ಧಾರವಾಡದಲ್ಲಿನ ಕಲಿಕೆ ಹೊತ್ತಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ


ಬನವಾಸಿ ಬಳಗವು ಇತ್ತೀಚಿಗೆ ಬಿಡುಗಡೆ ಮಾಡಿದ "ಬೆಳಗಲಿ ನಾಡ ನಾಳೆಗಳು: ಕಲಿಕಾ ವ್ಯವಸ್ಥೆಗೊಂದು ಕೈಮರ" ಹೊತ್ತಗೆಯು ಬರುವ ಭಾನುವಾರದಂದು ಧಾರವಾಡದಲ್ಲಿಯೂ ಬಿಡುಗಡೆಗೊಳ್ಳಲಿದೆ. ಈ ಮರುಬಿಡುಗಡೆ ಕಾರ್ಯಕ್ರಮವು, ನಾಡಿನಲ್ಲಿ ಹೆಸರಾದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಯಲಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತೊಡಗಿಕೊಂಡಿರುವ ಅನೇಕ ಸಂಘ ಸಂಸ್ಥೆಗಳು/ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲಬಾರಿಗೆ ಕರ್ನಾಟಕದ ಈ ಭಾಗದಲ್ಲಿ ಬಳಗದ ಕಾರ್ಯಕ್ರಮವು ನಡೆಯಲಿದ್ದು ತಮ್ಮನ್ನು ಈ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ಬನ್ನಿ, ಭಾಗವಹಿಸಿ.

ಕಾರ್ಯಕ್ರಮ ನಡೆಯುವ ಸ್ಥಳ: 
ಶ್ರೀ ನಲವಡಿ ಸಭಾಭವನ
ಮೊದಲನೇ ಮಹಡಿ
ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಕಾರ್ಯಕ್ರಮ ನಡೆಯುವ ದಿನ

23 ಸೆಪ್ಟೆಂಬರ್, 2012, ರವಿವಾರಸಮಯ: ಸಂಜೆ 5:00 ಗಂಟೆಗೆ

ಕಾರ್ಯಕ್ರಮ ನಡೆಸಿಕೊಡುತ್ತಿರುವವರುಶಿಕ್ಷಣ ಮಂಟಪ,
ಕರ್ನಾಟಕ ವಿದ್ಯಾವರ್ಧಕ ಸಂಘ,
ಧಾರವಾಡ

ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊತ್ತಗೆ ಬಿಡುಗಡೆ ಮಾಡುವವರು೧. ಶ್ರೀ ನಿರಂಜನಾರಾಧ್ಯ ವಿ. ಪಿ. - ಮುಖ್ಯ ಅತಿಥಿಗಳು
೨. ಶ್ರೀ ಆನಂದ್, ಬನವಾಸಿ ಬಳಗ - ಅಧ್ಯಕ್ಷತೆ
೩. ಶ್ರೀ ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ, ವಿದ್ಯಾವರ್ಧಕ ಸಂಘ
೪.  ಶ್ರೀ ಸಂಜೀವ ಕುಲಕರ್ಣಿ, ಕಾರ್ಯದರ್ಶಿ, ಶಿಕ್ಷಣ ಮಂಟಪ, ವಿದ್ಯಾವರ್ಧಕ ಸಂಘ
೫. ಪ್ರಿಯಾಂಕ್ ಕತ್ತಲಗಿರಿ

ಶ್ರೀ ನಿರಂಜನಾರಾಧ್ಯ ಅವರು "ಕನ್ನಡ ಮಾಧ್ಯಮ ಶಿಕ್ಷಣ: ಇಂದು ಮತ್ತು ನಾಳೆ" ಎಂಬ ವಿಚಾರವಾಗಿ ಮಾತನಾಡಲಿದ್ದಾರೆ.

ನೀತಿಯೇ ಇರದ ನಾಡಲ್ಲಿ ರಾಜಕೀಯ ಲಾಬಿಯ ಹೊಲಸಾಟವೇ ಪ್ರಭಾವಿ!


ಇದೀಗ ತಾನೆ ನವದೆಹಲಿಯಲ್ಲಿ ನಡೆಯುತ್ತಿದ್ದ ಕಾವೇರಿ ನೀರು ಹಂಚಿಕೆಯ ಕುರಿತು ಮಾನ್ಯ ಪ್ರಧಾನಮಂತ್ರಿಗಳ ಜೊತೆ ನಡೆಯುತ್ತಿದ್ದ ಸಭೆ ವಿಫಲವಾದ ಸುದ್ದಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಸಭೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳು ತಮಿಳುನಾಡಿಗೆ ಪ್ರತಿದಿನ ೯೦೦೦ ಕ್ಯುಸೆಕ್ ನೀರು ಬಿಡಬೇಕೆಂದು ಹೇಳಿದರಂತೆ.. ಅದಕ್ಕೆ ರಾಜ್ಯ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ತಂಡ ವಿರೋಧ ಸೂಚಿಸಿ, ಸಭೆಯನ್ನು ಬಹಿಷ್ಕರಿಸಿ ಹೊರಬಂದರಂತೆ! ಇನ್ನು "ಕರ್ನಾಟಕ ಮೊಂಡು ರಾಜ್ಯ, ಇವರಿಗೆ ಸೌಹಾರ್ದತೆ ಬೇಕಿಲ್ಲಾ, ಇವರು ಭಾರತದ ಒಗ್ಗಟ್ಟಿಗೆ ಮಾರಕ" ಇತ್ಯಾದಿ ಅಪಪ್ರಚಾರಗಳು ಶುರುವಾಗುವ ಸಾಧ್ಯತೆಗಳಿವೆ. ಜೊತೆಗೆ ನ್ಯಾಯಾಲಯವೂ ಕೂಡಾ, ರಾಜ್ಯ ಹೀಗೆ ತಿರಸ್ಕರಿಸಿದ್ದನ್ನು ತನ್ನ ತೀರ್ಪುಗಳನ್ನು ನೀಡುವಾಗ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯೂ ಇದೆ. ಇರಲಿ... ಮೊದಲಿಗೆ ಹೇಳಬೇಕಾದ್ದು ಈ ನಡೆ ನಾಳೆ ಏನೇ ಪರಿಣಾಮ ಬೀರಿದರೂ ಸರಿ, ಕನ್ನಡನಾಡಿನ ಒಳಿತಿನ ದೃಷ್ಟಿಯಿಂದ ಖಂಡಿತಾ ದಿಟ್ಟವಾದದ್ದಾಗಿದೆ. ಕರ್ನಾಟಕ ಸರ್ಕಾರ ಗಟ್ಟಿಯಾದ ರೈತಪರ, ನಾಡಪರ ನಿಲುವನ್ನು ತೆಗೆದುಕೊಂಡಿದೆ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆಗಳು. ಈ ಸಂದರ್ಭದಲ್ಲಿ ನಾವು ಮತ್ತೊಂದಷ್ಟು ವಿಷಯಗಳತ್ತ ಕಣ್ಣು ಹಾಯಿಸಬೇಕಾಗಿದೆ.

ನೀತಿಯಲ್ಲಾ! ರಾಜಕಾರಣ

ಈ ಬಾರಿ ಮಳೆ ಸರಿಯಾಗಿ ಆಗದೆ ಕರ್ನಾಟಕದ ಅಣೆಕಟ್ಟೆಗಳಲ್ಲಿ ಕಡಿಮೆ ನೀರಿದೆ. ಆದರೆ ತಮಿಳುನಾಡು ಕಾವೇರಿ ನೀರು ಬಿಡಲು ಕರ್ನಾಟಕದ ಮೇಲೆ ಒತ್ತಡ ಹಾಕಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೂ ಹತ್ತಿದೆ. ನ್ಯಾಯಾಲಯ ಕರ್ನಾಟಕವು ಪ್ರತಿನಿತ್ಯ ಹತ್ತುಸಾವಿರ ಕ್ಯುಸೆಕ್ ನೀರನ್ನು, ಪ್ರಾಧಿಕಾರದ ಸಭೆ ನಡೆಯುವ ಸೆಪ್ಟೆಂಬರ್ ಹತ್ತೊಂಬತ್ತರವರೆಗೆ ಬಿಡಲು ಸೂಚಿಸಿತ್ತು! ಇಂದು ನಡೆದ ಸಭೆಯಲ್ಲಿ ಮನಮೋಹನ್ ಸಿಂಗ್‌ರವರು ಕರ್ನಾಟಕದ ಮೇಲೆ ಭಾರೀ ದಯೆ ತೋರಿಸಿ ಒಂದು ಸಾವಿರ ಕ್ಯುಸೆಕ್ ಕಮ್ಮಿ ಬಿಡಲು ಸೂಚಿಸಿದ್ದಾರೆ. ಕರ್ನಾಟಕವು "ನಮ್ಮ ನಾಡಲ್ಲಿ ಮುಂಗಾರು ಮುಗಿದು ಹೋಗಿದೆ, ಇನ್ನು ನಮ್ಮ ಅಣೆಕಟ್ಟುಗಳು ತುಂಬುವ ಸಾಧ್ಯತೆಯಿಲ್ಲ. ಇರುವಷ್ಟು ನೀರಲ್ಲಿ ಇಡೀ ವರ್ಷ ಬದುಕಬೇಕು. ಆದರೆ ತಮಿಳುನಾಡಿಗೆ ಅಕ್ಟೋಬರ್ ೧೫ರ ಹೊತ್ತಿಗೆ ಹಿಂಗಾರು ಆರಂಭವಾಗಲಿದೆ. ಅಲ್ಲಿನ ಮೆಟ್ಟೂರು ಅಣೆಕಟ್ಟೆಯಲ್ಲಿ ನಮ್ಮ ಕೆಆರ್‌ಎಸ್ಸಿನಲ್ಲಿರುವುದಕ್ಕಿಂತಾ ಹೆಚ್ಚು ನೀರು ಈಗಲೇ ಇದೆ. ದಯಮಾಡಿ ಅಕ್ಟೋಬರ್ ೧೫ರವರೆಗೆ ಕಾಯೋಣ. ಆಗ ತಮಿಳುನಾಡಿನಲ್ಲಿಯೂ ಮಳೆ ಕೊರತೆಯಾದರೆ ಸಂಕಷ್ಟವನ್ನು ಸಮಾನವಾಗಿ ಹಂಚಿಕೊಳ್ಳೋಣ..." ಎಂದು ಗೋಗರೆದರೂ ಪ್ರಧಾನಮಂತ್ರಿಗಳಿಗೆ ಅದು ಮನವರಿಕೆಯಾಗಲಿಲ್ಲ. ಒಟ್ಟು ಒಂದು ಚಪ್ಪಡಿಯನ್ನು ಕರ್ನಾಟಕದ ತಲೆಯ ಮೇಲೆ ಎಳೆದೇ ಬಿಡಲು ಮುಂದಾದರು!

ಸರಿ. ಏನಪ್ಪಾ ಇದಕ್ಕೆ ಏನಾದರೂ ಮಾನದಂಡವಿದೆಯೇ ಎಂದು ನೋಡಿದರೆ ಅಚ್ಚರಿಯಾಗುತ್ತದೆ. ಸ್ವಾತಂತ್ರ್ಯ ಬಂದು ಅರವತ್ತೈದು ವರ್ಷಗಳ ನಂತರವೂ ಈ ದೇಶದಲ್ಲಿ ಒಂದು ವೈಜ್ಞಾನಿಕವಾದ ರಾಷ್ಟ್ರೀಯ ಜಲನೀತಿ ಇಲ್ಲ... ಸಂಕಷ್ಟದಲ್ಲಿ ನೀರುಹಂಚಿಕೆ ಹೇಗೆ ಎಂಬ ಮಾನದಂಡವಿಲ್ಲ... ಹಾಗಾದರೆ ಪ್ರಧಾನಿ ಯಾವ ಆಧಾರದ ಮೇಲೆ ತೀರ್ಮಾನ ನೀಡಿದರು? ಯಾವುದಾದರೂ ಅಂಕಿ ಅಂಶ, ಹಿಂದಿನ ವರ್ಷಗಳ ಲೆಕ್ಕಾಚಾರಗಳನ್ನೇನಾದರೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆಯೇ ಎಂದು ನೋಡಿದರೆ ಅಂಥಾ ಯಾವ ಬದನೆಕಾಯೂ ಇಲ್ಲಾ... ‘ಎರಡು ರಾಜ್ಯಗಳು ಕಚ್ಚಾಡಬಾರದು, ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು, ನಾವೆಲ್ಲಾ ಭಾರತೀಯರು’ ಎನ್ನೋ ಅದೇ ಹಳೇ ಪುಂಗೀನಾ ಕನ್ನಡದೋರ ಮುಂದೆ ಊದಿ ತೀರ್ಮಾನ ಕೊಡಕ್ಕೆ ಮುಂದಾಗಿದ್ದಂಗಿದೆ. ಇದು ಪಕ್ಕಾ ರಾಜಕೀಯ ಲೆಕ್ಕಾಚಾರದ ತೀರ್ಮಾನವಾಗಿದೆ ಎಂದು ಅನುಮಾನ ಪಡಲು ಬೇಕಾದಷ್ಟು ಕಾರಣಗಳಿವೆ.

ತಮಿಳುನಾಡಿನ ರಾಜಕೀಯ ಲಾಬಿ!

ಇದುವರೆಗೂ ಡಿಎಂಕೆ ಪಕ್ಷ ಕಾಂಗ್ರೆಸ್ ಜೊತೆಯಲ್ಲಿ ಯುಪಿಏ ಅಂಗವಾಗಿದೆ. ಕೇಂದ್ರ ಸಂಪುಟದಲ್ಲಿ ಎಷ್ಟೊಂದು ಪ್ರಭಾವಿ ಸಚಿವರಾಗಿದ್ದಾರೆ. ತಮ್ಮ ರಾಜ್ಯಕ್ಕೆ ಬೇಕಿದ್ದನ್ನೆಲ್ಲಾ ಲಾಬಿ ಮಾಡಿ ದಕ್ಕಿಸಿಕೊಳ್ಳೋದ್ರಲ್ಲಿ ಎತ್ತಿದ ಕೈ ಅವರದ್ದು! ಇದೀಗ ಅಲ್ಲಿನ ಜಯಾಲಲಿತಾ ಮೇಡಂ ಕೂಡಾ ಇಂಥದೇ ಚೌಕಾಸಿಗೆ ಇಳಿದಿದ್ದಾರೆ ಅಷ್ಟೇ. ಇನ್ನೊಂದೆರಡು ವರ್ಷದಲ್ಲಿ ಚುನಾವಣೆ ಬಂದರೆ ಮೈತ್ರಿ ಬೇಕಾಗುತ್ತೆ! ಈಗ ಡಿಎಂಕೆ ಕೈ ಕೊಟ್ಟರೆ ಬೆಂಬಲಕ್ಕೆ ಜಯಲಲಿತಾ ಅವರ ಪಕ್ಷದ ಐವರು ಸಂಸದರು ಲೋಕಸಭೆಯಲ್ಲೂ, ಐವರು ರಾಜ್ಯಸಭೆಯಲ್ಲೂ ಇದ್ದಾರೆ. ಇನ್ನೂ ಬೇಕೆಂದರೆ ಈ ತೀರ್ಪು ತಮಿಳುನಾಡಿನ ಪರವಾಗಿದ್ದರೆ ಬೆಂಬಲ ಹಿಂತೆಗೆಯುವುದಿಲ್ಲಾ ಎಂದು ಸ್ವತಃ ಡಿಎಂಕೆ ಹೇಳಿದರೂ ತೀರ್ಪು ಆ ಕಡೆ ವಾಲುವ ಸಾಧ್ಯತೆಯಿದೆ. ಇಷ್ಟಕ್ಕೂ ಕರ್ನಾಟಕ ರಾಜ್ಯದಲ್ಲಿ ಇಂಥಾ ಲಾಬಿ ಮಾಡೋ ತಾಕತ್ತು ಈಗಿನ ಯಾವ ಪಕ್ಷಕ್ಕಿದೆ?

ಬಿಜೆಪಿ ಸದಾ ರಾಜ್ಯದ ಪರವಾಗಿರಲು ಸಾಧ್ಯವೇ?

ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರ ಈ ಬಾರಿ ರಾಜ್ಯದ ಪರ ನಿಲುವು ತೆಗೆದುಕೊಂಡಿದೆ ಎಂದುಕೊಂಡರೂ... ಇದೇನು ಶಾಶ್ವತವಾದ ರಾಜ್ಯ್ಜಪರವಾದ ಗಟ್ಟಿ ನಿಲುವು ಅನ್ನುವಂತಿಲ್ಲಾ. ಹಿಂದೆ ಕಳಸಾ ಭಂಡೂರ ಯೋಜನೆಯ ಕಾಲದಲ್ಲಿ ರಾಜ್ಯದ ಯೋಜನೆಗ ಕೊಟ್ಟಿದ್ದ ಅನುಮತಿಯನ್ನು ಹಿಂತೆಗೆದದ್ದು ಇದೇ ಬಿಜೆಪಿಯ ಕೈಲಿದ್ದ ಕೇಂದ್ರಸರ್ಕಾರವೇ! ಹಾಗಾದರೆ ನಾವು ರಾಷ್ಟ್ರೀಯ ಪಕ್ಷಗಳನ್ನು ಆಧರಿಸಬಾರದೇ? ಯಾವ ದೇಶದಲ್ಲಿ ಒಂದು ವೈಜ್ಞಾನಿಕ ರಾಷ್ಟ್ರೀಯ ಜಲನೀತಿಯೇ ಇರದೆ ಬರೀ ರಾಜಕೀಯ ಲಾಬಿಗಳು ಪ್ರಭಾವಶಾಲಿಯಾಗಿವೆಯೋ ಅಂಥಾ ದೇಶದಲ್ಲಿ ನಾವು ಇಂಥದ್ದೇ ಲಾಬಿಯನ್ನು ಇನ್ನೂ ಚೆನ್ನಾಗಿ ಮಾಡಿದರೆ ಮಾತ್ರಾ ಉಳಿಯಲು ಸಾಧ್ಯ ಎನ್ನಿಸುವುದಿಲ್ಲವೇ? ಇಂಥಾ ಲಾಬಿ ಮಾಡುವುದಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಎಂದೆಂದಿಗೂ ಅಸಾಧ್ಯ. ಹಾಗೆ ಅವು ಮಾಡಿದರೂ ಕರ್ನಾಟಕದಂತಹ ೨೮ ಸಂಸದರ ನಾಡಿನ ಪರವಾಗಿ ಮಾಡದೆ ೩೯ರ ತಮಿಳುನಾಡು, ೪೮ರ ಮಹಾರಾಷ್ಟ್ರ, ೪೨ರ ಆಂಧ್ರಪ್ರದೇಶದ ಪರ ಲಾಬಿ ಮಾಡೋದು ರಾಜಕೀಯವಾಗಿ ಲಾಭಕಾರಿಯಲ್ಲವೇ? ಇಂಥಾ ಕಹಿವಾಸ್ತವದಲ್ಲಿ ಕರ್ನಾಟಕದಲ್ಲಿ ಬಲಿಷ್ಠವಾಗಿರುವ ಪ್ರಾದೇಶಿಕ ಪಕ್ಷವೇ ಪರಿಹಾರ ಅನ್ನಿಸಲ್ವಾ ಗುರೂ? ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಿದ್ದರೂ ಬೆಂಬಲಕ್ಕಾಗಿ ಡಿಎಂಕೆ/ ಎಐಡಿಎಂಕೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಕಾಂಗ್ರೆಸ್ಸಿಗೆ ಇದ್ದರೆ ಖಂಡಿತಾ ಈ ಸಭೆಯ ನಿಲುವು ಕರ್ನಾಟಕಕ್ಕೆ ವಿರುದ್ಧವಾಗಿಯೇ ಇರುತ್ತಿತ್ತು ಅನ್ನಿಸದೇ? ಅಕಸ್ಮಾತ್ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಿದ್ದರೆ ರಾಜ್ಯದಲ್ಲಿ ಈಗಿನದೇ ಸರ್ಕಾರವಿದ್ದಿದ್ದರೂ ಇದೇ ಗೋಳು ತಾನೇ ಇರುತ್ತಿತ್ತು? ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರುಗಳಿಗೆ ರಾಜ್ಯದ ಪರವಾಗಿ ನಿಜವಾಗ್ಲೂ ಬದ್ಧತೆ/ ಪ್ರೀತಿ/ ಕಾಳಜಿ ಇದ್ದಾಗಲೂ ಕೂಡಾ ಅವರ ಅಸಹಾಯಕತೆಯನ್ನು ನಾವು ಊಹಿಸಬಹುದು!
ಇದಕ್ಕೆ ಇರೋದು ಒಂದೇ ಪರಿಹಾರ!

ಹೌದು! ರಾಜ್ಯದ ಹಿತ ಕಾಯೋಕೆ ಬೇಕಿರೋದು ಹೈಕಮಾಂಡ್ ಎಂಬ ದೆಹಲಿ ದೊರೆಗಳ ದಾಸ್ಯಕ್ಕೊಳಗಾಗಿರದ, ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷ. ಯೋಗ್ಯವಾದ ನೀತಿನಿಯಮಗಳೇ ಇರದ ಲಾಬಿಯಿಂದಲೇ ನಡೆಯುವ ವ್ಯವಸ್ಥೆಯಲ್ಲಿ ಸರಿಯಾದ ಲಾಬಿ ಮಾಡುವುದಾಗಲೀ... ಕೇಂದ್ರದಲ್ಲಿ ಸರಿಯಾದ ರಾಷ್ಟ್ರೀಯ ಜಲನೀತಿಯಂತಹ ನ್ಯಾಯದಾನದ ನೀತಿಗಳು ರೂಪುಗೊಳ್ಳುವುದೂ ಕೂಡಾ ಇಂತಹ ಒಂದು ಪ್ರಾದೇಶಿಕ ಪಕ್ಷದಿಂದ ಮಾತ್ರವೇ ಸಾಧ್ಯ! ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷದಿಂದ ಈ ಎರಡೂ ಕಾರ್ಯಸಾಧನೆಯಾಗಬಲ್ಲದು..ಗುರೂ!

ಮೈಸೂರು ದಸರಾ! ಈ ತಾಣ ಎಷ್ಟೊಂದು ಸುಂದರಾ!

(ಫೋಟೋ ಕೃಪೆ: www.mysoredasara.gov.in)

ಮೈಸೂರು ದಸರಾ ನಮ್ಮದಾಗುವತ್ತಾ ಸಾಗುತ್ತಿರುವುದನ್ನು ನೋಡಿದರೆ ಮನಸ್ಸು ತುಂಬಿ ಬರುತ್ತಿದೆ ಗುರೂ! ಈ ಬಾರಿ ತನ್ನ ಹಿಂದಿನ ಎಲ್ಲಾ ಕೊರತೆಗಳನ್ನು ನೀಗಿಕೊಂಡು ಕಂಗೊಳಿಸುತ್ತಿದೆ... ಮೈಸೂರು ದಸರಾ ಹಬ್ಬದ ಮಿಂಬಲೆ ತಾಣ. ಈ ಬದಲಾವಣೆಯೇನೂ ತಂತಾನೆ ಆಗಿಲ್ಲಾ... ೨೦೦೭ರಲ್ಲಿ ಇದ್ದ ಪರಿಸ್ಥಿತಿ ಗಮನಿಸಿದ್ದವರಿಗೆ ಈ ಬದಲಾವಣೆ ಅದ್ಭುತ ಎನ್ನಿಸುತ್ತದೆ. ಈ ತಾಣದಲ್ಲಿ ಆಗ ಕನ್ನಡದ ಕಡೆಗಣನೆ ಆಗಿದ್ದನ್ನು ಕಂಡು ಹೊಟ್ಟೆ ಉರಿದುಕೊಂಡು ಅನೇಕ ಜನರು ಸಂಬಂಧಿಸಿದ ಅಧಿಕಾರಿಗಳಿಗೆ ವರ್ಷ ವರ್ಷ ಬಿಡದೇ ಮನವಿ/ ದೂರು ಸಲ್ಲಿಸಿ ಈ ಬದಲಾವಣೆಗೆ ಕಾರಣರಾಗಿದ್ದಾರೆ. ಕನ್ನಡ ಗ್ರಾಹಕರ ದನಿ ಗೆದ್ದ ಮತ್ತೊಂದು ಉದಾಹರಣೆ... ಈ ಮೈಸೂರು ದಸರಾ ಅಂತರ್ಜಾಲ ತಾಣ. ಇಷ್ಟಕ್ಕೂ ಈ ಬಾರಿಯ ತಾಣದಲ್ಲಿ ಏನಪ್ಪಾ ಅಂಥಾ ವಿಶೇಷ ಅಂತೀರಾ? ಬನ್ನಿ ಒಮ್ಮೆ ಇಣುಕಿ ನೋಡಿ...

ಸರಿಯಾದ ತಾಣ!

ಈ ತಾಣದಲ್ಲಿ ಮೊದಲನುಡಿ ಇಂಗ್ಲೀಶ್ ಆಗಿತ್ತು. ಕನ್ನಡದಲ್ಲಿ ಇದ್ದದ್ದು ಕಾಟಾಚಾರಕ್ಕಾಗಿ ಅನ್ನುವಂತಿತ್ತು! ಈಗ ಸಂಪೂರ್ಣ ಬದಲಾಗಿದೆ ಈ ತಾಣ. ಇದು ಈಗ ನಮ್ಮ ಮೈಸೂರು ದಸರಾ ಅಂತರ್ಜಾಲ ತಾಣ ಎಂದು ಹೆಮ್ಮೆ ಪಡುವಂತೆ ಇದೆ. ಈ ತಾಣಕ್ಕೆ ಬಂದೊಡನೆ ಕಾಣುವುದು ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳ ಪುಟ. ಇಲ್ಲಿ ಮೇಲೆ ಒಂದು ಕನ್ನಡದ ಟ್ಯಾಬ್‌ಗಳಿದ್ದು ಇವು ಸದಾ ಇದ್ದೇ ಇರುವಂತೆ ರೂಪಿಸಿದ್ದಾರೆ. ಈ ತಾಣದಲ್ಲಿನ ಕನ್ನಡದ ಎಲ್ಲಾ ಕೊಂಡಿಗಳೂ ಶ್ರದ್ಧೆಯಿಂದ ರೂಪಿತವಾಗಿದ್ದು ಬಹುತೇಕ ಎಲ್ಲಾ ಪುಟಗಳು ಕೆಲಸ ಮಾಡುತ್ತಿವೆ. ನಮ್ಮ ಮೈಸೂರಿನ ಸೊಗಡಿನ, ನಮ್ಮತನ ಸೂಸುವ ಅನೇಕ ಚಿತ್ರಗಳನ್ನು ನಾವಿಲ್ಲಿ ನೋಡಬಹುದು. ಮೈಸೂರು ವಿಳ್ಯೆದೆಲೆ, ಮೈಸೂರು ರೇಶಿಮೆ ಸೀರೆ, ಚಿತ್ರಕಲೆ, ಅಗರಬತ್ತಿ, ಮೈಸೂರು ಬಾಳೆ ಎಲ್ಲವನ್ನೂ ಪರಿಚಯಿಸಿದ್ದಾರೆ.
(ಫೋಟೋ ಕೃಪೆ: www.mysoredasara.gov.in)

ಈ ತಾಣದಲ್ಲಿ ಒಟ್ಟು ಅರವತ್ತು ಭಾಷೆಗಳಲ್ಲಿ ಮಾಹಿತಿ ಇದೆ. ಯಾವುದೇ ಭಾಷೆಯನ್ನು ಆರಿಸಿಕೊಂಡರೂ ಆ ಭಾಷೆಯಲ್ಲಿ ಮಾಹಿತಿ ಸಿಗುವುದರ ಜೊತೆಯಲ್ಲಿ ಕನ್ನಡದ ಟ್ಯಾಬುಗಳು ಎಲ್ಲಾ ಹೊತ್ತಲ್ಲೂ ಕಾಣುತ್ತಿರುವಂತೆ ರೂಪಿಸಿದ್ದಾರೆ. ಈ ಭಾಷೆಗಳಲ್ಲಿ ಒಂದು ಆಯ್ಕೆ ಕಳೆದ ದಸರೆಯ ಅನುಭವದ ಬಗ್ಗೆ ಅನಿಸಿಕೆ ಕೇಳಲಾಗಿದೆ... ಆ ಅಭಿಮತವು ಆರಿಸಿಕೊಂಡ ಭಾಷೆಯ ಜೊತೆಯಲ್ಲಿ ಕನ್ನಡವೂ ಕಾಣುತ್ತಲೇ ಇರುತ್ತದೆ. ನೋಡಿ... ಹೀಗೆ ಒಂದಾರು ಭಾಷೆಗಳನ್ನು ಬೇರೆಬೇರೆಯಾಗಿ ಆಯ್ಕೆ ಮಾಡಿ  ಕೆಳಗಿನ ಚಿತ್ರವನ್ನು ಜೋಡಿಸಿ ಕೊಡಲಾಗಿದೆ.

(ಫೋಟೋ ಕೃಪೆ: www.mysoredasara.gov.in)

ಇನ್ನೇನು ಹೇಳುವುದು.. ಮೈಸೂರು ದಸರೆಯ ಅಂತರ್ಜಾಲ ತಾಣವಂತೂ ಈಗ ನಮ್ಮದು ಎನ್ನಿಸುತ್ತಿದೆ. ಇನ್ನು ದಸರೆಯ ಕಾರ್ಯಕ್ರಮಗಳಲ್ಲಿ ನಮ್ಮೂರಿನ, ನಮ್ಮವರ ಪ್ರತಿಭೆಗಳ ನಮ್ಮೂರ ಕಲೆಗಳ ಜಗತ್ ಪ್ರದರ್ಶನಕ್ಕೆ ಅವಕಾಶ ಸಿಗುವುದು ಮೊದಲ ಆದ್ಯತೆಯಾಗಿಬಿಟ್ಟರೆ ಸಾಕು! ಇನ್ನೇನು ತಾನೇ ಬೇಕೂ ಗುರೂ!! ಈ ಬದಲಾವಣೆಗೆ ಕಾರಣವಾಗಿರೋ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು!!

ಕೊನೆಹನಿ: ಅಲ್ಲಾ... ಮೈಸೂರಿನಂತಹ ಪುಟ್ಟ ಊರಿನ ಕಾರ್ಯಕ್ರಮದ... ಕರ್ನಾಟಕ ಸರ್ಕಾರದ ಅಧೀನದ ಈ ಅಂತರ್ಜಾಲ ತಾಣದಲ್ಲಿ ಜಗತ್ತಿನ ೬೦ ಭಾಷೆಗಳಲ್ಲಿ ಮಾಹಿತಿ/ ಸೇವೆ ನೀಡುವುದು ಸಾಧ್ಯವಾಗುತ್ತಿದೆ ಎನ್ನುವುದಾದರೆ... ಭಾರತದೇಶದ ಆಡಳಿತ ವ್ಯವಸ್ಥೆಯಲ್ಲಿ ಬ್ಯಾಂಕು, ರೈಲು ಟಿಕೆಟ್, ಪಾಸ್‌ಪೋರ್ಟ್, ವಿಮೆ, ಆದಾಯಕರ ಇಲಾಖೆಯಂತಹ ತಾಣಗಳಲ್ಲಿ ಭಾರತದ ೨೩ ಭಾಷೆಗಳಲ್ಲಿ ಸೇವೆ ಕೊಡುವಂತೆ ವ್ಯವಸ್ಥೆ ರೂಪಿಸುವುದು ಕಷ್ಟಾ ಅನ್ನೋದನ್ನು ನಂಬಕ್ಕಾಗುತ್ತಾ ಗುರೂ? ಸಮಾನ ಗೌರವದ ಭಾಷಾನೀತಿ ಜಾರಿ ಮಾಡೋಕೆ ತಂತ್ರಜ್ಞಾನದ್ದಂತೂ ಸಹಕಾರವಿದೆ! ದೆಹಲಿಯ ಜನಕ್ಕೆ ಇದನ್ನು ಮನವರಿಕೆ ಮಾಡಿಕೊಡೋ ಹೊಣೆ ನಮ್ಮ ನಿಮ್ಮದು ಅಷ್ಟೇ!

ಭಾರತ ಒಕ್ಕೂಟದ ರಾಷ್ಟ್ರಪತಿಗಳಿಂದ ಹಿಂದೀ ದಿವಸದ ಸಂದೇಶ!

ಹಿಂದೀ ದಿವಸದ ಸಂದರ್ಭದಲ್ಲಿ ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿಯವರು ಮಾಡಿದ ಭಾಷಣದ ಕನ್ನಡದ ಅನುವಾದ ಇಲ್ಲಿದೆ ನೋಡಿ:


ಗೃಹಮಂತ್ರಿ ಶ್ರೀ ಸುಶೀಲ್ ಕುಮಾರ್ ಶಿಂಧೆಯವರೇ, 
ಗೃಹ ರಾಜ್ಯಮಂತ್ರಿ ಶ್ರೀ ಜಿತೇಂದ್ರ ಸಿಂಹರವರೇ,
ಆಡಳಿತ ಭಾಷಾ ವಿಭಾಗದ ಸಚಿವರಾದ ಶ್ರೀ ಶರದ್ ಗುಪ್ತಾರವರೇ, 
ಗಡಿ ಭದ್ರತಾ ಸಚಿವರಾದ ಶ್ರೀ ಏ ಕೆ ಮಂಗೋತ್ರಾರವರೇ,

ಅಕ್ಕತಂಗಿಯರೇ, ಅಣ್ಣ ತಮ್ಮಂದಿರೇ...

ಹಿಂದೀ ದಿವಸದ ಈ ಶುಭಸಂದರ್ಭದಲ್ಲಿ ತಮಗೆಲ್ಲಾ ನನ್ನ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.

ಭಾರತದ ಇತಿಹಾಸದಲ್ಲಿ ಇಂದಿನ ದಿವಸ ಅತ್ಯಂತ ಹೆಮ್ಮೆಯದ್ದಾಗಿದೆ. ನಮ್ಮ ಸಂವಿಧಾನದಲ್ಲಿ ಹಿಂದೀ ಭಾಷೆಗೆ ೧೯೪೯ರ ಇದೇ ದಿನ ಆಡಳಿತ ಭಾಷೆಯ ಸ್ಥಾನಮಾನ ಸಿಕ್ಕಿತು. ಭಾರತದಲ್ಲಿ ಅನೇಕ ಭಾಷೆಗಳನ್ನು ಮಾತನ್ನಾಡಲಾಗುತ್ತದೆ. ವಿವಿಧತೆಯಲ್ಲಿ ಏಕತೆಯೇ ನಮ್ಮ ದೇಶದ ವೈಶಿಷ್ಟ್ಯವಾಗಿದೆ ಮತ್ತು ಹಿಂದೀ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಏಕತೆಯ ಪ್ರತೀಕವಾಗಿದೆ. ಗುರುದೇವ ರವೀಂದ್ರನಾಥ ಟ್ಯಾಗೂರರು ಹೀಗೆ ಹೇಳಿದ್ದಾರೆ: "ಭಾರತೀಯ ಭಾಷೆಗಳು ನದಿಗಳು ಮತ್ತು ಹಿಂದೀ ಮಹಾನದಿ".

ಪ್ರಜಾಪ್ರಭುತ್ವದಲ್ಲಿ ಭಾಷೆಗಳಿಗೆ ಮಹತ್ವದ ಪಾತ್ರವಿದೆ, ಏಕೆಂದರೆ ಇದು ಜನರು ಮತ್ತು ಸರ್ಕಾರದ ನಡುವಿನ ಸಂಪರ್ಕದ ಕೊಂಡಿಯಾಗಿದೆ. ಹಾಗಾಗಿ ನಮ್ಮ ಸಂವಿಧಾನದಲ್ಲಿ ಕೇಂದ್ರಸರ್ಕಾರದ ಕೆಲಸಕಾರ್ಯಗಳಿಗೆ ಹಿಂದೀಯನ್ನು ಆಡಳಿತ ಭಾಷೆಯಾಗಿ ಮಾಡಲಾಗಿದೆ ಮತ್ತು ಪ್ರಾದೇಶಿಕ ಭಾಷೆಗಳನ್ನು ರಾಜ್ಯಗಳಿಗಾಗಿ ಸ್ವೀಕರಿಸಲಾಗಿದೆ. ಭಾಷೆಯಿಂದ ಜನಸಾಮಾನ್ಯರು ಮತ್ತು ಶಾಸನದ ನಡುವೆ ಸಹಯೋಗ ಮತ್ತು ಹೊಣೆಗಾರಿಕೆಯ ಸಂಬಂಧ ಸ್ಥಾಪನೆಯಾಗುತ್ತದೆ. ನಮ್ಮ ಪ್ರಜಾಪ್ರಭುತ್ವವನ್ನು ಶಕ್ತಿಯುತ ಮತ್ತು ಪ್ರಗತಿಶೀಲವಾಗಿಸಲು ನಾವು ಬಯಸುವುದೇ ಆದಲ್ಲಿ ನಾವು ಕೇಂದ್ರದ ಆಡಳಿತದಲ್ಲಿ ಹಿಂದೀಯನ್ನೂ ರಾಜ್ಯಗಳ ಆಡಳಿತದಲ್ಲಿ ರಾಜ್ಯಗಳ ಭಾಷೆಯನ್ನೂ ಬಳಸತಕ್ಕದ್ದು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹೀಗೆ ಹೇಳಿದ್ದರು: "ನಾವೇನಾದರೂ ಹಿಂದೂಸ್ತಾನವನ್ನು ಒಂದು ರಾಷ್ಟ್ರ ಮಾಡುವುದೇ ಆದಲ್ಲಿ ರಾಷ್ಟ್ರಭಾಷೆ ಹಿಂದೀಯೇ ಆಗಬಲ್ಲದು". ಸ್ವಾತಂತ್ರ ಬಂದು ಅರವತ್ತೈದು ವರ್ಷಗಳಾದ ಈ ಸಂದರ್ಭದಲ್ಲಿ ಮಹಾತ್ಮಗಾಂಧಿಯವರ ಈ ಮಾತುಗಳು ಸತ್ಯವೆಂದು ಸಾಬೀತಾಗುತ್ತಿದೆ. ಇಡೀ ಭಾರತದಲ್ಲಿ ಸಂಪರ್ಕಭಾಷೆಯಾಗಿ ಹಿಂದೀ ಭಾಷೆಯ ಬಳಕೆಯು ಯಶಸ್ವಿಯಾಗಿ ನಡೆದಿದೆ. ಹಾಗಾಗಿ ಸರ್ಕಾರದ ಕೆಲಸ ಕಾರ್ಯಗಳಲ್ಲಿಯೂ ಆಡಳಿತ ಭಾಷೆಯಾದ ಹಿಂದೀ ಭಾಷೆಗೆ ಮಹತ್ವ ನೀಡಬೇಕಾದ್ದು ಅತ್ಯಂತ ಅಗತ್ಯದ್ದಾಗಿದೆ. ಆಡಳಿತ ಭಾಷೆಯಾದ ಹಿಂದೀ ಮತ್ತು ಪ್ರಾದೇಶಿಕ ಭಾಷೆಗಳ ಪಾತ್ರ ಬಹಳ ಮುಖ್ಯವಾಗಿದ್ದು ಸರ್ಕಾರಗಳ ಜನಪರ ಯೋಜನೆಗಳನ್ನು ಹಳ್ಳಿ ಹಳ್ಳಿಗಳ ರೈತಾಪಿ ಜನರಿಗೂ ಯಶಸ್ವಿಯಾಗಿ ತಲುಪಿಸಲು ಸಾಧ್ಯ.

ಭಾರತ ಸರ್ಕಾರದ ಮೂಲಕ ಸರ್ವಶಿಕ್ಷಾ ಅಭಿಯಾನ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ, ರಾಷ್ಟ್ರೀಯ ಸ್ವಾಸ್ಥ್ಯ ಮಿಷನ್‌ನಂತಹ ನಾನಾ ಅಗ್ರ ಯೋಜನೆಗಳನ್ನು ನಡೆಸಲಾಗುತ್ತಿದೆ. ಇವೆಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಭಾಷೆಯ ಮಹತ್ವ ದೊಡ್ಡದಿದೆ.

ಹಿಂದೀ ಈಗ ಒಂದು ಅಂತರರಾಷ್ಟ್ರೀಯ ಭಾಷೆಯಾಗಿಯೂ ಹೊಮ್ಮಿ ಬಂದಿದೆ. ಈ ಹೊತ್ತಿನಲ್ಲಿ ವಿಶ್ವದ ನೂರೈವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಹಿಂದೀಯನ್ನು ಕಲಿಸಲಾಗುತ್ತಿದೆ. ವಿಶ್ವಸಂಸ್ಥೆಯ ಯುನೆಸ್ಕೋದ ಏಳು ಭಾಷೆಗಳಲ್ಲಿ ಹಿಂದೀಯನ್ನೂ ಒಂದೆಂದು ಗುರುತಿಸಲಾಗಿದೆ. (ಸಾತ್ ಅಂತಾ ಇದೆ). ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ದೂರದರ್ಶನ ವಾಹಿನಿಗಳಲ್ಲಿ ಹಿಂದೀ ಮತ್ತಿತರ ಭಾರತೀಯ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನೂ ನೀಡುವುದು ಶುರುವಾಗಿದೆ. 

ಇದೀಗ ವ್ಯಾಪರ ಕ್ಷೇತ್ರದಲ್ಲೂ ಹಿಂದೀ ಮಹತ್ವವಾದ ಕಾಣಿಕೆಯನ್ನು ಸಲ್ಲಿಸುತ್ತಿದೆ. ವಿದೇಶಿ ಸಂಸ್ಥೆಗಳು ಭಾರತದಲ್ಲಿ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಹಿಂದೀಯ ಜೊತೆಯಲ್ಲಿ ಅನೇಕ ಪ್ರಾದೇಶಿಕ ಭಾಷೆಗಳನ್ನೂ ಬಳಸಲು ಶುರು ಮಾಡಿವೆ.

ಹಿಂದೀ ಬಳಕೆಯನ್ನು ಹೆಚ್ಚಿಸಲು ಸರ್ಕಾರವೂ ಕೂಡಾ ಬಹಳಷ್ತು ಪ್ರೋತ್ಸಾಹವನ್ನು ನೀಡುತ್ತಿದೆ. ಈ ಪ್ರಯತ್ನಗಳೀಂದಾಗಿ ಹಿಂದೀಯ ಬಳಕೆ ಹೆಚ್ಚುತ್ತಿದೆ. ನಮ್ಮ ಸಂಕಲ್ಪವೇನೆಂದರೆ ಹಿಂದೀಯ ಜೊತೆಜೊತೆಯಲ್ಲೇ ಎಲ್ಲಾ ಪ್ರಾದೇಶಿಕ ಭಾಷೆಗಳೂ ಬೆಳಯುವಂತಾಗಬೇಕು ಮತ್ತು ನಾವು ಇದಕ್ಕಾಗಿ ಪ್ರಯತ್ನಪಡುತ್ತೇವೆ.

ಬರುವ ಸೆಪ್ಟೆಂಬರ್ ೨೨~೨೪ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ವಿಶ್ವ ಹಿಂದೀ ಸಮ್ಮೇಳನವು ಹಿಂದೀ ಭಾಷೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆ ಮಾಡಲು ಸಹಕಾರಿಯಾಗಲಿದೆ. ಈ ವಿಶ್ವ ಹಿಂದೀ ಸಮ್ಮೇಳನದಲ್ಲಿ ಪಾಲ್ಗೊಳ್ಲಲಿರುವ ಎಲ್ಲಾ ವಿದ್ವಾಂಸರು ಮತ್ತು ಹಿಂದೀ ವಿಶ್ವಾಸಿಗಳಲ್ಲಿ ನಿಷ್ಟೆ ಮತ್ತು ಸಮರ್ಪಣಾ ಭಾವನೆಯಿಂದ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಆಗ್ರಹಪೂರ್ವಕವಾಗಿ ಮನವಿಮಾಡುತ್ತೇನೆ.

ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಹಿಂದೀ ಬಳಸುತ್ತಿರುವುದಕ್ಕಾಗಿ ಪುರಸ್ಕೃತರಾದ ಎಲ್ಲಾ ವ್ಯಕ್ತಿಗಳಿಗೂ ಮತ್ತು ಸಂಸ್ಥೆಗಳಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ಲ್ರಮದಲ್ಲಿ ನೀಡಲಾಗುತ್ತಿರುವ ಇಂದಿರಾಗಾಂಧಿ ರಾಜ್‌ಭಾಷಾ ಶೀಲ್ಡ್ ಮತ್ತು ಶ್ರೇಷ್ಟ್ ಕಾರ್ಯ ಪುರಸ್ಕಾರಗಳು ಎಲ್ಲರಿಗೂ ಪ್ರೇರಣೇ ನೀಡಲಿ.

ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ನಾನು ಆಡಳಿತ ಭಾಷಾ ವಿಭಾಗ(ರಾಜ್‌ಭಾಷಾ ವಿಭಾಗ್)ಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಆಡಳಿತ ಭಾಷೆಯಾದ ಹಿಂದೀಯ ಪ್ರಸಾರ್ ಅಮ್ತ್ತು ಪ್ರಚಾರಕ್ಕಾಗಿ ಶ್ರಮಿಸಿದವರ ಕೊಡುಗೆಯನ್ನು ಪ್ರಶಂಸಿಸುತ್ತೇನೆ.

ಜಯ್ ಹಿಂದ್

ಬದಲಾಗಬೇಕಾದ್ದು ಭಾರತದ ಸಂವಿಧಾನವೇ ಹೊರತು... ನ್ಯಾಯದ ಬೇಡಿಕೆಯಲ್ಲಾ!


ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಕಾರಣ ಕನ್ನಡವನ್ನು ಕನ್ನಡನಾಡಿನ ಹೈಕೋರ್ಟಿನ ಆಡಳಿತ ಭಾಷೆ ಮಾಡಲು ಆಗುವುದಿಲ್ಲ ಎನ್ನುವ ತೀರ್ಪನ್ನು ರಾಜ್ಯ ಉಚ್ಚನ್ಯಾಯಾಲಯ ನೀಡಿದೆಯೆನ್ನುವ ಸುದ್ದಿ ಬಂದಿದೆ. ಸಂವಿಧಾನದ ೩೪೮ನೇ ವಿಧಿಯ ಅನ್ವಯ ಈ ತೀರ್ಪು ಕೊಟ್ಟಿರುವುದಾಗಿ ನ್ಯಾಯಾಲಯ ಹೇಳಿದೆ. ತಮಾಶೆಯೆಂದರೆ "ನ್ಯಾಯವಾದಿಗಳು ಬೇರೆಬೇರೆ ರಾಜ್ಯಗಳ ನ್ಯಾಯಾಲಯದಲ್ಲಿ ವಾದ ಮಾಡಲು ಹೀಗಿರುವುದು ಅನುಕೂಲ" ಎನ್ನುವ ಮೂಲಕ ವೈವಿಧ್ಯತೆಯನ್ನು ನ್ಯಾಯಾಲಯವೂ ಶಾಪವೆಂದು ಪರಿಗಣಿಸಿರುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಏನಿದು ೩೪೮ನೇ ಕಾಲಂ? ಅದರಲ್ಲಿ ಏನು ಹೇಳಿದೆ?

ಭಾರತದ ಸಂವಿಧಾನ: ೩೪೮ನೇ ವಿಧಿ

ಸಂವಿಧಾನದ XVIIನೇ ಭಾಗವು ಭಾರತದ ಆಡಳಿತ ಭಾಷೆಯ ಬಗ್ಗೆ ಮಾತಾಡುತ್ತದೆ. ಇದರ ಅಡಿಯಲ್ಲಿ ೩೪೩ರಿಂದ ೩೫೧ನೇ ವಿಧಿಯವರೆಗಿನ ಕಾಲಮುಗಳಲ್ಲಿ ಈ ಬಗ್ಗೆ ಬರೆಯಲಾಗಿದೆ. ಸಮಾನತೆಯೇ ಜೀವಾಳ ಎಂದು ಹೇಳುವ ಭಾರತ ಸಂವಿಧಾನದಲ್ಲಿನ ಹಸಿ ತಾರತಮ್ಯ ಈ ಕಾಲಂಗಳಲ್ಲಿ ಬರೆದಿರುವುದು ಎದ್ದು ಕಾಣುತ್ತದೆ. ಹಿಂದೀಯನ್ನು ಭಾರತದ ಆಡಳಿತ ಭಾಷೆಯೆಂದು ಘೋಷಿಸಿರುವುದರ ಜೊತೆಯಲ್ಲಿ ಹಿಂದೀಯ ಪ್ರಚಾರಕ್ಕಾಗಿ ದುಡಿಯಬೇಕಾದ್ದು ಭಾರತ ಸರ್ಕಾರದ ಕರ್ತವ್ಯ ಎಂದು ಹೇಳಿದೆ. ಆದರೆ ೩೪೮ರಲ್ಲಿ ಮಾತ್ರಾ ನ್ಯಾಯಾಲಯದ ಭಾಷೆ ಇಂಗ್ಲೀಶ್ ಮಾತ್ರಾ ಆಗಿರಬೇಕೆಂದು ಹೇಳಲಾಗಿದೆ. ಈ ವಿಧಿಯಲ್ಲಿ ರಾಜ್ಯಗಳ ಆದೇಶ, ಕಾನೂನು ಕಾಯ್ದೆಗಳೆಲ್ಲಾ ಇಂಗ್ಲೀಶಿನಲ್ಲಿಯೇ ಇರಬೇಕೆಂದೂ ಹೇಳುತ್ತಿದೆ. ಭಾರತದ ರಾಷ್ಟ್ರಪತಿಗಳು ಅನುಮತಿ ನೀಡಿದರೆ ಹಿಂದೀ ಅಥವಾ ಇತರೆ ಭಾಷೆಗಳನ್ನು ಬಳಸಬಹುದೆಂದು ಹೇಳಲಾಗಿದೆ.


348. Language to be used in the Supreme Court and in the High Courts and for Acts, Bills, etc.—
(1) Notwithstanding anything in the foregoing provisions of this Part, until Parliament by law otherwise provides—

(a) all proceedings in the Supreme Court and in every High Court,
(b) the authoritative texts—
(i) of all Bills to be introduced or amendments thereto to be moved in either House of Parliament or in the House or either House of the Legislature of a State,
(ii) of all Acts passed by Parliament or the Legislature of a State and of all Ordinances promulgated by the president or the Governor of a State, and
(iii) of all orders, rules, regulations and bye-laws issued under this Constitution or under any law made by Parliament or the Legislature of a State, shall be in the English language.
(2) Notwithstanding anything in sub-clause (a) of clause (1), the Governor of a State may, with the previous consent of the President, authorise the use of the Hindi language, or any other language used for any official purposes of the State, in proceedings in the High Court having its principal seat in that State: Provided that nothing in this clause shall apply to any judgment, decree or order passed or made by such High Court.
ಈ ವಿಧಿಯ ಎರಡನೇ ಭಾಗದಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪೂರ್ವಾನುಮತಿಯೊಡನೆ ಇಂಗ್ಲೀಶ್ ಅಲ್ಲದ ಬೇರೆ ನುಡಿಯನ್ನು ಬಳಸಲು ಅನುಮತಿ ನೀಡಬಹುದು ಎಂದಿದೆ. ತಮಾಶೆಯೆಂದರೆ ಹೀಗೆ ಬರೆಯುವಾಗ ಹಿಂದೀ ಅಥವಾ ಬೇರಾವುದೇ ಭಾಷೆಯನ್ನು ಎಂದು ಬರೆಯಲಾಗಿದೆ. ಯಾಕೆ ಹೀಗೆ ಹಿಂದೀಯೊಂದನ್ನೇ ಹೆಸರಿಸಿದ್ದಾರೆ ಎಂದರೆ ೩೪೩ನೇ ವಿಧಿಯಲ್ಲಿ ಹಿಂದೀ ಭಾರತದ ಆಡಳಿತ ಭಾಷೆ ಎನ್ನುವುದೇ ಕಾರಣವಾಗಿದೆ.

ಬದಲಾಗಲಿ ಹುಳುಕಿನ ಭಾಶಾ ನೀತಿ! ಬದಲಾಗಲಿ ಸಂವಿಧಾನ!!

ಹೌದೂ! ಕನ್ನಡನಾಡಿನ ನ್ಯಾಯಾಲಯದ ಆಡಳಿತದಲ್ಲಿ ಕನ್ನಡ ಭಾಷೆಯನ್ನೇ ಬಳಸಬಾರದು ಎನ್ನುವ, ಕನ್ನಡನಾಡಿನ ವಾಹನಗಳ ನಂಬರ್ ಪ್ಲೇಟ್ ಕನ್ನಡದಲ್ಲಿರುವುದೇ ಅಪರಾಧ ಎನ್ನುವ, ಕನ್ನಡ ನಾಡಿನ ಬ್ಯಾಂಕುಗಳಲ್ಲಿ ಕನ್ನಡವಿಲ್ಲದಿದ್ದರೂ ಸರಿ ಹಿಂದೀ ಇಂಗ್ಲೀಶ್ ಇರಬೇಕೆನ್ನುವ, ಕನ್ನಡನಾಡಿನ ಮೆಟ್ರೋದಲ್ಲಿ ಹಿಂದೀ ಇರಬೇಕೆನ್ನುವ, ಕನ್ನಡನಾಡಿನ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಇರುವೆ ಗಾತ್ರದ ಅಕ್ಷರಗಳ ಮೂರನೇ ಸ್ಥಾನಕ್ಕೆ ದೂಡಿರುವ... ಭಾಷಾನೀತಿ ಹುಳುಕಿನದ್ದು ಎನ್ನದೇ ಬೇರೆ ದಾರಿಯಿಲ್ಲ. ಈ ಭಾಷಾನೀತಿ ಬದಲಾಗದಿದ್ದರೆ ಹಿಂದೀಯೇತರರು ಈ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿಯೇ ಬದುಕಬೇಕಾಗುತ್ತದೆ. ಸಂವಿಧಾನದ ೮ನೇ ಕಲಮ್ಮಿನಲ್ಲಿ ಸೂಚಿತವಾಗಿರುವ ಎಲ್ಲಾ ೨೨ ಭಾಷೆಗಳೂ ಭಾರತದ ಆಡಳಿತ ಭಾಷೆಗಳು ಎನ್ನುವ ಬದಲಾವಣೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಎನ್ನುವ ಬದಲಾವಣೆ ಭಾರತದ ಸಂವಿಧಾನಕ್ಕೆ ತುರ್ತಾಗಿ ಆಗಬೇಕಾಗಿದೆ! ಹೌದಲ್ವ ಗುರೂ!?

ಇಡೀ ಭಾರತ ನಮ್ಮದು ಅನ್ನೋರು ಯಾರು ಗೊತ್ತಾ?


ಇತ್ತೀಚಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆಯವರು ವಲಸಿಗರ ಬಗ್ಗೆ ಆಡಿದ ಕಟುಮಾತುಗಳ ಬೆನ್ನ ಹಿಂದೇ ಉದ್ಧವ ಠಾಕ್ರೆ "ಮಹಾರಾಷ್ಟ್ರಕ್ಕೆ ವಲಸೆ ಬರೋರಿಗೆ ಪರ್ಮಿಟ್ ವ್ಯವಸ್ಥೆ ಬೇಕು" ಎಂದಿದ್ದಾರೆ. ಈ ಮಾತಿನ ಹಿನ್ನೆಲೆಯೇನಪ್ಪಾ ಅಂದರೆ ಮೊನ್ನೆ ಮುಂಬೈಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಒಬ್ಬ ಬಿಹಾರಿಯನ್ನು ಬಿಹಾರದಿಂದ ಬಂಧಿಸಿ ಒಯ್ದಿದ್ದಕ್ಕೆ ಬಿಹಾರದ ಮುಖ್ಯಮಂತ್ರಿ "ಯಾವುದೇ ಬಿಹಾರಿಯನ್ನು ಬಂಧಿಸುವ ಮುನ್ನ ಬಿಹಾರ ಸರ್ಕಾರದ ಅನುಮತಿ ಪಡೆಯಬೇಕು" ಎನ್ನುವ ಹೇಳಿಕೆ ನೀಡಿದರಂತೆ. ಈ ಮಾತೇನೋ ಸರಿಯಾಗೇ ಇದೆ. ಆದರೆ ಅದಕ್ಕೆ ಉದ್ಧವ್ ಠಾಕ್ರೆಯವರು "ಹಾಗಾದರೆ ಮಹಾರಾಷ್ಟ್ರಕ್ಕೆ ಬರುವ ಬಿಹಾರಿಗಳಿಗೆ ಪರ್ಮಿಟ್ ವ್ಯವಸ್ಥೆ ಮಾಡಿ" ಎಂದಿದ್ದಾರೆ. ಇಲ್ಲಿ ಈ ಮಾತುಗಳು ಒಂದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದು ಹುಟ್ಟಿದಂತಿದ್ದರೂ ವಾಸ್ತವವಾಗಿ ಉದ್ಧವ್ ಮಾತುಗಳಲ್ಲಿ ಹುರುಳಿದೆ.

ಭಾರತೀಯರು ಎಲ್ಲಿ ಬೇಕಾದರೂ ಹೋಗಬಹುದು ಅನ್ನೋರು!

ಇದಕ್ಕೆ ಪ್ರತಿಕ್ರಿಯೆಯಾಗಿ ಬಿಹಾರದ ರಾಜಕಾರಣಿಗಳು ಮಹಾನ್ ದೇಶಭಕ್ತರಂತೆ.. "ಇಡೀ ಭಾರತ ಒಂದು, ಸಂವಿಧಾನವೇ ಯಾರು ಎಲ್ಲಿಗೆ ಬೇಕಾದರೂ ವಲಸೆ ಹೋಗಬಹುದು ಎನ್ನುವ ಅವಕಾಶ ಕೊಟ್ಟಿದೆ, ನಾವು ಎಲ್ಲಾದರೂ ಹೋಗ್ತೀವಿ, ನಮ್ಮನ್ನು ಪ್ರಶ್ನಿಸೋರ ಮೇಲೆ ಕ್ರಮ ಕೈಗೊಳ್ಳಿ" ಎಂದುಬಿಟ್ಟರು. ಇದು, ಯಾಕೆ ಇದೇ ರಾಜ್ಯಗಳ ರಾಜಕಾರಣಿಗಳ ಬಾಯಲ್ಲಿ ಸದಾ ಉದುರುವ ಆಣಿಮುತ್ತಾಗಿದೆ ಎಂದುಕೊಳ್ಳುವಿರಾದರೆ ಈ ಪಟ್ಟಿಯನ್ನು ನೋಡಿ:


ಈಗ ಶ್ರೀಮಂತ/ ಸಂಪದ್ಭರಿತ ನಾಡುಗಳು ಯಾವುವು?
 - ಮಹಾರಾಷ್ಟ್ರ, ಕರ್ನಾಟಕಗಳು... 

ಎಲ್ಲಿ ಜನಸಂಖ್ಯೆ ದಟ್ಟವಾಗಿದೆ?
 - ಬಿಹಾರ, ಉತ್ತರ ಪ್ರದೇಶದಲ್ಲಿ

ಎಲ್ಲಿ ಕಡಿಮೆಯಿದೆ?
 - ಕರ್ನಾಟಕ, ಮಹಾರಾಷ್ಟ್ರಗಳಲ್ಲಿ...

ಜನಸಂಖ್ಯಾ ನಿಯಂತ್ರಣದ ಯೋಜನೆಯಂತೆ ಯಾರ ಟಿಎಫ್‌ಆರ್ ಹೆಚ್ಚಿದೆ?
 - ಉತ್ತರಪ್ರದೇಶ, ಬಿಹಾರ...

ಯಾರದು ಕಡಿಮೆಯಿದೆ?
- ಕರ್ನಾಟಕ ಮಹಾರಾಷ್ಟ್ರದ್ದು...

ಹೋಗಲಿ.. ೨೦೨೦ಕ್ಕೆ ಯಾರಿಗೆ ಯಾವ ಟಿಎಫ್‌ಆರ್ ಗುರಿಯಿದೆ?
 - ಮಹಾರಾಷ್ತ್ರ, ಕರ್ನಾಟಕಕ್ಕೆ ೧.೯ ಮತ್ತು ೧.೮. ಉತ್ತರಪ್ರದೇಶ, ಬಿಹಾರಕ್ಕೆ ೩.೦.

ಅಂದರೇನು ಅರ್ಥ?
 - ಉತ್ತರಪ್ರದೇಶ ಮತ್ತು ಬಿಹಾರಗಳು ಜನಸಂಖ್ಯಾ ಸ್ಫೋಟದಿಂದ ನರಳುತ್ತಿವೆ ಮತ್ತು ಆರ್ಥಿಕವಾಗಿ ಹಿಂದುಳಿದಿವೆ ಮತ್ತು ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನಸಂಖ್ಯೆ ಅಂದರೆ ಅಲ್ಲಿನ ಜನದಟ್ಟಣೆ ನಮ್ಮ ನಾಡಿನ ಮೂರುಪಟ್ಟು ಹೆಚ್ಚಾಗಿದೆ. ಇಷ್ಟಿದ್ದರೂ ಅಲ್ಲಿ ಪ್ರತಿ ದಂಪತಿಗೆ ಮೂರು ಮಕ್ಕಳು ಹುಟ್ಟಬಹುದು! ಅದೇ ಕರ್ನಾಟಕ, ಮಹಾರಾಷ್ಟ್ರಗಳು ಶ್ರೀಮಂತವಾಗಿವೆ, ಇಲ್ಲಿ ಜನದಟ್ಟಣೆ ಕಡಿಮೆಯಿದೆ... ಆದರೂ ಇಲ್ಲಿ ಪ್ರತಿ ದಂಪತಿಗೆ ೧.೮ ಮಕ್ಕಳನ್ನು ಹೆರಬೇಕೆನ್ನುವ ಯೋಜನೆ ನೀಡಲಾಗಿದೆ. ಅಂದರೆ ಇದರ ಅರ್ಥ, ಬರ್ತಾ ಬರ್ತಾ ಕನ್ನಡ ಕುಲ ಅಳಿಯಲಿ... ಉತ್ತರದ ವಲಸಿಗರಿಂದ ಕರ್ನಾಟಕ ಮಹಾರಾಷ್ಟ್ರದಂತಹ ನಾಡುಗಳು ನಳನಳಿಸಲಿ ಎಂದಲ್ಲವೇ? ಬಿಹಾರದ ರಾಜಕಾರಣಿಗಳು ಬಾಯಲ್ಲಿ ರಾಷ್ಟ್ರೀಯ ಏಕತೆಯ ಮಾತಾಡುತ್ತಿದ್ದರೂ ನಿಜವಾಗಿ ಮಾಡುತ್ತಿರುವ ಹುನ್ನಾರ ಚೆನ್ನಾಗಿ ಬೆಳೆದಿರುವ ನಾಡುಗಳಿಗೆ ತಮ್ಮ ಜನರನ್ನು ನುಗ್ಗಿಸುವಿಕೆಗೆ ಬೆಂಬಲ!

ಈಗ ಹೇಳಿ, ನಮ್ಮೂರಿಗೆ ವಲಸೆ ಬರೋರ ಮೇಲೆ ನಮಗೆ ನಿಯಂತ್ರಣ ಬೇಡವೇ? ಇಂಥಾ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕೋ ಒಂದು "ವಲಸೆ ನೀತಿ" ಭಾರತಕ್ಕೆ ಬೇಡ್ವಾ ಗುರೂ!?

ಹುಳುಕಿನ ಭಾಷಾನೀತಿ ಬದಲಾಗಲಿ: ರಾಜ್ಯಪಾಲರಿಗೊಂದು ಪಿಟಿಷನ್‌



ಗೌರವಾನ್ವಿತ ರಾಜ್ಯಪಾಲರು,
ಕರ್ನಾಟಕ ರಾಜ್ಯ
ರಾಜಭವನ, ಬೆಂಗಳೂರು

ಮಾನ್ಯರೇ,

ವಿಷಯ: ಇಂದಿನ ಭಾರತದ ತೊಡಕಿನ ಭಾಷಾನೀತಿಯನ್ನು ಕೈಬಿಡಬೇಕು. ಸಂವಿಧಾನಾತ್ಮಕವಾಗಿ ಹಿಂದೀ ಹೇರಿಕೆಯನ್ನು ಮಾಡುವುದನ್ನು ನಿಲ್ಲಿಸಬೇಕು. ಎಲ್ಲಾ ಭಾಷಾ ವೈವಿಧ್ಯತೆಗಳಿಗೆ ಸಮಾನ ಗೌರವ ತರುವ ಭಾಷಾನೀತಿಯನ್ನು ಭಾರತದ ಸಂಸತ್ತು ರೂಪಿಸಬೇಕೆಂಬ ಆಗ್ರಹ.

೧೯೫೦ರ ಸಂವಿಧಾನದಲ್ಲಿ ಹಿಂದೀ ಭಾಷೆಗೆ ಉಳಿದೆಲ್ಲಾ ಭಾಷೆಗಳಿಗಿಂತಲೂ ಮೇಲಿನ ಸ್ಥಾನ ನೀಡಲಾಗಿದೆ. ಈ ಮೂಲಕ ಹಿಂದೀಯೇತರ ಭಾಷೆಗಳ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ. ಭಾರತದ ಅಧಿಕೃತ ಆಡಳಿತ ಭಾಷೆಯ ಪಟ್ಟವನ್ನು ಹಿಂದೀ/ ಇಂಗ್ಲೀಶ್ ಭಾಷೆಗಳಿಗೆ ಮಾತ್ರಾ ನೀಡಲಾಗಿದೆ. ಈ ಮೂಲಕ ಭಾರತದ ಇತರೆ ಭಾಷಿಕರನ್ನು ಹಿಂದೀ ಇಂಗ್ಲೀಷ್ ಭಾಷೆಗಳು ಬಾರದ ಕಾರಣಕ್ಕಾಗಿ ಎರಡನೆ ದರ್ಜೆಯ ಪ್ರಜೆಗಳನ್ನಾಗಿಸಲಾಗಿದೆ. ಶಾಲಾ ಹಂತದಿಂದಲೇ, ಹಿಂದೀ ಭಾಷಿಕ ಪ್ರದೇಶಗಳಿಗೆ ಅನ್ವಯವಾಗದ ತ್ರಿಭಾಷಾಸೂತ್ರವನ್ನು ಬಳಸಿ, ನಮ್ಮ ಮಕ್ಕಳ ಮೇಲೆ ಹಿಂದೀಯನ್ನು ಕಡ್ಡಾಯವಾಗಿ ಹೇರಲಾಗುತ್ತಿದೆ. ಭಾರತದಂತಹ ವೈವಿಧ್ಯತೆಯ ನಾಡಿನಲ್ಲಿ ಇಂತಹ ತಾರತಮ್ಯವು ಒಗ್ಗಟ್ಟನ್ನು ಹುಟ್ಟುಹಾಕುವ ಬದಲಿಗೆ ಒಡಕಿಗೆ ಕಾರಣವಾಗಲಿದೆ ಎನ್ನುವ ಆತಂಕದಿಂದ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಭಾರತದ ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಬರೆಯಲಾಗಿರುವ ಭಾಷಾನೀತಿಯನ್ನು ಕೂಡಲೇ ಬದಲಿಸಲು ಕ್ರಮ ಕೈಗೊಳ್ಳಬೇಕೆಂದು ನಾವುಗಳು ಆಗ್ರಹಿಸುತ್ತೇವೆ.

ನಮ್ಮ ಹಕ್ಕೊತ್ತಾಯಗಳು ಇಂತಿವೆ:

೧. ಭಾರತವು ಇದೀಗ ಅನುಸರಿಸುತ್ತಿರುವ ಭಾಷಾನೀತಿಗೆ ತಿದ್ದುಪಡಿ ತಂದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳನ್ನೂ ಕೇಂದ್ರಸರ್ಕಾರದ ಅಧಿಕೃತ ಆಡಳಿತ ಭಾಷೆಗಳೆಂದು ಘೋಷಿಸಬೇಕು.
೨. ವಿಶ್ವಸಂಸ್ಥೆಯ (UNESCO) ಬಾರ್ಸಿಲೋನಾ ಭಾಷಾಹಕ್ಕು ಘೋಷಣೆಯಲ್ಲಿನ ಪ್ರತಿಯೊಂದು ಹಕ್ಕೂ ಭಾರತದ ಪ್ರತಿಯೊಂದು ಭಾಷಾ ಸಮುದಾಯಕ್ಕೂ ದೊರೆಯಬೇಕು.

ಈ ಪಿಟಿಶನ್‌ಗೆ ಸಹಿ ಮಾಡಲು ಈ ಕೊಂಡಿಯನ್ನು ಕ್ಲಿಕ್ಕಿಸಿ:http://chn.ge/PPYM80

ಜನಸಂಖ್ಯಾ ನಿಯಂತ್ರಣ ಮತ್ತು ವಲಸೆ...

ನಮ್ಮೆಲ್ಲಾ ಸಮಸ್ಯೆಗೆ ಮೂಲ ಜನಸಂಖ್ಯಾ ಸ್ಫೋಟ ಎನ್ನುವ ವದಂತಿಯನ್ನು ಸದಾಕಾಲ ಹರಡಲಾಗುತ್ತಿದೆ. ಅದರಲ್ಲೂ ಸರ್ಕಾರ ಎಲ್ಲಾ ಸಮೂಹ ಮಾಧ್ಯಮಗಳ ಮೂಲಕ ಜನರಿಗೆ ಕುಟುಂಬ ನಿಯಂತ್ರಣ ಮಾಡಿ ಎಂದು ಕರೆ ಕೊಡುತ್ತಲೇ ಇರುತ್ತದೆ. ನಿಜಕ್ಕೂ ಕರ್ನಾಟಕಕ್ಕೆ ಜನಸಂಖ್ಯಾ ಸ್ಫೋಟದ ಸಮಸ್ಯೆ ಇದೆಯೇ? ಕನ್ನಡಿಗರನ್ನು ಕುಟುಂಬ ಯೋಜನೆಗೆ ಒಲಿಸುತ್ತಾ ಭಾರತ ಸರ್ಕಾರ ಮಾಡುತ್ತಿರುವುದಾದರೂ ಏನನ್ನು? ವಾಸ್ತವ ಸಂಗತಿ ಏನು? 

ಜನಸಂಖ್ಯೆ ಮತ್ತು ಜನದಟ್ಟಣೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚು ಅನ್ನೋ ಪ್ರಚಾರದಲ್ಲಿ ಆಯಾ ದೇಶದ ವಿಸ್ತೀರ್ಣವನ್ನು ಗಣನೆಗೆ ತೆಗೆದುಕೊಳ್ಳಬೇಕಾದ್ದು ಸರಿಯಾದ ವಿಧಾನ. ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಚೀನಾ, ಅದರ ನಂತರ ಭಾರತ. ಜನಸಂಖ್ಯೆಯೇ ನಮ್ಮೆಲ್ಲಾ ಅವ್ಯವಸ್ಥೆ, ಸಮಸ್ಯೆಗಳಿಗೆ ಮೂಲ ಅನ್ನೋದು ಸಾಮಾನ್ಯವಾಗಿ ಹುಟ್ಟು ಹಾಕಲಾಗಿರುವ ನಂಬಿಕೆ. ಒಂದು ನಾಡಿನ ಜನಸಂಖ್ಯೆಗಿಂತಲೂ ಮಹತ್ವದ್ದು ಅಲ್ಲಿನ ಜನದಟ್ಟಣೆ. ಈ ಜನದಟ್ಟಣೆಯನ್ನು ಒಂದು ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಂಖ್ಯೆಯ ಮೂಲಕ ಸೂಚಿಸುವುದು ಒಂದು ವಿಧಾನ. ಆ ಲೆಕ್ಕದಲ್ಲಿ ಚೀನಾಗಿಂತಲೂ ಭಾರತ ಮುಂದಿದೆ. ಚೀನಾ ಜನದಟ್ಟಣೆ ೧೪೦ ಇದ್ದಲ್ಲಿ ಭಾರತದ್ದು ೩೬೮. ವಾಸ್ತವವಾಗಿ ಅದಕ್ಕಿಂತಲೂ ಅರ್ಥಪೂರ್ಣವಾದ ಸೂಚಿ ಎಂದರೆ ಆಯಾಪ್ರದೇಶದಲ್ಲಿರುವ ಸಂಪನ್ಮೂಲದ ಪ್ರಮಾಣದೊಂದಿಗಿನ ಅನುಪಾತದ ಆಧಾರದ ಮೇಲಿನ ಜನದಟ್ಟಣೆ. ಸದ್ಯ ಭಾರತದ ಸಂಪನ್ಮೂಲಾಧಾರಿತ ಜನದಟ್ಟಣೆಯ ಅಂಕಿಅಂಶಗಳನ್ನು ಬದಿಗಿಟ್ಟು ವಿಸ್ತೀರ್ಣದ ಆಧಾರದ ಮೇಲಿನ ಜನದಟ್ಟಣೆಯ ಅಂಕಿಅಂಶಗಳನ್ನು ವಿಶ್ಲೇಷಿಸಿ ನೋಡೋಣ. ಅಂದರೆ ನಾಡಿನ ಜನಸಂಖ್ಯೆಯ ಹೆಚ್ಚಳ ಅಥವಾ ಕುಸಿತ ಎನ್ನುವುದು ಆ ಪ್ರದೇಶದ ವಿಸ್ತೀರ್ಣ ಆಧಾರಿತ ಜನದಟ್ಟಣೆಯಾಗಿದೆ. ಜನಸಂಖ್ಯಾ ದಟ್ಟಣೆಯನ್ನು ನಿಭಾಯಿಸಲು ಇರುವ ಸಾಧನ ಹುಟ್ಟಿನ ಪ್ರಮಾಣದ ಮೇಲಿನ ಹಿಡಿತ. ಈ ಪ್ರಮಾಣ ಆಯಾ ಪ್ರದೇಶದಲ್ಲಿನ ತಾಯಂದಿರು ಸರಾಸರಿ ಎಷ್ಟು ಮಕ್ಕಳನ್ನು ಹೆರುತ್ತಾರೆ ಎಂಬುದನ್ನು ಅವಲಂಬಿಸಿದೆ. ಈ ಹುಟ್ಟಿನ ಪ್ರಮಾಣವನ್ನು ಫಲವತ್ತತೆ ಎನ್ನಬಹುದಾಗಿದೆ. ಜನಸಂಖ್ಯಾ ನಿಯಂತ್ರಣವೆಂದರೆ ಈ ಫಲವತ್ತತೆಯನ್ನು/ ಹೆರುವಿಕೆಯ ಪ್ರಮಾಣವನ್ನು ನಿಯಂತ್ರಿಸುವುದೇ ಆಗಿದೆ.

ಜನಸಂಖ್ಯಾ ನಿಯಂತ್ರಣ

ಜನರು ಹುಟ್ಟುತ್ತಿರುವಂತೆಯೇ ಸಾಯುತ್ತಲೂ ಇರುವುದರಿಂದ ಈ ಎರಡು ಪ್ರಮಾಣಗಳ ನಡುವಿನ ಹೊಂದಾಣಿಕೆ ಆಯಾಪ್ರದೇಶದ ಜನಸಂಖ್ಯೆ ಏರುತ್ತಿದೆಯೇ, ಇಳಿಯುತ್ತಿದೆಯೇ ಅನ್ನುವುದನ್ನು ನಿಶ್ಚಯಿಸುತ್ತದೆ. ಜನಸಂಖ್ಯಾ ನಿಯಂತ್ರಣವೆಂದರೆ ಜನಸಂಖ್ಯೆಯ ಏರಿಕೆ ಪ್ರಮಾಣದ ಮೇಲೆ ಕಡಿವಾಣ ಹಾಕಿಕೊಳ್ಳುವುದೇ ಆಗಿದೆ. ಇದಕ್ಕಿರುವ ಅಳತೆಗೋಲು TFR, ಅಂದರೆ ಒಟ್ಟು ಫಲವತ್ತತೆಯ ಪರಿಮಾಣ. ಈ ಸೂಚ್ಯಂಕವು ೨.೦ ಇದ್ದಲ್ಲಿ ಜನಸಂಖ್ಯೆ ಹೆಚ್ಚೂ ಆಗದು ಕಮ್ಮಿಯೂ ಆಗದು. ಸರಾಸರಿಯಾಗಿ ಒಬ್ಬ ತಂದೆತಾಯಿಗೆ ಇಬ್ಬರು ಮಕ್ಕಳಿರುವುದು ಎಂದರೆ ಸೂಚ್ಯಂಕ ೨.೦ ಇದೆ ಎಂದರ್ಥ. ಎರಡಕ್ಕಿಂತ ಹೆಚ್ಚಿನ ಸೂಚ್ಯಂಕದ ಅರ್ಥ ಜನಸಂಖ್ಯೆ ಏರುಮುಖದಲ್ಲಿದೆ, ಇದು ಜನಸಂಖ್ಯಾ ಸ್ಫೋಟದ ಕಡೆಗಿನ ಹೆಜ್ಜೆ. ಇದೇ ಸೂಚ್ಯಂಕ ೨.೦ಕ್ಕಿಂತ ಕೆಳಗೆ ಇಳಿದರೆ ಜನಸಂಖ್ಯೆಯ ಇಳಿಮುಖವಾಗುತ್ತಿರುವ ಲಕ್ಷಣ. ಜನಸಂಖ್ಯಾ ನಿಯಂತ್ರಣ ಎನ್ನುವುದರ ಅರ್ಥ ಏರಮುಖವಾಗಿರುವ ಜನಸಂಖ್ಯಾ ಸೂಚ್ಯಂಕವನ್ನು ನೇರವಾಗಿಸುವುದು. ಅಂದರೆ ಸೂಚ್ಯಂಕವನ್ನು ೨.೦ಕ್ಕಿಳಿಸುವುದು. ಆದರೆ ಮದುವೆ ಮಾಡಿಕೊಳ್ಳದವರು, ಚಿಕ್ಕಮಕ್ಕಳ ಸಾವಿನ ಪ್ರಮಾಣ... ಮುಂತಾದುವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈಗಿರುವ ಜನಸಂಖ್ಯಾ ಪ್ರಮಾಣವನ್ನೇ ಕಾಯ್ದುಕೊಳ್ಳಬೇಕೆಂದರೆ ಸೂಚ್ಯಂಕವನ್ನು ೨.೧ರಲ್ಲಿಟ್ಟುಕೊಳ್ಳುವುದು ಒಳಿತು. ಯಾವ ದೇಶವೂ, ಯಾವ ಜನಾಂಗವೂ ಜನಾಂಗವೂ ಸದರಿ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕಿಂತ ಕೆಳಕ್ಕಿಳಿಸಲು ಒಪ್ಪದು. ಯಾಕೆಂದರೆ ಅದು ಕಾಲಾಂತರದಲ್ಲಿ ಆ ಜನಾಂಗವನ್ನೇ ಭೂಪಟದಿಂದ ಅಳಿಸಿಬಿಡುತ್ತದೆ.  ೨.೦ ಸೂಚ್ಯಂಕ ಅನುಸರಿಸಿದರೆ ಎಷ್ಟೇ ಶತಮಾನಗಳುರುಳಿದರೂ ಜನಸಂಖ್ಯೆ ಅದೇ ಪ್ರಮಾಣದಲ್ಲಿರುತ್ತದೆ. ೨ಕ್ಕಿಂತ ಕೆಳಗಿಳಿದರೆ ಹೇಗೆ ಕುಸಿತ ಕಂಡು ಕೊನೆಗೊಮ್ಮೆ ಆ ಜನಾಂಗ ನಿರ್ನಾಮವಾಗಿಬಿಡುತ್ತದೆ.

ಭಾರತ ದೇಶದ ಸ್ವರೂಪ ಮತ್ತು ಜನದಟ್ಟಣೆ

ಭಾರತವೂ ಕೂಡಾ ಏರುಮುಖವಾಗಿರುವ ಜನಸಂಖ್ಯೆ ಹೊಂದಿದ್ದು (ಈಗಿನ ಫಲವತ್ತತೆ ಸೂಚ್ಯಂಕ ೨.೯) ತನ್ನ ಜನಸಂಖ್ಯೆಯನ್ನು ಸ್ಫೋಟವಾಗಲು ಬಿಡದಂತೆಯೂ, ಈಗ ಇರುವಷ್ಟೇ ಕಾಪಾಡಿಕೊಳ್ಳಲೂ ಯೋಜಿಸಿದೆ. ಆ ಕಾರಣಕ್ಕಾಗಿಯೇ ೨೦೨೦ರ ಹೊತ್ತಿಗೆ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕೆ ಇಳಿಸಲು ಯೋಜಿಸಿದೆ. ಆದರೆ ಯೋಜನೆ ಜಾರಿ ಮಾಡುವ ಭರದಲ್ಲಿ ಕೆಲಜನಾಂಗಗಳ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ. ಹೌದೂ.. ಭಾರತದ ಪ್ರಸ್ತುತ ಜನಸಂಖ್ಯಾ ನಿಯಂತ್ರಣ ಯೋಜನೆಯ ರೂಪುರೇಶೆಯನ್ನು ಅರಿತುಕೊಂಡರೆ ಈ ದಿಟವು ಗೋಚರವಾಗುತ್ತದೆ. ಇದು ಹುನ್ನಾರವೇ? ಅವಿವೇಕವೇ? ಉದ್ದೇಶಪೂರ್ವಕವೇ? ದಡ್ಡತನವೇ? ಎಂಬುದನ್ನು ವಿಶ್ಲೇಷಿಸುವುದು ನಿಮಗೆ ಬಿಟ್ಟದ್ದು. ಜನಸಂಖ್ಯಾ ದಟ್ಟಣೆಯ ವಸ್ತುಸ್ಥಿತಿ ನಿಯಂತ್ರಣೆಯ ಬಗ್ಗೆ ಮಾತಾಡುವ ಮೊದಲು ಕರ್ನಾಟಕದ ಜನಸಂಖ್ಯಾ ದಟ್ಟಣೆಯ ಬಗ್ಗೆ ಒಂದಷ್ಟು ಅಂಕಿ ಅಂಶಗಳತ್ತ ಕಣ್ಣು ಹಾಯಿಸೋಣ.

ಈ ಪಟ್ಟಿಯನ್ನೊಮ್ಮೆ ನೋಡಿ.


ಇದು ರಾಜ್ಯವಾರು ಜನದಟ್ಟಣೆಯ ಪಟ್ಟಿ. ಕರ್ನಾಟಕದ ದಟ್ಟಣೆ ಸೂಚ್ಯಂಕ ೩೧೯. ಅಂದರೆ ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆ ೩೧೯. ಭಾರತದ ಸರಾಸರಿ ಜನದಟ್ಟಣೆ ೩೬೮. ನಮಗಿಂತಾ ಜನದಟ್ಟಣೆಯಲ್ಲಿ ೧೮ ರಾಜ್ಯಗಳು ಮುಂದಿವೆ. ನಮ್ಮದು ೧೯ನೇ ಸ್ಥಾನ. ಅಂದರೆ ಕರ್ನಾಟಕದ ಇಂದಿನ ಜನದಟ್ಟಣೆಯು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆಯಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡುವಿನಂತಹ ರಾಜ್ಯಗಳಲ್ಲಿ ಜನದಟ್ಟಣೆ ಕರ್ನಾಟಕದ ಎರಡು ಪಟ್ಟು ಮೂರು ಪಟ್ಟುಹೆಚ್ಚಿವೆ. ಇದರ ಪರಿಣಾಮ ನೇರವಾಗಿ ಕರ್ನಾಟಕಕ್ಕೆ ಪರಭಾಷಿಕರ ವಲಸೆಯೇ ಆಗಿದೆ. ಆ ಮೂಲಕ ನಮ್ಮ ನಾಡಿನ ಸಂಪನ್ಮೂಲಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅನಿವಾರ್ಯತೆ ನಮ್ಮದಾಗಿದೆ. ಇನ್ನು ಜಗತ್ತಿನ ಕೆಲವು ದೇಶಗಳ ಜೊತೆ ತುಲನೆ ಮಾಡೋಣ.

ಈ ಒಂದು ನಕ್ಷೆ ನೋಡಿರಿ.


ಕರ್ನಾಟಕದ ಜನದಟ್ಟಣೆ ಜಪಾನು, ಇಸ್ರೇಲುಗಳಂತಹವುಗಳಿಗಿಂತಲೂ ಕಡಿಮೆಯಿದೆ. ಸ್ವಲ್ಪ ಗಮನಿಸಿ ನೋಡಿದರೆ ಜಪಾನಿನಂತಹ ದೇಶ ತನ್ನ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಎಷ್ಟು ಗಂಭೀರವಾದ ಪ್ರಯತ್ನಗಳನ್ನು ಮಾಡುತ್ತಿದೆಯೆಂದು ತಿಳಿಯುತ್ತದೆ. ಆ ಯಾವ ದೇಶಗಳಿಗೂ ಇಲ್ಲದ ಜನಸಂಖ್ಯಾ ಸ್ಫೋಟದ ಸಮಸ್ಯೆ ಕರ್ನಾಟಕಕ್ಕಿದೆ ಎಂದು ಯಾರಾದರೂ ಹೇಳಿದರೆ ನಂಬಬೇಕೆ? ಆ ಯಾರಾದರೂ ಎನ್ನುವುದೂ ನಮ್ಮದೇ ಕೇಂದ್ರ ಮತ್ತು ರಾಜ್ಯಸರ್ಕಾರಗಳಾಗಿದ್ದಾಗಲೂ ಕೂಡಾ ನಂಬಬೇಕಾಗಿಲ್ಲ.

ನಮ್ಮನ್ನು ಇಲ್ಲವಾಗಿಸುವ ಹುನ್ನಾರ?


ಹೋಗಲೀ, ಕೇಂದ್ರಸರ್ಕಾರ ಕನ್ನಡಿಗರ ಈಗಿನ ಜನಸಂಖ್ಯೆಯನ್ನು ಉಳಿಸಿಕೊಂಡು ಹೋಗಬೇಕೆಂಬ ಉದ್ದೇಶವನ್ನಾದರೂ ಹೊಂದಿದೆಯೇ? ಇಲ್ಲ...ಇದು ಕನ್ನಡಿಗರ ಜನಸಂಖ್ಯೆಯನ್ನು ಇಳಿಮುಖವಾಗಿಸಬೇಕೆಂಬ ಗುರಿ ನಮಗಿತ್ತಿದೆ. ಹೌದೂ! ಇಂತಹ ಕ್ರಮಕ್ಕೆ ಭಾರತ ಸರ್ಕಾರದ ಜನಸಂಖ್ಯಾ ನಿಯಂತ್ರಣ ಯೋಜನೆ ಮುಂದಾಗಿದೆ ಎಂದರೆ ನಂಬಲೇಬೇಕಾಗಿದೆ. ಯಾಕೆಂದರೆ ಕರ್ನಾಟಕದ ಮುಂದೆ ಕೇಂದ್ರಸರ್ಕಾರವು ಇಟ್ಟಿರುವ ಸೂಚ್ಯಂಕದ ಗುರಿ ೧.೯. ಕರ್ನಾಟಕ ಸರ್ಕಾರವೂ ತನಗೆ ತಾನೇ ವಿಧಿಸಿಕೊಂಡಿರುವ ಗುರಿ ೧.೬ ಆಗಿದ್ದು ವಿಚಿತ್ರವಾಗಿದೆ. ಈ ೧.೬ರ ಗುರಿಯನ್ನೇನಾದರೂ ಕನ್ನಡಿಗರು ಸಾಧಿಸಿಬಿಟ್ಟರೆ ಕನ್ನಡಿಗರು ನೂರಿನ್ನೂರು ವರ್ಷಗಳಲ್ಲಿ ಭೂಪಟದಿಂದ ಮರೆಯಾಗಬೇಕಾಗುತ್ತದೆ. ಈಗಾಗಲೇ ೨.೩ರಷ್ಟು ಸೂಚ್ಯಂಕ ಸಾಧಿಸಿರುವ, ೩೧೯ರ ಜನದಟ್ಟಣೆಯನ್ನು ಹೊಂದಿರುವ ಕರ್ನಾಟಕಕ್ಕೆ ೨.೧ಕ್ಕಿಂತ ಕೆಳಗಿನ ಗುರಿಯನ್ನು ಕೊಟ್ಟಿರುವುದರ ಉದ್ದೇಶವೇನಿರಬಹುದು? ಜನರಿಂದ ತುಂಬಿ ತುಳುಕುತ್ತಿರುವ ಉತ್ತರದ ಹಿಂದೀಭಾಷಿಕ ಪ್ರದೇಶಗಳಾದ ಬಿಹಾರ, ಉತ್ತರಪ್ರದೇಶ ಮೊದಲಾದ ಈಗಾಗಲೇ ಹೆಚ್ಚಿನ ಬಹಳ ಜನದಟ್ಟಣೆಯಿರುವ, ಹೆಚ್ಚಿನ ಫಲವತ್ತತೆ ಸೂಚ್ಯಂಕವಿರುವ ರಾಜ್ಯಗಳಿಗೆ ನೀಡಿರುವ ಗುರಿ ೩.೦ ಆಗಿದೆ. ಅಂದರೆ ‘ಕಾಲಾಂತರದಲ್ಲಿ ದಕ್ಷಿಣ ಭಾರತೀಯರೆಲ್ಲಾ ಜನಸಂಖ್ಯೆಯ ಕುಸಿತದ ಕಾರಣದಿಂದಾಗಿ ವಿನಾಶ ಹೊಂದಿರಿ, ಉತ್ತರದ ಹಿಂದೀ ಭಾಷಿಕರು ಮಕ್ಕಳು ಮರಿ ಹುಟ್ಟಿಸಿಕೊಂಡು ಮುಂದುವರಿಯಲಿ. ನಿಮ್ಮ ನಾಡಿನ ಸಂಪನ್ಮೂಲಗಳನ್ನೆಲ್ಲಾ ಅವರು ಬದುಕಲು ಬಿಟ್ಟುಕೊಡಿ’ ಅಂದಂತಾಯಿತಲ್ಲಾ?

ಸರಿಯಾದ ‘ಜನಸಂಖ್ಯಾ ಸ್ಫೋಟ ನಿಯಂತ್ರಣ’ಕ್ರಮ ಹೀಗಿರಲಿ!

ಭಾರತವು ನಾನಾಭಾಷಿಕ ಜನಾಂಗಗಳ ತವರಾಗಿದೆಯಷ್ಟೇ ಅಲ್ಲದೆ ನಾನಾ ತೆರನಾದ ಭೌಗೋಳಿಕ ವೈವಿಧ್ಯತೆಯನ್ನೂ ಹೊಂದಿದೆ. ಇಲ್ಲಿ ಸಹಜವಾಗಿಯೇ ಒಂದು ಪ್ರದೇಶಕ್ಕೂ ಮತ್ತೊಂದಕ್ಕೂ ಒಂದು ಜನಾಂಗಕ್ಕೂ ಮತ್ತೊಂದಕ್ಕೂ ಜನಸಂಖ್ಯಾ ದಟ್ಟಣೆಯ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಹಾಗಾಗಿ ಜನಸಂಖ್ಯಾ ನಿಯಂತ್ರಣವೆನ್ನುವ ಅಸ್ತ್ರವನ್ನು ವಿವೇಚನೆಯೊಂದಿಗೆ ಸರಿಯಾಗಿ ಪ್ರಯೋಗಿಸಬೇಕಾಗಿದೆ. ಸರಿಯಾದ ವಿಧಾನದಲ್ಲಿ ಪ್ರತಿಯೊಂದು ರಾಜ್ಯಕ್ಕೂ ೨.೧ರ ಸೂಚ್ಯಂಕವನ್ನು ಸಾಧಿಸುವ ಗುರಿಯನ್ನು ನಿಗದಿ ಪಡಿಸಬೇಕಾಗಿದೆ. ಯಾವ ರಾಜ್ಯ ೨.೧ರ ಗುರಿ ಮುಟ್ಟುತ್ತದೋ ಆ ರಾಜ್ಯಕ್ಕೆ ಹೆಚ್ಚು ಯೋಜನೆಗಳ, ಸಂಪನ್ಮೂಲ ಹರಿಸುವಿಕೆಯ, ತೆರಿಗೆ ವಿನಾಯತಿಯ ಪ್ರೋತ್ಸಾಹಕ ಉಡುಗೊರೆ ಕೊಡುವ ಮೂಲಕ ಗುರಿ ಸಾಧನೆಯತ್ತ ದಾಪುಗಾಲಿಡಬಹುದಾಗಿದೆ. ಒಮ್ಮೆ ಒಂದು ರಾಜ್ಯ ಗುರಿ ಸಾಧಿಸಿದೆಯೆಂದ ಮೇಲೆ ಆ ರಾಜ್ಯದಲ್ಲಿನ್ನು ಜನಸಂಖ್ಯಾ ನಿಯಂತ್ರಣ ಪ್ರಚಾರಾಂದಲನಗಳಿಗೆ ಕೊನೆ ಹಾಡಬಹುದಾಗಿದೆ. ಆದರೆ ಇಂದು ಭಾರತ ಸರ್ಕಾರ ಅನುಸರಿಸುತ್ತಿರುವ ನೀತಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಸುರಿಯುವಂತಿದ್ದು ಕೆಲ ಜನಾಂಗಗಳನ್ನು ವಿನಾಶದೆಡೆಗೆ ತಳ್ಳುತ್ತಿದೆ. ಕಾಲಾಂತರದಲ್ಲಿ ಇವು ಹೇಳಹೆಸರಿಲ್ಲದಂತೆ ನಿರ್ನಾಮವಾಗಿಬಿಡುತ್ತವೆ. ಕಾಕತಾಳಿಯವೋ ಏನೋ, ಈ ಜನಾಂಗಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ್ದಾಗಿವೆ, ಹಿಂದಿಯೇತರ ಭಾಷಾ ಜನಾಂಗಗಳಾಗಿದೆ. ಭಾರತ ಬಹಳ ದೊಡ್ಡದು, ಹಾಗಾಗಿ ಕೇಂದ್ರಸರ್ಕಾರಕ್ಕೆ ನಾವು ಕಾಣಿಸದೇ ಇರಬಹುದು. ಆದರೆ ನಮ್ಮ ಹಿತ ಕಾಯಲೆಂದೇ ಅಸ್ತಿತ್ವದಲ್ಲಿರುವ ರಾಜ್ಯಸರ್ಕಾರಕ್ಕೆ, ರಾಜ್ಯದ ಆಡಳಿತ ಯಂತ್ರಕ್ಕೇನೂ ದೊಡ್ಡರೋಗ ಬಂದಿಲ್ಲವಲ್ಲಾ? ಇವರು ಒಟ್ಟು ಫಲವತ್ತೆತೆ ಸೂಚ್ಯಂಕವನ್ನು ಯಾವ ಕಾರಣಕ್ಕೂ ೨.೧ಕ್ಕಿಂತ ಕೆಳಗಿಳಿಸಲು ಯೋಜಿಸುವುದಾಗಲೀ, ಒಪ್ಪುವುದಾಗಲೀ ಮಾಡಬಾರದಲ್ಲಾ? ಅಂತರ ರಾಜ್ಯ ಅನಿಯಂತ್ರಿತ ವಲಸೆ ತಡೆಗಾಗಿ ಕಾಯ್ದೆ ರೂಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬಹುದಲ್ಲ. ನಮ್ಮಂತೇ ಸವೆಯುತ್ತಿರುವ ರಾಜ್ಯಗಳನ್ನು ಒಗ್ಗೂಡಿಸಿ ಸರಿಯಾದ ನೀತಿಯನ್ನು ರೂಪಿಸುವಂತೆ ಹಟ ಹಿಡಿಯಬಹುದಲ್ಲಾ? ಕಡೇಪಕ್ಷ ಗುಜರಾತಿನಂತೆ ಕರ್ನಾಟಕಕ್ಕೆ ೨.೨ನ್ನಾದರೂ ಸೂಚ್ಯಂಕ ಗುರಿಯಾಗಿಸಲು ಲಾಬಿ ಮಾಡಬಹುದಲ್ಲಾ?

ಕನ್ನಡದವರ ಬಗ್ಗೇನೂ ಇದೇ ಕಾಳಜಿ ಇದೆಯಾ?


ಘನ ಕರ್ನಾಟಕ ರಾಜ್ಯಸರ್ಕಾರದ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀಯುತ ಅಶೋಕ್‌ರವರು ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಹೈಕಮಾಂಡಿನ ಅಪೇಕ್ಷೆಯಂತೆ ಮತ್ತು ನಿರೀಕ್ಷೆಯಂತೆ ಅಸ್ಸಾಮಿಗೆ ತೆರಳಿ, ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತಾಡಿ ಇಬ್ಬರೂ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಈ ವರದಿಯಲ್ಲಿನ ಒಂದು ತಮಾಶೆಯ ವಿಷಯ ಅಂದ್ರೆ ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ತರುಣ್ ಗೊಗಾಯಿಯವರ  "ಎರಡೂ ರಾಜ್ಯಗಳಲ್ಲೂ ಉಭಯ ರಾಜ್ಯಗಳ ಜನ ಬಹುಸಂಖ್ಯೆಯಲ್ಲಿ ಉತ್ತಮ ಬಾಂಧವ್ಯ ಮತ್ತು ಸೌಹಾರ್ದದಿಂದ ವಾಸವಾಗಿದ್ದಾರೆ" ಎಂದಿದ್ದಾರೆ. ಕರ್ನಾಟಕದಲ್ಲಿ ಸುಮಾರು ೩,೫೦,೦೦೦ ಅಸ್ಸಾಮಿಗಳಿದ್ದರೆ ಅಸ್ಸಾಮಿನಲ್ಲಿ ಸುಮಾರು ೨,೦೫೯ ಜನ ಕನ್ನಡಿಗರಿದ್ದಾರೆ(೨೦೦೧ರ ಜನಗಣತಿ). ಕನ್ನಡನಾಡಿನ ಜನಲಕ್ಷಣ (ಡೆಮಾಗ್ರಫಿ) ಬದಲಾಗುತ್ತಿರುವುದರ ಪರಿಣಾಮಗಳ ಬಗ್ಗೆ, ವಲಸೆ ಉಂಟು ಮಾಡುವ ಎಲ್ಲಾ ತೊಂದರೆಗಳ ಬಗ್ಗೆ, ನಮ್ಮ ಜನರ ಕೆಲಸ, ಭಾಷೆ, ಸಂಸ್ಕೃತಿಗಳಿಗೆ ಎದುರಾಗುವ ತೊಂದರೆಗಳ ಬಗ್ಗೆ ಯೋಚಿಸಿದರೆ ೩,೫೦,೦೦೦ಕ್ಕೂ ೨,೦೬೦ಕ್ಕೂ ನಡುವಿನ ಅಂತರದ ಮಹತ್ವ ಅರಿವಾಗುತ್ತದೆ. ಈ ವಿಷಯ ಬಿಟ್ಟು ನೋಡಿದರೂ ಕರ್ನಾಟಕ ಸರ್ಕಾರವು ಪ್ರತಿಕ್ರಿಯಿಸುತ್ತಿರುವ ರೀತಿ ಮಾತ್ರಾ ಅತಿಕಾಳಜಿ ಅನ್ನಿಸುತ್ತದೆ. ನಿಜಕ್ಕೂ, ಅಸ್ಸಾಮಿಗಳ ಬಗ್ಗೆ ಕರ್ನಾಟಕ ರಾಜ್ಯಸರ್ಕಾರವು ತೋರಿಸುತ್ತಿರುವ ಕಾಳಜಿ "ತೊಂದರೆಯಲ್ಲಿರುವವರಿಗೆ ತೋರಿಸುತ್ತಿರುವ ಉದಾರತೆ ಎನ್ನಿಸಿದರೂ... ನಮ್ಮ ಸರ್ಕಾರಗಳು ಸಂಕಷ್ಟದಲ್ಲಿದ್ದ ಕನ್ನಡಿಗರ ಪರವಾಗಿಯೂ ಹೀಗೇ ದೊಡ್ಡತನ ತೋರಿಸಿವೆಯೇ?" ಎನ್ನುವ ಪ್ರಶ್ನೆಗೆ ದಾರಿ ಮಾಡಿಕೊಡುತ್ತದೆ!!

ಅಸ್ಸಾಮಿಯರಿಗೆ ಕೆಲಸದ ಭದ್ರತೆ! ಕನ್ನಡಿಗರಿಗೆ ಬೇಡವೇ?

ಹೀಗೆ ರಾಜ್ಯವೊಂದರ ಉಪಮುಖ್ಯಮಂತ್ರಿಯೊಬ್ಬರು, ರಾಜ್ಯರಾಜ್ಯಗಳಿಗೆ ಅಲೆದು "ನಮ್ಮೂರಿಂದ ವಾಪಸ್ಸು ಹೋಗಿರೋರು ದಯವಿಟ್ಟು ಬನ್ನಿ" ಎಂದಿರೋದು ಬಹುಶಃ ಭಾರತದಲ್ಲೇ ಇದೇ ಮೊದಲಸಲಾ ಅನ್ನಿಸುತ್ತೆ! ಒಳ್ಳೇದು. ಕನ್ನಡಿಗರ ಸಹೃದಯತೆಗೆ ಇದು ಒಂದು ಉದಾಹರಣೆ. ಆದರೆ ಈ ಸಹೃದಯತೆ ಇಂದು ಆಡಳಿತ ಮಾಡುತ್ತಿರುವ ಬಿಜೆಪಿಗಾಗಲೀ, ಹಿಂದೆ ಆಳಿದ  ಜೆಡಿಎಸ್, ಕಾಂಗ್ರೆಸ್ಸುಗಳಿಗಾಗಲೀ ಇದ್ದಂತಿರುವುದು ಬರೀ ಹೊರನಾಡಿಗರ ಬಗ್ಗೆ ಮಾತ್ರಾ ಆಗಿಬಿಟ್ಟರೆ ಅದಕ್ಕೇನೆನ್ನಬೇಕು? ವಲಸಿಗರ ಉದ್ಯೋಗ, ಬದುಕಿನ ಬಗ್ಗೆ ಕಾಳಜಿ ತೋರುವ ಸರ್ಕಾರಗಳು ಇದೇ ನೆಲದ ಕನ್ನಡಿಗರಿಗೆ ಕೆಲಸ ದೊರಕಿಸಿ ಕೊಡುವ "ಸರೋಜಿನಿ ಮಹಿಷಿ ವರದಿ"ಯ ಬಗ್ಗೆ ಯಾಕೆ ಕ್ರಮ ತೆಗೆದುಕೊಳ್ಳದು? ನೆರೆಯ ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ ಮೊದಲಾದ ರಾಜ್ಯಗಳು "ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ"ಯನ್ನು ೮೫%ಕ್ಕೆ ಕಡಿಮೆಯಿರದಷ್ಟು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತಂದಿರುವುದನ್ನು ನೋಡಿಯೂ ರಾಜ್ಯದಲ್ಲಿ ಕನ್ನಡಿಗರಿಗೆ ಕೆಲಸದ ಅವಕಾಶ ಒದಗಿಸುವ "ಸರೋಜಿನಿ ಮಹಿಷಿ" ವರದಿಯನ್ನು ಯಾಕೆ ಜಾರಿಗೊಳಿಸಲು ಇವರಲ್ಲಿ ಒಬ್ರೂ ಕಾಳಜಿ ತೋರುತ್ತಿಲ್ಲ? ಹೊರನಾಡುಗಳಲ್ಲಿರುವ ಕನ್ನಡಿಗರಿಗೆ, ಅವರ ಸಂಕಷ್ಟದ ಸಮಯದಲ್ಲಿ ಯಾವ ತೆರನಾದ ನೆರವನ್ನು ಇವರು ನೀಡಲು ಮುಂದಾಗಿದ್ದಾರೆ? ಗಡಿನಾಡಿನಲ್ಲಿ ಕನ್ನಡಶಾಲೆಗಳಲ್ಲಿ ಪಠ್ಯವಿಲ್ಲ, ಶಾಲೆ ಮುಚ್ಚಲಾಗುತ್ತಿದೆ ಅನ್ನೋ ಸಂದರ್ಭಗಳೆಲ್ಲಾ ಬಂದಾಗ ಏನು ಮಾಡಿದ್ದವು? ಹೋಗಲಿ... ಇದೇ ನಾಡಿನಲ್ಲಿ ಬರದಿಂದ, ನೆರೆಯಿಂದ ಕಂಗೆಟ್ಟು ವಲಸೆ ಹೋದವರಿಗೆ ಈ ತೆರನಾದ ಭರವಸೆಯನ್ನು ಎಂದಾದರೋ ಸರ್ಕಾರ ಕೊಟ್ಟಿತ್ತೇ?   ಒಟ್ಟಾರೆ ಮನೆಗೆ ಮಾರಿಯಾಗದೇ ಪರರಿಗೆ ಉಪಕಾರಿಯಾಗಿರಬೇಕು ಅನ್ನೋದು ನಮ್ಮ ರಾಜ್ಯದ ರಾಜಕೀಯ ಪಕ್ಷಗಳಿಗೆ ಅರ್ಥವಾಗಲ್ವಾ ಗುರೂ!!

ಅಸ್ಸಾಂ: ಸಮಸ್ಯೆಯ ಮೂಲ ಸರಿಯಾಗಿ ಗುರುತಿಸಬೇಡವೇ?

(ಫೋಟೋ ಕೃಪೆ: NDTV ವೀಡಿಯೋ)
ಇಂದು (೧೯.೦೮.೨೦೧೨) ಎನ್‍ಡಿಟಿವಿಯಲ್ಲಿ ಕಾಂಗ್ರೆಸ್ಸಿನ ಮುಖ್ಯಸ್ಥೆಯಾದ ಶ್ರೀಮತಿ ಸೋನಿಯಾಗಾಂಧಿಯವರು ಮಾಡಿದ ಒಂದು ಭಾಷಣದ ವೀಡಿಯೋ ಪ್ರಸಾರವಾಗ್ತಾಯಿದೆ. ಈಶಾನ್ಯ ರಾಜ್ಯಗಳ ಜನರು ದೇಶದ ಬೇರೆ ಬೇರೆ ಭಾಗಗಳಿಂದ ದಿಕ್ಕೆಟ್ಟು ತವರಿಗೆ ಮರಳುತ್ತಿರುವ ಸಂದರ್ಭದಲ್ಲಿ ಅವರ ಈ ಮಾತುಗಳು ಮಹತ್ವದ್ದಾಗಿವೆ. ಇವರು ಮಾತನ್ನಾಡುತ್ತಾ ಮೊದಲಿಗೆ "ಅಸ್ಸಾಮಿನಲ್ಲಿ ಏನಾಗುತ್ತಿದೆಯೋ ಅದು ಬಹಳ ದುಃಖದ ವಿಷಯ" ಎಂದಿದ್ದಾರೆ. ಅಸ್ಸಾಮಿನಲ್ಲಿ ವಲಸಿಗರ ವಿರುದ್ಧವಾಗಿ ಸ್ಥಳೀಯರು ಬಂಡೆದ್ದು ನಡೆಸಿದ ಗಲಭೆ ಸರಿಯಲ್ಲವೆನ್ನುವುದು ಇವರ ಮಾತಿನ ಅರ್ಥವೇ ಎಂಬ ಗೊಂದಲ ಇದರಿಂದುಂಟಾಗುತ್ತದೆ. ಮಾತನ್ನು ಮುಂದುವರೆಸುತ್ತಾ ಇವರು "ಈ ದೇಶ ಎಲ್ಲಾ ಭಾರತೀಯರದ್ದು, ಇಲ್ಲಿ ಯಾರಿಗೆ ಎಲ್ಲಿಗೆ ಹೋಗಿಬೇಕಾದರೂ ನೆಲೆಸುವ ಸ್ವಾತಂತ್ರ್ಯವಿದೆ" ಎಂದಿದ್ದಾರೆ. ತುಂಬಾ ಸೊಗಸಾಗಿ ಏಕತೆಯ ಮಂತ್ರದಂತೆ ಕೇಳುವ ಈ ಮಾತುಗಳು ನಿಜವಾಗಿಯೂ ಸದ್ಭಾವನೆಯನ್ನು ಮೂಡಿಸಬಲ್ಲುದೇ? ನಿಜಕ್ಕೂ ಮೂಲ ಸಮಸ್ಯೆಯನ್ನು ಇಲ್ಲವಾಗಿಸುವುದೇ? ಎನ್ನಿಸುತ್ತಿದೆ!

ಸಮಸ್ಯೆಯ ಮೂಲ ಎಲ್ಲಿದೆ?

"ಯಾರು ಎಲ್ಲಿಯಾದರೂ ಹೋಗಿ ನೆಲೆಸಬಹುದು" ಎನ್ನುವ ಮಾತನ್ನು ಹಿಡಿದುಕೊಂಡು ಹೋಗಿ ಇದ್ದಕ್ಕಿದ್ದಂತೆ ಕರ್ನಾಟಕದಿಂದ ಒಂದಿಪ್ಪತ್ತು ಲಕ್ಷ ಜನರು ಗೋವಾ ರಾಜ್ಯಕ್ಕೆ ವಲಸೆ ಹೋಗಿಬಿಟ್ಟರು ಎಂದುಕೊಳ್ಳೋಣ. ಏನಾಗುತ್ತದೆ ಆಗ? ಗೋವಾದ ಜನಸಂಖ್ಯೆ ಇರೋದೇ ೧೪ ಲಕ್ಷ. ಇಲ್ಲಿಂದ ೨೦ ಲಕ್ಷ ಜನರು ಅಲ್ಲಿಗೆ ವಲಸೆ ಹೋದರೆ ಗೋವಾದ ಜನಲಕ್ಷಣ(Demography)ದ ಕಥೆ ಏನಾಗುತ್ತದೆ? ಗೋವಾದಲ್ಲಿ ಇವತ್ತು ಕೊಂಕಣಿ ಭಾಷೆಯಿದೆ. ನಾಳೆ ಗೋವಾದ ಆಡಳಿತ ಭಾಷೆ ಯಾವುದಾಗುತ್ತದೆ? ಕೊಂಕಣಿಯ ಮೇಲೆ ಏನು ಪರಿಣಾಮವಾಗುತ್ತದೆ? ಗೋವಾದಲ್ಲಿಯೂ ಎಲ್ಲಾ ನಾಡುಗಳಲ್ಲಿರುವಂತೆಯೇ ಯೋಗ್ಯರೂ, ಅಯೋಗ್ಯರೂ, ಓದಿದವರೂ, ಓದದವರೂ, ಸೋಮಾರಿಗಳೂ, ಕೈಲಾಗದವರೂ ಇದ್ದಾರಲ್ಲವೇ? ವಲಸಿಗರಂತೂ ಸಾಮಾನ್ಯವಾಗಿ ಸ್ಥಳೀಯರಿಗಿಂತಾ ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಯುವವರಾಗಿರುತ್ತಾರೆ ಎನ್ನುವುದನ್ನಂತೂ ಬಲ್ಲವಷ್ಟೇ? ಅದು ಅಮೇರಿಕೆಯಾದರೂ, ಬೆಂಗಳೂರಾದರೂ ಸಾಮಾನ್ಯವಾಗಿ ಇದು ರೂಢಿಯಲ್ಲಿರುವುದೇ ಆಗಿದೆ. ಹೀಗಿದ್ದಾಗ ವಲಸಿಗರಿಂದ ಗೋವನ್ನರ ಬದುಕು, ಸಂಸ್ಕೃತಿ, ಭಾಷೆಗಳಿಗೆ ಧಕ್ಕೆ ಬರುತ್ತದೋ ಇಲ್ಲವೋ?

ಸಮಸ್ಯೆ ರಾಷ್ಟ್ರೀಯತೆಯ ಮುಸುಕಲ್ಲಿ ಮರೆಯಾದೀತೇ?

ಕಾಂಗ್ರೆಸ್ಸೆಂಬ ರಾಷ್ಟ್ರೀಯ ಪಕ್ಷಕ್ಕೇನೋ ಗೋವನ್ನರೂ ಕನ್ನಡಿಗರೂ ಒಂದೇ ಇರಬಹುದು. ಇಲ್ಲಿಂದ ೨೦ ಲಕ್ಷ ಜನರು ಗೋವಾಕ್ಕೆ ಗುಳೆ ಹೋದರೆ ಏನೂ ಅನ್ನಿಸದೆಯೂ ಇರಬಹುದು. ಆದರೆ ಗೋವನ್ನರಿಗೆ? ವಲಸಿಗರಿಂದ ಗೋವಾದ ಅನನ್ಯತೆಗೆ ಒದಗುವ ಧಕ್ಕೆ ಎಂಥದ್ದು ಎನ್ನುವುದನ್ನು ಯಾರಾದರೂ ಊಹಿಸಬಹುದು. ಇಂತಹ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕಲ್ಲವೇ? ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರಿಗೆ, ಗೋವಾಕ್ಕೆ ನುಗ್ಗಿ ಅಲ್ಲಿನ ಭಾಷೆ, ಸಂಸ್ಕೃತಿ, ಅಲ್ಲಿನವರ ಬದುಕಿಗೆ ಧಕ್ಕೆ ಉಂಟು ಮಾಡುವವರು ಭಾರತೀಯರಾಗಿಬಿಟ್ಟರೆ ಪರ್ವಾಗಿಲ್ಲಾ...ಹಾಗೆ ಮಾಡುವವರು ಬೇರೆ ದೇಶದವರಾಗಿ ಮಾತ್ರಾ ಇರಬಾರದು ಎನ್ನಿಸಬಹುದೇನೋ? ಈ ಸಮಸ್ಯೆಗೆ ಶ್ರೀಮತಿ ಸೋನಿಯಾಗಾಂಧಿಯವರ ಆಶಯದಂತೆ ಪರಿಹಾರವೇನು? ಗೋವನ್ನರು ತಮ್ಮ ನಾಡಿಗೆ ಆಗಿರುವ ಕನ್ನಡಿಗರ ಅನಿಯಂತ್ರಿತ ವಲಸೆ ಬಗ್ಗೆ ದನಿ ಎತ್ತಬಾರದು ಮತ್ತು ಸೌಹಾರ್ದತೆಯಿಂದ ಅವರೊಡನೆ ಬಾಳಬೇಕು ಎನ್ನುವುದೇ? ನಿಜವಾಗಿ ನೋಡಿದರೆ ಈಗ ಯಾವುದರಿಂದಾಗಿ ಈ ಸಮಸ್ಯೆ ಹುಟ್ಟಿಕೊಂಡಿವೆಯೋ ಆ ಮೂಲಕಾರಣವನ್ನೇ ಪರಿಹಾರ ಎಂದು, ಹುಸಿ ರಾಷ್ಟ್ರೀಯತೆಯ ಸಿಹಿಯನ್ನು ಮೇಲೆ ಹಚ್ಚಿ ಶಿಫಾರಸ್ಸು ಮಾಡುತ್ತಿರುವಂತಿದೆ!

ಅಸ್ಸಾಮ್ ಆಗಿರಲೀ, ಗೋವಾ ಆಗಿರಲೀ,  ಕರ್ನಾಟಕವೇ ಆಗಿರಲೀ... ನಿಜವಾದ ಸಮಸ್ಯೆಯ ಮೂಲ ಯಾವುದು ಎನ್ನುವುದನ್ನು ಗುರುತಿಸದೇ ಹೋದಲ್ಲಿ ಸರಿಯಾದ ಪರಿಹಾರ ಸಿಗುವುದಾದರೂ ಸಾಧ್ಯವೇ? ರಾಷ್ಟ್ರೀಯ ಭಾವೈಕ್ಯವೆನ್ನುವ ಮಾತಿನ ಹೊದಿಕೆಯಿಂದ ನಿಜವಾದ ಸಮಸ್ಯೆಗೆ ಪರಿಹಾರ ಸಾಧ್ಯವೇ? ಯಾವುದೇ ಒಂದು ಪ್ರದೇಶದ ಅನನ್ಯತೆ, ಭಾಷೆ, ಸಂಸ್ಕೃತಿಗಳಿಗೆ ಧಕ್ಕೆ ತರುವ ಅನಿಯಂತ್ರಿತ ವಲಸೆ ಒಂದು ಸಮಸ್ಯೆಯೇ ಅಲ್ಲವೇ? ನಾಡಿನ ಜನರ ಉದ್ಯೋಗ ಕಸಿದುಕೊಳ್ಳುವ ಅನಿಯಂತ್ರಿತ ವಲಸೆಯೆನ್ನುವ ತಡೆಯಿರದ ಅವಕಾಶವು, ಭಾರತದ ಇಂದಿನ ವ್ಯವಸ್ಥೆಯಲ್ಲಿರುವುದೇ ಇವತ್ತಿನ ಸಮಸ್ಯೆಗೆ ಮೂಲವೆನ್ನಿಸದೇ? ನಿಜಕ್ಕೂ ಅಂತರರಾಜ್ಯ ವಲಸೆಗೆ ಕಡಿವಾಣ ಬೇಕಾಗಿದೆ ಗುರೂ!
Related Posts with Thumbnails