ದೀಪಿಕಾ ಕಳೆದುಕೊಂಡ ಐಶ್ವರ್ಯ!

ದೀಪಿಕಾ ಪಡುಕೋಣೆ ತನ್ನ ಮೊದಲ ಚಿತ್ರ ಇತ್ತೀಚೆಗೆ ಬಂದ ಯಾವುದೋ ಹಿಂದಿ ಚಿತ್ರ ಅಂತ ಸುಳ್ಳು ಹೇಳಿಕೊಂಡು ತಿರುಗ್ತಿದಾಳೆ ಅಂತ ಎಲ್ಲೆಲ್ಲೂ ಸುದ್ದಿ. ಅಲ್ಲ - ಇದೆಂಥಾ ರೋಗ? ಉಪ್ಪಿ ಜೊತೆಗೆ "ಐಶ್ವರ್ಯ" ಅನ್ನೋ ಕನ್ನಡ ಚಿತ್ರದಿಂದ ತೆರೆಗೆ ಬಂದೋಳಿಗೆ ತನ್ನ ಅಭಿನಯದ ಮೊದಲ ಚಿತ್ರ ಕನ್ನಡದ್ದು ಅಂತ ಹೇಳೋಕ್ಕೆ ಕೀಳರಿಮೆ ಯಾಕಿರಬೇಕು? ತಾನು ಮೇಲೆ ಹತ್ತಕ್ಕೆ ನೆರೆವಾದ ಕನ್ನಡದ ಏಣಿಗೆ ಗೌರವದಿಂದ ನಮಸ್ಕರಿಸೋ ಬದಲು ಕಾಲಿನಿಂದ ದಬ್ಬಿದಾಳಲ್ಲ ಗುರು?

ತಾನು ಯಾರು, ತನ್ನ ನಾಡು ಯಾವುದು, ತನ್ನ ನುಡಿ ಯಾವುದು ಅನ್ನೋದರ ಬಗ್ಗೇನೇ ಕೀಳರಿಮೆ ಇಟ್ಟುಕೊಂಡು ಅದನ್ನೆಲ್ಲ ಮುಚ್ಚಿಹಾಕೋಂಥೋರು ನಾಡಿನ ಮಟ್ಟಿಗೆ ಸತ್ತ ಲೆಕ್ಕವೇ. "ಐಶ್ವರ್ಯ" ಚಿತ್ರದಲ್ಲಿ ಏನಾದರೂ ಈ ಉಂಡಮನೆಗೆ ಎರಡು ಬಗೆಯೋಳ್ನ ನೋಡಿ ಖುಷಿ ಪಟ್ಟಿದ್ದರೆ ಇವತ್ತಿಗೆ ಆ ಖುಷೀನೆಲ್ಲ ಸೇರಿಸಿ ಸುಟ್ಟಾಕಬೇಕು ಗುರು!

ದೀಪಿಕಾ ಪಡುಕೋಣೆ, ನೀನೇ ನಿನ್ನ ತಪ್ಪು ತಿದ್ದುಕೊಳ್ಳೋ ದಿನ ಹೆಚ್ಚು ದೂರ ಇಲ್ಲ! ಒಂದು ದಿನ ಬರತ್ತೆ, ಆಗ ನಿನಗೆ "ಐಶ್ವರ್ಯ"ವೂ ನೆನಪಾಗತ್ತೆ, ನಿನ್ನ ನುಡೀನೂ ನೆನಪಾಗತ್ತೆ, ನಿನ್ನ ನಾಡೂ ನೆನಪಾಗತ್ತೆ. ನಿನ್ನ ಐಶ್ವರ್ಯವೆಲ್ಲವೂ ಹಾಳಾಗಿ ನೀನು ಕನ್ನಡಾಂಬೆಯ ಕಾಲಿಗೆ ಬಿದ್ದು ಕಣ್ಣೀರಿಡುವ ದಿನ ಬರತ್ತೆ, ಕಾದು ನೋಡು!

ಇಲ್ಲಿ ಯಾರು ಕುಂಬ್ಳೆ ಅಂದ್ರೆ? ಕೈ ಎತ್ತಿ!

ಕನ್ನಡಿಗ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ತಡವಾಗಾದ್ರೂ ಆಯ್ಕೆಯಾಗಿರೋದು ಹೆಮ್ಮೆ ತಂದಿದೆ ಗುರು! ಕುಂಬ್ಳೆಗೆ ಈ ಹೊಸ ಜವಾಬ್ದಾರಿಯಲ್ಲೂ ಯಶಸ್ಸು ಸಿಗಲಿ! ಅಂದಹಾಗೆ, ಅನಿಲ್ ಕುಂಬ್ಳೆಗೆ ಈ ಸ್ಥಾನ ಅಷ್ಟು ಸಲೀಸಾಗೇನು ದಕ್ಕಿಲ್ಲ. ನಾಯಕನ ಸ್ಥಾನಕ್ಕೆ ಏರಿದ ಕುಂಬ್ಳೆ ಸಾಗಿದ ದೂರ ಬಹಳ, ಸವೆಸಿದ ದಾರಿನೂ ದೂರದ್ದು. ಈ ಹಾದೀಲಿ ಸಾಗ್ತಾ ಸಾಗ್ತಾ ಕುಂಬ್ಳೆ 118 ಟೆಸ್ಟ್ ಪಂದ್ಯಗಳ್ನ ಆಡಿದಾರೆ, 566 ವಿಕೆಟ್ ಉರುಳಿಸಿ ಭಾರತದ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಕೂಡಾ ಆಗಿದಾರೆ, ಉಪನಾಯಕನಾಗಿ ಆಡಿ ಅನುಭವಾನೂ ಪಡೆದಿದಾರೆ.

ವೆಸ್ಟ್ ಇಂಡೀಸ್ ಎದುರು ಒಂದು ಪಂದ್ಯದಲ್ಲಿ ಚೆಂಡೇಟು ಬಿದ್ದು ದವಡೆ-ಮೂಳೆ ಚದರಿ ಹೋದಾಗ್ಲೂ ಬೌಲ್ ಮಾಡಿದ ಅನಿಲ್ ಕುಂಬ್ಳೆ, ಬದ್ಧತೆಗೊಂದು ಹೊಸ ಭಾಷ್ಯ ಬರೆದದ್ದು ಕ್ರಿಕೆಟ್ ಇರೋವರೆಗೂ ಮರೆಯಕ್ಕಾಗದೇ ಇರೋ ವಿಷ್ಯ! 1999ರಲ್ಲಿ ಪಾಕಿಸ್ತಾನದ ಜೊತೆ ಆಡಿದ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಹತ್ತೂ ವಿಕೆಟ್ ಗಳನ್ನು ಕಬಳಿಸಿದ ಆ ಆಟ ಅನಿಲ್ ಕುಂಬ್ಳೆಯ ದೈತ್ಯ ಪ್ರತಿಭೆಗೆ ಹಿಡಿದ ಕನ್ನಡಿ ಗುರು! ಕುಂಬ್ಳೆ ತಂಡದ ನಾಯಕನಾಗಕ್ಕೆ ಕಾರಣ ಬರೀ ಆತನ ಪ್ರತಿಭೆಯೊಂದೇ ಕಾರಣ ಅಲ್ಲ; ಅದರ ಜೊತೆ ಜೊತೆಗೇ ಸಕ್ಕತ್ ಪರಿಶ್ರಮ, ಬಿಡುವಿಲ್ದಿರೋ ಪ್ರಯತ್ನ, ಛಲ ಮತ್ತು ಆಟಕ್ಕೆ ಬದ್ಧತೆಗಳು ಬಹಳ ಪಾತ್ರ ವಹಿಸಿವೆ.

ಕನ್ನಡ ನಾಡು ಏಳಿಗೆ ಹೊಂದಕ್ಕೆ ಇವತ್ತು ನಮ್ಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ಉದ್ದಿಮೆ, ಮನರಂಜನೆ, ಶಿಕ್ಷಣ, ರಾಜಕಾರಣ... ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕುಂಬ್ಳೆಗಳು ಬೇಕು. ಆ ಛಲವಂತ ಬೇರೆಲ್ಲೂ ಇಲ್ಲ, ಕನ್ನಡಿಗ ಕನ್ನಡಿ ಮುಂದೆ ನಿಂತ್ರೆ ತಾನೇ ಕಾಣ್ಸ್ತಾನೆ! ಏನ್ ಗುರು?

ಕನ್ನಡಿಗನಾದ ಗ್ರಾಹಕನಾಗಿ ನಿಮ್ಮ ಅನುಭವ ಹಂಚಿಕೊಳ್ಳಿ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಇಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಎಲ್ಲದರಲ್ಲೂ ಆದ್ಯತೆ ಸಿಗಬೇಕು ಅಂತ ಹಂಬಲಿಸೋ ಅಂಥೋರಿಗೆ, ಇದನ್ನು ನಮ್ಮ ಹಕ್ಕು ಅಂತ ಈಗಾಗಲೇ ಅರಿತಿರೋ ಕನ್ನಡಿಗರಿಗೆಲ್ಲಾ ನಮಸ್ಕಾರಗಳು. ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರೋ ಸಂಗತಿಗಳು ನಮ್ಮ ನಿಮ್ಮ ಗಮನಕ್ಕೆ ಬಂದಾಗ ಸಂಕಟ ಪಟ್ಕೋತೀವಿ. ಆ ಸಮಸ್ಯೆ ಬಗೆಹರೀಲಿ ಅಂತಾ ತುಡೀತೀವಿ. ಬದಲಾವಣೆಗಳು ಆದಾಗ ಹಿಗ್ಗುತ್ತೀವಿ. ಆ ಬದಲಾವಣೆಗಳು ನಮ್ಮಿಂದಲೇ ಆಗಿದ್ದರೆ ಮೆರೀತೀವಿ.ಪೆಟ್ರೋಲ್ ಬಂಕಿನವರು ಹೇಗಿದ್ದರು ನೋಡಿ, ಕನ್ನಡದವರಿಗೆ ಇಂಗ್ಲಿಷ್ ಲಿಪೀಲಿ ಹಿಂದಿ ಹೇಳ್ಕೊಡ್ತಾ ಇದಾರೆ...ಪಾಪ. ಇದು ನಮ್ ಬೆಂಗಳೂರಿನ ಒಂದು ಪೆಟ್ರೋಲ್ ಬಂಕಲ್ಲಿ ಹಾಕಿದ್ದ ನಾಮಫಲಕ.
ಇದೇ ಬಂಕ್ ನವರೇ ಈಗ ಹೇಗೆ ಬದಲಾಗಿದಾರೆ ಅಂತ ನೋಡಿ. ಖುಷಿ ಆಗ್ತಿದೆ ಅಲ್ವಾ?

ಬೆಂಗಳೂರಿನ ಖಾಸಗಿ ಎಫ್.ಎಂ ವಾಹಿನಿಗಳು ಒಂದು ವರ್ಷದ ಹಿಂದೆ "ನಮ್ಮದು 100% ಬಾಲಿವುಡ್ ಸ್ಟೇಷನ್" "ಕನ್ನಡಕ್ಕೆ ಮಾರುಕಟ್ಟೆ ಇಲ್ಲ" "ಕನ್ನಡ ಹಾಡುಗಳು ಸಿಗ್ತಿಲ್ಲ" ಅಂತ ಕುಂಟು ನೆಪ ಹೇಳ್ತಾ ೧೦~೧೫% ಕನ್ನಡ ಹಾಡುಗಳನ್ನು ಹಾಕ್ತಿದ್ರು. ಆದ್ರೆ ಇವತ್ತು ಬೆಂಗಳೂರಿನ ಟಾಪ್ 3 ಎಫ್.ಎಂಗಳಲ್ಲಿ ಕಡಿಮೆ ಅಂದ್ರೆ 80% ಕನ್ನಡ ಹಾಡುಗಳೇ ಬರುತ್ತಿವೆ. ಸಿಂಗಪೂರ್ ಏರ್ ಲೈನ್ಸ್ ನವರು ಕನ್ನಡಿಗರ ಒತ್ತಾಯಕ್ಕೆ ಮಣಿದು ತಮ್ಮ ವಿಮಾನಗಳಲ್ಲಿ ಕನ್ನಡದ ಮೆನು ಸಿಗೋ ಹಾಗೆ ಮಾಡಿದಾರೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ.

ಈ ಬದಲಾವಣೆಗೆ ಕಾರಣವೇನು?

ಇವೆಲ್ಲಾ ಹೇಗಾಯ್ತು ಅಂದ್ರೆ ಅದಕ್ಕೆ ಉತ್ತರ ಗ್ರಾಹಕನಾಗಿ ಕನ್ನಡಿಗ ಒಗ್ಗಟ್ಟಾಗಿ ನಿಂತದ್ದರಿಂದ ಆಯ್ತು. ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದು. ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ್ದು, ಮಿಂಚೆ (e-mail) ಚಳವಳಿ ನಡೆಸಿದ್ದು, ಪತ್ರಿಕೆಗಳಿಗೆ ಬರೆದಿದ್ದು...ಇವೇ ಕಾರಣ. ನಿಜ, ನಾವು ಒಟ್ಟಾಗಿ ಧ್ವನಿ ಎತ್ತೋಣ. ಮತ್ತಷ್ಟು ಬದಲಾವಣೆಗಳಿಗೆ ಕಾರಣರಾಗೋಣ.

ನೀವೇನು ಮಾಡಬಹುದು?

ನಿಮ್ಮ ಅನುಭವಗಳನ್ನು ವಿವರಗಳೊಂದಿಗೆ graahaka@gmail.com ಗೆ ಮಿಂಚಿಸಿ. ಸೂಕ್ತವಾದವುಗಳನ್ನು ಏನ್‌ಗುರುವಿನಲ್ಲಿ ಪ್ರಕಟಪಡಿಸಲಾಗುತ್ತದೆ. ಆ ಮೂಲಕ ಕನ್ನಡಿಗರನ್ನು ಒಗ್ಗೂಡಿಸೋಣ. ಬನ್ನಿ, ನೀವೂ ಬದಲಾವಣೆ ಮಾಡಬಲ್ಲಿರಿ...ಐದು ಬೆರಳು ಸೇರಿದರೆ ಮುಷ್ಟಿ ...

ಕನ್ನಡಿಗರು ಒಗ್ಗೂಡದೆ ಗಣಕದಲ್ಲಿ ಕನ್ನಡದ ಮುನ್ನಡೆಯಿಲ್ಲ

ಗಣಕ ತಂತ್ರಜ್ಞಾನದಲ್ಲಿ ಕನ್ನಡದ ಮುನ್ನಡೆ ಆಗಿದೆ ಅಂತ ನವೆಂಬರ್ 1ರಂದು ವಿ.ಕ ಪತ್ರಿಕೆ ವರದಿ ಮಾಡಿದೆ. IISc ಸಂಸ್ಥೇಲಿ ಕನ್ನಡದಲ್ಲಿ ಗಣಕ ತಂತ್ರಜ್ಞಾನ ತರೋ ಪ್ರಯತ್ನದಲ್ಲಿ OCR ಎಂಬ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕೆಲಸ ನಡ್ದಿರೋ ಬಗ್ಗೆ ಇಲ್ಲಿ ಹೇಳಿದಾರೆ. ಇದಲ್ದೆ ಕನ್ನಡದಲಿ ಶ್ರೀಲಿಪಿ, ನುಡಿ, ಕನ್ನಡ ಸ್ಪೆಲ್-ಚೆಕ್ಕರ್, ಮುಂತಾದ ಹೊಸ ತಂತ್ರಜ್ಞಾನಗಳೂ ಬಂದಿವೆ ಅಂತ್ಲೂ ವರದಿ ಹೇಳತ್ತೆ (ಆದ್ರೆ ಇಡೀ ಪ್ರಪಂಚವೇ ಉಪಯೋಗಿಸ್ತಾ ಇರೋ ಬರಹ ತಂತ್ರಾಂಶದ ಬಗ್ಗೆ ತುಟಿಕ್-ಪಿಟಿಕ್ ಅನ್ನಲ್ಲ ಆ ವರದಿ!). ಅಂತರ್ಜಾಲ ತಾಣಗಳಲ್ಲೂ ಇತ್ತೀಚೆಗೆ ಹೆಚ್ಚಿನ ಬರಹಗಳು ಕನ್ನಡದಲ್ಲೇ ಕಂಡು ಬರ್ತಿರೋದು ಖುಷಿಯ ವಿಷಯ ಆಗಿದೆ.

ಆದ್ರೆ ಈಗ ನಾವುಗಳು ಇಟ್ಟಿರೋ ಪುಟ್ಟಪುಟ್ಟ ಹೆಜ್ಜೆಗಳಿಂದ್ಲೇ ಸಂತೃಪ್ತರಾಗದೆ ಇನ್ನೂ ಬಹಳ ದೂರ ಹೋಗಬೇಕಿದೆ ಗುರು! ಅದಕ್ಕೆ ಈ ತಂತ್ರಜ್ಞಾನದ ಇವತ್ತಿನ ಸ್ಥಿತಿ ಏನು, ಇನ್ನೂ ಏನೇನಾಗಬೇಕು, ಅದಕ್ಕೆ ಏನೇನು ಬೇಕು ಅಂತ ಯೋಚನೆ ಮಾಡೋದು ಬಹಳ ಮುಖ್ಯ ಗುರು.

ಈಗಿರೋ ಕನ್ನಡ ಗಣಕ ತಂತ್ರಾಂಶಗಳಲ್ಲಿ ತೊಂದರೆಗಳಿವೆ
ಇವತ್ತು ಕನ್ನಡದಲ್ಲಿ ಇರೋ ತಂತ್ರಾಂಶಗಳ ಗುಣಮಟ್ಟ ಹೇಗಿದೆ, ಅವುಗಳಲ್ಲಿ ಏನು ತೊಂದರೆಗಳಿವೆ, ಅವುಗಳಲ್ಲಿ ಏನು ಬದಲಾವಣೆಗಳಾಗಬೇಕು ಅಂತ ನೋಡಿದರೆ ಮನಸ್ಸಿಗೆ ಬರೋ ಕೆಲವು ಇಲ್ಲಿವೆ:
  • ಹೆಚ್ಚಾಗಿ ಲಿಪಿ ತಂತ್ರಾಂಶಗಳು ಬಳಸೋ ಫಾಂಟ್-ಗಳು ಯೂನಿಕೋಡಿನಲ್ಲಿ ಬಹಳ ಸೀಮಿತ ರೀತಿಯಲ್ಲಿ ಸಿಗತ್ವೆ. ಆದ್ರಿಂದ ಇವುಗಳ್ನ ಉಪ್ಯೋಗ್ಸಿದ್ರೆ ಸುಮಾರು ಕಡೆ ಕನ್ನಡ ಅಕ್ಷರಗಳ ಬದ್ಲು "?" ಚಿನ್ನೆಯೇ ಗತಿ! ಇಂತಹ ಯಾವುದೇ ಫಾಂಟ್ ಗಳು ಪೂರ್ತಿಯಾಗಿ ಯೂನಿಕೋಡ್‍ನಲ್ಲಿ ದೊರೆಯಬೇಕು.
  • ಎಷ್ಟೇ ಬಗೆಯ ತಂತ್ರಜ್ಞಾನಗಳು ಕನ್ನಡದಲ್ಲಿ ಬಂದ್ರೂ ಇನ್ನೂ ನಾವು ಒಂದು ಗಣಕದೊಡನೆ ಮಾತಾಡಲು ಕನ್ನಡದ್ದೇ ಆದ ಕೀಲಿಮಣೆ ಮಾಡ್ಕೊಂಡಿಲ್ಲ! ಇದು ಕೂಡಲೆ ಬೇಕಿರೋ ಒಂದು ವಸ್ತು ಗುರು! ಇದಿಲ್ಲದೆ ನಾವೆಲ್ಲರೂ ಇಂಗ್ಲೀಷ್ ಕೀಲಿಮಣೇನೇ ಇಟ್ಕೊಂಡು ಕನ್ನಡ ಕುಟ್ತಾ ಇರೋದು ಒಂಥರಾ ಪೆದ್ದತನಾನೇ ಗುರು!
  • Windows XPನಲ್ಲೂ ಕನ್ನಡ language-interface-pack/support ಗಳು ಇಂದಿಗೂ ಪೂರ್ತಿಯಾಗಿಲ್ಲ. ಇದು ಪೂರ್ತಿಯಾಗೋವರ್ಗೂ ಅದರ ಉಪ್ಯೋಗ ಸೊನ್ನೇನೇ ಗುರು! ವಿಂಡೋಸ್ನಲ್ಲಿ ಪ್ರತಿಯೊಂದು ಹಂತದಲ್ಲೂ ನಮಗೆ ಕನ್ನಡದ ಉಪ್ಯೋಗವೇ ಮಾಡೋ ಹಾಗಿರ್ಬೇಕು. ಮತ್ತೆ ಇದರಲ್ಲಿ ಎಲ್ಲೆಡೆ ಕನ್ನಡದ ಅಕ್ಷರಗಳು ಸರಿಯಾಗಿ ಕಾಣಬೇಕು.
  • ಲಿನಕ್ಸ್ (Linux) ನಲ್ಲಂತೂ ಎಲ್ಲಾನೂ ನೀವೇ ಮಾಡ್ಕೊಳಿ ಅಂತ ಇಡೀ ಸೋರ್ಸ್-ಕೋಡ್ ಬಿಟ್ಟಿಯಾಗಿ ನಮ್ಮ ಮುಂದೆ ಇಟ್ಟಿದಾರೆ. ಬಳಕೆದಾರನಿಗೆ ಕನ್ನಡದ ಅನುಭವ ಕೊಡಿಸೋದು ಕನ್ನಡಿಗರದೇ ಕೆಲಸ ಇವತ್ತಿನ ದಿನ. ಆದರೆ ನಮ್ಮ ಕನ್ನಡಿಗರು ಈ KDE/GNOME ಅನುವಾದದ ಯೋಜನೆಯಲ್ಲೂ ಎಷ್ಟು ಹಿಂದಿದಾರೆ ಅಂತ ಯೋಚನೆ ಮಾಡಿದರೇ ನಾಚಿಕೆಯಾಗತ್ತೆ!
  • KDE/GNOME/Windows XP ಗಳ್ನ ಅನುವಾದ ಮಾಡೋರು ಕನ್ನಡದ ಪದಗಳ್ನ ಮರೆತು ಯಾರ ಬಾಯಲ್ಲೂ ಹೊರಳದಂಥಾ ಸಂಸ್ಕೃತದ ಪದಗಳ್ನ ಉಪಯೋಗಿಸಿದರೆ ಹೇಗೆ?
  • ಇಂದು ನಾವು ಕಾಣ್ತಿರೋ ಕನ್ನಡದ ಅಂತರ್ಜಾಲತಾಣಗಳಲ್ಲಿ ಅನೇಕವುಗಳ್ನ ಓದಕ್ಕೇ ಆಗಲ್ಲ. ಆ ತಾಣಗಳಿಗೆ ಹೋದ ಕನ್ನಡಿಗ ಏನೇನು ದೊಮ್ಮರಾಟ ಮಾಡುದ್ರೂ ಕನ್ನಡ ಕಾಣಿಸಲ್ಲ. ಇಲ್ಲಿ ಯೂನಿಕೋಡನ್ನು ಪಾಲಿಸದೇ ಇರೋದೇ ಕಾರಣ. ಪ್ರತಿ ಕನ್ನಡ ತಾಣವೂ ಯೂನಿಕೋಡನ್ನ ಪಾಲಿಸ್ಬೇಕು.
  • ಕನ್ನಡದಲ್ಲಿ ಲೇಟೆಕ್ ಇದೆ. ಯಾವುದೇ ಕನ್ನಡದ ಬರಹವನ್ನ PDFಆಗಿ ಮಾಡಲು ಸಹಾಯ ಏನೋ ನೀಡತ್ತೆ, ಇದ್ರೂ ಇದ್ರಲ್ಲೂ ಕಿರೀಕು ಅಂದ್ರೆ ಗಣಕದೊಡನೆ ಮಾತಾಡೋದು ಒಂದು ವಿಚಿತ್ರವಾದ ಕಂಗ್ಲಿಷಿನಲ್ಲೇ!
  • ಬರಹ ತಂತ್ರಾಂಶವು ಚೆನ್ನಾಗೇ ಇದೆ, ಆದ್ರೆ ಅದು ವಿಂಡೋಸ್-ನಲ್ಲಿ ಬಿಟ್ಟು ಇನ್ನ್ಯಾವ ಓ.ಎಸ್.ನಲ್ಲೂ ಸಿಗಲ್ಲ
ಜಗತ್ತಿನ ಬೇರೆ ಭಾಷೆಗಳಿಗೆ ಹೋಲಿಸಿದ್ರೆ ಕನ್ನಡದಲ್ಲಿ ಇನ್ನೂ ಸಕ್ಕತ್ ಕೆಲಸ ಆಗಬೇಕಾಗಿದೆ! ಜಪಾನ್ನವರ, ಚೈನಾದವರ ಬಹಳ ಕಷ್ಟ ಎನ್ನಲಾಗಿರೋ ಲಿಪಿ ಉಳ್ಳ ಭಾಷೆಗಳಲ್ಲಿ ಇಂಗ್ಲಿಷಿನ ಸಮಾನವಾದ ಸೌಕರ್ಯಗಳು ಈಗಾಗ್ಲೇ ಗಣಕಗಳಲ್ಲಿ ದೊರೆಯತ್ತೆ. ಸಕ್ಕತ್ ವೈಜ್ಞಾನಿಕ ಲಿಪಿ ಅಂತ ಕರೆಸಿಕೊಳ್ಳೋ ಕನ್ನಡಕ್ಕೇನು ಧಾಡಿ?!

ತೊಂದರೆಗಳ್ನ ಬಗೆಹರಿಸಲು ಏನೇನಾಗಬೇಕು?

ಮೇಲಿನ ತೊಂದರೆಗಳು ಬಗೆಹರಿದು ಗಣಕ ಆನುಮಾಡಿದ ತಕ್ಷಣ ಪೂರ್ತಿ ಕನ್ನಡದಲ್ಲಿ ಯಾವುದೇ ಕಿರೀಕೂ ಇಲ್ಲದೆ ವ್ಯವಹರಿಸೋ ಕನಸು ನನಸಾಗಬೇಕಾದ್ರೆ ಈ ಕೆಳಗಿನವು ಆಗಬೇಕು ಗುರು:
  • ಗಣಕದಿಂದ ಇಂಗ್ಲೀಷ್ನ ತೆಗೆಯಕ್ಕೆ ಆಗೋದೇ ಇಲ್ಲ ಅನ್ನೋ ಯೋಚನೆ ಕೈಬಿಡಬೇಕು. ಎಲ್ಲವೂ ಕನ್ನಡದಲ್ಲೇ ಸಾಧ್ಯ ಅನ್ನೋ ಗುರಿ ಇಟ್ಕೋಬೇಕು. ಯಾಕೆ ಸಾಧ್ಯವಿಲ್ಲ? ಕನ್ನಡಕ್ಕೆ ಯಾವ ರೋಗವೂ ಬಂದಿಲ್ಲ. ಬಂದಿರೋದು ನಿಜವೇ ಆದರೆ ಅದು ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿರೋ ಕನ್ನಡಿಗರಿಗೆ!
  • ಕನ್ನಡಿಗರು ಒಗ್ಗಟ್ಟಿಂದ ಕೆಲಸಗಳ್ನ ಮಾಡಬೇಕು. ಇವತ್ತಿನ ದಿನ ಪ್ರಪಂಚದಲ್ಲಿ ಎಲ್ಲೇ ಕೂತಿದ್ದರೂ ಅಂತರ್ಜಾಲದಲ್ಲಿ ಸಹಕರಿಸಿ ಕೆಲ್ಸ ಮಾಡಬಹುದು. ಮಾಡಿದ್ದನ್ನೇ ಮಾಡ್ಕೊಂಡು ಕಿಸ್ಬಾಯಿದಾಸ ಅಂದಹಾಗೆ ಇವತ್ತಿಂದ ಹತ್ತು ವರ್ಷ ಆದರೂ ಅದದೇ ಕೆಲ್ಸಗಳ್ನ ಮಾಡ್ತಾ ಇದ್ರೆ ನಮ್ಮಲ್ಲಿ ಸಹಕಾರದ ಬುದ್ಧಿ ಇಲ್ಲ ಅಂತ ತೋರ್ಸತ್ತೆ, ಅಷ್ಟೆ. ಹೀಗೇ ಮುಂದುವರೆದ್ರೆ ನಾವು ಉದ್ಧಾರ ಆದ್ವಿ, ಅದಾಯ್ತು!
  • ಮೂಲಭೂತ ಹಂತದಲ್ಲಿ ಸಂಶೋಧನೆ/ಅಭಿವೃದ್ಧಿಗಳ್ನ ಮಾಡಕ್ಕೆ ನಾವು ಹಿಂಜರೀಬಾರ್ದು, ನಮ್ಮ ವಿ.ವಿ.ಗಳು ಅಂಜಬಾರದು. ಉದಾಹರಣೆಗೆ ಇಂಗ್ಲೀಷಿನ ಕೀಲಿಮಣೇನೇ ನಮಗೆ ಗತಿ ಅಂತ ಹೇಳಿದೋರು ಯಾರು? ಅಂತರ್ಜಾಲ ತಾಣಗಳ ವಿಳಾಸಗಳು ರೋಮನ್ ಅಕ್ಷರಗಳಲ್ಲೇ ಇರಬೇಕು ಅಂತ ಹೇಳಿದೋರು ಯಾರು? ಪ್ರೋಗ್ರಾಮಿಂಗ್ ಕನ್ನಡದಲ್ಲಿ ಆಗಲ್ಲ ಅಂದೋರು ಯಾರು?
  • ಹೊಸ ಪದಗಳ್ನ ಹುಟ್ಟಿಸುವಾಗ ಆದಷ್ಟೂ ಆಡುನುಡಿಯಿಂದ್ಲೇ ಪದಗಳ್ನ ತೊಗೋಬೇಕು, ಬಾಯಲ್ಲಿ ಹೊರಳೋ ಪದಗಳ್ನೇ ಹುಟ್ಟಿಸಬೇಕು (ಆದು ಸಂಸ್ಕೃತದಿಂದ ಬಂದರೂ ತೊಂದರೆಯಿಲ್ಲ).
  • ಉದ್ದಿಮೆದಾರರು ಕನ್ನಡದ ತಂತ್ರಾಂಶಗಳ್ನ ತಯಾರಿಸಿ ಕರ್ನಾಟಕದಲ್ಲಿರೋ 5.5ಕೋಟಿ ಕನ್ನಡಿಗರ ಮಾರುಕಟ್ಟೇನ ಮುಟ್ಟೋ ಗುರಿ ಇಟ್ಟುಕೊಳ್ಳಬೇಕು. ಕನ್ನಡ ಅಂದ ತಕ್ಷಣ ಏನೋ ದಾನ-ಧರ್ಮ ಅನ್ನೋ ಅನಿಸಿಕೆ ಬಿಟ್ಟು ವ್ಯಾಪಾರ ಅಂತ ತೊಗೋಬೇಕು.
  • ಸರ್ಕಾರ ಇದರಲ್ಲೆಲ್ಲ ತನ್ನ ಪಾತ್ರ ಏನು ಅಂತ ಅರ್ಥ ಮಾಡ್ಕೋಬೇಕು. ಸರ್ಕಾರದ ಪಾತ್ರ ಈ ಕೆಲಸಗಳೆಲ್ಲಾ ಸುಗಮವಾಗಿ ಆಗೋಹಾಗೆ ನೋಡಿಕೊಳ್ಳೋದೇ ಹೊರತು, ವಿ.ವಿ.ಗಳಿಗೆ ಯೋಜನೆಗಳ್ನ ನಡೆಸೋದಕ್ಕೆ ದುಡ್ಡು ಕೊಡೋದೇ ಹೊರತು ತಾನೇ ತಂತ್ರಾಂಶಗಳ್ನ ಅಭಿವೃದ್ಧಿ ಪಡಿಸೋದಲ್ಲ (ಒಂದು ಕಾಲದಲ್ಲಿ ಸರ್ಕಾರ ಹೋಟೆಲ್ ನಡೆಸುತ್ತಾ ಇತ್ತು. ಆ ಕಾಲ ಹೋಯ್ತು!).
ಏನ್ ಗುರು?

ಜಯಲಲಿತಾ ಮೈಸೂರಲ್ಲಿದ್ದಾಗ ಕನ್ನಡ ಮಾತಾಡ್ತಿದ್ರೋ ಇಲ್ಲವೋ?

"ನಾನು ಮೈಸೂರಲ್ಲಿ ಹುಟ್ಟಿರಬಹುದು, ಆದರೂ ನಾನು ಕನ್ನಡತಿಯಲ್ಲ, ನನ್ನ ಮೈಯಲ್ಲಿ ಹರಿಯುತ್ತಿರುವುದು ತಮಿಳು ರಕ್ತ" ಅಂತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಅವರ ಒಂದು ಹೇಳಿಕೆ ನೆನ್ನೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಯಾಗಿದೆ. ಯಾವ ತಮಿಳ್ನಾಡಿನ ಸೀರೆ-ಪಂಚೆ ರಾಜಕೀಯದ ಉಸಾಬರೀಗೂ ಹೋಗದೆ ಜಯಲಲಿತಾ ಔರಿಗೆ ಒಂದು ಚಿಕ್ಕ ಪ್ರಶ್ನೆ ಹಾಕಿ ನಮ್ಮ ಕೆಲಸ ಮುಗಿಸೋಣ.

ಮೈಸೂರಿಂದ ಮದರಾಸಿಗೆ

ಅಕಸ್ಮಾತ್ ನಿಮಗೆ ಗೊತ್ತಿಲ್ಲದೇ ಇದ್ರೆ...ಜಯಲಲಿತಾ ಔರು ಮೈಸೂರಲ್ಲಿ ಹುಟ್ಟಿ ವಲಸೆ ಹೋಗಿದ್ದು ತಮಿಳುನಾಡಿಗೆ. ಅಲ್ಲೇ ದುಡಿಮೆ ಮಾಡಿ, ಜನ ಮೆಚ್ಚುಗೆ ಗಳಿಸಿ, ಕೊನೆಗೆ ತಮಿಳು ಜನಗಳನ್ನು ಪ್ರತಿನಿಧಿಸಿ ರಾಜ್ಯದ ಮುಖ್ಯಮಂತ್ರಿಯೂ ಆಗಿ ರಾಜಕೀಯವಾಗೂ ಏಳಿಗೆ ಪಡೆದದ್ದು ತಮಿಳುನಾಡಿನಲ್ಲೇ.

ಜಯಲಲಿತಾ ಔರಿಗೆ ಒಂದು ಬಹಿರಂಗ ಪ್ರಶ್ನೆ

ಜಯಲಲಿತಾ ಔರು ತಮ್ಮ ರಕ್ತದ ಬಗ್ಗೆ ಒಂದು ಸಕ್ಕತ್ ಡೈಲಾಗ್ ಹೊಡೆದಿರೋದು ಹಾಗಿರಲಿ. ಆದ್ರೆ ಇಲ್ಲಿ ನಮ್ಮ ಪ್ರಶ್ನೆ:
ಮೈಸೂರಲ್ಲಿದ್ದಾಗ ಈಕೆ ಕನ್ನಡ ಮಾತಾಡ್ತಾ ಇದ್ದರೋ ಇಲ್ಲವೋ? ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಇವರು ಪೂರಕವಾದಂಥಾ ನಿಲುವುಗಳ್ನ ಇಟ್ಟುಕೊಂಡಿದ್ದರೋ ಇಲ್ಲವೋ?

ಇವರ ಉತ್ತರ "ಹೌದು, ಕನ್ನಡ ಮಾತಾಡ್ತಾ ಇದ್ದೆ, ಪೂರಕವಾದ ನಿಲುವುಗಳ್ನ ಇಟ್ಕೊಂಡಿದ್ದೆ" ಅನ್ನೋದಾದರೆ (ಆದರೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ತೀರ್ಮಾನ ನಮ್ಮದಲ್ಲ) ಇವತ್ತು ಔರು ತಮ್ನ ತಮಿಳ್ನೋರು ಅಂತ ಕರ್ಕೊಂಡ್ರೂ "ಭೇಷ್! ನೀವು ಮೈಸೂರಲ್ಲಿದ್ದಾಗ ಕನ್ನಡತಿಯೇ ಆಗಿದ್ದಿದ್ದು" ಅಂತ ಔರಿಗೆ ಹೇಳಬೇಕು. ಯಾಕೇಂತೀರಾ? ಒಂದು ಪ್ರದೇಶದಲ್ಲಿ ವಾಸ ಮಾಡೋ ಬೇರೆ ತಾಯಿನುಡಿಯ ಜನರು ಆಯಾ ಪ್ರದೇಶದ ಭಾಷೆ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು, ಆಯಾ ಭಾಷಾ ಜನಗಳ, ಪ್ರಾಂತ್ಯದ ಅನನ್ಯತೆಗೆ ಪೂರಕವಾಗಿ ಬದುಕು ಸಾಗಿಸಿದ್ರೆ ಆಯಾ ಭಾಷಿಕರೇ ಆಗಿ ಹೋದಂಗೆ ಗುರು. ಹಾಗಾಗೇ ನಾವೆಲ್ಲ ಮಾಸ್ತಿ, ಬೇಂದ್ರೆ ಮೊದಲಾದೋರ್ನ ಕನ್ನಡಿಗರು ಅಂತ ಕರ್ಯೋದು. ಕರ್ನಾಟಕಕ್ಕೆ ಯಾವಾಗಲೋ ನೂರಾರು ವರ್ಷಗಳ ಹಿಂದೆ ವಲಸೆ ಬಂದೋರ ಮನೆಯಲ್ಲಿ ಹುಟ್ಟಿದ ಜನ ತಮ್ಮ ಮನೆ ಮಾತು ಬೇರೆ ಅನ್ನೋ ಕಾರಣಕ್ಕೆ ತಾವು ಕನ್ನಡದವರಲ್ಲ ಅಂದುಕೊಳ್ಳೋದು ಮಹಾ ತಪ್ಪು!

ಇದು ಬಿಟ್ಟು "ಇಲ್ಲ, ನಾನು ಮೈಸೂರಲ್ಲಿ ಕನ್ನಡ ಮಾತಾಡ್ತಾ ಇರಲಿಲ್ಲ, ನಾನು ಕರ್ನಾಟಕದಲ್ಲಿ ಇದ್ದುಗೊಂಡೂ ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಪೂರಕವಾದ ನಿಲುವುಗಳ್ನ ಇಟ್ಕೊಂಡಿರಲಿಲ್ಲ" ಅನ್ನೋದಾದರೆ (ತಿರ್ಗಾ ಆದರೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ತೀರ್ಮಾನ ನಮ್ಮದಲ್ಲ) ಮ್ಯಾಟ್ರು ಒಸಿ ಬೇರೇನೇ ಆಗೋಗತ್ತೆ. ಯಾಕೇಂತೀರಾ? ಇಲ್ಲೇ ಹುಟ್ಟಿ, ಓದು-ಬರಹ ಕಲ್ತು, ಯೌವನ ಕಳೆದು, ಇಲ್ಲೀ ಸೌಲತ್ತುಗಳ್ನೆಲ್ಲಾ ಬಳಸಿಕೊಂಡು, ಇಲ್ಲೀ ಉಪ್ಪು ತಿಂದು, ಇಲ್ಲೀ ನೀರು ಕುಡಿದು, ಇಲ್ಲೀ ಸಂಸ್ಕೃತಿಗೆ, ಇಲ್ಲೀ ನಾಡು-ನುಡಿ-ನಾಡಿಗರಿಗೆ ಗೌರವ ಕೊಡದೇ ಇದ್ದೆ ಅನ್ನೋ ಮಾತು ಇವರಿಗೆ ಶೋಭಿಸೋದೇ ಇಲ್ಲ ಗುರು! ಇವತ್ತಿನ ದಿನ ಬೆಂಗ್ಳೂರಲ್ಲಿ ಕೆಲವು ವಲಸಿಗ್ರು ಇದಾರಲ್ಲ - ಉಂಡ ಮನೆಗೇ ಎರಡು ಬಗೆಯೋಂಥೋರು, ಕನ್ನಡಾನ ಕಸದಬುಟ್ಟೀಗೆ ಎಸಿಯೋರು, ನಮಗೇ ಔರ್ ಭಾಷೆ ಕಲಿಸ್ತೀವಿ ಅನ್ನೋ ಸೊಕ್ಕಿನ ಜನ - ಔರಿಗೂ ಇವ್ರಿಗೂ ಏನು ವೆತ್ಯಾಸ ಅಂತ ಕೇಳಬೇಕಾಗತ್ತೆ (ಆಗತ್ತೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ಹೇಳ್ತಿಲ್ಲ).

ಏನ್ ಜಯಲಲಿತಾ ಔರೆ? ನಿಮ್ಮ ಉತ್ತರ ಏನು?

ಹಿಂದಿ ಹೇರಿಕೆ ಅಲ್ಲವಂತೆ, ಉತ್ತೇಜನವಂತೆ! ಏನ್ ವೆತ್ಯಾಸ ಬುದ್ದಿ?

ರಾಜ್ಯೋತ್ಸವ ಆಗಿ ಒಂದು ದಿನ ಆಗಕ್ಕಿಲ್ಲ, ಕನ್ನಡಿಗರಿಗೆ ಕನ್ನಡಪ್ರಭದ ಸಂಪಾದಕೀಯ ಹಿಂದೀನ ನಾವು ಕಣ್ಮುಚ್ಚಿಕೊಂಡು ಒಪ್ಕೋಬೇಕು ಅನ್ನೋ ವಿಷದ ಚುಚ್ಚುಮದ್ದು ಕೊಡ್ತು. ಆದ್ರೆ ಅದನ್ನ ತೊಗೊಳಕ್ಕೆ ನಾವೇನು ಕಿಮೇಹೂ (ಕಿವಿ ಮೇಲೆ ಹೂ) ಮಡೀಕೊಂಡಿಲ್ಲವಲ್ಲ? ಅವತ್ತಿನ ಕನ್ನಡಪ್ರಭ ಸಂಪಾದಕೀಯಕ್ಕೂ (ಕಪ್ರಸಂ-ಗೂ) ಏನ್ಗುರುಗೂ ಮಾತುಕತೆ ಒಸಿ ಹಿಂಗ್ ನಡೀತು:

ಕಪ್ರಸಂ ಇಂತೆಂದಿತು:

ಹಿಂದಿಯನ್ನು ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿ ಕಡ್ಡಾಯದ ಪ್ರಶ್ನೆಯೇ ಇಲ್ಲ.

ಮೇಲಿನ ಬಾಲಿಶ ವಿಶ್ಲೇಷಣೆಯಿಂದ ಮುಗುಳ್ನಕ್ಕು ಏನ್ಗುರುವು ಇಂತೆಂದನು:

ಇಲ್ಲಿ ಲಕ್ಷಾಂತರ ಮಕ್ಕಳು ತಾವೇ ಮೇಲೆ ಬಿದ್ದು ಹಿಂದಿ ಕಲೀತಿದಾರಂತೆ! ಯಾಕೆ ಕಲಿತಾರು ಸ್ವಾಮಿ? ಹಿಂದೀಗೂ ನಮಗೂ ಏನು ಸಂಬಂಧ? ಹಿಂದೀನೇ ಯಾಕೆ ಕಲಿತಾರು? ಹಿಂದಿ ಬದ್ಲು ಸಿಂಹಳ ಭಾಷೇನೋ ಸ್ವಾಹಿಲಿ ಭಾಷೇನೋ ಯಾಕೆ ಕಲೀತಿಲ್ಲ ಸ್ವಾಮಿ? ಯಾಕೆ ಗೊತ್ತಾ? ಕನ್ನಡದ ಮುಗ್ಧ ಮಕ್ಕಳಿಗೆ ಕಡ್ಡಾಯವಾಗಿ ಹಿಂದಿ ಕಲೀಲೇಬೇಕು ಅಂತ ತ್ರಿಭಾಷಾ ಸೂತ್ರ ಅನ್ನೋ ಶಿಕ್ಷೆ ಜಡಿದಿದಾರಲ್ಲ, ಅದೇ ಕಾರಣ! ಇದು ಕಡ್ಡಾಯ ಅಲ್ಲದೆ ಇನ್ನೇನು, ಬುದ್ದಿ?

ಕನ್ನಡದ ಪಠ್ಯಪುಸ್ತಕದಲ್ಲೇ ಹಿಂದೀನ ರಾಷ್ಟ್ರಭಾಷೆ ಅನ್ನೋ ಸುಳ್ಳು ಹೇಳ್ಕೊಟ್ಟು ಹಿಂದೀನ ಕಣ್ಮುಚ್ಚಿಕೊಂಡು ಒಪ್ಕೋಬೇಕು ಅನ್ನೋ ವಾತಾವರಣ ಹುಟ್ಟಿಸಿಬಿಟ್ಟು "ಔರೇ ಸ್ವಂತವಾಗಿ ಕಲೀತಿದಾರೆ" ಅಂದ್ರೆ ಎಲ್ಲೀ ನ್ಯಾಯ ಸ್ವಾಮಿ?

ಕಪ್ರಸಂ ಇಂತೆಂದಿತು:

ಅಖಿಲ ಭಾರತ ಸಂಸ್ಥೆಗಳಲ್ಲಿ ಹಿಂದಿ ಬಳಕೆ ವಿರೋಧಿಸುವ ಚಳವಳಿಯೂ ಇಲ್ಲಿ ಇಲ್ಲ.

ಒಳಗುಟ್ಟನ್ನರಿಯದ ಕಪ್ರಸಂ-ನನ್ನು ಕುರಿತು ಏನ್ಗುರುವು ಇಂತೆಂದನು:

ಕರ್ನಾಟಕದಲ್ಲಿ ಅಖಿಲ ಭಾರತ ಸಂಸ್ಥೆಗಳಲ್ಲಿ ಹಿಂದಿ ಬಳಕೇನ ಯಾರೂ ಯಾಕೆ ವಿರೋಧಿಸ್ತಾ ಇಲ್ಲ ಗೊತ್ತಾ ಮಾಹಾಸ್ವಾಮಿ? ಯಾಕೇಂದ್ರೆ ಹಿಂದಿ ಕಲ್ತ್ರೆ ನಿಮಗೆ ಭಡ್ತಿ ಕೊಡ್ತೀವಿ, ಹಿಂದಿ ಕಲ್ತ್ರೆ ನಿಮಗೆ ಸಂಬಳ ಹೆಚ್ಚಿಸ್ತೀವಿ, ಹಿಂದಿ ಕಲ್ತ್ರೆ ನಿಮಗೆ ಚಾಕ್ಲೇಟ್ ಕೊಡ್ತೀವಿ, ನಿಮಗೆ ಲಾಲಿಪಪ್ಪು ಕೊಡ್ತೀವಿ ಅಂತ ಆಸೆ ತೋರ್ಸಿ ಕೂಡ್ಸಿದಾರಲ್ಲ, ಅದೇ ಕಾರಣ ಸ್ವಾಮಿ! ಇಷ್ಟೆಲ್ಲಾ ಆಮಿಷ ತೋರಿಸಿದರೆ ಪಾಪ ಆ ಸಂಸ್ಥೆಗಳ ಒಳಗೇ ಯೇಗಬೇಕಾಗಿರೋ ಕನ್ನಡಿಗರು ಹೇಗೆ ತಾನೆ ಚಳುವಳಿ ಮಾಡಾರು ಬುದ್ದಿ? ಬಡವ, ನಾ ಮಡಗಿದಂಗೆ ಇರ್ತೀನಿ ಅಂತ ಸುಮ್ನೆ ಕೂತೌರೆ ಬುದ್ದಿ! ಇಷ್ಟೂ ಅರ್ಥ ಆಗಿಲ್ವಾ ನಿಮಗೆ?

ಕಪ್ರಸಂ ಇಂತೆಂದಿತು:

ರಾಜ್ಯದಲ್ಲಿ ಸದ್ಯಕ್ಕೆ ಹಿಂದಿ ಹೇರಿಕೆಯ ವಾತಾವರಣ ಇಲ್ಲ. ಆದರೆ ಹಿಂದಿಗೆ ಉತ್ತೇಜನ ನೀಡುವ ವ್ಯವಸ್ಥೆ ಇದೆ. ಅದೇ ಸರಿಯಾದ ನೀತಿ.

ತರವಲ್ಲದ ತಂಬೂರಿ ಸ್ವರವನ್ನು ಬಾರಿಸಿದ ಕಪ್ರಸಂ-ನನ್ನು ಕುರಿತು ತುಸು ಕೋಪಗೊಂಡು ಏನ್ಗುರುವು ಇಂತೆಂದನು:

ತಕ್ಕೋ! ಬುಟ್ಬುಟ್ರು ಪದಗಳಲ್ಲಿ ನಿಜಾಂಶವನ್ನ ತೇಲಿಸಿಬಿಡೋ ವಾಕ್ಯಾನ! ಅಲ್ಲಾ, ಹೇರಿಕೆಗೂ ಉತ್ತೇಜನಕ್ಕೂ ವೆತ್ಯಾಸವಾದ್ರೂ ಏನೆಂದು ಹೇಳುವಂತವನಾಗು ಓ ಪದಪ್ರಯೋಗವಿಶಾರದನೆ! "ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕು ಕೊಲೆ ನಡಿಯಬೇಕು ಎಂಬ ಹೇರಿಕೆ ಇಲ್ಲ" ಅನ್ನೋ ವಾಕ್ಯಕ್ಕೂ "ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕು ಕೊಲೆ ನಡೆಯುವುದಕ್ಕೆ ಉತ್ತೇಜನ ನೀಡುವ ವ್ಯವಸ್ಥೆ ಇದೆ" ಅನ್ನೋ ವಾಕ್ಯಕ್ಕೂ ಏನು ವೆತ್ಯಾಸ ಅಂತ ಒಸಿ ತಿಳಿಸಿಕೊಡಿ ಬುದ್ದಿ!

ಈ ನಾಟಕಗಳ್ನ ಬಿಟ್ಟು, ನಿಜದಿಂದ ದೂರ ಹೋಗದೆ ನಿಂತು ನೋಡಿ, ನಿಮಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ, ಮಾರುಕಟ್ಟೆಯಲ್ಲಿ, ಗ್ರಾಹಕಸೇವೆಯಲ್ಲಿ, ಮನರಂಜನೆಯಲ್ಲಿ - ಪ್ರತಿಯೊಂದರಲ್ಲೂ ನಡೀತಿರೋ ಹಿಂದಿ ಹೇರಿಕೆ ಕಣ್ಣಿಗೆ ಕಾಣತ್ತೆ. ಈ ಹಿಂದಿ ಹೇರಿಕೆ ಅನ್ನೋದು ಕನ್ನಡಿಗರ ಮೇಲೆ ಬಿದ್ದಿರೋ ಒಂದು ಶಾಪ. ಇದರಿಂದ ಕನ್ನಡಕ್ಕೆ ಕನ್ನಡನಾಡಿನಲ್ಲೇ ಸಾರ್ವಭೌಮತ್ವ ಇಲ್ಲದಂತಾಗಿದೆ. ಇದರಿಂದ ಕನ್ನಡಿಗನಿಗೆ ತನ್ನ ನುಡಿಯ ಬಗ್ಗೇನೇ ಕೀಳರಿಮೆ ಹುಟ್ಟಿದೆ, ತನ್ನ ನಾಡಿನ ಬಗ್ಗೇನೇ ಕೀಳರಿಮೆ ಹುಟ್ಟಿದೆ.

ಇದು ಯಾವ ರೀತೀಲೂ "ಸರಿಯಾದ ನೀತಿ" ಖಂಡಿತ ಅಲ್ಲ! ಇದನ್ನ "ಸರಿಯಾದ ನೀತಿ" ಅಂತ ಒಪ್ಕೊಳೋದೂ ಒಂದೆ, ಪ್ರತಿಯೊಬ್ಬ ಕನ್ನಡಿಗಾನೂ ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳ್ಕೊಳೋದೂ ಒಂದೇ! ಆದ್ದರಿಂದ ಈ ಹಿಂದಿ ಹೇರಿಕೆಗೆ ಒಂದು ಚೂರೂ ಸೊಪ್ಪು ಹಾಕಬಾರದು!

ಕೊಡಗಿನಲ್ಲಿ ಕೊಡವನೇ ಅರಸ ಅಂತ ಮರೀಬಾರದು

ಕಳೆದ ವರ್ಷ ಕರ್ನಾಟಕ ಸರ್ಕಾರ ಕೊಡವರಿಗೆ ಸಂಬಂಧ ಪಟ್ಟ ಒಂದು ಆದೇಶ ಹೊರಡಿಸಿತ್ತು. ಆ ಒಂದು ಆದೇಶದ ಮೂಲಕ ಕೊಡವರಿಗೆ ಜುಮ್ಮ/ಬಾಣೆ ಜಮೀನಿನ ಮೇಲಿನ ಹಕ್ಕು ಉಳಿಸಿಕೊಡೋ ಒಳ್ಳೇ ಕೆಲಸಾನ ಸರ್ಕಾರ ಮಾಡ್ತು. ಆದ್ರೆ ತಲೆಮಾರುಗಳಿಂದ ಇದ್ದ ಹಕ್ಕನ್ನು ಮೊಟಕುಗೊಳಿಸಿ, ಕೊಡವರ ಬದುಕಿಗೆ ಮುಳುವಾಗಿದ್ದ 2004ರ ಎರಡು ಕಾಯ್ದೇನ ಹಿಂಪಡೆಯೋ ಸುತ್ತೋಲೆ ಹೊರಡ್ಸಿದ್ರೂ ಇನ್ನೂ ಜಾರಿಯಾಗಿಲ್ಲ. ಕೊಡಗಿನಲ್ಲಿ ಕೊಡವರ ಕಾಫಿ ತೋಟಗಳನ್ನು ಅವರವರ ಹೆಸರಿಗೆ ಅಧಿಕೃತಗೊಳಿಸಿರೋ ಆದೇಶ ಅಲ್ಲಿ ಜನರ ಕೈಗಿನ್ನೂ ಸಿಕ್ಕದೆ ಬೆಳೆಸಾಲ ಕೂಡಾ ಹುಟ್ತಿಲ್ಲ. ಇದು ಕೊಡವರ ಆರ್ಥಿಕ ಏಳಿಗೆಗೆ ಕೊಡಲಿ ಪೆಟ್ಟಾಗಿದ್ದು ಕೊಡಗಿನಲ್ಲೇ ಕೊಡವರ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಂತಾಗಿರೋದು ಸರಿಯಲ್ಲ ಗುರು.

ತಲತಲಾಂತರದಿಂದ ಇದ್ದ ಹಕ್ಕು ಮೊಟಕು ಮಾಡೋದು ತಪ್ಪು

ಮೈಸೂರು ಮಹಾರಾಜರ ಕಾಲದಲ್ಲಿ ಸರ್ಕಾರಿ ಜಾಗದಲ್ಲಿ ವ್ಯವಸಾಯ ಮಾಡಲು ಜುಮ್ಮ ಮತ್ತು ಬಾಣೆ ಕಾಯ್ದೆಗಳ ಮೂಲಕ ಕೊಡವರಿಗೆ ಅವಕಾಶ ಮಾಡಲಾಯಿತು. ಕೊಡಗಿನಲ್ಲಿ ಅನೇಕರಿಗೆ ಈ ರೂಪದಲ್ಲಿ ಜಮೀನು ಸಿಕ್ತು. ಈಗ ಅರಣ್ಯ ಇಲಾಖೆಗೆ ಸೇರಿಕೊಂಡಿರೋ ಆ ಭೂಮಿಯ ಮೆಲಿನ ಹಕ್ಕನ್ನು ಮೊಟಕುಗೊಳಿಸೋ ಕೆಲ್ಸಾನ 2004ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಒಂದು ಆದೇಶದ ಮೂಲಕ ಮಾಡ್ತು. ಕೊಡವರು ತಮ್ಮ ನೆಲದ ಮೇಲೆ ತಲತಲಾಂತರದಿಂದ ಇರೋ ಹಕ್ಕನ್ನು ಹೀಗೆ ಕಿತ್ಕೊಳ್ಳೋದು ಸರೀನಾ ಅಂತ ಗೋಳಾಡ್ತಾ ಇದಾರೆ. ಇವರ ಗಾಯಕ್ಕೆ ಉಪ್ಪು ಸವರುವಂತೆ ತಲಕಾವೇರಿ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಪ್ರಸ್ತಾಪಿಸಲಾಗುತ್ತಿದ್ದು, ಇದರ ಮೂಲಕ ತಮ್ಮ ನೆಲ ಹಾಗೂ ನೆಲೆಯನ್ನು ಕಳಕೊಳ್ಳೊ ಭಯ ಅಲ್ಲಿ ಜನರನ್ನು ಕಾಡ್ತಿದೆ.
ಕೊಡಗಿಗೆ ಕೊಡವನೇ ಅರಸ
ಕೊಡಗಿನಲ್ಲಿ ಕೊಡವರೇ ಸಾರ್ವಭೌಮ ಜನ, ಕೊಡವ ಭಾಷೆಯೇ ಸಾರ್ವಭೌಮ ಭಾಷೆ ಅನ್ನೋದರಲ್ಲಿ ಯಾರಿಗೂ ಸಂದೇಹ ಬೇಡ. ಇವಕ್ಕೆ ಮಾರಕವಾಗುವ ಯಾವುದೇ ರೀತಿಯ ಕ್ರಮ ಖಂಡಿತಾ ಸರಿಯಲ್ಲ ಗುರು. ನಮ್ಮ ನಾಡಿನಲ್ಲಿರೋ ವೈವಿಧ್ಯತೆಗಳನ್ನು ಉಳಿಸಿಕೊಳ್ಳೋದರ ಮೂಲಕವೇ ನಾವು ಏಕತೆಯನ್ನು ಸಾಧಿಸೋಕ್ಕೆ ಸಾಧ್ಯ ಒಂದು ಪ್ರದೇಶದ ಜನರ ಬದುಕು, ಏಳ್ಗೆ ಮತ್ತು ಸಂಸ್ಕೃತಿಗಳ ಮೇಲೆ ಮಾರಕವಾಗೋ ಅಂಥಾ ನಿರ್ಣಯಗಳನ್ನಾಗಲಿ, ನೀತಿಗಳನ್ನಾಗಲೀ ನಮ್ಮ ಸರ್ಕಾರಗಳು ತೊಗೋಬಾರದು.
ಕೊಡಗಿನಲ್ಲಿ ಕೊಡವ ಭಾಷೆ ಮತ್ತು ಸಂಸ್ಕೃತಿಗಳನ್ನು ನಾವು ಕಾಪಾಡಿಕೊಳ್ಳೋದು ನಮ್ಮ ಧರ್ಮ ಗುರು. ಆ ಕಾರಣದಿಂದಲೇ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳೋ ಮೊದಲು ಸರ್ಕಾರಗಳು ಹಿಂದೆ ಮುಂದೆ ಯೋಚ್ಸಿ, ಅದಕ್ಕೆ ಸಂಬಂಧ ಪಟ್ಟ ಜನರ ಜೊತೆ, ಜನ ಪ್ರತಿನಿಧಿಗಳ ಜೊತೆ ಮಾತುಕತೆ ಮಾಡಿ ಮುಂದುವರೀಬೇಕು ಗುರು. ಇಲ್ಲದೆ ಇದ್ರೆ ಅಂತಹ ಪ್ರದೇಶದ ಜನಗಳ ಸಾರ್ವಭೌಮತ್ವವನ್ನು ನಾವು ಕೊಂದು ಹಾಕಿದಂತೆ ಆಗುತ್ತೆ. ಏನೇ ಆಗಲಿ, ಕೊಡಗಿಗೆ ಕೊಡವನೇ ಸಾರ್ವಭೌಮ, ಕೊಡವ ನುಡಿ ಕೊಡಗಿನಲ್ಲಿ ಸಾರ್ವಭೌಮ ಭಾಷೆ ಆಗಿರಲೇ ಬೇಕು. ಅದೇ ಸರಿ.
ಇದು ಕೊಡಗಿನ ಸಮಸ್ಯೆ ಮಾತ್ರವಲ್ಲ, ಕರ್ನಾಟಕದ ಸಮಸ್ಯೆ
ಕೊಡಗಿನ ಜನರನ್ನ ಕಾಡ್ತಿರೋ ಈ ಸಮಸ್ಯೆ ಬರೀ ಕೊಡಗಿನ ಸಮಸ್ಯೆಯಲ್ಲ, ಇಡೀ ಕರ್ನಾಟಕದ ಸಮಸ್ಯೆ. ವೈವಿಧ್ಯತೇನ ಉಳಿಸಿಕೊಳ್ಳೋದ್ರಲ್ಲೇ ನಮ್ಮ ಏಳ್ಗೆ ಇರೋದು ಅಂತ ನಮ್ಮ ಸರ್ಕಾರಗಳಿಗೆ ಅರ್ಥವಾಗದೇ ಇರೋದೇ ಇದಕ್ಕೆ ಮೂಲ. ಅದೇಕೋ ಏನೋ "ವಿವಿಧತೆಯಲ್ಲಿ ಏಕತೆ, ವಿವಿಧತೆಯಲ್ಲಿ ಏಕತೆ" ಅಂತ ಮಂತ್ರ ಎಷ್ಟು ಸಾರಿ ಹೇಳ್ಕೊಂಡ್ರೂ ನಮ್ಮನ್ನಾಳೋರಿಗೆ ಆ ಮಂತ್ರದ ಅರ್ಥ ಗೊತ್ತಾಗಿರೋಹಂಗೆ ಕಾಣ್ತಿಲ್ಲ! ಕೊಡಗಿನ ಜನರೂ ಇದನ್ನು ಬರೀ ತಮ್ಮ ಸಮಸ್ಯೆ ಅಂತ ಅಂದುಕೊಳ್ಳದೆ ನಾಡಿನ ಎಲ್ಲ ಭಾಗಗಳ ಜನರನ್ನು ಜೊತೇಲಿಟ್ಟುಕೊಂಡು ಒಗ್ಗಟ್ಟಿಂದ ಇದಕ್ಕೆ ಪರಿಹಾರ ಹುಡುಕಬೇಕು. ಏನ್ ಗುರು?

ಇವತ್ತು ಕಿಟ್ಟಲ್ ಇಲ್ಲದೇ ಇದ್ರೂ ವಿಟ್ಠಲ್ ಇದಾರಲ್ಲ?

1832 ರಿಂದ 1903 ರವರೆಗೆ ಬದುಕಿದ್ದ ಜರ್ಮನ್ ಮೂಲದ ಡಾ. ರೆವರೆಂಡ್ ಫರ್ಡಿನೆಂಡ್ ಕಿಟ್ಟಲ್ ರಚಿಸಿದ ಕನ್ನಡ-ಇಂಗ್ಲೀಷ್ ಪದಕೋಶದ ಬಗ್ಗೆ 3ನೇ ನವಂಬರ್ ದಿವಸ ವಿ.ಕ. ವರದಿ ಮಾಡಿದೆ. ಜರ್ಮನಿ ಕಿಟ್ಟಲ್ಲು ಮತ್ತೆ ಕನ್ನಡದ ವಿಟ್ಠಲ್ಲು - ಇವರಿಬ್ಬರ ಬಗ್ಗೆ ಇವತ್ತು ಗಮನ ಹರಿಸೋಣ.

ಬೇರೆಬೇರೆ ಪ್ರದೇಶಗಳಲ್ಲಿದ್ದ ಕನ್ನಡಿಗರು ಬಳಸೋ ಪದಗಳ್ನೆಲ್ಲಾ ಒಗ್ಗೂಡಿಸಿ ಒಂದೇ ನಿಘಂಟು ಬರೆದ ಕಿಟ್ಟಲ್ ಒಂದು ರೀತಿಯ ಕನ್ನಡ ಪದಗಳ ಏಕೀಕರಣದ ಹರಿಕಾರ ಅಂದ್ರೆ ತಪ್ಪಾಗಲಾರದೋ ಏನೋ. ಕ್ರಿ.ಶ. 900 ರಿಂದ 1894 ರವರೆಗೆ 11 ಶತಮಾನಗಳ ಕಾಲ ಬಳಕೆಯಲ್ಲಿದ್ದ ಕನ್ನಡದ ಮಾಹಿತಿಗಳನ್ನು, ಯಾವುದೇ ಸರಿಯಾದ ಸೌಕರ್ಯಗಳಿರದಿದ್ದ ಆ ಸಮಯದಲ್ಲಿ, ಹರಿದು-ಹಂಚಿ ಹೋಗಿದ್ದ ಅಂದಿನ ಕರ್ನಾಟಕದ ಹಳ್ಳಿ-ಹಳ್ಳಿಗೆ ಎಡತಾಕಿ, ಕೆದಕಿ, ಪದಗಳನ್ನು ಹೆಕ್ಕಿ-ಒಂದು ಗೂಡಿಸಿ ಮಂದಿನ ಕನ್ನಡದ ಪೀಳಿಗೆಗೆ ಬಿಟ್ಟು ಹೋದ ಆ ಆಸ್ತಿ ದೊಡ್ಡದು ಗುರು! ಅಂದಿನ ಬ್ರಿಟೀಷ್ ದಿನಗಳಲ್ಲಿ ಪರೋಕ್ಷವಾಗಿ ಇದು ಹಲವರಿಗೆ ಕನ್ನಡ ಕಲಿಯುವ-ಕಲಿಸುವ ಸಾಧನವಾಗಿತ್ತು.

ಕಿಟ್ಟಲ್ ಆದಮೇಲೆ ಹೊಸ ಕನ್ನಡದ ಪದಕೋಶಗಳು ಹಲವು ಬಂದಿವೆ. ಆದರೆ ಅವುಗಳಿಗೆ ಕನ್ನಡಿಗರ ಬಾಯಲ್ಲಿ ಓಡಾಡುತ್ತಿರೋ ಎಷ್ಟೋಂದು ಎರವಲು ಪದಗಳ್ನ ದೂರ ಇಡಬೇಕು ಅನ್ನೋ ಮಡಿವಂತಿಕೆ , ಇಲ್ಲವೇ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಬಳಕೆಯಲ್ಲಿರೋ ಪದಗಳನ್ನೂ (ಮತ್ತು ಅವುಗಳಿಗೆ ಇರಬೋದಾದ ಬೇರೆಬೇರೆ ಅರ್ಥಗಳನ್ನು) ಸೇರಿಸಿಕೊಳ್ಳದಿರುವಿಕೆ, ಮತ್ತು ಸಂಸ್ಕೃತದ ಹಂಗು ಸ್ವಲ್ಪ ಹೆಚ್ಚಾಗಿರೋದು - ಈ ಮೂರು ದೋಷಗಳಿವೆ. ಬಸ್ಸು, ಕಾರು, ಇಂಕು, ಬಾಲು, ಬೆಲ್ಟು, ಮೊಬೈಲು, ಲವ್ - ಹೀಗೆ ಇಂದು ಪ್ರಚಲಿತದಲ್ಲಿರುವ ಪದಗಳನ್ನು ಕನ್ನಡ ಪದಗಳು ಅಂತ ಕರಿಯಕ್ಕೆ ಯಾಕೋ ನಮ್ಮೋರಿಗೆ ಮುಜುಗರ!

ಧರ್ಮ, ಪ್ರದೇಶ ಮತ್ತು ಮಡಿವಂತಿಕೆಗಳೆಂಬ ಮೂರು ಗೋಡೆಗಳನ್ನು ಒಡೆದು ಕನ್ನಡ ಪದಗಳ ಏಕೀಕರಣ ಒಂದು ನಿಜವಾದ ಕನ್ನಡದ ನಿಘಂಟಲ್ಲಿ ಆಗಬೇಕಿದೆ ಗುರು! ಇದನ್ನ ಮಾಡಕ್ಕೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿರೋ ವಿಟ್ಠಲ್ಗಳು ಜರ್ಮನಿಯಿಂದ ಕಿಟ್ಟಲ್ಲಂಥಾ ಮಹಾನುಭಾವ ಇನ್ನೂ ಬಂದಿಲ್ಲ ಅಂತ ಕೈಮೇಲೆ ಕೈಯಿಟ್ಟುಕೊಂಡು ಕೂತ್ಕೋಬೇಕಾಗಿಲ್ಲ ಗುರು!

ಕೊನೆ ಹನಿ

ಇಲ್ಲಿ ಸೂಚಿಸಿರೋ ವಿಟ್ಠಲ್ ಅನ್ನೋ ಹೆಸ್ರು ಸುಮ್ನೆ ಕಿತಾಪತಿಗೆ ಮಾತ್ರ. ಆ ಹೆಸರಿನ ಯಾರಾದರೂ ನಮ್ಮ ವಿ.ವಿ.ಗಳಲ್ಲಿದ್ದರೆ ಆಕಸ್ಮಿಕ.

ಎಲ್ಲಾ ಬರೀ ರೈಲು!

ಮೊನ್ನೆಮೊನ್ನೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜರ್ಮನಿಯ ಚಾನ್ಸೆಲರ್ ಎಂಜೆಲಾ ಮೆರ್ಕೆಲ್ ಇಬ್ಬರೂ ಸೇರಿ ಒಂದು ವೈಜ್ಞಾನಿಕ ರೈಲು ಬಿಟ್ಟಿದಾರೆ ಅಂತ ವಿ.ಕ. ದಿಂದ ಹಿಡಿದು ಜರ್ಮನಿ ಸರ್ಕಾರದ ಅಂತರ್ಜಾಲ ತಾಣದಲ್ಲೂ ವರದಿ ಆಗಿದೆ. ಈ ರೈಲಿಗೆ "ಸೈನ್ಸ್ ಎಕ್ಸ್‍ಪ್ರೆಸ್" ಅಂತ ಹೆಸರು. ಈ ರೈಲು ಭಾರತದ "ಮೂಲೆಮೂಲೆಗೂ ವೈಜ್ಞಾನಿಕ ಲೋಕದ ಅಚ್ಚರಿಗಳನ್ನು ಕೊಂಡೊಯ್ಯಲಿದೆ" ಅಂತೆ. ಭಾರತದ ಎಲ್ಲಾ ರಾಜ್ಯಗಳಿಗೂ ಈ ರೈಲು ಹೋಗಲಿದೆಯಂತೆ.

ಈ ರೈಲು ವಿಜ್ಞಾನದ ಅಚ್ಚರಿಗಳ್ನ ಮುಟ್ಟಿಸೋ ಪ್ರಯತ್ನದಲ್ಲಿ ಯಾವ ಭಾಷೇಲಿ ಮುಟ್ಟಿಸಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡಿದ್ಯಾ ಗುರು? ಕರ್ನಾಟಕಕ್ಕೆ ಬಂದ ರೈಲು ಜರ್ಮನ್ನಲ್ಲೋ ಇಂಗ್ಲೀಷಲ್ಲೋ ಹಿಂದೀಲೋ ವಿಜ್ಞಾನವನ್ನ "ಮುಟ್ಟಿಸೋಕೆ" ಮುಂದಾದ್ರೆ ಅದೇನು ಮುಟ್ಟಿಸಿಕೊಂಡೇವೋ ಅದೇನು ಮುಟ್ಟಿಸಾರೋ ಆ ದ್ಯಾವರಿಗೇ ಪಿರೀತಿ!

ಪ್ಯಾರಿಸ್ಸಿಂದ ಇದೇ ರೈಲು ಜರ್ಮನಿಗೆ ಹೋದರೆ ಜರ್ಮನ್ ಭಾಷೇಲಿ ಇರಬೇಕು ಅಂತ ಮೆರ್ಕೆಲ್-ಗೆ ಗೊತ್ತಿದೆ. ಆದ್ರೆ ದಿಲ್ಲಿಯಿಂದ ಬಿಟ್ಟ ರೈಲು ಕರ್ನಾಟಕಕ್ಕೆ ಬಂದ್ರೆ ಕನ್ನಡದಲ್ಲಿರಬೇಕು ಅಂತ ನಮ್ಮ ಸಿಂಗ್-ಗೆ ಗೊತ್ತಾ? ಯಾಕೆ ಕೇಳ್ತಿದೀವಿ ಅಂದ್ರೆ - ದಿಲ್ಲಿಯಲ್ಲಿ ಕೂತಿರೋ ಪ್ರಳಯಾಂತಕ ಶಿಕ್ಷಣ ತಜ್ಞರಿಗಾಗಲಿ ರೈಲ್ವೆ ಅಧಿಕಾರಿಗಳಿಗಾಗಲಿ ಭಾರತದಲ್ಲೆಲ್ಲಾ ಇಂಗ್ಲೀಷ್ ಅಥವಾ ಹಿಂದಿಗಳಲ್ಲಿ ಒಂದು ನಡೆದೇ ನಡೆಯತ್ತೆ (ಇಲ್ಲಾ ನಡೀಬೇಕು) ಅನ್ನೋ ಭ್ರಮೆ ತುಂಬಾ ಮೊದಲಿಂದಲೇ ಇದೆ.

ನಿಜವಾಗಲೂ "ಮುಟ್ಟಿಸಬೇಕಾದ್ದನ್ನ" ಮುಟ್ಟಿಸೋಕೆ ಇವತ್ತಿನ ದಿನ ದಿಲ್ಲಿಯಿಂದ ಹೊರಟ ಈ ರೈಲಲ್ಲಿ ಕಡಿಮೆ ಅಂದರೆ ಭಾರತದ 25 ಭಾಷೆಗಳಲ್ಲಿ ವಿವರಿಸೋ ಜನ ಇರಬೇಕು, ಮಾಹಿತಿ/ವೈಜ್ಞಾನಿಕ ಸಾಹಿತ್ಯ ಸಿಗಬೇಕು ಗುರು! ವಿಜ್ಞಾನದ ಪ್ರಜ್ಞೆ ಹೆಚ್ಚಿಸ್ತೀನಿ ಅನ್ನೋ ಯೋಜನೆ ಏನೋ ಸರೀನೇ, ಆದ್ರೆ ಎಲ್ಲವೂ ದಿಲ್ಲಿಯಿಂದ್ಲೇ ಆಗಬೇಕು ಅಂದ್ರೆ ಹೆಂಗೆ ಗುರು?

ಈ ರೈಲು ಮಂಗಳೂರಿಗೆ ಬರತ್ತಂತೆ. ಅಲ್ಲೇನಾದರೂ ಇಂಗ್ಲೀಷಲ್ಲೋ ಜರ್ಮನ್ನಲ್ಲೋ ಹಿಂದೀಲೋ ಇವ್ರು ಒದರ್ತಾ ಇದ್ರೆ ಇದು ವೈಜ್ಞಾನಿಕ ರೈಲಲ್ಲ, ಬರೀ ರೈಲೇ ಇರಬೇಕು ಅನ್ನೋ ನಮ್ಮ ಊಹೆ ನಿಜವೇ ಆಗತ್ತೆ ಗುರು! ಆಗ ಆ ರೈಲೊಳಗೆ ತುಸ ವಿಜ್ಞಾನ ತುಂಬಿಸಿ ವಾಪಸ್ ದಿಲ್ಲೀಗೋ ಬೆರ್ಲಿನ್ನಿಗೋ ಕಳಿಸಬೇಕು, ಅಷ್ಟೆ!

ಕಾಸರಗೋಡಲ್ಲಿ ಕನ್ನಡವಿಲ್ಲದೆ ವೋಟಿಲ್ಲ!

ಇದ್ನೊಸಿ ನೋಡು ಗುರು:



ಈ CNN IBN ವರದಿ ಇನ್ನ್ಯಾವ ಊರಿನ ಬಗ್ಗೆಯೂ ಅಲ್ಲ, ಈಗ ಕೇರಳಕ್ಕೆ ಸೇರಿಹೋಗಿರುವ, ಮಹಾಜನ್ ವರದಿ ಪ್ರಕಾರ ಕರ್ನಾಟಕಕ್ಕೆ ಸೇರಬೇಕಾಗಿರುವ ಕಾಸರಗೋಡಿನ ಬಗ್ಗೆ, ಗುರು! ವರದಿ ಏನ್ ಹೇಳತ್ತೆ ನೋಡಿ:
ಇಲ್ಲಿ ಒಟ್ಟು 60% ಜನ ಕನ್ನಡ ಮಾತಾಡುತ್ತಾರೆ. ಇಲ್ಲಿಂದ ಆಯ್ಕೆಯಾದ ಎಮ್ಮೆಲ್ಲೆ ಕೂಡ ಕನ್ನಡದಲ್ಲೇ ಪ್ರಮಾಣವಚನ ತೊಗೊಂಡ್ರು. [ಕನ್ನಡ] ಭಾಷೆಯ ಪ್ರಭಾವ ಅಷ್ಟಿದೆ ಇಲ್ಲಿ!

[...]

ಮಂಜೇಶ್ವರದಲ್ಲಿ ಕನ್ನಡ ರಾರಾಜಿಸುತ್ತಿದೆ. ಇಲ್ಲೀ ಶೇಂದಿ ಅಂಗಡಿಗಳಿಂದ ಹಿಡಿದು ದೇವರಗುಡಿಗಳವರೆಗೆ ಎಲ್ಲೆಲ್ಲೂ ನಿಮಗೆ ಕನ್ನಡದ ಬೋರ್ಡುಗಳು ಕಾಣುತ್ತವೆ.

[...]

ಇಲ್ಲಿ ಎಲ್.ಡಿ.ಎಫ್. ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳೂ ಕನ್ನಡದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿವೆ. ಮಂಜೇಶ್ವರದ ಹಾಲಿ ಎಮ್ಮೆಲ್ಲೆಯ ಪ್ರಣಾಳಿಕೆ ಕನ್ನಡದಲ್ಲೂ ಇದೆ.

[...]

ಇಲ್ಲಿ ಕನ್ನಡವೇ ಮುಖ್ಯವಾದ ಭಾಷೆ, ಕನ್ನಡಿಗರೇ ಇಲ್ಲಿ ಮುಖ್ಯವಾದವರು.
Related Posts with Thumbnails