Showing posts with label ಭಾರತದ ಪರಿಕಲ್ಪನೆ. Show all posts
Showing posts with label ಭಾರತದ ಪರಿಕಲ್ಪನೆ. Show all posts

ಸಹಜ ನ್ಯಾಯವೆನ್ನುವುದೇ ಇಲ್ಲಿ ಸಂವಿಧಾನ ಬಾಹಿರ!

(ಚಿತ್ರಕೃಪೆ: ಉದಯವಾಣಿ ದಿನಪತ್ರಿಕೆ)
ರಾಜ್ಯಸರ್ಕಾರ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕವನ್ನು ಹಾಕುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು "ಸರಿಯಿಲ್ಲಾ" ಎಂದು ರಾಜ್ಯ ಉಚ್ಚನ್ಯಾಯಾಲಯ ಹೇಳಿದೆ ಎನ್ನುವ ಸುದ್ದಿ ಇಂದಿನ (೩೧.೦೩.೨೦೧೪ರ) ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸಂವಿಧಾನಬಾಹಿರ ಎಂದರೂ ಇದು ನ್ಯಾಯಬದ್ಧ!

ಕನ್ನಡನಾಡಲ್ಲಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವುದು ಸಹಜ ನ್ಯಾಯ. ಯಾಕೆಂದರೆ ಸರ್ಕಾರ ತನ್ನ ನಾಡಿನ ವ್ಯವಸ್ಥೆಗಳನ್ನು ತನ್ನ ಜನರಿಗೆ ಆದಷ್ಟೂ ಹತ್ತಿರಗೊಳಿಸುವಲ್ಲಿ ಜನರ ನುಡಿ ಪ್ರಮುಖವಾದದ್ದು. ಪ್ರಜಾಪ್ರಭುತ್ವದ ಯಶಸ್ಸಿಗೆ ಇದೊಂದು ಅತ್ಯುತ್ತಮ ಸಾಧನ ಎನ್ನುವುದನ್ನು ಪ್ರಪಂಚವೇ ಎತ್ತಿಹೇಳುತ್ತದೆ. ವಿಶ್ವಸಂಸ್ಥೆಯೂ ನುಡಿಜನಾಂಗಕ್ಕಿರುವ ಹಕ್ಕುಗಳನ್ನು ಗುರುತಿಸಿ ಘೋಷಿಸಿದೆ. ಆದರೆ ಭಾರತದ ಸಂವಿಧಾನದಲ್ಲಿರುವ ಭಾಷಾನೀತಿಯ ಹುಳುಕಿನ ಸಾಲುಗಳು ಈ ನಾಡ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದಮನ ಮಾಡಿದೆ. ರಾಜ್ಯಸರ್ಕಾರಗಳು ಕೇಂದ್ರದ ಗುಲಾಮರು ಎನ್ನುವಂತೆ ರೂಪಿಸಿರುವ ಈ ದೇಶದ ನೀತಿ ನಿಯಮಗಳಲ್ಲಿ...
- ಕರ್ನಾಟಕದ ವಾಹನಗಳ ಮೇಲೆ ಕನ್ನಡದಲ್ಲಿ ನೋಂದಣಿ ಸಂಖ್ಯೆ ಬರೆಯುವುದು ಕಾನೂನು ಬಾಹಿರ
- ಕರ್ನಾಟಕದಲ್ಲಿರುವ ಪಾಸ್‌ಪೋರ್ಟ್ ಕಚೇರಿ, ವಿಮಾನ ನಿಲ್ದಾಣ ಮೊದಲಾದೆಡೆ ಕನ್ನಡ ಬಳಸದಿರುವುದು ಅಪರಾಧವಲ್ಲಾ.
- ಈ ನಾಡಿನ ಅಂಚೆಕಚೇರಿ, ಬ್ಯಾಂಕು, ರೈಲುಗಳಲ್ಲಿ ಕನ್ನಡವೇ ಇರದೆ ಬರೀ ಹಿಂದೀ ಇಂಗ್ಲೀಷ್ ಇರುವುದು ಸಂವಿಧಾನ ಬದ್ಧ!
- ಈ ನಾಡಿನಲ್ಲಿ ಮಾರಾಟವಾಗುವ ಔಷಧಗಳ ಮೇಲೆ ಕನ್ನಡದಲ್ಲಿ ಯಾವ ಮಾಹಿತಿಯನ್ನು ಕೊಡದಿದ್ದರೂ ಪರ್ವಾಗಿಲ್ಲಾ, ಇಂಗ್ಲೀಷು ಹಿಂದೀಲಿ ಇರಬೇಕು.

ಭಾರತದ ಸಂವಿಧಾನವೇ ಇಂಥಾ ಹುಳುಕನ್ನು ಪೊರೆಯುತ್ತಿರುವಾಗ ನಮ್ಮ ಹಣೆಬರಹ ಹೀಗಿರದೆ ಇನ್ನು ಹೇಗಿರಲು ತಾನೇ ಸಾಧ್ಯ? ಇದಕ್ಕೆಲ್ಲಾ ಮದ್ದು ರಾಜ್ಯಸರ್ಕಾರದ ನಾಡಪರಬದ್ಧತೆಯಲ್ಲಿದೆ, ಭಾರತದ ಹುಳುಕಿನ ಭಾಷಾನೀತಿ ಬದಲಾಗುವುದರಲ್ಲಿದೆ, ಕರ್ನಾಟಕದ ರಾಜಕಾರಣ ಕರ್ನಾಟಕ ಕೇಂದ್ರಿತವಾಗುವುದರಲ್ಲಿದೆ... ಬನವಾಸಿ ಬಳಗವು ನಮ್ಮ ಹಕ್ಕೊತ್ತಾಯವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಲುಪಿಸಲು ಮಿಂಬಲೆಯಲ್ಲಿ ಒಂದು ಸಹಿ ಅಭಿಯಾನ ಆರಂಭಿಸಿದೆ. ನೀವು ಅದಕ್ಕೆ ಸಹಿ ಹಾಕಿರಿ. ನಿಮ್ಮವರೊಂದಿಗೂ ಹಂಚಿಕೊಳ್ಳಿ. ಈ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳಿಗೆ ನಾವು ತಲುಪಿಸುತ್ತೇವೆ.

ಪಿಟಿಷನ್ನಿನ ಕೊಂಡಿ: http://chn.ge/1dJ4zsv

ಕನ್ನಡಕ್ಕೆ ಸಂಸ್ಕೃತ ತಾಯಿ - ದಾಯಿ ಎಂಬ ಮತ್ತದೇ ಕಾಗಕ್ಕ ಗುಬ್ಬಕ್ಕನ ಕಥೆ!


ನಿನ್ನೆಯ ದಿವಸ, ಸಂಸ್ಕೃತ ಸಂಜೆ ಕಾಲೇಜು ಉದ್ಘಾಟನೆಯ ಕಾರ್ಯಕ್ರಮ ನಡೆಯಿತೆಂಬ ಸುದ್ದಿ ಇವತ್ತಿನ (೨೦.೧೦.೨೦೧೩ರ) ಸುದ್ದಿಹಾಳೆಗಳಲ್ಲಿ ಬಂದಿದೆ. ಇದರಲ್ಲಿ ಕರ್ನಾಟಕ ರಾಜ್ಯಪಾಲರು ಪಾಲ್ಗೊಂಡು ಮಾತಾಡಿದ್ದಾರೆ. ಇದೇ ರೀತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ಼್ ಲಿವಿಂಗ್ ಆಶ್ರಮದಲ್ಲಿ ನಡೆದ ಮತ್ತೊಂದು ಇಂಥದ್ದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಕತೆಗಾರರಾದ ಶ್ರೀ ಎಸ್.ಎಲ್.ಭೈರಪ್ಪನವರೂ, ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರೂ ಸಂಸ್ಕೃತಿ ಮತ್ತು ಸಂಸ್ಕೃತದ ಬಗ್ಗೆ ಮಾತಾಡಿದ ಸುದ್ದಿ ಪ್ರಕಟವಾಗಿದೆ. ಎರಡೂ ಸುದ್ದಿಗಳ ಸಾರ ಒಂದೇ ಆಗಿರೋದು ಕಾಗೆ ಕೂತು ಟೊಂಗೆ ಮುರಿದ ಹಾಗೇನೂ ತೋರುತ್ತಿಲ್ಲ.

ಸುಳ್ಳುಗಳ ಸರಮಾಲೆ

ಸಂಸ್ಕೃತವನ್ನು ಒಪ್ಪಿಸುವ ಮತ್ತು ಮೆಚ್ಚಿ ಕೊಂಡಾಡುವ ಹುಮ್ಮಸ್ಸಿನಲ್ಲಿ ಎರಡೂ ಕಡೆ ಹೇಳಲಾದ ಸುಳ್ಳುಗಳನ್ನು ನೋಡಿ. ಇದುವರೆವಿಗೂ ಸಂಸ್ಕೃತವನ್ನು ಕನ್ನಡಕ್ಕೆ ತಾಯಿ ಎನ್ನುತ್ತಿದ್ದ ಸುಳ್ಳನ್ನೇ ರಾಜ್ಯಪಾಲರು ಮುಂದುವರೆಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿದ್ದ ಮತ್ತೊಬ್ಬ ಹಿರಿಯರಾದ ನ್ಯಾಯಮೂರ್ತಿ ಎನ್. ಕುಮಾರ್ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟು ಭಾರತೀಯ ಸಂಸ್ಕೃತಿ ಅಡಗಿರುವುದೇ ಸಂಸ್ಕೃತದಲ್ಲಿ.. ಸಂಸ್ಕೃತ ಅರಿಯದೇ ಭಾರತದ ಸಂಸ್ಕೃತಿ ಅರಿಯಲು ಕಷ್ಟ... ಕನ್ನಡ ಸಂಸ್ಕೃತದ ಮಗಳು.. ಎಂದೆಲ್ಲಾ ಹೇಳಿದ್ದಾರೆ. ಹೀಗೆ ಕನ್ನಡದ ತಾಯಿಯ ಹೊಣೆಗಾರಿಕೆಯನ್ನು ಸಂಸ್ಕೃತಕ್ಕೆ ಪುಕ್ಕಟೆಯಾಗಿ ಹೊರಿಸಿಬಿಟ್ಟಿದ್ದನ್ನು ನೋಡಿದರೆ ಹಿಂದೊಮ್ಮೆ ತಮಿಳ ಕರುಣಾನಿಧಿಯವರು "ಕನ್ನಡಿಗರು - ತಮಿಳರ ಚಿಕ್ಕತಮ್ಮಂದಿರು" ಎಂಬ ಹೇಳಿಕೆ ನೀಡಿ ಅಣ್ಣನ ದೊಡ್ಡಸ್ತಿಕೆ ತೋರಿದ್ದು ನೆನಪಾಗುತ್ತದೆ. ಇದೇ ದೊಡ್ಡತನ ತೋರುತ್ತಾ ಕುಮಾರ್ ಅವರು ಕನ್ನಡ ಬೆಳೆದರೆ ಸಂಸ್ಕೃತಕ್ಕೆ ಬೇಸರವಾಗದು ಎಂದು ಬೇರೆ ಹೇಳಿದ್ದಾರೆ.

ಆಶ್ರಮದಲ್ಲಿ ಮಾತಾಡಿದ ಸ್ವಾಮಿಯವರು ಸಂಸ್ಕೃತ ಭಾಷೆ ಉಲಿಯುವುದರಿಂದ ಮಕ್ಕಳ ಬುದ್ದಿಮಟ್ಟ ಹೆಚ್ಚುತ್ತೆ ಎಂದಿದ್ದಾರೆ. ಜೊತೆಯಲ್ಲೇ ಕನ್ನಡದ ತಾಯಿ ಸಂಸ್ಕೃತವಲ್ಲಾ ಎಂಬುದನ್ನು ಅರಿತವರಂತೆ ಮಾತಾಡಿರುವ ಭೈರಪ್ಪನವರು ಸಂಸ್ಕೃತಕ್ಕೆ ತಾಯಿಯ ಬದಲು ದಾಯಿಯ ಸ್ಥಾನ ನೀಡಿದ್ದಾರೆ. ಕನ್ನಡದಲ್ಲಿ ೮೦%ರಷ್ಟು, ಹಿಂದೀಯಲ್ಲಿ ೯೦%ರಷ್ಟು ಸಂಸ್ಕೃತವಿದೆ ಎಂದಿದ್ದಾರಲ್ಲದೆ ಕನ್ನಡ ವ್ಯಾಕರಣದ ೮೦% ಭಾಗ ಸಂಸ್ಕೃತವೇ ಎಂದಿದ್ದಾರೆ. ಕನ್ನಡ ಅಧ್ಯಾಪಕರಿಗೆ ಕನ್ನಡ ಬಾರದು... ಮತ್ತು ಇದಕ್ಕೆ ಕಾರಣ ಅವರಿಗೆ ಸಂಸ್ಕೃತ ಗೊತ್ತಿಲ್ಲದಿರುವುದು ಎಂದೆಲ್ಲಾ ಹೇಳಿದ್ದಾರೆ.

ದಿಟ ಹೇಳಲು ಹಿಂದೇಟೇಕೆ?

ಕನ್ನಡ ಸಂಸ್ಕೃತಗಳು ಬೇರೆ ಬೇರೆ ಬೇರಿನ ನುಡಿಗಳು. ಕನ್ನಡಿಗರಲ್ಲಿ ಓದು ಬರಹದ ಬಳಕೆ ಬಹಳವಾಗಿ ಹೆಚ್ಚಾಗಿರುವುದು ೨೦ನೇ ಶತಮಾನದಲ್ಲಿ. ಅದುವರೆವಿಗೂ ಕೆಲವೇ ಜನರ ಬಳಕೆಯಲ್ಲಿ ಓದು ಬರಹವಿತ್ತು ಮತ್ತು ಅಂತಹವರು ಸಂಸ್ಕೃತ ಬಲ್ಲವರೂ ಆಗಿದ್ದುದು ಸಾಮಾನ್ಯ. ಕಲಿಕೆಯ, ಅರಿಮೆಯ ವಿಷಯಗಳೆಲ್ಲಾ ಆಗ ಸಂಸ್ಕೃತದಲ್ಲಿರುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ. ಇದೇ ಕಾರಣಕ್ಕಾಗಿ ಕನ್ನಡದ ಬರಹಗಾರರ ಬರಹಗಳಲ್ಲೂ ಸಂಸ್ಕೃತದ ಬಳಕೆ ಹೆಚ್ಚಾಗಿ ತುಂಬಿರುತ್ತಿತ್ತು. ಇದೇ ಕಾರಣಕ್ಕೇ ಕನ್ನಡದ ಲಿಪಿಯಲ್ಲೂ ಸಂಸ್ಕೃತಕ್ಕೆ ಬೇಕಾದ ಅಕ್ಷರಗಳನ್ನು ಸೇರಿಸಲಾಯಿತು. ಇದೇ ಕಾರಣಕ್ಕಾಗೇ ಸಂಸ್ಕೃತದ ಕಟ್ಟುಪಾಡು ವಿವರಿಸುವ ವ್ಯಾಕರಣದ ಸಿದ್ಧ ಅಂಗಿಯನ್ನೇ ಕನ್ನಡಕ್ಕೂ ತೊಡಿಸಲಾಯಿತು...ಇದು ದಿಟವೋ ಅಲ್ಲವೋ? ಇದು ದಿಟವಾದರೆ ಹೇಳಲೇಕೆ ಹಿಂಜರಿಕೆ?

ಇಂದು ನಾಡಿನಲ್ಲಿ ಹೆಚ್ಚು ಜನರಿಗೆ ಕಲಿಕೆಯು ಬೇಕಾಗಿರುವುದರಿಂದ, ಈ ಹಿಂದಿನ ಏರ್ಪಾಟನ್ನು ತಿರುಗಿ ನೋಡಬೇಕಾಗಿದೆ. ನಿಜಕ್ಕೂ ಕನ್ನಡ ಯಾವುದು? ಯಾವುದು ಕನ್ನಡದ ಸೊಲ್ಲರಿಮೆ? ಯಾವುದು ಕನ್ನಡಪದ? ಕನ್ನಡದ ಕಸುವನ್ನು ಹೆಚ್ಚಿಸುವ ಬಗೆ ಯಾವುದು? ಕಲಿಕೆಯು ಹೆಚ್ಚು ಜನರನ್ನು ತಲುಪಬೇಕಾಗಿರುವುದರಿಂದಾಗಿ ಹೇಗೆ ಮುಂದುವರೆಯಬೇಕು? ಎಂಬುದಾಗೆಲ್ಲಾ ನಾವು ಯೋಚಿಸಬೇಕಾಗಿದೆ. ಹಲವೆಡೆ ಅಂತಹ ಪ್ರಯತ್ನಗಳೂ ಕೂಡಾ ನಡೆಯುತ್ತಿದೆ. ಇದನ್ನು ಸಹಿಸದ ಕೆಲವು ಮಂದಿ ಇಂತಹ ಪ್ರಯತ್ನವನ್ನೇ "ಸಂಸ್ಕೃತ ವಿರೋಧಿ" ಎಂದು ಕರೆಯುತ್ತಿರುವುದು ಇಂದು ಕಾಣುತ್ತಿದೆ. ಹೀಗೆ ಕರೆಯಲು ಅದ್ಯಾವುದೋ ದಿಗಿಲು ಕಾರಣವಾಗಿರುವಂತಿದೆ. ಈ ದಿಗಿಲೇ ಕನ್ನಡ ಕಟ್ಟುವ ಪ್ರಯತ್ನವನ್ನು "ತಮಿಳರ ನಕಲು" ಎನ್ನುತ್ತಿರುವುದು, "ಸಂಸ್ಕೃತ ವಿರೋಧಿ" ಎನ್ನುತ್ತಿರುವುದು.. ತಮಾಶೆ ಎಂದರೆ ಇದರ ಮುಂದುವರೆದ ಭಾಗವಾಗಿ ಭಾರತದ ಸಂಸ್ಕೃತಿಗೂ ಸಂಸ್ಕೃತಕ್ಕೂ ಸಲ್ಲದ ನಂಟನ್ನು ಬೆಸೆಯುವುದು ಮತ್ತು ಆ ಮೂಲಕ ಇಂತಹ ಪ್ರಯತ್ನಗಳನ್ನು ಸಂಸ್ಕೃತಿ ವಿರೋಧಿ ಎನ್ನುವುದು ಕೂಡಾ ಸಾಮಾನ್ಯವಾಗಿದೆ. ಸಂಸ್ಕೃತ ಕಲಿಯಬೇಕಾ? ಕಲಿಯಿರಿ... ಅದು ಬಿಟ್ಟು ಕನ್ನಡ - ಸಂಸ್ಕೃತದ ನಡುವೆ ಯಾವುದೋ ವೈರತ್ವ ಇರುವಂತೆ ಬಿಂಬಿಸುವುದು "ಪಾಕಿಸ್ತಾನದ ಭೀತಿ ಹುಟ್ಟಿಸಿ...ಇಂಡಿಯಾದ ಒಗ್ಗಟ್ಟು ಕಟ್ಟುವ" ಪ್ರಯತ್ನದ ಹಾಗೇ ಅನ್ನಿಸಿಬಿಡುತ್ತದೆ.

ಮೇಲಿನ ಕಾಯ್ರಕ್ರಮಗಳಲ್ಲಿ ಆಡಿದ ಒಂದು ಮಾತಿನಂತೆ ಕನ್ನಡದಲ್ಲಿ ೮೦%, ಹಾಗೇ ಹಿಂದಿಯಲ್ಲಿ ೯೦%ರಷ್ಟು ಸಂಸ್ಕೃತವಿದೆಯಂತೆ. ಹಿಂದೀಯಲ್ಲಿರದೆ ಕನ್ನಡದಲ್ಲಿ ಮಾತ್ರವಿರುವ ಸಂಸ್ಕೃತವನ್ನು ಲೆಕ್ಕಕ್ಕಿಟ್ಟುಕೊಳ್ಳದೇ ಹೇಳುವುದಾದರೆ ಕನ್ನಡದಲ್ಲಿ ಸುಮಾರು ೭೦%ರಷ್ಟು ಹಿಂದೀ ಇದೆಯೆಂದಂತಾಗಲಿಲ್ಲವೇ? ಇಲ್ಲಿ ಸಮಸ್ಯೆಯಿರುವುದು ಸಂಸ್ಕೃತ ಶಾಲೆ ನಡೆಸುವುದರ ಬಗ್ಗೆ ಅಲ್ಲಾ! ಕನ್ನಡಿಗರು ಸಂಸ್ಕೃತವನ್ನು ಕಲಿಯಬೇಕು ಎನ್ನುವುದರ ಬಗ್ಗೆಯೂ ಅಲ್ಲಾ! ಪ್ರಶ್ನೆಯಿರುವುದು ಸಂಸ್ಕೃತವನ್ನು ಕನ್ನಡದ ತಾಯಿ ಎನ್ನುವ ಬಗ್ಗೆ! ಕನ್ನಡದ ಬೇರು ಎನ್ನುವ ಬಗ್ಗೆ! ಸಂಸ್ಕೃತ ಕಲಿಯದಿದ್ದರೆ ಕನ್ನಡ ಬರುವುದಿಲ್ಲಾ ಎನ್ನುವ ಬಗ್ಗೆ! ಸಂಸ್ಕೃತ ಭೂಯಿಷ್ಟ ಕನ್ನಡವೇ ಕನ್ನಡ ಎನ್ನುವ ಮನಸ್ಥಿತಿಯ ಬಗ್ಗೆ! ನಿಜವಾಗಿಯೂ ಆಡುಮಾತಿನಲ್ಲಿ ೬೦% - ೭೦% - ೮೦% ಸಂಸ್ಕೃತವಿದ್ದಿದ್ದರೆ... ಸಂಸ್ಕೃತವನ್ನು ಕಲಿಸಲು ಈ ಮಂದಿ ಈ ಪಾಟಿ ತಿಣುಕಬೇಕಿತ್ತಾದರೂ ಏಕೆ? ಸಂಸ್ಕೃತವನ್ನು ಇಡೀ ಕನ್ನಡ ಜನರ ಆಡುನುಡಿಯಾಗಿಸಬೇಕೆನ್ನುವ ದೀಕ್ಷೆ ಕೈಗೊಳ್ಳಬೇಕಿತ್ತಾದರೂ ಏಕೆ?

ಕೊನೆಹನಿ: ಕನ್ನಡಕ್ಕೆ ಸಂಸ್ಕೃತ ತಾಯಿ. ಕನ್ನಡ ಏಳಿಗೆ ಕಂಡು ಸಂಸ್ಕೃತಕ್ಕೆ ಬೇಸರವಿಲ್ಲಾ ಎಂದೆಲ್ಲಾ ಮುತ್ತು ಉದುರಿದ ಸದರಿ ಕಾರ್ಯಕ್ರಮದ ಫೋಟೋವನ್ನೊಮ್ಮೆ ನೋಡಿ. ವೇದಿಕೆಯ ಮೇಲೆ ಹಾಕಿರುವ ಬ್ಯಾನರಿನಲ್ಲಿ ಕನ್ನಡದ ಒಂದಕ್ಷರವೂ ಕಾಣುತ್ತಿಲ್ಲಾ! ಅಂದರೆ ಕನ್ನಡಿಗರಿಗೆ ಸಂಸ್ಕೃತವನ್ನು ಕಲಿಸಬೇಕೆನ್ನುವ ದೊಡ್ಡಜನರಿಗೆ, ಹೀಗೆ ಮಗಳನ್ನು ಕಡೆಗಣಿಸುವುದು ತಪ್ಪು ಎಂದು ಅನ್ನಿಸಲಿಲ್ಲವಾ ಗುರೂ!?

"ಫೆಡರಲ್ ಫ್ರಂಟ್" ಎಂಬ ಪುಟ್ಟ ಬೆಳಕು!


"ಇದು ಈ ಹಿಂದೆಯೂ ಆಗಿತ್ತು. ಮೂರನೇ ರಂಗದ ಹೆಸರಲ್ಲಿ ೧೯೮೯, ೧೯೯೬ರಲ್ಲಿ ಸರ್ಕಾರಗಳು ರಚನೆಯಾಗಿ ರಾಜಕೀಯ ಅಸ್ಥಿರತೆ ಕಾಡಿತ್ತು. ಹಾಗಾಗಿ ತೃತೀಯ ರಂಗವೆನ್ನುವುದು ಅಸಾಧ್ಯವಾದ ಕನಸು. ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ.. ಬ್ಲಾ... ಬ್ಲಾ... ಬ್ಲಾ..." ಎಂದು ರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದರಲ್ಲಿ ಮಾತು ಕೇಳಿಬರುತ್ತಿತ್ತು! ಹೌದಲ್ವಾ? ಎಷ್ಟು ಸರಿಯಾದ ಮಾತು ಎಂದು ಸಾಮಾನ್ಯರಿಗೆ ಅನ್ನಿಸುವಂತೆ ಈ ಮಾತುಗಳಿದ್ದವು. ಆದರೆ ವಾಸ್ತವವಾಗಿ ಈ ಮೂರನೇ ರಂಗ ಏಕೆ? ಇದರ ಮಹತ್ವವೇನು? ಇದರ ಭವಿಷ್ಯವೇನು? ಎಂಬುದನ್ನು ನೋಡಿದಾಗ ಇದೊಂದು ಭಾರತದ ಕೇಂದ್ರೀಕೃತ ವ್ಯವಸ್ಥೆಯೆಂಬ ಕಗ್ಗತ್ತಲಲ್ಲಿ ಇದೀಗ ತಾನೇ ಹೊತ್ತಿಕೊಂಡಿರುವ ಪುಟ್ಟಬೆಳಕಿನಂತೆ ಕಾಣುತ್ತಿದೆ ಗುರೂ!

ಹಿಂದಾದದ್ದು!

ಸ್ವಾತಂತ್ರ ಬಂದಾಗಿನಿಂದ ಭಾರತದಲ್ಲಿ ಕಾಂಗ್ರೆಸ್ ಪಕ್ಷದ್ದೇ ಕಾರುಬಾರು. ಮೊದಲ ಕಾಂಗ್ರೆಸ್ಸಲ್ಲದ ಸರ್ಕಾರ ಮೊರಾರ್ಜಿ ದೇಸಾಯಿಯವರ ಮುಂದಾಳ್ತನದ ಜನತಾಪಕ್ಷದ್ದು! ಇದೂ ತನ್ನ ಸ್ವರೂಪದಲ್ಲೇ ಭಿನ್ನ ನೆಲೆಯ ಪಕ್ಷಗಳನ್ನೊಳಗೊಂಡಿದ್ದು ಐದು ವರ್ಷ ಆಳಲಾಗಲಿಲ್ಲ! ಮುಂದೆ ಬಂದದ್ದು ನ್ಯಾಶನಲ್ ಫ್ರಂಟ್‌ನ ಸರ್ಕಾರ. ವಿ ಪಿ ಸಿಂಗ್ ಪ್ರಧಾನಿಗಳಾಗಿದ್ದ ಇದರಲ್ಲೂ ಕಾಂಗ್ರೆಸ್ ವಿರೋಧವೊಂದೇ ಬೇರೆ ಬೇರೆ ಪಕ್ಷಗಳನ್ನು ಒಗ್ಗೂಡಿಸಲು ಕಾರಣವಾಗಿದ್ದು ಎನ್ನಬಹುದು. ಅಕಾಲದಲ್ಲಿ ಕೊನೆಗೊಂಡ ಮೈತ್ರಿಯು ಕಾಂಗ್ರೆಸ್ ಬೆಂಬಲದಿಂದ ಸಮಾಜವಾದಿ ಚಂದ್ರಶೇಖರ್‌ರವರು ಅರೆಕಾಲಿಕ ಪ್ರಧಾನಿಯಾಗಲು ಕಾರಣವಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ೧೯೯೬ರಲ್ಲಿ ಅದುವರೆಗೂ ಇದ್ದ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಅಂತಾ ಇದ್ದುದ್ದು ಕಾಂಗ್ರೆಸ್, ಬಿಜೆಪಿ ಮತ್ತು ಮೂರನೇರಂಗ ಎಂದಾಯಿತು. ಹದಿಮೂರು ದಿನದ ವಾಜಪೇಯಿ ಸರ್ಕಾರ, ದೇವೇಗೌಡರ ಸರ್ಕಾರ, ಐ ಕೆ ಗುಜ್ರಾಲರ ಸರ್ಕಾರಗಳು ಅಧಿಕಾರಕ್ಕೇರಿದವು. ಮತ್ತೆ ೧೯೯೮ರಲ್ಲಿ ವಾಜಪೇಯಿಯವರ ಮುಂದಾಳ್ತನದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಮುಂದೆ ೨೦೦೪ರಿಂದ ಕಾಂಗ್ರೆಸ್ಸೇ ಆಡಳಿತ ನಡೆಸುತ್ತಾ ಬಂದಿದೆ. ವಾಜಪೇಯಿಯವರ ಬಿಜೆಪಿ ಸರ್ಕಾರ ಐದುವರ್ಷ ಪೂರೈಸಿದ ಏಕೈಕ ಕಾಂಗ್ರೆಸ್ಸೇತರ ಸರ್ಕಾರ! ಅದುವರೆವಿಗೂ ಕೂಡಾ ನಮ್ಮ ಘನ ಮಾಧ್ಯಮಗಳು ಹೇಳುತ್ತಾ ಬಂದಿದ್ದು "ಕಾಂಗ್ರೆಸ್ ಒಂದಕ್ಕೇ ಐದು ವರ್ಷದ ಸ್ಥಿರಸರ್ಕಾರ ಕೊಡಲು ಸಾಧ್ಯ" ಎಂದು. ಈಗ ಇವೇ ಮಾಧ್ಯಮಗಳು ರಾಷ್ಟ್ರೀಯ ಪಕ್ಷಗಳಿಗೆ ಮಾತ್ರಾ ಐದು ವರ್ಷದ ಸ್ಥಿರಸರ್ಕಾರ ಕೊಡಲು ಸಾಧ್ಯ ಎನ್ನುತ್ತಿವೆ. ಹಾಗಾಗಿ ಈ ಮಾತಿಗೆ ಅಂಥಾ ಮಹತ್ವ ಕೊಡುವ ಅಗತ್ಯವಿಲ್ಲ!

ಇಂದಾಗುತ್ತಿರುವುದು...

(ಕೃಪೆ: http://www.ipatrix.com/2908/indian-elections-color-palette/)
ಇದೀಗ ಭಾರತದ ರಾಜಕಾರಣ ಹೊಸ ಬದಲಾವಣೆಗಳನ್ನು ಕಾಣುತ್ತಿದೆ. ಇಂದು ಭಾರತದ ಅನೇಕ ರಾಜ್ಯಗಳ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಚ್ಚೊತ್ತುತ್ತಿವೆ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ನ್ಯಾಶನಲ್ ಫ್ರಂಟ್, ಪಿಡಿಪಿ, ಬಿಜು ಜನತಾದಳ, ಅಕಾಲಿದಳ,  ಜನತಾದಳ(ಯು), ಜೆಡಿಎಸ್, ಕೆಜೆಪಿ, ದ್ರಾವಿಡ ಕಳಗಗಳು, ಅಸ್ಸಾಂ ಗಣಪರಿಶತ್, ತೆಲುಗುದೇಶಂ, ಶಿವಸೇನೆ, ಎಂಎನ್‌ಎಸ್ ಮೊದಲಾಗಿ ಅನೇಕಾನೇಕ ಶುದ್ಧ ಪ್ರಾದೇಶಿಕ ಪಕ್ಷಗಳಿದ್ದು ಲೋಕಸಭೆಯ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಗಳಿಸಿವೆ. ಕಾಂಗ್ರೆಸ್ ಮತ್ತು ಬಿಜೆಪಿಯೆಂಬ ಎರಡೂ ಧೃವಗಳಿಂದ ಬೇರೆಯಾಗಿ ನಿಂತಿವೆ. ಇವುಗಳಲ್ಲಿ ಕೆಲವು ಒಂದಾಗಿ ಸೇರಿ ಇದೀಗ ಫ಼ೆಡೆರಲ್ ಫ್ರಂಟ್ ಎಂಬ ಹೆಸರಿನಲ್ಲಿ ಒಕ್ಕೂಟ ಪರವಾದ ಗುಂಪನ್ನು ಮಾಡಿಕೊಳ್ಳಲು ಮುಂದಾಗಿವೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧವೆನ್ನುವುದರ ಜೊತೆಯಲ್ಲಿ ಪ್ರಮುಖವಾದ ಮತ್ತೊಂದು ವಿಷಯ ಈ ಒಕ್ಕೂಟದ ರಚನೆಗೆ ಕಾರಣವಾಗುತ್ತಿದೆ. ಅದುವೇ ರಾಜ್ಯಗಳಿಗೆ ಅತಿಹೆಚ್ಚು ಸ್ವಾಯತ್ತತೆಯನ್ನು ತಂದುಕೊಡಬಲ್ಲ ಸರಿಯಾದ ಒಂದು "ಒಕ್ಕೂಟ ಧರ್ಮ"ದ ಪರವಾದ ನಿಲುವು. ಕೇಂದ್ರದ ಅತಿಯಾದ ಮೂಗುತೂರಿಸುವಿಕೆಯನ್ನು ಒಪ್ಪದೆ, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಬೇಕು ಎನ್ನುವುದರ ಬಗೆಗಿರುವ ಒಲವು. ಹೀಗಾಗಿ ಈ ಬಾರಿಯ ಈ ಹೊಂದಾಣಿಕೆ/ ರಾಜಕೀಯ ರಂಗವು ಭಾರತವು ಒಪ್ಪುಕೂಟವಾಗುವೆಡೆಗಿನ ಒಂದು ಪುಟಾಣಿ ಹೆಜ್ಜೆಯಾಗಿದೆ.

ಏನಾದೀತು?

ಈ ಒಕ್ಕೂಟ ಗಣನೀಯ ಪ್ರಮಾಣದಲ್ಲಿ ಸಂಸದರನ್ನು ಗೆಲ್ಲಿಸಿಕೊಳ್ಳಬಲ್ಲುದಾದರೂ ತಾನೇತಾನಾಗಿ ಸರ್ಕಾರ ರಚಿಸಬಲ್ಲಷ್ಟು ಶಕ್ತವಾಗಲಾರದೇನೋ! ಹಾಗಿದ್ದರೂ ಮುಂದೆ ರಚನೆಯಾಗುವ ಸರ್ಕಾರದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳಂತೂ ಇವೆ. ಇಷ್ಟಕ್ಕೂ ಮೀರಿದ ಪವಾಡವೊಂದು ನಡೆದು ಈ ರಂಗವು ಅಧಿಕಾರಕ್ಕೇ ಬಂತೆಂದರೂ ಸ್ಥಿರಸರ್ಕಾರ ನೀಡುವುದು ಕೂಡಾ  ಅನುಮಾನವೇ ಆಗಿದೆ! ಇದೆಲ್ಲಾ ವಾಸ್ತವವೇ ಆಗಿದ್ದರೂ ಕೂಡಾ ಇಂತಹ ರಂಗದ ರಚನೆಯಾಗುತ್ತಿರುವುದೇ ಒಂದು ಸಕರಾತ್ಮಕ ಬೆಳವಣಿಗೆ. ವಾಸ್ತವವಾಗಿ ನೋಡಿದರೆ ಕಾಂಗ್ರೆಸ್ಸಿನ್ನದ್ದೂ ಬಿಜೆಪಿಯದ್ದೂ ಕೂಡಾ ಬಹುಪಕ್ಷಗಳ ರಾಜಕೀಯ ರಂಗವೇ! ಒಂದು ಪಕ್ಷ ಅಧಿಕಾರಕ್ಕೇರುವ ಕಾಲ ಭಾರತದ ರಾಜಕಾರಣದಲ್ಲಿ ಮತ್ತೊಮ್ಮೆ ಬರುವ ಸಾಧ್ಯತೆಯೇ ಇಲ್ಲವೆಂಬುದು ಪರಿಣಿತರ ಅನಿಸಿಕೆ! ಇರಲಿ.. ಈ ಬಾರಿ "ಫೆಡರಲ್ ಫ್ರಂಟ್" ಯಶಸ್ವಿಯಾದರೂ ಆಗದಿದ್ದರೂ ಪ್ರಾದೇಶಿಕ ಪಕ್ಷಗಳೇ ಸೇರಿ ರಾಜಕೀಯರಂಗ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಬಹುದು ಎನ್ನುವುದನ್ನು ಸಾಧಿಸಿದಂತಾಗುತ್ತದೆ.

ನಾಳೆ ಏನಾಗಬೇಕು?

ಮುಂದಿನ ದಿನಗಳಲ್ಲಿ ಭಾರತದಲ್ಲಿ ಇಂತಹ ಪ್ರಾದೇಶಿಕ ಪಕ್ಷಗಳ ರಾಜಕೀಯ ರಂಗಗಳೇ ಹೆಚ್ಚಾಗಬೇಕು. ಸೈದ್ಧಾಂತಿಕವಾಗಿ ಎಡವೋ, ಬಲವೋ, ನಡುವೋ ಆದ ಒಂದಕ್ಕಿಂತ ಹೆಚ್ಚು ಪಕ್ಷಗಳು ರಾಜ್ಯಗಳಲ್ಲಿದ್ದರೆ ತಮ್ಮದೇ ಸೈದ್ಧಾಂತಿಕ ನೆಲೆಗಟ್ಟಿಗೆ ಸರಿಹೊಂದುವ ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಕೂಡಿಕೊಂಡು ರಾಜಕೀಯರಂಗಗಳನ್ನು ಮಾಡಿಕೊಳ್ಳಬೇಕು. ಇದು ಭಾರತ ನಿಜವಾದ ಒಪ್ಪುಕೂಟವಾಗುವುದಕ್ಕೆ ನೆರವಾಗುತ್ತದೆ. ರಾಜ್ಯಗಳಿಗೆ ದಕ್ಕಬೇಕಾದ ನಿಜವಾದ ಅಧಿಕಾರಗಳು ದಕ್ಕಲು ನೆರವಾಗುತ್ತವೆ. ಭಾರತದಲ್ಲಿನ ವೈವಿಧ್ಯತೆಗಳಿಗೆ ತಕ್ಕ ಗೌರವ, ಸಮಾನತೆಗಳು ಇಂತಹ ರಾಜಕೀಯ ವ್ಯವಸ್ಥೆಯಿಂದಾಗಿ ಸಾಧ್ಯವಾಗಬಹುದಾಗಿದೆ.

ಸ್ವಾತಂತ್ರ್ಯ ದಿನವೆಂದರೆ ತೋರಿಕೆಯ ಮೇಲ್ಪದರದ ಆಚರಣೆ ಮಾತ್ರಾನೇ?


ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಶಾಲೆಗಳಲ್ಲಿ ಮಕ್ಕಳಿಂದ ಸಂಭ್ರಮದ ಕಾರ್ಯಕ್ರಮ, ಊರೂರುಗಳಲ್ಲಿ ಶಿಸ್ತಿನ ಸರ್ಕಾರಿ ಕಾರ್ಯಕ್ರಮ. ಇಂಥಾ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯವೆಂದರೆ ಆಂಗ್ಲರಿಂದ ಬಿಡುಗಡೆ ಪಡೆದು ಇಂತಿಷ್ಟು ವರ್ಷಗಳಾದವು ಎಂದು ನೆನಪಿಸಿಕೊಳ್ಳುತ್ತಾ... ಹೀಗೆ ಆಂಗ್ಲರನ್ನು ಓಡಿಸಿ ನಮ್ಮನ್ನು ನಾವು ಆಳಿಕೊಳ್ಳುತ್ತಿರುವುದೇ ಪರಮ ಭಾಗ್ಯವೆಂದೂ, ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಜೀವವನ್ನಾದರೂ ತೆತ್ತೇವು ಎಂಬಂತಹ ಭಾಷಣಗಳು ಕೇಳಿಸುವುದು ಕೂಡಾ ಸಹಜ.

ಸ್ವಾತಂತ್ರ್ಯ ದಿನಾಚರಣೆಯೆಂದರೆ...

ನಮ್ಮ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಕಾರು, ಸ್ಕೂಟರ್, ಬೈಕು, ಆಟೋಗಳ ಮೇಲೆ ದೊಡ್ಡ ದೊಡ್ಡ ಬಾವುಟಗಳನ್ನು ಕಟ್ಟಿಕೊಂಡು ಊರೆಲ್ಲಾ ಸುತ್ತೋದು, ಮೈಕೈ ಮುಖದ ಮೇಲೆಲ್ಲಾ ಮೂರು ಬಣ್ಣಗಳನ್ನು ಬಳಸಿಕೊಳ್ಳೋದು, ಶಾಲೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡೋದು, ಸಂಗೀತ ಮನರಂಜನೆಯ ಕಾರ್ಯಕ್ರಮಗಳನ್ನು ಏರ್ಪಡಿಸೋದು... ಹೀಗೆ ಜನಸಾಮಾನ್ಯರ ಆಚರಣೆ. ಅದೇ ಸರ್ಕಾರದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳಿಂದ ಕೆಂಪುಕೋಟೆ ಮೇಲಿನ ಭಾಷಣ. ಆ ಭಾಷಣಗಳಲ್ಲಿ ಭ್ರಷ್ಟಾಚಾರ ಅಳಿಯಬೇಕು, ಭ್ರಾತೃತ್ವ ಉಳಿಯಬೇಕು, ಸವಾಲುಗಳನ್ನು ಗೆಲ್ಲಬೇಕೆನ್ನುವ ಮಾತುಗಳು ಮಾಮೂಲಿಯಾಗಿವೆ. ಹಾಗಾದರೆ ಇವೆಲ್ಲಾ ಬೇಡ ಅನ್ನೋ ಅನಿಸಿಕೆ ನಮದಲ್ಲ. ಈ ಸಂಭ್ರಮವೆಲ್ಲಾ ಇಷ್ಟಕ್ಕೇ ಮುಗಿದುಹೋಗುವುದನ್ನು ನೋಡ್ತಿದ್ರೆ ಇವೆಲ್ಲಾ ಶಿವನಿಲ್ಲದ ಸೌಂದರ್ಯದ ಹಾಗೆ ಅಂತಾ ಅನ್ನಿಸೋದಿಲ್ವಾ ಗುರೂ!

ಸ್ವಾತಂತ್ರ್ಯಕ್ಕೂ ಬೇಕಿದೆ ಸಾರ್ಥಕತೆ!

ಆಂಗ್ಲರು ಭಾರತ ಬಿಟ್ಟು ಹೋದರು ಅನ್ನೋ ಮಾತನ್ನು "ಆಂಗ್ಲರು ಇದುವರೆಗೂ ನಮ್ಮನ್ನು ಆಳುತ್ತಿದ್ದರು, ಇನ್ಮುಂದೆ ಅವರು ವಾಪಸ್ಸು ಇಂಗ್ಲೇಂಡಿಗೆ ಹೋಗ್ತಾರೆ" ಎನ್ನುವಷ್ಟಕ್ಕೇ ಸೀಮಿತಗೊಂಡಂತೆ ಇಂದಿನ ಸ್ವಾತಂತ್ರ್ಯ ದಿನಾಚರಣೆ! ಜನರಿಗೆ ಸಂಬಂಧಪಟ್ಟ ನಿರ್ಣಯಗಳು ಆದಷ್ಟೂ  ಕೆಳಹಂತದಲ್ಲೇ ಆಗಬೇಕೆನ್ನುವ ವಿಕೇಂದ್ರೀಕರಣ ಜಾರಿಯಾಗದೆ, ಎಲ್ಲದರ ಮೇಲೂ ಕೇಂದ್ರದ ಹಿಡಿತವಿರುವುದು ಸ್ವಾತಂತ್ರ್ಯವೇ? ಅಧಿಕಾರವೆನ್ನುವುದು ಕೆಳಹಂತದಿಂದ ಮೇಲಕ್ಕೆ ಬಿಟ್ಟುಕೊಟ್ಟದ್ದಾಗಿರದೆ, ಕೆಳಗಿನ ಹಂತಕ್ಕೆ ಮೇಲಿನಿಂದ ದಾನ ಕೊಡಲ್ಪಟ್ಟಿದ್ದಾಗುವುದಾದರೆ ಸ್ವಾತಂತ್ರ್ಯವೇ? ಒಂದು ಕಡೆ ಸರ್ಕಾರವೇ ಹೆಚ್ಚಿನ ಜನರು ಬಳಸುವ ಭಾಷೆ ಎನ್ನುವ ಕಾರಣದಿಂದ ಉಳಿದವುಗಳ ಬಗ್ಗೆ ಅಸಹನೆ, ಅಗೌರವ, ದಬ್ಬಾಳಿಕೆಗಳನ್ನು ಜಾರಿಯಲ್ಲಿಡುತ್ತಿರುವುದು ಕಾಣುತ್ತಿದ್ದರೆ ಇನ್ನೊಂದೆಡೆ ಇಂಥದ್ದೇ ಹೆಚ್ಚಿನ ಜನರು ಆಚರಿಸುವ ಧರ್ಮ ಎನ್ನುವ ಹೆಚ್ಚುಗಾರಿಕೆಯ ಕಾರಣದಿಂದ ಉಳಿದವರ ಬಗ್ಗೆ ಅಸಹನೆ, ಅಪನಂಬಿಕೆ, ಅಪಪ್ರಚಾರಗಳನ್ನು ಇದೇ ಮೂರುಬಣ್ಣ ಬಳಿದುಕೊಂಡು ದೇಶಭಕ್ತಿಯ ಗುತ್ತಿಗೆ ತೆಗೆದುಕೊಂಡಂತೆ ಆಡುತ್ತಿರುವವರು ಮಾಡುತ್ತಿರುವುದು ಕಾಣುತ್ತಿದೆ.

ಭಾರತದಲ್ಲಿ ನಿಜವಾದ ಒಪ್ಪುಕೂಟ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಸಮಾಜದಲ್ಲಿ ತನ್ನದಲ್ಲದ ನಂಬಿಕೆ ಹೊಂದಿರುವವರನ್ನು ಅವಹೇಳನ ಮಾಡುವ, ಅಸಹನೆ ತೋರುವ ಪ್ರವೃತ್ತಿಗಳು ನಿಲ್ಲಬೇಕಾಗಿದೆ. ಭ್ರಷ್ಟಾಚಾರದಂತಹ ಪಿಡುಗುಗಳಿಗೆ ಲೋಕ್‌ಪಾಲ್, ಜನಲೋಕ್‌ಪಾಲ್‌ನಂತಹ ಮೇಲುಮೇಲಿನ ಪರಿಹಾರಗಳಾಚೆ ವಿಕೇಂದ್ರೀಕರಣದ, ಪಾರದರ್ಶಕತೆಯ, ಹೊಣೆ ತಪ್ಪಿಸಿಕೊಳ್ಳಲಾರದಂತಹ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಇವೆಲ್ಲಾ ಆಗುವ ನಿಟ್ಟಿನಲ್ಲಿ ಬೇಕಾಗಿರುವ ಜನಜಾಗೃತಿ ಮೂಡಿಸುವ ಕೆಲಸಗಳು ಹೆಚ್ಚೆಚ್ಚು ಆಗದೆ ಬರೀ ತೋರಿಕೆಯ ಆಚರಣೆಗಳು ನಡೆಯುತ್ತಿದ್ದಲ್ಲಿ ಸ್ವಾತಂತ್ರ್ಯಕ್ಕೇನು ಸಾರ್ಥಕತೆ ಸಿಕ್ಕೀತು? ಕಪ್ಪುಬಿಳುಪಿನ ಫೋಟೋ ಬಣ್ಣದ್ದಾಗಿದ್ದು ಬಿಟ್ಟರೆ ಬೇರೇನೂ ಬದಲಾಗಲಿಲ್ಲಾ ಅನ್ನಿಸೋಲ್ವಾ ಗುರೂ?!

ರಾಷ್ಟ್ರರಾಜಕಾರಣ, ಪ್ರಾದೇಶಿಕ ಪಕ್ಷ & RSSನ ಆತಂಕ!


ಭಾರತದ ಅತಿದೊಡ್ಡ ಸಾಮಾಜಿಕ ಸಂಘಟನೆಗಳಲ್ಲೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇದರ ಮುಖಂಡರಲ್ಲಿ ಒಬ್ಬರಾದ ಶ್ರೀ ಸುರೇಶ್ ಜೋಷಿಯವರು ಸಂಘದ ಕೇಂದ್ರಸ್ಥಾನವಾದ ನಾಗ್ಪುರದಲ್ಲಿ ಕುಳಿತು ಒಂದು ಹೇಳಿಕೆ ನೀಡಿ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣ ಪ್ರವೇಶ ಮಾಡುವ ಬಗ್ಗೆ ಆತಂಕ' ತೋರಿಸಿದ್ದಾರೆ ಎನ್ನುವ ಸುದ್ದಿ ಮಾರ್ಚ್ ೧೯ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ. ಈ ಸುದ್ದಿ ನಿಜವೇ ಆಗಿದ್ದರೆ ಸಂಘ ಸಿದ್ಧಾಂತವು ಭಾರತದ ಸ್ವರೂಪದ ಬಗ್ಗೆ ಹೊಂದಿರುವ ತಿಳುವಳಿಕೆ ಸರಿಯಾಗಿಲ್ಲವೇನೋ ಎನ್ನುವ ಅನುಮಾನ ಹುಟ್ಟಿಸುತ್ತದೆ. ರಾಷ್ಟ್ರ ರಾಜಕಾರಣಕ್ಕೆ ಪ್ರಾದೇಶಿಕ ಪಕ್ಷಗಳು ಬಂದರೆ ಆತಂಕ ಪಟ್ಟುಕೊಳ್ಳುವ ಮನಸ್ಥಿತಿಯ ಬಗ್ಗೆ ಅಚ್ಚರಿಯಾಗುತ್ತದೆ. ಇರಲಿ, ಚುನಾವಣಾ ಆಯೋಗದ ಲೆಕ್ಕದಲ್ಲಿ  ಭಾರತದಲ್ಲಿ ಇವತ್ತು ಇರುವ ರಾಷ್ಟ್ರೀಯಪಕ್ಷಗಳೆಂದರೆ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಾರ್ಟಿ, ಬಹುಜನ್ ಸಮಾಜ್ ಪಾರ್ಟಿ, ಸಿಪಿಎಂ, ಸಿಪಿಐ ಮತ್ತು ಎನ್.ಸಿ.ಪಿಗಳು. ಆದರೆ ದೇಶ ಆಳಿದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಾತ್ರಾ ಎರಡೇ..

ಕೇಂದ್ರಸರ್ಕಾರ ಎನ್ನುವುದು ಮೇಲಿನದ್ದು ಮತ್ತು ರಾಜ್ಯಸರ್ಕಾರಗಳು ಕೆಳಗಿನದ್ದು, ಕೇಂದ್ರಸರ್ಕಾರ ರೂಪಿಸೋ ನಿಯಮಾನಾ, ತೆಗೆದುಕೊಳ್ಳೋ ನಿರ್ಣಯಾನ ಕೆಳಗಿರೋ ರಾಜ್ಯಗಳು ಸಾಮಂತರಂತೆ ಒಪ್ಪಿಕೋಬೇಕು ಅನ್ನೋ ಮನಸ್ಥಿತಿ ಸುರೇಶ್ ಜೋಷಿಯವರ ಮಾತುಗಳ ಆಳದಲ್ಲಿ ಇರುವಂತೆ ತೋರುತ್ತಿದೆ. ವಾಸ್ತವವಾಗಿ ರಾಜ್ಯಗಳ ಪ್ರತಿನಿಧಿಗಳಿಗಾಗೆ ರಾಜ್ಯಸಭೆ ಇದೆ.  ಸಂಸತ್ತಿನ ಯಾವುದೇ ನಿಯಮ, ಬಿಲ್ಲು, ಕಾಯ್ದೆ, ಕಾನೂನು ಈ ರಾಜ್ಯಸಭೆಯಲ್ಲೂ ಒಪ್ಪಿತವಾಗಬೇಕು. ಅಂದರೆ ರಾಜ್ಯಗಳು ಒಗ್ಗೂಡಿ ಕಟ್ಟಿಕೊಂಡಿರುವ ವ್ಯವಸ್ಥೆ ಭಾರತದ್ದು! ಅಧಿಕಾರ ಮೇಲಿನವರು ಕೆಳಗಿನವರಿಗೆ ಕೊಡಲ್ಪಟ್ಟಿಲ್ಲ ಮತ್ತು ಅದು ರಾಜ್ಯಗಳು ಕೇಂದ್ರಕ್ಕೆ ಬಿಟ್ಟುಕೊಟ್ಟದ್ದಾಗಿರಬೇಕೆನ್ನುವುದು ಸರಿಯಾದ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಪ್ರಾದೇಶಿಕ ಪಕ್ಷಗಳು    ರಾಷ್ಟ್ರ ರಾಜಕಾರಣಕ್ಕೆ ಬರುವುದು/ ಬಂದಿರುವುದು ಪ್ರಜಾಪ್ರಭುತ್ವದ ನಿಜ ಅರ್ಥವೆನಿಸುತ್ತದೆ.

ರಾಷ್ಟ್ರರಾಜಕಾರಣದ ಅರ್ಹತೆ!

ಆದರೂ ಒಮ್ಮೆ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣಕ್ಕೆ ಬರುವುದು ಆತಂಕಕಾರಿ' ಎನ್ನುವ ಈ ನಿಲುವಿನ ದನಿ ನಿಜಕ್ಕೂ ಸರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ನೋಡಬೇಕಾಗಿದೆ. ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಭಾರತದ ಸಂಸತ್ತಿನಲ್ಲಿ ಯಾವುದಾದರೂ ನಿರ್ಣಯ ತೆಗೆದುಕೊಳ್ಳುವುದಿದ್ದಲ್ಲಿ, ಅಲ್ಲಿನ ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ದನಿ ಇರಬೇಡವೇ? ಹಾಗೇ ಈಶಾನ್ಯ ರಾಜ್ಯಗಳ ಜನರ ದನಿಯನ್ನು ಸಂಸತ್ತಿನಲ್ಲಿ ಸಮರ್ಥವಾಗಿ/ ಪರಿಣಾಮಕಾರಿಯಾಗಿ ತೆರೆದಿಡಲು ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಸಮರ್ಥವಲ್ಲವೇ? ರಾಷ್ಟ್ರ ರಾಜಕಾರಣವೆಂದರೆ 'ದೆಹಲಿ ಗದ್ದುಗೆ' ಎಂದುಕೊಳ್ಳುವುದಾದರೆ, 'ಭಾರತದ ಸಂಸತ್ತು' ಎಂದುಕೊಳ್ಳುವುದಾದರೆ, ಅದಕ್ಕೆ 'ಇಡೀ ಭಾರತಕ್ಕೆ ಅನ್ವಯವಾಗುವಂತೆ ನೀತಿಗಳನ್ನು ರೂಪಿಸುವ ಹೊಣೆಗಾರಿಕೆಯಿದೆ' ಎನ್ನುವುದನ್ನು ಒಪ್ಪುವುದಾದರೆ... ಇಂಥಾ ಸಂಸತ್ತಿನಲ್ಲಿ ಎಲ್ಲಾ ಭಾರತೀಯರನ್ನು ಪ್ರತಿನಿಧಿಸೋ ಪಕ್ಷಗಳಿಗೆ ಇರಬೇಕಾದ ಮೂಲ ಕಾಳಜಿ ಯಾವುದಾಗಿರಬೇಕು? ತನ್ನ ಜನರು, ತನ್ನ ರಾಜ್ಯದ ಜನರ ಹಿತ ಉಳಿಸಿಕೊಳ್ಳುವ ಬದ್ಧತೆಯೂ? ರಾಜ್ಯಗಳೆಲ್ಲಾ ಕಡಿಮೆ ಪ್ರಾಮುಖ್ಯತೆ ಹೊಂದಿವೆ, ರಾಷ್ಟ್ರೀಯ ಹಿತದ ಬಗ್ಗೆ ಮಾತ್ರಾ ಸಂಸತ್ತಿನಲ್ಲಿ ಪ್ರಾಮುಖ್ಯತೆ ಇರಬೇಕು ಎನ್ನುವಿಕೆಯೋ? ರಾಜ್ಯಗಳ ಹಿತವನ್ನು ಕೇಂದ್ರವಾಗಿಸಿಕೊಂಡು ಇಡೀ ದೇಶಕ್ಕೆ ರೀತಿ ರೂಪಿಸಲು ಮುಂದಾಗುವಿಕೆಯೋ? ಇಂತಹ ಒಂದು ಬದ್ಧತೆ ರಾಷ್ಟ್ರೀಯಪಕ್ಷಗಳಿಗೆ ಇದೆಯೋ ಇಲ್ಲವೋ? ನಿಜಕ್ಕೂ ರಾಷ್ಟ್ರ ರಾಜಕಾರಣದ ಅರ್ಹತೆ ಯಾರಿಗಿದೆ? ಎನ್ನುವಂಥಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಇಂಥಾ ಉತ್ತರ ಕಂಡುಕೊಳ್ಳಬೇಕೆಂದರೆ ಇದುವರೆಗೂ ಪ್ರಾದೇಶಿಕ ಪಕ್ಷಗಳಾಗಲೀ, ರಾಷ್ಟ್ರೀಯ ಪಕ್ಷಗಳಾಗಲೀ ಹೇಗೆ ನಡೆದುಕೊಂಡಿವೆ ಎನ್ನುವುದನ್ನು ನೋಡಿದರೆ ತಕ್ಕಮಟ್ಟಿಗೆ ಅರ್ಥವಾಗುತ್ತದೆ. 

ಕಣ್ಣೆದುರಿನ ದಿಟಗಳು!

ಆಗಲೇ ಹೇಳಿದಂತೆ ಇಂದಿನ ಭಾರತದಲ್ಲಿ ಇದುವರೆಗೂ ಆಳಿದ ದೊಡ್ಡ ರಾಷ್ಟ್ರೀಯ ಪಕ್ಷಗಳೆಂದರೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳೇ. ಅರವತ್ನಾಲ್ಕು ವರ್ಷಗಳ ಸ್ವತಂತ್ರ ಭಾರತದಲ್ಲಿ ಈ ದೇಶವು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಗಳಿಗೆ ಎದುರಾದ ಸವಾಲುಗಳನ್ನು ಇವು ಹೇಗೆ ನಿಭಾಯಿಸಿವೆ  ಎನ್ನುವುದನ್ನು ನೋಡಿದರೆ ರಾಷ್ಟ್ರೀಯ ಪಕ್ಷಗಳಿಂದ ಈ ಸವಾಲುಗಳು ಎದುರಿಸಲ್ಪಟ್ಟ ಬಗೆ ನಿರಾಸೆ ಹುಟ್ಟಿಸುವಂತಿದೆ. ಹೋಗಲೀ ರಾಜ್ಯಗಳ ಸಮಸ್ಯೆಗಳಿಗೆ ಇವು ಸ್ಪಂದಿಸಿರುವ ಬಗೆ ನೋಡಿದರೆ ಇನ್ನೂ ಬಗೆಹರಿಯದ ಅಂತರರಾಜ್ಯ ನದಿನೀರು ಹಂಚಿಕೆ, ಅಂತರರಾಜ್ಯ ಗಡಿ ಸಮಸ್ಯೆಗಳೇ ಮೊದಲಾದ ಇನ್ನೂ ಜೀವಂತವಿರುವ ಸಮಸ್ಯೆಗಳೇ ಉತ್ತರ ಹೇಳುತ್ತವೆ... ಈ ಮಾತುಗಳನ್ನು ಅರಿಯಲು ಸ್ವಲ್ಪ ಸಾವಧಾನದಿಂದ ಇತಿಹಾಸದ ಪುಟ ತಿರುಗಿಸಿ, ಸುದ್ದಿಹಾಳೆಗಳನ್ನು ತಿರುವಿದರೆ ಸಾಕು... ತಿಳಿಯುತ್ತದೆ. ಹಾಗೇ ಈ ದೇಶದ ಪ್ರಾದೇಶಿಕ ಪಕ್ಷಗಳು ನಡೆದುಕೊಂಡಿರುವ ಬಗೆಯನ್ನೂ ನೋಡಿದರೆ ತಮಿಳುನಾಡಿಗೆ ಅಲ್ಲಿನ ಡಿಎಂಕೆ - ಅಣ್ಣಾ ಡಿಎಂಕೆಗಳು, ಆಂಧ್ರದಲ್ಲಿ ತೆಲುಗುದೇಶಂ, ಒರಿಸ್ಸಾದಲ್ಲಿ ಬಿಜು ಜನತಾದಳ ಮೊದಲಾದ ಪಕ್ಷಗಳು ಅವುಗಳ ರಾಜ್ಯಗಳಿಗೆ ಮಾಡಿರುವ ಒಳಿತುಗಳನ್ನು ನೋಡಿದರೆ ಅರ್ಥವಾಗುತ್ತದೆ. ಇನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯಿಂದಲೇ ರೈಲ್ವೆ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಬರೆಯಬಹುದು ಎಂದಾಗಿರುವುದು... ರೈಲ್ವೆ ಲಾಭದತ್ತ ಕಾಲಿಟ್ಟಿದ್ದೆ ರಾಷ್ಟ್ರೀಯ ಜನತಾದಳವೆನ್ನುವ ಬಿಹಾರದ ಪ್ರಾದೇಶಿಕ ಪಕ್ಷದ ನಾಯಕರಾದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಅಲ್ಲವೇ? ಭಾರತದ ಅತ್ಯುತ್ತಮ ರಕ್ಷಣಾ ಸಚಿವರು ಎನ್ನಿಸಿದ್ದ ಜಾರ್ಜ್ ಫರ್ನಾಂಡಿಸ್ ಕೂಡಾ ಸಮತಾಪಕ್ಷದವರಾಗಿದ್ದಾರೆ ಎನ್ನುವುದನ್ನು ಮರೆಯಲಾಗುವುದೇ?

ಬಹುಭಾಷಾ ಬಹುಸಂಸ್ಕೃತಿಗಳ ರಾಜ್ಯಗಳಿಂದಾದ ಭಾರತದಂತಹ ದೇಶದ ವೈವಿಧ್ಯತೆಗಳನ್ನು, ಪ್ರಾದೇಶಿಕ ಆಶೋತ್ತರಗಳನ್ನು ಅರ್ಥ ಮಾಡಿಕೊಂಡರೆ ಈ ವೈವಿಧ್ಯತೆಗಳನ್ನು ನಿಜಕ್ಕೂ ಪ್ರತಿನಿಧಿಸುವ, ಈ ಪ್ರದೇಶಗಳ ಹಿತಕ್ಕಾಗಿ ತುಡಿಯುವ ಪ್ರಾದೇಶಿಕ ಪಕ್ಷಗಳಿಂದಲೇ ಸರಿಯಾದ ವ್ಯವಸ್ಥೆಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಮನವರಿಕೆಯಾಗುತ್ತದೆ. ಮಹಾರಾಷ್ಟ್ರದ ಹಿತಕ್ಕಾಗಿ ಕಟಿಬದ್ಧವಾದ ಅಲ್ಲಿನ ಪ್ರಾದೇಶಿಕ ಪಕ್ಷ ಮತ್ತು ಕನ್ನಡಿಗರ ಹಿತಕ್ಕಾಗಿ ಬಡಿದಾಡುವ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದಾಗಲೇ ಸರಿಯಾದ ರಾಷ್ಟ್ರೀಯ ಜಲನೀತಿಯಂತಹ ಎಲ್ಲರೂ ಒಪ್ಪಬಹುದಾದ ಪರಿಹಾರ ಸೂತ್ರ ರೂಪಿಸಲು ಸಾಧ್ಯವಾಗಬಹುದಾಗಿದೆ. ಇಷ್ಟು ವರ್ಷ ಈ ಸಮಸ್ಯೆಗಳಿಂದ ಪಲಾಯನ ಮಾಡಿ ಚಾಪೆಯಡಿ ಹಾಕಿಕೊಂಡು ಕೂತ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳ ಸಮಸ್ಯೆಗಳಾಗಲೀ, ರಾಷ್ಟ್ರೀಯ ಸಮಸ್ಯೆಗಳಾಗಲೀ ಪರಿಹಾರ ಕಾಣುವುದು ಅಸಾಧ್ಯವೇ ಅನ್ನಿಸುತ್ತದೆ. ಲಕ್ಷಾಂತರ ಭಾರತೀಯರು ಸಂಘ  ಹೇಳಿದ್ದನ್ನು ವೇದವಾಕ್ಯವೆಂದು ಪರಿಗಣಿಸಿ, ಮಾರ್ಗದರ್ಶನ ಪಡೆದುಕೊಳ್ಳುತ್ತಿರುವಾಗ... ಸಂಘದೋರು ಇಂಥಾ ನಿಲುವುಗಳ ಬಗ್ಗೆ ಮತ್ತೊಮ್ಮೆ ಚಿಂತನೆ ಮಾಡೋದು ಒಳ್ಳೇದು! ಆಲ್ವಾ ಗುರೂ?

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

(ಫೋಟೋ ಕೃಪೆ: kannada.oneindia.in - http://bit.ly/ww4Wn2)
ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ "ಚಿಂತನಗಂಗಾ"ದಿಂದ ಆಯ್ದ ಕೆಲಭಾಗಗಳನ್ನು ಸಂಘದ ನಿಲುವುಗಳೆಂದು ಒಂದು ಬರಹವನ್ನು ಪ್ರಕಟಿಸಿ, `ಇಂತಹ ನಿಲುವಿನ ಸಂಘವನ್ನು ಬೆಳೆಸುವುದು ಕನ್ನಡಿಗರಿಗೆ ಮುಳುಗುನೀರು ತರುತ್ತದೆ' ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು. ಈ ಬರಹಕ್ಕೆ ಸಂಘದ ಸದಸ್ಯರ,  ಪದಾಧಿಕಾರಿಗಳ ಮತ್ತು ಬೆಂಬಲಿಗರ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಬರಹವನ್ನು ಸಂಘದ `ಶತ್ರುವಿನ ಸಂಚು' ಎಂಬಂತೆ ಕಂಡ ಇವೆಲ್ಲಾ ಕಮೆಂಟುಗಳೇ ಸಂಘದ ಅನುಯಾಯಿಗಳಲ್ಲಿರುವ/ ಇಲ್ಲದಿರುವ ವೈಚಾರಿಕತೆ, ವಿಚಾರ ಸ್ವಾತಂತ್ರ ಮತ್ತು ಬೆಂಬಲಿಗರ ಮುಗ್ಧತೆಗಳನ್ನು ಬಿಂಬಿಸುವಂತಿವೆ. ಸಂಘ ಸಿದ್ಧಾಂತವಾದ "ಚಿಂತನಗಂಗಾ"ವನ್ನು ಓದದೆಯೇ ಸಂಘದ ಜೊತೆ ಕೈಗೂಡಿಸಿದ್ದವರಿದ್ದಾರೆ ಎನ್ನುವಂತೆ ಕೆಲವು ಪ್ರತಿಕ್ರಿಯೆಗಳಿದ್ದವು. ಸಂಘದ ನಿಲುವು ಇದೆಂದು ಒಪ್ಪಿಕೊಳ್ಳದಷ್ಟು ಮಾಯೆ ಮುಸುಕಿದವರೂ ಇದ್ದಾರೆ.

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

ಚಿಂತನಗಂಗಾ ಹೊತ್ತಗೆಯ ಮೊದಲಲ್ಲಿ ಹೀಗೆ ಬರೆಯಲಾಗಿದೆ:
ಸಾವಿರಾರು, ಅಷ್ಟೇಕೆ ಲಕ್ಷಾಂತರ ಜನರು ಈ ಗ್ರಂಥದಲ್ಲಿನ ಜೀವಂತ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎನ್ನುವ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪ್ರಾ. ಎಂ.ಎ. ವೆಂಕಟರಾಯರು ತಮ್ಮ ’ಪ್ರವೇಶ’ದಲ್ಲಿ ಹೇಳಿರುವಂತೆ "ರಾಷ್ಟ್ರನಿರ್ಮಾಣಕ್ಕಾಗಿ ಸಂಘವು ಎಂತಹ ಪರಿಪೂರ್ಣವಾದ, ಗುಣಾತ್ಮಕವಾದ, ದೇಶಾಭಿಮಾನದಿಂದ ತುಂಬಿ ತುಳುಕುವ, ಕಾರ್ಯಸಾಧ್ಯವಾದ, ಆದರ್ಶಪೂರ್ಣವಾದ ತತ್ವಗಳನ್ನೂ, ವಿಧಾನಗಳನ್ನೂ ಅನುಸರಿಸುತ್ತಿದೆ ಎಂಬುದನ್ನು ಇಲ್ಲಿ ಕಾಣಬಹುದು..."
ಇನ್ನು ಅರಿಕೆಯಲ್ಲಿ ಪ್ರಕಾಶಕರು ಚಿಂತನಗಂಗಾ ಬಗ್ಗೆ ಹೀಗೆ ಬರೆದಿದ್ದಾರೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಹೊಸದಾಗಿ ತಿಳಿಯ ಬಯಸುವವರಿಗೆ ಅದರಲ್ಲಿ ಅವರ ಬುದ್ಧಿ-ಹೃದಯಗಳನ್ನು ಬೆಳಗಲು ಸಾಕಷ್ಟು ಸಾಮಗ್ರಿ ಸಿಕ್ಕಿತು. ಸಂಘದ ವಿಷಯವಾಗಿ ಸಂದೇಹ- ಆಕ್ಷೇಪ ಇದ್ದವರಿಗೆ ಸಂಘದ ವಾಸ್ತವಿಕ ರೂಪ ಕಂಡು ಕಣ್ತೆರೆಯಿತು. ಸಮಾಧಾನ ಸಿಕ್ಕಿತು. ಸಂಘದ ಹೊರರೂಪ ಕಂಡಿದ್ದವರಿಗೆ ಅದರ ಆಂತರ್ಯದ ತಿರುಳು ತಿಳಿಯಿತು.
ಹಲವಾರು ವರ್ಷಗಳಿಂದ ಸಂಘದ ಕೆಲಸವನ್ನು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಕಾರ್ಯಕರ್ತರಿಗೆ ಸಹ ಆ ಗ್ರಂಥವು ಕಾರ್ಯದ ಕೈದೀವಿಗೆಯಾಯಿತು.
ಪ್ರತಿಕ್ರಿಯೆಯಲ್ಲಿ ಕೊನೆಕೊನೆಗೆ ಕೆಲವರಂತೂ ಇದು ಸಂಘದ ನಿಲುವೇ ಅಲ್ಲಾ, ಗುರೂಜಿಯವರ ಮಾತೇ ಅಲ್ಲ.. ಎನ್ನುವಂತಹ ಅರ್ಥದ ಮಾತುಗಳನ್ನೂ ಆಡಿದ್ದಾರೆ. ‘ಇದನ್ನು ಬರೆದವರೇ ಬೇರೆ, ಇದನ್ನು ಗುರೂಜಿ ನಿಧನರಾದ ಮೇಲೆ ಬಂದಿದ್ದು’ ಇತ್ಯಾದಿ ಮಾತುಗಳನ್ನಾಡಿದ್ದಾರೆ. ಆದರೆ ಹೊತ್ತಗೆಯ ಮೊದಲಲ್ಲೇ ಬರೆದಿರುವಂತೆ "ಬಂಚ್ ಆಫ್ ಥಾಟ್ಸ್" ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಗುರೂಜಿಯವರ ೬೦ನೇ ವರ್ಷದ ಹುಟ್ಟುಹಬ್ಬದಂದು. ಇನ್ನಾದರೂ ಇದನ್ನು ಸಂಘದ ತತ್ವಸಿದ್ಧಾಂತದ ಪುಸ್ತಕ ಎನ್ನುವುದನ್ನು ಒಪ್ಪಬಹುದಲ್ಲವೇ? ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!

ಸಂಘದ ಬಗ್ಗೆ ಯಾಕೆ ಬರೆದಿರಿ ಎಂದರೆ...!


ಇಡೀ ಬರಹದಲ್ಲಿ ಬರೆಯಲಾಗಿರುವ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಸಿದವರು ತಮ್ಮ ಸಹಮತಿಯನ್ನು ಇದುವರೆಗೂ ಹೇಳಿಲ್ಲ ಅಥವಾ ಅದು ಹೀಗಿರುವುದು ತಪ್ಪು ಎಂದೂ ಕೂಡಾ ಹೇಳುತ್ತಿಲ್ಲ. ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ ಎನ್ನುವ ಪ್ರಶ್ನೆಗೆ ಇದು ಕಾರಣವಾಗಿದೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಬದಲು, ಹೀಗೆ ಪ್ರಶ್ನೆ ಮಾಡಿದ್ದನ್ನೇ ‘ಯಾಕೆ ಮಾಡಿದಿರಿ?’ ಎನ್ನುವ ಮಾತುಗಳು ಕೇಳಿಬಂದವು. ವಾಸ್ತವವಾಗಿ ನಾವು ಹೀಗೆ ಪ್ರಶ್ನಿಸಲು ಕಾರಣ, ಸಂಘ ತನ್ನ ಸೈದ್ಧಾಂತಿಕ ನಿಲುವುಗಳನ್ನು ತನ್ನ ಮುಖವಾಡವಾದ ಬಿಜೆಪಿ ಸರ್ಕಾರದ ಮೂಲಕ ಮಾಡಿಸುತ್ತಿರುವುದು ಮುಖಕ್ಕೆ ರಾಚುವಂತೆ ಕಾಣುತ್ತಿರುವುದು. ಇರುವ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊರತೆಯಿರುವಾಗ ಹೊಸದಾಗಿ ತೀವ್ರ ವಿರೋಧದ ನಡುವೆಯೂ ವಿಶ್ವವಿದ್ಯಾಲಯ ಸ್ಥಾಪಿಸಲು ಏನು ಕಾರಣ? ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಇದಕ್ಕೆಲ್ಲಾ ಕಲಶವಿಟ್ಟಂತೆ ನಿನ್ನೆ ಮುಗಿದ ಸಂಘದ ಶಿಬಿರದಲ್ಲಿ ಆರುಕೋಟಿ ಜನರ ಪ್ರತಿನಿಧಿ/ ಮುಖಂಡರಾದ ಮುಖ್ಯಮಂತ್ರಿಗಳೇ ಹೋಗಿ ಪಾಲ್ಗೊಂಡಿದ್ದೂ, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದ್ದಾಗೆಲ್ಲಾ ಸಂಘದ ಕೇಂದ್ರ ಕಛೇರಿಯ ಕರೆಗೆ ಓಗೊಟ್ಟು ಎಡತಾಕಿದ್ದು ಕಾಣುತ್ತಿರುವಾಗ ಸಂಘದ ಬಗ್ಗೆ ಬರೆಯದೆ ಇರಬೇಕಿತ್ತಾದರೂ ಹೇಗೆ?

ಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.

ಸಮಾಜದಲ್ಲಿ ಒಡಕಿನ ವಿಷ ತುಂಬುವ ‘ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ’ ಎನ್ನುವ ಮೂಲಕ ವಿಭಿನ್ನ ಧರ್ಮಗಳ ಕನ್ನಡಿಗರ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ಎನ್ನಿಸುತ್ತದೆ. ಸುಮ್ಮನೆ ಒಡಕಿನ ಸಿದ್ಧಾಂತ ಬೋಧಿಸಿ ಶಿಸ್ತಿನ ರೋಬೋಗಳನ್ನು ಸೃಷ್ಟಿಸಿ ಸಮಾಜದ ಒಳಗೆ ಬಿಟ್ಟು, ಅವುಗಳ ಕೆಲಸಕ್ಕೂ ಸಂಘಕ್ಕೂ ಸಂಬಂಧವಿಲ್ಲಾ ಎಂದು ನುಣುಚಿಕೊಳ್ಳುವ ಮನಸ್ಥಿತಿ ಸಂಘಕ್ಕಿಲ್ಲಾ ಎಂದೇ ಭಾವಿಸೋಣ. ಹಾಗಾಗಬೇಕಾದರೆ ಕಡೇಪಕ್ಷ ಸಂಘದವರು ಒಪ್ಪಬೇಕಾದ್ದು "ತಮ್ಮ ಸಿದ್ಧಾಂತವು ಗುರೂಜಿಯವರ ಚಿಂತನಗಂಗಾದ ಬರಹಗಳಿಗೆ ಒಪ್ಪುತ್ತದೆ" ಎನ್ನುವುದನ್ನು. ಇಲ್ಲವೇ "ಗುರೂಜಿಯವರು ಹೇಳಿರುವ ಮುಸ್ಲಿಮ್, ಕ್ರೈಸ್ತರ ಬಗೆಗಿನ ಅನಿಸಿಕೆಗಳು ತಪ್ಪು, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಒಳ್ಳೆಯದು, ಮೀಸಲಾತಿಗೆ ಪರವಾಗಿದ್ದೇವೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ - ಇದು ಸಂಘದ ಸಿದ್ಧಾಂತ" ಎಂದು ಘೋಷಿಸಲಿ ಸಾಕು. ಬಹಿರಂಗವಾಗಿ, ಚರ್ಚೆಗಳಲ್ಲಿ "ಇಲ್ಲಾ.. ಇಲ್ಲಾ.." ಅಂತನ್ನೋ ಬದಲು ನಮ್ಮ ಸಿದ್ಧಾಂತವನ್ನು ಇಲ್ಲಿ ಬರೆಯಲಾಗಿದೆ ನೋಡಿ ಎಂದು ಒಂದು ಅಧಿಕೃತ ನಿಲುವಿನ ಮೂಲವನ್ನು ತೋರಿಸಿದ್ದರೆ ಸಾಕಿತ್ತು. ಆದರೆ ತಮಾಶೆಯೆಂದರೆ ಹಾಗೆ ತೋರಿಸಿದ ನಂತರ ಚಿಂತನಗಂಗಾ ಹೊತ್ತಗೆಯ ಬರಹಗಳ ಹಲವು ಅಂಶಗಳನ್ನು ಅವರೇ ಅಲ್ಲಗಳೆಯಬೇಕಾಗುತ್ತದೆ. ಒಟ್ಟಾರೆ ಸಂಘದ ಅಧಿಕೃತ ಸಿದ್ಧಾಂತ ಏನೆಂದು ತಿಳಿಸಿಕೊಟ್ಟರೆ ಸಾಕು.

ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರಾ ಬೆಂಬಲಿಗರ/ ಪರಿವಾರದ ಮುಗ್ಧತೆ, ಕುರುಡು ಬದ್ಧತೆಗೆ ಕನ್ನಡಿ ಹಿಡಿದಂತಿದ್ದವು...

ಪ್ರತಿಕ್ರಿಯೆಗಳ ಸಾರ!
"ರಾಜಕೀಯ ಮಾಡ್ತಿದೀರಾ?... ನಿಮ್ಮ ಸಂಘಟನೆ ಹೆಸರು ಬದಲಾಯಿಸಿಕೊಳ್ಳಿ... ಮೊದಲು ಕನ್ನಡದ ಕೆಲಸ ಮಾಡಿ ತೋರಿಸಿ... ನೀವು ಕೆಂಪು ಬಣ್ಣದವರು... ದೇಶ ಒಡೆಯಬೇಡಿ... ದೇಶ, ಹಿಂದುತ್ವ, ಸಂಘದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡು ಬಂದ ಕೆಂಬಣ್ಣದ ಭೂತ...ಲೇಖಕರಿಗೆ ಆಂಗ್ಲಭಾಷೆಯ ದಾಸ್ಯವು ನಮ್ಮದೇ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತಾ ಮೇಲೆಂದು ತೋರುತ್ತದೆ...ಕೆಂಪು ಲೇಖಕರ ಹಿಡಿತದಿಂದ ನಲುಗದಿರಲಿ...RSS ಬಗ್ಗೆ ಬರೀತೀರಲ್ಲಾ KFD-PFI ಬಗ್ಗೆ ಬರೀತೀರಾ?...ಹಳದಿ ಕೆಂಪು ಈಗ ಚೀನಿಯರ ಸಂಕೇತವಾಗುತ್ತಿದೆ... Do you have guts to question urdu primary mode of communication... ನೀವೇನು ಕನ್ನಡದ ಕೆಲಸಾ ಮಾಡಿದ್ದೀರಾ? ತಾಕತ್ತಿದ್ದರೆ ಒಂದು ಕನ್ನಡ ಶಾಲೆ ಮಾಡಿ... "
ಹೀಗೇ... ಕೆಲವು ಪ್ರತಿಕ್ರಿಯೆಗಳಂತೂ ಶತ್ರುಗಳನ್ನು ತೋರಿಸಿ ಒಗ್ಗಟ್ಟು ತರುವ ಪ್ರಯತ್ನದಂತೆ ಇವೆ.
ನೀವು ಸಂಸ್ಕೃತ/ ಹಿಂದೀ ಒಪ್ಪದಿದ್ದರೆ ನಾಳೆ ಕನ್ನಡವೂ ಇರಲ್ಲ... ಇಂಗ್ಲೀಶ್ ಬಂದುಬಿಡುತ್ತದೆ ಎಂದು ಒಬ್ಬರೆಂದರೆ ಮತ್ತೊಬ್ಬರು ಈ ರಾಜ್ಯವನ್ನು ಮುಸ್ಲಿಮರು ಆಳಿದರೆ ನಾಳೆ ಕನ್ನಡವು ಧೂಳಿಪಟವಾಗುತ್ತದೆ  (ondantoo satya. karnatakadalli muslimara adalita bandare, marane dinave kannada dhooli patavagtade.)
ಎಂದಿದ್ದಾರೆ.

ಇವೆಲ್ಲಾ ತೋರಿಸುವುದಾದರೂ ಏನನ್ನು? ‘ಯಾವ ಚಿಂತನೆಗಳನ್ನು ಆರಿಸಿ ತೋರಿಸಲಾಗಿದೆಯೋ ಆ ಚಿಂತನೆಗಳು ಸರಿ - ಅದನ್ನು ನಾವು ಒಪ್ಪುತ್ತೇವೆ’ ಎನ್ನುವ ನೇರವಂತಿಕೆಯಾಗಲೀ, ‘ಇಲ್ಲಾ, ಅದು ತಪ್ಪು.. ಗುರೂಜಿಯವರ ಈ ನಿಲುವನ್ನು ಸಂಘ ಒಪ್ಪದು’ ಎನ್ನುವ ದಿಟ್ಟತನ/ ವೈಚಾರಿಕ ಸ್ವಾತಂತ್ರವಾಗಲೀ ಇಲ್ಲದಿರುವಂತೆ ತೋರುತ್ತದೆ. ಹಾಗಾಗಿ ವಿಷಯಾಂತರ ಮಾಡೋ ಮೂಲಕ ಉತ್ತರಿಸುವ ಪ್ರಯತ್ನಗಳಂತೆ ಇವು ಕಾಣುತ್ತವೆ.

ಬರಹದ ಆಶಯ

ನಿಜಕ್ಕೂ ಸಂಘ ಗುರೂಜಿಯವರ ಈ ಮಾತುಗಳನ್ನು/ ಸಿದ್ಧಾಂತವನ್ನು ಹೊಂದಿರುವುದಾದರೆ ಒಪ್ಪಿಕೊಳ್ಳಲಿ. "ನಾವು ಪ್ರತಿಪಾದಿಸುವುದು ಇದನ್ನೇ... ಭಾರತದಲ್ಲಿ ಒಂದೇ ಶಾಸಕಾಂಗವಿರಲಿ, ಮುಸ್ಲಿಮರು/ ಕ್ರೈಸ್ತರ ದೇಶಪ್ರೇಮ ಪ್ರಶ್ನಾರ್ಹ, ಮೀಸಲಾತಿ ಕೆಟ್ಟ ಪದ್ದತಿ ಮತ್ತು ಹಿಂದೀ ಭಾರತದ ಸಂಪರ್ಕ ಭಾಷೆಯಾಗಲಿ" ಎನ್ನುವುದನ್ನೇ ಎನ್ನಲಿ. ವಾಸ್ತವವಾಗಿ ನಾಲ್ಕನೆಯದನ್ನು ಈಗಾಗಲೇ ಹೇಳಿದ್ದಾರೆ. ಉಳಿದ ಮೂರನ್ನು ಅದು ಸತ್ಯವಾದರೆ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಇನ್ಯಾವ ಸಿದ್ಧಾಂತ ಇವರನ್ನು ನಡೆಸುತ್ತಿದೆ ತಿಳಿಸಲಿ. ಈಗ ಜನರ ಮುಂದೆ ಇಂತಹ ನಿಲುವುಗಳನ್ನು ಇಟ್ಟುಕೊಂಡೇ ನೇರವಾಗಿ ರಾಜಕಾರಣಕ್ಕಿಳಿಯಲಿ ಎಂದದ್ದೂ ಕೂಡಾ... ‘ಬಿಜೆಪಿಯ ಮೂಲಕ ಹಿಂಬಾಗಿಲ ರಾಜಕಾರಣ ಮಾಡುವುದನ್ನು ಬಿಡಲಿ’ ಎನ್ನುವ ಕಾರಣದಿಂದಲೇ! ಅಥವಾ ಬಿಜೆಪಿಯೇ ತನ್ನ ಸಿದ್ಧಾಂತ ಸಂಘದ್ದು ಎಂದು ಹೇಳಿಕೊಂಡು ರಾಜಕಾರಣ ಮಾಡಲಿ. ಗುರೂಜಿಯವರ ಮಾತುಗಳ ಬಗ್ಗೆ ಸಮ್ಮತಿ ಅಥವಾ ತಿರಸ್ಕರಣೆಯನ್ನು ಸಾರ್ವಜನಿಕವಾಗಿ ಸಂಘವು ತಿಳಿಸುವುದು ಸಂಘದ ಬಗ್ಗೆ ಸಮಾಜಕ್ಕೆ ಇರುವ ಗೊಂದಲಗಳು ದೂರಾಗಲು ಖಂಡಿತಾ ನೆರವಾದೀತು! ಇಡೀ ರಾಷ್ಟ್ರಕ್ಕೇ ಬೆಳಕು ಕೊಡುತ್ತೇನೆನ್ನುವ, ಬಲಿಷ್ಠ ರಾಷ್ಟ್ರ ನಿರ್ಮಾಣವೇ ಪರಮಗುರಿಯೆನ್ನುವ ಸಂಘಕ್ಕೆ ಇಷ್ಟೂ ನೇರವಂತಿಕೆ ಇರದಿದ್ದರೆ ಹೇಗೆ?

RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

(ಫೋಟೊ: http://newshopper.sulekha.com/india-hindu-nationalism_photo_1064066.htm )

ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಒಂದು ದೊಡ್ಡ ಶಿಬಿರ ಹುಬ್ಬಳ್ಳಿಯಲ್ಲಿ ನಡೀತಿದೆ. ಈ ಶಿಬಿರದಲ್ಲಿ ಸಾವಿರಾರು ಆರೆಸ್ಸೆಸ್ಸಿಗರು ಪಾಲ್ಗೊಂಡಿದ್ದಾರೆ. ಸಮವಸ್ತ್ರ ಧರಿಸಿ, ಶಿಸ್ತಿನ ಸಿಪಾಯಿಗಳಾಗಿ ನಿನ್ನೆ ಇವರು ನಡೆಸಿದ ಪಥಸಂಚಲನವಂತೂ ನೋಡಿದವರ ಮೆಚ್ಚುಗೆಗೆ ಕಾರಣವಾಗುವಂತಿತ್ತು. ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣ, ಭಾರತೀಯ ಜನತಾ ಪಕ್ಷದ ಆಂತರಿಕ ಶಿಸ್ತು, ಭ್ರಷ್ಟಾಚಾರಗಳ ಬಗ್ಗೆಯೆಲ್ಲಾ ಅಲ್ಲಿ ಮಾತುಕತೆಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕನ್ನಡ - ಕನ್ನಡಿಗ- ಕರ್ನಾಟಕಗಳ ಬಗ್ಗೆಯಾಗಲೀ, ಭಾರತದ ಸಂವಿಧಾನದ ಬಗ್ಗೆಯಾಗಲೀ, ಒಕ್ಕೂಟ ವ್ಯವಸ್ಥೆಯ ಬಗ್ಗೆಯಾಗಲೀ, ಜಾತ್ಯಾತೀತತೆಯ ಬಗ್ಗೆಯಾಗಲೀ ಆರೆಸ್ಸೆಸ್ಸಿಗೆ ಇರುವ ನಿಲುವುಗಳನ್ನು ಅರಿತಾಗ ಈ ಸಂಭ್ರಮ ಆತಂಕವಾಗಿ ಬದಲಾಗುವುದರಲ್ಲಿ ಅಚ್ಚರಿಯಿಲ್ಲ!

ಸಂಘದ ಹೊರಮುಖ!

ಆರೆಸ್ಸೆಸ್ ಎನ್ನುವುದು ದೇಶದ ಅತ್ಯಂತ ಶಿಸ್ತುಬದ್ಧ ಸಾಮಾಜಿಕ ಸಂಘಟನೆ ಎಂದೇ ಗುರುತಾಗಿದೆ. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ಬಂದದ್ದಿದೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಹೆಸರುವಾಸಿಯಾಗಿದೆ. ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ, ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಇದೆಂಬ ಹೆಸರೂ ಸಂಘಕ್ಕಿದೆ. ಮನೆ ಮಠ ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇದರಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ತಮ್ಮದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವುದೂ ಕೂಡಾ ಸತ್ಯ. ಆದರೆ ವೈಯುಕ್ತಿಕ ಹಿರಿಮೆಗಳು, ಅನೇಕರ ನಿಸ್ವಾರ್ಥತೆ, ತ್ಯಾಗ, ಗಟ್ಟಿತನಗಳು ಬಳಕೆಯಾಗುತ್ತಿರುವ ಉದ್ದೇಶ ಮಾತ್ರಾ ದುರದೃಷ್ಟಕರವಾದುದ್ದಾಗಿದೆ.

ಸಂಘದ ಬೋಧನೆಯನ್ನು ಪ್ರಶ್ನಾತೀತವಾಗಿ ಒಪ್ಪುವ ಕಾರ್ಯಕರ್ತರ ಸೈನ್ಯವನ್ನೇ ಹೊಂದಿರುವ ಸಂಘವು, ಮೂಲತಃ ತಾನು ನಂಬಿರುವ ಸಿದ್ಧಾಂತಗಳಲ್ಲೇ ಪ್ರಜಾಪ್ರಭುತ್ವ ವಿರೋಧಿ, ವೈವಿಧ್ಯತಾ ವಿರೋಧಿ ನಿಲುವುಗಳನ್ನು ಹೊಂದಿರುವ ಪುರಾವೆಗಳನ್ನು, ಸಂಸ್ಥೆಯ ಪೂಜನೀಯ ಆದರ್ಶವಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಚಿಂತನಗಂಗಾ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧, ಪ್ರಕಾಶಕರು: ಸಾಹಿತ್ಯ ಸಂಗಮ ಪ್ರಕಾಶನ) ಪುಸ್ತಕದಲ್ಲಿ  ಕಾಣಬಹುದಾಗಿದೆ. ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಲುವಿನ ಸರಿತಪ್ಪುಗಳನ್ನು ವಿಶ್ಲೇಷಿಸದೆ, ರಾಷ್ಟ್ರೀಯ ಸ್ವಂಯಂಸೇವಕ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು!

ಭಾಷೆಗಳ ಬಗ್ಗೆ!

ವೈವಿಧ್ಯತೆಯನ್ನು ಹಳಿಯಲಾಗದ, ಆದರೆ ಒಪ್ಪಲಾಗದ ಮನಸ್ಥಿತಿಯನ್ನು, ಇಂತಹ ವೈವಿಧ್ಯತೆ ಇರುವುದರಿಂದಾಗಿಯೇ ಚಡಪಡಿಕೆ ಹೊಂದಿರುವುದನ್ನೂ ಈ ಕೆಳಗಿನ ಮಾತುಗಳು ಧ್ವನಿಸುತ್ತಿವೆ.
ನಮ್ಮ ರಾಷ್ಟ್ರೀಯ ಪರಂಪರೆಯ ವೈವಿಧ್ಯವು ಭಾಷೆಗಳ ಕ್ಷೇತ್ರಗಳಲ್ಲೂ ವ್ಯಕ್ತಗೊಂಡಿದೆ.. ಎಲ್ಲಾ ಭಾಷೆಗಳೂ ಮೂಲತಃ ಒಂದೇ. ವಾಸ್ತವವಾಗಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಸಂಸ್ಕೃತಿಯ ದಿವ್ಯ ಪರಿಮಳವನ್ನು ಹರಡುವ ನವವಿಕಸಿತ ಕುಸುಮಗಳಂತೆ. ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದರೆ ಭಾಷೆಗಳ ಆ ಸಾಮ್ರಾಜ್ಞಿ ದೇವವಾಣಿ ಸಂಸ್ಕೃತ. ಅದರ ಸಂಪನ್ನತೆ ಮತ್ತು ಪರಂಪರಾಗತ ಪಾವನ ಸಂಬಂಧಗಳಿಂದಾಗಿ ಅದೊಂದೇ ನಮ್ಮ ರಾಷ್ಟ್ರೀಯ ಏಕತೆಗೆ ಬಲನೀಡುತ್ತಿರುವ ಒಂದು ಮುಖ್ಯ ಅಂಶ. ಆದರೆ ದುರದೃಷ್ಟವಶಾತ್ ಅದು ಇಂದು ಸಾಮಾನ್ಯ ಬಳಕೆಯಲ್ಲಿಲ್ಲ. ಅದನ್ನು ಬಳಕೆಗೆ ತರುವ ನೈತಿಕ ಅಭಿಮಾನವಾಗಲೀ, ಕೆಚ್ಚೆದೆಯಾಗಲೀ ನಮ್ಮ ಇಂದಿನ ಆಡಳಿತಗಾರರಿಗಿಲ್ಲ.
 (ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಏಕೆ ತಲೆ ಎತ್ತುತ್ತಿವೆ ಗೊತ್ತಾಯ್ತಲ್ಲಾ?)
ಇಂಗ್ಲೀಶ್ ನಮ್ಮ ಮೇಲೆ ಹೇರಲ್ಪಟ್ಟ ಕೃತಕ ಹೊರೆ. ಇದನ್ನು ಕಿತ್ತೆಸೆಯಬೇಕು. ಇಂಗ್ಲೀಶ್ ಮುಂದುವರಿಕೆ ಮಾನಸಿಕ ದಾಸ್ಯದ ಲಕ್ಷಣ. ಸಂಪರ್ಕ ಭಾಷೆಯ ಸಮಸ್ಯೆಗೆ ಪರಿಹಾರವೇನು? ಸಂಸ್ಕೃತವು ಆ ಸ್ಥಾನವನ್ನು ಪಡೆಯುವವರೆಗೆ ಅನುಕೂಲದ ದೃಷ್ಟಿಯಿಂದ ಹಿಂದಿಗೆ ಆದ್ಯತೆ ನೀಡಬೇಕು. ಯಾಕೆಂದರೆ ದೇಶದ ಬಹುಭಾಗದ ಜನರು ಬಳಸುವುದು ಹಿಂದಿಯನ್ನೇ. ಕಲಿಯುವುದಕ್ಕೆ ಮತ್ತು ಆಡುವುದಕ್ಕೆ ಅತ್ಯಂತ ಸುಲಭವಾದ ಭಾಷೆಯೂ ಅದೇ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಕುಂಭ ಅಥವಾ ಬೇರಾವುದಾದರೂ ಮೇಳಕ್ಕೆ ಕಾಶಿಗಾಗಲೀ, ಪ್ರಯಾಗಕ್ಕಾಗಲೀ ಹೋದರೆ, ದೂರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳಿಂದ ಅಲ್ಲಿ ಕಿಕ್ಕಿರಿದು ನೆರೆಯುವ ಅಗಾಧ ಜನಸ್ತೋಮ ಹಿಂದಿಯನ್ನೇ, ಅದೆಷ್ಟೇ ಅಪಕ್ವವಾಗಿರಲೀ, ಬಳಸುವುದನ್ನು ಕಾಣುತ್ತೇವೆ.
ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು. ವಾಸ್ತವವಾಗಿ ಬ್ರಿಟೀಷರ ಆಳ್ವಿಕೆಯಲ್ಲೂ ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಒಂದೇ ಭಾಷೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇವೆಲ್ಲಾ ಭಾಷೆಗಳನ್ನೂ ನಾಶಮಾಡುವುದನ್ನು ಯಾವನೂ ಸಹಿಸಲಾರ. ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಶಂಕೆ, ಭೀತಿಗಳು ಕೇವಲ ಕಟ್ಟುಕತೆ, ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

ಒಟ್ಟು ಸಾರವೆಂದರೆ "ಹಿಂದೀಯನ್ನು ನೀವೆಲ್ಲಾ ಒಪ್ಪಿ. ಬ್ರಿಟೀಷರು ಆಳುವಾಗಲೇ ಭಾರತೀಯ ಭಾಷೆಗಳು ಉದ್ಧಾರವಾಗಿದ್ದವು, ಹಿಂದೀಲಿ ಆಳಿದರೆ ಏನಾಗುತ್ತದೆ?" ಎನ್ನುವ ನಿಲುವು ಕಾಣುತ್ತದೆ. ಇಂದು ಹಿಂದೀ ಬರದಿದ್ದರೆ ಕೆಲಸ ಕೊಡಲ್ಲಾ ಎಂದು ನಮ್ಮಲ್ಲಿ ಹುಟ್ಟಿಕೊಂಡಿರುವ ಪರಿಸ್ಥಿತಿ ಆಕ್ರಮಣವಲ್ಲವೇ? ಹಿಂದೀ ಯಜಮಾನಿಕೆಯಲ್ಲವೇ?

ಒಕ್ಕೂಟದ ಬಗ್ಗೆ!


ಸ್ವಯಂನಿರ್ಣಯಾಧಿಕಾರದ ಘೋಷಣೆಯ ಈ ತಪ್ಪು ಅನ್ವಯವನ್ನು ಕಾಶ್ಮೀರಕ್ಕೆ ಮತ್ತು ಈಗ ಗೋವಾಕ್ಕೆ ವಿಸ್ತರಿಸಲಾಗಿದೆ. ಕಾಶ್ಮೀರಿಗಳೇ ತಮ್ಮ ಭವಿಷ್ಯವನ್ನು ತೀರ್ಮಾನಿಸಬೇಕು ಎಂದರೆ ದೇಶದ ಏಕತ್ವವನ್ನೂ ಭಾರತದ ಜನರ ಏಕತ್ವವನ್ನೂ ತಿರಸ್ಕರಿಸಿದಂತೆ.
ಆನಂತರ ಬಂತು ನಮ್ಮ ಸಂವಿಧಾನ. ಇದು ನಮ್ಮ ದೇಶವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತ್ಯೇಕವೇ ಆದ ಘಟಕಗಳಾಗಿ ಒಡೆದು ಪ್ರತಿಯೊಂದಕ್ಕೂ ಒಂದು ‘ರಾಜ್ಯ’ವನ್ನು ಕೊಟ್ಟು ಎಲ್ಲವನ್ನೂ ಒಂದು ‘ಒಕ್ಕೂಟ’ವಾಗಿ ‘ಸಂಯುಕ್ತ’ಗೊಳಿಸಿತು. ಪ್ರತಿಭಾಷೆಯ ಗುಂಪು ‘ಒಂದು ಜನಾಂಗ’ವಾಗಿ ತನ್ನದೇ ಪ್ರತ್ಯೇಕ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿ‘ಸಮೃದ್ಧವಾಗಿ ಸ್ವಯಮಾಧಿಕಾರ’ವನ್ನು ಪಡೆದ ‘’ರಾಜ್ಯಗಳ ಒಕ್ಕೂಟ’ದ ಗೀಳು ನಮ್ಮ ನಾಯಕರ ಮನಸ್ಸನ್ನೂ ವಿಚಾರಶಕ್ತಿಯನ್ನೂ ಆಕ್ರಮಿಸಿಬಿಟ್ಟಿತ್ತು.
ಇವು ನಿರಾಸೆಗೊಳಿಸುವ ಯೋಚನೆಗಳೇ. ಆದರೆ ನಾವು ನಿರಾಸೆಯಿಂದ ಕೈಕಾಲು ಸೋಲಬೇಕಾಗಿಲ್ಲ: ಏಕೆಂದರೆ ಇದಕ್ಕೆ ಒಂದು ಮದ್ದುಂಟು.
ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೇ ‘ಸ್ವಯಮಾಧಿಕಾರ’ವುಳ್ಳ ಅಥವಾ ಭಾಗಶಃ ಸ್ವಯಮಾಧಿಕಾರವುಳ್ಳ ‘ರಾಜ್ಯಗಳ’ ಅಸ್ತಿತ್ವವನ್ನೇ ಅಳಿಸಿಹಾಕಬೇಕು.

ಸಮಾಜಿಕ ಸಮಸ್ಯೆಯ ಸರಳೀಕರಣ!


ಮೀಸಲಾತಿ ವ್ಯವಸ್ಥೆಯ ಬಗ್ಗೆ ಗುರೂಜಿಯವವರ ಅನಿಸಿಕೆ:
ನಮ್ಮ ಜನರಲ್ಲಿ ವಿವಿಧ ವಿಭಾಗಗಳವರಿಗೆ ಹರಿಜನರು, ನಿಮ್ನ ಜಾತಿಯವರು, ನಿಮ್ನ ಬುಡಕಟ್ಟಿನವರು ಹೀಗೆಲ್ಲಾ ಹೆಸರುಗಳನ್ನು ಕೊಡಾಲಾಗುತ್ತಿದೆ. ಹಣದಾಸೆ ತೋರಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿರುವುದು.
ಇದನ್ನು ಓದಿದಾಗ ಆರೆಸ್ಸೆಸ್ ಮೀಸಲಾತಿ ಬಗ್ಗೆ ಎಂತಹ ನಿಲುವನ್ನು ಹೊಂದಿದೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಇರಲಿಲ್ಲ ಎನ್ನುವಂತಹ ಅನಿಸಿಕೆಯನ್ನು ಗುರೂಜಿ ಮಾತುಗಳು ಧ್ವನಿಸುತ್ತಿರುವುದು ಸಂಘ ಇಡೀ ಸಮಾಜದ ಸಮಸ್ಯೆಗಳನ್ನು ಸರಳೀಕರಿಸುತ್ತಿರುವುದನ್ನು ತೋರುತ್ತದೆ. ಜಾತೀಯತೆ ತೊಲಗಬೇಕು ಅನ್ನುವ ನಿಲುವು ಸಂಘಕ್ಕಿದೆ ಎನ್ನಲಾಗುತ್ತದೆ, ಆದರೆ ಜಾತಿಯ ಕಾರಣದಿಂದಲೇ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಕ್ಕೆ ಸಂಘವು ದೇವಸ್ಥಾನಕ್ಕೆ ಪ್ರವೇಶ, ಬಾವಿನೀರು ಬಳಸಲು ಅನುಮತಿಯಂತಹ ಮೇಲ್ಮೇಲಿನ ಪರಿಹಾರಗಳಿಗಿಂತಲೂ ಮಿಗಿಲಾದ ಪರಿಹಾರವನ್ನು ನೀಡಲಾರದಾಗಿದೆ.

ಸಂಘದ ಧರ್ಮದೃಷ್ಟಿ!

ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ.
ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ.
ಕೆಲವು ಸಮಾಜ ಬಂಧುಗಳು ನಮ್ಮ ಜೊತೆ ಬಿಟ್ಟು ಕಳೆದ ಕೆಲವು ಶತಮಾನಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಿದ್ದವರು ಈಗ ಮರಳಿ ನಮ್ಮ ಬಳಿಗೆ ಬಂದಲ್ಲಿ ಅವರಿಗೆ ನಮ್ಮ ಪ್ರೀತಿ ಗೌರವಗಳನ್ನು ತೋರಿಸದೆ, ಸಂತೋಷ ಪಡದೆ ಹೇಗಿದ್ದೇವು? ಇಲ್ಲಿ ಬಲಾತ್ಕಾರವೇನೂ ಇಲ್ಲ. ವಿಷಯವನ್ನು ಸರಿಯಾಗಿ ತಿಳಿದುಕೊಂಡು ಅವರು ಹಿಂದಕ್ಕೆ ಬರಲಿ. ಉಡುಪು, ಸಂಪ್ರದಾಯ, ವಿವಾಹ ಪದ್ಧತಿ, ಅಂತ್ಯಸಂಸ್ಕಾರ ಇಂತಹವುಗಳಲ್ಲೆಲ್ಲ ಅವರು ತಮ್ಮ ಪೂರ್ವಿಕರ ಹಿಂದುಜೀವನ ವಿಧಾನವನ್ನು ಸ್ವೀಕರಿಸಲಿ ಎಂಬುದಷ್ಟೇ ನಮ್ಮ ಕರೆ, ಪ್ರಾರ್ಥನೆ.
ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!

ಈ ನಾಡಿನ ಒಳಗಿನ ಅಪಾಯಗಳೆಂದು ಇವರು ಬಗೆದಿರುವುದು ಮೂರನ್ನು. ಮೊದಲನೆಯದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು! ಹೀಗೆಂಬ ಮೂರು ಬೇರೆಬೇರೆ ಅಧ್ಯಾಯಗಳೇ ಈ ಪುಸ್ತಕದಲ್ಲಿದೆ. ಇದೇ ಇಂದಿಗೂ ಸಂಘದ ನಿಲುವಾಗಿದೆಯೇ?

ಆರೆಸ್ಸೆಸ್ ಮತ್ತು ಕರ್ನಾಟಕ 

ಇಂತಹ ನಿಲುವುಗಳ ಸಂಘವು ಕರ್ನಾಟಕದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಷ್ಟೂ ಕನ್ನಡ ಕನ್ನಡಿಗ ಕರ್ನಾಟಕಗಳ ಅಸ್ತಿತ್ವಕ್ಕೇ ಎರವಾದೀತು. ಏಕೆಂದರೆ ನಾಡಿನ ಆಡಳಿತದಲ್ಲಿ ಭಾಷೆಯಾಗಿ ಕನ್ನಡಕ್ಕಿಂತಾ ಹಿಂದೀಗೆ ಪ್ರಾಮುಖ್ಯತೆ. ನಾಡಾಗಿ ಒಗ್ಗೂಡಿದ ಕರ್ನಾಟಕಕ್ಕಿಂತಾ ಕನ್ನಡನಾಡನ್ನು ಪುಟ್ಟ ಪುಟ್ಟ ರಾಜ್ಯಗಳಾಗಿ ಒಡೆಯುವುದಕ್ಕೇ ಪ್ರಾಮುಖ್ಯತೆ ಮತ್ತು ಕನ್ನಡಿಗನಿಗಿಂತಾ ಕನ್ನಡಿಗರ ನಿಷ್ಠೆಯನ್ನೆಲ್ಲಾ ಧರ್ಮದ ಹೆಸರಲ್ಲಿ ಪುಟಕ್ಕಿಟ್ಟು ನೋಡುವುದಕ್ಕೆ ಪ್ರಾಮುಖ್ಯತೆ. ಕನ್ನಡಿಗ ಮುಸಲ್ಮಾನ, ಕನ್ನಡಿಗ ಕ್ರೈಸ್ತನಿಗಿಂತಾ ನಮಗೆ ಸಂಬಂಧವೇ ಇರದ ಹೊರನಾಡಿನ ಹಿಂದುವಿಗೆ ಪ್ರಾಮುಖ್ಯತೆ!

ಸಂಘ ರಾಜಕೀಯಕ್ಕಿಳಿಯಲಿ!

ಇದೇ ಸಂಘದವರಿಗೆ ಬಿಜೆಪಿಯೆನ್ನುವ ಇನ್ನೊಂದು ಮುಖವಿದೆ. ಬಿಜೆಪಿಯೂ ಆರೆಸ್ಸೆಸ್ಸೂ ಒಂದೇ ಎನ್ನುವುದಕ್ಕೆ ಗಣವೇಶ ಧರಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಫೋಟೋಗಳಿರುವುದೇ ಸಾಕು! ಈ ಮುಖವಾಡ ಧರಿಸಿದ ಪಕ್ಷದ ಸಿದ್ಧಾಂತ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತಾಡುತ್ತದೆ, ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತಾಡುತ್ತದೆ. ಮೀಸಲಾತಿಯ ಪರವಾಗಿ ಮಾತಾಡುತ್ತದೆ, ಚುನಾವಣೆ ಹತ್ತಿರ ಬಂದಾಗ, ಮುಸ್ಲಿಂರ ಮತಕ್ಕಾಗಿ ‘ಗೆದ್ದ ಮೇಲೆ ಮುಸ್ಲಿಂವೊಬ್ಬರನ್ನು ಮಂತ್ರಿ ಮಾಡುತ್ತೇನೆ’ ಎನ್ನುತ್ತಾ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತದೆ... ಸಂಘವೇನೂ ಕಮ್ಮಿಯಿಲ್ಲ, ಬಿಜೆಪಿ ನಾಯಕರುಗಳಿಗೆ ಶಿಸ್ತಿನ ಪಾಠ ಹೇಳುತ್ತೆ, ಕೇಶವಶಿಲ್ಪಕ್ಕೆ ಕರೆಸಿ ಬುದ್ಧಿ ಹೇಳುತ್ತೆ. ತೆಪ್ಪಗಿರಲು ಆಜ್ಞೆ ಮಾಡುತ್ತದೆ...ವಿಪರ್ಯಾಸವೆಂದರೆ ಹೀಗೆ ಕೈಗೊಂಬೆಯಂತೆ ಆಡಾಡಿಸುತ್ತಲೇ ‘ಸೋನಿಯಾ ಗಾಂಧಿಯ ಕೈಗೊಂಬೆ ಕಾಂಗ್ರೆಸ್’ ಎನ್ನುವ ಆರೋಪವನ್ನೂ ಮಾಡುತ್ತದೆ. ಸಂಘ ಹೀಗೆ ಬಿಜೆಪಿಯ ಮೂಲಕ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದುದನ್ನು ಹೇಳಿಸಿ, ಸೀಟು ಗೆಲ್ಲಿಸಿ, ಸರ್ಕಾರ ಮಾಡಿಸಿ, ಆಮೇಲೆ ತಮ್ಮ ಸಿದ್ಧಾಂತದ ಜಾರಿ ಮಾಡುವ ಮೋಸಗಾರಿಕೆಗಿಂತಾ ನೇರವಾಗಿ ತಾನೇ, ತನ್ನ ಸಿದ್ಧಾಂತಗಳನ್ನು ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ರಾಜಕಾರಣಕ್ಕೆ ಇಳಿಯುವುದು ಪ್ರಾಮಾಣಿಕತೆಯೆನ್ನಿಸುತ್ತದೆ!

ಭಾರತವು ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಲಿ!

(ಫೋಟೋ: http://www.goodlightscraps.com/republic-day.php)
ನಾಳೆ ಭಾರತದ ೬೩ನೇ ಗಣರಾಜ್ಯದಿನೋತ್ಸವ. ೧೯೫೦ರ ಜನವರಿ ೨೬ರಂದು ಸಂವಿಧಾನವು ಜಾರಿಯಾದ ದಿನವನ್ನು ಹೀಗೆ ಪ್ರತಿವರ್ಷ ಗಣರಾಜ್ಯದಿನವನ್ನಾಗಿ ಆಚರಿಸಲಾಗುತ್ತದೆ. ಗುಲಾಮಗಿರಿಯ ನೂರಾರು ವರ್ಷಗಳ ನಂತರ ದೊರೆತ ಬಿಡುಗಡೆಯ ಸಂದರ್ಭದಲ್ಲಿ, ನಮ್ಮ ದೇಶದಲ್ಲಿ ಎಂತಹ ಆಡಳಿತ ವ್ಯವಸ್ಥೆಯಿರಬೇಕು ಎನ್ನುವುದನ್ನು ನಾವೇ ತೀರ್ಮಾನಿಸಿ, ರೂಪಿಸಿ, ಒಪ್ಪಿಕೊಂಡ ದಿನ ಇದು. ಈ ಸಂದರ್ಭದಲ್ಲಿ ದೆಹಲಿಯಂತೆಯೇ ದೇಶದ ಎಲ್ಲೆಡೆ ನಡೆಯುವ ಪೆರೇಡುಗಳ ನಡುವೆ ನಾವೇ ಒಪ್ಪಿಕೊಂಡಿರುವ ಈ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಆಲೋಚಿಸುವುದು ಸೂಕ್ತವಾಗಿದೆ.

ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಬೇಕು!

ಭಾರತ ಸಂವಿಧಾನದ ಮೊದಲಮಾತಿನಲ್ಲೇ ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಟ್ಟಲು ಬದ್ಧರಾಗುತ್ತೇವೆ ಎನ್ನುವರ್ಥದ ಸಾಲುಗಳಿವೆ. ಮುಂದೆ ಮೊದಲ ಭಾಗದಲ್ಲಿ UNION OF STATES, ಭಾರತವೊಂದು ರಾಜ್ಯಗಳ ಒಕ್ಕೂಟ ಎನ್ನಲಾಗಿದೆ. ನಾವು ಒಟ್ಟಾರೆಯಾಗಿ ಭಾರತದ ಸ್ವರೂಪವನ್ನು ನೋಡಿದರೆ ಇದರಲ್ಲಿ ರಾಜ್ಯಗಳು ಮತ್ತಷ್ಟು ಸ್ವಾಯತ್ತತೆಯನ್ನು ಹೊಂದಿರಬೇಕಾಗಿತ್ತೇನೋ ಅನ್ನಿಸದಿರದು. ಭಾರತದ ಸಂವಿಧಾನದಲ್ಲಿಯೇ ಆಡಳಿತಾತ್ಮಕವಾದ ವಿಷಯಗಳನ್ನು ಮೂರು ಪಟ್ಟಿ ಮಾಡಿ ರಾಜ್ಯಪಟ್ಟಿ, ಕೇಂದ್ರ ಪಟ್ಟಿ ಹಾಗೂ ಜಂಟಿ ಪಟ್ಟಿಗಳಾಗಿಸಲಾಗಿದೆ. ಇರುವ ೨೧೧ ಆಡಳಿತದ ವಿಷಯಗಳಲ್ಲಿ ಕೇವಲ ೬೬ ಮಾತ್ರಾ ರಾಜ್ಯಗಳ ಪಾಲಿಗಿವೆ. ಪ್ರಜಾಪ್ರಭುತ್ವದ ಅರ್ಥವೇ ಜನತೆ ತಮ್ಮನ್ನು ತಾವು ಆಳಿಕೊಳ್ಳುವುದು ಎಂದಾಗಿರುವಾಗ ಹೆಚ್ಚು ಹೆಚ್ಚು ಅಧಿಕಾರ ವಿಕೇಂದ್ರೀಕರಣವಾಗಬೇಕಾದ ಅಗತ್ಯವಿದೆ. ಕೇಂದ್ರಸರ್ಕಾರವು ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಮೊದಲಾದ ವಿಷಯಗಳಿಗೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಬೇಕಾದ ಅಗತ್ಯವಿದೆ. ಇದಷ್ಟೇ ಅಲ್ಲದೆ ಈ ದಿಕ್ಕಿನಲ್ಲಿ ಮೊದಲಹೆಜ್ಜೆಯಾಗಿ, ಇಡೀ ಭಾರತದ ಏಕತೆಗೇ ಕಳಂಕಪ್ರಾಯವಾಗಿರುವ ಹುಳುಕಿನ ಭಾಷಾನೀತಿಯನ್ನು ಕೈಬಿಡಬೇಕಾಗಿದೆ. ನಿಜವಾದ ಸಮಾನ ಗೌರವದ, ಸಮಾನ ಅವಕಾಶದ ಸರಿಯಾದ ಒಕ್ಕೂಟವೊಂದು ರೂಪುಗೊಳ್ಳಬೇಕಾದೆ. ಅಂದರೆ ಒಕ್ಕೂಟ ವ್ಯವಸ್ಥೆಯಿಂದ ಒಪ್ಪುಕೂಟ ವ್ಯವಸ್ಥೆಯಾಗುವತ್ತ ಭಾರತ ಸಾಗಬೇಕಿದೆ.

ಅರವತ್ಮೂರು ವರ್ಷಗಳ ಹಿಂದೆ ರೂಪಿಸಿ ಜಾರಿಗೆ ತಂದ ಸಂವಿಧಾನ ಮತ್ತು ಭಾರತದ ವ್ಯವಸ್ಥೆಗಳು ಪರಾಮರ್ಶೆಗೆ ಒಳಗಾಗಬೇಕಾಗಿದೆ. ಮತ್ತಷ್ಟು ಸಭ್ಯ, ನಾಗರೀಕ, ಪ್ರಜಾಪ್ರಭುತ್ವಗಳ ಕಡೆಗೆ ಭಾರತ ನಡೆಯಲು ಹಾಗೂ ಅದಕ್ಕಾಗಿ ಮಾಡಿಕೊಳ್ಳಬೇಕಾದ ಬದಲಾವಣೆಗಳು, ಸಾಗಬೇಕಾದ ದಾರಿಗಳ ಬಗ್ಗೆ ಚಿಂತಿಸಲು ಇದು ಸಕಾಲವಾಗಿದೆ. ಭಾರತ ದೇಶವು,  ಒಂದು ಸರಿಯಾದ ಒಪ್ಪುಕೂಟವಾಗಲು ಇಂತಹದ್ದೊಂದು ನಡೆ ಅತ್ಯಗತ್ಯವಾಗಿದೆ.

ಪ್ರಾದೇಶಿಕತೆ: ಶತಾವಧಾನದ ಪ್ರಶ್ನೆಯೂ ಭೈರಪ್ಪನವರ ನಿಲುವೂ..

ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದು ಸಂದರ್ಶನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. (ಫೋಟೋ ಕೃಪೆ:  http://simhasn.blogspot.com/) ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮೊನ್ನೆ ಪಾರಿಭಾಷಿಕ ಪದಗಳ ಬಗ್ಗೆ ಭೈರಪ್ಪನವರು ಹೊಂದಿರುವ ನಿಲುವಿನ ಬಗ್ಗೆ ಮಾತಾಡಿದ್ದೆವು. ಇದೀಗ ಭೈರಪ್ಪನವರು ಪಾರಿಭಾಷಿಕ ಪದಗಳ ಬಗ್ಗೆ ತಮ್ಮ ಅನಿಸಿಕೆ ಹೇಳಲು ಪ್ರೇರೇಪಿಸಿದ ಪ್ರಶ್ನೆ ಮತ್ತು ಅದಕ್ಕೆ ನೀಡಿದ ಉತ್ತರದಲ್ಲಿನ ಮತ್ತೊಂದು ಮಹತ್ವದ ನಿಲುವಿನ ಬಗ್ಗೆ ಮಾತಾಡೋಣ.


ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆ!


ಹೌದು! ಈ ಪ್ರಶ್ನೆಗೆ ಭೈರಪ್ಪನವರು ನೀಡಿದ ಉತ್ತರದ ಬಗ್ಗೆ ಮಾತಾಡುವುದಕ್ಕೂ ಮುನ್ನ ಪ್ರಶ್ನೆಯ ಒಳಮರ್ಮದತ್ತ ನೋಡೋಣ. ಶ್ರೀ ಶತಾವಧಾನಿ ಗಣೇಶ್ ಅವರು ಹೀಗೆ ಪ್ರಶ್ನೆ ಕೇಳಿದ್ದಾರೆ:

೧೪. ಈ ಹೊತ್ತು ಪ್ರಾದೇಶಿಕ ಭಾಷೆಗಳ, ಪ್ರಾಂತಗಳ ಮತ್ತು ಸಂಸ್ಕೃತಿಗಳ ಬಗೆಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಷಣವೆನಿಸಿದೆ. ಆದರೆ ಭಾರತದ ಬಗ್ಗೆ ಮಾತನ್ನಾಡುವುದು ಸಂಕುಚಿತತೆ ಎನ್ನಿಸಿದೆ. ಏಕೆ?
ಮೊದಲಿಗೆ, `ಭಾರತದಲ್ಲಿ ನಾನಾ ಭಾಷೆಗಳೂ, ಪ್ರಾಂತಗಳೂ ಇರುವುದು ಎಷ್ಟು ಸ್ಪಷ್ಟವಾಗಿದೆಯೋ ಅಂತೆಯೇ ನಾನಾ ಸಂಸ್ಕೃತಿಗಳಿರುವುದೂ ಸ್ಪಷ್ಟವಾಗಿದೆ' ಎಂಬುದನ್ನು ಗಣೇಶರು ಒಪ್ಪಿರುವುದು ಸಂತಸದ ವಿಷಯ. ಆದರೆ ತಮ್ಮ ಪ್ರಶ್ನೆಯಲ್ಲೇ ಪ್ರಾದೇಶಿಕತೆಯನ್ನು ಭಾರತೀಯತೆಗೆ ಎದುರಾಳಿಯಾಗಿ ನಿಲ್ಲಿಸಿರುವುದು, ಅವರಿಗೆ ಪ್ರಾಂತೀಯ ವಾದದ ಬಗ್ಗೆ ತಪ್ಪುಗ್ರಹಿಕೆ/ ಪೂರ್ವಾಗ್ರಹಗಳು ಇವೆಯೇನೋ ಎನ್ನಿಸುವಂತಿದೆ. ಯಾಕೆಂದರೆ, ‘ಪ್ರಾದೇಶಿಕತೆ ಬಗ್ಗೆ ಮಾತಾಡುವುದು ವಿಶಾಲ ಮನೋಭಾವನೆಯೆಂದಾಗಲೀ, ಭಾರತದ ಬಗ್ಗೆ ಮಾತಾಡುವುದು ಸಂಕುಚಿತತೆ ಎನ್ನುವುದಾಗಲೀ’ ಶ್ರೀಯುತರಿಗೆ ಮನವರಿಕೆಯಾದದ್ದು ಹೇಗೆಂದು ಅವರೇನೂ ತಿಳಿಸಿಲ್ಲ. ಆದರೂ ಅದೇ ದಿಟವೆನ್ನುವಂತೆ ಪ್ರಶ್ನೆ ಕೇಳಿ ಆ ಮೂಲಕ "ಪ್ರಾದೇಶಿಕವಾದವುಗಳ ಬಗ್ಗೆ ಮಾತನ್ನಾಡುವುದು  ಭಾರತದ ಬಗ್ಗೆ ಮಾತನ್ನಾಡುವುದಕ್ಕೆ ವಿರೋಧವಾದದ್ದು" ಎನ್ನುವ ಮನೋಭೂಮಿಕೆಯನ್ನು ಓದುಗರಲ್ಲಿ ಹುಟ್ಟುಹಾಕಿ, ಅದಕ್ಕೆ ಕಾರಣವೇನು? ಎಂದು ಜಾಣ್ಮೆಯಿಂದ ಪ್ರಶ್ನೆಯನ್ನು ಕೇಳಿದ್ದಾರೆ ಮತ್ತು ಆ ಮೂಲಕ ಉತ್ತರದ ದಿಕ್ಕನ್ನೂ ನಿರ್ದೇಶಿಸಿದ್ದಾರೆ. ಇದು ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆಯಾಗಿದೆಯಲ್ಲವೇ?


ಭೈರಪ್ಪನವರ ನಿಲುವು ಹುಟ್ಟು ಹಾಕಿದ ಪ್ರಶ್ನೆಗಳು!


ಭೈರಪ್ಪನವರು ಈ ಪ್ರಶ್ನೆಗೆ ಉತ್ತರಿಸುವಾಗ ಸ್ವಲ್ಪ ತಡವರಿಸಿ ಉತ್ತರವನ್ನು ಸುತ್ತಿ ಬಳಿಸಿ ನೀಡಲು ಯತ್ನಿಸಿರುವುದು ಕಾಣುತ್ತದೆ ಮತ್ತು ಈ ಉತ್ತರ ನೀಡುವ ಭರದಲ್ಲಿ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ತಿಳಿಯುತ್ತದೆ. ಹೇಗೆಂದು ನೋಡೋಣ...
ಈ ಭಾವನೆಯು ಪ್ರಧಾನವಾಗಿ ಡಿಎಂಕೆಯದು. ಮಹಾರಾಷ್ಟ್ರ, ಪಂಜಾಬ್, ಆಂಧ್ರ, ಗುಜರಾತುಗಳಲ್ಲಿಲ್ಲ.
> ಭಾರತದ ಮೊದಲ ಭಾಷಾವಾರು ರಾಜ್ಯ ಆಂಧ್ರ. ಇಲ್ಲಿ ತೆಲುಗು ನುಡಿ, ನಾಡಿನ ಬಗ್ಗೆ ದನಿಯೆತ್ತಿ ೫೮ ದಿವಸ ಉಪವಾಸ ಮಾಡಿ ಪ್ರಾಣ ತೆತ್ತವರು ಶ್ರೀ ಪೊಟ್ಟಿ ಶ್ರೀರಾಮುಲು. ಮೂಲತಃ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಕಾರಣವಾದದ್ದೇ ಆಂಧ್ರದ ಈ ಚಳವಳಿ.
> ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರನ್ನು ಕೇಂದ್ರವಾಗಿಸಿಕೊಂಡು ಹುಟ್ಟಿದ್ದು... ಶಿವಸೇನಾ. ಮರಾಠಿ ಕೇಂದ್ರಿತ ರಾಜಕೀಯ ಯುಗ ಆರಂಭವಾದದ್ದು ೧೯೬೬ರಲ್ಲೇ. ಮುಂದೆ ಅದು ಎಂ.ಇ.ಎಸ್, ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ಉದಯದವರೆಗೂ ಸಾಗಿ ಬಂದಿದೆ. 
> ಪಂಜಾಬ್ ಪ್ರಾಂತ್ಯದಲ್ಲಿ ಖಲೀಸ್ಥಾನದ ಬೇಡಿಕೆ, ಆ ಒಂದು ರಕ್ತಸಿಕ್ತ ಹೋರಾಟದ ಚಳವಳಿ, ಆನಂದ್‌ಪುರ್ ಸಾಹೇಬ್ ನಿರ್ಣಯವಾದ ಪ್ರತ್ಯೇಕ ಖಾಲಿಸ್ತಾನದ ಘೋಷಣೆಯೂ ಪಂಜಾಬಿ ಪ್ರಾಂತೀಯತೆಯ ಅಭಿವ್ಯಕ್ತಿಗಳೇ ಅಲ್ಲವೇ?
> ತನ್ನದೇ ಆದ ನುಡಿ, ಸಂಸ್ಕೃತಿಗಳನ್ನು ಹೊಂದಿರುವ ಯಾವ ಪ್ರಾಂತ್ಯವೂ ತನ್ನ ಭಾಷೆ, ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದನ್ನೂ, ತನ್ನ ಬೇರನ್ನು ಅದರಲ್ಲೇ ಗುರುತಿಸಿಕೊಳ್ಳುವುದನ್ನೂ ಬಿಡುವುದಿಲ್ಲಾ ಎನ್ನಲು ಕಟ್ಟಾ ರಾಷ್ಟ್ರೀಯವಾದದ ಬಿಜೆಪಿಯ ಗುಜರಾತಿನ ಮುಖ್ಯಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ "ಗುಜರಾತಿ ಅಸ್ಮಿತಾ" ಘೋಷಣೆಯೇ ಸಾಕ್ಷಿಯಾಗಿದೆ. ಮತ್ತಿದು ಸರಿಯಾಗೂ ಇದೆ.
ಬೆಂಗಾಲಿಗಳ ಭಾಷೆ ಸಂಸ್ಕೃತಿಗಳ ಅಭಿಮಾನವಂತೂ ವಿಶ್ವವಿಖ್ಯಾತ. ರವೀಂದ್ರನಾಥರ ಸೋನಾರ್ ಬಾಂಗ್ಲಾ ಆಗಲೀ, ಬಂಕಿಮರ ವಂದೆಮಾತರಂ ಆಗಲೀ ಬಂಗಾಳಿ ಸಂಸ್ಕೃತಿಯ ಅಭಿವ್ಯಕ್ತಿಯೇ ಅಲ್ಲವೇನು?


ಇವೆಲ್ಲಾ ಒಂದು ಕಡೆಯಿದ್ದು ಮತ್ತೊಂದೆಡೆ ಪ್ರಾದೇಶಿಕ ಚಿಂತನೆಗಿಂತಾ ಮಿಗಿಲಾಗಿ ರಾಷ್ಟ್ರೀಯತೆಯ ಚಿಂತನೆಯೊಂದಿಗೇ ಕೈಗೂಡಿಸಿದ ಕನ್ನಡನಾಡಿನಲ್ಲಿ ಪ್ರಾದೇಶಿಕ ಚಿಂತನೆ ಮೂಡುವುದರ ಬಗ್ಗೆ ಗಣೇಶ್ ಮತ್ತು ಭೈರಪ್ಪನವರು ಎತ್ತಿದ ಆಕ್ಷೇಪದ ಮಾತುಗಳೇಕೋ ಉಚಿತವಾದುದಲ್ಲ ಅನ್ನಿಸುತ್ತದೆ. ಗಮನಿಸಿ ನೋಡಿ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಹೆಚ್ಚಿನವರೆಲ್ಲಾ ಈ ಮೇಲಿನ ಪ್ರದೇಶಗಳ ಜನರೇ ಆಗಿದ್ದಾರೆ. ಹಾಗಾದರೆ ಪ್ರಾದೇಶಿಕ ಚಿಂತನೆ ರಾಷ್ಟ್ರೀಯತೆಗೆ ಮಾರಕವಾಗುವುದಾದರೂ ಹೇಗೆ? ಕನ್ನಡಿಗರಿಗೆ ಕರ್ನಾಟಕತ್ವ ಎನ್ನುವುದೇ ಭಾರತೀಯತೆ ಅಲ್ಲವೇ? ಆಲೂರು ವೆಂಕಟರಾಯರ ಮಾತು "ಕರ್ನಾಟಕಾಂತರ್ಗತ ಭಾರತಮಾತೆ" ಎನ್ನುವುದನ್ನು ಅರಿತರೆ ಪ್ರಾದೇಶಿಕತೆ ಮತ್ತು ಭಾರತೀಯತೆಗಳೆರಡೂ ಒಂದೇ ಎನ್ನುವುದು ಅರಿವಾಗುತ್ತದೆ.


ಮುಂದುವರೆಯುತ್ತಾ ಭೈರಪ್ಪನವರು ಈ ಭಾವನೆಗೆ ಕಾರಣವನ್ನು ಸಂಸ್ಕೃತ ದ್ವೇಷ/ ವೇದದೆಡೆಗಿನ ದ್ವೇಷ/ ಪರಭಾಷಿಕರ ಪ್ರಾಬಲ್ಯಗಳಿಗೆ ಆರೋಪಿಸುತ್ತಾರೆ. ಆಂಗ್ಲರು ಭಾರತವನ್ನು ಒಡೆಯಲು ಬಳಸಿದ್ದ ತಂತ್ರಗಳ ಫಲ ಎಂದಿದ್ದಾರೆ. ವೈಜ್ಞಾನಿಕವಾಗಿ ಭಾಷಾ ವಿಜ್ಞಾನಿಗಳು ಗುರುತಿಸಿರುವ ದಿಟವಾದ ‘ಕನ್ನಡದ ಬೇರುಗಳು ಸಂಸ್ಕೃತದಲ್ಲಿಲ್ಲ’ ಎಂಬುದನ್ನು ಶ್ರೀಯುತರೂ ಒಪ್ಪುತ್ತಾರೆಂದುಕೊಳ್ಳೋಣ. ಹೀಗಿರುವಾಗ ನಮ್ಮತನದ ಬೇರನ್ನು ನಾವು ಅರಸುವುದೇ ಪಾಪವೆನ್ನುವಂತಹ ನಿಲುವು ಸರಿಯೇ? ನಮ್ಮ ಸಂಸ್ಕೃತಿಯ ಅನನ್ಯತೆಯ ಬಗ್ಗೆ ಮಾತಾಡಿದರೆ ಅದೆಂತು ಸಂಸ್ಕೃತ ದ್ವೇಷವಾಗುವುದೋ ತಿಳಿಯದು. ಕರ್ನಾಟಕದಲ್ಲಿ ಪರಭಾಷಿಕರ ಪ್ರಾಬಲ್ಯದ ಬಗ್ಗೆ ಹೇಳಿರುವ ಮಾತೊಂದೇ ಇದ್ದುದ್ದರಲ್ಲಿ   ಅರೆ ಸರಿಹೊಂದುವ ಮಾತು. ಆದರೂ ಭಾರತದ ಒಗ್ಗಟ್ಟನ್ನು ಆಂಗ್ಲರನ್ನು ತೋರಿಸಿ, ಚೀನೀಯರನ್ನು ತೋರಿಸಿ, ಪಾಕೀಸ್ತಾನಿಗಳನ್ನು ತೋರಿಸಿ, ಭಯೋತ್ಪಾದನೆಯನ್ನು ತೋರಿಸಿ... ಸಮಾನ ಶತೃತ್ವದ ಆಧಾರದ ಮೇಲೆ ಕಟ್ಟುವ ಹಾಗೂ ಉಳಿಸುವ ಪ್ರಯತ್ನಗಳನ್ನೇ ನಮ್ಮ ಸುತ್ತಮುತ್ತೆಲ್ಲಾ ಕಾಣುತ್ತಿರುವಾಗ, ಭೈರಪ್ಪನವರ ಈ ಅನಿಸಿಕೆ ಇನ್ನು ಹೇಗೆ ತಾನೇ ಇರಲು ಸಾಧ್ಯ ಅನ್ನಿಸದಿರದು. ಪ್ರಾದೇಶಿಕ ಚಿಂತನೆಗೆ ಕಾರಣ, ನಮ್ಮತನದ ಮೇಲೆ ನಡೆಯುವ ಭಾಷಾ, ಸಾಂಸ್ಕೃತಿಕ ಆಕ್ರಮಣಗಳಷ್ಟೇ ಅಲ್ಲಾ... ನಮ್ಮ ನಾಡು ಏಳಿಗೆ ಹೊಂದಬೇಕೆಂಬ ತುಡಿತವೇ ಮುಖ್ಯಕಾರಣವೆನ್ನುವುದನ್ನು ಭೈರಪ್ಪನವರೂ, ರಾ ಗಣೇಶರೂ ಗುರುತಿಸಿದ್ದರೆ ಚೆನ್ನಿತ್ತು.. ಒಟ್ಟಾರೆ ಶತಾವಧಾನಿಗಳ ಪ್ರಶ್ನೆಗೆ ಭೈರಪ್ಪನವರು ನೀಡಿರುವ ಉತ್ತರವು ನೇರವಾಗಿಲ್ಲದೆ ಕೊಂಕಣವನ್ನೆಲ್ಲಾ ಸುತ್ತಿಸಿ ಮೈಲಾರದ ಪಕ್ಕದೂರಿಗೆ ಕರೆತಂದು ನಿಲ್ಲಿಸಿದಂತಿದೆ.


ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಹಿರಿದಾದ ಸಾಧನೆಗೈದಿರುವ ಈ ಇಬ್ಬರು ಗೌರವಾನ್ವಿತ ಮಹನೀಯರ ಪ್ರಶ್ನೆ ಮತ್ತು ಉತ್ತರಗಳೆರಡನ್ನೂ ನೋಡಿದಾಗ ಒಟ್ಟಾರೆಯಾಗಿ ರಾಷ್ಟ್ರೀಯತೆ, ಭಾಷೆ, ಸಂಸ್ಕೃತಿಗಳ ಬಗ್ಗೆ ಇವರುಗಳು ಹೊಂದಿರುವ ನಿಲುವುಗಳು ಸರಿಯಿಲ್ಲದಿರುವುದು ಕಾಣುತ್ತದೆ. ಸತ್ಯದ ಹುಡುಕಾಟವೇ ಪರಮಗುರಿಯಾಗಿದೆ ಎನ್ನುವ ಈರ್ವರೂ ಈ ದಿಕ್ಕಿನಲ್ಲಿ ಮುಂದಾದರೂ ಯೋಚಿಸಿಯಾರು ಅಂದ್ಕೊಳ್ಳೋಣ... ಅಲ್ವಾ ಗುರೂ!
Related Posts with Thumbnails