ಮೈಸೂರು ದಸರಾ! ಈಗ ವೆಬ್‍ಸೈಟೂ ಸುಂದರಾ!!


2009ರ ಸಾಲಿನ ಮೈಸೂರು ದಸರ ಹಬ್ಬ ಭರ್ಜರಿಯಾಗಿ ನಡೀತಿದೆ. ಪ್ರವಾಸಿಗರಿಗೆ ಮಾಹಿತಿ ನೀಡಲು, ಅವರನ್ನು ಸೆಳೆಯಲು ಆಧುನಿಕ ತಂತ್ರಜ್ಞಾನವಾದ ಅಂತರ್ಜಾಲವನ್ನು ಈ ಬಾರಿಯೂ ಬಳಸಿದ್ದಾರೆ. ಇಂದು ನಾವೆಲ್ಲಾ ಖುಷಿ ಪಡೋಕೆ ಇರೋ ಕಾರಣ ಏನಪ್ಪಾ ಅಂದ್ರೆ ಈ ಅಂತರ್ಜಾಲ ತಾಣಾನ ರೂಪಿಸಿರೋ ಬಗೆ. ಹೌದೂ ಗುರು! ಈ ಸಲದ ವೆಬ್‍ಸೈಟ್ ಸೂಪರ್ ಆಗಿ ಮೂಡಿಬಂದಿದೆ. ಕಳೆದ ವರ್ಷದ ತಾಣ ನೋಡಿ ಇದು ನಮ್ಮ ದಸರಾ ಅನ್ಸೋ ಹಾಗಿಲ್ಲಾ, ಇಲ್ಯಾಕೆ ಕನ್ನಡಕ್ಕೆ ತಕ್ಕ ಸ್ಥಾನಮಾನ ಇಲ್ಲ. ಇರೋ ಕನ್ನಡದ ಕೊಂಡಿಗಳು ಯಾಕೆ ಕೆಲ್ಸ ಮಾಡ್ತಿಲ್ಲಾ ಅಂತ ಏನ್‍ಗುರೂನಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದುಕ್ಕೆ ಅದ್ಭುತವಾಗಿ ಸ್ಪಂದಿಸಿದ್ದ ಕನ್ನಡದ ಜನರನೇಕರು ಸದರಿ ಅಂತರ್ಜಾಲ ತಾಣ ರೂಪಿಸಿದವರಿಗೆ ದೂರು ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಸರಿಯಾಗಿ ಕನ್ನಡದಲ್ಲಿ ರೂಪಿಸಲು ಸಹಾಯಾನೂ ನೀಡಿದ್ರು. ನಿಮ್ಮೆಲ್ಲರ ಶ್ರಮದ ಫಲವಾಗಿ ಇಂದು ಈ ಬದಲಾವಣೆಯನ್ನು ಕಾಣ್ತಿದೀವಿ ಗುರು!

ಈ ತಾಣದಲ್ಲೇನಿದೆ?

ಈ ತಾಣದ ಡಿ-ಫಾಲ್ಟ್ ಭಾಷೆ ಕನ್ನಡ. ಮುಖಪುಟದಲ್ಲೇ ಬೇಕೆಂದವರಿಗೆ ಇಂಗ್ಲೀಷಿನ ಆಯ್ಕೆಯ ಅವಕಾಶವಿದೆ. ಈ ತಾಣದಲ್ಲಿ ಕನ್ನಡದಲ್ಲಿ ಬರೆದಿರೋ ಮಾಹಿತಿಗಳು ಕೂಡಾ ಉತ್ತಮವಾಗಿದೆ. ಎಲ್ಲಾ ಲಿಂಕುಗಳು ಕೆಲಸ ಮಾಡ್ತಿವೆ. ಈ ಬಾರಿ ಕಳೆದ ವರ್ಷ ಕಂಡಿದ್ದ ಬಹುಪಾಲು ತೊಂದರೆ-ಕೊರತೆಗಳನ್ನೂ ಸರಿಪಡಿಸಿದೆ ಗುರು. ನಿಜವಾಗ್ಲೂ ಮೈಸೂರು ದಸರಾ ಅಂತರ್ಜಾಲ ತಾಣ ಹುಡ್ಕೋರಿಗೆ ಇದು ಕನ್ನಡಿಗರ ನಾಡಹಬ್ಬ, ಇದರಲ್ಲಿ ವಿಶೇಷವಿದೆ, ವೈಭವವಿದೆ, ಸೊಗಡಿದೆ ಅನ್ನಿಸೋ ಹಾಗೆ ಇಡೀ ತಾಣವನ್ನು ರೂಪಿಸಲಾಗಿದೆ. ಅಷ್ಟೇ ಅಲ್ಲದೆ ಈ ಬಾರಿ ದಸರೆಯ ಮಹಿಮೆ ಮತ್ತು ಸೊಬಗುಗಳನ್ನು ಆಧುನಿಕ ತಂತ್ರಜ್ಞಾನಗಳ ಜೊತೆ ನಿಲ್ಲಿಸಿ ಅಂತರ್ಜಾಲದಲ್ಲಿ ಹೊಸ ಬಗೆಯ ದಸರಾ ಮೆರವಣಿಗೆಯನ್ನೇ ನಡೆಸಿದೆ! ನಿಜಕ್ಕೂ ಇಂದು ಈ ತಾಣದ ವಿನ್ಯಾಸ ಮತ್ತು ಅದರ ಹಿಂದೆ ಆಗಿರುವ ಕೆಲಸ ಕನ್ನಡಿಗರನ್ನು ಜಗತ್ತಿನ ಎದುರು ಹೆಮ್ಮೆ ಪಡುವಂತೆ ಮಾಡಿದೆ. ಈ ವಿಷಯದಲ್ಲಿ ಮೈಸೂರು ದಸರಾ ಅಂತರ್ಜಾಲ ತಾಣ ರೂಪಿಸಿದೋರು ನಾಡಿನೆಲ್ಲರ ಅಭಿನಂದನೆಗಳಿಗೆ ಅರ್ಹರು. ಇವರಿಗೆ ಶಭಾಷ್... ಅಂತಾ ಹಂಗೇ ನೀವೊಂದು ಮಿಂಚೆ ಕಳುಸ್ಬುಡಿ ಗುರುಗಳೇ!

ಕೆ.ಪಿ.ಎಲ್ ಅನ್ನೋ ಕ್ರಿಕೆಟ್ ಹಬ್ಬ!!!



ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೋರು ಈ ವರ್ಷದಿಂದ ಶುರು ಮಾಡಿರೋ ಕೆ.ಪಿ.ಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಸರಣಿ ಪಂದ್ಯಗಳು ನಿನ್ನೆ ಮುಗಿದವು. ಮೊದಲ ಬಾರಿಗೆ 20-20 ಮಾದರಿಯ ಈ ಸರಣಿಯಲ್ಲಿ ಬೆಂಗಳೂರು ಗ್ರಾಮಾಂತರ ತಂಡವಾದ ಬೆಂಗಳೂರು ಪ್ರಾವಿಡೆಂಟ್ ತಂಡದೋರು ಪ್ರಶಸ್ತಿ ಗೆದ್ದುಕೊಂಡರು. ಈ ಕೆ.ಪಿ.ಎಲ್‍ನ ಶುರುಮಾಡಿದ ಉದ್ದೇಶವೇ ಜಿಲ್ಲಾ ಪ್ರತಿಭೆಗಳ ಶೋಧ ಮತ್ತು ರಾಷ್ಟ್ರೀಯ ತಂಡಕ್ಕೆ ಪೂರೈಕೆ ಅನ್ನೋದು ಒಳ್ಳೇ ನಿಲುವಾಗಿದೆ ಮತ್ತು ಒಳ್ಳೆಯ ನಡೆಯಾಗಿದೆ. ಒಟ್ಟು 31 ಪಂದ್ಯಗಳು ಮತ್ತು ಅದರಲ್ಲೂ ತುಂಬಾ ರೋಮಾಂಚಕಾರಿಯಾಗಿ ಕೊನೆ ಎಸೆತದವರೆಗೂ ಕುತೂಹಲ ಕಾಯ್ದುಕೊಂಡ ಕೆಲಪಂದ್ಯಗಳೂ ನಡೆದವು. ನಮ್ಮವರೂ ಐ.ಪಿ.ಎಲ್‍ಗೆ ನಾವೇನು ಕಮ್ಮಿ ಇಲ್ಲ ಎಂದು ಸಡ್ಡು ಹೊಡೆದವರಂತೆ ಚಿಯರ್‍ಗರ್ಲ್‌ಗಳನ್ನು ಕರೆಸಿದ್ರು ಗುರು! ಹ ಹ್ಹಾ ಹ್ಹಾ... ಅಷ್ಟು ಬಣ್ಣತುಂಬುವ ಪ್ರಯತ್ನಗಳು ಇಲ್ಲಿ ನಡೆದವು!

ಮೆಚ್ಚಿಗೆಯಾದ ಅನೇಕ ಅಂಶಗಳು!

ಇಡೀ ಪಂದ್ಯಾವಳಿಯಲ್ಲಿ ಕನ್ನಡಕ್ಕೆ ಸುಮಾರಾಗಿ ಪ್ರಾಮುಖ್ಯತೆ ಸಿಕ್ಕಿದ್ದಂಗಿತ್ತು. ಕೆಪಿಎಲ್ ಹಾಡುಗಳು, ಎಲ್ಲ ತಂಡಗಳೋರು ಮಾಡಿಸಿಕೊಂಡಿದ್ದ ಹಾಡುಗಳು ಕನ್ನಡದಲ್ಲಿದ್ವು. ಆಟದ ಮೈದಾನದಲ್ಲೂ ವಿಜಯ ಕರ್ನಾಟಕ, ಅದೂ ಇದೂ ಅಂತ ಕನ್ನಡದ ಜಾಹೀರಾತುಗಳಿದ್ದವು. ಕನ್ನಡದ ಬಾವುಟಗಳು ಹಾರಾಡ್ತಿದ್ವು ಆಟದ ವೀಕ್ಷಕ ವಿವರಣೆಯಲ್ಲಿ ಕನ್ನಡವಿತ್ತು. ಈ ಪಂದ್ಯಾವಳಿಯಿಂದ ಹಳ್ಳಿಗಾಡಿನ ಅನೇಕ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಸಿಕ್ಕಿದೆ, ಸಿಕ್ಕಲಿದೆ ಅನ್ನೋದೆಲ್ಲಾ ಖುಷಿ ವಿಷಯಾನೆ ಗುರು! ಇದು ಹೀಗೇ ಮುಂದುವರೀಲಿ... ಇದರ ಮೂಲಕ ನಮ್ಮ ನಾಡಿಂದ ಭಾರತೀಯ ಕ್ರಿಕೆಟ್ಟಿಗೆ ಒಳ್ಳೊಳ್ಳೆ ಆಟಗಾರರು ಸಿಗಲಿ!! ಯಾಕಂದ್ರೆ ಎರಡು ಕೋಟಿ ಜನರಿರೋ ಶ್ರೀಲಂಕಾ, ಆಸ್ಟ್ರೇಲಿಯಾ, 30 ಲಕ್ಷ ಜನರಿರೋ ವೆಸ್ಟ್‍ಇಂಡೀಸ್, 40 ಲಕ್ಷ ಜನರಿರೋ ನ್ಯೂಜಿಲ್ಯಾಂಡ್ ಮೊದಲಾದವು ಪ್ರಪಂಚದ ಬಲಿಷ್ಟ ತಂಡಗಳಾಗಿರೋವಾಗ 5 ಕೋಟಿ ಕನ್ನಡಿಗರ ಕರ್ನಾಟಕಕ್ಕೆ, ಭಾರತ ತಂಡದಲ್ಲಾಡೋ ಯೋಗ್ಯತೆಯಿರೋ ನಾಲ್ಕಾರು ಜನ ಆಟಗಾರರನ್ನು ಕೊಡಕ್ಕಾಗಲ್ವಾ ಗುರು?

ಸರಿಯಾಗಬೇಕಾದ ಕೆಲ ಅಂಶಗಳು

ಈ ಪಂದ್ಯಾವಳಿಗಳ ಪ್ರಾಯೋಜಕರಾದ ಮಂತ್ರಿ ಡೆವೆಲಪರ್ಸ್ ಅವರ ಜಾಹೀರಾತುಗಳು ಪಂದ್ಯದ ನಡುವೆ ಆಟದ ಮೈದಾನದಲ್ಲಿ ಹಾಕ್ತಾ ಇದ್ರು, ಅದಂತೂ ಪೂರ್ತಿ ಹಿಂದೀಲಿತ್ತು ಗುರು! ಅದ್ಯಾರಿಗೆ ಅರ್ಥ ಆಗ್ಲೀ ಅಂದ್ಕೊಂಡ್ರೋ ಏನೋ!! ಪುಣ್ಯಾತ್ಮರು. ಇನ್ನು ಆಟದ ನಡುನಡುವೆ ಹಾಡುಗಳನ್ನು ಹಾಕೋರು... ಕನ್ನಡದ ಹಾಡು ಹಾಕಿದಾಗೆಲ್ಲಾ ಜನಾ ಹೋ ಅಂತಾ ಖುಷಿ ಪಡ್ತಿದ್ರು. ಜಿಂಕೆ ಮರೀನಾ ಜಿಂಕೆ ಮರೀನಾ ಹಾಕಿದಾಗಂತೂ ಇಡೀ ಸ್ಟೇಡಿಯಂ ಎದ್ ಕುಣೀತಿತ್ತು. ಆದ್ರೆ ಅದ್ಯಾಕೋ ಅಲ್ಲಿನ ಕೆಲ ಪ್ರಭೃತಿಗಳು ಆಗಾಗ ಹಿಂದಿ ಹಾಡು ಹಾಕಿ ಜನರ ಉತ್ಸಾಹ ಬತ್ತುಸ್ತಿದ್ರು! ಈ ಜನ ಹಿಂದೀಜ್ವರ ಹಿಡ್ಸೋ ಪ್ರಯತ್ನಾ ಮಾತ್ರಾ ಇಲ್ಲೂ ಬಿಡಲಿಲ್ಲಾ ಅನ್ನೋದು ಬೇಸರದ ಸಂಗತಿ! ಒಂದೊಂದ್ ಮ್ಯಾಚ್ ಆದಮೇಲೂ ಆಟಗಾರರನ್ನು ಮಾತಾಡ್ಸೋರೂ, ಬಹುಮಾನ ಕೊಡೋರೂ ಕೊನೆಗೆ ಆಟಗಾರರೂ ಕೂಡಾ ಇಂಗ್ಲೀಷಲ್ಲಿ ಮಾತಾಡಿದ್ ಯಾಕೋ ಅನಗತ್ಯವಾಗಿತ್ತು ಅನ್ನುಸ್ತಿತ್ತು ಗುರು! ನಮ್ಮೋರು ಅರ್ಥ ಮಾಡ್ಕೋಬೇಕಾಗಿರೋದು ಇನ್ನೂ ಒಂದಿದೆ. ಈ ಪಂದ್ಯಗಳನ್ನು ಬೆಂಗಳೂರಿನಿಂದ ಆಚೆ ನಡ್ಸುದ್ರೆ ಹೆಚ್ಚು ಜನರನ್ನು ಸೆಳೆಯೋಕ್ ಆಗೋದು. ಬೆಂಗಳೂರಲ್ಲಿರೋ ಜನ ಇಂಟರ‍್ನ್ಯಾಷನಲ್ ಪಂದ್ಯ ನೋಡಿರೋರು, ಅವರನ್ನು ಇದಕ್ ಸೆಳೆಯೋದುಕ್ಕೆ ಹಿಂದೀ ಪಂದೀ, ಟುಸ್ಸು ಪುಸ್ಸು ಅಂತನ್ನೋ ಬದಲು ಸುಮ್ನೆ ಜಿಲ್ಲಾ ಕೇಂದ್ರಗಳಿಗೆ ಕೆ.ಪಿ.ಎಲ್‍ನ ಒಯ್ಯೋದ್ರಿಂದ ಹೆಚ್ಚು ಜನರನ್ನು ಮುಟ್ಟಬಹುದು. ಅಲ್ಲೆಲ್ಲಾ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ ಹಾಕ್ಬೋದಲ್ವಾ! ಒಟ್ನಲ್ಲಿ ಅಂದ್ಕೊಂಡ ಗುರೀನ ಮತ್ತಷ್ಟು ಪರಿಣಾಮಕಾರಿಯಾಗಿ ಮುಟ್ಟಕ್ಕೆ ನಮ್ಮತನದ ಸೊಗಡನ್ನು ಕೆ.ಪಿ.ಎಲ್‍ಗೆ ಒಸಿ ಜಾಸ್ತೀನೆ ಅಂಟುಸ್ಬೇಕಾಗಿದೆ ಗುರು!

ಮಗಧೀರ 50: ಹಬ್ಬ ಇಲ್ಯಾಕೆ ಬೇಕಿತ್ತು?

ಮಗಧೀರ ಅನ್ನೋ ತೆಲುಗು ಚಿತ್ರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ಕನ್ನಡದ ಅನೇಕ ಉತ್ತಮ ಚಿತ್ರಗಳನ್ನು ಚಿತ್ರ ಮಂದಿರದಿಂದ ಒಕ್ಕಲೆಬ್ಬಿಸಿ, ಕನ್ನಡ ಚಿತ್ರ ಮಾರುಕಟ್ಟೆಗೆ ಕೊಡಲಿ ಏಟು ಹಾಕಲು ಯತ್ನಿಸಿತ್ತು. ಈಗ ಈ ಚಿತ್ರ ಕರ್ನಾಟಕದಲ್ಲಿ 50 ದಿನ ಓಡಿದೆ ಅನ್ನೋ ಕಾರಣದಿಂದ ತೆಲುಗು ಸಿನೆಮಾದವರು ಬೆಂಗಳೂರಿಗೆ ಬಂದು ಒಂದು ಸಮಾರಂಭ ಮಾಡಿದ ಸುದ್ದಿ ದಟ್ಸ್ ಕನ್ನಡದಲ್ಲಿ ಸೆಪ್ಟೆಂಬರ್ 19ರಂದು ಬಂದಿದೆ. ಇದು ಕನ್ನಡದ ಕಲಾವಿದರನ್ನು ಮತ್ತು ರಾಜಕಾರಣಿಗಳನ್ನ ಸೇರಿಸಿಕೊಂಡು ಸಮಾರಂಭ ಮಾಡಿ, ಭಾವೈಕ್ಯತೆ ಅದು ಇದು ಅನ್ಕೊಂಡು ತೆಲುಗು ಸಿನೆಮಾಗಳಿಗೆ ಕರ್ನಾಟಕದಲ್ಲಿ ಇನ್ನಷ್ಟು ಮಾರುಕಟ್ಟೆ ಕಟ್ಟಿಕೊಳ್ಳುವ ಹುನ್ನಾರ ಇದ್ದಂಗಿದೆ. ಈ ಚಿತ್ರದ ಈ ಸಮಾರಂಭಕ್ಕೆ ಬಂದು ಅವರನ್ನು ಹಾಡಿ ಹೊಗಳಿದ್ದನ್ನು ನೋಡಿದ್ರೆ ಇವರಿಗೆ ಸ್ವಾಭಿಮಾನ ಕಿಂಚಿತ್ ಆದ್ರೂ ಇದೆಯಾ ಅನ್ನೋ ಪ್ರಶ್ನೆ ಕನ್ನಡಿಗರ ಮನಸ್ಸಲ್ಲಿ ಏಳ್ತಿದೆ ಗುರು !

ಇವರು ಹೇಳೊದೇ ಕೇಳಿ !

ಸಭೆಯಲ್ಲಿದ್ದ ಮಾನ್ಯ ಮಂತ್ರಿಗಳಾದ ಡಿ.ಎಚ್.ಶಂಕರ ಮೂರ್ತಿಗಳು " 500 ವರ್ಷಗಳ ಹಿಂದೆ ಕೃಷ್ಣದೇವರಾಯ ಆಳ್ವಿಕೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಎರಡೂ ಒಂದೇ ಆಗಿದ್ದವು. ಈಗಲೂ ಎರಡೂ ರಾಜ್ಯಗಳು ಆ ಸಂಬಂಧವನ್ನು ಮುಂದುವರಿಸುತ್ತಿರುವುದು ಸಂತೋಷ ಉಂಟು ಮಾಡುತ್ತಿದೆ" ಎಂದರು. ಅಲ್ಲಾ ಗುರು, ಒಂದು ಚಿತ್ರ, ಇನ್ನೊಂದು ಚಿತ್ರ ರಂಗದ ಮಾರುಕಟ್ಟೆಯನ್ನೇ ನುಂಗಿ ಹಾಕೋ ಪ್ರಯತ್ನ ಮಾಡಿದಾಗಲೂ, ಆ ಚಿತ್ರ ಭಾವೈಕ್ಯತೆ(?) ಬೆಸೆಯೋ ಕೊಂಡಿಯಾಗಿ ಇವರಿಗೆ ಕಾಣಿಸ್ತಾ ಇರೋದು, ಕನ್ನಡ-ಕರ್ನಾಟಕ-ಕನ್ನಡಿಗರ ಬಗ್ಗೆ ಇವರಿಗಿರೋ ನಿಷ್ಟೆ ಎಂತದ್ದು ಅನ್ನುವುದನ್ನ ತಿಳಿಸಲ್ವಾ? ಇವರ ಲೆಕ್ಕದಲ್ಲಿ, ಪರಭಾಷಾ ಚಿತ್ರಗಳ ಹಾವಳಿಯಲ್ಲಿ, ಕನ್ನಡ ಚಿತ್ರರಂಗ ಉಡೀಸ್ ಆದ್ರೂ, ಕನ್ನಡ ಚಿತ್ರ ನಿರ್ಮಾಪಕ ಬೀದಿಗೆ ಬಂದ್ರೂ ಪರ್ವಾಗಿಲ್ಲ, "ಭಾವೈಕ್ಯತೆ(?)" ಬೆಸುದ್ರೆ ಸಾಕು. ಒಂದು ನಾಡಿನ ಚಿತ್ರರಂಗದ ಅಸ್ತಿತ್ವವನ್ನೇ ಕಿತ್ತು ಹಾಕ್ತೀನಿ ಅನ್ನೋಹಾಂಗೆ ಬರೋರು ಇವರ ಕಣ್ಣಲ್ಲಿ ಸಂಬಂಧ ಬೆಸೆಯೋ ಗುಣ ಸಂಪನ್ನರ ತರಾ ಕಾಣಸೋದು ಎಂಥಾ ವಿಚಿತ್ರಾ ಅಲ್ವಾ, ಇದರ ಹಿಂದಿರೋ ಚಿಂತನೆಯಲ್ಲೇ, ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಎಷ್ಟು ಬೆಲೆ ಇದೆ ಅನ್ನೋದನ್ನ ತೋರಿಸ್ತಾ ಇಲ್ವಾ ಗುರು ? ಶಂಕರಮೂರ್ತಿಗಳ ಪ್ರಕಾರ "ಕರ್ನಾಟಕದಲ್ಲಿ" ತೆಲುಗು-ಕನ್ನಡ ಬೇರೆ ಬೇರೆ ಅಲ್ವಂತೆ, ಅದು ಸರಿನೇ ಬಿಡಿ, ಕರ್ನಾಟಕದಲ್ಲಿ ಮಾತ್ರ ತೆಲುಗು-ಕನ್ನಡ ಎಲ್ಲ ಒಂದೇ. ಯಾಕಂದ್ರೆ, ಆಂಧ್ರದಲ್ಲಿ ಲಕ್ಷಗಟ್ಲೆ ಕನ್ನಡಿಗರು ಇದ್ರೂ, ಅವರಿಗೆ ಕರ್ನಾಟಕದಲ್ಲಿ ತೆಲುಗರಿಗೆ ಸಿಗ್ತಾ ಇರೋ ಯಾವ ಅನುಕೂಲವೂ, ಸೌಲಭ್ಯವೂ ಸಿಕ್ತಿಲ್ಲ, ಅಲ್ಲಿನ ಮಂತ್ರಿಗಳ್ಯಾರು ಕನ್ನಡ-ತೆಲುಗು ಒಂದೇ ಅಂತ ಹೇಳೊ ಪೆದ್ದರು ಅಲ್ಲ. ಅದೇನಿದ್ರೂ ಕರ್ನಾಟಕದಲ್ಲಷ್ಟೇ. ಬಿಡು ಗುರು, ಕರ್ನಾಟಕದ ಸರ್ಕಾರವೇ ಕೆಲವು ತೆಲುಗು ಸಚಿವರ ಅಣತಿಯಂತೆ ನಡೆಯುತ್ತಿರೋ ಅನುಮಾನ ಇರುವಾಗ, ಇಲ್ಲಿ ತೆಲುಗು-ಕನ್ನಡ ಎಲ್ಲ ಒಂದೇ ಆಗಿ ಇವರಿಗೆ ಕಾಣೋದ್ರಲ್ಲಿ ವಿಶೇಷ ಏನಿಲ್ಲಾ.

ಶಿವಣ್ಣನವರು ಹೇಳೊದು

ಇದೇ ಸಭೆಲಿ, ಕನ್ನಡಿಗರ ಕಣ್ಮಣಿ ಅಣ್ಣಾವ್ರ ಮಗನಾದ ಶಿವರಾಜ್‍ಕುಮಾರ್ ಅವರು "ಕರ್ನಾಟಕದ 13 ಚಿತ್ರಮಂದಿರಗಳಲ್ಲಿ ಮಗಧೀರ ಅರ್ಧ ಶತಕ ಪೂರೈಸಿರುವುದು ಖುಷಿ ಕೊಟ್ಟಿದೆ" ಅನ್ನೋ ಹೇಳಿಕೆ ಕೊಟ್ರು ಗುರು. ರಾಜ್ಯದಲ್ಲಿ ಚಿತ್ರಮಂದಿರದ ಕೊರತೆ. ಕನ್ನಡ ಚಿತ್ರಗಳು ಬಿಡುಗಡೆಗಾಗಿ ಕಾಯಬೇಕಾದ ಪರಿಸ್ಥಿತಿ. ಇಂತಹ ಸನ್ನಿವೇಶದಲ್ಲಿ ಕೆ.ಎಫ್.ಸಿ.ಸಿಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಂಡು ಒಳ್ಳೆ ಅಭಿರುಚಿಯ ಮಳೆ ಬರಲಿ ಮಂಜು ಇರಲಿಯಂತಹ ಚಿತ್ರವನ್ನು ಚಿತ್ರ ಮಂದಿರದಿಂದ ಒದ್ದೋಡಿಸಿದಾಗ, ಕನ್ನಡ ಚಿತ್ರದ ಪರವಾಗಿ, ಕನ್ನಡದ ನಿರ್ಮಾಪಕರ ಪರವಾಗಿ ಒಮ್ಮೆಯೂ ದನಿ ಎತ್ತಿದ್ದು ಕಾಣಲಿಲ್ಲ. ಆದರೆ ಈಗ ಇವ್ರು ಮಗಧೀರ ಕರ್ನಾಟಕದಲ್ಲಿ 50 ದಿನ ಓಡ್ತು ಅಂತ ಅಂತ ಮಾಡೋ ಸಭೆಗೆ ಹೋಗಿ, ಅವರನ್ನ ಹಾಡಿ ಹೊಗಳೋ ಧಾರಾಳತೆ ತೋರಿಸುತ್ತಾ, ತಮ್ಮ ಕುಟುಂಬ ಮತ್ತು ಚಿರಂಜೀವಿ ಕುಟುಂಬಗಳಿಗಿರೋ ಬಾಂಧವ್ಯದ ಕಥೆ ಹೇಳುವುದನ್ನು ನೋಡಿದಾಗ, ಇವರ ನಿಷ್ಟೆ ತಮಗೆ ಅನ್ನ ಹಾಕಿರೋ ಕನ್ನಡ ಚಿತ್ರರಂಗಕ್ಕಾ ಇಲ್ಲ ಕೇವಲ ತಮ್ಮ ವೈಯಕ್ತಿಕ ಸಂಬಂಧಗಳಿಗಾ? ಅನ್ನೋ ಸಂದೇಹ ಮನಸ್ಸಲ್ಲಿ ಸುಳಿಯಲ್ವಾ ಗುರು?

ಕೊನೆಹನಿ:
ತೆಲುಗು ಚಿತ್ರವೊಂದರ 50ರ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ರಾಜಕಾರಣಿಯೊಬ್ರು ಭಾಗವಹಿಸಿದ್ದು ಮತ್ತವರ ಮನೆಮಾತು ತೆಲುಗಾಗಿದ್ದೂ ಕಾಕತಾಳೀಯಾನಾ ಗುರು?

ಸಂಸ್ಕೃತ ವಿ.ವಿ : ಈಗ ಸರ್ಕಾರ ಏನ್ಮಾಡಬೇಕು?

ಘನ ಕರ್ನಾಟಕ ರಾಜ್ಯಸರ್ಕಾರವು ಸ್ಥಾಪಿಸಲು ಮುಂದಾಗಿರೋ ಸಂಸ್ಕೃತ ವಿಶ್ವವಿದ್ಯಾಲಯವು ನಮ್ಮ ನಾಡಿಗೆ ಬೇಕೇ? ಬೇಡವೇ? ಎನ್ನುವುದರ ಬಗ್ಗೆ ಸಮಸ್ತ ಕನ್ನಡಿಗರ ಹೆಮ್ಮೆಯ ಪತ್ರಿಕೆಯಾದ ವಿಜಯಕರ್ನಾಟಕದಲ್ಲಿ ಇತ್ತೀಚಿಗೆ ಒಂದು ಸಂವಾದ ನಡೀತು. ಇದರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಕೆನ್ನೋ ವಾದವನ್ನು ಮಂಡಿಸಿದ ಮೊದಲಿಗರು ಡಾ. ಎಸ್.ಎಲ್.ಭೈರಪ್ಪನವರು. ಆಮೇಲೆ ಶತಾವಧಾನಿ ರಾ.ಗಣೇಶ್, ಡಾ. ಚಿದಾನಂದಮೂರ್ತಿ, ಡಾ. ಜಿ.ವೆಂಕಟಸುಬ್ಬಯ್ಯ, ಪ್ರೊ.ಎಲ್.ಎಸ್.ಶೇಷಗಿರಿರಾವ್ ಇವರುಗಳು ಇದೇ ವಾದಕ್ಕೆ ಬೇರೆ ಬೇರೆ ಮಗ್ಗುಲುಗಳಿಂದ ಶಕ್ತಿ ತುಂಬಲು ಪ್ರಯತ್ನ ನಡೆಸಿದರು. ಸಂಸ್ಕೃತ ವಿಶ್ವವಿದ್ಯಾಲಯ ಬೇಡವೇ ಬೇಡ ಎಂದವರಲ್ಲಿ ಶ್ರೀಯುತರಾದ ಬರಗೂರು ರಾಮಚಂದ್ರಪ್ಪ, ಜಿ.ಕೆ.ಗೋವಿಂದರಾವ್ ಮೊದಲಾದವರಿದ್ದರು. ಇಡೀ ವಾದ ಸಂವಾದದಲ್ಲಿ ಅಸಂಬದ್ಧವಿಲ್ಲದೆ ತೂಕವಾಗಿ ಬರೆದ ಡಾ.ಕೆ.ವಿ.ನಾರಾಯಣರಂತಹ ಭಾಷಾತಜ್ಞರೂ ಇದ್ದರು. ಇಡೀ ಸಂವಾದವನ್ನು ಸಂಸ್ಕೃತ ವೇದವಿಶ್ವವಿದ್ಯಾಲಯವು ಕರ್ನಾಟಕಕ್ಕೆ ಬೇಕು ಅನ್ನುವುದರಿಂದ ಆರಂಭವಾಗಿಸಿ ಸಂಸ್ಕೃತ ವಿಶ್ವವಿದ್ಯಾಲಯ ಬೇಗ ಶುರುವಾಗಲೀ ಅನ್ನೋದ್ರು ಮೂಲಕ ಕೊನೆಗೊಳಿಸಲಾಯ್ತು. ಎರಡನ್ನೂ ಮಾಡಿದವರು ಡಾ. ಭೈರಪ್ಪನವರು.

ವಿ.ವಿ ಬೇಕೆನ್ನುವ ವಾದದ ತಿರುಳು

ಈ ಸಂವಾದದಲ್ಲಿ ವಿಷಯವನ್ನು ಜಾಣತನದಿಂದ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತದ ಹಿರಿಮೆಯೆಡೆಗೆ ತಿರುಗಿಸಿದ್ದೇ ಹೆಚ್ಚು. ಸಂಸ್ಕೃತದ ವ್ಯಾಕರಣ ಕನ್ನಡದ ವ್ಯಾಕರಣಕ್ಕೆ ಮೂಲ ಎಂಬ ಪೆದ್ದುಮಾತಿನಿಂದ ಹಿಡಿದು ಸಂಸ್ಕೃತವನ್ನು ಒಪ್ಪಿದ, ಬಳಸಿದ ಕನ್ನಡದ ಹಿರಿಯರ ಬಗ್ಗೆಯೂ, ಹೊರದೇಶದವರ ಬಗ್ಗೆಯೂ ಮಾತನಾಡಲಾಯ್ತು. ಇಡೀ ಭಾರತದ ಜನರೆಲ್ಲಾ ಬಳಸುವ ಸಾಮಾನ್ಯ ಪದಗಳನ್ನು ಹುಟ್ಟು ಹಾಕಬೇಕೆಂಬ ಮಹಾಮೂರ್ಖತನವನ್ನು ಒಂದು ಶಿಕ್ಷಣ ತಜ್ಞರ ಸಮಿತಿ ಯೋಚಿಸಿತ್ತು ಮತ್ತು ಹಾಗೆ ತರಲು ಮುಂದಾಗಿತ್ತು ಎಂಬ ಬೆರಗುಗೊಳಿಸುವ ಸತ್ಯವೂ ಈ ಸಂದರ್ಭದಲ್ಲಿ ಪ್ರಪಂಚದ್ ಮುಂದೆ ಮತ್ತೊಮ್ಮೆ ಹೊರಬಂತು. (ಈ ಕಾರಣದಿಂದಲೇ ಕೂಡುವುದು ಸಂಕಲನದಾಗಿ, ಕಳೆಯುವುದು ವ್ಯವಕಲನವಾಗಿ, ತಗ್ಗುಗನ್ನಡಿ ಉಬ್ಬುಗನ್ನಡಿಗಳು ನಿಮ್ನದರ್ಪಣ ಪೀನದರ್ಪಣಗಳಾಗಿ, ಎಲೆಹಸಿರು ಪತ್ರಹರಿತ್ತಾಗಿ... ಕನ್ನಡದಲ್ಲಿನ ಕಲಿಕೆ ಕನ್ನಡಿಗರಿಗೆ ಕಬ್ಬಿಣದ ಕಡಲೆಯಾದಂತಾಗಿರೋದು) ಸಂಸ್ಕೃತದಲ್ಲಿ ಭಾರೀ ಜ್ಞಾನ ಸಂಪತ್ತಿದೆ, ಅದರಿಂದ ಕನ್ನಡಿಗರಿಗೆ – ಭಾರತಕ್ಕೆ, ಜ್ಞಾನ ವಿಜ್ಞಾನ ತಂತ್ರಜ್ಞಾನ ತರಲು ಈ ವಿಶ್ವವಿದ್ಯಾಲಯ ಸಾಧನ ಎನ್ನಲಾಯಿತು. ಈ ಜನರೇ ಸಂಸ್ಕೃತವು ಹಿಂದೆ ಬ್ರಾಹ್ಮಣರ ಸ್ವತ್ತಾಗಿತ್ತು, ಈಗ ಎಲ್ಲರಿಗೂ ಈ ವಿವಿಯ ಮೂಲಕ ಸಿಗಲು ಸಾಧ್ಯ ಎಂದಂದ ಮಾತನ್ನ ಕಾಣಬೇಕಾಯ್ತು. ಜೊತೆಯಲ್ಲಿಯೇ ಕನ್ನಡ ಇನ್ನು ಕೆಲ ದಶಕಗಳಲ್ಲಿ ಸತ್ತು ಹೋಗುವ ಭಾಷೆ. ಅದಕ್ಕೆ ಜೀವ ನೀಡಲು ಸಂಸ್ಕೃತ ವಿವಿಯ ಅಗತ್ಯವಿದೆ ಎನ್ನುವರ್ಥದ ಮಾತೂ ತೇಲಿಬಂತು. ಇದೆಲ್ಲಾ ಸಮರ್ಥನೆಗಳು ಒಂದೆಡೆಯಾದರೆ, ಮತ್ತೊಂದೆಡೆ ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವಾಗಲಿ ಎನ್ನುವ, ಕನ್ನಡದ ನುಡಿಯರಿಮೆಯ ನಿಜ ವಿದ್ವಾಂಸರನ್ನು ಗೇಲಿ ಮಾಡಿದ್ದೂ ನಡೆಯಿತು. ಸಂಸ್ಕೃತ ವಿವಿಗೆ ವಿರುದ್ಧವಾಗಿದ್ದ ಸಂಸ್ಕೃತ ವಿದ್ವಾಂಸರನ್ನು ತಮ್ಮ ನಿಲುವಿಗೆ ವಿರುದ್ಧರೆಂಬ ಕಾರಣಕ್ಕೆ ಮಾಜಿಗಳೆಂದು ಹಂಗಿಸಿದ್ದೂ ಆಯಿತು. ಭೈರಪ್ಪನವರಂತೂ ತಮ್ಮ ಕಡೆಯ ಬರಹದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಡವೆಂದು ಬರೆದವರ ಕುಲಮೂಲಗಳನ್ನೆಲ್ಲಾ ಹಿಡಿದು ಮಾನಸಿಕ ವಿಷ್ಲೇಷಣೆಗೊಳಪಡಿಸಿದವರಂತೆ ಅವರನ್ನು ಮೂರು ವರ್ಗವಾಗಿಸಿ, ಅವರ ವಿರೋಧಕ್ಕೆ ಕಾರಣಗಳೇನು ಎಂಬ ವಿಶ್ಲೇಷಣೆಯಲ್ಲಿ ತೊಡಗುವ ಮೂಲಕ ಸಂವಾದದ ಮೂಲವಿಷಯವನ್ನೇ ಗೌಣವಾಗಿಸಿಬಿಟ್ಟರು. ಸಂಸ್ಕೃತ ವಿಶ್ವವಿದ್ಯಾಲಯದಿಂದ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಗೆ ಬಹಳ ಶ್ರೇಯಸ್ಸಿದೆ, ಏಕೆಂದರೆ ಕನ್ನಡ ಸಂಸ್ಕೃತದ ಮೇಲೆ ಬಹುವಾಗಿ ಅವಲಂಬಿತವಾಗಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು. ಭಾರತೀಯ ಸಂಸ್ಕೃತಿ ಹಿರಿಮೆಯನ್ನರಿಯಲು ಈ ವಿಶ್ವವಿದ್ಯಾಲಯ ಬೇಕು ಅನ್ನಲಾಯಿತು. ಸ್ವಲ್ಪ ಚೌಕಾಸಿ ಮಾಡ್ಕೊಳ್ಳೋ ಹಾಗೆ ಇದರಲ್ಲಿ ಸಂಸ್ಕೃತದ ಜೊತೆ ಪಾಲಿ, ಪ್ರಾಕೃತ ಇತ್ಯಾದಿಗಳೂ ಇರಲಿ ಅನ್ನಲಾಯಿತು, ಇದನ್ನು ಕನ್ನಡ-ಸಂಸ್ಕೃತ ವಿಶ್ವವಿದ್ಯಾಲಯ ಅನ್ನಬೇಕು ಅನ್ನಲಾಯಿತು ಮತ್ತು ಇದರ ಹೆಸರಿಂದ ವೇದ ಅನ್ನುವುದನ್ನು ಕೈಬಿಡಬೇಕು ಅನ್ನಲಾಯಿತು. ಇದ್ಯಾವುವೂ ನಿಜವಾದ ಸಂವಾದ ಅನ್ನಿಸಲೇ ಇಲ್ಲಾ ಗುರು!

ಸರ್ಕಾರ ಕೊಡಬೇಕಾಗಿರೋ ಸ್ಪಷ್ಟನೆ!

ಕರ್ನಾಟಕ ಸರ್ಕಾರ ಮೊದಲಿಗೆ ನಾಡಿಗೆ ಸ್ಪಷ್ಟಪಡಿಸಬೇಕಿರೋ ಕೆಲವಿಷಯಗಳಿವೆ. ಈ ವಿಶ್ವವಿದ್ಯಾಲಯದ ಹೆಸರಲ್ಲಿ ವೇದ ಎಂಬುದಿದೆಯೋ? ಇದ್ದಲ್ಲಿ ಈ ವಿವಿಯಲ್ಲಿನ ಕಲಿಕೆ ವೇದಕ್ಕೆ ಮಾತ್ರಾ ಸೀಮಿತವೋ? ಅಥವಾ ಇದು ಸಂಸ್ಕೃತ ವಿಶ್ವವಿದ್ಯಾಲಯವೋ? ಈ ಉದ್ದೇಶಿತ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ ಏನು? ಇಲ್ಲಿ ಏನು ಕೆಲಸಗಳು ನಡೆಯುತ್ತವೆ? ಇದರಿಂದ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಗಳಿಗೆ ಆಗುವ ಯೋಜಿತ ಉಪಯೋಗಗಳೇನು? ಇವನ್ನೆಲ್ಲಾ ಸ್ಪಷ್ಟಪಡಿಸದೆ ಕಾಲ್ಪನಿಕ ಕಾರ್ಯಕ್ಷೇತ್ರ ಮತ್ತು ಕಾಲ್ಪನಿಕ ಬೆದರಿಕೆಗಳನ್ನು ಮುಂದಿಟ್ಟುಕೊಂಡು ಬೇಕು ಅಥವಾ ಬೇಡ ಅನ್ನೋ ವಾದಗಳನ್ನು ಅರ್ಥಪೂರ್ಣವಾಗಿ ಮಾಡೋದಾದ್ರೂ ಹೇಗೆ?

ಏನೆಂದರೂ ಸಂಸ್ಕೃತ ವಿಶ್ವವಿದ್ಯಾಲಯ ಕನ್ನಡಿಗರಿಗೆ ಆದ್ಯತೆಯಲ್ಲ!

ನಿಜಕ್ಕೂ ಇಂದಿನ ಕರ್ನಾಟಕದಲ್ಲಿ ಕನ್ನಡಿಗರ ಬದುಕಿನ ಅಗತ್ಯಗಳೇನು? ಕನ್ನಡ ನುಡಿಯರಿಮೆಯ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳೇನು? ಇದರಿಂದಾಗಿ ನಾಡಿನಲ್ಲಿ ಕನ್ನಡದ ಬಳಕೆ ಉಳಿಕೆ ಮತ್ತು ಕನ್ನಡಿಗರ ಏಳಿಗೆ ಹೇಗೆ ಸಾಧಿಸಬೇಕು ಎಂಬುದೆಲ್ಲಾ ನುಡಿಯರಿಗರ, ಆ ಮೂಲಕ ಕರ್ನಾಟಕ ರಾಜ್ಯಸರ್ಕಾರದ ಆದ್ಯತೆಯಾಗಬೇಕಿತ್ತು. ಇಂದು ಕರ್ನಾಟಕ ಸರ್ಕಾರ ಒಂದು ಅನ್ನ ಕೊಡುವ ಕಲಿಕೆಯ ವಿ.ವಿ ತೆರೆಯಲು ಸಹಾಯಮಾಡಿದ್ದರೆ ಈ ತೆರೆನಾದ ವಿರೋಧ ಇರುತ್ತಿರಲಿಲ್ಲವೇನೊ! ಆದರೆ ಸಂಸ್ಕೃತ ವೇದ ವಿಶ್ವವಿದ್ಯಾಲಯವು ನಿಶ್ಚಿತವಾಗಿ ಕನ್ನಡಿಗರಿಗೆ ಅನ್ನ ಗಳಿಸಿಕೊಡುವ ಸಂಸ್ಥೆಯಾಗಲಾರದು, ಅಥವಾ ಆ ಕಡೆಗಿನ ಅಗತ್ಯವಿರುವ ದಿಟ್ಟ ದಾಪುಗಾಲಾಗಲಾರದು. ಹಾಗಾದರೆ ಎಲ್ಲಾ ವಿವಿಗಳ ಗುರಿಯೂ ಅನ್ನ ಗಳಿಸಿಕೊಡುವುದೇ ಆಗಿಹುದೇನು? ಎಂಬಂತಿಲ್ಲ. ಅನ್ನ ಗಳಿಸಿಕೊಡದ ವಿದ್ಯೆ ನಮ್ಮ ರಾಜ್ಯಸರ್ಕಾರದ ಇಂದಿನ ಆದ್ಯತೆಯಾಗಿದೆ ಅನ್ನುವುದು ಈ ಮಾತಿನ ಅರ್ಥ. ಅದಾಗಬಾರದೆಂಬುದು ಆಶಯ. ಇದಕ್ಕಿಂತ ಮುಖ್ಯವಾಗಿ, ಇದು ಕನ್ನಡ ನುಡಿಯ ಸ್ವರೂಪ ಅರಿಯುವ, ಬೆಳೆಯುವ ಹೆಜ್ಜೆಗಳಿಗೆ ವಿರುದ್ಧ ದಿಕ್ಕಿನ ನಡೆಯಾಗುವುದು ಖಚಿತ. ಕನ್ನಡಿಗರಲ್ಲಿ ಮತ್ತಷ್ಟು ಮೇಲುಕೀಳು, ಮತ್ತಷ್ಟು ಮೇಲು ಕನ್ನಡ- ಕೆಳ ಕನ್ನಡವೆಂಬ ಭೇದಭಾವಗಳಿಗೆ ಕಾರಣವಾಗುವ ಸಂಭವವೇ ಹೆಚ್ಚು. ಇದು ತನ್ನ ಮನೆಮಕ್ಕಳನ್ನು ಉಪವಾಸ ಕೆಡವಿ ನೆರೆಮನೆ ಮಕ್ಕಳಿಗೆ ಅನ್ನವಿಟ್ಟಂತೆ ಅಷ್ಟೆ. ಹಾಗಾಗಿ ಸಂಸ್ಕೃತ ವಿಶ್ವವಿದ್ಯಾಲಯ ಆದ್ಯತೆಯ ವಿಷಯವಲ್ಲದ ಕಾರಣ ಸರ್ಕಾರ ಇದರ ಸ್ಥಾಪನೆಗೆ ಮುಂದಾಗುವ ತುರ್ತಿಲ್ಲವೆನ್ನುವುದೇ ವಾಸ್ತವವಾಗಿದೆ.

ಸಂಸ್ಕೃತ ತಾಯಿಯಾದರೂ ಅಷ್ಟೆ! ದಾಯಿಯಾದರೂ ಅಷ್ಟೆ!

ಸಂಸ್ಕೃತದಿಂದ ಕನ್ನಡ ಬಹಳ ಪಡೆದಿದೆ, ಪಡೆಯಬೇಕಾದ್ದು ಕೂಡಾ ಬಹಳ ಇರಬಹುದು. ಸಂಸ್ಕೃತವು ಸಮ್ಯಕ್ ಕೃತವಾದ ಪರಿಪೂರ್ಣ(?)ವಾದ ಸಮೃದ್ಧವಾದ ಭಾಷೆಯಿರಬಹುದು. ಇಡೀ ಜಗತ್ತೇ ಅದನ್ನು ಕೊಂಡಾಡುತ್ತಿರಬಹುದು. ಕನ್ನಡನಾಡಿನ ಆಗಿಹೋದ, ಮಾಗಿದ ವಿದ್ವಜ್ಜನರೇ ಸಂಸ್ಕೃತವನ್ನು ಪೂಜಿಸುತ್ತಿರಬಹುದು. ಇದ್ಯಾವುದೂ ಕರ್ನಾಟಕ ರಾಜ್ಯಸರ್ಕಾರಕ್ಕೆ ಸಂಸ್ಕೃತ/ ಸಂಸ್ಕೃತದಲ್ಲಿರುವ ವೇದದ ವಿಶ್ವವಿದ್ಯಾಲಯವೆನ್ನುವುದು ಆದ್ಯತೆಯ ವಿಷಯವಾಗಲು ಕಾರಣವಾಗಲಾರದು, ಆಗಬಾರದು.

ಕನ್ನಡ ಸಂಸ್ಕೃತದಿಂದ ಬೇರೆಯೇ ಆದ ಭಾಷೆ. ಇದು ಈ ಮಣ್ಣಿನ ಜನರ ಜೀವಂತ ಭಾಷೆ. ಈ ಭಾಷೆಗೆ ತನ್ನದೇ ಆದ ವ್ಯಾಕರಣವಿದೆ. ತನ್ನಕಾಲಮೇಲೆ ತಾನು ನಿಲ್ಲಬಲ್ಲ ತಾಕತ್ತು, ನಿಲ್ಲಬೇಕೆಂಬ ಹಂಬಲವಿದೆ ಮತ್ತು ಇದು ಕನ್ನಡಿಗರ ಏಳಿಗೆಗೆ ಇರುವ ದಾರಿಯಾಗಿದೆ. ಹಾಗಾಗಿ “ಕನ್ನಡಕ್ಕೆ ಈಗಿರುವ ನಾನಾ ಕ್ಷೇತ್ರಗಳಲ್ಲಿನ ಬಳಕೆಯ ವ್ಯಾಪ್ತಿಯನ್ನು ಮತ್ತಷ್ಟು ಹೇಗೆ ಹೆಚ್ಚಿಸುವುದು? ಹೇಗೆ ಈ ನುಡಿಯಿಂದಲೇ ಇಲ್ಲಿನ ಜನರು ಏಳಿಗೆ ಸಾಧಿಸುವಂತೆ ಮಾಡುವುದು? ಹೇಗೆ ಕನ್ನಡವನ್ನು ನಾಡಿನ ಸಾರ್ವಭೌಮ ನುಡಿಯಾಗಿಸುವುದು? ಹೊಸ ಸಂಸ್ಕೃತ ವೇದ ವಿಶ್ವವಿದ್ಯಾಲಯವು ಯಾವರೀತಿಯಲ್ಲಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳ ಮೇಲೆ ಪರಿಣಾಮ ಬೀರಲಿದೆ?”. ಈಗ ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲು ಸಜ್ಜಾಗಿದ್ದು ಜನರ ತೆರಿಗೆಯ ಹಣವನ್ನು ಬಳಸಿ ಸಂಸ್ಕೃತ ವೇದವಿಶ್ವವಿದ್ಯಾಲಯವನ್ನು ಕಟ್ಟಲು ಮುಂದಾಗಿರುವುದು ಈ ಎಲ್ಲಾ ಪ್ರಶ್ನೆಗಳಿಗೆ ತೃಪ್ತಿಯಾಗುವ ಉತ್ತರವನ್ನು ಕಂಡುಕೊಂಡ ಮೇಲೇನು? ಹಾಗಲ್ಲದಿದ್ರೆ ಸಂಸ್ಕೃತ ವೇದ ವಿಶ್ವವಿದ್ಯಾಲಯವೆನ್ನುವುದು ಸಾರ್ವಜನಿಕರ ಹಣ ಬಳಕೆ ಮಾಡಿ ಕಟ್ಟುವ ಒಣಪ್ರತಿಷ್ಠೆಯ ಸ್ಥಾವರವಾಗುತ್ತದೆ ಅಷ್ಟೆ.

ಒಟ್ಟಾರೆ ಸಾರಾಂಶವೇನೆಂದರೆ:
  1. ಸಂಸ್ಕೃತ ವಿವಿಯೆಂಬುದು ಜುಟ್ಟಿಗೆ ಮಲ್ಲಿಗೆ ಹೂವಿನ ವಿವಿಯೆಂಬುದರಲ್ಲಿ ಸಂದೇಹವಿಲ್ಲ. ಅದನ್ನು ಹೊಟ್ಟೆಗೆ ಹಿಟ್ಟು ತರುವ ವಿವಿ ಎಂದು ಅನೇಕರು ತಪ್ಪಾಗಿ ತಿಳಿದಿದ್ದಾರೆ.
  2. ಹಾಗೆ ತಿಳಿಯುವುದರ ಹಿಂದೆ ಅನೇಕ ತಪ್ಪು ತಿಳುವಳಿಕೆಗಳಿವೆ: (ಅ) ಸಂಸ್ಕೃತದಲ್ಲಿ ಹಿಂದೆ ಹೊಟ್ಟೆಗೆ ಹಿಟ್ಟಿನ ವಿದ್ಯೆಗಳೆಲ್ಲ ಇದ್ದವು. (ಆ) ಅವುಗಳನ್ನು ಇಂದೂ ಬಳಸಿಕೊಳ್ಳಬಹುದು (ಇ) ಕೆಲವರಂತೂ ಹುಟ್ಟಬಹುದಾದ ಅರಿಮೆಯ ದಿಟಗಳೆಲ್ಲ ಸಂಸ್ಕೃತ ಶ್ಲೋಕಗಳಲ್ಲಿ ಈಗಾಗಲೇ ಇದೆಯೆಂಬ ಮೂರ್ಖತನದ ವಾದವನ್ನೂ ಮಾಡುತ್ತಾರೆ. (ಈ) ಸಂಸ್ಕೃತದ ಅಧ್ಯಯನವು ಕನ್ನಡದ ಅಧ್ಯಯನಕ್ಕೆ ಬೇಕೇ ಬೇಕು, ಅದರ ವ್ಯಾಕರಣವು ಇದರ ವ್ಯಾಕರಣಕ್ಕೆ ಬೇಕೇ ಬೇಕು. (ಉ) ಒಳ್ಳೆಯ ಕನ್ನಡವೆಂದರೆ ಸಂಸ್ಕೃತ. (ಊ) ಇಂಗ್ಲೀಷಿನಂತಹ ಇನ್ನಿತರ ನುಡಿಗಳಿಗಿಂತ ಸಂಸ್ಕೃತದಿಂದ ಪಡೆಯಬೇಕಾದದ್ದು ಹೆಚ್ಚಿದೆ...ಇತ್ಯಾದಿ.
  3. ನಿಜಕ್ಕೂ ನೋಡಿದರೆ ಸಂಸ್ಕೃತದ ಈ ಪೂಜೆಗೆ ಅದರ ಮೇಲಿರುವ ಕುರುಡುಭಕ್ತಿ ಮತ್ತು ಅರಿಮೆಗೆ ಬೆಲೆ ಕೊಡದಿರುವಿಕೆಯೇ (ಅವೈಜ್ಞಾನಿಕತೆಯೇ) ಕಾರಣ.
  4. ಕರ್ನಾಟಕ ರಾಜ್ಯ ಸರಕಾರವು ಇಂದು ಸಂಸ್ಕೃತ ವಿವಿ ಕಟ್ಟಲು ಮುಂದುವರೆದರೆ ಅದರಿಂದ ಕನ್ನಡಿಗರ ಏಳಿಗೆಗೆ ಆಗುವ ಉಪಯೋಗ ಬಹಳ ಕಡಿಮೆ. ಏಳಿಗೆಗೆ ದಾರಿದೀಪವಾಗುವ ಶಿಕ್ಷಣಕ್ಕೆಂದೇ ಆ ಹಣವನ್ನು ಬಳಸುವುದಾದರೆ ಬೇರೆ ಯಾವ ಯೋಜನೆಗಳಿಗೆ ಹಾಕಿದರೆ ಒಳ್ಳೆಯದೋ ಆ ಯೋಜನೆಗಳ ಬಗ್ಗೆ ಚಿಂತನೆ ನಡೆಸುವುದು ವಾಸಿ. ಅದು ಬಿಟ್ಟು ಕಟ್ಟೇ ಕಟ್ಟುತ್ತೇನೆ ಎಂದು ಮುಂದುವರೆದರೆ ಅದನ್ನು ತಡೆಗಟ್ಟುವ ಶಕ್ತಿ ನಮಗಿಲ್ಲ.
  5. ಹಾಗೆಯೇ, ಕನ್ನಡದ ಬಗ್ಗೆ ಅರಿಮೆಯಿಂದ ಕೂಡಿದ ಹೊಸಶಾಲೆಗೆ ಸೇರಿರುವ ತಜ್ಞರು ಯಾರಿರುವರೋ ಅಂಥವರು “ಹೊಸಶಾಲೆಯ ವಿವಿ” ಒಂದನ್ನು ತೆರೆಯಲು ಮುಂದಾಗಿ ಸರ್ಕಾರಕ್ಕೆ ಆ ಬಗ್ಗೆ ತಿಳಿಸಿ ಹಣಸಹಾಯವನ್ನು ಕೇಳುವುದು ಒಳಿತು. ಕರ್ನಾಟಕ ಸರ್ಕಾರವು ಯಾವ ಭೇದಭಾವವನ್ನೂ ಮಾಡದೆ ಈ “ಹೊಸಶಾಲೆ”ಯ ಕನ್ನಡ ವಿ.ವಿಯನ್ನೂ ತೆರೆಯಲಿ, ಮುಚ್ಚಟೆಯಿಂದ ಪೊರೆಯಲಿ. ಯಾವ ಶಾಲೆಯಿಂದ ನಾಡಿನ ಏಳಿಗೆ ಹೆಚ್ಚುತ್ತದೆ ಎನ್ನುವುದನ್ನು ಕಾಲವೂ, ಅರಿಮೆಯೂ ತೀರ್ಮಾನಿಸಲಿ.
  6. ನಮಗಂತೂ “ಹೊಸಶಾಲೆ”ಯಿಂದಲೇ ಅದು ಆಗುವುದು ಎಂಬುದರಲ್ಲಿ ಸಂದೇಹವಿಲ್ಲ. “ಹಳೇಶಾಲೆ”ಯವರಿಗೂ ಹಾಗೇ ಅನ್ನಿಸಿದ್ರೆ ಅದು ಅವರಿಗೆ ಬಿಟ್ಟಿದ್ದು. ಆದರೆ ಇವೆರಡು ಶಾಲೆಗಳನ್ನು ಸರ್ಕಾರವು ಸಮನೋಟದಲ್ಲಿ ನೋಡಬೇಕು. ಅದೇ ಅದಕ್ಕೆ ಶ್ರೇಯಸ್ಸು, ಏಕೆಂದರೆ ಅದರಿಂದ ಅಲ್ಲದಿದ್ದರೆ ಇದರಿಂದಂತೂ ನಾಡಿನ ಏಳಿಗೆಯಾಗುವುದು ಖಂಡಿತ... ಹೀಗೆ ಒಂದಲ್ಲ ಒಂದು ಸಾಧನದಿಂದ ನಾಡಿನ ಏಳಿಗೆಗೆ ನಾಂದಿ ಹಾಡಿದ ಸರ್ಕಾರವೆಂಬ ಹೆಗ್ಗಳಿಕೆಗೆ ಈ ಸರ್ಕಾರವು ಪಾತ್ರವಾಗಲಿ!

ಹೇಳುವುದು ಒಂದೂ... ಮಾಡುವುದು ಇನ್ನೊಂದು!!


ಈ ಚಿತ್ರ ನಲವತ್ತು ವರ್ಷಕ್ಕಿಂತ ಹಿಂದಿನ ಸಂಯುಕ್ತ ಕರ್ನಾಟಕ ಪತ್ರಿಕೆಯದು. ಆವತ್ತಿಗೂ ಇವತ್ತಿಗೂ ಪರಿಸ್ಥಿತೀಲಿ ಏನಾದ್ರೂ ವ್ಯತ್ಯಾಸಾ ಇದ್ಯಾ ಗುರು? ಬಾಯಲ್ಲಿ ಹಿಂದೀ ಹೇರಿಕೆ ಮಾಡಲ್ಲಾ ಅನ್ನೋದೂ ಆದ್ರೆ ವಾಸ್ತವದಲ್ಲಿ ಅದುನ್ನೇ ಮಾಡೋದನ್ನು ಅಂದಿಗೂ ಇಂದಿಗೂ ನಮ್ಮ ಭಾರತ ಸರ್ಕಾರ ಮುಂದುವರುಸ್ತಿರೋದ್ನ ನೋಡುತ್ತಾ ಇದ್ರೆ ಇವರಿಗೆ ಭಾರತದ ನಿಜವಾದ ಏಳಿಗೆ ಒಗ್ಗಟ್ಟು ಬೇಕಾಗಿಲ್ವಾ ಅನ್ನೋ ಅನುಮಾನ ಬರುತ್ತಲ್ವಾ ಗುರು?

ಭಾರತಕ್ಕೊಪ್ಪೋ ಭಾಷಾನೀತಿ ರೂಪುಗೊಳ್ಳಲಿ!

ನಾಳೆ ಅಂದರೆ ಸೆಪ್ಟೆಂಬರ್ 14, ಹಿಂದಿ ದಿವಸ್ ಎಂದು ಇಡೀ ಭಾರತದ ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಆಚರಣೆ ಇರುತ್ತೆ. ಇದರ ವೈಭವಾನ ನೋಡಕ್ಕೆ ಬೆಂಗಳೂರಿನ ವಿಧಾನಸೌಧದ ಎದುರಿಗಿರೋ ಅಂಚೆಕಛೇರಿ ಹಿಂಬದಿಯ ಬಿ.ಎಸ್.ಎನ್.ಎಲ್ ಹತ್ರ ಹೋದ್ರೆ ಸಾಕು, ಕೋರಮಂಗಲದ ಕೇಂದ್ರೀಯ ಸದನಕ್ ಹೋದ್ರೂ ಸಾಕು. ಬೇರೆ ಊರಲ್ಲಿರೋರು ಬ್ಯಾಸರಾ ಮಾಡ್ಕೊಂಬೇಡಿ. ಸುಮ್ಕೆ ನಿಮ್ಮೂರ ಟೆಲಿಫೋನ್ ಆಫೀಸ್‍ಗೆ ಹೋಗಿನೋಡಿ ಸಾಕು. ಹಿಂದೀಲಿ ಬರೆಸಿರೋ ದೊಡ್ಡ ದೊಡ್ಡ ಬ್ಯಾನರ್‍ಗಳು ನಿಮ್ಮ ಕಣ್ಣಿಗೆ ರಾಚುತ್ತವೆ. ಒಳಿಕ್ ಹೋದ್ರೆ ನಮ್ ಕನ್ನಡದ ಪ್ರಜೆಗಳೇ ಚೆನ್ನಾಗಿ ಹಿಂದೀಲಿ ಹಾಡಿದ್ಕೆ, ಕುಣಿದಿದ್ಕೆ, ತಮ್ಮ ತಮ್ಮ ಮಕ್ಳುಗೆ ವೇಷ ಹಾಕಿದ್ಕೆ, ಮಕ್ಳುಗೂ ಹಿಂದೀ ಹಾಡು ಕಲ್ಸಿದ್ಕೆ, ಹಿಂದೀ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡ್ಸಿದ್ಕೆ, ನಾಟಕ ಹೇಳ್ಕೊಟ್ಟಿದ್ಕೆ ಅಂತ ಬಹುಮಾನ ತೊಗೋತಾ ಇರೋದ್ನ ಕಾಣಬೋದು. ಈ ದೇಶದಲ್ಲಿ ಪ್ರತಿವರ್ಷ ಹಿಂದೀನಾ ಚೆನ್ನಾಗಿ ಜಾರಿಮಾಡಿದ ಬ್ಯಾಂಕಿಗೊಂದು ಪ್ರಶಸ್ತೀನೂ ಉಂಟು. ಹಿಂದೀ ಪರೀಕ್ಷೆ ಪಾಸ್ ಆಗಿದ್ಕೆ ಭಡ್ತೀನೂ ಕೊಟ್ಟಾರು ಗುರು! ಹಿಂದೀ ಹೇರಿಕೆಯ ಈ ಘನಕಾರ್ಯಕ್ಕೆ ಅಂತಲೇ ಭಾರತ ಸರ್ಕಾರ ಜನ ಕಟ್ಟೋ ತೆರಿಗೆ ಹಣದಲ್ಲಿ ನೂರಾರು ಕೋಟಿಗಳನ್ನು ಮೀಸಲಿಡುತ್ತೆ.

ಹಿಂದಿ ಹೇರಿಕೆಯೆಂಬ ಅಸಮಾನತೆಯ ಮೂಲವ್ಯಾಧಿ !

ಸುಮ್ನೆ ಬಾಯಲ್ಲಿ ‘ಭಾರತದ ಜೀವಾಳವೇ ಸಮಾನತೆ’ ಅಂತಾ ಹೇಳ್ತಾ, ಒಂದು ಭಾಷೇನಾ ಏಕತೆಯ, ರಾಷ್ಟ್ರಪ್ರೇಮದ, ರಾಷ್ಟ್ರೀಯತೆಯ, ಒಗ್ಗಟ್ಟಿನ ಸಾಧನ ಅನ್ನುತ್ತಾ ಉಳಿದ ಭಾಷಾ ಜನಾಂಗಗಳ ತಲೆ ಸವರೋ ವ್ಯವಸ್ಥೆಯಿಂದ ನಾಡಿನಲ್ಲಿ ಒಗ್ಗಟ್ಟು ಮೂಡಿ, ಏಳಿಗೆ ಆಗುತ್ತೆ ಅಂದ್ಕೊಳ್ಳೋದು ಮೂರ್ಖತನದ ಪರಮಾವಧಿ ಆಗುತ್ತೆ ಗುರೂ, ಯಾಕಂದ್ರೆ ಇಂಥಾ ಕ್ರಮ ಉಳಿದ ಭಾಷೆಗಳ ಬಳಕೆಯ ಸಾಧ್ಯತೇನಾ, ವ್ಯಾಪ್ತೀನಾ ಕುಗ್ಗಿಸುತ್ತಾ ಬರುತ್ತೆ. ಇದರಿಂದ ಅಂಥಾ ಭಾಷಿಕರಲ್ಲಿ ತಮ್ಮ ನುಡಿಯ ಬಗ್ಗೆ ಕೀಳರಿಮೆ ಹುಟ್ಕೊಳುತ್ತೆ. ಇಂಥಾ ಜನಾಂಗಗಳಲ್ಲಿ ಒಂದು ಹಂತದ ನಂತರ ತಮ್ಮತನಾ ಉಳುಸ್ಕೊಳ್ಳೋಕೆ ಏನನ್ನಾದ್ರೂ ವಿರೋಧಿಸೋ ಮನಸ್ಸು ಹುಟ್ಟುತ್ತೆ. ಈ ಅಭದ್ರತೆಯ ಭಾವನೆಯಿಂದಾಗಿ ಭಾರತದ ಒಗ್ಗಟ್ಟು, ಹೆಚ್ಚಾಗುವ ಬದಲು ಮುರಿದು ಹೋಗುತ್ತೆ. ಯಾರಿಗಾಗಿ ಈ ನಮ್ಮ ನಾಡು? ಯಾರಿಗಾಗಿ ಈ ನಮ್ಮೂರಿನ ವ್ಯವಸ್ಥೆ? ಈ ವ್ಯವಸ್ಥೆಯಲ್ಲಿ ನನ್ನ ಹಿತಕ್ಕೆ ಅವಕಾಶವೇ ಇಲ್ಲದ ಮೇಲೆ ಯಾಕೆ ಇದು ಬೇಕು? ಅನ್ನೋ ಒಡಕಿನ ದನಿಗೆ ಇದು ಕಾರಣವಾಗುತ್ತೆ. ‘ನಾಡು ಒಂದು ಮಾಡಲು ಹಿಂದೀ (ಅಥವಾ ಒಂದು ಭಾಷೆ) ಬೇಕು, ಹಿಂದೀ ಪೂರಕ’ ಅನ್ನೋ ಭ್ರಮೆ ಭಾರತ ಸರ್ಕಾರಕ್ಕೆ ಕಳಚೋ ಮೊದಲು ಒಕ್ಕೂಟವೇ ಕಳಚಿ ಬೀಳೋದ್ನ ಕಾಣೋ ದೌರ್ಭಾಗ್ಯ ಭಾರತೀಯರಿಗೆ ಒದಗಿಬರುತ್ತೆ! ಇದ್ನ ತಡೆಯೋಕೆ ಇರೋ ಒಂದೇ ಮಂತ್ರ : ಸಮಾನ ಗೌರವದ ಒಕ್ಕೂಟ ವ್ಯವಸ್ಥೆ.

ಸಮಾನತೆಯೇ ಏಕತೆಗೆ ಸಾಧನ

ಹೌದೂ ಗುರು! ಸಮಾನತೆಯೆಂಬ ಸರಳ ತಂತ್ರವೇ ಭಾರತದ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ. ಮಹಾಮಂತ್ರ. ಪ್ರತಿಯೊಂದು ಪ್ರದೇಶದ ಜನರ ನುಡಿಯಲ್ಲೇ ಆಯಾ ಪ್ರದೇಶದ ಆಡಳಿತ ಇರಬೇಕು. ರಾಜ್ಯರಾಜ್ಯಗಳ ಸಂಬಂಧಗಳು ಆಯಾ ನುಡಿಗಳಲ್ಲಿ ಆಗಬೇಕು. ಹಾಗಾಗುತ್ತಾ? ಅಂತಾ ಅನುಮಾನಾ ಇರೋರು ಪ್ರಪಂಚದ ಭಿನ್ನ ಭಾಷಿಕ ದೇಶಗಳು ಹೇಗೆ ವ್ಯವಹರಿಸುತ್ತವೆ ಎಂಬುದನ್ನು ನೋಡಿ ತಿಳಿಯಬಹುದು. ರಾಜ್ಯರಾಜ್ಯಗಳ ನಡುವಿನ ಸಮಾನ ವಿಷಯಗಳು, ಸಮಾನ ಆಸಕ್ತಿಗಳು, ಸಮಾನ ಹಿತಗಳು (common interests) ಮಾತ್ರವೇ ಭಾರತವನ್ನು ಒಂದಾಗಿಡಬಲ್ಲುದಲ್ಲದೆ ಇರುವ ವೈವಿಧ್ಯತೆಯನ್ನು ಅಳಿಸೋದಲ್ಲಾ ಅಲ್ವಾ ಗುರು? ಭಾರತ ತನ್ನ ಭಾಷಾನೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ರಾಷ್ಟ್ರಭಾಷೆಯೆಂಬ ನೇರದಾರಿಯಿಂದಲೋ, ಭಾರತ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ/ ಆಡಳಿತ ಭಾಷೆ ಎಂಬ ಅಡ್ಡದಾರಿಯಿಂದಲೋ ಹಿಂದಿಯನ್ನು ಸ್ಥಾಪಿಸುವ ಆತ್ಮಹತ್ಯೆಯಂಥಾ ಕ್ರಮವನ್ನು ಭಾರತ ಸರ್ಕಾರ ಕೈಬಿಡಲಿ! ಗುರು!!

ಹಿಂದಿ ಒಪ್ಪೋದು ರಾಷ್ಟ್ರೀಯ ಏಕತೆಗೆ ಪೂರಕಾನಾ?

“ಅಣ್ಣದೀರಾ! ನಿಮ್ಮ ಭಾಷೇನಾ ನೀವು ಮನೇಲಿ ಬಳುಸ್ಕೊಳ್ಳಿ, ಬೆಳುಸ್ಕೊಳ್ಳಿ… ಆದ್ರೆ ಸರ್ಕಾರದ, ಸಮಾಜದ ಜೊತೆಗಿನ ವ್ಯವಹಾರಾನ್ನೆಲ್ಲಾ ನಮ್ ಭಾಷೇಲಿ ಮಾಡಿ. ಯಾಕಂದ್ರೆ ಭಾರತದಲ್ಲಿ ಒಗ್ಗಟ್ಟು ಹೆಚ್ಚಬೇಕು, ಭಾರತ ದೇಶದ ಎಲ್ಲಾ ಪ್ರಜೆಗಳ್ಗೂ ಅರ್ತ ಆಗೋಕೆ ನಮ್ ಭಾಷೇನೆ ಬಳುಸ್ಬೇಕು. ಇದೇ ಕಾರಣಕ್ಕೆ ನೀವು ನಮ್ ಭಾಷೇನ ಕಲೀಬೇಕು, ಇಲ್ದಿದ್ರೆ ಭಾರತದಲ್ ಇರಕ್ ನಾಲಾಯಕ್ಕು. ಇದುನ್ ಬ್ಯಾಡಾ ಅಂದ್ರೆ, ವಿರೋಧಾ ಮಾಡುದ್ರೆ, ಇದುನ್ ಕಲೀದೆ ಹೋದ್ರೆ ನೀವು ದೇಶದ್ರೋಹಿಗಳಾಗ್ತೀರಾ, ಇದುನ್ ಒಪ್ಪಿ ಕಲಿತರೆ ನಿಮಗೆ ದೇಶಪ್ರೇಮ ಇದೆ ಅಂತಾ ಅರ್ತ” ಅನ್ನೋ ಮಾತುನ್ನ ಏನಂತಾ ಕರೀತೀರಾ? ಈ ಮಾತಿಗೆ ಮರುಳಾದ್ರೆ ನಮ್ಮ ಗುಂಡೀನಾ ನಾವೇ ತೋಡ್ಕೊಂಡಂಗ್ ಆಗಲ್ವಾ ಗುರು?

ದೇಶಪ್ರೇಮ ಮತ್ತು ಹಿಂದಿ!

ನೀವು ಹಿಂದೀ ಕಲೀದಿದ್ರೆ ನಿಮಗೆ ದೇಶಪ್ರೇಮ ಇಲ್ಲಾ ಅನ್ನೋ ಮಾತಾಡೋರು ತಿಳ್ಕೊಬೇಕಾದ್ದು ಒಂದಿದೆ. ಯಾವುದೇ ವ್ಯಕ್ತಿ ತನ್ನಂತಾನೆ ಹಿಂದಿ ಕಲೀಬಾರ್ದು, ಅಸ್ಸಾಮೀಸ್ ಕಲೀಬಾರ್ದು ಅಂತನ್ನೋ ಮಾತೇ ಆಡ್ತಿಲ್ಲ. ನಮ್ಮ ಜನರನ್ನು ಕಾಪಾಡಬೇಕಾದ ಭಾರತ ಸರ್ಕಾರಾನೇ ಹಿಂದೀನ ಕಲೀದಿದ್ರೆ ನಿಮಗೆ ನೀರಿಲ್ಲ, ನೆರಳಿಲ್ಲ ಅನ್ನೋ ಧೋರಣೆ ಹೊಂದಿರೋದು ಸರಿಯಲ್ಲ ಅಂತಿದೀವಿ. ಹಿಂದೀ ಹೇರಿಕೆಯ ಇಂಥಾ ಪರಿಸ್ಥಿತಿ ಹುಟ್ಟುಹಾಕಕ್ಕೆ ನಾವೇ ಆರಿಸೋ ಸರ್ಕಾರ ಮುಂದಾಗೋದ್ರ ಅರ್ಥ ಇದು ನಮ್ಮ ಸರ್ಕಾರ ಅಲ್ಲಾ, ನಮ್ಮತನಾನ ಅಳಿಸಲು ಮುಂದಾಗಿರೋ ಸರ್ಕಾರ ಅಂತಾ ಅಲ್ವಾ? ಹಾಗೂ ನಾವೆಲ್ಲಾ ಹಿಂದೀನ ಕಲುತ್ರೆ ಮಾತ್ರಾ ದೇಶಪ್ರೇಮಿಗಳಾ? ಹಿಂದಿ ಭಾಷೆಯ ಗಂಧ ಗಾಳಿ ಇಲ್ಲದಿದ್ದ ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಶಿವಪುರದ ಸತ್ಯಾಗ್ರಹಿಗಳು, ವಿದುರಾಶ್ವತ್ಥದ ಗೋಲೀಬಾರಿನಲ್ಲಿ ಜೀವ ತೆತ್ತವರು… ಇವರೆಲ್ಲಾ ಹಾಗಾದ್ರೆ ದೇಶದ್ರೋಹಿಗಳಾ? ಅಥವಾ ಇವರೆಲ್ಲಾ ಹಿಂದೀ ಕಲಿತು ದೇಶಪ್ರೇಮ ಬರುಸ್ಕೊಂಡ್ರಾ? ಹಿಂದಿ ಕಲಿಕೆಗೂ ದೇಶಭಕ್ತಿಗೂ ತಳುಕು ಹಾಕೋದು ಅಂದ್ರೆ ಇದು ನಮ್ಮೊಳಗಿರೋ ಭಾರತದ ಬಗೆಗಿನ ಶ್ರದ್ಧೆ ನಿಷ್ಠೇನಾ ಸಾಣೆ ಹಿಡೀತೀವಿ ಅನ್ನುತ್ತ ತಮ್ಮ ಬೇಳೆ ಬೇಯುಸ್ಕೊಳಕ್ಕೆ ಹಿಂದಿ ಪ್ರದೇಶದ ಜನರು ಹೂಡಿರೋ ತಂತ್ರಾ ಅನ್ಸಲ್ವಾ ಗುರು? ಇಷ್ಟಕ್ಕೂ ಈ ಥರಾ ನಾವೆಲ್ಲಾ ಹಿಂದಿ ಕಲುತ್ರೆ ಭಾರತಕ್ಕೆ ಏನು ಲಾಭ ಅಂತಾ ನೋಡೋಣ ಬಾ ಗುರು!!

ಸಂಪರ್ಕ ಭಾಷೆ ಹಿಂದಿ ಆದ್ರೇನಾಗುತ್ತೆ ಗೊತ್ತಾ?

“ನೀವು ಕರ್ನಾಟಕದಿಂದ ಹೊರಗ್ ಬಂದು ನೋಡಿ, ಅಲ್ಲಿನ ಊರುಗಳಿಗೆ ಹೋದಾಗ ಯಾವ ಭಾಷೆ ಮಾತಾಡ್ತೀರಿ? ಎಷ್ಟೂ ಅಂತಾ ಭಾಷೆಗಳನ್ನು ಕಲೀತೀರಿ? ಅಧಿಕೃತವಾಗೇ 22 ಭಾಷೆಗಳಿವೆ, ಅವೆಲ್ಲಾ ಕಲಿಯಕ್ ಆಗುತ್ತಾ? ಅದರ ಬದಲಾಗಿ ಒಂದು ಭಾಷೆಯಾಗಿ ಹೆಚ್ಚು ಜನಕ್ ತಿಳಿದಿರೋ ಹಿಂದೀ ಬಳಸೋದು ಒಳ್ಳೇದಲ್ವಾ?” ಅಂತ ಹಿಂದಿ ಬೇಕೆನ್ನೋ ಗೆಳೆಯರು ವಾದಿಸೋದನ್ನು ನಾವೂ ನೀವೂ ಕೇಳೇ ಇರ್ತೀವಿ. ಈಗ ಒಂದು ಕಡೆಯಿಂದ ನಾವು ಹೀಗ್ ಮಾಡೋದ್ರು ಪರಿಣಾಮ ಏನಾದೀತು ಅಂತ ನೋಡೋಣ. ನಮ್ಮ ಕನ್ನಡನಾಡಿನ ಒಂದು ಊರಿಗೆ (ಉದಾಹರಣೆಗೆ ಶಿವಮೊಗ್ಗಾ ಅಂದ್ಕೊಳ್ಳಿ) ಭಾರತದ ಬೇರೆ ಬೇರೆ ಮೂಲೆಗಳಿಂದ ತಮಿಳ್ರು, ತೆಲುಗ್ರು, ಗುಜರಾತಿಗಳೂ, ಪಂಜಾಬಿಗಳೂ, ಅಸ್ಸಾಮಿಗಳೂ, ಬೆಂಗಾಲಿಗಳೂ, ಒರಿಯಾದವರೂ… ಅವ್ರೂ ಇವ್ರೂ ಎಲ್ಲಾ ಬರ್ತಾರೆ. ಇವರೆಲ್ಲಾ ಯಾಕೆ ಬರ್ತಾರೆ ಅಂದ್ರೆ ಅಲ್ಲಿಗೆ ಹೊಸ ಹೊಸ ಉದ್ದಿಮೆಗಳನ್ನು ತರೋ ಮೂಲಕ ನಮ್ಮ ಯಡ್ಯೂರಪ್ಪನೋರು ಉದ್ಯೋಗಾವಕಾಶಗಳನ್ನು ಹೆಚ್ಚಿಸಿದ್ರು ಅಂತಾನೆ ಇಟ್ಕೊಳ್ಳಿ. ಇವರೆಲ್ಲಾ ನಮ್ಮ ಘನಸರ್ಕಾರದ ಮತ್ತು ಹಿಂದೀವಾದಿಗಳ ಆಶಯದಂತೆ ಹಿಂದಿಯನ್ನು ಕಲಿತೇ ಬರ್ತಾರೆ ಅಂದುಕೊಳ್ಳೋಣ. ಈಗ ಇವರ ಜೊತೆ ವ್ಯವಹರಿಸಬೇಕಾಗಿರೋ ನಮ್ಮೂರಿನ ಆಟೊದವ್ರು, ಬಸ್ಸಿನವ್ರು, ತರಕಾರಿಯೋರು, ಮನೆಕೆಲ್ಸದೋರು, ದಿನಸಿ ಅಂಗಡಿಯೋರು, ಮಾಲ್‍ಗಳೋರು, ನಗರಪಾಲಿಕೆಯೋರು, ತೆರಿಗೆ ಇಲಾಖೆಯೋರು, ರಾಜ್ಯಸರ್ಕಾರದೋರು ಎಲ್ಲಾ ಹಿಂದೀಲಿ ತಾನೇ ವ್ಯವಹರಿಸಬೇಕು? ಅಷ್ಟೇ ಅಲ್ಲಾ, ನೀರಿನ ಬಿಲ್ಲಿಂದ ಹಿಡ್ದು ಜಾಹೀರಾತು ಫಲಕಗಳ ತನಕ ಎಲ್ಲಾದ್ರಲ್ಲೂ, ಇವರೆಲ್ಲಾ ಕಲಿತು ಬಂದಿರೋ ಹಿಂದೀ ತಾನೇ ಇರಬೇಕಾದ್ದು? ಪಕ್ಕದ ಗಾಜನೂರಿನ ಗಂಡು, ಓದು ತಲೆಗೆ ಹತ್ತಿಲ್ಲಾ ಅಂತಾ ಶಿವಮೊಗ್ಗಾಕ್ಕೆ ಬಂದು ಏನಾದ್ರೂ ಕೆಲಸ ಹುಡುಕ್ಕೊತೀನ್ ಅಂದ್ರೆ ಆಗುತ್ತಾ? ಆಟೋ ಓಡ್ಸೋದ್ರಿಂದ ಹಿಡ್ದು ಅಂಗಡಿ ಸೇಲ್ಸ್‍ಬಾಯ್ ಆಗೋಕೂ ಬರೀ ಹಿಂದೀ ಬರಲ್ಲಾ ಅನ್ನೋ ಒಂದು ಕಾರಣಕ್ಕೆ ಅವ ನಾಲಾಯಕ್ಕಾಗಲ್ವಾ? ಇಂಥಾ ಶಿವಮೊಗ್ಗದಲ್ಲಿ ಕನ್ನಡದ ಗತಿ ಏನಾಗಿರುತ್ತೆ? ಕನ್ನಡಿಗರ ಗತಿ ಏನಾಗಿರುತ್ತೆ? ಅಂತಾ ಒಸಿ ಯೋಚ್ಸು ಗುರು… ಕನ್ನಡ ಅನ್ನೋದು ಅಡುಗೆ ಮನೆ ಸೇರ್ಕೊಂಬುಡುತ್ತೆ ಅಂತೀರಾ? ಊಹೂ, ಅದೂ ಆಗಲ್ಲ. ಯಾಕಂದ್ರೆ ಅಷ್ಟು ಹೊತ್ತಿಗೆ ಮಾರ್ಕೆಟ್‍ನಲ್ಲಿ ಕೊಂಡು ಅಡುಗೆ ಮನೆಗೆ ನಾವು ತಂದಿಡೋದು ಸಬ್ಜಿ., ದಾಲ್, ಚಾವಲ್ ಆಗೋಗಿರುತ್ತಲ್ಲಾ? ಸೌಹಾರ್ದತೆ ಅಂತಾ ನಾವೇನಾದ್ರೂ ಹಿಂದೀನಾ ಒಪ್ಪೋದಾದ್ರೆ ನಮಗಾಗಿ ನಾವೇ ಸರಿಯಾದ ಅಳತೆಯ, ಒಳ್ಳೇ ಶ್ರೀಗಂಧದ ಸೊಗಸಾದ ಶವಪೆಟ್ಟಿಗೆ ಮಾಡ್ಕೊಂಡಂಗೆ ಅಂತಾ ಅನ್ಸಲ್ವಾ ಗುರು?

ಹಿಂದಿ ಬೇಕು ಅನ್ನೋದ್ರು ಹಿಂದಿರೋ ನಿಜಕಾರಣ

“ಕನ್ನಡದ ಮಂಕುಮುಂಡೇವಾ, ಭಾರತದ ಒಗ್ಗಟ್ಟು ಅಂದ್ರೇನು ಗೊತ್ತಾ? ಇಡೀ ಭಾರತದ ಯಾವ ಮೂಲೆಗೆ ಹೋದ್ರೂ ಹಿಂದಿಯೆನ್ನುವ ನಮ್ಮ ಭಾಷೆ ನಡೀಬೇಕು. ಹಿಂದಿ ಮಾತಾಡೋಕೆ ಬರದಿದ್ರೆ ಭಾರತೀಯ ಅಲ್ಲಾ ಅಲ್ವಾ, ಹಾಗಾಗಿ ಹಿಂದಿ ಮಾತಾಡೋರಿಗೆ ಅಂದ್ರೆ ಭಾರತೀಯರಿಗೆ ಭಾರತದ ಯಾವ ಮೂಲೇಲೂ ಕಳ್ಳೇಕಾಯಿ ತೊಗೊಳ್ಳೋಕೂ ಭಾಷಾ ಸಮಸ್ಯೆ ಆಗಬಾರದು. ನೀವು ಚೆನ್ನಾಗಿ ಹಿಂದೀನ ಕಲಿತುಕೊಳ್ಳಿ ಅಂತಾನೆ ರೈಲ್ವೇ ಡಿ ದರ್ಜೆ ಕೆಲಸಗಳ ಥರದ ಕೇಂದ್ರಸರ್ಕಾರದ ಕೆಲಸಗಳು ಬೇಕು ಅನ್ನೋದಾದ್ರೆ ಅರ್ಜೀನಾ ಹಿಂದೀಲಿ ಬರೀರಿ ಅನ್ನೋದು. ಇಲ್ಲಾಂದ್ರೆ ನೀವು ಕೆಲಸ ಮಾಡೋ ರೈಲು ನಿಲ್ದಾಣಕ್ಕೆ ಬರೋ ಭಾರತೀಯರಿಗೆ ತೊಂದರೆ ಆಗಲ್ವಾ? ಇವತ್ತು ನಿಮಗೆ ಅನ್ನ ಕೊಡಕ್ಕೆ ಇಂಗ್ಲೀಷ್ ಇದೆ ಅಂತೀರಾ? ಥೂ… ಅದು ನಮ್ಮನ್ನು ಮುನ್ನೂರು ವರ್ಷ ಗುಲಾಮರನ್ನಾಗಿಸಿದ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಕುರುಹು. ಹೋಗಿ ಹೋಗಿ ಅಷ್ಟು ದೂರದಲ್ಲಿರೋ ಇಂಗ್ಲೀಷ್ ಸೂಜಿಯಿಂದ ಯಾಕೆ ಕಣ್ಣು ಚುಚ್ಕೋತೀರಾ? ಇಗೋ ನೋಡಿ, ನಿಮ್ಮದೇ ದೇಶದ ಹೊಚ್ಚ ಹೊಸ ಚಿನ್ನದ ಸೂಜಿಯಿದೆ, ತಗೊಂಡು ಹೆಟ್ಕೊಳ್ಳಿ” ಅಂತೆಲ್ಲಾ ಹೇಳುದ್ರೆ ಜನಾ ಕೇಳ್ತಾರಾ ಗುರು? ಅದುಕ್ಕೆ ನಿಮ್ಮ ರಾಷ್ಟ್ರಪ್ರೇಮದ ಕುರುಹಾಗಿ, ಭಾರತದ ಒಗ್ಗಟ್ಟಿಗಾಗಿ, ಭಾರತೀಯರೆಲ್ಲರೂ ಒಂದೆಂದು ಸಾರಲಿಕ್ಕಾಗಿ, ಹಿಂದೀ ಎಂಬ ರಾಷ್ಟ್ರೀಯ ಮಟ್ಟದ ಉರುಫ್ ರಾಷ್ಟ್ರೀಯ ಉರುಫ್ ರಾಷ್ಟ್ರಭಾಷೇನಾ (ನೀವು ಸುಮ್ನೆ ಗೊಂದಲ ಮಾಡ್ಕೊಳ್ಳಿ ಅಂತಾ ಅಷ್ಟು ಹೆಸರು) ಒಪ್ಪಿಕೊಳ್ರೋ ಹುಚ್ಚಪ್ಪಗಳಿರಾ ಅಂತಿದಾರೆ ಅನ್ನೋದೇ ದಿಟ ಅಲ್ವಾ ಗುರು?

ಮಾತಾಡೋರು ಹೆಚ್ಚು ಅಂತಾ ಹಿಂದೀನಾ ಒಪ್ಪಕ್ಕಾಗುತ್ತಾ?

ಭಾರತ ದೇಶದಲ್ಲಿ ಹಿಂದೀನ ತಾಯ್ನುಡಿಯಾಗಿ ಹೊಂದಿರೋರು ಎಷ್ಟು ಜನಾ? ಅಂತ ಕೇಳುದ್ರೆ ನಾವು ನೋಡೋದು 2001ರ ಜನಗಣತಿಯ ಮಾಹಿತಿ ಕಡೇನೇ ಗುರು! ಇದು ಭಾರತ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಸಿಗ್ತಾಯಿದೆ, ನೋಡಿ. ಇದರ ಪ್ರಕಾರ ಭಾರತದಲ್ಲಿ ಹಿಂದೀನ ತಾಯ್ನುಡಿಯಾಗಿ ಹೊಂದಿರೋರ ಸಂಖ್ಯೆ ಸುಮಾರು 42 ಕೋಟಿ. ಇದು ಭಾರತದ ಒಟ್ಟು ಜನಸಂಖ್ಯೆಯಾದ 102.87 ಕೋಟೀಲಿ ಶೇಕಡಾ 41ರಷ್ಟು ಅಂತ ನಾವು ನಂಬಬೇಕಾಗುತ್ತೆ.

ಹಿಂದಿ ತಾಯ್ನುಡಿಯಾಗಿರೋರ ನಿಜಸಂಖ್ಯೆ!

ಒಸಿ ಇದರ ಆಳಕ್ಕಿಳಿದು ನೋಡುದ್ರೆ ಕಾಣೋದು ಬೇರೇನೆ ಗುರು! ಇಲ್ಲಿ ಹಿಂದಿ ಅಂದ್ರೆ ಬರೀ ಹಿಂದಿ ಅಲ್ಲಾ... ಹಿಂದಿ ಅಂದ್ರೆ ಒಟ್ಟು 50 ಭಾಷೆಗಳ ಸಮೂಹ. ಈ ಪಟ್ಟೀಲಿ ಇಡೀ ಒಂದು ರಾಜ್ಯದ ಭಾಷೆಗಳಾದ ಭೋಜ್‍ಪುರಿ, ಚತ್ತೀಸ್‍ಘರೀ, ಹರ್ಯಾನ್ವಿ, ರಾಜಾಸ್ಥಾನಿಗಳೂ ಸೇರ್ಕೊಂಡಿವೆ. ಇದರಲ್ಲಿರೋ ಭಾಷೆಗಳನ್ನು ನೋಡ್ತಿದ್ರೆ ಅನ್ಸೋದು ಈ ಹಿಂದೀ ಅನ್ನೋ ಹೆಸರಲ್ಲಿ ಎಷ್ಟೊಂದು ಭಾಷೆಗಳನ್ನು ನಾಶ ಮಾಡಕ್ ಮುಂದಾಗಿದೆ ಭಾರತ ಸರ್ಕಾರ ಅಂತಾ ಗುರು! ಅದೆಂಗೇ ಅಂತಾ ಕೇಳ್ತೀರಾ? ಇವೆಲ್ಲದರ ತಲೆ ಮೇಲೆ ಭಾರತ ಸರ್ಕಾರವೇ ಹೇರಲು ಮುಂದಾಗಿರೋ ಒಂದು ಭಾಷೆ ಇದೆ. ಅದರ ಹೆಸರು "Standard hindi" ಅಂದ್ರೆ "ಪ್ರಮಾಣಿಕೃತ ಹಿಂದಿ" ಅಂತ. ಅಂದರೆ ಇವತ್ತಿನ ದಿನ ಭಾರತ ಸರ್ಕಾರ ತನ್ನ ನಾಡಿನ 24%ರ‍ಷ್ಟು ಜನರು ಬಳುಸ್ತಿರೋ(?) ನುಡೀನಾ ಅಧಿಕೃತ ಭಾಷೆ ಅಂತಾನೂ, ರಾಷ್ಟ್ರೀಯ ಭಾಷೇ ಅಂತಾನೂ ಸುಳ್ಳು ಹರುಡ್ತಾ, ಇಡೀ ಭಾರತದ ಹೆಚ್ಚು ಜನರ ತಾಯ್ನುಡಿಯೆನ್ನುತ್ತಾ ಉಳಿದ 76% ಜನತೆಯ ಮೇಲೆ ಹೇರಕ್ಕೆ ಹೊರಟಿರೋದು ಯಾವ ಸೀಮೆ ಪ್ರಜಾಪ್ರಭುತ್ವಾ? ಗುರು!
ಇದರ ಜೊತೇಲೆ ಹಿಂದೀ ಮಾತಾಡೋರೂ, ಬಲ್ಲೋರೂ ಹೆಚ್ಚಾಗಿದಾರೆ ಅನ್ನೋ ಮಾತು ಕೂಡಾ ಅಸಂಬದ್ಧವಾದ್ದೇ ಆಗಿದೆ. ಅರವತ್ತು ವರ್ಷದಿಂದ ನಾನಾ ತಂತ್ರಗಳ ಮೂಲಕ ಹಿಂದೀನಾ ಹೇರ್ತಾ ಇದ್ರೂ ಈ ಮಾತು ಕರ್ನಾಟಕಕ್ಕೆ ಅನ್ವಯ ಆಗಲ್ಲ. ಯಾಕಂದ್ರೆ ಇವತ್ತು ಹಿಂದೀ ಗೊತ್ತಿರೋ ಕನ್ನಡದೋರು ಎಷ್ಟು ಜನ ಇದಾರೆ ಅಂತಾ ನೋಡಕ್ಕೆ ರೈಲ್ವೇ ನೇಮಕಾತಿಯ ಪ್ರಹಸನಾನೆ ನೋಡೋಣ. ನೈಋತ್ಯ ರೈಲ್ವೇಲಿ ಖಾಲಿಯಿದ್ದ 4701 ಡಿ ದರ್ಜೆ ಹುದ್ದೆಗಳಿಗೆ ಹಿಂದೀಲಿ ಅರ್ಜಿ ಬರೀಬೇಕಾದ್ದು ಕಡ್ಡಾಯ ಅಂದಾಗ, ಆ ಪರೀಕ್ಷೆಗೆ ಹಾಜರಾದ ಕನ್ನಡಿಗರ ಸಂಖ್ಯೆ ಉಳಿದೋರ ಸಂಖ್ಯೆಯ ಮುಂದೆ ಎಷ್ಟು ಕಮ್ಮಿಯಿತ್ತು ಅನ್ನೋದನ್ನು ನೋಡುದ್ರೆ ಇದು ತಿಳಿಯುತ್ತೆ ಗುರು! ಒಟ್ನಲ್ಲಿ ಅರವತ್ತು ವರ್ಷದಿಂದ ನಿರಂತರವಾಗಿ ಹಿಂದೀ ಹೇರಿದ್ರಿಂದ ನಾವು ಕೆಲಸ ಕಳ್ಕೊಂಡ್ವೇ ಹೊರತು ಹಿಂದೀ ಕಲೀಲಿಲ್ಲಾ!

ಹಿಂದಿಯೋರ ಸಂಖ್ಯೆ 90% ಆಗಿರಲಿ..So what?

ನಮ್ಮ ಹಿಂದೀ ಭಕ್ತರು "ನೋಡುದ್ರಾ, ನೀವ್ ಏನೇ ಲೆಕ್ಕ ಕೊಟ್ರೂ ಹಿಂದೀ ಮಾತಾಡೋರು ತಾನೆ ಹೆಚ್ಚು ಸಂಖ್ಯೇಲಿರೋದು? ಅದಕ್ಕೆ ಹಿಂದೀ ರಾಷ್ಟ್ರಭಾಷೆ ಆಗಬೇಕು" ಅಂದಾರು, ಜ್ವಾಪಾನ! ಹಿಂದೀ ತಾಯ್ನುಡಿಯೋರು 24% ಅಲ್ಲಾ 90% ಆದ್ರೂ ಏನೀಗ? ನಮ್ಮ ನಾಡಲ್ಲಿ ಹಿಂದೀ ನಮ್ಮದಲ್ಲದ ನುಡಿ. ಇದನ್ನು ನಮ್ಮ ಮಕ್ಕಳ ಮೇಲೆ ಕಲಿಕೆಯಲ್ಲಿ ಕಡ್ಡಾಯ ಮಾಡೋದಾಗಲೀ, ನಮ್ಮ ಜನರ ಮೇಲೆ ಆಡಳಿತದ ಹೆಸರಲ್ಲಾಗಲೀ, ಕೆಲಸ ಸಿಗಲು ಬೇಕಾದ ಅರ್ಹತೆಯೆಂದಾಗಲೀ ಆಮಿಷ, ಒತ್ತಾಯ, ಬಲವಂತ ಮಾಡಿ ಹೇರೋದನ್ನು ಅದೆಂಗೆ ಒಪ್ಪಕ್ ಆಗುತ್ತೆ? ಸರಿಯಾದ ವ್ಯವಸ್ಥೇಲಿ ನಮ್ಮ ಕನ್ನಡವನ್ನೇ ಇವತ್ತು ಅನ್ನ ಕೊಡೋ ಭಾಷೆಯನ್ನಾಗಿಸಲು ಕರ್ನಾಟಕ ಸರ್ಕಾರ ಮುಂದಾಗಬೇಕು, ಕೇಂದ್ರಸರ್ಕಾರ ಹಿಂದಿನ ಬೆನ್ನೆಲುಬಾಗಬೇಕು. ಅದುಬಿಟ್ಟು ಇರೋ ವೈವಿಧ್ಯತೇನಾ ಅಳಿಸುತ್ತೇ ಅನ್ನೋ ಪರಿವೆಯೂ ಇಲ್ಲದೆ ಹಿಂದೀನಾ ಕೇಂದ್ರದೋರು ಭಾರತದ ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿರೋದು, ಕರ್ನಾಟಕ ಸರ್ಕಾರ ತ್ರಿಭಾಷಾ ಸೂತ್ರ ಅಂತ ಕನ್ನಡಿಗರನ್ನು ಕುಣುಸ್ತಿರೋದೂ ಸರೀನಾ? ನೀನೇ ಹೇಳು ಗುರು!!

ಹಿಂದೀ ಜ್ವರಕ್ಕೆ ತುರ್ತಾಗಿ ಬೇಕಿದೆ ಮದ್ದು!

ಭಾರತ ದೇಶ ಬೇರೆ ಬೇರೆ ನುಡಿಗಳನ್ನಾಡುವ, ಬೇರೆ ಬೇರೆ ಸಂಸ್ಕೃತಿಗಳ, ಬೇರೆ ಬೇರೆ ಜನಾಂಗಗಳಿಂದ ಕೂಡಿದೆ. ಯಾವುದೇ ನಾಡಿನಲ್ಲಿ ಆ ನಾಡಿನ ಜನರ ಒಗ್ಗಟ್ಟು ಏಳಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಇಂತಹ ಒಗ್ಗಟ್ಟನ್ನು ಹೆಚ್ಚಿಸುವ ರೀತಿನೀತಿಗಳನ್ನು ಪ್ರತಿಯೊಂದು ದೇಶವು ಹೊಂದಲು ಬಯಸುವುದು ಸಹಜವಾಗಿದೆ. ಭಾರತ ದೇಶವೂ ಇದಕ್ಕೆ ಹೊರತಲ್ಲ. ಭಾರತದ ಕೇಂದ್ರಸರ್ಕಾರವು, ಭಾರತ ದೇಶದ ವಿವಿಧ ಭಾಷಾ ಜನಾಂಗಗಳ ನಡುವೆ ಏಕತೆಯನ್ನು ಸಾಧಿಸಲು, ನಾಡಿನ ಒಗ್ಗಟ್ಟಿಗೆ ಪೂರಕವಾಗಿದೆ ಅಂತಂದುಕೊಂಡು ಭಾರತಕ್ಕೊಂದು ಭಾಷಾ ನಿಯಮ ರೂಪಿಸಿದೆ. ಇದಕ್ಕೆ ಸಂವಿಧಾನದ ಆಶಯದ ಬೆಂಬಲವೂ ಇದೆ ಎನ್ನುವ ಮಾತೂ ಕೇಳಿಬರುತ್ತಿದೆ. ಈ ದಿಕ್ಕಿನಲ್ಲಿಯೇ ಭಾರತವನ್ನು ಒಂದುಗೂಡಿಸಲು ಒಂದು ಸಂಪರ್ಕ ಭಾಷೆ ಬೇಕೆಂದುಕೊಂಡು ಹಿಂದಿಯನ್ನು ಸ್ಥಾಪಿಸುವ ಪ್ರಯತ್ನಗಳು ನಡೆದಿವೆ. ಹೀಗೆ ಹಿಂದಿಯನ್ನು ಎಲ್ಲಾ ಭಾರತೀಯರ ಮನೆದೇವರನ್ನಾಗ್ಸೋದ್ನ ನಮ್ಮ ಜನರಿಗೇ ಸರಿಯಾದದ್ದು ಅನ್ನಿಸೋ ಕೆಲಸಾನೂ ಮಾಡ್ತಿದಾರೆ. ಹಿಂದಿ ಬೇಕು ಅನ್ನೋರು ಮಂಡುಸ್ತಿರೋ ವಾದಾನಾ ಈ ಒಂದು ವಾರಾ ಇಡೀ ಒಸಿ ಅಳ್ದು ನೋಡೇ ಬುಡ್ಮಾ ಗುರು!

ಹಿಂದೀ ಒಪ್ಪಕ್ಕೇಕೆ ವಿರೋಧ?

ಇಂತಿಪ್ಪ ಹಿಂದೀ ಭಾಷೇನಾ ಭಾರತದ ರಾಷ್ಟ್ರಭಾಷೆ ಅಂತ ಒಪ್ಪೋದಕ್ಕೆ ಯಾಕೆ ವಿರೋಧ ಮಾಡಬೇಕೂಂದ್ರೆ....

ಇದರಿಂದ ಕರ್ನಾಟಕದಲ್ಲೇ ಕನ್ನಡಿಗರಿಗೆ ಕೆಲಸಗಳು ಸಿಗೋಕೆ ಸಮಸ್ಯೆ ಆಗುತ್ತೆ. ಎಂಟನೇ ತರಗತಿ ವಿದ್ಯಾರ್ಹತೆ ಬಯಸೋ ರೈಲ್ವೇ ಇಲಾಖೆಯ ‘ಡಿ’ ಗುಂಪಿನ ಕೆಲಸಕ್ಕೆ ಹಿಂದೀಲಿ ಅರ್ಜಿ ಬರೀಬೇಕು ಅನ್ನೋ ನಿಯಮ ಕಾಣುತ್ತೆ. ರೈಲುಗಳ ಮೇಲೆ ಕನ್ನಡದಲ್ಲಿ ಊರಿನ ಹೆಸರು ಬರೆಯೋ ಹಾಗಿಲ್ಲಾ ಅನ್ನೋ ನಿಯಮ ಬರುತ್ತೆ. ಬ್ಯಾಂಕ್ ಕೆಲಸಕ್ಕೆ ಹತ್ತನೇ ತರಗತಿ ಅಂಕಪಟ್ಟೀಲಿ ಹಿಂದೀ ಅಂತ ಒಂದು ವಿಷಯ ಕಲಿತಿರಲೇಬೇಕು. ನಮ್ಮೂರ ರೈಲುಗಳಲ್ಲಿ, ನಮ್ಮನೆ ಅಡುಗೆ ಅನಿಲ ಸಿಲಿಂಡರ್ ಮೇಲೆ ಕನ್ನಡದಲ್ಲಿ ಸುರಕ್ಷತಾ ಸೂಚನೆ ಇರಲ್ಲ. ನಾವು ಕಲಿಯೋ ಪಠ್ಯಪುಸ್ತಕದಲ್ಲಿ ಕೂಡು, ಕಳಿ ಬದ್ಲು ಸಂಕಲನ, ವ್ಯವಕಲನ ಬರುತ್ತೆ, ಕನ್ನಡದ ಪತ್ರಿಕೆಗಳ ಜಾಹೀರಾತುಗಳಲ್ಲಿ ಚಶ್ಮಿಶ್ ಥರದ ಪದಗಳು ಬರ್ತವೆ. ಬೆಂಗಳೂರಿನ ಎಫ್.ಎಂ ತುಂಬಾ ಹಿಂದೀ ಜಾಹೀರಾತುಗಳೇ ತುಂಬಿರುತ್ತವೆ. ಭಾರತೀಯ ಸಿನಿಮಾ ಅಂದ್ರೆ, ವಾಯ್ಸ್ ಆಫ್ ಇಂಡಿಯಾ ಅಂದ್ರೆ ಬರೀ ಹಿಂದೀ ಅಂತಾಗುತ್ತೆ.... ಸದ್ಯಕ್ ಇಷ್ಟು ಸಾಕು, ಮುಂದೆ ಮತ್ತಷ್ಟು ಘೋರಗಳ ಬಗ್ಗೆ ಮಾತಾಡೋಣ ಗುರು!

ಹಿಂದೀ ಬೇಕೆನ್ನೋರು ಕೊಡೋ ಕಾರಣಗಳು

ಇಷ್ಟಕ್ಕೂ ಹಿಂದೀ ಬೇಕೂ ಅನ್ನೋ ಜನ ಯಾಕೆ ಹಾಗ್ ಅಂತಿದಾರೆ ಅಂತಾ ನೋಡುದ್ರೆ ಕಾಣೋ ಮುಖ್ಯ ಕಾರಣಗಳು ಇಂತಿವೆ. ಇವುನ್ನ ಕಾರಣ ಅಂತೀರೋ ನೆಪ ಅಂತೀರೋ ನಿಮಗೆ ಬಿಟ್ಟಿದ್ದು ಗುರು!

- ಭಾರತ ದೇಶದಲ್ಲಿ ಹಿಂದಿಯನ್ನು ತಾಯ್ನುಡಿಯಾಗಿ ಹೊಂದಿರೋರ ಜನಸಂಖ್ಯೆ ಶೇಕಡಾ 40ಕ್ಕಿಂತಾ ಹೆಚ್ಚು.
- ಭಾರತ ದೇಶದ ಹೆಚ್ಚು ಜನರಿಗೆ ಹಿಂದಿ ಬರುತ್ತದೆ.
- ಒಂದು ದೇಶಕ್ಕೆ ಒಂದೇ ಭಾಷೆ ಮಾಡುದ್ರೆ ಒಗ್ಗಟ್ಟು ಹೆಚ್ಚುತ್ತೆ.
- ಒಂದು ರಾಜ್ಯದೋರು ಮತ್ತೊಂದು ರಾಜ್ಯಕ್ಕೆ ಹೋದ್ರೆ ಒಂದು ಸಾಮಾನ್ಯ ಭಾಷೆ ಬೇಕು.

- ಹೊರನಾಡಿಗೆ ಹೋದಾಗ ಭಾರತದ ರಾಷ್ಟ್ರಭಾಷೆ ಯಾವುದು ಅಂದ್ರೆ ಏನು ಹೇಳೋದು?

- ಹಿಂದೂಸ್ತಾನ್ ಮೇ ರೆಹತೇ ಹೋ ಔರ್ ಹಿಂದೀ ನಹೀ ಮಾಲೂಮ್? ಭಾರತದಲ್ಲಿ ಇದ್‍ಮೇಲೆ ಹಿಂದೀ ಕಲೀದಿದ್ರೆ ಎಂಗೇ ಸಿವಾ?

ಮುಂದಿನ ಬರಹಗಳಲ್ಲಿ ಇವುಗಳ ಬಗ್ಗೆ ಮಾತಾಡಮಾ ಗುರು!

ಸಾವು, ವೈರಾಗ್ಯ ಮತ್ತು ರಾಜ್ ನೆನಪು!

ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಶ್ರೀ ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ತೀರ್ಕೊಂಡಿದ್ ಸುದ್ದಿ ಮನಸ್ಸಿಗೆ ಮಂಕು ಹಿಡಿಸಿದಂತಾಗಿದೆ ಗುರು! ಮನುಷ್ಯ ಎಂಥಾ ಅಧಿಕಾರ, ಅಂತಸ್ತು, ಜನಪ್ರಿಯತೆ ಎಲ್ಲಾ ಇದ್ದೂ ವಿಧಿಯಾಟದ ಮುಂದೆ ಲೆಕ್ಕಕ್ಕಿಲ್ಲ ಅನ್ನಿಸಿಬಿಡುತ್ತೆ. ಇದನ್ನು ನೋಡ್ದಾಗ ಮನಸ್ಸಿಗೆ ಕವಿಯೋ ವಿಷಾದ ಮತ್ತು ಅದು ತರೋ ನಶ್ವರ ಭಾವನೇನಾ ಅತ್ಯಂತ ಸೊಗಸಾಗಿ ತಿಳಿಸಿಕೊಡೋ ಈ ಹಾಡು ನೋಡು ಗುರು!



ಡಾ. ವೈ.ಎಸ್. ಆರ್ ಆತ್ಮಕ್ಕೆ ಶಾಂತಿ ಸಿಗಲಿ!!
Related Posts with Thumbnails