ಮುಖ್ಯಮಂತ್ರಿಗಳಾಗಲಿರುವ ಮಾನ್ಯ ಶ್ರೀ ಸಿದ್ದರಾಮಯ್ಯನವರೇ,
ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಹೊಸ ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗುವಲ್ಲಿ ತಮ್ಮ ಪಾತ್ರವೂ ದೊಡ್ಡದಿದೆ. ಸದರಿ ಸರ್ಕಾರದ ಮುಖ್ಯಸ್ಥರಾಗಿಯೂ ತಾವು ಆಯ್ಕೆಯಾಗಿದ್ದೀರಿ. ನಿಮ್ಮ ಪಕ್ಷವು ಈ ಬಾರಿ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಕೆಲವು ನಾಡಿಗೆ ನಿಜಕ್ಕೂ ಏಳಿಗೆಗೆ ಪೂರಕವಾದವುಗಳಾಗಿವೆ. ಇವುಗಳತ್ತ ತಮ್ಮ ಗಮನ ಸೆಳೆಯುವುದು ನಮ್ಮ ಉದ್ದೇಶ! ಏನೇ ಆಗಲಿ.. ಇವುಗಳನ್ನಾದರೂ ಮಾಡಿರಿ ಎನ್ನುವುದು ನಮ್ಮ ಒತ್ತಾಯ!!
ಕಾಂಗ್ರೆಸ್ ಪ್ರಣಾಳಿಕೆಯಂತೆ ಆಗಲೇ ಬೇಕಾದ್ದು!
ಇವೆಲ್ಲದರ ಜೊತೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನೂ ಸಂಪರ್ಕಿಸುವ ರೈಲು ಮಾರ್ಗಗಳನ್ನು ರಾಜ್ಯಕ್ಕೆ ತರಲು ಸಮಗ್ರ ಯೋಜನೆಯನ್ನು ರೂಪಿಸಿ ಕೇಂದ್ರಸರ್ಕಾರದಿಂದ ಜಾರಿಮಾಡಿಸಿ. ರಾಜ್ಯಕ್ಕೆ ಹೆಚ್ಚೆಚ್ಚು ವಿದ್ಯುತ್ ರೈಲು ಮಾರ್ಗಗಳನ್ನು ತರಲು ಮುಂದಾಗಿರಿ.
ಏಳಿಗೆಗೆ ಬೇಕಾದ್ದು!
ಒಂದು ನಾಡಿನ ಏಳಿಗೆಗೆ ಬೇಕಾದ್ದು ಆ ನಾಡಿನ ರಸ್ತೆ, ರೈಲು, ನೀರು ಮೊದಲಾದ ಮೂಲಭೂತಸೌಕರ್ಯಗಳನ್ನು ಕಟ್ಟಿಕೊಡುವುದು. ಆ ನಾಡಿನ ಜನರ ಕಲಿಕೆಯನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ದುಡಿಮೆಯ ಅವಕಾಶಗಳನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ಕೌಶಲಗಳನ್ನು ಹೆಚ್ಚಿಸುವುದು. ಆ ನಾಡಿನಲ್ಲಿ ಉದ್ದಿಮೆಗಳನ್ನು ನಡೆಸಲು ಪೂರಕವಾದ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ವ್ಯವಸ್ಥೆಯನ್ನು ಕಟ್ಟುವುದು! ನಿಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಎಲ್ಲವನ್ನೂ ಮಾಡಿ. ನಮ್ಮ ಜನರ ಕಲಿಕೆ ಅತ್ಯುತ್ತಮವಾಗಲು, ಜಗತ್ತಿನ ಅತ್ಯುತ್ತಮ ಕಲಿಕೆಯ ವ್ಯವಸ್ಥೆಗಳ ಸಾಲಿನಲ್ಲಿ ನಮ್ಮದನ್ನೂ ನಿಲ್ಲಿಸಬಲ್ಲಂತಹ ಕನ್ನಡದ ಕಲಿಕೆಯ ವ್ಯವಸ್ಥೆಯನ್ನು ಕಟ್ಟಲು ಬೇಕಾದ ದೀರ್ಘಾವಧಿ ಯೋಜನೆಯನ್ನು ಮಾಡಿರಿ. ನೀವು ಇತ್ತೀಚಿಗಷ್ಟೇ ನಾಡಿನ ಅನೇಕ ಹಿರಿಯ ಕವಿ-ಸಾಹಿತಿ-ಚಿಂತಕರುಗಳನ್ನು ಭೇಟಿಯಾಗಿ ಬಂದಿದ್ದೀರಿ. ಇದು ಅವರುಗಳ ಮೇಲಿನ ಗೌರವದಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಗೌರವ ಅದೇ ಹಿರಿಯರು ತಾಯ್ನುಡಿ ಶಿಕ್ಷಣದ ಪರವಾಗಿ ಹೊಂದಿರುವ ನಿಲುವುಗಳ ಬಗ್ಗೆಯೂ ತಮಗಿರಲಿ ಎನ್ನುವುದು ನಮ್ಮ ಆಶಯ!
ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವ, ಇಡೀ ಪ್ರಪಂಚದಲ್ಲಿ ನಮ್ಮನ್ನು ಉಳಿದವರಿಗಿಂತಲೂ ಬೇರೆಯಾಗಿಸಿರುವ ನಮ್ಮ ನುಡಿ, ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಪೊರೆಯುವ ಕ್ರಮಗಳನ್ನು ಕೈಗೊಳ್ಳಿರಿ. ಧರ್ಮ, ಜಾತಿ, ಆಚರಣೆ, ಒಳನುಡಿಗಳೇ ಮೊದಲಾದ ವಿಭಿನ್ನತೆಗಳನ್ನು ಕನ್ನಡತನದ ಮೂಲಕ ಒಗ್ಗೂಡಿಸಿ ಹಿಡಿದಿಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿರಿ. ಕನ್ನಡಿಗರಿಗೆ ತಮ್ಮದೇ ನೆಲದಲ್ಲಿ ಬದುಕು ನಡೆಸಲು ತೊಡಕಾಗದಂತಹ ಆಡಳಿತ ವ್ಯವಸ್ಥೆಯನ್ನು ಕಟ್ಟುವುದು ಒಂದು ಮುಖ್ಯವಾದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಕಾರ್ಯನಿರ್ವಹಿಸಲಿ...
ಒಟ್ಟಾರೆ ನಾಡಿನ ಜನರ ನಿರೀಕ್ಷೆಗಳೇನೋ ಹೆಚ್ಚಾಗಿಯೇ ಇವೆ. ಇವುಗಳನ್ನು ಈಡೇರಿಸುವತ್ತ ಮುಂದಾಗಿ.. ಇದು ನಮ್ಮ ನಾಡಿನ ಹೊಸ ಮುಖ್ಯಮಂತ್ರಿಗಳಾಗುತ್ತಿರುವ ನಿಮ್ಮಿಂದ ನಮಗಿರುವ ನಿರೀಕ್ಷೆ! ಕಾಂಗ್ರೆಸ್ಸಿನವರು ಸಾಕಷ್ಟು ಭರವಸೆಗಳನ್ನು ನೀಡಿದ್ದೀರಾ! ಈ ಭರವಸೆಗಳು ಭರವಸೆಗಳಲ್ಲಾ... ನಾಡಿಗರಿಗೆ ಕೊಟ್ಟ ಮಾತು! ನೀವು ಮಾತು ತಪ್ಪದ ಮಗನಾಗಿರಿ ಎಂಬುದು ನಮ್ಮ ಆಗ್ರಹ!

ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ






