೨. ಭಾರತದ ಭಾಷಾನೀತಿ: ಹೇರಿಕೆ ಅಳೆಯಲೊಂದು ಸಮಿತಿ!

ಭಾರತದೇಶದ ಘನ ಸಂವಿಧಾನದ ಆಶಯದಂತೆ ರೂಪಿಸಲಾಗಿರುವ ಭಾಷಾನೀತಿಯ ಬಗ್ಗೆ ಈಗಾಗಲೇ ತಿಳಿಸಿದೆವು. ಈ ಭಾಷಾನೀತಿಯಂತೆ ಈ ದೇಶದಲ್ಲಿ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಹಿಂದಿ. ಹಿಂದಿ ಬರದೆ ಇರೋ ರಾಜ್ಯಗಳೂ ಕೆಲವು ಇವೆಯಲ್ಲಾ, ಹಾಗಾಗಿ ಇಷ್ಟವಿಲ್ಲದೇ ಇಂಗ್ಲೀಶು. ಆ ರಾಜ್ಯಗಳಿಗೆಲ್ಲಾ ಹಿಂದೀನ ಕಲಿಸಿ, ಗುಲಾಮಗಿರಿಯ ಸಂಕೇತವಾದ ಇಂಗ್ಲೀಶನ್ನು ನಮ್ಮ ನೆಲದಿಂದ ಬಡಿದೋಡಿಸಿ… ಆ ರತ್ನಸಿಂಹಾಸನದಲ್ಲಿ ಭಾರತದ ರಾಜ್ಯಲಕ್ಷ್ಮಿಯಾದ ಹಿಂದೀ ದೇವಿಯನ್ನು ಪ್ರತಿಷ್ಠಾಪಿಸುವುದನ್ನು “ಇದೇ ನನ್ನ ಗುರಿ, ಇದೇ ನನ್ನ ಮಂತ್ರ, ಇದೇ ನನ್ನ ಪ್ರತಿಜ್ಞೆ” ಅಂತಾ ತಿಳ್ಕೊಂಡಿರೋ ಕೇಂದ್ರಸರ್ಕಾರವು ತನ್ನ ಘನಕಾರ್ಯವು ಹೇಗೆ ಕೆಲಸ ಮಾಡ್ತಿದೆ ಅಂತಾ ನೋಡಕ್ಕೆ, ಆಗ್ಗಿಂದಾಗ್ಗೆ ಸಂಸತ್ ಸಮಿತಿಯನ್ನು ನೇಮಿಸಿ, ಸಮೀಕ್ಷೆ ಮಾಡಿಸಿ, ವರದಿ ತರಿಸಿ, ರಾಷ್ಟ್ರಪತಿಗಳಿಗೆ ಸಲ್ಲಿಸಿ… ಅಲ್ಲಿಂದಾ ಸಂಸತ್ತಿನೊಳಗೆ ಕಾಯ್ದೆ ಮಾಡಿಸಿ... ಪಾಪಾ.. ಭೋ ಕಷ್ಟಾ ಪಡ್ತಿದೆ ಬುಡಿ.

ಎಂಟನೇ ಸಂಸತ್ ಸಮಿತಿ

ಇಂಥಾ ಸಂಸತ್ ಸಮಿತಿಗಳ ಸಾಲಿನಲ್ಲಿ ೨೦೦೪ರಲ್ಲಿ ಸ್ಥಾಪಿತವಾದ ಶ್ರೀ ಶಿವರಾಜ್ ಪಾಟೀಲರ ಅಧ್ಯಕ್ಷತೆಯ (ಈ ಸಮಿತಿಗೆ ಪ್ರತೀಸಲ ಗೃಹಮಂತ್ರಿಗಳೇ ಅಧ್ಯಕ್ಷರಾಗಬೇಕಂತೆ) ಮೂವತ್ತು ಸಂಸದರ ಸಮಿತಿಯು ಎಂಟನೆಯದು. ಆ ಸಮಿತಿಯು ಕೇಂದ್ರಸರ್ಕಾರದ ಎಲ್ಲಾ ೩೯ ಮಂತ್ರಾಲಯಗಳ ಹತ್ತಾರು ಕಚೇರಿಗಳನ್ನು ಪರಿಶೀಲಿಸಿ ಒಂದು ವರದಿಯನ್ನು ಸಲ್ಲಿಸಿತು. ಆ ವರದಿಯ ಮುನ್ನುಡಿಯಲ್ಲಿ ಹೀಗಿದೆ :
ಪೀಠಿಕೆ: ಒಂದು ವ್ಯಕ್ತಿಗೆ ಭಾಷೆ ಹೇಗೆ ಒಂದು ಗುರುತೋ ಹಾಗೇ ಒಂದು ದೇಶಕ್ಕೂ ರಾಷ್ಟ್ರಧ್ವಜ, ರಾಷ್ಟ್ರಭಾಷೆಗಳೂ ಪ್ರಮುಖ. ಹಾಗಾಗಿ ಭಾರತದಲ್ಲಿ ಹಿಂದೀಭಾಷೆಯು ರಾಷ್ಟ್ರಭಾಷೆಯಾಗುವ ಬಗ್ಗೆ, ಆಡಳಿತ ಭಾಷೆಯಾಗುವ ಬಗ್ಗೆ ಜನರ ನಡುವಿನ ಸಂಪರ್ಕ ಭಾಷೆಯಾಗುವ ಬಗ್ಗೆ ಬಹು ಚರ್ಚಿತವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರೂ ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ಹಿಂದೀಯನ್ನು ರಾಷ್ಟ್ರೀಯ ಅಭಿಮಾನದ ಪ್ರತೀಕವನ್ನಾಗಿ ಮಾಡಿದ್ದರು. ಭಾರತವನ್ನು ಶತಮಾನಗಳ ದಾಸ್ಯಕ್ಕೆ ಗುರಿಮಾಡಿದ ಬ್ರಿಟೀಶರ ವಿರುದ್ಧ ೧೮೫೭ರಲ್ಲಿ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮ ೧೯೪೭ರಲ್ಲಿ ಕೊನೆಗೊಂಡಿತು. ಈ ಅವಧಿಯೇ ರಾಷ್ಟ್ರಭಾಷಾ ಪ್ರೇಮ ಮತ್ತು ರಾಷ್ಟ್ರಪ್ರೇಮಗಳೆರಡೂ ಒಂದೆನ್ನುವಂತಹ ವಾತಾವರಣವಿದ್ದ ಕಾಲ. ಈಗಿನ ಜಾಗತೀಕರಣದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಸಾಂಸ್ಕೃತಿಕ ಮತ್ತು ಆರ್ಥಿಕ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದ್ದು ದೇಶದ ಆಡಳಿತ ಭಾಷೆಯ ಬಗೆಗಿನ ಚರ್ಚೆಯು ಸಾಂದರ್ಭಿಕವೂ ಅತ್ಯಗತ್ಯವೂ ಆದುದಾಗಿದೆ. ಭಾರತದಲ್ಲಿರುವ ಅನೇಕ ಪ್ರಾದೇಶಿಕ ನುಡಿಗಳು ತಮ್ಮವೇ ಆದ ಇತಿಹಾಸ ಮತ್ತು ಸಾಹಿತ್ಯದ ಹಿರಿಮೆಗಳನ್ನು ಹೊಂದಿವೆ. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಈ ಎಲ್ಲಾ ನುಡಿಗಳ ಹಿರಿಮೆಯನ್ನು ಕಾಯ್ದಿಟ್ಟುಕೊಳ್ಳುವ ಅಗತ್ಯವಿರುವಂತೆಯೇ ರಾಜ್ಯರಾಜ್ಯಗಳ ನಡುವಿನ ಸಂಪರ್ಕಕ್ಕಾಗಿ ಒಂದು ಭಾಷೆಯನ್ನು ಹೊಂದುವುದೂ ಅಗತ್ಯವಾಗಿದೆ. ನಮ್ಮ ದೇಶದ ಪುರಾತನ ಸಂಸ್ಕೃತಿಯನ್ನು ಅಡಗಿಸಿಕೊಂಡಿರುವ ಸಂಸ್ಕೃತವು ಎಲ್ಲಾ ಭಾರತೀಯ ಭಾಷೆಗಳಿಗೆ ಮೂಲವಾಗಿದೆ ಮತ್ತು ಹಿಂದೀ ಭಾಷೆಯು ಸಂಸ್ಕೃತಕ್ಕೆ ಬಲು ಹತ್ತಿರದ ಭಾಷೆಯಾಗಿದೆ. ಇದನ್ನು ಭಾರತದ ಬಹುತೇಕ ಭಾಗಗಳಲ್ಲಿನ ಜನರು ಓದಲು, ಬರೆಯಲು, ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಬಹುಸಂಖ್ಯಾತರ ಭಾಷೆಯಾದ ಹಿಂದಿಯು ಭಾರತದ ರಾಷ್ಟ್ರಭಾಷೆಯ ಸ್ಥಾನವನ್ನು ಅತ್ಯುತ್ತಮವಾಗಿ ತುಂಬುತ್ತದೆ.
ಸುಳ್ಳುಗಳ ಸರಮಾಲೆ

ಮಹಾತ್ಮಗಾಂಧಿಯೋ.. ಮತ್ತೊಬ್ಬರೋ… ಅಂದವರು ಯಾರಾದರೇನು? ಹಿಂದಿಯನ್ನು ಭಾರತದ ಜನರೆಲ್ಲಾ ಬಳಸಬೇಕು ಎನ್ನುವ ಮಾತಿನ ಒಳಅರ್ಥವು ಹಿಂದೀ ಬರದವರು ಭಾರತೀಯರಲ್ಲ ಎನ್ನುವುದೇ ಆಗಿದೆ. ಎಲ್ಲಾ ನುಡಿಗಳನ್ನು ಉಳಿಸಬೇಕೆಂಬುದನ್ನು ಬಾಯಿಮಾತಲ್ಲಿ ಹೇಳುತ್ತಿರುವ ಈ ಪೀಠಿಕೆಯಲ್ಲಿ ಸಂಸ್ಕೃತವನ್ನು ಭಾರತದ ಬಹುತೇಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಕಾರಣ ನೀಡಿ ಸೀದಾ ರಾಷ್ಟ್ರಭಾಷೆ ಮಾಡಬೇಕೆನ್ನುವ ನಿಲುವು ತೆಗೆದುಕೊಳ್ಳುವುದು ಸರಿಯೇ? ಭಾರತದ ಭಾಷೆಗಳಿಗೆಲ್ಲಾ ಸಂಸ್ಕೃತವೇ ತಾಯಿಭಾಷೆ ಎನ್ನುವ ಮಾತನ್ನು ಭಾಷಾವಿಜ್ಞಾನದ ಅಧ್ಯಯನಗಳು ಸುಳ್ಳೆಂದು ತೋರಿಸಿಕೊಟ್ಟಿದೆಯಲ್ಲಾ? ಯಾವ ದಕ್ಷಿಣ ಭಾರತೀಯ ಭಾಷೆಗೂ ಸಂಸ್ಕೃತ ತಾಯಿಯಾಗಿಲ್ಲವಲ್ಲ? ದಕ್ಷಿಣ ಭಾರತದ ಬಹುತೇಕ ಸಾಂಸ್ಕೃತಿಕ ಸಂಪತ್ತು ಸಂಸ್ಕೃತದಲ್ಲಿದೆ ಎನ್ನಲಾಗುತ್ತದೇನು? ಬಹುಭಾಷಾ ರಾಜ್ಯಗಳ ನಾಡಲ್ಲಿ ಹೆಚ್ಚು ಜನರು ಬಳಸುವ ಭಾಷೆಯನ್ನು ರಾಷ್ಟ್ರಭಾಷೆಯಾಗಿಸುವುದು ಹೇಗೆ ಪ್ರಜಾಪ್ರಭುತ್ವವಾಗುತ್ತದೆ? ಈ ನೆಲದ ಮಕ್ಕಳಿಗೆ ಅಷ್ಟೇಕೆ ಭಾರತದ ಸರಿಸುಮಾರು ೬೦%ಕ್ಕೂ ಹೆಚ್ಚು ಜನರಿಗೆ ತಾಯ್ನುಡಿಯಾಗಿರದ ಹಿಂದಿಯನ್ನು ಚಿಕ್ಕಂದಿನಿಂದ ಕಲಿಸಿ, ಕಲಿಯದಿದ್ದರೆ ಬದುಕಿಲ್ಲವೆನ್ನುವಂತೆ ಮಾಡುವುದು ಹೇಗೆ ಪ್ರಜಾಪ್ರಭುತ್ವವಾಗುತ್ತದೆ? ಹಿಂದೊಮ್ಮೆ ಹೇಳಿದಂತೆ ಪರದೇಶದವನು ಚುಚ್ಚಿದರೆ ನೋಯುತ್ತೆ ಹಾಗಾಗಿ ಪಕ್ಕದ ಮನೆಯವನು ಚುಚ್ಚಲಿ ಎನ್ನಲಾಗುತ್ತದೆಯೇ? ಹೀಗೆ ದೇಶದ ಗುರುತು/ ಪ್ರತೀಕ ಎನ್ನುತ್ತಾ… ದೇಶದ ಒಗ್ಗಟ್ಟಿಗೆ ಕಾರಣವಾಗುವುದು ಎನ್ನುತ್ತಾ ಹಿಂದಿಯನ್ನು ಬಳಸುವಂತೆ ಮಾಡುವುದು ಹೇರಿಕೆಯೇ ಅಲ್ಲವೇನು? ಎರಡು ರಾಜ್ಯಗಳು ತಮ್ಮ ನಡುವಿನ ಸಂಪರ್ಕ ಭಾಷೆ ಯಾವುದಿರಬೇಕೆಂದು ತಾವೇ ನಿರ್ಧರಿಸಿಕೊಳ್ಳುವಂತೆ ಬಿಡುವುದು ಬಿಟ್ಟು ಇಂಥದೇ ನುಡಿಯಲ್ಲಿ ನೀವು ವ್ಯವಹರಿಸಬೇಕು ಎನ್ನುವುದು ಎಷ್ಟು ಸರಿ?
ಒಟ್ಟಾರೆ ಪೀಠಿಕೆಯಲ್ಲೇ ಹಿಂದೀ ಭಾಷೆಯ ಸಾರ್ವಭೌಮತ್ವ ಸ್ಥಾಪನೆಯೇ ತಮ್ಮ ಪರಮಗುರಿ ಎನ್ನುವ ಈ ಸಂಸತ್ ಸಮಿತಿ ಏನೇನೆಲ್ಲಾ ಮಾಡಿದೆ? ಏನೇನೆಲ್ಲಾ ಹೇಳಿದೆ ಎಂದು ಮುಂದೆ ನೋಡೋಣ.

(ಮುಂದುವರೆಯುವುದು…)

೧. ಭಾರತದ ಭಾಷಾನೀತಿ

ಒಂದು ದೊಡ್ಡ ಕಾಡು. ಅದರಲ್ಲಿ ಆನೆ, ಹುಲಿ, ಸಿಂಹ, ಮಂಗ, ಚಿರತೆ, ಜಿಂಕೆ, ಕರಡಿ, ನರಿ, ತೋಳ, ಹಾವು, ಚೇಳು, ಜೇಡ, ಕೋಗಿಲೆ, ನವಿಲು, ಗುಬ್ಬಿ, ಗೊರವಂಕ, ಅಳಿಲು, ಚಿಟ್ಟೆ, ಹುಳು, ಹುಪ್ಪಟೆ, ಮೀನು, ಮೊಸಳೆ, ಬಾತುಕೋಳಿ, ಏಡಿ ಮುಂತಾಗಿ ಸಾವಿರಾರು ಬಗೆಯ ಜೀವಿಗಳು. ಒಮ್ಮೆ ಕಾಡಿನಲ್ಲಿ ಎಲ್ಲವಕ್ಕಿಂತಾ ಹೆಚ್ಚು ಸಂಖ್ಯೆಯಲ್ಲಿರುವ ಆನೆಗಳು - “ಛೇ! ನಮ್ಮ ಕಾಡಿನಲ್ಲಿ ಬೇರೆ ಬೇರೆ ಥರದ ಜೀವಿಗಳಿದ್ದು, ಅವುಗಳೆಲ್ಲಾ ಬೇರೆ ಬೇರೆ ಥರದ ಕೂಗುಗಳನ್ನು ಹೊರಡಿಸಿ, ಬೇರೆ ಬೇರೆ ಥರದ ಆಹಾರಗಳನ್ನು ತಿನ್ನುತ್ತಿರುವುದರಿಂದ ಕಾಡಿನ ಒಗ್ಗಟ್ಟು ಹಾಳಾಗಿದೆ. ಕಾಡು ಬಲಹೀನವಾಗಿದೆ. ಹಾಗಾಗಿ ಇನ್ನುಮುಂದೆ ಇಲ್ಲಿ ಬರೀ ಆನೆಗಳು ಮಾತ್ರವೇ ಇರಬೇಕು. ಅಥವಾ ಆನೆಗಳಂತೆಯೇ ಎಲ್ಲಾ ಪ್ರಾಣಿಗಳು ಬರೀ ನಡೆದಾಡಬೇಕು, ಹುಲ್ಲು ತಿನ್ನಬೇಕು, ಘೀಳಿಡಬೇಕು” ಎಂದು ತೀರ್ಮಾನ ಮಾಡಿದವಂತೆ. ಪರಿಣಾಮವಾಗಿ ಸಿಂಹದ ಗುಹೆಯಿಂದ ಹಿಡಿದು ಕೋಗಿಲೆಯ ಗೂಡಿನವರೆಗೂ ಎಲ್ಲೆಲ್ಲೂ ಘೀಳಿಡುವ ಪಾಠವಂತೆ. ಹುಲಿ ಸಿಂಹಗಳೆಲ್ಲಾ ಬೇಟೆ ಬಿಟ್ಟು, ಮೀನು ಮೊಸಳೆಗಳೆಲ್ಲಾ ಈಜಲು ಬಿಟ್ಟು, ಕೊಕ್ಕರೆ ಹಂಸಗಳೆಲ್ಲಾ ಹಾರಲು ಬಿಟ್ಟು… ಆನೆಗಳಂತೆ ಬದುಕುವುದು ಹೇಗೆಂದು ಕಲಿಯುವ ಶಾಲೆ ಸೇರಬೇಕಾಯ್ತಂತೆ…ಹಾಗೆ ಅಂತಹ ಶಾಲೆಗಳನ್ನು ಸೇರಿದರೆ ಮಾತ್ರವೇ ಆಹಾರವಂತೆ, ರಕ್ಷಣೆಯಂತೆ…” ಏನಪ್ಪಾ ಇದು ಇದೆಂಥಾ ತಲೆಕೆಟ್ಟ ಆನೆಗಳ ಕಥೆ ಅನ್ನಬೇಡಿ. ಇದೇ ನಮ್ಮ ಭವ್ಯ ಭಾರತವೆಂಬ ದೇಶದ ಕಥೆ.
ಹೌದು… ಹತ್ತಾರು ಭಾಷೆಗಳನ್ನಾಡುವ ಭಾರತದಲ್ಲಿ ಒಗ್ಗಟ್ಟಿನ ಕಥೆ ಹೇಳಿ ಇಡೀ ದೇಶದ ಜನಕ್ಕೆಲ್ಲಾ ಹಿಂದೀ ಕಲಿಸುವ, ಕಲಿಯದಿದ್ದರೆ ಕೆಲಸವಿಲ್ಲ ಎಂಬ ನಿಬಂಧನೆ ಹೇರುವ, ಕಲಿತರೆ ಬಹುಮಾನ ನೀಡುವ ವ್ಯವಸ್ಥೆ ಇರುವ ಭಾರತದ ಕಥೆ. ದೇಶದ ಉದ್ದಗಲಕ್ಕಿರುವ ಭಾಷಿಕ ವೈವಿಧ್ಯತೆಗಳನ್ನು ಅಳಿಸುವಂತೆ ಭಾರತ ಸರ್ಕಾರ ನಡೆದುಕೊಳ್ಳುತ್ತಿರುವುದು ಆನೆಗಳ ಹುಚ್ಚುತನದಂತೆಯೇ ಇದೆ. (ಇಲ್ಲಿ ಆನೆಗಳನ್ನು ಹಿಂದೀಯೆಂದು, ಉಳಿದವನ್ನು ಉಳಿದ ನುಡಿಯಾಡುಗರೆಂದೂ ಬರೆದಿರುವುದಕ್ಕೆ ಅಷ್ಟು ಮಾತ್ರವೇ ಅರ್ಥ. ಒಂದು ಬಲಶಾಲಿ, ಇನ್ನೊಂದು ವೀಕು ಅಂತ ಅಲ್ಲಾ!)

ವೈವಿದ್ಯತೆಯಲ್ಲಿ ಏಕತೆ ಎಂಬ ಭಗವದ್ ಗೀತೆ

ಭಾರತದಲ್ಲಿ ಪದೇ ಪದೇ ಕೇಳಿ ಬರೋ ಮಾತು “ಈ ನಮ್ಮ ದೇಶ ನಾನಾ ಭಾಷೆ, ಸಂಸ್ಕೃತಿಗಳನ್ನು ಹೊಂದಿದೆ, ಅವುಗಳನ್ನೆಲ್ಲಾ ಹೊಂದಿದ್ದೂ ನಾವೊಂದು ದೇಶವಾಗಿರೋದು ಎಂಥಾ ಸೊಗಸು. ಇದನ್ನೇ ನಾವು ಹೆಮ್ಮೆಯಿಂದ “ವೈವಿಧ್ಯತೆಯಲ್ಲಿ ಏಕತೆ” ಅನ್ನೋದು…” ಹೀಗೆ. ಆದರೆ ಭಾರತ ಸರ್ಕಾರಕ್ಕಿರೋ ಉದ್ದೇಶಗಳು ಮಾತ್ರಾ ಇದಕ್ಕಿಂತ ಭಿನ್ನವಾಗಿದೆ. ಅದು ಈ “ವೈವಿಧ್ಯತೆಯಲ್ಲಿ ಏಕತೆ” ಎಂಬ ಭಗವದ್ಗೀತೇನಾ ಬಾಯಲ್ಲಿ ಹಾಡ್ ಹಾಡ್ತಾನೆ, ವೈವಿಧ್ಯತೆಯನ್ನು ಒಂದು ಶಾಪ ಅಂದ್ಕೊಂಡು ವಿವಿಧತೆಯನ್ನು ಅಳಿಸಿಹಾಕೋ ಬಗಲಲ್ಲಿನ ಚೂರಿಗಳಂಥಾ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಮಾಡ್ತಾನೆ ಇದೆ.

ಇಂದಿನ ಭಾರತದ ಭಾಷಾನೀತಿ

ಭಾರತ ಸರಕಾರ ಒಪ್ಪಿರೋ ಭಾಷಾನೀತಿಯಲ್ಲಿ ಹಿಂದೀ ಮತ್ತು ಇಂಗ್ಲೀಶುಗಳಿಗೆ ಜಾಗ ಮಾಡಿಕೊಡಲಾಗಿದೆ. ಅಂದರೆ ಭಾರತ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ, ಆಡಳಿತಭಾಷೆ ಹಿಂದೀ & ಇಂಗ್ಲೀಶು. ೧೯೫೦ರಿಂದ ಈ ಎರಡನ್ನು ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿ, ೧೫ ವರ್ಷದ ನಂತರ ಹಿಂದಿಯೊಂದನ್ನೇ ಉಳಿಸಿಕೊಳ್ಳುವ ಯೋಚನೆ ಕೇಂದ್ರಸರ್ಕಾರಕ್ಕಿತ್ತು. ಹೀಗೆಂದೇ ಸಂವಿಧಾನದಲ್ಲೂ ಬರೆಯಲಾಯಿತು. ಆದರೆ ೧೯೬೫ರ ಸುಮಾರಿನ ತಮಿಳುನಾಡಿನ ಹಿಂದೀಹೇರಿಕೆ ವಿರೋಧಿ ಹೋರಾಟದಿಂದಾಗಿ ಹಾಗಾಗದೆ ಸದ್ಯಕ್ಕೆ ಎರಡೂ ನುಡಿಗಳನ್ನು ಉಳಿಸಿಕೊಳ್ಳಲಾಗಿದೆ. ಪ್ರತಿಯೊಂದು ರಾಜ್ಯವೂ ಹಿಂದಿಯನ್ನು ತಾನಾಗೇ ಏಕೈಕ ಸಂಪರ್ಕಭಾಷೆ ಎಂದು ಒಪ್ಪುವ ತನಕ ಮುಂದುವರೆಸುತ್ತೇವೆ ಎನ್ನಲಾಗಿದೆ. ಇಂಥಾ ಯೋಜನೆಗೆ ಬೆನ್ನೆಲುಬು “Indian official languages act”. ಇದರ ಹೆಸರು ಹೇಳ್ತಾ ಹೇಳ್ತಾನೇ "ನಮ್ಮ ಘನ ಸಂವಿಧಾನದ ಆಶಯದಂತೆ..." ಎಂದು ಪ್ರತಿಯೊಂದರ ಮೊದಲಲ್ಲೂ ಪೀಠಿಕೆ ಹಾಕಿ ಈ ವಿವಿಧತೆ ಅಳಿಸುವ ಕೆಲಸಕ್ಕೆ ಭಾರತ ಸರ್ಕಾರ ಮುಂದಾಗಿದೆ. ಹಿಂದಿಯನ್ನು ಭಾರತದ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಒತ್ತಾಯ, ಆಮಿಶ ಮತ್ತು ಮನವರಿಕೆಗಳ ಮೂಲಕ ಜಾರಿಮಾಡುವ ಯೋಜನೆ ಇದೆ.

ಹಿಂದೀ ಹರಡಲೊಂದು ನುಡಿ ಹಮ್ಮುಗೆ!

ಹಾಗಾದರೆ ರಾಜ್ಯಗಳನ್ನು ಒಪ್ಪಿಸುವುದು ಹೇಗೆ? ಅದಕ್ಕೆಂದೇ ಒಂದು ನುಡಿಹಮ್ಮುಗೆಯನ್ನು (language planning) ಭಾರತ ಸರ್ಕಾರ ರೂಪಿಸಿಕೊಂಡಿದೆ. ಅದಕ್ಕಾಗೆ ಒಂದು ಇಲಾಖೆಯನ್ನೂ ತೆರೆದಿದೆ. ಜೊತೆಯಲ್ಲೇ, ಆಗಿಂದಾಗ್ಗೆ ಸಂಸತ್ತಿನ ಇಪ್ಪತ್ತು ಸದಸ್ಯರ ಸಮಿತಿಯೊಂದನ್ನು ರಚಿಸಿ ಅದರ ಮೂಲಕ - ಹೇಗೆ ಹಿಂದಿಯನ್ನು ಆಡಳಿತದಲ್ಲಿ ಜಾರಿ ಮಾಡಲಾಗಿದೆ ಎನ್ನುವುದನ್ನು ಕಾಲದಿಂದ ಕಾಲಕ್ಕೆ ಸಮೀಕ್ಷೆ, ಅಧ್ಯಯನ ಮಾಡಿಸಿ, ಶಿಫಾರಸ್ಸುಗಳನ್ನು ರಾಷ್ತ್ರಪತಿಗಳಿಗೆ ಸಲ್ಲಿಸಿ, ಆ ಶಿಫಾರಸ್ಸುಗಳನ್ನು ಕಾಯ್ದೆ ಕಾನೂನುಗಳ ಮೂಲಕ ಜಾರಿ ಮಾಡುತ್ತಿದೆ. ಅಂದರೆ ಭಾರತ ಸರ್ಕಾರಕ್ಕೆ ಹಿಂದಿಯೊಂದನ್ನೇ ಭಾರತದ ಮೂಲೆಮೂಲೆಗಳಲ್ಲಿ ಜಾರಿ ಮಾಡುವ ಗುರಿಯಿರುವುದು ಅದರ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿದೆ. ಮೇಲುನೋಟಕ್ಕೆ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ರಾಜ್ಯ ರಾಜ್ಯಗಳ ನಡುವಿನ ಸಂವಹನಕ್ಕಾಗಿ ಹಿಂದಿಯನ್ನು ಉತ್ತೇಜಿಸುವಂತೆ ತೋರುವ ಈ ಬೆಳವಣಿಗೆಗಳು ನಿಜಕ್ಕೂ ಭಾರತದ ವೈವಿಧ್ಯತೆಯನ್ನು ಅಳಿಸಿಹಾಕಲು ಮುಂದಾಗಿವೆ. ನಿಮ್ಮೊಡನೆ ಭಾರತ ಸರ್ಕಾರದ ಸಂಸತ್ ಸಮಿತಿ ನಡೆಸಿರುವ ಅಧ್ಯಯನ, ಅದರ ಶಿಫಾರಸ್ಸು ಮತ್ತು ಸರ್ಕಾರದ ಉದ್ದೇಶಗಳ ಬಗ್ಗೆ “Department of Official languages”ನ ಮಿಂಬಲೆಯಿಂದ ಹೆಕ್ಕಿ ತೆಗೆದ ದಾಖಲೆಗಳನ್ನು ಆಧರಿಸಿದ ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ.

(ಮುಂದುವರೆಯುತ್ತದೆ…)

ಕನ್ನಡ ಚಿತ್ರರಂಗದ ರಣಧೀರ!

ಮೈಸೂರು ರಾಜ್ಯದ ದೊರೆಯೇ ರಣಾಧೀರ ನಾಯಕನೇ
ನಿನ್ನಂಥವರಾರು ಇಲ್ವಲ್ಲೋ ಲೋಕದಾ ಮ್ಯಾಲೆ!
ನಿನ್ನಂಥೋರ್ ಯಾರೂ ಇಲ್ವಲ್ಲೋ!!
ಹಿಂದೆ ಇನ್ನೂರು ದಂಡು! ಮುಂದೆ ಮುನ್ನೂರು ದಂಡು
ನಿನ್ನಂಥೋರ್ ಯಾರೂ ಇಲ್ಲಲ್ಲೋ ಲೋಕದ ಮ್ಯಾಲೆ!!
ತಿರುಚನಾಪಳ್ಳಿಯೊಳಗೆ ಕೊಬ್ಬಿದಾ ಮಲ್ಲಜಟ್ಟಿ
ಉಟ್ಟಾ ಚಡ್ಡಿಯನ್ನು ದಿಡ್ಡಿ ಬಾಗಿಲ ಮೇಲೆ
ತೂಗಿ ಬಿಟ್ಟನಂತಾ ಕೇಳಿ ಕಿಡಿಕಿಡಿಯಾದಾ ದೊರೆಯೇ!!
ಮಲ್ಲರ ಮಾನಾ ಕಾಯುವೆನೆಂದು
ಮಲ್ಲ ವೇಷವಾ ತೊಟ್ಟುಕೊಂಡು ತಿರುಚನಾಪಳ್ಳಿಗೆ
ಹೋಗಿ ಚಡ್ಡಿ ತೆಗೆದೆಳೆದಾ ದೊರೆಯೇ!!
ಮಲ್ಲಾಯುದ್ಧದಲ್ಲಿ ಸಮನಿಲ್ಲಾ ನಮ್ಮಾ ದೊರೆಗೆ
ತೋರ್ಯಾರೋ ಕೈಯ್ಯಾಚಳಕಾ!
ನೋಟಕ್ಕೆ ಕಾಣಾದಂತೆ ಸೊಂಟಾದೊಳಗಿದ್ದ ಮಹಾ
ನರಸಿಂಹಾನೆಂಬೋ ಕತ್ತಿಯಿಂದಾ
ರುಂಡಾಬೇರೇಯಾಗದಂತೆ ಕಡಿದರೋ
ನಮ್ಮಾ ರಣಧೀರಾ ನಾಯಕಾ!!
(ಸಿ. ವೀರಣ್ಣ - ನಾಟಕ: ಹುತ್ತವ ಬಡಿದರೆ).

ಕನ್ನಡಿಗರ ಕಣ್ನಮುಂದೆ ಮಯೂರ, ಪುಲಿಕೇಶಿ, ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯರನ್ನು ತಾನೇ ಅವರಾಗಿ ತಂದಿಟ್ಟವರು ಡಾ. ರಾಜ್‍ಕುಮಾರ್. ಇವತ್ತು ನಮ್ಮ ರಾಜಣ್ಣನ ಹುಟ್ಟುಹಬ್ಬ. ಇಡೀ ನಾಡು ರಾಜಣ್ಣ ಮತ್ತೊಮ್ಮೆ ಹುಟ್ಟಿಬಾ ಎಂದು ಮನದುಂಬಿ ಹಂಬಲಿಸುತ್ತಿದೆ.

ರಾಜ್‍ರಿಂದ ಪಡೆಯಬೇಕಾದ ಪ್ರೇರಣೆ..

ಡಾ ರಾಜ್ ಬರೀ ತೆರೆಯಮೇಲಷ್ಟೇ ರಣಧೀರನಲ್ಲ. ಕನ್ನಡ ಚಿತ್ರರಂಗ ನೆಲೆಯಿಲ್ಲದೆ ಮದ್ರಾಸನ್ನು ಅವಲಂಬಿಸಿ ತಮಿಳು ತೆಲುಗು ಚಿತ್ರರಂಗದ ಆಲದ ಮರದಡಿ ಟಿಸಿಲೊಡೆಯಲು ತಡವರಿಸುತ್ತಿದ್ದಾಗ, ಅದಕ್ಕೆ ತನ್ನದೇ ಅಸ್ತಿತ್ವ ಕಟ್ಟಿಕೊಳ್ಳಲು ನೆರವಾದದ್ದು ನಮ್ಮ ರಾಜ್. ಕನ್ನಡಿಗರ ಉಳಿವು ನಮ್ಮ ಉದ್ದಿಮೆಗಾರಿಕೆಯು ಹೆಚ್ಚುವುದರಲ್ಲಿ ಮಾತ್ರವೇ ಅಡಗಿದೆ ಎನ್ನುವುದನ್ನು ಮನಗಂಡು ಬಾಲಕೃಷ್ಣ, ನರಸಿಂಹರಾಜು, ಜಿ.ವಿ.ಅಯ್ಯರ್ ಅವರೊಡನೆ ಸೇರಿ, ಊರೂರು ಅಲೆದು ನಾಟಕ ಪ್ರದರ್ಶನ ನೀಡಿ, ಹಣ ಒಟ್ಟುಮಾಡಿ ತೆಗೆದ ಚಿತ್ರವೇ ರಣಧೀರ ಕಂಠೀರವ. ನೋಡ್ರೀ.. ಆ ಮುಖದಲ್ಲಿ ಅದೇ ಸ್ವಾಭಿಮಾನ ಹೇಗೆ ತುಂಬಿ ತುಳುಕುತ್ತಿದೆ. ಆ ಕಣ್ಣಲ್ಲಿ ಜಗತ್ತನ್ನೇ ಗೆಲ್ಲುವ ಛಲ ಹೇಗೆ ಉಕ್ಕುತ್ತಿದೆ... ಇಂದು ಕನ್ನಡಿಗರಿಗೆ ಬೇಕಿರುವುದು ಇಂತಹ ಎದೆಗಾರಿಕೆಯೇ. ಹೊಸದನ್ನು ಮಾಡುವ, ಸವಾಲು ಎದುರಿಸಿ ಗೆಲ್ಲುವ ದಿಟ್ಟತನ, ನನ್ನತನ ಬಿಡೆನೆಂಬ ಛಲಗಾರಿಕೆಗಳೇ ಕನ್ನಡಿಗರನ್ನು, ಕನ್ನಡನಾಡನ್ನೂ ಉದ್ಧರಿಸಬಲ್ಲವು. ರಾಜ್ ನಮ್ಮೊಡನೆ ಇಲ್ಲದಿದ್ದರೇನಂತೆ? ರಾಜ್ ಎಂಬ ಶಕ್ತಿ ನಮಗೆ ಪ್ರೇರಣೆಯಾಗಿದೆಯಲ್ಲವಾ? ಈ ಮಾತು ಕನ್ನಡಚಿತ್ರರಂಗಕ್ಕೂ ಅನ್ವಯಿಸುತ್ತೆ ಗುರೂ...

ಡಬ್ಬಿಂಗ್ ಬಂದ್ರೆ ಕನ್ನಡ್ದೋರು ಬೇರೆ ಬಾಶೆ ಕಲ್ಯಾಕಿಲ್ಲಾ..!


"ಇಡೀ ಕನ್ನಡ ಚಿತ್ರರಂಗವೇ ಇಂದು ದೊಡ್ಡು ಬಿಕ್ಕಟ್ಟಿನ ಅಂಚಲ್ಲಿ ಬಂದ್ನಿಂತದೆ. ಇಡೀ ಕನ್ನಡ ಕುಲ ಅಳಿದು ಹೋಯ್ತಿದೆ, ಕನ್ನಡದೋರ ಸ್ವಾಭಿಮಾನ, ಸಂಸ್ಕೃತಿ, ನುಡಿ, ಪರಂಪರೆಗಳು ವಿನಾಶದ ಅಂಚಲ್ಲಿ ಬಂದು ನಿಂತವೆ. ಇದುಕ್ಕೆಲ್ಲಾ ಕಾರಣ ನಾಳೆ ಕನ್ನಡದಲ್ಲಿ ಒಂದು ಡಬ್ಬಿಂಗ್ ಪಿಚ್ಚರ್ ರಿಲೀಜ್ ಆಯ್ತಾ ಇದೆ. ಇಂತಾ ಹೊತ್ತಲ್ಲಿ ಕನ್ನಡ ನಾಡು ನುಡಿಯನ್ನು ಉಳಿಸಕ್ಕೆ ಇಡೀ ಕನ್ನಡ ಚಿತ್ರರಂಗ ಒಂದಾಗಿ ಟೊಂಕಕಟ್ಟಿ ನಿಂತಿರುವಾಗ, ಕೆಲವು ಕನ್ನಡ ದ್ರೋಹಿಗಳು ಡಬ್ಬಿಂಗ್ ಪರವಾಗಿ ವಕಾಲತ್ತು ಮಾಡುತ್ತಾ ಹಲವಾರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇವರಿಗೆಲ್ಲಾ ಉತ್ತರ ನೀಡಬೇಕಾದ ಹೊಣೆಗಾರಿಕೆ ನಮಗಿದೆ" ಅಂತಾ ಕನ್ನಡ ಚಿತ್ರರಂಗದ ದೊಡ್ಡೋರೊಬ್ರು ನಮ್ಮ ಎಂಕನ್ ತಾವ ಬಾಯ್ ಬುಟ್ರಂತೆ.

ಅವರಂದಿದ್ದು ಏನ್ ಗೊತ್ರಾ?

ನಮ್ ಕನ್ನಡ ಸಿನಿಮಾದಾಗೆ ಇವತ್ತು ಕತೆ-ಪತೇ ಎಲ್ಲಾ ಎಲ್ಲೈತೆ? ತೆಮಿಳು, ತೆಲುಗು, ಹಿಂದಿ ಸಿನಿಮಾದೋರು ತೆಗುದ್ರೆ ತಾನೇ ನಮಗೆ ಕತೆ ಸಿಗದು... ಈಗ ಅವುನ್ನೆಲ್ಲಾ ಸೀದಾ ಕನ್ನಡಕ್ಕೆ ಡಬ್ ಮಾಡ್ಬುಟ್ರೆ ನಮ್ ಒಳ್ಳೊಳ್ಳೆ ನಿರ್ದೇಶಕರು ಎಂಗ್ ಸಿನಿಮಾ ತೆಗ್ಯಕ್ ಆದೀತು? ಬೇರೆ ಬಾಸೇಲಿ ಗೆದ್ದಿರೋ ಸಿನಿಮಾ ಅಂದ್ರೆ ನಮ್ ನಿರ್ಮಾಪಕರು ಸೇಪು, ನಮ್ ತಂತ್ರಗ್ನರಿಗೂ ಕೆಲಸ ಸಿಗುತ್ತೆ. ಕನ್ನಡದ ಮುಂಡೆವುಕ್ಕೆ ಇಷ್ಟು ಸಾಲ್ದಾ? ಆ ಹಾಳು ಟೈಟಾನಿಕ್ಕು, ಅವತಾರ್, ಸೂಪರ್ ಮ್ಯಾನು, ಸ್ಪೈಡರ್ ಮ್ಯಾನು ಅಂತಾ ಕಿತ್ತೋಗಿರೋ ಇಂಗ್ಲೀಶ್ ಪಿಚ್ಚರೆಲ್ಲಾ ಯಾಕ್ ನೋಡಬೇಕು? ಇದೇ ಇಂಗ್ಲೀಸೋರು ತಾನೆ ನಮ್ಮುನ್ ಆಳಿದ್ದು? ನಾವು ಮಾಬಾರತ ಸೀರಿಲ್ಲು ತೆಗ್ಯಕ್ ಆಗಲ್ಲಾ ಅಂದ್ರೆ ಅದು ಇಡೀ ಕನ್ನಡಿಗರ ಕರ್ಮ, ನಮ್ಮೋರೆ ಸೀತೆ ಅಂತಾ ತೆಗೀತಿಲ್ವಾ? ಅದುನ್ನೇ ನೋಡಲಿ... ನಮ್ ಅಳ್ಳಿ ಐಕ್ಳು ಇಂಗ್ಲೀಸ್ ಪಿಚ್ಚರ್ ನೋಡಿ ಕಲ್ಯದಾರೂ ಏನೈತೆ? ಇನ್ನು ಆ ಅಮೀರ್ ಕಾನ್ ತೆಗ್ದಿರೋ ತಾರೆ ಜಮೀನ್ ಪರ್, ಅಮಿತಾಬನ ಪಾ ಎಲ್ಲಾ ನೋಡಿ ನಮ್ಮವು ಏನು ಸಾದುಸ್ತಾರೆ? ಸಿನಿಮಾ ಮನರಂಜನೆಗೆ ಮಾತ್ರಾ ಇರೋದು. ಅಂತಾ ಸಿನ್ಮಾದಿಂದೇನು ಸಮಾಜ ಉದ್ದಾರ ಆಗಕ್ಕಿಲ್ಲ. ಅಷ್ಟಕ್ಕೂ ಸಿನ್ಮಾ ಅನ್ನೋದು ಸಮಾಜಾನ ಬದಲಾಯಿಸೋಕಿಲ್ಲ. ಯಾವನೋ ಕೊಲೆ ಮಾಡ್ದಾ ಅಂತಾ ಸಿನಿಮಾದಲ್ಲಿ ತೋರ್ಸಿದ್ಕೆ ಅವ್ನು ಅಂಗ್ ಮಾಡ್ದಾ ಅನ್ನಕ್ ಆಯ್ತುದಾ? ಒಟ್ನಾಗೆ ಕನ್ನಡಕ್ಕೆ ಡಬ್ಬಿಂಗ್ ಪಿಚ್ಚರ್ ಬರಬಾರದು.
ಇನ್ನು ತುಳುನೋರು, ಕೊಡಗಿನೋರು ಅವರವರ ಬಾಸೇಲೇ ಪಿಚ್ಚರ್ ತೆಗೀಬೇಕು, ಅವನ್ನೂ ಡಬ್ ಮಾಡಬಾರ್ದು. ಯಾಕಂದ್ರೆ ಕನ್ನಡ್ದೋರು ತುಳು, ಕೊಡವ ಬಾಸೇ ಎಲ್ಲಾ ಕಲ್ಯದ್ ಬ್ಯಾಡ್ವಾ? ಒಸಿ ಯೋಚ್ಸಿ. ಕನ್ನಡದೋರು ಬೇರೆ ಬೇರೆ ಬಾಸೆ ಪಿಚ್ಚರ್ರುಗಳ್ನ ಅವವೇ ಬಾಸೇಲಿ ನೋಡುದ್ರೆ ಯಾಪಾಟಿ ಬಾಸೆ ಕಲೀಬೌದು ಅಂತಾ. ಆಗ ಕೆಲ್ಸ ಉಡಿಕ್ಕೊಂಡು ತಮಿಳ್ನಾಡು, ಆಂದ್ರ, ಕೇರಳ, ಬಾಂಬೆ,ಉತ್ತರ ಬಾರತ ಅಂತಾ ಯಾಕಡೆ ಓದ್ರು ಬದಿಕ್ಕೋಬೋದು. ಅಂಗಾಗಿ ಡಬ್ಬಿಂಗು ಬರಬಾರ್ದು.
ಅಂಗೂ ಬೇಕಾರೆ ಜಾಕಿನಾ, ಸೂಪರ್ರುನ್ನಾ ತೆಲ್ಗು ಬಾಸೆಗೆ ಡಬ್ ಮಾಡಾಯ್ತಲ್ವಾ? ಈಗ ಅವುನ್ನ ಬೇರೆ ಬೇರೆ ಬಾಸೆಗೂ ಡಬ್ ಮಾಡಿ ಬೆಂಗಳೂರೂ ಸೇರ್ದಂಗೆ ಇಡೀ ಕರ್ನಾಟಕದಲ್ಲಿ ರಿಲೀಜ್ ಮಾಡಮಾ. ಆಗ ನಮ್ಮಲ್ಲಿರೋ ಬೇರೆ ಬಾಸೆಯೋರೂ ’ಕನ್ನಡದಲ್ಲಿ ಪಸಂದಾಗಿ ಪಿಚ್ಚರ್ರು ತೆಗೀತಾರೆ, ನಾಳೆಯಿಂದ ನಾವು ಕನ್ನಡ ಕಲ್ತುಬುಡಮಾ’ ಅಂದ್ಕೊಂತಾರೆ.
ಇನ್ನು ಈ ನಮ್ ಹೋರಾಟದಲ್ಲಿ ಇಡೀ ಚಿತ್ರರಂಗದ ಎಲ್ಲಾರೂ ಪಾಲ್ಗೊಳ್ತೀವಿ. ಎಲ್ರೂ ತಮ್ಮ ಸ್ವಂತ ಇಷ್ಟದಿಂದ ಬತ್ತಾಔರೆ. ಅಂಗೂ ಯಾರಾನಾ ಸ್ವಂತ ಇಷ್ಟ ಪಟ್ಟು ಬರಲಿಲ್ಲಾ ಅಂದ್ರೆ ಅವುರನ್ನ ಚಿತ್ರರಂಗದಿಂದ ಬಹಿಸ್ಕಾರ ಹಾಕ್ತೀವಿ. ಯಾವನಾರಾ ಟಾಕೀಸೋನು ಡಬ್ಬಿಂಗ್ ಪಿಚ್ಚರ್ ಹಾಕುದ್ರೆ ಆ ಟಾಕೀಸೋರುನ್ನ ಬಹಿಸ್ಕಾರ ಮಾಡ್ತೀವಿ. ಅಂಥಾ ಟಾಕೀಸಾಗೆ ಕಾನೂನು ಮೀರಿ ಏನಾರಾ ದೊಂಬಿ ಗಿಂಬಿ ಆದ್ರೆ ಮಾತ್ರಾ ನಾವು ಅದುಕ್ ಜವಾಬ್ದಾರ್ರಲ್ಲಾ... ಕರ್ನಾಟಕದಲ್ಲಿ ಚಿತ್ರರಂಗ ನಂಬ್ಕೊಂಡು ಸಾವಿರಾರು ಕುಟುಂಬಗಳು ಬದುಕ್ತಾ ಇವೆ. ಇವರೆಲ್ಲಾ ಬದುಕೋದ್ ಬ್ಯಾಡ್ವಾ? ಅದುಕ್ಕೇ ಕನ್ನಡ ಸಿನಿಮಾ ಎಂಗೇ ಇದ್ರೂ ಕನ್ನಡದೋರು ಬಂದು ನೋಡಲೇಬೇಕು. ನಿಮಗೇನಾರಾ ಬೇರೆ ಬಾಸೆ ಪಿಚ್ಚರ್ ಮೆಚ್ಚುಗೆ ಆಯ್ತಾ? ನಮಗೆ ಯೋಳಿ. ನಾಕೇ ವಾರದಲ್ಲಿ ರಿಮೇಕು ಮಾಡಿ ನಿಮ್ಮುಂದೆ ತಂದು ಮಡುಗ್ತೀವಿ. ನಮ್ ಕಯ್ಯಾಗ್ ತೆಗ್ಯಕ್ ಆಗದೆ ಇರೋ ಪಿಚ್ಚರ್ರುಗಳ ಬಗ್ಗೆ ಮಾತಾಡ್ ಬ್ಯಾಡ್ರಿ. ನಾವು ತೆಗ್ಯಕ್ ಆಗದೆ ಇರೋ ಪಿಚ್ಚರ್ರುಗಳನ್ನು ನೋಡಲೇ ಬ್ಯಾಡ್ರೀ.. ಅದು ಕನ್ನಡ ದ್ರೋಹ... ಆಮೇಲೆ ನೀವೇನಾರ ನಾಳೆ ಆ ಡಬ್ಬಿಂಗ್ ಪಿಚ್ಚರ್ ನೋಡಕ್ಕೆ ಟಾಕೀಸ್ ಕಡೆ ಬಂದ್ರೋ ಬುಲ್ಡೆಗೆ ಬಿಸ್ನೀರ್ ಕಾಸಿಬುಡ್ತೀವಿ. ನಮ್ ಕನ್ನಡ ನಾಡಿನ ಸಂಸ್ಕೃತಿ, ಬಾಸೆ ಉಳ್ಸಕ್ಕೆ ನಾವು ಪ್ರಾಣಾ ಕೊಡಕ್ಕೂ ರೆಡಿ..

ಆ ವಯ್ಯನ ಮಾತು ಕೇಳಿದ್ದೆ ಎಂಕಾ ಎದ್ನೋ ಬಿದ್ನೋ ಅಂತಾ ಪೇರಿ ಕಿತ್ನಂತೆ ಗುರೂ!

ವಿಕ್ಷನರಿಯಲ್ಲಿ ನೂರು ಸಾವಿರ ದಾಟಿದ ಕನ್ನಡ


ಈ ಸುದ್ದಿ ಕನ್ನಡಿಗರಿಗೆ ಸಕ್ಕತ್ ಸಂತಸದ ವಿಷಯ. ವಿಕ್ಷನರಿಯಲ್ಲಿ ಕನ್ನಡ ಒಂದು ಲಕ್ಷದ ಗಡಿ ದಾಟಿದೆ. ಹೀಗೆ ದಾಟಿರುವ ಜಗತ್ತಿನ ಕೆಲವೇ ನುಡಿಗಳ ಸಾಲನ್ನು ಸೇರಿಕೊಂಡಿದೆ. ವಿಕ್ಷನರಿಯೆಂಬ ಈ ನುಡಿಕಡಲ ಬಗ್ಗೆ ಈ ಹಿಂದೆ ಬರೆದಿದ್ದೆವು. ಅದು ಜುಲೈ ೧೯, ೨೦೧0ರಂದು ಹಾಕಿದ ಸುದ್ದಿ. ವಿಕ್ಷನರಿಯೆನ್ನುವ ಅಂತರ್ಜಾಲ ನಿಘಂಟಿನಲ್ಲಿ ಕನ್ನಡ ತನ್ನ ಹೆಜ್ಜೆಯೂರಿ ಮೈಲಿಗಲ್ಲೊಂದನ್ನು ಮುಟ್ಟಿದ ಬಗ್ಗೆ ಆ ಸುದ್ದಿಯಿತ್ತು.

ಅಂದಿನ ಮಾತು...

ಅಂತರ್ಜಾಲ ಲೋಕದಲ್ಲಿ ವಿಕಿಪೀಡಿಯಾದೋರು ಕೊಡಮಾಡಿರೋ ಒಂದು ಮಾಯಾದಂಡ ಅಂದ್ರೆ ವಿಕ್ಷನರಿ. ಇದು ವಿಕಿ+ಡಿಕ್ಷನರಿ ಎಂಬ ಎರಡು ಪದಗಳ್ನ ಬೆರೆಸಿ ಮಾಡಿರೋ ಹೆಸರು. ಅಂತರ್ಜಾಲದಲ್ಲಿ ತನ್ನ ಇರುವಿಕೆಯನ್ನು ನೆಲೆ ನಿಲ್ಲಿಸಿ ತನ್ನ ಹರವನ್ನು ಹೆಚ್ಚಿಸಿಕೊಳ್ಳಬಯಸೋ ಪ್ರತಿಯೊಂದು ಭಾಷೆಗೂ ಈ ತಾಣ ಅಮೃತ ಪಾನ.

ವಿಕ್ಷನರಿಯ ಮಹತ್ವ

ಇದು ಅಂತರ್ಜಾಲ ನಿಘಂಟು ಎನ್ನುವಂತೆ ಮೇಲುನೋಟಕ್ಕೆ ತೋರಿದರೂ ಬುಡಮಟ್ಟದಲ್ಲೇ ನಿಘಂಟಿಗೂ ಕೆಲವು ವ್ಯತ್ಯಾಸಗಳಿವೆ. ಇಲ್ಲಿನ ನುಡಿಕಡಲಿಗೆ ಯಾರು ಬೇಕಾದರೂ ಪದ ಸೇರಿಸಬಹುದು. ಪ್ರತಿಯೊಂದು ಪದಕ್ಕೂ ಒಂದೊಂದು ಪುಟ ಹುಟ್ಟುಹಾಕಿ ಪದದ ಬಗ್ಗೆ ಅನೇಕ ಮಾಹಿತಿ ನೀಡಬಹುದು. ಪ್ರತಿ ಪದಕ್ಕೂ ಯಾವ ಭಾಷೆಯಲ್ಲಿ ಬೇಕಾದರೂ ಅರ್ಥ ನೀಡಬಹುದು. ಅಂದರೆ ಒಂದು ಕನ್ನಡ ಪದಕ್ಕೆ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಏನಂತಾರೆ ಅಂತ ಬರೀಬಹುದು. ಮುಂದಿನ ದಿನಗಳಲ್ಲಿ ನಮ್ಮ ಅಂತರ್ಜಾಲದ ಮೇಲಿನ ಅವಲಂಬನೆ ಹೆಚ್ಚಾಗುವ ಸಾಧ್ಯತೆಗಳೇ ಇದ್ದು ಇಂತಹ ಅಂತರ್ಜಾಲ ನಿಘಂಟಿನ/ ನುಡಿಕಡಲಿನ ಪಾತ್ರ ಮಹತ್ವದ್ದೂ ಹೆಚ್ಚಿನದ್ದೂ ಆಗಲಿದೆ. ಆ ದೃಷ್ಟಿಯಿಂದ ನೋಡಿದಾಗ ವಿಕ್ಷನರಿಯಲ್ಲಿ ಕನ್ನಡ ಪದಗಳು ಹೆಚ್ಚು ಹೆಚ್ಚು ಇರಬೇಕಾದ ಅಗತ್ಯ ಮತ್ತು ಇದ್ದರೆ ಆಗುವ ಉಪಯೋಗಗಳು ಮನದಟ್ಟಾಗುತ್ತವೆ

ಇಂದಿನ ಮಾತು

ವಿಕ್ಷನರಿಯಲ್ಲಿ ಜಗತ್ತಿನ ೧೭೦ ಭಾಷೆಗಳ ಪದಕೋಶವಿದೆ. ಅದರಲ್ಲಿ ಅತಿಹೆಚ್ಚು ಪದಗಳನ್ನು ಹೊಂದಿರುವ ಲೆಕ್ಕದಲ್ಲಿ ಕನ್ನಡದ ಸ್ಥಾನ ಇವತ್ತು ೨೨ನೆಯದು. ಭಾರತದ ಭಾಷೆಗಳಲ್ಲಿ ಮೊದಲನೆಯದು ತಮಿಳು ಆಗಿದ್ದು ಇಲ್ಲಿ ಒಟ್ಟು ೧,೯೬,೧೨೭ ತಮಿಳು ಪದಗಳಿವೆ. ಎರಡನೆಯದು ಕನ್ನಡ. ಇದರಲ್ಲಿ ಒಟ್ಟು ೧,೦೧,೯೫೩ ಕನ್ನಡದ ಪದಗಳಿವೆ. ನಂತರದ ಭಾರತೀಯ ಭಾಷೆ ಮಲಯಾಳಂ ಆಗಿದ್ದು ಇದರ ೬೦,೭೩೮ ಪದಗಳಿವೆ.
ಲಕ್ಷಕ್ಕಿಂತ ಹೆಚ್ಚಿನ ಪದಗಳಿರುವ ಭಾಷೆಗಳಿಗೆ ವಿಕ್ಷನರಿಯ ಮುಂಪುಟದಲ್ಲೇ "ಹುಡುಕು" ಆಯ್ಕೆಯನ್ನು ನೀಡಲಾಗಿದೆ. ಈ ಸವಲತ್ತು ಕನ್ನಡಕ್ಕೂ ಸಿಕ್ಕಿರುವುದು ಹೆಮ್ಮೆಯ ಮಾತಷ್ಟೇ ಅಲ್ಲದೆ ಬಳಕೆಯ ದೃಷ್ಟಿಯಿಂದ ಅತ್ಯಂತ ಅನುಕೂಲಕರವಾಗಿರುವುದೂ ಆಗಿದೆ.
ಇನ್ನು ವಿಕ್ಷನರಿಗೆ ಪದಗಳನ್ನು ಸೇರಿಸುವಲ್ಲಿ ಗುಣಮಟ್ಟದ ಸೇರಿಕೆಗಾಗಿ ಒಂದು ಸೂಚಿಸಂಖ್ಯೆ (ಇಂಡೆಕ್ಸ್) ನೀಡಲಾಗುತ್ತದೆ. ಇದರಲ್ಲಿ ಕನ್ನಡ ಎರಡನೇ ಸ್ಥಾನದಲ್ಲಿರುವುದೂ ಕೂಡಾ ಹೆಮ್ಮೆಯ ವಿಷಯವೇ ಆಗಿದೆ. ಇದರಲ್ಲಿ ಸೇರಿಸಿರುವ ಪದಗಳಲ್ಲಿ ಗುಣಮಟ್ಟದ ಸೂಚಿಸಂಖ್ಯೆ ೦.೯೮೨೭ ಆಗಿದೆ. ಇಷ್ಟೆಲ್ಲಾ ಹಿರಿಮೆಗೆ ಕಾರಣರಾದವರನ್ನು ನೆನೆಯೋಣ.

ಇಲ್ಲಿ ಕನ್ನಡವನ್ನು ಕಟ್ಟಿದವರು

ಬನವಾಸಿ ಬಳಗದ ಹೆಮ್ಮೆಯ ಈ ಯೋಜನೆಗೆ ನೀರೆರೆದು ಕೈ ಜೋಡಿಸಿದವರೆಲ್ಲರನ್ನೂ ನೆನೆಯಬೇಕಾಗಿದೆ. ಶ್ರೀಯುತರಾದ ವಿವೇಕ್ ಶಂಕರ್, ರಾ ಸು ಮೇಟಿಕುರ್ಕೆ, ಪ್ರಶಾಂತ್ ಸೊರಟೂರು, ಬರತ್, ಸಂದೀಪ್ ಇವರುಗಳ ಪಾತ್ರ ಹಿರಿದು. ಅದರಲ್ಲೂ ವಿವೇಕ್ ಶಂಕರ್ ಮತ್ತು ಮೇಟಿಕುರ್ಕೆಯವರ ಕೊಡುಗೆ ಬಹಳ ದೊಡ್ಡದು. ಜುಲೈ ೨೦೧೦ರಿಂದ ಮಾರ್ಚ್ ೨೦೧೧ರ ಒಳಗೆ ವಿಕ್ಷನರಿಗೆ ಸೇರ್ಪಡೆಯಾದ ಪದಗಳ ಸಂಖ್ಯೆ ೩೬,೦೦೦ಕ್ಕೂ ಹೆಚ್ಚು. ಸಂದೀಪ್ ಅವರು ಪದ ಸೇರಿಸಲು ಅನುಕೂಲವಂತಹ ಆಟೋಮೇಶನ್ ಏರ್ಪಾಡು ಮಾಡಲು ಮುಂದಾಗಿದ್ದಾರೆ. ಇದರಿಂದ ಪದಗಳನ್ನು ಸೇರಿಸುವ ವೇಗ ಹೆಚ್ಚುವ ಭರವಸೆ ನಮ್ಮದು. ಮೇಟಿಕುರ್ಕೆಯವರಂತೂ ವಿಕ್ಷನರಿಯಲ್ಲಿ ಕನ್ನಡ ಪದಗಳನ್ನು ಸೇರಿಸುವ ಕೆಲಸಕ್ಕಾಗೇ ಜನರನ್ನು ನೇಮಕ ಮಾಡಿಕೊಳ್ಳುವ ಆಶಯ ಹೊಂದಿದ್ದಾರೆ. ಈ ಎಲ್ಲರ ಕೊಡುಗೆಗೆ ಬೆಲೆ ಬರುವುದು... ಮಿಂಬಲೆಯಲ್ಲಿರುವ ಕನ್ನಡಿಗರೆಲ್ಲಾ ಈ ಪದನೆರಿಕೆಯನ್ನು ಹೆಚ್ಚು ಹೆಚ್ಚು ಬಳಸುವುದೇ ಆಗಿದೆ. ಮುಂದಿನ ದಿನಗಳಲ್ಲಿ ವಿಕ್ಷನರಿಯನ್ನು ಬಳಸಿ ಬೇರೆ ಬೇರೆ ನುಡಿಗಳೊಂದಿಗೆ ಹೆಚ್ಚು ಹೆಚ್ಚು ಒಡನಾಟ ಬೆಳೆಸಲು ಅನುಕೂಲಕಾರಿಯಾಗಲಿದೆ. ನುಡಿಗಳ ನಡುವಿನ ಈ ಅರಿಮೆಯ, ಕಲಿಕೆಯ ಕೊಡುಕೊಳ್ಳುವಿಕೆಯ ದೊಡ್ದಾಟಕ್ಕೆ ವಿಕ್ಷನರಿ ನೆರವಾಗಲಿದೆ ಎಂಬ ಭರವಸೆ ನಮ್ಮದು. ಹೌದಲ್ವಾ ಗುರೂ!

ಬನ್ನಿ, ನೀವೂ ಕೈ ಜೋಡಿಸಿ...

ಬಹಳ ಚುರುಕಾಗಿ, ವೇಗವಾಗಿ ನಾವು ಮುಂದುವರೀತಾ ಇದೀವಿ ಗುರೂ! ಆದರೆ ಅಂತರ್ಜಾಲ ತಾಣದಲ್ಲಿ ಕನ್ನಡದ ನುಡಿಗುಡಿಯ ಈ ತೇರು ಎಳೆಯೋಕೆ ನಿಮ್ಮದೂ ಎರಡು ಕೈ ಸೇರಿದರೆ ಬೊಂಬಾಟಾಗಿರುತ್ತೆ. ನಿಮಗೂ ವಿಕ್ಷನರಿಗೆ ಕನ್ನಡ ಪದಗಳನ್ನು ಸೇರಿಸೋ ಮನಸ್ಸಿದ್ದಲ್ಲಿ ವಿಕ್ಷನರಿಯ ತಾಣಕ್ಕೆ ಭೇಟಿ ಕೊಡಿ. ಅಲ್ಲಿರೋ ಸಮುದಾಯ ಪುಟದಲ್ಲಿ ಹೇಗೆ ಪದ ಸೇರಿಸಬೇಕು ಅಂತಾ ಇದೆ. ಅದರಲ್ಲಿ ಬರೆದಿರೋ ರೀತೀಲಿ ಪದ ಸೇರಿಸಿದರೆ ಆಯ್ತು. ನಿಮಗೆ ನಮ್ಮೊಂದಿಗೆ ಕೈಜೋಡಿಸೋಕೆ ಆಸಕ್ತಿ ಇದ್ದಲ್ಲಿ sanjeeva@banavasibalaga.org ಗೆ ಒಂದು ಮಿಂಚೆ ಹಾಕಿ...ಗುರೂ!!

ಈ ನಮ್ಮ ಹುಡುಗನ ಸಾಧನೆ ಸ್ಫೂರ್ತಿ ಕೊಡಲಿ!

ಚಾರ್ಟರ್ಡ್ ಅಕೌಂಟೆಂಟ್ ಆಗೋದು ಅಷ್ಟು ಸುಲಭದ ಮಾತಲ್ಲ, ಇದರ ಪರೀಕ್ಷೆಯನ್ನು ಪಾಸು ಮಾಡೋರ ಸಂಖ್ಯೆಯೇ ನೂರಕ್ಕೆ ಹತ್ತರ ಆಸುಪಾಸಿನಲ್ಲಿದೆ. ಅಂಥಾದ್ರಲ್ಲಿ ಕೆ.ಎನ್.ಸುಜಯ್ ಎಂಬ ನಮ್ಮ ಹುಡುಗ... ನವೆಂಬರ್ 2010ರಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲನೇ ರ‍್ಯಾಂಕು ಗಳಿಸಿದ್ದಾನೆ ಎಂದರೆ ಅಚ್ಚರಿ, ಖುಷಿ ಆಗುತ್ತೆ ಗುರೂ!

ಖುಷಿ ಯಾಕೆಂದರೆ...

ಸುಜಯ್ ಬಗ್ಗೆ ಟೈಮ್ಸ್ ಆಫ಼್ ಇಂಡಿಯಾ ದಿನಪತ್ರಿಕೆಯಲ್ಲಿ 14.02.2010ರಂದು ಬಂದಿರೋ ಈ ಸುದ್ದಿ ನೋಡಿದರೆ ಖುಷಿ ಆಗದೇ ಇರುತ್ಯೇ?

ಹೌದು! ಖುಷಿ ಪಡಲು ನಾನಾ ಕಾರಣಗಳಿವೆ.

ಈ ಹುಡುಗ ಸುಜಯ್ ಒಬ್ಬ ಕನ್ನಡಿಗ.

ಇವ ನಮ್ಮ ಕುಣಿಗಲ್ ಹುಡುಗ.

ಇವನೊಬ್ಬ ರೈತನ ಮಗ.

ಇವ ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ.

ಇವ ಕಲಿತಿದ್ದು ಸರ್ಕಾರಿ ಕಾಲೇಜಿನಲ್ಲಿ...

ಇವ ಗಳಿಸಿದ್ದು ಅಖಿಲ ಭಾರತ ಮಟ್ಟದ ಸಿ.ಎ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕು.

ಕನ್ನಡ ಮಾಧ್ಯಮದಲ್ಲಿಯೇ ಕಲಿತು ಯಶಸ್ವಿಯಾದ ನಾರಾಯಣಮೂರ್ತಿ, ಸಿ ಎನ್ ಆರ್ ರಾವ್, ಡಾ. ಚಂದ್ರಶೇಖರ್, ಡಾ ರಮಣರಾವ್ (ನಿಜಕ್ಕೂ ಈ ಪಟ್ಟಿ ತುಂಬಾ ದೊಡ್ಡದು... ) ಇವರುಗಳ ಸಾಲಿನಲ್ಲಿ ಈ ಯಶಸ್ವಿ ಹುಡುಗನೂ ನಿಂತಿದ್ದಾನೆ. ಇವನಿಗೆ ಒಳಿತಾಗಲಿ. ಇವನ ಈ ಸಾಧನೆ ನಮ್ಮೆಲ್ಲಾ ಕನ್ನಡ ಮಕ್ಕಳಿಗೂ, ತಾಯ್ತಂದೆಯರಿಗೂ ಸ್ಪೂರ್ತಿಯಾಗಲಿ. ಏನಂತೀ ಗುರೂ!
Related Posts with Thumbnails