ನಾಳೆ ಉದ್ಘಾಟನೆಯಾಗಲಿರುವ "ಬಹುಭಾಷಿಕ ಭಾರತಕ್ಕಾಗಿ ಚಳವಳಿ"!


ನಾಳೆ ಅಂತರ್ರಾಷ್ಟ್ರೀಯ ತಾಯ್ನುಡಿ ದಿನಾಚರಣೆ. ಈ ದಿನವನ್ನು ವಿಭಿನ್ನವಾಗಿ ಆಚರಿಸಲಾಗುವ ಕಾರ್ಯಕ್ರಮವೊಂದು ನವದೆಹಲಿಯಲ್ಲಿ ನಾಳೆ ನಡೆಯಲಿದೆ. ಸಮಾನ ಗೌರವದ, ಸಮಾನ ಅವಕಾಶದ ಭಾರತಕ್ಕಾಗಿ ಹಂಬಲಿಸುತ್ತಿರುವ ಹಲವು ಮಂದಿ ನಾಳೆ ಮಧ್ಯಾಹ್ನ ನವದೆಹಲಿಯ ಪ್ರಗತಿ ಮೈದಾನದಲ್ಲಿ ವಿಶ್ವ ತಾಯ್ನುಡಿ ದಿನಾಚರಣೆಯನ್ನು ಆಚರಿಸುವುದರ ಒಟ್ಟೊಟ್ಟಿಗೆ ಭಾರತೀಯರ ಭಾಷಾಹಕ್ಕುಗಳನ್ನು ಎತ್ತಿಹಿಡಿಯುವ ಚಳವಳಿಯ ಘೋಷಣೆಯನ್ನೂ ಮಾಡಲಿದ್ದಾರೆ. ಈ ಚಳವಳಿಯ ಹೆಸರು "ಬಹುಭಾಷಿಕ ಭಾರತಕ್ಕಾಗಿ ಚಳವಳಿ" (Movement for Multi-lingual India).

ಈ  ಕಾರ್ಯಕ್ರಮದಲ್ಲಿ ಭಾರತದ ಬೇರೆ ಬೇರೆ ತಾಯ್ನುಡಿಯ ಜನರು ಒಟ್ಟಾಗಿ ಸೇರಲಿದ್ದು ಮುಂದಿನ ರೂಪುರೇಶೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬನವಾಸಿ ಬಳಗವೂ ಕೂಡಾ ಈ ಚಳವಳಿಯ ಜೊತೆ ಗುರುತಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಭರವಸೆ ಹೊಂದಿದೆ. ಬನವಾಸಿ ಬಳಗದ ಶ್ರೀ ರಾಘವೇಂದ್ರರವರು ಕನ್ನಡಿಗರ ಪ್ರತಿನಿಧಿಯಾಗಿ ಖುದ್ದಾಗಿ ಇದರಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಎಂಟು ಹತ್ತು ವರ್ಷಗಳಿಂದ ನಮ್ಮ ಭಾಷಾಹಕ್ಕುಗಳಿಗಾಗಿ ದನಿಎತ್ತಿರುವ ಬನವಾಸಿ ಬಳಗವು, ಸಂಬಂಧಿಸಿದ ಸರ್ಕಾರಗಳ ಮೇಲೆ ಸಾರ್ವಜನಿಕ ಸಹಿಸಂಗ್ರಹದ ಹಕ್ಕೊತ್ತಾಯ ಪತ್ರಗಳ ಮೂಲಕ ಒತ್ತಡ ಹಾಕುತ್ತಲೇ ಬಂದಿದೆ. ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬನವಾಸಿ ಬಳಗ ಹೊರತಂದಿರುವ "ಹಿಂದೀ ಹೇರಿಕೆ: ಮೂರು ಮಂತ್ರ - ನೂರು ತಂತ್ರ" ಹೊತ್ತಗೆಯು ಪರಿಣಾಮಕಾರಿಯಾಗಿದ್ದು ಅನೇಕ ಮಾಹಿತಿಪೂರ್ಣ ವಿಚಾರಗಳನ್ನು ಹೊಂದಿದೆ. ಇದೀಗ ಭಾರತದ ಹುಳುಕಿನ ಭಾಷಾನೀತಿಯ ಬದಲಾವಣೆಗಾಗಿ ಹೊರರಾಜ್ಯದ ಜನರೊಂದಿಗೆ ಸೇರಿ ಸಂಘಟಿತ ಹೋರಾಟಕ್ಕೆ ಬಳಗ ಮುಂದಾಗಿದೆ.

ಸಭೆಯಲ್ಲಾದ ತೀರ್ಮಾನಗಳ ಬಗ್ಗೆ, ಮುಂದಿನ ಹೋರಾಟದ ಸ್ವರೂಪಗಳ ಬಗ್ಗೆ ನಿಮ್ಮೊಂದಿಗೆ ಸೂಕ್ತಸಮಯದಲ್ಲಿ ಸೂಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ನೀವು ದೆಹಲಿಯಲ್ಲಿದ್ದರೆ ನಾಳಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

2 ಅನಿಸಿಕೆಗಳು:

Anonymous ಅಂತಾರೆ...

nimma prayathna yashasvi aagali, Hindi herike nillali.

Unknown ಅಂತಾರೆ...

Down with Hindi in Karnataka

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails