ಒಕ್ಕೂಟದ ಸ್ವರೂಪ ಗುಡಿಸುವ ಲೋಕಪಾಲ್‍ಗೆ ಮಮತಾ ಬ್ರೇಕು!

(ಫೋಟೋ ಕೃಪೆ: ಸುಲೇಖಾ.ಕಾಮ್)
ಲೋಕಸಭೆಯಲ್ಲಿ ಒಪ್ಪಿತವಾಗಿ ಬಂದ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, 2011"ಗೆ ಸದ್ಯಕ್ಕೆ ರಾಜ್ಯಸಭೆಯಲ್ಲಿ ಮಮತಾ ಬ್ಯಾನರ್ಜಿಯವರಿಂದ ಸಕ್ಕತ್ತಾಗಿ ಬ್ರೇಕ್ ಬಿದ್ದಿದೆ. ರಾಜ್ಯಸಭೆಯಲ್ಲಿ ಇನ್ನೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವ ಮಸೂದೆ ಮತಕ್ಕೆ ಬೀಳುವ ಸಾಧ್ಯತೆಗಳು ಕಮ್ಮಿ. ಉದ್ದೇಶಿತ ಮಸೂದೆಯು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತಿದೆ, ವಿಕೇಂದ್ರಿಕರಣಕ್ಕೆ ವಿರುದ್ಧವಾಗಿದೆ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲಸಿದ್ಧಾಂತಗಳಿಗೆ ಮಾರಕವಾಗಿದೆ ಎನ್ನುವ ಸರಿದನಿಯನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು ಎತ್ತಿದ್ದು ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಧಾನಮಂತ್ರಿಗಳು ಅಚ್ಚರಿ ಹುಟ್ಟಿಸುವಂತೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಒಕ್ಕೂಟಕ್ಕೆ ಧಕ್ಕೆಯಾದರೂ ಅಡ್ಡಿಯಿಲ್ಲ ಎನ್ನುವಂತೆ ಮಾತಾಡಿದ್ದಾರೆ. ಇಷ್ಟಕ್ಕೂ ಅಂತಹದ್ದೇನನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ನೋಡೋಣ.

ಒಕ್ಕೂಟ ಧರ್ಮಕ್ಕೆ ವಿರುದ್ಧವಾಗಿರುವ ನಿಲುವುಗಳು

ಈ ಮಸೂದೆಯ ಹೆಸರನ್ನೇ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, ೨೦೧೧" ಎಂದು ಇಡಲಾಗಿದೆ. ಅಂದರೆ ರಾಜ್ಯಗಳ ಲೋಕಾಯುಕ್ತ ಇನ್ಮೇಲೆ ಕೇಂದ್ರದ ಅಧೀನ ಅಂದಂಗಾಯ್ತು. ಈ ಮಸೂದೆಯ ಮೂರನೇ ಭಾಗದಲ್ಲಿ (Part III) "ಲೋಕಾಯುಕ್ತ" ಸಂಸ್ಥೆಯ ಬಗ್ಗೆ ಹೇಳಲಾಗಿದೆ. ೬೪(೧)ರಲ್ಲಿ ಸದರಿ ಮಸೂದೆ ಜಾರಿಯಾದ ದಿನದಿಂದ ಪ್ರತಿಯೊಂದು ರಾಜ್ಯವೂ ಲೋಕಾಯುಕ್ತ ಸಂಸ್ಥೆಯನ್ನು ಜಾರಿಗೊಳಿಸತಕ್ಕದ್ದು ಎನ್ನಲಾಗಿದೆ. ಇದು ರಾಜ್ಯಗಳು ಲೋಕಾಯುಕ್ತ ಸಂಸ್ಥೆಯನ್ನು ರಚಿಸುವುದನ್ನು ಕಡ್ಡಾಯಗೊಳಿಸುತ್ತದೆ. ಹೀಗೆ ರಾಜ್ಯಗಳ ಆಡಳಿತದಲ್ಲಿ ಮೂಗು ತೂರಿಸುವುದು ಅವುಗಳ ಸ್ವಾಯತ್ತತೆಗೆ ಧಕ್ಕೆ ತರುವಂತಹ ನಿಲುವಾಗಿದೆ ಎನ್ನುವುದು ತೃಣಮೂಲ ಮತ್ತದರ ಸಹಯೋಗಿ ಪಕ್ಷಗಳ ನಿಲುವು. ಈ ನಿಲುವಿನ ನಿಜಾಯತಿಯನ್ನು ಅನುಮಾನಿಸದೇ ನೋಡಿದರೆ ಒಕ್ಕೂಟ ಧರ್ಮದ ಪರವಾಗಿ ಇದು ಇರುವುದು ಎದ್ದು ಕಾಣುತ್ತದೆ. ಈ ಮಸೂದೆಯ ಮೂಲಕ ರಾಜ್ಯಗಳ ’ಆಡಳಿತವನ್ನು ರೂಪಿಸುವ, ಅದಕ್ಕೆ ಬೇಕಾದ ಸಂಸ್ಥೆಗಳನ್ನು ರೂಪಿಸುವ ಅಧಿಕಾರದಲ್ಲಿ’ ಕೇಂದ್ರ ಕೈಯ್ಯಾಡಿಸುತ್ತಿರುವ ಮತ್ತು ಅಂತಹ ಅಧಿಕಾರವನ್ನು ರಾಜ್ಯಗಳ ಕೈಯ್ಯಿಂದ ಕಸಿಯುವಂತಹ ನಿಯಮಗಳು ಮಸೂದೆಯಲ್ಲಿದೆ ಎನ್ನುವುದು ಅರಿವಾಗುತ್ತದೆ.

ರಾಜ್ಯಸರ್ಕಾರ ಏಕಿದೆ?

ರಾಜ್ಯಗಳಲ್ಲೂ ಸರ್ಕಾರಗಳಿವೆ, ಅದರಲ್ಲೂ ಜನರಿಂದಲೇ ಆಯ್ಕೆಯಾಗೋ ಶಾಸಕರಿದ್ದಾರೆ. ತನ್ನ ನಾಡಿಗೆ ಅಗತ್ಯವಿರುವ ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಗಳೇ ಕಟ್ಟಿಕೊಳ್ಳುತ್ತವೆ. ರಾಜ್ಯಗಳ ಈ ಅಧಿಕಾರವನ್ನು ಕೇಂದ್ರ ಕಿತ್ತುಕೊಳ್ಳೋದು ಸರಿಯಲ್ಲ. ಹಾಗೆ ಮಾಡೋದು ನಿಮಗೆ ನಿಮ್ಮನ್ನು ಆಳಿಕೊಳ್ಳುವ ಯೋಗ್ಯತೆಯಿಲ್ಲ, ‘ನಾವು ನಿಯಮ ರೂಪಿಸುತ್ತೇವೆ ನೀವು ಜಸ್ಟ್ ಫಾಲೋ ಮಾಡಿ’ ಅಂದಂಗಲ್ವಾ? ರಾಜ್ಯಸಭೆಯ ಒಬ್ಬ ಸಂಸದರು ಇದೇ ಮಾತನ್ನು ಚರ್ಚೆಯಲ್ಲಿ ಹೇಳುತ್ತಾ.. "ಕೇಂದ್ರವೇನು ಮೊಗಲ್ ಸಾಮ್ರಾಜ್ಯವಲ್ಲ.. ನೀವು ಅಕ್ಬರ್ ಬಾದಶಹಾನೂ ಅಲ್ಲಾ, ರಾಜ್ಯಗಳು ನಿಮ್ಮ ಸಾಮಂತ ರಾಷ್ಟ್ರಗಳೂ ಅಲ್ಲಾ" ಎಂದದ್ದು ಸಕ್ಕತ್ತಾಗಿತ್ತು. ಉತ್ತರಾಖಂಡ, ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಈಗಾಗಲೇ ಬಲಿಷ್ಠವಾಗಿರುವ ಲೋಕಾಯುಕ್ತ ಕಾಯಿದೆಯಿದ್ದು ಅವುಗಳ ಗತಿ ಏನಾದೀತು ಎನ್ನುವ ಆತಂಕವೂ ವ್ಯಕ್ತವಾಗಿದೆ.

ದನಿಯೆತ್ತಿರುವ ಪ್ರಾದೇಶಿಕ ಪಕ್ಷಗಳು

ರಾಜ್ಯದ ಅಧಿಕಾರ ಮೊಟಕುಗೊಳಿಸುವ ಈ ಮಸೂದೆಗೆ ಈ ಕಾರಣಕ್ಕಾಗಿ ವಿರೋಧ ತೋರಿಸಿದ್ದು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು. ಇದಕ್ಕೆ ಎಐಡಿಎಂಕೆ, ಬಿಜೆಡಿ, ಬಿಎಸ್ಪಿ, ಎಸ್ಪಿ... ಮೊದಲಾದ ಪ್ರಾದೇಶಿಕ ಪಕ್ಷಗಳು ದನಿಗೂಡಿಸಿವೆ. ಬಿಜೆಪಿಯೂ ಇವರೊಡನೆ ದನಿಯೆತ್ತಿದೆ. ಧರ್ಮಾಧಾರಿತ ಮೀಸಲಾತಿಯ ಬಗೆಗಿನ ಆಕ್ಷೇಪದ ಜೊತೆಯಲ್ಲಿಯೇ ಒಕ್ಕೂಟ ಶಿಥಿಲಗೊಳಿಸುವ ಈ ಅಂಶವನ್ನೂ ಸೇರಿಸಿಕೊಂಡು ವಿರೋಧಪಕ್ಷವಾದ ಬಿಜೆಪಿ ಕೂಡಾ ತೃಣಮೂಲದ ಈ ನಿಲುವನ್ನು ಬೆಂಬಲಿಸಿದೆ.

ಮುಂದೇನಾದೀತು?

ಇಂದೇನಾದರೂ ಈ ಮಸೂದೆ ಇದೇ ರೂಪದಲ್ಲಿ ಮಂಡನೆಯಾದರೆ ಸೋಲು ಕಾಣುವುದು ಖಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಲೋಕಾಪಾಲ್ ಮಸೂದೆ ತಿದ್ದುಪಡಿಯಾಗಿ ಮಂಡಿತವಾಗಬೇಕಾದರೆ ಮತ್ತೆ ಲೋಕಸಭೆಯಲ್ಲಿ ಮಂಡಿತವಾಗಿ ಒಪ್ಪಿಗೆ ಪಡೆದುಕೊಳ್ಳಬೇಕು. ಅಥವಾ ಈಗ ಮಸೂದೆಗೆ ವಿರೋಧ ತೋರಿಸದೆ ಒಪ್ಪಿಕೊಳ್ಳಿ, ಮುಂದೆ ತಿದ್ದುಪಡಿಯ ಮೂಲಕ ಬದಲಾವಣೆ ಮಾಡುತ್ತೇವೆ ಎಂದು ಪ್ರಾದೇಶಿಕ ಪಕ್ಷಗಳ ಮನವೊಲಿಸಬೇಕು. ಆದರೆ ಲೋಕಸಭೆ ಈಗಾಗಲೇ ಅನಿರ್ದಿಷ್ಟವಾಗಿ ಮುಂದೂಡಿಕೆಯಾಗಿರುವುದರಿಂದ ಮುಂದಿನ ಅಧಿವೇಶನದವರೆಗೂ ಸದರಿ ಮಸೂದೆ ಮಂಡನೆಯಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಏನಾಗುವುದೋ ಕಾದು ನೋಡೋಣ. ಒಟ್ಟಿನಲ್ಲಿ ಲೋಕಾಯುಕ್ತ ನಿರ್ವಹಿಸುವ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದ ಲೋಕಪಾಲ್ ಮಸೂದೆ ಒಪ್ಪಿಗೆಯಾಗುವುದೇ ಎನ್ನುವುದು ಕುತೂಹಲದ ವಿಷಯವಾಗಿದೆ.

ಕೊನೆಹನಿ: ಈಗಾಗಲೇ ಕೇಂದ್ರೀಯ ತನಿಖಾದಳದಂತಹ ಸಂಸ್ಥೆಗಳು ಬಳಕೆಯಾಗುತ್ತಿರುವ ಬಗೆಯನ್ನು ನೋಡಿದರೆ ಲೋಕಪಾಲ್ ಎನ್ನುವುದೂ ಕೂಡಾ ಪ್ರಾದೇಶಿಕ ಪಕ್ಷಗಳನ್ನು ಅದುಮಿಡುವ, ರಾಷ್ಟ್ರೀಯ ಪಕ್ಷಗಳ ಕೈ ಅಸ್ತ್ರವಾದೀತೆನ್ನುವ ಆತಂಕವಿರುವುದಂತೂ ದಿಟ!

PUC+CBSE+NEET = ಶಿಕ್ಷಣ ವ್ಯವಸ್ಥೆಯ ಉನ್ನತೀಕರಣವೇ?

(ಫೋಟೋಕೃಪೆ: ಮೆಗಾಮೀಡಿಯಾ ನ್ಯೂಸ್)
ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ಪದವಿಪೂರ್ವ ಕೋರ್ಸುಗಳ ವಿಜ್ಞಾನ, ಗಣಿತ ಪಠ್ಯಕ್ರಮಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ರಾಜ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಘೋಷಣೆ ಮಾಡಿದ್ದಾರೆ. ಇದರ ಜೊತೆಯಲ್ಲಿ ಪಿ.ಯು.ಸಿ ಪಠ್ಯಕ್ರಮ ಸಿ.ಬಿ.ಎಸ್.ಇನ ಪಠ್ಯಕ್ರಮದಂತೆ ಇರುತ್ತದೆ ಎಂದಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಕರ್ನಾಟಕದ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸುವುದು ಒಳ್ಳೆಯ ವಿಚಾರವಾಗಿದ್ದು, ಉಳಿದಂತೆ ಅದನ್ನು ಸಿಬಿಎಸ್ಇ ದರ್ಜೆಗೆ ಏರಿಸುತ್ತೇವೆ ಎನ್ನುವುದಾಗಲೀ, ಹಾಗೆ ಏರಿಸಲು ಸಚಿವರು ನೀಡುತ್ತಿರುವ ಕಾರಣವಾಗಲೀ ಚರ್ಚೆಗೆ ಅರ್ಹವಾಗಿರುವುದಾಗಿದೆ.

ಸರ್ಕಾರ ಹೀಗೆ ಪಿಯುಸಿ ಪಠ್ಯಕ್ರಮವನ್ನು ಸಿಬಿಎಸ್ಇಗೆ ಬದಲಿಸಲು ನೀಡುತ್ತಿರುವ ಕಾರಣ, ಕರ್ನಾಟಕದ ವಿದ್ಯಾರ್ಥಿಗಳು ೨೦೧೨ರಿಂದ ವೈದ್ಯಕೀಯ ಪ್ರವೇಶಕ್ಕೆ ರಹದಾರಿಯಾಗಲಿರುವ "ರಾಷ್ಟ್ರೀಯ ಅರ್ಹತಾ/ ಪ್ರವೇಶ ಪರೀಕ್ಷೆ"ಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಲಿ ಎನ್ನುವುದಾಗಿದೆ ಎಂಬುದಾಗಿದೆ.
The decision was taken in view of the Government's decision to seek two years' time to bring students in the State under the ambit of the National Eligibility-cum-Entrance Test (NEET) for admission to medical colleges.
ವಿಜ್ಞಾನ ವಿಷಯದಲ್ಲಿ ಪಿಯುಸಿ ಓದುವ ಎಷ್ಟು ಮಂದಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ ಎನ್ನುವುದರ ಒಂದು ಸಣ್ಣ ಅಂಕಿ-ಅಂಶ ಹೀಗಿದೆ. ಕರ್ನಾಟಕದಲ್ಲಿ ೨೦೧೦ರಲ್ಲಿ ಪಿಯುಸಿ (ವಿಜ್ಞಾನ/ ಗಣಿತ) ವಿದ್ಯಾರ್ಥಿಗಳ ಸಂಖ್ಯೆ: ೧೧೬,೨೬೪. ಉತ್ತೀರ್ಣರಾದವರು: ೭೫,೫೧೩ ಜನ. ಸಾಮಾನ್ಯವಾಗಿ ವರ್ಷವೊಂದರಲ್ಲಿ ಕರ್ನಾಟಕದಲ್ಲಿ ವೈದ್ಯಕೀಯ ಕಲಿಕೆಯನ್ನು ಮಾಡುವವರು : ಸುಮಾರು ೪೨೦೦ ಮಂದಿ. ಇದರಲ್ಲಿ ೧೬೪ ಜನ ಕೇಂದ್ರದ ಕೋಟಾದವರು. ಈ ಅಂಕಿ-ಅಂಶ ನೋಡಿದರೆ ನಿಜಕ್ಕೂ ಕೇವಲ ಅಖಿಲ ಭಾರತ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ಎದುರಿಸಲು ಇಡೀ ಲಕ್ಷಾಂತರ ಜನರ ಕಲಿಕಾ ವ್ಯವಸ್ಥೆ ಬದಲಾಗಬೇಕೆ ಎನ್ನಿಸದಿರದು. ಹಾಗೆಂದ ಕೂಡಲೇ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಮೇಲ್ಮಟ್ಟಕ್ಕೇರುವುದು ಬೇಡ ಎಂದೇನಲ್ಲ. ಖಂಡಿತವಾಗಿ ನಮ್ಮ ಶಿಕ್ಷಣದ ಗುಣಮಟ್ಟ ಹೆಚ್ಚಬೇಕು. ಇದರಲ್ಲಿ ಎರಡನೇ ಅಭಿಪ್ರಾಯವಿಲ್ಲ. ಆದರೆ ರಾಜ್ಯಸರ್ಕಾರವು ತನ್ನ ತೆಕ್ಕೆಯಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರದ ಕೈಗೊಪ್ಪಿಸಿ ಅವರು ಹೇಳಿದಂತೆ ಕುಣಿಯುವುದು ಏತಕ್ಕೆ? ಮತ್ತು ಇಂತಹ ಕೇಂದ್ರೀಕೃತ ವ್ಯವಸ್ಥೆಯು ಸರಿಯೇ? ಎಂಬುದೇ ಇಲ್ಲಿ ಪ್ರಶ್ನೆಯಾಗಿದೆ.

ವಿಕೇಂದ್ರೀಕರಣದಿಂದ ದೂರ ಒಯ್ಯುವ ನಿಲುವು!

ಕಲಿಕೆ ಎನ್ನುವುದು ಈ ಹಿಂದೆ ರಾಜ್ಯಪಟ್ಟಿಯಲ್ಲಿದ್ದು ಇದೀಗ ಜಂಟಿಪಟ್ಟಿಗೆ ಬಂದಿರುವುದೇ ಸರಿಯಾದ ನಡೆಯಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಏಳಿಗೆಗೆ ಪೂರಕವಾಗಿರುವ ಆಡಳಿತದ ವಿಕೇಂದ್ರೀಕರಣಕ್ಕೆ ವಿರುದ್ಧ ದಿಕ್ಕಿನ ನಡೆಯಾದ ಇದಕ್ಕೆ ಕೇಂದ್ರಸರ್ಕಾರದ ಶಿಕ್ಷಣಕ್ಷೇತ್ರದ ಉದ್ದೇಶಿತ ಕ್ರಾಂತಿ ಇನ್ನಷ್ಟು ಬಲ ನೀಡುತ್ತದೆ. ಇಡೀ ದೇಶಕ್ಕೊಂದೇ ಕಲಿಕಾ ಪದ್ದತಿ, ವೈದ್ಯಕೀಯ ಶಿಕ್ಷಣಕ್ಕೊಂದು ಕೇಂದ್ರೀಯ ನಿಯಂತ್ರಣ ಮಂಡಲಿ, ಇದರ ಮೂಲಕ ಕೇಂದ್ರಸರ್ಕಾರ ಒಪ್ಪಿರುವ ಪದ್ದತಿಯಂತೆ ಪ್ರವೇಶ ಪರೀಕ್ಷೆಗಳು, ಅಂದರೆ ಕೇಂದ್ರ ಒಪ್ಪಿರುವ ಪಠ್ಯದಲ್ಲಿ ಕಲಿತರೆ ಮಾತ್ರಾ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಎನ್ನುವಂತಹ ವ್ಯವಸ್ಥೆಯನ್ನು ಕಟ್ಟಿರುವುದೇ ಒಪ್ಪುಕೂಟ ವಿರೋಧಿ ನಡೆಯಾಗಿದೆ. ಅಖಿಲ ಭಾರತ ವೈದ್ಯಕೀಯ ಮಂಡಲಿ(AIMS)ಯ ಮುಖ್ಯಸ್ಥರೂ ಕೂಡಾ ಸರ್ಕಾರದ ಈ ನಡೆಯ ವಿರುದ್ಧವಾಗಿ ದನಿ ಎತ್ತಿದ್ದಾರೆ. ಇಷ್ಟರ ನಂತರವೂ ಕೇಂದ್ರ (MCI) ತನ್ನ ನಿಲುವಿಗೆ ಬದ್ಧವಾಗಿದೆ ಮತ್ತು ರಾಜ್ಯಸರ್ಕಾರವೂ ವಿರೋಧಿಸಿದಂತೆ ಮಾಡಿ ಈಗ ಅದಕ್ಕೆ ಸೊಪ್ಪು ಹಾಕುತ್ತಿದೆ.

ನಮ್ಮೂರ ಸೀಟುಗಳು ನಮ್ಮ ಹುಡುಗರ ಕೈತಪ್ಪದೇ?

ಇನ್ನು ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ಇದುವರೆಗೂ ಸ್ಥಳೀಯರ ಪಾಲಿಗಿದ್ದ (೪೨೦೦-೧೬೪ = ೪೦೩೬) ವೈದ್ಯಕೀಯ ಸೀಟುಗಳು ನಮ್ಮ ಹುಡುಗರ ಕೈತಪ್ಪುವುದಿಲ್ಲಾ ಎನ್ನಲು ಏನು ಆಧಾರವಿದೆ? ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ, ಅಖಿಲ ಭಾರತ ಮಟ್ಟದ ರ್ಯಾಂಕುಗಳು, ಅದರಂತೆ ಕಾಲೇಜು ಹಂಚಿಕೆಯಾದರೆ ಏನಾದೀತು? ಇವೆಲ್ಲವನ್ನೂ ರಾಜ್ಯಸರ್ಕಾರ ಪರಿಗಣಿಸಿದೆಯೇ? ಇಂದು ಮೆಡಿಕಲ್ ಸೀಟಿಗೆ ಆಗುತ್ತಿರುವುದು ನಾಳೆ ಇಂಜಿನಿಯರಿಂಗ್, ನಾಡಿದ್ದು ವಿಜ್ಞಾನ, ಕಲೆ, ಡಿಗ್ರೀ, ಪಿಯೂಸಿ, ಹೈಸ್ಕೂಲು ಎಲ್ಲಾ ಹಂತಕ್ಕೂ ವಿಸ್ತರಿಸಿದರೆ ಏನಾದೀತು? ಉತ್ತಮ ಗುಣಮಟ್ಟದ ಕಲಿಕೆ ಎಂದಕೂಡಲೇ ಅದು ಸಿಬಿಎಸ್ಇ ಪಠ್ಯಕ್ರಮದ್ದೇ ಏಕಾಗಬೇಕು? ಆ ಮಟ್ಟದ ವಿಜ್ಞಾನ, ಗಣಿತಗಳ ಕಲಿಕೆ ವೈದ್ಯಕೀಯ ಕಲಿಕೆಗೆ ನಿಜಕ್ಕೂ ಅಗತ್ಯವೇ? ಅದು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದೇ? ಹಾಗಾದರೆ ಇಂದು ಸಾಮಾನ್ಯ ಪದ್ದತಿಯಲ್ಲಿ ಕಲಿತು ವೈದ್ಯಕೀಯ ಓದಿದ ಮಂದಿ ಸಿಬಿಎಸ್ಇ ಪಠ್ಯಕ್ರಮದಲ್ಲಿ ಪಿಯೂಸಿ ಓದಿ ಡಾಕ್ಟರ್ ಆದವರಿಗಿಂತಾ ಕಡಿಮೆ ಗುಣಮಟ್ಟದವರೇ? ಈಗ ಇದ್ದಕ್ಕಿದ್ದಂತೆ ಎರಡು ವರ್ಷದ ಕಲಿಕೆಯಿಂದಾಗಿಯೋ, ಬ್ರಿಡ್ಜ್ ಕೋರ್ಸುಗಳಿಂದಾಗಿಯೋ ಏಕಾಏಕಿ ನಮ್ಮ ಮಕ್ಕಳು ಸಿಬಿಎಸ್ಇ ಆಧಾರಿತ ಪ್ರವೇಶ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬಲ್ಲರೇ? ಅದು ಸರಿ... ಇದಾದ ನಂತರವೂ ಸದರಿ ಪ್ರವೇಶ ಪರೀಕ್ಷೆಗಳು ಕೇಂದ್ರಸರ್ಕಾರ ನಡೆಸುವುದರಿಂದ ಹಿಂದೀ/ ಇಂಗ್ಲೀಷುಗಳಲ್ಲಿ ನಡೆಯಲಿವೆ ಎಂಬ ನಿಯಮ ಬರುವುದಿಲ್ಲ ಎನ್ನಲಾಗುವುದೇ? ಹಾಗಾದಲ್ಲಿ ತಾಯ್ನುಡಿಯಲ್ಲಿ ಬರೆಯುವ ಅವಕಾಶವು ಭಾರತದ ಒಂದು ಭಾಷೆಯ ಜನರಿಗೆ ಮಾತ್ರಾ ದೊರೆತು ಉಳಿದವರಿಗೆ ವಂಚನೆಯಾಗದೇ? (ಹೀಗೆ ಈಗಾಗಲೇ ಕೇಂದ್ರಸರ್ಕಾರಿ ನೌಕರಿಯ ಪರೀಕ್ಷೆಗಳಲ್ಲಿ ಆಗುತ್ತಿದೆ ಎಂಬುದು ನಮ್ಮ ಗಮನದಲ್ಲಿರಲಿ). ನಮ್ಮ ರಾಜ್ಯಸರ್ಕಾರ ಇಂಥಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ದುಡುಕುತ್ತಿರುವಂತೆ ತೋರುತ್ತಿದೆ. ಹಾಗೂ ಉತ್ತರವಿದ್ದಲ್ಲಿ ಜನರೊಡನೆ ಹಂಚಿಕೊಳ್ಳುವುದು ಉತ್ತಮ. ಆದರೆ ಎಲೆಯಲ್ಲಿ ಬಡಿಸಿದ್ದನ್ನೆಲ್ಲಾ ಒಟ್ಟಾಗಿ ಕಲಸುಮೇಲೋಗರ ಮಾಡುವಂತೆ ದೇಶದ ವಿದ್ಯಾರ್ಥಿಗಳನ್ನೆಲ್ಲಾ ಒಟ್ಟಾಗಿಸಿ ಇರುವ ೩೦೦ ಮೆಡಿಕಲ್ ಕಾಲೇಜಿಗೆ ಹಂಚುವ ಈ ವಿಧಾನ ನಾಳೆ ಸಮಾಜದಲ್ಲಿ ಎಂತೆಂತಹ ಏರುಪೇರುಗಳಿಗೆ ಕಾರಣವಾದೀತೋ ಎನ್ನುವ ಆತಂಕವಂತೂ ಇದ್ದೇ ಇದೆ.

ರಾಜ್ಯಸರ್ಕಾರದ ನೀತಿಗಳು!

ಮೊದಲಿಗೆ ಶಿಕ್ಷಣದ ಕೇಂದ್ರೀಕರಣದ ವಿರುದ್ಧವಾಗಿಯೇ ರಾಜ್ಯಸರ್ಕಾರ ದನಿಯೆತ್ತಬೇಕು. ಜಂಟಿ ಪಟ್ಟಿಯಿಂದ ಕಲಿಕೆಯು ರಾಜ್ಯಪಟ್ಟಿಗೆ ಮರು ವರ್ಗಾವಣೆಯಾಗಬೇಕು. ಕೇಂದ್ರ ರೂಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಎನ್ನುವ ಸಮಾನತೆಯ ಸಿಹಿ ಮಾತಿಗೆ ಮರುಳಾಗಿ ಈಗಿರುವ ನಾಲ್ಕು ಸಾವಿರ ಚಿಲ್ಲರೆ ವೈದ್ಯಕೀಯ ಸೀಟುಗಳನ್ನೂ ಹೊರರಾಜ್ಯದವರಿಗೆ ಬಿಟ್ಟುಕೊಡಬೇಕಾದೀತು ಎಂಬರಿವು ಸರ್ಕಾರಕ್ಕಿರಬೇಕಿತ್ತು. ಒಂದು ಕಡೆಯಲ್ಲಿ ರಾಜ್ಯಸರ್ಕಾರದ ಭಾಷಾನೀತಿಗೆ ಬದ್ಧವಾಗಿದ್ದೇವೆ ಎನ್ನುವ ಸರ್ಕಾರ ಮತ್ತೊಂದೆಡೆ ಬೆಂಗಳೂರಿನ ಪಾಲಿಕೆ ಶಾಲೆಗಳಲ್ಲಿ ಸಿಬಿಎಸ್ಇ ಪಠ್ಯಕ್ರಮ ಆರಂಭಿಸಲು ಖಾಸಗಿಯವರೊಂದಿಗೆ ಕೈಜೋಡಿಸುತ್ತದೆ. ೩೦೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಬಾಗಿಲೆಳೆಯಲು ಉತ್ಸಾಹ ತೋರಿಸುವ ಸರ್ಕಾರ ತಾಲೂಕಿಗೊಂದು ಇಂಗ್ಲೀಷ್ ಶಾಲೆ ತೆರೆಯಲು ಮುಂದಾಗುತ್ತದೆ. ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಸುತ್ತೇವೆ ಮತ್ತು ಅದರ ಪ್ರಶ್ನೆಪತ್ರಿಕೆಗಳು ಕೇಂದ್ರ ಪಠ್ಯಕ್ರಮದಲ್ಲಿರುತ್ತವೆ ಎಂದರೆ ಕೋಲೆ ಬಸವನ ಹಾಗೆ ತಲೆ ಬಾಲ ಅಲ್ಲಾಡಿಸಿ ರಾಜ್ಯ ಪಠ್ಯಕ್ರಮವನ್ನೇ ಬದಲಿಸಲು ಮುಂದಾಗುತ್ತದೆ. ಒಟ್ಟಾರೆ ಇವೆಲ್ಲಾ ಒಂದು ಜನಪರ ಕಾಳಜಿಯ ಕೊರತೆಯಂತೆ ಜನಕ್ಕೆ ಕಂಡರೆ ಅಚ್ಚರಿಯೇನಿಲ್ಲಾ ಗುರೂ!

ಬೆಡಗಿನ ರಾಜಕಾರಣಿ ಬಂಗಾರಪ್ಪನವರಿನ್ನಿಲ್ಲ!

ಮಾಜಿ ಮುಖ್ಯಮಂತ್ರಿಗಳೂ ಹಿಂದಿನ ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಕ್ಷದ ಸ್ಥಾಪಕರೂ ಆಗಿದ್ದ ಶ್ರೀ ಸಾರೆಕೊಪ್ಪದ ಬಂಗಾರಪ್ಪನವರು ನಿನ್ನೆ ರಾತ್ರಿ ತೀರಿಕೊಂಡಿದ್ದಾರೆ.

ಕರ್ನಾಟಕ ರಾಜಕಾರಣದ ಅತ್ಯಂತ ಬೆಡಗಿನ ರಾಜಕಾರಣಿಯಾಗಿದ್ದ ಬಂಗಾರಪ್ಪನವರು ಹಿಂದೊಮ್ಮೆ ಸ್ವಂತ ಪಕ್ಷ ಕಟ್ಟಿ ಹತ್ತು ಶಾಸಕರನ್ನು ಗೆಲ್ಲಿಸಿಕೊಂಡಿದ್ದರು.

ಕಾವೇರಿ ತೀರ್ಪಿನ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ಶ್ರೀಯುತರು ತಮ್ಮ ಗಟ್ಟಿ ನಿಲುವಿನಿಂದಾಗಿ ನಾಡಿನಲ್ಲಿ ಹೆಸರು ಗಳಿಸಿದ್ದರು. ಹೀಗೆ ಸುಗ್ರೀವಾಜ್ಞೆ ಹೊರಡಿಸಿದ ಕಾರಣಕ್ಕೆ ಅಧಿಕಾರ ಕಳೆದುಕೊಳ್ಳಲೂ ಸಿದ್ಧವಾಗಿದ್ದ ಇವರು ನಾಡಪರವಾಗಿ ಅಂದು ತೋರಿದ್ದ ಗಟ್ಟಿತನ ಇಂದಿನವರಿಗೂ ಮಾದರಿಯಾಗಿದೆ.

ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಬನವಾಸಿ ಬಳಗ ಶ್ರದ್ಧಾಂಜಲಿ ಅರ್ಪಿಸುತ್ತದೆ.

ಕಂಬಾರರಿಗೆ ಇದೆಂಥಾ ಮರುಳಯ್ಯಾ... ಇದು ಎಂಥಾ ಮರುಳು!!

(ಕೃಪೆ: ಕನ್ನಡಪ್ರಭ ಮತ್ತು ಅಂತರ್ಜಾಲದ ಫೋಟೋ)

ಮೊನ್ನೆ ಮೊನ್ನೆ ತಾನೇ ಜ್ಞಾನಪೀಠ ಪ್ರಶಸ್ತಿ ಗಳಿಸಿಕೊಂಡ ಕನ್ನಡದ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರರು ‘ಕನ್ನಡ ಶಾಲೆಗಳನ್ನು ಮುಚ್ಚುವ’ ಸರ್ಕಾರದ ನಿಲುವಿನ ವಿರುದ್ಧವಾಗಿ ಬಹು ಉಗ್ರವಾಗಿ ದನಿಯೆತ್ತಿದ್ದನ್ನು ಕಂಡು ತಲೆದೂಗಿದ್ದ ಕನ್ನಡಿಗರೆಲ್ಲಾ ಇದೀಗ ಬೆಚ್ಚಿ ಬೀಳುವಂಥಾ ಶಾಕ್ ಒಂದನ್ನು ಕಂಬಾರರು ನೀಡಿದ್ದಾರೆ. ವಿಷಯ ಏನಪ್ಪಾ ಅಂದ್ರೆ, ಶಬ್ದ ಹಿಂದೀ ಸಾಹಿತ್ಯದ ಕಾರ್ಯಕ್ರಮದಲ್ಲಿ ಶ್ರೀಯುತ ಕಂಬಾರರು ಶ್ರೀಮಾನ್ ಸಿದ್ದಲಿಂಗಪಟ್ಟಣಶೆಟ್ಟಿಯವರ ಜೊತೆ ಸೇರ್ಕೊಂಡು, ‘ಇಂಗ್ಲೀಶಿನ ಬದಲಾಗಿ ಸಂವಹನ ಭಾಷೆಯಾಗಿ ಹಿಂದಿಯನ್ನು ಬಳಸಬೇಕು’ ಎಂದಿದ್ದಾರೆ ಅಂತಾ ನಿನ್ನೆಯ (೧೯.೧೨.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿಯಾಗಿದೆ.

ಚಿಂತನೆಯ ಬರಡುತನ ಮತ್ತು ಕೀಳರಿಮೆಯ ನರಳಾಟ!

ಆ ಕಾರ್ಯಕ್ರಮದಲ್ಲಿ ಮಾತಾಡಿದ ಈ ಇಬ್ಬರ ಮಾತುಗಳನ್ನು ನೋಡಿದಾಗ, ಇವರುಗಳಿಗೆ ವಿಚಾರ ಮಾಡುವ ಶಕ್ತಿಯೇ ಇಲ್ಲವೇನೋ ಎನ್ನಿಸಿದರೆ ಆಶ್ಚರ್ಯವಿಲ್ಲ. ಇವರಿಗೆ ಇಂಗ್ಲೀಶನ್ನು ಬಳಸುವುದರ ಬಗ್ಗೆ ಇರುವ ಆಕ್ಷೇಪಣೆ ಹಿಂದೀ ಬಳಕೆಯ ಬಗ್ಗೆ ಇಲ್ಲದಿರುವುದನ್ನು ಕಂಡಾಗ ಅಚ್ಚರಿ ಆಗುತ್ತದೆ. ‘ರಾಷ್ಟ್ರೀಯ ವಿಷಯಗಳನ್ನು ಮಾತಾಡುವಾಗ ಇಂಗ್ಲೀಶ್ ಬೇಡಾ, ಹಿಂದೀ ಇರಲಿ, ಪರಕೀಯ ಭಾಷೆ ಮಾತಾಡೋದ್ರಿಂದ ನೈಜಭಾವನೆಗಳ ಹಂಚಿಕೆ ಅಸಾಧ್ಯ’ ಎನ್ನುವ ಇವರು ಇಂಗ್ಲೀಶನ್ನು ಪರಕೀಯಗೊಳಿಸಿ ಹಿಂದೀಯನ್ನು ನಮ್ಮದೆನ್ನುತ್ತಿರುವುದು ತಮಾಶೆಯ ಮಾತಾಗಿದೆ. ಸರಿ, ಕಂಬಾರರೇ, ಹಿಂದೀಯನ್ನು ಭಾರತೀಯ ಎನ್ನುವ ಕಾರಣದಿಂದ ನಮ್ಮದು ಎಂದು ನಾವಂದುಕೊಳ್ಳುವಂತೆ (ನಾವಲ್ಲಾ... ನೀವು!) ಹಿಂದೀ ಭಾಷೆಯವರು ಕನ್ನಡವನ್ನು ಇಂಗ್ಲೀಶಿನ ಬದಲು ಒಪ್ಪುವರೇನು? ಒಮ್ಮೆ ಯೋಚಿಸಿ ನೋಡಿ. ಸ್ಥಳೀಯ ವಿಷಯಕ್ಕೆ ಕನ್ನಡ, ರಾಷ್ಟ್ರೀಯ ವಿಷಯಕ್ಕೆ ಹಿಂದೀ, ಅಂತರರಾಷ್ಟ್ರೀಯ ವಿಷಯಕ್ಕೆ ಇಂಗ್ಲೀಶ್ ಅನ್ನುವ ಕೀಳರಿಮೆಯ ಕೆಸರಿನ ನರಳಾಟದಂತೆ ಈ ಮಾತುಗಳು ಕೇಳಿದರೆ ಅಚ್ಚರಿ ಪಡಬೇಕಿಲ್ಲ! ವಾಸ್ತವದಲ್ಲಿ ಕನ್ನಡಿಗರಿಗೆ, ಕನ್ನಡವಲ್ಲದೆ ಬೇರೆಲ್ಲವೂ ಪರಕೀಯವೇ ಆಗಿದೆ. ಇಂಗ್ಲೀಶ್ ಭಾಷೆಯನ್ನು ಕಣ್ಣು ಚುಚ್ಚುವ ಸೂಜಿಯಂತೆ ಕಾಣುತ್ತಿರುವ ಇವರಿಗೆ ಹಿಂದೀ ಚಿನ್ನದ ಸೂಜಿಯಿದ್ದಂತೆ ಎಂಬುದೇಕೆ ಅರಿವಾಗುತ್ತಿಲ್ಲವೋ ಆಶ್ಚರ್ಯಕರವಾಗಿದೆ. ನಿಜಕ್ಕೂ ಹಿಂದೀ ಉಳಿದೆಲ್ಲಾ ಭಾರತೀಯ ಭಾಷೆಗಳಿಗೆ ಚರಮಗೀತೆ ಎನ್ನೋದನ್ನು ಗುರುತಿಸುವಲ್ಲಿ ಇವರು ವಿಫಲವಾಗ್ತಿರೋದು ವಿಚಿತ್ರವೆನ್ನಿಸುತ್ತಿದೆ!!

ಸಾಹಿತ್ಯ ಪ್ರಸಾರಕ್ಕೆ ಬೇಕಿರೋದು ಅನುವಾದ!

ಇಬ್ಬರು ಭಾರತೀಯರು ಭೇಟಿಯಾಗಿ ಇಂಗ್ಲೀಶಿನಲ್ಲಿ ಮಾತಾಡುವುದು ಕೃತಕವಾಗಿ ಕಾಣಿಸುವ ಇವರಿಗೆ, ಇಬ್ಬರು ಭಾರತೀಯರು (ಉದಾ: ಕನ್ನಡಿಗನೊಬ್ಬ ಮತ್ತು ತೆಲುಗಿನವನೊಬ್ಬ) ಹಿಂದೀಯಲ್ಲಿ ಮಾತಾಡಿದರೂ ಅದು ಕೃತಕವಾಗಿ ಕಾಣಿಸದೇ? "ಹಿಂದೀಯಲ್ಲಿ ಮಾತಾಡುವುದು ನಮ್ಮತನ ಇಟ್ಟುಕೊಂಡಂತೆಯೂ, ಇಂಗ್ಲೀಶಲ್ಲಿ ಮಾತಾಡುವುದು ನಮ್ಮತನ ಬಿಟ್ಟಂತೆಯೂ ಅನ್ನಿಸುತ್ತಿದೆ.." ಎಂಬ ಗಾಳಿಯಲ್ಲಿ ತೇಲಾಡೋ ಹಗುರವಾದ ಮಾತಾಡೋ ಇವರು ಅದೇಕೆ ಹಾಗೆ ಎಂದು ವಿವರಿಸಬಲ್ಲರೇನು? ಸಾಹಿತ್ಯ ಪ್ರಚಾರಕ್ಕೆ ಹಿಂದೀ ಕಲಿಯಬೇಕು ಅನ್ನುವ ಇವರ ಮಾತು ಹಾಸ್ಯಾಸ್ಪದವಾಗಿದೆ. ಅಲ್ಲಾ, ಶೇಕ್ಸ್‍ಪಿಯರ್ ತನ್ನ ಸಾಹಿತ್ಯದ ಹಿರಿಮೆಯನ್ನು ಭಾರತೀಯರಿಗೆ ತಿಳಿಸಲು ಹಿಂದೀ ಕಲಿತಿದ್ನಾ? ಕನ್ನಡದ ಮೇರು ಸಾಹಿತಿಗಳಿಗೆ ಹಿಂದೀ ಬರದ ಕಾರಣ ಅವರ ಸಾಹಿತ್ಯ ಉತ್ತರ ಭಾರತ ತಲುಪಲು ವಿಫಲವಾಗಿದೆ ಎನ್ನುವ ಮಾತುಗಳು ಕೀಳರಿಮೆಯದ್ದಲ್ಲವೇನು? ಕನ್ನಡ ಸಾಹಿತ್ಯದ ಹಿರಿಮೆ ಉಳಿದವರಿಗೆ ತಲುಪಬೇಕೆಂದಿದ್ದರೆ ಅದು ಅವರವರ ಭಾಷೆಗೆ ಅನುವಾದವಾದರೆ ಸಾಕು ಅನ್ನುವ ಆಲೋಚನೆಯೇ ಬೇಡವೇ? ಹೋಗಲೀ, ಹಿಂದೀ ಸಾಹಿತಿಗಳು ದಕ್ಷಿಣದವರನ್ನು ತಲುಪಲು ಏನಾಗಬೇಕೆಂದು ಇವರು ಯೋಚಿಸಬಲ್ಲರೇ? ಹಾಗಾಗಲು ದಕ್ಷಿಣದವರೆಲ್ಲಾ ಹಿಂದೀ ಕಲೀಲಿ ಅಂದರೂ ಅನ್ನಬಹುದೇನೋ? ಕುವೆಂಪುರವರು ಕನ್ನಡದಲ್ಲಿ ರಾಮಾಯಣ ದರ್ಶನ ಬರೆಯದೆ ಹಿಂದೀ ಕಲಿತು ಅದರಲ್ಲಿ ಬರೆಯಬೇಕಿತ್ತು ಅಂದಿದ್ದರೂ ಅಚ್ಚರಿ ಪಡುವಂತಿಲ್ಲ... ಅಲ್ವಾ ಗುರೂ!

ಕನ್ನಡ ಹೋರಾಟಗಳಿಗೀಗ ಗೆಲುವಿನ ಖುಶಿ ಕಾಲ!!


ಕಳೆದೊಂದು ವಾರ ಕನ್ನಡಪರ ಹೋರಾಟಗಳಿಗ ಸುಗ್ಗೀ ಕಾಲ, ಹಬ್ಬದ ಕಾಲ. ಕನ್ನಡ್ ಮಂದಿಗಾ ಒಳ್ಳೀ ಸುದ್ದೀ ಮಳಿ ಧೋ ಅಂತಾ ಹುಯ್ದಾಂಗ.. ಮುಂಗಾರಿನ ಸಿಂಚನ!! ಹೌದ್ರೀ... ಅಂಥದ್ ಏನಾತಪ್ಪಾ ಅಂತೀರೇನ್ರೀ... ಇಕಾ ನೋಡಿ!!!

ಶಾಲೀ ಮುಚ್ಚೂ ಮಂದಿಗಾ ತಡೆಯಾಜ್ಞೆ!

ಮೊದಲಾ ಏನಾತಪಾ ಅಂದ್ರಾ ನಮ್ ರಾಷ್ಟೀಯತಿ ಹರಿಕಾರ್ ಪಾರ್ಟಿ ಭಾಜಪಾದ ಮಂತ್ರಿಗೋಳಾಗಿರೋ ಕಾಗೇರಪ್ಪನೋರು ಕರ್ನಾಟಕದಾಗಿರೂ ಕನ್ನಡ್ ಮಾಧ್ಯಮದ ಶಾಲಿಗಳೊಳಗಾ ಐದಕ್ಕಿಂತ ಕಡೀಮಿ ಮಕ್ಳಿದಾರಂದ್ರಾ ಬಂದ್ ಮಾಡ್ತೇವಿ ಅಂತಂದ್ರಲ್ಲಪಾ... ಮುಂದಾ ಮಂದಿ ಕಂಡಾಪಟ್ಟಿ ಉಗ್ಯಾಕ್ ಹತ್ತಿದ್ದೇ ನೋಡ್ರಪಾ ‘ಅದೂ ಮುಚ್ಚೋಣಲ್ಲಾ...ವಿಲೀನಾ’ ಅಂತಂದ್ ಬುಟ್ರು! ಪತ್ರಿಕೆಯೊಂದ್ರಾಗಂತೂ  "ಇದು ಕೊಲಿ ಮಾಡಾಕ್ ಹತ್ತಿಲ್ಲಾ, ಸ್ವರ್ಗಕ್ ಕಳ್ಸಾಕ್ ಹತ್ತೀನಿ... ಅಂದಂಗಾತು" ಅನ್ನೂ ಓಲಿ ಬಂದಿತ್ರೀಪಾ. ಸರ್ಕಾರದ ಈ ಮಂಗ್ಯಾತನಾನ ಕರ್ನಾಟಕದಾಗಿನ ಹೆಚ್ಚೂ ಕಮ್ಮಿ ಎಲ್ಲಾ ಸಾಹಿತಿಗೋಳು ಬೈಯ್ಯಾಕಾ ಚಾಲೂ ಮಾಡುದ್ರುರೀ... ನವೆಂಬರ್ ಒಂದು ರಾಜ್ಯೋತ್ಸವಕ್ ಒಂದೀಟ್ ದಿನಕ್ ಮೊದ್ಲಾ, ಕರ್ನಾಟಕ ರಕ್ಷಣಾ ವೇದಿಕೆ ಮಂದಿ ಎಲ್ಲಾ ಜಿಲ್ಲಾದೊಳಗಾ ದೊಡ್ ಹೋರಾಟ ಮಾಡುದ್ರುರೀಪಾ...ಈಟಾದ್ರೂ ನಮ್ ಸರ್ಕಾರ್ ಜಗ್ಲಿಕ್ ಒಲ್ದಾತು! ಕಡೀಗ ಮೂರು ಮಂದಿ ಜ್ಞಾನಪೀಟ ಪ್ರಶಸ್ತಿ ಗೆದ್ದೋರು, ಮತ್ತೊಬ್ರು ರಾಷ್ಟ್ರಕವಿಗೋಳೂ ಕೋರ್ಟ್ ಬಾಗ್ಲ ಬಡ್ಯಾಕ್ ಮುಂದಾದ್ರು. ಈಗ ಹೈಕೋರ್ಟ್ ಸರ್ಕಾರಕ್ಕ ತುಸಾ ತಡೀರ್ರಲಾ...ಗಡಿಬಿಡಿ ಮಾಡ್ ಬ್ಯಾಡ್ರೀ ಅಂತಾ ಗಪ್ ಕುಂಡ್ರಾಕ್ ಆದೇಶ ಹೊರಡ್ಸೈತಿ!!! ಆಹಾ ಹಾಲ್ ಕುಡ್ದಂಗ್ ಆತಲ್ರೀಪಾ!!

ನಮ್ಮಮೆಟ್ರೋ ಮತ್ತು ಅಧಿಕಾರಿಗಳ ಉತ್ತರ!

ಈ ಕಡೀ ನಮ್ ಬೆಂಗಳೂರದಾಗ ನಮ್ಮ ಮೆಟ್ರೋ ಚಾಲೂ ಮಾಡಿ ಅದ್ರಾಗ ಹಿಂದೀನಾಗೂ ಅನೌನ್ಸ್ ಮಾಡ್ಲಿಕ್ ಹತ್ಯಾರಲಾ... ಅದು ನಿಲ್‍ಬೇಕಾ ಅಂತಾ, ನಮ್ ಕನ್ನಡ್ ಮಂದೀಗಾ ಕೆಲಸ ಕೊಡಾಬೇಕಂತಾ, ಮೆಟ್ರೋದಾಗ ಕನ್ನಡದಾಗ ಸೇವಿ ಸಿಗಬೇಕಂತಾ ಕರ್ನಾಟಕ ರಕ್ಷಣಾ ವೇದಿಕೆ ಮಂದಿ ದಿಸೆಂಬರ್ ೨ಕ್ಕ ಮೆಟ್ರೋ ಮುಂದಾ ಧರಣಿ ಕುಂತು ಒಂದು ಮನವಿ ಕೊಟ್ಟು ಬಂದಿದ್ರುರೀಪಾ..ಮೆಟ್ರೋ ಸಂಸ್ಥಿ ಮಂದಿ ಅದುಕ್ಕಾ ಒಂದು ಉತ್ರ ಬರ್ದು ಕಳುಸ್ಯಾರಾ. ನಾವ್ ಕೆಲಸಾ ಕೊಡೂ ಮಂದೀಗಾ ಕನ್ನಡ್ ಮಾತಾಡಕ್ಕ, ಬರೀಲಿಕ್ಕಾ, ಓದಲಿಕ್ಕಾ ಬರೋಣು ಕಡ್ಡಾಯ ಐತಿ, ಇಲ್ಲಿ ಗುತ್ತಿಗಿ ಮ್ಯಾಲ ಇರೋ ಸಂಸ್ಥಿಗಳೂ ಹಾಂಗ್ ಕನ್ನಡ್ ತಿಳಿದಿರೋ ಮಂದೀಗಾ ಕೆಲಸಾ ಕೊಡಾಕಬೇಕಂತ ಒಪ್ಪಂದ ಐತಿ, ಕನ್ನಡದ ಮಂದಿಗಾ ಕನ್ನಡದಾಗ ಸೇವಿ ಕೊಟ್ಟಾ ಕೊಡ್ತೀವ್ರೀ ಅಂತಾ ಪತ್ರ ಬರ್ದಾರ. ಇದರಾಗ ಎಶ್ಟ್ ಖರೀ ಐತನ್ನೋದು ಬ್ಯಾರೀ ಮಾತು. ಆದ್ರೂ ಹೀಂಗಾ ಬರವಣಿಗೀಲಿ ತಿಳಿಸ್ಯಾರಾ ಅಂದ್ರಾ ಆ ಮಟ್ಟಕ್ ಕಮಿಟ್ ಆದ್ರೂ ಅಂದಂಗೇ ಅಲ್ರೀ!!! ಹಾಂಗಾಗಿ ಇದೂ ಕನ್ನಡದೋರಿಗ್ ಛಲೋ ಸುದ್ದೀನೇ!!!

ಬೆಳಗಾವಿ ಪಾಲಿಕಿ ಸೂಪರ ಸೀಡ


ಇನ್ನು ನಮ್ ಬೆಳಗಾವಕ್ ಬರ್ರೀ... ಬರೀ ಪಟಾಕ್ಷಿ ಸದ್ದೇ ಸದ್‍ರೀಪಾ! ಅದಾ ಮತ್ತಾ... ಇರಲಾರ್ದ ಇರುವಿ ಬಿಟ್ಕೊಂಡಂಗ್ ನಮಗಾ ಆಳೂ ಮಂದಿ ಸಪೋರ್ಟ್ ಮಾಡ್ತಾರಾ ಅನ್ನೂ ಭ್ರಮೀ ಒಳಗಾ ಎಂಇಎಸ್ ಮೇಯರ್/ ಉಪಮೇಯರ್ ಕೂಡಾ ಕನ್ನಡ್ ರಾಜ್ಯೋತ್ಸವದ ದಿನ ಕರಾಳದಿನದಾಗ್ ಹೊಕ್ಕೊಂಡಿದ್ದು, ಅದುಕ್ ಕರ್ನಾಟಕ ರಕ್ಷಣಾ ವೇದಿಕೆ ಮಂದಿ ಮೇಯರ್ ಕಚೇರಿಗ್ ನುಗ್ಗಿ ಪ್ರತಿಭಟನಿ ಮಾಡಿದ್ದು...ಇದರ ಬೆನ್ ಹಿಂದಾ ರಗಡ್ ಒತ್ತಡ ಸರ್ಕಾರದ ಮ್ಯಾಲ್ ಬೀಳಕ್ ಚಾಲೂ ಅಗಿದ್ದು...ಕಡೀಕ ಪಾಲಿಕೆ ಸೂಪರ್ ಸೀಡ್ ಆಗೂ ಹಂತಕ್ ಬಂತ್ರಲಾ... ಅಲ್ಲಾ, ಈ ಎಂಇಎಸ್ ಮಂದಿ ಕರ್ನಾಟಕದಾಗಾ ಕುಂತು ಕಂಬಾರಪ್ನೋರಿಗೆ ಅಪಮಾನ ಮಾಡಿ, ರಾಜ್ಯೋತ್ಸವಕ್ಕ ಕಪ್ಪುದಿನಾ ಮಾಡಿ... ಸುಕಾಸುಮ್ನ್ ಕಿರಿಕ್ ಮಾಡಕ್ ಹತ್ತಿದ್ ನೋಡುದ್ರಾ ಸರ್ಕಾರ ಪಾಲಿಕೇನಾ ಸೂಪರ್ ಸೀಡ್ ಮಾಡಿ ಛಲೋ ಕೆಲ್ಸ ಮಾಡೈತಿ ಅನ್ಸೋದ್ರಾಗ್ ಅಚ್ಚರಿ ಏನಿಲ್ಲಾ ಬಿಡ್ರೀಪಾ..

ಹೀಂಗಾ... ಈ ಒಂದೆರಡು ವಾರದಾಗಾ ಕನ್ನಡದೋರ್ ಪಾಲಿಗೆ ಡೇಲಿ... ಖೀರ್ ಕುಡ್ದಂಗಾಗೈತಿ. ಇಂಥಾ ಹೋರಾಟ ನಡ್ಸಿರೋ ಎಲ್ಲಾ ಮಂದಿಗೂ.... ಇಕಾ... ಶರಣು, ಶರಣಾರ್ಥಿ!!

ನಮ್ಮ ಮೆಟ್ರೋ ಮಾಹಿತಿ ಕೋರಿಕೆ ಅರ್ಜಿ: ಮೇಲ್ಮನವಿ ಸಲ್ಲಿಸಿದ ಅರ್ಜಿದಾರ!


ಕಳೆದ ತಿಂಗಳಲ್ಲಿ ಬೆಂಗಳೂರಿನ ನಮ್ಮ ಮೆಟ್ರೋಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಗೆಳೆಯರು ಮತ್ತೊಮ್ಮೆ ಪತ್ರ ಬರೆದಿದ್ದಾರೆ. ಅವರಿಗೆ ನಮ್ಮ ಮೆಟ್ರೋ ಅಧಿಕಾರಿಗಳಿಂದ ಇದುವರೆವಿಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ. ಸರಿ... ಇವರೂ ನೋಡೋ ತನಕಾ ನೋಡಿದಾರೆ, ಕೊನೆಗೆ ಮೇಲ್ಮನವಿ ಸಲ್ಲಿಸೇ ಬಿಡೋಣ ಎಂದು ತೀರ್ಮಾನಿಸಿ ಮೆಟ್ರೋ ಕಚೇರಿಗೆ ಭೇಟಿ ಕೊಟ್ಟರಂತೆ.

"ನಮ್ಮ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ಆರ್.ಟಿ.ಐಗೆ ಇನ್ನೂ ಉತ್ತರಿಸಿಲ್ಲ" ಎಂದು ತಿಳಿಸಿ, ನಮ್ಮ ಮೆಟ್ರೋದ ಅಪೆಲ್ಲೆಟ್ (ಮೇಳರ್ಜಿ ಸ್ವೀಕರಿಸುವ) ಅಧಿಕಾರಿಗಳಿಗೆ ಮೊದಲನೇ ಮೇಲ್ಮನವಿಯನ್ನು ಸಲ್ಲಿಸಲು ತೀರ್ಮಾನಿಸಿದ್ದಾರೆ. ಅದರಂತೆಯೇ ನಿನ್ನೆ ಅಂದರೆ ೧೪.೧೧.೨೦೧೧ರಂದು ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯ ಅನ್ವಯವಾಗಿ ಮೊದಲ ಮೇಲ್ಮನವಿಗೆ ಮೂವತ್ತು ದಿನಗಳ ಒಳಗೆ ಉತ್ತರಿಸಬೇಕಾಗಿದೆ. ಇನ್ನು ಹದಿನೈದು ದಿನಗಳ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬಹುದಾಗಿದ್ದರೂ ಅದಕ್ಕೆ ಸೂಕ್ತ ಕಾರಣವನ್ನು ತೋರಿಸಬೇಕಾಗಿರುತ್ತದೆ. ಈ ಮೇಲ್ಮನವಿಗೂ ನಮ್ಮ ಮೆಟ್ರೋ ಸ್ಪಂದಿಸದಿದ್ದರೆ ಕೇಂದ್ರ/ ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ಸಲ್ಲಿಸಬಹುದಾಗಿರುತ್ತದೆ.

"ನೋಡೋಣ... ಮೆಟ್ರೋ ಅಧಿಕಾರಿಗಳು ಎಲ್ಲಿಯವರೆಗೆ ಇದನ್ನು ಒಯ್ಯುತ್ತಾರೆಂದು..." ಎಂದು ಅರ್ಜಿದಾರರು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ನಿರ್ಣಯಗಳೂ... ಭಾರತದ ಭಾಶಾನೀತಿಯೂ...

(ಫೋಟೋ ಕೃಪೆ : ಕನ್ನಡಪ್ರಭ)
ಕಳೆದ ಮೂರು ದಿನದಿಂದ ಗಂಗಾವತಿಯಲ್ಲಿ ನಡೆಯುತ್ತಿದ್ದ ಕನ್ನಡದ ನುಡಿಹಬ್ಬಕ್ಕೆ ನಿನ್ನೆ ತೆರೆ ಬಿದ್ದಿದೆ. ಲಕ್ಷಾಂತರ ಜನರು ಸೇರಿದ್ದ ಈ ಸಮ್ಮೇಳನದ ಉದ್ಘಾಟನೆಯ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಶ್ರೀ ಸಿ.ಪಿ.ಕೆ ಯವರು ಮಾಡಿದ ಭಾಷಣ ಕೇಳಿ ಅಂತೂ ಭಾರತದ ಹುಳುಕಿನ ಭಾಶಾನೀತಿಯ ಬಗ್ಗೆ ಸಾಹಿತ್ಯ ಸಮ್ಮೇಳನವು ದನಿ ಎತ್ತಿರುವುದು ಅರ್ಥಪೂರ್ಣವಾಗಿದೆ ಎನ್ನಿಸಿತ್ತು.

ಮೊದಲ ದಿನದ ಭಾಷಣದಲ್ಲಿ...

(ಫೋಟೋ ಕೃಪೆ : ಉದಯವಾಣಿ)
ಮೊದಲ ದಿನದ ಭಾಷಣದಲ್ಲಿ ಸಿಪಿಕೆಯವರು ಕನ್ನಡಕ್ಕೆ ಐದು ಕಂಟಕಗಳಿವೆ ಎಂದು ಹೆಸರಿಸಿದ್ದರು. ಈ ಐದು ಪಂಚ ಮಹಾ ಕಂಟಕಗಳಲ್ಲಿ ಮೂರನೆಯದಾಗಿ ಕಾಣಿಸಿಕೊಂಡಿದ್ದು ಭಾರತದ ಹುಳುಕಿನ ಭಾಶಾನೀತಿಗೆ ಸಂಬಂಧಿಸಿದ್ದ ಈ ಮಾತುಗಳು:-

ಇಂಗ್ಲೀಶ್ ಮರದ ದೊಣ್ಣೆ ಹಿಂದೀ ಕಬ್ಬಿಣದ ದೊಣ್ಣೆ. ನಮಗೆ ಇಂಗ್ಲೀಶಿಗಿಂತ ಹಿಂದೀಯೇ ಅಪಾಯಕಾರಿ. ಕೇಂದ್ರಸರ್ಕಾರ ಹಿಂದಿಯನ್ನು ಹೇರುತ್ತಿದೆ. ಕರ್ನಾಟಕದ ಎಲ್ಲಾ ಕೇಂದ್ರಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ಕಡ್ಡಾಯವಾಗಿ ಸಿಗಬೇಕು.

ನಿಜವಾಗಿ ನೋಡಿದರೆ ನುಡಿಹಬ್ಬವು ಕನ್ನಡ ನುಡಿಗೆ, ನುಡಿಯ ಸಾಹಿತ್ಯಕ್ಕೆ ಸಂಬಂಧ ಪಟ್ಟಿದ್ದಾಗಿದೆ. ಇದರಲ್ಲಿ ಭಾಶೆಗೆ ತಗುಲಿರುವ ಅಪಾಯದ ಬಗ್ಗೆ ಎಚ್ಚರಿಸುವಂತಹ, ಭಾಶೆಯ ಏಳಿಗೆಗೆ ಬೇಕಿರುವ ವಿಷಯಗಳ ಬಗ್ಗೆಯಂತೂ ಪ್ರಮುಖವಾಗಿ ಚರ್ಚೆಯಾಗಬೇಕಾಗಿದೆ. ಹಾಗಾಗಿ ನಾಳಿನ ಕನ್ನಡ ನುಡಿಯ, ಜನರ ಅಸ್ತಿತ್ವಕ್ಕೆ ಮಾರಕವಾಗಿರುವ ಭಾರತದ ಭಾಶಾನೀತಿಯ ಬಗ್ಗೆ ಸಮ್ಮೇಳನದಲ್ಲಿ ದನಿ ಎತ್ತಿದ್ದು ಅರ್ಥಪೂರ್ಣವೇ ಆಗಿತ್ತು.

ಸಿ ಪಿ ಕೆಯವರು ಈ  ವಿಷಯದ ಬಗ್ಗೆ ಮಾತಾಡಿದ್ದು ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಒಂದು ಮಹತ್ವದ ಬೆಳವಣಿಗೆಯಾಗಿದೆ. ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ದನಿ ಎತ್ತಿದ್ದು, ಶಾಸ್ತ್ರೀಯ ಭಾಶೆಯ ಸ್ಥಾನಮಾನದ ಬಗ್ಗೆ, ಅದಕ್ಕಾಗಿ ರೂಪಿಸುವ ಯೋಜನೆಗಳ ಬಗ್ಗೆ ಮಾತಾಡಿದ್ದು ಪ್ರಸ್ತುತವೇ ಆಗಿದೆ.

ನಿರ್ಣಯಗಳಲ್ಲಿ ಕಾಣದಾದ ಮೊದಲ ದಿನದ ನಿಲುವು!

ಮೂರನೇ ದಿನ ಕೈಗೊಳ್ಳಲಾದ ನಿರ್ಣಯಗಳನ್ನು ಗಮನಿಸಿ ನೋಡಿದರೆ, ಸಮ್ಮೇಳನವು ಇನ್ನಷ್ಟು ಮೂಲಭೂತವಾದ ಗಂಭೀರವಾದ ನಿರ್ಣಯಗಳನ್ನು ಕೈಗೊಳ್ಳಬೇಕಿತ್ತು ಅನ್ನಿಸದಿರದು. ಶಾಲೆಗಳ ಮುಚ್ಚುವಿಕೆಯ ವಿರುದ್ಧವಾದ ನಿಲುವು ಅಷ್ಟಕ್ಕೇ ಸೀಮಿತವಾಗದೆ ಮತ್ತಷ್ಟು ಮೇಲುಸ್ತರದಲ್ಲಿದ್ದು ಕರ್ನಾಟಕದಲ್ಲಿ ತಾಯ್ನುಡಿ ಕಲಿಕೆಯನ್ನು ಬಲಗೊಳಿಸುವುದರತ್ತ ಸಲಹೆ ನೀಡುವಂತೆ ಇರಬೇಕಿತ್ತು. ಹಾಗೆ ಕನ್ನಡ ಮತ್ತಿತರ ಹಿಂದೀಯೇತರ ಭಾಷೆಗಳ ಅಳಿವಿಗೆ ಕಾರಣವಾಗಿರುವ "ಭಾರತದ ಹುಳುಕಿನ ಭಾಷಾನೀತಿ" ಬದಲಾಗಬೇಕು ಎನ್ನುವ ನಿರ್ಣಯವೂ ಇರಬೇಕಿತ್ತು ಅನ್ನಿಸದಿರದು. ಇಂದು ಕರ್ನಾಟಕ, ನಾಳೆ ಒಂದೊಂದೇ ಭಾಷಿಕ ಜನಾಂಗಗಳು ಈ ಹುಳುಕಿನ ಭಾಶಾನೀತಿಯ ಬಗ್ಗೆ, ಹಿಂದೀ ಹೇರಿಕೆಯ ಬಗ್ಗೆ ದನಿ ಎತ್ತಿ ಇದನ್ನು ತಮ್ಮ ತಮ್ಮ ರಾಜ್ಯಗಳ ರಾಜಕಾರಣದ ಕೇಂದ್ರ ವಿಷಯವನ್ನಾಗಿಸಿದಾಗ, ಭಾರತವು ತನ್ನ ಕೆಟ್ಟ ಭಾಶಾನೀತಿಯನ್ನು ಕೈಬಿಟ್ಟು, ಸಮಾನತೆಯ, ಸಮಾನ ಅವಕಾಶದ, ಸಮಗೌರವದ ಭಾಷಾ ನೀತಿಯನ್ನು ರೂಪಿಸಲು ಮುಂದಾದೀತು. ಹೌದಲ್ವಾ ಗುರೂ!

ಗಂಗಾವತಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಳಗದ ಮಳಿಗೆ!

೭೮ನೇ ಕನ್ನಡ ನುಡಿಹಬ್ಬವು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಇದೇ ತಿಂಗಳ ೯ನೇ ತಾರೀಕಿನಂದು ಶುರುವಾಗಲಿದೆ. ಈ ಬಾರಿಯೂ ಅನೇಕ ಗೋಷ್ಟಿಗಳನ್ನು ಏರ್ಪಡಿಸಿದ್ದಾರೆ. ನಾಡಿನ ಸಾಹಿತ್ಯ ರಂಗದ ದಿಗ್ಗಜರು ಸೇರಲಿದ್ದಾರೆ. ಈ ಸಂದರ್ಭದಲ್ಲೊಂದು ಹೊತ್ತಗೆ ಮೇಳವನ್ನೂ ಆಯೋಜಿಸಿದ್ದಾರೆ.

ಸಾಹಿತ್ಯ ಸಮ್ಮೇಳನದಲ್ಲಿ ಬಳಗದ ಮಳಿಗೆ

ಬನವಾಸಿ ಬಳಗವೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದು ನಮ್ಮದೊಂದು ಮಳಿಗೆಯನ್ನು ಅಲ್ಲಿ ಇಡುತ್ತಿದ್ದೇವೆ. ಬನವಾಸಿ ಬಳಗ ಪ್ರಕಾಶನದ ಹೊತ್ತಗೆಗಳ ಜೊತೆಯಲ್ಲಿ ನಾಡೋಜ ಡಾ. ಡಿ ಎನ್ ಶಂಕರಭಟ್ಟರ ಹೊತ್ತಗೆಗಳನ್ನೂ ಅಲ್ಲಿ ರಿಯಾಯಿತಿ ದರದಲ್ಲಿ ಮಾರಲಿದ್ದೇವೆ.

ಶಂಕರಭಟ್ಟರ ಹೊಸ ಹೊತ್ತಗೆ!

ಡಾ. ಡಿ ಎನ್ ಶಂಕರಭಟ್ಟರ ಹೊಸ ಹೊತ್ತಗೆ "ಮಾತು ಮತ್ತು ಬರಹದ ನಡುವಿನ ಗೊಂದಲ"ವನ್ನು ನಮ್ಮ ಮಳಿಗೆಯಲ್ಲಿ ಮಾರಾಟಕ್ಕೆ ಇಡಲಿದ್ದೇವೆ. ಈ ಹೊತ್ತಗೆಯು ಈ ಮೂಲಕ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ. ನುಡಿ ಅಧ್ಯಯನದ ಹೊಸ ಕಂಡುಕೊಳ್ಳುವಿಕೆಯ ಬಗ್ಗೆ ಇರುವ ಅನೇಕ ಗೊಂದಲಗಳಿಗೆ/  ಪ್ರಶ್ನೆಗಳಿಗೆ ಈ ಹೊತ್ತಗೆಯಲ್ಲಿ ಭಟ್ಟರು ಸಮರ್ಪಕವಾಗಿ ಉತ್ತರಿಸಿದ್ದಾರೆ.

ನೀವೂ ಬನ್ನಿ, ಸಮ್ಮೇಳನದಲ್ಲಿ ಪಾಲ್ಗೊಳ್ಳಿ...
  
ಮಳಿಗೆ ಸಂಖ್ಯೆ: ೩೭೬ಕ್ಕೆ ಭೇಟಿ ನೀಡಿರಿ.

ನಮ್ಮ ಮೆಟ್ರೋ ಆರ್.ಟಿ.ಐ: ಇನ್ನೂ ಬಾರದ ಉತ್ತರ!

(ಚಿತ್ರ ಕೃಪೆ: www.justkannada.in )
ತಿಂಗಳ ಹಿಂದೆ ಓದುಗರೊಬ್ಬರು ನಮ್ಮ ಮೆಟ್ರೋದಲ್ಲಿ ಬಳಸುತ್ತಿರುವ ಭಾಷಾನೀತಿಯ ಬಗ್ಗೆ ಮಾಹಿತಿ ಕೋರಿ ಒಂದು ಆರ್.ಟಿ.ಐ ಸಲ್ಲಿಸಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಲಾದ ಆ ಅರ್ಜಿಗೆ ಮೂವತ್ತು ದಿನಗಳು ಮುಗಿದ ನಂತರವೂ ಇನ್ನೂ ಯಾವ ಉತ್ತರ ಬಂದಿಲ್ಲ ಎಂದು ಅರ್ಜಿದಾರರು ಏನ್ ಗುರುವಿಗೆ ಬರೆದು ತಿಳಿಸಿದ್ದಾರೆ.
ಮಾಹಿತಿ ಹಕ್ಕು ಮತ್ತು ತಡವಾದ ಉತ್ತರ!

ಮಾಹಿತಿ ಹಕ್ಕು ಕಾಯ್ದೆ - ೨೦೦೫ರ ಅನ್ವಯ ಸಲ್ಲಿಸಲಾದ ಅರ್ಜಿಗೆ ಸಂಬಂಧಪಟ್ಟ ಅಧಿಕಾರಿಗಳು ಮೂವತ್ತು ದಿನಗಳ ಒಳಗೆ ಉತ್ತರ ನೀಡಬೇಕಾಗಿದೆ. ಹಾಗೆ ಉತ್ತರ ನೀಡದಿರುವುದು ನಿರಾಕರಣೆಗೆ ಸಮಾನವೆಂದೇ ಪರಿಗಣಿತವಾಗುತ್ತದೆ ಎನ್ನುತ್ತದೆ ಕಾನೂನು. ಆರ್.ಟಿ.ಐ ಮನವಿಯನ್ನು ನಿರಾಕರಿಸಿದ ಪಕ್ಷದಲ್ಲಿ ಅದಕ್ಕೆ ಕಾರಣವನ್ನಾದರೂ ಮೂವತ್ತು ದಿನಗಳ ಒಳಗೆ ನಮ್ಮ ಮೆಟ್ರೋ ತಿಳಿಸಬೇಕಿರುತ್ತದೆ. ಹಾಗೆ ನಿರಾಕರಿಸೋದಕ್ಕೆ ಕಾಯ್ದೆಯ ಪ್ರಕಾರ ಕೆಲವು ಕಾರಣಗಳಿವೆ.

ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿದ್ದರೆ, ಭದ್ರತೆ, ಏಕತೆಗ ಧಕ್ಕೆ ತರುವಂತಿದ್ದರೆ...
ಯಾವುದೇ ನ್ಯಾಯಾಲಯ ಅಂತಹ ಮಾಹಿತಿ ನೀಡುವುದನ್ನು ನಿಶೇಧಿಸಿದ್ದಲ್ಲಿ...
ಸಂಸತ್ತಿನ/ ವಿಧಾನಮಂಡಲದ ಹಕ್ಕುಚ್ಯುತಿಗೆ ಕಾರಣವಾಗುವುದಿದ್ದಲ್ಲಿ...
ರಹಸ್ಯ ವಾಣಿಜ್ಯ ಒಪ್ಪಂದ, ಮೂರನೆಯವರ ಸ್ಪರ್ಧಾತ್ಮಕತೆಗೆ ತೊಡಕುಂಟುಮಾಡುವುದಿದ್ದಲ್ಲಿ...
ಅಂತಹ ಮಾಹಿತಿಯನ್ನು ನೀಡುವುದನ್ನು ನಿರಾಕರಿಸಬಹುದಾಗಿದೆ. ಇಷ್ಟೇ ಅಲ್ಲದೆ ಇನ್ನೂ ಕೆಲವು ಕಾರಣಗಳಿವೆ... ಒಟ್ಟಾರೆ ನಮ್ಮ ಮೆಟ್ರೋ ಮಾಹಿತಿ ನೀಡುವುದನ್ನು ನಿರಾಕರಿಸುವುದಾದರೂ ಅದಕ್ಕೆ ಸೂಕ್ತ ಕಾರಣವನ್ನು ಕೊಡಬೇಕಾಗುತ್ತದೆ. ಹಾಗೆ ಕಾರಣವನ್ನೂ ನೀಡದೆ, ಉತ್ತರವನ್ನೂ ನೀಡದೆ ಸುಮ್ಮನಿರಲಂತೂ ಕಾಯ್ದೆ ಅವಕಾಶ ಮಾಡಿಕೊಡುವುದಿಲ್ಲ.

ಹಾಗಾಗಿ ಸದರಿ ಆರ್.ಟಿ.ಐಗೆ ಉತ್ತರವಿನ್ನೂ ಬಂದಿಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದರೆ ಮೊದಲನೇ ಮೇಲ್ಮನವಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. 
Related Posts with Thumbnails