ಹಿಂದೀ ಹೇರಿಕೆಯ ಹೊಸ ಮಜಲು: ಸಹೀ ರೀ ಸಹೀ!

ಭಾರತದ ಸಂವಿಧಾನದ ಆಶಯದಂತೆ ಎನ್ನುತ್ತಾ ಆಡಳಿತ ಭಾಷಾ ಇಲಾಖೆಯನ್ನು ತೆರೆದು ಅದರ ಮೂಲಕ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ಕೇಂದ್ರಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಹಿಂದೀ ಹೇರಿಕೆಯನ್ನು ನಡೆಸುತ್ತಾ ಬಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಈ ಬಾರಿ ನಾವು ನಿಮಗೆ ಹೇಳಲು ಮುಂದಾಗಿರುವುದು ಈ ಹೇರಿಕೆಯ ಇನ್ನೊಂದು ಮಜಲನ್ನು.

ಕೆಲಸಕ್ಕೆ ಹಿಂದೀ ಕಡ್ಡಾಯ!

ಹಿಂದೀ ಬರದೇ ಇರುವವರಿಗೆ ಕೆಲಸ ಸಿಗುವುದಿಲ್ಲಾ ಅನ್ನುವುದನ್ನು ಹೇಳೋ ವಿಧಾನವೆಂದರೆ ಹಿಂದೆ ರೈಲು ನೇಮಕಾತಿಯಲ್ಲಿ ಹಿಂದೀ/ ಇಂಗ್ಲೀಷಲ್ಲಿ ಮಾತ್ರ ಅರ್ಜಿ ಬರೆಯಬೇಕೆನ್ನುವ ನಿಬಂಧನೆ ಹಾಕಿದ್ದು, ಬ್ಯಾಂಕ್ ನೌಕರಿಗೆ ಅರ್ಜಿ ಹಾಕಲು ನಿಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ಹಿಂದೀ ಅನ್ನೋ ವಿಷಯ ಇರಬೇಕು ಎನ್ನುವಂತಹ ಕಟ್ಟಳೆ ಹಾಕಿದ್ದು... ಇತ್ಯಾದಿಯೆಲ್ಲಾ ಇರುವುದನ್ನು ನಿಮ್ಮ ಗಮನಕ್ಕೆ ಈ ಹಿಂದೆಯೇ ತಂದಿದ್ದೆವು. ಹೀಗೆಲ್ಲಾ ಮಾಡುವ ಮೂಲಕ ನಮ್ಮ ನಾಡಿನ ಕೆಲಸಗಳನ್ನು ಹಿಂದೀ ಬಲ್ಲವರಿಗೆ ಕೊಡುವ ಕೇಂದ್ರಸರ್ಕಾರದ ಮನಸ್ಥಿತಿಯನ್ನು ತೆರೆದಿಟ್ಟಿದ್ದೆವು. ಈ ಬಾರಿ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಸಾಗಿರುವ ಭಾರತದ ರೈಲ್ವೇ ನೇಮಕಾತಿ ಮಂಡಲಿಯ ಈ ಅರ್ಜಿಯನ್ನು ನೋಡಿ.

ಸಹೀ ಇಂಗ್ಲೀಶ್/ ಹಿಂದೀಲಿರಬೇಕಂತೆ!

ಈ ಅರ್ಜಿಯ ಕೊನೆಯಲ್ಲಿ ಹೀಗೆ ಸೂಚನೆ ಬರೆದಿದ್ದಾರೆ:

೧. ಅಭ್ಯರ್ಥಿಗಳು ತಮ್ಮ ಹೆಸರು, ತಂದೆಯ ಹೆಸರು ಮತ್ತು ಹುಟ್ಟಿದ ದಿನಾಂಕಗಳನ್ನು ಮೆಟ್ರಿಕ್ ಪರೀಕ್ಷೆಯ ಪ್ರಮಾಣಪತ್ರದಲ್ಲಿರುವಂತೆ ಬರೆಯತಕ್ಕದ್ದು.

೨. ಅಭ್ಯರ್ಥಿಯು ಅರ್ಜಿಯಲ್ಲಿ ಸೂಚಿಸಿರುವ ಎಲ್ಲೆಡೆಯಲ್ಲೂ ಒಂದೇ ಭಾಷೆಯಲ್ಲಿ ಸಹಿ ಹಾಕಬೇಕು. (ಹಿಂದೀ ಅಥವಾ ಇಂಗ್ಲೀಶಿನಲ್ಲಿ)

ಪ್ರಪಂಚದಲ್ಲಿ ಸಹಿ ಅನ್ನೋದಕ್ಕೆ ಯಾವ ಭಾಷೆಯ ಕಟ್ಟುಪಾಡೂ ಇಲ್ಲ. ಸಹಿಯನ್ನು ಯಾವ ಭಾಷೆಯಲ್ಲಿ ಮಾಡಿದರೂ ಒಪ್ಪಲಾಗುತ್ತದೆ ಎನ್ನುವುದು ಸಾಮಾನ್ಯ ರೀತಿನೀತಿ. ನಾವು ಬ್ಯಾಂಕ್ ಚೆಕ್‍ಗಳಲ್ಲಿ ನಮ್ಮ ನುಡಿಯಲ್ಲಿಯೇ ಸಹಿ ಹಾಕಬಹುದು. ಪಾಸ್‍ಪೋರ್ಟ್‍ಗಳಲ್ಲಿ ನಮ್ಮ ನುಡಿಯಲ್ಲೇ ಸಹಿ ಹಾಕಬಹುದು. ಆದರೆ ರೈಲ್ವೇ ಇಲಾಖೆಯಲ್ಲಿನ ನೇಮಕಾತಿಗಾಗಿರುವ ಈ ಅರ್ಜಿಯಲ್ಲಿ ಸಹೀನೂ ಇಂಥದ್ದೇ ಭಾಷೇಲಿ ಇರಬೇಕು ಅಂದಿದ್ದಾರಲ್ಲಾ? ಏನನ್ನಬೇಕು ಗುರೂ ಇದಕ್ಕೇ?

ಜನಲೋಕಪಾಲ್ ಮತ್ತು ಭ್ರಷ್ಟಾಚಾರ ನಿರ್ಮೂಲನೆ


ಭಾರತೀಯರಿಗೆ, ಸದ್ಯಕ್ಕೆ ಭ್ರಷ್ಟ ರಾಜಕಾರಣಿಗಳ ವಿರುದ್ಧವಾಗಿ ಬ್ರಹ್ಮಾಸ್ತ್ರವಾಗಿ ಕಾಣಿಸುತ್ತ ಇರೋದು, ಪರಮ ಪ್ರಾಮಾಣಿಕ ಎನ್ನಿಸಿರುವ, ಮಾಜಿ ಸೈನಿಕರಾಗಿರುವ, ಅನೇಕ ಸಾಮಾಜಿಕ ಹೋರಾಟಗಳ ಮಹಾಸೇನಾನಿ ಶ್ರೀ ಅಣ್ಣಾ ಹಜ಼ಾರೆಯವರು. ಕಳೆದ ಏಪ್ರಿಲ್‍ನಲ್ಲಿ ಇವರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೂತಿದ್ದು "ಜನಲೋಕ್ ಪಾಲ್ ಮಸೂದೆ"ಯನ್ನು ಜಾರಿ ಮಾಡಲು ಒತ್ತಾಯಿಸಿ. ಕೇಂದ್ರಸರ್ಕಾರ ಅಣ್ಣಾ ಬೇಡಿಕೆಗಳಿಗೆ ಮಣಿದು ಲೋಕ್‍ಪಾಲ್ ಮಸೂದೆಯ ಕರಡು ಸಮಿತಿಯನ್ನು ರಚಿಸಿ ಅದರಲ್ಲಿ ಸಂಸದರಲ್ಲದ ಐವರನ್ನು ಸೇರಿಸಿಕೊಂಡಿತು. ಈ ಸಮಿತಿಯು ಕರಡು ಪ್ರತಿ ಸಿದ್ಧಪಡಿಸುವಲ್ಲಿ ಒಮ್ಮತಕ್ಕೆ ಬರುವಲ್ಲಿ ಇನ್ನೂ ಸಫಲವಾಗಿರಲಿಲ್ಲ. ಅಷ್ಟರಲ್ಲಿ ಬಾಬಾ ರಾಮ್‍ದೇವ್ ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಅದನ್ನು ಸರ್ಕಾರ ಎದುರಿಸಿದ ರೀತಿಯನ್ನು ಕಂಡು, ಸಮಿತಿಯ ಐವರು ಸಂಸದೇತರ ಸದಸ್ಯರು ಸಮಿತಿಯ ಕರಡು ತಯಾರಿಕಾ ಸಭೆಯನ್ನು ಬಹಿಷ್ಕರಿಸಿದರು. ಕೊನೆಗೆ ಸರ್ಕಾರ ಸಂಸತ್ತಿನ ಮುಂದೆ ತನ್ನದೇ ಲೋಕ್‍ಪಾಲ್ ಮಸೂದೆಯ ಕರಡನ್ನು ಮಂಡಿಸಿತು. ಇದನ್ನು ಒಪ್ಪದ ಸಮಿತಿಯ ಅಣ್ಣಾ ಹಜ಼ಾರೆಯವರು ಇದೀಗ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಾ ಕುಳಿತಿದ್ದಾರೆ. ಏನ್‍ಗುರು, ಏಪ್ರಿಲ್ ತಿಂಗಳಲ್ಲಿ ಅಣ್ಣಾ ಉಪವಾಸವನ್ನು ಬೆಂಬಲಿಸಿ ಒಂದು ಬರಹವನ್ನು ಪ್ರಕಟಿಸಿತ್ತು.. "ಈ ಹೋರಾಟ ಗೆಲ್ಲಲೇ ಬೇಕು" ಎಂದು. ಹೌದು, ಭ್ರಷ್ಟಾಚಾರದ ವಿರುದ್ಧದ ಹೋರಾಟ ಗೆಲ್ಲಲೇಬೇಕು. ಆದರೆ ದಿನಗಳೆದಂತೆ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಮತ್ತೊಂದು ಮಗ್ಗುಲಿನಿಂದ ಹೋರಾಟವನ್ನು ನೋಡಿದಾಗ ಬೇರೆಯೇ ಆಯಾಮ ಕಾಣುತ್ತಿದೆ! ನಮ್ಮ ನಿಲುವಿನಲ್ಲಿ ಭ್ರಷ್ಟಾಚಾರ ಅಳಿಯಬೇನ್ನುವುದರ ಬಗ್ಗೆ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಅಣ್ಣಾ ಹಜ಼ಾರೆಯವರು ಅನುಸರಿಸುತ್ತಿರುವ ಕ್ರಮ, ಭ್ರಷ್ಟಾಚಾರ ತಡೆಗೆ ಯೋಚಿಸುತ್ತಿರುವ ಒಂಬಡ್ಸ್‍ಮನ್ ಹುದ್ದೆ ಸೃಷ್ಟಿಯ ಪರಿಣಾಮಕಾರಿತನದ ಬಗ್ಗೆ, ಭ್ರಷ್ಟಾಚಾರವನ್ನು ಅಳಿಸಲು ಸಾಗಬೇಕಾದ ದಾರಿಯ ಬಗ್ಗೆ... ಬೇರೆಯೇ ಅನಿಸಿಕೆ ಮೂಡುತ್ತಿದೆ.

ಭ್ರಷ್ಟಾಚಾರ ಅಳಿಯಬೇಕು!

ಅಣ್ಣಾ ಮತ್ತವರ ಬೆಂಬಲಿಗರ ಮೂಲೋದ್ದೇಶವಾದ ಭ್ರಷ್ಟಾಚಾರ ಅಳಿಯಬೇಕು, ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕೂಡಿಟ್ಟಿರುವ ಭಾರತದ ಹಣ ಹಿಂತಿರುಗಿ ತರಬೇಕೆನ್ನುವ ಬೇಡಿಕೆಯ ಬಗ್ಗೆ ಎರಡನೇ ಮಾತಿಲ್ಲ. ಭಾರತವು ಟ್ರಾನ್ಸ್‍ಪರೆನ್ಸಿ ಇಂಟರ್ ನ್ಯಾಶನಲ್ ಸಂಸ್ಥೆಯು ಬಿಡುಗಡೆ ಮಾಡಿರುವ ೨೦೧೦ರ ಪ್ರಪಂಚದಲ್ಲಿ ಭ್ರಷ್ಟಾಚಾರ ಕಡಿಮೆ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ೮೭ನೇ ಸ್ಥಾನದಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಡೆನ್ಮಾರ್ಕ್, ಸಿಂಗಾಪುರ್, ಆಸ್ಟೇಲಿಯಾ, ನ್ಯೂಜಿಲಾಂಡ್ ಮೊದಲಾದವು ಇವೆ. ಈ ಪಟ್ಟಿಯ ಮೇಲಿನ ಸ್ಥಾನದಲ್ಲಿ ಭಾರತ ಇರಬೇಕೆನ್ನುವುದು ನಮ್ಮಾಸೆಯೂ ಹೌದು. ದೇಶದ ಜನಸಾಮಾನ್ಯರು ಭ್ರಷ್ಟಾಚಾರದಿಂದ ಅನುಭವಿಸುತ್ತಿರುವ ಪಾಡು ಇಲ್ಲವಾಗಬೇಕೆನ್ನುವ ಬಗ್ಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ.

ಆದರೆ ಜನ್‍ಲೋಕಪಾಲ್ ವ್ಯವಸ್ಥೆಯು ಇಂಥಾ ಗುರಿ ಮುಟ್ಟಲು ಪರಿಣಾಮಕಾರಿಯಾಗಬಲ್ಲುದೇ? ಇಂತಹ ಮಸೂದೆ ರೂಪಿಸಲು ಹೋರಾಡುತ್ತಿರುವವರು ಅನುಸರಿಸುತ್ತಿರುವ ಮಾರ್ಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಾರದೇ? ಲೋಕಪಾಲರೆಂಬ ಪೋಲೀಸಿನ ಸೃಷ್ಟಿಗಿಂತಲೂ ಭ್ರಷ್ಟಾಚಾರ ಇಲ್ಲವಾಗಿಸಲು ಪರಿಣಾಮಕಾರಿಯಾದ ವಿಧಾನವಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕಂಡುಕೊಳ್ಳಬೇಕಾಗಿದೆ.

ಭ್ರಷ್ಟರನ್ನು ಶಿಕ್ಷಿಸುವ ಸಾಧನಕ್ಕಿಂತ ಭಷ್ಟತನ ಮಾಡಲಾಗದಂತಹ ವ್ಯವಸ್ಥೆ ಪರಿಣಾಮಕಾರಿ!

ಭ್ರಷ್ಟಾಚಾರ ಇಲ್ಲವಾಗಿಸಲು ಒಂದು ದಾರಿ ಭ್ರಷ್ಟರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದು. ಇದರಲ್ಲಿನ ತೊಡಕೆಂದರೆ ಹಾಗೆ ಶಿಕ್ಷಿಸುವವರು ಯಾರು? ಅವರೂ ಭ್ರಷ್ಟರಾಗುವುದಿಲ್ಲ ಎನ್ನಲು ಏನು ಭರವಸೆ? ಆಕಸ್ಮಾತ್ ಅವರೂ ಭ್ರಷ್ಟರಾದರೆ ಮುಂದೇನು? ಕಳ್ಳರನ್ನು ಹಿಡಿಯಲು ಪೊಲೀಸ್, ಪೊಲೀಸ್ರೇ ಕಳ್ಳರಾದರೆ ಅಂತಹಾ ಕಳ್ಳ ಪೊಲೀಸ್ರನ್ನು ಹಿಡಿಯಲು ಮತ್ತೊಂದು ಪೊಲೀಸ್.. ಅವರನ್ನು ಹಿಡಿಯ್ತಲು ಮತ್ತೊಂದು ಇಲಾಖೆ... ಹೀಗೆ ಕೊನೆಯಿರದ ಸುಳಿಯಿದು. ಆದರೆ ಇಂತಹಾ ವ್ಯವಸ್ಥೆಯೇ ಬೇಡವೇ? ಬೇಕು... ಇಂತಹ ವ್ಯವಸ್ಥೆಯೂ ಬೇಕು. ಅದು ಭ್ರಷ್ಟಾಚಾರ ನಿಯಂತ್ರಣದ ವ್ಯವಸ್ಥೆಯ ಒಂದು ಅಂಗವಾಗಿ ಅಷ್ಟೆ. ಆದರೆ ನಮಗೆ ಬೇಕಿರುವುದು ಇದಕ್ಕಿಂತಾ ಪರಿಣಾಮಕಾರಿಯಾದ ದಾರಿ. ಅದು ಭ್ರಷ್ಟತೆಗೆ ಅವಕಾಶವನ್ನೇ ಇಲ್ಲವಾಗಿಸುವ ವ್ಯವಸ್ಥೆ. ಇದರಲ್ಲಿ ತಂತ್ರಜ್ಞಾನದ ಉಪಯೋಗವನ್ನು ಬಳಸಿಕೊಳ್ಳುವುದು ಒಂದೊಳ್ಳೆ ಸಾಧನ. ಪ್ರತಿಯೊಂದನ್ನೂ ತಾನೇ ಮಾಡುತ್ತೇನೆನ್ನುವ ಸರ್ಕಾರ ಸರಿಯಾದ ಕಟ್ಟುಪಾಡು, ನೀತಿ ನಿಯಮ ರೂಪಿಸಲಷ್ಟೇ ತನ್ನ ಪಾತ್ರವನ್ನು ಸೀಮಿತಿಗೊಳಿಸಿಕೊಳ್ಳುವುದು ಮತ್ತೊಂದು ವಿಧಾನ.
ಉದಾಹರಣೆಗೆ ಹೇಳಬೇಕೆಂದರೆ ರಸ್ತೆಗಳಲ್ಲಿ ಅಲ್ಲಲ್ಲಿ ಜಂಕ್ಷನ್‍ಗಳಿದ್ದು ಪ್ರತಿಯೊಂದಕ್ಕೂ ಟ್ರಾಫಿಕ್ ಸಿಗ್ನಲ್ ಹಾಕಿ, ಅದನ್ನು ದಾಟುವವರಿಗೆ ದಂಡ ಹಾಕುವ ಪೋಲೀಸನನ್ನು, ಅವನು ಭ್ರಷ್ಟಾಚಾರ ಮಾಡದಂತೆ ತಡೆಯಲು ಇನ್ಸ್‍ಪೆಕ್ಟರ್‍‍ನನ್ನು ನೇಮಿಸುತ್ತಾ ಹೋಗುವುದಕ್ಕಿಂತಾ ದಾರಿಯಲ್ಲಿ ಸಿಗ್ನಲ್‍ಗಳೇ ಇರದ, ಫ್ಲೈ ಓವರ್‌ಗಳನ್ನು ನಿರ್ಮಿಸುವುದು ಹೇಗೆ ಹೆಚ್ಚು ಪರಿಣಾಮಕಾರಿಯೋ ಹಾಗೇ ಭ್ರಷ್ಟತೆಗೆ ಅವಕಾಶ ನೀಡದ... ಸರ್ಕಾರದ ಹಸ್ತಕ್ಷೇಪ ಕಡಿಮೆಯಿರುವ... ಲೈಸೆನ್ಸ್ ರಾಜ್‍ ಇಲ್ಲದ ವ್ಯವಸ್ಥೆಯನ್ನು ಕಟ್ಟುವುದು ಹೆಚ್ಚು ಪರಿಣಾಮಕಾರಿಯಾದ ರೀತಿ. ಇದಾಗದ ಹೊರತು ಲೋಕಪಾಲರಂತಹ ಎಷ್ಟೇ ಸಂಸ್ಥೆಗಳು ಬಂದರೂ, ದಿನಕ್ಕೆ ನೂರಾರು ಭ್ರಷ್ಟ್ರರನ್ನು ಜೈಲಿಗಟ್ಟಿದರೂ, ಭ್ರಷ್ಟರಿಗೆ ಮರಣದಂಡನೆಯೇ ಶಿಕ್ಷೆಯೆಂದರೂ ಹೆಚ್ಚು ಪರಿಣಾಮವಾಗದು. ಯಾಕೆಂದರೆ ‘ದುಡ್ಡು ತಿನ್ನುವ ಅವಕಾಶವಿದೆ, ತಿಂದರೆ ತಲೆ ತೆಗೆಯುತ್ತೇವೆ’ ಎನ್ನುವ ವ್ಯವಸ್ಥೆಯಿದ್ದರೆ ತಲೆ ಉಳಿಸಿಕೊಂಡು ತಿನ್ನುವ ಮತ್ತೊಂದು ಕಳ್ಳದಾರಿ ಹುಡುಕುತ್ತಾರೆಯೇ ಹೊರತು ಶಿಕ್ಷೆಯ ಭಯದಿಂದ ತಿನ್ನದೇ ಇರುವುದನ್ನಲ್ಲ!

ಅಣ್ಣಾ ಹೋರಾಟದ ಬಗ್ಗೆ!

ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?

ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡು ಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ!

ಇಗೋ... ಸ್ವಾತಂತ್ರ್ಯ ದಿನಕ್ಕೊಂದು ರಾಮ ಬಾಣ!!


ಕನ್ನಡಿಗರೇ,

ಇಗೋ ತೊಗೊಳ್ಳೀ, ಭವ್ಯ ಭಾರತದ ಅರವತ್ತೈದನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಬದುಕನ್ನು ಉದ್ಧಾರ ಮಾಡೋಕೆ, ಭವ್ಯ ಭಾರತದ ಒಗ್ಗಟ್ಟು ಹೆಚ್ಚಿಸೋಕೆ ಅಂತಾ ಒಂದು ಹೊಸ ಯೋಜನೇನಾ ಸಿದ್ಧ ಮಾಡ್ಕೊಂಡು ಒಂದು ಬಿಲ್ ಮೂಲಕ ಸಂಸತ್ತಿನಲ್ಲಿ ಚರ್ಚೆ ಮಾಡಲು ನಮ್ಮ ಕರ್ನಾಟಕದ, ಕನ್ನಡಿಗರಾದ ಶ್ರೀ ಶ್ರೀ ಶ್ರೀ ೧೦೦೮ ರಾಮಾಜೊಯ್ಸ್ ಮಹಾಸ್ವಾಮಿಗಳು ಮುಂದಾಗಿದ್ದಾರೆ. ಪಾಪಾ! ಮಹಾನ್ ದೇಶಪ್ರೇಮಿ ಪಕ್ಷದ ರಾಜ್ಯಸಭೆಯ ಸದಸ್ಯರಾಗಿರೋ ಶ್ರೀಯುತರು ಭಾರತದ ಒಗ್ಗಟ್ಟಿಗಾಗೇ ಹಗಲಿರುಳು ತಪಸ್ಸು ಮಾಡಿ ಕಂಡುಕೊಂಡಿರೋ ಈ ಯೋಜನೆ ಏನಪ್ಪಾ ಅಂತಾ ಗೊತ್ತಾದ್ರೆ ನಾವೂ ಕೈಜೋಡಿಸೋಣ ಅಂತಾ ಅಂದ್ಕೊತಿದೀರಾ? ಬನ್ನಿ! ನೋಡಿ ಈ ಬಿಲ್ಲಿನಿಂದ ಮಂಡಗದ್ದೆಯ ರಾಮಾಜೊಯ್ಸರು ಬಿಡ್ತಾ ಇರೋ ರಾಮಬಾಣಾನಾ!!

ಈ ರಾಮನು ಬಿಡುವಾ ಬಾಣದ ಗುರಿಯೂ...

ಈ ನಮ್ಮ ಕನ್ನಡಿಗರ ಹೆಮ್ಮೆಯಾದ ಶ್ರೀ ಶ್ರೀ ಶ್ರೀ ರಾಮಾಜೋಯ್ಸ್ ಅವರು ಈ ಪಾಟಿ ಹೊಗುಳುಸ್ಕೊಳ್ಳೋ ಅಂಥಾ ಅದ್ಯಾವ ಬಾಣಾನಾ ಬತ್ತಳಿಕೆಯಿಂದಾ ತೆಗೀತಾ ಇದಾರೆ ಅಂತೀರಾ! ಅದು "ದೇವನಾಗರೀ ಲಿಪಿಯ ಕಲಿಯುವಿಕೆಯ (ಭಾರತದ ಒಗ್ಗಟ್ಟಿಗಾಗಿ) ಬಿಲ್, ೨೦೧೧" ಅನ್ನೋ ಹೆಸರಿನದ್ದು! ಆ ರಾಮನು ಇಟ್ಟಾ ಬಾಣದ ಗುರಿ ತಪ್ಪಲಿಲ್ವಂತೆ... ಆದರೆ ಈ ರಾಮಾಜೋಯ್ಸರ ಬಾಣದ ಗುರಿ ತಪ್ಪಲೇ ಬೇಕಾಗಿದೆ. ಯಾಕಂದ್ರೆ ಅವರ ಬಿಲ್ಲಿನಿಂದ ಹೊರಡೋ ಬಾಣದ ಗುರಿ ಮಾತ್ರಾ ನಮ್ಮ ನಿಮ್ಮಂಥಾ ಬಡಪಾಯಿ ಕನ್ನಡಿಗರೂ ಸೇರಿದಂತೆ ಭಾರತದ ಎಲ್ಲಾ ಹಿಂದೀಯೇತರರು ಆಗಿದ್ದಾರೆ. ರಾಜ್ಯಸಭಾ ಸದಸ್ಯರ ಅಧಿಕೃತ ಅಂತರ್ಜಾಲ ತಾಣದಲ್ಲಿ ಶ್ರೀ ರಾಮಾಜೋಯ್ಸರ ಈ ವಿಧೇಯಕದ ಬಗ್ಗೆ ಬರೆಯಲಾಗಿದೆ. ಖಾಸಗಿಯಾಗಿ ಇವರು ಮೊನ್ನೆ ಮೊನ್ನೆ ಅಂದ್ರೆ ಇದೇ ಆಗಸ್ಟ್ ೦೫ನೇ ತಾರೀಕಿನಂದು ಮಂಡಿಸಿರುವ ಈ ವಿಧೇಯಕ ಇನ್ನೂ ಚರ್ಚೆಗೆ ಬಂದು ಕಾನೂನಾಗಿ ಜಾರಿಯಾಗೋಕೆ ಸಮಯ ತಗಲುತ್ತೆ ಅನ್ನೋದು ನಿಜಾನೇ ಆದರೂ ಇದರಲ್ಲಿರೋದನ್ನು ನೋಡಿದರೆ ಈ ವಿಧೇಯಕ ಸಲ್ಲಿಸೋ ಮನಸ್ಸು, ಅದರ ಹಿಂದಿರೋ ತತ್ವ ಸಿದ್ಧಾಂತ, ಆ ಸಿದ್ಧಾಂತದ ಮಹಾಮನೆ... ಎಲ್ಲದರ ನಿಜ ಸ್ವರೂಪ ಗೊತ್ತಾಗುತ್ತೆ. ಅಂಥಾದ್ದೇನಿದೆ ನೋಡೋಣ!

ದೇಶದ ಜನರಿಗೆಲ್ಲಾ ದೇವನಾಗರಿ ಕಡ್ಡಾಯ!

ಸಂವಿಧಾನದ ೩೪೩ನೇ ವಿಧಿಯನ್ವಯ ಹಿಂದೀ ಭಾರತದ ಆಡಳಿತ ಭಾಷೆ. ಹಾಗಾಗಿ ಭಾರತದ ನಾಗರೀಕರೆಲ್ಲಾ ಹಿಂದೀಯನ್ನು ಕಲಿಯಬೇಕು. ಅಂದರೆ ಹಿಂದೀ ಕಲಿಕೆಗೆ ಬೇಕಿರೋ ಲಿಪಿ ದೇವನಾಗರಿಯದ್ದು. ಎಂಟನೇ ಶೆಡ್ಯೂಲ್‍ನಲ್ಲಿರುವ ೨೨ ಭಾಷೆಗಳಲ್ಲಿ ಸಂಸ್ಕೃತ, ಮರಾಠಿ ಮತ್ತು ಹಿಂದೀಗಳನ್ನು ಇದೇ ಲಿಪಿಯಲ್ಲಿ ಬರೆಯುವುದು. ಈಗ ಭಾರತದಲ್ಲಿ ಎಲ್ಲಾರೂ ದೇವನಾಗರಿ ಲಿಪಿಯನ್ನು ಬಹಳ ತಡವಾಗಿ ಕಲಿಯುತ್ತಾ ಇದ್ದಾರೆ... ಆದ್ದರಿಂದ ದೇವನಾಗರಿ ಲಿಪಿ ಕಲಿಕೆಯನ್ನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೂ ಹೇಳಿಕೊಡಬೇಕು. ಇನ್ಮುಂದೆ ಎಲ್ಲಾ ರಾಜ್ಯಗಳ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ದೇವನಾಗರೀ ಲಿಪಿಯಲ್ಲೇ ಬೋರ್ಡುಗಳನ್ನು ಬರೆಯಬೇಕು. ವಿಶೇಷವಾಗಿ ಮೈಲಿಗಲ್ಲುಗಳನ್ನು ಈ ಲಿಪಿಯಲ್ಲಿ ಬರೆದರೆ ತಮ್ಮ ರಾಜ್ಯಗಳನ್ನು ಬಿಟ್ಟು ಹೊರಗೆ ಹೋಗುವವರಿಗೂ ಏನೂ ತೊಂದರೆಯಾಗುವುದಿಲ್ಲ. ಇದರಿಂದ ದೇಶದಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಹಾಗಾಗಿ ಈ ವಿಧೇಯಕ ಒಪ್ಪಿಗೆಯಾಗಿ ಕಾನೂನು ಆಗುವ ದಿನದಿಂದಲೇ ದೇಶದ ಎಲ್ಲೆಡೆ ದೇವನಾಗರಿಯನ್ನು ಪ್ರಾಥಮಿಕ ಶಾಲಾ ಹಂತದಲ್ಲೇ ಕಲಿಸುವುದನ್ನು ಕಡ್ಡಾಯ ಮಾಡತಕ್ಕದ್ದು...

ವೈವಿಧ್ಯತೆಯನ್ನು ಶಾಪವೆನ್ನುವ ಮನಸ್ಥಿತಿ!

ಇಡೀ ವಿಧೇಯಕದ ಹಿಂದಿರುವ ಮನಸ್ಥಿತಿ ನಾಡಿನ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿ, ಅದನ್ನೆಲ್ಲಾ ಮಣ್ಣಾಗಿಸಿದರೆ ಏಕತೆ ಮೂಡುತ್ತದೆ ಎನ್ನುವ ಭ್ರಮೆ. ಶ್ರೀಯುತರಾದ ರಾಮಾಜೋಯಿಸ್ ಅವರೇ ಹಿಂದೊಮ್ಮೆ ನ್ಯಾಯಸ್ಥಾನದಿಂದ ತಾಯ್ನುಡಿಯಲ್ಲಿ ಪ್ರಾಥಮಿಕ ಶಿಕ್ಷಣ ಇರಬೇಕು ಎನ್ನುವ ತೀರ್ಪನ್ನು ನೀಡಿದ್ದರಂತೆ! ಇದೀಗ ಇಂಥಾ ವಿಧೇಯಕವೇನಾದರೂ ಜಾರಿಯಾದರೆ ಏನಾದೀತು ಎಂದು ಯೋಚಿಸಿರುವರೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಇದರಿಂದ ಕರ್ನಾಟಕದ ಎಲ್ಲಾ ನಾಮಫಲಕಗಳೂ ಹಿಂದೀಯಲ್ಲಿರುತ್ತದೆ. (ದೇವನಾಗರೀ ದೇವನಾಗರೀ ಅನ್ನೋ ಸುತ್ತುಬಳಸಿನ ಮಾತು ಬಿಟ್ಟು ಇನ್ಮುಂದೆ ಹಿಂದೀ ಲಿಪಿ ಅಂತೀವಿ. ಎರಡೂ ಒಂದೇನೆ ಬಿಡೀ!) ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಮರಿಗಳು ಒಂದನೇ ತರಗತಿಯಿಂದ ಹಿಂದೀಲೇ ಬರೆಯೋದನ್ನು ಕಲಿಯಬೇಕಾಗುತ್ತದೆ. ಕಾನೂನು ಹಾಗೆ ಕಡ್ಡಾಯ ಮಾಡುತ್ತದೆ. ಇನ್ನು ಕನ್ನಡವನ್ನು ಯಾಕಾದ್ರೂ ಕಲೀಬೇಕು? ಕನ್ನಡ ಲಿಪಿ ಬಳಕೆಯಲ್ಲಿದ್ದರೆ ತಾನೇ ಕಲಿಯೋ ಅಗತ್ಯವಿರುವುದು... ನಮ್ಮೂರಿನ ಎಲ್ಲಾ ಅಂಗಡಿ, ಮುಂಗಟ್ಟು, ಬಸ್ಸು, ರೈಲು, ಆಸ್ಪತ್ರೆ ಎಲ್ಲೆಡೆ ಹಿಂದೀ ತಾನೇ ಇರುತ್ತೆ. ಬರೀ ಕಥೆ ಕವನ ಸಾಹಿತ್ಯವನ್ನು ಓದೋಕಷ್ಟೇ ಕನ್ನಡ ಬೇಕಾಗೋ ಹಾಗಿದ್ರೆ... ಯಾಕೆ ಯಾರಾದ್ರೂ ಕಲೀಬೇಕು? ಇನ್ನು ಕನ್ನಡದ ಹೆಸರುಗಳೆಲ್ಲಾ ಹಿಂದೀಲಿ ಇರೋ ಅಕ್ಷರಗಳಿಗೆ ಹೊಂದುವಂತೆ ಇರಬೇಕಾಗುತ್ತೆ. ಬೆಂಗಳೂರು ಇನ್ಮೇಲೆ ಬೆಂಗಲೂರು ಆಗುತ್ತೆ... ಕೆ, ಕೇ ಎಲ್ಲಾ ಒಂದೇ... ದೀರ್ಘ ಇಲ್ಲಾ ಹಿಂದೀಲಿ ಅಂತಾ!!! ಹಿಂದೀಲಿ ಎಲ್ಲಾ ಸೂಚನೆ ಬರೀತಾ ಹೋದರೆ ಹಿಂದೀಯವರಿಗೆ ಕನ್ನಡವನ್ನು ಕೆಟ್ಟದಾಗಿಯಾದರೂ ಓದಕ್ಕಂತೂ ಅದೀತು... ಅರ್ಥವಾದೀತಾ? ಅವೆಲ್ಲಾ ಬಿಡಿ, ಹಿಂದೀ ಲಿಪಿಯನ್ನು ಕಲಿತು ಬೇರೆ ನಾಡಿಗೆ ಹೋದಾಗ ತೊಂದರೆ ಆಗಲ್ಲಾ ಅನ್ನೋ ಮಾತಾಡೋ ಸಂಸದರು, ಇದರಿಂದಾಗಿ ನಮ್ಮೂರಿನ ವ್ಯವಸ್ಥೆಯೆಲ್ಲಾ ಹಿಂದೀಲೇ ಆಗಬೇಕಾಗುತ್ತದೆ ಅಂತಾ ತಿಳಿದುಕೊಳ್ಳದೇ ಹೋದರಾ ಗುರೂ! ಅಥ್ವಾ ಭಾರತದಲ್ಲಿ ಹಿಂದೀ ಮತ್ತು ಹಿಂದೀಯೋರು ಮಾತ್ರವೇ ಇರಬೇಕು ಅನ್ನೋದು ಅವರ ಆಶಯಾನಾ? "ಒಂದು ಭಾಷೆ: ಒಂದು ದೇಶ" ಆಗಬೇಕು ಅಂತಾ ಅವರು ಆಸೆ ಪಟ್ಟು ಈ ವಿಧೇಯಕ ಮಂಡಿಸಿರಬಹುದು! ಹಿಂದೀ ದೇಶಾನ ಒಗ್ಗೂಡಿಸಲ್ಲಾ ಒಡೆಯುತ್ತೆ ಅನ್ನೋದು ಇವರಿಗೆ ಹೇಳಿಕೊಡೋ ಮಹಾಮನೆ ಇನ್ನೆಲ್ಲೆದೆಯೋ? ಒಟ್ನಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಇವರನ್ನು ಕಳಿಸಿದ್ದಕ್ಕೂ ಸಾರ್ಥಕ!!

ಡಬ್ಬಿಂಗ್ ಬೇಕೆನ್ನೋ ಫೂಲ್‍ಗಳು ಅರ್ಥ ಮಾಡ್ಕೋಬೇಕು - ಶಿವಣ್ಣ!


ಅಂತೂ ಕನ್ನಡ ಚಿತ್ರರಂಗ ಡಬ್ಬಿಂಗ್ ಎದುರಿಸೋ ಉದ್ದೇಶದಿಂದ ತನ್ನ ಮತ್ತೊಂದು ಅಸ್ತ್ರವನ್ನು ಬಿಟ್ಟಿರೋ ಹಾಗಿದೆ. ನಮ್ಮ ನೆಚ್ಚಿನ ಡಾ. ರಾಜ್‍ರ ದೊಡ್ಡಮಗನೂ ಸ್ವತಃ ನಟನೂ ಆಗಿರುವ ಶ್ರೀ ಶಿವರಾಜ್‍ಕುಮಾರ್ ಅವರು ಡಬ್ಬಿಂಗ್ ಬಗ್ಗೆ ತಮ್ಮ ಅಭಿಪ್ರಾಯಾನಾ ‘ಹೀಗೆ’ ಹೇಳಿದಾರೆ ಅಂತಾ ನಾಡಿನ ಖ್ಯಾತ ಚಲನಚಿತ್ರ ತಿಂಗಳ ಪತ್ರಿಕೆ ರೂಪತಾರಾ ಪ್ರಕಟಿಸಿದೆ. ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದಂತಿರುವ ಈ ಸಂದರ್ಶನದಲ್ಲಿ ಡಬ್ಬಿಂಗ್ ಬಗ್ಗೆ "ಕನ್ನಡಕ್ಕೆ ಡಬ್ಬಿಂಗ್ ತರಬೇಕೆಂದು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಶಿವಣ್ಣ ಯಾಕೆ ಮಾತಾಡುತ್ತಿಲ್ಲ?" ಎಂದು ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ ಮತ್ತೂ ಮುಂದುವರೆಯುತ್ತಾ ಶಿವಣ್ಣ "ಡಬ್ಬಿಂಗ್ ಬೇಕು ಅಂತಾ ಒತ್ತಾಯ ಮಾಡ್ತಿರೋ ಫೂಲ್‍ಗಳು ಒಂದು ವಿಷಯ ಅರ್ಥ ಮಾಡ್ಕೋಬೇಕು. ನಮ್ಮ ಭಾಷೆ ಚಿತ್ರಗಳು ಬೇರೆ ಕಡೆ ಬಿಡುಗಡೆ ಮಾಡಲ್ಲ. ಹಾಗಿರುವಾಗ ಅವರ ಚಿತ್ರಗಳನ್ನು ನಾವು ಮೆರೆಸಬೇಕಾ. ಸ್ಯಾಟಲೈಟ್ ರೈಟ್‍ನಿಂದ ದುಡ್ಡು ಬರುತ್ತೆ ಅನ್ನೋ ಕಾರಣಕ್ಕೆ ಈ ಕೆಲಸ ಮಾಡಬೇಡಿ. ದುಡ್ಡು ಸಂಪಾದಿಸಬೇಕು ಅಂದ್ರೆ ನಿಯತ್ತಾಗಿರಬೇಕು. ಆಗ ದುಡಿದ ದುಡ್ಡು ಸಹಾ ಅರಗುತ್ತೆ. ಇದನ್ನು ನಾನು ಕನ್ನಡಿಗರ ಪರವಾಗಿ ಹೇಳ್ತಿದ್ದೇನೆ" ಎಂದಿದ್ದಾರೆ.

ರಿಮೇಕ್ ಬಗ್ಗೆ...

ಮತ್ತೊಂದು ಪ್ರಶ್ನೆ ರಿಮೇಕ್ ಬಗ್ಗೆ ಇದ್ದು ಹೀಗಿದೆ: ರಿಮೇಕ್‍ಗಳ ಬಗ್ಗೆ ನಿಮ್ಮ ಸದ್ಯದ ನಿಲುವೇನು?" (ಎರಡೂ ಪ್ರಶ್ನೆಗಳನ್ನು ಕೇಳಿರುವ ವಿಧಾನದಲ್ಲಿರೋ ವ್ಯತ್ಯಾಸ ಗಮನಿಸಿ. ಡಬ್ಬಿಂಗ್ ಬಗ್ಗೆ - ಯಾಕೆ ಸುಮ್ಮನಿದ್ದೀರಾ? ಎಂದಿದ್ದರೆ ರಿಮೇಕ್ ಬಗ್ಗೆ - ಸದ್ಯದ ನಿಲುವು ಕೇಳ್ತಿದಾರೆ. ಪಾಪ ಓದುಗರೇ ಕೇಳಿರೋ ಪ್ರಶ್ನೆಗಳಂತೆ ಇವು!). ಇದಕ್ಕೆ ಶಿವಣ್ಣ "ನಾನು ರಿಮೇಕ್ ಮಾಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಮಾತನಾಡೋದು ತಪ್ಪಾಗಬಹುದು. ಸಿನಾಮಾನ ನಂಬಿ ಬದುಕೋ ಸಾಕಷ್ಟು ಜನ ಇದ್ದಾರೆ. ರಿಮೇಕೋ, ಸ್ವಮೇಕೋ ಸಿನಿಮಾಗಳು ಬರುತ್ತಿದ್ದರೆ ಮಾತ್ರಾ ಅವರೆಲ್ಲರ ಹೊಟ್ಟೆ ತುಂಬೋಕೆ ಸಾಧ್ಯ. ಆ ದೃಷ್ಟಿಯಿಂದ ಏನೂ ಹೇಳಲು ಸಾಧ್ಯವಿಲ್ಲ. ಇನ್ನು ನಾನಂತೂ ಸ್ವಮೇಕ್ ಮಾಡುತ್ತಲೇ ಇದ್ದೇನೆ. ಚಿತ್ರ ಹಿಟ್ ಆಯಿತೋ ಫ಼್ಲಾಪ್ ಆಗುತ್ತಿದೆಯೋ ಬೇರೆ ಮಾತು. ನನ್ನ ನಿರ್ಧಾರ ಮಾತ್ರಾ ಬದಲಾಗಿಲ್ಲ" ಎಂದಿದ್ದಾರೆ.

ಎರಡೂ ಉತ್ತರಗಳಲ್ಲಿರೋ ಅನುಕೂಲ ಸಿಂಧುತ್ವ ಗಮನಿಸಿದಿರಾ? ಇರಲಿ ಬನ್ನಿ ಈಗ ಶಿವಣ್ಣನವರನ್ನು ಮಾತಾಡಿಸೋಣ.

ಹಿರಿಯರು ಅಂದಿದ್ರೂ ಅಂತಾ...

ಹಿರಿಯರು ಡಬ್ಬಿಂಗ್ ಬೇಡಾ ಅಂದಿದಾರೆ ಅದಕ್ಕೆ ಬೇಡಾ ಅಂದುಬುಟ್ರೆ ಹೆಂಗೆ ಶಿವಣ್ಣಾ? ಹಿರಿಯರು ಬೇಡಾ ಅಂದಿದ್ದ ಸಂದರ್ಭ ಎಂಥದ್ದು? ಯಾಕೆ ಬೇಡಾ ಅಂದಿದ್ರು? ಇವತ್ತಿನ ಪರಿಸ್ಥಿತಿ ಹಂಗೇ ಇದೆಯಾ? ಇಷ್ಟಕ್ಕೂ ಆವತ್ತು ಹಿರಿಯರು ಬೇಡಾ ಅಂದಿದ್ದು ಸರೀನಾ ಅಂತಾ ಈಗಿನವರು ವಿಚಾರ ಮಾಡಬೇಕಲ್ವಾ? ಹಿಂದೆ ನಮ್ಮ ತಾತನ ಕಾಲದಲ್ಲಿ ಪ್ಯಾಂಟ್ ಹಾಕ್ಕೋಂಡ್ರೇ ಮೊಕಕ್ ಉಗೀತಿದ್ರು, ಪ್ಯಾಂಟ್ ಹಾಕ್ಕೋಬಾರ್ದು ಪಂಚೇ ಉಟ್ಕಳ್ಳಿ ಅಂತಿದ್ರು... ಈಗಲೂ ಹಂಗೇ ಮಾಡಬೇಕಾ? ಕಾಲಕ್ಕೆ ತಕ್ಕಂತೆ ಕುಣಿಯಬೇಕು ಅಂತಾ ಅಣ್ಣಾವ್ರೇ ಹೇಳಿಲ್ವಾ?

ಇದೇನು ಬೆದರಿಕೇನಾ ಶಿವಣ್ಣಾ?

ಇಷ್ಟಕ್ಕೂ ಈಗ ಜಬರ‍್‍ದಸ್ತಿ ಮಾಡ್ತಾ ಇರೋದು ಯಾರು? ಕಾನೂನು ಬಾಹಿರವಲ್ಲದ ಒಂದು ಕೆಲಸಾನಾ, ಕಾನೂನು ಬಾಹಿರವಾಗಿ ಬ್ಯಾನ್ ಮಾಡ್ತೀನಿ ಅನ್ನೋಕೆ ಚಲನಚಿತ್ರರಂಗವೇನು ಯಾರದೋ ಪಾಳೇಗಾರಿಕೇನಾ? ಡಬ್ಬಿಂಗ್ ಅವಶ್ಯಕತೆ ಇದೆಯೋ ಇಲ್ವೋ ಅಂತಾ ಹೇಳೋಕೆ ನಾನೂ ನೀವೂ ತಾನೇ ಏನು ಅಧಿಕಾರ ಹೊಂದಿದೀವಿ? ಈಗ ಪ್ರೇಕ್ಷಕರಾದ ನಾವು ಡಬ್ಬಿಂಗ್ ಬೇಕು ಅಂತಿದೀವಿ. ನಮ್ಮ ಬೇಡಿಕೆ ಪೂರೈಸಲು ಆಗುವವರು ಪೂರೈಸುತ್ತಾರೆ. ಯಾರಿಗೆ ಬೇಕೋ ಅವರು ಅಂಥಾ ಸಿನಿಮಾ ನೋಡ್ಕೋತಾರೆ. ಅಂಥಾ ಸಿನಿಮಾಗಳು ವ್ಯಾವಹಾರಿಕವಾಗಿ ಲಾಭ ಅನ್ಸುದ್ರೆ ಉಳೀತಾವೆ, ಇಲ್ದಿದ್ರೆ ಇಲ್ಲಾ. ಈಗ ಚಿತ್ರರಂಗದೋರು ತೆಗಿತಾ ಇರೋ ರಿಮೇಕುಗಳನ್ನು ನಾವು ತಡ್ಯಕ್ಕೆ ಬೀದಿಗಿಳೀತೀವಿ, ಯಾವ ಲೆವೆಲ್ಲಿಗಾದ್ರೂ ಇಳೀತೀವಿ ಅನ್ನೋಕಾಗುತ್ತಾ? ಹುಡುಗ್ರು ಹಿಟ್ ಆಗೋದಾದ್ರೆ ಸಂತೋಷ... ಎಲ್ಲೀ ತನಕ ಜನರಿಗೆ ಸಿನಿಮಾ ನೋಡೋ, ಗೆಲ್ಲಿಸೋ, ಸೋಲಿಸೋ ಸ್ವಾತಂತ್ರವಿದೆಯೋ ಅಲ್ಲೀ ತನಕ ಎಲ್ಲಾ ಸರೀನೆ. ಅದು ಬಿಟ್ಟು, ಇದುನ್ನಾ ತಡೀತೀವಿ, ಇದುನ್ನಾ ಬ್ಯಾನ್ ಮಾಡ್ತೀವಿ ಅಂತಾ ಅನ್ನೋಕೆ ತಮ್ಮದೇನು ಜನರಿಂದ ರಾಜ್ಯ ಆಳಕ್ಕೆ ಅಂತಾ ಆರಿಸಲ್ಪಟ್ಟ ಸರ್ಕಾರಾನಾ? ಅಷ್ಟಕ್ಕೂ ಈ ದೇಶದಲ್ಲಿ ಸಂವಿಧಾನ, ಕಾನೂನು ಅಂತಾ ಇರೋದು ತಮ್ಮ ಗಮನದಲ್ಲಿಲ್ವಾ? ಕಾನೂನು ಏನೇ ಇದ್ಕೊಳ್ಲಿ, ನಾವು ಬೀದಿಗೆ ಇಳಿದು ಹೋರಾಟ ಮಾಡ್ತೀವಿ ಅಂದ್ರೇನರ್ಥ? ಅಂದಹಾಗೆ ಯಾವ ಲೆವೆಲ್ಲಿಗೆ ಬೇಕಾದ್ರೂ ಇಳೀತೀವಿ ಅಂತೀರಲ್ಲಾ? ಇದೇನು ಬೆದರಿಕೇನಾ ಶಿವಣ್ಣಾ? ಇಂಥಾ ಬೆದರಿಕೆಯಿಂದಾ ಕನ್ನಡಿಗರಿಗೆ ತಮ್ಮ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳೋ ಹಕ್ಕನ್ನು ನಿರಾಕರಿಸೋದು ತಪ್ಪಲ್ವಾ?

ಕನ್ನಡತನಾ ಅಂದ್ರೆ...

ಇನ್ನು ನಮ್ಮಂಥಾ ಬರೀ ಕನ್ನಡ ಮಾತ್ರಾ ಗೊತ್ತಿರೋ ಕನ್ನಡಿಗರಿಗೆ ಇವರುಗಳ ಕನ್ನಡತನಾನೇ ಅರ್ಥವಾಗದು. ಕನ್ನಡದಲ್ಲಿ ಎಲ್ಲಾ ಭಾಷೆಯ ಚಿತ್ರ ನೋಡೋದು ಕನ್ನಡತನವೋ? ಕನ್ನಡಿಗರೆಲ್ಲಾ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಅವವೇ ಭಾಷೇಲಿ ನೋಡೋದು ಕನ್ನಡತನವೋ? ಬೇರೆ ಭಾಷೆ ಚಿತ್ರಗಳು ನಮ್ಮಲ್ಲಿ ಬಿಡುಗಡೆ ಆಗ್ತಿವೆ ಅದುಕ್ಕೆ ಡಬ್ಬಿಂಗ್ ಬೇಡಾ... ಕನ್ನಡದವುನ್ನ ಬೇರೆ ಕಡೆ ಬಿಡುಗಡೆ ಮಾಡಲ್ಲ, ಅದುಕ್ಕೆ ನಮ್ ಸಿನಿಮಾ ಡಬ್ ಆಗ್ಲೀ ಅನ್ನೋದು ಬೂಟಾಟಿಕೆ ಅನ್ಸಲ್ವಾ? ಕರ್ನಾಟಕದ ಆಚೆ ಇರೋ ಕನ್ನಡಿಗರು ಕನ್ನಡದಲ್ಲಿ ಸಿನಿಮಾ ನೋಡದೇ ಅವರಿರೋ ರಾಜ್ಯಗಳ ಭಾಷೇಲಿ ಡಬ್ ಆದ ರೂಪದಲ್ಲಿ ನಮ್ಮ ಸಿನಿಮಾ ನೋಡಲೀ ಅನ್ನೋದಾದರೆ, ಇದೇ ನ್ಯಾಯಾ ಪರಭಾಷಾ ಚಿತ್ರಗಳಿಗೂ ಅನ್ವಯವಾಗಲ್ವಾ? ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಬೇಕು ಅನ್ನುವಂತೆ ‘ನಮ್ಮಲ್ಲಿ ಪರಭಾಷಾ ಚಿತ್ರಗಳು ಬಿಡುಗಡೆಯಾಗ್ತಿರುವಾಗ ಡಬ್ಬಿಂಗ್ ಯಾಕೆ?’ ಅನ್ನೋ ನೀವು, ಕನ್ನಡಿಗರೆಲ್ಲಾ ಪರಭಾಷೆಗಳನ್ನು ಕಲಿತುಕೊಂಡು ಆಯಾಭಾಷೆಯಲ್ಲಿ ಆಯಾ ಸಿನಿಮಾ ನೋಡಿ ಅನ್ನೋದಾಗಲೀ, ಭಾಷೆ ಬರದಿದ್ರೂ ಆ ಭಾಷೇಲೇ ನೋಡಿ ಅನ್ನೋದಾಗ್ಲೀ ನಿಮ್ಮ ಸ್ವಾರ್ಥದಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮಾಡ್ತಿರೋ ಮೋಸ ಅಲ್ವಾ ಶಿವಣ್ಣಾ? ಇದುನ್ನಾ ಕನ್ನಡತನಾ ಅನ್ನಕ್ ಆದೀತಾ? ಆಯ್ತು.. ಕನ್ನಡಚಿತ್ರರಂಗದ ದೊಣೇನಾಯಕರೇ ಈಗ ಕೊರಿಯನ್, ಜಪಾನೀಸ್ ಸಿನಿಮಾಗಳು ಇಲ್ಲಿ ಬಿಡುಗಡೆ ಆಗ್ತಿಲ್ಲಾ... ಇವುನ್ನಾ ಡಬ್ ಮಾಡ್ಬೋದಾ?

ನಿಯತ್ತಿನ ಸಂಪಾದನೇ ಅಂದ್ರೆ...

ಯಾವುದೇ ವಿಷಯದ ಬಗ್ಗೆ ನಿಮಗಿಂತಾ ಬೇರೆಯಾದ ಅಭಿಪ್ರಾಯ ಹೊಂದಿರೋದು ಮೂರ್ಖತನಾ ಅನ್ನೋದು ಎಷ್ಟು ಸರೀ ಶಿವಣ್ಣಾ? ಇನ್ನು ಡಬ್ಬಿಂಗ್‍ನಿಂದಾ ಸಂಪಾದಿಸೋ ದುಡ್ಡು ನಿಯತ್ತಿನದಲ್ಲಾ ಅಂತೀರಲ್ಲಾ? ಇದೇ ಮಾತುನ್ನಾ ಫ್ರೇಮ್ ಟೊ ಫ್ರೇಮ್ ರಿಮೇಕ್ ಮಾಡೋ ಬಗ್ಗೆ ಯಾಕೆ ಹೇಳಲ್ಲಾ? ಇತ್ತೀಚಿಗೆ ನಿಮ್ಮದೇ ಕುಟುಂಬದ "ಜಾಕಿ" ಬೇರೆ ಭಾಷೆಗೆ ಡಬ್ ಆದಾಗ ಹೆಮ್ಮೆ ಪಟ್ಕೊತೀರಲ್ಲಾ? ಅದ್ಯಾವ ಸೀಮೆ ನ್ಯಾಯಾ? ಹಾಗೆ ಬೇರೆ ಭಾಷೆಗೆ ಡಬ್ ಮಾಡಿ ಸಂಪಾದಿಸೋ ದುಡ್ಡು ನಿಯತ್ತಿಂದಲ್ಲಾ ಅನ್ನಕ್ ಆಗುತ್ತಾ? ಕಾನೂನು ಬಾಹಿರವಲ್ಲದ ಮಾರ್ಗದಲ್ಲಿ ಸಂಪಾದಿಸೋ ಎಲ್ಲಾನೂ ನಿಯತ್ತಿನ ಸಂಪಾದನೇನೇ ಅಲ್ವಾ ಶಿವಣ್ಣಾ?

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?

ಅಣ್ಣಾವ್ರು, ಪ್ರೇಕ್ಷಕರನ್ನು ಅಭಿಮಾನಿ ದೇವರುಗಳು ಅಂತಿದ್ರೂ... ತಾವು ಫೂಲ್‍ಗಳು ಅಂದ್ರೀ ಅಂತಿದೆ ರೂಪತಾರಾ?ನಂಬಕ್ಕಾಗ್ತಿಲ್ಲಾ... ಹಿರಿಯರು ಡಬ್ಬಿಂಗ್ ಬೇಡಾ ಅಂದ್ರು ಅದ್ಕೆ ಬೇಡಾ ಅಂತಾ ಆ ಪಾಟಿ ಗೌರವಾ ಕೊಡ್ತಿರೋ ನೀವು, ನಿಮ್ಮದಲ್ಲದ ಅಭಿಪ್ರಾಯ ಇಟ್ಕೊಂಡೋರ ಬಗ್ಗೆ ಹಿಂಗೆಲ್ಲಾ ಅನ್ನೋದನ್ನು ಹಿರಿಯರು ಮೆಚ್ಚುತ್ತಿದ್ರು ಅಂತೀರಾ ಶಿವಣ್ಣಾ?
Related Posts with Thumbnails