ಇದು ನುಡಿಯರಿಮೆಯ ಮಹತ್ವದ ಹೊತ್ತಗೆ!


ಡಾ. ಡಿ ಎನ್ ಶಂಕರ್ ಬಟ್ ಅವರ "ಮಾತು ಮತ್ತು ಬರಹದ ನಡುವಿನ ಗೊಂದಲ" ಎನ್ನುವ ಹೆಸರಿನ ಹೊಸ ಹೊತ್ತಗೆಯೊಂದು ಇದೀಗ ಮಾರುಕಟ್ಟೆಗೆ ಬಂದಿದೆ. ಇದುವರೆಗೆ ನುಡಿಯರಿಮೆಯ ಬಗ್ಗೆ ಹತ್ತು ಹಲವು ಹೊತ್ತಗೆಗಳನ್ನು ಬರೆದಿರುವ ಇವರ ಈ ಹೊತ್ತಗೆಯಲ್ಲಿಯೂ ಎಂದಿನಂತೆ ಅತ್ಯಂತ ಸರಳವಾಗಿಯೂ, ವೈಜ್ಞಾನಿಕವಾಗಿಯೂ ವಿಷಯ ಮಂಡನೆ ಮಾಡಲಾಗಿದೆ. ಬಾಶಾ ಪ್ರಕಾಶನದವರು ಹೊರತಂದಿರುವ ಹೊತ್ತಗೆಯ ಬೆನ್ನುಡಿಯಲ್ಲಿ ಹೀಗೆ ಬರೆಯಲಾಗಿದೆ.

ಮಾತು ಮತ್ತು ಬರಹದ ನಡುವಿನ ಗೊಂದಲ
ಮಾತು ಮತ್ತು ಬರಹಗಳ ನಡುವಿನ ಸಂಬಂದವೆಂತಹುದು ಮತ್ತು ಅವಕ್ಕೂ ನುಡಿ ಇಲ್ಲವೇ ಬಾಶೆಗೂ ನಡುವಿರುವ ಸಂಬಂದವೆಂತಹುದು ಎಂಬುದರ ಕುರಿತಾಗಿ ಜನರಲ್ಲಿ ಗೊಂದಲವಿದೆ; ಈ ಗೊಂದಲದಿಂದಾಗಿ, ಅವರಲ್ಲಿ ನುಡಿಯ ಕುರಿತಾಗಿ ಹಲವು ತಪ್ಪು ಅನಿಸಿಕೆಗಳು ಮೂಡಿಬಂದಿವೆ. ಇವನ್ನು ಹೋಗಲಾಡಿಸುವುದಕ್ಕಾಗಿ, ಈ ಎರಡು ಬಗೆಯ ಸಂಬಂದಗಳು ಎಂತಹವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ನುಡಿ ಎಂಬುದು ಮಾತಲ್ಲದೆ ಬರಹವಲ್ಲ; ನುಡಿಯ ಇಲ್ಲವೇ ಮಾತಿನ ಒಂದು ಕ್ರುತಕ ರೂಪವೇ ಬರಹ. ಮಾತು ಮಕ್ಕಳ ಬೆಳವಣಿಗೆಯ ಅಂಗವಾಗಿ ತಲೆಮಾರಿನಿಂದ ಸಾಗುತ್ತಾ ಹೋಗುತ್ತದೆ; ಹಾಗಾಗಿ, ಅದು ಯಾವಾಗಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.
ಬರಹವನ್ನು ಮಕ್ಕಳಿಗೆ ಕಲಿಸಬೇಕಾಗುತ್ತದೆಯಾದ ಕಾರಣ, ಅದು ಸಮಯ ಕಳೆದಂತೆಲ್ಲಾ ಹೆಚ್ಚು ಹೆಚ್ಚು ಕ್ರುತಕವಾಗುತ್ತಾ ಹೋಗಿ, ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ; ಅದರಲ್ಲಿ ಜೀವಂತಿಕೆಯನ್ನು ತುಂಬಲು ಅದಕ್ಕೂ ಮಾತಿಗೂ ನಡುವಿರುವ ಅಂತರವನ್ನು ಬರಹಗಾರರು ಕಡಿಮೆ ಮಾಡುತ್ತಿರಬೇಕಾಗುತ್ತದೆ.
ಬರಹವನ್ನು ಬಳಸಬಲ್ಲವರಿಗೂ ಅದನ್ನು ಬಳಸದಿರುವವರಿಗೂ ನಡುವೆ ಆಲೋಚಿಸುವ ಬಗೆಯಲ್ಲೇ ವ್ಯತ್ಯಾಸಗಳಿರುತ್ತವೆ; ಒಂದು ಸಮಾಜದಲ್ಲಿ ಕೆಲವರು ಮಾತ್ರ ಬರೆಯಬಲ್ಲವರಾಗಿದ್ದರೆ, ಅವರಿಗೂ ಉಳಿದವರಿಗೂ ನಡುವೆ ಹೊಂದಾಣಿಕೆಯಾಗಲಾರದು. ಹಾಗಾಗಿ, ಒಂದು ಸಮಾಜದ ಏಳಿಗೆಯಾಗಬೇಕಿದ್ದಲ್ಲಿ, ಅದರಲ್ಲಿರುವವರೆಲ್ಲರೂ ಬರಹ ಬಲ್ಲವರಾಗಿರಬೇಕು.
ನುಡಿಯರಿಮೆಯ ಅಡಿಪಾಯದಂತಿದೆ ಈ ಹೊತ್ತಗೆ!

ನಾಡೋಜ ಡಾ. ಡಿ ಎನ್ ಶಂಕರಬಟ್ಟರು ಕನ್ನಡದ ನುಡಿಯರಿಮೆಗೆ ಹೊಸತನದ ದಿಕ್ಕುತೋರಿದ ಈ ಕಾಲದ ಪ್ರಮುಖರಲ್ಲೊಬ್ಬರು. ಇವರು ನುಡಿಯರಿಮೆಯ ಬಗ್ಗೆ, ಕನ್ನಡ ನುಡಿ ಸಾಗಿಬಂದ ಬಗೆ, ಸಾಗಬೇಕಾದ ಬಗೆಗಳ ಬಗ್ಗೆ ಹತ್ತಾರು ಹೊತ್ತಗೆಗಳನ್ನು ಬರೆದಿದ್ದಾರೆ ಮತ್ತು ನುಡಿಯರಿಗರ ಪಾಲಿಗೆ ಮಹತ್ವದ ವಿಜ್ಞಾನಿಯಾಗಿದ್ದಾರೆ. ಇವರ ಹೊತ್ತಗೆಗಳಲ್ಲಿ ಪ್ರಮುಖವಾಗಿ ಪ್ರತಿಪಾದಿಸಲ್ಪಡುತ್ತಿರುವ ವಿಷಯಗಳು ಕನ್ನಡ ವರ್ಣಮಾಲೆಯಿಂದ ಬಳಕೆಯಲ್ಲಿರದ ಅಕ್ಷರಗಳನ್ನು ಕೈಬಿಡಬೇಕು ಎನ್ನುವುದು. ಇದಕ್ಕೆ ಪೂರಕವಾಗಿ ಈಗಾಗಲೇ ಬಳಸುತ್ತಿರುವ ಪರಭಾಷೆಯ ಪದಗಳನ್ನು ಕನ್ನಡಿಗರು ಉಲಿಯುವಂತೆಯೇ ಬರೆಯಬೇಕು ಎನ್ನುವುದು. ಕನ್ನಡದಲ್ಲೇ ಪದಗಳನ್ನು ಕಟ್ಟುವ ಮೂಲಕ ಪದ ಕಟ್ಟುವಿಕೆಯನ್ನು ಜನರಿಗೆ ಹತ್ತಿರವಾಗಿಸಬೇಕು ಎನ್ನುವುದು. ಶಂಕರಬಟ್ಟರ ನಿಲುವಿಗೆ ಬೆಂಬಲ ಸಿಕ್ಕಂತೆಯೇ ಕೆಲವರಿಂದ ವಿರೋಧವೂ ಇದೆ. ಹೀಗೆ ವಿರೋಧಿಸುವವರ ವಾದಗಳಲ್ಲಿ ಮುಖ್ಯವಾಗಿ ಮಾತು ಮತ್ತು ಬರಹಗಳ ನಡುವೆ ವ್ಯತ್ಯಾಸ ಮರೆಮಾಚಿದ ಒಂದು ರೀತಿಯ ಗೊಂದಲ ಎದ್ದು ತೋರುತ್ತಿದ್ದು... ಈ ಹೊತ್ತಗೆಯಲ್ಲಿ ಅವೆಲ್ಲವನ್ನೂ ಸರಳವಾಗಿ ವಿವರಿಸಿ, ಗೊಂದಲ ನಿವಾರಿಸುವ ಪ್ರಯತ್ನವನ್ನು ಬಟ್ಟರು ಮಾಡಿದ್ದಾರೆ. ಹಾಗಾಗಿ, ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನದ ಅಂದರೆ ನುಡಿಯರಿಮೆಯ ಅಡಿಪಾಯದಂತಿದೆ ಈ ಹೊತ್ತಗೆ ಎನ್ನಬಹುದಾಗಿದೆ!

ಈ ಹೊತ್ತಗೆಯು ನವಕರ್ನಾಟಕ ಪ್ರಕಾಶನ ಸಂಸ್ಥೆಯಿಂದ ಹಂಚಿಕೆಯಾಗಿದ್ದು ಪ್ರಮುಖವಾದ ಹೊತ್ತಗೆ ಮಳಿಗೆಗಳಲ್ಲಿ ಸಿಗುತ್ತಲಿದೆ. ಹಾಗೇ ಮಿಂಬಲೆಯನ್ನು ಬಳಸಿ ಕುಳಿತಲ್ಲೇ ಹೊತ್ತಗೆಯನ್ನು ಕೊಳ್ಳುವ ಏರ್ಪಾಡು ಕೂಡಾ ಇದೆ. ಪತ್ರಿಕೆಗಳ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಗಳಿಸಿರುವ ಈ ಹೊತ್ತಗೆಯನ್ನು ಆಕೃತಿ ಪುಸ್ತಕದ ಈ ಕೊಂಡಿಯಲ್ಲಿ ಕೊಳ್ಳಬಹುದು. ಬೆಂಗಳೂರಿಗರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯೂ ಇವರಲ್ಲಿದೆ.

೧. ಮಾತು ಮತ್ತು ಬರಹದ ನಡುವಿನ ಗೊಂದಲ : http://akrutibooks.com/node/2884

ಹೋಮ್ ಟಾಕೀಸು: ಚಿತ್ರರಂಗದಲ್ಲೊಂದು ಬದಲಾವಣೆಯ ಸಣ್ಣ ಎಲೆ ಅಲುಗಾಡುತ್ತಿದೆ!


ಹೌದೂ ಗುರೂ! ಕನ್ನಡ ಸಿನಿಮಾರಂಗದಲ್ಲೊಂದು ಬದಲಾವಣೆಯ ಸಣ್ಣ ಎಲೆ ಅಲುಗಾಡಲು ಶುರುವಾಗಿದೆ. ಮಿಂಬಲೆಯಲ್ಲಿ ಕನ್ನಡ ಚಿತ್ರಗಳನ್ನು ನೋಡಲು ಸಿಗುವಂತೆ ಒಂದು ಏರ್ಪಾಡನ್ನು ಚಿತ್ರರಂಗದಲ್ಲಿ ತನ್ನ ಹೊಸತನದ ತುಡಿತದಿಂದ ಹೆಸರಾಗಿರುವ ಶ್ರೀ ಪವನ್ ಕುಮಾರ್ ಅವರು ಮಾಡಿದ್ದಾರೆ. ಈ ತಾಣದ ಹೆಸರು "ಹೋಮ್ ಟಾಕೀಸ್". ಕನ್ನಡ ಚಿತ್ರಗಳಿಗೆ ಹೊರದೇಶದಲ್ಲಿ ಮಾರುಕಟ್ಟೆ ಕಟ್ಟಿಕೊಡುವಲ್ಲಿ ಈ ಪ್ರಯತ್ನ ಸಹಕಾರಿಯಾಗಿದೆ.


ಏನಿದು ಹೋಮ್ ಟಾಕೀಸು?

ಮನೆಯಲ್ಲಿ ಕುಳಿತೇ ಸಿನಿಮಾಗಳನ್ನು ನೋಡಬೇಕೆಂದರೆ ಸಿ.ಡಿಗಳ ಮೊರೆ ಹೋಗಬೇಕಾಗಿತ್ತು ಮತ್ತು ಸಿನಿಮಾಗಳ ಸಿ.ಡಿ ಬರಬೇಕು ಎಂದರೆ ಸಿನಿಮಾ ತನ್ನ ಮೊದಲ ಸುತ್ತಿನ ಟಾಕೀಸು ಪ್ರಯಾಣ ಮುಗಿಸಿರಬೇಕಾಗಿತ್ತು. ಅಂದರೆ ಬೇಕೆಂದವರು ಹಳೆ ಸಿನಿಮಾಗಳನ್ನು ನೋಡಲು ಮಾತ್ರಾ ಸಾಧ್ಯವಿತ್ತು. ಹೊಸದು ನೋಡಬೇಕೆನ್ನುವ ಹಂಬಲವಿದ್ದವರನ್ನು ಹಾದಿ ತಪ್ಪಿಸಲೆಂದೇ ನಕಲಿ ಸಿ.ಡಿಗಳು, ಕಳಪೆ ಮುದ್ರಿತ ಸಿ.ಡಿಗಳು ಕಾನೂನು ಬಾಹಿರವಾಗಿ ಮಾರಾಟವಾಗುತ್ತಿದ್ದವು. ಕನ್ನಡದ ಒಂದೊಳ್ಳೆ ಹೊಸ ಸಿನಿಮಾ ನೋಡಬಯಸುವವರು ಇಲ್ಲವೇ ಅದು ಹಳತಾಗುವವರೆಗೆ ಕಾಯಬೇಕಿತ್ತು ಅಥವಾ ಕಳ್ಳದಾರಿಯ ಸಿ.ಡಿ ಕೊಳ್ಳಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಪವನ್ ಕುಮಾರ್ ತಮ್ಮ ಗೆಳೆಯರ ಜೊತೆಗೂಡಿ ರೂಪಿಸಿದ ಹೊಸ ಏರ್ಪಾಡಿನ ಹೆಸರೇ "ಹೋಮ್ ಟಾಕೀಸ್". ಇದರಲ್ಲಿ ಆಸಕ್ತರು ಹೊಸ ಹೊಸ ಚಿತ್ರಗಳನ್ನು ಬಾಡಿಗೆಗೆ ಪಡೆದು ಮಿಂಬಲೆಯಲ್ಲಿ ನೋಡಬಹುದಾಗಿದೆ. ಹೊಚ್ಚ ಹೊಸ ಚಿತ್ರಗಳನ್ನು, ಸದಭಿರುಚಿಯ ಚಿತ್ರಗಳನ್ನು ಇಲ್ಲಿ ಈಗಾಗಲೇ ಸಿಗುವಂತೆ ಮಾಡಲಾಗಿದೆ. ಕನ್ನಡ ಅಭಿಮಾನಿಗಳಿಗಂತೂ ಸಂತಸ ತರುವ ವಿಷಯವೆಂದರೆ ಬಹುಶಃ ಇಲ್ಲೆಂದೂ ರಿಮೇಕ್ ಚಿತ್ರಗಳು ಸಿಗಲಾರವು. ಯಾಕೆಂದರೆ ಪವನ್ ಮತ್ತು ತಂಡ "ನಾವು ರಿಮೇಕಿನ ವಿರೋಧಿಗಳು ಮತು ಇಲ್ಲಿ ಮೂಲ ಕನ್ನಡಚಿತ್ರಗಳು ಮಾತ್ರವೇ ಸಿಗುವುದು. ಕನ್ನಡ ಚಿತ್ರರಂಗ ಕಟ್ಟಲು ಇದೊಂದು ಚಳವಳಿ" ಎಂದು ಹೇಳಿಕೊಂಡಿದ್ದಾರೆ.

ಇದು ಇನ್ನಷ್ಟು ಬೆಳೆದು ಮಾದರಿಯಾಗಲಿ!

ಕನ್ನಡ ಚಲನಚಿತ್ರಗಳು ದೇಶವಿದೇಶಗಳಲ್ಲೂ ಮಾರುಕಟ್ಟೆ ಕಟ್ಟಿಕೊಳ್ಳಬೇಕು ಎಂಬ ಹೆಬ್ಬಯಕೆಗೆ ಪೂರಕವಾಗಿರುವ ಒಂದು ಮಹತ್ವದ ಹೆಜ್ಜೆಯನ್ನು ಈ ತಂಡ ಇಟ್ಟಿದೆ. ಮೂಲತಃ ಪ್ರತಿಭಾವಂತರ ಪಡೆಯನ್ನು ಹುಟ್ಟುಹಾಕಿ ಹೊಸತನದ ಗಾಳಿ ಚಿತ್ರರಂಗದಲ್ಲಿ ಬೀಸಲು ಕಾರಣವಾಗಿರುವ ಶ್ರೀ ಯೋಗರಾಜ್ ಭಟ್ ಅವರ ತಂಡದಲ್ಲೊಬ್ಬರಾಗಿರುವ ಪವನ್ ಕುಮಾರ್ ಅವರ ಈ ಪ್ರಯತ್ನ ಯಶಸ್ಸು ಗಳಿಸಲಿ. ಇದೀಗ ಬರೀ ಹೊರದೇಶಗಳಲ್ಲಿ ಸಿಗುತ್ತಿರುವ ಈ ಸೌಕರ್ಯ ನಾಳೆ ನಮ್ಮೂರುಗಳಲ್ಲೂ ಸಿಗುವಂತಾಗಲಿ. ಕನ್ನಡ ಚಿತ್ರಗಳು ಮಾರುಕಟ್ಟೆ ವಿಸ್ತರಣೆಯ ಈ ಸಾಧ್ಯತೆಯನ್ನು ಬಳಸಿಕೊಳ್ಳಲಿ ಎಂದು ಹಾರೈಸೋಣ. ಈ ಪೈರಸಿಯಂತಹ ಪಿಡುಗು ಬರಿಯ ಕನ್ನಡ ಚಿತ್ರರಂಗಕ್ಕೆ ಮಾತ್ರವೇ ಪಿಡುಗಾಗಿಲ್ಲ. ಇದೊಂದು ಸಮಾಜವೇ ತಿರಸ್ಕರಿಸಬೇಕಾದ ಸಮಸ್ಯೆಯಾಗಿದೆ. ಇದು ನಿನ್ನೆಯೂ ಇತ್ತು, ಇಂದೂ ಇದೆ, ನಾಳೆಯೂ ಇರಬಲ್ಲದು... ಇದರಿಂದೆಲ್ಲಾ ಕುಗ್ಗದೆ ಮುಂದಡಿಯಿಡುವುದು, ಈ ತೊಡರುಗಳನ್ನು ಮೀರಿ ಬೆಳೆಯುವುದು ಹೋಮ್ ಟಾಕೀಸಿಗೆ ಸಾಧ್ಯ. ಪವನ್ ತಂಡಕ್ಕೆ ಒಳಿತಾಗಲಿ.

ಕೊನೆಹನಿ: ಈ ಎಲ್ಲಾ ಮೆಚ್ಚುಗೆಯ ನಂತರವೂ ಹೇಳಲೇ ಬೇಕಾದ ಮಾತು... ಈ ತಾಣ ಕನ್ನಡದಲ್ಲಿ ಮೂಡಿಬರಲಿ. ಮಿಂಬಲೆ ತೆಗೆದೊಡನೆ ಕನ್ನಡವೇ ಕಾಣಲಿ. ಇಂಗ್ಲೀಶ್ ಆಯ್ಕೆಯಿದ್ದರೇನೂ ತೊಡಕಿಲ್ಲ. ಬರೀ ಇಂಗ್ಲೀಶ್ ಅಲ್ಲದೆ ಇತರೆ ಭಾಷೆಗಳ ಆಯ್ಕೆಯೂ ಇರಲಿ... ಅಲ್ವಾ ಗುರೂ!

ಕನ್ನಡಿಗರಿಗೆ ಕೆಲಸ: ರಾಜ್ಯಸರ್ಕಾರದಿಂದ ಒಂದೊಳ್ಳೇ ಹೆಜ್ಜೆ!

(ಫೋಟೋ: http://sadanandagowda.com/news-events/cm-performed-bhumi-puja/)
ಬೆಂಗಳೂರಿನ ಸಮೀಪವಿರುವ ನರಸಾಪುರ ಕೈಗಾರಿಕಾ ಪ್ರದೇಶ(ಕೋಲಾರ ಜಿಲ್ಲೆ)ದಲ್ಲಿ ಹೊಸ ಹೊಸ ಕೈಗಾರಿಕೆಗಳು ಶುರುವಾಗುತ್ತಿವೆ. ಆಟೋಮೊಬೈಲ್ ದಿಗ್ಗಜರಲ್ಲೊಂದಾದ ಹೋಂಡಾ ಸಂಸ್ಥೆಯ ಮೂರನೆಯ ಘಟಕವು ಇಲ್ಲಿ ಇತ್ತೀಚಿಗೆ ಶುರುವಾಯಿತು. ಹೋಂಡಾ ಮೋಟಾರ್‍‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಹೆಸರಿನ ಈ ಸಂಸ್ಥೆಗೆ ಭಾರತೀಯ ಜನತಾ ಪಕ್ಷದ  ನಮ್ಮ ರಾಜ್ಯಸರ್ಕಾರವು ಅನೇಕಾನೇಕ ವಿನಾಯ್ತಿ, ರಿಯಾಯಿತಿಗಳನ್ನು ನೀಡಿದೆ. ಈ ಸಂಬಂಧವಾದ ಆದೇಶಗಳಿಗೆ ಸಂಪುಟಸಭೆಯಲ್ಲಿ ಮುಖ್ಯಮಂತ್ರಿಗಳಿಂದ ಒಪ್ಪಿಗೆ ಪಡೆಯಲಾಯಿತಂತೆ. ಇದೇ ಸಂದರ್ಭದಲ್ಲಿ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಸ್ ಸುರೇಶ್ ಕುಮಾರ್ ಅವರು  ಸಂಸ್ಥೆಯ ಅಧಿಕಾರಿಗಳಿಗೆ "ಸಂಸ್ಥೆಯಲ್ಲಿ ಕಡಿಮೆಯೆಂದರೆ ನೂರಕ್ಕೆ ಎಂಬತ್ತರಷ್ಟು ಕನ್ನಡಿಗರಿಗೆ ಕೆಲಸ ನೀಡದಿದ್ದಲ್ಲಿ ಈ ಸವಲತ್ತುಳನ್ನೆಲ್ಲಾ ಹಿಂಪಡೆಯಲಾಗುವುದು" ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರಂತೆ. ಈ ಸುದ್ದಿಯನ್ನು ಮಾಧ್ಯಮದ ವರದಿಗಳಲ್ಲಿ ಕಂಡಾಗ ಹಾಲು ಕುಡಿದಷ್ಟು ಹಿಗ್ಗುಂಟಾಯ್ತು ಗುರೂ!

ಹೊಸ ಉದ್ದಿಮೆಗಳು ಮತ್ತು ಕೆಲಸದ ಅವಕಾಶಗಳು

ಯಾವುದೇ ನಾಡಿನಲ್ಲಿ ಶುರುವಾಗುವ ಸಂಸ್ಥೆಗಳು ಆ ನೆಲದ ಜನರಿಗೆ ಉದ್ಯೋಗ ದೊರಕಿಸಿಕೊಡಬೇಕಾದ್ದು ಸಹಜ ನ್ಯಾಯವಾಗಿದೆ. ಸರ್ಕಾರವು ಹೊರನಾಡಿನ ಸಂಸ್ಥೆಗಳು ನಮ್ಮಲ್ಲಿ ಆರಂಭವಾಗುವುದಕ್ಕೆ ಉತ್ತೇಜನ ನೀಡುತ್ತಾ ಅವುಗಳಿಗೆ ಎಲ್ಲಾ ತೆರನಾದ ಸವಲತ್ತುಗಳನ್ನು ನೀಡಲು ಮುಂದಾಗುತ್ತದೆ. ಕಡಿಮೆದರದಲ್ಲಿ/ ಪುಕ್ಕಟೆಯಾಗಿ ವಿದ್ಯುತ್ತು, ನೀರು, ನೆಲ ಕೊಡುವುದಲ್ಲದೆ ನೋಂದಣಿ ಶುಲ್ಕದಲ್ಲಿ ವಿನಾಯಿತಿ, ತೆರಿಗೆ ರಜೆಯೇ ಮೊದಲಾದ ಸೌಕರ್ಯಗಳನ್ನು ನೀಡುತ್ತದೆ. ಮೂಲತಃ ಹೀಗೆ ಮಾಡುವುದು ಬಂಡವಾಳವನ್ನು ಸೆಳೆಯಲೆಂದೇ ಆಗಿದೆ. ಇದರಿಂದಾಗಿ ನಾಡಿಗೆ ಸಿಗಬಹುದಾದ ಅತಿದೊಡ್ಡ ಲಾಭವೆಂದರೆ ನಿರುದ್ಯೋಗ ಸಮಸ್ಯೆಯು ಕಡಿಮೆಯಾಗುವುದು. ಹಾಗಾಗೇ ಹೊಸ ಉದ್ದಿಮೆಗಳ ಆರಂಭಕ್ಕೆ ಒಪ್ಪಿಗೆ ಕೊಡುವಾಗ ಸರ್ಕಾರವು ಇಂಥಾ ಕಟ್ಟಳೆಗಳನ್ನು ಮುಂದಿಡಬಹುದಾಗಿದೆ. ಈಗ ಈ ಹೋಂಡಾ ಘಟಕದಿಂದಲೇ ೩೨೦೦ ನೇರ ನೇಮಕಾತಿ ನಡೆಯಲಿದೆ. ಇದಲ್ಲದೆ ಪೂರಕ ಉದ್ದಿಮೆಗಳಲ್ಲಿಯೂ ೧೨೦೦ ಹುದ್ದೆಗಳು ಹುಟ್ಟಿಕೊಳ್ಳಲಿವೆಯಂತೆ. ಬಿಜೆಪಿ ಸರ್ಕಾರ ನಿಜಕ್ಕೂ ಕನ್ನಡಿಗರಿಗೆ ೮೦% ಕೆಲಸ ಕೊಡಲೇಬೇಕು ಎನ್ನುವುದನ್ನು ಒಂದು ಕಟ್ಟಳೆಯಾಗಿ ಮಾಡಿರುವುದು ಅತ್ಯುತ್ತಮವಾದ ಹೆಜ್ಜೆಯಾಗಿದೆ.

ಇಂದಿಗೆ ಸರೋಜಿನಿ ಮಹಿಷಿ ವರದಿ

೧೯೮೩ರಲ್ಲಿ ರಚನೆಯಾಗಿ ತನ್ನ ಅಂತಿಮ ವರದಿಯನ್ನು ೫೮ ಮಹತ್ವದ ಸಲಹೆಗಳ ಮೂಲಕ  ೧೯೮೬ರಲ್ಲಿ ನೀಡಿದ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಗೆ ಅಂದಂದಿನ ಸರ್ಕಾರಗಳು ಅನೇಕ ಆದೇಶಗಳನ್ನು ಹೊರಡಿಸಿದ್ದರೂ ಇಂದಿಗೂ ವರದಿಯು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ನಾಡಿನಲ್ಲಿ ಈ ವರದಿಯ ಜಾರಿಗಾಗಿ ಅನೇಕ ಹೋರಾಟಗಳು ನಡೆದಿದ್ದು ಇದರ ಜಾರಿಗೆ ರಾಜ್ಯಸರ್ಕಾರ ಮನಸ್ಸು ಮಾಡಬೇಕಾಗಿದೆ. ಇದಕ್ಕೂ ಮುನ್ನ ಅಂದಿಗೆ ಹೊಂದುವಂತಿದ್ದ ಮಹಿಷಿ ವರದಿಯನ್ನು ಇಂದಿನ ಸನ್ನಿವೇಶದಲ್ಲಿ ಮತ್ತೆ ಪರಿಶೀಲಿಸಿ, ಬೇಕಾದ ತಿದ್ದುಪಡಿಗಳನ್ನು ಸೂಚಿಸುವ ಸಮಿತಿಯನ್ನು ರಚಿಸಬೇಕಾಗಿದೆ. ಸಮಿತಿಗೆ ನಿಗದಿತ ಸಮಯದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿ ಸದರಿ ವರದಿಯನ್ನು ಜಾರಿ ಮಾಡಲು ಮುಂದಾಗಬೇಕಿದೆ. ನಾಡಿನಲ್ಲಿ ಉದ್ದಿಮೆ ಸ್ಥಾಪಿಸಲು ಬರುವ ಎಲ್ಲಾ ಸಂಸ್ಥೆಗಳಿಗೆ ಸ್ಥಳೀಯರಿಗೆ ಇಂತಿಷ್ಟು ಕೆಲಸಗಳನ್ನು ನೀಡಲೇಬೇಕೆಂದು ಕಟ್ಟಳೆಯನ್ನು ರೂಪಿಸಲು ಅನುವಾಗುವ ಕಾಯ್ದೆಯನ್ನು ಆ ಮೂಲಕ ಜಾರಿಗೊಳಿಸಬೇಕಾಗಿದೆ. ಈಗಾಗಲೇ ಹೋಂಡಾ ಸಂಸ್ಥೆಯೊಂದಿಗೆ ಇಂತಹ ಕರಾರಿಗೆ ಬಂದು ನೂರಕ್ಕೆ ಎಂಬತ್ತು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕೆಂದು ತಾಕೀತು ಮಾಡಿ ಮೊದಲ ಹೆಜ್ಜೆಯಿಟ್ಟಿರುವ ರಾಜ್ಯಸರ್ಕಾರ ಈ ದಿಕ್ಕಿನಲ್ಲಿ ಮತ್ತಷ್ಟು ವೇಗವಾಗಿ ನಡೆಯಲಿದೆಯೆಂದು ಆಶಿಸೋಣ!

ಕೊನೆಹನಿ: ಇಂತಹ ಕಾಯ್ದೆ ಮಾಡೋದು ಹ್ಯಾಗಪ್ಪಾ ಅಂತಾ ಸರ್ಕಾರ ಚಿಂತೆ ಮಾಡೋ ಹಾಗೇ ಇಲ್ಲಾ... ಯಾಕಂದ್ರೆ ಬಿಜೆಪಿಯ ಸರ್ಕಾರವೇ ಇರುವ ಗುಜರಾತಿನಲ್ಲಿ ಈಗಾಗಲೇ ಇಂತಹ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಗುಜರಾತು, ಒರಿಸ್ಸಾ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳಲ್ಲಿ ಇಂತಹ ವ್ಯವಸ್ಥೆ ಇದ್ದು ನಮ್ಮ ಸರ್ಕಾರವೂ ಬೇಗನೆ ಇದಕ್ಕೊಂದು ನೀತಿಯನ್ನು ರೂಪಿಸಲಿ. 

ಒಕ್ಕೂಟಕ್ಕೆ ಧಕ್ಕೆ ತರಲು ಇದು ಇನ್ನೊಂದು ನೆಪವೇ?!

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ(NCTC)ವನ್ನು ಆರಂಭಿಸಲು ಕೇಂದ್ರಸರ್ಕಾರ ರೂಪಿಸಿರುವ ನೀತಿಗಳ ಬಗ್ಗೆ ಅನೇಕ ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ ಎನ್ನುವ ಸುದ್ದಿಯು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೇಂದ್ರಸರ್ಕಾರದ ಈ ಕ್ರಮವನ್ನು ಅನೇಕ ಮುಖ್ಯಮಂತ್ರಿಗಳು ವಿರೋಧಿಸಿದ್ದಾರೆ ಎನ್ನುವುದು ತುಸು ಸಮಾಧಾನ ತರುವ ವಿಷಯವಾಗಿದೆ.  ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿರುವ ಈ ವಿರೋಧಕ್ಕೆ ರಾಷ್ಟ್ರೀಯಪಕ್ಷವಾದ ಬಿಜೆಪಿ ಕೂಡಾ "ಇದು ಒಕ್ಕೂಟ ವ್ಯವಸ್ಥೆಗೆ ಮಾರಕ" ಎಂದು ದನಿಗೂಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಭಯೋತ್ಪಾದನಾ ಪಿಡುಗು ಮತ್ತು ಅದರ ವಿರುದ್ಧದ ಹೋರಾಟ!

ಭಯೋತ್ಪಾದನೆಯು ಇಡೀ ಭಾರತದ ತುಂಬಾ ಬೇರೆ ಬೇರೆ ಪ್ರಮಾಣದಲ್ಲಿ ತನ್ನ ಕರಾಳಹಸ್ತ ಚಾಚಿದೆ. ಈ ಭಯೋತ್ಪಾದನೆಯ ಭೂತಕ್ಕೆ ಬಲಿಯಾದ ಅಮಾಯಕರು ಎಲ್ಲಾ ರಾಜ್ಯಗಳಲ್ಲೂ ಇರುವಂತೆಯೇ ಇದರ ಜಾಲವೂ ಎಲ್ಲೆಡೆ ಹರಡಿದೆಯೆನ್ನುವ ಮಾತಿನಲ್ಲಿ ದಿಟವಿಲ್ಲದೆ ಇಲ್ಲ. ಕರ್ನಾಟಕದಂತಹ ರಾಜ್ಯಗಳು ಅನೇಕ ರಾಷ್ಟ್ರೀಯ/ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಅಡುಗುತಾಣವೂ ಆಗಿರುವುದನ್ನೂ ಕೂಡಾ ಹಲವು ಬಾರಿ ಕಂಡಿದ್ದೇವೆ. ಇದಕ್ಕೆ ಸಾಕ್ಷಿಯೆನ್ನುವಂತೆ ಕೆಲವು ಹೊರರಾಜ್ಯಗಳ ಭಯೋತ್ಪಾದಕ ಸಂಘಟನಾ ಮುಖ್ಯಸ್ಥರು ಇಲ್ಲಿ ಬಂಧಿತರೂ ಆಗಿದ್ದಾರೆ. ಭಾರತದ ಮುಂದಿರುವ ಭದ್ರತಾ ಸವಾಲುಗಳಲ್ಲಿ ಪ್ರಮುಖವಾದದ್ದು ಈ ಭಯೋತ್ಪಾದನೆಯೇ ಆಗಿದೆ. ಭಾರತದ ಗುಪ್ತಚರ ಹಾಗೂ ತನಿಖಾದಳಗಳು ಬಹುವಾಗಿ ಶ್ರಮಿಸುತ್ತಾ ಈ ಪಿಡುಗನ್ನು ಇಲ್ಲವಾಗಿಸುತ್ತಿದ್ದಾರೆ ಎನ್ನುವುದೂ ದಿಟವೇ ಆಗಿದೆ. ಯಾವುದೇ ನಾಡಿಗೇ ಆಗಲಿ ಟೆರರಿಸ್ಮ್ ಒಂದು ಬಹುದೊಡ್ಡ ಪಿಡುಗಾಗಿದ್ದು ಅದನ್ನು ಬೇರು ಸಮೇತ ಕಿತ್ತು ಹಾಕಬೇಕಾಗಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇಂತಹ ಹೋರಾಟದಲ್ಲಿ ಪ್ರತಿಯೊಬ್ಬರೂ ನಮ್ಮ ಪಾತ್ರ ನಿರ್ವಹಿಸಬೇಕು ಹಾಗೂ ಪ್ರತಿಯೊಂದು ರಾಜ್ಯಗಳ ಆಡಳಿತವೂ ಕಠಿಣತೆಯಿಂದ ಭಯೋತ್ಪಾದನೆಯನ್ನು ಇಲ್ಲವಾಗಿಸಲು ಮುಂದಾಗಬೇಕು. ಹಾಗಾಗೇ ಕೇಂದ್ರಸರ್ಕಾರ ಹೊತ್ತಿರುವ ಈ ಹೊಣೆಯನ್ನು ನಿಭಾಯಿಸುವಲ್ಲಿ ರಾಜ್ಯಗಳು ಸಂಪೂರ್ಣವಾಗಿ ಕೈಜೋಡಿಸಬೇಕು. ಕೇಂದ್ರಸರ್ಕಾರ ಭಯೋತ್ಪಾದನೆ ತಡೆಗೆ ಕೈಗೊಳ್ಳುತ್ತಿರುವ ಅನೇಕ ಕ್ರಮಗಳಲ್ಲಿ ಇತ್ತೀಚಿನದು "ನ್ಯಾಶನಲ್ ಕೌಂಟರ್ ಟೆರರಿಸಂ ಸೆಂಟರ್" ಕೂಡಾ ಒಂದು. ಆದರೆ ಭದ್ರತೆಯ ಕಾರಣದಿಂದಾಗಿ ರಾಜ್ಯಗಳ ಅಧಿಕಾರ ಮೊಟಕು ಮಾಡುವಂತಹ ಕ್ರಮಗಳನ್ನು ಇದು ಹೊಂದಿದೆ ಎನ್ನುವುದು ಮಾತ್ರಾ ಒಪ್ಪಲಾಗದಂತಹದ್ದು!

ಇದರಲ್ಲಿ ಬೇಡದ್ದೇನಿದೆ?

ಮೂಲತಃ ಇದಕ್ಕೆ ವಿರೋಧವಿರುವುದು ರಾಜ್ಯಗಳನ್ನು ಒಂದು ಮಾತೂ ಕೇಳದೆ "ಜಾರಿ ಆದೇಶ" ಹೊರಡಿಸಿದ ಕೇಂದ್ರದ ಆಕ್ರಮಣಶೀಲ ನಡೆಯ ಬಗ್ಗೆ ಮತ್ತು ಸಂಸತ್ತಿಗೆ ಉತ್ತರದಾಯಿಯಲ್ಲದ ಕೇಂದ್ರೀಯ ತನಿಖಾ ಸಂಸ್ಥೆಯೊಂದಕ್ಕೆ ಹಿಂದೆಂದೂ ಇಲ್ಲದ ಅಧಿಕಾರವನ್ನು ನೀಡುತ್ತಿರುವ ಬಗ್ಗೆಯಾಗಿದೆ. ಅಂದರೆ ಇದುವರೆಗೆ ರಾಷ್ಟ್ರೀಯ ತನಿಖಾದಳಕ್ಕೆ ತನಿಖೆ ಮಾಡುವ ಅಧಿಕಾರವಿತ್ತೇ ಹೊರತು ಬಂಧಿಸುವ ಅಧಿಕಾರವಲ್ಲ. ಈ ಅಧಿಕಾರವನ್ನು ನೀಡುವ ಮೂಲಕ ಕೇಂದ್ರವು ತನ್ನ ರಾಜಕೀಯ ಎದುರಾಳಿಗಳನ್ನು ಕಿರುಕುಳಕ್ಕೀಡು ಮಾಡಬಹುದು ಎನ್ನುವ ಆತಂಕವು ಮೊದಲ ಆಕ್ಷೇಪಕ್ಕೆ ಕಾರಣವಾಗಿದೆ. ರಾಜ್ಯಗಳ ಹೊಣೆಗಾರಿಕೆಯಾಗಿರುವ ಕಾನೂನು ಸುವ್ಯವಸ್ಥೆಯಲ್ಲಿ, ಕೇಂದ್ರವು ಯುದ್ಧದಂತಹ ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತಲೆಹಾಕಬಹುದೇ ಹೊರತು ರಾಜ್ಯಗಳ ಅಸಮರ್ಥತೆಯ ನೆಪ ಹೇಳಿ ಅಧಿಕಾರ ಚಲಾಯಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆಯಾಗುತ್ತದೆ ಎನ್ನುವ ಕಾರಣದಿಂದಾಗಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಇನ್ನು ಈ ಆದೇಶವನ್ನು ಹೊರಡಿಸುವ ಮುನ್ನ ರಾಜ್ಯಗಳ ಅಭಿಪ್ರಾಯ ಕೇಳುವ, ರಾಜ್ಯಗಳಿಗೆ ಮುಂತಿಳಿವು ನೀಡುವ ಯಾವ ಸೌಜನ್ಯವನ್ನೂ ತೋರಿಸದೆ ಒಮ್ಮಿಂದೊಮ್ಮೆಗೇ, ನೇರವಾಗಿ ಆದೇಶ ನೀಡಿದ್ದಾರೆ ಎನ್ನುವು ಕೂಡಾ ಆಕ್ಷೇಪಣೇಗೆ ಕಾರಣವಾಗಿದೆ.


ಇದಕ್ಕಿಂತಾ ಪ್ರಮುಖವಾದದ್ದು...


ಈ ಕಾರಣಗಳಿಗಿಂತ ಪ್ರಮುಖವಾದದ್ದು  ಸರ್ಕಾರದ ಪ್ರತಿನಿಧಿಯಾಗಿರುವ ಗೃಹ ಕಾರ್ಯದರ್ಶಿಗಳು "ರಾಜ್ಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಭಯೋತ್ಪಾದನೆಯ ವಿರುದ್ಧದ ಯುದ್ಧವನ್ನು ಎಂದಿಗೂ ಗೆಲ್ಲಲಾಗುವುದಿಲ್ಲ" ಎಂಬ ಭಾವನಾತ್ಮಕ ಹೇಳಿಕೆ ನೀಡಿ ವಿರೋಧವನ್ನು ಹತ್ತಿಕ್ಕುವ ಪ್ರಯತ್ನವನ್ನೂ ಮಾಡಿರುವುದು. ರಾಜ್ಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸದೆ ಕೇಂದ್ರದ ಅಧೀನವಾಗಿಯೇ ಇರಬೇಕೆನ್ನುವ ಆಶಯವೇ ಒಕ್ಕೂಟ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಪ್ರಜಾಪ್ರಭುತ್ವದ ಸಾರ್ಥಕತೆಯೇ ವಿಕೇಂದ್ರೀಕರಣವಾಗಿದೆ ಎನ್ನುವುದನ್ನು ಶ್ರೀಯುತರು ಅರ್ಥ ಮಾಡಿಕೊಡಿಲ್ಲದಿರುವುದು ಕಾಣುತ್ತಿದೆ. ಅಷ್ಟೇ ಅಲ್ಲದೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಇರುವ ರಾಜ್ಯಸರ್ಕಾರಿ ವ್ಯವಸ್ಥೆಯ ಬಗ್ಗೆ ಅಂದರೆ ಇಲ್ಲಿನ ಗುಪ್ತಚರ, ಪೊಲೀಸು ಮೊದಲಾದ ವ್ಯವಸ್ಥೆಗಳ ಬಗ್ಗೆ ನಂಬಿಕೆ ಇಲ್ಲದಿರುವುದು ಕಾಣುತ್ತಿದೆ. ನಿಜಕ್ಕೂ ರಾಜ್ಯ ರಾಜ್ಯಗಳ ನಡುವೆ ಅಥವಾ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಕಾರದ ಕೊರತೆಯಿದ್ದಲ್ಲಿ ಅದನ್ನು ಸರಿಪಡಿಸುವ/ ಉತ್ತಮಗೊಳಿಸುವ ಹೊಣೆಯಿರುವುದೇ ಕೇಂದ್ರಸರ್ಕಾರದ ಮೇಲೆ. ಇದಕ್ಕಾಗೇ ರಾಜ್ಯಗಳನ್ನು ಒಗ್ಗೂಡಿಸಿ ಭದ್ರತಾ ಸಭೆಗಳನ್ನು ನಡೆಸುವ ಪರಿಪಾಟವೂ, ಕೇಂದ್ರ ತನಿಖಾದಳದಿಂದ ಕಾಲಕಾಲಕ್ಕೆ ಎಚ್ಚರಿಕೆ ನೀಡುವ ಪರಿಪಾಟವೂ, ತೀರಾ ಮುಂಬೈ ದಾಳಿಯಂಥಾ ಸಂದರ್ಭಗಳಲ್ಲಿ ನೇರವಾಗಿ ರಾಜ್ಯಕ್ಕೆ ನೆರವು ನೀಡುವ ಏರ್ಪಾಡುಗಳೂ ಇರುವಾಗ ಆ ವ್ಯವಸ್ಥೆಗಳನ್ನೇ ಬಲಪಡಿಸುವ ಬದಲು ಹೀಗೆ ರಾಜ್ಯಗಳ ಸಹಜ ಹಕ್ಕನ್ನು ಮೊಟಕು ಮಾಡಲು ಯತ್ನಿಸುವುದು ಖಂಡಿತಾ ಆಕ್ಷೇಪಾರ್ಹವೂ ಖಂಡನಾರ್ಹವೂ ಆಗಿದೆ.

ಕೊನೆಹನಿ: ಇವತ್ತು ಭಯೋತ್ಪಾದನೆ ತಡೆ ಹೆಸರಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಮೊಟಕು ಮಾಡುತ್ತಿರುವ ಕೇಂದ್ರಕ್ಕೆ ಹಾಗೆ ಮೊಟಕು ಮಾಡಲು ದಿನಕ್ಕೆ ಹತ್ತು ಕಾರಣಗಳು ಸಿಗುತ್ತವೆ. ಮೊನ್ನೆ ಮೊನ್ನೆ ಭ್ರಷ್ಟಾಚಾರ ನಿಗ್ರಹ ಈಗ ಭಯೋತ್ಪಾದನೆಯ ನಿಗ್ರಹ... ನಾಳೆ ಇನ್ನೊಂದು, ನಾಡಿದ್ದು ಮತ್ತೊಂದು... ಹೀಗೆ. ಇವನ್ನೆಲ್ಲಾ ನಿಭಾಯಿಸಲು ರಾಜ್ಯಗಳು ಅಸಮರ್ಥ ಎನ್ನುವ ರೀತಿಯಲ್ಲಿ ದಿನೇದಿನೇ ರಾಜ್ಯಗಳ ಎಲ್ಲಾ ಹಕ್ಕುಗಳನ್ನೂ, ಅಧಿಕಾರಗಳನ್ನೂ ಒಂದೊಂದಾಗಿ ಕಸಿದುಕೊಳ್ಳುತ್ತಾ ಹೋದಲ್ಲಿ ಒಕ್ಕೂಟವೆನ್ನುವ ಹೆಸರಿಗೇನರ್ಥ? ನಮ್ಮನ್ನು ನಾವೇ ಆಳಿಕೊಳ್ಳಬೇಕೆನ್ನುವ  ತತ್ವಗಳಿಗೆ ತಿಲಾಂಜಲಿಯಿಟ್ಟರೆ ಪ್ರಜಾಪ್ರಭುತ್ವಕ್ಕೇನರ್ಥ?

ಭಾರತ ಒಪ್ಪುಕೂಟ ಮತ್ತು ಚಿಕ್ಕರಾಜ್ಯಗಳು!


ಇತ್ತೀಚಿಗೆ ಔಟ್‍ಲುಕ್ ಪತ್ರಿಕೆಯಲ್ಲಿ ಒಂದು ಬರಹ ಪ್ರಕಟವಾಗಿದೆ. ಇಂದಿನ ಭಾರತದೇಶವನ್ನು "ಯುನೈಟಡ್ ಸ್ಟೇಟ್ಸ್ ಆಫ್ ಇಂಡಿಯಾ" ಎಂದು ತೋರಿಸಲಾಗಿರುವ ಚಿತ್ರದ ಸಹಿತ ಆ ಬರಹವನ್ನು ಪ್ರಕಟಿಸಲಾಗಿದ್ದು ಅದರಲ್ಲಿ ೨೦೪೦ರ ವೇಳೆಗೆ ಸುಮಾರು ೧೬೦ ಕೋಟಿ ಜನಸಂಖ್ಯೆಯಾಗುವ ಭಾರತವು ಐವತ್ತು ರಾಜ್ಯಗಳ ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿರಬಹುದು ಎನ್ನುವ ಮಾತುಗಳನ್ನು ಆಡಲಾಗಿದೆ.

ಭಾರತ ಏಕೆ ಚಿಕ್ಕರಾಜ್ಯಗಳನ್ನು ಹೊಂದಿರಬೇಕು?

ಅತ್ಯುತ್ತಮ ಆಡಳಿತಕ್ಕಾಗಿ ಅಧಿಕಾರವು ವಿಕೇಂದ್ರೀಕರಣವಾಗಲು ಭಾರತವು ಚಿಕ್ಕ ಚಿಕ್ಕ ರಾಜ್ಯಗಳನ್ನು ಹೊಂದಿರಬೇಕೆನ್ನುತ್ತದೆ ಲೇಖನ. ೧೯೫೬ರ ರಾಜ್ಯ ಪುನರ್ವಿಂಗಡನಾ ಆಯೋಗದ ಪರಿಣಾಮಗಳನ್ನು ವಿಶ್ಲೇಷಣೆ ಮಾಡುತ್ತಾ `ಭಾಷಾವಾರು ಪ್ರಾಂತ್ಯಗಳ ರಚನೆ ಉದ್ದೇಶಿತ ಪರಿಣಾಮಗಳನ್ನು ನೀಡಿಲ್ಲ ಬದಲಾಗಿ ಚಿಕ್ಕ ರಾಜ್ಯಗಳು ಹೆಚ್ಚು ಆಕರ್ಶಣೀಯವಾಗಿದೆ' ಎನ್ನುತ್ತಾ ಹರ್ಯಾಣದ ಉದಾಹರಣೆಯನ್ನು ಕೊಟ್ಟಿದ್ದಾರೆ. ಒಂದು ಕಡೆ ಚಿಕ್ಕ ಚಿಕ್ಕ ರಾಜ್ಯಗಳಾದ ಕೂಡಲೇ ಏಳಿಗೆ ಹೊಂದಿಬಿಡುತ್ತವೆ ಎನ್ನುವದಕ್ಕೂ ಅಪವಾದವಾಗಿ ಹೊಸ ಚಿಕ್ಕ ರಾಜ್ಯಗಳು ಇನ್ನೂ ಆರ್ಥಿಕವಾಗಿ ತಡಬಡಾಯಿಸುತ್ತಿರುವುದನ್ನೂ ನಾವು ಕಾಣಬಹುದಾಗಿದೆ. ಈ ನಡುವೆ ತೆಲಂಗಣಾ ರಾಜ್ಯ ಬೇಕೆಂಬ ಕೂಗು, ಉತ್ತರ ಪ್ರದೇಶವನ್ನು ಹೋಳಾಗಿಸಬೇಕೆನ್ನುವ ಮಾಯಾವತಿ ಸರ್ಕಾರದ ಪ್ರಯತ್ನಗಳನ್ನು ಈ ಬರಹ ಹೊಸ ರಾಜ್ಯಗಳ ಆಕಾಂಕ್ಷೆ ಎನ್ನುವುದಾಗಿ ಬರೆದಿದ್ದಾರೆ. ಈಗ ತೆಲಂಗಣದ್ದೋ, ಹರಿತಖಂಡದ್ದೋ ಒಂದೋ ಎರಡೋ ವಿಷಯಗಳನ್ನು ಮಾತ್ರಾ ಕೈಗೆತ್ತಿಕೊಳ್ಳದೆ ದೂರದೃಷ್ಟಿಯಿಂದ ಕೆಲಸ ಮಾಡಬಲ್ಲ ಎರಡನೇ "ರಾಜ್ಯ ಪುನರ್ವಿಂಗಡನಾ ಆಯೋಗ"ವನ್ನೇ ರಚಿಸಿ ಮುಂದಿನ ಭಾರತದ ಆರ್ಥಿಕ ಏಳಿಗೆಯ ಗುರಿಯೊಂದಿಗೆ ಸಾಂಸ್ಕೃತಿಕ, ಭಾಷಿಕ, ಆಡಳಿತಾತ್ಮಕ ಅಂಶಗಳನ್ನು ಪರಿಗಣಿಸಿ ಮತ್ತೆ ರಾಜ್ಯಗಳು ರೂಪಗೊಳ್ಳಬೇಕು ಎಂಬ ಅಭಿಪ್ರಾಯ ಆ ಲೇಖನದ್ದಾಗಿದೆ.

ಭಾಷಾವಾರು ಪ್ರಾಂತ್ಯಗಳ ಮೂಲೋದ್ದೇಶ...

ಭಾಷೆಯೆನ್ನುವುದು ಒಂದು ಜನಾಂಗದ ಸಂವಹನ ಮಾಧ್ಯಮ ಮಾತ್ರವಲ್ಲ, ಅದು ಸಹಕಾರದ ಮಾಧ್ಯಮ. ನಾಗರೀಕ ಮನುಜನ ಅತಿ ಹಳೆಯ ಗುರುತು ಆತನ ನುಡಿ. ಇದರೊಂದಿಗೇ ಆತನ ನಂಬಿಕೆ, ಆಚರಣೆ, ಸಂಸ್ಕೃತಿ, ಕಲಿಕೆ, ದುಡಿಮೆ, ಏಳಿಗೆಗಳೆಲ್ಲಾ ತಳುಕುಹಾಕಿಕೊಳ್ಳಲಾಗಿದೆ ಎನ್ನುವುದೊಂದು ನಂಬಿಕೆ. ಅಂತೆಯೇ ಪ್ರಜಾಪ್ರಭುತ್ವದ ಮೂಲ ಆಶಯವಾಗಿರುವ ‘ನಮ್ಮನ್ನು ನಾವೇ ಆಳಿಕೊಳ್ಳುವುದು’ ಎನ್ನುವುದು ಪರಿಣಾಮಕಾರಿಯಾಗುವಲ್ಲೂ ಕೂಡಾ ನುಡಿಯ ಪಾತ್ರ ಹಿರಿದು. ಹಾಗಾಗಿ ಭಾರತದಲ್ಲಿ ಶಾಸನ ಮಾಡಬಲ್ಲ ಬುಡಮಟ್ಟದ ಘಟಕವೆಂದರೆ ರಾಜ್ಯವೇ ಆಗಿದ್ದು... ಇದು ಒಂದೇ ಭಾಷಿಕ ಜನರಿಂದ ಕೂಡಿರುವುದು ಪ್ರಜಾಪ್ರಭುತ್ವದ ಆಶಯಗಳ ಈಡೇರಿಕೆಗಿರುವ ಹೆದ್ದಾರಿಯಾಗಿದೆ. 

ಇಷ್ಟಕ್ಕೂ ಒಂದೇ ಕರ್ನಾಟಕವೇಕೆ?

ಹೌದು! ಕರ್ನಾಟಕವೇಕೆ ಒಂದೇ ಆಗಿರಬೇಕು? ಮೂರಾದರೆ ಏನಂತೆ? ಎನ್ನುವ ಮಾತುಗಳು ಈ ಹಿಂದೆಯೇ ಎದ್ದಿತ್ತು. ಸಂಯುಕ್ತ ಕರ್ನಾಟಕದಲ್ಲಿ ಒಂದು ಬರಹವನ್ನು ಬರೆದಿದ್ದಾಗ ಪ್ರತಿಕ್ರಿಯಿಸಿ ನಾವು ಬರೆದಿದ್ದದು ನಾಡಜನರಿಗೆ/ ನಾಡಿಗೆ ಚಿಕ್ಕರಾಜ್ಯಗಳಾಗೋದ್ರಲ್ಲಿಯೇ ಒಳಿತಿದ್ದರೆ ಅದೇ ಆಗಲಿ ಎಂದು! ಈಗ ಅದನ್ನೇ ಮತ್ತಷ್ಟು ವಿಸ್ತಾರವಾಗಿ ಚರ್ಚಿಸೋಣ! ಮೂಲತಃ ಕನ್ನಡನಾಡು ಒಂದಾಗಬೇಕೆಂಬ ಕನಸಿನ ರೂವಾರಿ "ಕರ್ನಾಟಕ ಕುಲಪುರೋಹಿತ"ರೆನ್ನಿಸಿದ ಆಲೂರು ವೆಂಕಟರಾಯರು. ಇವರು ಕೂಡಾ ಹಾಗೆ ಹೇಳಲು ಇದ್ದ ಕಾರಣಗಳು ಕನ್ನಡನಾಡು ಹಲವು ಆಡಳಿತಗಳಲ್ಲಿ ಹಂಚಿಹೋಗಿದ್ದು, ಕನ್ನಡೇತರ ಆಡಳಿತಗಾರರ/ ಸಾಮ್ರಾಜ್ಯಗಳ ಭಾಗವಾಗಿದ್ದು ಕನ್ನಡಿಗರ ಬದುಕು ಹೀನಾಯವಾಗುತ್ತಿದೆ ಎನ್ನಿಸಿದ್ದು. ನಾವೆಲ್ಲಾ ಒಂದುಗೂಡಿ ಒಮ್ಮನದಿಂದ ಒಗ್ಗಟ್ಟಿನಿಂದ ನಮ್ಮ ನಾಡು ಕಟ್ಟೋಣ ಎನ್ನುವ ಹಿರಿಯಾಸೆಯಿಂದಲೇ ಅಂತಹ ಏಕೀಕರಣದ ಕನಸು ಕಂಡಿದ್ದು. ಅಂದು ಒಂದುಗೂಡಿದ ಕರ್ನಾಟಕದಲ್ಲಿ ಇಂದಿಗೂ ಅಂದಿದ್ದ ಅಸಮಾನ ಏಳಿಗೆಯ ಸನ್ನಿವೇಶಗಳಿರುವುದರಿಂದಲೇ ಇಂದು ಇಲ್ಲಿನ ಆಡಳಿತ ಸಮರ್ಪಕವಾಗಿಲ್ಲ ಎನ್ನುವ ಭಾವನೆ ಕೆಲಭಾಗದ ಜನರಲ್ಲಿ ಮೊಳೆತದ್ದು. ಸಮರ್ಥವಾದ, ಎಲ್ಲ ಭಾಗದ ಏಳಿಗೆಗೆ ದುಡಿಯಬಲ್ಲ ನಾಯಕರ ಕೊರತೆಗಿಂತಲೂ ತನ್ನ ಕ್ಷೇತ್ರಕ್ಕಾಗಿ ಮಿಡಿಯದ ನಾಯಕರ ಕಾರಣದಿಂದಲೇ ಇಂತಹ ಹಿಂದುಳಿದಿರುವಿಕೆಯುಂಟಾಗಿದೆ ಎನ್ನುವುದು ಹೆಚ್ಚು ನಂಬಲರ್ಹವಾಗಿದೆ. ಆದರೂ ಕೆಲವರು ಇಂದಿನ ಕರ್ನಾಟಕವು ಮೂರಾಗಬೇಕು ಎಂದರೆ ಅದರಿಂದ "ಖಂಡಿತವಾಗಿ" ಆಗುವ ಕೆಟ್ಟದ್ದನ್ನು ಅಲಕ್ಷಿಸಿ "ಆಗಬಹುದಾದ" ಒಳಿತುಗಳನ್ನು ಮಾತ್ರಾ ಗಮನದಲ್ಲಿಟ್ಟುಕೊಂಡಿದ್ದಾರೆ ಎನ್ನಬೇಕಾಗುತ್ತದೆ. ಕನ್ನಡಿಗರೆಲ್ಲಾ ಇರುವ ಪ್ರದೇಶಗಳು ಒಂದೇ ರಾಜ್ಯವಾಗಿರದಿದ್ದರೆ ಕನ್ನಡನಾಡಿನ ಕಲಿಕಾ ವ್ಯವಸ್ಥೆಯು ಏಕರೂಪವಾಗಿರುವುದಿಲ್ಲ. ನಾಡಿನ ಸಂಪನ್ಮೂಲಗಳ ಮೇಲೆ ಹಕ್ಕು/ ಹಂಚಿಕೆಗಳು ಅಸಮಾನವಾಗಿರುತ್ತದೆ. ಎಲ್ಲಾ ಭಾಗಗಳೂ ಈ ವಿಷಯಗಳಲ್ಲಿ ಸಹಯೋಗದಿಂದ ವರ್ತಿಸಿದಲ್ಲಿ ಮಾತ್ರಾ ಕರ್ನಾಟಕ ಮೂರಾದರೂ ನೂರಾದರೂ ತೊಡಕಾಗದು! ಇನ್ನೂ ಸರಿಯಾಗಿ ಹೇಳಬೇಕೆಂದರೆ ಸಮಾನ ಗೌರವದ ಸರಿಯಾದ ಒಕ್ಕೂಟ ವ್ಯವಸ್ಥೆಯು ಸರಿಯಾದ ಅಂತರರಾಜ್ಯ ರೀತಿನೀತಿಗಳನ್ನು ರೂಪಿಸಿದಲ್ಲಿ ಈ ಸಮಸ್ಯೆಯು ತಕ್ಕಮಟ್ಟಿಗೆ ಪರಿಹಾರವಾಗಬಹುದಾಗಿದೆ.

ಚಿಕ್ಕರಾಜ್ಯಗಳು "ಯುಎಸ್‍ಐ"ನಲ್ಲಿ ಮಾತ್ರಾ ಸುರಕ್ಷಿತ!


ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಉತ್ತರ ಮತ್ತು ದಕ್ಷಿಣ ಭಾರತಗಳೇ ಎದುರಾಳಿಗಳಾಗಬಹುದೆಂಬ ಆತಂಕ ವ್ಯಕ್ತಪಡಿಸಿ ಇದನ್ನು ಸರಿದೂಗಿಸಲು ಎಲ್ಲಾ ರಾಜ್ಯಗಳ ಜನಸಂಖ್ಯೆಯೂ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿರಲಿ, ಇದಕ್ಕಾಗಿ ಉತ್ತರದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳನ್ನು ಚಿಕ್ಕರಾಜ್ಯಗಳನ್ನಾಗಿಸುವುದು ಒಳ್ಳೆಯದು ಎಂದಿದ್ದರು. ಹಾಗೆ ಮಾಡುವುದರಿಂದ ಕೇಂದ್ರಸರ್ಕಾರದ ಮೇಲೆ ದೊಡ್ಡ ರಾಜ್ಯದ ಹಿಡಿತ ತಪ್ಪಿಸಲು ಸಾಧ್ಯವೆಂದಿದ್ದರು. ದಕ್ಷಿಣ ಭಾರತದ ಹೈದರಾಬಾದ್ ಭಾರತದ ಎರಡನೇ ರಾಜಧಾನಿಯಾಗಲೀ ಎನ್ನುವವರೆಗೂ ಅವರು ಹೇಳಿದ್ದರು. ಎಂದರೆ ಕೇಂದ್ರದ ಮೇಲೆ ಯಾವ ರಾಜ್ಯವು ದೊಡ್ಡದೋ ಅದರ ಪ್ರಭಾವ, ಹಿಡಿತ ಇರುತ್ತದೆ ಮತ್ತು ಅದು ಸರಿಯಲ್ಲಾ ಎನ್ನುವ ಕಾಳಜಿಯಿಂದಲೇ ಹೇಳಿದ್ದರು.

ಇಂದು ಭಾರತದ ರಾಜಕಾರಣದಲ್ಲಿ ಯಾವ ಪಕ್ಷಗಳು ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾವೋ ಆ ಪಕ್ಷಗಳು ದೇಶದ ಒಪ್ಪುಕೂಟ ಸ್ವರೂಪದ ಬಗ್ಗೆ ನಂಬಿಕೆಯನ್ನು ಹೊಂದಿರುವಂತೆ ತೋರುತ್ತಿಲ್ಲ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆನ್ನುವ ಮನಸ್ಥಿತಿಯಿಲ್ಲದೆ, ಚಿಕ್ಕರಾಜ್ಯ ಮಾಡಬೇಕೆನ್ನುವುದು "ಬಲಿಷ್ಟ ಕೇಂದ್ರ ಮತ್ತು ಬಲಹೀನ ರಾಜ್ಯ"ದ ನಿರ್ಮಾಣದ ಪ್ರಯತ್ನವಾಗುತ್ತದೆ. ಇಂದು ಇಪ್ಪತ್ತೆಂಟು ಸಂಸದರ ಕರ್ನಾಟಕವು ಹೇಗೆ ಹೆಚ್ಚಿನ ಸಂಸದರ ಮಹಾರಾಷ್ತ್ರ, ತಮಿಳುನಾಡು ಹಾಗೂ ಆಂಧ್ರಗಳ ದೆಹಲಿ ಲಾಬಿಯ ಎದುರು ಕೈಚೆಲ್ಲುತ್ತದೆ ಎನ್ನುವುದು ಒಂದು ಕಡೆ, ಹಾಗೇ ಕಡಿಮೆ ಸಂಸದರನ್ನು ಹೊಂದಿರುವ ಹೆಚ್ಚು ರಾಜ್ಯಗಳಿರುವ ಈಶಾನ್ಯ ಭಾರತದ ಸಮಸ್ಯೆಗಳಿಗೆ ಭಾರತದ ಸಂಸತ್ತಿನಲ್ಲಿ ಸಿಗುವ ಆದ್ಯತೆಗಳ ಬಗ್ಗೆ ಕಣ್ಣು ಹಾಯಿಸಿದರೆ ಚಿಕ್ಕ ರಾಜ್ಯಗಳು ಭಾರತದಲ್ಲಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದು ಕಷ್ಟವೇನೋ ಎನ್ನುವ ಅನುಮಾನ ಮೂಡುತ್ತದೆ.

ಭಾರತವು ಸರಿಯಾದ ಸಂಯುಕ್ತ ಸಂಸ್ಥಾನವಾದಲ್ಲಿ ಇಂತಹ ತೊಡಕುಗಳನ್ನು ನಿವಾರಿಸಬಹುದಾಗಿದೆ. ‘ದೊಡ್ಡದಕ್ಕೆ ಬಲ/ ಪ್ರಭಾವ ಹೆಚ್ಚು’ ಎನ್ನುವ ಪರಿಸ್ಥಿತಿ ಇಂದಿನ ಭಾರತದಲ್ಲಿರುವುದು ನಮ್ಮ ಅನೇಕ ಸಮಸ್ಯೆಗಳು ಬಗೆಹರಿಯದಿರಲು, ಬಗೆಹರಿದರೂ ಪರಿಹಾರಗಳು ಪಕ್ಷಪಾತತನದಿಂದ ಕೂಡಿವೆ ಎನ್ನಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೇಗೆ ಇದನ್ನು ಬಗೆಹರಿಸುವುದು ಎಂಬುದರ ಬಗ್ಗೆ ಅನೇಕರು ಚಿಂತನೆ ನಡೆಸಿದ್ದಾರೆ!

ಭಾರತ ಒಪ್ಪುಕೂಟದಲ್ಲಿ...


ರಾಜ್ಯಸಭೆಗೆ ಇಂದು ರಾಜ್ಯಗಳನ್ನು ಪ್ರತಿನಿಧಿಸುವ ಸಭೆ ಎನ್ನುವ ಅರ್ಥವಿದ್ದರೂ ಸದಸ್ಯ ಬಲ, ಆರ್ಥಿಕ ವಿಷಯಗಳಲ್ಲಿನ ಮಿತಿಯಂತಹ ಹಲವಾರು ವಿಷಯಗಳಲ್ಲಿ ಲೋಕಸಭೆಗಿಂತಲೂ ಕಡಿಮೆ ಅಧಿಕಾರಗಳಿವೆ. ಎರಡೂ ಸದನಗಳ ಸದಸ್ಯ ಬಲವನ್ನು ಸಮಾನವಾಗಿಸುವ ಮೂಲಕ ಈ ಕೊರತೆಯನ್ನು ನೀಗಿಸಬಹುದಾಗಿದೆ. ರಾಜ್ಯಸಭೆಯಲ್ಲಿ ಪ್ರತಿರಾಜ್ಯದಿಂದ ಸಮಾನ ಪ್ರಾತಿನಿಧ್ಯವಿರುವುದೂ ಕೂಡಾ ಅಗತ್ಯವಾಗಿದೆ. ಅಮೇರಿಕಾದ ಸೆನೆಟ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಮರುರೂಪಿಸಬಹುದಾಗಿದೆ.

ಎಷ್ಟೇ ಚಿಕ್ಕ ರಾಜ್ಯವಿರಲಿ ಅದಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯವನ್ನು, ಅದರ ಸಹಮತಿಯಿಲ್ಲದೆ ಜಾರಿಮಾಡುವಂತಿಲ್ಲ ಎನ್ನುವ ವ್ಯವಸ್ಥೆ ಇರಬೇಕಾಗಿದೆ. ಇದು ಬಹುಮತದ ಕಾರಣದಿಂದಲೇ ರಾಜ್ಯವೊಂದರ ಮೇಲೆ ಕೇಂದ್ರ ಅಧಿಕಾರ ಚಲಾಯಿಸುವುದನ್ನು ತಪ್ಪಿಸುತ್ತದೆ. ಇಡೀ ಭಾರತದ ಸಂಸತ್ತು ಒಮ್ಮತದಿಂದ ತನ್ನೆಲ್ಲಾ ಸದಸ್ಯ ಬಲ ಬಳಸಿ ರಾಜ್ಯವೊಂದರ ಹಕ್ಕುಗಳನ್ನು ಮೊಟಕುಗೊಳಿಸಿಬಿಡಬಹುದಾದ ಅಪಾಯ ಇದರಿಂದ ದೂರವಾಗಬಹುದಾಗಿದೆ.

ಚಿಕ್ಕರಾಜ್ಯಗಳು ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವೆನ್ನುವ ಮಾತಿಗೆ ಅರ್ಥ ಸಿಗಬೇಕೆಂದರೆ ರಾಜ್ಯಗಳಿಗೆ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವಾದರೂ ಇರಬೇಕಲ್ಲವೇ? ಹಾಗಾಗಿ ಕೇಂದ್ರವು ಕೇಂದ್ರಪಟ್ಟಿ ಮತ್ತು ಜಂಟಿ ಪಟ್ಟಿಯಲ್ಲಿರುವ ಆಡಳಿತಾತ್ಮಕ ವಿಷಯಗಳಲ್ಲಿನ ತನ್ನ ಹಕ್ಕನ್ನು ರಾಜ್ಯಗಳಿಗೆ ಬಿಟ್ಟು ಕೊಡಬೇಕು. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಮೊದಲಾದ ಕೆಲವೇ ಕೆಲವು ವಿಷಯಗಳನ್ನು ಮಾತ್ರಾ ತಾನುಳಿಸಿಕೊಳ್ಳಬೇಕು. ಇನ್ನು ಕೆಲವರು ಪ್ರತಿಪಾದಿಸಿದಂತೆ ದ್ವಿಪೌರತ್ವವನ್ನೂ ಪರಿಗಣಿಸಬಹುದಾಗಿದೆ.

ಇಂಥಾ ವಿಷಯಗಳೆಲ್ಲಾ ಜಾರಿಯಾದಾಗ ರಾಜ್ಯಗಳ ಸ್ವಾಯತ್ತತೆಗೆ ಭದ್ರತೆ ಸಿಗುತ್ತವೆ. ಇಂದಿನ ಭಾರತದಲ್ಲಿ ಔಟ್‍ಲುಕ್‍ನಲ್ಲಿನ ಬರಹದಂತೆ ಆಡಳಿತದ ಕಾರಣಕ್ಕಾಗಿ ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಾಗುವುದಾದಲ್ಲಿ ರಾಜ್ಯಗಳು ಮತ್ತಷ್ಟು ಅತಂತ್ರವಾಗುವುದು ಖಚಿತ. ಬಲಿಷ್ಠವಾದ ಕೇಂದ್ರವು ಸಾಧ್ಯವಾಗುವುದು ಬಲಶಾಲಿಯಾದ ರಾಜ್ಯಗಳಿಂದಲೇ ಹೊರತು ರಾಜ್ಯಗಳನ್ನು ಚಿಕ್ಕದಾಗಿಸಿ, ಕೇಂದ್ರದಲ್ಲಿ ಅವುಗಳ ಪ್ರಾತಿನಿಧ್ಯ ಕಡಿಮೆ ಮಾಡಿಸಿ, ಅವುಗಳ ಬಲಕುಂದಿಸುವುದರಿಂದಲ್ಲಾ!!

ಸಜ್ಜನ ರಾಜಕಾರಣಿ ಡಾ. ಆಚಾರ್ಯರಿಗೆ ಶ್ರದ್ಧಾಂಜಲಿ

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ, ಮಾಜಿ ಗೃಹಮಂತ್ರಿಗಳಾಗಿದ್ದ ಮೃದುಮಾತಿನ, ಸಜ್ಜನ ರಾಜಕಾರಣಿ, ವೈದ್ಯರಾಗಿದ್ದ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ (ಡಾ. ವಿ ಎಸ್ ಆಚಾರ್ಯ) ಇವರು ನಿಧನರಾಗಿದ್ದು ರಾಜ್ಯ ರಾಜಕಾರಣದ ಬಾನಿನಿಂದ ಹೊಳೆವ ತಾರೆಯೊಂದು ಕಳಚಿದಂತಾಗಿದೆ.

ಉಡುಪಿ ಜಿಲ್ಲೆಯವರಾದ ಇವರು ತಮ್ಮ ೨೮ನೇ ವಯಸ್ಸಿನಲ್ಲೇ ರಾಜಕೀಯಕ್ಕಿಳಿದು ಜನತಾ ಪಕ್ಷ, ಭಾರತೀಯ ಜನತಾ ಪಕ್ಷಗಳಲ್ಲಿ ತೊಡಗಿಕೊಂಡಿದ್ದರು. ಭಾರತೀಯ ಜನತಾ ಪಕ್ಷವು ಅಧಿಕ್ಕಾರಕ್ಕೇರಿದಾಗ ಮುಜರಾಯಿ ಇಲಾಖೆ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಪಶುಸಂಗೋಪನಾ ಇಲಾಖೆ, ಯೋಜನಾ ಆಯೋಗ ಖಾತೆ, ಐಟಿ ಬಿಟಿ ಖಾತೆ, ಗೃಹಖಾತೆಯೇ ಮೊದಲಾದ ಖಾತೆಗಳನ್ನು ನಿರ್ವಹಿಸಿದ ಅನುಭವ ಇವರಿಗಿತ್ತು. ಶ್ರೀಯುತರ ನಿಧನದಿಂದಾಗಿ ನೊಂದಿರುವ ಅವರ ಕುಟುಂಬ ವರ್ಗದವರಿಗೆ ಈ ಅನಿರೀಕ್ಷಿತ ಆಘಾತದಿಂದ ಹೊರಬರಲೆಂದೂ... ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದೂ ಬನವಾಸಿ ಬಳಗ ಕೋರುತ್ತಾ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತದೆ.

ಬಳಗದ ಹೊತ್ತಗೆಗಳು ಈಗ "ಆಕೃತಿ"ಯಲ್ಲೂ...



ಬನವಾಸಿ ಬಳಗ ಪ್ರಕಾಶನವು ಹೊರತಂದಿರುವ "ಏನ್ ಗುರು.... ಕಾಫಿ ಆಯ್ತಾ?ಮತ್ತು "ಹಿಂದೀ ಹೇರಿಕೆ ಮೂರು ಮಂತ್ರ ನೂರು ತಂತ್ರಹೊತ್ತಗೆಗಳು ಈಗ ಮಿಂಬಲೆಯಲ್ಲಿ ಕೊಳ್ಳಲು ಸಿಗುತ್ತವೆ! ಕೂತಲ್ಲೇ ಈ ಹೊತ್ತಗೆಗಳನ್ನು ಕೊಳ್ಳಲು ಆಕೃತಿ ಪುಸ್ತಕ ಮಳಿಗೆಯ ಈ ಮಿಂಬಲೆ ಪುಟಕ್ಕೆ ಭೇಟಿ ಕೊಡಿ.

೧. ಹಿಂದೀ ಹೇರಿಕೆ ಮೂರು ಮಂತ್ರ ನೂರು ತಂತ್ರ: http://akrutibooks.com/node/2869

೨. ಏನ್ ಗುರು.... ಕಾಫಿ ಆಯ್ತಾ?: http://akrutibooks.com/node/2023

ನೀವಿದ್ದೆಡೆಗೆ ಈ ಹೊತ್ತಗೆಗಳು ತಲುಪುತ್ತವೆ. ಹೊತ್ತಗೆಯ ಮುಖಬೆಲೆಯ ಮೇಲೆ ರಿಯಾಯಿತಿಯೂ ಇದೆ. ಹಾಗೇ ಬೆಂಗಳೂರಿನಲ್ಲಿ ನಿಮ್ಮ ವಿಳಾಸಕ್ಕೆ ಉಚಿತವಾಗಿ ಪುಸ್ತಕವನ್ನು ತಲುಪಿಸುವ ಏರ್ಪಾಡು ಕೂಡಾ ಇದೆ!

ಉತ್ತರ ನೀಡದ ಮೆಟ್ರೋ: ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರು!


ಓದುಗರೊಬ್ಬರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಬಳಸಲಾಗುತ್ತಿರುವ ಭಾಷಾನೀತಿಯನ್ನು ಕುರಿತು "ಮಾಹಿತಿ ಹಕ್ಕು ಕಾಯ್ದೆ ೨೦೦೫"ರ ಅಡಿಯಲ್ಲಿ ಮಾಹಿತಿ ಕೋರಿ ಒಂದು ಅರ್ಜಿಯನ್ನು ೨೦೧೧ರ ಅಕ್ಟೋಬರ್ ತಿಂಗಳಲ್ಲಿ ಸಲ್ಲಿಸಿದ್ದರು. ನಮ್ಮ ಮೆಟ್ರೋ ಅಧಿಕಾರಿಗಳು ಇದಕ್ಕೆ ಸ್ಪಂದಿಸದೇ ಹೋದ್ದರಿಂದ ಮೊದಲ ಮೇಲ್ಮನವಿಯನ್ನು ನಮ್ಮ ಮೆಟ್ರೋದ ಸಂಬಂಧಪಟ್ಟ ದೂರು ಅಧಿಕಾರಿಗೆ ನವೆಂಬರ್ ತಿಂಗಳಲ್ಲಿ ಸಲ್ಲಿಸಿದ್ದ ಬಗ್ಗೆ ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದರು.

ಹೀಗೆ ಸಲ್ಲಿಸಲಾದ ಮೇಲ್ಮನವಿಗೆ ಮೂವತ್ತು ದಿನಗಳೊಳಗಾಗಿ ಉತ್ತರಿಸಬೇಕಾದ ಹೊಣೆಗಾರಿಕೆ ಸಂಬಂಧಿಸಿದ ಅಧಿಕಾರಿಗಳಿಗಿತ್ತು. ವಿಶೇಷ ಸಂದರ್ಭದಲ್ಲಿ ಕಾರಣಸಹಿತ ೪೫ ದಿನಗಳವರೆಗೂ ಸಮಯಾವಕಾಶವನ್ನು ತೆಗೆದುಕೊಳ್ಳಬಹುದಿತ್ತು. ಸಕಾರಣವಾಗಿ ಅರ್ಜಿಯನ್ನು ತಿರಸ್ಕರಿಸುವ ಅವಕಾಶವೂ ಇತ್ತು. ಆದರೆ ಅಂತಹ ಯಾವುದೇ ಕ್ರಮ ತೆಗೆದುಕೊಂಡರೂ, ಸಂಬಂಧಿಸಿದ್ದವರು ಅರ್ಜಿದಾರರಿಗೆ ನಿಗದಿತ ಸಮಯದೊಳಗೆ ತಿಳಿಸಬೇಕಿತ್ತು. ಆದರೆ ಇವರ ಮೊದಲ ಮೇಲ್ಮನವಿಗೆ ಮೂವತ್ತು ದಿನಗಳೊಳಗಾಗಿ ಯಾವುದೇ ರೀತಿಯ ಉತ್ತರ ಬಂದಿಲ್ಲವಂತೆ. ಹಾಗಾಗಿ ಅರ್ಜಿದಾರರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರಂತೆ. 

ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರು! ಎರಡನೇ ಮೇಲ್ಮನವಿ

ಹಾಗಾಗಿ ಅರ್ಜಿದಾರರು ಮುಂದಿನ ಹಂತಕ್ಕೆ ಈ ಅರ್ಜಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಇದರ ಅಂಗವಾಗಿ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರಿನ ಮೂಲಕ ಎರಡನೇ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಸದರಿ ಅರ್ಜಿಯ ವಿಚಾರಣೆಗೆ ಸಾಕಷ್ಟು ಕಾಲಾವಕಾಶವನ್ನೇ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಯಾರಿಗೆ ಮೊದಲ ಅರ್ಜಿಯನ್ನು, ಮೇಲ್ಮನವಿಯನ್ನು ಸಲ್ಲಿಸಲಾಗಿತ್ತೋ ಆ ಅಧಿಕಾರಿಗಳನ್ನು ಆಯೋಗವು ಅರ್ಜಿದಾರರ ಎದುರಿನಲ್ಲೇ ವಿಚಾರಣೆಗೆ ಒಳಪಡಿಸಬೇಕೆನ್ನುತ್ತದೆ ಕಾನೂನು. ಆರ್.ಟಿ.ಐಗೆ ಸ್ಪಂದಿಸದಿರುವುದು ಕೂಡಾ ನಿರಾಕರಣೆ ಎನ್ನುತ್ತದೆ ಕಾನೂನು. ನೋಡೋಣ... ಇದೆಲ್ಲೆಯವರೆಗೆ ಕರೆದೊಯ್ಯುತ್ತದೆಯೋ ಅಲ್ಲಿಯವರೆಗೂ ಹೋಗುತ್ತೇನೆ ಎಂದಿದ್ದಾರೆ ಅರ್ಜಿದಾರರು. ನಾವೂ ಕೂಡಾ "ಗೆಳೆಯರೇ, ನಿಮಗೆ ಶುಭವಾಗಲಿ" ಎನ್ನೋಣ್ವಾ ಗುರೂ!

ಕರಗಿ ಹೋದ ಕರಿಬಸವಯ್ಯ!


(ವಿಡಿಯೋ ಕೃಪೆ: ಸುವರ್ಣ ನ್ಯೂಸ್ - ಯೂ ಟ್ಯೂಬ್ ಮೂಲಕ)

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಾದ ಶ್ರೀ ಕರಿಬಸವಯ್ಯನವರು ಇನ್ನಿಲ್ಲ ಎನ್ನುವ ಸುದ್ದಿ ಬಿತ್ತರವಾಗುತ್ತಿದೆ. ಇದು ಸುಳ್ಳಾಗಿರಲಿ ಎನ್ನುವ ಆಶಯ ಎಲ್ಲಾ ಕನ್ನಡಿಗರದ್ದು!! ಕನಕಪುರ ರಸ್ತೆಯಲ್ಲಿ ಆದ ರಸ್ತೆ ಅಪಘಾತದಲ್ಲಿ ಗಾಯಾಳುವಾಗಿದ್ದ ಈ ಕಲಾವಿದರು ಇಂದು ತೀರಿಕೊಂಡ ಸುದ್ದಿ ಆಘಾತಕಾರಿಯಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ!! ಬನವಾಸಿ ಬಳಗದ ಶ್ರದ್ಧಾಂಜಲಿಗಳು!!

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

(ಫೋಟೋ ಕೃಪೆ: kannada.oneindia.in - http://bit.ly/ww4Wn2)
ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ "ಚಿಂತನಗಂಗಾ"ದಿಂದ ಆಯ್ದ ಕೆಲಭಾಗಗಳನ್ನು ಸಂಘದ ನಿಲುವುಗಳೆಂದು ಒಂದು ಬರಹವನ್ನು ಪ್ರಕಟಿಸಿ, `ಇಂತಹ ನಿಲುವಿನ ಸಂಘವನ್ನು ಬೆಳೆಸುವುದು ಕನ್ನಡಿಗರಿಗೆ ಮುಳುಗುನೀರು ತರುತ್ತದೆ' ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು. ಈ ಬರಹಕ್ಕೆ ಸಂಘದ ಸದಸ್ಯರ,  ಪದಾಧಿಕಾರಿಗಳ ಮತ್ತು ಬೆಂಬಲಿಗರ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಬರಹವನ್ನು ಸಂಘದ `ಶತ್ರುವಿನ ಸಂಚು' ಎಂಬಂತೆ ಕಂಡ ಇವೆಲ್ಲಾ ಕಮೆಂಟುಗಳೇ ಸಂಘದ ಅನುಯಾಯಿಗಳಲ್ಲಿರುವ/ ಇಲ್ಲದಿರುವ ವೈಚಾರಿಕತೆ, ವಿಚಾರ ಸ್ವಾತಂತ್ರ ಮತ್ತು ಬೆಂಬಲಿಗರ ಮುಗ್ಧತೆಗಳನ್ನು ಬಿಂಬಿಸುವಂತಿವೆ. ಸಂಘ ಸಿದ್ಧಾಂತವಾದ "ಚಿಂತನಗಂಗಾ"ವನ್ನು ಓದದೆಯೇ ಸಂಘದ ಜೊತೆ ಕೈಗೂಡಿಸಿದ್ದವರಿದ್ದಾರೆ ಎನ್ನುವಂತೆ ಕೆಲವು ಪ್ರತಿಕ್ರಿಯೆಗಳಿದ್ದವು. ಸಂಘದ ನಿಲುವು ಇದೆಂದು ಒಪ್ಪಿಕೊಳ್ಳದಷ್ಟು ಮಾಯೆ ಮುಸುಕಿದವರೂ ಇದ್ದಾರೆ.

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

ಚಿಂತನಗಂಗಾ ಹೊತ್ತಗೆಯ ಮೊದಲಲ್ಲಿ ಹೀಗೆ ಬರೆಯಲಾಗಿದೆ:
ಸಾವಿರಾರು, ಅಷ್ಟೇಕೆ ಲಕ್ಷಾಂತರ ಜನರು ಈ ಗ್ರಂಥದಲ್ಲಿನ ಜೀವಂತ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎನ್ನುವ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪ್ರಾ. ಎಂ.ಎ. ವೆಂಕಟರಾಯರು ತಮ್ಮ ’ಪ್ರವೇಶ’ದಲ್ಲಿ ಹೇಳಿರುವಂತೆ "ರಾಷ್ಟ್ರನಿರ್ಮಾಣಕ್ಕಾಗಿ ಸಂಘವು ಎಂತಹ ಪರಿಪೂರ್ಣವಾದ, ಗುಣಾತ್ಮಕವಾದ, ದೇಶಾಭಿಮಾನದಿಂದ ತುಂಬಿ ತುಳುಕುವ, ಕಾರ್ಯಸಾಧ್ಯವಾದ, ಆದರ್ಶಪೂರ್ಣವಾದ ತತ್ವಗಳನ್ನೂ, ವಿಧಾನಗಳನ್ನೂ ಅನುಸರಿಸುತ್ತಿದೆ ಎಂಬುದನ್ನು ಇಲ್ಲಿ ಕಾಣಬಹುದು..."
ಇನ್ನು ಅರಿಕೆಯಲ್ಲಿ ಪ್ರಕಾಶಕರು ಚಿಂತನಗಂಗಾ ಬಗ್ಗೆ ಹೀಗೆ ಬರೆದಿದ್ದಾರೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಹೊಸದಾಗಿ ತಿಳಿಯ ಬಯಸುವವರಿಗೆ ಅದರಲ್ಲಿ ಅವರ ಬುದ್ಧಿ-ಹೃದಯಗಳನ್ನು ಬೆಳಗಲು ಸಾಕಷ್ಟು ಸಾಮಗ್ರಿ ಸಿಕ್ಕಿತು. ಸಂಘದ ವಿಷಯವಾಗಿ ಸಂದೇಹ- ಆಕ್ಷೇಪ ಇದ್ದವರಿಗೆ ಸಂಘದ ವಾಸ್ತವಿಕ ರೂಪ ಕಂಡು ಕಣ್ತೆರೆಯಿತು. ಸಮಾಧಾನ ಸಿಕ್ಕಿತು. ಸಂಘದ ಹೊರರೂಪ ಕಂಡಿದ್ದವರಿಗೆ ಅದರ ಆಂತರ್ಯದ ತಿರುಳು ತಿಳಿಯಿತು.
ಹಲವಾರು ವರ್ಷಗಳಿಂದ ಸಂಘದ ಕೆಲಸವನ್ನು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಕಾರ್ಯಕರ್ತರಿಗೆ ಸಹ ಆ ಗ್ರಂಥವು ಕಾರ್ಯದ ಕೈದೀವಿಗೆಯಾಯಿತು.
ಪ್ರತಿಕ್ರಿಯೆಯಲ್ಲಿ ಕೊನೆಕೊನೆಗೆ ಕೆಲವರಂತೂ ಇದು ಸಂಘದ ನಿಲುವೇ ಅಲ್ಲಾ, ಗುರೂಜಿಯವರ ಮಾತೇ ಅಲ್ಲ.. ಎನ್ನುವಂತಹ ಅರ್ಥದ ಮಾತುಗಳನ್ನೂ ಆಡಿದ್ದಾರೆ. ‘ಇದನ್ನು ಬರೆದವರೇ ಬೇರೆ, ಇದನ್ನು ಗುರೂಜಿ ನಿಧನರಾದ ಮೇಲೆ ಬಂದಿದ್ದು’ ಇತ್ಯಾದಿ ಮಾತುಗಳನ್ನಾಡಿದ್ದಾರೆ. ಆದರೆ ಹೊತ್ತಗೆಯ ಮೊದಲಲ್ಲೇ ಬರೆದಿರುವಂತೆ "ಬಂಚ್ ಆಫ್ ಥಾಟ್ಸ್" ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಗುರೂಜಿಯವರ ೬೦ನೇ ವರ್ಷದ ಹುಟ್ಟುಹಬ್ಬದಂದು. ಇನ್ನಾದರೂ ಇದನ್ನು ಸಂಘದ ತತ್ವಸಿದ್ಧಾಂತದ ಪುಸ್ತಕ ಎನ್ನುವುದನ್ನು ಒಪ್ಪಬಹುದಲ್ಲವೇ? ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!

ಸಂಘದ ಬಗ್ಗೆ ಯಾಕೆ ಬರೆದಿರಿ ಎಂದರೆ...!


ಇಡೀ ಬರಹದಲ್ಲಿ ಬರೆಯಲಾಗಿರುವ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಸಿದವರು ತಮ್ಮ ಸಹಮತಿಯನ್ನು ಇದುವರೆಗೂ ಹೇಳಿಲ್ಲ ಅಥವಾ ಅದು ಹೀಗಿರುವುದು ತಪ್ಪು ಎಂದೂ ಕೂಡಾ ಹೇಳುತ್ತಿಲ್ಲ. ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ ಎನ್ನುವ ಪ್ರಶ್ನೆಗೆ ಇದು ಕಾರಣವಾಗಿದೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಬದಲು, ಹೀಗೆ ಪ್ರಶ್ನೆ ಮಾಡಿದ್ದನ್ನೇ ‘ಯಾಕೆ ಮಾಡಿದಿರಿ?’ ಎನ್ನುವ ಮಾತುಗಳು ಕೇಳಿಬಂದವು. ವಾಸ್ತವವಾಗಿ ನಾವು ಹೀಗೆ ಪ್ರಶ್ನಿಸಲು ಕಾರಣ, ಸಂಘ ತನ್ನ ಸೈದ್ಧಾಂತಿಕ ನಿಲುವುಗಳನ್ನು ತನ್ನ ಮುಖವಾಡವಾದ ಬಿಜೆಪಿ ಸರ್ಕಾರದ ಮೂಲಕ ಮಾಡಿಸುತ್ತಿರುವುದು ಮುಖಕ್ಕೆ ರಾಚುವಂತೆ ಕಾಣುತ್ತಿರುವುದು. ಇರುವ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊರತೆಯಿರುವಾಗ ಹೊಸದಾಗಿ ತೀವ್ರ ವಿರೋಧದ ನಡುವೆಯೂ ವಿಶ್ವವಿದ್ಯಾಲಯ ಸ್ಥಾಪಿಸಲು ಏನು ಕಾರಣ? ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಇದಕ್ಕೆಲ್ಲಾ ಕಲಶವಿಟ್ಟಂತೆ ನಿನ್ನೆ ಮುಗಿದ ಸಂಘದ ಶಿಬಿರದಲ್ಲಿ ಆರುಕೋಟಿ ಜನರ ಪ್ರತಿನಿಧಿ/ ಮುಖಂಡರಾದ ಮುಖ್ಯಮಂತ್ರಿಗಳೇ ಹೋಗಿ ಪಾಲ್ಗೊಂಡಿದ್ದೂ, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದ್ದಾಗೆಲ್ಲಾ ಸಂಘದ ಕೇಂದ್ರ ಕಛೇರಿಯ ಕರೆಗೆ ಓಗೊಟ್ಟು ಎಡತಾಕಿದ್ದು ಕಾಣುತ್ತಿರುವಾಗ ಸಂಘದ ಬಗ್ಗೆ ಬರೆಯದೆ ಇರಬೇಕಿತ್ತಾದರೂ ಹೇಗೆ?

ಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.

ಸಮಾಜದಲ್ಲಿ ಒಡಕಿನ ವಿಷ ತುಂಬುವ ‘ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ’ ಎನ್ನುವ ಮೂಲಕ ವಿಭಿನ್ನ ಧರ್ಮಗಳ ಕನ್ನಡಿಗರ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ಎನ್ನಿಸುತ್ತದೆ. ಸುಮ್ಮನೆ ಒಡಕಿನ ಸಿದ್ಧಾಂತ ಬೋಧಿಸಿ ಶಿಸ್ತಿನ ರೋಬೋಗಳನ್ನು ಸೃಷ್ಟಿಸಿ ಸಮಾಜದ ಒಳಗೆ ಬಿಟ್ಟು, ಅವುಗಳ ಕೆಲಸಕ್ಕೂ ಸಂಘಕ್ಕೂ ಸಂಬಂಧವಿಲ್ಲಾ ಎಂದು ನುಣುಚಿಕೊಳ್ಳುವ ಮನಸ್ಥಿತಿ ಸಂಘಕ್ಕಿಲ್ಲಾ ಎಂದೇ ಭಾವಿಸೋಣ. ಹಾಗಾಗಬೇಕಾದರೆ ಕಡೇಪಕ್ಷ ಸಂಘದವರು ಒಪ್ಪಬೇಕಾದ್ದು "ತಮ್ಮ ಸಿದ್ಧಾಂತವು ಗುರೂಜಿಯವರ ಚಿಂತನಗಂಗಾದ ಬರಹಗಳಿಗೆ ಒಪ್ಪುತ್ತದೆ" ಎನ್ನುವುದನ್ನು. ಇಲ್ಲವೇ "ಗುರೂಜಿಯವರು ಹೇಳಿರುವ ಮುಸ್ಲಿಮ್, ಕ್ರೈಸ್ತರ ಬಗೆಗಿನ ಅನಿಸಿಕೆಗಳು ತಪ್ಪು, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಒಳ್ಳೆಯದು, ಮೀಸಲಾತಿಗೆ ಪರವಾಗಿದ್ದೇವೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ - ಇದು ಸಂಘದ ಸಿದ್ಧಾಂತ" ಎಂದು ಘೋಷಿಸಲಿ ಸಾಕು. ಬಹಿರಂಗವಾಗಿ, ಚರ್ಚೆಗಳಲ್ಲಿ "ಇಲ್ಲಾ.. ಇಲ್ಲಾ.." ಅಂತನ್ನೋ ಬದಲು ನಮ್ಮ ಸಿದ್ಧಾಂತವನ್ನು ಇಲ್ಲಿ ಬರೆಯಲಾಗಿದೆ ನೋಡಿ ಎಂದು ಒಂದು ಅಧಿಕೃತ ನಿಲುವಿನ ಮೂಲವನ್ನು ತೋರಿಸಿದ್ದರೆ ಸಾಕಿತ್ತು. ಆದರೆ ತಮಾಶೆಯೆಂದರೆ ಹಾಗೆ ತೋರಿಸಿದ ನಂತರ ಚಿಂತನಗಂಗಾ ಹೊತ್ತಗೆಯ ಬರಹಗಳ ಹಲವು ಅಂಶಗಳನ್ನು ಅವರೇ ಅಲ್ಲಗಳೆಯಬೇಕಾಗುತ್ತದೆ. ಒಟ್ಟಾರೆ ಸಂಘದ ಅಧಿಕೃತ ಸಿದ್ಧಾಂತ ಏನೆಂದು ತಿಳಿಸಿಕೊಟ್ಟರೆ ಸಾಕು.

ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರಾ ಬೆಂಬಲಿಗರ/ ಪರಿವಾರದ ಮುಗ್ಧತೆ, ಕುರುಡು ಬದ್ಧತೆಗೆ ಕನ್ನಡಿ ಹಿಡಿದಂತಿದ್ದವು...

ಪ್ರತಿಕ್ರಿಯೆಗಳ ಸಾರ!
"ರಾಜಕೀಯ ಮಾಡ್ತಿದೀರಾ?... ನಿಮ್ಮ ಸಂಘಟನೆ ಹೆಸರು ಬದಲಾಯಿಸಿಕೊಳ್ಳಿ... ಮೊದಲು ಕನ್ನಡದ ಕೆಲಸ ಮಾಡಿ ತೋರಿಸಿ... ನೀವು ಕೆಂಪು ಬಣ್ಣದವರು... ದೇಶ ಒಡೆಯಬೇಡಿ... ದೇಶ, ಹಿಂದುತ್ವ, ಸಂಘದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡು ಬಂದ ಕೆಂಬಣ್ಣದ ಭೂತ...ಲೇಖಕರಿಗೆ ಆಂಗ್ಲಭಾಷೆಯ ದಾಸ್ಯವು ನಮ್ಮದೇ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತಾ ಮೇಲೆಂದು ತೋರುತ್ತದೆ...ಕೆಂಪು ಲೇಖಕರ ಹಿಡಿತದಿಂದ ನಲುಗದಿರಲಿ...RSS ಬಗ್ಗೆ ಬರೀತೀರಲ್ಲಾ KFD-PFI ಬಗ್ಗೆ ಬರೀತೀರಾ?...ಹಳದಿ ಕೆಂಪು ಈಗ ಚೀನಿಯರ ಸಂಕೇತವಾಗುತ್ತಿದೆ... Do you have guts to question urdu primary mode of communication... ನೀವೇನು ಕನ್ನಡದ ಕೆಲಸಾ ಮಾಡಿದ್ದೀರಾ? ತಾಕತ್ತಿದ್ದರೆ ಒಂದು ಕನ್ನಡ ಶಾಲೆ ಮಾಡಿ... "
ಹೀಗೇ... ಕೆಲವು ಪ್ರತಿಕ್ರಿಯೆಗಳಂತೂ ಶತ್ರುಗಳನ್ನು ತೋರಿಸಿ ಒಗ್ಗಟ್ಟು ತರುವ ಪ್ರಯತ್ನದಂತೆ ಇವೆ.
ನೀವು ಸಂಸ್ಕೃತ/ ಹಿಂದೀ ಒಪ್ಪದಿದ್ದರೆ ನಾಳೆ ಕನ್ನಡವೂ ಇರಲ್ಲ... ಇಂಗ್ಲೀಶ್ ಬಂದುಬಿಡುತ್ತದೆ ಎಂದು ಒಬ್ಬರೆಂದರೆ ಮತ್ತೊಬ್ಬರು ಈ ರಾಜ್ಯವನ್ನು ಮುಸ್ಲಿಮರು ಆಳಿದರೆ ನಾಳೆ ಕನ್ನಡವು ಧೂಳಿಪಟವಾಗುತ್ತದೆ  (ondantoo satya. karnatakadalli muslimara adalita bandare, marane dinave kannada dhooli patavagtade.)
ಎಂದಿದ್ದಾರೆ.

ಇವೆಲ್ಲಾ ತೋರಿಸುವುದಾದರೂ ಏನನ್ನು? ‘ಯಾವ ಚಿಂತನೆಗಳನ್ನು ಆರಿಸಿ ತೋರಿಸಲಾಗಿದೆಯೋ ಆ ಚಿಂತನೆಗಳು ಸರಿ - ಅದನ್ನು ನಾವು ಒಪ್ಪುತ್ತೇವೆ’ ಎನ್ನುವ ನೇರವಂತಿಕೆಯಾಗಲೀ, ‘ಇಲ್ಲಾ, ಅದು ತಪ್ಪು.. ಗುರೂಜಿಯವರ ಈ ನಿಲುವನ್ನು ಸಂಘ ಒಪ್ಪದು’ ಎನ್ನುವ ದಿಟ್ಟತನ/ ವೈಚಾರಿಕ ಸ್ವಾತಂತ್ರವಾಗಲೀ ಇಲ್ಲದಿರುವಂತೆ ತೋರುತ್ತದೆ. ಹಾಗಾಗಿ ವಿಷಯಾಂತರ ಮಾಡೋ ಮೂಲಕ ಉತ್ತರಿಸುವ ಪ್ರಯತ್ನಗಳಂತೆ ಇವು ಕಾಣುತ್ತವೆ.

ಬರಹದ ಆಶಯ

ನಿಜಕ್ಕೂ ಸಂಘ ಗುರೂಜಿಯವರ ಈ ಮಾತುಗಳನ್ನು/ ಸಿದ್ಧಾಂತವನ್ನು ಹೊಂದಿರುವುದಾದರೆ ಒಪ್ಪಿಕೊಳ್ಳಲಿ. "ನಾವು ಪ್ರತಿಪಾದಿಸುವುದು ಇದನ್ನೇ... ಭಾರತದಲ್ಲಿ ಒಂದೇ ಶಾಸಕಾಂಗವಿರಲಿ, ಮುಸ್ಲಿಮರು/ ಕ್ರೈಸ್ತರ ದೇಶಪ್ರೇಮ ಪ್ರಶ್ನಾರ್ಹ, ಮೀಸಲಾತಿ ಕೆಟ್ಟ ಪದ್ದತಿ ಮತ್ತು ಹಿಂದೀ ಭಾರತದ ಸಂಪರ್ಕ ಭಾಷೆಯಾಗಲಿ" ಎನ್ನುವುದನ್ನೇ ಎನ್ನಲಿ. ವಾಸ್ತವವಾಗಿ ನಾಲ್ಕನೆಯದನ್ನು ಈಗಾಗಲೇ ಹೇಳಿದ್ದಾರೆ. ಉಳಿದ ಮೂರನ್ನು ಅದು ಸತ್ಯವಾದರೆ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಇನ್ಯಾವ ಸಿದ್ಧಾಂತ ಇವರನ್ನು ನಡೆಸುತ್ತಿದೆ ತಿಳಿಸಲಿ. ಈಗ ಜನರ ಮುಂದೆ ಇಂತಹ ನಿಲುವುಗಳನ್ನು ಇಟ್ಟುಕೊಂಡೇ ನೇರವಾಗಿ ರಾಜಕಾರಣಕ್ಕಿಳಿಯಲಿ ಎಂದದ್ದೂ ಕೂಡಾ... ‘ಬಿಜೆಪಿಯ ಮೂಲಕ ಹಿಂಬಾಗಿಲ ರಾಜಕಾರಣ ಮಾಡುವುದನ್ನು ಬಿಡಲಿ’ ಎನ್ನುವ ಕಾರಣದಿಂದಲೇ! ಅಥವಾ ಬಿಜೆಪಿಯೇ ತನ್ನ ಸಿದ್ಧಾಂತ ಸಂಘದ್ದು ಎಂದು ಹೇಳಿಕೊಂಡು ರಾಜಕಾರಣ ಮಾಡಲಿ. ಗುರೂಜಿಯವರ ಮಾತುಗಳ ಬಗ್ಗೆ ಸಮ್ಮತಿ ಅಥವಾ ತಿರಸ್ಕರಣೆಯನ್ನು ಸಾರ್ವಜನಿಕವಾಗಿ ಸಂಘವು ತಿಳಿಸುವುದು ಸಂಘದ ಬಗ್ಗೆ ಸಮಾಜಕ್ಕೆ ಇರುವ ಗೊಂದಲಗಳು ದೂರಾಗಲು ಖಂಡಿತಾ ನೆರವಾದೀತು! ಇಡೀ ರಾಷ್ಟ್ರಕ್ಕೇ ಬೆಳಕು ಕೊಡುತ್ತೇನೆನ್ನುವ, ಬಲಿಷ್ಠ ರಾಷ್ಟ್ರ ನಿರ್ಮಾಣವೇ ಪರಮಗುರಿಯೆನ್ನುವ ಸಂಘಕ್ಕೆ ಇಷ್ಟೂ ನೇರವಂತಿಕೆ ಇರದಿದ್ದರೆ ಹೇಗೆ?
Related Posts with Thumbnails