ನಾಡಿರುವುದು ನಮಗಾಗಿ...

ನಮ್ಮ ಮನೇಲಿ ಬಂದಿರೋರು ನಮ್ಮ ಭಾಷೇಲಿ ಮಾತಾಡಿ, ನಮ್ಮ ನುಡಿಯಲ್ಲೇ ವ್ಯವಹಾರ ಮಾಡಿ ಅಂತ ಹಕ್ಕೊತ್ತಾಯ ಮಾಡೋ ದುಸ್ಥಿತಿ ಭವ್ಯ ಭಾರತದಲ್ಲಿ ಮಾತ್ರಾ ಬರೋಕೆ ಸಾಧ್ಯ ಅನ್ಸುತ್ತೆ! ಒಂದು ಸಹಜವಾಗಿರಬೇಕಾದ ವ್ಯವಸ್ಥೇನ ಜಾರಿ ಮಾಡಕ್ ಮುಂದಾದ್ರೆ ದೊಡ್ ದೊಡ್ ಟಿವಿ ಚಾನಲ್ಲೋರು ಅದೊಂದು ವಿಚಿತ್ರವಾದ ಬೆಳವಣಿಗೆ ಅನ್ನೋ ಥರ ಮಾತಾಡೋದು ಎಂಥಾ ತಮಾಷೆ ಅಲ್ವಾ ಗುರು?

ನಮ್ಮೂರ ವ್ಯವಸ್ಥೆ ಇರೋದು ನಮಗಾಗಿ!

ಪ್ರಪಂಚದ ಯಾವ ಮೂಲೇಲೆ ಆಗಲಿ, ಯಾವ ನಾಗರೀಕತೆಯೇ ಆಗಲಿ ಅಲ್ಲಿರೋ ಜನಗಳ ಭಾಷೇಲಿ ಅಲ್ಲಿನ ವ್ಯವಸ್ಥೆಗಳೆಲ್ಲಾ ಇರೋದು ಸಹಜವಾದದ್ದು. ಹಾಗೊಂದು ಪ್ರದೇಶ ಇದ್ದಾಗ ಅಲ್ಲಿಗೆ ಬೇರೆ ಬೇರೆ ಕಾರಣದಿಂದ ವಲ್ಸೆ ಬರೊ ಜನ ಆ ಪ್ರದೇಶದ ವ್ಯವಸ್ಥೆಗೆ ಹೊಂದಿಕೊಳ್ಳಬೇಕೇ ಹೊರತು ಅಲ್ಲಿ ತಮ್ಮತನಾನ ಮೆರೆಸಕ್ಕೆ ಹೋಗಬಾರದು. ಹಾಗೆ ಮಾಡೋದು ಆಯಾ ಪ್ರದೇಶದ ಮೇಲೆ ನಡ್ಸೋ ದಾಳೀನೇ ಆಗುತ್ತೆ. ಇಂಥಾ ದಾಳೀನ ತಡ್ಯೋ ವ್ಯವಸ್ಥೇನ ಆ ಪ್ರದೇಶದ ಆಡಳಿತಗಳು ರೂಪಿಸಿಕೊಳ್ಳೋದು, ಆದೇಶಗಳ ಮೂಲಕ ಜಾರಿಗೆ ತರೋದು ಸಹಜವಾದದ್ದೇ ಆಗಿದೆ. ಫ್ರಾನ್ಸ್ ದೇಶಕ್ ಹೋಗಿ ಫ್ರೆಂಚ್ ಭಾಷಿಕರ ಜೊತೆ ಫ್ರೆಂಚಲ್ಲಿ ವ್ಯವಹರಿಸ್ದೇ ಇರೋದು ಯಾವ ವಲಸಿಗನ ಹಕ್ಕೂ ಆಗಲ್ಲ. ಅದು ಫ್ರೆಂಚರ ಹಕ್ಕಿನ ಮೇಲಿನ ಆಕ್ರಮಣಾ ಆಗುತ್ತೆ ಅಷ್ಟೆ. ಒಟ್ನಲ್ಲಿ ಒಂದು ನಾಡಿನ ವ್ಯವಸ್ಥೆ ಇರೋದು ಆ ನಾಡಿಗರಿಗಾಗೇ ಹೊರತು ವಲಸೆ ಬಂದಿರೋರಿಗಲ್ಲ!!

ಆಡಳಿತಗಾರರು ಕೇಳ್ಕೋಬೇಕಾದ್ದು...

ಕನ್ನಡದ ನೆಲದಲ್ಲಿ ಇರೋ ಯಾವುದೇ ಸಂಸ್ಥೆ ಇರೋದೆ ಈ ಜನರ ಅನುಕೂಲಕ್ಕಾಗಿ ಅಲ್ವಾ? ಅಷ್ಟರ ಮೇಲೆ ಹೊರಗಿಂದ ಬಂದಿರೋರು ನಮ್ಮ ಭಾಷೇ ಕಲೀಬೇಕಾದ್ದೇ ಸರಿ ಅಲ್ವಾ? ಒಂದೇ ದಿನಕ್ ಕಲಿಯಕ್ ಆಗಲ್ಲಾ ಅಂತಲೋ ಪ್ರವಾಸಿಗರ ಅನುಕೂಲಕ್ಕಾಗಿ ಅಂತ್ಲೋ ಇಂಗ್ಲಿಷ್ ಭಾಷೇಲೂ ಚಿಕ್ಕದಾಗಿ ಬೋರ್ಡ್ ಬರ್ದಿದ್ರೆ ಸಾಲ್ದಾ? ಅನ್ನೋ ಪ್ರಶ್ನೆಗಳನ್ನೆಲ್ಲಾ ಸಂಬಂಧಿಸಿರೋ ಇಲಾಖೆಗಳೂ ಅಧಿಕಾರಿಗಳೂ ಕೇಳ್ಕೋಬೇಕು ಗುರು! ನಿಜಾ ಅಂದ್ರೆ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಕೊಡಬೇಕು ಅಂತಿರೋ ಆದೇಶಾನಾ ಜಾರಿ ಮಾಡಕ್ಕೆ ಪಾಲಿಕೆಗೂ ಸರ್ಕಾರಕ್ಕೂ ಗಟ್ಟಿ ಮನಸ್ಸಿರೋದು ಇದುವರೆಗೂ ಕಂಡಿಲ್ಲ. ಇದ್ದಿದ್ರೆ ಈಗ ಅಂಥಾ ಅಂಗಡಿಗಳಿಗೆ ನೋಟೀಸ್ ಕೊಡೋ ಪರಿಸ್ಥಿತಿ ಬರ್ತಾ ಇರಲಿಲ್ಲ.

ವಲಸಿಗ ಕೇಳ್ಕೋಬೇಕಾದ್ದು...

ತಾನು ಹೊಟ್ಟೆಪಾಡಿಗೆ ಬೇರೆ ಪ್ರದೇಶಕ್ಕೆ ಬಂದಾಗ ಆ ಪ್ರದೇಶದ ಅತಿಥೀನೇ ಹೊರತು ಯಜಮಾನ ಅಲ್ಲ ಅಲ್ವಾ? ತಾ ಬಂದಿರೋ ನಾಡಲ್ಲಿರೋ ಸಂಸ್ಕೃತಿ, ನುಡಿ, ವ್ಯವಸ್ಥೆಗಳಿಗೆ ಹೊಂದಿಕೊಂಡು ನಡೆಯೋದೇ ಸರಿಯಾದ ಧರ್ಮ ಅಲ್ವಾ? ಆ ನಾಡಿನ ಜನರ ನುಡಿಯಲ್ಲಿ ಸೇವೆ ಕೊಡಬೇಕಾದ್ದು ತನ್ನ ಮೊದಲ ಕರ್ತವ್ಯ ಅಲ್ವಾ? ಆ ನಾಡಿಗರ ನುಡಿನ ನಾನ್ಯಾಕೆ ಬಳುಸ್ಲಿ, ನಂಗೆ ಬೇಕಾದ ಭಾಷೇಲಿ ಬೋರ್ಡ್ ಹಾಕ್ತೀನಿ, ವ್ಯಾಪಾರ ಮಾಡ್ತೀನಿ ಅನ್ನೋದು ಅನ್ನ ಕೊಟ್ಟ ಮನೆಯ ಗಳ ಎಣ್ಸೋ ಬುದ್ದಿ ಅಲ್ವಾ? ಅದು ನಾ ಮಾಡೋ ದೇಶದ್ರೋಹ ಅಲ್ವಾ? ಅಂತ ವಲಸಿಗ ಪ್ರಶ್ನೆ ಮಾಡ್ಕೋಬೇಕು ಗುರು!

ನಾಡಿಗ ಕೇಳ್ಕೋಬೇಕಾದ್ದು...

ಈ ನಾಡಲ್ಲಿ ಇರೋ ಪ್ರತಿಯೊಂದೂ ತನ್ನ ಅನುಕೂಲಕ್ಕಾಗಿ, ತನ್ನ ಏಳಿಗೆಗೆ ಪೂರಕವಾಗಿ ಇರಬೇಕಾದದ್ದು ಅಲ್ವಾ? ನನ್ನ ನಾಡಲ್ಲಿ ನನ್ನ ಭಾಷೇಲಿ ಸೇವೆ ಕೊಡಬೇಕಾದ್ದು ಪ್ರತಿಯೊಂದು ಸಂಸ್ಥೆಯ ಹೊಣೆಗಾರಿಕೆ ಅಲ್ವಾ? ಇದನ್ನು ನಿರಾಕರಿಸೋದು ಶಿಕ್ಷಾರ್ಹ ಅಪರಾಧ ಅನ್ನೋ ಕಾಯ್ದೇನ ನಮ್ಮ ಸರ್ಕಾರ ತರಲೇಬೇಕಲ್ವಾ? ನನ್ನ ನಾಡಿನ ಸರ್ವಭೌಮ ಭೌಷೆ ನನ್ನ ಭಾಷೇನೆ ಅಲ್ವಾ? ಇಲ್ಲಿರೋ ಅಂಗಡಿ ಮುಂಗಟ್ಟುಗಳ ಬೋರ್ಡು ನಮ್ಮ ಭಾಷೇಲಿರಬೇಕಾದದ್ದೇ ಸರಿ ಅಲ್ವಾ? ಅಂತ ತನ್ನನ್ನು ತಾನೇ ಕೇಳ್ಕೋ ಬೇಕು ಗುರು!!

ಇದನ್ನೆಲ್ಲಾ ನಾವೂ ನೀವು ಕೇಳ್ಕೊಂಡು ಆಮೇಲೆ ಮಹಾರಾಷ್ಟ್ರದಲ್ಲಿ ನಡೀತಿರೋದು ಏನಪ್ಪಾ ಅಂತ ವಸಿ ಕಣ್ ಬುಟ್ ನೋಡುದ್ರೆ ಯಾವ್ದು ಸರಿ? ಯಾವ್ದು ತಪ್ಪು? ಯಾರು ದೇಶ ಒಡೀತಿರೋರು? ಯಾವುದು ಸರಿಯಾದ ವ್ಯವಸ್ಥೆ? ಅನ್ನೋ ಪ್ರಶ್ನೆಗಳ್ಗೆಲ್ಲಾ ಚಕಚಕಾಂತ ಉತ್ರ ಹೊಳೀದಿದ್ರೆ ಭಾರತ ದೇಶದ ಮೇಲ್ ಆಣೆ ಗುರು!!

ನಮ್ಮ ಕರ್ನಾಟಕ ಸಾಮ್ರಾಜ್ಯ!

ಕನ್ನಡಿಗರ ಇತಿಹಾಸದಲ್ಲಿ ಅತ್ಯಂತ ವೈಭವದ ಕಾಲಕ್ಕೆ, ನಮ್ಮ ಹಿರಿಮೆಯ ಉತ್ತುಂಗಕ್ಕೆ ಸಾಕ್ಷಿಯಾದ ಮಹಾಸಾಮ್ರಾಜ್ಯದ ಹೆಸರು ವಿಜಯನಗರವೆಂದು ಇತ್ತೀಚಿನ ದಿನಗಳಲ್ಲಿ ಕೆಲವಿದ್ವಾಂಸರು ಹೇಳ್ತಿದಾರೆ. ಅದುನ್ನೇ ಸಾಮಾನ್ಯ ಜನರ ಮನಸಲ್ಲೂ ತುಂಬ್ತಿದಾರೆ.ಆದರೆ ನಿಜ ಏನಪ್ಪಾ ಅಂದ್ರೆ ಈ ಮಹಾಸಾಮ್ರಾಜ್ಯದ ಹೆಸರು ವಿಜಯನಗರವಲ್ಲ.. ಅದು ಕರ್ನಾಟಕ ಸಾಮ್ರಾಜ್ಯ.

ಹಕ್ಕಬುಕ್ಕರ ಕಾಲದ ನೂರಾರು ಶಾಸನಗಳನ್ನು ಅಧ್ಯಯನ ಮಾಡಿ ನಂತರ ಈ ನಿಲುವಿಗೆ ಬರಲಾಗಿದೆ. ಅದೆಂಗಪ್ಪಾ ಅನ್ನೋರಿಗೆ ಒಂದೆರಡು ಸಣ್ಣ ಉದಾಹರಣೆಗಳು ಗುರು! ಶ್ರೀ ಕೃಷ್ಣದೇವರಾಯನ ಬಿರುದು "ಕನ್ನಡ ರಾಜ್ಯ ರಮಾರಮಣ" ಎಂದು, ಈ ಸಾಮ್ರಾಜ್ಯದ ಸಿಂಹಾಸನಕ್ಕೆ ’ಕರ್ನಾಟಕ ರತ್ನ ಸಿಂಹಾಸನ’ವೆಂದೂ ಕರ್ದಿರೋದೆ ಇದಕ್ಕೆ ಸಾಕ್ಷಿ. ಕರ್ನಾಟಕ ಸಾಮ್ರಾಜ್ಯದ ರಾಜಧಾನಿ ವಿದ್ಯಾನಗರ, ಬಿಜನಗರ, ಅಂದರೆ ವಿಜಯನಗರ. ರಾಜಋಷಿ ವಿದ್ಯಾರಣ್ಯರ ನೆನಪಲ್ಲಿ (ಅವರ ಗುರುಗಳಾದ ವಿದ್ಯಾತೀರ್ಥರ ನೆನಪಲ್ಲಿ ಅಂತಲೂ ಪ್ರತೀತಿ ಇದೆ) ಇದರ ರಾಜಧಾನಿಯನ್ನು ವಿದ್ಯಾನಗರವೆಂದು ಹೆಸರಿಸಲಾಯಿತು ಎನ್ನುತ್ತಾರೆ.

ಹೆಸರಲ್ಲೇ ಎಲ್ಲಾ ಇದೆ!

ಅಲ್ರೀ, ಅದುನ್ನ ವಿಜಯನಗರ ಸಾಮ್ರಾಜ್ಯ ಅಂದರೇನು? ಕರ್ನಾಟಕ ಸಾಮ್ರಾಜ್ಯ ಅಂದರೇನು? ಹೆಸರಲ್ಲೇನಿದೆ ಅನ್ನಿಸಬಹುದು. ಆದರೆ ಇದು ಕರ್ನಾಟಕ ಸಾಮ್ರಾಜ್ಯ ಎನ್ನುವುದಾದರೆ ಇದು ನಮ್ಮದು ಎಂಬ ಹೆಮ್ಮೆ ಮೇರೆ ಮೀರುತ್ತದೆ. ಕೆಲ ದಶಕಗಳ ಹಿಂದೆ ತೆಲುಗು ಭಾಷೆಯಲ್ಲಿ ತೆರೆಕಂಡ ಚಲನಚಿತ್ರವೊಂದರಲ್ಲಿ ಅದರ ನಾಯಕ, ಹಂಪೆಯ ಒಂದು ದಿಬ್ಬದ ಮೇಲೆ ನಿಂತು "ಇದಿ ಮನ ವಿಜಯನಗರ ಸಾಮ್ರಾಜ್ಯಮು" ಅನ್ನೋ ಡೈಲಾಗ್ ಹೊಡ್ಯೋ ದೃಶ್ಯವಿತ್ತು. ಕೆಲ ದಶಕಗಳ ಹಿಂದಿನವರೆಗೂ ಇಡೀ ವಿಜಯನಗರ ಸಾಮ್ರಾಜ್ಯ ತೆಲುಗರದ್ದೆಂದೂ ಬಿಂಬಿಸಲಾಗುತ್ತಿತ್ತು. ಆ ವಾದವನ್ನೇ ಮುಂದಿಟ್ಟುಕೊಂಡು ಆಂಧ್ರರು ಬಳ್ಳಾರಿ ಜಿಲ್ಲೆಯನ್ನೇ ಕಬಳಿಸಲು ಮುಂದಾಗಿದ್ದರು ಅನ್ನುವುದನ್ನೆಲ್ಲಾ ನೆನಪಿಸಿಕೊಂಡರೆ ಹೆಸರಿನ ಮಹತ್ವ ಅರ್ಥವಾಗುತ್ತದೆ. ಅಂದ್ರೆ ಹೆಸರಲ್ಲೇ ಎಲ್ಲಾ ಇದೆ.

ಎದೆಯುಬ್ಬಿಸಿ ಹೇಳೋ... ಕನ್ನಡಿಗಾ!
ಇಗೋ ಇದು ನಮ್ಮ ಕರ್ನಾಟಕ ಸಾಮ್ರಾಜ್ಯ. ಈ ಸಾಮ್ರಾಜ್ಯದ ಒಡೆಯರು ಕನ್ನಡಿಗರು. ಈ ಸಿಂಹಾಸನ ಕರ್ನಾಟಕ ರತ್ನ ಸಿಂಹಾಸನ. ಇದನ್ನೇರಿದ ಶ್ರೀಕೃಷ್ಣದೇವರಾಯ ಕನ್ನಡ ರಾಜ್ಯ ರಮಾರಮಣ... ಈ ನಮ್ಮ ಸಾಮ್ರಾಜ್ಯ ಮೂರುಕಡಲಗಳ ಉದ್ದಗಲಕ್ಕೂ ಹರಡಿತ್ತು ಅನ್ನುವುದೆಲ್ಲಾ ನಮ್ಮಲ್ಲಿ ಸ್ಪೂರ್ತಿಯ ಸೆಲೆಯುಕ್ಕಲು ಕಾರಣವಾಗುವುದರಲ್ಲಿ ಸಂದೇಹವೇ ಇಲ್ಲಾ ಗುರು!

ಅಕ್ಕನ ಚಾಳಿ ಮನೆಮಂದಿಗೆಲ್ಲ ಹರಡೋದು ಹೇಗೆ?

ಇದೇ ತಿಂಗಳ ೨೯ರಿಂದ ೩೧ರ ವರೆಗೆ ಅಮೇರಿಕದ ಶಿಕಾಗೋನಲ್ಲಿ ೫ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡಿಯಲಿದೆ. ಇದಕ್ಕೆ ಇಡೀ ಪ್ರಪಂಚದಿಂದ ಕನ್ನಡಿಗರು ಬಂದು ಸೇರ್ತಿದಾರೆ. ಕರ್ನಾಟಕದಿಂದಲೂ ಅನೇಕ ಪ್ರತಿನಿಧಿಗಳು ಹೋಗ್ತಿದಾರೆ. ಇಷ್ಟೆಲ್ಲ ತಿಳುವಳಿಕಸ್ತ ಕನ್ನಡಿಗರು ಸೇರುವುದು ಒಂದು ಬಹಳ ಒಳ್ಳೇ ವಿಷಯವೇ ಗುರು. ಕನ್ನಡಿಗರು ಒಟ್ಟಿಗೆ ಸೇರುವುದೇ ಕಡಿಮೆ ಅನ್ನೋ ಕೆಟ್ಟ ಹೆಸರು ಪಡ್ಕೊಂಡಿರುವಾಗ ಇಂಥಾ ಸಮ್ಮೇಳನಗಳಿಂದ ಆ ಕೆಟ್ಟ ಹೆಸರು ಹೋಗಬಹುದೇನೋ.ಈ ವರ್ಷದ ಅಕ್ಕ ಸಮ್ಮೇಳನದಲ್ಲಿ ಕನ್ನಡದ ಹೆಣ್ಣು-ಗಂಡುಗಳ ಕಣ್ಬೇಟೆಯಿಂದ ಹಿಡಿದು ಕನ್ನಡ ಸಾಹಿತ್ಯ ಮತ್ತು ಉದ್ಯಮಿಗಳ ಸಮ್ಮೇಳನಾನೂ ಇದೆ ಅಂತ ಕೇಳುದ್ರೆ ಸಕ್ಕತ್ ಖುಷಿಯಾಗುತ್ತೆ ಗುರು. ಒಂದು ರೀತಿಯಲ್ಲಿ ನವರಸಗಳೆಲ್ಲಾ ಈ ಸಮ್ಮೇಳನದಲ್ಲಿ ಹೇರಳವಾಗಿ ಸಿಗುತ್ತವೆ ಅನ್ನಿಸುತ್ತೆ! ನಾಡು-ನುಡಿ-ನಾಡಿಗರ ಏಳಿಗೆಯ ಹಾದಿಯಲ್ಲಿ ಇಂಥಾ ಸಮ್ಮೇಳನಗಳ ಪಾತ್ರವಾದರೂ ಏನು? ಇವುಗಳು ಇನ್ನೂ ಹೆಚ್ಚು ಹೆಚ್ಚು ಉಪಯುಕ್ತ ಅನಿಸಿಕೊಳ್ಳುವುದಕ್ಕೆ ಏನೇನಾಗಬೇಕು ಅಂತ ನೋಡೋಣ್ವಾ?


ಕರ್ನಾಟಕದ ಏಳಿಗೆ ಅಂದ್ರೆ ಏನು ಅನ್ನೋದರ ಬಗ್ಗೆ ಒಮ್ಮತ ಬೇಕು
ಕರ್ನಾಟಕದ ಏಳಿಗೆ ಎಂದರೆ ಏನು ಎನ್ನುವುದರ ಬಗ್ಗೆ ಸಮ್ಮೇಳನ-ಹೋಗುಗರಲ್ಲಿ ಒಮ್ಮತ ಬರಬೇಕು. ಕರ್ನಾಟಕದ ಏಳಿಗೆ ಅಂದರೆ ಏನು? ಅದಕ್ಕೂ ಅಮೇರಿಕ-ಯೂರೋಪುಗಳ ದೇಶಗಳ ಏಳಿಗೆಗೂ ವೆತ್ಯಾಸವೇನು? ಒಂದೇ ಸಮನಾಗಿರುವುದೇನು? ಎಂಬೀ ವಿಷಯಗಳ ಬಗ್ಗೆ ಒಮ್ಮೆ ಈ ಸಮ್ಮೇಳನದಲ್ಲಿ ಸೇರುವಂತಹ ಬುದ್ಧಿವಂತ ಕನ್ನಡಿಗರಲ್ಲಿ ಒಮ್ಮತ ಬಂದುಬಿಟ್ಟರೆ ಕನ್ನಡಿಗರಿಗೆ ಐದೂವರೆಕೋಟಿ ಆನೆಗಳ ಬಲ ಬಂದಂತೆ. ಕರ್ನಾಟಕ ಏಳಿಗೆ ಹೊಂದಿದೆ ಅಂತ ಹೇಳ್ಬೇಕಾದ್ರೆ ಕೆಲವು ಮೂಲಭೂತವಾದ ಬದಲಾವಣೆಗಳು ಈ ನಾಡಿನಲ್ಲಿ ಆಗಿರಲೇಬೇಕು. ಅವುಗಳು ಆಗಿಲ್ಲದೆ ಕರ್ನಾಟಕ ಏಳಿಗೆ ಹೊಂದಿದಂತಲ್ಲ. ಮೊದಲಿಗೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಕರ್ನಾಟಕಕ್ಕೆ ಭಾರತದ ಇತರ ರಾಜ್ಯಗಳಿಂದ ಮೋಸವಾಗುತ್ತಿರಬಾರದು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು. ಕನ್ನಡಿಗರಲ್ಲಿ ಕಲಿಕೆ / ಉದ್ದಿಮೆಗಳಿಗೆ ಕೊರತೆಯಿರಬಾರದು. ಕನ್ನಡಿಗರು ಜಾಗತಿಕ ಮಟ್ಟದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಒಟ್ಟಾಗಿ ಹೆಸರು ಮಾಡಬೇಕು (ಅಲ್ಲಿಲ್ಲಿ ಯಾರೋ ಒಬ್ಬಿಬ್ಬ ಕನ್ನಡಿಗರು ಹೆಸರು ಮಾಡಿದರೆ ಸಾಲದು!). ಮತ್ತೆ ಈ ಮೇಲಿನವೆಲ್ಲವೂ ಒಮ್ಮೆಗೇ ಆಗಿದ್ದರೆ ಮಾತ್ರ ಕರ್ನಾಟಕ ಏಳಿಗೆ ಹೊಂದಿದೆ ಎನ್ನಲು ಸಾಧ್ಯ. ಯಾವ ಒಂದು ಆಗಿಲ್ಲದಿದ್ದರೂ ನಾವು ಏಳಿಗೆ ಹೊಂದಿಲ್ಲವೆಂದೇ ಅರ್ಥ. ಯಾವ ಒಂದನ್ನು ಕೈಬಿಟ್ಟರೂ ಮಿಕ್ಕವುಗಳಲ್ಲಿ ಗೆಲುವಿಲ್ಲವೆನ್ನುವುದು ಹೊರದೇಶಗಳಲ್ಲಿ ಸಾಕಷ್ಟು ಓಡಾಡಿರುವವರಿಗೆ ಗೊತ್ತೇ ಇರುತ್ತದೆ. ಜರ್ಮನಿ ಜರ್ಮನ್ ಭಾಷೆಯನ್ನು ಬಿಟ್ಟಾಗಲಿ ತಮ್ಮದೇ ನಾಡಿನಲ್ಲಿ ಫ್ರೆಂಚಿಗರಿಗೆ ತಮಗಿಂತ ಹೆಚ್ಚಿನ ಸ್ಥಾನವನ್ನು ಕೊಟ್ಟಾಗಲಿ ಸರಿಯಾದ ಕಲಿಕೆ/ ಉದ್ದಿಮೆಗಳ ಏರ್ಪಾಡುಗಳಿಲ್ಲದೆಯಾಗಲಿ ಇವತ್ತಿನ ಸ್ಥಿತಿಗೆ ಬರಲಿಲ್ಲ. ಫ್ರಾನ್ಸೂ ಬರಲಿಲ್ಲ, ಇಸ್ರೇಲೂ ಬರಲಿಲ್ಲ, ಜಪಾನೂ ಬರಲಿಲ್ಲ, ಯಾವ್ ಬಡ್ಡೀಮಗನ್ ನಾಡೂ ಬರಲಿಲ್ಲ. ಕರ್ನಾಟಕವೂ ಬರಲ್ಲ. ಇದು ಅಕ್ಕ ಸಮ್ಮೇಳನಕ್ಕೆ ಹೋಗೋ ಕನ್ನಡಿಗರಿಗೆ ಅರ್ಥವಾಗಬೇಕಾದ ಮೊದಲನೇ ವಿಷಯ. ಈ ಸತ್ಯವನ್ನು ಅವರು ಎಂದಿಗೂ ಮರೀಬಾರ್ದು.

ಏಳಿಗೆಯ ಹಾದಿಯ ಮೈಲಿಗಲ್ಲುಗಳನ್ನು ಗುರುತಿಸಬೇಕು

ಏಳಿಗೆ ಅಂದರೆ ಏನು ಅನ್ನುವುದರ ಬಗ್ಗೆ ಒಮ್ಮತ ಬಂದಮೇಲೆ ಇನ್ನು ಆ ಏಳಿಗೆಯ ಹಾದಿಯಲ್ಲಿ ಯಾವ ಯಾವ ಮೈಲಿಗಲ್ಲುಗಳು ಯಾವಾಗ್ಯಾವಾಗ ದಾಟಬೇಕಾದವು ಅನ್ನುವುದರ ಬಗ್ಗೆ ಅಕ್ಕ ಸಮ್ಮೇಳನಗಳಲ್ಲಿ ಚರ್ಚೆ ಆಗಬೇಕು. ಕರ್ನಾಟಕಕ್ಕೆ ಭಾರತದ ಇತರ ರಾಜ್ಯಗಳಿಂದ ಏಕೆ ಮೋಸವಾಗುತ್ತಿದೆ? ಇದಕ್ಕೆಲ್ಲ ಮೂಲ ಕಾರಣವೇನು? ಕರ್ನಾಟಕಕ್ಕೂ ಭಾರತಕ್ಕೂ ನಿಜವಾದ ಸಂಬಂಧವೇನು? ನಮ್ಮ ಕಲಿಕೆಯೇರ್ಪಾಡಿನಲ್ಲಿ ಪ್ರಾಥಮಿಕ ಹಂತದಲ್ಲಿ ಇಡೀ ಪ್ರಪಂಚದಲ್ಲಿ ಯಾವುದಕ್ಕೂ ಕಡಿಮೆಯಿಲ್ಲವೆನ್ನುವಂತಹ ಕಲಿಕೆಯನ್ನ (ಅದು ಕನ್ನಡದಲ್ಲೇ ಅನ್ನೋದನ್ನ ಮತ್ತೆ ಹೇಳಲೇಬೇಕಾಗಿಲ್ಲ) ಯಾವಾಗ ನಾವು ಗಿಟ್ಟಿಸಿಕೊಂಡಿರಬೇಕು? ಹಾಗೇ ಪ್ರೌಢ, ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಯಾವಾಗ? ಇವುಗಳೆಲ್ಲ ಈಡೇರಬೇಕಾದರೆ ನಮ್ಮ ಈಗಿನ ಕಲಿಕೆಯೇರ್ಪಾಡುಗಳಲ್ಲಿ ಯಾವಯಾವ ಬದಲಾವಣೆಗಳಾಗಬೇಕು? ಇವತ್ತು ಆ ಏರ್ಪಾಡುಗಳಲ್ಲಿರುವ ಕೊರತೆಗಳೇನು? ಕರ್ನಾಟಕದಲ್ಲಿ ಕನ್ನಡದ/ ಕನ್ನಡಿಗನ ಸಾರ್ವಭೌಮತ್ವಕ್ಕೆ ಅಡ್ಡಗಾಲು ಹಾಕಿಕೊಂಡು ಏನೇನು ನಿಂತಿದೆ? ಯಾರುಯಾರು ನಿಂತಿದ್ದಾರೆ? ಇವುಗಳನ್ನೆಲ್ಲ ಮೀರಿ ಮುಂದೆ ಹೋಗುವುದು ಹೇಗೆ? ಮತ್ತು ಯಾವಾಗ? ಇವುಗಳನ್ನೆಲ್ಲ ಆಗುಮಾಡಿಸಲು ಯಾವಯಾವ ಹೊಸಹೊಸ ಸಂಸ್ಥೆಗಳು ಹುಟ್ಟಬೇಕು? ಅವುಗಳನ್ನು ನಡೆಸುವವರು ಯಾರು? ಅದಕ್ಕೆ ದುಡ್ಡೆಷ್ಟು ಬೇಕು? ಎಲ್ಲಿಂದ ಬಂದೀತು? ಯಾವಾಗ? --- ಇಂತಹ ಪ್ರಶ್ನೆಗಳ್ನ ಅಕ್ಕ ಕೇಳಬೇಕು, ಕೇಳಿ ನಮ್ಮ ಏಳಿಗೆಯ ಹಾದಿಯ ಮೈಲಿಗಲ್ಲುಗಳ್ನ ಗುರುತಿಸಬೇಕು.

ಕನ್ನಡದ ಮಣ್ಣಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವ ಸಂಘಟನೆಗಳೊಡನೆ ಕೈಜೋಡಿಸಬೇಕು

ಅಕ್ಕ ಅಮೇರಿಕದಲ್ಲಿ ಮಾತ್ರ ತನ್ನ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವುದರಿಂದ ನಾಡಿನ ಮಣ್ದಿಟಗಳಲ್ಲಿ (ಮಣ್ಣಿಗೆ ಹತ್ತಿರವಾದ ದಿಟಗಳಲ್ಲಿ) ಪ್ರತಿದಿನವೂ ಮುಳುಗಿ ನಾಡಿನ ಏಳಿಗೆಗಾಗಿ ದುಡಿಯುತ್ತಿರುವ ಸಂಘಟನೆಗಳೊಡನೆ ಕೈಜೋಡಿಸದೆ ಕರ್ನಾಟಕದಲ್ಲಿ ಏಳಿಗೆಯನ್ನು ತರಲು ಕಷ್ಟವಾದೀತು. ಇವತ್ತಿನ ದಿನ ಸರ್ಕಾರವೊಂದೇ ನಾಡು-ನುಡಿ-ನಾಡಿಗರ ಬೆಳವಣಿಗೆಯ ಹೊಣೆ ಹೊರಲಾರದು. ಹಿಂದಿಯ ಭೂತ ಹಿಡಿದು ಕನ್ನಡವನ್ನೇ ಕಡೆಗಣಿಸುವ ಸರ್ಕಾರಗಳನ್ನಂತೂ ನಂಬುವುದಕ್ಕೇ ಅಸಾಧ್ಯ! ಕನ್ನಡಿಗರಿಗೆ ಉದ್ಯೋಗ ಹುಟ್ಟದಿದ್ದರೂ ಪರವಾಗಿಲ್ಲ ಬಿಹಾರಿಗಳಿಗೆ ಕೆಲಸ ಕೊಟ್ಟರೆ ಭಾರತ ಉದ್ಧಾರವಾಗುತ್ತದೆ ಎನ್ನುವ ಸರ್ಕಾರಗಳನ್ನೂ ನಂಬಲು ಅಸಾಧ್ಯ! ಆದ್ದರಿಂದ ಯಾವ ಯಾವ ಸಂಘಟನೆಗಳು ನಿಜವಾಗಿಯೂ ನಾಡು-ನುಡಿ-ನಾಡಿಗನ ಏಳಿಗೆಯನ್ನೇ ತಮ್ಮ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿವೆಯೋ ಅವುಗಳೊಡನೆ ಒಗ್ಗೂಡಿ ಕೆಲಸ ಮಾಡಿದರೆ ಅಕ್ಕನಿಗೆ ತನ್ನ ನಿಜವಾದ "ಚಾಳಿ"ಯನ್ನು "ಮನೆಮಂದಿ"ಗೆಲ್ಲ ಹರಡಲು ಸುಲಭವಾದೀತು. ಇವತ್ತಿನ ದಿನ ಇಂತಹ ಎಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರೇ ಎಲ್ಲರಿಗೂ ಮೊದಲು ಮನಸ್ಸಿಗೆ ಬರುವುದು. ಕರವೇ ನಾಡು-ನುಡಿ-ನಾಡಿಗರ ಏಳಿಗೆಗಾಗಿ ಎಡೆಬಿಡದೆ ದುಡಿಯುತ್ತಿರುವ ಒಂದು ಹಿರಿದಾದ ಸಂಘಟನೆ. ಹೀಗಿರುವಾಗ ಅಕ್ಕ-ಕರವೇಗಳು ಅಕ್ಕರೆಯಿಂದ ಒಟ್ಟುಗೂಡಿ ಯಾಕೆ ಕೆಲಸ ಮಾಡಬಾರದು? ಇವರಿಬ್ಬರೂ ಸೇರಿ ಚಿಂತಿಸಬೇಕು, ತಂತಮ್ಮ ಶಕ್ತಿ-ಸಾಮರ್ಥ್ಯಗಳನ್ನು ಬಳಸಿ ನಾಡಿನ ಏಳಿಗೆಯ ತೇರನ್ನು ಮುಂದೆ ತಳ್ಳಬೇಕು. ಇದೆಲ್ಲಾ ಮುಂದಿನ ದಿನಗಳಲ್ಲಿ ಆಗಲಿ ಅಂತ ಹಾರೈಸ್ತಾ ಈ ಬಾರಿಯ ಸಮ್ಮೇಳನಕ್ಕೆ ಒಳಿತು ಹಾರೈಸೋಣ! ಏನ್ ಗುರು?

ಕನ್ನಡ ಒಂದೇ ಸಾಕೆಂಬ ಸರಿ ನಿಲುವು!

"ಸರ್ ಪ್ಲೀಸ್ ಟೆಲ್ ಇನ್ ಇಂಗ್ಲಿಷ್" ಅಂತ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರನ್ನು ಕೆಲ ಮಾಧ್ಯಮದೋರು ಕೇಳಿದಾಗ "ಇಲ್ಲ, ನಾನು ಕನ್ನಡಿಗ, ನಾನು ಕನ್ನಡದಲ್ಲೇ ಮಾತಾಡೋದು, ಇಂಗ್ಲಿಷಲ್ಲಿ ಮಾತಾಡೋ ಅವಶ್ಯಕತೆ ಇಲ್ಲ" ಅಂತ ಹೇಳಿ ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದಾರೆ.

ಮಾಧ್ಯಮಗಳಲ್ಲಿ ಆಡಬೇಕಾದ ಭಾಷೆ!

ನಮ್ಮ ನಾಡಿನ ಮುಖ್ಯಮಂತ್ರಿಗಳು ನಮ್ಮ ನಾಡಿಗೆ ಸಂಬಂಧಿಸಿದ ವಿಷಯದ ಬಗ್ಗೆ ಮಾತಾಡೋವಾಗ ಅವ್ರು ಕನ್ನಡದಲ್ಲೇ ಮಾತಾಡೋದು ಸರಿಯಾಗೇ ಇದೆ. ಇಲ್ಲಿನ ಬೇರೆ ಭಾಷೆಯ ಮಾಧ್ಯಮಗಳೋರು ತಮ್ಮ ಮಾಧ್ಯಮ ಯಾವ ಊರಿನದೇ ಆಗಿದ್ದರೂ, ಯಾವ ಭಾಷೇದೆ ಆಗಿದ್ರೂ ಇಲ್ಲಿ ಕೆಲಸ ಮಾಡೋ ವರದಿಗಾರರನ್ನಾಗಿ ಕನ್ನಡ ಬಲ್ಲವರನ್ನೇ ನೇಮಿಸಬೇಕಲ್ವಾ? ಆಯಾ ವರದಿಗಾರರು ಸುದ್ದಿಯ ಸಾರವನ್ನು ತನ್ನ ಮಾಧ್ಯಮದ ಭಾಷೇಲಿ ಟಿಪ್ಪಣಿ ಕೊಟ್ಟೋ, ತರ್ಜುಮೆ ಮಾಡೋ ಹಾಕ್ಕೋಬೇಕಾದ್ದೆ ಸರಿಯಾದದ್ದಲ್ವಾ?
ಇನ್ನೂ ಬಿಡಿಸಿ ಹೇಳಬೇಕಂದ್ರೆ ಉದಾಹರಣೆಗೆ ಬೆಂಗಳೂರಲ್ಲಿ ಮುದ್ರಣವಾಗೋ ತಮಿಳು ಪತ್ರಿಕೆಯೋರು ಕರ್ನಾಟಕದ ಮುಖ್ಯಮಂತ್ರಿಗಳನ್ನು ತಮಿಳಲ್ಲಿಯೂ ಸ್ವಲ್ಪ ಹೇಳ್ರಿ ಅನ್ನೋದು ಎಷ್ಟು ತಪ್ಪೋ ಇಂಗ್ಲಿಷ್ ಪತ್ರಿಕೆಯೋರು ಇಂಗ್ಲಿಷಲ್ಲಿ ಹೇಳಿ ಅನ್ನೋದು ಅಷ್ಟೇ ತಪ್ಪು ಗುರು. ಇದನ್ನ ಮಾಧ್ಯಮದ ಮಂದಿ ಅರ್ಥ ಮಾಡ್ಕೊಂಡು ತಮ್ಮ ವರದಿಗಾರರಿಗೆ ಚೂರು ತಿಳಿ ಹೇಳಿ ಕಾರ್ಯ ವೈಖರಿ ಬದಲಾಯಿಸಿಕೋ ಬೇಕು ಗುರು! ಹೀಗೆ ಇವ್ರು ಇಂಗ್ಲಿಷಲ್ಲಿ ಹೇಳಿ ಅನ್ನೋದೂ, ನಾಡಿನ ಮುಖ್ಯಮಂತ್ರಿಗಳು ಇಂಗ್ಲಿಷ್ ಬರದಿದ್ದಲ್ಲಿ ಕೀಳರಿಮೆಯಲ್ಲಿ ನರಳೋದೋ ಆದ್ರೆ ಎಷ್ಟು ಅಸಹ್ಯ ಅಲ್ವಾ? ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವ್ರು ಹಿಂದೊಮ್ಮೆ ಮಾಧ್ಯಮದೋರ ಮುಂದೆ ನಂಗೆ ಇಂಗ್ಲಿಷ್ ಚೆನ್ನಾಗಿ ಬರಲ್ಲ ಅನ್ನೋ ಕೀಳರಿಮೆ ಕಾಡ್ತಿದೆ ಅನ್ನೋ ಅರ್ಥದಲ್ಲಿ ಮಾತಾಡಿದ್ದನ್ನು ನೆನಪಿಸ್ಕೋಬೇಕು. ಆ ಒಂದು ಮಾತು ಕನ್ನಡಿಗ ಜನಾಂಗಕ್ಕೇ ಕೀಳರಿಮೆ ಕಳಂಕ ಮೆತ್ತಲಿಲ್ವಾ? ನನ್ನದಲ್ಲದ ಇನ್ನೊಂದು ನುಡಿ ಬರದೆ ಇರೋದು ಕೀಳರಿಮೆಗೆ ಕಾರಣ ಆಗಬಾರದಲ್ವಾ ಗುರು! ಫ್ರಾನ್ಸ್, ಜರ್ಮನಿ, ಜಪಾನ್ ಮುಂತಾದ ದೇಶಗಳ ಪ್ರಧಾನಿಗಳನ್ನು ಯಾರಾದ್ರೂ ಅವರದಲ್ಲದ ಭಾಷೇಲಿ ಮಾತಾಡಿ ಆಂತಾರಾ ಗುರು? ಯಾರಾದ್ರೂ ಮಾಧ್ಯಮದೋರು ಹೋಗಿ ದಯವಿಟ್ಟು ಚೀನಿ ಭಾಷೇಲೂ ಹೇಳಿಕೆ ಕೊಡಿ ಅನ್ತಾರಾ?
ಕನ್ನಡ ಬಿಟ್ ಬೇರೆ ಮಾತಾಡಲ್ಲಾ ಅನ್ಬೇಕಾ?
ನಮ್ಮ ನಾಯಕರು ನಮ್ಮ ನಾಡನ್ನು ಪ್ರತಿನಿಧಿಸೋ ಸಂಸತ್ತಿನಲ್ಲಿ ಖಂಡಿತಾ ಕನ್ನಡದಲ್ಲಿ ಮಾತಾಡೋದೇ ಸರಿ. ಯಾಕಂದ್ರೆ, ಅಲ್ಲಿಗೆ ಇವರು ಹೋಗಿರೋದೇ ಈ ನೆಲವನ್ನು ಪ್ರತಿನಿಧಿಸೋಕೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಷ್ಟೊಂದು ಭಾಷಿಕರಿದ್ದಾಗ ಪ್ರತಿಯೊಬ್ಬನಿಗೂ ತನ್ನ ಅನಿಸಿಕೇನಾ ಪರಿಣಾಮಕಾರಿಯಾಗಿ ವ್ಯಕ್ತಮಾಡೋ ವ್ಯವಸ್ಥೆ ಇರಬೇಕು...ಅಂದ್ರೆ ಪ್ರತಿ ಭಾಷೆಯನ್ನೂ ಆಡಳಿತ ಭಾಷೆಗೆ ತರ್ಜುಮೆ ಮಾಡೊ, ಉಳಿದ ಸದಸ್ಯರಿಗೆ ಅರ್ಥ ಮಾಡ್ಸೋ ವ್ಯವಸ್ಥೆ ಇರಬೇಕು...ಏನಂತೀ ಗುರು?

ಇಂಗ್ಲಿಷ್ ಬರಲ್ಲ ಅಂತ್ಲೂ ಇಂಗ್ಲಿಷಲ್ಲೇ ಬರೆದು ಕೊಡ್ಬೇಕಂತೆ!

"ನನ್ನ ಹೆಸರು ಇಂಥದ್ದು, ನಂಗೆ ಕನ್ನಡ ಒಂದೇ ಭಾಷೆ ಬರೋದು, ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ನೀವು ಇಂಗ್ಲಿಷ್ ಭಾಷೇಲಿ ಬರ್ದಿರೋದೆಲ್ಲವನ್ನೂ ಓದಿಸಿ ಕೇಳಿ ಅರ್ಥ ಮಾಡ್ಕೊಂಡಿದೀನಿ" ಅಂತಾ ಒಂದು ಕೋರ್ಟು ಅಫೀಡವಿಟ್ ಮಾಡ್ಸಿ ಕೊಟ್ರೇನೇ ಮನೆಸಾಲ ಕೊಡ್ತೀವಿ ಅಂತ ಐಡಿಬಿಐ ಬ್ಯಾಂಕಿನೋರು ಅಂದಾಗ ಸತ್ಯವಾಗ್ಲೂ ತಲೆ ಕೆಟ್ಟೋಯ್ತು ಗುರು ಅಂತ ನಮ್ಮ ಓದುಗ್ರೊಬ್ರು ತಮ್ಮ ಅನುಭವ ಕಳಿಸಿದಾರೆ... ಅವ್ರ್ ಅನುಭವಾನ ನೀವೇ ಕೇಳಿ!!!
ಕನ್ನಡದಲ್ಲಿ ಸೇವೆ ಕೊಡಬೇಕಾದವ್ರು ಅವ್ರು!

ಅಲ್ಲ ಸ್ವಾಮಿ...ಕನ್ನಡಿಗನಾದ ನಾನು ನಿಮ್ಮ ಹತ್ರ ಸಾಲ ತೊಗೋತಿದೀನಿ ಅಂದ್ರೆ ನಿಮ್ಮ ಬ್ಯಾಂಕಿನ ಗ್ರಾಹಕ ಆಗ್ತೀನಲ್ವಾ? ಅಂದ ಮೇಲೆ ನಮ್ಮೂರಲ್ಲಿ ಬಂದಿರೋ ಬ್ಯಾಂಕಿನೋರು ನಮ್ಮ ಭಾಷೇಲಿ ಸೇವೆ ಕೊಡಬೇಕಾದ್ದು ನ್ಯಾಯಾ ಅಲ್ವಾ? ಅದುನ್ ಬಿಟ್ಟು ನಂಗೆ ಕನ್ನಡ ಒಂದೇ ಬರೋದು ಅಂತ ಯಾಕೆ ಬರುಸ್ಕೋತಿದೀರಿ ಅಂದಿದ್ದಕ್ಕೆ ಅವ್ರು ಕೊಟ್ಟ ಉತ್ರ "ನಿಮ್ಮ ಸಹಿ ಕನ್ನಡದಲ್ಲಿದೆ" ಅನ್ನೋದಾಗಿತ್ತು. ಕನ್ನಡದಲ್ಲಿ ಸಹಿ ಹಾಕೋರಿಗೆ ಬೇರೆ ಯಾವ ಭಾಷೇನೂ ಬರೋಲ್ಲ ಅಂತ ಯಾಕೆ ಅಂದುಕೊಂಡು ಬಿಡ್ತೀರಿ ಅಂದ್ರೆ ಬ್ಯಾಂಕಿನವರ ಉತ್ತರ "ಸಾರ್, ಇದು ನಮ್ಮ ಬ್ಯಾಂಕಿನ ಪದ್ದತಿ. ಯಾವುದೇ ವರ್ನ್ಯಾಕುಲರ್ ಭಾಷೇಲಿ ಸಹಿ ಹಾಕುದ್ರೆ ಅವ್ರ ಹತ್ರ ಇಂಥಾ ಒಂದು ಮುಚ್ಚೋಲೆ ಬರುಸ್ಕೋತೀವಿ. ಇದು ಬರೀ ಔಪಚಾರಿಕ ಸಾರ್, ಒಂದು ಸಹಿ ಹಾಕ್ಕೊಡಿ" ಅನ್ನೋದಾ? ಅಲ್ರೀ, ನಿಮ್ಮ ಮಾತಿನಂತೆಯೇ ನಿಜವಾಗ್ಲೂ ನಂಗೆ ಕನ್ನಡ ಬಿಟ್ಟು ಬೇರೆ ಭಾಷೇ ಬರೋದೇ ಇಲ್ಲ ಅನ್ನೋದೆ ನಿಜ ಆಗಿದ್ರೂ ಕೂಡಾ ನೀವು ಕೊಟ್ಟಿರೋ ಈ ನಮೂನೆ ಕೂಡಾ ಇಂಗ್ಲಿಷ್ ಭಾಷೇಲಿದೆಯಲ್ಲಾ? ಇಂಗ್ಲಿಷ್ ಬರಲ್ಲ ಅಂತ ಇಂಗ್ಲಿಷಿನಲ್ಲೇ ಹೆಂಗೆ ಸ್ವಾಮಿ ಬರ್ಕೊಡ್ಲಿ ಅಂದ್ರೆ ಕಕ್ಕಾಮಿಕ್ಕಿ ನೋಡ್ತಾರೆ ಗುರು!

ಸರಿಯಾದ ವ್ಯವಸ್ಥೆ ಇರೋದು ಗ್ರಾಹಕರಿಗೆ!

ಗ್ರಾಹಕನೇ ದೇವ್ರು ಅನ್ನೋದು ನಿಜವೇ ಆದ್ರೆ ಕನ್ನಡ ನಾಡಲ್ಲಿರೋ ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಕೊಡಬೇಕಾದ್ದು ಬ್ಯಾಂಕುಗಳೂ ಸೇರಿದಂತೆ ಎಲ್ಲ ಅಂಗಡಿ, ಮುಂಗಟ್ಟುಗಳ ಕರ್ತವ್ಯ ಅಲ್ವಾ ಗುರು! ಕನ್ನಡ ನಾಡಲ್ಲಿ ಕನ್ನಡದಲ್ಲಿ ಸೇವೆ ನಿರಾಕರಿಸೋದು ಶಿಕ್ಷಾರ್ಹ ಅಪರಾಧ ಅಂತ ಸರ್ಕಾರ ಒಂದು ಕಾಯ್ದೆ ಮಾಡುದ್ರೆ ಮಾತ್ರಾ ಗ್ರಾಹಕನೇ ದೇವ್ರು ಅನ್ನೋ ಮಾತಿಗೆ ನಿಜವಾದ ಅರ್ಥ ಸಿಗುತ್ತೆ ಗುರು! ತಮಾಷೆ ಅಂದ್ರೆ ಭಾರತದಲ್ಲಿ ಗ್ರಾಹಕನ ಹಕ್ಕುಗಳಿಗಾಗಿರೋ ಮಾರ್ಗದರ್ಶಿ/ ನಿಯಮಗಳ ದೊಡ್ಡ ಪಟ್ಟಿಯಲ್ಲಿ ಭಾಷಾ ಆಯಾಮವೇ ಇಲ್ಲ ಗುರು!!!

ಸರ್ಕಾರಿ ಅಂತರ್ಜಾಲ ತಾಣವೆಂಬ ದೀಪದಡಿಯ ಕತ್ತಲೆ!

ಆಡಳಿತದಲ್ಲಿ ಕನ್ನಡದ ಸಂಪೂರ್ಣ ಜಾರಿಗೆ ಮಹತ್ವ ನೀಡುವುದಾಗಿ ಘೋಷಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮು.ಮಂ.ಚಂದ್ರು ಅವರು ಬಹುಶಃ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದತ್ತ ಗಮನ ಹರಿಸಿದ ಹಾಗಿಲ್ಲ. ಸರ್ಕಾರದ ಮುಖವಾಣಿ ಆಗಿರುವ, ಸರ್ಕಾರದ ನಾನಾ ಇಲಾಖೆ, ನಿಗಮ ಮಂಡಳಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲು ಮಾಡಿರುವ ಈ ವೆಬ್ ಸೈಟ್ ಗೆ ಕಾಲಿಟ್ಟರೆ, ಆಡಳಿತದಲ್ಲಿ ಕನ್ನಡ ಅನುಷ್ಟಾನದ ಬಗ್ಗೆ ಸರ್ಕಾರ ಎಷ್ಟರ ಮಟ್ಟಿಗೆ ಬದ್ಧವಾಗಿದೆ ಎಂದು ಗೊತ್ತಾಗುತ್ತೆ ಗುರು!
ಕರ್ನಾಟಕ ಸರ್ಕಾರದ ನಿಜಾಯ್ತಿಗೊಂದು ಕೈಗನ್ನಡಿ!

ಸರ್ಕಾರದ ಕೈಗನ್ನಡಿ ಆಗಿರೋ ಇ ವೆಬ್ ಸೈಟ್ ಅಲ್ಲಿ ಕನ್ನಡದ ಒಂದೇ ಒಂದು ಅಕ್ಷರ ಹುಡುಕಿ ತೆಗೆದರೆ ಅವರಿಗೆ ಖಂಡಿತ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಕೊಡಬಹುದು ಅನ್ಸುತ್ತೆ ಗುರು !ಡಚ್ಚು, ಫ್ರೆಂಚು ಓಕೆ, ಕನ್ನಡ ಯಾಕೆ? ಈ ವೆಬ್ ಸೈಟನಿಂದ ಕೊಂಡಿ ಪಡ್ಕೊಂಡಿರೋ, ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಲು ಬರುವ ಹೂಡಿಕೆದಾರರಿಗೆ ಮಾಹಿತಿ ಒದಗಿಸೋ ಕೈಗಾರಿಕಾ ಇಲಾಖೆಯ 'ಕರ್ನಾಟಕ ಉದ್ಯೋಗ ಮಿತ್ರ' ವೆಬ್ ಸೈಟ್ ಅಲ್ಲಿ ಡಚ್ಚು, ಫ್ರೆಂಚು ಇದೆ, ಆದರೆ ಈ ನಾಡಿನ ಆಡಳಿತ ಭಾಷೆ ಕನ್ನಡಕ್ಕೆ ಸ್ಥಾನ ಸಿಕ್ಕಿಲ್ಲ. ಯಾಕೆ? ನಮ್ಮಲ್ಲಿನ ಉದ್ಯಮಿಗಳು ಈ ಇಲಾಖೆಗೆ ಲೆಕ್ಕಕ್ಕೆ ಇಲ್ಲವಾ? ನಮ್ಮಲ್ಲಿನ ಉದ್ಯಮಿಗಳ ಬೆನ್ನು ತಟ್ಟಿ, ಪ್ರೋತ್ಸಾಹಿಸಿ ಅವರಿಗೆ ಬೇಕಾದ ಮಾಹಿತಿಯನ್ನು ಅವರಿಗೆ ಅರ್ಥ ಆಗೋ ಭಾಷೆಲಿ ಒದಗಿಸಿ ಕೊಟ್ಟು, ನಮ್ಮ ಉದ್ಯಮ, ಉದ್ಯಮಿಗಳು, ಒಟ್ಟಾರೆ ಉದ್ಯಮಶೀಲತೆಯನ್ನು ಬೆಳೆಸಬೇಕಾದ ಸರ್ಕಾರಕ್ಕೇ ಈ ಬಗ್ಗೆ ನಯಾ ಪೈಸೆಯಷ್ಟು ಕಾಳಜಿ ಇಲ್ವಲ್ಲ ಗುರು.
ಅವರಿಗಿರೋ ಬುದ್ಧಿ ನಮ್ಮೋರಿಗೆ ಯಾಕಿಲ್ಲ?

ಒಂದು ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ ಅಂದರೆ, ಅದು ಆ ರಾಜ್ಯದ, ಆ ಸರ್ಕಾರದ ಜನ ಪರ ಯೋಜನೆಗಳನ್ನು, ಆಡಳಿತದ ಅನುಷ್ಟಾನಕ್ಕೆ ರೂಪಿಸಿರುವ ನೀತಿ ನಿಯಮಗಳನ್ನು ನಮ್ಮ ಜನತೆಗೆ ತಿಳಿಸಿಕೊಡಲು ಇರುವ ಒಂದು ಅದ್ಭುತ ವೇದಿಕೆ. ಆ ಸರ್ಕಾರದ ಕ್ರಿಯಾಶೀಲತೆಗೂ ಅದು ಒಂದು ಮಾಪಕ. ಆದ್ರೆ ನಮ್ಮ ಸರ್ಕಾರಿ ವೆಬ್ ಸೈಟ್ ನಲ್ಲಿ 15 ಕ್ಕೂ ಹೆಚ್ಚಿನ ಇಲಾಖೆಗಳ ಲಿಂಕ್ ಕೆಲಸ ಮಾಡುತ್ತಿಲ್ಲ. ಇನ್ನೂ ಈ ಬಗ್ಗೆ ದೂರು ಕೊಡೊಣ ಅಂದ್ರೆ ಇಲ್ಲಿನ ಫೀಡ್ ಬ್ಯಾಕ್ ವಿಭಾಗ ಕೂಡ ಕೆಲಸ ಮಾಡುತ್ತಿಲ್ಲ. ಮಾಹಿತಿ ತಂತ್ರಜ್ಞಾನದ ಮೂಂಚೂಣಿಯಲ್ಲಿರುವ ನಮ್ಮ ರಾಜ್ಯಕ್ಕೆ, ತನ್ನ ರಾಜ್ಯ ಭಾಷೆಯಲ್ಲಿ ಒಂದು ಸರಿಯಾದ ವೆಬ್ ಸೈಟ್ ಅಭಿವೃದ್ಧಿ ಪಡಿಸಲು ಆಗಿಲ್ಲ ಅನ್ನೋದು ಸಕತ್ ನಾಚಿಕೆಗೇಡಿನ ವಿಷ್ಯ ಗುರು. ಪಕ್ಕದ ಆಂಧ್ರ, ತಮಿಳುನಾಡಿನ ಸರ್ಕಾರಗಳ ಅಧಿಕೃತ ವೆಬ್ ಸೈಟ್ ನಲ್ಲಿ ಅವರ ರಾಜ್ಯ ಭಾಷೆಗೆ ಕೊಟ್ಟಿರೋ ಮಹತ್ವ, ಮನ್ನಣೆ ನೋಡಿದಾಗ ನಮ್ಮ ಸರ್ಕಾರಕ್ಕೆ ಅದ್ಯಾವ ಬರಬಾರದ ರೋಗ ಬಂದಿದೆ ಅನ್ಸುತ್ತೆ ಗುರು.

ಕಾರಣ ಯಾರು?

ಪತ್ರಿಕಾ ವರದಿಗಳ ಪ್ರಕಾರ ಇದೆಕ್ಕೆಲ್ಲಾ ಕಾರಣ ಕೆಲ ಐ.ಎ.ಎಸ್/ ಐ.ಪಿ.ಎಸ್ ಅಧಿಕಾರಿಗಳಂತೆ. ಇ-ಆಡಳಿತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಕೆಲವು ಕನ್ನಡ ವಿರೋಧಿ ಐ.ಎ.ಎಸ್/ ಐ.ಪಿ.ಎಸ್ ಅಧಿಕಾರಿಗಳ ಕೈವಾಡದಿಂದಾಗಿಯೇ ಕನ್ನಡದಲ್ಲಿ ಪ್ರತ್ಯೇಕ ವೆಬ್ ಸೈಟ್ ಬೇಕು ಅನ್ನುವ ಬೇಡಿಕೆ ಸರ್ಕಾರಕ್ಕೆ ತಲುಪುತ್ತಿಲ್ಲವಂತೆ. ಕನ್ನಡ ನಾಡಿನ ಸರ್ಕಾರಕ್ಕೆ ಇಂಥಾ ಅಗತ್ಯ ಜನಕ್ಕಿದೆ ಅಂತ ಯಾರಾದ್ರೂ ಯಾಕೆ ಹೇಳಬೇಕು ಗುರು? ಆಂಧ್ರ ತಮಿಳುನಾಡಲ್ಲೇನು ಐ.ಎ.ಎಸ್/ ಐ.ಪಿ.ಎಸ್ ಅಧಿಕಾರಿಗಳಿಲ್ವಾ? ನಿಜಕ್ಕೂ ಇದುವರೆಗಿನ ನಮ್ಮ ಸರ್ಕಾರಗಳು ಮನಸ್ಸು ಮಾಡಿಲ್ಲ ಅನ್ನೋದೆ ಇದಕ್ಕೆ ಕಾರಣ ಅಲ್ವಾ ಗುರು?

ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿ ಇರದಿದ್ದರೆ ಕ್ರಮ ತೊಗೋತೀವಿ ಅನ್ನೋ ನಮ್ಮ ಕನ್ನಡ ಅಭಿವ್ರುದ್ಧಿ ಪ್ರಾಧಿಕಾರದ ಕಣ್ಣಿಗೆ, ದೀಪದ ಕೆಳಗಿನ ಕತ್ತಲೆ ಯಾಕೆ ಕಾಣ್ತಿಲ್ಲ ಗುರು? ಸರ್ಕಾರದ ಅಂಕೆಯಲ್ಲೇ ಆಗುತ್ತಿರುವ ಇಂತದೊಂದು ದೊಡ್ಡ ಲೋಪ ಕಣ್ಣಿಗೆ ಬೀಳದೆ ಇರೋದು ನಿಜಕ್ಕೂ ಅಚ್ಚರಿಯ ವಿಷಯ. ಇನ್ನಾದರೂ ತಡ ಮಾಡದೇ, ನಮ್ಮ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಮೇಲೆ ಒತ್ತಡ ತಂದು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ಜೊತೆಗೆ ಆದಷ್ಟು ಬೇಗ ನಮ್ಮ ಸರ್ಕಾರದ ವೆಬ್ ಸೈಟ್ ಕನ್ನಡದಲ್ಲಿ ಕಾಣಿಸುವಂತಾಗಬೇಕು. ಅಷ್ಟೂ ಮಾಡಲು ಆಗದಿದ್ದರೆ, ಕರ್ನಾಟಕ ಜಗತ್ತಿಗೆ ಮಾಹಿತಿ ತಂತ್ರಜ್ಞಾನದ ದಿಗ್ಗಜ, ಅಗ್ರಜ ಅದು ಇದು ಅಂತ ಯಾವ ಬಿರುದು ತಗೊಂಡು ಏನ್ ಬಂತು ಗುರು?

ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!

ಅಂದು ಕ್ರಾಂತಿಯ ಹೋರಾಟದ ಪಂಜುಗಳು ಒಂದೆಡೆಯಿಂದ ಆಂಗ್ಲರನ್ನು ಸುಡುತ್ತಿದ್ದರೆ, ಅಹಿಂಸೆಯ ಹೋರಾಟದ ಹಣತೆಗಳು ದೇಶದ ಜನಕ್ಕೆ ಏಳಿಗೆಯ ಹಾದಿಯ ಭರವಸೆಯ ಬೆಳಕಿನ ದಾರಿದೀವಿಗೆಯಂತೆ ಕಾಣತೊಡಗಿದ್ದವು. ನಾನಾ ಭಾಷೆಗಳ, ನಾನಾ ಆಡಳಿತಕ್ಕೆ ಸೇರಿದ, ನಾನಾ ಸಂಸ್ಥಾನಗಳಿಗೆ ಸೇರಿದ ೫೬೫ ಪ್ರದೇಶಗಳಿಗೆಲ್ಲ ಒಟ್ಟಿಗೆ 1947ರ ಆಗಸ್ಟ್ 15ರಂದು ಸ್ವತಂತ್ರ ಬಂತು. ಆಗ ಬ್ರಿಟೀಷರು ಈ ಪ್ರದೇಶಗಳಿಗೆ ಭಾರತದಲ್ಲಿ ವಿಲೀನವಾಗುವ ಆಯ್ಕೆಯನ್ನು ನೀಡಿದ್ದರು. ಒಂದು ದೇಶವನ್ನಾಗಿ ಭಾರತವನ್ನು ಕಟ್ಟಲು ಪ್ರತಿ ಪ್ರಾಂತ್ಯಕ್ಕೆ ನೀಡಬೇಕಾದ ಒಳ ಸ್ವಾತಂತ್ರ, ಆಯಾ ಭಾಷೆ, ಸಂಸ್ಕೃತಿಗಳನ್ನು ಕಾಪಾಡಿಕೊಳ್ಳುವುದನ್ನು ಸಂವಿಧಾನದ ಆಶಯವನ್ನಾಗಿಸುವ ಭರವಸೆಯೊಂದಿಗೆ ಭಾರತ ದೇಶ ಒಗ್ಗೂಡಿ 'ಇಂಡಿಯನ್ ಯೂನಿಯನ್' ಉದಯವಾಯಿತು. ಇದೀಗ 62ನೆಯ ಸ್ವತಂತ್ರ ದಿನಾಚರಣೆ ಮುಗಿದಿದೆ.
ಸ್ವತಂತ್ರ ಮತ್ತು ಹಿಂದಿ!

ನಮಗೆ ಪರಕೀಯರ ಆಳ್ವಿಕೆಯಿಂದ ಬಿಡುಗಡೆ ಸಿಕ್ಕಿದೆ. ಇನ್ನು ನಮ್ಮನ್ನು ನಾವೇ ಆಳಿಕೊಳ್ಳುತ್ತೇವೆ, ನಮ್ಮ ಏಳಿಗೆಯ ದಿನಗಳು ಹತ್ತಿರವಾದವು ಎಂದು ಕನ್ನಡಿಗರು ಎಲ್ಲ ಭಾರತೀಯರಂತೆಯೇ ಭರವಸೆಯ ಅಲೆಯಲ್ಲಿ ತೇಲತೊಡಗಿದರು. ನಮ್ಮ ಮನೆ ಮಕ್ಕಳಿಗೆ ಇನ್ನು ಮುಂದೆ ಹೊಸ ಹೊಸ ಕೆಲಸಗಳು ದೊರೆಯುತ್ತವೆ. ಬಿಳಿಯರ ಸರ್ಕಾರದ ಕರುಣೆಯಿರದ ಶೋಷಣೆ ಮುಗಿದುಹೋಗುತ್ತದೆ ಎನ್ನುವ ಹೊಸ ಭರವಸೆಗಳು ತುಂಬಿದ್ದವು. ಆದರೆ ಆದದ್ದೇನು? ಭಾರತ ಒಂದು ದೇಶವಾಗಿರೋ ಕಾರಣದಿಂದ ಇದಕ್ಕೊಂದು ದೇಶಭಾಷೆ ಬೇಕು, ಅದನ್ನು ಪ್ರತಿಯೊಬ್ಬ ಭಾರತೀಯ ಕಲಿಯಲೇ ಬೇಕು ಅನ್ನೊ ತಪ್ಪು ಕಲ್ಪನೆಯಿಂದ ಮೊದಲ ದಿನದಿಂದಲೇ ಹಿಂದಿಯೆನ್ನುವ ಒಂದು ಭಾಷೆಯನ್ನು ಕನ್ನಡಿಗರ ಮೇಲೆ ಹೇರಲು ಆರಂಭವಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ಪ್ರಯತ್ನಗಳು ನಡೆದವು. ಅದನ್ನು ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡಿನಂತಹ ಪ್ರದೇಶಗಳು ವಿರೋಧಿಸಿದಾಗ ಹಿಂಬಾಗಿಲ ಮೂಲಕ ಹಿಂದಿಯನ್ನು ಹೇರಲು ಆರಂಭಿಸಿದರು. ಹಿಂದಿಗೆ ರಾಜ್ ಭಾಷಾ ಎನ್ನುವ (ಅಧಿಕೃತ ಆಡಳಿತ ಸಂಪರ್ಕ ಭಾಷೆ) ಪಟ್ಟ ಕಟ್ಟಲಾಯಿತು. ಮೊದಲಿಗೆ ಹದಿನೈದು ವರ್ಷ ಎಂದಿದ್ದವರು ದಕ್ಷಿಣ ಭಾರತದ 1965ರ ಹಿಂದಿ ವಿರೋಧಿ ಚಳವಳಿಗೆ ತುಸು ಬಗ್ಗಿ ಕಣ್ಣೊರೆಸುವ ತಂತ್ರವಾಗಿ ಎಲ್ಲ ಪ್ರದೇಶಗಳು ಹಿಂದಿಯನ್ನು ಒಪ್ಪುವ ತನಕ ಇಂಗ್ಲಿಷ್ ಗೆ ಪೂರಕ ರಾಜ್ ಭಾಷೆ ಎನ್ನಲಾಯಿತು. ಈ ವಿಷ್ಯದಲ್ಲಿ ನಮ್ಮ ಭಾರತ ಸರ್ಕಾರದ ಘೋಷಿತ ನಿಲುವು ನೋಡಿ . . .
It has been the policy of the Government of India that progressive use of Hindi
in the official work may be ensured through persuasion, incentive and
goodwill.
ಇದು ಅಧಿಕೃತವಾಗಿ ನಡೆಯುತ್ತಿರುವ ದಬ್ಬಾಳಿಕೆಯಾದರೆ... ಇನ್ನು ಬ್ಯಾಂಕು ರೈಲ್ವೇ ಉದ್ಯೋಗಗಳಲ್ಲಿ ಹಿಂದಿ ಬಾರದೆನ್ನುವವರಿಗೆ ಕೆಲಸ ಇಲ್ಲವೆನ್ನುವ ಮೂಲಕ ಕನ್ನಡಿಗರಿಗೆ ವಂಚನೆ ಮಾಡಲಾಗುತ್ತಿದೆ. ಬೆಂಗಳೂರಿನಂತಹ ಕನ್ನಡ ನಾಡಿನ ಪ್ರದೇಶದಲ್ಲೇ ಹಿಂದಿ ಕಲಿಯದೆ ಉದ್ಯೋಗವಿಲ್ಲ ಎನ್ನುವ ಪರಿಸ್ಥಿತಿ ಹುಟ್ಟುಹಾಕಲಾಗುತ್ತಿದೆ. ಇನ್ನು ಶಾಲಾ ಮಕ್ಕಳನ್ನೂ ಬಿಡದೆ ಎಳೆವೆಯಿಂದಲೇ ಕಡ್ಡಾಯವಾಗಿ ಹಿಂದಿಯನ್ನು ಬೋಧಿಸಲಾಗುತ್ತಿದೆ.

ಸ್ವತಂತ್ರವೆಂದರೆ ಬಿಡುಗಡೆ ಮಾತ್ರವಲ್ಲ!

ಪರತಂತ್ರ ಅಂದರೆ ಬೇರೆಯವರ ಅಧೀನವಾಗಿರೋದು ಅಂತ ಅರ್ಥ. ಅಂದರೆ ಹೊರದೇಶದವರ ಅಡಿಯಾಳಾಗಿರುವುದು. ನಮ್ಮ ಬದುಕು ಮತ್ತು ಬದುಕಿನ ಪ್ರತಿ ನಡೆಯನ್ನು, ನಮ್ಮ ವ್ಯವಸ್ಥೆಗಳನ್ನು ರೂಪಿಸಿ, ನಿರ್ದೇಶಿಸಿ, ಪರಾಮರ್ಶಿಸುವವರು ಹೊರದೇಶದವರು. ಅಂದರೆ ಆಗ ಬ್ರಿಟೀಷರು. ಬ್ರಿಟೀಷರು ನಮ್ಮ ಮೇಲೆ ಸ್ಥಾಪಿಸಿದ್ದ ಎಲ್ಲ ಹಕ್ಕುಗಳನ್ನು ಬಿಟ್ಟುಕೊಟ್ಟು ಹೋದಕೂಡಲೆ ನಮಗೆ ಸಿಕ್ಕಿದ್ದುದು ಸ್ವತಂತ್ರ ಆಗಲಿಲ್ಲ. ಅದು ಬಿಡುಗಡೆ ಮಾತ್ರ. ಅವರು ಬಿಟ್ಟುಕೊಟ್ಟದ್ದು ಇದೀಗ ದಿಲ್ಲಿ ದೊರೆಗಳ ಪಾಲಾಗಿರುವಾಗ ಅದು ಮತ್ತೆ ಪರತಂತ್ರವೇ ಅಲ್ವಾ ಗುರು?

ನಮ್ಮ ಆಡಳಿತವೆಲ್ಲಾ ದಿಲ್ಲಿಯ ಹಿಡಿತದಲ್ಲಿ!

ಭಾರತ ಸಂವಿಧಾನದ ಆಧಾರದ ಮೇಲೆ ಆಡಳಿತದ ಅನುಕೂಲಕ್ಕಾಗಿ ಮೂರು ಪಟ್ಟಿಗಳನ್ನು ಮಾಡಲಾಗಿದೆ. ಮೊದಲ ಪಟ್ಟಿ Union list ಅಂದರೆ ಕೇಂದ್ರದ ಹಿಡಿತದ ಪಟ್ಟಿ. ಇದರಲ್ಲಿ 97 ವಿಷಯಗಳಿದ್ದರೆ, state list ಅಂದ್ರೆ ರಾಜ್ಯ ಪಟ್ಟಿಯಲ್ಲಿ 66 ವಿಷಯಗಳು ಇವೆ. ಇನ್ನೊಂದು ಕನ್ ಕರೆಂಟ್ ಪಟ್ಟಿ ಅಂತ ಇದೆ. ಅದರಡಿಯಲ್ಲಿ ರಾಜ್ಯ ಕಾನೂನು ಮಾಡಬಹುದಾದರೂ ಕೇಂದ್ರಕ್ಕೆ ಪರಮಾಧಿಕಾರವಿದೆ. ಈ ಪಟ್ಟಿಯಲ್ಲಿ 47 ವಿಷಯಗಳಿವೆ. ಅಂದರೆ ಒಟ್ಟು ಇರುವ 210 ವಿಷಯಗಳಲ್ಲಿ 66 ಮಾತ್ರ ನಮ್ಮ ಕೈಯ್ಯಲ್ಲಿ. ಉಳಿದ 144 ಕೇಂದ್ರದ ಕೈಯ್ಯಲ್ಲಿ. ಇದು ಅಂಕಿಗಳ ಲೆಕ್ಕಾಚಾರ ಅಷ್ಟೇ ಅಲ್ಲ. ಕೇಂದ್ರದ ಹಿಡಿತದಲ್ಲಿ ರಕ್ಷಣೆ, ವಿದೇಶಿ ಸಂಬಂಧಗಳ ತರಹದ ವಿಷಯ ಇರೋದೇನೋ ಸರಿ. ಈಗಿನ ವ್ಯವಸ್ಥೆಯಲ್ಲಿ ಪ್ರಮುಖವೂ ಪ್ರಮುಖವಲ್ಲದವೂ ಕೂಡಾ ಕೇಂದ್ರದ ಅಧೀನವೇ. ಒಂದು ತಮಾಶೆ ಅಂದ್ರೆ ಇರೋ 210ರಲ್ಲಿ 66 ಆದ್ರೂ ನಮ್ಮ ಕೈಯ್ಯಲ್ಲಿ ಇದೆ ಅಂತ ಖುಷಿ ಪಡೋಣ ಅನ್ನಕ್ಕೂ ಆಗಲ್ಲ. ಯಾಕಂದ್ರೆ ಆ ಅಧಿಕಾರ ಇರೋ ನಮ್ಮ ವಿಧಾನ ಸಭೆ, ವಿಧಾನ ಪರಿಷತ್ ಗಳು ಇರೋದು ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿ. ಪ್ರತಿ ನಿರ್ಧಾರಕ್ಕೂ ಹೈಕಮಾಂಡ್ ಅಂತ ಡೆಲ್ಲಿ ಕಡೆ ಇವು ನೋಡ್ತಿವೆ. ಇದರ ಅರ್ಥ ಏನು? ನಮ್ಮನ್ನು ಪೂರ್ತಿಯಾಗಿ ಆಳ್ತಿರೋದು ದೆಹಲಿ ಮಂದಿ. ಹ್ಯಾಗೇ ಅಂತೀರಾ?

ಕೇಂದ್ರ ಸರ್ಕಾರವೆಂಬ ಸೂತ್ರ-ದಾರ!

ಇಂದಿನ ಭಾರತದ ವ್ಯವಸ್ಥೆಯಲ್ಲಿ ಕನ್ನಡಿಗರು ನಮ್ಮ ನೆಲದಲ್ಲಿ ಬೇರೆ ಭಾಷಾ ಸಿನಿಮಾಗಳು, ಎಫ್.ಎಂಗಳು ಬೇಡ ಅಂತ ಹೇಳೋ ಹಾಗಿಲ್ಲ. ಬೇರೆ ಭಾಷೆ ಚಿತ್ರಗಳಿಗೆ ಹೆಚ್ಚು ತೆರಿಗೆ ಹಾಕಿ ನಮ್ಮದನ್ನು ಕಾಪಾಡ್ಕೋತೀವಿ ಅನ್ನೋ ಹಾಗಿಲ್ಲ. ಕೇಂದ್ರದ ಅಪ್ಪಣೆಯಿಲ್ಲದೆ ನಮ್ಮ ಊರಿನ ಕೆರೆಗಳ ಹೂಳು ಎತ್ತೋ ಹಾಗಿಲ್ಲ. ನಮ್ಮ ಜನಪ್ರತಿನಿಧಿಗಳು ನಮ್ಮವರೇ ಆಗಿರಬೇಕು ಅನ್ನೋ ಹಾಗಿಲ್ಲ. ವೆಂಕಯ್ಯ ನಾಯ್ಡು, ರಾಜೀವ್ ಚಂದ್ರಶೇಖರ್ ಥರದ ಕನ್ನಡಿಗರ ಹಿತದ ಬಗ್ಗೆ ಕಾಳಜಿಯನ್ನೇ ತೋರದ ಪರಭಾಷಿಕರು ಇಲ್ಲಿ ಚುನಾವಣೆಗೆ ನಿಂತರೂ, ಗೆದ್ದರೂ ಅದನ್ನು ನಾವು ತಡೆಯಲಾರೆವು. ನಮ್ಮ ವಿಮಾನ ನಿಲ್ದಾಣಕ್ಕೆ ಬೇಕಾದ ಹೆಸರು ಇಡೋ ಹಕ್ಕಿಲ್ಲ. ನಮ್ಮ ಬೆಂಗಳೂರನ್ನು ಬ್ಯಾಂಗಲೂರ್ ಅಲ್ಲ ಬೆಂಗಳೂರು ಅಂತ ಕರೀಬೇಕು ಅನ್ನೋಕ್ಕೂ ನಮಗೆ ಸ್ವತಂತ್ರ ಇಲ್ಲ. ನಮ್ಮೂರಲ್ಲಿ ಸಂಚಾರಿ ನಿಯಮ ಮುರಿಯೋರಿಗೆ ಎಷ್ಟು ದಂಡ ವಿಧಿಸಬೇಕು ಅನ್ನೋದಕ್ಕೂ ದಿಲ್ಲಿ ಅಪ್ಪಣೆ ಬೇಕು ಗುರು! ಹೀಗೆ ಪ್ರಮುಖವಾದ ಮತ್ತು ಪ್ರಮುಖವಲ್ಲದ ಎಲ್ಲ ವಿಷಯಗಳಲ್ಲೂ ನಾವು ಕೇಂದ್ರ ಸರ್ಕಾರದ ಅಪ್ಪಣೆಗೆ ಕಾಯಬೇಕು. ಅಂದರೆ ನಾವೀಗಲೂ ಪರಾಧೀನ!

ದೊಡ್ಡ ರಾಜ್ಯದೋರಿಗೆ ದೊಡ್ಡಪಾಲು

ಕೇಂದ್ರದಲ್ಲೂ ಇಲ್ಲಿನ ಪ್ರತಿನಿಧಿಗಳಿರ್ತಾರಲ್ಲಾ ಅಂದರೆ, ಇಂದಿನ ಭಾರತದ ವ್ಯವಸ್ಥೆಯಲ್ಲಿ ಅತಿಹೆಚ್ಚು ಸಂಸದರನ್ನು ದೆಹಲಿಗೆ ಕಳಿಸೋ ಉತ್ತರದ ದೇಶವೇ ಬಲಿಷ್ಟ. ಸಂಸತ್ತಿನಲ್ಲಿ ಒಂದೆರಡು ಸ್ಥಾನವಿರೋ ರಾಜ್ಯಗಳ ಹಿತರಕ್ಷಣೆ ಗೋವಿಂದ. ೩೯ ಸಂಸದರ ತಮಿಳುನಾಡಿನ ಮುಂದೆ ೨೮ ಸಂಸದರ ಕರ್ನಾಟಕ ಸದಾ ಬಲಹೀನ. ಪ್ರತಿ ವಿಷಯದಲ್ಲೂ ಸೋಲು. ೪೮ ಸಂಸದರ ಮಹಾರಾಷ್ಟ್ರದ ಬಾಯ್ಬಲ, ತೋಳ್ಬಲ, ಲಾಬಿಗಳ ಬಲದ ಮುಂದೆ ೨೮ ಸಂಸದರ ಕರ್ನಾಟಕ ಸದಾ ಮೂಲೆಗುಂಪು. ೨೮ ಸದಸ್ಯರ ಕರ್ನಾಟಕದ ಪಾಡೇ ಹೀಗಾದರೆ ಒಬ್ಬಿಬ್ಬ ಸಂಸದರನ್ನು ಹೊಂದಿರೋ ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶಗಳ ಥರದ ರಾಜ್ಯಗಳ ಪಾಡೇನು ಗುರು! ಸಂಸತ್ತಿನಲ್ಲಿ ಇವರ ಸಮಸ್ಯೆಗಳಿಗೆ ಸ್ಪಂದಿಸೋರು ಯಾರು?

ನಿಜವಾದ ಸ್ವತಂತ್ರ... ಅಧಿಕಾರ ವಿಕೇಂದ್ರಿಕರಣದಿಂದ ಸಾಧ್ಯ!

ನಮ್ಮ ದೇಶ ನಿಜವಾದ ಒಕ್ಕೂಟವಾಗಬೇಕಾದರೆ, ನಮಗೆ ನಿಜವಾದ ಸ್ವತಂತ್ರ ಸಿಗಬೇಕಾದರೆ ನಮ್ಮನ್ನು ನಮ್ಮನ್ನು ಆಳಿಕೊಳ್ಳುವ ಅಧಿಕಾರ ವಿಕೇಂದ್ರಿಕರಣ ಆಗಬೇಕು. ನಮ್ಮ ಅನುಕೂಲದ, ಏಳಿಗೆಗೆ ಬೇಕಾದ ವ್ಯವಸ್ಥೆಯ ನಿರ್ಮಾಣ ಮತ್ತು ನಿರ್ವಹಣೆ ನಮ್ಮ ಕೈಯಲ್ಲಿರಬೇಕು. ನಮ್ಮ ನಾಡಿನ ವೈವಿಧ್ಯತೆಯನ್ನು ಹಾಳುಗೆಡವುವ ಎಲ್ಲ ನೀತಿಗಳನ್ನು ಕೈಬಿಡಬೇಕು. ಹಿಂದಿ ಹೇರಿಕೆಯನ್ನು ಕೈ ಬಿಡಬೇಕು. ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ ಜಾರಿಯಾಗಬೇಕು. ನಮ್ಮ ಕಲಿಕೆ, ಉದ್ಯೋಗ, ಮನೋರಂಜನೆ, ಬದುಕು... ಎಲ್ಲವೂ ನಮ್ಮ ನಮ್ಮ ತಾಯ್ನುಡಿಯಲ್ಲಿ ದೊರಕುವಂತೆ ಆಗಬೇಕು. ಭಾರತ ದೇಶದ ಅಧಿಕೃತ ಸಂಪರ್ಕ ಭಾಷೆಯಾಗಿ ಎಲ್ಲ ಭಾರತೀಯ ಭಾಷೆಗಳಿಗೂ ಸಮಾನ ಸ್ಥಾನಮಾನ ಕೊಡಬೇಕು ಗುರು! ತಂತ್ರಜ್ಞಾನ ಮುಂದುವರೆದಿರೋ ಈ ದಿನಗಳಲ್ಲಿ ಇದು ಸುಲಭ ಸಾಧ್ಯ. ಆಯಾ ಪ್ರದೇಶಗಳಲ್ಲಿ ಆಡಳಿತ ಭಾಷೆ ಆಯಾ ಪ್ರದೇಶದ ಭಾಷೇನೆ ಆಗಬೇಕು. ಹಿಂದಿ ಪ್ರಚಾರಕ್ಕೆ ಪ್ರತಿವರ್ಷ ಸರ್ಕಾರ ಖರ್ಚು ಮಾಡುತ್ತಿರುವ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಣವನ್ನು ಎಲ್ಲ ಭಾಷೆಗಳ ಏಳಿಗೆಗಾಗಿ ಸಮಾನವಾಗಿ ಹಂಚಬೇಕು. ಆಗ ಭಾರತಕ್ಕೆ ಬಂದಿರುವ ಸ್ವಾತಂತ್ರ್ಯಕ್ಕೂ ಸಾರ್ಥಕತೆ ಸಿಗುತ್ತೆ ಗುರು! ಇಲ್ದಿದ್ರೆ ಹೊರದೇಶದ ಆಂಗ್ಲರ ಆಳ್ವಿಕೆಯಿಂದ ಹಿಂದಿ ಭಾಷಿಕರ ಆಳ್ವಿಕೆಗೆ ಬಿದ್ದ ಹಾಗಾಗುತ್ತದೆ ಅಷ್ಟೆ.

ನೆರೆಯವರೇ ಹೊರೆಯಾಗಿಸುವ ವ್ಯವಸ್ಥೆ!

ನೀರು ಬಿಡ್ತೀವಿ ಅಂತ ಹೇಳಿಯೋ ಹೇಳದೆಯೋ ಪುಸುಕ್ ಅಂತ ಲಕ್ಷಾಂತರ ಕ್ಯೂಸೆಕ್ನಷ್ಟು ನೀರು ಕರ್ನಾಟಕದೆಡೆ ಹರಿದುಬಿಟ್ರೆ ಇದು ಒಕ್ಕೂಟದ ವ್ಯವಸ್ಥೇಲಿರೋ ಎರಡು ರಾಜ್ಯಗಳ ನಡುವೆ ನಡೆದಿರೋ ಘಟನೆಯೋ ಅಥ್ವಾ ಯುದ್ಧದಲ್ಲಿರೋ ಎರ್ಡು ದೇಶಗಳ ನಡುವೆ ನಡೆದಿರೋ ಘಟನೆಯೋ ತಿಳ್ಯಲ್ಲ! ಅಲ್ಲ, ರಾಜ್ಯಗಳ ಒಕ್ಕೂಟದ ಬುನಾದಿಯ ಮೇಲೇ ನಿಂತಿರುವ ಈ ಭಾರತದ ವ್ಯವಸ್ಥೇಲಿ ಹೀಗೇ ಮುಂದುವರಿದರೆ ಹೇಗೆ ಗುರು? ತಮ್ಮ ರಾಜ್ಯದಲ್ಲಿ ಹುಟ್ಟಿ ಹರಿಯೋ ನೀರು ಹೆಚ್ಚಿತು ಅಂದ್ರೆ ಪಕ್ಕದ ರಾಜ್ಯದ ಮೇಲೆ ಚೆಲ್ಲಿಬಿಡೋದೇ ಸರಿ, ಈ ಬಗ್ಗೆ ಮುನ್ಸೂಚನೆ ನೀಡುವ ಅವಶ್ಯಕತೆಯೇ ಇಲ್ಲ ಅನ್ನೋ ಈ ನೆರೆ ರಾಜ್ಯದ ಮುಖ್ಯಮಂತ್ರಿಗಳ ಮಾತು ಕೇಳಿದರೆ ಇದ್ಯಾಕೋ ಒಂದಿಷ್ಟೂ ಸರಿ ಇಲ್ಲ ಅನ್ಸತ್ತೆ ಗುರು!


ಒಕ್ಕೂಟದಲ್ಲಿ ವಿಕೋಪ ನಿರ್ವಹಣೆ ಹೇಗೆ?

ಭಾರತದಲ್ಲಿ ನೂರಾರು ನದಿಗಳಿದ್ದು, ಸುಮಾರು ಎಲ್ಲಾ ನದಿಗಳೂ ಒಂದು ರಾಜ್ಯದಲ್ಲಿ ಹುಟ್ಟಿ ಮತ್ತೊಂದಿಷ್ಟು ರಾಜ್ಯಗಳ ಮೂಲಕ ಹರಿದು, ಕೊನೆಗೆ ಸಮುದ್ರ ಸೇರುವುದು ಸಾಮಾನ್ಯ ಜ್ಞಾನವೇ ಅನ್ಬೋದು. ಹೀಗಿರುವಾಗ, ಒಂದು ರಾಜ್ಯದಲ್ಲಿ ಮಳೆ ಹೆಚ್ಚಾಗಿ ಅಲ್ಲಿನ ನದಿಯಲ್ಲಿ ನೀರು ಹೆಚ್ಚಾಗ್ತಾ ಹೋದ್ರೆ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಬಿಡೋದು ಸಹಜವೇ. ಆದರೆ ಈ ಅಣೆಕಟ್ಟಿನಿಂದ ಹೊರಟ ನೀರು ನೆರೆ ರಾಜ್ಯದೊಳಗೆ ಹೋಗಿ ಜನಜೀವನ ನಾಶ ಮಾಡಿದ್ರೂ ಪರ್ವಾಗಿಲ್ಲ ಅನ್ನೋ ನಿಲುವು ಇಂತಹ ರಾಜ್ಯಗಳ ಒಕ್ಕೂಟಕ್ಕೆ ಸರಿಹೊಂದಲ್ಲ ಗುರು! ನೀರು ಬಿಡುವುದರ ಬಗ್ಗೆ ಸೂಚನೆ ಕೊಟ್ಟಿದ್ದೇ ಆದ್ರೂ ಬಿಡಲಾಗುವ ನೀರಿನ ಗಾತ್ರ, ಗತಿ, ದಿನದಲ್ಲಿ ಯಾವ್ಯಾವ ಸಮಯದಲ್ಲಿ, ಮತ್ತು ಎಷ್ಟು ಹೊತ್ತು ಇಂತೆಲ್ಲಾ ಮಾಹಿತಿಯನ್ನೇ ಕೊಡದೇ ಸುಮ್ನೆ ಹಂಗೇ ನೀರು ಬಿಟ್ಬುಟ್ಟು ನೀವು ಎಲ್ಲಾದ್ರು ಹಾಳಾಗೋಗಿ ಅಂತ ಹೇಳೋದಕ್ಕೆ ಕರ್ನಾಟಕಕ್ಕೇನು ಒಕ್ಕೂಟದಲ್ಲಿ ಎಣಿಕೆಯೇ ಇಲ್ವಾ? ಇಂತಹ ಸಂದರ್ಭದಲ್ಲಿ ಕೇಂದ್ರ ಏನೂ ಹೇಳದೇ ಕುಳ್ತಿರೋದು ಎಷ್ಟು ಅನ್ಯಾಯ ಗುರು? ನೀರು ಬಿಡೋದ್ರಿಂದ ಯಾವುದೇ ಒಂದು ರಾಜ್ಯಕ್ಕೆ ಹಾನಿಯಾಗದಂತೆ ನೋಡ್ಕೊಬೇಕಲ್ವ? ಅದೇ ನಮ್ಮ ಅಲಮಟ್ಟಿಯ ಎತ್ತರ ಒಂದಿಷ್ಟು ಏರಿಸಲು ಹೋದಾಗ ಮಹಾರಾಷ್ಟ್ರದ ಪರವಾಗಿ ನಿಂತ ಕೇಂದ್ರ ಸರ್ಕಾರ ಈಗ ನಮ್ಮ ಬೆಳಗಾವಿಯಲ್ಲಿ ಪ್ರವಾಹವೇ ಬಂದ್ರೂ ಸುಮ್ನೆ ಕೂತಿರೋದು ಖಂಡನೀಯ ಗುರು!

ಸೌಹಾರ್ದತೆಯೇ ಈ ಒಕ್ಕೂಟಕ್ಕೆ ಬುನಾದಿ


ನದಿ ನೀರಿನ ಬಳಕೆ/ಹಂಚಿಕೆಯೇ ಇರಲಿ, ವಿದ್ಯುತ್ತಿನ ಹಂಚಿಕೆಯೇ ಇರಲಿ, ಪರಿಹಾರ ಹಣ ಹಂಚಿಕೆಯೇ ಇರಲಿ, ಅಥವಾ ಇನ್ಯಾವುದೇ ಅಂತರ-ರಾಜ್ಯ ಸಂಬಂದಿತ ವ್ಯವಸ್ಥೆಯ ಬಗ್ಗೆ ಕಣ್ಣ ಹಾಯಿಸಿ ನೋಡಿದ್ರೆ ರಾಜ್ಯಗಳ ಒಕ್ಕೂಟವಾದ ಭಾರತದಲ್ಲಿ ಅದ್ಯಾಕೋ ಒಂದಿಷ್ಟೂ ಅರ್ಥವಿಲ್ಲ ಅಂತ್ಲೇ ಕಾಣಲು ಶುರುವಾಗಿದೆ. ಮೇಲೆ ಹೇಳಿದಂತ ಯಾವುದೇ ವಿಷಯದಲ್ಲಿ ಎರಡು ಅಥವಾ ಹೆಚ್ಚು ರಾಜ್ಯಗಳ ನಡುವೆ ಸಂಬಂಧಗಳನ್ನು ಚೆನ್ನಾಗಿ ಇಡೋದ್ರಲ್ಲೇ ಆಗ್ಲಿ, ಎರ್ಡೂ ರಾಜ್ಯಗಳ ಏಳ್ಗೆಗೆ ಪೂರಕವಾದ ನಿರ್ಧಾರ ತೊಗೊಳೋದ್ರಲ್ಲಾಗ್ಲಿ, ಅಥ್ವಾ ಇದಕ್ಕೆ ಬೇಕಾದ ನಿಯಮಾವಳಿ ರೂಪಿಸೋದ್ರಲ್ಲಾಗ್ಲಿ ಕೇಂದ್ರ ಇದುವರೆಗೂ ನಿದ್ದೆ ಹೊಡೀತಿರೋದು ಪ್ರತಿ ಉದಾಹರಣೆಯಲ್ಲೂ ಕಾಣ್ತಿದೆ ಗುರು! ಹೀಗೆ ಮಾಡಿದ್ರೆ ಒಕ್ಕೂಟ ಅನ್ನೋದು ನಿಂತೀತಾ? ರಾಜ್ಯಗಳ ನಡುವಿನ ಸೌಹಾರ್ದತೆ ಉಳಿದೀತಾ? ಕೇಂದ್ರ ಸರ್ಕಾರ ಈ ಅಂತರ-ರಾಜ್ಯ ಸೌಹಾರ್ದತೆ ಬೆಳ್ಸೋದ್ರ ಮೇಲೆ ನಿಗ ಹರಿಸ್ಬೇಕಾಗಿದೆ. ಅದು ನದಿ ನೀರುಗಳ ಹಂಚಿಕೆಯಲ್ಲೇ ಇರ್ಲಿ, ಪ್ರಕೃತಿ ವಿಕೋಪದ ಸಮಯದ ಯೋಜನೆಯೇ ಇರ್ಲಿ, ಇನ್ಯಾವುದೇ ಅಂತರ-ರಾಜ್ಯ ವಿಷಯವೇ ಇರ್ಲಿ ಇದಕ್ಕೆ ಒಂದು ಗಟ್ಟಿಯಾದ ನಿಯಮಾವಳಿ ರೂಪಿಸೋದು ಕೇಂದ್ರ ಸರ್ಕಾರದ ಆದ್ಯತೆಯಾಗಬೇಕಿದೆ ಗುರು.

ಕನ್ನಡ ನಾಡು: ಬರೀ ಚಿನ್ನದ ಬೀಡಲ್ಲ, ಚಿನ್ನದಂಥಾ ಜನರ ಬೀಡು!

ಕನ್ನಡಿಗ್ರು, ನಾವೇನಾ ಇಂಗಿದ್ದೋರು ಅಂತ ಅಚ್ಚರಿ ಪಡೋ ಸುದ್ದಿ ಡೆಕ್ಕನ್-ಹೆರಾಲ್ಡಲ್ಲಿ ಬಂದೈತೆ ಗುರು! ನಮ್ಮೋರು ಅಟ್ಟಿ ಗಣಿಯೊಳಕ್ಕೆ ಇಳ್ಯಕ್ ಸುರು ಅಚ್ಕೊಂಡು ಎಲ್ಡು ಸಾವ್ರ ವರ್ಸಕ್ಕಿಂತ ಜಾಸ್ತಿ ಆಯ್ತಂತೆ. ಬಾಳ ಇಂದೆ ಅಂದ್ರೆ ಕ್ರಿಸ್ತ ಉಟ್ಟಕ್ಕೂ ನಲವತ್ತು ವರ್ಸ ಮೊದ್ಲು ಅಟ್ಟಿನಲ್ಲಿ ಚಿನ್ನ ತೆಗ್ಯಕ್ ಮೊದಲಾದ್ರಂತೆ. ಆಗ ನಮ್ಮೋರು ಬಳುಸ್ತಿದ್ದ ತಂತ್ರಗ್ನಾನ ನೋಡ್ಬುಟ್ಟು ಪರಪಂಚದ ಅತಿ ಅಳೇ ನಾಗರೀಕತೆ ಅಂತ ಕರುಸ್ಕೊತಾ ಇರೋ ಗ್ರೀಕ್ ಜನ್ರು ತಮ್ಮ ಗಣಿಗಾರಿಕೆ ಇದಾನಾನ ಸುದಾರುಸ್ಕೊಂಡ್ರಂತೆ ಗುರು! ಈ ಸುದ್ದಿ ಕೇಳ್ತಿದ್ರೆ ಒಳ್ಳೆ ಕರದೆಮ್ಮೆ ಅಸಿ ಆಲು ಕುಡ್ದಸ್ಟ್ ಕುಸಿ ಆಯ್ತುದೆ.
ಇರಿಯರು ಸಾದಿಸಿದ್ದ ಇರಿಮೆ

ನಾವು ಇವತ್ತೆಲ್ಲಾ ನಮ್ಮಲ್ಲಿ ಗಣಿಗಾರಿಕೆ ಮಾಡಬೇಕು ಅಂದ್ರೆ ಜಪಾನಿನ ತಂತ್ರಗ್ನಾನ, ಜರ್ಮನಿ ತಂತ್ರಗ್ನಾನ ಅಂತೆಲ್ಲಾ ಅವೇ ಗ್ರೇಟು ಅಂತ ಅವ್ರುನ್ನೆ ಕರ್ದು ಗಣಿಗಾರಿಕೆ ಮಾಡುಸ್ತೀವಿ. ಆದ್ರೆ ಆವತ್ತು ಹೊರ ದೇಸದವ್ರೂ ನಮ್ಮುನ್ ನೋಡಿ ಕಲೀತಿದ್ರು ಅನ್ನದ್ ಕುಸಿ ಇಸ್ಯಾ ಅಲ್ವಾ? ಆ ಮಟ್ಟಕ್ಕೆ ನಮ್ಮೋರು ಇರಿಮೆ ಸಾದಿಸಿದ್ರು ಅಂದ್ರೆ ನಮ್ಮ ಕನ್ನಡದೋರು ಪರಪಂಚದಾಗೇ ದೊಡ್ಡು ಜನ ಅಲ್ವುರಾ? ಇಂತಾ ಇರಿಮೆ ಬರೀ ಅವತ್ತಿನ ಗಣಿಗಾರಿಕೆ ಒಂದ್ರಲ್ಲೇ ಅಲ್ಲಾ, ಕಲ್ಲು ಕೆತ್ತೋದ್ರಲ್ಲಿ, ಬೆಳೆ ಬೆಳ್ಯೋದ್ರಲ್ಲಿ, ಬೆಳೆಗೆ ನದೀ ನೀರು ಅರಿಸೋದ್ರಲ್ಲಿ, ಅರಮನೆ ಕಟ್ಟೋದ್ರಲ್ಲಿ, ಬೇಸ್ಗೆ ಬಿಸ್ಲು ಸುಡದಂಗೆ ಗ್ವಾಡೆ ಒಳಿಕ್ಕೇ ನೀರ್ ಆಯುಸ್ಕೊಂಡು ತಂಪು ಮಾಡ್ಕೊಳೊದ್ರಲ್ಲಿ ನಮ್ಮೋರು ಎತ್ತುದ್ ಕೈಯ್ಯಿ ಗುರು! ಇಂತಾ ಸುದ್ದಿ ಕೇಳ್ದಾಗೆಲ್ಲಾ, ನಮ್ಮ ಮೈಯ್ಯಾಗೆ ಅರಿತಿರೋ ರಗುತ ಬರೀ ಕೆಂಪು ನೀರಲ್ಲ, ಅದು ದೊಡ್ಡ ದೊಡ್ಡ ಸಾದ್ನೆಗೆ ಕಾರಣ ಆಗಿರೋದು ಅಂತ ಒಸಾ ಉಮ್ಮಸ್ಸು ಉಟ್ಟುತ್ತೆ ಗುರು!

ಕೊನೆಹನಿ: ಆವತ್ತು ಇಂಗೆಲ್ಲಾ ನಮ್ಮೋರು ದೇಸ ಇದೇಸಗಳೆಲ್ಲಾ ಅನುಕರ್ಸೋ ಸಾದ್ನೆ ಮಾಡಿ, ಅಲ್ಲಿಂದೆಲ್ಲ ಬರೋ ಜನ್ರುಗೆ ಏಳಿ ಕೊಡ್ತಿದ್ರು ಅಂದ್ರೆ ಅವುರೆಲ್ಲಾ ಇಂಗ್ಲಿಸು ಕಲ್ತಿರಲಿಲ್ಲಾ ಗುರು! ಅಸಲ್ಗೆ ಇಂಗ್ಲಿಸು ಉಟ್ಟೇ ಇರಲಿಲ್ಲ.

ಶಾಸ್ತ್ರೀಯ ಸ್ಥಾನ! ತಮಿಳರ ಅಡ್ಡಗಾಲು ಯಾಕಣ್ಣಾ?

ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡೋದಕ್ಕೆ ನೂರಾರು ಆತಂಕಗಳು ಗುರು! ಮೊದಲಿಗೆ ನಾವು ಶಾಸ್ತ್ರೀಯ ಭಾಷೆ ಅಂದ್ರೇನು? ಇದ್ರಿಂದ ಸಿಗೋ ಅನುಕೂಲಗಳೇನು? ಅಂತ ಅರ್ಥ ಮಾಡ್ಕೊಂಡು ಕೇಂದ್ರ ಸರ್ಕಾರಾನ ಕೇಳೊ ಮೊದಲೆ ಡಿ.ಎಂ.ಕೆಯೋರು ತಮ್ಮ ಚುನಾವಣಾ ಪ್ರಣಾಳಿಕೆಯೊಳಗೆ ಇದನ್ನು ಸೇರ್ಸಿದ್ರು. ಕಾಂಗ್ರೆಸ್ ಜೊತೆ ಸರ್ಕಾರ ಮಾಡ್ಬೇಕಾದಾಗ ಡಿಎಂಕೆಯೋರು ಈ ವಿಷ್ಯಾನ ಬೇಡಿಕೆಯಾಗಿಟ್ಟು ಲೋಕಸಭೆಯ ಅಧಿವೇಶನದಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಗಿಟ್ಟುಸ್ಕೊಂಡೂ ಬಿಟ್ರು. ಜೊತೆಗೆ ಇನ್ನೊಂದು ವರ್ಷ ಇನ್ಯಾವ ಭಾಷೆಗೂ ಅಂಥ ಸ್ಥಾನ ಸಿಗದಂಗೆ ನೋಡ್ಕೊಳೋದ್ರಲ್ಲಿ ಯಶಸ್ವಿಯೂ ಆದ್ರು. ಮರುವರ್ಷದಲ್ಲಿ ಸಂಸ್ಕೃತಕ್ಕೂ ಇಂಥಾ ಸ್ಥಾನಮಾನ ಕೊಡಲಾಯಿತು.
ಆಗ ಕನ್ನಡಿಗರೆಂಬ ಕುಂಭಕರ್ಣರು ಎದ್ದು ’ನಮಗೂ ಕೊಡಿ... ನಮಗೂ ಕೊಡಿ’ ಅಂತಾ ಒತ್ತಾಯ ಮಾಡಕ್ಕೆ ಶುರು ಹಚ್ಕೊಂಡ್ರು.

ಭಾಷಾತಜ್ಞರ ಸಮಿತಿ

ಕನ್ನಡದ ಜೊತೆಗೆ ತೆಲುಗೂ ಕೂಡಾ ಮನವಿ ಸಲ್ಲಿಸಿದಾಗ ಭಾರತ ಸರ್ಕಾರ ಒಂದು ಸಮಿತಿ ಮಾಡಿ ಅದ್ರಲ್ಲಿ ಭಾಷಾ ತಜ್ಞರನ್ನು ಕೂಡಿಸಿ, ಯಾವುದೇ ಭಾಷೇನ ಶಾಸ್ತ್ರೀಯ ಅನ್ನಕ್ಕೆ ಇರಬೇಕಾದ ಮಾನದಂಡಾನ ನಿಶ್ಚಯ ಮಾಡಿ ಯಾವ ಭಾಷೆ ಪೂರೈಸುತ್ತೆ ಅಂತ ತೀರ್ಮಾನ ಮಾಡಿ ಅಂತು. ಇಂಥಾ ಯಾವ ನಿಬಂಧನೇನೂ ತಮಿಳಿಗೆ ಇಟ್ಟಿರಲಿಲ್ಲ ಅನ್ನೋದು ಸೋಜಿಗದ ಸಂಗತಿ. ಆ ಸಮಿತಿಯೋರು ಮೊದಲು ಸಾವಿರ ವರ್ಷಗಳ ಹಳಮೆ ಇರಬೇಕು ಅನ್ನೋ ಒಂದು ನಿಬಂಧನೆ ಹಾಕುದ್ರು.. ಹೌದೇನ್ರೀ, ಇಕಾ ತಕ್ಕಳ್ಳಿ, ಕನ್ನಡದ ಕವಿರಾಜ ಮಾರ್ಗ 850 ರ ಆಜುಬಾಜೂದು ಅಂತ ಕನ್ನಡದೋರಂದ್ರು. ಹೌದಾ... ಹಂಗಾರೆ ಸಾವಿರದೈನೂರು ವರ್ಷದ ಹಳಮೆ ಇರಬೇಕು ಅನ್ನೋ ತಿದ್ದುಪಡಿ ಮಾಡುದ್ರು ಆಗ. ಕನ್ನಡ ತೆಲುಗು ಎರಡೂ ಭಾಷೆಗಳ ಹಳಮೆಯನ್ನು ಸಾಧಿಸಿ ಆ ಸಮಿತಿ ಮುಂದೆ ಇಡಲಾಯಿತು. ಮೊನ್ನೆ ಮೊನ್ನೆ ಈ ಸಮಿತಿ ತನ್ನ ಕಡೇ ಸಭೆ ಸೇರಿ ತೀರ್ಮಾನ ಪ್ರಕಟ ಮಾಡ್ತಾರೆ ಅನ್ನೋ ಹೊತ್ತಿಗೆ ತಮಿಳುನಾಡಿನ ಹೈಕೋರ್ಟ್ ಅಂಗಳದಿಂದ ಸಮಿತೀನೆ ಸರಿಯಿಲ್ಲ ಅಂತ ವಿಶ್ವ ತಮಿಳು ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ (?) ತಕರಾರು ಅರ್ಜಿಯ ಸದ್ದು ಕೇಳಿಬಂತು.

ತಮಿಳರು ಯಾಕೆ ಅಡ್ದಗಾಲು ಹಾಕ್ತಿದಾರೆ?

ತಜ್ಞರ ಸಮಿತಿಯೇ ಇರಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕವೇ ಇರಲಿ, ಕೇಂದ್ರ ಸರ್ಕಾರದ ಮೂಲಕವೇ ಇರಲಿ ಕನ್ನಡಕ್ಕೆ ಇಂಥಾ ಸ್ಥಾನಮಾನ ಸಿಕ್ಕದೇ ಇರಲಿ ಅಂತ ತಮಿಳರು ಯಾಕೆ ಕ್ಯಾತೆ ತೆಗೀಬೇಕು? ಸಂಸ್ಕೃತ ಭಾಷಾ ಬೆಳವಣಿಗೆಗೆ ಅಂತ ಮುನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಅನುದಾನ ನೀಡ್ತಾರಲ್ಲಾ, ಅಂಥಾ ಅನುದಾನ ತಮಿಳಿಗೂ ನೀಡಿ, ಯಾಕಂದ್ರೆ ಈಗ ಇವೆರಡೂ ಶಾಸ್ತ್ರೀಯ ಭಾಷೆಗಳು ಅಂತ ಕೇಂದ್ರದ ಮುಂದೆ ತಮಿಳರು ವಾದ ಇಟ್ಟಾಗ ಕೇಂದ್ರ ಇಲ್ಲಾ ಅನ್ನದೆ ನೀವೂ ಕೂಡಾ ಸೂಕ್ತ ಯೋಜನೆಗಳ ಜೊತೆ ಬನ್ನಿ ಪರಿಗಣುಸ್ತೀವಿ ಅಂದಿದಾರೆ. ಈಗ ಕನ್ನಡಕ್ಕೂ, ತೆಲುಗಿಗೂ ಅಂಥಾ ಸ್ಥಾನಮಾನ ಕೊಟ್ರೆ ಅವ್ರೂ ಅಷ್ಟೇ ದೊಡ್ಡ ಅನುದಾನಕ್ಕೆ ಹಕ್ಕುದಾರರಾಗಲ್ವೇ? ಅಥ್ವಾ ಭಾಷಾ ಬೆಳವಣಿಗೆಗೆ ಅಂತ ಕೊಡೋ ಹಣ ಇವುಗಳ ಜೊತೆ ಹಂಚಕೋ ಬೇಕಾಗುತ್ತೆ ಅಂತಾ ಸಂಕಟಾನೆ ಇಂಥಾ ವಿರೋಧಕ್ಕೆ ಕಾರಣ ಅನ್ನೋ ಮಾತು ಚಾಲ್ತಿಯಲ್ಲಿದೆ ಗುರು!
ಭಾರತ ಒಕ್ಕೂಟ ಮತ್ತು ಸಮಾನತೆ

ಭಾರತ ಒಕ್ಕೂಟದಲ್ಲಿ ಸಮಾನತೆ ಎನ್ನೋದು ಮರೀಚಿಕೆ ಆಗೋದ ಹಾಗೆ ಕಾಣ್ತಿದೆ ಗುರು! ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಾಗ ಇಲ್ಲದ ನಿಬಂಧನೆಗಳು, ಸಮಿತಿಗಳು ಕನ್ನಡಕ್ಕೆ ನೀಡುವಾಗ ಯಾಕೆ? ತಮಿಳು ಯಾವ ನಿಬಂಧನೆಗಳನ್ನು ಪೂರೈಸುತ್ತೋ ಅಂಥದ್ದನ್ನು ಮಾತ್ರಾ ಬೇರೆ ಭಾಷೆಗಳಿಗೆ ಯಾಕೆ ಹಾಕಿದ್ದಾರೆ? ಭಾಷಾ ಹಳಮೆನ ಯಾಕೆ ಮೂರು ಸಾವಿರ ವರ್ಷ ಮಾಡದೆ ಒಂದೂವರೆ ಸಾವಿರ ವರ್ಷ ಮಾಡುದ್ರು ಅಂದ್ರೆ ತಮಿಳು ಬರೀ 1500 ವರ್ಷ ಅಷ್ಟೇ ಹಳೇದು ಅದಕ್ಕೆ ಅಂದಂಗಾಯ್ತಲ್ಲ! ಇಷ್ಟಕ್ಕೂ ತಮಿಳುನಾಡಿನ ಹೈಕೋರ್ಟಿನಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬಾರದು ಅನ್ನೋ ತಕರಾರು ಅರ್ಜಿ ವಿಚಾರಣೆಗೆ ಬರುತ್ತೆ, ಆ ಕಾರಣಕ್ಕೆ ಸಮಿತಿಯ ತೀರ್ಮಾನ ಪ್ರಕಟ ಆಗಲ್ಲ ಅನ್ನೋದು ನಮ್ಮ ವ್ಯವಸ್ಥೆ ಹೇಗಿದೆ ಅನ್ನೋದನ್ನು ಎತ್ತಿ ತೋರುಸುತ್ತೆ ಗುರು!

ನಾಡಿನ ಕನ್ನಡಿಗಳನ್ನು ಹಂಚೋಣ ಬನ್ನಿ!

ಕೇಂದ್ರ ಸರ್ಕಾರಕ್ಕೆ ಅಂಚೆ ಚೀಟಿ ಸಲಹಾ ಸಮಿತಿಯು ಇತ್ತೀಚೆಗೆ ೨೦೦೮ರ ಸಾಲಿನ ಅಂಚೆ-ಚೀಟಿಗಳ ಪಟ್ಟಿ ಸೂಚಿಸಿದೆ. ಇದ್ರಲ್ಲಿ ಕನ್ನಡಿಗರು ಖುಷಿ ಪಡುವಂತ ಇಸ್ಯ ಇದೆ ಗುರು! ಈ ಬಾರಿ ಹೊರ ಬರ್ತಿರೋ ಅಂಚೆ-ಚೀಟಿಗಳಿಗೆ ಕನ್ನಡದ ಮೇರುನಟ ರಾಜ್ ಅವರನ್ನು ಮತ್ತು ಬೆಂಗಳೂರಲ್ಲಿರೋ ಭಾರತೀಯ ವಿಜ್ಞಾನ ಮಂದಿರಾನ ಆಯ್ಕೆ ಮಾಡಿದಾರೆ. ಆದರೆ ಭಾರತದ ಒಕ್ಕೂಟದಲ್ಲಿ ಕರ್ನಾಟಕಕ್ಕೆ ಈ ರೀತಿ ಎಷ್ಟು ಬಾರಿ ಅಂಚೆ-ಚೀಟಿಗಳ ಒಪ್ಪಿಗೆ ಸಿಕ್ಕಿದೆ? ಎಷ್ಟು ಅಂಚೆ-ಚೀಟಿಗಳು ಕರ್ನಾಟಕವನ್ನು ಪ್ರತಿನಿಧಿಸಿವೆ? ೬೦ ವರ್ಷಗಳಲ್ಲಿ ಹೊರಬಂದಿರೋ ೨೦೦೦ಕ್ಕಿಂತ್ಲೂ ಹೆಚ್ಚು ಅಂಚೆ-ಚೀಟಿಗಳಲ್ಲಿ ಕರ್ನಾಟಕನ ಪ್ರತಿನಿಧಿಸೋ ಚೀಟಿಗಳು ಕೇವಲ ೨೭!


ಅರ್ಹತೆ ಇದ್ರೂ ಹೋರಾಡ್ಬೇಕು. ಹೋರಾಡಿದ್ರೂ ಗೆರೆ ಇರ್ಬೇಕು!

ಭಾರತದ ಅಂಚೆ-ಚೀಟಿ ಇತಿಹಾಸದ ಮೇಲೊಂದು ಕಣ್ಣು ಹಾಯಿಸಿ ನೋಡಿದ್ರೆ, ಅದ್ರಲ್ಲೂ ಗಣ್ಯರ ಜ್ಞಾಪಕಾರ್ಥವಾಗಿ ಹೊರಡಿಸಿರೋ ಅಂಚೆ-ಚೀಟಿಗಳ ಲೆಕ್ಕ ನೋಡಿದ್ರೆ, ನಮ್ಮ ನಾಡಿನಲ್ಲಿ ಅಂಚೆ-ಚೀಟಿಗೆ ಲಾಯಕ್ಕಾದ ಉದಾಹರಣೆಯೇ ವಿರಳ ಅನ್ನೋ ಸಂದೇಶ ಕಾಣತ್ತೆ! ಬೇರೆ ರಾಜ್ಯಗಳೊಡನೆ ಹೋಲಿಸಿದ್ರೆ ನಮ್ಗೆ ಸಿಕ್ಕಿರೋದು ಬೆಣ್ಣೆ ಹೆಸ್ರಲ್ಲಿ ಸುಣ್ಣವೇ ಗುರು! ಅಲ್ಲಿ ಇಲ್ಲಿ, ಅದೂ ಕನ್ನಡ ಪರ ಸಂಘಟ್ನೆಗಳ ಒತ್ತಾಯಕ್ಕೆ ಒಂದೋ ಎರ್ಡೋ ಅಂಚೆ-ಚೀಟಿ ಹೊರಬಂದಿವೆ. ಅಂಚೆ-ಚೀಟಿಯ ವಸ್ತು ಆಯ್ಕೆ ನಿಯಮಗಳ ಪ್ರಕಾರ ಅರ್ಹರಾದ ಗಣ್ಯರೇ ಇರ್ಲಿ, ಅಥ್ವಾ ಒಳ್ಳೆಯ ಜಾಗ ಮತ್ತು ನೈಸರ್ಗಿಕ ಸಂಪತ್ತಾಗ್ಲಿ ಕರ್ನಾಟಕದಲ್ಲೇನು ಕಡಿಮೆ? ಇಷ್ಟೆಲ್ಲಾ ಇದ್ರೂ ಪ್ರತಿ-ವರ್ಷ ಅಂಚೆ-ಚೀಟಿ ಹೊರಡಿಸೋ ಮುನ್ನ ಕನ್ನಡಿಗರು ನಮ್ಮ ನಾಡಿನ ಚೀಟಿ ಬರ್ಲಿ... ಬರ್ಲಿ... ಅಂತ ಒತ್ತಾಯ ಮಾಡ್ಬೇಕಾಗಿದೆ. ಇದು ಕನ್ನಡ ನಾಡಿನ ಚುನಾಯಿತ ಪ್ರತಿನಿಧಿಗಳಲ್ಲಿ ಮತ್ತು ರಾಜ್ಯದ ಅಂಚೆ ಇಲಾಖೆಯ ಪ್ರಮುಖರಲ್ಲಿ ಕರ್ನಾಟಕದ ಹಿತಾಸಕ್ತಿಯ ಕೊರತೇನ ತೋರ್ಸೋದಲ್ದೆ ಅಂಚೆ-ಚೀಟಿ ವ್ಯವಸ್ಥೆಯ ನ್ಯೂನತೆಯನ್ನೂ ಬಿಂಬಿಸ್ತಾ ಇದೆ.

ಚೀಟಿ ಬರ್ಬೇಕು, ಆದ್ರೆ ಹೇಗಿರ್ಬೇಕು?

ರಾಜ್ ಮುಖ ಇರೋ ಅಂಚೆ-ಚೀಟಿ ಬರ್ತಿರೋದ್ರಿಂದ ನಮಗೆ ಖುಷಿಯಂತೂ ಆಗೋದೇ. ಆದ್ರೆ ಕರ್ನಾಟಕಕ್ಕೆ ಹೆಮ್ಮೆ ತರುವ ಈ ಅಂಚೆ-ಚೀಟಿ ಕೇವಲ ಜ್ಞಾಪಕಾರ್ಥಕದ ನಮೂನೆ ಚೀಟಿಯಾಗದೇ, ನಿಜವಾಗ್ಲೂ ಬಳಕೆಗೆ ಬರುವಂತ ಚೀಟಿ ಆಗ್ಬೇಕು. ಅಂಚೆ ಇಲಾಖೆಯ ನಿಯಮದ ಪ್ರಕಾರ ಜ್ಞಾಪಕಾರ್ಥಕ್ಕೆ ಅಂತ ಹೊರಬರೋ ಚೀಟಿಗಳು ದಿನ-ನಿತ್ಯದ ಉಪಯೋಗಕ್ಕೆ ಬರೋಲ್ವಂತೆ. ಅವು ಕೇವಲ ಸಂಗ್ರಹಕ್ಕೆ ಅಂತ್ಲೇ ಮುದ್ರಿತವಾಗತ್ವಂತೆ! ನಾಡಿನ ಗಣ್ಯರ ಮತ್ತು ನಾಡಿನ ಸಿರಿ-ಸಂಪತ್ತುಗಳ ಬಗ್ಗೆ ಜನರಿಗೆ ತಿಳ್ಸೋಕ್ಕೆ ಒಳ್ಳೇ ಮಾಧ್ಯಮ ಈ ಅಂಚೆ-ಚೀಟಿ ಆಗಿರೋವಾಗ ಚೀಟೀನ ಪುಸ್ತಕದೊಳ್ಗೇ ಇರಿಸೋ ಈ ನಿಯಮ ಯಾರಿಗ್ ಬೇಕು ಗುರು? ನಿಜ್ವಾಗ್ಲೂ ಡಾ. ರಾಜ್ ಅವರ ಹೆಸ್ರಲ್ಲಿ ಬರೋ ಅಂಚೆ-ಚೀಟಿ ಒಂದು ರುಪಾಯಿಂದ ಹಿಡಿದು ಅತಿ ಹೆಚ್ಚಿನ ಮೌಲ್ಯದ ಚೀಟಿವರೆಗೂ ಹೊರಬರ್ಬೇಕು, ದೇಶದೆಲ್ಲೆಡೆ ಸಿಗೋ ಹಾಗೂ ಆಗ್ಬೇಕು. ಹೀಗೆ ಮಾಡೋದ್ರಿಂದ ಬೇರೆ ರಾಜ್ಯದೋರೂ ಕರ್ನಾಟಕದ ಗಣ್ಯರ ಬಗ್ಗೆ ತಿಳ್ಕೊಳೋದು ಸಾಧ್ಯವಾದೀತು. ಆಗ್ಲೇ ಅಂಚೆ ಚೀಟಿಯ ನಿಜವಾದ ಲಾಭ - ನಾಡಿನ ಕನ್ನಡಿಯಾಗಲು ಸಾಧ್ಯ. ಅಲ್ದೇ ಹೋದ್ರೆ ಸುಮ್ನೆ ಟಸ್ಸೆ ಒತ್ತಿ ಕಳ್ಸಿದ್ರೆ ಅಂಚೆ ಏನು ಹೋಗಲ್ಲ ಅಂತದಾ ಗುರು? ಏನಂತ್ಯಾ?

ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!

ರಾಷ್ಟ್ರೀಯವಾದಿ ಪಕ್ಷ ಬಿಜೆಪಿಯಿಂದ ಶಾಸಕರಾಗಿ ನೇಮಕವಾಗಿರೋ, ಆ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರೂ ಆಗಿರೋ ಗೌರವಾನ್ವಿತ ಮಹಾ ಮಹಿಮರಾದ ಶ್ರೀಯುತ ಡೆರಿಕ್ ಫುಲಿನ್ ಫಾ ಎಂಬ ಆಂಗ್ಲೋ ಇಂಡಿಯನ್ ಕೋಟಾದ ಸತ್ ಪ್ರಜೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯೋರು ಮೊನ್ನೆ ಮುತ್ತಿಗೆ ಹಾಕಿದ ಸುದ್ದಿ ಬಂದಿದೆ. ಸದನದಲ್ಲಿ ಕನ್ನಡದಲ್ಲಿ ಮಾತಾಡಲ್ಲ ಅಂದಿದ್ದಕ್ಕೆ ಈ ಪೂಜೆ ಆಗಿದೆಯಂತೆ. ಏನೇ ಅಂದರೂ ಇಂಥಾ ಒಂದು ಬೆಳವಣಿಗೆಗೆ ಭಾರತೀಯ ಜನತಾ ಪಕ್ಷವೇ ಕಾರಣ ಅನ್ನೋದನ್ನು ಮರೆಯೋ ಹಾಗಿಲ್ಲ ಗುರು!

ಅಲ್ಪಸಂಖ್ಯಾತರ ಮೆರೆಸಾಟದಲ್ಲಿ ಇವ್ರೂ ಮುಂದು!

ಮಾತೆತ್ತುದ್ರೆ ಕಾಂಗ್ರೆಸ್ಸೋರು, ದಳದೋರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡ್ತಿದಾರೆ ಅಂತಾ ಸದಾ ಶಂಖ ಹೊಡ್ಕೊಳೊ ಭಾಜಪದವರು ಈಗ ಮಾಡಿದ್ದೇನು? ತನ್ನದೇ ಪಕ್ಷದ ಶಾಸಕ ಕನ್ನಡದಲ್ಲಿ ಮಾತಾಡ್ಲಿಲ್ಲ ಅಂದ್ರೆ ಇವರು ಯಾಕೆ ಸುಮ್ಮಿನಿದಾರೆ? ಫಾ ಅವ್ರು ಬರೀ ಕನ್ನಡದಲ್ಲಿ ಮಾತಾಡಿಲ್ಲ ಅಲ್ಲ, ನನಗೆ ಕನ್ನಡ ಬರುತ್ತೆ, ಆದ್ರೂ ಮಾತಾಡಲ್ಲ ಅನ್ನೋ ಉದ್ಧಟತನದ ಮಾತಾಡಿದ್ರೂ ಸರ್ವ ಶ್ರೀ ಯಡ್ಯೂರಪ್ಪನವರು, ಅನಂತಕುಮಾರ್ ಅವ್ರೂ, ಜಗದೀಶ್ ಶೆಟ್ಟರ್ ಅವ್ರೂ, ಸದಾನಂದ ಗೌಡರೂ ಯಾಕೆ ಸುಮ್ಮನಿದ್ದರು? ಹೀಗೆ ಮೌನವಾಗಿರೋದೂ ಕೂಡಾ ಫಾ ಅವ್ರು ಮಾಡಿದ್ದನ್ನು ಅನುಮೋದನೆ ಮಾಡಿದ ಹಂಗಲ್ವಾ? ಇದುಕ್ಕಿಂತ ತುಷ್ಟೀಕರಣ ಬೇರೆ ಬೇಕಾ ಗುರು? ಇದು ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಭಾಷಾ ಅಲ್ಪಸಂಖ್ಯಾತ ಅನ್ನೋ ಡಬ್ಬಲ್ ಮೆರೆಸಾಟ ಅಲ್ವಾ? ಇವ್ರು ಕಾಂಗ್ರೆಸ್ಸೋರ ಬಗ್ಗೆ ಆಕ್ಷೇಪಣೆ ಮಾಡೋದ್ರಲ್ಲಿ ಏನಾದ್ರೂ ನಿಜಾಯ್ತಿ ಇದ್ಯಾ ಗುರು! ಅಥ್ವಾ ಅದು ಬರೀ ಓಟು ಗಿಟ್ಸೋ ತಂತ್ರಾನಾ?

ರಾಷ್ಟ್ರೀಯತೆ ಅಂದ್ರೆ ಕನ್ನಡ ಕಡೆಗಣ್ಸೋದಾ?

ತಾನು ಹುಟ್ಟಿ ಬೆಳೆದ, ವಾಸ ಇರೋ, ತನಗೆ ಬದುಕು-ಸ್ಥಾನಮಾನ ಕೊಟ್ಟಿರೋ ನೆಲದ ಭಾಷೆ, ಸಂಸ್ಕೃತಿ, ಜನರ ಬಗ್ಗೆ ಗೌರವ ಇಲ್ದೇ ಇರೋದನ್ನು ಸಹಿಸೋದು ಯಾವ ಸೀಮೆ ದೇಶಭಕ್ತಿ? ಯಾವ ಸೀಮೆ ರಾಷ್ಟ್ರೀಯತೆ ಗುರು? ಫಾ ಅವ್ರು ಅಲ್ಪಸಂಖ್ಯಾತರು ಅನ್ನೋ ಕಾರಣಕ್ಕೇ ಅವ್ರುನ್ನ ಖಂಡಿಸೋಕೆ ಆಗ್ತಿಲ್ವಾ ಇವ್ರು ಕೈಲಿ? ಕರ್ನಾಟಕದ ವಿಧಾನ ಸಭೇಲೆ ಈ ವ್ಯಕ್ತಿ ರಾಜಾರೋಷವಾಗಿ ನಂಗೆ ಕನ್ನಡ ಬರುತ್ತೆ, ಆದ್ರೂ ಮಾತಾಡಲ್ಲ ಅನ್ನೋದು ಉದ್ಧಟತನದ ಪರಮಾವಧಿ ಅಲ್ವಾ ಗುರು? ಇಂಥಾ ವ್ಯಕ್ತೀನ ತತ್ ಕ್ಷಣದಿಂದ ಬಿಜೆಪಿ ವಾಪಸ್ ಕರುಸ್ಕೋಬೇಕಿತ್ತು. ರಾಜಿನಾಮೆ ಕೊಡುಸ್ಬೇಕಿತ್ತು. ಕಡೇ ಪಕ್ಷ ಇವ್ರಿಂದ ಕ್ಷಮೆ ಕೇಳುಸ್ಬೇಕಿತ್ತು. ಅದ್ಯಾವ್ದೂ ಇಲ್ದೆ ಸಖತ್ ಜಾಣ ಮೌನ ವಹಿಸಿರೋದ್ರ ಅರ್ಥ ಏನು? ಇವ್ರ ಕಣ್ಣಲ್ಲಿ ರಾಷ್ಟ್ರೀಯತೆ ಅಂದ್ರೆ ಕನ್ನಡಾನ ಕಡೆಗಣ್ಸೋದೇನಾ ಗುರು?

ಎಂ.ಇ.ಎಸ್ ಜೊತೆ ಸರಸವಾಡ್ದೋರು!

ಹಿಂದೆಲ್ಲಾ ಬೆಳಗಾವೀಲಿ, ಕನ್ನಡ ನಾಡನ್ನು ಒಡೆಯೋದನ್ನೆ ಗುರಿ ಮಾಡ್ಕೊಂಡಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದೋರು ಹೊಂದಾಣಿಕೆ ಮಾಡ್ಕೋತಾ ಇದ್ದುದ್ದು, ಕಡೆಗೆ ಎಂಇಎಸ್ ಮೋರೆಗೆ ಮಸಿ ಮೆತ್ತಿದ ಪ್ರಕರಣ ಆದ ಮೇಲೆ ಅವ್ರು ಜೊತೆ ನೇರವಾಗಿ ಗುರುತಿಸಿಕೊಳ್ಳೋದನ್ನು ನಿಲ್ಲಿಸಿದ್ದನ್ನೂ ಜನ ಮರೆತಿಲ್ಲ. ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವ್ರುನ್ನ ಆರಿಸಿ ಕಳಿಸಿದೋರೂ, ನ್ಯಾಷನಲ್ ಕಾಲೇಜು ಮೈದಾನದಲ್ಲಿ ವೆಂಕಯ್ಯನಾಯ್ಡು ತೆಲುಗಲ್ಲಿ ಭಾಷಣ ಮಾಡ್ತಿದ್ದಾಗ ಚಪ್ಪಾಳೆ ತಟ್ತಿದ್ದೋರೂ ಇದೇ ಭಾಜಪಾದೋರೆ... ಇರ್ಲಿ, ಈಗ ನಿಜವಾಗ್ಲೂ ಭಾಜಪದೋರು ’ತಾವು ಪ್ರತಿಪಾದಿಸೋ ರಾಷ್ಟ್ರೀಯತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅನ್ನೋದಕ್ಕೆ ಏನಾದ್ರೂ ಸ್ಥಾನ ಇದ್ಯೇ? ಅಥ್ವಾ ಅದು ಗೌಣವಾದ ವಿಷಯಾನಾ?’ ಅಂತ ಜನಕ್ಕೆ ಸ್ಪಷ್ಟ ಪಡಿಸಿ ತಮ್ಮ ನಡವಳಿಕೆ ಮೂಲಕ ವಿವರಣೆ ಕೊಡಬೇಕಾಗಿದೆ ಗುರು!

ಮರುಳಾಗದಿರಲಿ ಮಂದಿ!

ಅಲ್ರೀಪಾ... ಕನ್ನಡ ನಾಡಾಗ ಬ್ಯಾರೀ ಭಾಷೀ ಪಿಚ್ಚರ್ ಗಳಿಗ ಭಾಳ ದೊಡ್ಡ ಮಾರುಕಟ್ಟಿ ಐತಿ, ಅದಕ್ಕಾ ಅವ್ರು ಚಿತ್ರಗಳು ಇಲ್ಲಿ ಛಲೋ ಓಡ್ತವಾ ಅಂತಾ ಮಂದೀ ಮಾತಾಡೂದ್ ಆಗಾಗ್ ಕೇಳ್ ಬರ್ತೈತಿ... ನಮ್ ಕನ್ನಡ್ ಸಿನಿಮಾ ಅದ್ಯಾಕ್ ಅಕಡೀಕ್ ಹೋಗಾವಲ್ದು. ಬರೀ ತೆಲುಗು, ತಮಿಳು, ಹಿಂದಿ ಪಿಚ್ಚರ್ರ್ ಇಲ್ಲಿಗ್ ಅದ್ಯಾಕ್ ಬರ್ತಾವಾ ಅಂತ ಭಾಳ ಅಚ್ಚರಿ ಆಗ್ತಿತ್ರೀ ಗುರುಗಳಾ!

ಪರಭಾಷಾ ಚಿತ್ರಗಳು ಮತ್ತು ಗುಣಮಟ್ಟ!

ಅದಕ್ಕ ಏನಾರ ಕಾರಣ ಇರಾಬೇಕಂತ ಚಿಂತೀ ಮಾಡಕ್ ಹೊಂಟ್ರಾ... ಕೆಲ ಮಂದಿ ಅಂತಾರಾ... ಬ್ಯಾರೀ ಭಾಷಿ ಚಿತ್ರ ಕನ್ನಡಕ್ಕಿಂತ ಗುಣಮಟ್ಟದಾಗ ಭಾಳ ಮ್ಯಾಲ್ ಇರ್ತವಾ ಅಂತ. ನಾ ಹೌದನಪ್ಪಾ ಅನ್ಕೋತಾ ತಮಿಳಿನ ಚಂದ್ರಮುಖಿ ನೋಡ್ದೆರೀಪಾ. ಲಕಲಕಲಕಲಕಾ... ನಮ್ಮ ಆಪ್ತಮಿತ್ರದ ಮುಂದ ಅದ್ನ ನಿವಾಳಿಸಿ ಒಗಿಬೇಕ್ರೀಪಾ. ಇದ್ರಾಗಿಲ್ಲದ್ದ, ಅದ್ರಾಗ್ ಏನೈತಿ ಅಂದ್ರ... ಒಂದೂ ಕಾಣವಲ್ಲದ್ರೀ. ಮತ್ ಹ್ಯಾಂಗ್ ಈ ಹೊರಭಾಷಾ ಚಿತ್ರಗಳಿಗ ಈ ಪರಿ ಮಾರುಕಟ್ಟಿ ಐತಿ ಅನ್ನೋ ಭ್ರಮಿ, ಪ್ರಚಾರ ಹುಟ್ಟದಾ?

ಪರಭಾಷಾ ಚಿತ್ರಗಳು ಮತ್ತು ಕನ್ನಡ ಮಾಧ್ಯಮದೋರು!

ಹೌದ್ರೀಪಾ... ಖರೀ ಅಂದ್ರಾ ನಮ್ಮ ಮಾಧ್ಯಮದೋರಾ ಹಿಂಗ್ ಹೊರಗಿನ ಭಾಷಾ ಸಿನಿಮಾಗಳಿಗ ನಮ್ ನಾಡಾಗೆ ಭರ್ಜರಿ ಮಾರುಕಟ್ಟಿ ಕಟ್ಟಿಕೊಡಾಕ್ ಹತ್ಯಾರ... ನಮ್ಮ ಮಾಧ್ಯಮದಾಗಾ ಒಂದು ಹೊರಗಿನ ಚಿತ್ರ ಅಂದ್ರ ಅದರ ಬಿಡುಗಡಿಗ ಮೊದಲಾ ಅದ್ರಾಗ್ ಅಮಿತಾಬ್, ಮಮ್ಮುಟ್ಟಿ, ಚಿರಂಜೀವಿ ಅದಾರ ಅಂತ ಗಾಸಿಪ್ ಸುದ್ದಿ ಕೊಡ್ತಾರಾ, ಅಂಥಾ ಚಿತ್ರದ ನಾಯಕಂಗ ಒತ್ತಡ ಆಗ್ತಾ ಐತಿ ಅಂತಾ ಸುದ್ದಿ ಮಾಡ್ತಾರಾ, ಚಿತ್ರ ಬಿಡುಗಡಿಗೆ ವಿರೋಧಾ ಮಾಡುದ್ರಾ ಬರೀತಾರಾ, ಮಾಡ್ಲಿಲ್ಲ ಅಂದ್ರ ಗಪ್ ಕುಂತಾರಾ ಅಂತ ಬರೀತಾರಾ, ಬಿಡುಗಡಿ ಆದಮ್ಯಾಲಾ ಭರ್ಜರಿ ರಶ್ಶು ಅಂತ ಬರೀತಾರಾ, ರೇಡಿಯೋದಾಗ ಸಿನಿಮಾ ನೋಡಿ ಬರೂ ಮಂದೀನಾ ಇಂಟರ್ ವ್ಯೂ ಮಾಡ್ತಾರಾ, ತಪ್ಪದೆ ಸಿನಿಮಾ ರಿವ್ಯೂ ಬರೀತಾರಾ... ಹೀಂಗ ಮಾಡೂದ್ರಿಂದ ಕನ್ನಡ ಮಂದಿ ಎದಿಯಾಗ ಕುತೂಹಲ ಹುಟ್ ಹಾಕಿ ಅವ್ರೂ ಈ ಸಿನಿಮಾ ನೋಡೂ ಹಾಗ್ ಮಾಡ್ತಾರ್ರೀಪಾ...

ಕನ್ನಡ ಟಿವಿ ಚಾನಲ್ಲದಾಗ!

ಇಕಾ... ಬರ್ರೀ... ಕನ್ನಡದ ಈ ಒಂದು ಟಿವಿ ಚಾನಲ್ ಐತಿ ನೋಡ್ರಲಾ... ಅದ್ರಾಗ ಕನ್ನಡ ಚಿತ್ರಗಳ ಬಗ್ಗಿ ಮಾತಾಡೂಕಿಂತ ಹೆಚ್ಚು ಹಿಂದಿ, ತೆಲುಗು ಸಿನಿಮಾಗಳ ಬಗ್ಗೀ ಮಾತಾಡ್ತಾರಾ. ಮೂರು ದಿನಾ ಇರಲಿ, ಮೂರು ಶೋ ಕೂಡಾ ನಡ್ಯಂಗಿಲ್ಲಾ ಅಂಥಾ ಸಾವರಿಯಾ, ಓಂ ಶಾಂತಿ ಓಂ ಅನ್ನೂ ಸಿನಿಮಾಗಳ ಬಗ್ಗಿ ಭರ್ಜರಿ ಹವಾ ಇದ್ದಂಗ್ ತೋರುಸ್ತಾರಾ. ಕಡಿಗಾ ಚಂದನ ಚಾನಲ್ಲದಾಗ ’ಥಟ್ ಅಂತ ಹೇಳಿ’ ಅನ್ನೋ ಅಚ್ಚ ಕನ್ನಡದ್ ಕಾರ್ಯಕ್ರಮದ ನಡೂಕ ಹಿಂದಿ ಸಿನಿಮಾದೋರ ಬಗ್ಗಿ, ಹಿಂದಿ ಹಾಡುಗಾರರ ಬಗ್ಗಿ ಸ್ವಚ್ಚ ಕನ್ನಡದಾಗಾ ಪ್ರಶ್ನಿ ಕೇಳ್ತಾರಾ.

ಕನ್ನಡದ ಎಫ್ಎಂದಾಗ!

ನಮ್ ಟಿವಿ ಮಂದಿ ಹಿಂಗಾದ್ರಾ ಇನ್ನು ಬೆಂಗಳೂರಾಗಿನ ಎಫ್ ಎಂ ವಾಹಿನಿಗಳ ಕಥಿ ಹೇಳೂಣೇ ಬ್ಯಾಡ್ರೀಪಾ. ಈ ಮಂದಿ ಅನಿಲ್ ಕಪೂರ್ ಹುಟ್ಟುದ್ ಹಬ್ಬ, ಕರೀನಾ ಕಪೂರ್ ಲವ್ವು, ಬಾಲಿವುಡ್ ಗಾಸಿಪ್ಪು ಅಂತ ಹೊರಡ್ತಾರಾ. ಮೊನ್ನಿ ಮೊನ್ನಿ ಮಿರ್ಚಿ ಮಂದಿ 98,300ರೂಪಾಯಿ ಗೆಲ್ರಲಾ ಅಂತ ಕೇಳಿದ್ ಪ್ರಶ್ನಿ ’ಕೌನ್ ಬನೇಗಾ ಕರೋಡ್ ಪತಿ’ ನ್ ಅಡ್ಸಿದ್ ಯಾರು? ಅಮ್ಜದ್ ಖಾನ್ ಕಟ್ಟಿದ್ ಹೊಟೆಲ್ ಯಾವುದು? ಇಂಥವೇ ಕಣ್ರೀಪಾ.

ನಮ್ಮವೇ ಪತ್ರಿಕಿಗಳೊಳಗಾ!

ಥೂ.. ಹಾಳ್ ಬಿದ್ ಹೋಗ್ಲಿ ಅಂತ ಕನ್ನಡ ದಿನಪತ್ರಿಕಿ ಕಡಿ ಕಣ್ ಹಾಯ್ಸುದ್ರಾ ಕಣೂದ್ ಏನಂತೀರೀ? ಸಮಸ್ತ ಕನ್ನಡಿಗರ ಹೆಮ್ಮಿ ಅನ್ಕೊತಾ ಅನ್ಕೋತಾನೆ ರಜನಿಕಾಂತನ ಜೀವನ ಕಥಿ ಬರೀತಾರ, ರೇಖಾ ಅನ್ನಾಕಿ ಯಾರ್ ಯಾರ್ ಕೂಡಾ ಹ್ಯಾಂಗ್ ಹ್ಯಾಂಗ್ ಆಟ ಆಡುದ್ಲು ಅಂತ ಉಮ್ರಾವ್ ಜಾನ್ ಅಂತ ಬರೀತಾರ. ಗಾಳಿಪಟ ಧೂಳಿಪಟ ಅಂತ ಮೊದಲ ಪುಟದಾಗ್ ಬರಿಯೋ ಮಂದೀನ ಶಿವಾಜಿ ಅನ್ನೂ ಸಾಧಾರಣ ಪಿಚ್ಚರ್ ಬಗ್ಗಿ ಬಹುಪರಾಕ್ ಬಹುಪರಾಕ್ ಅಂತ ಬರೀತಾರ. ಇನ್ನು ಸಿನಿಮಾ ಸುದ್ದಿಗೆ ಅಂತಾನ ಇರೂ ಪತ್ರಿಕೆಗಳೊಳಗಡಿ ಬಾಲಿವುಡ್ ಪುಟ, ಟಾಲಿವುಡ್, ಕಾಲಿವುಡ್ ಪುಟ ಅಂತೆಲ್ಲಾ ಇರ್ತಾವಾ. ಈ ಸಾಲಾಗ ಈ ಪತ್ರಿಕೆಗಳೋರು ಅದಾರ ಮತ್ತಾ...

ಅಲ್ರೀಪಾ, ಬ್ಯಾರೀ ನಾಡಾಗ ಎಲ್ಲರಾ ಸ್ಯಾಂಡಲ್ ವುಡ್ ಬಗ್ಗಿ ಪುಟಗಟ್ಲೆ ಬರ್ದಿದ್ ಕಂಡೀರೇನ್ರೀಪಾ? ನಮ್ ಮಾಧ್ಯಮದೋರು ಎದುಕ್ ಹೀಂಗಾ ಪುಟಗಟ್ಲಿ ಪರಭಾಷಾ ಚಿತ್ರಗಳ ಬಗ್ಗಿ ಬರೀತಾರಾ? ಕನ್ನಡ ಸಿನೆಮಾ ರಿವ್ಯೂ ಬರಿಯಾಕ ಭಾನುವಾರದ ಮಟಾ ಕಾಯೂ ಮಂದಿ ಎದುಕ್ ಕುಸೇಲನ್ ರಿವ್ಯೂ ಶನಿವಾರಾನಾ ಬರೀತಾರಾ? ನಮ್ಮ ಟಿವಿ ಮಂದಿ ಎದುಕ್ ಹಾಂಗಾ ತೆಲುಗು, ಹಿಂದಿ ಸಿನಿಮಾ ಬಗ್ಗಿ ಪ್ರಚಾರ ಮಾಡ್ಯಾರಾ? ಈಗರಾ ಹೇಳ್ರಲಾ... ಕನ್ನಡ ನಾಡಾಗ ಪರಭಾಷಾ ಚಿತ್ರಗಳಿಗ ಮಾರುಕಟ್ಟಿ ಕಟ್ಟಿಕೊಡ್ತಿರೂ ಮಂದಿ ಯಾರಾ? ಈ ಮಂದಿ ಎದುಕ್ ಹಿಂಗ ಮಾಡಾಕ್ ಹತ್ಯಾರ? ಹೀಂಗ್ ಮಾಡೂದ್ರಿಂದ ಕನ್ನಡನಾಡಾಗ ಪರಭಾಶಿ ಚಿತ್ರಗಳಿಗ ಮಾರುಕಟ್ಟಿ ಕಟ್ಟಿಕೊಟ್ಟಂಗ್ ಆಗಂಗಿಲ್ಲೇನ? ಅನ್ನೂದು ಈ ಮಂದಿಗೆ ಖಬರೈತೋ ಇಲ್ಲೋ... ಅನ್ನೋ ಮಾತು ಬಾಜೂಕಿಟ್ಟು ನಾವ್ ಕನ್ನಡ ಮಂದಿ ಇಂಥ ಮಾಧ್ಯಮದೋರಿಗ ನೇರವಾಗಿ ನಮ್ಮ ಮನರಂಜನಿ ನಮಗ ಕನ್ನಡದಾಗಿರಬೇಕದ, ನೀವ್ ಹೀಂಗ ನಡ್ಕೊಳೋದು ಚೂರು ಪಸಂದ್ ಇಲ್ಲ ಅನ್ನಬೇಕ್ರಿಪಾ. ಮಾಧ್ಯಮದಾಗ ಎಷ್ಟಾರ ವದರ್ಲಿ, ನಾವ್ ಅದಕ್ ಮರಳಾಗದಿದ್ರಾತು... ಏನಂತೀರ್ರೀ ಗುರುಗಳಾ?
Related Posts with Thumbnails