿಶ್ಚಿತ.

ಜನರೆಂದರೆ ಯಾರ್ ಯಾರು ಕಾಗೇರಿಯವರೇ?

ಇವತ್ತಿನ (೦೩.೦೭.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯ ಒಂಬತ್ತನೇ ಪುಟದಲ್ಲಿ ಮಾನ್ಯ ಶಿಕ್ಷಣಮಂತ್ರಿಗಳಾದ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರ "ಬುಲೆಟ್ ಸಂದರ್ಶನ"ವೊಂದು ಪ್ರಕಟವಾಗಿದೆ. ಸರ್ಕಾರ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇದು ಕುತೂಹಲಕರವಾಗಿದ್ದು, ಒಂದು ಥರ ಸರ್ಕಾರದ ಮುಂದಿನ ನಡೆಯ ದಿಕ್ಸೂಚಿಯೂ ಆಗಿದೆ. ಇಡೀ ಸಂದರ್ಶನದ ಪ್ರಮುಖ ಮಾತುಗಳು ಇಂತಿವೆ.

ಸಾಹಿತಿಗಳಷ್ಟೇ... ಜನತೆಯಲ್ಲ!

ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ತಾವು ಸಿದ್ಧ ಎಂಬುದನ್ನು ಮಂತ್ರಿಗಳು ಸಾಬೀತು ಮಾಡುತ್ತಿರುವಂತೆ ಇವರ ಮಾತುಗಳಿವೆ. ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಸಾಹಿತಿಗಳು ಮಾತ್ರಾ ವಿರೋಧ ತೋರಿಸಿದ್ದಾರೆ, ಇವರಷ್ಟೇ ನಾಡಿನ ಜನತೆಯಲ್ಲ... ಹಳ್ಳಿಗಾಡಿನ ಜನರೂ ಕೂಡಾ ಅವರ ಅಭಿಪ್ರಾಯ ಹೇಳಲಿ... ಇತ್ಯಾದಿಯಾಗಿ ಮಂತ್ರಿಗಳು ಮಾತಾಡಿದ್ದಾರೆ. ಇದಲ್ಲದೆ ಮಾಧ್ಯಮಗಳಿಗೆ ಜನರ ಅಭಿಪ್ರಾಯ ನಿರೂಪಿಸುವ ಹೊಣೆಗಾರಿಕೆಯನ್ನೂ ವಹಿಸಿದ್ದಾರೆ. ಈ ಪ್ರಯತ್ನವು ಸಾಹಿತಿಗಳ ಬಾಯಿ ಮುಚ್ಚಿಸುವ "ನಿಮ್ಮ ಮಕ್ಕಳು ಇಂಗ್ಲೀಶ್ ಮಾಧ್ಯಮದಲ್ಲಿ ಓದಬಹುದು, ಬಡವರ ಮಕ್ಕಳು ಓದಬಾರದಾ?" ಎಂಬಂತಹ ಮತ್ತೊಂದು ಅಸ್ತ್ರವಾಗಿದೆ. ಇರಲಿ... ಕಾಗೇರಿಯವರು ಆಡಿರುವ ಮಾತುಗಳತ್ತ ನೋಡೋಣ.

ಜನರ ಶಿಕ್ಷಣದ ಬಗ್ಗೆ ಮಾತಾಡಬೇಕಾದವರು ಯಾರು?

ಕಾಗೇರಿಯವರು ಹೇಳಿದ ಹಾಗೆ ಸಾಹಿತಿಗಳು ಮಾತ್ರವೇ ಕನ್ನಡ ಜನರೆಲ್ಲಾ ಅಲ್ಲಾ ಸರಿ, ಹಾಗಾದ್ರೆ ನಾಡಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತಾಡೋ, ದಿಕ್ಕುತೋರಿಸೋ ಹೊಣೆಗಾರಿಕೆ ಯಾರದ್ದು? ನಮ್ಮಂಥಾ ಸಾಮಾನ್ಯರು ಮಾತಾಡುದ್ರೂ ಕಾಗೇರಿಯವರು ಮೊದಲನೇ ಪ್ರಶ್ನೆಯಾಗಿ "ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೀರಾ?" ಅಂದಾರು... ಮತ್ತೂ ಮುಂದುವರೆದು "ನೀವು ಹೇಳೋದು ಇಡೀ ಕನ್ನಡ ಜನರ ಮಾತಾ?" ಅಂದಾರು. ತಾಯ್ನುಡಿಯಲ್ಲಿ ಕಲಿಕೆ ಒಳ್ಳೇದು ಅಂತಾಗಲೀ, ಸರ್ಕಾರವೇ ಇಂಗ್ಲೀಶ್ ಶಾಲೆ ತೆಗೀಬಾರದು ಅನ್ನೋಕಾಗಲೀ ಸರ್ಕಾರ ನಿರ್ಧಾರ ತೆಗೆದುಕೊಳ್ಳೋಕೆ ಶಿಕ್ಷಣತಜ್ಞರು, ಸಮಾಜತಜ್ಞರೂ ಮುಂತಾದವರ ಸಲಹೆ ತೆಗೆದುಕೊಳ್ಳಬೇಕಲ್ಲವೇ? ಏನಂತಾರೆ ಕಲಿಕೆಯ ಬಗ್ಗೆ ಪ್ರಪಂಚದ ತಜ್ಞರು? ಏನನ್ನುತ್ತೆ ಯುನೆಸ್ಕೋ? ಪ್ರಪಂಚದಲ್ಲಿರೋ ನಾನಾ ದೇಶಗಳಲ್ಲಿ ಎಂಥಾ ವ್ಯವಸ್ಥೆಯಿದೆ? ಇವೆಲ್ಲವನ್ನೂ ಅಧ್ಯಯನ ಮಾಡಿ ಸರ್ಕಾರ ನಿರ್ಧಾರ ತೊಗೊಳ್ಳೋಕೆ ಮುಂದಾಗುತ್ತೇನು? ಒಂದು ನಿರ್ಧಾರ ತೊಗೊಂಡು... ಅದನ್ನು ವಿರೋಧ ಮಾಡಿದೋರುನ್ನೆಲ್ಲಾ ಒಂದಲ್ಲಾ ಒಂದು ಮಾತೆತ್ತಿ ಕೆಳಗೆ ಮಾಡಿ ತಾವಂದುಕೊಂಡಿದ್ದನ್ನು ಜಾರಿ ಮಾಡೋದ್ರಲ್ಲಿ ಈ ಸರ್ಕಾರಕ್ಕೆ ಈಗಾಗಲೇ ಅನುಭವ ಇದೆಯಲ್ಲಾ? ಆಗ ತಿರುವಳ್ಳುವರ್ ಪ್ರತಿಮೆ ನಿಲ್ಲಿಸಬೇಡಿ ಅಂದಾಗ ಜನರ ಹೋರಾಟದ ಕತ್ತು ಹಿಸುಕಿ, ಸಾಹಿತಿಗಳಿಂದ ಪತ್ರಿಕೆಗಳಲ್ಲಿ ದಿನಕ್ಕೊಂದು ಪತ್ರ ಬರೆಸಿ, ಅದನ್ನೇ ಜನಾಭಿಪ್ರಾಯ ಅಂದಿದ್ದನ್ನು ಜನರು ಮರೀತಾರಾ ಗುರೂ? ಪಾಪಾ! ಆಗ ಈ ಸಾಹಿತಿಗಳೇ ಅವರಿಗೆ ಇಡೀ ಕನ್ನಡ ಜನತೆ ಆಗಿದ್ರಾ?

ಯು.ಕೆ ವೀಸಾಗೆ ಕನ್ನಡ ಗೊತ್ತಿದ್ರೂ ಸಾಕು!


ಹೊರದೇಶಗಳಿಗೆ ಹೋಗೋ ಮೊದಲು ಆಯಾ ದೇಶಗಳಿಂದ ವೀಸಾ ಪಡೆದುಕೊಳ್ಳೋದು ಸಾಮಾನ್ಯ ವಿಧಾನ. ಹೀಗೆ ಯುನೈಟೆಡ್ ಕಿಂಗ್‍ಡಮ್ ದೇಶಕ್ಕೆ ಹೋಗೋ ಜನಕ್ಕೆ ವೀಸಾ ಪಡೆದುಕೊಳ್ಳಲು ಅನುಕೂಲ ಮಾಡಿಕೊಡೋಕೆ ಒಂದು ಅಂತರ್ಜಾಲ ತಾಣ ಇದೆ. ಕನ್ನಡಿಗರು ಯು.ಕೆ ವೀಸಾ ದಕ್ಕಿಸಿಕೊಳ್ಳಲು ಅನುಕೂಲ ಆಗೋ ಹಾಗೆ ಈ ತಾಣ ಕನ್ನಡದಲ್ಲೂ ಇದೆ. ಇಗೋ ನೋಡಿ ಆ ತಾಣ.

ಗ್ರಾಹಕ ಸೇವೆಯ ಮಹತ್ವ!

ತನ್ನ ಗ್ರಾಹಕರಿಗಾಗಿ ಸದಾ ಮಿಡಿಯೋರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಯು.ಕೆ ಸರ್ಕಾರದೋರು ಮತ್ತು ವಿ.ಎಫ಼್.ಎಸ್ ಗ್ಲೋಬಲ್ ಸಂಸ್ಥೆಯೋರು ಒಟ್ಟಾಗಿ ಭಾರತದಲ್ಲಿ ಆರಂಭಿಸಿರೋ ಈ ಸಂಸ್ಥೆಯ ಅಂತರ್ಜಾಲ ತಾಣ ಕಂಡಾಗ ತಿಳಿಯುತ್ತೆ. ಜೊತೆಗೆ ಒಮ್ಮೆಲೇ.. ನಮ್ಮೋರು ಹೆಂಗೆ ನಡ್ಕೊತಾ ಇದಾರೆ ಅನ್ನೋದು ನೆನಪಾಗಿ ಬೇಸರವಾಗುತ್ತೆ. ನೀವೇ ನೋಡಿ ನಮ್ಮ ನೈರುತ್ಯ ರೈಲ್ವೇ ವಲಯದ ಈ ಅಂತರ್ಜಾಲ ತಾಣವನ್ನು. ಈ ತಾಣ ಇರೋದು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳೆಂದೂ, ಅಧಿಕೃತ ಸಂಪರ್ಕ ಭಾಷೆಗಳೆಂದೂ ಘೋಷಿಸಲಾಗಿರುವ ಹಿಂದೀ ಮತ್ತು ಇಂಗ್ಲೀಶಿನಲ್ಲಿ ಮಾತ್ರಾ. ಬೇಕಾರೆ ತೊಗೊಳ್ಳೀ ಇಲ್ಲಾ ನೆಗೆದು ಬಿದ್ದು ಸಾಯ್ರಿ...ಅನ್ನಬಹುದೇನೋ ನಮ್ಮ ರೈಲ್ವೇ...


ಭಾರತೀಯ ರೈಲ್ವೇ ಇಲಾಖೆಯ ನೈರುತ್ಯ ವಲಯದಲ್ಲಿ ಹೆಚ್ಚಿನ ಭಾಗ ಬರೋದು ನಮ್ಮ ಕರ್ನಾಟಕದಲ್ಲೇ... ಇದರ ಕೇಂದ್ರಕಛೇರಿ ಇರೋದೂ ಹುಬ್ಬಳ್ಳಿಯಲ್ಲೇ... ಈ ವಲಯದಲ್ಲಿ ಓಡಾಡೋ ಪ್ರಯಾಣಿಕರಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು ಕನ್ನಡದೋರೇ... ಆದರೆ ಇವರಿಗೆಲ್ಲಾ ಅನುಕೂಲ ಮಾಡಿಕೊಡಬೇಕು ಅನ್ನೋ ಆಶಯವೇ ರೈಲ್ವೇ ಇಲಾಖೆಗೆ ಇಲ್ಲ. ನಿಜಕ್ಕೂ ನಿಮಗೇನಾದರೂ ಕೆಲಸ ಆಗಬೇಕಿದ್ದರೆ ಹಿಂದೀ ಕಲೀರಿ... ಇಲ್ಲಾ ಇಂಗ್ಲೀಶ್ ಕಲೀರಿ ಎನ್ನೋ ಧೋರಣೆ ಇದರದ್ದು. ಯಾಕೆ ಹೀಗೇ? ಕನ್ನಡದಲ್ಲಿ ಮಾಹಿತಿ ಕೊಟ್ಟಿದ್ರೆ ಇವರದ್ದೇನು ಗಂಟು ಹೋಗ್ತಿತ್ತೂ? ನಿಜವಾದ ಗ್ರಾಹಕಸೇವೆ ನೈರುತ್ಯ ರೈಲ್ವೇಯ ಗ್ರಾಹಕರಿಗೆ ಸಿಗ್ತಿರಲಿಲ್ವಾ? ಅಂತೀರಾ... ಊಹೂಂ, ಗ್ರಾಹಕರಿಗೆ ಅನುಕೂಲವೋ ತೊಡಕೋ ಏನಾದರೆ ಭಾರತ ಸರ್ಕಾರಕ್ಕೇನು? ಸಂವಿಧಾನದ ಆಶಯದಂತೆ ಭಾಷಾನೀತಿ, ಭಾಷಾನೀತಿಯಂತೆ ಎಲ್ಲಾ ಇಲಾಖೆಗಳು, ಇಲಾಖೆಯ ನಿಯಮದಂತೆ ಅಂತರ್ಜಾಲ ತಾಣ. ಇಲ್ಲಿ ಗ್ರಾಹಕ ಅನ್ನೋ ಪದವೇ ಮಾಯಾ! ಇದಕ್ಕೆಲ್ಲಾ ಕಾರಣ ಏನೆಂದರೆ... ಭವ್ಯ ಭಾರತ ಅಪ್ಪಿಕೊಂಡಿರೋ ರೋಗಗ್ರಸ್ತ ಭಾಷಾನೀತಿ.. ಹೇಳಿ ಗುರುಗಳೇ.... ಇದು ಬದಲಾಗಬೇಕೋ ಬೇಡವೋ?

ಕಲಿಕಾ ವ್ಯವಸ್ಥೆ: ರಾಜ್ಯಸರ್ಕಾರದ್ದು ಹೊಣೆ ತಪ್ಪಿಸಿಕೊಳ್ಳೋ ಹುನ್ನಾರವೇ?

ನಿನ್ನೆಯ (೧೮.೦೬.೨೦೧೧ರ) ದಿನಪತ್ರಿಕೆಗಳಲ್ಲಿ ಕರ್ನಾಟಕ ರಾಜ್ಯಸರ್ಕಾರವು ನಾಡಿನಾದ್ಯಂತ ಇಂಗ್ಲೀಶ್ ಮಾಧ್ಯಮದ ಶಾಲೆಗಳನ್ನು ಶುರು ಮಾಡಲು ಸಿದ್ಧವಾಗಿದೆ ಎಂದು ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ತುಮಕೂರಿನಲ್ಲಿ ನೀಡಿರುವ ಹೇಳಿಕೆಯ ಸುದ್ದಿ ಪ್ರಕಟವಾಗಿದೆ. ಕರ್ನಾಟಕ ರಾಜ್ಯಸರ್ಕಾರವೇ ಇಂಥದ್ದೊಂದು ನಡೆಗೆ ಮುಂದಾಗಿ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದು ಸರಿಯಲ್ಲ.

ಶಿಕ್ಷಣ ವ್ಯವಸ್ಥೆ ರೂಪಿಸೋ ಹೊಣೆ ಸರ್ಕಾರದ್ದು!

ಕನ್ನಡ ಜನರ ಪ್ರತಿನಿಧಿಯಾಗಿ ನಮ್ಮ ರಾಜ್ಯಸರ್ಕಾರವಿದೆ. ಈ ನಾಡಿನ ಪ್ರಜೆಗಳನ್ನು ಪೊರೆಯುವ ಹೊಣೆಯೊಂದಿಗೆ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಸರ್ಕಾರದ್ದು. ಇಂಥಾ ಹೊಣೆಗಾರಿಕೆಯ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು ಎಂದೂ, ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಇಂಥಾ ಮೂಲಭೂತ ಹೊಣೆಗಾರಿಕೆ ಆಯಾ ನಾಡಿನ ಸರ್ಕಾರಗಳು ಹೊಂದಿರುತ್ತದೆ.

ನಿಮ್ಮ ಸರ್ಕಾರದ ನಿಲುವು ಹೇಳಿ ಸಚಿವರೇ...

೧. ತಾಯ್ನುಡಿಯಲ್ಲಿ ಕಲಿಕೆ ಅತ್ಯುತ್ತಮ ಎನ್ನುವುದರ ಬಗ್ಗೆ ತಮ್ಮ ನಿಲುವೇನು?

೨. ಬೇರೆ ಬೇರೆ ಅಧ್ಯಯನಗಳು, ಯುನೆಸ್ಕೋ ಮೊದಲಾದವು ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ ತೋರಿರುವ ಅಭಿಪ್ರಾಯಗಳ ಬಗ್ಗೆ ನಿಮ್ಮ ನಿಲುವೇನು?

೩. ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಹೊಣೆಗಾರಿಕೆ ಕರ್ನಾಟಕ ರಾಜ್ಯಸರ್ಕಾರದ್ದು ಎಂದು ನೀವು ಒಪ್ಪುವಿರಾ?

೪. ಕನ್ನಡದಲ್ಲಿ ಎಲ್ಲಾ ಹಂತದ ಕಲಿಕೆಯನ್ನೂ ತರುವ ಹೊಣೆಗಾರಿಕೆಯನ್ನು ಸರ್ಕಾರ ಹೊತ್ತಿದೆಯೇ?

೫. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಎನ್ನುವ ನೀತಿಯನ್ನು ಹೊಂದಿರುವುದರ ಬಗ್ಗೆ ತಮ್ಮ ಸರ್ಕಾರದ ನಿಲುವೇನು?

೬. ಅದು ಬರೀ ೫ನೇ ತರಗತಿ ತನಕ, ಹಾಗಾಗಿ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಶಾಲೆ ಆರಂಭಿಸುತ್ತಿದ್ದೇವೆ ಎನ್ನುವುದು ರಾಜ್ಯಸರ್ಕಾರದ ಶಿಕ್ಷಣ ನೀತಿಗೆ ಮಾರಕವಾದ ನಿಲುವಲ್ಲವೇ?

ಸಭ್ಯರೂ ಪ್ರಾಮಾಣಿಕರೂ ಅಂತಾ ಹೆಸರಾಗಿರೋ ಶ್ರೀ ಕಾಗೇರಿಯವರಿಗೆ ಇವುಕ್ಕೆಲ್ಲ ಉತ್ತರ "ಹೌದೂ" ಅನ್ನೋದು ತಿಳಿದಿರೋದಿಲ್ವೇ? ಅದ್ಯಾವ ರಾಜಕಾರಣದ ತಿರುಗಣಿ ಹೀಗೆ ಅವರನ್ನು "ಇಲ್ಲಾ" ಅನ್ನುವಂತೆ ನಡೆದುಕೊಳ್ಳುವಂತೆ ಆಡುಸ್ತಿದೆಯೋ.. ಆ ಕಾಶಿ ವಿಶ್ವೇಶ್ವರನೇ ಬಲ್ಲ!

ಶಂಕರಬಟ್ ಅವರ ಮುಂದಾಳ್ತನದಲ್ಲಿ ತರಬೇತಿ ಶಿಬಿರ



ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವು ನಾಡಿನ ಏಳಿಗೆಯಲ್ಲಿ ಹಿರಿಯಪಾತ್ರವನ್ನು ವಹಿಸಲಿದೆ ಎಂಬ ಹಿನ್ನೆಲೆಯಲ್ಲಿ ಬನವಾಸಿ ಬಳಗವು ನುಡಿಯರಿಮೆಯ ಕ್ಷೇತ್ರದಲ್ಲಿ ದುಡಿಯುವವರಿಗೆ ಸರಿಯಾದ ದಾರಿತೋರಬಲ್ಲ ಹಿರಿಯರ ಮುಂದಾಳ್ತನದಲ್ಲಿ ತರಬೇತಿ ಶಿಬಿರಗಳನ್ನು ನಡೆಸಲು ಮುಂದಾಗಿದೆ.
ದೇಶ ವಿದೇಶಗಳಲ್ಲಿ ತಮ್ಮ ಅರಿಮೆಯಿಂದ ವಿಖ್ಯಾತರಾಗಿರುವ, ಕನ್ನಡನಾಡಿನ ಹಿರಿಯ ನುರಿತ ನುಡಿಯರಿಗರಾದ ಡಾ. ಡಿ. ಎನ್. ಶಂಕರಬಟ್ಟರ ಮುಂದಾಳ್ತನದಲ್ಲಿ ನುಡಿಯರಿಮೆಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಶುರುವಾಗಲಿದ್ದು, ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ನಾಲ್ಕು ಶಿಬಿರಗಳು ನಡೆಯಲಿವೆ. ಪ್ರತೀ ಶಿಬಿರದಲ್ಲೂ ಮೂರು ದಿನಗಳ ತರಬೇತಿ ಇರುತ್ತದೆ. ಇದರಲ್ಲಿ ನುಡಿಯರಿಮೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ, ನುಡಿಯರಿಮೆಯ ಅಧ್ಯಯನ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದ್ದು ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದವರನ್ನು ಸಂದರ್ಶಿಸಿ ತರಬೇತಿ ಶಿಬಿರಕ್ಕೆ ಸೇರಿಸಿಕೊಳ್ಳಲಾಗುತ್ತದೆ.

ನುಡಿಯರಿಮೆಯ ಕ್ಷೇತ್ರದಲ್ಲಿ, ಡಾII ಡಿ ಎನ್ ಶಂಕರಬಟ್ ಅವರ ಮುಂದಾಳ್ತನದಲ್ಲಿ ಸಂಶೋಧನೆಗಳನ್ನು ಮಾಡ ಬಯಸುವವರು ತಮ್ಮ ವಿವರಗಳನ್ನು ನಮಗೆ ಕಳಿಸಬೇಕಾಗಿ ಕೋರಿಕೆ. ಈ ಬಾರಿಯ ತರಬೇತಿ ಶಿಬಿರವು ಬೆಂಗಳೂರಿನಿಂದಾಚೆ ನಡೆಯಲಿದ್ದು ಬನವಾಸಿ ಬಳಗವೇ ಉಳಿದುಕೊಳ್ಳುವ, ಊಟ ತಿಂಡಿಯ ಏರ್ಪಾಟು ಮಾಡಲಿದೆ. ಇನ್ನುಳಿದ ವಿವರಗಳನ್ನು ಪಡೆದುಕೊಳ್ಳಲು, ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ: priyank@banavasibalaga.org

ವಲಸಿಗ ಕನ್ನಡ ಕಲಿಯೋಲ್ಲಾ ಅನ್ನೋದು ಧರ್ಮಾನಾ?

ಇಂದು (೦೭.೦೬.೨೦೧೧) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರಕ್ಕೆ ಸಲ್ಲಿಸಿರೋ ಒಂದು ವರದಿಯ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಈ ವರದಿಯಲ್ಲಿ ಸರ್ಕಾರಕ್ಕೆ ಹಲವಾರು ಶಿಫಾರಸ್ಸುಗಳನ್ನು ಚಂದ್ರು ಅವರು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಒಂದು ಸಲಹೆ "ಕರ್ನಾಟಕದಲ್ಲಿ ವಲಸೆ ಬಂದು ನೆಲೆಸುವ ಪರಭಾಷಿಕರು ವರ್ಷವೊಂದರಲ್ಲಿ ಕನ್ನಡ ಕಲಿಯಬೇಕು. ೭ನೇ ತರಗತಿ ಹಂತದ ಕನ್ನಡ ಪರೀಕ್ಷೆಯನ್ನು ಪಾಸು ಮಾಡಬೇಕು" ಎನ್ನುವುದು. ಇಲ್ಲಿ ಇಂತಹ ಪರೀಕ್ಷೆ ಬೇಕಾ? ಹೇಗೆ ಪರೀಕ್ಷೆ ಮಾಡಬೇಕು? ಹೇಗೆ ಒಂದು ವರ್ಷದ ಅವಧಿ ಕಂಡು ಹಿಡಿಯಬೇಕು? ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮುಂದೇನು? ಅಸಲಿಗೆ, ಪರೀಕ್ಷೆ ಬೇಕಾ? ಎನ್ನುವುದನ್ನೆಲ್ಲಾ ಬದಿಗಿಟ್ಟು ನೋಡಿದಲ್ಲಿ ಈ ನಡೆಯ ಹಿಂದೆ "ವಲಸಿಗರು ಕನ್ನಡ ಕಲಿಯಬೇಕು" ಎನ್ನುವ ಕಾಳಜಿಯನ್ನು ಗುರುತಿಸಬಹುದಾಗಿದೆ. ಅನೇಕತೆಯಲ್ಲಿ ಏಕತೆ ಎನ್ನುವುದನ್ನು ಅರ್ಥ ಮಾಡಿಕೊಂಡವರಿಗೆ ಚಂದ್ರು ಅವರ ಸಲಹೆ ಮೆಚ್ಚುಗೆಯಾಗುತ್ತದೆ.

ಪ್ರತಿಕ್ರಿಯೆ ಮತ್ತದರ ಹಿಂದಿನ ಮನಸ್ಥಿತಿ

ಹಾಗಾಗಿ ಇವತ್ತು ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಅಂದ್ರೆ ಅದು ಎಂಥೆಂಥಾ ವರದಿಗೆ, ಪ್ರತಿಕ್ರಿಯೆಗೆ ಕಾರಣವಾಗುತ್ತೇ ಅನ್ನೋದನ್ನು ನೀವು ಬೆಂಗಳೂರು ಮಿರರ್ ಪತ್ರಿಕೆಯನ್ನು ನೋಡೇ ಅರಿಯಬೇಕು. ಬೆಂಗಳೂರ್ ಮಿರರ್ ಪತ್ರಿಕೆ ವರದಿ ಮಾಡಿರೋ ಶೈಲಿಯನ್ನು ನೋಡಿ. ಈ ಪತ್ರಿಕೆಯಲ್ಲಿ ಸುದ್ದಿಯನ್ನು ನೀಡಿರುವ ಶೈಲಿಯೇ ಕೆಣಕುವಂತಹ, ಆಕ್ಷೇಪದ ದನಿಯಲ್ಲಿದೆ ಎಂದು ಅನ್ನಿಸುವುದು ಸಹಜ. ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳಲ್ಲಿ ಕೆಲವು ಹೀಗಿವೆ ನೋಡಿ:ನಮ್ಮ ನಾಡಲ್ಲಿ ಬಂದವರು ನಮ್ಮ ನುಡಿಯನ್ನು ಕಲೀರಿ ಅಂದರೆ ಹರಿದು ಬಂದ ಈ ಕಮೆಂಟುಗಳನ್ನು ತಲೆಕೆಟ್ಟವರು ಬರೆದಿದ್ದಾರೆ ಎಂದು ಸುಲಭವಾಗಿ ತಳ್ಲಿ ಹಾಕಿಬಿಡಬಹುದು. ಆದರೆ ಇಂಥಾ ಮನಸ್ಥಿತಿಗೆ ಯಾರು ಕಾರಣ ಎಂದು ನೋಡಿದರೆ ಕಾಣುವುದು ಭಾರತದ ಭಾಷಾನೀತಿ. ಹೆಚ್ಚಿನದಾಗಿ ಇಲ್ಲಿ ಚಂದ್ರು ಶಿಫಾರಸ್ಸನ್ನು ವಿರೋಧಿಸಿ ಬಂದಿರೋ ಕಮೆಂಟುಗಳೆಲ್ಲಾ ಹಿಂದಿಯ ಪರವಾಗಿರುವುದು ಅಚ್ಚರಿಯಾಗಿ ಕಂಡರೂ ಅದು ಹಾಗಿಲ್ಲದೇ ಅದಕ್ಕೊಂದು ಕಾರಣವಿದೆ.

ಹುಳುಕಿನ ಭಾಷಾನೀತಿ!

ಭಾರತ ಅಳವಡಿಸಿಕೊಂಡಿರೋ ಭಾಷಾನೀತಿಯಿಂದಾಗಿ ಇಂದು ಭಾರತದ ಯಾವಮೂಲೆಯಲ್ಲಿದ್ದರೂ ಕಡ್ಡಾಯವಾಗಿ ಹಿಂದಿಯನ್ನು ಕಲಿಸಲಾಗುತ್ತದೆ. ಆ ಪ್ರಜೆ ತನ್ನ ಜೀವಮಾನದಲ್ಲೆಂದೂ ತನ್ನೂರು ಬಿಟ್ಟು ಹೊರಹೋಗದಿದ್ದರೂ ಹಿಂದಿಯನ್ನು ಓದಿ, ಕಲಿತು ಪಾಸಾಗಬೇಕಾಗಿದೆ. ಆದರೆ ಕನ್ನಡನಾಡಿಗೆ ಬದುಕಲು ಬರುವವರು ಕನ್ನಡ ಕಲಿಯಬೇಕಾದ್ದು ಕಡ್ಡಾಯವಲ್ಲ. ಮನರಂಜನೆ, ಆಡಳಿತ, ಜಾಹೀರಾತು, ಗ್ರಾಹಕಸೇವೆ ಎಲ್ಲದರಲ್ಲಿ ಹಿಂದಿಯನ್ನು ತುರುಕುವ ಮೂಲಕ ಭಾರತ ಸಾಧಿಸಿರುವುದೇನೆಂದರೆ "ಈ ದೇಶದ ಯಾವ ಮೂಲೆಗೆ ಹೋದರೂ ಹಿಂದಿಯವನಿಗೆ ಅನಾನುಕೂಲವಾಗಬಾರದು" ಎಂಬುದನ್ನು! ರಾಜ್ಯಸರ್ಕಾರವೇ ತ್ರಿಭಾಷಾ ಸೂತ್ರಾ ಅಂತಾ ಒಪ್ಕೊಂಡು ಮೆಟ್ರೋದಲ್ಲಿ ಹಿಂದೀನಾ ಬಳಸಕ್ ಶುರು ಮಾಡುದ್ರೆ ಯಾಕೆ ಅವರಿಗಾದ್ರೂ ಕನ್ನಡ ಕಲೀಬೇಕಾಗುತ್ತೇ? ಆದರೆ ಈ ಸಹಜ ನ್ಯಾಯ ಭಾರತ ಸರ್ಕಾರದ ಭಾಷಾನೀತಿಯ ಕಾರಣದಿಂದ ಇಂದು ಭಾರತದಲ್ಲಿ ಇಲ್ಲವಾಗಿದೆ. ಆಯಾ ರಾಜ್ಯದಲ್ಲಿ ಆಯಾ ಭಾಷೆ ಕಲಿಯುವುದು ಕಡ್ಡಾಯ ಅಂತಾ ಕೇಂದ್ರಸರ್ಕಾರವಂತೂ ಎಂದಿಗೂ ಹೇಳಲಾರದು. ಆಡಳಿತ ಭಾಷೆಯಾಗಿ ಹಿಂದಿ/ ಇಂಗ್ಲೀಷ್ ಇರೋದ್ರಿಂದ ಕೇಂದ್ರಸರ್ಕಾರ ಕರ್ನಾಟಕದಲ್ಲಿರೋ ಕನ್ನಡಿಗರಿಗೆ ಹಿಂದಿಯನ್ನು ಕಡ್ಡಾಯ ಮಾಡೀತೇ ಹೊರತು ಪರಭಾಷಿಕರಿಗೆ ಕನ್ನಡವನ್ನಲ್ಲ. ಅರವತ್ತು ವರ್ಷಗಳಿಂದ ತಲೆಯಲ್ಲಿ ತುಂಬುತ್ತಾ ಬಂದಿರುವ ಹಿಂದಿ ಭಾರತದ ರಾಷ್ಟ್ರಭಾಷೆ, ಹಿಂದೀ ರಾಷ್ಟ್ರಪ್ರೇಮದ ಸಂಕೇತ, ಭಾರತದ ಒಗ್ಗಟ್ಟಿಗೆ ಸಾಧನ ಎಂಬೆಲ್ಲಾ ಸಿಹಿಲೇಪಿತ ವಿಷದ ಗುಳಿಗೆಗಳು ನಮ್ಮವರ ತಲೆಯಲ್ಲೇ ಹೊಕ್ಕಿರುವಾಗ ಪರಭಾಶಿಕರಿಂದ ಬಂದಿರೋ ಈ ಪ್ರತಿಕ್ರಿಯೆಗಳು ಹೀಗಿಲ್ಲದೇ ಇನ್ನು ಹೇಗೆ ಇರಲು ಸಾಧ್ಯಾ ಗುರೂ?

ವಲಸಿಗನ ಧರ್ಮ!

ಹೌದು, ವಲಸಿಗನಿಗೊಂದು ಧರ್ಮವಿದೆ. ತಾನು ವಲಸೆ ಹೋಗುವ ಪ್ರದೇಶದ ನುಡಿ, ಸಂಸ್ಕ್ರುತಿಗಳಿಗೆ ಧಕ್ಕೆ ತರದೆ ಪೂರಕವಾಗಿ ನಡೆದುಕೊಂಡು ಆಯಾ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎನ್ನುವುದೇ ಅದು. ಯಾರಿಗೂ ಇನ್ನೊಂದು ನಾಡಿನ ಅನನ್ಯತೆಯನ್ನು ಅಳಿಸುವ ಹಕ್ಕಿಲ್ಲ. ಹಾಗಾಗಿ ಆಯಾ ಪ್ರದೇಶದ ನುಡಿಯನ್ನು ಕಲಿತು ಅದರಲ್ಲಿ ವ್ಯವಹರಿಸಲೇ ಬೇಕಾಗಿದೆ. ಇಂತಹ "ಬೇಕು"ವನ್ನು ವಲಸಿಗನಿಂದ ನಿರೀಕ್ಷಿಸುವುದು ಆಯಾ ನಾಡಿಗರ ಹಕ್ಕಾಗಿದೆ. ಇಷ್ಟಕ್ಕೂ ವಲಸಿಗರು ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ಕಲೀರಿ ಅಂತಾ ಯಾರಾದ್ರೂ ಯಾಕೆ ಹೇಳಬೇಕು? "ಯಾವ ನಾಡಿನಲ್ಲಿ ನಾವು ಬದುಕುತ್ತೇವೋ ಆ ನಾಡಿನ ಭಾಷೆಯನ್ನು ಕಲಿತೇ ಕಲೀತೀವಿ" ಅನ್ನೋದು ಸಹಜ ಧರ್ಮವಲ್ಲವೇ? ನಾನ್ಯಾಕೆ ಕನ್ನಡ ಕಲೀಬೇಕು ಅನ್ನುವ ಉದ್ಧಟತನ ತೋರುವುದು ತಪ್ಪಲ್ಲವೇ? ಬೆಂಗಳೂರು ಭಾರತದ ಸ್ವತ್ತು ಅನ್ನೋದನ್ನು "ನಿಮ್ಮೂರಲ್ಲಾ ಇದು, ಇದು ಇಡೀ ಇಂಡಿಯಾಗೆ ಸೇರಿದ್ದು... ಇಲ್ಲಿ ನಾವು ನಿಮ್ಮ ಭಾಷೆ ಕಲಿಯಲ್ಲಾ, ಅದೇನು ಮಾಡ್ಕೋತೀರೋ ಮಾಡ್ಕೊಳ್ಳೀ" ಅನ್ನುವಂತಹ ಅನಿಸಿಕೆಯಿಂದಾಗಿ ಆಡಿದರೆ, ಆ ಮಾತುಗಳು ವಲಸಿಗ ಧರ್ಮಕ್ಕೆ ವಿರುದ್ಧವಾಗಿಲ್ಲವೇ? ಇಂಥಾ ಮನಸ್ಥಿತಿಗೆ ಕಾರಣವಾಗಿರೋ ಭಾರತದ ರೀತಿ ನೀತಿ, ಕಾಯ್ದೆ ಕಾನೂನುಗಳು ಬದಲಾಗಬೇಡವೇ?
Related Posts with Thumbnails