ವಿಧಾನಸಭಾ ಸ್ಪೀಕರ್ ಲೋಕಸಭಾ ಸ್ಪೀಕರ್ ಅಧೀನವೇ?


ಇವತ್ತಿನ ದಿವಸ ಒಂದು ವಿಚಿತ್ರ ಎನ್ನಿಸೋ ಘಟನೆ ನಮ್ಮ ನಾಡಲ್ಲಿ ನಡೆಯಿತು. ಭಾರತೀಯ ಜನತಾ ಪಕ್ಷದ ಕೆಲವು ಶಾಸಕರು ರಾಜೀನಾಮೆಯನ್ನು ಸಲ್ಲಿಸಿದ್ದನ್ನು ಸ್ವೀಕರಿಸಿದ ಸ್ಪೀಕರ್ ಶ್ರೀ ಬೋಪಯ್ಯನವರು ಈ ವಿಷಯವಾಗಿ ಲೋಕಸಭೆಯ ಸ್ಪೀಕರ್ ಆದ ಗೌರವಾನ್ವಿತರಾದ ಶ್ರೀಮತಿ ಮೀರಾಕುಮಾರ್ ಅವರಿಗೆ ಪತ್ರ ಕಳಿಸಿ ಅವರ ಉತ್ತರಕ್ಕಾಗಿ ಕಾದಿರುವುದಾಗಿ ತಿಳಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದನ್ನು ನೋಡಿದರೆ ಮಹಾರಾಣಿಯೆದುರು ಮಂಡಿಯೂರಿ ಆದೇಶಕ್ಕೆ ಕಾದ ಸಾಮಂತರಾಜರ ನೆನಪಾಗುತ್ತದೆ!! 

ಸಾಮಂತ ದೊರೆಯೇ ಸ್ಪೀಕರ್?!

ಇದೊಳ್ಳೇ ಕಥೆಯಾಯ್ತಲ್ಲಾ ಗುರೂ! ಭಾರತೀಯ ಸಂವಿಧಾನವೇ ಸರಿಯಾದ ಒಕ್ಕೂಟ ವ್ಯವಸ್ಥೆಯತ್ತ ಸಾಗಬೇಕಾಗಿದೆ ಎಂದು ಜನ ಮಾತಾಡುತ್ತಿದ್ದಾಗ, ರಾಜಕೀಯ ಪಕ್ಷಗಳು ನಿಧಾನವಾಗಾದರೋ ದನಿ ಎತ್ತುತ್ತಿರುವಾಗ... ಈ ಆಶಯಕ್ಕೆ ವಿರುದ್ಧವಾಗಿ ಸಾಮಂತರಂತೆ ನಮ್ಮ ಸ್ಪೀಕರ್ ಯಾಕೆ ನಡೆದುಕೊಳ್ಳುತ್ತಿದ್ದಾರೆ ಎನ್ನಿಸುತ್ತಿದೆ. ರಾಜ್ಯಸಭೆಯಾಗಲೀ, ಲೋಕಸಭೆಯಾಗಲೀ, ವಿಧಾನಸಭೆಯಾಗಲೀ... ಈ ಸಭಾಧ್ಯಕ್ಷ ಸ್ಥಾನ ಎನ್ನುವುದು ಒಂದು ಲೆಕ್ಕದಲ್ಲಿ ಸ್ವತಂತ್ರ್ಯಪೂರ್ಣ ಗೌರವದ ಹುದ್ದೆ! ಇದರಲ್ಲಿ ಕುಳಿತವರ ಹೊಣೆಗಾರಿಕೆಗಳು ಮತ್ತು ಇದಕ್ಕಿರುವ ಗೌರವಗಳು ಅಪಾರ. ಇಂಥಾ ಹುದ್ದೆಯಲ್ಲಿ ಕುಳಿತ ವ್ಯಕ್ತಿಗೆ ಸಂವಿಧಾನವೇ ಅರ್ಥವಾದಂತಿಲ್ಲ! ರಾಜ್ಯದ ಯಾವುದೋ ಶಾಸಕ ರಾಜಿನಾಮೆ ನೀಡಿದರೆ ಲೋಕಸಭೆಯ ಸ್ಪೀಕರ್ ಏನು ಮಾಡಲಾಗದು ಎನ್ನುವ ಪರಿಜ್ಞಾನವೇ ಇಲ್ಲದವರಂತೆ ಲೋಕಸಭೆಯ ಸ್ಪೀಕರ್‌ಗೆ ಇವರು ಪತ್ರ ಕಳಿಸಿರುವುದು ನಿಜಕ್ಕೂ ಅಚ್ಚರಿಯ ವಿಷಾದ!! ಗೌರವಾನ್ವಿತ ಸ್ಪೀಕರ್ ಅವರಿಗೆ ತಮ್ಮ ಸ್ಥಾನದ ವ್ಯಾಪ್ತಿ, ಶಕ್ತಿ, ಗೌರವಗಳ ಬಗ್ಗೆ ಅರಿವೇ ಇಲ್ಲದಂತೆ ಇದು ಕಾಣುತ್ತಿದೆ. ಇವರು ದೆಹಲಿ ಸಾಮಂತರಂತೆ ನಡೆದುಕೊಳ್ಳಲು ಮುಂದಾಗಿದ್ದಾರೆ ಎನ್ನಿಸುತ್ತದೆ. ಬಹುಶಃ ರಾಷ್ಟೀಯ ಪಕ್ಷಗಳ ವ್ಯವಸ್ಥೆಯಲ್ಲಿ ಬಹಳ ಕೇಳಿಬರುವ, ಆ ಪಕ್ಷದ ಎಲ್ಲರನ್ನೂ ಹಿಡಿತದಲ್ಲಿಟ್ಟುಕೊಂಡು ಹೇಳಿದಂತೆ ಕೇಳಿಸಿಕೊಳ್ಳುವ ಪದ "ದೆಹಲಿ ಹೈಕಮಾಂಡ್" ಎನ್ನುವುದು. ಶ್ರೀಯುತರ ಅರಿವಿನಲ್ಲಿ ರಾಜ್ಯಗಳು ದೆಹಲಿಯ ಅಧೀನ, ರಾಜ್ಯಸರ್ಕಾರಗಳು ಕೇಂದ್ರಸರ್ಕಾರದ ಅಧೀನ, ಶಾಸಕರು ಸಂಸದರ ಅಧೀನ ಮತ್ತು ವಿಧಾನಸಭೆಯ ಸ್ಪೀಕರ್ ಲೋಕಸಭೆಯ ಅಧೀನ ಎಂದಿರಬೇಕು!! ಒಟ್ಟಲ್ಲಿ ಇವತ್ತಿನ ಪ್ರಹಸನ ನಮ್ಮ ರಾಜಕಾರಣಿಗಳು, ರಾಜಕೀಯ ಪಕ್ಷಗಳು "ದೆಹಲಿ" "ಹೈಕಮಾಂಡ್" "ಗುಲಾಮಗಿರಿ" ಇವುಗಳಿಗೆ ಒಗ್ಗಿಹೋಗಿವೆಯೇನೋ ಎನ್ನುವ ಅನುಮಾನಕ್ಕೆ ಕಾರಣವಾಗಿದೆ!

ಕನ್ನಡಿಗರಿಗೆ ಕಹಿಯಾದ ಆರ್‌ಬಿಐ ನ ಬಿಟ್ಟಿ ಸಲಹೆ ಮತ್ತು ಕಾಫಿ ಡೇ ಕಾಫಿ!


ಇತ್ತೀಚಿಗೆ ನಡೆದ ಎರಡು ಘಟನೆಗಳು ನಾಡಿನಲ್ಲಿ ಕನ್ನಡದ ಸ್ಥಾನಮಾನಕ್ಕೆ ಮತ್ತು ಈ ದೇಶದ ವ್ಯವಸ್ಥೆಗಳಿಗೆ ಕನ್ನಡಿಗರ ಬಗ್ಗೆ ಇರುವ ಉದಾಸೀನತೆಗೆ ಉದಾಹರಣೆಯಾಗಿವೆ.

ಕೆಫೆ ಕಾಫಿಡೇನಲ್ಲಿ ಕನ್ನಡ ಹಾಡು ಕೇಳುವಂತಿಲ್ಲ!

ಕೆಲವು ಕನ್ನಡಿಗರು ಇತ್ತೀಚಿಗೆ ಕೆಫ಼ೆ ಕಾಫಿಡೇ ಎನ್ನುವ ಸರಣಿಯಂಗಡಿಯ ಒಂದು ಮಳಿಗೆಗೆ ಹೋಗಿದ್ದರಂತೆ. ಅದೂ   ಅರಸೀಕೆರೆಯ ಒಂದು ಅಂಗಡಿಗೆ. ಅಲ್ಲಿಗೆ ಬಂದ ಗಿರಾಕಿಗಳನ್ನು ಮನರಂಜಿಸುವ ಉದ್ದೇಶದಿಂದ ಹಾಡುಗಳನ್ನು ಹಾಕಿದ್ದರಂತೆ. ಆ ಹಾಡುಗಳು ಹಿಂದೀ ಹಾಡುಗಳಾಗಿದ್ದವಂತೆ. ಸರಿ.. ಈ ಗ್ರಾಹಕರು ಕನ್ನಡ ಹಾಡುಗಳನ್ನು ಹಾಕಲು ಮನವಿ ಮಾಡಿಕೊಂಡದ್ದಕ್ಕೆ ಮಳಿಗೆಯವರು ಹಾಗೆ ಹಾಕಲು ತಮಗೆ ಕೇಂದ್ರ ಕಚೇರಿಯಿಂದ ಅನುಮತಿಯಿಲ್ಲ ಎಂದು ಮಾರುತ್ತರ ನೀಡಿದರಂತೆ. ಇದರಿಂದ ಆಘಾತಗೊಂಡ ಇವರು ತಮ್ಮ ಅನುಭವವನ್ನು ಏನು ಗುರುವಿನೊಂದಿಗೆ ಹಂಚಿಕೊಂಡರು. ನಂತರ ಕಾಫಿ ಡೇ ಸಂಸ್ಥೆಗೆ ಕನ್ನಡದ ಹಾಡುಗಳನ್ನು ಹಾಕಲು ಕೇಳಿಕೊಂಡು ಪತ್ರ ಬರೆದಿದ್ದಾರೆ. ಇವರಷ್ಟೇ ಅಲ್ಲದೇ ಇವರೊಂದಿಗೆ ದನಿಗೂಡಿಸಿ ನೂರಾರು ಮಂದಿ ಕೆಫೆ ಕಾಫಿಡೇ ಮಳಿಗೆಗಳಲ್ಲಿ ಕನ್ನಡದ ಹಾಡುಗಳನ್ನು ಹಾಕಲು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಕೆಫಿ ಕಾಫಿ ಡೇ ಸಂಸ್ಥೆಯ ಅಧಿಕಾರಿಗಳು ನೀಡಿರುವ ಉತ್ತರ ದಂಗು ಬಡಿಸುವಂತಿದೆ.

ನಮ್ಮ ಸಂಸ್ಥೆಯು ಭಾರತದಲ್ಲಿ ನಾನಾ ಕಡೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲೆಡೆ ಒಂದೇ ರೀತಿಯ ಒಳಾಂಗಣ ವಾತಾವರಣವನ್ನು ರೂಪಿಸಿಕೊಂಡಿದ್ದು, ಭಾರತದ ಎಲ್ಲಾ ೧೨೦ ಊರುಗಳಲ್ಲಿಯೂ ಹಿಂದೀ ಮತ್ತು ಇಂಗ್ಲೀಶ್ ಸಂಗೀತವನ್ನು ಮಾತ್ರಾ ಹಾಕುತ್ತೇವೆ ಮತ್ತು ಪ್ರಾದೇಶಿಕ ಭಾಷೆಗಳ ಸಂಗೀತವನ್ನು ಹಾಕುವುದಿಲ್ಲ..
ಎಂದು ಉತ್ತರಿಸಿದ್ದಾರೆ.

ಚೆಕ್ಕುಗಳನ್ನು ತುಂಬಲು ಹಿಂದೀ/ ಇಂಗ್ಲೀಶ್ ಪ್ರವೀಣರಾಗಬೇಕಂತೆ!

ಸಿಟಿಬ್ಯಾಂಕಿನಲ್ಲಿ ಹಿಂದೀ ಮತ್ತು ಇಂಗ್ಲೀಶುಗಳಲ್ಲಿ ಮಾತ್ರಾ ಚೆಕ್ಕುಗಳನ್ನು ಅಚ್ಚು ಹಾಕಿರುವುದರ ಬಗ್ಗೆ ಗ್ರಾಹಕರೊಬ್ಬರು ದೂರಿ, ಕನ್ನಡದಲ್ಲೂ ಚೆಕ್ಕುಗಳನ್ನು ಅಚ್ಚು ಹಾಕಿಸಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಬ್ಯಾಂಕಿನ ಅಧಿಕಾರಿಗಳು ಹೀಗೆ ಉತ್ತರ ನೀಡಿದ್ದಾರೆ.
ನಮಗೆ ರಿಜರ್ವ್ ಬ್ಯಾಂಕಿನಿಂದ ಬಂದಿರುವ ಜುಲೈ ೨೦೧೧ರ ಸೂಚನೆಯಂತೆ ಹಿಂದೀ/ ಇಂಗ್ಲೀಶುಗಳಲ್ಲಿ ಮಾತ್ರಾ ಚೆಕ್ಕುಗಳನ್ನು ಮುದ್ರಿಸಿದ್ದೇವೆ.
ಸರಿ, ಮತ್ತೊಬ್ಬ ಗ್ರಾಹಕರು ಭಾರತೀಯ ರಿಜರ್ವ್ ಬ್ಯಾಂಕಿಗೇ ಬರೆದು ಕೇಳಿದಾಗ ಅವರು ನೀಡಿದ ಉತ್ತರ ಹೀಗಿದೆ:

Key fields in a cheque are Name and Amount for which proficiency in English/ Hindi is required whereas for other fields such as date and account number which are numerical the same is not required The format of a cheque with payee’s name and amount is standard. Hence it is felt no need to print cheques in a trilingual format, unlike other printed material.
ಇದೇ ವಿಷಯವಾಗಿ ರಿಜರ್ವ್ ಬ್ಯಾಂಕಿನ ಒಂಬುಡ್ಸ್‍ಮೆನ್ ಅವರಿಗೆ ದೂರು ಸಲ್ಲಿಸಿದಾಗ ದೂರನ್ನು ತಿರಸ್ಕರಿಸಿ, ಬೇಕಾದರೆ ಯಾವುದಾದರೂ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಉತ್ತರಿಸಿದ್ದಾರೆ.

ಸಮಸ್ಯೆಯ ಮೂಲವಿರುವುದು ಸಂವಿಧಾನದಲ್ಲಿ

ಭಾರತದಲ್ಲಿ ಕನ್ನಡಿಗರು ಇರೋದು ಬರೀ ೫%. ಅಂದರೆ ಇಲ್ಲಿ ಭಾಷಿಕ ಅಲ್ಪಸಂಖ್ಯಾತರು. ಹಾಗಾಗಿ ಅಲ್ಪಸಂಖ್ಯಾತರಿಗೆ ಬದುಕುವ ಹಕ್ಕಿಲ್ಲಾ ಎಂದು ಭಾರತದ ವ್ಯವಸ್ಥೆಗಳು ತೀರ್ಮಾನಿಸಿರುವಂತಿದೆ. ಇಲ್ಲಿ ಪ್ರಜಾಪ್ರಭುತ್ವ ಎಂದರೆ "ಬಹುಸಂಖ್ಯಾತರ ಹಿತ ಮಾತ್ರಾ" ಎನ್ನುವುದೇ ಆಗಿರುವುದನ್ನು ಇದು ಎತ್ತಿ ತೋರಿಸುತ್ತಿದೆ. ಇದಕ್ಕೆಲ್ಲಾ ಮೂಲಕಾರಣವೇ ಭಾರತದ ಹುಳುಕಿನ ಭಾಷಾನೀತಿ. ಈ ದೇಶದಲ್ಲಿ ಹಿಂದೀ/ ಇಂಗ್ಲೀಶ್ ಮಾತ್ರವೇ ಆಡಳಿತ ಭಾಷೆಗಳು. ರಾಜ್ಯಗಳಿಗೆ ತಮ್ಮ ಆಯ್ಕೆಯ ಭಾಷೆಯನ್ನು ರಾಜ್ಯದ ಆಡಳಿತ ಭಾಷೆ ಮಾಡಿಕೊಳ್ಳಬಹುದಾದ ಹಕ್ಕನ್ನು... ಪಾಪಾ... ಘನ ಭಾರತ ಸರ್ಕಾರ ಕರುಣೆಯಿಂದ ಬಿಟ್ಟು ಕೊಟ್ಟಿದೆ. ಇಂಥಾ ಹೊಲಸು ವ್ಯವಸ್ಥೆ ಬದಲಾಗದೇ ಹೋದರೆ ನಿಧಾನವಾಗಿ ಕನ್ನಡ ಕೆಲಸಕ್ಕೆ ಬಾರದ ಭಾಷೆಯಾಗಿಬಿಡಲಿದೆ ಅಷ್ಟೇ! ಕರ್ನಾಟಕ ಸರ್ಕಾರವೂ ಸೇರಿದಂತೆ ಎಲ್ಲಾ ರಾಜ್ಯಗಳ ಸಂಸದರೂ, ರಾಜ್ಯಸರ್ಕಾರಗಳೂ ಈ ನಿಟ್ಟಿನಲ್ಲಿ ದನಿಯೆತ್ತಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಭಾರತದ ಎಲ್ಲಾ ರಾಜ್ಯ ಭಾಷೆಗಳಿಗೂ ಆಡಳಿತ ಸ್ಥಾನ ಕೊಡಬೇಕೆಂದು ಒತ್ತಡ ತರಬೇಕಾಗಿದೆ. ಇದನ್ನೆಲ್ಲಾ ಕಂಡಾಗ ಕಡೇಪಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರವೆನ್ನುವ ಹಲ್ಲಿಲ್ಲದ ಹಾವು ಒಂಚೂರು ಭುಸುಗುಟ್ಟಾದರೂ ಭುಸುಗುಟ್ಟಬಾರದೇ ಎಂದನ್ನಿಸಿದರೆ ಅಚ್ಚರಿಯೇನಿಲ್ಲಾ ಗುರೂ!

ಕೊನೆಹನಿ: ಕೆಫೆ ಕಾಫಿ ಡೇ ಎನ್ನುವ ಕನ್ನಡಿಗರದ್ದೇ ಸಂಸ್ಥೆ ಕರ್ನಾಟಕದಲ್ಲೇ ಕನ್ನಡದಲ್ಲಿ ಹಾಡು ಹಾಕಲು ನಿರಾಕರಿಸುತ್ತಿದೆ. ಆದರೆ ಇದೇ ಸಂಸ್ಥೆ ಜ಼ೆಕೋಸ್ಲೋವಿಯಾದಲ್ಲಿ ಕೂಡಾ ಸರಣಿಮಳಿಗೆಗಳನ್ನು ಇತ್ತೀಚಿಗೆ ತೆರೆದು ನಡೆಸುತ್ತಿದೆ. ಅಲ್ಲಿ ಯಾವ ಭಾಷೆಯಲ್ಲಿ ಇದು ಸೇವೆ ನೀಡುತ್ತಿದೆ ಎನ್ನುವುದು ಕುತೂಹಲದ ವಿಷಯ. ಏಕೆಂದರೆ ಆ ದೇಶದ ಜನಸಂಖ್ಯೆ ನಮ್ಮ ಬೆಂಗಳೂರಿನಷ್ಟು ಮಾತ್ರಾ! ಅಂದರೆ ಬರೀ ಒಂದು ಕೋಟಿ ಜನರಿರುವ ದೇಶ ಅದು. ಇನ್ನು ಭಾರತದ ಅನೇಕ ಬ್ಯಾಂಕುಗಳು ಶ್ರೀಲಂಕಾದಂತಹ ದೇಶಗಳಲ್ಲಿ ಯಾವ ಭಾಷೆಯಲ್ಲಿ ಚೆಕ್ಕುಗಳನ್ನು ಅಚ್ಚು ಹಾಕಿಸುತ್ತವೆ ಎನ್ನುವುದು ಕುತೂಹಲದ ವಿಷಯವಾಗಿದೆ. ಕೆಲ ಲಕ್ಷಗಳಷ್ಟು ಜನಸಂಖ್ಯೆಯ ನಾಡುಗಳಲ್ಲಿ ಆಯಾ ಭಾಷೆಗಳಲ್ಲಿ ಸೇವೆ ನೀಡುವ ಇವುಗಳು, ಆರುಕೋಟಿ ಕನ್ನಡಿಗರಿಗಾಗಿ ಕನ್ನಡದಲ್ಲಿ ಗ್ರಾಹಕಸೇವೆಯನ್ನು ಕೊಡಲು ಯಾಕೆ ಹಿಂಜರಿಯುತ್ತವೆ ಎನ್ನುವುದು ಕಾಡುತ್ತಿಲ್ವಾ ಗುರೂ!?

‘ಮಂದಿಯಾಳ್ವಿಕೆ’ಯಲ್ಲಿ ಕನ್ನಡಿಗ: ಹೊತ್ತಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ!


ಬನವಾಸಿ ಬಳಗ ಪ್ರಕಾಶನದ ವತಿಯಿಂದ ಬರುವ ಶನಿವಾರದಂದು ಬೆಳಗ್ಗೆ ೧೦ಕ್ಕೆ ಬಸವನಗುಡಿಯ "ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ಼್ ವರ್ಲ್‌ಡ್ ಕಲ್ಚರ್" ಸಂಸ್ಥೆಯ ಬಿ ಪಿ ವಾಡಿಯಾ ಸಭಾಂಗಣದಲ್ಲಿ ನಾಡಿನ ಹೊಸತಲೆಮಾರಿನ ಚಿಂತಕರಾದ ಶ್ರೀ ಕಿರಣ್ ಬಾಟ್ನಿಯವರ "ಮಂದಿಯಾಳ್ವಿಕೆಯಲ್ಲಿ ಕನ್ನಡಿಗ" ಎನ್ನುವ ಹೊತ್ತಗೆಯ ಬಿಡುಗಡೆ ಕಾರ್ಯಕ್ರಮವಿದೆ. ಸನ್ಮಾನ್ಯರಾದ ಶ್ರೀ ಲಕ್ಷ್ಮಣ್ ಹೂಗಾರ್, ಡಾ. ಪಿ ವಿ ನಾರಾಯಣ ಮತ್ತು ಡಾ. ಕೆ ವಿ ನಾರಾಯಣರವರು ಅಂದು ನಮ್ಮೊಡನೆ ಇರಲಿದ್ದಾರೆ. ನೀವೂ ಬನ್ನಿ. ನಮ್ಮ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. 

ಹೊತ್ತಗೆಯ ಬಗ್ಗೆ


ಭಾರತ ದೇಶದಲ್ಲಿನ ಆಡಳಿತದ ಸ್ವರೂಪವು ಪ್ರಜಾಪ್ರಭುತ್ವದ್ದಾಗಿದೆ ಎಂದು ಜಗತ್ತೇ ನಂಬಿದೆ. ಇದು ಚುನಾವಣೆಗಳ ಮೂಲಕ ಜನಪ್ರತಿನಿಧಿಗಳನ್ನು ಆರಿಸುವ ಮೂಲಕವೂ, ಜನಪ್ರತಿನಿಧಿಗಳ ವಿವಿಧ ಹಂತದ ಸಭೆಗಳು ಜಾರಿಯಲ್ಲಿರುವ ಮೂಲಕವೂ ಮೇಲ್ನೋಟಕ್ಕೆ ದಿಟದಂತೆಯೇ ತೋರುತ್ತಿದೆ. ಆದರೆ ವಾಸ್ತವವಾಗಿ ಪ್ರಜಾಪ್ರಭುತ್ವದ ಮೂಲಸೆಲೆಯಾದ ವಿಕೇಂದ್ರಿಕರಣವೆನ್ನುವುದನ್ನು ವಿಡಂಬನೆ ಮಾಡುವಂತೆ ಈ ವ್ಯವಸ್ಥೆಯಿದೆ. ಅಧಿಕಾರವನ್ನು ಜನರ ಹತ್ತಿರಕ್ಕೆ ಒಯ್ಯಬೇಕಾದ ವ್ಯವಸ್ಥೆ ಹೇಗೆ ಜನರಿಂದ ದೂರ ಒಯ್ಯುತ್ತಿದೆ ಎನ್ನುವುದು ಆತಂಕಕಾರಿಯಾದುದಾಗಿದೆ. ರಾಜ್ಯಗಳ ಆಡಳಿತದಲ್ಲಿ ಕೇಂದ್ರದ ಬೇಡದ ಮೂಗುತೂರಿಸುವಿಕೆ, ನಮ್ಮ ಒಳಿತು ಕೆಡುಕುಗಳನ್ನು ಲೆಕ್ಕಕ್ಕಿಟ್ಟುಕೊಳ್ಳದಂತೆ ಮಾಡಲಾಗಿರುವ ಅನೇಕ ನೀತಿ ನಿಯಮಗಳು... ಇವೆಲ್ಲಾ ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ  ಎನ್ನುವುದಿದೆಯೇ ಎನ್ನುವ ಅನಿಸಿಕೆಗೆ ಕಾರಣವಾಗುತ್ತದೆ. ಇದಕ್ಕೆಲ್ಲಾ ಕಾರಣವಾಗಿರುವ ಭಾರತೀಯ ಸಂವಿಧಾನಕ್ಕೆ ತುರ್ತು ಚಿಕಿತ್ಸೆಯ ಅಗತ್ಯ ಇಂದಿರುವುದನ್ನು ಈ ಹೊತ್ತಗೆ ಎತ್ತಿ ತೋರುತ್ತದೆ. ನಿಜವಾದ ಪ್ರಜಾಪ್ರಭುತ್ವ ರೂಪುಗೊಳ್ಳಬೇಕಾದ್ದು ಕನ್ನಡಿಗರ ಏಳಿಗೆಗೆ ಅತ್ಯಂತ ಅಗತ್ಯವಾದುದಾಗಿದೆ.

ಹೀಗೆ ಬದಲಾಗಬೇಕಾದ್ದು ಭಾರತೀಯ ಸಂವಿಧಾನ ಮಾತ್ರವೇ ಅಲ್ಲ, ಇನ್ನೂ ನಮ್ಮ ಸಮಾಜವು ಬದಲಿಸಿಕೊಳ್ಳಬೇಕಾದ ಜಾತಿಯೇರ್ಪಾಡು, ಕಲಿಕೆ ಏರ್ಪಾಡು, ಕಲಿಕೆಯಲ್ಲಿನ ನುಡಿ, ನುಡಿಯ ಕಲಿಕೆಗಳೆಲ್ಲಾ ಇವೆ. ಈ ನಿಟ್ಟಿನಲ್ಲಿ ಕಲಿಕೆ ಮತ್ತು ನುಡಿಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಕಂಡುಕೊಳ್ಳಲಾದ ಕೆಲದಿಟಗಳಲ್ಲಿ ಪ್ರಮುಖವಾದದ್ದು "ಹೊಸಬರಹ". ತೊಡಕಾದ ಬರಹದಿಂದ ಕನ್ನಡಿಗರ ಕಲಿಕೆಗೆ ಆಗಿರುವ ಹಿನ್ನಡೆಗಳನ್ನು ಮೀರಬೇಕೆನ್ನುವ ತುಡಿತದ ಕಾರಣದಿಂದಾಗಿಯೇ ಉಲಿಯುವಂತೆಯೇ ಬರೆಯಬೇಕೆನ್ನುವ ಈ ಹೊಸಬರಹವನ್ನು ಈ ಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ಕನ್ನಡಿಗರ ಉಲಿಕೆಯಲ್ಲಿರದ ಮಹಾಪ್ರಾಣಗಳೂ ಸೇರಿದಂತೆ ಕೆಲವು ಅಕ್ಷರಗಳನ್ನು ಕೈಬಿಡಲಾಗಿದೆ. ಕನ್ನಡದ್ದೇ ಬೇರಿನ ಹತ್ತಾರು ಪದಗಳನ್ನು ಕಟ್ಟಿ ಬಳಸಲಾಗಿದೆ. ಒಟ್ಟಾರೆ ಕನ್ನಡ ಸಮಾಜದ ಏಳಿಗೆಯ ತೀವ್ರ ತುಡಿತವನ್ನು ಈ ಹೊತ್ತಗೆಯಲ್ಲಿ ಕಾಣಬಹುದಾಗಿದೆ.

ಡಬ್ಬಿಂಗ್ ಬೇಡ ಎನ್ನಲು ಈ ಪರಿ ಪೊಳ್ಳುವಾದ ಬೇಕೇ?

"ದೃಶ್ಯ ಮಾಧ್ಯಮದ ಡಬ್ಬಿಂಗ್ ಕನ್ನಡಕ್ಕೆ ಮಾರಕವೋ ಪೂರಕವೋ" ಎಂಬ ಕಾರ್ಯಕ್ರಮ ನಡೆದ ಬಗ್ಗೆ ಏನ್‌ಗುರುವಿನಲ್ಲಿ ಬರೆದಿದ್ದೆವು. ಅದರಲ್ಲಿ ಡಬ್ಬಿಂಗ್ ವಿರೋಧಿಸಿ ಅಭಿಪ್ರಾಯ ಮಂಡಿಸಿದ್ದ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕವರೇಣ್ಯರು ಆಡಿದ ಮಾತುಗಳ ಬಗ್ಗೆ ಮಾತಾಡಿದ್ದೆವು. ನಿನ್ನೆಯ ದಿನದ (೦೭.೦೧.೨೦೧೩ರ) ಕನ್ನಡಪ್ರಭದಲ್ಲಿ ಇದೇ ಕಾರ್ಯಕ್ರಮದ ವರದಿಯಲ್ಲಿ ಮತ್ತಷ್ಟು ಕುತೂಹಲಕಾರಿ ವಿಷಯಗಳಿರುವುದನ್ನು ನಾವು ಗಮನಿಸಬಹುದಾಗಿದೆ!

ಅಪ್ಪಣೆ ಕೊಡೋ ದೊಣೆನಾಯಕರು!

ಹೌದೂ... ಚಿತ್ರರಂಗದ ಈ ದೊಣೇನಾಯಕರಿಗೆ ಪೋಗೋ, ಚಿಂಟು, ಡಿಸ್ಕವರಿ, ಅನಿಮಲ್ ಪ್ಲಾನೆಟ್ ಮೊದಲಾದ ವಾಹಿನಿಗಳು ಮತ್ತು ಅನಿಮೇಶನ್ ಆಧಾರಿತ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಡಬ್ ಮಾಡುವುದಕ್ಕೆ ಅಡ್ಡಿಯಿಲ್ಲವಂತೆ! ಆದರೆ ಚಿತ್ರಗಳನ್ನು ಡಬ್ ಮಾಡುವುದಕ್ಕೆ ಮಾತ್ರಾ ಆಕ್ಷೇಪವಂತೆ!! ಇಷ್ಟಕ್ಕೂ ಡಬ್ಬಿಂಗ್ ಬೇಕು ಎನ್ನುವವರು ಪೋಸ್ಟ್‌ಸಿಂಕ್ರನೈಸಿಂಗ್ ಉಪಕರಣಗಳನ್ನು ನೀಡುವಂತೆ ಥಿಯೇಟರ್‌ನವರನ್ನು ಒತ್ತಾಯಿಸಬೇಕಂತೆ! ಅಂದರೆ ಜನರು ಇಂಥದ್ದನ್ನು ನೋಡಬೇಕು, ಇಂಥದ್ದನ್ನು ನೋಡಬಾರದು, ಇಂಥದ್ದನ್ನು ಕೇಳಬೇಕು, ಇಂಥದ್ದನ್ನು ಕೇಳಬಾರದು ಎಂದು ತೀರ್ಮಾನಿಸುವ ಅಧಿಕಾರವನ್ನು ಇವರಿಗೆ ಅದ್ಯಾರು ಕೊಟ್ಟರೋ ಏನೋ? ಹಿಂದೀ ಸಂಭಾಷಣೆಯು ಕನ್ನಡಕ್ಕೆ ಡಬ್ ಆದಾಗ ತುಟಿ ಚಲನೆ ಹೊಂದುವುದಿಲ್ಲಾ ಎನ್ನುವ ಇವರುಗಳು "ತುಟಿಚಲನೆ ಸರಿ ಇಲ್ಲದಿರುವುದು ಜನರಿಗೆ ಒಪ್ಪಿಗೆಯಾಗದಿದ್ದಲ್ಲಿ ಅಂತಹ ಸಿನಿಮಾಗಳನ್ನು ಒಪ್ಪುವ, ಒಪ್ಪದಿರುವ ಹಕ್ಕನ್ನು ಹೊಂದಿರುತ್ತಾರೆ" ಎನ್ನುವುದನ್ನು ಅದ್ಯಾಕೆ ಮರೆಮಾಚುತ್ತಾರೋ ಗೊತ್ತಿಲ್ಲಾ! ಇಷ್ಟಕ್ಕೂ ಕನ್ನಡ ಸಿನಿಮಾಗಳಲ್ಲಿ ನಟಿಸುವ ಕನ್ನಡಬಾರದ ನಟನಟಿಯರು ಶೂಟಿಂಗ್ ನಡೆಸುವಾಗ ಹೇಗೆ ಸಂಭಾಷಣೆ ಹೇಳುತ್ತಾರೆ ಎನ್ನುವುದನ್ನು ಇವರುಗಳೇ ಹೇಳಲಿ! (ಈ ಪರಭಾಷಾ ನಟರುಗಳು ಎ.ಬಿ.ಸಿ.ಡಿ.... ಅಂತಾನೋ ಮತ್ತೇನೋ ಹೇಳುತ್ತಾ ಶೂಟಿಂಗ್ ಮಾಡಿದ ಉದಾಹರಣೆಗಳೂ ಇವೆಯಂತೆ!). ಯಾಕೆ ಇವರುಗಳು ಹೀಗೆ ಜನರ ಪರವಾಗಿ ತೀರ್ಮಾನ ತೆಗೆದುಕೊಳ್ಳುತ್ತಾ ದೊಣೇನಾಯಕರಾಗುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ!

ವಾದ ಮಾಡಲು ಸುಳ್ಳು ಮಾಹಿತಿ!

ಇನ್ನು ಡಬ್ಬಿಂಗ್ ಬೇಡ ಎನ್ನಲು "ಇಡೀ ಕನ್ನಡ ಭಾಷೆ, ನುಡಿ ಹಾಗೂ ಜನಾಂಗಗಳೇ ಅಪಾಯದಲ್ಲಿವೆ, ಡಬ್ಬಿಂಗ್ ಭೂತ ಬಂದರೆ ಇವೆಲ್ಲಾ ಸರ್ವನಾಶವಾಗುತ್ತದೆ" ಎಂದು ನಾಡನ್ನು ನಂಬಿಸಲು ಅನೇಕ ಅಂಕಿಅಂಶಗಳನ್ನು ನೀಡಲು ಪ್ರಯತ್ನಿಸಿದ್ದಾರೆ. ಈ ಮಾಹಿತಿಗಳಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂದು ನೋಡಬೇಕಾಗಿದೆ. ಕರ್ನಾಟಕದ ಒಟ್ಟು ಜನಸಂಖ್ಯೆ ೨೦೧೧ರ ಜನಗಣತಿಯಂತೆ ಸುಮಾರು ಆರು ಕೋಟಿ ಹನ್ನೊಂದು ಲಕ್ಷದಷ್ಟಿದೆ. ೨೦೦೧ರ ಭಾಷಿಕ ಜನಾಂಗದ ಮಾಹಿತಿಯಂತೆ ಕರ್ನಾಟಕದಲ್ಲಿ ಕನ್ನಡಿಗರ ಒಟ್ಟು ಪ್ರಮಾಣ ನೂರಕ್ಕೆ ೬೬ರಷ್ಟು. ಇದು ಬರೀ ಕನ್ನಡವನ್ನು ತಾಯ್ನುಡಿಯಾಗಿ ಹೊಂದಿರುವವರ ಸಂಖ್ಯೆ! ಇನ್ನು ತುಳು, ಕೊಡವ, ತೆಲುಗು, ತಮಿಳು, ಉರ್ದು ಮೊದಲಾದವುಗಳನ್ನು ತಾಯ್ನುಡಿಯೆಂದು ಜನಗಣತಿಯಲ್ಲಿ ಬರೆಸಿದ ಅದೆಷ್ಟೋ ಲಕ್ಷ ಕನ್ನಡಿಗರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಕರ್ನಾಟಕದಲ್ಲಿ ಇಂದು ಕನ್ನಡಿಗರ ಸಂಖ್ಯೆ ನೂರಕ್ಕೆ ೮೫ಕ್ಕಿಂತ ಹೆಚ್ಚಿದೆ ಅನ್ನಿಸೋಲ್ವಾ ಗುರೂ! ಹೋಗಲಿ ದಾಖಲಾತಿಗಳಂತೆ ನೋಡಿದರೂ ಕನ್ನಡಿಗರ ಸಂಖ್ಯೆ ನೂರಕ್ಕೆ ೭೦ರಷ್ಟಿದೆ. ಇಷ್ಟಕ್ಕೂ ಯಾವ ಹತ್ತೊಂಬತ್ತು ಜಿಲ್ಲೆಗಳಲ್ಲಿ ಪರಭಾಷಿಕರು ಬಹುಸಂಖ್ಯಾತರು ಎನ್ನುವುದನ್ನು ಇವರು ತಿಳಿಸಬಲ್ಲರೇ? ಯಾವ ಅಂಕಿಅಂಶದ ಆಧಾರದ ಮೇಲೆ ಇವರು ಹೇಳುತ್ತಿದ್ದಾರೆ? ನಿಜಕ್ಕೂ ಈ ಸುದ್ದಿಯ ಮಾಹಿತಿ ಮೂಲದ ಬಗ್ಗೆ ಕುತೂಹಲ ಉಂಟಾಗುತ್ತದೆ!!

ಇವರು ಹೇಳಿದ್ದೇ ನಿಜವಾದರೆ...

ಇವರು ಹೇಳಿದ್ದು ನಿಜವೆಂದೇ ಒಪ್ಪುವುದಾದರೆ ಕರ್ನಾಟಕದಲ್ಲಿ ಡಬ್ಬಿಂಗ್ ಬರುವುದರಿಂದ ಏನಾಗುತ್ತದೆ? ಪರಭಾಷಿಕರು ಕೂಡಾ ಕನ್ನಡದಲ್ಲಿ ನೋಡ್ತಾರೆ ಎನ್ನುವುದನ್ನು ಇವರಂತೂ ಒಪ್ಪುವುದಿಲ್ಲಾ! ಆದರೆ ಕಡೇಪಕ್ಷ ಕನ್ನಡಿಗರು ಪರಭಾಷೆಯನ್ನು ಕಲಿಯಬೇಕಾದ ಅನಿವಾರ್ಯತೆಯನ್ನು ಡಬ್ಬಿಂಗ್ ತಪ್ಪಿಸುವುದಿಲ್ಲವೇ? ನೀವುಗಳು "ಕನ್ನಡಿಗರು ಬೇರೆ ಭಾಷೆ ಕಲಿಯೋದನ್ನು  ತಪ್ಪಿಸುತ್ತಿದ್ದೀರಿ" ಎಂದು ಸುಲಭವಾಗಿ ಈ ಜನ ಆರೋಪಿಸುತ್ತಾರೆ. ಆದರೆ ಇಲ್ಲಿ ಯಾರು ತಾನೇ ಬೇರೆ ಭಾಷೆ ಕಲಿಯಬೇಡಿ ಎನ್ನುತ್ತಿದ್ದಾರೆ? ಒಂದೊಳ್ಳೆ ಬೇರೆ ಭಾಷೆಯ ಸಿನಿಮಾ ನೋಡಿ ಅರ್ಥಮಾಡಿಕೊಳ್ಳಬೇಕೆಂದರೆ ಪರಭಾಷೆ ಕಲಿಯಲೇಬೇಕೆನ್ನುವ ಅನಿವಾರ್ಯತೆಯನ್ನು ಹುಟ್ಟುಹಾಕಿರುವುದು ಯಾರು? ಇದಕ್ಕೆ ಕಾರಣ ಕನ್ನಡದಲ್ಲಿ ಡಬ್ಬಿಂಗ್ ಇಲ್ಲದಿರುವುದೇ ಅಲ್ಲವೇ? ಇವರಂದದ್ದು ನಿಜವೇ ಆಗಿದ್ದಲ್ಲಿ, ತಮ್ಮದೇ ನೆಲದಲ್ಲಿ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಕನ್ನಡ ಉಳಿಸಿಕೊಳ್ಳಲು ಡಬ್ಬಿಂಗ್ ಪೂರಕವೇ ಅಲ್ಲವೇ? ಇಲ್ಲಾ ಕನ್ನಡಿಗರು ಡಬ್ಬಿಂಗ್ ನೋಡಲ್ಲಾ ಅನ್ನೋದಾದರೆ ಅದನ್ನು ತೀರ್ಮಾನಿಸಬೇಕಿರೋದು ಯಾರು? ಜನರು ಮಾರುಕಟ್ಟೆಯಲ್ಲಿ ಡಬ್ ಆದ ಸಿನಿಮಾಗಳನ್ನು ನೋಡಿ ಗೆಲ್ಲಿಸುವ ಮೂಲಕ ಅಥವಾ ನೋಡದೆ ಸೋಲಿಸುವ ಮೂಲಕ ತೀರ್ಮಾನಿಸಬೇಕಲ್ಲವೇ? ಒಟ್ಟಾರೆ ಡಬ್ಬಿಂಗ್ ಬೇಡವೆನ್ನುವ ಇವರ ವಾದ ಪೊಳ್ಳೋ, ಗಟ್ಟಿಯೋ ಎನ್ನುವುದನ್ನು ಜನರು ಅರಿಯಲಾರರೇ?!

ಡಬ್ಬಿಂಗ್ ವಿರೋಧಿ ವಾದಗಳ ಪೊಳ್ಳುತನ!


ಕರ್ನಾಟಕ ಕೈಗಾರಿಕೆ ಮತ್ತು ವಾಣಿಜೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಿನ್ನೆ "ಡಬ್ಬಿಂಗ್ ಕನ್ನಡಕ್ಕೆ ಪೂರಕವೋ ಮಾತಕವೋ" ಕುರಿತ ಸಂವಾದವೊಂದನ್ನು ಏರ್ಪಡಿಸಿತ್ತೆಂದೂ ಅದರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಇಬ್ಬರು ಗಣ್ಯರು ಮಾತನ್ನಾಡಿದ್ದನ್ನು ಇಂದಿನ (೦೭.೦೧.೨೦೧೩) ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ನಿಜಕ್ಕೂ ಡಬ್ಬಿಂಗ್ ವಿರೋಧಿಸುವ ಒಂದು ಲಾಬಿ, ಇಡೀ ಸಮಾಜವನ್ನು ಸ್ವಾರ್ಥಕ್ಕೆ ತಪ್ಪುದಾರಿಗೆ ಎಳೆಯುತ್ತಿದೆಯೇನೋ ಎನ್ನುವಂತೆ ಇವರ ಮಾತುಗಳಿವೆ!

ಕರುಳಿಗೇ ಕೈಯಿಕ್ಕೋರು...

ಯಾವ ಕಾರಣಕ್ಕೆ ಡಬ್ಬಿಂಗ್ ಬೇಡ ಎಂದು ವಾದ ಮಂಡಿಸುವಾಗ ಇವರು ತೀರಾ ಕನ್ನಡಿಗರ ಕರುಳಬಳ್ಳಿಗೇ ಕೈಯಿಕ್ಕಿದ್ದಾರೆ. ‘ಕನ್ನಡ ತಾಯಿಯನ್ನು ಒಂದು ಉತ್ಪಾದನಾ ವಸ್ತುವಾಗಿ ಕಾಣುಲಾಗುತ್ತಿದೆ’ ಎನ್ನುವ ಮಾತುಗಳನ್ನು ಕೇಳಿದಾಗ ಚಿತ್ರರಂಗದವರು ಮಾಡುತ್ತಿರುವುದೂ ಅದನ್ನೇ ಅಲ್ಲವೇ ಅನ್ನಿಸುತ್ತದೆ. ಪಕ್ಕಾ ಭಾವನಾತ್ಮಕವಾಗಿರುವ ಇವರ ಹೇಳಿಕೆ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಡಬ್ಬಿಂಗ್ ಬರುವುದನ್ನು ತಳುಕು ಹಾಕುವಲ್ಲಿಗೆ ಬಂದು ನಿಂತಿದೆ. ಈ ಮಾತನ್ನೇ ನೋಡಿದರೆ ಕನ್ನಡ ಶಾಲೆಗಳನ್ನು ಮುಚ್ಚುವುದು ಎಷ್ಟರಮಟ್ಟಿಗೆ ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಒಯ್ಯುತ್ತದೆಯೋ... ಡಬ್ಬಿಂಗ್ ಇಲ್ಲದೆ ಪರಭಾಷಾ ಕಾರ್ಯಕ್ರಮಗಳನ್ನು ಪರಭಾಷೆಗಳಲ್ಲೇ ನೋಡಬೇಕಾದ ಅನಿವಾರ್ಯತೆ ಹುಟ್ಟುಹಾಕುತ್ತಿರುವುದೂ ಕೂಡಾ ಅಷ್ಟೇ ದೂರಕ್ಕೆ ಒಯ್ಯುತ್ತಿರುವುದು ಕಾಣುತ್ತದೆ. ಡಬ್ಬಿಂಗ್ ಬಂದರೆ ಕನ್ನಡ ಸಂಸ್ಕೃತಿ ಮೇಲೆ ಭಾರಿ ಹೊಡೆತ ಬೀಳಲಿದೆ ಎನ್ನುವ ಇವರು ಹೇಗೆ ಬೀಳುತ್ತದೆ ಎನ್ನುವುದನ್ನೂ ವಿವರಿಸಬೇಕಿತ್ತು! ಚಿತ್ರರಂಗವೊಂದು ಸಂಸ್ಕೃತಿಗೆ ಕನ್ನಡಿಯಾಗಬಲ್ಲದೇ ಹೊರತು ಅದೇ ಒಂದು ನಾಡಿನ ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದನ್ನು ನಂಬಲಿಕ್ಕಾಗದು. ಹಾಗಿದ್ದಿದ್ದರೆ ಬರೀ ಇಂಥದ್ದೇ ಸಿನಿಮಾಗಳನ್ನು ತೆಗೆದು ಕನ್ನಡನಾಡಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿಬಿಡುವ ಕಾಂಟ್ರಾಕ್ಟನ್ನು ಚಿತ್ರರಂಗಕ್ಕೆ ಕೊಟ್ಟುಬಿಡಬಹುದಿತ್ತು!

ಡಬ್ಬಿಂಗ್ ಪರರು ಕನ್ನಡ ದೂಶಿಸುವವರೆನ್ನುವ ಆರೋಪ!

ಇದುವರೆಗೆ ದಿನದಿಂದ ದಿನಕ್ಕೆ ಡಬ್ಬಿಂಗ್ ಬಂದರೆ ಬೀದಿಗೆ ಬೀಳುತ್ತಾರೆನ್ನುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ನೀವು ಗಮನಿಸಿರಬಹುದು! ಮೊದಲೆಲ್ಲಾ ನಾಲ್ಕೈದು ಸಾವಿರ ಎನ್ನುತ್ತಿದ್ದವರು ಇದೀಗ ಎಪ್ಪತ್ತೈದು ಸಾವಿರದವರೆಗೆ ತಂದು ನಿಲ್ಲಿಸಿದ್ದಾರೆ! ಇನ್ನೇನು ಲಕ್ಷದ ಗಡಿ ಮುಟ್ಟೋ ತವಕದಲ್ಲಿದ್ದಾರೆ. ಇರಲಿ! ವಾಸ್ತವವಾಗಿ ಇವರ ಮಾತುಗಳನ್ನು ಕೇಳಿದರೆ ಡಬ್ಬಿಂಗ್ ಬರುವುದರಿಂದ ಇನ್ಮುಂದೆ ಕನ್ನಡದಲ್ಲಿ ಚಿತ್ರೋದ್ಯಮದ ಚಟುವಟಿಕೆಗಳೆಲ್ಲಾ ಸಂಪೂರ್ಣವಾಗಿ ನಿಂತುಹೋಗೇ ಬಿಡುತ್ತದೆನ್ನುವ ಅನಿಸಿಕೆ ಹರಿಯ ಬಿಡುತ್ತಿದ್ದಾರೆ ಎನ್ನಿಸಿಬಿಡುತ್ತದೆ! ಹೌದಾ? ಕನ್ನಡ ಚಿತ್ರರಂಗ ಮತ್ತು ದೂರದರ್ಶನಗಳಲ್ಲಿ ಮೂಲಚಿತ್ರ ತೆಗೆಯುವವರು ಮಾಯವಾಗಿಬಿಡುತ್ತಾರೆ ಎನ್ನುವ ಅನಿಸಿಕೆ ಸರಿಯೇ? ಜಗತ್ತಿನ ಯಾವುದೇ ಭಾಗವಾದರೂ ಭಾಷೆ ಅನ್ನ ಉದ್ಯೋಗ ಸಂಸ್ಕೃತಿಗಳು ಆರೋಗ್ಯದಿಂದರಬೇಕು ಎಂದು ಹೇಳಿ ಡಬ್ಬಿಂಗ್ ಬಂದರೆ ಇವೆಲ್ಲಾ ನಾಶವಾಗುತ್ತದೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಇದೂ ಕೂಡಾ ಜನರಲ್ಲಿ ಭೀತಿ ಹುಟ್ಟಿಸಿ ಬೆಂಬಲ ಗಿಟ್ಟಿಸಿಕೊಳ್ಳುವ ತಂತ್ರವಾಗೇ ಜನಕ್ಕೆ ಕಂಡರೆ ಅಚ್ಚರಿಯೇನಿಲ್ಲಾ! ನಿಜವಾಗಿಯೂ ಕನ್ನಡ ಚಿತ್ರರಂಗ/ ದೃಶ್ಯ ಮಾಧ್ಯಮ ಡಬ್ಬಿಂಗನ್ನು ತಮ್ಮ ವೈಫಲ್ಯಕ್ಕೆ ನೆಪವಾಗಿಸಿಕೊಳ್ಳದೆ, ಸವಾಲಾಗಿ ಪರಿಗಣಿಸಿ ಉತ್ತಮ ಕಾರ್ಯಕ್ರಮಗಳನ್ನು ನೀಡಲಿ ಎನ್ನುವ ಅನಿಸಿಕೆಯನ್ನು ತಿರುಚಿ "ಡಬ್ಬಿಂಗ್ ಪರರು ಕನ್ನಡ ಕಾರ್ಯಕ್ರಮ ಕಳಪೆ ಎನ್ನುತ್ತಾರೆ" ಎಂದು ದೂಶಿಸುತ್ತಿದ್ದಾರೇನೋ ಎನ್ನಿಸುತ್ತದೆ.

ಜನರ ಬೇಕು ಬೇಡ ಇಲ್ಲಿ ಲೆಕ್ಕಕ್ಕೇ ಇಲ್ಲವೇ?

ಇಷ್ಟೆಲ್ಲಾ ವಾದಿಸುವ ಮಂದಿ, ಪ್ರಜಾಪ್ರಭುತ್ವದ ಪರವಾದಿಗಳು ಎನ್ನುವ ಮಂದಿ... ನಿಜಕ್ಕೂ ಸ್ವಲ್ಪ ತಾಳ್ಮೆಯಿಂದ ಯೋಚಿಸಿದರೆ ನಿಜವಾಗಲೂ ಜನರ ಆಯ್ಕೆ ಸ್ವಾತಂತ್ರವನ್ನು ತಾವು ಕಿತ್ತುಕೊಳ್ಳುವುದರ ಪರವಾಗಿ ಮಾತಾಡುತ್ತಿದ್ದೇವೆ ಎನ್ನುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಇಡೀ ಒಂದು ಜನಾಂಗದ ಆಯ್ಕೆ ಸ್ವಾತಂತ್ರವನ್ನು ತಮ್ಮ ನಯಗಾರಿಕೆಯ ಮಾತುಗಳಿಂದ ಕಿತ್ತುಕೊಳ್ಳುತ್ತಿರುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಡಬ್ಬಿಂಗಿನಿಂದಾಗಿ ಯಾವ ಭಾಷೆ, ಯಾವ ಸಂಸ್ಕೃತಿ ನಾಶವಾಗಿದೆ ಎನ್ನುವುದನ್ನು ಜನರು ಕಂಡುಕೊಳ್ಳಬಲ್ಲರು ಎನ್ನುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಯಾವುದನ್ನು ಇಡೀ ಜನರು ಗೆಲ್ಲಿಸುವ ಅಥವಾ ಸೋಲಿಸುವ ಮೂಲಕ ತೀರ್ಮಾನಿಸಬೇಕಾಗಿದೆಯೋ ಅದನ್ನು ನಿಶೇಧದ ಮೂಲಕ, ಯಾವುದಾದರೂ ದಾರಿಯ ಮೂಲಕ ತಡೆಯುವುದು ಮತ್ತು ತಡೆಯುವುದನ್ನು ಉತ್ತೇಜಿಸುವುದು, ಸಮರ್ಥಿಸುವುದು ಹೆಚ್ಚು ಕಾಲ ನಡೆಯದು ಮತ್ತು ಜನರ ಹಕ್ಕುಗಳನ್ನು ಸದಾಕಾಲ ದಮನ ಮಾಡುವುದು ಅಸಾಧ್ಯ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ!!

ಅಕ್ರಮ ಮೀನುಗಾರಿಕೆ ಮತ್ತು ನಾಡಿನ ಸಂಪನ್ಮೂಲ ರಕ್ಷಣೆಯ ಹೊಣೆ!

(ಫೋಟೋ ಕೃಪೆ: ಗೂಗಲ್ ಅಂತರ್ಜಾಲ ತಾಣ)
ಕರ್ನಾಟಕ ರಾಜ್ಯದ ಅತಿ ದೊಡ್ಡ ನೈಸರ್ಗಿಕ ಬಂದರಾದ ಮಲ್ಪೆ ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇದು ಇಡೀ ಕರಾವಳಿಗೆ ಮೀನುಗಾರಿಕೆಯ ರಾಜಧಾನಿಯಿದ್ದಂತೆ! ಒಟ್ಟು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ, ಕಡಲನ್ನೇ ದೈವವೆಂದು ತಿಳಿದು, ಮೀನುಗಾರಿಕೆಯಿಂದಲೇ ಬದುಕುತ್ತಿರುವ ಸಾವಿರಾರು ಮೀನುಗಾರ ಕುಟುಂಬಗಳು ನಮ್ಮ ಕರಾವಳಿಯಲ್ಲಿವೆ. ಇತ್ತೀಚಿಗೆ ಇವರುಗಳು ಸೇರಿ ನಡೆಸಿದ ಪ್ರತಿಭಟನೆಯೊಂದರ ಬಗ್ಗೆ ವರದಿಗಳು (ಹಿಂದೂ, ದಟ್ಸ್ ಕನ್ನಡ, ಗಲ್ಫ಼್ ಕನ್ನಡಿಗ) ಪ್ರಕಟವಾಗಿದೆ. ಮೇಲ್ನೋಟಕ್ಕೆ ಇದು ಮೀನುಗಾರಿಕೆ ಸಮಸ್ಯೆಯ ಹಾಗೆ ಕಂಡರೂ ಒಳಸುಳಿ ಬೇರೆಯೇ ಇದೆ. ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಇದು ಎತ್ತುವ ಪ್ರಶ್ನೆಗಳು ಅನೇಕ!

ಕರಾವಳಿ ಮೀನುಗಾರಿಕೆಗೆ ಇರುವ ನಿಯಮ!

ನಮ್ಮ ಕರಾವಳಿಯಲ್ಲಿ ಒಂದು ವಿಶೇಷ ತಳಿಯ ಮೀನಿದೆ. ಇದರ ಹೆಸರು "ಕಟ್ಲ್ ಫಿಶ್" ಅಂದರೆ ಕಪ್ಪೆ ಬೊಂಡಾಸೆ ಮೀನು. ಈ ಮೀನು ಹಿಡಿಯಲು ಸಾಂಪ್ರದಾಯಿಕ ಶೈಲಿಯನ್ನು ಇಲ್ಲಿನ ಮೀನುಗಾರರು ಬಳಸುತ್ತಿದ್ದಾರಂತೆ. ಆದರೆ ಇತ್ತೀಚಿಗೆ ಕೆಲವರ್ಷಗಳಿಂದ ತಮಿಳುನಾಡಿನಿಂದ ವಲಸೆ ಬಂದಿರುವ ಮೀನುಗಾರರು ಸಿಡಿಮದ್ದು ಸಿಡಿಸಿ ಒಟ್ಟೊಟ್ಟಿಗೆ ರಾಶಿ ರಾಶಿ ಮೀನುಗಳನ್ನು ಹಿಡಿದು ಹಾಕುತ್ತಿದ್ದಾರೆ ಎನ್ನುವುದು ಸ್ಥಳೀಯ ಮೀನುಗಾರರ ದೂರು! ಈ ಜಾತಿಯ ಮೀನುಗಳು ಮರಿಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರೂ ಈ ಮೀನು ಹಿಡಿಯುವುದಿಲ್ಲ. ಏಕೆಂದರೆ ಇದರಿಂದ ಇವುಗಳ ಸಂತತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಈ ಸಮಯದಲ್ಲಿ ಮೀನುಗಾರಿಕೆಯನ್ನು ಅದರಲ್ಲೂ ವಿಶೇಷವಾಗಿ ಯಾಂತ್ರಿಕ ದೋಣಿ ಬಳಕೆಯೂ ಸೇರಿದಂತೆ ಎಲ್ಲಾ ಅಸಂಪ್ರದಾಯಿಕ ವಿಧಾನವನ್ನು ನಿಶೇಧಿಸಲಾಗಿದೆ. ಈಗಾಗಲೇ ಉಡುಪಿ ಜಿಲ್ಲಾ ಆಡಳಿತ ಸಿಡಿಮದ್ದು ಬಳಸಿ ಮೀನು ಹಿಡಿಯುವುದನ್ನು ನಿಶೇಧಿಸಿದೆ. ಹೀಗಿದ್ದರೂ ಪರರಾಜ್ಯದ ಮೀನುಗಾರರುಗಳು ಕಾನೂನು ಮುರಿಯುವ ಮೂಲಕ ಆ ಬಗೆಯ ಮೀನುಗಳ ಸರ್ವನಾಶಕ್ಕೆ ಕಾರಣವಾಗಿದ್ದಾರೆ ಎನ್ನುವುದು ನಮ್ಮ ಬೆಸ್ತರ ಕಾಳಜಿಯಾಗಿದೆ. ಈ ಕಾರಣದಿಂದಾಗಿ ಕೆಲದಿನಗಳ ಹಿಂದೆ ಒಂದು ಬಂದ್ ಕೂಡಾ ನಡೆದಿದೆ. ಇದಕ್ಕೆಂದೇ ನಮ್ಮ ಕರಾವಳಿಯ ಬೆಸ್ತರು ಹೊರರಾಜ್ಯದ ಬೆಸ್ತರ ದೋಣಿಗಳು ನಮ್ಮ ರಾಜ್ಯದ ಕಡಲಗಡಿಗೆ ಬಾರದಂತೆಯೂ, ಹೊರರಾಜ್ಯದ ಮೀನುಗಾರರಿಗೆ ಕಡಿವಾಣ ಹಾಕುವಂತೆಯೂ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದಕ್ಕೆ ಉತ್ತರವಾಗಿ ಶಾಸಕ ಶ್ರೀ ರಘುಪತಿಭಟ್ ಅವರು ಮಾತಾಡಿ "ಅನ್ಯರಾಜ್ಯದವರು ಇಲ್ಲಿಗೆ ಬಂದು ಮೀನುಗಾರಿಕೆ ನಡೆಸಬಾರದೆನ್ನುವ ಯಾವುದೇ ಕಾಯ್ದೆಯೂ ನಮ್ಮಲ್ಲಿಲ್ಲಾ, ಆದರೂ ಮುಖ್ಯಮಂತ್ರಿಗಳ ಬಳಿ ಹೇಳಿ ಮಸೂದೆ ಮಂಡಿಸುತ್ತೇನೆ" ಎಂದು ಸ್ವಲ್ಪ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರಂತೆ! ನಮ್ಮ ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಲುಬೇಕಾದ ನೀತಿ ನಿಯಮಗಳನ್ನು ರೂಪಿಸಿಕೊಳ್ಳುವ ಹಕ್ಕು ನಮ್ಮ ರಾಜ್ಯಸರ್ಕಾರದ ಕೈಲಿರಬೇಕಾದ್ದು ನ್ಯಾಯವಲ್ಲವಾ ಗುರೂ!? ಹೊರನಾಡಿನ ಮೀನುಗಾರರು ನಮ್ಮ ಪ್ರದೇಶದೊಳಗೆ ಬರಬೇಕಾದರೆ ನಮ್ಮ ರಾಜ್ಯಸರ್ಕಾರದ ಅನುಮತಿ ಪಡೆದುಕೊಳ್ಳಬೇಕಲ್ಲವಾ? ಇವೆಲ್ಲವನ್ನೂ ಸರ್ಕಾರ ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.
Related Posts with Thumbnails