ಸಿದ್ದರಾಮಯ್ಯನವರೇ? ನೀವಾಗುವಿರಾ "ಮಾತು ತಪ್ಪದ ಮಗ"!


ಮುಖ್ಯಮಂತ್ರಿಗಳಾಗಲಿರುವ ಮಾನ್ಯ ಶ್ರೀ ಸಿದ್ದರಾಮಯ್ಯನವರೇ,

ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಹೊಸ ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗುವಲ್ಲಿ ತಮ್ಮ ಪಾತ್ರವೂ ದೊಡ್ಡದಿದೆ. ಸದರಿ ಸರ್ಕಾರದ ಮುಖ್ಯಸ್ಥರಾಗಿಯೂ ತಾವು ಆಯ್ಕೆಯಾಗಿದ್ದೀರಿ. ನಿಮ್ಮ ಪಕ್ಷವು ಈ ಬಾರಿ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಕೆಲವು ನಾಡಿಗೆ ನಿಜಕ್ಕೂ ಏಳಿಗೆಗೆ ಪೂರಕವಾದವುಗಳಾಗಿವೆ. ಇವುಗಳತ್ತ ತಮ್ಮ ಗಮನ ಸೆಳೆಯುವುದು ನಮ್ಮ ಉದ್ದೇಶ! ಏನೇ ಆಗಲಿ.. ಇವುಗಳನ್ನಾದರೂ ಮಾಡಿರಿ ಎನ್ನುವುದು ನಮ್ಮ ಒತ್ತಾಯ!!

ಕಾಂಗ್ರೆಸ್ ಪ್ರಣಾಳಿಕೆಯಂತೆ ಆಗಲೇ ಬೇಕಾದ್ದು!


ಇವೆಲ್ಲದರ ಜೊತೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನೂ ಸಂಪರ್ಕಿಸುವ ರೈಲು ಮಾರ್ಗಗಳನ್ನು ರಾಜ್ಯಕ್ಕೆ ತರಲು ಸಮಗ್ರ ಯೋಜನೆಯನ್ನು ರೂಪಿಸಿ ಕೇಂದ್ರಸರ್ಕಾರದಿಂದ ಜಾರಿಮಾಡಿಸಿ. ರಾಜ್ಯಕ್ಕೆ ಹೆಚ್ಚೆಚ್ಚು ವಿದ್ಯುತ್ ರೈಲು ಮಾರ್ಗಗಳನ್ನು ತರಲು ಮುಂದಾಗಿರಿ. 


ಏಳಿಗೆಗೆ ಬೇಕಾದ್ದು!

ಒಂದು ನಾಡಿನ ಏಳಿಗೆಗೆ ಬೇಕಾದ್ದು ಆ ನಾಡಿನ ರಸ್ತೆ, ರೈಲು, ನೀರು ಮೊದಲಾದ ಮೂಲಭೂತಸೌಕರ್ಯಗಳನ್ನು ಕಟ್ಟಿಕೊಡುವುದು. ಆ ನಾಡಿನ ಜನರ ಕಲಿಕೆಯನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ದುಡಿಮೆಯ ಅವಕಾಶಗಳನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ಕೌಶಲಗಳನ್ನು ಹೆಚ್ಚಿಸುವುದು. ಆ ನಾಡಿನಲ್ಲಿ ಉದ್ದಿಮೆಗಳನ್ನು ನಡೆಸಲು ಪೂರಕವಾದ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ವ್ಯವಸ್ಥೆಯನ್ನು ಕಟ್ಟುವುದು! ನಿಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಎಲ್ಲವನ್ನೂ ಮಾಡಿ. ನಮ್ಮ ಜನರ ಕಲಿಕೆ ಅತ್ಯುತ್ತಮವಾಗಲು, ಜಗತ್ತಿನ ಅತ್ಯುತ್ತಮ ಕಲಿಕೆಯ ವ್ಯವಸ್ಥೆಗಳ ಸಾಲಿನಲ್ಲಿ ನಮ್ಮದನ್ನೂ ನಿಲ್ಲಿಸಬಲ್ಲಂತಹ ಕನ್ನಡದ ಕಲಿಕೆಯ ವ್ಯವಸ್ಥೆಯನ್ನು ಕಟ್ಟಲು ಬೇಕಾದ ದೀರ್ಘಾವಧಿ ಯೋಜನೆಯನ್ನು ಮಾಡಿರಿ. ನೀವು ಇತ್ತೀಚಿಗಷ್ಟೇ ನಾಡಿನ ಅನೇಕ ಹಿರಿಯ ಕವಿ-ಸಾಹಿತಿ-ಚಿಂತಕರುಗಳನ್ನು ಭೇಟಿಯಾಗಿ ಬಂದಿದ್ದೀರಿ. ಇದು  ಅವರುಗಳ ಮೇಲಿನ ಗೌರವದಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಗೌರವ ಅದೇ ಹಿರಿಯರು ತಾಯ್ನುಡಿ ಶಿಕ್ಷಣದ ಪರವಾಗಿ ಹೊಂದಿರುವ ನಿಲುವುಗಳ ಬಗ್ಗೆಯೂ ತಮಗಿರಲಿ ಎನ್ನುವುದು ನಮ್ಮ ಆಶಯ! 

ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವ, ಇಡೀ ಪ್ರಪಂಚದಲ್ಲಿ ನಮ್ಮನ್ನು ಉಳಿದವರಿಗಿಂತಲೂ ಬೇರೆಯಾಗಿಸಿರುವ ನಮ್ಮ ನುಡಿ, ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಪೊರೆಯುವ ಕ್ರಮಗಳನ್ನು ಕೈಗೊಳ್ಳಿರಿ. ಧರ್ಮ, ಜಾತಿ, ಆಚರಣೆ, ಒಳನುಡಿಗಳೇ ಮೊದಲಾದ ವಿಭಿನ್ನತೆಗಳನ್ನು ಕನ್ನಡತನದ ಮೂಲಕ ಒಗ್ಗೂಡಿಸಿ ಹಿಡಿದಿಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿರಿ. ಕನ್ನಡಿಗರಿಗೆ ತಮ್ಮದೇ ನೆಲದಲ್ಲಿ ಬದುಕು ನಡೆಸಲು ತೊಡಕಾಗದಂತಹ ಆಡಳಿತ ವ್ಯವಸ್ಥೆಯನ್ನು ಕಟ್ಟುವುದು ಒಂದು ಮುಖ್ಯವಾದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಕಾರ್ಯನಿರ್ವಹಿಸಲಿ...

ಒಟ್ಟಾರೆ ನಾಡಿನ ಜನರ ನಿರೀಕ್ಷೆಗಳೇನೋ ಹೆಚ್ಚಾಗಿಯೇ ಇವೆ. ಇವುಗಳನ್ನು ಈಡೇರಿಸುವತ್ತ ಮುಂದಾಗಿ.. ಇದು ನಮ್ಮ ನಾಡಿನ ಹೊಸ ಮುಖ್ಯಮಂತ್ರಿಗಳಾಗುತ್ತಿರುವ ನಿಮ್ಮಿಂದ ನಮಗಿರುವ ನಿರೀಕ್ಷೆ! ಕಾಂಗ್ರೆಸ್ಸಿನವರು ಸಾಕಷ್ಟು ಭರವಸೆಗಳನ್ನು ನೀಡಿದ್ದೀರಾ! ಈ ಭರವಸೆಗಳು ಭರವಸೆಗಳಲ್ಲಾ... ನಾಡಿಗರಿಗೆ ಕೊಟ್ಟ ಮಾತು! ನೀವು  ಮಾತು ತಪ್ಪದ ಮಗನಾಗಿರಿ ಎಂಬುದು ನಮ್ಮ ಆಗ್ರಹ!

ಚುನಾವಣಾ ಫಲಿತಾಂಶ: ಕಲಿತರೆ ಪಾಠ! ಮೈಮರೆತರೆ ಗೋತಾ!!


ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಹೊರಬಂದಿವೆ. ನಿರೀಕ್ಷೆಯಂತೆ ಕಾಂಗ್ರೆಸ್ ಗೆದ್ದಿದೆ, ನಿರೀಕ್ಷೆಗೂ ಮೀರಿ ಗೆದ್ದಿದೆ! ಈ ಚುನಾವಣೆಯ ಫಲಿತಾಂಶವು ಮೇಲ್ನೋಟಕ್ಕೆ ಕಾಂಗ್ರೆಸ್ಸಿನ ಸಾದಾಸೀದ ಗೆಲುವಾಗಿ ಕಾಣುತ್ತಿದ್ದರೂ ಇದರ ಒಳನೋಟ ಕುತೂಹಲಕಾರಿಯಾಗಿದೆ. ನಾಡಿನಲ್ಲಿರುವ ನಾಲ್ಕಾರು ದೂರದರ್ಶನ ವಾಹಿನಿಗಳು ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡ್ತಾಯಿದ್ದಾರೆ. ಸರಿ.. ನಾವೂ ಕೂಡಾ ಸ್ವಲ್ಪ ನಮ್ಮ ಮೂಗಿನ ನೇರಕ್ಕೆ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಿ ನೋಡೋಣ.

ಚುನಾವಣೆ ವಿಶ್ಲೇಷಣೆಯಲ್ಲಿ ಮುಖ್ಯವಾಗಿ ಕಂಡದ್ದು!

ಈ ಬಾರಿ ಎಲ್ಲೆಡೆ ಕಾಂಗ್ರೆಸ್ ಗೆದ್ದಿದೆ.  ಜನರು ಕಾಂಗ್ರೆಸ್ ಪಕ್ಷವನ್ನು ಭರ್ಜರಿಯಾಗಿ ಕೈಹಿಡಿದಿದ್ದಾರೆ. ಒಟ್ಟು ಬಹುಮತಕ್ಕೆ ಬೇಕಾದ ೧೧೩ ಶಾಸಕರ ಸಂಖ್ಯೆಗಿಂತಲೂ ಹೆಚ್ಚೇ ಸಂಖ್ಯೆಯ ಶಾಸಕರನ್ನು ಕಾಂಗ್ರೆಸ್ ಗೆಲ್ಲಿಸಿಕೊಂಡಿದೆ. ಈ ಕಾರಣದಿಂದ ಕರ್ನಾಟಕವನ್ನು ಐದುವರ್ಷಗಳ ಕಾಲ ಆಳುವ ಅವಕಾಶವನ್ನೂ ಪಡೆದುಕೊಂಡಿದೆ. ಹಾಗೇ ಭ್ರಷ್ಟಾಚಾರ ಮತ್ತು ಒಳಜಗಳವೂ ಸೇರಿದಂತೆ ನಾನಾ ಗೋಜಲುಗಳಿಂದಾಗಿ ಒಡೆದು ಹೋಳಾದ ಬಿಜೆಪಿ ಕಳೆದ ಬಾರಿಗಿಂತ ತೀರಾ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಜಾತ್ಯಾತೀತ ಜನತಾದಳವು ೪೦ ಸ್ಥಾನ ಗಳಿಸಿ ಉತ್ತಮವಾದ ಸಾಧನೆ ಮಾಡಿದ್ದರೂ ಸಾಕಷ್ಟು ಸಾಧಿಸಿಲ್ಲಾ! ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಶಾಸಕರ ಎಣಿಕೆಯ ಓಟದಲ್ಲಿ ಹಿಂದುಳಿದಿವೆ! ಈ ಮೇಲ್ನೋಟದ ದಿಟಗಳನ್ನು ಹಿಡಿದುಕೊಂಡು ಕೆಲಮಾಧ್ಯಮಗಳು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಎಡೆಯಿಲ್ಲಾ, ಜೆಡಿಎಸ್‌ಗೆ ಉತ್ತರ ಕರ್ನಾಟಕದಲ್ಲಿ ನೆಲೆಯಿಲ್ಲಾ, ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲಾ... ಜನರು ಸ್ಪಷ್ಟ ಬಹುಮತ ಕೊಡಬೇಕು ಎಂದೇ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ... ಇತ್ಯಾದಿ ವಿಶ್ಲೇಷಣೆಗಳನ್ನು ಮಾಡುತ್ತಿವೆ.

ಎಚ್ಚೆತ್ತರೆ ಇದು ಒಳ್ಳೇ ಪಾಟ! ಮೈಮರೆತರೆ ಮುಳುಗು!!

ಕನ್ನಡ ಕನ್ನಡಿಗ ಕರ್ನಾಟಕದ ಹಿತದೃಷ್ಟಿಯನ್ನು ಗಮನವಿಟ್ಟುಕೊಂಡು ನೋಡಿದರೆ ನಿಜವಾದ ಏಳಿಗೆಗೆ ನಮ್ಮ ರಾಜಕೀಯ ಆಯ್ಕೆಗಳು ಸಾಗಬೇಕಾದ ದಿಕ್ಕು ಹೀಗೆ ಕಾಣುತ್ತಿತ್ತು!
ಭಾರತದಲ್ಲಿರುವ ಆಳ್ವಿಕೆ ವ್ಯವಸ್ಥೆಯಲ್ಲಿ ನಮ್ಮ ಜನಪ್ರತಿನಿಧಿಗಳು ನಿಭಾಯಿಸಬೇಕಾದ ಹೊಣೆಗಾರಿಕೆಯಾದರೂ ಎಂಥದ್ದು? ಕೇಂದ್ರಸರ್ಕಾರದಲ್ಲಿ ಕೂತು ಒಪ್ಪುಕೂಟ ರೂಪಿಸಲು ಬೇಕಿರುವ ವ್ಯವಸ್ಥೆಗಳನ್ನು ರೂಪಿಸುವುದು, ಆಗಬೇಕಾದ ಬದಲಾವಣೆಗಳನ್ನು ಮಾಡುವುದು, ಕೇಂದ್ರವು ಕೊಡಮಾಡುವ ಯೋಜನೆಗಳನ್ನು ರಾಜ್ಯಕ್ಕೆ ತರುವುದು, ಇಂದಿನ ದಿನಕ್ಕೆ ಅನಿವಾರ್ಯವಾಗಿರುವ “ಕೇಂದ್ರದ ಜುಟ್ಟುಹಿಡಿದು ರಾಜ್ಯದ ಹಿತ ಕಾಪಾಡುವುದು”... ಮೊದಲಾದವುಗಳು. ಇವುಗಳನ್ನು ಪರಿಣಾಮಕಾರಿಯಾಗಿ ಮಾಡಲು ಯಾವ ಮಾದರಿಯ ರಾಜಕಾರಣವನ್ನು ಅನುಸರಿಸಬೇಕು ಎನ್ನುವುದನ್ನು ನಾಡಿನ ಜನರು ಯೋಚಿಸಬೇಕಾಗಿದೆ.
ಈ ನಿಟ್ಟಿನಲ್ಲಿ ನೋಡಿದಾಗ ನಾಡಜನರು ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಕೈಹಿಡಿಯಬೇಕಿತ್ತು! ಹಾಗಾಗಿದೆಯೇ ಎಂಬುದನ್ನು ನೋಡಿದಾಗ ಕಾಣುವ ಕೆಲವು ವಿಷಯಗಳು ಹೀಗಿವೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಜೆಡಿಎಸ್, ಕೆಜೆಪಿ ಮತ್ತು  ಬಿಎಸ್‌ಆರ್ ಒಟ್ಟಾಗಿ ಸೇರಿ ಗಳಿಸಿರುವುದು ಸುಮಾರು ೩೩% ಮತಗಳನ್ನು. ಕೆಜಿಪಿ ಪಕ್ಷವು ಸೀಟು ಗಳಿಕೆಯಲ್ಲಿ ಎರಡಂಕಿ ದಾಟದಿದ್ದರೂ ಕೂಡಾ ಒಟ್ಟು ೪೧ ಕ್ಷೇತ್ರಗಳಲ್ಲಿ ಮೊದಲೆರಡು ಸ್ಥಾನದಲ್ಲಿದೆ. ಹೀಗೆ ರಾಷ್ಟ್ರೀಯವಲ್ಲದ ಪಕ್ಷಗಳ ಒಟ್ಟು ಮತಗಳಿಕೆ  ಆಶಾದಾಯಕವಾಗಿದ್ದರೂ ಇದರಿಂದಾಗಿ ಕನ್ನಡಿಗರು ಕನ್ನಡಿಗರಾಗಿ ಮತ ಚಲಾಯಿಸಿದ್ದಾರೆ ಎನ್ನಲಾಗದು. ಬೆಳಗಾವಿಯಲ್ಲಿ ವರ್ಷಗಳ ಕಾಲ ಕನ್ನಡಿಗರನ್ನು ಒಗ್ಗೂಡಿಸಲು ನಡೆದ ಪ್ರಯತ್ನಗಳನ್ನು ಮತಗಳಾಗಿ ಚಲಾಯಿಸುವಲ್ಲಿ ಅಲ್ಲಿನ ಕನ್ನಡಿಗರು ಎಡವಿದ್ದಾರೆ. ಇದು ಎಂಇ‌ಎಸ್‌ನ ಇಬ್ಬರು ಶಾಸಕರ ಗೆಲುವಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಕನ್ನಡಪರವಾಗಿ ರಾಜಕಾರಣ ಮಾಡಲು ವಿಫುಲವಾದ ಅವಕಾಶಗಳು ಕಾಣುತ್ತಿದೆಯಾದರೂ ಕನ್ನಡಿಗರು ಒಂದು ಮತಬ್ಯಾಂಕ್ ಆಗುವಲ್ಲಿ ಸಾಗಬೇಕಾದ ದಾರಿ ಕಡಿದಾಗಿಯೂ, ತೊಡಕಿನದ್ದಾಗಿಯೂ ಕಾಣುತ್ತಿದೆ. ಹಾಗಿದ್ದರೂ ದಾರಿಯಂತೂ ಇದೆಯೆನ್ನುವುದು ಆಶಾಭಾವನೆಗೆ ಕಾರಣವಾಗಿದೆ. ಕನ್ನಡಿಗರು ಇನ್ನಾದರೂ ತಮ್ಮದೇ ಪಕ್ಷ ಕಟ್ಟಿಕೊಳ್ಳದಿದ್ದರೆ..."ಕಾಂಗ್ರೆಸ್ ಗೆಲುವಿಗಾಗಿ ನೂರಾರು ಕಿಮೀ ಪಾದಯಾತ್ರೆ ಮಾಡಿ, ವರುಶಗಟ್ಟಲೆ ಹೋರಾಟ ಮಾಡಿ, ಗೆಲುವು ದಕ್ಕಿಸಿಕೊಟ್ಟು... ಇದೀಗ ಮುಖ್ಯಮಂತ್ರಿ ಹುದ್ದೆಯ ಆಯ್ಕೆಯನ್ನು ದೆಹಲಿ ದೊರೆಗಳಿಗೆ ಒಪ್ಪಿಸಿ ಕುಳಿತಿರುವ" ಶ್ರೀ ಸಿದ್ಧರಾಮಯ್ಯನವರೂ, "ಬಕ್ರೀದಿನಲ್ಲಿ ಬದುಕುಳಿದರೆ ಮೊಹರಂನಲ್ಲಿ ಕುಣೀತೀವಿ" ಎಂದು ಹೈಕಮಾಂಡಿನ ಎದುರಿಗೆ ತಮ್ಮನ್ನು ಕುರಿಗೆ ಹೋಲಿಸಿಕೊಂಡ ಖರ್ಗೆಯವರೇ ಮೊದಲಾದ ನಾಯಕರುಗಳಂತೆಯೇ ಇಡೀ ಕನ್ನಡನಾಡೂ ದೆಹಲಿ ಗುಲಾಮರಾಗಬೇಕಾಗುತ್ತದೆ! ಅಷ್ಟೇ!!

ಪರಭಾಷಿಕರ ಓಲೈಕೆ... ಇದ್ಯಾಕೋ ಅತಿಯಾಯ್ತು!


ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ಭರಪೂರ ಪ್ರಚಾರದಲ್ಲಿ ತೊಡಗಿವೆ. ಹೀಗೆ ಮತಗಳನ್ನು ಬೇಡುವಾಗ ಈ ಪಕ್ಷಗಳು ಮತದಾರರನ್ನು ಯಾವ್ಯಾವ ರೀತಿಯಲ್ಲಿ ಓಲೈಸಲು ಸಾಧ್ಯವೋ ಅದೆಲ್ಲಾ ಬಗೆಯಲ್ಲಿ ಓಲೈಸಲು ಮುಂದಾಗುತ್ತವೆ. ಹೀಗೆ ಮಾಡುವಾಗ ಜಾತಿ, ಧರ್ಮ, ಪಂಗಡಗಳಷ್ಟೇ ಪರಿಣಾಮಕಾರಿಯಾಗಿ ಬಳಸಲಾಗುತ್ತಿರುವ ಅಸ್ತ್ರ ಭಾಷೆ. ಅಭಿವೃದ್ಧಿಯನ್ನು ಭಾಷಿಕ ಜನರಿಗೆ ಸೀಮಿತಗೊಳಿಸುವ ಉದಾಹರಣೆಗಳನ್ನೂ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಲಿವೆ. ನಾಡೊಂದರಲ್ಲಿ ನಾನಾ ಭಾಷೆಯ ಜನರು ಇರುವುದು ಸಹಜ. ಆದರೆ ಈ ಜನರ ಮತಕ್ಕಾಗಿ ಇವರುಗಳನ್ನು ಓಲೈಸಲು ಮುಂದಾಗುವಾಗ ಅದರಿಂದ ನಾಡಿನ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ವಲಸೆ ಬಂದು ಈ ನಾಡಿನಲ್ಲಿ ನೆಲೆಸಿದವರನ್ನು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡುವ ಈ ಓಲೈಕೆಗಳು ನಾಳೆ ನಾಡನ್ನು ಮುಳುಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲಾ! ಇಷ್ಟೂ ಕಾಳಜಿ ಇಲ್ಲದ ರಾಜಕೀಯ ಪಕ್ಷಗಳಿಗೆ ಕನ್ನಡಿಗರು ತಮ್ಮ ಮತದಾನದ ಹಕ್ಕನ್ನು ಬಳಸಿ ಉತ್ತರ ಹೇಳಬೇಕಾಗಿದೆ. 

ಪರಭಾಷಿಕರ ಓಲೈಕೆ

ಸೌಹಾರ್ದತೆಯ ಹೆಸರಲ್ಲಿ ಕನ್ನಡಿಗರ ಮೇಲೆ ಪರಭಾಷೆಗಳನ್ನು ಹೇರುವುದು ನಿರಂತರವಾಗಿ ನಡೆದೇ ಇದೆ. ನಾವು ಸಹಿಸಿಕೊಳ್ಳುತ್ತಿರುವ ಕಾರಣದಿಂದಲೇ ನಮ್ಮ ಹಿತವನ್ನು ಅಳಿಸಲು ಈ ರಾಜಕಾರಣಿಗಳು ಹೇಸದೆ ಇರುವುದು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ ಅಂಥದ್ದೊಂದು ದೊಡ್ಡ ಘಟನೆ. ಸಾಂಸ್ಕೃತಿಕ ವಿನಿಮಯ ಮಣ್ಣುಮಸಿ ಎಂದು ಏನೆಲ್ಲಾ ಹೇಳಿ ಪ್ರತಿಭಟನೆಯನ್ನು ಹತ್ತಿಕ್ಕಿ ಕನ್ನಡಿಗರ ತಲೆ ಸವರಲಾಯಿತೆಂದರೆ ಈ ಹಿಂದೆ ಅದನ್ನು ವಿರೋಧಿಸಿದ್ದ ದೊಡ್ಡ ಸಾಹಿತಿಗಳೇ ಇದ್ದಕ್ಕಿದ್ದಂತೆ ರಿವರ್ಸ್‌‌ಗೇರ್ ಹಾಕಿಕೊಂಡು ತಾವು ಬೂಟಾಟಿಕೆಯವರೆಂದು ಸಾಬೀತು ಮಾಡಿಕೊಂಡರು. ಕನ್ನಡಿಗರ ಕಣ್ಮಣಿಯನ್ನು ಅಪಹರಿಸಿ ಒಬ್ಬ ಕಾಡುಗಳ್ಳನಿಂದ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯ ಬೇಡಿಕೆಯನ್ನು ಇಡಿಸಿದ್ದ ನೆನಪು ಹಸಿರಾಗಿರುವಾಗಲೇ ಸ್ಥಾಪನೆಯಾದ ಆ ವಿಗ್ರಹ ತಮಿಳರ ಪಾಲಿಗೆ ಬೆಂಗಳೂರಿನಲ್ಲಿ ದೊಡ್ಡ ಗೆಲುವಿನ ಸಂಕೇತವಾಗಿ, ದೊಡ್ಡ ಹೋರಾಟಕ್ಕೆ ಸ್ಪೂರ್ತಿಯ ಸೆಲೆಯಾಗಿ ತಲೆಯೆತ್ತಿತು. ಇದೇ ತಿರುವಳ್ಳುವರ್ ಪ್ರತಿಮೆಯ ಎದುರು ಈ ಬಾರಿಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಲವಾರು ತಮಿಳು ರಾಜಕಾರಣಿಗಳು ಸೇರಿ ಕರ್ನಾಟಕದಲ್ಲಿ ತಮಿಳರ ಹಿತಕಾಯುವ ಪ್ರತಿಜ್ಞೆ ಮಾಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಈ ರಾಜಕಾರಣಿಗಳ ಬದ್ಧತೆ ತಮಿಳರ ಹಿತಕಾಯುವುದಷ್ಟೇ ಆಗಿರುವಂತೆ ಅವರ ಮಾತುಗಳಿದ್ದುದನ್ನು ನೋಡಬಹುದು. ಇದು ತಮಿಳು ಅಭ್ಯರ್ಥಿಗಳ ಕತೆಯಾದರೆ ಅದಕ್ಕೆ ಕಾರಣಕರ್ತರು ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿದ ಬಿಜೆಪಿ ಸರ್ಕಾರದವರು.

ಇದೀಗ ತಮಿಳರ ಓಲೈಕೆಯಲ್ಲಿ ಮುಂದಾಗಿರುವ ಪಕ್ಷಗಳ ನಡೆಗಳನ್ನು ನೋಡಿದರೆ ತಮಿಳು ಭವನದ ಭರವಸೆ ಕೊಟ್ಟಿರುವ, ಮಾತುಮಾತಿಗೆ ಕನ್ನಡಪರ ಎಂದುಕರೆದುಕೊಳ್ಳುತ್ತಿರುವ ಕರ್ನಾಟಕ ಜನತಾ ಪಕ್ಷ ಮುಂಚೂಣಿಯಲ್ಲಿದೆ. ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹ್ಯಾರಿಸ್ ಶಾಂತಿನಗರದಲ್ಲಿ ತಮಿಳಿನಲ್ಲಿ ಭಾಷಣ ಮಾಡುತ್ತಿರುವುದಲ್ಲದೆ ಇವರ ಜೊತೆ ಸ್ಟಾರ್ ಕ್ಯಾಂಪೇನರ್, ‘ಕನ್ನಡವನ್ನು ಇಂಗ್ಲೀಶಿನಲ್ಲಿ ಮಾತಾಡುವ’ ಅಚ್ಚ ಕನ್ನಡತಿ ರಮ್ಯಾರವರೂ ತಮಿಳಿನಲ್ಲಿ ಮಾತನಾಡಿದ್ದಲ್ಲದೆ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಇವರ ಮಾತಿನಂತೆ ಭಾರತದ ಯಾವ ಭಾಷೆಯನ್ನಾದರೂ ಎಲ್ಲಾದರೂ ಬಳಸುವುದು ತಪ್ಪಲ್ಲಾ! ತನ್ನತನದ ಅರಿವಿರದ ನಿರಭಿಮಾನಿ ಮತಿಗೇಡಿಗಳ ಬಾಯಿಂದ ಮತ್ತೇನು ತಾನೇ ನಿರೀಕ್ಷೆ ಮಾಡಲಾದೀತು! ಹೀಗೆ ತಮಿಳರ ಓಲೈಕೆಯನ್ನು ಎಗ್ಗುಸಿಗ್ಗಿಲ್ಲದೆ ಮಾಡುವವರು ತಮಿಳುನಾಡಿನೊಂದಿಗಿನ ವಿವಾದಗಳಾದ ಕಾವೇರಿ ನೀರುಹಂಚಿಕೆಯ ಬಗ್ಗೆ, ಹೊಗೇನಕಲ್ ನಡುಗಡ್ಡೆಯ ವಿವಾದದ ಬಗ್ಗೆ ಯಾವ ಮಾತನ್ನೂ ಆಡುವುದಿಲ್ಲಾ!

ಇನ್ನು ತೆಲುಗರ ಓಲೈಕೆಗಾಗಿ ಆಂಧ್ರದಿಂದ ಚಿರಂಜೀವಿಯನ್ನು, ಕಿರಣ್‌ಕುಮಾರ್ ರೆಡ್ಡಿಯವರನ್ನು ಕಾಂಗ್ರೆಸ್ಸಿನವರು ಕರೆಸಿದ್ದಾರೆ. ತುಂಗಭದ್ರಾ ನದಿಗೆ ಕದ್ದು ಕಾಲುವೆ ಮಾಡಿಕೊಳ್ಳುತ್ತಿರುವ ಆರೋಪವಿರುವ, ಕೃಷ್ಣಾ ನದಿನೀರು ಹಂಚಿಕೆಯಲ್ಲಿ ಎದುರಾಳಿಯಾಗಿ ನಮ್ಮ ನೀರಿಗೆ ಎರವಾಗಿರುವ, ಗಡಿ ಒತ್ತುವರಿ ಮಾಡಿಕೊಂಡದ್ದನ್ನು ಕಣ್ಣುಮುಚ್ಚಿ ನೋಡಿಕೊಂಡಿರುವ ಆಂಧ್ರಪ್ರದೇಶದ ನಾಯಕರುಗಳಾಗಿರುವ ಇವರುಗಳು ಹೇಗೆ ಕನ್ನಡನಾಡಿನ ಹಿತದ ಬಗ್ಗೆ ಮಾತಾಡಬಲ್ಲರು? ತೆಲುಗರನ್ನು ಓಲೈಸುವ ಪ್ರಯತ್ನದಲ್ಲಿ ಇದೀಗ ಬಿಜೆಪಿಯವರು ಅದ್ಯಾರೋ ಕೃಷ್ಣಾರೆಡ್ಡಿ ಎನ್ನುವವರನ್ನು ಕರೆಸುತ್ತಿದ್ದಾರಂತೆ. ಇನ್ನು ಕನ್ನಡಿಗರ ಹೆಮ್ಮೆಯ, ಕೃಷ್ಣಾ ಕಾವೇರಿ ಹೋರಾಟದಲ್ಲಿ ಸಾಯಬೀಳೋ ಹೋರಾಡಿದ, ಶ್ರೀ ವೆಂಕಯ್ಯನಾಯ್ಡು ಎನ್ನುವ ರಾಜ್ಯಸಭಾ ಸದಸ್ಯರನ್ನೂ ಬಿಜೆಪಿ ತೆಲುಗಲ್ಲಿ ಪ್ರಚಾರ ಮಾಡಲು ಬಳಸಿಕೊಂಡಿದೆ. ಇನ್ನು ಮರಾಠಿ ಭಾಷಿಕರನ್ನು ಓಲೈಸಲು ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ಶ್ರೀ ಪೃಥ್ವಿರಾಜ ಚೌಹಾಣ್ ಅವರನ್ನು ಕರೆಸಿದ್ದಾರೆ. ಈ ಯಪ್ಪಾ ‘ಬೆಳಗಾವಿ ವಿವಾದ ಇನ್ನೂ ಜೀವಂತ, ಎರಡೂ ರಾಜ್ಯಗಳು ಸುಪ್ರಿಂಕೋರ್ಟ್ ತೀರ್ಮಾನಕ್ಕೆ ಬದ್ಧರು’ ಎಂದೆಲ್ಲಾ ಮಾತಾಡಿದ್ದಾರೆ. ಇಷ್ಟಲ್ಲದೆ ನಮ್ಮೂರಿಗೆ ಬಂದು ಬಾಯಿಗೆ ಬಂದಂತೆ ಮಾತಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಆರ್. ಆರ್ ಪಾಟೀಲರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಲು ರಾಯಭಾರ ಮಾಡಿದ್ದಾರೆ. ಇಷ್ಟೇ ಸಾಲದೆಂಬಂತೆ ಕೊಂಕಣಿ ಜನರ ಓಲೈಕೆಗಾಗಿ ಗೋವಾದಿಂದ ಮನೋಹರ್ ಪರಿಕ್ಕಾರ್ ಅವರನ್ನು ಕರೆಸಿದ್ದಾರೆ. ಹೀಗೆ ಕರೆಸಿದವರು ಇವರನ್ನೊಮ್ಮೆ ಮಹದಾಯಿ ನೀರಿನಲ್ಲಿ ೪ ಟಿಎಂಸಿ ಕುಡಿಯಲು ಬಳಸಿಕೊಳ್ಳುತ್ತೇವೆ, ಕಳಸಾ ಬಂಡೂರ ಯೋಜನೆಗೆ ಅಡ್ಡಗಾಲಿಕ್ಕಬೇಡಿ ಎನ್ನಲಿ ನೋಡೋಣ! ಇನ್ನು ಮಲಯಾಳಿಗಳ ಓಲೈಕೆಗಾಗಿ ಕೇರಳ ಮುಖ್ಯಮಂತ್ರಿ ಉಮ್ಮಾನ್ ಚಾಂಡಿಯವರನ್ನು ಕರೆಸಿದ್ದಾರೆ.

ಇದೆಂಥಾ ಕರ್ಮ ಕನ್ನಡಿಗರದ್ದು!

ಇಂಥಾ ಘಟನೆಗಳು ನೆರೆಯ ತಮಿಳುನಾಡಿನಲ್ಲಿ ನಡೆದಿದ್ದರೆ ಅಲ್ಲಿಯ ಜನರು ಇವರನ್ನೆಲ್ಲಾ ಬೀದಿಬೀದಿಗಳಲ್ಲಿ ಅಟ್ಟಾಡಿಸಿಕೊಳ್ಳುತ್ತಿದ್ದರೋ ಏನೋ? ನಮ್ಮ ಕನ್ನಡಿಗರು ಕಡೇಪಕ್ಷ ಮತವೆಂಬ ಬಾರುಕೋಲನ್ನಾದರೂ ಸರಿಯಾಗಿ ಪ್ರಯೋಗಿಸುತ್ತಾರೆ ಎನ್ನುವ ಬಗ್ಗೆಯೂ ಅನುಮಾನವಿದೆ. ಇವೆಲ್ಲಾ ಏನೂ ಒಂದೇ ದಿನದಲ್ಲಿ ಆಗುತ್ತಿರುವುದಲ್ಲಾ. ಇದಕ್ಕೆ ಈ ರಾಜಕಾರಣಿಗಳಷ್ಟೇ ಕಾರಣವಲ್ಲಾ! ತನ್ನತನವ ಮರೆತು ಸಹಿಷ್ಣುತೆಯ ಪಾಠಕ್ಕೆ ನಿರಂತರವಾಗಿ ತಲೆ ತೊಳಿಸಿಕೊಂಡ ಕನ್ನಡಿಗರೇ ಕಾರಣ ಎಂದರೆ ತಪ್ಪಿಲ್ಲಾ! ಕನ್ನಡಿಗರ ಸಮಸ್ಯೆಗಳು ಯಾವ ರಾಜಕೀಯ ಪಕ್ಷಕ್ಕೂ ಸಮಸ್ಯೆಯಲ್ಲಾ ಎಂದರೆ ಇದಕ್ಕೆ ಹೊಣೆ ತಲೆ ಮೇಲೆ ತಲೆ ಬಿದ್ದರೂ ನಾವು ಇವರ ಕೈಬಿಡುವುದಿಲ್ಲಾ ಎನ್ನುವ ನಂಬಿಕೆಯೇ ಕಾರಣ!! ಎಂದಿಗೆ ಕನ್ನಡಿಗರು ಒಂದು ಓಟ್ ಬ್ಯಾಂಕ್ ಆಗುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೇ! ಕನ್ನಡಿಗರು ಜಾತಿ, ಧರ್ಮ, ರಾಷ್ಟ್ರೀಯ ಪಕ್ಷಗಳ ಬಾಲಬಡುಕರಾಗಿ ಇರುವತನಕವೂ ಇದು ತಪ್ಪಿದ್ದಲ್ಲಾ! ಇನ್ನಾದರೂ ಕನ್ನಡದ ಜನರು ನಾಡು ನುಡಿ ಕೇಂದ್ರಿತ ರಾಜಕಾರಣವನ್ನು ಕಟ್ಟಿಕೊಳ್ಳದಿದ್ದರೆ ಈ ನಾಡನ್ನು ನೆರೆರಾಜ್ಯಗಳಿಗೆ, ವಲಸಿಗರಿಗೆ ಹರಿದುಹಂಚಿಕೊಡುವುದನ್ನು ನೋಡುವ ದಿನಗಳು ದೂರವಿಲ್ಲಾ!! ಸ್ವಾಭಿಮಾನ ಇಲ್ಲದ ಜನಾಂಗವೊಂದು ತನ್ನ ಅಳಿವನ್ನು ಅಸಹಾಯಕವಾಗಿ ನೋಡುವುದನ್ನು ನಿಲ್ಲಿಸಿ, ಹೊಸ ಸ್ವಾಭಿಮಾನ, ಹೊಸ ಹುರುಪು, ಹೊಸ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ದಿನಗಳು ಬೇಗ ಬರಲಿ!!

B-PAC: ಇದು ಕಾರ್ಪೊರೇಟ್ ರಾಜಕಾರಣ!

(ಫೋಟೋ ಕೃಪೆ: ಬಿ.ಪ್ಯಾಕ್ ಅಂತರ್ಜಾಲ ತಾಣ)
ಈ ಬಾರಿಯ ಚುನಾವಣೆಯಲ್ಲಿ ಬಿ.ಪ್ಯಾಕ್ ಎನ್ನುವ ಸರ್ಕಾರೇತರ ಸಂಸ್ಥೆಯೊಂದು ವಿಶೇಷಪಾತ್ರ ವಹಿಸಲು ಮುಂದಾಗಿರುವುದನ್ನು ಕಾಣಬಹುದಾಗಿದೆ. ಬಿ.ಪ್ಯಾಕ್ ಎಂದರೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ. ಹಾಗೆಂದರೆ ಬೆಂಗಳೂರು ರಾಜಕೀಯ ಕ್ರಿಯಾಸಮಿತಿ ಎನ್ನಬಹುದು. ಈ ಸಂಸ್ಥೆಯನ್ನು ಮಾಡಿಕೊಂಡಿರುವುದು ರಾಜ್ಯದ ಪ್ರಮುಖ ಉದ್ದಿಮೆಗಳಲ್ಲಿ ಮುಖ್ಯವಾದ ಪಾತ್ರ ಹೊಂದಿರುವ ‘ಕೆಲವು ಗಣ್ಯ’ರು! ಈ ಸಂಸ್ಥೆಯ ಅಂತರ್ಜಾಲ ತಾಣವನ್ನು ನೋಡಿದರೆ ವಿವರ ತಿಳಿಯುತ್ತದೆ. ಸದರಿ ಗಣ್ಯರು ಬೆಂಗಳೂರನ್ನು ಉದ್ಧಾರ ಮಾಡಬೇಕೆಂಬ ಆಶಯದಿಂದ ಕಟ್ಟಿಕೊಂಡಿರುವ ಈ ಸಂಸ್ಥೆಯ ಮುಖ್ಯಉದ್ದೇಶ ಇದರ ಹೆಸರೇ ಹೇಳುವಂತೆ "ರಾಜಕೀಯ" ಲಾಬಿ! ಈ ಸಂಸ್ಥೆಯ ಧ್ಯೇಯೋದ್ದೇಶಗಳು ಮತ್ತು ನಡೆಗಳು ಹೀಗಿವೆ.

ಬಿ. ಪ್ಯಾಕ್ ಉದ್ದೇಶಗಳು!

ಬೆಂಗಳೂರಿನ ಎಲ್ಲಾ ನಗರಪಾಲಿಕೆ ಸದಸ್ಯರುಗಳ ಆಯ್ಕೆಯಲ್ಲಿ, ಶಾಸಕರ ಆಯ್ಕೆಯಲ್ಲಿ, ಸಂಸದರ ಆಯ್ಕೆಯಲ್ಲಿ  ಸಾರ್ವಜನಿಕ ಆಡಳಿತದಲ್ಲಿ ಬಲಿಷ್ಠರಾದವರನ್ನು ಆರಿಸಿ ಬೆಂಬಲಿಸುವುದು. ಇವರು ಯಾವ ಪಕ್ಷಕ್ಕೆ ಸೇರಿದವರು ಎನ್ನುವುದು ಮುಖ್ಯವಲ್ಲಾ. ಬದಲಿಗೆ ಬಿ.ಪ್ಯಾಕ್ ಯೋಜನೆಗಳನ್ನು ಒಪ್ಪುವಂತವರಾಗಿದ್ದರೆ ಸಾಕು ಮತ್ತು ಪ್ರಮುಖವಾಗಿ ಕ್ರಿಮಿನಲ್‌ಗಳಾಗಿಲ್ಲದಿದ್ದರೆ ಸಾಕು.  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಹದಿನಾಲ್ಕು ಅಭ್ಯರ್ಥಿಗಳಿಗೆ ತಮ್ಮ ಟ್ರಸ್ಟಿನಿಂದ ಚುನಾವಣೆಯಲ್ಲಿ ಖರ್ಚು ಮಾಡಲು ತಲಾ ಐದು ಲಕ್ಷ ರೂಪಾಯಿಗಳನ್ನೂ ಕೊಡುತ್ತಿದ್ದಾರೆ. ಒಂದೇ ಕ್ಷೇತ್ರದಲ್ಲಿ ಇಬ್ಬರು ಬೆಂಬಲಿತ ಅಭ್ಯರ್ಥಿಗಳಿದ್ದರೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ.

ಈ ಗುಂಪಿನ (ಕಮಿಟಿಯ) ಹಿಂದೆ ಇರುವವರು ಮೂಲತಃ ಬೆಂಗಳೂರಿನಲ್ಲಿ ಉದ್ದಿಮೆ ಹೊಂದಿರುವ ಗಣ್ಯರುಗಳು. ಕಾರ್ಪೋರೇಟ್ ವಲಯದ ದಿಗ್ಗಜರುಗಳು. ಇವರುಗಳ ಉದ್ದೇಶವನ್ನು ಕೇಳಿ ಬೆಂಗಳೂರಿಗರು ಅತಿಯಾಗಿ ಹಿಗ್ಗುವಂತೇನೂ ಇಲ್ಲಾ! ಯಾಕೆಂದರೆ ಇದೇ ಅಂತರ್ಜಾಲ ತಾಣದಲ್ಲಿ ಬೆಂಗಳೂರಿನ ಬಗ್ಗೆ ಏನನ್ನು ಮಾಡಬೇಕೆಂದು ಬಯಸುತ್ತಿದ್ದಾರೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಭ್ರಷ್ಟಾಚಾರ ರಹಿತವಾದ ದಕ್ಷ ಆಡಳಿತದ ಪರವಾಗಿದ್ದೇವೆಂದು ಹೇಳುವ ಈ ತಂಡದವರು ಆಡಳಿತ ಸುಧಾರಣೆಯ ಅನೇಕ ಯೋಜನೆಗಳ ಜೊತೆಯಲ್ಲಿ ಮೂಲತಃ "ನಗರ ಆಳ್ವಿಕೆ (ಸಿಟಿ ಗವರ್ನೆನ್ಸ್)" ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆ ಹಣವನ್ನು ಬೆಂಗಳೂರಿಗಾಗೇ ಬಳಸುವ ಉದ್ದೇಶವನ್ನು ಹೊಂದಿದ್ದಾರೆ. ನಗರದ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ರೊಫೆಶನಲ್ ತೆರಿಗೆ (೧೦೦%),  ಸ್ಟಾಂಪ್ ಡ್ಯೂಟಿ (೫೦%) ಮತ್ತು ರಸ್ತೆ ತೆರಿಗೆ(೫೦%)ಯನ್ನು ನಗರದ ಬಿಡಿಎ, ಬಿಬಿಎಂಪಿ ಹಾಗೂ ಇನ್ನಿತರ ಸಂಸ್ಥೆಗಳಿಗೇ ನೀಡಬೇಕೆನ್ನುವುದು ಇವರ ನಿಲುವು. 

ಇದು ತರವೇ?

ಈ ನಿಲುವುಗಳ ಹಿಂದೆ ಬೆಂಗಳೂರನ್ನು ಸಿಟಿ ಸ್ಟೇಟ್ ಮಾಡುವ ಒಂದು ಸ್ಪಷ್ಟ ಉದ್ದೇಶ ಕಾಣುತ್ತದೆ. ಇಡೀ ಕರ್ನಾಟಕದ ಒಟ್ಟು ಆದಾಯದಲ್ಲಿ ೬೦% ಬೆಂಗಳೂರಿನಲ್ಲೇ ಹುಟ್ಟುವುದರಿಂದ ಇವರು ಹೇಳುವುದು ಸರಿಯೆಂದೇ ಬೆಂಗಳೂರಿಗರಿಗೆ ತೋಚಬಹುದು. ಆದರೆ ಈ ನಡೆ ಇಡೀ ಕರ್ನಾಟಕದಿಂದ ಬೆಂಗಳೂರನ್ನು ಬೇರೆ ಮಾಡುವ ಅಪಾಯ ಹೊಂದಿದೆ. ರಾಜ್ಯಗಳಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆ ಹಣದ ಮೇಲೆ ಆಯಾ ರಾಜ್ಯಗಳಿಗೇ ಪೂರ್ತಿ ಹಕ್ಕು ಕೊಡಿ ಎನ್ನುವುದನ್ನು ಇದಕ್ಕೆ ಹೋಲಿಸಲಾಗದು. ಏಕೆಂದರೆ ರಾಜ್ಯವೊಂದರಲ್ಲಿ ಆ ರಾಜ್ಯದ ಸಂಪನ್ಮೂಲಗಳನ್ನು ಬಳಸಿ ಉತ್ಪಾದನೆ, ವ್ಯಾಪಾರ, ವಹಿವಾಟು, ಉದ್ದಿಮೆ ನಡೆಸಲಾಗುತ್ತದೆ. ಆ ಮೂಲಕ ತೆರಿಗೆ ಕೂಡಿಹಾಕಲಾಗುತ್ತದೆ. ಈ ತೆರಿಗೆಯಲ್ಲಿ ದೊಡ್ಡಪಾಲನ್ನು ಆ ರಾಜ್ಯದ ಅಭಿವೃದ್ಧಿಗಾಗಿ ಬಳಸಲು ರಾಜ್ಯ ಹೀಗೆ ಒತ್ತಾಯಿಸುತ್ತದೆ.

ಆದರೆ ಇದೇ ಮಾತನ್ನು ಬೆಂಗಳೂರಿನಂತಹ ನಗರದ ಬಗ್ಗೆ ಹೇಳಲಾಗದು. ಇಲ್ಲಿಗೆ ನೀರು ಮಂಡ್ಯದಿಂದ ಬರಬೇಕು.  ವಿದ್ಯುತ್ ಶಿವನಸಮುದ್ರದಿಂದ ಬರಬೇಕು. ಹಾಲು ಕೋಲಾರದಿಂದ ಬರಬೇಕು. ತರಕಾರಿ ಮತ್ತೊಂದರಿಂದ, ಜನರು ಮಗದೊಂದರಿಂದ... ಇದಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ರಾಜ್ಯಸರ್ಕಾರ ಮತ್ತು ಇಡೀ ರಾಜ್ಯದ ಕೊಡುಗೆಯ ಕಾರಣದಿಂದಲೇ ಬೆಂಗಳೂರು ಇಂದಿನ ಕಾರ್ಪೋರೇಟ್ ಬೆಂಗಳೂರಾಗಿ ಎದ್ದು ನಿಂತಿದೆ. ಇದಕ್ಕಾಗಿ ಎಲ್ಲಾ ಪ್ರದೇಶಗಳಿಂದಲೂ ಕೊಡುಗೆಯಿದೆ ಎನ್ನುವುದನ್ನು ಕಡೆಗಣಿಸಲಾಗದು. ರಾಜ್ಯಕ್ಕೆ ಇಂದು ಬೆಂಗಳೂರನ್ನು ಬೆಳೆಸಿದ ಹಾಗೆ, ಮತ್ತೊಂದು ಊರನ್ನೂ ಬೆಳೆಸುವ ಅವಕಾಶ ಇತ್ತು ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಬೆಂಗಳೂರನ್ನು ಕರ್ನಾಟಕದಿಂದ ಬೇರೆಯಾಗಿ ನೋಡಲಾಗದು ಎನ್ನುವ ಅರಿವಾಗುತ್ತದೆ. ಹಾಗಾಗಿ ಈ "ಸಿಟಿ ಸ್ಟೇಟ್" ಪರಿಕಲ್ಪನೆ ಸರಿಯೇ ಎಂಬುದು ಪ್ರಶ್ನಾರ್ಹವಾದುದಾಗಿದೆ. ಇಡೀ ರಾಜ್ಯವನ್ನೇ ಬೆಳೆಸಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರವು ತನ್ನ ಆದಾಯದ ದೊಡ್ಡಮೂಲವನ್ನೇ ಬಿಟ್ಟುಕೊಡಬೇಕೆನ್ನುವ ಮಾತನ್ನು ಒಪ್ಪಲಾಗದು!

ಬೆಂಬಲಿತರ ನಿಲುವೇನು?

ಇಷ್ಟಕ್ಕೂ ಈ ಸಂಸ್ಥೆಯವರು ಬೆಂಬಲ ನೀಡಿ ಶಿಫ಼ಾರಸ್ಸು ಮಾಡಿ, ಚುನಾವಣೆಯ ಕರ್ಚಿಗೆ ಹಣ ನೀಡುತ್ತಿರುವ ಅಭ್ಯರ್ಥಿಗಳು ಈ ಬಗ್ಗೆ ಏನನ್ನುತ್ತಾರೆ ಎನ್ನುವುದು ಕುತೂಹಲಕಾರಿಯಾದುದಾಗಿದೆ. ಯಾಕೆಂದರೆ ಸ್ಪಷ್ಟವಾಗಿಯೇ ಬಿ.ಪ್ಯಾಕ್‌ನವರು ತಮ್ಮ ನೀತಿಗಳನ್ನು ಒಪ್ಪಿದವರನ್ನು ಮಾತ್ರಾ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ಇವರಿಂದ ಬೆಂಬಲ ಪಡೆದವರು ಇವರ ನಿಲುವುಗಳನ್ನು ಒಪ್ಪಿದ್ದಾರೆ ಎನ್ನುವುದಾದರೆ ಅದನ್ನು ನೇರವಾಗಿ ಜನರ ಮುಂದಿಡಬೇಕಾದ್ದು ನ್ಯಾಯವಾದುದಾಗಿದೆ. ಬೆಂಗಳೂರನ್ನು ಕರ್ನಾಟಕದಿಂದ ಬೇರೆಯ ರೀತಿಯಲ್ಲಿ ನಡೆಸಿಕೊಳ್ಳುವ ಉದ್ದೇಶವಿದೆ ಎನ್ನುವುದನ್ನು ಹೇಳಿಕೊಳ್ಳಲಿ. ಸಿಟಿ ಸ್ಟೇಟ್ ಪರಿಕಲ್ಪನೆಯು ಚರ್ಚೆಗೊಳಗಾಗಲಿ

ಇವೆಲ್ಲಕ್ಕೂ ಮಿಗಿಲಾಗಿ ಕಾರ್ಪೋರೇಟ್ ವಲಯದವರು ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಜನತೆಯ ಹೆಸರಲ್ಲಿ ಮೂಗುತೂರಿಸುವುದು, ತಮ್ಮ ಮೂಗಿನ ನೇರದ ಬೇಡಿಕೆಗಳನ್ನು ಮುಂದಿಟ್ಟು ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರುವುದು ಎಷ್ಟು ಸರಿ ಎಂಬುದನ್ನು ಜನರು ಯೋಚಿಸಬೇಕಾಗಿದೆ. ಈ ಗುಂಪಿನ ಆದ್ಯತೆಗಳೇನು, ಉದ್ದೇಶಗಳೇನು, ಕಾರ್ಯವೈಖರಿಯೇನು ಎನ್ನುವುದನ್ನೆಲ್ಲಾ ಸೂಚ್ಯವಾಗಿ ತಿಳಿಸುವ ಒಂದು ಫೋಟೋ ಇಲ್ಲಿದೆ... ನೋಡಿ!


ಈ ದಿಗ್ಗಜರು ನಡೆಸುತ್ತಿರುವ ಸಂವಾದ ಕಾರ್ಯಕ್ರಮದ ಈ ಫೋಟೋದಲ್ಲಿ ಗಮನಿಸಬೇಕಾದ ಅಂಶಗಳು ಎರಡು... ಒಂದಕ್ಷರ ಕನ್ನಡವೂ ಇದರಲ್ಲಿಲ್ಲ ಎನ್ನುವುದು ಮತ್ತು ಒಂದು ಸಂವಾದಕ್ಕೂ ಬೇರೆ ಬೇರೆ ಸಂಸ್ಥೆಗಳ ಪ್ರಾಯೋಜಕತ್ವ ಪಡೆದಿರುವುದು. ಇವರ ಕಲ್ಪನೆಯ ಬೆಂಗಳೂರಿನಲ್ಲಿ ಕನ್ನಡ ಕನ್ನಡಿಗರಿಗೆ ಸ್ಥಾನವೇನು ಮತ್ತು ರಾಜಕಾರಣದಲ್ಲಿ ಈ ಕಾರ್ಪೋರೇಟ್ ವಲಯದ ಉದ್ದೇಶಿತ ಹಿಡಿತವೇನು ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಒಟ್ಟಾರೆ ಬಿ.ಪ್ಯಾಕ್ ಸಂಸ್ಥೆಯ ಅಜೆಂಡಾ ಬೆಂಗಳೂರನ್ನು ಕರ್ನಾಟಕದಿಂದ ಕಸಿದುಕೊಳ್ಳುವ ಹುನ್ನಾರದಂತೆ ತೋರಿದರೆ ಅಚ್ಚರಿಯಿಲ್ಲ!

ರಾಜಕೀಯ ಪಕ್ಷಗಳೇ! ಕೇಳ್ರಪ್ಪೋ ಕೇಳಿ.. ನಮಗೆ ಬೇಕಾದ್ದು ಇದು!

ಬರುವ ಮೇ ಐದರಂದು ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್, ಜನತಾದಳ, ಭಾರತೀಯ ಜನತಾಪಕ್ಷ, ಕರ್ನಾಟಕ ಜನತಾಪಕ್ಷ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಕಣದಲ್ಲಿವೆ. ಈ ಎಲ್ಲಾ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಮಾಮೂಲಿನಂತೆ ಈ ಪ್ರಣಾಳಿಕೆಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಡುವ ಒಂದು ರೂಪಯಿ ಅಕ್ಕಿ, ಬಿಟ್ಟಿ ಕಂಪ್ಯೂಟರ್ ಮೊದಲಾದ ಕೊಡುಗೆಗಳ ಮಹಾಪೂರವೇ ಇದೆ. ನಿಜಕ್ಕೂ ಕರ್ನಾಟಕದ ಏಳಿಗೆಯ ಬಗ್ಗೆ ನಮ್ಮ ರಾಜಕೀಯ ಪಕ್ಷಗಳಿಗೆ ಎಷ್ಟರಮಟ್ಟಿಗೆ ಕಾಳಜಿಯಿದೆ ಎಂಬುದು ಪ್ರಶ್ನಾರ್ಹವಾಗಿದೆ. ಈ ಪಕ್ಷಗಳ ಪ್ರಣಾಳಿಕೆಯಲ್ಲಿ ಹೆಚ್ಚಾಗಿ ಅಗ್ಗದ ಜನಪ್ರಿಯತೆಯ ಯೋಜನೆಗಳನ್ನು ಬಿಟ್ಟರೆ ದೀರ್ಘಾವಧಿಯಲ್ಲಿ ಏನಾಗಬೇಕು ಎನ್ನುವ ಚಿಂತನೆಯೇ ಕಾಣದು. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ನಾಡು ಏನಾಗಬೇಕು? ನಾಡಿನ ಏಳಿಗೆಯ ನಾನಾ ಮೆಟ್ಟಿಲುಗಳಾವುವು? ಅವುಗಳನ್ನು ಹೇಗೆ ಈಡೇರಿಸುತ್ತೇವೆ? ಎಂಬುದರ ಬಗ್ಗೆ ಎಳ್ಳಷ್ಟೂ ಭರವಸೆಗಳಿಲ್ಲದಿರುವುದು ಕಾಣುತ್ತದೆ.

ನಾಡಿಗೆ ಬೇಕಿರುವುದು!

ಕನ್ನಡನಾಡಿನ ಏಳಿಗೆಗೆ ಆಗಬೇಕಾದ ಮಹತ್ವವಾದ ಅನೇಕ  ವಿಷಯಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ ನೋಡಿ.

ಕನ್ನಡಮಾಧ್ಯಮದಲ್ಲಿನ ಕಲಿಕೆಯನ್ನು ಜಗತ್ತಿನ ಅತ್ಯುತ್ತಮ  ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಏನೇನೆಲ್ಲಾ ಆಗಬೇಕೋ ಅದೆಲ್ಲವನ್ನೂ ಮಾಡಬೇಕು. ಯಾವ ಕಡ್ಡಾಯ ಮಾಧ್ಯಮ ಕಲಿಕೆಯೂ ಇಲ್ಲಿರುವುದಿಲ್ಲ. ಆದರೆ ಜನರಿಗೆ ತಾಯ್ನುಡಿ ಕಲಿಕೆಯ ಮಹತ್ವವನ್ನು ತಾವೇ ಕಣ್ಣಾರೆ ಕಾಣುವಂತಹ ದೂರದೃಷ್ಟಿಯನ್ನು ಹೊಂದಿರುವ ವ್ಯವಸ್ಥೆಯನ್ನು ಕಟ್ಟಬೇಕು. ಪ್ರಪಂಚದ ಎಲ್ಲಾ ಬಗೆಯ ಜ್ಞಾನ ವಿಜ್ಞಾನವನ್ನು ಕನ್ನಡಕ್ಕೆ ತರುವ ಕೆಲಸವನ್ನು ಶುರುಮಾಡಬೇಕು. ಇದಕ್ಕೆ ಬೇಕಾದ ಗಡುವಿನೊಳಗೆ ಪೂರೈಸುವ ಕಾರ್ಯಯೋಜನೆಗಳನ್ನು ರೂಪಿಸಬೇಕು. ಇದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಹೊಂದಿಸುವುದು.

ಕರ್ನಾಟಕದ ಆಡಳಿತ ಭಾಷೆಯಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಇಲ್ಲಿನ ಎಲ್ಲಾ ಸಾರ್ವಜನಿಕ ಕಚೇರಿಗಳಲ್ಲೂ ಕನ್ನಡದಲ್ಲಿ ಸೇವೆ ನೀಡುವುದು ಕಡ್ಡಾಯ. ಈ ನೆಲದಲ್ಲಿ ನೆಲೆಗೊಳ್ಳುವ ಯಾವುದೇ ಸಾರ್ವಜನಿಕ ಬಳಕೆಯ/ ಉಪಯುಕ್ತತೆಯ ಉದ್ದೇಶದ ಸಂಸ್ಥೆಗಳು ಕನ್ನಡದಲ್ಲಿ ವ್ಯವಹರಿಸತಕ್ಕದ್ದು.

ಈ ನಾಡಿಗಾಗಿ ಸಮಗ್ರವಾದ ನೀರಾವರಿ ಯೋಜನೆಗಳನ್ನು ರೂಪಿಸಿ ಗೊತ್ತುಮಾಡಿದ ಕಾಲಮಿತಿಯೊಳಗೆ ಜಾರಿಮಾಡತಕ್ಕದ್ದು. ರಾಜ್ಯದ ಒಳಗಿನ ಎಲ್ಲಾ ನದಿಗಳ ನೀರನ್ನು ಸದುಪಯೋಗ ಮಾಡಿಕೊಳ್ಳಲು, ನಮ್ಮ ನೆಲದ ಮೇಲೆ ಬೀಳುವ ಮಳೆಯ ಪ್ರತಿಯೊಂದು ನೀರಹನಿಯನ್ನೂ ವ್ಯರ್ಥವಾಗದಂತೆ ಸಂಗ್ರಹಿಸುವ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಮಾಡುವುದು. ವ್ಯವಸಾಯ, ಕೈಗಾರಿಕೆ, ಉದ್ದಿಮೆಗಾರಿಕೆಯೇ ಮೊದಲಾದ ದುಡಿಮೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜಗತ್ತಿನ ಉತ್ಕೃಷ್ಟ ಕಾರ್ಯವಿಧಾನಕ್ಕೆ ಸಾಟಿಯಾಗಬಲ್ಲ ತರಬೇತಿ, ಸಂಶೋಧನೆಯಂತಹ ಮೂಲಭೂತ ಕೆಲಸಗಳು ನಡೆಯಲು ಏರ್ಪಾಟು ಮಾಡುವುದು.

ನಾಡಿನ ಒಳಗಿನ ಪ್ರತಿನಗರಗಳ ನಡುವಿನ ರಸ್ತೆ ರೈಲು ವಿಮಾನ ಸಂಪರ್ಕಗಳನ್ನು ಅತ್ಯುತ್ತಮಗೊಳಿಸುವುದು. ಎಲ್ಲಾ ರಸ್ತೆಗಳನ್ನೂ ಆರ್ಥಿಕ ಬೆಳವಣಿಗೆಗೆ ಹೆದ್ದಾರಿಗಳಂತೆ ರೂಪಿಸುವುದು. ಇಡೀ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹುಟ್ಟಿಸುವ ಉದ್ದಿಮೆಗಳನ್ನು ಸ್ಥಾಪಿಸಲು ಉತ್ತೇಜಿಸುವ ನೀತಿಯನ್ನು ರೂಪಿಸತಕ್ಕದ್ದು. ಯಾವುದೇ ಕಲಿಕೆಯನ್ನು ಮಾಡಿದವನಿಗೂ ತನ್ನ ಜಿಲ್ಲೆಯ ವ್ಯಾಪ್ತಿಯೊಳಗೇ ಅದಕ್ಕೆ ತಕ್ಕಂತಹ ಉದ್ಯೋಗಾವಕಾಶ ಇರುವಂತಹ ವ್ಯವಸ್ಥೆಯನ್ನು ಕಟ್ಟುವುದು. ಹೊಸದಾಗಿ ಉದ್ದಿಮೆ ಸ್ಥಾಪಿಸುವವರಿಗೆ ಅನುಕೂಲಕರವಾದ ನೀತಿಗಳನ್ನು ರೂಪಿಸುವುದು.

ರಾಜ್ಯದ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯನ್ನು ಮಾಡಲು ಅನುವಾಗುವಂತೆ ನಾನಾ ಯೋಜನೆಗಳನ್ನು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು. ಇಡೀ ರಾಜ್ಯಕ್ಕೆ ಸದಾಕಾಲ ಗುಣಮಟ್ಟದ ವಿದ್ಯುತ್ ಪೂರೈಸಲು ಬೇಕಾದ ಯೋಜನೆಗಳನ್ನು ರೂಪಿಸುವತ್ತಾ ದಾಪುಗಾಲಿಡುವುದು.

ಕೇಂದ್ರವು "ಭಾರತದ ದೇಶದ ಇಂದಿನ ಹುಳುಕಿನ ಭಾಷಾನೀತಿಯನ್ನು ಕೈಬಿಡತಕ್ಕದ್ದು. ಭಾರತದ ಆಡಳಿತ ಭಾಷೆಯಾಗಿ ಕನ್ನಡವನ್ನೂ ಪರಿಗಣಿಸತಕ್ಕದ್ದು. ಕನ್ನಡನಾಡಿನಲ್ಲಿ ತ್ರಿಭಾಷಾ ಸೂತ್ರವನ್ನು ಕಿತ್ತೊಗೆಯತಕ್ಕದ್ದು. ಅಂತರರಾಜ್ಯ ವಲಸೆ ನಿಯಂತ್ರಣಕ್ಕೆ ಬಿಗಿನೀತಿಯನ್ನು ರೂಪಿಸತಕ್ಕದ್ದು" ಎಂಬ ನಿಟ್ಟಿನಲ್ಲಿ ಒತ್ತಾಯಿಸತಕ್ಕದ್ದು.

ಆರ್ಥಿಕ ಮತ್ತು ರಾಜಕೀಯ ಅಧಿಕಾರಗಳ ವಿಕೇಂದ್ರಿಕರಣಕ್ಕಾಗಿ ಕೇಂದ್ರವನ್ನು ಒತ್ತಾಯಿಸುವುದು. ಆಡಳಿತ ಪಟ್ಟಿಯನ್ನು ಮರು ರೂಪಿಸಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರಗಳನ್ನು ದಕ್ಕಿಸಿಕೊಳ್ಳುವುದು.

ಕರ್ನಾಟಕದಲ್ಲಿ ಭಾರತ ಸರ್ಕಾರ ಪ್ರಣೀತ ಕುಟುಂಬ ಯೋಜನೆಗೆ ವಿದಾಯ ಹೇಳತಕ್ಕದ್ದು. ನಮ್ಮ ನಾಡಿನ ಜನಸಂಖ್ಯೆ, ಜನದಟ್ಟಣೆ ಮತ್ತು ಹೆರುವೆಣಿಕೆಗಳನ್ನು (Target TFR) ನಾವೇ ತೀರ್ಮಾನಿಸತಕ್ಕದ್ದು.

ಕೊನೆಹನಿ: ಇವಿಷ್ಟನ್ನು ಮಾತ್ರವೇ ನಾವು ಜನಪರ ಎನ್ನುತ್ತಿಲ್ಲಾ. ಅಗ್ಗದ ಜನಪ್ರಿಯ ಯೋಜನೆಗಳನ್ನು ಒಮ್ಮೆಗೇ ಕೈಬಿಟ್ಟುಬಿಡಬೇಕು ಎನ್ನುತ್ತಿಲ್ಲಾ. ಭ್ರಷ್ಟಾಚಾರ ನಿಯಂತ್ರಣ ಮತ್ತು ಉತ್ತಮ ಆಡಳಿತಗಳ ಅಗತ್ಯವಿಲ್ಲಾ ಎನ್ನುತ್ತಿಲ್ಲಾ. ಅವೆಲ್ಲಾ ಬೇಕು. ಜೊತೆಯಲ್ಲಿ ದೀರ್ಘಾವಧಿ ಮತ್ತು ಶಾಶ್ವತವಾಗುವಂತಹ ಯೋಜನೆಗಳನ್ನು ರೂಪಿಸುವತ್ತ ನಮ್ಮ ರಾಜಕೀಯ ಪಕ್ಷಗಳು ಯೋಚಿಸಲಿ ಎನ್ನುತ್ತಿದ್ದೇವೆ.. ಇಂಥದ್ದೊಂದು ನಮ್ಮ ನಾಡಿಗೆ ಬೇಕು ಎನ್ನುವುದನ್ನು ಮತದಾರರು ಬಯಸುತ್ತಿದ್ದಾರೆ ಎಂದು ಹೇಳುತ್ತಿದ್ದೇವೆ...ಅಷ್ಟೇ!
Related Posts with Thumbnails